ಶಿವರಾಜ್ ಸಿಂಗ್ ಚೌಹಾಣ್ ಮಗನ ವಿರುದ್ಧದ ಹೇಳಿಕೆಗೆ ಕ್ಷಮೆ ಕೇಳಿದ ರಾಹುಲ್ ಗಾಂಧಿ – Kannada News | Rahul Gandhi expresses regret in Shivraj Singh Chouhan son defamation case know details

ಜಬಲ್ಪುರ, ಜೂನ್ 25: ಕೇಂದ್ರ ಸಚಿವ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪುತ್ರ ಕಾರ್ತಿಕೇಯ ಸಿಂಗ್ ಚೌಹಾಣ್ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಲಿಖಿತ ಹೇಳಿಕೆ ನೀಡಿ ವಿಷಾದ ವ್ಯಕ್ತಪಡಿಸಿದ್ದಾರೆ. ತಪ್ಪು ತಿಳುವಳಿಕೆ ಮತ್ತು ತಪ್ಪು ಮಾಹಿತಿಯ ಆಧಾರದ ಮೇಲೆ ಆ ಹೇಳಿಕೆ ನೀಡಲಾಗಿತ್ತು ಎಂದು ರಾಹುಲ್ ಗಾಂಧಿ ಕೋರ್ಟ್‌ಗೆ ತಿಳಿಸಿದ್ದಾರೆ. ಈ ರೀತಿ ರಾಹುಲ್ ಗಾಂಧಿ ಕ್ಷಮೆ ಯಾಚನೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಹಲವು ಪ್ರಕರಣಗಳಲ್ಲಿ ಅವರು ಇದೇ ರೀತಿ ಕ್ಷಮೆ ಕೋರಿದ್ದರು.

ಪ್ರಸ್ತುತ ಪ್ರಕರಣದ ದೂರುದಾರರಾದ ಕಾರ್ತಿಕೇಯ ಚೌಹಾಣ್ ಅವರ ಪರ ವಕೀಲರು ರಾಹುಲ್ ಗಾಂಧಿ ಅವರ ವಿಷಾದವನ್ನು ಸ್ವೀಕರಿಸಲು ಮತ್ತು ಪ್ರಕರಣವನ್ನು ಮುಕ್ತಾಯಗೊಳಿಸಲು ಒಪ್ಪಿಗೆ ಸೂಚಿಸಿದ್ದು, ಹೈಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ.

ಏನಿದು ವಿವಾದ?:

2018ರ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ, ಝಬುವಾದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡಿದ್ದ ‘ಪನಾಮಾ ಪೇಪರ್ಸ್ ಹಗರಣ’ದಲ್ಲಿ (Panama Papers Leak) ಆಗಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪುತ್ರ ಕಾರ್ತಿಕೇಯ ಸಿಂಗ್ ಅವರ ಹೆಸರು ಕೇಳಿಬಂದಿದೆ ಎಂದು ಆರೋಪಿಸಿದ್ದರು. ಈ ಆರೋಪವನ್ನು ನಿರಾಕರಿಸಿದ ಕಾರ್ತಿಕೇಯ ಚೌಹಾಣ್, ತಮಗೂ, ತಮ್ಮ ಕುಟುಂಬಕ್ಕೂ, ಆ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ. ರಾಹುಲ್ ಗಾಂಧಿ ಅವರ ಸುಳ್ಳು ಹೇಳಿಕೆಯಿಂದ ತಮ್ಮ ಸಾಮಾಜಿಕ ಗೌರವಕ್ಕೆ ಧಕ್ಕೆಯಾಗಿದೆ ಎಂದು ಭೋಪಾಲ್‌ನ ವಿಶೇಷ ಸಂಸದ ಮತ್ತು ಶಾಸಕರ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಇದನ್ನೂ ಓದಿ: ‘ರಫೇಲ್ ಯುದ್ಧ ವಿಮಾನಗಳ ಬಗ್ಗೆ ಪಾಕಿಸ್ತಾನದ ಸುಳ್ಳು ಬಯಲು’; ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

ಹೈಕೋರ್ಟ್‌ನಲ್ಲಿ ರಾಹುಲ್ ಗಾಂಧಿ ಸ್ಪಷ್ಟನೆ:

ವಿಶೇಷ ನ್ಯಾಯಾಲಯವು ತಮಗೆ ನೀಡಿದ್ದ ಸಮನ್ಸ್ ಅನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಜಬಲ್ಪುರ ಹೈಕೋರ್ಟ್ ಪೀಠದ ಮುಂದೆ ರಾಹುಲ್ ಗಾಂಧಿ ಪರ ವಕೀಲರು ಲಿಖಿತ ಹೇಳಿಕೆ ಸಲ್ಲಿಸಿ ಸ್ಪಷ್ಟನೆ ನೀಡಿದ್ದರು. “ಭಾಷಣ ಮಾಡಿದ ಮರುದಿನವೇ ನನಗೆ ತಮ್ಮ ತಪ್ಪಿನ ಅರಿವಾಗಿತ್ತು. ಛತ್ತೀಸ್‌ಗಢದ ಅಂದಿನ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಮಗನ ಹೆಸರನ್ನು ಉಲ್ಲೇಖಿಸುವ ಬದಲು ತಪ್ಪಾಗಿ ಕಾರ್ತಿಕೇಯ ಚೌಹಾಣ್ ಅವರ ಹೆಸರನ್ನು ಹೇಳಿದ್ದೆ. ಈ ಕುರಿತು ಮರುದಿನವೇ (ಅಕ್ಟೋಬರ್ 30, 2018ರಂದು) ಸಾರ್ವಜನಿಕವಾಗಿ ಸ್ಪಷ್ಟನೆ ನೀಡಿದ್ದೆ. ಆ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ” ಎಂದಿದ್ದರು. ಈ ಕ್ಷಮೆಗೆ ಕಾರ್ತಿಕ್ ಒಪ್ಪಿದ್ದರಿಂದ ಈ ಪ್ರಕರಣ ಮುಕ್ತಾಯವಾಗಿದೆ.

ಹಿಂದೆಯೂ ಇದೇ ರೀತಿ ಎಡವಟ್ಟು ಮಾಡಿದ್ದರು ರಾಹುಲ್ ಗಾಂಧಿ. ಆ ಘಟನೆಗಳ ಮಾಹಿತಿ ಇಲ್ಲಿದೆ.

‘ಚೌಕಿದಾರ್ ಚೋರ್ ಹೈ’ ಎಂದಿದ್ದ ರಾಹುಲ್:

ರಾಹುಲ್ ಗಾಂಧಿ ಅವರ ರಾಜಕೀಯ ಜೀವನದಲ್ಲೇ ಅತ್ಯಂತ ದೊಡ್ಡ ಕಾನೂನು ಹಿನ್ನಡೆ ಮತ್ತು ಕ್ಷಮೆಯಾಚನೆ ನಡೆದಿದ್ದು ರಫೇಲ್ ಯುದ್ಧ ವಿಮಾನ ಹಗರಣದ ಆರೋಪದ ಸಂದರ್ಭದಲ್ಲಿ. 2019ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ “ಚೌಕಿದಾರ್ ಚೋರ್ ಹೈ” (ಕಾವಲುಗಾರನೇ ಕಳ್ಳ) ಎಂಬ ಘೋಷಣೆಯನ್ನು ಬಳಸಿದ್ದರು. ಈ ನಡುವೆ ರಫೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ತಪ್ಪಾಗಿ ಉಲ್ಲೇಖಿಸಿದ ರಾಹುಲ್ ಗಾಂಧಿ, “ಈಗ ಸುಪ್ರೀಂ ಕೋರ್ಟ್ ಕೂಡ ಚೌಕಿದಾರ್ ಚೋರ್ ಹೈ ಎಂದು ಒಪ್ಪಿಕೊಂಡಿದೆ” ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಆತ್ಮನಿರ್ಭರ ಭಾರತವನ್ನು ಲೇವಡಿ ಮಾಡಿದ್ದಕ್ಕೆ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಸುಪ್ರೀಂ ಕೋರ್ಟ್ ಹೆಸರನ್ನು ರಾಜಕೀಯಕ್ಕೆ ಎಳೆದಿದ್ದಕ್ಕಾಗಿ ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ ಅವರು ರಾಹುಲ್ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದ್ದರು. ಸುಪ್ರೀಂ ಕೋರ್ಟ್ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದಾಗ, ರಾಹುಲ್ ಗಾಂಧಿ ಮೊದಲು ವಿಷಾದ ವ್ಯಕ್ತಪಡಿಸಿದರು. ಆದರೆ, ಕೋರ್ಟ್ ಅದನ್ನು ಒಪ್ಪದಿದ್ದಾಗ, ಅಂತಿಮವಾಗಿ ಸುಪ್ರೀಂ ಕೋರ್ಟ್‌ಗೆ ಬೇಷರತ್ ಕ್ಷಮಾಪಣಾ ಪತ್ರವನ್ನು ಸಲ್ಲಿಸಿದರು. ಇನ್ನೆಂದೂ ನ್ಯಾಯಾಲಯದ ಆದೇಶಗಳನ್ನು ರಾಜಕೀಯಕ್ಕೆ ಬಳಸುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಿದ ನಂತರ ಕೋರ್ಟ್ ಅವರಿಗೆ ಎಚ್ಚರಿಕೆ ನೀಡಿ ಪ್ರಕರಣವನ್ನು ಕೈಬಿಟ್ಟಿತು.

