ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ (Ramayana) ಭವ್ಯ ಟ್ರೇಲರ್ ಇಂದು ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಚಿತ್ರದ ವಿಶ್ಯುಯಲ್ ವೈಭವ ಹಾಗೂ ಪಾತ್ರಧಾರಿಗಳ ಲುಕ್ ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡಿದೆ. ಟ್ರೇಲರ್ನಲ್ಲಿ ಒಂದು ಪ್ರಮುಖ ಪಾತ್ರದ ಅನುಪಸ್ಥಿತಿ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ರಾಮಾಯಣ ಮಹಾಕಾವ್ಯದ ಅತಿ ದೊಡ್ಡ ಶಕ್ತಿಯಾಗಿರುವ ಆಂಜನೇಯನ ದರ್ಶನ ಮೊದಲ ಝಲಕ್ನಲ್ಲಿ ಸಿಗದಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಟ್ರೇಲರ್ನಲ್ಲಿ ಮಿಸ್ ಆದ ಹನುಮಂತ
ಚಿತ್ರದಲ್ಲಿ ಬಾಲಿವುಡ್ನ ಹಿರಿಯ ನಟ ಸನ್ನಿ ಡಿಯೋಲ್ ಅವರು ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಈಗಾಗಲೇ ಅಧಿಕೃತವಾಗಿದೆ. ಆದರೆ, ಇಂದು ಬಿಡುಗಡೆಯಾದ ಟ್ರೇಲರ್ನಲ್ಲಿ ಎಲ್ಲೂ ಅವರ ಪಾತ್ರದ ಝಲಕ್ ಕಾಣಿಸಿಕೊಂಡಿಲ್ಲ. ರಾಮ, ಸೀತೆ, ಲಕ್ಷ್ಮಣ ಹಾಗೂ ರಾವಣನ ಅಬ್ಬರಕ್ಕೆ ಆದ್ಯತೆ ನೀಡಿರುವ ಚಿತ್ರತಂಡ, ಬಜರಂಗಬಲಿಯ ಲುಕ್ ಅನ್ನು ಸದ್ಯಕ್ಕೆ ಸಸ್ಪೆನ್ಸ್ ಆಗಿ ಇಟ್ಟಿರುವುದು ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ.
ಅಭಿಮಾನಿಗಳ ಬೇಸರ ಹಾಗೂ ಪ್ರಶ್ನೆ
ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಸಿನಿಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ‘ನಮ್ಮ ಹನುಮಂತ ಎಲ್ಲಿದ್ದಾನೆ?’ಎಂದು ಪ್ರಶ್ನಿಸಲು ಶುರು ಮಾಡಿದ್ದಾರೆ. ರಾಮಾಯಣದ ಕಥೆಯಲ್ಲಿ ಹನುಮಂತನ ಪಾತ್ರ ಅತ್ಯಂತ ಹೈಲೈಟ್ ಆಗಿರುತ್ತದೆ. ಅಂತಹದ್ದರಲ್ಲಿ ಟ್ರೇಲರ್ನಲ್ಲಿ ಒಂದು ಪುಟ್ಟ ದೃಶ್ಯದಲ್ಲೂ ಆಂಜನೇಯನನ್ನು ತೋರಿಸದೇ ಇರುವುದು ಅಭಿಮಾನಿಗಳಿಗೆ ತೀವ್ರ ನಿರಾಶೆ ಉಂಟುಮಾಡಿದೆ.
ಬ್ರಹ್ಮೀ ಮುಹೂರ್ತದಲ್ಲಿ ಬಿಡುಗಡೆ
ಭಾರತೀಯ ಕಾಲಮಾನ ಮುಂಜಾನೆ 4:15ರ ಬ್ರಾಹ್ಮೀ ಮುಹೂರ್ತದಲ್ಲಿ ಈ ಟ್ರೇಲರ್ ಅನ್ನು ಡಿಜಿಟಲ್ ಪರದೆಯ ಮೇಲೆ ಅನಾವರಣಗೊಳಿಸಲಾಗಿದೆ. ಚಿತ್ರಮಂದಿರಗಳಲ್ಲಿ ಇದು ಹಾಲಿವುಡ್ನ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾದ ಜೊತೆಗೆ ಪ್ರದರ್ಶನಗೊಳ್ಳಲಿದೆ. ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ವೇದಿಕೆಯಲ್ಲಿ ಜಾಗತಿಕ ಪ್ರೇಕ್ಷಕರ ಮುಂದೆ ಈ ಟ್ರೇಲರ್ ಅನ್ನು ಮೊದಲು ಪರಿಚಯಿಸಲಾಗಿತ್ತು.
ದೃಶ್ಯ ವೈಭವದ ಹೈಲೈಟ್ಸ್
ಹಾಲಿವುಡ್ನ ಡಿಎನ್ಇಜಿ ಸ್ಟುಡಿಯೋಸ್ ರೂಪಿಸಿರುವ ಈ ಚಿತ್ರದ ವಿಶ್ಯುಯಲ್ಸ್ ಕಣ್ಣು ಕೋರೈಸುವಂತಿವೆ. ರಾಮನ ಅಯೋಧ್ಯೆ, ಸೀತೆಯ ಸ್ವಯಂವರ, ಲಕ್ಷ್ಮಣನಿಂದ ಶೂರ್ಪನಖಿಯ ಮೂಗು ಕೊಯ್ಯುವ ದೃಶ್ಯ ಹಾಗೂ ಲಕ್ಷ್ಮಣ ರೇಖೆ ಎಳೆಯುವ ದೃಶ್ಯ ಮೂಡಿಬಂದಿವೆ. ರಾಮನಾಗಿ ರಣಬೀರ್ ಕಪೂರ್ ಶಾಂತ ಸ್ವಭಾವದಲ್ಲಿ ಮಿಂಚಿದ್ದರೆ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ತಮ್ಮ ರೌದ್ರಾವತಾರದಿಂದ ಇಡೀ ಟ್ರೇಲರ್ ಅನ್ನು ಆವರಿಸಿಕೊಂಡಿದ್ದಾರೆ.
ಇದನ್ನೂ ಓದಿ: ರಾಮಾಯಣ ಟ್ರೇಲರ್ನಲ್ಲಿ ರಾವಣನ ಪಾತ್ರದ ಮೂಲಕ ಅಬ್ಬರಿಸಿ ಬೊಬ್ಬಿರಿದ ಯಶ್
ಅತಿ ದೊಡ್ಡ ಬಜೆಟ್ನ ಸಿನಿಮಾ
ನಿತೇಶ್ ತಿವಾರಿ ನಿರ್ದೇಶನದ ಈ ದೃಶ್ಯಕಾವ್ಯವನ್ನು ಸುಮಾರು 4,000 ಕೋಟಿ ರೂಪಾಯಿ ಭಾರಿ ವೆಚ್ಚದಲ್ಲಿ ಎರಡು ಭಾಗಗಳಾಗಿ ನಿರ್ಮಿಸಲಾಗುತ್ತಿದೆ. ಆಸ್ಕರ್ ಪ್ರಶಸ್ತಿ ವಿಜೇತರಾದ ಹನ್ಸ್ ಜಿಮ್ಮರ್ ಹಾಗೂ ಎ.ಆರ್. ರೆಹಮಾನ್ ಮೊದಲ ಬಾರಿಗೆ ಜೊತೆಯಾಗಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಹನುಮಂತನ ಪಾತ್ರವನ್ನು ಸಸ್ಪೆನ್ಸ್ ಆಗಿ ಇಟ್ಟಿರುವ ಈ ಚಿತ್ರದ ಮೊದಲ ಭಾಗವು 2026ರ ದೀಪಾವಳಿ ಹಬ್ಬಕ್ಕೆ ವಿಶ್ವಾದ್ಯಂತ ಐಮ್ಯಾಕ್ಸ್ ಪರದೆಯ ಮೇಲೆ ಅಪ್ಪಳಿಸಲಿದೆ.
ಪ್ರಶ್ನೆ: ರಾಮಾಯಣ ರಿಲೀಸ್ ಯಾವಾಗ?
ಉತ್ತರ: ದೀಪಾವಳಿ
ಪ್ರಶ್ನೆ: ರಾಮಾಯಣದಲ್ಲಿ ಹನುಮಂತನ ಪಾತ್ರಧಾರಿ ಯಾರು?
ಉತ್ತರ: ಸನ್ನಿ ಡಿಯೋಲ್
ಪ್ರಶ್ನೆ: ರಾಮಾಯಣ ಸಿನಿಮಾ ನಿರ್ದೇಶನ ಯಾರದ್ದು?
ಉತ್ತರ: ನಿತೇಶ್ ತಿವಾರಿ
Published On – 9:38 am, Thu, 30 July 26
