ರೈತರ ಬದುಕಿನಲ್ಲಿ ಚೆಲ್ಲಾಟ: ಮೆಕ್ಕೆಜೋಳ ಬೆಳೆಗಾರರ ಪಾಲಿಗೆ ವಿಲನ್ ಆದ ಸರ್ಕಾರ – Kannada News | Dharwad Maize Farmers in Crisis: Support Price Delay Hits Hard

ಧಾರವಾಡ, ಡಿಸೆಂಬರ್​​ 23: ರೈತ (farmer) ದೇಶದ ಬೆನ್ನೆಲುಬು ಅಂತಾ ಹೇಳುತ್ತಲೇ ಬರುವ ಸರಕಾರ ಮತ್ತೊಂದೆಡೆ ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನೂ ಮಾಡುತ್ತಲೇ ಇರುತ್ತೆ. ಈ ಬಾರಿ ಧಾರವಾಡ ಜಿಲ್ಲೆಯಲ್ಲಿ ಮೆಕ್ಕೆಜೋಳ (Maize) ಚೆನ್ನಾಗಿ ಬಂದಿದೆ. ಇದರಿಂದಾಗಿ ರೈತರು ಖುಷಿಯಾಗುವ ಹೊತ್ತಿಗೆ ಮಾರುಕಟ್ಟೆಯಲ್ಲಿ ದರ ಕುಸಿತ ಕಂಡು, ರೈತರು ಕಂಗಾಲಾಗಿ ಹೋದರು. ಇದೇ ಕಾರಣಕ್ಕೆ ಬೆಂಬಲ ಬೆಲೆ ಅಡಿ ಮೆಕ್ಕೆಜೋಳವನ್ನು ಖರೀದಿಸುವಂತೆ ಹೋರಾಟ ಶುರುವಾಯಿತು. ಇದಕ್ಕೆ ಮಣಿದ ಸರಕಾರ ಖರೀದಿಯೇನೋ ಆರಂಭಿಸಿತು. ಆದರೆ ಅಲ್ಲಿಯೂ ಆಟವಾಡುವ ಮೂಲಕ ರೈತರ ಪಾಲಿಗೆ ಸರಕಾರ ವಿಲನ್ ಆಗಿ ಪರಿವರ್ತನೆಯಾಗಿದೆ.

50 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಗೆ ಆದೇಶ

ರೈತರ ಹೋರಾಟಕ್ಕೆ ಮಣಿದು ಬೆಂಬಲ ಬೆಲೆ ಅಡಿ 50 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದರೂ, ಜಿಲ್ಲೆಯಲ್ಲಿ ಫಸಲಿನ ಖರೀದಿ ನಡೆಯದಿರುವುದರಿಂದ ರೈತರು ಚಿಂತಿತರಾಗಿದ್ದಾರೆ. ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ 24 ಸಾವಿರ, ನವಲಗುಂದ 18 ಸಾವಿರ, ಕುಂದಗೋಳ 17 ಸಾವಿರ, ಧಾರವಾಡ 9 ಸಾವಿರ, ಹುಬ್ಬಳ್ಳಿ ಶಹರ, ಗ್ರಾಮೀಣ ಸೇರಿ 7 ಸಾವಿರ ಹಾಗೂ ಅಳ್ಳಾವರ, ಅಣ್ಣಿಗೇರಿಯಲ್ಲಿ 2500 ತಲಾ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಬಿತ್ತನೆ ಮಾಡಿದಾಗಿನಿಂದ ಮಳೆ ಕಾಡುತ್ತ ಬಂದಿತ್ತು.

ಇದನ್ನೂ ಓದಿ: ಕರ್ನಾಟಕ ರೈತರಿಗೆ ಗುಡ್​​ ನ್ಯೂಸ್: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಕೇಂದ್ರ ಅಸ್ತು

ಸಂಕಷ್ಟದ ಮಧ್ಯೆಯೂ ಮೆಕ್ಕೆಜೋಳ ಬೆಳೆದ ರೈತರಿಗೆ ದರ ಕುಸಿತದಿಂದಾಗಿ ಬರ ಸಿಡಿಲು ಬಡಿದಂತಾಯಿತು. ದರ ಕುಸಿತದಿಂದ ಕಂಗಾಲಾದ ರೈತರು ಬೆಂಬಲಬೆಲೆ ಅಡಿ ಮೆಕ್ಕೆಜೋಳ ಖರೀದಿಸುವಂತೆ ಹೋರಾಟ ಆರಂಭಿಸಿದರು. ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ, ಮೊದಲಿಗೆ ತಲಾ ರೈತರಿಂದ 5 ಕ್ವಿಂಟಾಲ್ ಖರೀದಿಗೆ ಆದೇಶಿಸಿತು. ಇದು ರೈತರನ್ನು ಕೆರಳಿಸಿತು. ಮತ್ತೆ ಹೋರಾಟ ಹೆಚ್ಚಾಗಿದ್ದರಿಂದ ಸರ್ಕಾರ 20 ಕ್ವಿಂಟಾಲ್ ಖರೀದಿಗೆ ಮುಂದಾಯಿತು. ಇದಕ್ಕೂ ತೃಪ್ತರಾಗದ ರೈತರು ಹೆದ್ದಾರಿ ತಡೆದು ಹೋರಾಟ ನಡೆಸಲು ಮುಂದಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ, ಡಿ. 7 ರಂದೇ ಪ್ರತಿ ರೈತರಿಂದ 50 ಕ್ವಿಂಟಾಲ್‌ ಖರೀದಿಗೆ ಆದೇಶಿಸಿದೆ. ಆದರೆ ಆ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ.

ಈಗಾಗಲೇ ಧಾರವಾಡದ ರಾಯಾಪುರದ ಕೆಎಂಎಫ್ ಪಶು ಆಹಾರ ರೈತರಿಂದ ತಲಾ 20 ಕ್ವಿಂಟಾಲ್ ಖರೀದಿ ನಡೆಯುತ್ತಿದೆ. ಆದರೆ, ಸಾವಿರಾರು ರೈತರಿಗೆ ಇನ್ನೂ ನೋಂದಣಿ, ಮಾರಾಟ ಸಾಧ್ಯವಾಗಿಲ್ಲ. ಕಾಳು ಇಟ್ಟುಕೊಂಡು ಖರೀದಿ ಪ್ರಕ್ರಿಯೆಗಾಗಿ ಕಾಯುತ್ತಿದ್ದಾರೆ. ಪಕ್ಕದ ಗದಗ, ಹಾವೇರಿ ಜಿಲ್ಲೆಯಲ್ಲಿ ಪ್ರತಿ ರೈತರಿಂದ 50 ಕ್ವಿಂಟಾಲ್ ಖರೀದಿ ನಡೆಯುತ್ತಿದೆ. ಆದರೆ, ಆದೇಶವಾಗಿ 15 ದಿನ ಕಳೆಯುತ್ತ ಬಂದರೂ ಧಾರವಾಡ ಜಿಲ್ಲೆಯಲ್ಲಿ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ.

ಮುಕ್ತ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಕ್ವಿಂಟಾಲ್‌ಗೆ 1800 ರೂ. ವರೆಗೆ ದರ ಇದೆ. ಮಾರಾಟಕ್ಕೆ ಮುಂದಾದರೆ ಕ್ವಿಂಟಾಲ್‌ಗೆ ಕನಿಷ್ಠ 400ರಿಂದ 500 ರೂ.ವರೆಗೆ ನಷ್ಟವಾಗುತ್ತದೆ. ಹಾಗಂತ ರಾಶಿ ಮಾಡಿದ ಬಹಳ ದಿನಗಳವರೆಗೆ ಕಾಳು ಇಡುವಂತಿಲ್ಲ. ಇಷ್ಟೆಲ್ಲಾ ಆದರೂ ಸರಕಾರದ ಆದೇಶಕ್ಕೆ ಬೆಲೆ ಇಲ್ಲದಂತಾಗಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಪ್ರತಿಕ್ರಿಯಿಸಿದ್ದು, ಹಲವಾರು ದಿನಗಳ ಹಿಂದೆಯೇ ಈ ಬಗ್ಗೆ ಆದೇಶವಾಗಿದೆ. ಪ್ರತಿಯೊಬ್ಬ ರೈತರಿಂದ ಗರಿಷ್ಠ 50 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸಲು ಬೆಳಗಾವಿ ಅಧಿವೇಶನದಲ್ಲಿಯೇ ಸಿಎಂ ಅವರು ಹೇಳಿದ್ದಾರೆ. ಈ ಬಗ್ಗೆ ಸರಕಾರದಿಂದ ಆದೇಶವೂ ಬಂದಿದೆ. ಕೆಲ ರೈತರಿಗೆ ಈ ಬಗ್ಗೆ ಮಾಹಿತಿ ಇಲ್ಲದೇ ಇರೋದ್ರಿಂದ ಗೊಂದಲವುಂಟಾಗಿದೆ. ಈ ಬಗ್ಗೆ ಎಲ್ಲಗೂ ಗಮನ ಹರಿಸಬೇಕು ಅಂತಾ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮಹಾನಗರ ಪಾಲಿಕೆಗಳಲ್ಲಿ ಇನ್ನು ಇರಲ್ಲ ಆರೋಗ್ಯಾಧಿಕಾರಿ ಹುದ್ದೆ: ಕಾರಣ ಇಲ್ಲಿದೆ

ಆರಂಭದಿಂದಲೂ ಮೆಕ್ಕೆಜೋಳ ಬೆಳೆಗಾರರು ಸಂಕಷ್ಟಗಳನ್ನು ಎದುರಿಸುತ್ತಲೇ ಬಂದಿದ್ದಾರೆ. ಪ್ರತಿಕೂಲ ಹವಾಮಾನದ ವಿರುದ್ಧ ಹೋರಾಡಿ, ತಮ್ಮ ಬೆಳೆಯನ್ನು ಉಳಿಸಿಕೊಳ್ಳುವಲ್ಲಿಯೇನೋ ರೈತರು ಸಫಲರಾಗಿದ್ದಾರೆ. ಆದರೆ ಮಾರುಕಟ್ಟೆ ಲಾಬಿ ಹಾಗೂ ಇನ್ನಿತರ ಹೊಡೆತಗಳನ್ನು ತಡೆದುಕೊಳ್ಳುವಲ್ಲಿ ಸೋಲುತ್ತಿದ್ದಾರೆ. ಒಟ್ಟಿನಲ್ಲಿ ಮೆಕ್ಕೆಜೋಳ ಬೆಳೆಗಾರರು ಸರಕಾರದ ತೀವ್ರ ನಿರ್ಲಕ್ಷದಿಂದಾಗಿ ಹೈರಾಣಾಗಿರುವುದು ಮಾತ್ರ ವಿಪರ್ಯಾಸದ ಸಂಗತಿಯೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 9:17 pm, Tue, 23 December 25

Source link

Leave a Reply

Your email address will not be published. Required fields are marked *