ರೈತರ ‘ಕಿಸಾನ್ ಘಾಟ್’ ಚಲೋ: ಶಂಭು, ಸಿಂಘು ಗಡಿಗಳು ಬಂದ್, ನೂರಾರು ರೈತರು ಪೊಲೀಸ್ ವಶಕ್ಕೆ – Kannada News | Farmers Delhi March: India US Trade Deal Protest Shuts Shambhu, Singhu Borders

ಚಂಡೀಗಢ, ಜುಲೈ 21: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಪಂಜಾಬ್, ಹರಿಯಾಣ ಮತ್ತು ಇತರ ರಾಜ್ಯಗಳ ರೈತರು(Farmers) ದೆಹಲಿಯ ಕಿಸಾನ್ ಘಾಟ್‌ನತ್ತ ಬೃಹತ್ ಮೆರವಣಿಗೆ ಆರಂಭಿಸಿದ್ದಾರೆ. ರೈತರ ಸಂಚಾರವನ್ನು ತಡೆಯಲು ಹರಿಯಾಣ ಮತ್ತು ದೆಹಲಿ ಪೊಲೀಸರು ಗಡಿ ಪ್ರದೇಶಗಳಲ್ಲಿ ಭಾರಿ ಬ್ಯಾರಿಕೇಡ್‌ಗಳನ್ನು ಹಾಕಿ ಕಟ್ಟೆಚ್ಚರ ವಹಿಸಿದ್ದಾರೆ.

ರೈತರು ಬೆಳಗಿನ ಜಾವವೇ ದೆಹಲಿಯತ್ತ ಹೊರಟ ಹಿನ್ನೆಲೆಯಲ್ಲಿ, ಅಂಬಾಲಾದ ಶಂಭು ಗಡಿ ಹಾಗೂ ಸೋನಿಪತ್‌ನ ಸಿಂಘು ಗಡಿಗಳನ್ನು ಪೊಲೀಸರು ಸಂಪೂರ್ಣವಾಗಿ ಮುಚ್ಚಿದ್ದಾರೆ. ಶಂಭು ಗಡಿಯಲ್ಲಿ ರಾತ್ರೋರಾತ್ರಿ ದೊಡ್ಡ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರಿಂದ ದೆಹಲಿ-ಅಮೃತಸರ-ಚಂಡೀಗಢ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಸಾರ್ವಜನಿಕರು ತೀವ್ರ ಪರದಾಡುವಂತಾಗಿದೆ.

ಕುರುಕ್ಷೇತ್ರದ ಶಹಾಬಾದ್ ಮತ್ತು ಜ್ಯೋತಿಸರ್ ಚೆಕ್‌ಪೋಸ್ಟ್‌ಗಳಲ್ಲಿ ದೆಹಲಿಯತ್ತ ಸಾಗುತ್ತಿದ್ದ ರೈತರ ಬಸ್‌ಗಳನ್ನು ತಡೆದು, ನೂರಾರು ರೈತರನ್ನು ಪೊಲೀಸರು ವಶಕ್ಕೆ ಪಡೆದು ಪೊಲೀಸ್ ಲೈನ್‌ಗಳಿಗೆ ಕರೆದೊಯ್ದಿದ್ದಾರೆ. ಬಿಕೆಯು (BKU) ಪೆಹೋವಾ ವಕ್ತಾರ ಪ್ರಿನ್ಸ್ ವಾರೈಚ್ ಮಾತನಾಡಿ, “ಜೂನ್ 30 ರಂದು ‘ದೇಶ್ ಬಚಾವೋ ಮೋರ್ಚಾ’ ರಚಿಸಲಾಗಿದ್ದು, ಭಾರತ-ಯುಎಸ್ ವ್ಯಾಪಾರ ಒಪ್ಪಂದದ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಲು ರೈತರು ದೆಹಲಿಗೆ ತೆರಳುತ್ತಿದ್ದರು. ಆದರೆ ಸರ್ಕಾರ ಚಳವಳಿಯನ್ನು ಹತ್ತಿಕ್ಕಲು ಯತ್ನಿಸುತ್ತಿದೆ” ಎಂದು ಆರೋಪಿಸಿದ್ದಾರೆ.

ಮತ್ತಷ್ಟು ಓದಿ: ಕರ್ನಾಟಕದ ರೈತರು ಹಾಗೂ ಉದ್ಯಮಿಗಳಿಗೆ ಯುಕೆ ಗಿಫ್ಟ್: ಬ್ರಿಟನ್ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ, ಕಾಫಿಗೆ ಸಿಗಲಿದೆ ಭಾರಿ ಡಿಮ್ಯಾಂಡ್

ಈಗಾಗಲೇ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಗುರ್ನಾಮ್ ಸಿಂಗ್ ಚದುನಿ ಹಾಗೂ ವಕ್ತಾರ ರಾಕೇಶ್ ಬೈನ್ಸ್ ಸೇರಿದಂತೆ ಹಲವಾರು ಪ್ರಮುಖ ರೈತ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.

ವಿಡಿಯೋ

ಶಾಂತಿ ಕಾಪಾಡಲು ಪೊಲೀಸ್ ಮನವಿ
ಕರ್ನಾಲ್ ಡಿಎಸ್‌ಪಿ ಮನೋಜ್ ಕುಮಾರ್ ಮಾತನಾಡಿ, ಭದ್ರತಾ ಕಾರಣಗಳಿಗಾಗಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಗಡಿಗಳಲ್ಲಿ ಕಟ್ಟುನಿಟ್ಟಿನ ಭದ್ರತೆ ಒದಗಿಸಲಾಗಿದೆ. ಸಾರ್ವಜನಿಕರು ಹಾಗೂ ರೈತರು ಶಾಂತಿ ಕಾಪಾಡಬೇಕು ಮತ್ತು ಪೊಲೀಸರೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:51 am, Tue, 21 July 26

Source link

Leave a Reply

Your email address will not be published. Required fields are marked *