“22,000 ರೂ. ಖರ್ಚಾಗಿದೆ, ಕ್ಷಮಿಸಿ”: ಕದ್ದ ಚಿನ್ನ-ಹಣ ವಾಪಸ್ ತಂದು ಸಾರಿ ಪತ್ರವಿಟ್ಟ ಕಳ್ಳರು

ಕಾಕಿನಾಡ, ಆ.4: ದೋಚಿದ ಚಿನ್ನಾಭರಣ ಹಾಗೂ ನಗದನ್ನು ಎರಡು ವಾರಗಳ ಬಳಿಕ ಮಾಲೀಕರ ಮನೆ ಅಂಗಳಕ್ಕೇ ಎಸೆದು, “ಕ್ಷಮಿಸಿ, ಮಾಡಿದ ತಪ್ಪು ಒಪ್ಪಿಕೊಳ್ಳುತ್ತಿದ್ದೇವೆ” ಎಂದು ಕ್ಷಮಾಪಣಾ ಪತ್ರ ಬರೆದಿಟ್ಟು ಹೋದ ವಿಚಿತ್ರ ಹಾಗೂ ಅಪರೂಪದ ಘಟನೆಯೊಂದು ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಾಕಿನಾಡ ಜಿಲ್ಲೆಯ ಕರಪ ಮಂಡಲದ ರಾಮಕಂಚಿರಾಜು ನಗರದ ನಿವಾಸಿ ನಾಮಾಲ ಗಣೇಶ್ ಎಂಬುವವರು ತಮ್ಮ ಕುಟುಂಬದೊಂದಿಗೆ ಜುಲೈ 18 ರಂದು ಸ್ವಗ್ರಾಮಕ್ಕೆ ತೆರಳಿದ್ದರು.

ಮನೆಗೆ ಬೀಗ ಹಾಕಿರುವುದನ್ನು ಗಮನಿಸಿದ ಕಳ್ಳರು, ಬೀಗ ಮುರಿದು ಒಳನುಗ್ಗಿ ಸುಮಾರು 6.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 50,000 ರೂ. ನಗದು ದೋಚಿ ಪರಾರಿಯಾಗಿದ್ದರು. ಮನೆಗೆ ಹಿಂತಿರುಗಿದ ಗಣೇಶ್ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.

ಕಳ್ಳತನ ನಡೆದ 15 ದಿನಗಳ ನಂತರ, ಅಂದರೆ ಆಗಸ್ಟ್ 2ರಂದು ತೆಲ್ಲವಾರಿನ ಜಾವ ಗಣೇಶ್ ಅವರ ಮನೆಯ ಅಂಗಳದಲ್ಲಿ ಕವರ್‌ ಒಂದರಲ್ಲಿ ಚಿನ್ನಾಭರಣ ಹಾಗೂ ಹಣವನ್ನು ಎಸೆದು ಕಳ್ಳರು ಪರಾರಿಯಾಗಿದ್ದಾರೆ. ಕವರ್‌ನೊಂದಿಗೆ ಹಸ್ತಪ್ರತಿಯ ಲೇಖನವೊಂದನ್ನು (ಕ್ಷಮಾಪಣಾ ಪತ್ರ) ಇಡಲಾಗಿತ್ತು. “ನಾವು ಮಾಡಿದ್ದು ತಪ್ಪೇ… ದಯವಿಟ್ಟು ಕ್ಷಮಿಸಿ. ದೋಚಿದ ಹಣದಲ್ಲಿ 22,000 ರೂ. ವರೆಗೆ ಖರ್ಚು ಮಾಡಿದ್ದೇವೆ. ಆ ಹಣವನ್ನು ಮರಳಿಸಲು ಸಾಧ್ಯವಿಲ್ಲ. ಉಳಿದ ಎಲ್ಲಾ ಚಿನ್ನಾಭರಣ ಹಾಗೂ ಹಣವನ್ನು ವಾಪಸ್ ನೀಡುತ್ತಿದ್ದೇವೆ. ಕ್ಷಮಿಸಿ ಎಂದು ಕೇಳಿಕೊಂಡಿದ್ದಾನೆ.

ಇದನ್ನೂ ಓದಿ: ಕಾಲೇಜಿನ ಕೊನೆಯ ದಿನ ಸೆಕ್ಯೂರಿಟಿ ಗಾರ್ಡ್‌ನ ಆಶೀರ್ವಾದ ಪಡೆದ ವಿದ್ಯಾರ್ಥಿ

22,000 ರೂ. ನಗದು ಕಳೆದುಕೊಂಡರೂ, ಲಕ್ಷಾಂತರ ರೂಪಾಯಿ ಮೌಲ್ಯದ ತಮ್ಮ ಅಮೂಲ್ಯ ಚಿನ್ನಾಭರಣಗಳು ಹಾಗೂ ಉಳಿದ ಹಣ ವಾಪಸ್ ಸಿಕ್ಕಿದ್ದಕ್ಕೆ ಮನೆಯಜಮಾನ ಗಣೇಶ್ ನಿಟ್ಟುಸಿರು ಬಿಟ್ಟಿದ್ದಾರೆ. ಕಳ್ಳತನ ಮಾಡಿ ವಾಪಸ್ ಕ್ಷಮೆ ಕೇಳಿ ಸೊತ್ತು ಮರಳಿಸಿದ ಈ ಘಟನೆ ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಕಳ್ಳತನ ಮಾಡಿ ಸೊತ್ತು ಮರಳಿಸಿದ ಖದೀಮರು ಯಾರು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Leave a Reply

Your email address will not be published. Required fields are marked *