ಡಾ ರಾಜ್ಕುಮಾರ್ (Dr Rajkumar) ಅವರ ಪುಣ್ಯ ಜಯಂತಿ ಇಂದು. ರಾಜ್ಯದ ಹಲವಾರು ಕಡೆ ಡಾ ರಾಜ್ಕುಮಾರ್ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ. ರಾಜ್ಯದ ಯಾವ ಮೂಲೆಗೆ ಹೋದರೂ ರಾಜ್ಕುಮಾರ್ ಅವರ ಚಿತ್ರ, ಪ್ರತಿಮೆಗಳು ಇಂದಿಗೂ ಹೆಜ್ಜೆಗೊಂದರಂತೆ ಕಾಣುತ್ತವೆ. ವಿಶೇಷವೆಂದರೆ ರಾಜ್ಯದ ಯಾವುದೇ ಜನಪ್ರಿಯ ಹೋಟೆಲ್ಗಳಿಗೆ ಹೋದರೂ ಅಲ್ಲಿ ರಾಜ್ಕುಮಾರ್ ಅವರ ಫೋಟೊ ಒಂದು ಇದ್ದೇ ಇರುತ್ತದೆ. ಅಭಿಮಾನಿಗಳಿಗೆ ಗೊತ್ತಿರುವಂತೆ ರಾಜ್ಕುಮಾರ್ ಅವರು ಮಹಾನ್ ಭೋಜನಪ್ರಿಯರು. ಬೆಂಗಳೂರಿನ ಪ್ರಖ್ಯಾತ ಹೋಟೆಲ್ ವಿದ್ಯಾರ್ಥಿ ಭವನಕ್ಕೂ ರಾಜ್ಕುಮಾರ್ ಅವರೊಟ್ಟಿಗೆ ನಂಟಿದೆ. ಆ ನಂಟನ್ನು ವಿದ್ಯಾರ್ಥಿ ಭವನದ ಮಾಲೀಕರಾದ ಎಸ್ ರಾಮಕೃಷ್ಣ ಅಡಿಗ ಅವರು ರಾಜ್ಕುಮಾರ್ ಹಾಗೂ ವಿದ್ಯಾರ್ಥಿ ಭವನದ ನಂಟಿನ ಬಗ್ಗೆ ಮಾತನಾಡಿದ್ದಾರೆ.
1962 ರಲ್ಲಿ ರಾಮಕೃಷ್ಣ ಅಡಿಗ ಅವರು ಬೆಂಗಳೂರಿಗೆ ಬರುವ ಮುಂಚೆಯೇ ಅವರು ಅಣ್ಣಾವ್ರ ಅಭಿಮಾನಿಯಂತೆ. 1970ರಲ್ಲಿ ವಿದ್ಯಾರ್ಥಿ ಭವನ ಹೋಟೆಲ್ ಜವಾಬ್ದಾರಿ ವಹಿಸಿಕೊಂಡ ಬಳಿಕ ಅಣ್ಣಾವ್ರು ಹೋಟೆಲಿನಿಂದ ತಮ್ಮ ಮನೆಗೆ ದೋಸೆ ಇತ್ಯಾದಿ ತಿನಿಸುಗಳನ್ನು ಪಾರ್ಸೆಲ್ ತರಿಸಿಕೊಳ್ಳುತ್ತಿದ್ದರಂತೆ. ಖುದ್ದು ರಾಮಕೃಷ್ಣ ಅಡಿಗರೇ ಅದನ್ನು ಕೊಂಡೊಯ್ಯುತ್ತಿದ್ದರಂತೆ. ಕೆಲ ವರ್ಷಗಳ ಬಳಿಕ ರಜನೀಕಾಂತ್ ಅವರು ಒಮ್ಮೆ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ, ಬಳಿಕ ರಾಜ್ಕುಮಾರ್ ಮನೆಗೆ ಹೋದರಂತೆ. ಆಗ, ವಿದ್ಯಾರ್ಥಿ ಭವನದ ಬಗ್ಗೆ ಪ್ರಸ್ತಾಪಿಸಿ, ನೀವು ಅಲ್ಲಿಗೇ ಹೋಗಿ (ಹೋಟೆಲ್ಗೆ) ದೋಸೆ ತಿನ್ನಬೇಕು ಎಂದರಂತೆ. ಅದರಂತೆ ಪಾರ್ವತಮ್ಮನವರು ಹೋಟೆಲ್ಗೆ ಕರೆ ಮಾಡಿ ಬರುವುದಾಗಿ ಹೇಳಿದರಂತೆ. ಆದರೆ ಅನಿವಾರ್ಯ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲವಂತೆ. ಆದರೆ ಆಗಾಗ್ಗೆ ಹೋಟೆಲ್ನಿಂದ ಮನೆಗೆ ಖಾದ್ಯಗಳನ್ನು ತರಿಸಿಕೊಂಡು ಸವಿಯುತ್ತಿದ್ದರಂತೆ ಅಣ್ಣಾವ್ರು.
ವಿದ್ಯಾರ್ಥಿ ಭವನದಲ್ಲಿ ‘ಅಭಿಮಾನಿ’ ದೇವರು.
ವರನಟ ಡಾ. ರಾಜ್ ಅವರ ಮಹತ್ವ ಅವರ ಸರಳತೆಯಲ್ಲಿ ಇತ್ತು. ಪಾರ್ಸೆಲ್ ಮೂಲಕ ಆರಂಭವಾದ ಆತ್ಮೀಯತೆ, ಬಹುಕಾಲದ ನಿರೀಕ್ಷೆಯ ಬಳಿಕ ನಡೆದ ಆ ಭೇಟಿ – ಇಂದಿಗೂ ಮರೆಯಲಾಗದು.
ಅವರ 97ನೇ ಜನ್ಮದಿನದಂದು, ಆ ಸೌಮ್ಯ ಮತ್ತು ಸರಳ ವ್ಯಕ್ತಿತ್ವದ ದಂತಕಥೆಯನ್ನು ಸ್ಮರಿಸುತ್ತೇವೆ.
Dr. Rajkumar’s greatness… pic.twitter.com/Rtf4UDL5jR
— Vidyarthi Bhavan (@VidyarthiBhavan) April 24, 2026
ವೀರಪ್ಪನ್, ಅಣ್ಣಾವ್ರನ್ನು ಅಪಹರಿಸಿ, ಮರಳಿ ಬಂದ ಬಳಿಕ ಕೆಲವೇ ದಿನಗಳಲ್ಲಿ ಮನೆಗೆ ಪಾರ್ಸೆಲ್ ತರಿಸಿಕೊಂಡಿದ್ದರಂತೆ. ಆಗೆಲ್ಲ ಮಾಲೀಕ ಎಸ್ ರಾಮಕೃಷ್ಣ ಅಡಿಗ ಅವರೇ ಹೋಗಿ ಖಾದ್ಯಗಳನ್ನು ಕೊಟ್ಟು ಬರುತ್ತಿದ್ದರಂತೆ. ಆಗೆಲ್ಲ ಸಾಕಷ್ಟು ಹೊತ್ತು ಮಾತನಾಡುತ್ತಾ ಕೂರುತ್ತಿದ್ದ ಅಣ್ಣಾವ್ರು, ಕಾಡಿನ ಅನುಭವಗಳನ್ನು ಹೇಳುತ್ತಿದ್ದರಂತೆ. ತಮಾಷೆ ಮಾಡುತ್ತಿದ್ದರು, ಹಾಡುಗಳನ್ನು ಸಹ ಹಾಡುತ್ತಿದ್ದರು. ನಾನು ಹೊರಡುವಾಗ ಗೇಟಿನ ವರೆಗೆ ಬಂದು ವಿದಾಯ ಹೇಳುತ್ತಿದ್ದರು. ಅವರಿಗೆ ಕಾಲು ನೋವಿತ್ತು, ಬೇಡ ಎಂದರೂ ಕೇಳದೆ ಹೊರಗೆ ಬರುತ್ತಿದ್ದರು, ಅವರು ನಿಜಕ್ಕೂ ಬಂಗಾರದ ಮನುಷ್ಯನೇ ಆಗಿದ್ದರು’ ಎಂದು ನೆನಪು ಮಾಡಿಕೊಂಡಿದ್ದರು.
ಇದನ್ನೂ ಓದಿ:ಡಾ. ರಾಜ್ಕುಮಾರ್ 20ನೇ ವರ್ಷದ ಪುಣ್ಯಸ್ಮರಣೆ: ಅಭಿಮಾನಿಗಳಿಗೆ ಅನ್ನದಾನ
ಕೊನೆಗೂ ಒಮ್ಮೆ ಅವರು ವಿದ್ಯಾರ್ಥಿ ಭವನಕ್ಕೆ ಬಂದರು. ತಮ್ಮ ಮೊಮ್ಮಕ್ಕಳನ್ನೆಲ್ಲ ಅವರು ಕರೆದುಕೊಂಡು ಬಂದಿದ್ದರು. 10:30 ಸುಮಾರಿಗೆ ಅವರು ಹೋಟೆಲ್ಗೆ ಬಂದರು. ಅವರು ಬರುವಷ್ಟರಲ್ಲೇ ಜನಸಾಗರ ಹೊರಗೆ ನೆರೆದಿತ್ತು. ಹೋಟೆಲ್ನಿಂದ ಹೊರಗೆ ಹೋಗುವಾಗಲಂತೂ ಸಾವಿರಾರು ಜನ ಸೇರಿಬಿಟ್ಟರು. ಜನ ಅವರ ಮೇಲೆ ಹೂವಿನ ಮಳೆ ಸುರಿಸಲು ಆರಂಭಿಸಿದರು. ಅದು ನಾನು ಮರೆಯಲಾರದ ಅನುಭವ. ಅಂದು ಅವರು ನಮ್ಮ ಅತಿಥಿಗಳ ಡೈರಿಯಲ್ಲಿ ಬರೆದಿರುವುದನ್ನು ನಾವು ಜತನದಿಂದ ಕಾಪಾಡಿಕೊಂಡಿದ್ದೇವೆ. ಅದು ನಮ್ಮ ಅಮೂಲ್ಯ ಆಸ್ತಿಗಳಲ್ಲಿ ಒಂದು. ಅವರಂಥಹಾ ವ್ಯಕ್ತಿ ಇನ್ನೆಂದೂ ಹುಟ್ಟುವುದಿಲ್ಲವೇನೋ, ಅವರಿಗೆ ಅವರೇ ಸಾಟಿ, ಅವರು ನಿಜವಾಗಿಯೂ ಬಂಗಾರದ ಮನುಷ್ಯ ಎಂದು ಗದ್ಗದಿತರಾಗಿದ್ದಾರೆ ರಾಮಕೃಷ್ಣ ಅಡಿಗ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
