ಶ್ರೀರಾಮನ ಹುಂಡಿ ಹಣ ಕಳ್ಳತನ ಕೇಸ್Image Credit source: Getty images
ಬೆಂಗಳೂರು, ಜುಲೈ 04: ಅಯೋಧ್ಯೆ ಶ್ರೀರಾಮನ ಹುಂಡಿ ಹಣ ಕಳ್ಳತನ ಕೇಸ್ಗೆ (Ayodhya Ram Mandir Donation Scam) ಸಂಬಂಧಿಸಿದಂತೆ ಬಗೆದಷ್ಟು ಅಕ್ರಮ, ಕೆದಕಿದಷ್ಟು ವಂಚನೆ, ಹುಡುಕುತ್ತಾ ಹೋದಂತೆಲ್ಲಾ ಕಳ್ಳಾಟದ ಹೆಜ್ಜೆ ಜಾಡು ಪತ್ತೆ ಆಗುತ್ತಿದೆ. ಕೇವಲ ಕಾಣಿಕೆ, ದೇಣಿಗೆ, ಹುಂಡಿ ಹಣವನ್ನಷ್ಟೇ ಅಲ್ಲ. ದೇವರಿಗೆ ಸೇರಬೇಕಿದ್ದ ಚಿನ್ನಾಭರಣವನ್ನೂ ಅದೆಷ್ಟು ವ್ಯವಸ್ಥಿತವಾಗಿ ನುಂಗಿ ನೀರು ಕುಡಿದಿದ್ದಾರೆ ಅನ್ನೋದು ಎಸ್ಐಟಿ ತನಿಖೆಯಲ್ಲಿ ಬಟಾಬಯಲಾಗಿದೆ. ಅಷ್ಟೇ ಅಲ್ಲದೆ ಕರ್ನಾಟಕದ (Karnataka) ಲಿಂಕ್ ಬೆಚ್ಚಿಬೀಳಿಸಿದೆ.
ಅಯೋಧ್ಯೆ ಶ್ರೀರಾಮನ ಹುಂಡಿ ಹಣ ಕಳ್ಳತನ ಕೇಸ್ನ ತನಿಖೆ ತೀವ್ರಗೊಂಡಂತೆಲ್ಲಾ ಒಂದೊಂದೇ ಸ್ಫೋಟಕ ಸತ್ಯಗಳು ಬಯಲಾಗುತ್ತಿವೆ. ಗರ್ಭಗುಡಿ ಪಕ್ಕದಲ್ಲೇ ಕೂತು ಹುಂಡಿ ಹಣ ಎಣಿಕೆಯಲ್ಲೇ ಕೈಚಳಕ ತೋರಿಸಿದ್ದ ಖದೀಮರು, ಭಕ್ತರು ದೇಣಿಗೆಯಾಗಿ ನೀಡುತ್ತಿದ್ದ ಚಿನ್ನಾಭರಣಗಳನ್ನೂ ಎಗರಿಸುತ್ತಿದ್ದರು. ಪೊಲೀಸರು ಹಾಗೂ ಎಸ್ಐಟಿ ಅಧಿಕಾರಿಗಳು 8 ಆರೋಪಿಗಳಿಂದ ಈವರೆಗೂ 80 ಲಕ್ಷಕ್ಕೂ ಹೆಚ್ಚು ಹಣ ಜಪ್ತಿ ಮಾಡಿದ್ದಾರೆ. ಆದರೆ ಈವರೆಗೂ ಕದ್ದ ದೇವರ ಆಭರಣಗಳನ್ನು ರಿಕವರಿ ಮಾಡಿಕೊಳ್ಳಲು ಆಗಿಲ್ಲ. ಕಾರಣ 200 ಜನರು ವ್ಯವಸ್ಥಿತ ಸಂಚು ಮಾಡಿದ್ದಾರೆ.
ಕರ್ನಾಟಕಕ್ಕೆ ಬರ್ತಿತ್ತಾ ಕದ್ದ ಚಿನ್ನ?
ದೇವರಿಗೆ ಸಮರ್ಪಣೆಯಾದ ಚಿನ್ನಾಭರಣಗಳ ತೂಕದ ವೇಳೆ ದೊಡ್ಡ ಸಂಚೇ ನಡೀತಿದ್ದಂತೆ. ಅಂದರೆ ದೇವರಿಗೆ 26, 27 ಕೆಜಿಯಷ್ಟು ಚಿನ್ನಾಭರಣ ಬಂದರೆ ರೌಂಡ್ ಫಿಗರ್ ಆಗಿ 25 ಕೆಜಿ ಅಂತಾ ಲೆಕ್ಕ ತೋರಿಸುತ್ತಿದ್ದರಂತೆ. ಬಳಿಕ ಚಿನ್ನದ ಆಭರಣಗಳನ್ನ ಕರಗಿಸುವ ನೆಪದಲ್ಲಿ ಅಸಲಿ ಆಟ ಶುರುವಾಗ್ತಿತ್ತು. ಚಿನ್ನ-ಬೆಳ್ಳಿಯನ್ನ ಸ್ಥಳೀಯವಾಗಿ ಕರಗಿಸಲು ಕೊಟ್ಟರೆ ಅಕ್ರಮ ಗೊತ್ತಾಗುತ್ತೆ ಅಂತಾ ಅಯೋಧ್ಯೆಯಿಂದ ಅದೂ ರೈಲಿನಲ್ಲಿ ಕರ್ನಾಟಕಕ್ಕೆ ಕಳಿಸಿ ಕೊಡುತ್ತಿದ್ದರಂತೆ.
ಇದನ್ನೂ ಓದಿ: ರಾಮಮಂದಿರ ದೇಣಿಗೆ ಲೂಟಿ; ಬೀದರ್ ಶಾಸಕನ ವಿರುದ್ಧವೂ ಎಸ್ಐಟಿಗೆ ದೂರು
ಚಿನ್ನ-ಬೆಳ್ಳಿಯನ್ನ ಚೀಲಗಳಲ್ಲಿ ತುಂಬಿ ರೈಲಿನಲ್ಲಿ ಕಳಿಸಿದರೆ, ಖದೀಮರು ಮಾತ್ರ ಫ್ಲೈಟ್ ಹತ್ತಿ ಕರ್ನಾಟಕಕ್ಕೆ ಬರ್ತಿದ್ರಂತೆ. ಹೀಗೆ ಅಯೋಧ್ಯೆಯಿಂದ ಚಿನ್ನ ಕರ್ನಾಟಕಕ್ಕೆ ತರಲು 200 ಜನರು ವ್ಯವಸ್ಥಿತ ಜಾಲವೇ ಇತ್ತು ಅನ್ನೋದು ತನಿಖೆ ವೇಳೆ ಬಯಲಾಗಿದೆ. ಅಷ್ಟೂ ಚಿನ್ನವನ್ನ ಕರಗಿಸಿ ಬಿಸ್ಕೆಟ್ ಮಾಡ್ತಿದ್ದ ಕಾರಣ ಈವರೆಗೂ ಕದ್ದ ಚಿನ್ನ ರಿಕವರಿ ಮಾಡಲು ಆಗಿಲ್ಲ ಅನ್ನೋ ಮಾಹಿತಿ ಸಿಕ್ಕಿದೆ.
ನಿತ್ಯ 6ರಿಂದ 8 ಲಕ್ಷ ಕಾಣಿಕೆ ಲೂಟಿ: ಪಾರ್ಕ್ನಲ್ಲಿ ಹಣ ಹಂಚಿಕೆ!
ಕೋರ್ಟ್ ಅನುಮತಿ ಪಡೆದು ಆರೋಪಿ ಅವಿನಾಶ್ ಶುಕ್ಲಾನನ್ನ ವಶಕ್ಕೆ ಪಡೆದಿದ್ದ ಎಸ್ಐಟಿ ಸ್ಫೋಟಕ ಸಂಗತಿಗಳನ್ನೇ ಬಯಲಿಗೆ ಎಳೆದಿದೆ. ನಿತ್ಯ ದೇಗುಲದಲ್ಲಿ 6ರಿಂದ 8ಲಕ್ಷದಷ್ಟು ಕಾಣಿಕೆ ಹಣಕ್ಕೆ ಕನ್ನ ಹಾಕುತ್ತಿದ್ದರಂತೆ. ಬಳಿಕ ದೇಗುಲದ ಪಕ್ಕದಲ್ಲೇ ಇರುವ ಪಾರ್ಕ್ನಲ್ಲಿ ಎಲ್ಲರು ಸಮಪಾಲಾಗಿ ಹಂಚಿಕೊಳ್ಳುತ್ತಿದ್ದರಂತೆ. ಆದರೆ ಪ್ರಮುಖ ಆರೋಪಿ ಟಿನ್ನು ಯಾದವ್ಗೆ ಪಾತ್ರ ಒಂದು ಪಾಲು ಹೆಚ್ಚಾಗಿ ಕೊಡ್ಬೇಕಿತ್ತು ಅಂತಾ ಅವಿನಾಶ್ ತನಿಖಾ ತಂಡದ ಮುಂದೆ ಸತ್ಯ ಕಕ್ಕಿದ್ದಾನೆ. ಇದಕ್ಕೆ ಪೂರಕ ಎಂಬಂತೆ ಎಸ್ಬಿಐ ಬ್ಯಾಂಕ್ನಲ್ಲಿ ಈ ಮೊದಲು ಕಾಣಿಕೆ ಹಣ ನಿತ್ಯ 16ರಿಂದ 18 ಲಕ್ಷ ಡೆಪಾಸಿಟ್ ಆಗ್ತಿತ್ತು. ಆದ್ರೀಗ ನಿತ್ಯ 24ರಿಂದ 26 ಲಕ್ಷದಷ್ಟು ಹಣ ಡೆಪಾಸಿಟ್ ಆಗ್ತಿದೆ. ಅಲ್ಲಿಗೆ ನಿತ್ಯ 6ರಿಂದ 8 ಲಕ್ಷ ಹಣ ಖದೀಮರ ಪಾಲಾಗ್ತಿತ್ತು ಅನ್ನೋದು ಸಾಬೀತಾಗಿದೆ.
ಇನ್ನು ಆರೋಪಿ ಅವಿನಾಶ್ ಶುಕ್ಲಾ ನೀಡಿದ ಮಾಹಿತಿಯಂತೆ ಸಹೋದರ ಅಭಿಷೇಕ್ ಬಳಿ ಸೆಕೆಂಡ್ ಹ್ಯಾಂಡ್ ಕಾರೊಂದನ್ನ ಸೀಜ್ ಮಾಡಲಾಗಿದೆ. ಕಾರಿನಲ್ಲಿ ಒಂದಿಷ್ಟು ಆಭರಣಗಳು, ಹಣ, ಲೆಕ್ಕಪತ್ರಗಳು ಸಿಕ್ಕಿವೆ. ಅವಿನಾಶ್ ಬಾಯ್ಬಿಟ್ಟಿರುವ ಮಾಹಿತಿ ಆಧಾರದಲ್ಲಿ ತನಿಖಾ ತಂಡ ಇದೀಗ ಟಿನ್ನು ಯಾದವ್ನ ಕಸ್ಟಡಿಗೆ ತೆಗೆದುಕೊಳ್ಳಲು ಮುಂದಾಗಿದೆ. ಅಲ್ಲದೆ ಟ್ರಸ್ಟ್ನ ಲೆಕ್ಕಪತ್ರಗಳನ್ನ ನೋಡಿಕೊಳ್ತಿದ್ದ ಮೂವರು ಚಾರ್ಟರ್ಡ್ ಅಕೌಂಟೆಂಟ್ಗಳಿಗೂ ಬೆಂಡೆತ್ತಿದ್ದಾರೆ. ಸಿಎಗಳಾದ ಚಂದನ್ ರೈ, ನರಪತ್ ಥೋಪಿಯಾ ಮತ್ತು ಅಕ್ಷಯ್ನ ವಿಚಾರಣೆಗೆ ಒಳಪಡಿಸಲಾಗಿದೆ.
ಜುಲೈ 6 ರಂದು ರಾಮಮಂದಿರ ಟ್ರಸ್ಟ್ನ ಸಭೆ
ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಜುಲೈ 6 ರಂದು ರಾಮಮಂದಿರ ಟ್ರಸ್ಟ್ನ ಸಭೆ ನಡೆಯಲಿದೆ. ಟ್ರಸ್ಟಿ ಅನಿಲ್ ಮಿಶ್ರಾ ಮತ್ತು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಜೀನಾಮೆ ಅಂಗೀಕಾರದ ಬಗ್ಗೆ ಸಭೆಯಲ್ಲಿ ನಿರ್ಧಾರ ಆಗಲಿದೆ. ಪ್ರಕರಣವನ್ನು ಸಿಬಿಐ ಹೆಗಲಿಗೆ ಹಾಕುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಸೋಮವಾರ ಲಕ್ನೋದ ಅಲಹಾಬಾದ್ ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ: ರಾಮಂದಿರ ದೇಣಿಗೆ ಲೂಟಿ ಕೇಸ್: 40 ಸಿಬ್ಬಂದಿಯಿಂದ್ಲೇ ಸಂಚು! SIT ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ
ದೇವರ ಹೆಸರಿನಲ್ಲಿ ಬರುವ ಕಾಣಿಕೆಯನ್ನೂ ಬಿಡದಂತೆ ದೋಚಿರುವ ಆರೋಪಿಗಳ ನಿಜ ಬಣ್ಣ ಈಗ ಕಳಚಿಕೊಳ್ಳುತ್ತಿದೆ. ತನಿಖೆ ಎಲ್ಲಿಯವರೆಗೆ ಹೋಗಿ ನಿಲ್ಲುತ್ತೆ, ಈ ಹಗರಣದ ಹಿಂದೆ ಇನ್ನು ಯಾವೆಲ್ಲಾ ದೊಡ್ಡ ತಲೆಗಳು ಉರುಳಲಿವೆ ಅನ್ನೋದನ್ನ ಕಾದುನೋಡಬೇಕಿದೆ.
ವರದಿ: ಬ್ಯೂರೋ ರಿಪೋರ್ಟ್ ಟಿವಿ9
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
