Headlines

ಸ್ಮಶಾನದ ಜಾಗದ ಮೇಲೂ ಕಣ್ಣು: ಹೆತ್ತವರ ಸಮಾಧಿಯನ್ನೂ ಬಿಡದೆ ಧ್ವಂಸಗೊಳಿಸಿ ವಿಕೃತಿ – Kannada News | 50 Graves Levelled With Tractors in Davanagere Over 10 Crore Burial Ground Dispute

ಹೆತ್ತವರ ಸಮಾಧಿಯನ್ನೂ ಬಿಡದೆ ಧ್ವಂಸಗೊಳಿಸಿ ವಿಕೃತಿImage Credit source: Tv9 Kannada

ದಾವಣಗೆರೆ, ಜುಲೈ 27: ಆಸ್ತಿ ಆಸೆಗೆ ಬಿದ್ದು ತಮ್ಮದೇ ಹೆತ್ತ ತಂದೆ-ತಾಯಿ ಮತ್ತು ಸಹೋದರನ ಸಮಾಧಿಗಳನ್ನೂ ಸೇರಿ ಸ್ಮಶಾನವನ್ನೇ ಸಂಪೂರ್ಣ ನೆಲಸಮ ಮಾಡಿ ವಿಕೃತಿ ಮೆರೆದಿರುವ ಘಟನೆ ದಾವಣಗೆರೆ ತಾಲೂಕಿನ ಆವರಗೆರೆಯಲ್ಲಿ ನಡೆದಿದೆ. 75 ವರ್ಷಗಳಿಂದ ಮಡಿವಾಳ ಸಮಾಜದವರು ಅಂತ್ಯಕ್ರಿಯೆ ಮಾಡಿಕೊಂಡು ಬಂದಿದ್ದ ಸರ್ವೆ ನಂಬರ್ 85ರಲ್ಲಿರುವ 18 ಗುಂಟೆ ಜಮೀನಲ್ಲಿದ್ದ 50ಕ್ಕೂ ಹೆಚ್ಚು ಸಮಾಧಿಗಳನ್ನು ಟ್ರ್ಯಾಕ್ಟರ್ ಬಳಸಿ ಧ್ವಂಸಗೊಳಿಸಿರೋದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಜೂನ್ 24ರಂದೇ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೋರ್ಟ್​​ ಆದೇಶ ಉಲ್ಲಂಘನೆ ಆರೋಪ

ಹಿಂದೆ ಸಣ್ಣ ಮರಿಯಪ್ಪ ಎಂಬುವರು ಈ ಜಮೀನನ್ನು ಸ್ಮಶಾನಕ್ಕಾಗಿ ನೀಡಿದ್ದರು. ನಂತರದ ದಿನಗಳಲ್ಲಿ ಸಣ್ಣ ದ್ಯಾಮಪ್ಪ ಹಾಗೂ ಯಲ್ಲಪ್ಪ ಎಂಬುವರು ಈ ಜಮೀನನ್ನು ಹೊಂದಿದ್ದರು. ಕಳೆದ ಏಳು ದಶಕಗಳಿಂದಲೂ ಮಡಿವಾಳ ಸಮುದಾಯದವರು ಇಲ್ಲೇ ಅಂತ್ಯಕ್ರಿಯೆ ನೆರವೇರಿಸುತ್ತಾ ಬಂದಿದ್ದು, ಇಲ್ಲಿ 50ಕ್ಕೂ ಅಧಿಕ ಸಮಾಧಿಗಳಿದ್ದವು. ಆದರೆ, ಸಣ್ಣ ದ್ಯಾಮಪ್ಪನ ಮಕ್ಕಳ ಕಣ್ಣು ಈ ಸ್ಮಶಾನದ ಜಾಗದ ಮೇಲೆ ಬಿದ್ದಿದ್ದೇ ಇಷ್ಟೆಲ್ಲಾ ಅನರ್ಥಕ್ಕೆ ಕಾರಣವಾಗಿದೆ. ಎಂ.ಡಿ. ಹನುಮಂತಪ್ಪ, ನವೀನ್ ಕುಮಾರ್, ಸರೋಜಮ್ಮ ಮತ್ತು ದಾಕ್ಷಾಯಣಮ್ಮ ಎಂಬುವರು 2021 ರಲ್ಲಿ ಈ ಸ್ಮಶಾನದ ಜಾಗವನ್ನು ಅಕ್ರಮವಾಗಿ ತಮ್ಮ ಹೆಸರಿಗೆ ಪರಭಾರೆ ಮಾಡಿಕೊಂಡು, ಪಾಲು ಮಾಡಿಕೊಂಡಿದ್ದರು. ಈ ಅಕ್ರಮದ ವಿರುದ್ಧ ಮಡಿವಾಳ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣವನ್ನು ಆಲಿಸಿದ್ದ ಕೋರ್ಟ್, ಸ್ಥಳದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ನೀಡಿತ್ತು. ಆದರೆ, ಆಸ್ತಿ ಆಸೆಗೆ ಬಿದ್ದ ಇವರು ಕೋರ್ಟ್ ಆದೇಶವನ್ನೇ ಗಾಳಿಗೆ ತೂರಿದ್ದಾರೆ. ಜೂನ್ 24ರಂದು ಟ್ರ್ಯಾಕ್ಟರ್ ಮೂಲಕ ಇಡೀ ಸ್ಮಶಾನವನ್ನು ಧ್ವಂಸಗೊಳಿಸಿದ್ದಾರೆ.

