ಉಡುಪಿ, (ಏಪ್ರಿಲ್ 06): ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೂರು ದಿನಗಳ ಕಾಲ ಜೀವ ಕೈಯಲ್ಲಿ ಹಿಡಿದುಕೊಂಡಿದ್ದ ವ್ಯಕ್ತಿ ಕೊನೆಗೂ ಪವಾಡ ಸದೃಶರಾಗಿ ಬದುಕಿಬಂದ ಘಟನೆ ಉಡುಪಿಯ (Udupi) ಕಂಬಳಕಟ್ಟೆಯಲ್ಲಿ ನಡೆದಿದೆ. ಕಂಬಳಕಟ್ಟೆಯ ನಿವಾಸಿ 62 ವರ್ಷದ ಶ್ರೀನಿವಾಸ ಆಚಾರ್ಯ, 20 ಅಡಿ ಆಳದ ನೀರಿರುವ ಬಾವಿಗೆ ಬಿದ್ದು ಮೂರು ದಿನ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಗೆದ್ದುಬಂದಿದ್ದಾರೆ. ಹೌದು.. ಗ್ಯಾಸ್ ಸಿಲಿಂಡರ್ ಓಟಿಪಿಯಿಂದ (gas cylinder OTP ) ಬಡಜೀವ ಬದುಕಿ ಬಂದಿದೆ. ಇದು ಅಚ್ಚರಿ ಅನ್ನಿಸಿದರೂ ಸತ್ಯ.
ಮನೆ ಮುಂದಿನ 10 ಅಡಿ ಅಗಲ ಹಾಗೂ 20 ಅಡಿ ಆಳದ ಬಾವಿಗೆ ಕಸ ಬಿದ್ದು ಪಂಪ್ ಮೂಲಕ ನೀರು ಸರಿಯಾಗಿ ಬಾರದ ಕಾರಣ ಕಳೆದ ಶನಿವಾರ ಸಂಜೆ ಪಂಪ್ ಫುಟ್ ಬಾಲ್ ಪೈಪಿಗೆ ಕಟ್ಟಿದ್ದ ಹಗ್ಗವನ್ನು ಮೇಲಕ್ಕೆಳೆಯಲು ಅವರು ಪ್ರಯತ್ನಿಸಿದ್ದರು. ಈ ವೇಳೆ ಹಗ್ಗ ತುಂಡಾದ ಕಾರಣ ಆಯತಪ್ಪಿ ಬಾವಿಗೆ ಬಿದ್ದಿದ್ದಾರೆ. ಬಾವಿಯ ನೀರಿನಲ್ಲಿ ಮುಳುಗಿದರೂ ಜೀವ ಉಳಿಸಿಕೊಳ್ಳಲು ಪರದಾಡಿದ್ದ ಅವರ ಕೈಗೆ ಬಾವಿಯೊಳಗಿದ್ದ ಫುಟ್ ಬಾಲ್ ಪೈಪ್ ಹಾಗೂ ಅದಕ್ಕೆ ಕಟ್ಟಿದ್ದ ಹಗ್ಗ ಸಿಕ್ಕಿದ್ದು, ಅದನ್ನು ಹಿಡಿದುಕೊಂಡೇ ಜೀವ ರಕ್ಷಣೆಗಾಗಿ ಬೊಬ್ಬೆ ಹಾಕಿದ್ದರು. ಆದರೆ ಅವರ ಕೂಗು ಹೊರಕ್ಕೆ ಯಾರಿಗೂ ಕೇಳಿರಲಿಲ್ಲ. ಕೊನೆಗೆ ಗ್ಯಾಸ್ ಸಿಲಿಂಡರ್ ಓಟಿಪಿಯಿಂದಾಗಿ ಶ್ರೀನಿವಾಸ ಆಚಾರ್ಯರ ಜೀವ ಉಳಿದಿದೆ. ಅದು ಹೇಗೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.
ಬೆಂಗಳೂರು, ಏಪ್ರಿಲ್ 06: ಹೆಣ್ಣು ಮಕ್ಕಳ ಜತೆ ಕೆಲ ಆಟೋ, ಟ್ಯಾಕ್ಸಿ ಚಾಲಕರು ಸೇರಿದಂತೆ ಪುಂಡಪೋಕರಿಗಳು ಅಹಿತಕರವಾಗಿ ವರ್ತಿಸುವ ಘಟನೆಗಳ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ಬೆಂಗಳೂರು (Bengaluru) ನಗರವು ದೇಶದ ಅತ್ಯಂತ ಕಾಳಜಿಯುಳ್ಳ ಹಾಗೂ ಜವಾಬ್ದಾರಿಯುತ ನಗರಗಳಲ್ಲಿ ಒಂದಾಗಿದೆ ಎಂಬುದನ್ನು ಮತ್ತೆ ನೆನಪಿಸಿದೆ. ಇದಕ್ಕೆ ಕಾರಣವಾಗಿದ್ದು ಯುವತಿಯೂ ಹಂಚಿಕೊಂಡ ಈ ವಿಡಿಯೋ. ತಡರಾತ್ರಿ ಒಬ್ಬಂಟಿಯಾಗಿದ್ದ ವೇಳೆ ಈ ಯುವತಿಯ ಸುರಕ್ಷತೆಗಾಗಿ ಇಬ್ಬರು ಅಪರಿಚಿತರು ಬಂದಿದ್ದಾರೆ. ಅಪರಿಚಿತ ವ್ಯಕ್ತಿಗಳು ತೋರಿದ ಕಾಳಜಿ ಕಂಡು ಯುವತಿಯೂ ಫಿದಾ ಆಗಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Karnatakaportfolio ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಐಶ್ವರ್ಯ ಕಲ್ಪಾರ್ಜುನ್ ಎಂಬ ಯುವತಿ ತಮಗಾದ ಅನುಭವ ಹೇಳಿಕೊಂಡಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ, ಐಶ್ವರ್ಯ ಅವರು ತಡರಾತ್ರಿ ಬೆಂಗಳೂರು ಏರ್ಪೋರ್ಟ್ನಿಂದ ಕಾಡುಗೋಡಿಗೆ ಬಂದು ಇಳಿದಿದ್ದಾರೆ. ತಡರಾತ್ರಿ 3 ಗಂಟೆ ಆಗಿತ್ತು. ಆದರೆ ಅವರ ಮನೆಗೆ ಕಾಡುಗೋಡಿ ಬಸ್ ನಿಲ್ದಾಣದಿಂದ 3 ಕಿಲೋ ಮೀಟರ್ ದೂರದಲ್ಲಿದ್ದ ಕಾರಣ ಯಾವುದೇ ಟ್ಯಾಕ್ಸಿ ಅಥವಾ ಆಟೋಗಳು ಬರಲು ರೆಡಿ ಇರಲಿಲ್ಲ. ಟ್ಯಾಕ್ಸಿ ಬುಕ್ ಆಗುತ್ತಿರಲಿಲ್ಲ. ಹೀಗಾಗಿ ಟ್ಯಾಕ್ಸಿಗಾಗಿ ಕಾಯುತ್ತಿದ್ದ ವೇಳೆ ಅಲ್ಲಿದ್ದ ಒಬ್ಬ ಬಸ್ ಕಂಡಕ್ಟರ್ ಅವರ ಸಹಾಯಕ್ಕೆ ಧಾವಿಸಿದ್ದಾರೆ. ನಿಮಗೆ ಟ್ಯಾಕ್ಸಿ ಸಿಗುವವರೆಗೂ ನಾನು ಜೊತೆಯಲ್ಲೇ ಇರುತ್ತೇನೆ ಎಂದು ಧೈರ್ಯ ತುಂಬಿದ್ದಾರೆ ಎಂದು ಹೇಳಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
A heartwarming moment from Bengaluru has reminded people why the city is often called one of the most caring and responsible urban spaces in the country. A woman travelling late at night from the airport to Kadugodi on a BMTC airport bus found herself in a vulnerable situation… pic.twitter.com/GUhsQpPxeV
— Karnataka Portfolio (@karnatakaportf) April 6, 2026
ಅದೇ ವೇಳೆ ಕ್ಯಾಬ್ ಹಾಗೂ ಟ್ಯಾಕ್ಸಿ ಬುಕ್ ಮಾಡಿದ್ರೂ ಬುಕ್ ಆಗಲಿಲ್ಲ. ಅಲ್ಲಿಗೆ ಬಂದ ರಾಪಿಡೋ ಡ್ರೈವರ್ ಬಳಿ ಮನೆಗೆ ಬಿಡುವಂತೆ ಕೇಳಿದ್ದಾರೆ. ಎಷ್ಟು ಚಾರ್ಚ್ ಆಗುತ್ತದೆ ಎಂದು ವಿಚಾರಿಸುತ್ತಿದ್ದಂತೆ ಅದೆಲ್ಲಾ ಪರವಾಗಿಲ್ಲ ಮೇಡಂ, ಮೊದಲು ನೀವು ಮ್ಯಾಪ್ನಲ್ಲಿ ಲೊಕೇಶನ್ ತೋರಿಸಿ, ಲೇಟ್ ಆಗಿದೆ ಎಂದು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮನೆ ತಲುಪಿದ ಬಳಿಕ ಐಶ್ವರ್ಯ ಅವರು ಹಣದ ಬಗ್ಗೆ ಕೇಳಿದಾಗ ‘ಸಮಯ ತುಂಬಾ ಲೇಟ್ ಆಗಿದೆ, ಒಬ್ಬ ಮಹಿಳೆಯಾಗಿ ನಿಮ್ಮನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವುದು ನನ್ನ ಜವಾಬ್ದಾರಿಯಾಗಿತ್ತು. ಇಷ್ಟೇ ಹಣ ಬೇಕು ಎಂದು ನಾನು ಕೇಳುವುದಿಲ್ಲ, ನಿಮಗೆ ಎಷ್ಟು ಅನಿಸುತ್ತದೋ ಅಷ್ಟನ್ನು ಕೊಡಿ ಎಂದು ಉತ್ತರ ನೀಡಿದ್ದಾರೆ. ಈ ಘಟನೆಯ ಬಗ್ಗೆ ವಿವರಿಸುತ್ತಾ ಅಪರಿಚಿತ ವ್ಯಕ್ತಿಗಳ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಏಪ್ರಿಲ್ 6 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಹತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಉತ್ತರ ಭಾರತಕ್ಕಿಂತ ದಕ್ಷಿಣ ಭಾರತ ಸುರಕ್ಷಿತ ಎಂದು ಜನರು ಈಗ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ. ಇನ್ನೊಬ್ಬರು, ಅತ್ಯುತ್ತಮ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಬೆಂಗಳೂರಿನಲ್ಲಿ ಹೃದಯವಂತರು ಅಸಂಖ್ಯಾತ ಜನರಿದ್ದಾರೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಉಡುಪಿ, ಏಪ್ರಿಲ್ 06: ‘ಮುಳುಗುವವನಿಗೆ ಹುಲ್ಲು ಕಡ್ಡಿ ಕೂಡ ಆಸರೆ’ ಎನ್ನುವಂತೆ ಅದೊಂದು ಗ್ಯಾಸ್ ಸಿಲಿಂಡರ್ ಒಟಿಪಿಯಿಂದ ವೃದ್ಧ ಜೀವವೊಂದು ದೊಡ್ಡ ಅಪಾಯದಿಂದ ಬದುಕಿಬಂದಿದೆ. ಆಯತಪ್ಪಿ ಬಾವಿಗೆ ಬಿದ್ದಿದ್ದ ವ್ಯಕ್ತಿಯನ್ನು ಗ್ಯಾಸ್ ಸಿಲಿಂಡರ್ (Gas cylinder) ಒಟಿಪಿಯಿಂದ ರಕ್ಷಣೆ ಮಾಡಲಾಗಿದೆ. ಆ ಮೂಲಕ ಅಪರೂಪದ ಘಟನೆಗೆ ಉಡುಪಿ (udupi) ಜಿಲ್ಲೆ ಸಾಕ್ಷಿ ಆಗಿದೆ. ಸದ್ಯ ರಕ್ಷಣೆಗೊಳಗಾದ ವೃದ್ಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಡೆದಿದ್ದೇನು?
ಉಡುಪಿ ನಗರದ ಕೊಡವೂರು ವಾರ್ಡ್ ಕಂಬ್ಳಕಟ್ಟದಲ್ಲಿ ನಿರ್ಜನ ಪ್ರದೇಶದ ಮನೆಯಲ್ಲಿ ಶೀನಿವಾಸ್ ಆಚಾರ್ಯ(62) ಎಂಬುವವರು ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಅನಾರೋಗ್ಯದಿಂದ ಸುಧಾರಿಸಿಕೊಂಡದ್ದ ಅವರು ತೋಟಕ್ಕೆ ನೀರು ಹಾಯಿಸಲು ಅದೊಂದು ದಿನ ತೆರಳಿದ್ದಾರೆ. ಬಾವಿಗೆ ಹಾಕಿದ್ದ ಪಂಪ್ನಲ್ಲಿ ಕಸ ತುಂಬಿದೆ. ಅದನ್ನ ಸ್ವಚ್ಛ ಮಾಡಲು ಬಾವಿ ಕಡೆಗೆ ತೆರಳಿದ್ದಾರೆ. ಪೈಪ್ ಎಳೆಯಲು ಹೋಗಿ ಹಗ್ಗ ತುಂಡಾಗಿದೆ. ಈ ವೇಳೆ ಅವರು ಕೂಡ ಆಯತಪ್ಪಿ ಸುಮಾರು 15 ರಿಂದ 20 ಅಡಿ ಆಳದ ಬಾವಿಗೆ ಬಿದ್ದಿದ್ದಾರೆ.
ಒಂಟಿ ಮನೆ ಹಾಗೂ ಏಕಾಂಗಿಯಾಗಿ ಶ್ರೀನಿವಾಸ್ ಆಚಾರ್ಯ ವಾಸಿಸುತ್ತಿದ್ದ ಹಿನ್ನೆಲೆ ಯಾರ ಗಮನಕ್ಕೂ ಬಂದಿರಲಿಲ್ಲ. ಬಾವಿ ಒಳಗಿಂದ ಎಷ್ಟೇ ಬೊಬ್ಬೆ ಹೊಡೆದರು ಯಾರ ಅರಿವಿಗೂ ಬಂದಿಲ್ಲ. ಇನ್ನೇನು ಮಾಡುವುದು ಎಂದು ಬಾವಿಯಲ್ಲಿದ್ದ ಪೈಪ್ವೊಂದನ್ನು ಹಿಡಿದು ಕುಳಿತುಕೊಂಡಿದ್ದಾರೆ. ಶ್ರೀನಿವಾಸ್ ಆಚಾರ್ಯ ಅವರು ಹೇಳುವ ಪ್ರಕಾರ ಮೂರು ದಿನಗಳ ಕಾಲ ಬಾವಿಯಲ್ಲಿ ಇದ್ದೆ ಎನ್ನುತ್ತಿದ್ದಾರೆ.
ಜೀವ ಉಳಿಸಿತು ಗ್ಯಾಸ್ ಸಿಲಿಂಡರ್ ಒಟಿಪಿ
ಹೌದು. ಶ್ರೀನಿವಾಸ್ ಆಚಾರ್ಯರ ಜೀವ ಉಳಿಸಿದ್ದು ಗ್ಯಾಸ್ ಸಿಲಿಂಡರ್ ಎಂದರೆ ನೀವು ನಂಬಲೇಬೇಕು. ಶ್ರೀನಿವಾಸ್ ಅವರು ಸಿಂಗಲ್ ಗ್ಯಾಸ್ ಸಿಲಿಂಡರ್ ಹೊಂದಿದ್ದಾರೆ. ಗ್ಯಾಸ್ ಬುಕ್ ಮಾಡಿ ಪರಿಚಯಸ್ಥರಾದ ಗಣೇಶ್ ಎಂಬವರಿಂದ ಖಾಲಿ ಸಿಲಿಂಡರ್ ಪಡೆದಿದ್ದರು. ಆ ಮೂಲಕ ಹೊಸ ಸಿಲಿಂಡರ್ ಪಡೆಯುವ ನಿರೀಕ್ಷೆಯಲ್ಲಿದ್ದರು. ಈ ನಡುವೆ ಬಾವಿಗೆ ಬಿದ್ದಿದ್ದಾರೆ.
ಮೂರು ದಿನದ ಬಳಿಕ ಪತ್ತೆ
ಹೊಸ ಸಿಲಿಂಡರ್ ಪಡೆಯಲು ಒಟಿಪಿ ಬೇಕಾಗಿತ್ತು. ಗ್ಯಾಸ್ ಸರಬರಾಜಿಗೆ ಬಂದಾಗ ಶ್ರೀನಿವಾಸ್ ಆಚಾರ್ಯ ಮನೆಯಿಂದ ನಾಪತ್ತೆಯಾಗಿದ್ದರು. ಸ್ಥಳೀಯರು ಸಿಲಿಂಡರ್ ನೀಡಿದ್ದ ಗಣೇಶ್ ಅವರಿಗೆ ಮಾಹಿತಿ ನೀಡಿದ್ದಾರೆ. ಗಣೇಶ್ ತಮ್ಮ ಬಾಡಿಗೆ ಮನೆಯಲ್ಲಿ ಇರುವ ವ್ಯಕ್ತಿಗಳ ಮೂಲಕ ಶ್ರೀನಿವಾಸ್ಗಾಗಿ ಹುಡುಕಾಡಿದ್ದಾರೆ. ಈ ವೇಳೆ ತೋಟದ ಮನೆಯ ಮೂಲೆಯಲ್ಲಿರುವ ಬಾವಿಯಲ್ಲಿ ಶ್ರೀನಿವಾಸ್ ಬಿದ್ದಿರುವುದು ಪತ್ತೆ ಆಗಿದೆ.
ತಕ್ಷಣವೇ ಕಾರ್ಯಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ, ಶ್ರೀನಿವಾಸ್ ಆಚಾರ್ಯರನ್ನು ಬಾವಿಯಿಂದ ಮೇಲಕ್ಕೆ ಎತ್ತುವ ಮೂಲಕ ರಕ್ಷಣೆ ಮಾಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ.
ದಾವಣಗೆರೆ, (ಏಪ್ರಿಲ್ 06): ಮನೆಯಲ್ಲಿ ಇವರ ತಾತ ಇದ್ದಾಗ ಎಂಎಲ್ ಎ , ಮಂತ್ರಿ. ಈಗ ಮತ್ತೆ ಮಗ ಶಾಸಕ ಆದರೆ ದಾವಣಗೆರೆ ಅಕ್ಕ ಪಕ್ಕದ ಕ್ಷೇತ್ರದಲ್ಲಿ ಅವರದೇ ಟಿಕೆಟ್ ಕೊಟ್ಟು ಇಡೀ ದಾವಣಗೆರೆ (Davanagere) ಕಬ್ಜಾ ಮಾಡಿಕೊಳ್ಳುತ್ತಾರೆ. ಈ ಹುಡುಗ ಗೆದ್ದರೆ ಹಿ ಈಸ್ ಅ ಸ್ಮಾಲ್ ಬಾಯ್. ಕಾಂಗ್ರೆಸ್ ಪಕ್ಷದವರು ಬಾಗಲಕೋಟೆಯಲ್ಲಿ ಅಹಿಂದ , ಇಲ್ಲಿ ಗೋವಿಂದ. ಟೇಕನ್ ಫಾರ್ ಗ್ರಾಂಟೆಡ್ ಇವರದ್ದು. ಇಲ್ಲಿ ಯಾರೂ ಸಮರ್ಥರಿರಲಿಲ್ಲವಾ? ನಿಮ್ಮ ಮನೆ ತನಕ್ಕೆ ಆಗಬೇಕಿತ್ತಾ? ಅಲ್ಲಿ ಪ್ರಿಯಾಂಕಾ ಗಾಂಧಿ ಮಗನಿಗೂ ಕ್ಷೇತ್ರ ಹುಡುಕುತ್ತಿದ್ದಾರೆ. ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (pralhad joshi) ಕಾಂಗ್ರೆಸ್ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೊಶಿ, ದಾವಣಗೆರೆಯಲ್ಲಿ ಸಿದ್ದೇಶ್ವರ್ ಅವರ ಕಾಲದಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿ ಆಗಿದೆ. ಕಾಂಗ್ರೆಸ್ ಕಾರ್ಯಕರ್ತರು ಜಾಗೃತ ಆಗಬೇಕು. ಆ ಹುಡುಗನಿಗೆ ನೀವು ಈ ಸಲ ಗೆಲುವು ಕೊಟ್ಟರೆ ಮುಂದೆ ಸಮಸ್ಯೆ ಆಗಲಿದೆ. ಕಾಂಗ್ರೆಸ್ ನವರಿಗೂ ನಾನು ಕರೆ ಕೊಡುತ್ತೇನೆ, ಆ ಹುಡುಗನನ್ನ (ಸಮರ್ಥ್ ಶಾಮನೂರು) ಸೋಲಿಸಿ ಎಂದು ಕರೆ ನೀಡಿದರು.
ಅನ್ನಭಾಗ್ಯ ಅಕ್ಕಿ ಒಂದು ಅಗಳು ಕೊಡಿತ್ತಿಲ್ಲ. ನಾವು ಕೊಡುವ ಅಕ್ಕಿಯನ್ನು ಕೊಡುತ್ತಿದ್ದಾರೆ. ಎಲ್ ಪಿ ಜಿ ಗ್ಯಾಸ್ ತೊಂದರೆ ಇದೆ. ಆದ್ರೆ ಗೃಹ ಬಳಕೆಗೆ ಯಾವುದೇ ಸಮಸ್ಯೆ ಇಲ್ಲ. ರಾಹುಲ್ ಗಾಂಧಿ, ಸಿದ್ದರಾಮಯ್ಯನವರ ಹೇಳಿಕೆ ನೀವು ಕೇಳಿದ್ದೀರಿ. ಇನ್ನೆರಡು ದಿನಗಳಲ್ಲಿ ಪೆಟ್ರೋಲ್ ಸಿಗಲ್ಲ ಎಂದು ಹೇಳಿದ್ದಾರೆ. ಪೆಟ್ರೋಲ್ ನಿಮಗೆ ಸಿಕ್ಕಿಲ್ಲ ಅಂದರೆ ನಮಗೆ ಹೇಳಿ. ಶೇ 70ರಷ್ಟು ಪೆಟ್ರೀಲ್ ನಮ್ಮಲ್ಲಿ ಸ್ಟಾಕ್ ಎಂದು ಕಾಂಗ್ರೆಸ್ ನಾಯಕರ ಹೇಳಿಕೆ ತಿರುಗೇಟು ನೀಡಿದರು.
ನವದೆಹಲಿ, ಏಪ್ರಿಲ್ 6: ಇಂದು ಮಧ್ಯಾಹ್ನ ದೆಹಲಿ ವಿಧಾನಸಭೆಯಲ್ಲಿ (Delhi Assembly) ಗಂಭೀರ ಭದ್ರತಾ ಲೋಪ ಕಂಡುಬಂದಿದೆ. ಉತ್ತರ ಪ್ರದೇಶದ ನೋಂದಣಿ ನಂಬರ್ ಹೊಂದಿರುವ ಅಪರಿಚಿತ ಕಾರು ಗೇಟ್ ಅನ್ನು ಮುರಿದು ಒಳಗೆ ನುಗ್ಗಿದೆ. ಭದ್ರತಾ ಸಿಬ್ಬಂದಿ ನೋಡನೋಡುತ್ತಿದ್ದಂತೆ ಕಾರು ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಆಫೀಸ್ ಬಳಿ ತೆರಳಿದೆ. ಈ ಘಟನೆ ಕೋಲಾಹಲಕ್ಕೆ ಕಾರಣವಾಯಿತು. ಆ ಕಾರು, ಚಾಲಕ ಮತ್ತು ಘಟನೆಯ ಹಿಂದಿನ ಕಾರಣಗಳನ್ನು ಗುರುತಿಸಲು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಭದ್ರತಾ ವ್ಯವಸ್ಥೆಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.
ದೆಹಲಿ ಪೊಲೀಸರ ಪ್ರಕಾರ, ಉತ್ತರ ಪ್ರದೇಶ ನೋಂದಣಿ ಸಂಖ್ಯೆಯನ್ನು ಹೊಂದಿರುವ ಟಾಟಾ ಸಿಯೆರಾ ಕಾರು ಕಬ್ಬಿಣದ ಗೇಟ್ ಅನ್ನು ಮುರಿದು ವಿಧಾನಸಭಾ ಕಟ್ಟಡದ ಒಳಗೆ ನುಗ್ಗಿತು. ಒಳಗೆ ಬಂದ ಕಾರಿನಿಂದ ಇಳಿದ ಮುಸುಕುಧಾರಿ ಚಾಲಕ ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಯ ಕಡೆಗೆ ತೆರಳಿ ಅದರ ಹೊರಗೆ ಹೂವಿನ ಹೂಗುಚ್ಛ ಇಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ!
ಈ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ಕಾರಿನಲ್ಲಿ ಏನಿತ್ತು, ಅದರ ಮಾಲೀಕರು ಯಾರು ಮತ್ತು ಅದರಲ್ಲಿ ಯಾರಿದ್ದರು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ. “ಕಾರು ಚಾಲಕ ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಯ ಕಡೆಗೆ ತೆರಳಿ ಮುಖಮಂಟಪದ ಬಳಿ ಪುಷ್ಪಗುಚ್ಛವನ್ನು ಇರಿಸಿ ವಾಪಾಸ್ ತೆರಳಿದ್ದಾನೆ” ಎಂದು ದೆಹಲಿ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ಹೂಗುಚ್ಛದಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ. ಭದ್ರತೆಗಾಗಿ ವಿಐಪಿ ಗೇಟ್ನಲ್ಲಿ ಸಿಆರ್ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನಂತರ ಚಾಲಕ ಪರಾರಿಯಾಗಿದ್ದಾನೆ.
An unknown car enters into Delhi Legislative Assembly premises by breaking all the security barriers. The vehicle rammed through the main gate before entering the complex. After entering the assembly, moved inside briefly before exiting and disappearing from the scene.
ದೆಹಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ತನಿಖೆ ಆರಂಭಿಸಿದ್ದು, ಚಾಲಕ ಮತ್ತು ಕಾರನ್ನು ಹುಡುಕುತ್ತಿದ್ದಾರೆ. ಈ ಘಟನೆಯು ಗಂಭೀರ ಭದ್ರತಾ ಕಳವಳಗಳನ್ನು ಹುಟ್ಟುಹಾಕಿದೆ. ಇತ್ತೀಚೆಗೆ ಮುಕ್ತಾಯಗೊಂಡ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ವಿಧಾನಸಭೆಗೆ ಬಾಂಬ್ ಬೆದರಿಕೆ ಬಂದ ನಂತರ ಈ ಘಟನೆ ನಡೆದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಏಪ್ರಿಲ್ 6: ಹೊಸ ಹಣಕಾಸು ವರ್ಷ ಆರಂಭವಾಗಿದ್ದು, ಈಗ ಟ್ಯಾಕ್ಸ್ ರಿಟರ್ನ್ ಸಲ್ಲಿಸುವ ಸಮಯದ ಆರಂಭ. ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಐಟಿಆರ್ ಫಾರ್ಮ್ಗಳನ್ನು ನೋಟಿಫೈ ಮಾಡಿದೆ. ಈ ಫಾರ್ಮ್ಗಳಲ್ಲಿ ಕೆಲ ಬದಲಾವಣೆಗಳಾಗಿವೆ. ಪ್ರಕ್ರಿಯೆ ಸರಳಗೊಳಿಸಲಾಗಿರುವುದು, ಕಾನೂನು ಬದ್ಧತೆ ನಿಯಮ (compliance rules) ಕಠಿಣಗೊಳಿಸಿರುವುದು ಇತ್ಯಾದಿ ಬದಲಾವಣೆಗಳಿವೆ. ಆದರೆ, ಫಾರ್ಮ್ಗಳ ಸಂಖ್ಯೆಯಲ್ಲಿ ಬದಲಾವಣೆ ಆಗಿಲ್ಲ.
ಅಂದಹಾಗೆ, ಐಟಿ ರಿಟರ್ನ್ ಸಲ್ಲಿಸಲು ಜುಲೈ 31ರವರೆಗೆ ಕಾಲಾವಕಾಶ ಇರುತ್ತದೆ. ಹೀಗಾಗಿ, ಐಟಿಆರ್ ಫಾರ್ಮ್ಗಳಲ್ಲಿ ಮಾಡಲಾಗಿರುವ ಕೆಲ ಪ್ರಮುಖ ಬದಲಾವಣೆಗಳ ಬಗ್ಗೆ ಮಾಹಿತಿ ತಿಳಿದಿರುವುದು ಲೇಸು.
ರಾಜಕೀಯ ಪಕ್ಷಗಳಿಗೆ ದೇಣಿಗೆ
ಹಳೆದ ಟ್ಯಾಕ್ಸ್ ರಿಜೈಮ್ನಲ್ಲಿ ವಿವಿಧ ಡಿಡಕ್ಷನ್ಗಳಿಗೆ ಅವಕಾಶ ಇದೆ. ಅದರಲ್ಲಿ 80ಜಿ ಸೆಕ್ಷನ್ ಕೂಡ ಒಂದು. ಇದರಲ್ಲಿ ಚಾರಿಟಿ ಸಂಸ್ಥೆಗಳು, ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯ ಹಣಕ್ಕೆ ಟ್ಯಾಕ್ಸ್ ಡಿಡಕ್ಷನ್ ಕ್ಲೇಮ್ ಮಾಡಬಹುದು. ಈ ಸಂಬಂಧ ಒಂದು ಸಣ್ಣ ನಿಯಮ ಬದಲಾವಣೆ ಮಾಡಲಾಗಿದೆ. ನೀವು ದೇಣಿಗೆ ನೀಡುವ ರಾಜಕೀಯ ಪಕ್ಷದ ಪ್ಯಾನ್ ನಂಬರ್, ಹೆಸರನ್ನು ನಮೂದಿಸಬೇಕಾಗುತ್ತದೆ. ಕ್ಯಾಷ್ನಲ್ಲಿ ಎಷ್ಟು ಪಾವತಿಸಲಾಗಿದೆ, ಬೇರೆ ಮಾರ್ಗಗಳಲ್ಲಿ ಎಷ್ಟು ಪಾವತಿಸಲಾಗಿದೆ ಎಂಬುದನ್ನೂ ತಿಳಿಸಬೇಕಾಗುತ್ತದೆ.
ರಾಜಕೀಯ ಪಕ್ಷಗಳಿಗೆ ಮಾತ್ರವಲ್ಲ ಸೆಕ್ಷನ್ 80ಜಿ ಅಡಿಯಲ್ಲಿ ಚಾರಿಟಬಲ್ ಸಂಸ್ಥೆಗಳಿಗೆ ನೀಡುವ ದೇಣಿಗೆಗೆ ಡಿಡಕ್ಷನ್ ಕ್ಲೇಮ್ ಮಾಡಬಹುದು. ಅಲ್ಲಿಯೂ ಕೂಡ ಸ್ವೀಕೃತರ ಹೆಸರು, ಪ್ಯಾನ್ ಇತ್ಯಾದಿ ವಿವರ ನೀಡಬೇಕು. ಆನ್ಲೈನ್ನಲ್ಲಿ ಪೇಮೆಂಟ್ ಮಾಡಿದ್ದರೆ ರೆಫರೆನ್ಸ್ ನಂಬರ್, ಬ್ಯಾಂಕ್ನ ಐಎಫ್ಎಸ್ ಕೋಡ್ ಅನ್ನೂ ಹಾಕಬೇಕಾಗುತ್ತದೆ.
ಎಫ್ ಅಂಡ್ ಒ ಟ್ರೇಡಿಂಗ್ನ ಟರ್ನೋವರ್
ಫ್ಯೂಚರ್ಸ್ ಟ್ರೇಡಿಂಗ್, ಆಪ್ಷನ್ಸ್ ಟ್ರೇಡಿಂಗ್ನಲ್ಲಿ ತೊಡಗಿರುವವರು ಐಟಿಆರ್ ಸಲ್ಲಿಸುವಾಗ, ಪ್ರಾಫಿಟ್ ಮತ್ತು ಲಾಸ್ ಸ್ಟೇಟ್ಮೆಂಟ್ಗೆ ಡೆಬಿಟ್ ಮತ್ತು ಕ್ರೆಡಿಟ್ ಆಗಿರುವ ಪ್ರಮುಖ ಐಟಂಗಳ ಮಾಹಿತಿ ನೀಡಬೇಕಾಗುತ್ತದೆ. ಎಫ್ ಅಂಡ್ ಒ ಟ್ರೇಡಿಂಗ್ನ ಒಟ್ಟು ಟರ್ನೋವರ್ ಅನ್ನು ವರದಿ ಮಾಡಲು ನಿರ್ದಿಷ್ಟ ಕಾಲಂಗಳು ಫಾರ್ಮ್ನಲ್ಲಿ ಇರಲಿವೆ.
ಟ್ಯಾಕ್ಸ್ ಫೈಲ್ ಮಾಡುವಾಗ ನಮ್ಮ ಹೆಸರು, ಆಧಾರ್ ನಂಬರ್, ವಿಳಾಸ, ಸಂಪರ್ಕ ಇತ್ಯಾದಿ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡುತ್ತೇವೆ. ಎರಡು ಮೊಬೈಲ್ ನಂಬರ್, ಎರಡು ಇಮೇಲ್ ಐಡಿಗಳನ್ನು ಹಾಕಬಹುದು. ಆದರೆ, ಒಂದೇ ವಿಳಾಸ ನಮೂದಿಸಲು ಅವಕಾಶ ಇತ್ತು. ಈಗ ಹೊಸ ಐಟಿಆರ್ ಫಾರ್ಮ್ಗಳಲ್ಲಿ ಸೆಕೆಂಡರಿ ಅಡ್ರೆಸ್ಗೆ ಪ್ರತ್ಯೇಕ ಫೀಲ್ಡ್ ಜಾರಿ ತರಲಾಗಿದೆ.
ಟೆಹ್ರಾನ್, ಏಪ್ರಿಲ್ : ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಇಂದು ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ನ ನಡವಳಿಕೆ ಮತ್ತು ಹೇಳಿಕೆ ಎರಡರಲ್ಲೂ ಆಧುನಿಕ ಅನಾಗರಿಕತೆ ಗೋಚರಿಸುತ್ತಿದೆ ಎಂದು ಟೀಕಿಸಿದ್ದಾರೆ. ಎಎನ್ಐಗೆ ನೀಡಿದ ಲಿಖಿತ ಸಂದರ್ಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ಬಾಂಬ್ ಹಾಕುವುದಾಗಿ ನೀಡಿದ ಬೆದರಿಕೆ ಮತ್ತು ಟೆಹ್ರಾನ್ ಬಳಿಯ ಪ್ರಮುಖ ಸೇತುವೆಯನ್ನು ನಾಶಪಡಿಸಲಾಗಿದೆ ಎಂಬ ಅವರ ಇತ್ತೀಚಿನ ಹೇಳಿಕೆ ಬಗ್ಗೆ ಮಾತನಾಡಿದ್ದಾರೆ.
“ನಮ್ಮದು ಸಾವಿರಾರು ವರ್ಷಗಳ ಹಿಂದಿನ ನಾಗರಿಕತೆಯನ್ನು ಹೊಂದಿರುವ ರಾಷ್ಟ್ರ. ನಾವು ಎಂದಿಗೂ “ಶಿಲಾಯುಗಕ್ಕೆ” ಹಿಂತಿರುಗುವುದಿಲ್ಲ. ಇಂದು ನಾವು ಟ್ರಂಪ್ ಮತ್ತು ಬೆಂಜಮಿನ್ ನೆತನ್ಯಾಹು ಅವರಂತಹ ವ್ಯಕ್ತಿಗಳ ನಡವಳಿಕೆಯಲ್ಲಿ ಆಧುನಿಕ ಅನಾಗರಿಕತೆಯ ಒಂದು ರೂಪವನ್ನು ನೋಡುತ್ತಿದ್ದೇವೆ. ಮಕ್ಕಳ ಹತ್ಯೆ, ಶಾಲೆಗಳು, ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳು ಮತ್ತು ಲಸಿಕೆ ಮತ್ತು ಔಷಧ ಉತ್ಪಾದನಾ ಕೇಂದ್ರಗಳ ಮೇಲಿನ ದಾಳಿಗಳು ಹಿಂಸಾತ್ಮಕ ಮತ್ತು ಅಮಾನವೀಯ ವಿಧಾನದ ಸೂಚನೆಗಳಾಗಿವೆ” ಎಂದು ಅವರು ಹೇಳಿದ್ದಾರೆ.
“ಪ್ರಸ್ತುತ ಪರಿಸ್ಥಿತಿಯಲ್ಲಿ ಇರಾನ್ನ ಆದ್ಯತೆಯೆಂದರೆ, ಶತ್ರುಗಳ ಆಕ್ರಮಣ ಮತ್ತು ಪ್ರತಿಕೂಲ ಕ್ರಮಗಳ ವಿರುದ್ಧ ನಮ್ಮ ದೇಶವನ್ನು ರಕ್ಷಿಸುವುದು. 38 ದಿನಗಳಿಂದ ನಾವು ಆಕ್ರಮಣಕಾರರ ವಿರುದ್ಧ ಹೋರಾಡಿ ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತಿದ್ದೇವೆ. ಅಮೆರಿಕ ಮತ್ತು ಜಿಯೋನಿಸ್ಟ್ ಆಕ್ರಮಣಕಾರರ ದಾಳಿಗೆ ಸೂಕ್ತ ಪ್ರತಿಕ್ರಿಯೆ ನೀಡುವುದಕ್ಕೆ ನಮ್ಮ ಮೊದಲ ಆದ್ಯತೆ” ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಆನೇಕಲ್, ಏಪ್ರಿಲ್ 06: ಕನ್ನಡಿಗರನ್ನು ಹಿಂಬಾಲಿಸಿಕೊಂಡು ಬಂದ ತಮಿಳುನಾಡಿನ ಗೂಂಡಾಗಳು ಟಿಟಿ ವಾಹನವನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ಚಾಲಕನಿಗೆ ಮಾರಣಾಂತಿಕವಾಗಿ ಹಲ್ಲೆ (attack)ಮಾಡಿ ದರ್ಪ ಮೆರೆದಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಟೋಲ್ ಬಳಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರ ಹಿಡಿದು ಟಿಟಿ ವಾಹನ ಹಿಂಬಾಲಿಸಿ ಬಂದಿದ್ದ ತಮಿಳಿಗರು, ಮಹಿಳೆಯರು, ಮಕ್ಕಳು ಇದ್ದಾರೆಂದು ಗೋಗರೆದರೂ ಬಿಡದೆ ಟಿಟಿ ವಾಹನದ ಗಾಜು ಪುಡಿಗೈದು ಅಟ್ಟಹಾಸ ಮೆರೆದಿದ್ದಾರೆ. ಸದ್ಯ ಚಾಲಕ ರಾಮಕೃಷ್ಣ ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಡೆದಿದ್ದೇನು?
ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ವೈಟ್ಫೀಲ್ಡ್ನಿಂದ ತಮಿಳುನಾಡಿನ ಕೃಷ್ಣಗಿರಿಗೆ ಟಿಟಿ ವಾಹನದ ಚಾಲಕ ರಾಮಕೃಷ್ಣ ಕನ್ನಡಿಗರನ್ನು ಕರೆದುಕೊಂಡು ಬಾಡಿಗೆಗೆ ಹೋಗಿದ್ದರು. ಈ ವೇಳೆ ಟೆಂಪೊ ಟ್ರಾವೆಲರ್ನಲ್ಲಿದ್ದ ಕನ್ನಡಿಗರ ಜೊತೆ ಅಲ್ಲಿನ ಸ್ಥಳೀಯರು ಕಿರಿಕ್ ತೆಗೆದಿದ್ದರು. ಅಲ್ಲಿಂದ ತಪ್ಪಿಸಿಕೊಂಡು ಕನ್ನಡಿಗರು ಟಿಟಿ ವಾಹನದಲ್ಲಿ ಅತ್ತಿಬೆಲೆ ಕಡೆಗೆ ಬಂದಿದ್ದಾರೆ.
ಅಷ್ಟಕ್ಕೆ ಸುಮ್ಮನಾಗದ ತಮಿಳುನಾಡಿನ ಗೂಂಡಾಗಳು ದೊಣ್ಣೆ, ಮಾರಕಾಸ್ತ್ರ ಹಿಡಿದು ಟಿಟಿ ವಾಹನ ಹಿಂಬಾಲಿಸಿ ಬಂದಿದ್ದಾರೆ. ಅತ್ತಿಬೆಲೆ ಟೋಲ್ನಲ್ಲಿ ಟಿಟಿ ಅಡ್ಡಗಟ್ಟಿದ ಗೂಂಡಾಗಳು ರಾಷ್ಟ್ರೀಯ ಹೆದ್ದಾರಿಯಲ್ಲೇ ವಾಹನದ ಗಾಜು ಪುಡಿಗಟ್ಟಿದ್ದಾರೆ. ಚಾಲಕ ರಾಮಕೃಷ್ಣ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಮಹಿಳೆಯರು ಮತ್ತು ಮಕ್ಕಳು ಇದ್ದಾರೆಂದು ಗೋಗರೆದರೂ ಬಿಡದೆ ಹಲ್ಲೆ ಮಾಡಿದ್ದಾರೆ. ತಮಿಳು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ತಮಿಳು ಗೂಂಡಾಗಳ ದಬ್ಬಾಳಿಕೆಯ ದೃಶ್ಯ ಟಿಟಿ ವಾಹನದ ಡ್ಯಾಶ್ ಕ್ಯಾಮರಾದಲ್ಲಿ ಸೆರೆ ಆಗಿದೆ.
ಸದ್ಯ ಟಿಟಿ ಚಾಲಕ ರಾಮಕೃಷ್ಣ ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಪ್ರಕರಣದ ಕುರಿತಾಗಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದಿನ ಕಾಲದಲ್ಲಿ ಹಲವರಿಗೆ ಅತಿಯಾಗಿ ಯೋಚಿಸುವ ಅಭ್ಯಾಸವಿದೆ (Overthinking). ಚಿಕ್ಕ ವಿಷಯವಾಗಲಿ ಅಥವಾ ದೊಡ್ಡದಾಗಿರಲಿ ಅದರ ಬಗ್ಗೆ ಅತಿಯಾಗಿ ಯೋಚನೆ ಮಾಡುತ್ತಾರೆ. ಆದರೆ ಇದು ಅಷ್ಟಾಗಿ ಯಾರ ಅರಿವಿಗೂ ಬರುವುದಿಲ್ಲ. ಇನ್ನು ಕೆಲವರು ಇದನ್ನು ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ. ಆದರೆ ಅದು ಸರಿಯಲ್ಲ, ಆರೋಗ್ಯ ತಜ್ಞರು ಹೇಳುವ ಪ್ರಕಾರ, ಈ ರೀತಿಯ ಅಭ್ಯಾಸ ನಿಧಾನವಾಗಿ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಸಾಮಾನ್ಯವಾಗಿ ಸಣ್ಣ ಸಣ್ಣ ವಿಷಯಗಳನ್ನು ಮತ್ತೆ ಮತ್ತೆ ಯೋಚಿಸುವುದರಿಂದ ಮನಸ್ಸಿನಲ್ಲಿ ಒತ್ತಡ ಉಂಟಾಗುತ್ತದೆ. ಇದರಿಂದ ದೇಹ ಮತ್ತು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿದ್ರೆ ಸರಿಯಾಗಿ ಆಗದೆ ದೇಹಕ್ಕೆ ಬೇಕಾದ ವಿಶ್ರಾಂತಿ ಸಿಗುವುದಿಲ್ಲ. ಇದರಿಂದ ಆತ್ಮವಿಶ್ವಾಸವೂ ಕಡಿಮೆಯಾಗಬಹುದು ಮತ್ತು ವ್ಯಕ್ತಿ ಸದಾ ಚಿಂತೆಯಲ್ಲಿ ಇರುತ್ತಾನೆ. ಅಷ್ಟೇಅಲ್ಲ, ಮುಂದೆ ಇದು ಕೆಲವು ರೀತಿಯ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಹಾಗಾದರೆ ಈ ರೀತಿ ಅತಿಯಾಗಿ ಯೋಚನೆ ಮಾಡುವ ಅಭ್ಯಾಸವನ್ನು ತಡೆಯುವುದು ಹೇಗೆ, ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಅತಿಯಾಗಿ ಯೋಚಿಸುವುದರಿಂದ ಬರುವ ರೋಗಗಳು
ಒತ್ತಡ ಮತ್ತು ಆತಂಕ
ಡಿಪ್ರೆಷನ್
ನಿದ್ರಾಹೀನತೆ
ತಲೆನೋವು ಮತ್ತು ಮೈಗ್ರೇನ್
ಜೀರ್ಣಕ್ರಿಯೆ ಸಮಸ್ಯೆಗಳಾದ ಗ್ಯಾಸ್ಟ್ರಿಕ್, ಆಸಿಡಿಟಿ, ಹೊಟ್ಟೆ ನೋವು
ಹೈ ಬ್ಲಡ್ ಪ್ರೆಶರ್
ಈ ಸಮಸ್ಯೆಗಳು ನಿಧಾನವಾಗಿ ವ್ಯಕ್ತಿಯ ದಿನನಿತ್ಯದ ಜೀವನ ಮತ್ತು ಆರೋಗ್ಯವನ್ನು ಹಾನಿಗೊಳಿಸಬಹುದು.
ಇದನ್ನು ತಡೆಯುವುದು ಹೇಗೆ?
ಮನಸ್ಸನ್ನು ವ್ಯಸ್ತವಾಗಿಡಿ
ನಿಯಮಿತ ವ್ಯಾಯಾಮ, ಯೋಗ ಮತ್ತು ಧ್ಯಾನ ಮಾಡಿ
ಸಮಯಕ್ಕೆ ಸರಿಯಾಗಿ ನಿದ್ರೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ
ಪಾಸಿಟಿವ್ ಚಿಂತನೆಗಳನ್ನು ಅಳವಡಿಸಿಕೊಳ್ಳಿ
ಸಮಸ್ಯೆಗಳನ್ನು ಯೋಚಿಸುವುದಕ್ಕಿಂತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ
ಅತಿಯಾಗಿ ಯೋಚಿಸುವ ಅಭ್ಯಾಸ ದಿನನಿತ್ಯದ ಕೆಲಸ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಈ ರೀತಿ ಆಗುವುದಕ್ಕೆ ಆರಂಭವಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ನಿರಂತರ ಆತಂಕ, ನಿದ್ರಾಹೀನತೆ ಅಥವಾ ಕೆಟ್ಟ ಆಲೋಚನೆಗಳು ಕಂಡುಬಂದರೆ ಅದನ್ನು ನಿರ್ಲಕ್ಷಿಸಬಾರದು. ಒಟ್ಟಿನಲ್ಲಿ, ಅತಿಯಾಗಿ ಯೋಚಿಸುವುದು ಸಣ್ಣ ಸಮಸ್ಯೆಯಂತೆ ಕಾಣಿಸಿದರೂ, ಇದು ದೀರ್ಘಕಾಲದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ಗಮನ ನೀಡಿ, ಅಗತ್ಯವಿದ್ದರೆ ತಜ್ಞರ ಸಹಾಯ ಪಡೆಯುವುದು ಉತ್ತಮ.
ಖ್ಯಾತ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಮಂಜು (Shreyas Manju) ಅವರು ಚಿತ್ರರಂಗದಲ್ಲಿ ನಟನಾಗಿ ಸಕ್ರಿಯರಾಗಿದ್ದಾರೆ. ‘ಪಡ್ಡೆಹುಲಿ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟ ಅವರು ಈಗ ಬೇರೆ ಬೇರೆ ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿದ್ದಾರೆ. ಶ್ರೇಯಸ್ ಮಂಜು ನಟಿಸುತ್ತಿರುವ ‘ದಿಲ್ದಾರ್’ (Dildar) ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ. ಅದರ ಝಲಕ್ ತೋರಿಸಲು ಟೀಸರ್ ರಿಲೀಸ್ ಆಗಿದೆ. ಶ್ರೇಯಸ್ ಮಂಜು ಅವರು ಬರ್ತ್ಡೇ (ಏಪ್ರಿಲ್ 5) ಪ್ರಯುಕ್ತ ಟೀಸರ್ ಬಿಡುಗಡೆ ಆಗಿದ್ದು ವಿಶೇಷ.
ಈ ಟೀಸರ್ ಮೂಲಕ ಶ್ರೇಯಸ್ ಮಂಜು ಅವರ ಹುಟ್ಟುಹಬ್ಬದ ಸಂಭ್ರಮವನ್ನು ಹೆಚ್ಚಿಸಲಾಯಿತು. ಜನ್ಮದಿನಕ್ಕೆ ಉಡುಗೊರೆ ಎಂಬಂತೆ ಬಿಡುಗಡೆ ಆದ ಈ ಟೀಸರ್ ಮೂಲಕ ವಿಶ್ ಮಾಡಲಾಗಿದೆ. ಮೊದಲಿನಿಂದಲೂ ಆ್ಯಕ್ಷನ್ ಲುಕ್ನಲ್ಲಿ ಮಿಂಚುತ್ತಾ ಬಂದಿರುವ ಶ್ರೇಯಸ್ ಮಂಜು ಅವರಿಗೆ ‘ದಿಲ್ದಾರ್’ ಸಿನಿಮಾದಲ್ಲಿ ಕೂಡ ಅದೇ ರೀತಿಯ ಪಾತ್ರ ಇರಲಿದೆ ಎಂಬುದು ಈ ಟೀಸರ್ ಮೂಲಕ ಗೊತ್ತಾಗಿದೆ.
‘ದಿಲ್ದಾರ್’ ಸಿನಿಮಾದ ಈ ಟೀಸರ್ನಲ್ಲಿ ಶ್ರೇಯಸ್ ಮಂಜು ಅವರ ಆ್ಯಕ್ಷನ್ ಅಬ್ಬರ ಇನ್ನೊಂದು ಮಟ್ಟಕ್ಕೆ ಏರಿದೆ. ಟೀಸರ್ ನೋಡಿದ ಸಿನಿಪ್ರಿಯರಿಗೆ ಈ ಚಿತ್ರದ ಮೇಲೆ ನಿರೀಕ್ಷೆ ಮೂಡುವಂತಾಗಿದೆ. ಟೀಸರ್ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ಈ ಸಿನಿಮಾದ ಬಹುತೇಕ ಕೆಲಸಗಳು ಮುಗಿದಿದ್ದು, ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
‘ದಿಲ್ದಾರ್’ ಸಿನಿಮಾದ ಟೀಸರ್:
ಮಧು ಗೌಡ ಗಂಗೂರ್ ಅವರು ‘ದಿಲ್ದಾರ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಹೊಸ ತಲೆಮಾರಿನ ಪ್ರೇಕ್ಷಕರಿಗೆ ಹೆಚ್ಚು ಕನೆಕ್ಟ್ ಆಗುವಂತಹ ಕಥೆ ಈ ಸಿನಿಮಾದಲ್ಲಿ ಇದೆ ಎಂದು ಚಿತ್ರತಂಡ ಹೇಳಿದೆ. ಸದ್ಯಕ್ಕೆ ಶ್ರೇಯಸ್ ಮಂಜು ಅವರ ಬರ್ತ್ಡೇ ಟೀಸರ್ ಮೂಲಕ ಒಟ್ಟಾರೆ ಸಿನಿಮಾ ಹೇಗೆ ಮೂಡಿಬಂದಿರಬಹುದು ಎಂಬುದರ ಸುಳಿವು ಸಿಕ್ಕಿದೆ.
‘ಏನ್ಸಿಯೆಂಟ್ ಮೂವೀಸ್’ ಬ್ಯಾನರ್ ಮೂಲಕ ಡಾ. ಆರ್. ಸಂತೋಷ್ ಕುಮಾರ್ (ಎಸ್ವಿಟಿ) ಅವರು ‘ದಿಲ್ದಾರ್’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಟ ಶರಣ್ ಅವರ ತಂಗಿ ಮಗಳಾದ ಕೀರ್ತಿ ಕೃಷ್ಣ ಅವರು ಈ ಸಿನಿಮಾದ ಮೂಲಕ ಹೀರೋಯಿನ್ ಆಗಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಸಾಧು ಕೋಕಿಲ, ಚಿಲ್ಲರ್ ಮಂಜು, ಚಂದ್ರಪ್ರಭ, ಕಾರ್ತಿಕ್ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಕೆಜಿಎಫ್ ಖ್ಯಾತಿಯ ಅವಿನಾಶ್, ಭಜರಂಗಿ ಲೋಕಿ, ಅರ್ಪಿತ್ ಅವರು ವಿಲನ್ ಆಗಿ ನಟಿಸಿದ್ದಾರೆ.