ಮೊಬೈಲ್ ವಾಪಸ್ ನೀಡಿಲ್ಲವೆಂದು ದೇವಸ್ಥಾನದಲ್ಲೇ ಗೆಳೆಯನ ಕೊಲೆ! ಆರೋಪಿ ಅರೆಸ್ಟ್ – Kannada News | Belagavi Crime News: Man unalived by Friend in Temple Over Mobile Phone Dispute

ಬೆಳಗಾವಿ, ಜುಲೈ 19: ಇತ್ತೀಚೆಗೆ ಸಮಾಜದಲ್ಲಿ ಕ್ಷುಲ್ಲಕ ಕಾರಣಕ್ಕೆ ಕೊಲೆ ಸುಲಿಗೆಗಳಂತಹ ಹೇಯ ಕೃತ್ಯಗಳೇ ನಡೆದು ಹೋಗುತ್ತವೆ. ಅಂತದ್ದೇ ಒಂದು ಅಮಾನವೀಯ ಕೃತ್ಯ ಬೆಳಗಾವಿ ಜಿಲ್ಲೆಯಲ್ಲಿ ಸಂಭವಿಸಿದ್ದು, ಕೇವಲ ಒಂದು ಮೊಬೈಲ್ ಫೋನ್‌ಗಾಗಿ ಸ್ನೇಹಿತರಿಬ್ಬರ ನಡುವೆ ನಡೆದ ಜಗಳವೊಂದು ಭೀಕರ ದುರಂತದಲ್ಲಿ ಅಂತ್ಯಗೊಂಡಿದೆ. ಮೊಬೈಲ್ ಮರಳಿ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ದೇವಸ್ಥಾನದ ಆವರಣದಲ್ಲೇ ಮಲಗಿದ್ದ ವ್ಯಕ್ತಿಯೊಬ್ಬರ ಜೀವ ತೆಗೆದಿರುವ ಘಟನೆ ಸವದತ್ತಿ ತಾಲೂಕಿನ ಚಿಕ್ಕಬೂದನೂರ ಗ್ರಾಮದಲ್ಲಿ ನಡೆದಿದೆ.

ಪ್ರಕರಣದ ಹಿನ್ನೆಲೆ

ಗ್ರಾಮದ ನಿವಾಸಿಯಾದ ಫಕ್ಕೀರಪ್ಪ ಪಿಡ್ಡೆನ್ನವರ್ (40) ಎಂಬುವವರೇ ಈ ದುರಂತದಲ್ಲಿ ಜೀವ ಕಳೆದುಕೊಂಡ ದುರ್ದೈವಿ. ಇವರ ಸ್ನೇಹಿತ ಮಲ್ಲಿಕಾರ್ಜುನ ಪೂಜೇರಿ ಎಂಬಾತನೇ ಈ ಕೃತ್ಯ ಎಸಗಿರುವ ಆರೋಪಿಯಾಗಿದ್ದಾನೆ. ಮೂಲಗಳ ಪ್ರಕಾರ, ಕಳೆದ ಎರಡು ದಿನಗಳ ಹಿಂದೆ ಮಲ್ಲಿಕಾರ್ಜುನನ ಮೊಬೈಲ್ ಫೋನ್ ಅನ್ನು ಫಕ್ಕೀರಪ್ಪ ಪಡೆದುಕೊಂಡಿದ್ದರು. ಆದರೆ, ಕೆಲಸ ಮುಗಿದ ನಂತರವೂ ಅದನ್ನು ಮರಳಿ ನೀಡದೆ ಎರಡು ದಿನಗಳಿಂದ ಸತಾಯಿಸುತ್ತಿದ್ದರು ಎನ್ನಲಾಗಿದೆ.

ತನ್ನ ಫೋನ್ ಪಡೆಯಲು ಮಲ್ಲಿಕಾರ್ಜುನ ಹಲವು ಬಾರಿ ಕೇಳಿದ್ದರೂ ಫಕ್ಕೀರಪ್ಪ ನಿರ್ಲಕ್ಷ್ಯ ವಹಿಸಿದ್ದ. ಕೊನೆಗೆ ಬೇಸತ್ತ ಮಲ್ಲಿಕಾರ್ಜುನ, ಫಕ್ಕೀರಪ್ಪನ ಮನೆವರೆಗೂ ಹೋಗಿ ಮೊಬೈಲ್ ನೀಡುವಂತೆ ಒತ್ತಾಯ ಮಾಡಿದ್ದ. ಈ ವೇಳೆ ಫಕ್ಕೀರಪ್ಪ, ಸಂಜೆ ವೇಳೆಗೆ ನಿನ್ನ ಮೊಬೈಲ್ ಮರಳಿ ಕೊಡುತ್ತೇನೆ ಎಂದು ಹೇಳಿ ಅಲ್ಲಿಂದ ಕಳುಹಿಸಿದ್ದ.

ದೇವಸ್ಥಾನದಲ್ಲಿ ನಡೆದ ಘೋರ ಕೃತ್ಯ

ಶನಿವಾರ ಸಂಜೆ ಫಕ್ಕೀರಪ್ಪ ಗ್ರಾಮದ ಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಮಲಗಿದ್ದ. ಇದನ್ನು ಗಮನಿಸಿದ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಬಂದು ಮತ್ತೊಮ್ಮೆ ತನ್ನ ಮೊಬೈಲ್ ನೀಡುವಂತೆ ಕೇಳಿದ್ದ. ಆದರೆ, ಫಕ್ಕೀರಪ್ಪ ಈ ಬಾರಿಯೂ ತಕ್ಷಣಕ್ಕೆ ಮೊಬೈಲ್ ನೀಡದೆ, ರಾತ್ರಿ ಕೊಡುತ್ತೇನೆ ಎಂದು ಮತ್ತೆ ಸಬೂಬು ಹೇಳಿದ್ದ. ಇದರಿಂದ ವಿಪರೀತ ಕೋಪಗೊಂಡ ಮಲ್ಲಿಕಾರ್ಜುನ, ದೇವಸ್ಥಾನದ ಆವರಣದಲ್ಲೇ ಇದ್ದ ಭಸ್ಮ (ವಿಭೂತಿ) ಅರೆಯುವ ದೊಡ್ಡ ಕಲ್ಲನ್ನು ಎತ್ತಿ, ಮಲಗಿದ್ದ ಫಕ್ಕೀರಪ್ಪನ ತಲೆಯ ಮೇಲೆ ಜೋರಾಗಿ ಹಾಕಿದ್ದಾನೆ. ಕಲ್ಲಿನ ಭಾರಿ ಏಟಿಗೆ ಫಕ್ಕೀರಪ್ಪ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೃತ್ಯ ಎಸಗಿದ ತಕ್ಷಣ ಆರೋಪಿ ಮಲ್ಲಿಕಾರ್ಜುನ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಆರೋಪಿ ಬಂಧನ

ದೇವಸ್ಥಾನದಲ್ಲಿ ರಕ್ತದ ಮಡುವಿನಲ್ಲಿ ಶವ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಮುರಗೋಡ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಮುರಗೋಡ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಮಹಜರು ನಡೆಸಿದ ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಮುರಗೋಡ ಪೊಲೀಸರು, ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿ ಮಲ್ಲಿಕಾರ್ಜುನನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *