ಬೆಂಗಳೂರು, (ಆಗಸ್ಟ್ 10): ವಾಲ್ಮೀಕಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಅನುಮತಿಯಿಲ್ಲದೆ ರಾಜ್ಯ (ಕರ್ನಾಟಕ) ಬಿಟ್ಟು ತೆರಳದಂತೆ ವಿಧಿಸಿದ್ದ ಷರತ್ತಿಗೆ ಕರ್ನಾಟಕ ಹೈಕೋರ್ಟ್ (Karnataka High Court) ತಡೆ ನೀಡಿದೆ. ದೆಹಲಿಗೆ ತೆರಳಲು ಅನುಮತಿ ಕೋರಿದ್ದ ಬಿ.ನಾಗೇಂದ್ರ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಜಾಗೊಳಿಸಿತ್ತು. ಬಳಿಕ ಇದನ್ನು ಪ್ರಶ್ನಿಸಿ ನಾಗೇಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ರಾಜ್ಯ ಬಿಟ್ಟು ತೆರಳದಂತೆ ಇದ್ದ ಷರತ್ತಿಗೆ ತಡೆ ನಿಡಿದ್ದು, ಕೋರ್ಟ್ ಅನುಮತಿ ಇಲ್ಲದೇ ದೇಶ ಬಿಟ್ಟು ತೆರಳುವಂತಿಲ್ಲವೆಂದು ಷರತ್ತು ಮಾರ್ಪಾಡು ಮಾಡಿ ಆದೇಶ ಹೊರಡಿಸಿದೆ. ಅಲ್ಲದೇ ಈ ಸಂಬಂಧ ಆಕ್ಷೇಪಣೆ ಸಲ್ಲಿಸಲು ಇಡಿಗೆ ಆ.12ರವರೆಗೆ ಕಾಲಾವಕಾಶ ನೀಡಿದೆ.
ಜೈಲು ಸೇರಿದ್ರೂ ಡಿಕೆ ಶಿವಕುಮಾರ್ ಸಂಪುಟದಲ್ಲಿ ಮಂತ್ರಿಗಿರಿ ಗಿಟ್ಟಿಸಿಕೊಂಡಿರೋ ನಾಗೇಂದ್ರ ಇಡಿ ತನಿಖೆ ಎದುರಿಸುತ್ತಿದ್ದು, ಜಾಮೀನಿನ ಮೇಲೆ ಹೊರಗಿದ್ದಾರೆ. ಆದ್ರೆ ಕೋರ್ಟ್ ಜಾಮೀನು ಷರತ್ತು ಉಲ್ಲಂಘಿಸಿ ದೆಹಲಿಗೆ ಭೇಟಿ ನೀಡಿದ್ದಾರೆ. ಅನುಮತಿಯನ್ನೇ ಪಡೆಯದೆ ನಾಗೇಂದ್ರ ಅವರು ಕಳೆದ ಜುಲೈ 17ರಂದು ದೆಹಲಿಗೆ ಹೋಗಿದ್ದರ ಮಾಹಿತಿ ಲಭ್ಯವಾಗಿದೆ. ಸಂಬಂಧ ವಿಪಕ್ಷ ಬಿಜೆಪಿ ಧ್ವನಿ ಎತ್ತಿದ್ದು, ಕೋರ್ಟ್ ಷರತ್ತು ಉಲ್ಲಂಘಿಸಿದ ನಾಗೇಂದ್ರರನ್ನು ಕ್ಯಾಬಿನೆಟ್ನಿಂದ ವಜಾ ಮಾಡುವಂತೆ ಆಗ್ರಹಿಸುತ್ತಿದೆ.
