ಸುಪ್ರೀಂ ಮೆಟ್ಟಿಲೇರಿದ ಅಯೋಧ್ಯೆ ರಾಮ ಮಂದಿರದ ದೇಣಿಗೆಯಲ್ಲಿ ಅಕ್ರಮ ಪ್ರಕರಣ, ಯುಪಿ ಸರ್ಕಾರದಿಂದ ‘ಎಸ್‌ಐಟಿ’ ರಚನೆ – Kannada News | Ayodhya Ram Mandir Donation Scam: SC Petition Filed, UP Govt Forms SIT for Probe

ಲಕ್ನೋ, ಜೂನ್ 15: ಅಯೋಧ್ಯೆ(Ayodhya)ಯ ಶ್ರೀರಾಮ ಜನ್ಮಭೂಮಿ ದೇವಸ್ಥಾಬದ ದೇಣಿಗೆ ನಿರ್ವಹಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಆರೋಪ ಈಗ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ. ಸಾರ್ವಜನಿಕರ ವಿಶ್ವಾಸವನ್ನು ಕಾಪಾಡಲು ಈ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಡೆಸಿದೆ.

ಇದೇ ವೇಳೆ, ಪ್ರಕರಣದ ಪಾರದರ್ಶಕತೆ ಮತ್ತು ಸತ್ಯಾಸತ್ಯತೆಯನ್ನು ಬಯಲಿಗೆಳೆಯಲು ಉತ್ತರ ಪ್ರದೇಶ ಸರ್ಕಾರವು ಈಗಾಗಲೇ ಉನ್ನತ ಮಟ್ಟದ ವಿಶೇಷ ತನಿಖಾ ತಂಡವನ್ನು (SIT) ರಚಿಸುವ ಮೂಲಕ ತ್ವರಿತ ಕ್ರಮ ಕೈಗೊಂಡಿದೆ. ವಕೀಲ ಅನೂಪ್ ಅವಸ್ಥಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅಯೋಧ್ಯೆ ಮಂದಿರದ ದೇಣಿಗೆಗೆ ಸಂಬಂಧಿಸಿದ ಆರೋಪಗಳನ್ನು ನ್ಯಾಯಾಲಯವೇ ನೇರವಾಗಿ ಪರಿಶೀಲಿಸಬೇಕು ಮತ್ತು ಸ್ವತಂತ್ರ ತನಿಖೆಗೆ ಆದೇಶಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರಿಗೆ ಮನವಿ ಮಾಡಿದ್ದಾರೆ.

ಈ ಮನವಿಗೆ ಸ್ಪಂದಿಸಿದ ಸಿಜೆಐ ಸೂರ್ಯ ಕಾಂತ್ ಅವರು, ನ್ಯಾಯಾಲಯದಲ್ಲಿ ಇಂತಹ ವಿಷಯಗಳ ಬಗ್ಗೆ ಕೇವಲ ಮೌಖಿಕವಾಗಿ ಹೇಳುವ ಬದಲು ಅಧಿಕೃತವಾಗಿ ಲಿಖಿತ ಟಿಪ್ಪಣಿಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ. ಆ ಟಿಪ್ಪಣಿಗಳನ್ನು ಪರಿಶೀಲಿಸಿದ ನಂತರ ಯಾವುದು ಪ್ರಸ್ತುತ ಎಂಬುದನ್ನು ನಿರ್ಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಯುಪಿ ಸರ್ಕಾರದಿಂದ ಮೂವರ ಸದಸ್ಯರ ‘SIT’ ತಂಡ ರಚನೆ
ದೇಣಿಗೆ ಪೆಟ್ಟಿಗೆಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ವದಂತಿಗಳಿಗೆ ಬ್ರೇಕ್ ಹಾಕಲು ಮತ್ತು ಸತ್ಯವನ್ನು ಜನರೆದುರು ತರಲು ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ನಿಷ್ಪಕ್ಷಪಾತ ತನಿಖೆಗಾಗಿ ವಿನಂತಿಸಿತ್ತು. ಟ್ರಸ್ಟ್‌ನ ಕೋರಿಕೆಯ ಮೇರೆಗೆ ಮುಖ್ಯಮಂತ್ರಿಗಳು ಮೂವರು ಉನ್ನತ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದಾರೆ.

ಮತ್ತಷ್ಟು ಓದಿ: Video: ಅಯೋಧ್ಯೆಯಲ್ಲಿ ಬಂದೂಕು ತೋರಿಸಿ ಆಭರಣದಂಗಡಿ ದೋಚಿದ ಬುರ್ಖಾಧಾರಿ ಮಹಿಳೆ

ವಿಜಯ್ ವಿಶ್ವಾಸ್ ಪಂತ್: ಹಿರಿಯ ಐಎಎಸ್ (IAS) ಅಧಿಕಾರಿ ಹಾಗೂ ಲಕ್ನೋ ವಿಭಾಗೀಯ ಆಯುಕ್ತರು.

ಕಿರಣ್ ಎಸ್: ಹಿರಿಯ ಐಪಿಎಸ್ (IPS) ಅಧಿಕಾರಿ ಹಾಗೂ ಪೊಲೀಸ್ ಮಹಾನಿರ್ದೇಶಕರು.

ನೀಲ್ ರತನ್: ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿಗಳು.

ಈ ತಂಡವು ಇಡೀ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಿದೆ.

ಕೇವಲ ನಿರ್ಮಾಣ ಕಾರ್ಯಕ್ಕೆ ನನ್ನ ಪಾತ್ರ ಸೀಮಿತ: ನೃಪೇಂದ್ರ ಮಿಶ್ರಾ
ದೇಣಿಗೆ ವಿಷಯದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ರಾಮ ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಅವರು ಸ್ಪಷ್ಟನೆ ನೀಡಿದ್ದಾರೆ. ನನ್ನ ಜವಾಬ್ದಾರಿಯು ಕೇವಲ ಮಂದಿರದ ನಿರ್ಮಾಣ ಕಾರ್ಯಗಳ ಮೇಲ್ವಿಚಾರಣೆಗೆ ಮಾತ್ರ ಸೀಮಿತವಾಗಿದೆ. ಆ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲು ನಾನು ಅಯೋಧ್ಯೆಗೆ ಬಂದಿದ್ದೇನೆ, ಹಣಕಾಸಿನ ವಿಷಯಗಳಿಗೂ ನನಗೂ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ವಿಷಯದ ಬಗ್ಗೆ ರಾಜಕೀಯ ವಲಯದಲ್ಲೂ ಚರ್ಚೆಗಳು ಆರಂಭವಾಗಿವೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದರೆ, ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ವಿರೋಧ ಪಕ್ಷಗಳು ವದಂತಿಗಳನ್ನು ಹರಡುತ್ತಿವೆ ಎಂದು ಪ್ರತ್ಯುತ್ತರ ನೀಡಿದ್ದಾರೆ. ಸದ್ಯಕ್ಕೆ ಸರ್ಕಾರದ ಎಸ್‌ಐಟಿ (SIT) ತನಿಖೆಯು ಆರಂಭವಾಗಿರುವುದರಿಂದ ಶೀಘ್ರದಲ್ಲೇ ವದಂತಿಗಳಿಗೆ ತೆರೆ ಬೀಳಲಿದ್ದು, ಪಾರದರ್ಶಕತೆ ಹೊರಬರಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *