ಸರ್ಕಾರಿ ಶಾಲೆ ಗೇಟ್ ಬಿದ್ದು ದುರಂತ: ನಾಲ್ವರು ಮಕ್ಕಳಿಗೆ ಗಾಯ; ಓರ್ವ ವಿದ್ಯಾರ್ಥಿನಿಗೆ ಗಂಭೀರ ಗಾಯ – Kannada News | Government School Gate Collapses, Four Children Injured; One critically injured

ಶಾಲೆ ಗೇಟ್ ಬಿದ್ದು ದುರಂತImage Credit source: tv9 kannada

ಬಾಗಲಕೋಟೆ, ಜುಲೈ 06: ಸರ್ಕಾರಿ ಶಾಲೆಯ ಗೇಟ್ ಬಿದ್ದು (School Gate Fall) ನಾಲ್ವರು ವಿದ್ಯಾರ್ಥಿಗಳಿಗೆ ಗಾಯಗಳಾಗಿರುವ ಘಟನೆ ಬಾಗಲಕೋಟೆ (bagalkot) ಜಿಲ್ಲೆಯ ಇಳಕಲ್ ತಾಲೂಕಿನ ಬಲಕುಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ನಾಲ್ವರು ಪೈಕಿ ಓರ್ವ ವಿದ್ಯಾರ್ಥಿನಿಗೆ ತೀವ್ರ ಸ್ವರೂಪದ ಗಾಯವಾಗಿ ರಕ್ತ ಸೋರಿಕೆ ಆಗಿದ್ದು, ಸದ್ಯ ಗಾಯಗೊಂಡ ವಿದ್ಯಾರ್ಥಿಗಳಿಗೆ ಇಳಕಲ್​​​ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಡೆದಿದ್ದೇನು?

ಗೇಟ್​ ತೆರೆಯುವಾಗ ಕೊಂಡಿ ಕಳಚಿ ಸುಮಾರು 5 ಕ್ವಿಂಟಲ್ ಭಾರದ ಗೇಟ್​​ ಬಿದ್ದಿದೆ. ನಯನಾಕುಮಾರಿ ಎಂಬ ವಿದ್ಯಾರ್ಥಿನಿ ಮೇಲೆಯೇ ಗೇಟ್ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದಾಳೆ. ಸದ್ಯ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಕ್ಕಳು ಸೇರಿದಂತೆ ಓರ್ವ ಆಯಾಗೂ ಗಾಯವಾಗಿದೆ. ಇನ್ನು ಆಸ್ಪತ್ರೆಗೆ ಭೇಟಿ ನೀಡಿದ ಇಲಕಲ್ ಬಿಇಓ ಜಾಸ್ಮಿನ್ ಕಿಲ್ಲೇದಾರ್​ ವಿದ್ಯಾರ್ಥಿನಿ ಆರೋಗ್ಯ ವಿಚಾರಿಸಿದರು.

ಇದನ್ನೂ ಓದಿ: ಬೆಳಗಾವಿ: ಧಾರಾಕಾರ ಮಳೆಗೆ ಕುಸಿದ ಮನೆ ಗೋಡೆ; 7 ಜನರು ಜಸ್ಟ್ ಮಿಸ್​!

ಇನ್ನು ಮೂರನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ನಯನಾಕುಮಾರಿಯ ಪೋಷಕರು ಉತ್ತರ ಪ್ರದೇಶದಿಂದ ಬಲಕುಂದಿಗೆ ಬಂದು ನೆಲೆಸಿದ್ದಾರೆ. ವಿದ್ಯಾರ್ಥಿನಿ ತಂದೆ ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಮಗಳು ಸಂಪೂರ್ಣ ಗುಣಮುಖಳಾಗಿ ಬರಬೇಕು ಎನ್ನುತ್ತಿದ್ದಾರೆ ಪೋಷಕರು. ಇನ್ನು ಇತ್ತ ಶಾಲೆಯಲ್ಲಿ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಮುಂದುವರಿದ ಮಳೆ ಅಬ್ಬರ: 9 ಫಾಲ್ಸ್​ಗಳಿಗೆ ನಿರ್ಬಂಧ

ಪಶ್ಚಿಮಘಟ್ಟ ಹಾಗೂ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪ್ರಮುಖ 9 ಜಲಪಾತಗಳಿಗೆ ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಮಳೆಯಿಂದಾಗಿ ಜಲಪಾತಗಳಲ್ಲಿ ನೀರಿನ ಹರಿವು ಅಪಾಯಕಾರಿ ಮಟ್ಟಕ್ಕೆ ಏರಿಕೆ ಹಿನ್ನೆಲೆ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ  ಮಹತ್ವದ ಆದೇಶ ಹೊರಡಿಸಿದ್ದಾರೆ. ಪ್ರಖ್ಯಾತ ಪ್ರವಾಸಿ ತಾಣಗಳಾದ ಬೆಟಣೆ ಜಲಪಾತ, ಚಿಕಲೆ ಜಲಪಾತ, ಚೋರ್ಲಾ ಜಲಪಾತ ಹಾಗೂ ಬಟವಾಡೆ ಫಾಲ್ಸ್ ಸೇರಿದಂತೆ ಒಟ್ಟು ಒಂಬತ್ತು ಜಲಪಾತಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *