ಪ್ರಾತಿನಿಧಿಕ ಚಿತ್ರImage Credit source: Getty images
ಶಿವಮೊಗ್ಗ, ಆಗಸ್ಟ್ 10: ಎಸ್ಎಸ್ಎಲ್ಸಿ ವಿದ್ಯಾರ್ಥಿ (SSLC student) ಏಕಿಏಕಿ ಕುಸಿದುಬಿದ್ದು ಸಾವನ್ನಪ್ಪಿರುವಂತಹ (death) ಘಟನೆ ಶಿವಮೊಗ್ಗ ತಾಲೂಕಿನ ತಮ್ಮಡಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಜಿ.ಕೆ.ವಿನಯ್(15) ಮೃತ ವಿದ್ಯಾರ್ಥಿ. ಸದ್ಯ ವಿನಯ್ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಶಿವಮೊಗ್ಗ ತಾಲೂಕಿನ ತಮ್ಮಡಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಇತರರು ಚೆಸ್ ಆಡುತ್ತಿರುವುದನ್ನು ವಿನಯ್ ನೋಡುತ್ತ ಕುಳಿತುಕೊಂಡಿದ್ದ. ಈ ವೇಳೆ ದಿಢೀರ್ ಕುಸಿದು ಬಿದ್ದಿದ್ದಾನೆ. ತಕ್ಷಣ ಶಿಕ್ಷಕರು ಆತನನ್ನು ಆಯನೂರು ಪಿಹೆಚ್ಸಿಗೆ ಕರೆತಂದಿದ್ದಾರೆ. ಆದರೆ ವಿನಯ್ ಸ್ಥಿತಿ ಗಂಭೀರವಾಗಿದ್ದರಿಂದ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸುವಷ್ಟರಲ್ಲಿ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.
ವಿನಯ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸ್ತಿರೋ ಪೋಷಕರು
ಮೃತ ವಿದ್ಯಾರ್ಥಿ ವಿನಯ್ನ ತಂದೆ-ತಾಯಿ ಶಿಕಾರಿಪುರದವರು. ಆಯನೂರು ಸಮೀಪದ ತಮ್ಮಡಿಹಳ್ಳಿಯ ಅಜ್ಜನ ಮನೆಯಲ್ಲಿ ವಾಸವಿದ್ದು ಓದುತ್ತಿದ್ದ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ತಮ್ಮ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿ ಸಾವಿಗೆ ನಿಖರ ಕಾರಣ ಏನು ಎಂಬುವುದು ತಿಳಿದುಬಂದಿಲ್ಲ.
ಖಾಸಗಿ ಶಾಲೆಯ ವಾಹನದಡಿ ಸಿಲುಕಿ 3 ವರ್ಷದ ಬಾಲಕಿ ಸಾವು
ವಿಜಯಪುರ ನಗರದ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಶಾಲಾ ವಾಹನದಡಿ ಸಿಲುಕಿ ಮೂರು ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಶಿರ್ಷಾ ಸುಹಾಸ ವಾಡಿ (3) ಮೃತಪಟ್ಟ ದುರ್ದೈವಿ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಖಾಸಗಿ ಶಾಲಾ ಬಸ್ಸಿನಿಂದ ಬಾಲಕಿಯ ಅಣ್ಣ ಕೆಳಗೆ ಇಳಿದಿದ್ದು, ಆತನನ್ನು ನೋಡಲು ಶಿರ್ಷಾ ಮನೆಯಿಂದ ಹೊರಗೆ ಬಂದು ವಾಹನದ ಮುಂದೆ ಬಂದಿದ್ದಾಳೆ. ಈ ವೇಳೆ ಚಾಲಕ ಗಮನಿಸದೇ ವಾಹನವನ್ನು ಮುಂದೆ ಚಲಾಯಿಸಿದ್ದರಿಂದ, ಬಾಲಕಿ ವಾಹನದ ಮುಂಭಾಗದ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ.
ಇದನ್ನೂ ಓದಿ: 2 ತಿಂಗಳ ಮಗು ಬಾವಿಯಲ್ಲಿ ಪತ್ತೆ: ತಾಯಿ ಮೇಲೆಯೇ ಡೌಟ್, ನಿಗೂಢ ಸಾವಿನ ರಹಸ್ಯ ಬೆನ್ನತ್ತಿದ ಪೊಲೀಸ್ರು
ಇನ್ನು ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಶಾಲಾ ವಾಹನದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಕುರಿತು ವಿಜಯಪುರ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.