ಶಿವಮೊಗ್ಗ ವಿಮಾನ ನಿಲ್ದಾಣ ನಿರ್ವಹಣೆ ಖಾಸಗಿ ಸಂಸ್ಥೆಗೆ ಹಸ್ತಾಂತರಕ್ಕೆ ಮುಂದಾದ ಸರ್ಕಾರ – Kannada News | Karnataka Government Plans to Hand Over Shivamogga Airport Operations to Private Company

ಶಿವಮೊಗ್ಗ ಏರ್‌ಪೋರ್ಟ್ (ಸಂಗ್ರಹ ಚಿತ್ರ)Image Credit source: tv9

ಶಿವಮೊಗ್ಗ, ಆಗಸ್ಟ್ 11: ಕರ್ನಾಟಕ ಸರ್ಕಾರದ ನಿರ್ವಹಣೆಯಲ್ಲಿರುವ ಶಿವಮೊಗ್ಗ ವಿಮಾನ ನಿಲ್ದಾಣದ (Shivamogga Airport)  ಕಾರ್ಯಾಚರಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಲು ಸರ್ಕಾರ ಮುಂದಾಗಿದೆ. ಶಿವಮೊಗ್ಗದ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದ ನಿರ್ವಹಣೆಗಾಗಿ ಖಾಸಗಿ ಏರ್‌ಲೈನ್ ಆಪರೇಟರ್‌ಗಳು, ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿದಾರರಿಂದ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (KSIIDC) ‘ಎಕ್ಸ್​​ಪ್ರೆಷನ್ ಆಫ್ ಇಂಟರೆಸ್ಟ್ (EoI)’ ಆಹ್ವಾನಿಸಿದೆ.

ಎಕ್ಸ್​​ಪ್ರೆಷನ್ ಆಫ್ ಇಂಟರೆಸ್ಟ್ ಎಂದರೇನು?

‘ಎಕ್ಸ್​​ಪ್ರೆಷನ್ ಆಫ್ ಇಂಟರೆಸ್ಟ್’ ಎಂದರೆ ಯಾವುದೇ ಯೋಜನೆ, ಕಾಮಗಾರಿ, ಸೇವೆ ಅಥವಾ ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಂಸ್ಥೆಗಳು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯವನ್ನು ಪ್ರಾಥಮಿಕವಾಗಿ ವ್ಯಕ್ತಪಡಿಸುವ ದಾಖಲೆಯಾಗಿದೆ. ಇದು ಅಂತಿಮ ಟೆಂಡರ್ ಅಥವಾ ಒಪ್ಪಂದವಲ್ಲ; ಮುಂದಿನ ಹಂತದ ಬಿಡ್ ಅಥವಾ ಆಯ್ಕೆ ಪ್ರಕ್ರಿಯೆಗೆ ಮುನ್ನ ಆಸಕ್ತ ಸಂಸ್ಥೆಗಳನ್ನು ಗುರುತಿಸುವ ಮೊದಲ ಹಂತವಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣ ಮಾರಾಟವಾಗುತ್ತಾ?

ಶಿವಮೊಗ್ಗ ವಿಮಾನ ನಿಲ್ದಾಣವನ್ನು ಮಾರಾಟ ಮಾಡುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ. ಬದಲಿಗೆ ವಿಮಾನ ನಿಲ್ದಾಣದ ನಿರ್ವಹಣೆ ಮತ್ತು ಗ್ರೌಂಡ್ ಆಪರೇಷನ್‌ಗಳ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗೆ ವಹಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು KSIIDC ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ವಿಮಾನ ನಿಲ್ದಾಣ ನಿರ್ವಹಣೆಗೆ ಅದಾನಿ ಗ್ರೂಪ್, ಜಿಎಂಆರ್ ಗ್ರೂಪ್, ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್, ಸ್ಕೈ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಹಾಗೂ ಬೆಂಗಾಲ್ ಏರೋಟ್ರೋಪೊಲಿಸ್ ಪ್ರಾಜೆಕ್ಟ್ಸ್ ಲಿಮಿಟೆಡ್ ಆಸಕ್ತಿ ತೋರಿಸಿವೆ ಎಂದು ಅವರು ತಿಳಿಸಿದ್ದಾರೆ.

ವಿಮಾನ ಸೇವೆ ವಿಸ್ತರಣೆಗೆ ಒತ್ತು

ಶಿವಮೊಗ್ಗ-ಬೆಂಗಳೂರು ನಡುವಿನ ವಿಮಾನ ಸೇವೆ ಕೆಲವು ತಿಂಗಳ ಹಿಂದೆ ಸ್ಥಗಿತಗೊಂಡಿತ್ತು. ಇದೀಗ ಅಕ್ಟೋಬರ್‌ನಿಂದ ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಸ್ಟಾರ್ ಏರ್ ವಿಮಾನ ಸೇವೆ ಆರಂಭಿಸಲು ಒಪ್ಪಿಗೆ ನೀಡಿದೆ ಎಂದು KSIIDC ಅಧ್ಯಕ್ಷರು ತಿಳಿಸಿದ್ದಾರೆ.

ಸದ್ಯ ಶಿವಮೊಗ್ಗದಿಂದ ಗೋವಾ, ತಿರುಪತಿ, ಹೈದರಾಬಾದ್ ಹಾಗೂ ಚೆನ್ನೈ ನಗರಗಳಿಗೆ ವಿಮಾನ ಸೇವೆ ಲಭ್ಯವಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗದಿಂದ ದೆಹಲಿ ಮತ್ತು ಮುಂಬೈಗೆ ವಿಮಾನ ಸಂಪರ್ಕ ಕಲ್ಪಿಸಲು ಪ್ರಯತ್ನಗಳು ನಡೆಯುತ್ತಿವೆ.

2023ರಲ್ಲಿ ಉದ್ಘಾಟನೆಯಾಗಿದ್ದ ಶಿವಮೊಗ್ಗ ವಿಮಾನ ನಿಲ್ದಾಣ

ಶಿವಮೊಗ್ಗ ವಿಮಾನ ನಿಲ್ದಾಣವನ್ನು 2023ರ ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 80ನೇ ಜನ್ಮದಿನದಂದು ವಿಮಾನ ನಿಲ್ದಾಣ ಉದ್ಘಾಟನೆಯಾಗಿತ್ತು.

ಇದನ್ನೂ ಓದಿ: 2ನೇ ಏರ್ಪೋರ್ಟ್ ನಿರ್ಮಾಣದ ಬಗ್ಗೆ ಸಿಎಂ ಮಹತ್ವದ ಸಭೆ: ಬೆಂಗಳೂರು ದಕ್ಷಿಣದಲ್ಲಿ ಏರ್ಪೋರ್ಟ್ ಮಾಡಲು ಸರ್ಕಾರ ಒಲವು

ಸದ್ಯ KSIIDCಗೆ ಸೇರಿದ 11 ತಾಂತ್ರಿಕ ಸಿಬ್ಬಂದಿ ಹಾಗೂ 27 ಹೌಸ್‌ಕೀಪಿಂಗ್ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಮಾನ ನಿಲ್ದಾಣದ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಿದ ಬಳಿಕ ಸರ್ಕಾರವು ತನ್ನ ಗಮನವನ್ನು ರಾಯಚೂರು ವಿಮಾನ ನಿಲ್ದಾಣ ಯೋಜನೆ ಸೇರಿದಂತೆ ಇತರ ಮೂಲಸೌಕರ್ಯ ಯೋಜನೆಗಳತ್ತ ಕೇಂದ್ರೀಕರಿಸಲು ಉದ್ದೇಶಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:33 am, Tue, 11 August 26

Source link

Leave a Reply

Your email address will not be published. Required fields are marked *