ಆಸ್ಪತ್ರೆಯ ಕಾಂಪೌಂಡ್ ಕುಸಿದು ಅನಾಹುತ
ಬೆಂಗಳೂರು, ಏಪ್ರಿಲ್ 30: ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಸಂಭವಿಸಿದ ದುರಂತದಲ್ಲಿ 6 ವರ್ಷದ ಮಗು ಸೇರಿ ಒಟ್ಟು 7 ಮಂದಿ ಬಲಿಯಾಗಿರುವ ಘಟನೆ ನಿನ್ನೆ ಸಂಭವಿಸಿತ್ತು. ಆ ಬೆನ್ನಲ್ಲೇ ಮನಕಲಕುವ ವಿಷಯವೊಂದು ಬಹಿರಂಗಗೊಂಡಿದ್ದು ಮೃತ ಬಾಲಕಿ ಮುಸಾವಿರ್ ಬೇಗಂ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಂಭ್ರಮದಲ್ಲಿದ್ದಳು ಎಂಬುದು ಗೊತ್ತಾಗಿದೆ. ತನ್ನ ಬರ್ತ್ ಡೇಗಾಗಿ ಬಟ್ಟೆ ಖರೀದಿಗೆ ಕುಟುಂಬಸ್ಥರ ಜೊತೆಗೆ ಬಂದಿದ್ದ ಈಕೆ ಅವಘಡದಲ್ಲಿ ದಾರುಣವಾಗಿ ಮೃತಪಟ್ಟಿರೋದು ಕುಟುಂಬಸ್ಥರನ್ನು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ.
ತಂದೆ ತಾಯಿಗೆ ಓರ್ವಳೇ ಮಗಳು!
ಮೇ 3ರಂದು ತನ್ನ ಹುಟ್ಟುಹಬ್ಬದ ಹಿನ್ನೆಲೆ ಬಟ್ಟೆ ಸೇರಿ ವಿವಿಧ ವಸ್ತುಗಳ ಖರೀದಿಗೆಂದು ತಾಯಿ ಮುಬೀನ್ ತಾಜ್ ಮತ್ತು ಅತ್ತೆ ತಬ್ರೀನ್ ತಾಜ್ ಅವರೊಂದಿಗೆ ಮುಸಾವಿರ್ ಶಿವಾಜಿ ನಗರಕ್ಕೆ ಬಂದಿದ್ದಳು. ಈ ವೇಳೆ ಮಳೆ ಆರಂಭವಾಗಿದ್ದು, ಹೊಸ ಬಟ್ಟೆಗಳನ್ನು ಆಯ್ಕೆ ಮಾಡುತ್ತಾ ಖರೀದಿಯಲ್ಲಿ ತೊಡಗಿದ್ದ ಮುಸಾವಿರ್, ಬೋರಿಂಗ್ ಆಸ್ಪತ್ರೆ ಸಮೀಪ ಗೋಡೆ ಕುಸಿದಾಗ ಅದರ ಅವಶೇಷಗಳಡಿ ಸಿಲುಕಿ ಒದ್ದಾಡಿ ಪ್ರಾಣಬಿಟ್ಟಿದ್ದಾಳೆ. ಕುಟುಂಬಸ್ಥರು ಎಷ್ಟೇ ಪ್ರಯತ್ನಿಸಿದರೂ ಆಕೆಯ ಜೀವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ದುರ್ದೈವ ಎಂದರೆ ಮುಬೀನ್ ಮತ್ತು ಚಂದ್ ಪಾಶಾ ದಂಪತಿಗೆ ಮುಸಾವಿರ್ ಏಕೈಕ ಪುತ್ರಿ ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಮನೇಲಿದ್ದಾಗ್ಲೇ ಕಂಪೌಂಡ್ ಮೇಲೆ ಬಿದ್ದ ಮರದ ಕೊಂಬೆಗಳು, ಕಬ್ಬಿಣದ ವಾಲ್ಗಳು! ತಪ್ಪಿದ ಅನಾಹುತ
ಈ ಕುಟುಂಬವು ಕಡುಗೋಂಡನಹಳ್ಳಿಯ ಸಮೀಪದ ವೆಂಕಟೇಶಪುರದಲ್ಲಿ ವಾಸಿಸುತ್ತಿದ್ದು, ಘಟನೆಯಲ್ಲಿ ಮುಸಾವಿರ್ ಜೊತೆಗಿದ್ದ ಆಕೆಯ ಅತ್ತೆಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದೆ. ಇದೇ ಅವಘಡದಲ್ಲಿ ಬೆಂಗಳೂರಿನ ಜೆಸಿ ನಗರದ ಮೊಹಮ್ಮದ್ ಅಬ್ದುಲ್ (52), ಡಿ.ಜೆ.ಹಳ್ಳಿಯ ಫಯಾಜ್ ಅಹ್ಮದ್ (39), ಕೇರಳದ ಎರ್ನಾಕುಲಂನ ಸ್ಮಿತಾ (47) ಹಾಗೂ ಲತಾ (57), ಕಾರ್ ಸ್ಟಿಕ್ಕರಿಂಗ್ ಕೆಲಸ ಮಾಡುತ್ತಿದ್ದ ಅಸ್ಸಾಂನ ನಸೀಮುಲ್ಲಾ (19) ಮತ್ತು ಉತ್ತರ ಪ್ರದೇಶದ ವ್ಯಾಪಾರಿ ಸಲಾವುದ್ದೀನ್ ಅನ್ಸಾರಿ (36) ಪ್ರಾಣಬಿಟ್ಟಿದ್ದರು. ಆಸ್ಪತ್ರೆ ಆವರಣದ ಖಾಲಿ ಜಾಗದಲ್ಲಿ ಮಣ್ಣನ್ನು ಅಗೆದು ಗೋಡೆಯ ಅಂಚಿಗೆ ಸುರಿದಿದ್ದಲ್ಲದೆ ಸುತ್ತಲೂ ಗಿಡಗಳನ್ನು ನೆಟ್ಟಿರುವುದು ಗೋಡೆಯನ್ನು ದುರ್ಬಲಗೊಳಿಸಿದೆ. ಇದರ ಪರಿಣಾಮವಾಗಿ, ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದ ನೀರು ಗೋಡೆಯ ಮೇಲೆ ಒತ್ತಡ ಹೇರಿ ಗೋಡೆ ಕುಸಿದಿದೆ ಎನ್ನಲಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
