All posts by nagaraj11081993

ಮುಸ್ತಾಫಿಜುರ್ ಐಪಿಎಲ್​ನಿಂದ ಔಟ್; ಭಾರತದಲ್ಲಿ ಟಿ20 ವಿಶ್ವಕಪ್ ಆಡುವುದಿಲ್ಲ ಎಂದ ಬಾಂಗ್ಲಾ – Kannada News | Mustafizur IPL 2026 Exclusion: Bangladesh Threatens T20 World Cup Boycott in India

ಬಾಂಗ್ಲಾದೇಶದ ಎಡಗೈ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ 2026 ರಿಂದ ಹೊರಗಿಟ್ಟಿರುವುದು ಈಗ ದೊಡ್ಡ ಕೋಲಾಹಲಕ್ಕೆ ಕಾರಣವಾಗಿದೆ. ಮುಸ್ತಾಫಿಜುರ್ ಅವರನ್ನು ಐಪಿಎಲ್​ನಿಂದ ಹೊರಗಿಟ್ಟ ನಂತರ, ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ಸರಣಿಯನ್ನು ರದ್ದುಗೊಳಿಸಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಇದೆಲ್ಲದರ ನಡುವೆ ಈ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಪಾಲ್ಗೊಳ್ಳಲು ಬಾಂಗ್ಲಾದೇಶ ತಂಡ ಭಾರತಕ್ಕೆ ಪ್ರಯಾಣಿಸದಿರಲು ನಿರ್ಧರಿಸಿದ್ದು, ಈ ವಿಚಾರವನ್ನು ಐಸಿಸಿಗೆ ಮುಟ್ಟಿಸುವುದಾಗಿ ಬಿಸಿಬಿ ಮುಖ್ಯಸ್ಥ ಅಮೀನುಲ್ ಇಸ್ಲಾಂ ಬುಲ್ಬುಲ್ ಹೇಳಿಕೆ ನೀಡಿದ್ದಾರೆ.

ಭಾರತಕ್ಕೆ ಬರುವುದಿಲ್ಲ ಬಾಂಗ್ಲಾ ತಂಡ?

ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್​ನಿಂದ ಕೈಬಿಟ್ಟ ನಂತರ ಮಾಧ್ಯಮಗಳಿಗೆ ಮಾತನಾಡಿರುವ ಬಿಸಿಬಿ ಮುಖ್ಯಸ್ಥ ಅಮೀನುಲ್ ಇಸ್ಲಾಂ ಬುಲ್ಬುಲ್, ಟಿ20 ವಿಶ್ವಕಪ್ ಬಗ್ಗೆ ಐಸಿಸಿ ಜೊತೆ ಚರ್ಚಿಸುವುದಾಗಿ ಹೇಳಿದ್ದಾರೆ. ‘ಐಸಿಸಿ ಟಿ20 ವಿಶ್ವಕಪ್ ಆಯೋಜಿಸುತ್ತದೆ ಮತ್ತು ಭಾರತ ಅದರ ಆತಿಥೇಯವಾಗಿದೆ. ನಾವು ಏನಾದರೂ ಚರ್ಚಿಸಬೇಕಾದರೆ, ನಾವು ಐಸಿಸಿ ಜೊತೆ ಚರ್ಚಿಸುತ್ತೇವೆ’ ಎಂದಿದ್ದಾರೆ. ಬಾಂಗ್ಲಾದೇಶದ ಮಾಜಿ ಕ್ರೀಡಾ ಸಚಿವಾಲಯದ ಸಲಹೆಗಾರ ಆಸಿಫ್ ಮಹಮೂದ್ ಕೂಡ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್​ನಿಂದ ಹೊರಗಿಟ್ಟಿರುವ ಬಗ್ಗೆ ಹೇಳಿಕೆ ನೀಡಿದ್ದು, ‘ಭಾರತ ಐಸಿಸಿ ಕಾರ್ಯಕ್ರಮವನ್ನು ಆಯೋಜಿಸಲು ಸಂಪೂರ್ಣವಾಗಿ ಅನರ್ಹ. ಇಂತಹ ಧರ್ಮಾಂಧ ದೇಶವು ಎಂದಿಗೂ ಅಂತರರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸಬಾರದು. ಬಿಸಿಸಿಐ ವಿರುದ್ಧ ಹೋರಾಡಲು ಬಿಸಿಸಿಬಿ ಸರ್ಕಾರ ಮತ್ತು ಇತರ ಕ್ರಿಕೆಟ್ ಮಂಡಳಿಗಳೊಂದಿಗೆ ತೊಡಗಿಸಿಕೊಳ್ಳಬೇಕು. ಭಾರತವನ್ನು ಅಂತರರಾಷ್ಟ್ರೀಯ ಕ್ರೀಡಾಕೂಟಗಳಿಗೆ ಅನರ್ಹವೆಂದು ಘೋಷಿಸಬೇಕು’ ಎಂದು ಆಸಿಫ್ ಮಹಮೂದ್ ಹೇಳಿದ್ದಾರೆ.

ಐಪಿಎಲ್​ನಿಂದ ಮುಸ್ತಾಫಿಜುರ್ ಔಟ್

ವಾಸ್ತವವಾಗಿ 2026 ರ ಐಪಿಎಲ್ ಹರಾಜಿನಲ್ಲಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೆಕೆಆರ್ 9.2 ಕೋಟಿಗೆ ಖರೀದಿಸಿತ್ತು. ಆದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ, ಕೆಕೆಆರ್ ಫ್ರಾಂಚೈಸಿ ವಿರುದ್ಧ ಭಾರತೀಯರು ಆಕ್ರೋಶ ಹೊರಹಾಕುತ್ತಿದ್ದರು. ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್​ನಿಂದ ಹೊರಹಾಕಬೇಕು, ಇಲ್ಲದಿದ್ದರೆ ಐಪಿಎಲ್ ನಡೆಯಲು ಬಿಡುವುದಿಲ್ಲ ಎಂಬ ಕೂಗು ಜೋರಾಗಿ ಕೇಳಿಬಂದಿತ್ತು. ಅಂತಿಮವಾಗಿ ಬಿಸಿಸಿಐ, ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಕೈಬಿಡುವಂತೆ ಕೆಕೆಆರ್​ಗೆ ಆದೇಶಿಸಿತ್ತು. ಆ ಪ್ರಕಾರ, ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್​ನಿಂದ ಹೊರಹಾಕಲಾಗಿದೆ. ಇದರಿಂದ ಕೆರಳಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಮ್ಮ ತಂಡ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಪ್ರಯಾಣಿಸುವ ಬಗ್ಗೆ ಐಸಿಸಿ ಬಳಿ ಮಾತನಾಡಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿಕೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ಟ್ರೈಲರ್ ಬಿಡುಗಡೆ: ರೀಮೇಕಾ? ಸ್ವಮೇಕಾ? – Kannada News | Thalapathy Vijay starrer Jana Nayagan movie trailer released

ತಮಿಳಿನ ಸೂಪರ್ ಸ್ಟಾರ ನಟ ದಳಪತಿ ವಿಜಯ್ (Thalapathy Vijay) ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ‘ಜನ ನಾಯಗನ್’ ತಮ್ಮ ಕೊನೆಯ ಸಿನಿಮಾ ಎಂದು ಈಗಾಗಲೇ ಘೋಷಿಸಿದ್ದಾರೆ. ಇದೇ ಕಾರಣಕ್ಕೆ ‘ಜನ ನಾಯಗನ್’ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಇದೆ. ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದ್ದು, ಸಿನಿಮಾದ ಟ್ರೈಲರ್ ಇಂದು (ಜನವರಿ 03) ಬಿಡುಗಡೆ ಆಗಿದೆ. ‘ಜನ ನಾಯಗನ್’ ಸಿನಿಮಾ ತೆಲುಗು ಸಿನಿಮಾ ಒಂದರ ರೀಮೇಕ್ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಟ್ರೈಲರ್​​ನಲ್ಲಿ ಆ ಪ್ರಶ್ನೆಗೆ ಉತ್ತರ ದೊರೆತಿದೆ.

ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಟ್ರೈಲರ್, ವಿಜಯ್ ಅವರ ಈ ಹಿಂದಿನ ಸಿನಿಮಾಗಳ ಟೆಂಪ್ಲೆಟ್​​ನಲ್ಲಿಯೇ ಇದೆ. ಭರಪೂರ ಆಕ್ಷನ್, ಸ್ಲೋ ಮೋಷನ್ ವಾಕ್, ಎದುರು ನಿಂತಿರುವ ಪಾತ್ರಗಳಿಗಲ್ಲದೆ, ಅಭಿಮಾನಿಗಳಿಗಾಗಿ ಡೈಲಾಗ್​​ಗಳು, ಕೆಲವು ಹಾಸ್ಯ ದೃಶ್ಯಗಳು, ನಾಯಕಿಯೊಂದಿಗಿನ ಹಾಡಿನ ತುಣುಕು, ವಿನಾಕರಾಣ ಹಿಂಸೆಗಿಳಿವ ಬಾಲಿವುಡ್​ನಿಂದ ತಂದ ವಿಲನ್ ಹೀಗೆ ಎಲ್ಲವೂ ‘ಜನ ನಾಯಗನ್’ ಸಿನಿಮಾದ ಟ್ರೈಲರ್​​ನಲ್ಲಿಯೂ ಇದೆ.

‘ಜನ ನಾಯಗನ್’ ಸಿನಿಮಾ ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರೀಮೇಕ್ ಎಂಬ ಸುದ್ದಿ ಆರಂಭದಿಂದಲೂ ಹರಿದಾಡುತ್ತಿತ್ತು, ಸಿನಿಮಾದ ನಿರ್ದೇಶಕ ಎಚ್ ವಿನೋದ್, ‘ಇದು ರಿಮೇಕ್ ಎಂದು ಹೇಳಲಾಗದು, ಸಿನಿಮಾ ಬಿಡುಗಡೆ ಆದ ಮೇಲೆ ನಿಮಗೇ ಗೊತ್ತಾಗುತ್ತದೆ’ ಎಂದು ಅಡ್ಡ ಗೋಡೆ ಮೇಲೆ ದೀಪವಿಟ್ಟಿದ್ದರು. ಇದೀಗ ಟ್ರೈಲರ್ ನೋಡಿದವರಿಗೆ ಇದು ‘ಭಗವಂತ ಕೇಸರಿ’ ಸಿನಿಮಾದ್ದೇ ರೀಮೇಕ್ ಎಂಬುದು ಖಾತ್ರಿ ಆಗಿದೆ.

‘ಭಗವಂತ ಕೇಸರಿ’ ಸಿನಿಮಾನಲ್ಲಿ ಬಾಲಕೃಷ್ಣ ತಮ್ಮ ಸಾಕುಮಗಳನ್ನು ಸೈನ್ಯಕ್ಕೆ ಸೇರಿಸುವ ಪ್ರಯತ್ನದಲ್ಲಿರುತ್ತಾರೆ, ಅದಕ್ಕೆ ಕಾರಣವೂ ಇರುತ್ತದೆ. ‘ಜನ ನಾಯಗನ್’ ಸಿನಿಮಾನಲ್ಲಿಯೂ ಸಹ ವಿಜಯ್ ತಮ್ಮ ಮಗಳನ್ನು ಸೈನ್ಯಕ್ಕೆ ಸೇರಿಸುವ ಪ್ರಯತ್ನದಲ್ಲಿದ್ದಾರೆ. ತೆಲುಗಿನಲ್ಲಿ ಶ್ರೀಲೀಲಾ ನಟಿಸಿದ್ದ ಪಾತ್ರದಲ್ಲಿ ‘ಜನ ನಾಯಗನ್’ ಸಿನಿಮಾನಲ್ಲಿ ಮಮಿತಾ ಬಿಜು ನಟಿಸಿದ್ದಾರೆ. ಆದರೆ ಭಗವಂತ್ ಕೇಸರಿ ಸಿನಿಮಾನಲ್ಲಿ ಇಲ್ಲದ ರಾಜಕೀಯದ ಆಂಗಲ್ ಅನ್ನು ಎಳೆದು ತಂದಿದ್ದಾರೆ ನಿರ್ದೇಶಕ ಎಚ್ ವಿನೋದ್.

ವಿಜಯ್ ಅವರ ರಾಜಕೀಯ ಪಯಣಕ್ಕೆ ಬೇಕಾಗುವ ಸನ್ನಿವೇಶಗಳನ್ನು, ಸಂಭಾಷಣೆಗಳನ್ನು ನಿರ್ದೇಶಕ ವಿನೋದ್ ಸೃಷ್ಟಿಸಿರುವುದು ಟ್ರೈಲರ್​​ನಲ್ಲಿಯೇ ಕಾಣುತ್ತದೆ. ರಾಜಕಾರಣಿಗಳನ್ನೆಲ್ಲ ಅಪಹರಿಸಿ, ಕಟ್ಟಿ ಹಾಕಿ ಅವರನ್ನು ಹೊಡೆಯುತ್ತಾ ಬಡಿಯುತ್ತಾ ಅವರೆಲ್ಲ ಎಷ್ಟು ಭ್ರಷ್ಟರು ಎಂದು ತೆಗಳುತ್ತಾ, ಜನ ಸೇವೆ ಹೇಗೆ ಮಾಡಬೇಕೆಂದು ವಿಜಯ್ ಭಾಷಣ ಮಾಡುವ ದೃಶ್ಯವೂ ಸಹ ಟ್ರೈಲರ್​​ನಲ್ಲಿದೆ. ಇದರಿಂದಲೇ ತಿಳಿಯುತ್ತದೆ, ‘ಜನ ನಾಯಗನ್’ ಸಿನಿಮಾದ ಹಿಡನ್ ಅಜೆಂಡ.

‘ಜನ ನಾಯಗನ್’ ಸಿನಿಮಾನಲ್ಲಿ ಮಮಿತಾ ಬಿಜು ಮಗಳ ಪಾತ್ರದಲ್ಲಿ ನಟಿಸಿದ್ದಾರೆ. ಪೂಜಾ ಹೆಗ್ಡೆ ಸಿನಿಮಾದ ನಾಯಕಿ. ಪ್ರಕಾಶ್ ರೈ ಮತ್ತು ಬಾಬಿ ಡಿಯೋಲ್ ಸಿನಿಮಾದ ವಿಲನ್​​ಗಳು. ಸಿನಿಮಾನಲ್ಲಿ ಇನ್ನೂ ಕೆಲವು ಪ್ರಮುಖ ನಟ, ನಟಿಯರು ಸಹ ನಟಿಸಿದ್ದಾರೆ. ಸಿನಿಮಾ ಜನವರಿ 09 ರಂದು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಸರ್ಕಾರದ ವಿರುದ್ಧ ಜೋಶಿ ಕಿಡಿ – Kannada News | Pralhad Joshi spraks Karnataka Government Over Ballari Violence: Accuses of Protecting MLA

ಬೆಂಗಳೂರು, ಜನವರಿ 03: ಬಳ್ಳಾರಿ ಗಲಭೆ ವಿಚಾರವಾಗಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಕೆಂಡಕಾರುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ಮಾತನಾಡಿದ್ದು, ಬಳ್ಳಾರಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದನ್ನು ಬಿಟ್ಟು ಶಾಸಕ ಭರತ್ ರೆಡ್ಡಿಯನ್ನು ಕಾಪಾಡಲು ಸರ್ಕಾರ ಮುಂದಾಗಿದೆ. ಕಾಂಗ್ರೆಸ್ ಕಾರ್ಯಕರ್ತ ಸತ್ತಿರುವುದು ಪೊಲೀಸರ ಗುಂಡಿನಿಂದ ಅಲ್ಲ ಎಂಬುದು ಸ್ಪಷ್ಟವಾಗಿದೆ. ಜನಾರ್ದನ ರೆಡ್ಡಿಯನ್ನು ಕೊಲ್ಲುವ ಉದ್ದೇಶ ಇತ್ತಾ? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಆಪರೇಷನ್ ಸಿಂಧೂರ್ ವೇಳೆ ಬೀಜಿಂಗ್ ಮಧ್ಯಸ್ಥಿಕೆ; ಲಜ್ಜೆಗೆಟ್ಟು ಚೀನಾದ ಬೆಂಬಲಕ್ಕೆ ನಿಂತ ಪಾಕಿಸ್ತಾನ – Kannada News | China was in constant touch Pakistan now backs Beijings mediation claims on Operation Sindoor

ನವದೆಹಲಿ, ಜನವರಿ 3: ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಭಯೋತ್ಪಾದನಾ ಸಂಘಟನೆಗಳು ಇದೀ ಜಗತ್ತಿಗೆ ಆತಂಕ ತಂದೊಡ್ಡುತ್ತಿವೆ ಎಂಬುದು ಎಲ್ಲ ದೇಶಗಳಿಗೂ ತಿಳಿದಿರುವ ವಿಚಾರ. ಇದೇ ಕಾರಣದಿಂದ ಹಲವು ದೇಶಗಳು ‘ದುಷ್ಟರಿಂದ ದೂರವಿರು’ ಎಂಬ ಗಾದೆಯನ್ನು ಗಂಭೀರವಾಗಿ ಪರಿಗಣಿಸಿ ಪಾಕಿಸ್ತಾನದಿಂದ ಅಂತರ ಕಾಯ್ದುಕೊಂಡಿವೆ. ಆದರೆ, ಚೀನಾ, ನೇಪಾಳ, ಬಾಂಗ್ಲಾದೇಶದಂತಹ ಕೆಲವು ದೇಶಗಳು ಪಾಕಿಸ್ತಾನದ (Pakistan) ಜೊತೆ ಬಹಳ ಆತ್ಮೀಯ ಸಂಬಂಧ ಹೊಂದಿವೆ. ಅಮೆರಿಕ ಅತ್ತ ಪಾಕಿಸ್ತಾನದ ಕಡೆಗೂ ಮೋಹವಿಟ್ಟುಕೊಂಡು ಇತ್ತ ಮೋದಿಯನ್ನೂ ಸಂಪೂರ್ಣವಾಗಿ ಎದುರು ಹಾಕಿಕೊಳ್ಳಲಾಗದೆ ಡಬಲ್ ಗೇಮ್ ಆಡುತ್ತಿದೆ.

ಒಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾನೇ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ನಿಲ್ಲಿಸಿದ್ದು ಎಂದು ಅವಕಾಶ ಸಿಕ್ಕಾಗಲೆಲ್ಲ ಡಂಗುರ ಸಾರಿಕೊಳ್ಳುತ್ತಲೇ ಇದ್ದಾರೆ. ಇದು ಸುಳ್ಳು ಎಂದು ಭಾರತಕ್ಕೂ ಸ್ಪಷ್ಟನೆ ನೀಡಿ ಸಾಕಾಗಿದೆ. ಇನ್ನೊಂದೆಡೆ ಇದೀಗ ಚೀನಾ ಕೂಡ ತಾನೇ ಈ ಯುದ್ಧ ನಿಲ್ಲಿಸಿದ್ದು ಎಂದು ಹೇಳುತ್ತಿದೆ. ಇದಕ್ಕೆ ಪಾಕಿಸ್ತಾನವೂ ಕೋರಸ್ ನೀಡುತ್ತಿರುವುದು ವಿಪರ್ಯಾಸ!

ಇದನ್ನೂ ಓದಿ: ಪಾಕ್-ಭಾರತ ನಡುವಿನ ಯುದ್ಧ ಕೊನೆಗೊಳಿಸಿದ್ದು ನಾವೇ, ಟ್ರಂಪ್ ಬಳಿಕ ಚೀನಾದ ಅಚ್ಚರಿಯ ಹೇಳಿಕೆ

ಮೇ 6-10ರವರೆಗೆ ಚೀನಾ ಭಾರತದೊಂದಿಗೆ ನಿಕಟ ಸಂಪರ್ಕದಲ್ಲಿತ್ತು. ಪಾಕಿಸ್ತಾನದ ಜೊತೆಗಿನ ಯುದ್ಧ ನಿಲ್ಲಿಸಲು ಚೀನಾ ಮಧ್ಯಸ್ಥಿಕೆ ವಹಿಸಿತ್ತು ಎಂದು ಆಪರೇಷನ್ ಸಿಂಧೂರ್ ದಾಳಿಯ ಕುರಿತು ಚೀನಾ ಹೇಳಿಕೆ ನೀಡಿತ್ತು. ಆ ಹೇಳಿಕೆಗೆ ಪಾಕಿಸ್ತಾನ ಬೆಂಬಲ ನೀಡಿದೆ.

ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ತಾಹಿರ್ ಅಂದ್ರಾಬಿ, “ಮೇ 6ರಿಂದ ಮೇ 10ರವರೆಗಿನ ಆ 3-4 ದಿನಗಳಲ್ಲಿ ಚೀನಾದ ನಾಯಕರು ಪಾಕಿಸ್ತಾನದ ನಾಯಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು ಮತ್ತು ಭಾರತೀಯ ನಾಯಕರೊಂದಿಗೂ ಸಂಪರ್ಕ ಹೊಂದಿದ್ದರು” ಎಂದು ಹೇಳಿದ್ದಾರೆ. ಈ ರಾಜತಾಂತ್ರಿಕ ಸಂಪರ್ಕಗಳು ಫಲಪ್ರದವಾಗಿತ್ತು. ನಮ್ಮೆರಡು ದೇಶಗಳಲ್ಲಿ ಶಾಂತಿ ಮತ್ತು ಭದ್ರತೆಯನ್ನು ತರಲು ಚೀನಾದ ಈ ರಾಜತಾಂತ್ರಿಕತೆ ಸಹಾಯ ಮಾಡಿತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಲ್ಪಸಂಖ್ಯಾತರ ಮೇಲಿನ ದಾಳಿ ಬಗ್ಗೆ ಪಾಕಿಸ್ತಾನದ ಹೇಳಿಕೆಗೆ ಭಾರತ ತಿರುಗೇಟು

ಆದರೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಮಾತುಕತೆಯಲ್ಲಿ ಚೀನಾದ ಪಾಲ್ಗೊಳ್ಳುವಿಕೆಯನ್ನು ಪಾಕಿಸ್ತಾನ ಇಷ್ಟು ತಡವಾಗಿ ಒಪ್ಪಿಕೊಂಡಿರುವುದು ಅಚ್ಚರಿ ಮೂಡಿಸಿದೆ ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಏಕೆಂದರೆ, ಇಲ್ಲಿಯವರೆಗೆ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತದೊಂದಿಗಿನ ಯುದ್ಧವನ್ನು ಕೊನೆಗೊಳಿಸಿದ್ದಕ್ಕಾಗಿ ಚೀನಾ ವಿಶೇಷವಾಗಿ ಅಮೆರಿಕ ಮತ್ತು ಡೊನಾಲ್ಡ್ ಟ್ರಂಪ್ ಅವರನ್ನು ಪ್ರಶಂಸಿಸಿತ್ತು. ಇದೀಗ ಚೀನಾ ತಾನೇ ಈ ಕದನವಿರಾಮಕ್ಕೆ ಕಾರಣ ಎಂದು ಬಿಂಬಿಸಿಕೊಳ್ಳುತ್ತಿದೆ.

ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯ ನಂತರ 26 ಜನರು ಸಾವನ್ನಪ್ಪಿದರು, ಅದರಲ್ಲಿ 25 ಭಾರತೀಯರು. ಪ್ರವಾಸಿಗರ ಮೇಲಿನ ದಾಳಿಯ ನಂತರ, ಆ ದಾಳಿಗೆ ಕಾರಣರಾದ ಪಾಕಿಸ್ತಾನದಲ್ಲಿರುವ ಭಯೋತ್ಪಾದಕರನ್ನು ಹೊರಹಾಕಲು ಭಾರತ ಆಪರೇಷನ್ ಸಿಂಧೂರ್ ಅನ್ನು ಘೋಷಿಸಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Madras Eye: ಶೀತಗಾಳಿ ಪ್ರಭಾವ ಬೆನ್ನಲ್ಲೇ ಮದ್ರಾಸ್ ಐ ಸೋಂಕು ಹೆಚ್ಚಳ: ಮಕ್ಕಳೇ ಟಾರ್ಗೆಟ್​ – Kannada News | Madras Eye Alert: Bangaluru Cold Wave Fuels Eye Infections in Kids

ಬೆಂಗಳೂರು, ಜನವರಿ 03: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ವರ್ಷ ಚಳಿಗಾಲ (Cold Wave) ಜೊತೆ ಕೆಲ ದಿನಗಳಿಂದ ಶೀತಗಾಳಿ ಹೆಚ್ಚಳವಾಗಿದ್ದು, ತೇವಾಂಶದ ವಾತಾವರಣದಿಂದಾಗಿ ಚಿಕ್ಕ ಮಕ್ಕಳಿಂದ ಹಿಡಿದು ಅನೇಕರಿಗೆ ಮದ್ರಾಸ್‌ ಐ (Madras Eye) ಕಣ್ಣಿನ ಸೋಂಕು ಹೆಚ್ಚಳವಾಗಿದೆ. ಹೀಗಾಗಿ ವೈದ್ಯರು ಪೋಷಕರಿಗೆ ಮಕ್ಕಳ ಕಣ್ಣಿನ ಸೋಂಕಿನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಪೋಷಕರಿಗೆ ಎಚ್ಚರಿಕೆ ನೀಡಿದ ವೈದ್ಯರು

ಬೆಂಗಳೂರಿನಲ್ಲಿ ಚಳಿಯಿಂದ ಹಾಗೂ ತೇವಾಂಶದ ವಾತಾವರಣದಿಂದಾಗಿ ಮದ್ರಾಸ್‌ ಐ ಕಣ್ಣಿನ ಸೋಂಕು ಹೆಚ್ಚಳವಾಗಿದೆ. ಶಾಲಾ ಮಕ್ಕಳಲ್ಲಿಯೇ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಬದಲಾದ ಹವಮಾನ, ಚಳಿ ಹೆಚ್ಚಾಗಿರುವ ಕಾರಣ ಮಕ್ಕಳಿಗೆ ಮದ್ರಾಸ್ ಐ ಶುರುವಾಗಿದೆ. ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತಿದೆ. ಹೀಗಾಗಿ ವೈದ್ಯರು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಮಕ್ಕಳ ಕಣ್ಣಿನ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸದಂತೆ ಸಲಹೆ ನೀಡಿದ್ದಾರೆ. ಆರೊಗ್ಯ ಇಲಾಖೆ ಕೂಡ ಮದ್ರಾಸ್ ಐ ಬಗ್ಗೆ ಕೆಲವು ಸಲಹೆಗಳನ್ನ ನೀಡಿದೆ.

ಮದ್ರಾಸ್ ಐ ಲಕ್ಷಣಗಳು ಏನು?

  • ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳಿಂದ ಕಣ್ಣಿನಲ್ಲಿ ಉರಿ, ಸೋಂಕು ಉಂಟಾಗುತ್ತದೆ.
  • ಧೂಳು, ಅಲರ್ಜಿಗಳು, ಮಾಲಿನ್ಯ ಇವುಗಳಿಂದಲೂ ಈ ಅಲರ್ಜಿ ಸಮಸ್ಯೆ ಬರಬಹುದು.
  • ಇದು ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುವ ಸೋಂಕಾಗಿದೆ.
  • ಕಣ್ಣುಗಳು ಕೆಂಪಾಗುವುದು, ಸುಡುವಂತಾಗುವುದು.
  • ಕಣ್ಣಿನಲ್ಲಿ ಮುರಳು, ಕಿಚ್ಚು ಹಾಗೂ ಜಲಸ್ರಾವವಾಗುವುದು.
  • ರೆಪ್ಪೆಗಳು ಅಂಟಿಕೊಳ್ಳುವುದು (ಬೆಳಿಗ್ಗೆ ವಿಶೇಷವಾಗಿ)
  • ಬೆಳಕಿಗೆ ನೋವು, ಕಣ್ಣು ಮಿಡಿಯುವುದು.

ಪರಿಹಾರ ಏನು?

  • ಗುಣಮುಖವಾಗುವವರೆಗೂ ಸಾಬೂನು ಬಳಸಿ ಕೈಗಳನ್ನು ಪದೇಪದೇ ತೊಳೆಯಿರಿ.
  • ಕಣ್ಣಿನ ವೈದ್ಯರು ಸೂಚಿಸಿದ ಔಷಧಿ, ಐಡ್ರಾಪ್ಸ್ ನಿಯಮಿತವಾಗಿ ಬಳಸುವುದು.
  • ಕಣ್ಣುಗಳನ್ನು ಸ್ವಚ್ಛವಾಗಿಡುವುದು.
  • ಬಳಸಿದ ಟಿಶ್ಯೂ, ಕಾಟನ್‌ನ್ನು ತಕ್ಷಣ ತ್ಯಜಿಸುವುದು.
  • ಸೋಂಕಿತ ವ್ಯಕ್ತಿಯಿಂದ ಸ್ವಲ್ಪ ದೂರವಿರುವುದು.

ಏನು ಮಾಡಬಾರದು? 

  • ಗುಣಮುಖರಾಗುವವರೆಗೂ ಸಾರ್ವಜನಿಕ ಸ್ಥಳಗಳಿಗೆ ಹೋಗದಿರಿ.
  • ಕಣ್ಣಿಗೆ ವಿಶ್ರಾಂತಿ ಇಲ್ಲದೆ ಮೊಬೈಲ್ ಅಥವಾ ಟಿವಿ ವೀಕ್ಷಣೆ ಬೇಡ.
  • ಅನಗತ್ಯ ಕಣ್ಣುಗಳ ಉಜ್ಜುವುದು, ಮುಟ್ಟುವುದು ಬೇಡ.
  • ಸೋಂಕತರು ಬಳಸಿದ ಮೇಕಪ್, ಕಾಜಲ್, ಲೆನ್ಸ್ ಟವಲ್ ಬಳಕೆ ತಪ್ಪಿಸಿ.
  • ಮನೆ ಮದ್ದು ಬೇಡ.
  • ವೈದ್ಯರ ಸಲಹೆ ಇಲ್ಲದೆ ಔಷಧಿ ಬಳಸಬೇಡಿ.

ಶೀತಗಾಳಿಯಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿದ್ದು, ಚಳಿ ವಾತಾವರಣದಿಂದ ಈ ವೈರಾಣು ನೇರವಾಗಿ ಕಣ್ಣಿನ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. ಹೀಗಾಗಿ ಮದ್ರಾಸ್ ಐ ಏರಿಕೆಯಾಗಿದೆ. ನಿರ್ಲಕ್ಷ್ಯ ವಹಿಸದಂತೆ ಪೋಷಕರು ಎಚ್ಚರ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡರೆ ಶಾಲೆಗೆ ಕಳಿಸದ್ದಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಬಿಗ್​​ ಶಾಕ್​​​​​: ಚಳಿಗಾಲದಲ್ಲಿ ಹೊರಗೆ ಹೋಗುವ ಮುನ್ನ ಎಚ್ಚರ

ಕಳೆದ ಎರಡು ವಾರದಿಂದ ನಿರಂತರವಾಗಿ ವಾತವರಣದ ತೇವಾಂಶ ಹಾಗೂ ಚಳಿಯಿಂದ ಕಣ್ಣಿನ ಸೋಂಕು ಹೆಚ್ಚಾಗಿದೆ, ಅದರಲ್ಲೂ ಮದ್ರಾಸ್ ಐಗೆ ಮಕ್ಕಳು ಟಾರ್ಗೆಟ್ ಆಗಿದ್ದು, ಮಳೆಗಾಲ ಮುಗಿಯುವರೆಗೂ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

‘ನೀನೆ ನೀನೆ, ಮನಸೆಲ್ಲ ನೀನೆ’ ಮತ್ತೆ ಬರುತ್ತಿದ್ದಾನೆ ‘ಆಕಾಶ್’ – Kannada News | Puneeth Rajkumar starrer Akash movie re releasing on March 13

ಪುನೀತ್ ರಾಜ್​​ಕುಮಾರ್ (Puneeth Rajkumar) ಅಗಲಿ ವರ್ಷಗಳು ಕಳೆದರೂ ಅಭಿಮಾನಿಗಳ ಮನಸ್ಸುಗಳಲ್ಲಿ ಇನ್ನೂ ಭದ್ರವಾಗಿ ನೆಲೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ದಿನವೂ ಅಪ್ಪು ಅವರ ಚಿತ್ರ, ವಿಡಿಯೋ, ಸಿನಿಮಾ ದೃಶ್ಯಗಳು, ಅಪ್ಪು ಅವರ ಬಗೆಗಿನ ಪೋಸ್ಟ್​​ಗಳು ಹರಿದಾಡುತ್ತಲೇ ಇರುತ್ತವೆ. ಇನ್ನು ರಸ್ತೆಗಳಲ್ಲಂತೂ ಕೇಳುವುದೇ ಬೇಡ. ಎಲ್ಲಿ ನೋಡಿದರೂ ಅಪ್ಪು ಭಾವಚಿತ್ರಗಳು ಈಗಲೂ ರಾರಾಜಿಸುತ್ತಲೇ ಇವೆ. ಟಿವಿಗಳಲ್ಲಿ ಅಪ್ಪು ಅವರ ಸಿನಿಮಾಗಳು ಪ್ರಸಾರ ಆಗುತ್ತಲೇ ಇರುತ್ತವೆ. ಒಟಿಟಿಗಳಲ್ಲಿಯೂ ಅಪ್ಪು ಅವರ ಸಿನಿಮಾಗಳಿಗೆ ಬಲು ಬೇಡಿಕೆ. ಇದೀಗ ಅಪ್ಪು ನಟಿಸಿರುವ ಬ್ಲಾಕ್ ಬಸ್ಟರ್ ಸಿನಿಮಾ ಒಂದು ಮರು ಬಿಡುಗಡೆ ಆಗುತ್ತಿದೆ.

ಪುನೀತ್ ರಾಜ್​​ಕುಮಾರ್ ನಾಯಕನಾಗಿ ನಟಿಸಿದ ಐದನೇ ಸಿನಿಮಾ ‘ಆಕಾಶ್’, ಅಪ್ಪು ಅವರ ಹುಟ್ಟುಹಬ್ಬದ ಪ್ರಯುಕ್ತ ಮರು ಬಿಡುಗಡೆ ಆಗುತ್ತಿದೆ. 2005 ರಲ್ಲಿ ಬಿಡುಗಡೆ ಆಗಿದ್ದ ‘ಆಕಾಶ್’ ಸಿನಿಮಾ ಇದೀಗ 20 ವರ್ಷಗಳ ಬಳಿಕ ಮರು ಬಿಡುಗಡೆ ಆಗುತ್ತಿದೆ. ಮಾರ್ಚ್ 13 ರಂದು ‘ಆಕಾಶ್’ ಸಿನಿಮಾ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಪ್ರಮುಖ ನಗರಗಳಲ್ಲಿ ಆಯ್ದ ಚಿತ್ರಮಂದಿರಗಳಲ್ಲಿ ಮತ್ತೆ ಪ್ರದರ್ಶನ ಕಾಣಲಿದೆ.

2005 ರಲ್ಲಿ ಬಿಡುಗಡೆ ಆಗಿದ್ದ ‘ಆಕಾಶ್’ ಸಿನಿಮಾ ಆಗಿನ ಕಾಲದ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಒಂದಾಗಿತ್ತು. 200 ದಿನಗಳ ಕಾಲ ಸಹ ಪ್ರದರ್ಶನ ಕಂಡಿತ್ತು ಈ ಸಿನಿಮಾ. ಆಕಾಶ್ ಹೆಸರಿನ ಸರಳ, ಮಧ್ಯಮ ವರ್ಗದ ಯುವಕನ ಪಾತ್ರದಲ್ಲಿ ಪುನೀತ್ ರಾಜ್​​ಕುಮಾರ್ ನಟಿಸಿದ್ದರು. ಸಿನಿಮಾದ ನಾಯಕಿಯಾಗಿ ನಟಿಸಿದ್ದು ನಟಿ ರಮ್ಯಾ. ‘ಆಕಾಶ್’ ಸಿನಿಮಾದ ‘ನೀನೆ ನೀನೆ ಮನಸೆಲ್ಲ ನೀನೆ’ ಹಾಡು ಇಂದಿಗೂ ಸಹ ಕನ್ನಡದ ಬಲು ಜನಪ್ರಿಯ ಹಾಡುಗಳಲ್ಲಿ ಒಂದು.

ಇದನ್ನೂ ಓದಿ:ಅಶ್ವಿನಿ ಪುನೀತ್ ರಾಜ್​ಕುಮಾರ್ ಹಾರೈಕೆಯಿಂದ ಸೆಟ್ಟೇರಿತು ‘ರಕ್ಕಿ’ ಸಿನಿಮಾ

ಮಾರ್ಚ್ 17 ಪುನೀತ್ ರಾಜ್​ಕುಮಾರ್ ಅವರ ಜನ್ಮದಿನ. ಅದಕ್ಕೆ ತುಸು ಮುಂಚಿತವಾಗಿ ಅಂದರೆ ಮಾರ್ಚ್ 13ರಂದೇ ‘ಆಕಾಶ್’ ಸಿನಿಮಾ ಮರು ಬಿಡುಗಡೆ ಮಾಡಲಾಗುತ್ತಿದೆ. ಪಿಆರ್​​ಕೆ ಪ್ರೊಡಕ್ಷನ್ಸ್ ವತಿಯಿಂದ ‘ಆಕಾಶ್’ ಸಿನಿಮಾ ಮರು ಬಿಡುಗಡೆ ಮಾಡಲಾಗುತ್ತಿದ್ದು, ಮರು ಬಿಡುಗಡೆ ಪೋಸ್ಟರ್ ಅನ್ನು ರಾಘವೇಂದ್ರ ರಾಜ್​ಕುಮಾರ್, ಪಿಆರ್​​ಕೆ ಪ್ರೊಡಕ್ಷನ್ ಇನ್ನಿತರರು ಹಂಚಿಕೊಂಡಿದ್ದಾರೆ. ನಟಿ ರಮ್ಯಾ ಸಹ ‘ಆಕಾಶ್’ ಸಿನಿಮಾ ಮರು ಬಿಡುಗಡೆಗೆ ಪ್ರಚಾರ ಮಾಡುವ ಸಾಧ್ಯತೆ ಇದೆ.

‘ಆಕಾಶ್’ ಸಿನಿಮಾವನ್ನು ಮಹೇಶ್ ಬಾಬು ಅವರು ನಿರ್ದೇಶನ ಮಾಡಿದ್ದರು. ಆ ಸಿನಿಮಾ ನಿರ್ಮಾಣ ಮಾಡಿದ್ದಿದ್ದು ಪಾರ್ವತಮ್ಮ ರಾಜ್​ಕುಮಾರ್ ಅವರೇ. ಸಿನಿಮಾಕ್ಕೆ ಆಗಿನ ಸ್ಟಾರ್ ಸಂಗೀತ ನಿರ್ದೇಶಕ ಆರ್​​ಪಿ ಪಟ್ನಾಯಕ್ ಸಂಗೀತ ನೀಡಿದ್ದರು. ಸಿನಿಮಾದ ‘ನೀನೆ ನೀನೆ ಹಾಡು’ ಸೇರಿದಂತೆ ಇನ್ನೂ ಕೆಲವು ಹಾಡುಗಳು ದೊಡ್ಡ ಹಿಟ್ ಆಗಿದ್ದವು. ಕುನಾಳ್ ಗಾಂಜಾವಾಲ ಅವರು ‘ನೀನೆ ನೀನೆ’ ಹಾಡು ಹಾಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಳ್ಳಾರಿ ಗಲಭೆ: ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್ – Kannada News | Bellari Violence: Minister Zameer Hands Over 25 Lakh Compensation to Rajashekhar Family

ಬಳ್ಳಾರಿ, ಜನವರಿ 03: ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆಯಲ್ಲಿ ಮೃತಪಟ್ಟ ರಾಜಶೇಖರ್​​ ಮನೆಗೆ ಇಂದು ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಮೃತನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಿದ್ದಾರೆ. ನಿಮ್ಮೊಂದಿಗೆ ನಮ್ಮ ಸರ್ಕಾರ ಇರುತ್ತೆ, ನಮ್ಮ ಶಾಸಕರು ಇದ್ದಾರೆ ಎಂದು ಧೈರ್ಯ ತುಂಬಿದ್ದಾರೆ. ಸಚಿವ ಜಮೀರ್‌ಗೆ ಶಾಸಕರಾದ ಭರತ್ ರೆಡ್ಡಿ ಮತ್ತು ಗಣೇಶ್​ ಸಾಥ್ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

62 ಎಸೆತಗಳಲ್ಲಿ 66 ರನ್, 68 ಎಸೆತಗಳಲ್ಲಿ 100 ರನ್..! ಹಾರ್ದಿಕ್ ಅಬ್ಬರ ಹೇಗಿತ್ತು ನೋಡಿ – Kannada News | Hardik Pandya Century: 133 Runs, 34 in Over for Baroda in Vijay Hazare 2026

2025-26 ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಬರೋಡಾ ಮತ್ತು ವಿದರ್ಭ ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬರೋಡಾ ತಂಡ ಸೋತಿತ್ತಾದರೂ ತಂಡದ ಪರ ಹಾರ್ದಿಕ್ ಪಾಂಡ್ಯ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಬರೋಡಾ 71 ರನ್​ಗಳಿಗೆ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಕಣಕ್ಕಿಳಿದ ಹಾರ್ದಿಕ್ ತಮ್ಮ ಸಹೋದರ ಕೃನಾಲ್ ಪಾಂಡ್ಯ ಅವರೊಂದಿಗೆ ಆರನೇ ವಿಕೆಟ್‌ಗೆ 65 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.

ಇದರ ಜೊತೆಗೆ ಹಾರ್ದಿಕ್ ಪಾಂಡ್ಯ 92 ಎಸೆತಗಳಲ್ಲಿ 133 ರನ್​ಗಳ ಇನ್ನಿಂಗ್ಸ್ ಅಡಿದರು. ಇದರಲ್ಲಿ 11 ಸಿಕ್ಸರ್‌ಗಳು ಮತ್ತು 8 ಬೌಂಡರಿಗಳು ಸೇರಿದ್ದವು. 144.57 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ ಪಾಂಡ್ಯಗೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಇದು ಚೊಚ್ಚಲ ಶತಕವೂ ಆಗಿತ್ತು. ಇದು ಪಾಂಡ್ಯರ ಶತಕದ ಹೈಲೇಟ್ ಆಗಿದ್ದರೆ, ಇನ್ನು ಇದೇ ಪಂದ್ಯದಲ್ಲಿ ಪಾಂಡ್ಯ ಒಂದೇ ಓವರ್​ನಲ್ಲಿ 34 ರನ್ ಚಚ್ಚಿ ಅಬ್ಬರಿಸಿದರು.

ತಂಡದ 38 ನೇ ಓವರ್ ಮುಕ್ತಾಯಕ್ಕೆ 62 ಎಸೆತಗಳಲ್ಲಿ 66 ರನ್ ಕಲೆಹಾಕಿ ಬ್ಯಾಟಿಂಗ್‌ ಮುಂದುವರೆಸಿದ್ದ ಪಾಂಡ್ಯ, 39 ನೇ ಓವರ್​ನಲ್ಲಿ ಉಗ್ರರೂಪ ತಾಳಿದರು. ಈ ಓವರ್​ನಲ್ಲಿ ಪಾಂಡ್ಯ ಸತತ 5 ಸಿಕ್ಸರ್​ಗಳು ಹಾಗೂ 1 ಬೌಂಡರಿ ಬಾರಿಸಿದರು. ಅಂದರೆ ಕೇವಲ 6 ಎಸೆತಗಳಲ್ಲಿ 34 ರನ್ ಕಲೆಹಾಕಿದ ಪಾಂಡ್ಯ ತಮ್ಮ ಶತಕವನ್ನು ಪೂರೈಸಿದರು.

Source link

ತೈಲ ಸಂಪತ್ತಿನ ಮೇಲೆ ಕಣ್ಣಿಟ್ಟರಾ ಟ್ರಂಪ್? ವೆನೆಜುವೆಲಾ ಮೇಲಿನ ಅಮೆರಿಕ ದಾಳಿ ಕುರಿತ ಕುತೂಹಲಕಾರಿ ಸಂಗತಿ ಇಲ್ಲಿದೆ – Kannada News | Why US Attacked Venezuela and Captured President Nicolas Maduro here is interesting Facts

ನವದೆಹಲಿ, ಜನವರಿ 3: ಶನಿವಾರ ರಾತ್ರಿ ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್‌ನಲ್ಲಿ ಅಮೆರಿಕ ಬೃಹತ್ ವೈಮಾನಿಕ ದಾಳಿ ನಡೆಸಿತು. ಸ್ಥಳೀಯ ಸಮಯದ ಪ್ರಕಾರ ಮಧ್ಯರಾತ್ರಿಯಲ್ಲಿ ಸಂಭವಿಸಿದ ಭಾರೀ ಸ್ಫೋಟಗಳಿಂದ ಇಡೀ ನಗರವು ನಡುಗಿತು. ಆದರೆ ಈ ಯುದ್ಧದಂತಹ ಪರಿಸ್ಥಿತಿಯ ನಡುವೆ ಒಂದು ಪ್ರಮುಖವಾದ ಪ್ರಶ್ನೆ ನಮ್ಮನ್ನು ಕಾಡುವುದು ಸಹಜ. ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿದ್ದರೂ ವೆನೆಜುವೆಲಾ (Venezuela) ದೇಶವು ಏಕೆ ಬಡ ರಾಷ್ಟ್ರವಾಗಿದೆ? ಈ ದೇಶದ ಮೇಲೆ ವಿಶ್ವದ ದೊಡ್ಡಣ್ಣ ಅಮೆರಿಕದ ಕಣ್ಣು ಬೀಳಲು ಕಾರಣವೇನು?

ಈಗಾಗಲೇ ವೆನೆಜುವೆಲಾದ ಮೇಲೆ ದಾಳಿ ನಡೆಸಿರುವ ಅಮೆರಿಕ ಅಲ್ಲಿನ ಅಧ್ಯಕ್ಷ ಹಾಗೂ ಅವರ ಪತ್ನಿಯನ್ನು ಸೆರೆಹಿಡಿದು, ವೆನೆಜುವೆಲಾದಿಂದ ಹೊರಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಮೆರಿಕ ಇಷ್ಟು ಗೌಪ್ಯವಾಗಿ ವೆನೆಜುವೆಲಾ ಮೇಲೆ ವೈಮಾನಿಕ ದಾಳಿ ನಡೆಸುವಷ್ಟು ದ್ವೇಷವಾದರೂ ಏನಿದೆ? ಎಂಬ ಅನುಮಾನಕ್ಕೆ ಉತ್ತರ ಇಲ್ಲಿದೆ.

ಕಳೆದ ಕೆಲವು ತಿಂಗಳುಗಳಿಂದ ಅಮೆರಿಕ ಅಧ್ಯಕ್ಷ ಟ್ರಂಪ್ ಮಡುರೊ ಅವರನ್ನು “ಕಾರ್ಟೆಲ್ ಡಿ ಲಾಸ್ ಸೋಲ್ಸ್” ಎಂಬ ಮಾದಕವಸ್ತು ಕಾರ್ಟೆಲ್‌ನ ಉನ್ನತ ಮಟ್ಟದ ಸದಸ್ಯ ಎಂದು ಆರೋಪಿಸಿದ್ದರು. ಇದು ಅಮೆರಿಕಕ್ಕೆ ಮಾದಕವಸ್ತುಗಳನ್ನು ಸಾಗಿಸುತ್ತಿದೆ ಎಂದು ಅವರು ಹೇಳಿದ್ದರು. ಆದರೆ, ಇದಕ್ಕೆ ಟ್ರಂಪ್ ಯಾವುದೇ ಪುರಾವೆಗಳನ್ನು ನೀಡಿರಲಿಲ್ಲ. ಆದರೆ, ವೆನೆಜುವೆಲಾದ ವಿರುದ್ಧದ ತಮ್ಮ ಮಾರಕ ಮಿಲಿಟರಿ ಕಾರ್ಯಾಚರಣೆಗಳನ್ನು ಸಮರ್ಥಿಸಲು ಈ ಆರೋಪಗಳನ್ನು ಟ್ರಂಪ್ ಬಳಸಿಕೊಂಡಿದ್ದರು.

ಇದನ್ನೂ ಓದಿ: ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ

ವೆನೆಜುವೆಲಾದಲ್ಲಿ ಬಹಳ ಹೇರಳವಾದ ನೈಸರ್ಗಿಕ ಸಂಪತ್ತು ಇದೆ. ವೆನೆಜುವೆಲಾ ತೈಲ ಮತ್ತು ಅಪರೂಪದ ಭೂಮಿಯ ಖನಿಜಗಳಿಂದ ಸಮೃದ್ಧವಾಗಿದೆ. ಇದು ಅತ್ಯಂತ ಅಮೂಲ್ಯವಾದ ಸರಕುಗಳಾಗಿ ಕಾರ್ಯನಿರ್ವಹಿಸುತ್ತದೆ. ಮಡುರೊ ಪ್ರಕಾರ, ದಕ್ಷಿಣ ಅಮೆರಿಕಾದ ದೇಶವಾದ ವೆನೆಜುವೆಲಾ 1.36 ಟ್ರಿಲಿಯನ್ ಡಾಲರ್ ಮೌಲ್ಯದ ಖನಿಜ ಸಂಪತ್ತನ್ನು ಹೊಂದಿದೆ. ಡಿಸೆಂಬರ್‌ನಲ್ಲಿ ಅಮೆರಿಕ ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡ ನಂತರ, ಕ್ಯಾರಕಾಸ್ ತನ್ನಲ್ಲಿರುವ ನೈಸರ್ಗಿಕ ಸಂಪನ್ಮೂಲಗಳಿಗಾಗಿ ಅಮೆರಿಕ ವೆನೆಜುವೆಲಾವನ್ನು ಲೂಟಿ ಮಾಡಲು ಪ್ರಯತ್ನಿಸುತ್ತಿದೆ ಎಂದು ನೇರವಾಗಿ ಆರೋಪಿಸಿತ್ತು. ಅದರ ಬೆನ್ನಲ್ಲೇ ಈ ದಾಳಿ ನಡೆದಿದೆ.

ಕಳೆದ ತಿಂಗಳು ವೆನೆಜುವೆಲಾದ ಕರಾವಳಿಯಲ್ಲಿ ವಶಪಡಿಸಿಕೊಂಡ ತೈಲ ಟ್ಯಾಂಕರ್ ಇರಾನ್‌ಗೆ ಅನುಮೋದಿತ ತೈಲವನ್ನು ಸಾಗಿಸುತ್ತಿತ್ತು ಎನ್ನಲಾಗಿದೆ. ವೆನೆಜುವೆಲಾ ಈ ಆರೋಪವನ್ನು ನಿರಾಕರಿಸಿದೆ. ಡೊನಾಲ್ಡ್ ಟ್ರಂಪ್ ಅವರ ಈ ಕ್ರಮಗಳನ್ನು “ಅಂತಾರಾಷ್ಟ್ರೀಯ ಕಡಲ್ಗಳ್ಳತನದ ಕೃತ್ಯ” ಎಂದು ವೆನೆಜುವೆಲಾ ಟೀಕಿಸಿತ್ತು.

ಇದನ್ನೂ ಓದಿ: ವೆನೆಜುವೆಲಾ ಅಧ್ಯಕ್ಷ ಮಡುರೊ, ಅವರ ಪತ್ನಿಯನ್ನು ಸೆರೆಹಿಡಿದಿದ್ದೇವೆ; ದಾಳಿಯ ಬಳಿಕ ಟ್ರಂಪ್ ಘೋಷಣೆ

ಈ ದಾಳಿಗೆ ಎರಡನೆಯದಾಗಿ ಹೇಳಲಾಗುತ್ತಿರುವ ಕಾರಣವೆಂದರೆ ಮಾದಕ ವಸ್ತುಗಳು. ವೆನೆಜುವೆಲಾ ಕೊಕೇನ್‌ಗೆ ಪ್ರಮುಖ ಸಾಗಣೆ ಮಾರ್ಗವಾಗಿದೆ.

ಅಮೆರಿಕಕ್ಕಿಂತ 5 ಪಟ್ಟು ಹೆಚ್ಚು ತೈಲ ನಿಕ್ಷೇಪಗಳಿದ್ದರೂ ವೆನೆಜುವೆಲಾ ಯಾಕೆ ಶ್ರೀಮಂತ ದೇಶವಾಗಿಲ್ಲ? ಎಂಬ ಪ್ರಶ್ನೆ ಕಾಡುವುದು ಸಹಜ. ವೆನೆಜುವೆಲಾದಲ್ಲಿ ಭಾರೀ ತೈಲ ನಿಕ್ಷೇಪಗಳಿದ್ದರೂ ಅದರ ಹೆಚ್ಚಿನ ತೈಲವು ಪೂರ್ವ ಪ್ರದೇಶದ ಒರಿನೊಕೊ ಬೆಲ್ಟ್‌ನಲ್ಲಿ ಕಂಡುಬರುತ್ತದೆ. ಸಮಸ್ಯೆಯೆಂದರೆ ಅದು ಭಾರೀ ಕಚ್ಚಾ ತೈಲವಾಗಿದೆ. ಈ ತೈಲವು ಜೇನುತುಪ್ಪದಂತೆ ಅತ್ಯಂತ ದಪ್ಪವಾಗಿರುತ್ತದೆ.

ಈ ರೀತಿಯ ತೈಲವನ್ನು ಹೊರತೆಗೆಯುವುದು ಮತ್ತು ಸಂಸ್ಕರಿಸುವುದು ಸಾಂಪ್ರದಾಯಿಕ ತೈಲಕ್ಕಿಂತ ಹೆಚ್ಚು ಕಷ್ಟಕರ ಮತ್ತು ದುಬಾರಿಯಾಗಿದೆ. ಇದರಲ್ಲಿ ಹೆಚ್ಚಿನ ಸಲ್ಫರ್ ಅಂಶವಿದ್ದು, ಅದನ್ನು ತೆಗೆದುಹಾಕಲು ಸುಧಾರಿತ ತಂತ್ರಜ್ಞಾನ ಮತ್ತು ಗಮನಾರ್ಹ ಹೂಡಿಕೆಯ ಅಗತ್ಯವಿದೆ. ಈ ತೈಲವು ಹೆಚ್ಚು ದಪ್ಪವಾಗಿರುವುದರಿಂದ ಮತ್ತು ಸಂಸ್ಕರಿಸಲು ಹೆಚ್ಚು ಕಷ್ಟಕರವಾಗಿರುವುದರಿಂದ, ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇತರ ದೇಶಗಳ ಕಚ್ಚಾ ತೈಲಕ್ಕಿಂತ ಗಮನಾರ್ಹವಾಗಿ ಕಡಿಮೆ ಬೆಲೆಗೆ ಮಾರಾಟವಾಗುತ್ತದೆ. ಇದರರ್ಥ ಹೆಚ್ಚಿನ ಶ್ರಮ ಮತ್ತು ಕಡಿಮೆ ಲಾಭ. ಇದೇ ಕಾರಣಕ್ಕೆ ವೆನೆಜುವೆಲಾ ಬಡ ರಾಷ್ಟ್ರವಾಗಿಯೇ ಮುಂದುವರೆದಿದೆ. ಆದರೆ, ಈ ತೈಲ ನಿಕ್ಷೇಪಗಳ ಲಾಭ ಪಡೆಯಲು ಅಮೆರಿಕ ಪ್ಲಾನ್ ಮಾಡಿದೆ ಎನ್ನಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಯಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಗಲಿದೆ ದೊಡ್ಡ ಸರ್ಪ್ರೈಸ್ – Kannada News | Toxic movie trailer or teaser to be released on Yash’s Birthday

ಯಶ್ (Yash) ಭಾರತದ ಬಲು ಜನಪ್ರಿಯ ಸ್ಟಾರ್ ನಟ. ‘ಕೆಜಿಎಫ್’ ಸಿನಿಮಾ ಸರಣಿಯಿಂದಾಗಿ ಯಶ್ ಅವರ ಜನಪ್ರಿಯತೆ ಸಾಗರ ದಾಟಿ ಹಬ್ಬಿದೆ. ಇದೀಗ ಯಶ್ ಅವರು ‘ಟಾಕ್ಸಿಕ್’ ಸಿನಿಮಾನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಕಳೆದ ಕೆಲವ ವರ್ಷಗಳಿಂದಲೂ ‘ಟಾಕ್ಸಿಕ್’ನಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಸಿನಿಮಾ ಬಿಡುಗಡೆಗೆ ಕೆಲವೇ ತಿಂಗಳು ಬಾಕಿ ಇದೆ. ಇದೀಗ ಸಿನಿಮಾದ ಪಾತ್ರಗಳ ಪೋಸ್ಟರ್​​ಗಳನ್ನು ಒಂದೊಂದಾಗಿ ಹಂಚಿಕೊಳ್ಳಲಾಗುತ್ತಿದೆ. ಇದೀಗ ಹರಿದಾಡುತ್ತಿರುವ ಸುದ್ದಿಯೆಂದರೆ ಯಶ್ ಅವರ ಹುಟ್ಟುಹಬ್ಬಕ್ಕೆ ‘ಟಾಕ್ಸಿಕ್’ ಸಿನಿಮಾ ತಂಡದಿಂದ ದೊಡ್ಡ ಉಡುಗೊರೆಯೇ ಸಿನಿಮಾ ಪ್ರೇಮಿಗಳಿಗೆ ಸಿಗಲಿದೆ ಎಂಬುದು.

ಯಶ್ ಅವರ ಹುಟ್ಟುಹಬ್ಬ ಜನವರಿ 8ಕ್ಕಿದೆ. ಅದೇ ದಿನ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಈ ವರೆಗೆ ‘ಟಾಕ್ಸಿಕ್’ ಸಿನಿಮಾದ ಪೋಸ್ಟರ್​​ಗಳು ಮಾತ್ರವೇ ಹೊರಬಿಡಲಾಗಿದೆ. ಆದರೆ ಸಿನಿಮಾದ ಟೀಸರ್ ಅಥವಾ ಟ್ರೈಲರ್​​ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ಹುಟ್ಟುಹಬ್ಬ ಹತ್ತಿರದಲ್ಲೇ ಇದ್ದು, ಅದೇ ದಿನ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.

‘ಟಾಕ್ಸಿಕ್’ ಸಿನಿಮಾದ ಫಸ್ಟ್ ಲುಕ್ ಟೀಸರ್ ಯಶ್ ಅವರ ಹುಟ್ಟುಹಬ್ಬದಂದೇ ಬಿಡುಗಡೆ ಆಗಿತ್ತು. ಇದೀಗ ಮತ್ತೊಮ್ಮೆ ಯಶ್ ಹುಟ್ಟುಹಬ್ಬದಂದೇ ಸಿನಿಮಾದ ಟೀಸರ್ ಅಥವಾ ಟ್ರೈಲರ್ ಬಿಡುಗಡೆ ಆಗುವ ಸಾಧ್ಯತೆ ಇದೆ. ಸಿನಿಮಾದ ನಾಯಕಿಯರಾದ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಅವರ ಪಾತ್ರಗಳ ಪೋಸ್ಟರ್​​ಗಳನ್ನು ಚಿತ್ರತಂಡ ಈಗಾಗಲೇ ಹಂಚಿಕೊಂಡಿದೆ. ಈಗ ಸಿನಿಮಾದ ಟೀಸರ್ ಅಥವಾ ಟ್ರೈಲರ್ ಅನ್ನು ಬಿಡುಗಡೆ ಮಾಡುವ ಸಮಯ ಸನ್ನಿಹಿತವಾಗಿದೆ. ಯಶ್ ಹುಟ್ಟುಹಬ್ಬಕ್ಕಿಂತಲೂ ಒಳ್ಳೆಯ ಸಮಯ ಸಿಗಲಿಕ್ಕಿಲ್ಲವೇನೊ.

ಇದನ್ನೂ ಓದಿ:ನನ್ನ ಬರವಣಿಗೆಯನ್ನೂ ಮೆಚ್ಚಬೇಕು; ಸಿಲ್ಲಿ ಲಲ್ಲಿಯಲ್ಲಿ ಹೇಳಿದ್ದ ಯಶ್

‘ಟಾಕ್ಸಿಕ್’ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್​​ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ನಾಯಕನಾಗಿ ಯಶ್ ನಟಿಸಿರುವುದು ಮಾತ್ರವಲ್ಲದೆ ಸಿನಿಮಾದ ಕತೆ ಸಹ ರಚಿಸಿದ್ದಾರೆ. ಕೆವಿಎನ್ ಮತ್ತು ಯಶ್ ಅವರ ಮಾನ್ಸ್​ಸ್ಟರ್ ಮೈಂಡ್ ನಿರ್ಮಾಣ ಸಂಸ್ಥೆಗಳು ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಸಿನಿಮಾ ಕನ್ನಡ ಮಾತ್ರವಲ್ಲದೆ ಭಾರತದ ಇತರೆ ಭಾಷೆಗಳ ಜೊತೆಗೆ ಇಂಗ್ಲೀಷ್​​ನಲ್ಲಿಯೂ ಏಕಕಾಲಕ್ಕೆ ನಿರ್ಮಾಣ ಆಗುತ್ತಿದೆ. ಕೆಲವು ಹಾಲಿವುಡ್ ತಂತ್ರಜ್ಞರು ಸಹ ಈ ಸಿನಿಮಾನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link