ಚೆನ್ನೈ, ಮೇ 6: ಟಿವಿಕೆ ಮುಖ್ಯಸ್ಥ ವಿಜಯ್ (Vijay) ಇಂದು ತಮಿಳುನಾಡಿನ ಲೋಕಭವನದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿ ಮಾಡಿ, ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಟಿವಿಕೆ ರಾಜ್ಯದ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಹುಮತ ಇಲ್ಲದ ಕಾರಣದಿಂದ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಟಿವಿಕೆಗೆ ಸಾಧ್ಯವಾಗಿರಲಿಲ್ಲ. ಇದೀಗ ಕಾಂಗ್ರೆಸ್ ಬೆಂಬಲ ನೀಡಿರುವುದರಿಂದ ವಿಜಯ್ ತಮ್ಮ ಪಕ್ಷ ಸರ್ಕಾರ ರಚಿಸಲು ಅವಕಾಶ ನೀಡಲು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
234 ಸದಸ್ಯರನ್ನು ಹೊಂದಿರುವ ತಮಿಳುನಾಡು ವಿಧಾನಸಭೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಟಿವಿಕೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಸರ್ಕಾರ ರಚಿಸಲು 118 ಸ್ಥಾನಗಳ ಬಹುಮತದ ಅಗತ್ಯವಿತ್ತು. ಆ ಬಹುಮತ ಲಭಿಸದ ಹಿನ್ನೆಲೆಯಲ್ಲಿ ವಿಜಯ್ ಇತರೆ ಪಕ್ಷಗಳ ಬೆಂಬಲ ಕೋರಿದ್ದರು.
ಇದನ್ನೂ ಓದಿ: ತಾಯಿ ಹಿಂದೂ, ತಂದೆ ಕ್ರಿಶ್ಚಿಯನ್… ದಳಪತಿ ವಿಜಯ್ ಯಾವ ಧರ್ಮವನ್ನು ಅನುಸರಿಸುತ್ತಾರೆ?
ಕಾಂಗ್ರೆಸ್ ಪಕ್ಷವು ಟಿವಿಕೆಗೆ ತನ್ನ ಬೆಂಬಲವನ್ನು ಸಾರ್ವಜನಿಕವಾಗಿ ಘೋಷಿಸಿದ್ದರೂ ವಿಜಯ್ ಅವರ ಪಕ್ಷಕ್ಕೆ ಯಾರೆಲ್ಲಾ ಬೆಂಬಲ ನೀಡಿದ್ದಾರೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಡಿಎಂಕೆಯ ದೀರ್ಘಕಾಲದ ಮಿತ್ರ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವು ಇಂದು ನಟ-ರಾಜಕಾರಣಿ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿತು. ಈ ಮೂಲಕ 55 ವರ್ಷದ ಡಿಎಂಕೆ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿತು. ಇದರ ಜೊತೆಗೆ ಭಾರತದ ಸಂವಿಧಾನದಲ್ಲಿ ನಂಬಿಕೆಯಿಲ್ಲದ ಕೋಮುವಾದಿ ಶಕ್ತಿಗಳನ್ನು ಮೈತ್ರಿಕೂಟದಿಂದ ಹೊರಗಿಡುವಂತೆ ಟಿವಿಕೆಗೆ ಕಾಂಗ್ರೆಸ್ ಷರತ್ತು ಹಾಕಿದೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ‘ದಳಪತಿ’ ಸರ್ಕಾರಕ್ಕೆ ಕೈ ಬಲ: ಟಿವಿಕೆ ಕಚೇರಿಯಲ್ಲಿ ವಿಜಯ್ ಭೇಟಿ ಮಾಡಿದ ಕಾಂಗ್ರೆಸ್ ನಾಯಕರು
ವಿಜಯ್ ಗುರುವಾರ ಬೆಳಿಗ್ಗೆ (ಮೇ 7) ತಮಿಳುನಾಡಿನ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಶುಭ ಮುಹೂರ್ತದ ಪ್ರಕಾರ ಬೆಳಿಗ್ಗೆ 10ರಿಂದ 11.15ರ ನಡುವೆ ಪ್ರಮಾಣವಚನ ಸಮಾರಂಭವನ್ನು ನಿಗದಿಪಡಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 5:30 pm, Wed, 6 May 26
