ಸೋಲಿಗೆ ಹೆದರಬಾರದು: ಶ್ರೇಯಸ್ ಅಯ್ಯರ್ ಕಿವಿಮಾತು – Kannada News | Fear Failure, Play to Save Yourself: Shreyas Iyer

ಭಾರತ ಮತ್ತು ಝಿಂಬಾಬ್ವೆ ನಡುವಣ ಟಿ20 ಸರಣಿ ಇಂದಿನಿಂದ (ಜುಲೈ 23) ಶುರುವಾಗಲಿದೆ. ಈ ಸರಣಿಗೂ ಮುನ್ನ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಯುವ ಪಡೆಗೆ ಬಲಿಷ್ಠ ಸಂದೇಶವೊಂದನ್ನು ನೀಡಿದ್ದಾರೆ. ಆಟಗಾರರು ತಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಪ್ರದರ್ಶಿಸಬೇಕಾದರೆ ಮೊದಲು ಸೋಲಿನ ಭಯದಿಂದ ಹೊರಬರಬೇಕು ಎಂದು ತಿಳಿಸಿದ್ದಾರೆ.

ಹರಾರೆಯಲ್ಲಿ ನಡೆದ ಪಂದ್ಯದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೇಯಸ್ ಅಯ್ಯರ್, ರಕ್ಷಣಾತ್ಮಕ ಮನಸ್ಥಿತಿಯು ಪ್ರದರ್ಶನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಒತ್ತಿ ಹೇಳಿದ್ದಾರೆ.

“ಆಟಗಾರರು ಸೋಲಿಗೆ ಹೆದರಬಾರದು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಮನಸ್ಸಿನಲ್ಲಿ ಅಂತಹ ಆಲೋಚನೆಗಳು ಇದ್ದಾಗ, ನೀವು ನಿಮ್ಮನ್ನು ರಕ್ಷಿಸಿಕೊಳ್ಳಲು ಸ್ವಲ್ಪ ಯೋಚಿಸಿ ಆಡುತ್ತೀರಿ. ಆ ಭಯವಿಲ್ಲದಿದ್ದಾಗ ಮಾತ್ರ, ನಿಮ್ಮಿಂದ ಅತ್ಯುತ್ತಮ ಪ್ರದರ್ಶನ ಹೊರಬರಲು ಸಾಧ್ಯ,” ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಟೀಕೆಗಳನ್ನು ನಿರ್ಲಕ್ಷಿಸಿ:

ಇತ್ತೀಚಿನ ಪಂದ್ಯಗಳ ಸೋಲಿನ ನಂತರ ಕೇಳಿಬರುತ್ತಿರುವ ಸಾಮಾಜಿಕ ಜಾಲತಾಣಗಳ ಟೀಕೆಗಳು ಮತ್ತು ಬಾಹ್ಯ ವಾದಗಳನ್ನು ನಿರ್ಲಕ್ಷಿಸಿ, ಪ್ರಸ್ತುತ ಕ್ಷಣದ ಮೇಲೆ ಮಾತ್ರ ಗಮನ ಹರಿಸುವಂತೆ ಅಯ್ಯರ್ ಸಲಹೆ ನೀಡಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಇಡೀ ತಂಡವು ಒಗ್ಗಟ್ಟಿನಿಂದ ಆಡುವುದು ಮುಖ್ಯವಾಗಿದ್ದು, ವೈಯಕ್ತಿಕ ಪ್ರದರ್ಶನಗಳ ಬಗ್ಗೆ ನಂತರ ಯೋಚಿಸಬಹುದು ಎಂದು ಇದೇ ವೇಳೆ ಟೀಮ್ ಇಂಡಿಯಾ ನಾಯಕ ತಿಳಿಸಿದ್ದಾರೆ.

ಟೀಮ್ ಇಂಡಿಯಾ ಮುಂದಿರುವ ಸವಾಲುಗಳು:

ಭಾರತೀಯ ಟಿ20 ತಂಡವು ಪ್ರಸ್ತುತ ಪ್ರಮುಖ ಪರಿವರ್ತನೆಯ ಹಂತದಲ್ಲಿದ್ದು, ಈ ಪ್ರವಾಸವು ಅತ್ಯಂತ ನಿರ್ಣಾಯಕವಾಗಿದೆ. ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಸೋಲು ಕಂಡಿರುವ ಭಾರತ ತಂಡವು ತೀವ್ರ ಒತ್ತಡದಲ್ಲಿದೆ. ಅದರಲ್ಲೂ ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸಿಕೊಂಡ ಆರಂಭಿಕ ಏಳು ಪಂದ್ಯಗಳಲ್ಲಿ ತಂಡಕ್ಕೆ ಇನ್ನೂ ಗೆಲುವು ಸಿಕ್ಕಿಲ್ಲ.

ಇತ್ತ ಪಂದ್ಯ ಆರಂಭವಾಗಲು ಕೇವಲ 24 ಗಂಟೆಗಳ ಮುಂಚಿತವಾಗಿ ಭಾರತ ತಂಡವು ಝಿಂಬಾಬ್ವೆ ತಲುಪಿದೆ. ಹೀಗಾಗಿ ಹರಾರೆ ಸ್ಪೋರ್ಟ್ಸ್ ಕ್ಲಬ್‌ನ ಪಿಚ್ ಮತ್ತು ಹವಾಮಾನಕ್ಕೆ ಬೇಗನೆ ಹೊಂದಿಕೊಳ್ಳುವುದು ತಂಡದ ಮುಂದಿರುವ ದೊಡ್ಡ ಸವಾಲಾಗಿದೆ.

ಇದನ್ನೂ ಓದಿ: IND vs ZIM: ಟೀಮ್ ಇಂಡಿಯಾದ 7 ಆಟಗಾರರು ಅಲಭ್ಯ..!

ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ನೇತೃತ್ವದ ಯುವ ಪಡೆ ಈ ಸವಾಲುಗಳನ್ನು ಹೇಗೆ ಮೆಟ್ಟಿ ನಿಲ್ಲಲಿದೆ ಎಂಬುದಕ್ಕೆ ಮೊದಲ ಪಂದ್ಯದಲ್ಲೇ ಉತ್ತರ ಸಿಗಲಿದೆ. ಸತತ ಸೋಲುಗಳ ಬೆನ್ನಲ್ಲೇ ಝಿಂಬಾಬ್ವೆ ವಿರುದ್ಧದ ಈ ಸರಣಿಯಲ್ಲಿ ಟೀಮ್ ಇಂಡಿಯಾ ಕಮ್ಯಾಂಡಿಂಗ್ ಪ್ರದರ್ಶನ ನೀಡಿ ಗೆಲುವಿನ ಹಳಿಗೆ ಮರಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Source link

Leave a Reply

Your email address will not be published. Required fields are marked *