ರಾಜಮೌಳಿ (Rajamouli) ನಿರ್ದೇಶಿಸಿ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿರುವ ‘ವಾರಣಾಸಿ’ ಸಿನಿಮಾ ಪ್ರಸ್ತುತ ವಿಶ್ವ ಚಿತ್ರರಂಗದ ಬಲು ನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ಸಿನಿಮಾದ ಚಿತ್ರೀಕರಣ ಕ್ಲೈಮ್ಯಾಕ್ಸ್ ಹಂತದಲ್ಲಿದ್ದು, ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಬಿಡುಗಡೆ ಹತ್ತಿರ ಬರು-ಬರುತ್ತಾ, ಸಿನಿಮಾದ ಬಗ್ಗೆ, ಸಿನಿಮಾದ ಕತೆಯ ಬಗ್ಗೆ ಸಾಕಷ್ಟು ವಿಷಯಗಳು ಹೊರಬೀಳುತ್ತಿವೆ. ಇದೀಗ ಸಿನಿಮಾದ ಕತೆ ಏನೆಂಬ ಬಗ್ಗೆ ಮಾಹಿತಿ ಹರಿದಾಡುತ್ತಿದೆ.
ಈ ಹಿಂದೆ ತಿಳಿದು ಬಂದಂತೆ, ರುದ್ರ, ಶ್ರೀರಾಮನ ವಂಶಸ್ಥ, ಕುಂಭ ರಾವಣನ ವಂಶಸ್ಥ, ವಿಶೇಷವಾಗಿ ಕುಂಭಕರ್ಣನ ಅಂಶ. ಸಿನಿಮಾನಲ್ಲಿ ರುದ್ರ ಅಂದರೆ ಮಹೇಶ್ ಬಾಬು ಆರ್ಕಿಯಾಲಜಿಸ್ಟ್ (ಪುರಾತತ್ವಶಾಸ್ತ್ರಜ್ಞ) ಜೊತೆಗೆ ರಗಡ್ ವ್ಯಕ್ತಿತ್ವವುಳ್ಳ ವ್ಯಕ್ತಿ. ನಾಯಕನಿಗೆ ಎರಡು ರೀತಿಯ ವ್ಯಕ್ತಿತ್ವ, ಒಮ್ಮೊಮ್ಮೆ ಅತ್ಯಂತ ಧೈರ್ಯವಂತ, ರಣಭೀಕರ, ಕೆಲವೊಮ್ಮೆ ಬಹಳ ಅಂಜುಬುರುಕ. ಇನ್ನು ನಾಯಕಿ ಪ್ರಿಯಾಂಕಾ ಚೋಪ್ರಾ, ಮಂದಾಕಿನಿ ಹೆಸರಿನ ಪಾತ್ರದಲ್ಲಿ ನಟಿಸಿದ್ದು, ನಾಯಕಿ ಒಳ್ಳೆಯ ಇತಿಹಾಸಜ್ಞೆ ಜೊತೆಗೆ ಮಾರ್ಷಿಯಲ್ ಆರ್ಟ್ ಕಲಿತಿದ್ದಾಳೆ, ಒಳ್ಳೆಯ ಶೂಟರ್ ಸಹ. ವಿಲನ್ ಕುಂಭನಿಗೆ (ಪೃಥ್ವಿರಾಜ್ ಸುಕುಮಾರನ್) ಕೈ-ಕಾಲು ಸ್ವಾಧೀನ ಇಲ್ಲ. ಆದರೆ ಅಪಾರವಾದ ಬುದ್ಧಿಶಕ್ತಿ ಇದೆ. ಅದರಲ್ಲೂ ತಂತ್ರಜ್ಞಾನದಲ್ಲಿ ಎತ್ತಿದ ಕೈ. ಅಮರತ್ವ ಪಡೆಯುವ ತವಕದಲ್ಲಿ ಕುಂಭ ಇದ್ದಾನೆ.
ಇದನ್ನೂ ಓದಿ:ರಾಜಮೌಳಿ ಸಿನಿಮಾದಲ್ಲಿದ್ದರೂ ಬಿಡುವಿಲ್ಲದ ಪೃಥ್ವಿರಾಜ್; ಬ್ಯಾಕ್ ಟು ಬ್ಯಾಕ್ ಚಿತ್ರಗಳ ಮೂಲಕ ದಾಖಲೆ
ಇಂಥಹಾ ಸಮಯದಲ್ಲಿ ವಾರಣಾಸಿ ನಗರಕ್ಕೆ ಶಾಂಭವಿ ಹೆಸರಿನ ಕ್ಷುದ್ರಗ್ರಹ ಅಪ್ಪಳಿಸಲಿರುವ ವಿಷಯ ಮಹೇಶ್ ಬಾಬು ಅಲಿಯಾಸ್ ರುದ್ರನಿಗೆ ಗೊತ್ತಾಗುತ್ತದೆ. ಅದನ್ನು ತಡೆಯಲು ರುದ್ರ ಮುಂದಾಗುತ್ತಾನೆ. ಅದಕ್ಕೆ ಮಂದಾಕಿನಿ ಜೊತೆ ಆಗುತ್ತಾಳೆ. ಆದರೆ ಕುಂಭ, ಆ ಕ್ಷುದ್ರ ಗ್ರಹ ಅಪ್ಪಳಿಸುವ ಸಮಯಕ್ಕಾಗಿ ಕಾದು ಕೂತಿರುತ್ತಾನೆ. ಇದನ್ನು ತಪ್ಪಿಸಲು ಮುಂದಾಗುವ ರುದ್ರ ಮತ್ತು ಮಂದಾಕಿನಿಯರ ಹಿಂದೆ ಕುಂಭ ಬೀಳುತ್ತಾನೆ.
ಕ್ಷುದ್ರಗ್ರಹದ ಅಪ್ಪಳಿಕೆಯನ್ನು ತಡೆಯಲು ರುದ್ರ ಪುರಾತನ ಶಾಸ್ತ್ರಗಳ ನೆರವು ಪಡೆಯುತ್ತಾನೆ, ಆ ಶಾಸ್ತ್ರಗಳು ರುದ್ರನನ್ನು ಆಫ್ರಿಕಾ, ರೋಮ್, ಅಂಟಾರ್ಟಿಕಾ, ಪ್ಯಾರಿಸ್ ಇನ್ನೂ ಹಲವು ದೇಶಗಳನ್ನು ಸುತ್ತು ಹಾಕುವಂತೆ ಮಾಡುತ್ತದೆ. ರುದ್ರ, ಮಂದಾಕಿನಿ ಹೋದಲ್ಲೆಲ್ಲ ಕುಂಭ ಅವರನ್ನು ಹಿಂಬಾಲಿಸುತ್ತಾನೆ. ಈ ಓಟದಲ್ಲಿ ಗೆಲ್ಲುವವರ್ಯಾರು, ಸೋಲುವರ್ಯಾರು ಎಂಬುದೇ ಸಿನಿಮಾದ ಕತೆ. ‘ವಾರಣಾಸಿ’ ಸಿನಿಮಾ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 11:13 am, Thu, 13 August 26
