ಟೀಂ ಇಂಡಿಯಾ (Team India) ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವಲ್ಲಿ ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ (Sanju Samson) ಪ್ರಮುಖ ಪಾತ್ರವಹಿಸಿದರು. ತಂಡದ ಪರ ಅಮೋಘ ಪ್ರದರ್ಶನ ಜೀಡಿದ ಸಂಜು ಪಂದ್ಯಾವಳಿಯ ಆಟಗಾರ ಪ್ರಶಸ್ತಿಗೂ ಭಾಜನರಾದರು. ಆದರೆ ಐಪಿಎಲ್ ಮುಗಿದ ಬಳಿಕ ತಂಡವನ್ನು ಸೇರಿಕೊಂಡಿದ್ದ ಸಂಜುಗೆ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆಡಿದ ಸತತ ಐದು ಪಂದ್ಯಗಳಲ್ಲಿ ಸಂಜು ನಿರಸ ಪ್ರದರ್ಶನ ನೀಡಿದರು. ಹೀಗಾಗಿ ಅವರನ್ನು ತಂಡದಿಂದ ಕೈಬಿಟ್ಟು ಅವರ ಸ್ಥಾನದಲ್ಲಿ ವೈಭವ್ ಸೂರ್ಯವಂಶಿಗೆ ಆಡಲು ಅವಕಾಶ ನೀಡಲಾಗುತ್ತಿದೆ. ಇದೆಲ್ಲದರ ನಡುವೆ ಸಂಜು ಸ್ಯಾಮ್ಸನ್ ಮೊದಲ ಬಾರಿಗೆ ತನ್ನ ಮನದಾಳವನ್ನು ತೆರೆದಿಡುವ ಕೆಲಸ ಮಾಡಿದ್ದಾರೆ.
ಕೆಲವು ವರ್ಷಗಳು ಉಳಿದಿವೆ
ತಮ್ಮ ವೃತ್ತಿಜೀವನ ಮತ್ತು ತಂಡದಲ್ಲಿ ಅವರ ಸ್ಥಾನದ ಬಗ್ಗೆ ಜಿಯೋಹಾಟ್ಸ್ಟಾರ್ ಜೊತೆ ಮಾತನಾಡಿರುವ ಸಂಜು, ‘ನನ್ನದೇ ಆದ ರೀತಿಯಲ್ಲಿ ಕ್ರಿಕೆಟ್ ಆಡಲು ಬಯಸುತ್ತೇನೆ. ನಮ್ಮ ದೇಶದಲ್ಲಿ ನಿರಂತರ ಸ್ಪರ್ಧೆ ಇದೆ ಎಂದು ನಾನು ಅರಿತುಕೊಂಡೆ. ಹೀಗಾಗಿ ನಾನು ಈ ರೇಸ್ನ ಭಾಗವಾಗಬಾರದು ಎಂದು ನಿರ್ಧರಿಸಿದೆ. ನಾನು ಆಟವನ್ನು ಆನಂದಿಸಲು ಬಯಸುತ್ತೇನೆ. ದೇವರ ದಯೆಯಿಂದ, ನಾನು ಬಹಳಷ್ಟು ಸಾಧಿಸಿದ್ದೇನೆ. ನನಗೆ ಈಗ 31 ವರ್ಷ, ಮತ್ತು ನನಗೆ ಇನ್ನೂ ಕೆಲವು ವರ್ಷಗಳು ಉಳಿದಿವೆ. ಹಾಗಾಗಿ, ನಾನು ನನ್ನ ಸ್ವಂತ ನಿಯಮಗಳ ಮೇಲೆ ಆಡಲು ನಿರ್ಧರಿಸಿದ್ದೇನೆ. ಹೇಗೆ ಬ್ಯಾಟಿಂಗ್ ಮಾಡಬೇಕೆಂದು ಅಥವಾ ಏನು ಮಾಡಬೇಕೆಂದು ಯಾರೂ ನನಗೆ ಹೇಳುವುದಿಲ್ಲ. ಅದನ್ನು ಸ್ವತಃ ನಾನೇ ನಿರ್ಧರಿಸುತ್ತೇನೆ.
IND vs IRE: ಸೊನ್ನೆಗೆ ಔಟ್; ವೈಭವ್ ಪಾದಾರ್ಪಣೆಗೆ ದಾರಿ ಮಾಡಿಕೊಟ್ಟ ಸಂಜು ಸ್ಯಾಮ್ಸನ್
ಆಟವನ್ನು ಆನಂದಿಸುತ್ತೇನೆ
ಎಲ್ಲ ಗೌರವಗಳೊಂದಿಗೆ ನಾನು ಆಡುತ್ತೇನೆ ಮತ್ತು ಆಟವನ್ನು ಆನಂದಿಸುತ್ತೇನೆ. ಉತ್ತಮ ತಂಡದ ಸಹ ಆಟಗಾರನಾಗಿರುತ್ತೇನೆ ಹಾಗೂ ತಂಡವನ್ನು ಬೆಂಬಲಿಸುತ್ತೇನೆ, ಆದರೆ ನಾನು ಅದನ್ನು ನನ್ನ ರೀತಿಯಲ್ಲಿ ಮಾಡುತ್ತೇನೆ. 2024 ರ ವಿಶ್ವಕಪ್ ನಂತರ, ನಾನು 2026 ರ ವಿಶ್ವಕಪ್ನಲ್ಲಿ ಆಡುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಒಂದು ಹಂತದಲ್ಲಿ, ನಾನು 14 ಅಥವಾ 15 ಸದಸ್ಯರ ತಂಡದಲ್ಲೂ ಇರಲಿಲ್ಲ. ಹೀಗಿರುವಾಗ ನಾನು 2028 ರ ವಿಶ್ವಕಪ್ ಬಗ್ಗೆ ಈಗಲೇ ಹೇಗೆ ಯೋಜಿಸಲಿ?. ನಾನು ಅಲ್ಲಿದ್ದರೆ, ತಂಡಕ್ಕೆ ನನ್ನ ಅಗತ್ಯವಿದ್ದರೆ, ಮತ್ತು ನಾನು ಚೆನ್ನಾಗಿ ಆಡುತ್ತಿದ್ದರೆ, ಎಲ್ಲವೂ ಚೆನ್ನಾಗಿರುತ್ತದೆ. ಇಲ್ಲದಿದ್ದರೆ, ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಸಾಧನೆಯನ್ನು ಯಾರೂ ನನ್ನಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