ಇದನ್ನೂ ಓದಿ: ನ್ಯಾಯಕ್ಕಾಗಿ ಹೆತ್ತ ತಾಯಿಯ ಕೊಳೆತ ಶವವನ್ನೇ ಬೈಕ್​ನಲ್ಲಿ ತಂದ ಮಕ್ಕಳು! ಎಫ್​ಐಆರ್ ದಾಖಲು

ಸ್ಮಶಾನದ ಜಾಗದ ಮೇಲೆ ಕಣ್ಣುಬಿದ್ದಿದ್ಯಾಕೆ?

ಸ್ಮಶಾನ ದಾವಣಗೆರೆ ನಗರಕ್ಕೆ ಹೊಂದಿಕೊಂಡಿರುವ ಕಾರಣ ಜಾಗಕ್ಕೆ ಬೆಲೆ ಬಂದಿರೋದೆ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣ ಎನ್ನಲಾಗ್ತಿದೆ. ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಈ ಜಾಗ ಕನಿಷ್ಟ ಹತ್ತು ಕೋಟಿ ರೂಪಾಯಿ ಬೆಲೆ ಬಾಳಬಹುದಾಗಿರುವ ಕಾರಣ ಸ್ಮಶಾನ ಧ್ವಂಸಗೊಳಿಸಲಾಗಿದೆ. 75 ವರ್ಷಗಳಿಂದ ನಮ್ಮ ಪೂರ್ವಜರನ್ನ ಇಲ್ಲಿ ಮಣ್ಣು ಮಾಡ್ತಿದ್ದೀವಿ. ಕೋರ್ಟ್ ಆರ್ಡರ್ ತಂದಿದ್ದರೂ ನಮಗೆ ರಕ್ಷಣೆ ಸಿಕ್ಕಿಲ್ಲ. ಆಸ್ತಿ ಆಸೆಗಾಗಿ ಹೆತ್ತವರ ಸಮಾಧಿಯನ್ನೇ ನೆಲಸಮ ಮಾಡಿದ ಇವರಿಗೆ ಶಿಕ್ಷೆಯಾಗಲೇಬೇಕು. ಈ ಸಂಬಂಧ ಪೊಲೀಸರ ಬಳಿಗೆ ಹೋದರೂ ಪ್ರಯೋಜನವಾಗಿಲ್ಲ ಎಂದು ಸಮಾಜದ ಮುಖಂಡರು ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *