All posts by nagaraj11081993

‘ಆಪರೇಷನ್ ಸಿಂಧೂರ್’ ಚಿತ್ರಕ್ಕೆ ಸಿಕ್ಕರು ಹೀರೋ; ಬಾಲಿವುಡ್ ನಟನಿಗೆ ಆಫರ್ – Kannada News | Vivek Agnihotri’s ‘Operation Sindoor’: Varun Dhawan in Lead? Based on Pahalgam Terror Attack

2022ರಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಮತ್ತು 2025ರಲ್ಲಿ ‘ದಿ ಬೆಂಗಾಲ್ ಫೈಲ್ಸ್’ ಮೂಲಕ ಸುದ್ದಿ ಆದ ವಿವೇಕ್ ಅಗ್ನಿಹೋತ್ರಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಅದಕ್ಕೆ ‘ಆಪರೇಷನ್ ಸಿಂಧೂರ್’ ಎಂದು ಹೆಸರು ಇಟ್ಟಿದ್ದಾರೆ. ಈ ಚಿತ್ರವು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಆಧರಿಸಿದೆ. ವಿವೇಕ್ ಅವರು ಭೂಷಣ್ ಕುಮಾರ್ ಜೊತೆ ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ವರುಣ್ ಧವನ್ (Varun Dhawan) ಹೀರೋ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇತ್ತೀಚೆಗೆ ರಿಲೀಸ್ ಆದ ‘ಬಾರ್ಡರ್ 2’ ಸಿನಿಮಾ ಮೂಲಕ ವರುಣ್ ಧವನ್ ದೇಶಭಕ್ತಿ ಚಿತ್ರಗಳನ್ನು ತಾವು ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಂದಿನಿಂದ, ಅವರಿಗೆ ಈ ರೀತಿಯ ಸಿನಿಮಾಗಳ ಆಫರ್‌ಗಳು ಬರುತ್ತಿವೆಯಂತೆ. ಆದಾಗ್ಯೂ, ನಟ ತಮ್ಮ ಮುಂದಿನ ಸಿನಿಮಾ ಆಯ್ಕೆ ಬಗ್ಗೆ ತರಾತುರಿ ತೋರಿಸುತ್ತಿಲ್ಲ.

ಈಗ ವರುಣ್ ಧವನ್ ‘ಆಪರೇಷನ್ ಸಿಂಧೂರ್’ ಚಿತ್ರಕ್ಕಾಗಿ ವಿವೇಕ್ ಅಗ್ನಿಹೋತ್ರಿ ಮತ್ತು ಭೂಷಣ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಸಿನಿಮಾ ಕಥೆಯು ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಿಂದ ಪ್ರೇರಿತವಾಗಿದೆ. ಚಿತ್ರ ಘೋಷಣೆಯಾದಾಗಿನಿಂದ, ಅದರ ತಾರಾಗಣದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇತ್ತು. ಈಗ ‘ಆಪರೇಷನ್ ಸಿಂಧೂರ್’ನಲ್ಲಿ ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂದು ವರದಿಯಾಗಿದೆ.

‘ಆಪರೇಷನ್ ಸಿಂಧೂರ್’ ಪಾತ್ರವನ್ನು ವರುಣ್ ಧವನ್ ಅವರಿಗೆ ನೀಡಲಾಗಿದ್ದು, ಅವರು ನಾಯಕನ ಪಾತ್ರದಲ್ಲಿ ನಟಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ. ವರುಣ್​​ಗೆ ಕಥೆ ಇಷ್ಟವಾಗಿದೆ ಎನ್ನಲಾಗಿದೆ. ವರುಣ್ ಧವನ್ ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಇದನ್ನೂ ಓದಿ: ಭೂಗತ ಲೋಕದಿಂದ ಬೆದರಿಕೆ: ಭಯಾನಕ ಅನುಭವ ಬಿಚ್ಚಿಟ್ಟ ನಟ ವರುಣ್ ಧವನ್

ವರುಣ್ ಧವನ್ ತಮ್ಮ ಮಗಳು ಲಾರಾ ಜೊತೆ ಸಮಯ ಕಳೆಯಲು ನಟನೆಯಿಂದ ವಿರಾಮ ತೆಗೆದುಕೊಂಡಿದ್ದಾರೆ ಎಂದು ವರದಿ ಆಗಿದೆ. ಅವರು ಈಗ ಚಿತ್ರಗಳಿಗೆ ಸಹಿ ಹಾಕಿ ಕೆಲಸಕ್ಕೆ ಮರಳಲು ಸಿದ್ಧರಾಗಿದ್ದಾರೆ. ವರುಣ್ ಪ್ರಸ್ತುತ ತಮ್ಮ ‘ಹೇ ಜವಾನಿ ತೋ ಇಷ್ಕ್ ಹೋನಾ ಹೇ’ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಮೇ 22ರಂದು ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿಗರಿಗೆ ಪಾರ್ಕಿಂಗ್ ಶಾಕ್: ಈ ಪ್ರದೇಶದ 42 ರಸ್ತೆಗಳಲ್ಲಿ ಪೇ ಆ್ಯಂಡ್ ಪಾರ್ಕ್ ಜಾರಿಗೆ ಸಿದ್ಧತೆ, ವಾಹನ ಸವಾರರ ಆಕ್ರೋಶ! – Kannada News | Bengaluru Parking Row: Pay and Park System to be Introduced in 42 Roads of Jayanagar; Commuters Express Anger

ಬೆಂಗಳೂರು, ಏಪ್ರಿಲ್ 14: ಬೆಂಗಳೂರಿನಲ್ಲಿ ಟ್ರಾಫಿಕ್ (Bangalore Traffic) ಕಿರಿಕಿರಿ ನಡುವೆ ವಾಹನ ಸವಾರರಿಗೆ ಈಗ ಪಾರ್ಕಿಂಗ್ ಬಿಸಿ ತಟ್ಟಲಿದೆ. ನಗರದಲ್ಲಿ ವಾಹನ ನಿಲುಗಡೆ ಸಮಸ್ಯೆಗೆ ಮುಕ್ತಿ ನೀಡಲು ಮತ್ತು ಅನಧಿಕೃತ ಪಾರ್ಕಿಂಗ್‌ಗೆ ಕಡಿವಾಣ ಹಾಕಲು ಮುಂದಾಗಿರುವ ಜಿಬಿಎ (GBA) ಅಧಿಕಾರಿಗಳು, ‘ಪೇ ಆ್ಯಂಡ್ ಪಾರ್ಕಿಂಗ್ (Pay and Parking)’ ವ್ಯವಸ್ಥೆಗೆ ಮತ್ತಷ್ಟು ರಸ್ತೆಗಳನ್ನು ಸೇರ್ಪಡೆ ಮಾಡುತ್ತಿದ್ದಾರೆ. ಈಗಾಗಲೇ ನಗರದ ಅನೇಕ ರಸ್ತೆಗಳಲ್ಲಿ ಪೇ ಆ್ಯಂಡ್ ಪಾರ್ಕಿಂಗ್ ಜಾರಿಯಲ್ಲಿದೆ. ಇದಕ್ಕೆ ಇನ್ನಷ್ಟು ರಸ್ತೆಗಳನ್ನು ಸೇರಿಸಲು ಸಿದ್ಧತೆ ಮಾಡಲಾಗುತ್ತಿದೆ.

ಜಯನಗರದ 42 ರಸ್ತೆಗಳಲ್ಲಿ ಪೇ ಆ್ಯಂಡ್ ಪಾರ್ಕ್

ಹೊಸ ಪಾರ್ಕಿಂಗ್ ನೀತಿಯ ಭಾಗವಾಗಿ ಬೆಂಗಳೂರು ದಕ್ಷಿಣ ವಲಯದ ಜಯನಗರದ ಬರೋಬ್ಬರಿ 42 ರಸ್ತೆಗಳನ್ನು ಪೇ ಆ್ಯಂಡ್ ಪಾರ್ಕಿಂಗ್ ವಲಯಗಳನ್ನಾಗಿ ಗುರುತಿಸಲಾಗಿದೆ. ಈ ರಸ್ತೆಗಳಲ್ಲಿ ಇನ್ನು ಮುಂದೆ ವಾಹನ ನಿಲ್ಲಿಸಬೇಕಾದರೆ ನಿಗದಿತ ಶುಲ್ಕ ಪಾವತಿಸುವುದು ಅನಿವಾರ್ಯವಾಗಲಿದೆ. ಈ ಮೂಲಕ ಪಾಲಿಕೆಯು ತನ್ನ ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ.

ವಾಹನ ಸವಾರರ ಅಸಮಾಧಾನ

ಪಾಲಿಕೆಯ ಈ ನಿರ್ಧಾರದ ವಿರುದ್ಧ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಾಹನ ಖರೀದಿಸುವಾಗಲೇ ರಸ್ತೆ ತೆರಿಗೆ ಸೇರಿದಂತೆ ಲಕ್ಷಾಂತರ ರೂಪಾಯಿ ಪಾವತಿಸಿರುತ್ತೇವೆ. ಈಗ ರಸ್ತೆ ಪಕ್ಕದಲ್ಲಿ ಗಾಡಿ ನಿಲ್ಲಿಸುವುದಕ್ಕೂ ಹಣ ವಸೂಲಿ ಮಾಡುವುದು ಜನಸಾಮಾನ್ಯರ ಮೇಲೆ ಹೊರೆ ಹೇರಿದಂತೆ ಎಂದು ವಾಹನ ಸವಾರರು ಕಿಡಿಕಾರಿದ್ದಾರೆ.

ನಗರದಲ್ಲಿ ಸಂಚರಿಸುವ ಲಕ್ಷಾಂತರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು ಸರ್ಕಾರಕ್ಕೆ ಸವಾಲಾಗಿದ್ದರೂ, ಶುಲ್ಕದ ಹೆಸರಿನಲ್ಲಿ ಜನರನ್ನು ಪೀಡಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಇದನ್ನೂ ಓದಿ: ಪೀಣ್ಯ ಫ್ಲೈಓವರ್ ಮೇಲೆ ಸ್ಪೀಡ್ ಬ್ರೇಕ್, ಅತಿ ವೇಗವಾಗಿ ವಾಹನ ಸಂಚರಿಸಿದರೆ ದಂಡ

ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡಿ ಸಂಚಾರಕ್ಕೆ ಅಡ್ಡಿಪಡಿಸುವುದನ್ನು ತಡೆಯಲು ಮತ್ತು ಸಂಚಾರ ದಟ್ಟಣೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಏಪ್ರಿಲ್ 5ರಿಂದ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಶುರು ಮಾಡಲಾಗಿದೆ. ಸಾರ್ವಜನಿಕರ ಆಕ್ರೋಶ ಮತ್ತು ಕಿರುಕುಳದ ದೂರುಗಳಿಂದಾಗಿ 2022ರಲ್ಲಿ ಟೋಯಿಂಗ್ ಅನ್ನು ನಿಲ್ಲಿಸಲಾಗಿತ್ತು. ಆದರೆ ಈಗ ಜಿಬಿಎ ಮತ್ತು ಸಂಚಾರ ಪೊಲೀಸರು ಜಂಟಿಯಾಗಿ ಟೋಯಿಂಗ್ ಪುನರಾರಂಭಿಸಿದ್ದಾರೆ. ಇದಕ್ಕೂ ಸಾವರ್ಜನಿಕ ವಲುಯದಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಧ್ಯಪ್ರದೇಶದಲ್ಲಿ ಭೀಕರ ಕೃತ್ಯ: ಹಾಸಿಗೆಯ ಬಾಕ್ಸ್‌ನೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಡ್ಯಾನ್ಸರ್ ಮೃತದೇಹ – Kannada News | MP Dancer Found Dead in Bed Box, Decomposed Body Sparks Murder Probe

ಸಾಗರ್, ಏಪ್ರಿಲ್ 14: ಮದುವೆ, ಜಾತ್ರೆಗಳಲ್ಲಿ ನೃತ್ಯ(Dance) ಮಾಡುತ್ತಾ ತನ್ನಿಬ್ಬರು ಮಕ್ಕಳ ಭವಿಷ್ಯಕ್ಕಾಗಿ ಹೋರಾಡುತ್ತಿದ್ದ ಒಬ್ಬ ತಾಯಿ, ಕೊನೆಗೆ ಮನೆಯಲ್ಲೇ ಹೆಣವಾಗಿ ಪತ್ತೆಯಾದ ಘೋರ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ. ಹತ್ತು ದಿನಗಳಿಂದ ನಾಪತ್ತೆಯಾಗಿದ್ದ 45 ವರ್ಷದ ಡ್ಯಾನ್ಸರ್ ಮಮತಾ ಅಹಿರ್ವಾರ್ ಅವರ ಮೃತದೇಹ ಹಾಸಿಗೆಯ ಪೆಟ್ಟಿಗೆಯೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಮತಾ ಅವರ ಮಕ್ಕಳು, ದೇವ್ ಮತ್ತು ಮುಸ್ಕಾನ್, ಕಳೆದ ಹತ್ತು ದಿನಗಳಿಂದ ವಿದಿಶಾದಲ್ಲಿರುವ ತಮ್ಮ ಅಕ್ಕನ ಮನೆಯಲ್ಲಿದ್ದರು. ತಾಯಿಯಂತೆ ತಾವೂ ಕಷ್ಟಪಟ್ಟು ದುಡಿದು ಸಂಸಾರಕ್ಕೆ ನೆರವಾಗಲೆಂದು ಉದ್ಯೋಗ ಅರಸುತ್ತಿದ್ದ ಮಕ್ಕಳು, ಏಪ್ರಿಲ್ 5 ರಿಂದ ತಾಯಿಯೊಂದಿಗೆ ಮಾತನಾಡಲು ಸತತ ಪ್ರಯತ್ನ ನಡೆಸಿದ್ದರು. ಆದರೆ ತಾಯಿಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಆತಂಕಗೊಂಡ ಮಕ್ಕಳು ಭಾನುವಾರ ಸಾಗರ್ ಜಿಲ್ಲೆಯ ಸಹೋದ್ರಾ ರಾಯ್ ವಾರ್ಡ್‌ನಲ್ಲಿರುವ ತಮ್ಮ ಮನೆಗೆ ಮರಳಿದರು.

ಬೀಗ ಹಾಕಿದ್ದ ಮನೆ, ಒಳಗೆ ಮೌನವಾಗಿದ್ದ ಸಾವಿನ ರಹಸ್ಯ
ಮನೆಗೆ ಬಂದ ಮಕ್ಕಳಿಗೆ ಮುಂಭಾಗದ ಬಾಗಿಲು ಹೊರಗಿನಿಂದ ಲಾಕ್ ಆಗಿರುವುದು ಕಂಡುಬಂದಿದೆ. ನೆರೆಹೊರೆಯವರ ಸಹಾಯದಿಂದ ಬಾಗಿಲು ಒಡೆದು ಒಳಗೆ ಹೋದಾಗ, ಇಡೀ ಮನೆಯಲ್ಲಿ ವಿಪರೀತ ದುರ್ವಾಸನೆ ಹರಡಿತ್ತು. ಕಿಟಕಿ, ಬಾಗಿಲು ಮುಚ್ಚಿದ್ದ ಮನೆಯಲ್ಲಿ ಯಾವುದೋ ಅನಾಹುತ ನಡೆದಿದೆ ಎಂಬ ಸಂಶಯದಿಂದ ಹುಡುಕಾಟ ನಡೆಸಿದಾಗ, ಕೋಣೆಯಲ್ಲಿದ್ದ ಬೆಡ್ ಬಾಕ್ಸ್ ತೆರೆದಾಗ ಮಕ್ಕಳು ಕಂಡ ದೃಶ್ಯ ಅವರ ಬದುಕಿನಲ್ಲೇ ಮರೆಯಲಾಗದ ಕರಾಳ ಕ್ಷಣವಾಗಿತ್ತು.

ಮತ್ತಷ್ಟು ಓದಿ: ಚೂಪಾದ ಮುಳ್ಳುಗಳ ರಾಶಿ ಮೇಲೆ ನೃತ್ಯ; ತಮಿಳುನಾಡಿನಲ್ಲೊಂದು ವಿಶಿಷ್ಟ ಪದ್ಧತಿ

ತಾಯಿಯ ಮೃತದೇಹ ಪೆಟ್ಟಿಗೆಯೊಳಗೆ ಅರೆ ಕೊಳೆತ ಸ್ಥಿತಿಯಲ್ಲಿತ್ತು. ಹಂತಕರು ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಶವವನ್ನು ಅಲ್ಲಿ ಬಚ್ಚಿಟ್ಟಿದ್ದರು ಎಂದು ಮಕ್ಕಳು ಕಣ್ಣೀರಿಟ್ಟಿದ್ದಾರೆ. ಮಮತಾ ಅಹಿರ್ವಾರ್ ಕಳೆದ 15 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಇಬ್ಬರು ಮಕ್ಕಳನ್ನು ಸಾಕಿ ಸಲಹಲು ಅವರು ವೃತ್ತಿಪರ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದರು. ಜಿಲ್ಲೆಯ ಸುತ್ತಮುತ್ತಲಿನ ಜಾತ್ರೆ ಮತ್ತು ಮದುವೆ ಸಮಾರಂಭಗಳಲ್ಲಿ ನೃತ್ಯ ಮಾಡಿ ಅವರು ಜೀವನ ಸಾಗಿಸುತ್ತಿದ್ದರು.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಉಪವಿಭಾಗೀಯ ಪೊಲೀಸ್ ಅಧಿಕಾರಿ ಅಸ್ತಾನಾ ಮತ್ತು ತಂಡ, ಸ್ಥಳದಲ್ಲಿನ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಮನೆಯ ಹೊರಗಿನಿಂದ ಬೀಗ ಹಾಕಿರುವುದು ಇದು ಪರಿಚಿತರೇ ಮಾಡಿದ ಕೃತ್ಯ ಇರಬಹುದು ಎಂಬ ಅನುಮಾನ ಮೂಡಿಸಿದೆ. ಮೃತದೇಹ ಭಾಗಶಃ ಕೊಳೆತಿರುವುದರಿಂದ ಸುಮಾರು ಒಂದು ವಾರದ ಹಿಂದೆಯೇ ಕೊಲೆ ನಡೆದಿರುವ ಸಾಧ್ಯತೆಯಿದೆ.

ಮರಣೋತ್ತರ ಪರೀಕ್ಷಾ ವರದಿಯು ಸಾವು ಉಸಿರುಗಟ್ಟಿ ಸಂಭವಿಸಿದೆಯೇ ಅಥವಾ ಯಾವುದಾದರೂ ಆಯುಧದಿಂದ ನಡೆದಿದೆಯೇ ಎಂಬುದನ್ನು ಖಚಿತಪಡಿಸಲಿದೆ. ಪೊಲೀಸರು ಈಗ ಮಮತಾ ಅವರ ಕೊನೆಯ ಫೋನ್ ಕರೆಗಳು ಮತ್ತು ಅವರ ಆಪ್ತರ ವಿಚಾರಣೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಮ್ಮ ದಿಗ್ಬಂಧನ ಸನಿಹ ಬಂದರೆ ಇರಾನಿನ ಹಡಗುಗಳ ನಿರ್ನಾಮ ನಿಶ್ಚಿತ: ಇರಾನ್‌ಗೆ ಟ್ರಂಪ್ ಖಡಕ್ ಎಚ್ಚರಿಕೆ – Kannada News | Trump’s Stern Warning to Iran: Destroy Any Ship Nearing Blockade in Hormuz Strait

ಡೊನಾಲ್ಡ್​ ಟ್ರಂಪ್ -ಸಾಂದರ್ಭಿಕ ಚಿತ್ರ Image Credit source: Google Gemini

ವಾಷಿಂಗ್ಟನ್, ಏಪ್ರಿಲ್ 14: ವಿಶ್ವದ ಅತಿ ದೊಡ್ಡ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿ(Hormuz Strait)ಯಲ್ಲಿ ಯುದ್ಧದ ಕಾರ್ಮೋಡಗಳು ಕವಿದಿವೆ. ಅಮೆರಿಕದ ನೌಕಾ ದಿಗ್ಬಂಧನವನ್ನು ಮೀರಿ ಬರುವ ಯಾವುದೇ ಇರಾನಿನ ಹಡಗುಗಳನ್ನು ತಕ್ಷಣವೇ ಧ್ವಂಸಗೊಳಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಎಚ್ಚರಿಕೆ ಈಗ ಜಾಗತಿಕ ಸಂಚಲನಕ್ಕೆ ಕಾರಣವಾಗಿದೆ. ತಮ್ಮ ‘ಟ್ರೂತ್ ಸೋಶಿಯಲ್’ ಪೋಸ್ಟ್‌ನಲ್ಲಿ ಇರಾನ್ ವಿರುದ್ಧ ಕಿಡಿಕಾರಿರುವ ಟ್ರಂಪ್, ಈಗಾಗಲೇ ಅಮೆರಿಕದ ದಾಳಿಗೆ ಇರಾನಿನ 158 ಹಡಗುಗಳು ನಾಶವಾಗಿವೆ ಎಂದು ಹೇಳಿದ್ದಾರೆ. ಹಡಗುಗಳಲ್ಲಿ ಯಾವುದಾದರೂ ನಮ್ಮ ದಿಗ್ಬಂಧನದ ಹತ್ತಿರ ಬಂದರೆ, ಅವುಗಳನ್ನು ತಕ್ಷಣವೇ ನಾಶಪಡಿಸಲಾಗುತ್ತದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಸಂಘರ್ಷವನ್ನು ತಡೆಯಲು ಪಾಕಿಸ್ತಾನದ ಆತಿಥ್ಯದಲ್ಲಿ ಅಮೆರಿಕ ಮತ್ತು ಇರಾನ್ ನಿಯೋಗಗಳ ನಡುವೆ ನಡೆದ ಸಂಧಾನ ಮಾತುಕತೆಗಳು ಸಂಪೂರ್ಣವಾಗಿ ಹಳಿತಪ್ಪಿವೆ. ಹಲವು ಗಂಟೆಗಳ ಕಾಲ ನಡೆದ ಸುದೀರ್ಘ ಚರ್ಚೆಗಳು ಯಾವುದೇ ತಾರ್ಕಿಕ ಅಂತ್ಯ ಕಾಣದೆ ಕುಸಿದುಬಿದ್ದವು. ಇರಾನ್ ತನ್ನ ನಿಲುವಿನಿಂದ ಹಿಂದೆ ಸರಿಯದ ಕಾರಣ, ಅಮೆರಿಕವು ತನ್ನ ಮುಂದಿನ ಕಠಿಣ ಹೆಜ್ಜೆಯನ್ನು ಇರಿಸಿದೆ.

ಮಾತುಕತೆ ವಿಫಲವಾದ ಬೆನ್ನಲ್ಲೇ ಆಕ್ರೋಶಭರಿತ ಆದೇಶ ಹೊರಡಿಸಿದ ಅಧ್ಯಕ್ಷ ಟ್ರಂಪ್, ವಿಶ್ವದ ಪ್ರಮುಖ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಪ್ರವೇಶಿಸುವ ಅಥವಾ ಅಲ್ಲಿಂದ ನಿರ್ಗಮಿಸುವ ಎಲ್ಲಾ ಹಡಗುಗಳ ಮೇಲೆ ದಿಗ್ಬಂಧನ ಹೇರಿದ್ದಾರೆ.

ಮತ್ತಷ್ಟು ಓದಿ: ಇರಾನ್ ಬಯಸಿದರೂ ಹಾರ್ಮುಜ್ ಜಲಸಂಧಿ ತೆರೆಯಲು ಸಾಧ್ಯವಿಲ್ಲ; ಇಲ್ಲಿದೆ ಕಾರಣ

ಟ್ರಂಪ್ ಅವರ ಈ ಕಟು ಎಚ್ಚರಿಕೆಯ ಬೆನ್ನಲ್ಲೇ ಜಾಗತಿಕ ಇಂಧನ ಮಾರುಕಟ್ಟೆ ಅಕ್ಷರಶಃ ನಡುಗಿದೆ. ಸೋಮವಾರ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಗಡಿ ದಾಟಿದ್ದು, ಆರ್ಥಿಕ ಕುಸಿತದ ಭೀತಿ ಮೂಡಿಸಿದೆ. ನೈಮೆಕ್ಸ್ (NYMEX) ಕಚ್ಚಾ ತೈಲ, ಶೇ. 8 ಏರಿಕೆ, ಬ್ರೆಂಟ್ ಕಚ್ಚಾ ತೈಲವು ಶೇ. 7 ಏರಿಕೆ ಕಂಡಿದ್ದು ತಜ್ಞರ ಪ್ರಕಾರ, ಬಿಕ್ಕಟ್ಟು ಮುಂದುವರೆದರೆ ಬೆಲೆ 132 ಡಾಲರ್ ತಲುಪುವ ಸಾಧ್ಯತೆಯಿದೆ. ಅಮೆರಿಕವು ಇರಾನ್‌ನ ದೊಡ್ಡ ನೌಕೆಗಳನ್ನು ನಾಶಪಡಿಸಿದ್ದರೂ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಬಳಿ ಇರುವ ಸಣ್ಣ ಮತ್ತು ವೇಗದ ದಾಳಿ ದೋಣಿಗಳು (Fast Attack Craft) ದೊಡ್ಡ ತಲೆನೋವಾಗಿ ಪರಿಣಮಿಸಿವೆ.

ಇವು ಕಿರಿದಾದ ಜಲಸಂಧಿಯಲ್ಲಿ ಅಡಗಿಕೊಂಡು ಕ್ಷಿಪಣಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. ಕಲ್ಲಿನ ಭೂಪ್ರದೇಶದ ಭೂಗತ ಸೌಲಭ್ಯಗಳಲ್ಲಿ ಇವುಗಳನ್ನು ಅಡಗಿಸಿಡಲಾಗಿದ್ದು, ಪತ್ತೆಹಚ್ಚುವುದು ಕಷ್ಟಕರವಾಗಿದೆ. ಫೆಬ್ರವರಿ 28 ರಂದು ಸಂಘರ್ಷ ಆರಂಭವಾಗುವ ಮೊದಲು ಪ್ರತಿದಿನ ಸುಮಾರು 125 ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುತ್ತಿದ್ದವು. ಆದರೆ ಈಗಿನ ಉದ್ವಿಗ್ನತೆಯಿಂದಾಗಿ ಈ ಸಂಖ್ಯೆ ಏಕ ಅಂಕೆಗೆ ಕುಸಿದಿದೆ.

ಜಾಗತಿಕ ತೈಲ ಪೂರೈಕೆಯಲ್ಲಿ ಸುಮಾರು ಶೇ.20 ನಷ್ಟು ಕೊರತೆ ಉಂಟಾಗುವ ಆತಂಕವಿದ್ದು, ಇದು ಹಿಂದಿನ ಎಲ್ಲಾ ಇಂಧನ ಬಿಕ್ಕಟ್ಟುಗಳಿಗಿಂತ ಭೀಕರವಾಗಿರಲಿದೆ ಎಂದು ವಿಶ್ಲೇಷಿಸಲಾಗಿದೆ. ಹಾರ್ಮುಜ್ ಜಲಸಂಧಿಯು ಕೇವಲ 20 ಮೈಲುಗಳಷ್ಟು ಅಗಲವಿದ್ದು, ಇದು ಜಗತ್ತಿನ ಕುತ್ತಿಗೆಯಂತಿದೆ. ಟ್ರಂಪ್ ಅವರ ನೇರ ಬೆದರಿಕೆ ಮತ್ತು ಇರಾನ್‌ನ ರಹಸ್ಯ ನೌಕಾ ತಂತ್ರಗಳು ಮುಖಾಮುಖಿಯಾಗುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಈ ಪ್ರದೇಶವು ಜಾಗತಿಕ ಮಹಾಯುದ್ಧದ ಕಿಡಿಯಾಗುವ ಲಕ್ಷಣಗಳು ದಟ್ಟವಾಗಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಜನ ನಾಯಗನ್’ ಬೆನ್ನಲ್ಲೇ ‘ವಾರಣಾಸಿ’ ಚಿತ್ರಕ್ಕೂ ಲೀಕ್ ಕಾಟ; ಪ್ರಮುಖ ದೃಶ್ಯವೇ ಸೋರಿಕೆ – Kannada News | Rajamouli’s ‘Varanasi’ Faces Devastating Leak: Action Scenes Emerge Online

‘ಜನ ನಾಯಗನ್’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈ ನಿರೀಕ್ಷೆಗಳನ್ನು ಕೆಲ ಕಾಣದ ಕೈಗಳು ಹಾಳು ಮಾಡಿವೆ. ಸಿನಿಮಾ ರಿಲೀಸ್​​ಗೂ ಮೊದಲೇ ಪ್ರಮುಖ ದೃಶ್ಯಗಳನ್ನು ಲೀಕ್ ಮಾಡಲಾಯಿತು. ಈಗ ಎಸ್​​ಎಸ್​ ರಾಜಮೌಳಿ (SS Rajamouli) ನಿರ್ದೇಶನದ ‘ವಾರಣಾಸಿ’ ಚಿತ್ರಕ್ಕೂ ಇದೇ ರೀತಿಯ ತೊಂದರೆ ಎದುರಾಗಿದೆ. ಸಿನಿಮಾದ ಕೆಲ ಆ್ಯಕ್ಷನ್ ದೃಶ್ಯಗಳನ್ನು ಸೋರಿಕೆ ಮಾಡಲಾಗಿದೆ. ಇದು ಚಿತ್ರತಂಡದ ಚಿಂತೆ ಹೆಚ್ಚಿಸಿದೆ.

ರಾಜಮೌಳಿ ಅವರು ತಮ್ಮ ಸಿನಿಮಾ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಲು ಬಯಸುತ್ತಾರೆ. ಯಾವುದೇ ಘೋಷಣೆ ಇದ್ದರೂ ದೊಡ್ಡ ಮಟ್ಟದಲ್ಲಿ ಮಾಡಲು ಅವರು ಬಯಸುತ್ತಾರೆ. ಈಗ ಈ ಎಲ್ಲಾ ಎಗ್ಸೈಟ್​​ಮೆಂಟ್​​ಗಳನ್ನು ಹಾಳು ಮಾಡುವ ಕೆಲಸ ಆಗುತ್ತಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸಿನಿಮಾದ ಸೆಟ್ ಹಾಕಿ ಶೂಟ್ ಮಾಡುತ್ತಿದ್ದರೂ ಕೆಲವರು ಪ್ರಮುಖ ದೃಶ್ಯಗಳನ್ನು ಲೀಕ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಆ್ಯಕ್ಷನ್ ದೃಶ್ಯ ಶೂಟ್ ಮಾಡಲಾಗಿದೆ. ಅವುಗಳನ್ನು ಸೋರಿಕೆ ಮಾಡಲಾಗಿದೆ. ಈ ಮೊದಲು ವಿದೇಶದಲ್ಲಿ ಶೂಟ್ ಮಾಡಿದ ದೃಶ್ಯಗಳನ್ನು ಕೂಡ ಲೀಕ್ ಮಾಡಲಾಗಿತ್ತು.

ದೊಡ್ಡ ಸಿನಿಮಾಗಳ ಬಗ್ಗೆ ಎಲ್ಲರೂ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಹೀಗಾಗಿ, ಈ ರೀತಿಯ ದೃಶ್ಯಗಳನ್ನು ಲೀಕ್ ಮಾಡಿದರೆ ಆ ಪೇಜ್​​ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂಬಾಲಕರು ಸಿಗುತ್ತಾರೆ. ಹೀಗಾಗಿ ಆ ರೀತಿ ಮಾಡಲಾಗಿದೆ ಎನ್ನಲಾಗಿದೆ.

ರಾಜಮೌಳಿ ಸಿನಿಮಾ ಆಲೋಚನೆಗಳು ಬೇರೆಯದೇ ರೀತಿ ಇರುತ್ತವೆ. ಸಾಮಾನ್ಯ ದೃಶ್ಯಗಳನ್ನು ವಿಎಫ್​ಎಕ್ಸ್ ಬಳಸಿ ಅದ್ದೂರಿಯಾಗಿ ಕಾಣುವಂತೆ ಮಾಡುತ್ತಾರೆ. ಹೀಗಾಗಿ, ಲೀಕ್ ಆಗುವ ದೃಶ್ಯಗಳನ್ನು ನೋಡಿದರೂ ಏನೂ ವಿಶೇಷ ಎನಿಸುವುದಿಲ್ಲ. ಸಿನಿಮಾ ಮೇಲಿನ ನಿರೀಕ್ಷೆ ಇದರಿಂದ ಕಡಿಮೆ ಆಗುವ ಭಯ ರಾಜಮೌಳಿ ಅವರನ್ನು ಬಹುವಾಗಿ ಕಾಡುತ್ತಿದೆ.

ಇದನ್ನೂ ಓದಿ: ಜೂ ಎನ್​​ಟಿಆರ್ ಋಣ ತೀರಿಸಲಿರುವ ರಾಜಮೌಳಿ, ‘ವಾರಣಾಸಿ’ಯಲ್ಲಿ ಸರ್ಪ್ರೈಸ್

‘ವಾರಣಾಸಿ’ ಸಿನಿಮಾಗೆ ರಾಜಮೌಳಿ ನಿರ್ದೇಶನ ಇದೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಮೊದಲಾದವರು ನಟಿಸಿದ್ದಾರೆ. ಮುಂದಿನ ವರ್ಷ ಏಪ್ರಿಲ್​​ನಲ್ಲಿ ಚಿತ್ರ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

33 ಕೋಟಿ ದೇವತೆಗಳಿದ್ದರೂ ಒಬ್ಬನೇ ದೇವರನ್ನು ಹೃದಯದಲ್ಲಿ ಪ್ರತಿಷ್ಠಾಪಿಸುವುದು ಯಾಕೆ ಮುಖ್ಯ?: ಇಲ್ಲಿದೆ ಅಸಲಿ ಕಾರಣ

ಬೆಂಗಳೂರು, ಏ.14: ಏಕದೇವೋಪಾಸನೆಯ ಮಹತ್ವದ ಬಗ್ಗೆ ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಹೇಳಿದ್ದಾರೆ. ಹಿಂದೂ ಸನಾತನ ಸಂಸ್ಕೃತಿಯಲ್ಲಿ 33 ಕೋಟಿ ದೇವತೆಗಳಿದ್ದರೂ, ಜೀವನದಲ್ಲಿ ಏಕದೇವೋಪಾಸನೆಯನ್ನು ಅಳವಡಿಸಿಕೊಂಡರೆ ಅದು ಅತ್ಯಂತ ಸಾರ್ಥಕವಾಗುತ್ತದೆ ಎಂದು ತಿಳಿಸಲಾಗಿದೆ. “ಸರ್ವದೇವ ನಮಸ್ಕಾರಾಃ ಕೇಶವಂ ಪ್ರತಿಗಚ್ಛತಿ” ಎಂಬ ಮಾತಿನಂತೆ, ಎಲ್ಲಾ ದೇವರುಗಳಿಗೆ ನಮಸ್ಕಾರ ಸಲ್ಲಿಸಿದರೂ, ಒಬ್ಬ ದೇವರನ್ನು ಹೃದಯದಲ್ಲಿ ಸ್ಥಾಪಿಸಿಕೊಳ್ಳುವುದು ಮುಖ್ಯ. ಏಕದೇವೋಪಾಸನೆಯು ನಮ್ಮಲ್ಲಿ ಏಕಾಗ್ರತೆ ಮತ್ತು ನಂಬಿಕೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಇದು ನಮ್ಮ ಜೀವನದಲ್ಲಿ ಬರುವ ಕಂಟಕಗಳು, ಕರ್ಮಗಳು ಸರಿಯಾದ ದಾರಿಯಲ್ಲಿ ಸಾಗಲು ಸಹಾಯ ಮಾಡುತ್ತದೆ. ಗಣಪತಿ, ಶಿವ, ವಿಷ್ಣು, ವೆಂಕಟೇಶ್ವರ ಮುಂತಾದ ಅನೇಕ ದೇವರುಗಳಲ್ಲಿ ನಿಮಗೆ ಇಷ್ಟವಾದ ಅಥವಾ ಕುಲದೇವರನ್ನು ಆರಿಸಿ, ನಿರಂತರವಾಗಿ ಅವರ ನಾಮಸ್ಮರಣೆ, ದರ್ಶನ ಹಾಗೂ ಪೂಜೆಯನ್ನು ಯಥಾವಿಧಿಯಾಗಿ ಮಾಡುವುದರಿಂದ ಶುಭ ಫಲಗಳು ದೊರೆಯುತ್ತವೆ. ಒಂದೇ ದೋಣಿಯಲ್ಲಿ ಪ್ರಯಾಣಿಸಿದಂತೆ, ಒಂದೇ ದೇವರಿಗೆ ನಿಷ್ಠೆ ತೋರುವುದರಿಂದ ಆಧ್ಯಾತ್ಮಿಕವಾಗಿ ದಡ ಸೇರಲು ಸಾಧ್ಯ ಎಂದು ವಿವರಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಕ್ಷಯ ತೃತೀಯಕ್ಕೆ ಬಂಗಾರ ದುಬಾರಿ? ಚಿನ್ನದ ದರದಲ್ಲಿ ಹಾವು-ಏಣಿ ಆಟ: ಆಫರ್‌ಗಳ ಮೊರೆ ಹೋದ ಗ್ರಾಹಕ! – Kannada News | Akshaya Tritiya 2026: Gold Prices Fluctuate Amid Global Tensions; Jewelers Offer Massive Discounts to Attract Buyers

ಬೆಂಗಳೂರು, ಏಪ್ರಿಲ್ 14: ಶ್ರೇಷ್ಠ ದಿನವಾದ ಅಕ್ಷಯ ತೃತೀಯಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಆದರೆ, ಹಳದಿ ಲೋಹದ ಬೆಲೆ ಮಾತ್ರ ಸ್ಥಿರವಾಗಿಲ್ಲದೆ ಗ್ರಾಹಕರನ್ನು ಚಿಂತೆಗೆ ಈಡುಮಾಡಿದೆ. ಕಳೆದ ಒಂದು ತಿಂಗಳಿನಿಂದ ಗಲ್ಫ್ ರಾಷ್ಟ್ರಗಳ ಯುದ್ಧ ಮತ್ತು ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಚಿನ್ನದ ದರ (Gold Price) ಹಾವು-ಏಣಿ ಆಟದಂತೆ ಏರಿಕೆ ಮತ್ತು ಇಳಿಕೆ ಕಾಣುತ್ತಿದೆ.

ಚಿನ್ನದ ದರ ಏರಿಕೆಯ ಆತಂಕ

ಯುದ್ಧದ ಕದನ ವಿರಾಮದ ಸುದ್ದಿಗಳ ಬೆನ್ನಲ್ಲೇ ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಮಾರ್ಚ್ ತಿಂಗಳ ಆರಂಭದಲ್ಲಿ ಸ್ಥಿರವಾಗಿದ್ದ ದರ, ಏಪ್ರಿಲ್ ವೇಳೆಗೆ ಗಮನಾರ್ಹ ಏರಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 13,000 ರೂ. ಗಡಿ ದಾಟಿ ಮುನ್ನುಗ್ಗುತ್ತಿದ್ದು, ಅಕ್ಷಯ ತೃತೀಯದ ವೇಳೆಗೆ ಇದು ಮತ್ತಷ್ಟು ದುಬಾರಿಯಾಗುವ ಆತಂಕ ಮೂಡಿದೆ.

ಗ್ರಾಹಕರನ್ನು ಸೆಳೆಯಲು ಆಫರ್‌ಗಳ ಸುರಿಮಳೆ!

ಬೆಲೆ ಏರಿಕೆಯ ನಡುವೆಯೂ ಗ್ರಾಹಕರನ್ನು ಆಕರ್ಷಿಸಲು ಜ್ಯುವೆಲರಿ ಮಳಿಗೆಗಳು ಭರ್ಜರಿ ಆಫರ್‌ಗಳನ್ನು ಘೋಷಿಸಿವೆ. ಸದ್ಯ ಬೆಂಗಳೂರಿನಲ್ಲಿ ಆಭರಣ ಮಳಿಗೆಗಳು ನೀಡುತ್ತಿರುವ ಆಫರ್​ ವಿವರ ಹೀಗಿದೆ;

  • ಚಿನ್ನದ ಆಭರಣಗಳ ಮೇಲೆ ಶೇ 20 ರಷ್ಟು ವೇಸ್ಟೇಜ್ (ಸೇತುವಾರಿ) ರಿಯಾಯಿತಿ.
  • ಹಳೆ ಚಿನ್ನದ ವಿನಿಮಯದ ಮೇಲೆ ಪ್ರತಿ ಗ್ರಾಂಗೆ 100 ರೂಪಾಯಿ ಹೆಚ್ಚುವರಿ ಲಾಭ.
  • ಡೈಮಂಡ್ ಮತ್ತು ಅನ್‌ಕಟ್ ಡೈಮಂಡ್ ಆಭರಣಗಳ ಮೇಲೆ ಶೇ 12.5 ರಷ್ಟು ಡಿಸ್ಕೌಂಟ್.
  • ಅಕ್ಷಯ ತೃತೀಯದ ದಿನದ ದರ ಏರಿಕೆಯಿಂದ ಬಚಾವಾಗಲು ಈಗಲೇ ‘ಪ್ರೀ-ಬುಕ್ಕಿಂಗ್’ ಮಾಡುವ ಸೌಲಭ್ಯ.

ಏಪ್ರಿಲ್ 13 ರಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನದ ದರದಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಂಡುಬಂದಿತ್ತು. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ಅಂದಾಜು 13,975 ರೂ. (10 ಗ್ರಾಂಗೆ 1,39,750 ರೂ.) ಇದ್ದರೆ, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 15,246 ರೂ. (10 ಗ್ರಾಂಗೆ 1,52,460 ರೂ.) ನಷ್ಟಿತ್ತು. ಹಿಂದಿನ ದಿನಕ್ಕೆ, ಅಂದರೆ ಏಪ್ರಿಲ್ 12ಕ್ಕೆ ಹೋಲಿಸಿದರೆ ಪ್ರತಿ 10 ಗ್ರಾಂಗೆ ಸುಮಾರು 350 ರಿಂದ 400 ರೂಪಾಯಿಗಳಷ್ಟು ಕುಸಿತ ದಾಖಲಾಗಿದೆ.

ಇದನ್ನೂ ಓದಿ: ಚಿನ್ನದ ದರ ಹಾವು-ಏಣಿ ಆಟದ ಮಧ್ಯೆ ಬೆಂಗಳೂರಿನಲ್ಲಿ ಅಕ್ಷಯ ತೃತೀಯಕ್ಕೆ ಈಗಲೇ ಗೋಲ್ಡ್ ಬುಕ್ಕಿಂಗ್ ಜೋರು! ಜ್ಯುವೆಲ್ಲರಿಗಳಲ್ಲಿ ಕ್ಯೂ

ಏಪ್ರಿಲ್ 19 ರಂದು ಅಕ್ಷಯ ತೃತೀಯ ಇದೆ. ಹೀಗಾಗಿ, ಒಟ್ಟಿನಲ್ಲಿ ಬೆಲೆ ಎಷ್ಟೇ ಏರಿಕೆಯಾದರೂ ಅಕ್ಷಯ ತೃತೀಯದಂದು ಸ್ವಲ್ಪವಾದರೂ ಚಿನ್ನ ಖರೀದಿಸಬೇಕು ಎಂಬ ಪದ್ಧತಿಯನ್ನು ಅನುಸರಿಸುವ ಗ್ರಾಹಕರು ಈಗಿನಿಂದಲೇ ಮಳಿಗೆಗಳಿಗೆ ಭೇಟಿ ನೀಡಿ ಪ್ಲಾನ್ ಮಾಡುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Horoscope: ಸೂರ್ಯನ ಸಂಚಾರ ಬದಲಾವಣೆ; ಈ ರಾಶಿಯವರಿಗೆ ಸಿಗಲಿದೆ ಬಲವಾದ ಯಶಸ್ಸು!

ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಟಿವಿ9 ಕನ್ನಡದ ಮೂಲಕ 14 ಏಪ್ರಿಲ್ 2026, ಮಂಗಳವಾರದ ದೈನಂದಿನ ರಾಶಿಫಲವನ್ನು ನೀಡಿದ್ದಾರೆ. ಈ ದಿನವು ಪರಾಭವನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷ ದ್ವಾದಶಿ, ಶತಭಿಷ ನಕ್ಷತ್ರ, ಶುಕ್ಲ ಯೋಗ ಮತ್ತು ಕೌಲವಕರಣದೊಂದಿಗೆ ಕೂಡಿರುತ್ತದೆ. ದಿನದ ರಾಹುಕಾಲವು ಮಧ್ಯಾಹ್ನ 3:25 ರಿಂದ ಸಂಜೆ 4:58 ರವರೆಗೆ ಇರುತ್ತದೆ, ಆದರೆ ಸರ್ವಸಿದ್ಧಿ ಕಾಲ ಸಂಕಲ್ಪ ಕಾಲವು ಮಧ್ಯಾಹ್ನ 12:20 ರಿಂದ 1:53 ರವರೆಗೆ ಇರುತ್ತದೆ. ಇಂದು ಡಾ. ಅಂಬೇಡ್ಕರ್ ಜಯಂತೋತ್ಸವ ಮತ್ತು ಸೌರ ಯುಗಾದಿಯನ್ನು ಸಹ ಆಚರಿಸಲಾಗುತ್ತಿದೆ. ಬೆಳಿಗ್ಗೆ 9:38 ಕ್ಕೆ ಸೂರ್ಯ ಭಗವಾನ್ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರಯಾಣ ಬೆಳೆಸುತ್ತಾರೆ, ಇದು ಮೇಷ ಸಂಕ್ರಾಂತಿ ಮತ್ತು ಬಂಗಾಳಿ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ರವಿಯು ಮೇಷ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿರುವುದರಿಂದ ಬಲಶಾಲಿಯಾಗಿರುತ್ತಾನೆ. ಡಾ ಬಸವರಾಜ ಗುರೂಜಿ ಅವರು ಪ್ರತಿಯೊಂದು ರಾಶಿಚಕ್ರದ ಚಿಹ್ನೆಗೆ ನಿರ್ದಿಷ್ಟವಾದ ಆರ್ಥಿಕ ಸ್ಥಿತಿ, ಆರೋಗ್ಯ, ಕುಟುಂಬ ಸಂಬಂಧಗಳು, ವೃತ್ತಿಪರ ಅವಕಾಶಗಳು, ಅದೃಷ್ಟದ ಬಣ್ಣಗಳು, ಸಂಖ್ಯೆಗಳು, ಪ್ರಯಾಣದ ದಿಕ್ಕುಗಳು ಮತ್ತು ಶುಭ ಮಂತ್ರಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದ್ದಾರೆ. ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸುವವರಿಗೆ ಶುಭ ಹಾರೈಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಸಿಲಿನ ತಾಪಕ್ಕೆ ಬೆಂದ ಕರುನಾಡು: ಈ ಜಿಲ್ಲೆಗಳಲ್ಲಿ ಸಂಜೆ ಮಳೆ ಸಂಭವ; ಹವಾಮಾನ ಇಲಾಖೆ ನೀಡಿದ ಎಚ್ಚರಿಕೆ ಏನು? – Kannada News | Bengaluru Weather Today: Scorching 37°C Heat, Karnataka Temperature Alert and Tips

ಬೆಂಗಳೂರು, ಏ.14: ಇಂದು (ಏ.14) ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಬಿಸಿಲಿನ ಶಾಖ ಹೆಚ್ಚಾಗಲಿದೆ. ಈ ಬಗ್ಗೆ ಹವಾಮಾನ ವರದಿ ಮಾಹಿತಿ ನೀಡಿದೆ. ರಾಜಧಾನಿಯಲ್ಲಿ ಇಂದು ಗರಿಷ್ಠ ತಾಪಮಾನ 35°C ರಿಂದ 37°C ಆಸುಪಾಸಿನಲ್ಲಿ ಇರಲಿದೆ. ಬೆಳಿಗ್ಗೆಯಿಂದಲೇ ಬಿಸಿಲ ಧಗೆ ಇರಲಿದ್ದು, ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಕಂಡುಬರಬಹುದು ಎಂದು ಹೇಳಲಾಗಿದೆ.

ಇನ್ನು ಮಂಗಳೂರು, ಉಡುಪಿ ಮತ್ತು ಕಾರವಾರ ಭಾಗಗಳಲ್ಲಿ ತಾಪಮಾನದ ಜೊತೆಗೆ ತೇವಾಂಶ ಹೆಚ್ಚಿರಲಿದ್ದು, ಸೆಖೆಯ ಅನುಭವ ಜಾಸ್ತಿ ಇರಲಿದೆ. ಗರಿಷ್ಠ ತಾಪಮಾನ 34°C ದಾಖಲಾಗುವ ಸಾಧ್ಯತೆ ಇದೆ. ಕಲಬುರಗಿ, ರಾಯಚೂರು, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ತೀವ್ರವಾಗಿರಲಿದೆ. ಇಲ್ಲಿ ತಾಪಮಾನವು 40°C ದಾಟುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಾದ ಕೊಡಗು, ಚಾಮರಾಜನಗರ ಮತ್ತು ಮೈಸೂರಿನ ಕೆಲವು ಭಾಗಗಳಲ್ಲಿ ಸಂಜೆ ಅಥವಾ ರಾತ್ರಿ ವೇಳೆಗೆ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ನಗರ ಗರಿಷ್ಠ ತಾಪಮಾನ ಕನಿಷ್ಠ ತಾಪಮಾನ ಸ್ಥಿತಿ
ಬೆಂಗಳೂರು 36°C 22°C ಶುಭ್ರ ಆಕಾಶ / ಸಂಜೆ ಮೋಡ
ಮೈಸೂರು 37°C 21°C ಸಾಧಾರಣ ಮೋಡ
ಮಂಗಳೂರು 34°C 26°C ಸೆಖೆ ಮತ್ತು ಆರ್ದ್ರತೆ
ಕಲಬುರಗಿ 41°C 25°C ತೀವ್ರ ಬಿಸಿಲು
ಹುಬ್ಬಳ್ಳಿ-ಧಾರವಾಡ 38°C 23°C ಬಿಸಿಲು

ಹೊರಗೆ ಹೋಗುವವರು ಹೆಚ್ಚಿನ ಪ್ರಮಾಣದಲ್ಲಿ ನೀರು, ಎಳನೀರು ಅಥವಾ ಮಜ್ಜಿಗೆ ಸೇವಿಸಿ. ಮಧ್ಯಾಹ್ನ 12:00 ರಿಂದ 4:00 ರವರೆಗೆ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ತಜ್ಞರು ಹೇಳಿದ್ದಾರೆ. ಬಿಸಿಲಿನ ತಾಪ ಹೆಚ್ಚಿರುವುದರಿಂದ ಎಣ್ಣೆ ಪದಾರ್ಥಗಳಿಗಿಂತ ತಂಪು ಪಾನೀಯ ಹಾಗೂ ಹಣ್ಣುಗಳಿಗೆ ಆದ್ಯತೆ ನೀಡಿ ಎಂದು ಹೇಳಿದ್ದಾರೆ. ಕೊಡಗಿನಲ್ಲಿ ಇಂದು ಗರಿಷ್ಠ ತಾಪಮಾನ 34°C ಮತ್ತು ಕನಿಷ್ಠ 21°C ಇರಲಿದೆ. ಹಗಲಿನಲ್ಲಿ ಶುಭ್ರ ಸೂರ್ಯನ ಪ್ರಕಾಶವಿರಲಿದ್ದು, ರಾತ್ರಿ ವೇಳೆ ಮೋಡ ಕವಿದ ವಾತಾವರಣದೊಂದಿಗೆ ಶೇ. 20ರಷ್ಟು ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ದಿನ ಭವಿಷ್ಯ: ಇಂದು ಈ ರಾಶಿಯವರಿಂದ ಯಶಸ್ಸಿಗೆ ಪ್ರಯತ್ನ, ದೈವಾನುಕೂಲದಿಂದ ಕಾರ್ಯಸಿದ್ಧಿ

ಮೈಸೂರಿನ ಇಲ್ಲಿ ಬಿಸಿಲಿನ ತಾಪ ಹೆಚ್ಚಿರಲಿದ್ದು, ಗರಿಷ್ಠ ತಾಪಮಾನ 36°C ದಾಖಲಾಗಲಿದೆ. ದಿನವಿಡೀ ಬಿಸಿಲಿದ್ದರೂ ಸಂಜೆ ವೇಳೆಗೆ ಸ್ವಲ್ಪ ಮೋಡ ಕವಿಯುವ ನಿರೀಕ್ಷೆಯಿದೆ. ಚಿಕ್ಕಮಗಳೂರಿನಲ್ಲಿ ಗರಿಷ್ಠ ತಾಪಮಾನ 33°C ವರೆಗೆ ಇರಲಿದ್ದು, ಹವಾಮಾನವು ಸಾಮಾನ್ಯವಾಗಿ ಶುಭ್ರವಾಗಿರಲಿದೆ. ಸಂಜೆ ಅಥವಾ ರಾತ್ರಿ ವೇಳೆಗೆ ಸಾಧಾರಣ ಮೋಡಗಳಿರಬಹುದು. ಇನ್ನು ಉತ್ತರ ಕರ್ನಾಟಕದಲ್ಲಿ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗುವ ಮುನ್ಸೂಚನೆಯಿದೆ. ಕಲಬುರಗಿ ಮತ್ತು ಬಾಗಲಕೋಟೆ ಭಾಗಗಳಲ್ಲಿ ಗರಿಷ್ಠ ತಾಪಮಾನ 41°C ದಾಟುವ ಮೂಲಕ ಬಿಸಿಗಾಳಿಯ ಪ್ರಭಾವ ಇರಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:18 am, Tue, 14 April 26

Source link

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಸತತ 2ನೇ ವರ್ಷವೂ ಶುಲ್ಕ ಏರಿಕೆ; ಪೋಷಕರ ಜೇಬಿಗೆ ಕತ್ತರಿ! – Kannada News | Karnataka Engineering Fee Hike: Students Shocked as Govt Increases Fees by 7.5 percent for Second Consecutive Year

ಬೆಂಗಳೂರು, ಏಪ್ರಿಲ್ 14: ಕರ್ನಾಟಕದಲ್ಲಿ (Karnataka) ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲೇ ತಾಂತ್ರಿಕ ಶಿಕ್ಷಣದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. 2026-27ನೇ ಸಾಲಿನ ಎಂಜಿನಿಯರಿಂಗ್ (Engineering) ಕೋರ್ಸ್‌ಗಳ ಶುಲ್ಕವನ್ನು ಶೇ 7.5 ರಷ್ಟು ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದ್ದು, ಮಧ್ಯಮ ವರ್ಗದ ಪೋಷಕರಿಗೆ ಇದು ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.

ಶುಲ್ಕದ ಪಟ್ಟಿ ಹೀಗಿದೆ

ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ (CET) ಸೀಟು ಪಡೆಯುವ ವಿದ್ಯಾರ್ಥಿಗಳು ಇನ್ನು ಮುಂದೆ ಹೆಚ್ಚಿನ ಹಣ ಪಾವತಿಸಬೇಕಿದೆ.

  • ಟೈಪ್-1 ಕಾಲೇಜುಗಳು: ಪ್ರಸ್ತುತ ಇರುವ 81,800 ರೂ. ಶುಲ್ಕವು ಇನ್ನು ಮುಂದೆ 87,935 ರೂ. ಗೆ ಏರಿಕೆಯಾಗಲಿದೆ.
  • ಟೈಪ್-2 ಕಾಲೇಜುಗಳು: ಪ್ರಸ್ತುತ ಇರುವ 91,000 ರೂ. ಶುಲ್ಕವು ಇನ್ನು ಮುಂದೆ 97,825 ರೂ. ಗೆ ಏರಲಿದೆ.

ಸತತ ಏರಿಕೆಗೆ ವಿದ್ಯಾರ್ಥಿಗಳು, ಪೋಷಕರ ಆಕ್ರೋಶ

ಕಳೆದ 2025-26ನೇ ಸಾಲಿನಲ್ಲಿಯೂ ಸಹ ಶುಲ್ಕವನ್ನು ಶೇ 7.5 ರಷ್ಟು ಹೆಚ್ಚಿಸಲಾಗಿತ್ತು. ಇದೀಗ ಸತತ ಎರಡನೇ ವರ್ಷವೂ ಶುಲ್ಕ ಏರಿಕೆಯಾಗುತ್ತಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿದ್ದೇವೆ. ಈಗ ಶಿಕ್ಷಣದ ಶುಲ್ಕವನ್ನೂ ಹೆಚ್ಚಿಸಿದರೆ ಉನ್ನತ ಶಿಕ್ಷಣ ಸಾಮಾನ್ಯರಿಗೆ ಗಗನಕುಸುಮವಾಗಲಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಪಿಯುಸಿ ನಂತರ ವೃತ್ತಿಜೀವನಕ್ಕೆ ಬಿ.ಟೆಕ್ ಅಥವಾ ಪಾಲಿಟೆಕ್ನಿಕ್, ಯಾವುದು ಉತ್ತಮ?

ಈ ವರ್ಷ ಪಿಯುಸಿ ಬಳಿಕ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಶುಲ್ಕ ಏರಿಕೆ ಮಾಡುವುದು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗಬಹುದು. ಸರ್ಕಾರ ಕೂಡಲೇ ಈ ಪ್ರಸ್ತಾವನೆಯನ್ನು ಮರುಪರಿಶೀಲಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link