ಹುಬ್ಬಳ್ಳಿಯ ಕೆಎಸ್ಸಿಎ ಕ್ರೀಡಾಂಗಣದ ಪೆವಿಲಿಯನ್ಗೆ ಕರ್ನಾಟಕದ ಮಾಜಿ ಆಟಗಾರ ಸುನಿಲ್ ಜೋಶಿ ಅವರ ಹೆಸರಿಡಲಾಗಿದೆ. ರಣಜಿ ಟ್ರೋಫಿ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ‘ಸುನಿಲ್ ಜೋಶಿ ಪೆವಿಲಿಯನ್’ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಸಿಸಿಐ (BCCI) ಗೌರವಾನ್ವಿತ ಅಧ್ಯಕ್ಷರಾದ ಮಿಥುನ್ ಮನ್ಹಾಸ್, ಕೆಎಸ್ಸಿಎ (KSCA) ಅಧ್ಯಕ್ಷರಾದ ಶ್ರೀ ವೆಂಕಟೇಶ್ ಪ್ರಸಾದ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹಾಗೂ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಸುವರ್ಣ ಮಹೋತ್ಸವದ (50 ವರ್ಷಗಳು) ಸಂಭ್ರಮದ ಭಾಗವಾಗಿ ಮೂರು ಸ್ಟ್ಯಾಂಡ್ಗಳಿಗೆ ಮಾಜಿ ಕ್ರಿಕೆಟರುಗಳಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಹಾಗೂ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಅವರ ಹೆಸರಿಡಲಾಗಿತ್ತು.
ಇದೀಗ ಗದಗ ಮೂಲದವರಾದ ಭಾರತದ ಮಾಜಿ ಸ್ಪಿನ್ನರ್ ಸುನಿಲ್ ಜೋಶಿ ಅವರ ಗೌರವಾರ್ಥವಾಗಿ ಹುಬ್ಬಳ್ಳಿ ಕ್ರೀಡಾಂಗಣದ ಪೆವಿಲಿಯನ್ ಬ್ಲಾಕ್ಗೆ ಅವರ ಹೆಸರನ್ನು ಇಡಲಾಗಿದೆ.
ಸುನಿಲ್ ಜೋಶಿ ಟೀಮ್ ಇಂಡಿಯಾ ಪರ 15 ಟೆಸ್ಟ್ ಹಾಗೂ 69 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಅವರು ಒಟ್ಟು 110 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅಷ್ಟೇ ಅಲ್ಲದೆ ಭಾರತ ಕಿರಿಯರ ತಂಡದ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಈ ಎಲ್ಲಾ ಸಾಧನೆಗಳನ್ನು ಗೌರವಿಸಿ ಇದೀಗ ಹುಬ್ಬಳ್ಳಿ ಸ್ಟೇಡಿಯಂ ಪೆವಿಲಿಯನ್ಗೆ ಅವರ ಹೆಸರನ್ನಿಡಲಾಗಿದೆ.
ಇನ್ನು ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಜಮ್ಮು-ಕಾಶ್ಮೀರ ತಂಡವು ಬ್ಯಾಟಿಂಗ್ ಆಯ್ದುಕೊಂಡಿದ್ದು, ಕರ್ನಾಟಕ ತಂಡ ಫೀಲ್ಡಿಂಗ್ ಮಾಡುತ್ತಿದೆ.
