ಭಾರತದ ಸ್ವಾತಂತ್ರ್ಯೋತ್ಸವImage Credit source: PTI
1947ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ (India Independence) ಭಾರತವು ಬಡತನ, ಅಕ್ಷರಸ್ಥರ ಕೊರತೆ ಮತ್ತು ಆಹಾರ ಧಾನ್ಯಗಳ ಅಭಾವ ಎದುರಿಸುತ್ತಿದ್ದ ದೇಶವಾಗಿತ್ತು. ಜನರ ಆರೋಗ್ಯ ಪರಿಸ್ಥಿತಿಯೂ ಕಳಪೆ ಇತ್ತು. ಬ್ರಿಟಿಷರು ಲೂಟಿ ಮಾಡಿ ಉಳಿದ ಆರ್ಥಿಕತೆಯನ್ನು ಇಟ್ಟುಕೊಂಡು ಭಾರತ ಅ, ಆ, ಇ, ಈ ಇಂದ ಆಟ ಆರಂಭಿಸಬೇಕಾಯಿತು. ಇವತ್ತು ಮಧ್ಯರಾತ್ರಿ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ಬಿಟ್ಟುಕೊಟ್ಟು ಹೋಗಿ 79 ವರ್ಷ ಆಗಿದೆ. ಈ ಎಂಟು ದಶಕಗಳಲ್ಲಿ ಭಾರತವು ತಂತ್ರಜ್ಞಾನ, ಆರ್ಥಿಕತೆ, ಆರೋಗ್ಯ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ.
ತಂತ್ರಜ್ಞಾನ ಮತ್ತು ಜಾಗತಿಕ ನಾಯಕತ್ವ
ಗೂಗಲ್ (ಸುಂದರ್ ಪಿಚೈ), ಮೈಕ್ರೋಸಾಫ್ಟ್ (ಸತ್ಯ ನಾಡೆಲ್ಲಾ), ಅಡೋಬ್ (ಶಂತನು ನಾರಾಯಣ್) ನಂತಹ ವಿಶ್ವದ ದೈತ್ಯ ತಂತ್ರಜ್ಞಾನ ಸಂಸ್ಥೆಗಳನ್ನು ಭಾರತೀಯ ಮೂಲದ ನಾಯಕರು ಮುನ್ನಡೆಸುತ್ತಿದ್ದಾರೆ.
ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ
- UPI: ಜಗತ್ತಿನಲ್ಲೇ ಅತ್ಯಂತ ಯಶಸ್ವಿ ರಿಯಲ್-ಟೈಮ್ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ.
- ಆಧಾರ್: ವಿಶ್ವದ ಅತಿ ದೊಡ್ಡ ಬಯೋಮೆಟ್ರಿಕ್ ಗುರುತಿನ ವ್ಯವಸ್ಥೆಯಾಗಿದ್ದು, ನಕಲಿ ದಾಖಲೆ ತಡೆದು ಕೋಟ್ಯಂತರ ಜನರಿಗೆ ನೇರ ಸೌಲಭ್ಯ ಒದಗಿಸಲು ನೆರವಾಗಿದೆ.
ಆರ್ಥಿಕತೆ ಮತ್ತು ಜಿಡಿಪಿ ಜಿಗಿತ
ಸ್ವಾತಂತ್ರ್ಯ ಲಭಿಸಿದಾಗ ವಿಶ್ವದ ಆರ್ಥಿಕತೆಯಲ್ಲಿ ಭಾರತದ ಪಾಲು ಅತ್ಯಲ್ಪವಾಗಿತ್ತು. ಆದರೆ ಇಂದು ಭಾರತವು ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದು, ಶೀಘ್ರದಲ್ಲೇ 3ನೇ ಸ್ಥಾನಕ್ಕೇರುವ ಹಾದಿಯಲ್ಲಿದೆ.
1991ರ ಆರ್ಥಿಕ ಉದಾರೀಕರಣದ ನಂತರ ಭಾರತದ ಕೈಗಾರಿಕಾ, ಸೇವಾ ವಲಯ ಮತ್ತು ಉತ್ಪಾದನಾ ರಂಗದಲ್ಲಿ ಅಭೂತಪೂರ್ವ ಪ್ರಗತಿಯಾಗಿದೆ.
ಇದನ್ನೂ ಓದಿ: ಭಾರತದಲ್ಲೇ ‘ರೇರ್ ಅರ್ಥ್ ಮ್ಯಾಗ್ನೆಟ್ಸ್’ ತಯಾರಿಕೆಗೆ ಎಲ್&ಟಿ ಸಜ್ಜು; ಚೀನಾ ಪ್ರಾಬಲ್ಯಕ್ಕೆ ಸವಾಲು
ಭಾರತ ಮಾಡಿರುವ ಇನ್ನೂ ಕೆಲ ಸಾಧನೆಗಳು
- ವಿಶ್ವದ ಔಷಧಾಗಾರ: ಕೈಗೆಟುಕುವ ಬೆಲೆಯ ಜೆನೆರಿಕ್ ಔಷಧಗಳು ಮತ್ತು ಲಸಿಕೆಗಳನ್ನು ಉತ್ಪಾದಿಸುವಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ವಿಶ್ವದ ಫಾರ್ಮಸಿ (Pharmacy of the World) ಎನಿಸಿದೆ.
- ಆಯುಷ್ಯ ಏರಿಕೆ: 1947ರಲ್ಲಿ ಭಾರತೀಯರ ಸರಾಸರಿ ಆಯಸ್ಸು (Life Expectancy) ಕೇವಲ 32 ವರ್ಷಗಳಷ್ಟಿತ್ತು, ಆದರೆ ಇಂದು ಅದು 70 ವರ್ಷ ಮೀರಿದೆ.
- ಪೋಲಿಯೋ ಮತ್ತು ಸಿಡಬು ನಿರ್ಮೂಲನೆ: ಸಾಂಕ್ರಾಮಿಕ ರೋಗಗಳನ್ನು ಯಶಸ್ವಿಯಾಗಿ ನಿಯಂತ್ರಿಸಿ ನಿರ್ಮೂಲನೆ ಮಾಡಲಾಗಿದೆ.
- ಸಾಕ್ಷರತೆ ಮತ್ತು ಶಿಕ್ಷಣ: 1947ರಲ್ಲಿ ಭಾರತದ ಸಾಕ್ಷರತಾ ಪ್ರಮಾಣ (Literacy) ಕೇವಲ 12% ಇತ್ತು, ಆದರೆ ಇಂದು ಅದು 77% ಗೂ ಹೆಚ್ಚಾಗಿದೆ. ಐಐಟಿ (IIT), ಐಐಎಮ್ (IIM), ಮತ್ತು ಐಐಎಸ್ಸಿ (IISc) ನಂತಹ ವಿಶ್ವಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಜಾಗತಿಕ ಮಟ್ಟದ ಪ್ರತಿಭೆಗಳನ್ನು ದೇಶ ರೂಪಿಸಿದೆ.
- ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಸಾಧನೆ: ಚಂದ್ರಯಾನ, ಮಂಗಳಯಾನ ಯೋಜನೆಗಳನ್ನು ಕೈಗೊಂಡಿದೆ. ಇತ್ತೀಚಿನ ಚಂದ್ರಯಾನ-3ರ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಚಂದ್ರನಲ್ಲಿ ಮನುಷ್ಯರನ್ನು ಕರೆದೊಯ್ಯುವುದು, ಸ್ವಂತ ಅಂತರಿಕ್ಷ ನಿಲ್ದಾಣ ನಿರ್ಮಿಸುವುದು ಇತ್ಯಾದಿ ಇನ್ನೂ ಗುರುತರ ಯೋಜನೆಗಳಿವೆ. ಹಾಗೆಯೇ, ಅತ್ಯಂತ ಕಡಿಮೆ ವೆಚ್ಚದಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡುವ ತಂತ್ರಜ್ಞಾನದಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದೆ.
- ಹಸಿರು ಕ್ರಾಂತಿ: ಆಹಾರ ಧಾನ್ಯಗಳಿಗಾಗಿ ಇತರ ದೇಶಗಳನ್ನು ಅವಲಂಬಿಸಿದ್ದ ಭಾರತ, ಇಂದು ಆಹಾರ ಧಾನ್ಯಗಳನ್ನು ರಫ್ತು ಮಾಡುವ ಹಂತಕ್ಕೆ (Green Revolution) ಬೆಳೆದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