ಆರ್​ಎಸ್​ಎಸ್​ ಮತ್ತು ಗಾಂಧೀಜಿ ಹತ್ಯೆ ವಿವಾದ:

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸಂಘಟನೆಯ ವಿರುದ್ಧ ನೀಡಿದ ಹೇಳಿಕೆಗಾಗಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾಯಿತು. 2014ರ ಚುನಾವಣಾ ರ‍್ಯಾಲಿಯೊಂದರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, “ಆರ್​ಎಸ್​ಎಸ್​ ಕಾರ್ಯಕರ್ತರೇ ಮಹಾತ್ಮ ಗಾಂಧೀಜಿಯವರನ್ನು ಕೊಂದಿದ್ದು” ಎಂದು ಆರೋಪಿಸಿದ್ದರು. ಇದರ ವಿರುದ್ಧ ಆರ್​ಎಸ್​ಎಸ್​ ಕಾರ್ಯಕರ್ತ ರಾಜೇಶ್ ಕುಂಟೆ ಅವರು ಮಹಾರಾಷ್ಟ್ರದ ಭಿವಾಂಡಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಈ ಪ್ರಕರಣ ಸುಪ್ರೀಂ ಕೋರ್ಟ್ ತಲುಪಿದಾಗ, ಇಡೀ ಸಂಘಟನೆಯನ್ನು ಹತ್ಯೆಯೊಂದಿಗೆ ಜೋಡಿಸುವುದು ತಪ್ಪು ಎಂದು ಕೋರ್ಟ್ ಅಭಿಪ್ರಾಯಪಟ್ಟಿತು. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುವಾಗ ರಾಹುಲ್ ಗಾಂಧಿ “ನಾನು ಆರ್​ಎಸ್​ಎಸ್​ ಸಂಘಟನೆಯನ್ನು ಒಟ್ಟಾರೆಯಾಗಿ ದೂಷಿಸಿಲ್ಲ, ಕೇವಲ ಅದಕ್ಕೆ ಸಂಬಂಧಿಸಿದ ಕೆಲವು ವ್ಯಕ್ತಿಗಳನ್ನು ಮಾತ್ರ ಉಲ್ಲೇಖಿಸಿದ್ದೇನೆ” ಎಂದು ಯು-ಟರ್ನ್ ಹೊಡೆದರು. ಇಡೀ ಸಂಘಟನೆಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ ಆರೋಪಕ್ಕೆ ನ್ಯಾಯಾಲಯದ ಸಲಹೆಯಂತೆ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಬೇಕಾಯಿತು.

‘ಮೋದಿ ಉಪನಾಮ’ದ ಮಾನನಷ್ಟ ಪ್ರಕರಣ:

ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ನೇರವಾಗಿ ಕ್ಷಮೆಯಾಚಿಸದಿದ್ದರೂ, ಕ್ಷಮೆಯಾಚಿಸಲು ನಿರಾಕರಿಸಿದ್ದರಿಂದಲೇ ಅವರ ಸಂಸತ್ ಸದಸ್ಯತ್ವ ರದ್ದಾಗುವ ಸ್ಥಿತಿ ಬಂದಿತ್ತು. 2019ರ ಕರ್ನಾಟಕದ ಕೋಲಾರದ ಚುನಾವಣಾ ಭಾಷಣದಲ್ಲಿ “ಎಲ್ಲಾ ಕಳ್ಳರಿಗೂ ಮೋದಿ ಎಂಬ ಉಪನಾಮವೇ ಏಕಿರುತ್ತದೆ?” ಎಂದು ಪ್ರಶ್ನಿಸಿದ್ದರು. ಈ ವೇಳೆ ಲಲಿತ್ ಮೋದಿ, ನೀರವ್ ಮೋದಿ ಹೆಸರನ್ನು ಉಲ್ಲೇಖಿಸಿದ್ದರು. ಈ ಪ್ರಕರಣದಲ್ಲಿ 2023ರಲ್ಲಿ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯ ಪರಿಣಾಮವಾಗಿ, ನಿಯಮಾವಳಿಗಳ ಪ್ರಕಾರ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು 2023ರ ಮಾರ್ಚ್ 24ರಂದು ರದ್ದುಗೊಳಿಸಲಾಯಿತು 2023ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಈ ಶಿಕ್ಷೆಗೆ ತಡೆಯಾಜ್ಞೆ ನೀಡಿ, ಅವರ ಸಂಸತ್ ಸದಸ್ಯತ್ವವನ್ನು ಮರುಸ್ಥಾಪಿಸಿತು. ಈ ರೀತಿ ಹಲವು ಪ್ರಕರಣಗಳಲ್ಲಿ ರಾಹುಲ್ ಗಾಂಧಿ ತಾವು ನೀಡಿದ ಹೇಳಿಕೆಗೆ ವಿಷಾದ ಹಾಗೂ ಕ್ಷಮೆ ವ್ಯಕ್ತಪಡಿಸಿದ ಉದಾಹರಣೆಗಳಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *