ಹಾರ ಹಾಕಿ ಸನ್ಮಾನಿಸಲು ಧರ್ಮೇಂದ್ರ ಪ್ರಧಾನ್ ಪಾಕ್ ವಿರುದ್ಧ ಯುದ್ಧ ಗೆದ್ದು ಬಂದಿದ್ದಾರಾ?; ಕಾಂಗ್ರೆಸ್ ವಾಗ್ದಾಳಿ – Kannada News | BJP Garlanded Dharmendra Pradhan as if he won war with Pakistan Congress mp Gaurav Gogoi slams in Parliament

ನವದೆಹಲಿ, ಜುಲೈ 28: ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ವಿದ್ಯಾರ್ಥಿಗಳು ನಡೆಸಿದ ಸುದೀರ್ಘ ಪ್ರತಿಭಟನೆಯ ನಂತರ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಂದು ಸಂಸತ್​​ಗೆ ಆಗಮಿಸಿದ ಅವರಿಗೆ ಹಾರ ಹಾಕಿ ಸ್ವಾಗತಿಸಲಾಯಿತು. ಈ ಬಗ್ಗೆ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಬಿಜೆಪಿ ಸಂಸದರು ಧರ್ಮೇಂದ್ರ ಪ್ರಧಾನ್ ಅವರನ್ನು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ಮರಳಿದವರಂತೆ ಸಂಸತ್ತಿಗೆ ಸ್ವಾಗತಿಸಿದ್ದಾರೆ” ಎಂದು ಟೀಕಿಸಿದ್ದಾರೆ.

ಕಳೆದ ವಾರಾಂತ್ಯದಲ್ಲಿ ರಾಜೀನಾಮೆ ನೀಡಿದ್ದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಸಂಸತ್ತಿಗೆ ಆಗಮಿಸುತ್ತಿದ್ದಂತೆ, ಅವರನ್ನು “ಧರ್ಮೇಂದ್ರ ಪ್ರಧಾನ್ ಝಿಂದಾಬಾದ್” ಎಂಬ ಘೋಷಣೆಗಳೊಂದಿಗೆ ಬಿಜೆಪಿ ಸಂಸದರು ಅತ್ಯಂತ ಸಂಭ್ರಮದಿಂದ ಸ್ವಾಗತಿಸಿದರು. ಬಿಜೆಪಿ ಸಂಸದರು ಅವರನ್ನು ಸುತ್ತುವರೆದು, ಜೈಕಾರ ಹಾಕಿದರು. ಒಬ್ಬರು ಸಂಸದ ಧರ್ಮೇಂದ್ರ ಪ್ರಧಾನ್ ಅವರ ತಲೆಗೆ ಸಾಂಪ್ರದಾಯಿಕ ಟೋಪಿ ಹಾಕಿ, ಹೆಗಲಿಗೆ ಶಾಲು ಹೊದಿಸಿ ಸನ್ಮಾನಿಸಿದರು.

“ರಾಜೀನಾಮೆ ನೀಡಿದ ನಂತರ ಧರ್ಮೇಂದ್ರ ಪ್ರಧಾನ್ ಸಂಸತ್ತಿನ ಆವರಣಕ್ಕೆ ಬಂದಾಗ, ಬಿಜೆಪಿ ಸಂಸದರು ಅವರಿಗೆ ಹೂಮಾಲೆ ಹಾಕಿ, ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ಬಂದವರಂತೆ ಸ್ವಾಗತಿಸಿದರು” ಎಂದು ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026ರ ಮೇಲಿನ ಚರ್ಚೆಯ ವೇಳೆ ಗೌರವ್ ಗೊಗೋಯ್ ಟೀಕಿಸಿದರು.

ಇದನ್ನೂ ಓದಿ: ರಾಜೀನಾಮೆ ಬಳಿಕ ಮೊದಲ ಬಾರಿಗೆ ಲೋಕಸಭೆಗೆ ಬಂದ ಧರ್ಮೇಂದ್ರ ಪ್ರಧಾನ್, ಜಿಂದಾಬಾದ್ ಜಯಘೋಷದೊಂದಿಗೆ ಎನ್​ಡಿಎ ಸಂಸದರ ಸ್ವಾಗತ

ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ದೇಶಾದ್ಯಂತ ವಿದ್ಯಾರ್ಥಿಗಳು ಸಂಕಷ್ಟಕ್ಕೊಳಗಾಗಿದ್ದರೂ, ಸಂಸತ್ತಿನಲ್ಲಿ ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಸನ್ಮಾನ ಮಾಡಿದ ಸರ್ಕಾರದ ನಡೆಗೆ ಕಾಂಗ್ರೆಸ್ ಸಂಸದ ಗೌರವ್ ಗೊಗೋಯ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇಂದು ಲೋಕಸಭೆಯಲ್ಲಿ ಮಾತನಾಡಿದ ಗೌರವ್ ಗೊಗೋಯ್, “21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡು ಜೀವ ಕಳೆದುಕೊಂಡಿದ್ದಾರೆ. ನಿಮಗೆ ನಾಚಿಕೆಯಾಗುವುದಿಲ್ಲವೇ? ಯಾರ ಅಧಿಕಾರಾವಧಿಯಲ್ಲಿ 21 ಮಕ್ಕಳು ಪ್ರಾಣ ಕಳೆದುಕೊಂಡರೋ ಆ ಸಚಿವರು ರಾಜೀನಾಮೆ ನೀಡಿದರು. ಆದರೆ, ಅವರು ಸದನಕ್ಕೆ ಬಂದಾಗ, ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ಬಂದವರಂತೆ ಅವರಿಗೆ ಹೂಮಾಲೆ ಹಾಕಿದಿರಿ. ಗಡಿಯಲ್ಲಿ ವಿಜಯ ಸಾಧಿಸಿ ಬಂದಂತೆ ಅವರನ್ನು ಗೌರವಿಸಿದಿರಿ” ಎಂದು ಗುಡುಗಿದ್ದಾರೆ.

ಇದನ್ನೂ ಓದಿ: ‘ಪ್ರಜಾಪ್ರಭುತ್ವದ ಗೆಲುವು’; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿರೋಧ ಪಕ್ಷಗಳ ಪ್ರತಿಕ್ರಿಯೆ

ಈ ವರ್ಷದ್ದು ಮಾತ್ರವಲ್ಲದೆ 2024ರ ನೀಟ್ ವಿವಾದವನ್ನು ಧರ್ಮೇಂದ್ರ ಪ್ರಧಾನ್ ನಿರ್ವಹಿಸಿದ ರೀತಿಯನ್ನು ಟೀಕಿಸಿದ ಕೂಡ ಗೌರವ್ ಗೊಗೋಯ್, ಅಂದಿನ ಶಿಕ್ಷಣ ಸಚಿವರು ಆರಂಭದಲ್ಲಿ ಯಾವುದೇ ತಪ್ಪು ನಡೆದಿರುವುದನ್ನು ನಿರಾಕರಿಸಿದ್ದರು. “2024ರಲ್ಲಿ ದೇಶಾದ್ಯಂತ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ಮುನ್ನೆಲೆಗೆ ಬಂದಾಗ ಧರ್ಮೇಂದ್ರ ಪ್ರಧಾನ್ ಏನು ಹೇಳಿದರು ಗೊತ್ತೇ? ‘ಪ್ರಶ್ನೆ ಪತ್ರಿಕೆ ಸೋರಿಕೆ ಎಲ್ಲಾಗಿದೆ? ಯಾವುದೇ ಪತ್ರಿಕೆಯೂ ಸೋರಿಕೆಯಾಗಿಲ್ಲ’ ಎಂದು ಪ್ರಶ್ನಿಸಿದ್ದರು. ಮೊದಲ ಎರಡೂವರೆ ತಿಂಗಳ ಕಾಲ ಯಾವುದೇ ಅಕ್ರಮಗಳು ನಡೆದಿಲ್ಲ ಮತ್ತು ತಾನು ಅತ್ಯುತ್ತಮ ಕೆಲಸ ಮಾಡಿದ್ದೇನೆಂಬುದೇ ಸರ್ಕಾರದ ನಿಲುವಾಗಿತ್ತು” ಎಂದು ಆರೋಪಿಸಿದರು.

ಅಲ್ಲದೆ, ಪರೀಕ್ಷಾ ಸೋರಿಕೆಯನ್ನು ಹೇಗೆ ಪರಿಹರಿಸಬೇಕು ಎಂಬುದರ ಗಮನ ಹರಿಸುವ ಬದಲು ಪ್ರಧಾನಿ ನರೇಂದ್ರ ಮೋದಿ ಅವರು “ಇನ್‌ಸ್ಟಾಗ್ರಾಮ್ ಕಡೆಗೆ ಗಮನ ಹರಿಸಿ” ಎಂದು ಹೇಳುತ್ತಾರೆ ಎಂದು ಗೊಗೋಯ್ ಟೀಕಿಸಿದರು.

ದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನೇತೃತ್ವದಲ್ಲಿ ನಡೆದ ಒಂದು ತಿಂಗಳಿಗೂ ಹೆಚ್ಚು ಕಾಲದ ಪ್ರತಿಭಟನೆಯ ನಂತರ, ಜುಲೈ 25ರಂದು ಧರ್ಮೇಂದ್ರ ಪ್ರಧಾನ್ ತಮ್ಮ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *