ಮೈಸೂರು, ಮಾರ್ಚ್ 30:ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ನಡೆದ ದುರಂತ ಘಟನೆಯಲ್ಲಿ ಆರುವರೆ ತಿಂಗಳ ಮಗು ಸಾವನ್ನಪ್ಪಿದೆ. ಮನೆಯ ಹೊಸ್ತಿಲಿನಲ್ಲಿ ಪೂಜೆಗಾಗಿ ಇಟ್ಟಿದ್ದ ಒಣಗಿದ ದಾಸವಾಳ ಹೂವನ್ನು ಮಗು ಚಿನ್ಮಯಿಗೌಡ ಆಟವಾಡುತ್ತಾ ನುಂಗಿದೆ. ಇದರಿಂದ ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಪೋಷಕರು ಇದನ್ನು ಗಮನಿಸಿದ ಕೂಡಲೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಮಗು ಅಸುನೀಗಿದೆ. ಮಗುವಿನ ಗಂಟಲಿನಲ್ಲಿ ಒಣಗಿದ ದಾಸವಾಳ ಹೂವು ಸಿಲುಕಿಕೊಂಡಿದ್ದು ಉಸಿರುಗಟ್ಟುವಿಕೆಗೆ ಕಾರಣವಾಗಿದೆ ಎಂದು ನಂತರ ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗ/ನೆಲಮಂಗಲ, ಮಾರ್ಚ್ 30: ಲಾರಿಗೆ ಬೈಕ್ ಡಿಕ್ಕಿಯಾಗಿ ನವ ದಂಪತಿ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಶಂಕರಘಟ್ಟ ಗ್ರಾಮದ ಬಿಆರ್ಪಿ ಬಳಿ ನಡೆದಿದೆ. ಬೈಕ್ನಲ್ಲಿದ್ದ ಬಾಬು(30), ಸಾವಿತ್ರಿ(26) ಮೃತ ದುರ್ದೈವಿಗಳಾಗಿದ್ದು, ಹೋಟೆಲ್ ಕೆಲಸ ಮುಗಿಸಿ ಊರಿಗೆ ಹೋಗ್ತಿದ್ದಾಗ ಅಪಘಾತ ನಡೆದಿದೆ. ಮೃತರು ಚಿಕ್ಕಮಗಳೂರು ಜಿಲ್ಲೆಯ ತರಿಕೇರಿ ಮೂಲದವರಾಗಿದ್ದು, ಇವರ ಮುದುವೆ ಆಗಿ ಕೇವಲ ಆರು ತಿಂಗಳಾಗಿತ್ತು. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ದೇಗುಲಕ್ಕೆ ತೆರಳಿ ಹಿಂದಿರುಗುವಾಗ ಅಪಘಾತ: ಓರ್ವ ಸಾವು
ದೇವಸ್ಥಾನಕ್ಕೆ ತೆರಳಿ ಸಹೋದರರು ಹಿಂದಿರುಗುತ್ತಿದ್ದ ವೇಳೆ ನಡೆದ ಬೈಕ್ ಅಪಘಾತದಲ್ಲಿ ಓರ್ವ ಮೃತಪಟ್ಟು ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಲಮಂಗಲ ಸಮೀಪದ ಮಾದನಾಯಕನಹಳ್ಳಿ ಬಳಿ ನಡೆದಿದೆ. ಶ್ರೀನಿವಾಸ್ (68) ಮೃತ ವ್ಯಕ್ತಿಯಾಗಿದ್ದು, ವೆಂಕಟಾಚಲ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಚಿಕ್ಕ ಮದುರೈ ದೇವಸ್ಥಾನಕ್ಕೆ ತೆರಳಿದ್ದ ಇವರು ನೈಸ್ ರೋಡ್ ಮಾರ್ಗವಾಗಿ ಹಿಂದಿರುಗುವ ವೇಳೆ ದುರ್ಘಟನೆ ನಡೆದಿದೆ. ಇವರಿಬ್ಬರೂ ಕನಕಪುರದ ಹಾರೋಹಳ್ಳಿ ನಿವಾಸಿಗಳಾಗಿದ್ದು, ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿದ್ದಾರೆ. ನೆಲಮಂಗಲ ಶವಗಾರಕ್ಕೆ ಶ್ರೀನಿವಾಸ್ ಮೃತದೇಹವನ್ನು ರವಾನಿಸಲಾಗಿದೆ.
ಮೈಸೂರಿನ ಬೈಲಕುಪ್ಪೆಯಲ್ಲಿ ನಡೆದ ಹಿಟ್ ಆ್ಯಂಡ್ ರನ್ನಲ್ಲಿ ಓರ್ವ ಯುವಕ ದಾರುಣವಾಗಿ ಮೃತಪಟ್ಟಿದ್ದಾನೆ. ನಿನ್ನೆ ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅನಿಲ್ ಮೃತನಾಗಿದ್ದು, ಸ್ನೇಹಿತನ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕೊಂಡೊಯ್ಯುತ್ತಿದ್ದ ವೇಳೆ ಅಪಘಾತ ನಡೆದಿದೆ. ಕುಶಾಲನಗರದಿಂದ ಬೈಲಕುಪ್ಪೆಗೆ ಅಗಮಿಸುತ್ತಿದ್ದ ವೇಳೆ ಅಪರಿಚಿತ ಕಾರು ಆಟೋಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಆಟೋ ಬೈಕಿಗೆ ಗುದ್ದಿದ್ದು, ನೆಲದ ಮೇಲೆ ಬಿದ್ದ ಅನಿಲ್ ಮೇಲೆ ಅದೇ ಕಾರು ಹರಿದ ಪರಿಣಾಮ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಕಾರು ಸಮೇತ ಚಾಲಕ ಎಸ್ಕೇಪ್ ಆಗಿದ್ದು, ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ನವದೆಹಲಿ, ಮಾರ್ಚ್ 30: ಇರಾನ್ ಮೇಲೆ ದಾಳಿ ಮಾಡಿ ಕ್ಷಿಪ್ರವಾಗಿ ಸಮರ ಅಂತ್ಯಗೊಳಿಸುವ ಲೆಕ್ಕಾಚಾರ ಹಾಕಿದ್ದ ಅಮೆರಿಕಕ್ಕೆ ಈ ಯುದ್ಧ ನಿರೀಕ್ಷೆಮೀರಿ ದೀರ್ಘವಾಗುತ್ತಿದೆ. ಇರಾನ್ ಪ್ರತಿರೋಧಕ್ಕೆ ಅಮೆರಿಕ ಮತ್ತು ಇಸ್ರೇಲ್ ಹೈರಾಣಾಗಿವೆ. ಇದೀಗ ಅಮೆರಿಕವು ಭೂದಾಳಿ ಮೂಲಕ ಇರಾನ್ ಅನ್ನು ಕಟ್ಟಿಹಾಕಲು ಯೋಜಿಸುತ್ತಿರುವ ಸುದ್ದಿ ಇದೆ. ಇದಕ್ಕೆ ಇಂಬುಕೊಡುವಂತೆ ಸಾವಿರಾರು ಅಮೆರಿಕನ್ ಸೈನಿಕರು ವಿವಿಧ ಕಡೆ ಬೀಡುಬಿಟ್ಟು ಸಜ್ಜಾಗಿದ್ದಾರೆ. ಇರಾನ್ನ ಖರ್ಗ್ ದ್ವೀಪ ಸೇರಿದಂತೆ ಕೆಲ ನಿರ್ದಿಷ್ಟ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವುದು ಅಮೆರಿಕದ ತಂತ್ರವಾಗಿದೆ ಎನ್ನುವಂತಹ ಸುದ್ದಿಗಳಿವೆ.
ಇರಾನ್ನ ಆರ್ಥಿಕ ಜೀವನಾಳ ಈ ಖರ್ಗ್ ದ್ವೀಪ
ಇತರ ಪಶ್ಚಿಮ ಏಷ್ಯನ್ ರಾಷ್ಟ್ರಗಳಂತೆ ಇರಾನ್ಗೂ ತೈಲ ಮಾರಾಟವೇ ಪ್ರಮುಖ ಆದಾಯ ಮೂಲ. ಇರಾನ್ ಬಳಿ ಅಪಾರ ಪ್ರಮಾಣದ ತೈಲ ಸಂಪತ್ತು ಇದೆ. ಒಂದು ಅಂದಾಜು ಪ್ರಕಾರ 208.6 ಬಿಲಿಯನ್ ಬ್ಯಾರಲ್ಗಳಷ್ಟು ತೈಲ ನಿಕ್ಷೇಪವು ಇರಾನ್ನಲ್ಲಿ ಸದ್ಯದವರೆಗೆ ಪತ್ತೆಯಾಗಿದೆ. ಇದು ಜಗತ್ತಿನ ಒಟ್ಟು ತೈಲ ಸಂಪತ್ತಿನ ಶೇ. 12ರಷ್ಟು ಎಂದರೆ ಅದೆಷ್ಟು ಬೃಹತ್ ಇರಬಹುದು ಊಹಿಸಬಹುದು.
ಸದ್ಯ ಅಮೆರಿಕ ಹಾಕಿರುವ ನಿಷೇಧದ ನಡುವೆಯೂ ಇರಾನ್ ದೇಶವು ದಿನಕ್ಕೆ ಸುಮಾರು 40 ಲಕ್ಷ ಬ್ಯಾರಲ್ಗಳಷ್ಟು ಕಚ್ಛಾ ತೈಲವನ್ನು ಹೊರತರುತ್ತದೆ. ಆಂತರಿಕ ಬಳಕೆ ಬಿಟ್ಟು ಅದು ರಫ್ತು ಮಾಡುವ ತೈಲ ದಿನಕ್ಕೆ 11ರಿಂದ 15 ಲಕ್ಷ ಬ್ಯಾರಲ್ನಷ್ಟು ಎನ್ನಲಾಗುತ್ತಿದೆ.
ಖರ್ಗ್ ದ್ವೀಪದಲ್ಲೇ ಈ ತೈಲ ಸಂಪತ್ತು ಇಲ್ಲ…
ಇರಾನ್ನ ಖರ್ಗ್ ದ್ವೀಪವು ಒಂದು ಪ್ರಮುಖ ಬಂದರಿನಂತೆ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಬೃಹತ್ತಾದ ಶಿಪ್ ಟರ್ಮಿನಲ್ ಇದೆ. ಇರಾನ್ನ ಶೇ. 90ಕ್ಕೂ ಹೆಚ್ಚು ತೈಲ ರಫ್ತು ಇದೇ ಟರ್ಮಿನಲ್ ಮೂಲಕ ನಡೆಯುತ್ತದೆ. ಅಂದರೆ ಖರ್ಗ್ ದ್ವೀಪವು ಇರಾನ್ನ ಆರ್ಥಿಕ ಜೀವನಾಡಿಯೇ ಆಗಿಹೋಗಿದೆ.
ಇರಾನ್ನ ಅಪಾರ ತೈಲ ಸಂಪತ್ತಿನ ಮೇಲೆ ಅಮೆರಿಕ ಮತ್ತು ಟ್ರಂಪ್ನ ಕಣ್ಣು ನೆಟ್ಟಿದೆ. ಇದನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅಮೆರಿಕಕ್ಕೆ ಈಗ ಖರ್ಗ್ ದ್ವೀಪ ಬೇಕು. ಇದು ಅದರ ತೆಕ್ಕೆಗೆ ಹೋದರೆ ಇರಾನ್ನ ಜುಟ್ಟು ಜನಿವಾರ ಅಮೆರಿಕಕ್ಕೆ ಸಿಕ್ಕಂತಾಗುತ್ತದೆ. ಇದೇನಾದರೂ ಸಾಧ್ಯವಾದಲ್ಲಿ ವಿಶ್ವದ ಬಹುತೇಕ ಎಲ್ಲಾ ತೈಲ ಸಂಪತ್ತು ಅಮೆರಿಕದ ಪ್ರತ್ಯಕ್ಷ ಮತ್ತು ಪರೋಕ್ಷ ನಿಯಂತ್ರಣಕ್ಕೆ ಬಂದಂತಾಗುತ್ತದೆ.
ಬೆಂಗಳೂರು, ಮಾರ್ಚ್ 30: ದಿನದಿಂದ ದಿನಕ್ಕೆ ರಾಜ್ಯದಲ್ಲಿನ ಏರಿಕೆಯಾಗುತ್ತಿರುವ ಬೇಸಿಗೆ ತಾಪಮಾನವು ಕುಡಿಯುವ ನೀರಿನ ಸಂಕಷ್ಟಕ್ಕೆ ಕಾರಣವಾಗುವ ಸಾಧ್ಯತೆ ಇದೆ. ರಾಜ್ಯ ಮಟ್ಟದ ಹವಾಮಾನ ವೀಕ್ಷಣಾ ಸಮಿತಿಯ ಇತ್ತೀಚಿನ ವರದಿ ಪ್ರಕಾರ, ಈ ಬೇಸಿಗೆಯಲ್ಲಿ 207 ತಾಲೂಕುಗಳಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದ್ದು, ಈಗಾಗಲೇ 60 ತಾಲ್ಲೂಕುಗಳು ತೀವ್ರ ನೀರಿನ ಅಭಾವವನ್ನು ಎದುರಿಸುತ್ತಿವೆ. ಜೊತೆಗೆ 2,258 ಗ್ರಾಮ ಪಂಚಾಯಿತಿಗಳನ್ನು ಅಪಾಯ ಪ್ರದೇಶಗಳಾಗಿ ಗುರುತಿಸಲಾಗಿದ್ದು, ಅವುಗಳಲ್ಲಿ 212 ಪಂಚಾಯಿತಿಗಳು ಈಗಾಗಲೇ ಗಂಭೀರ ನೀರಿನ ಸಂಕಷ್ಟದಲ್ಲಿವೆ ಎನ್ನಲಾಗಿದೆ.
31 ಜಿಲ್ಲೆಗಳ ಪೈಕಿ ಉತ್ತರ ಕನ್ನಡ (12), ಬೆಳಗಾವಿ (14), ಕಲಬುರಗಿ (11) ಮತ್ತು ತುಮಕೂರು (10) ಜಿಲ್ಲೆಗಳ ತಾಲೂಕುಗಳು ಹೆಚ್ಚು ಸಮಸ್ಯೆಗೆ ಒಳಗಾಗಿವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಲಬುರಗಿ (180), ಉತ್ತರ ಕನ್ನಡ (170), ಹಾವೇರಿ (138), ಮಂಡ್ಯ (130) ಮತ್ತು ಬೆಳಗಾವಿ (126) ಜಿಲ್ಲೆಗಳು ಹೆಚ್ಚು ಪರಿಣಾಮ ಎದುರಿಸುತ್ತಿವೆ. ಸಂಕಷ್ಟ ನಿವಾರಣೆಗೆ ಸರ್ಕಾರ ಒಟ್ಟು 60 ಟ್ಯಾಂಕರ್ಗಳನ್ನು ನಿಯೋಜಿಸಿದೆ. ಜೊತೆಗೆ 270 ಖಾಸಗಿ ಬೋರ್ವೆಲ್ಗಳನ್ನು ಬಳಸಿಕೊಂಡು 246 ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.
ಮಾರ್ಚ್ನಿಂದ ಮೇ ಅವಧಿಯ ತೀವ್ರ ಬೇಸಿಗೆಯಲ್ಲಿ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ಕಾಣಿಸಿಕೊಳ್ಳುವ ಸಾಧ್ಯತೆ ಅಂದಾಜಿಸಲಾಗಿದೆ. ಜುಲೈ-ಆಗಸ್ಟ್ ಅವಧಿಯಲ್ಲಿ ಕಡಿಮೆ ಮಳೆಯಾಗುವ ನಿರೀಕ್ಷೆ ಇದ್ದು, ಕೃಷ್ಣಾ ಮತ್ತು ಕಾವೇರಿ ನದಿ ತಟ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯ ಕೊರತೆ ಉಂಟಾಗಬಹುದು. ಇದರಿಂದ ಕೃಷಿ ಕಾರ್ಯಗಳಿಗೆ ಹಾನಿಯಾಗುವುದಲ್ಲದೆ, ನೀರಿನ ಕೊರತೆಯಿಂದ ಕಾಡು ಪ್ರಾಣಿಗಳು ಮಾನವ ವಸತಿಗಳತ್ತ ಬರುತ್ತಿರುವ ಸಾಧ್ಯತೆ ಇದೆ. ಜೊತೆಗೆ ಜನರಲ್ಲಿ ರೋಗಗಳ ಪ್ರಮಾಣವೂ ಹೆಚ್ಚಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಬೆಂಗಳೂರು, ಮಾ.30: ಕರ್ನಾಟಕ ರಾಜ್ಯವು ಈ ತಿಂಗಳು ತನ್ನ ಇತಿಹಾಸದಲ್ಲೇ ಅತಿ ಹೆಚ್ಚಿನ ವಿದ್ಯುತ್ ಬೇಡಿಕೆಯನ್ನು ಎದುರಿಸುತ್ತಿದೆ. ಬಿಸಿಲಿನ ತಾಪ ಮತ್ತು ಹೆಚ್ಚುತ್ತಿರುವ ಎಸಿ (AC) ಬಳಕೆ ಹೈಟೆಕ್ ಸಿಟಿ ಬೆಂಗಳೂರನ್ನು ಅಕ್ಷರಶಃ ವಿದ್ಯುತ್ ಗುಳುಂ ಮಾಡುವ ದೈತ್ಯನನ್ನಾಗಿ ಮಾಡಿದೆ. ಈ ತಿಂಗಳು ರಾಜ್ಯದ ಒಟ್ಟು ವಿದ್ಯುತ್ ಬಳಕೆ 373.6 ಮಿಲಿಯನ್ ಯೂನಿಟ್ ತಲುಪುವ ನಿರೀಕ್ಷೆಯಿದೆ, ಇದು ಇದುವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ.
ಒಂದು ಸಣ್ಣ ರಾಜ್ಯ ಬಳಸುವಷ್ಟು ವಿದ್ಯುತ್ ಅನ್ನು ಕೇವಲ ಬೆಂಗಳೂರು ನಗರವೊಂದೇ ಬಳಸುತ್ತಿದೆ. ನಗರದ ಐಟಿ ಆಫೀಸ್ಗಳು, ಮಾಲ್ಗಳು ಮತ್ತು ಅಪಾರ್ಟ್ಮೆಂಟ್ಗಳಲ್ಲಿ ದಿನವಿಡೀ ಎಸಿಗಳು ಓಡುತ್ತಿರುವುದರಿಂದ ಬೆಂಗಳೂರಿನ ಪೀಕ್ ಡಿಮ್ಯಾಂಡ್ 2,000 ರಿಂದ 2,500 ಮೆಗಾವ್ಯಾಟ್ (MW) ತಲುಪಿದೆ. ಒಂದು ಮೆಗಾವ್ಯಾಟ್ನಿಂದ ಸುಮಾರು 800 ರಿಂದ 1,000 ಮನೆಗಳಿಗೆ ವಿದ್ಯುತ್ ನೀಡಬಹುದು ಎನ್ನುವುದನ್ನು ಗಮನಿಸಿದರೆ ನಗರದ ಬೇಡಿಕೆ ಎಷ್ಟು ಬೃಹತ್ ಎಂಬುದು ತಿಳಿಯುತ್ತದೆ.
ಮಾರ್ಚ್ ತಿಂಗಳಲ್ಲಿ ಎರಡು ಪ್ರಮುಖ ಕಾರಣಗಳಿಂದಾಗಿ ವಿದ್ಯುತ್ ಜಾಲದ (Grid) ಮೇಲೆ ಒತ್ತಡ ಹೆಚ್ಚಿದೆ. ಬೇಸಿಗೆಯ ಶಾಖದಿಂದಾಗಿ ನಗರವಾಸಿಗಳು ಎಸಿಗಳ ಮೇಲೆ ಅವಲಂಬಿತರಾಗಿದ್ದಾರೆ.ಗ್ರಾಮೀಣ ಕರ್ನಾಟಕದಲ್ಲಿ ರೈತರು ಬೇಸಿಗೆ ಬೆಳೆಗಾಗಿ ನೀರಾವರಿ ಪಂಪ್ಸೆಟ್ಗಳನ್ನು ನಿರಂತರವಾಗಿ ಬಳಸುತ್ತಿದ್ದಾರೆ.ಅಡುಗೆ ಅನಿಲದ ಕೊರತೆಯೂ ವಿದ್ಯುತ್ ಬೇಡಿಕೆ ಹೆಚ್ಚಲು ಕಾರಣವಾಗಬಹುದು. ಹೋಟೆಲ್ಗಳು ಮತ್ತು ಮನೆಗಳು ಗ್ಯಾಸ್ ಬದಲು ಇಂಡಕ್ಷನ್ ಸ್ಟೌವ್ ಅಥವಾ ಹೀಟರ್ಗಳಿಗೆ ಬದಲಾದರೆ, ಗ್ರಿಡ್ ಮೇಲೆ ಮತ್ತೆ 400 ರಿಂದ 500 ಮೆಗಾವ್ಯಾಟ್ ಹೆಚ್ಚುವರಿ ಹೊರೆ ಬೀಳುವ ಆತಂಕವಿದೆ.
ಇನ್ನು ವಿದ್ಯುತ್ ಅಭಾವ ತಲೆದೋರದಂತೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಹಗಲಿನ ಸಮಯದಲ್ಲಿ ಸೌರಶಕ್ತಿಯಿಂದ ಸುಮಾರು 7,000–7,500 ಮೆಗಾವ್ಯಾಟ್ ಪೂರೈಕೆಯಾಗುತ್ತಿದೆ. ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದೊಂದಿಗೆ ಕರ್ನಾಟಕವು ವಿದ್ಯುತ್ ಹಂಚಿಕೆ ಒಪ್ಪಂದ ಮಾಡಿಕೊಂಡಿದೆ. ಈಗ ಅಲ್ಲಿಂದ ವಿದ್ಯುತ್ ಪಡೆದು, ಮಳೆಗಾಲದಲ್ಲಿ ನಮ್ಮಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾದಾಗ ಅವರಿಗೆ ಮರಳಿ ನೀಡಲಾಗುತ್ತದೆ.ಏಪ್ರಿಲ್ 1 ರಿಂದ ಖಾಸಗಿ ಉಷ್ಣ ವಿದ್ಯುತ್ ಸ್ಥಾವರಗಳಿಂದ ಹೆಚ್ಚುವರಿ 1,000 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯಾಗಲಿದೆ. ಏಪ್ರಿಲ್ ಆರಂಭದ ವೇಳೆಗೆ ರೈತರು ಬೆಳೆ ಕಟಾವು ಮಾಡುವುದರಿಂದ ಮತ್ತು ಪ್ರೀ-ಮಾನ್ಸೂನ್ ಮಳೆ ಆರಂಭವಾಗುವುದರಿಂದ ವಿದ್ಯುತ್ ಬೇಡಿಕೆ ಕೊಂಚ ತಗ್ಗುವ ನಿರೀಕ್ಷೆಯಿದೆ.
ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ಮಾತೃವಿಯೋಗ ಉಂಟಾಗಿದೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರ ತಾಯಿ ಸ್ವರ್ಣಲತಾ ಹೈದರಾಬಾದ್ ಅಲ್ಲಿ ಕೊನೆಯುಸಿರು ಎಳೆದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ತಾಯಿಯನ್ನು ಪ್ರಕಾಶ್ ರಾಜ್ ಅವರು ದೇವತೆಯಂತೆ ನೋಡುತ್ತಿದ್ದರು.
ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಗದಗದವರು. ಅವರ ಬಗ್ಗೆ ಈ ಮೊದಲು ಪ್ರಕಾಶ್ ರಾಜ್ ಮಾತನಾಡಿದ್ದರು. ‘ನನ್ನ ತಾಯಿ ಗದಗದವರು. ಅವರು ಅನಾಥೆ ಆಗಿದ್ದರು. ನನ್ನ ಅಜ್ಜಿ ತೀರಿಕೊಂಡಾಗ ಅಮ್ಮನಿಗೆ 12 ವರ್ಷ ವಯಸ್ಸು. ಬೆಳಗಾವಿಯ ಅನಾಥಾಶ್ರಾಮದಲ್ಲಿ ಬೆಳೆದರು. ನರ್ಸಿಂಗ್ ಟ್ರೇನಿಂಗ್ ಮಾಡಿ ಬೆಂಗಳೂರಿಗೆ ಬಂದರು’ ಎಂದಿದ್ದರು ಪ್ರಕಾಶ್ ರಾಜ್.
‘ನಮ್ಮ ಅಪ್ಪ ಮಂಗಳೂರಿನವರು. ಅವರು ಬೆಂಗಳೂರಿಗೆ ಬಂದರು. ಇಬ್ಬರೂ ಮದುವೆ ಆದರು. ನಮ್ಮ ಅಪ್ಪನಿಗೆ ಅವರದ್ದೇ ಆದ ನಂಬಿಕೆ ಇದೆ, ತಾಯಿಗೆ ಅವರದ್ದೇ ಆದ ದೇವರ ನಂಬಿಕೆ ಇದೆ. ನನ್ನ ನಂಬಿಕೆ ಬೇರೆಯದೇ ಇದೆ’ ಎಂದು ಪ್ರಕಾಶ್ ರಾಜ್ ಅವರು ಹೇಳಿದ್ದರು.
ತಾಯಿಯನ್ನು ದೇವತೆ ರೀತಿಯಲ್ಲಿ ಪ್ರಕಾಶ್ ರಾಜ್ ನೋಡಿಕೊಳ್ಳುತ್ತಿದ್ದರು. ‘ಎಲ್ಲರನ್ನೂ ಓದಿಸಿದ್ದಳು ನನ್ನ ಅಮ್ಮ. ಅವಳ ತ್ಯಾಗ ಅಮೂಲ್ಯವಾದುದು. ನನ್ನ ತಂದೆ ದುಡಿಯುತ್ತಾ ಇರಲಿಲ್ಲ. ತಂಗಿಯನ್ನು ಮದುವೆ ಮಾಡಿದ್ದು ಅವಳೇ. ದೇವರ ಮುಂದೆ ನಿಂತು ಜಗಳ ಆಡುತ್ತಿದ್ದಳು, ಪ್ರಾರ್ಥನೆ ಮಾಡುತ್ತಿದ್ದಳು’ ಎಂದು ಪ್ರಕಾಶ್ ರಾಜ್ ಹೇಳಿದ್ದರು. ಸ್ವರ್ಣಲತಾ ಮಾಡಿದ ತ್ಯಾಗ ನೋಡಿ ತಾಯಿ ದೇವತೆ ರೀತಿಯೇ ಕಾಣುತ್ತಿದ್ದಳು.
ಪ್ರಕಾಶ್ ರಾಜ್ 1965 ಮಾರ್ಚ್ 26ರಂದು ಜನಿಸಿದರು. ಅವರ ತಂದೆ ಹೆಸರು ಮಂಜುನಾಥ್. 2000 ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ ಪ್ರಕಾಶ್ ರಾಜ್. ಕನ್ನಡ, ತೆಲುಗು, ತಮಿಳು ಸೇರಿದಂತೆ ಅನೇಕ ಚಿತ್ರಗಳಲ್ಲಿ ಪ್ರಕಾಶ್ ರಾಜ್ ನಟಿಸಿದ್ದಾರೆ.
ಬೀದರ್, ಮಾರ್ಚ್ 30: ಜಿಲ್ಲೆಯಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಕಲ್ಲಂಗಡಿ ಬೆಳೆಗಾರರಿಗೆ ಭಾರೀ ಹೊಡೆತ ಬಿದ್ದಿದೆ. ರಫ್ತು ವ್ಯವಹಾರದಲ್ಲಿ ವ್ಯತ್ಯಯ ಉಂಟಾಗಿ ಕಲ್ಲಂಗಡಿ ದರ ಪಾತಾಳಕ್ಕೆ ಕುಸಿದಿದ್ದು, ಕೆಜಿಗೆ ಕೇವಲ 4 ರಿಂದ 5 ರೂಪಾಯಿಗೆ ಮಾರಾಟವಾಗುತ್ತಿದೆ. ಕಟಾವು ಮತ್ತು ಸಾಗಾಟ ವೆಚ್ಚವೂ ಮರಳದ ಸ್ಥಿತಿ ನಿರ್ಮಾಣವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತಮ ಗುಣಮಟ್ಟದ ಕಲ್ಲಂಗಡಿ ಇದ್ದರೂ ಖರೀದಿದಾರರ ಕೊರತೆಯಿಂದ ಬೆಳೆ ಹೊಲದಲ್ಲಿಯೇ ಕೊಳೆಯುತ್ತಿದ್ದು, ಜಿಲ್ಲೆಯ ಬಹುತೇಕ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ.
ಬಾಗಲಕೋಟೆ, ಮಾರ್ಚ್ 30: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಏಪ್ರಿಲ್ 9ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಪ್ರಚಾರ ನಡೆಸಿದ ಬಿವೈ ವಿಜಯೇಂದ್ರ, ಪಕ್ಷದ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಚಾರಕ್ಕೆ ಬಂದರೆ ಸ್ವಾಗತಿಸುತ್ತೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದವರೇ ಕೆಲವರು ಒಳಗೊಳಗೆ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಸಹಕಾರ ನೀಡುತ್ತಿದ್ದಾರೆ. ಯಾರೇ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದರೂ, ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕೆಲಸ ಮಾಡಿದರೂ ಅದನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ.
ಬಿಜೆಪಿಯಲ್ಲಿ 20 ಬಾಗಿಲುಗಳಾಗಿವೆ ಎಂಬ ಸಚಿವ ಎಂಬಿ ಪಾಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಚುನಾವಣೆ ಫಲಿತಾಂಶ ಬರಲಿ. ಯಾವ ಪಕ್ಷದಲ್ಲಿ ಎಷ್ಟು ಗುಂಪುಗಾರಿಕೆ ಇದೆ ಎಂಬುದು ಆಗ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಮುಂಬೈ, ಮಾರ್ಚ್ 30: ಸಮಸ್ಯೆ ಇರುವ ಬಲಗೈಗೆ ಬಿಟ್ಟು ವೈದ್ಯರು ಬಾಲಕನ ಎಡಗೈಗೆ ಶಸ್ತ್ರ ಚಿಕಿತ್ಸೆ(Operation) ಮಾಡಿದ್ದಲ್ಲದೆ, ಬೆರಳನ್ನು ಕೂಡ ಕತ್ತರಿಸಿರುವ ಘಟನೆ ಮಹಾರಾಷ್ಟ್ರದ ಪಂಢರಪುರದಲ್ಲಿ ನಡೆದಿದೆ. ಸಾಮಾನ್ಯವಾಗಿ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡುವಾಗ ರೋಗಿಯ ಸಮಸ್ಯೆಯ ಬಗ್ಗೆ ಇದ್ದ ಫೈಲ್ ಅನ್ನು ಒಮ್ಮೆ ಓದಿದ ಬಳಿಕವೇ ಆಪರೇಷನ್ ಮಾಡುತ್ತಾರೆ. ಆದರೆ ಈ ವೈದ್ಯರು ಹಾಗೆ ಮಾಡಲೇ ಇಲ್ಲ.
ಬಾಲಕ ಪೋಸ್ಟಾಕ್ಸಿಯಲ್ ಪಾಲಿಡಾಕ್ಟಿಲಿಯಿಂದ ಬಳಲುತ್ತಿತ್ತು, ಎರಡೂ ಕೈಗಳಲ್ಲಿ ಹೆಚ್ಚುವರಿ ಕಿರುಬೆರಳುಗಳಿದ್ದವು, ಬಲಗೈಯ ಒಂದು ಬೆರಳಿನಲ್ಲಿ ಬಿಗಿತ, ನೋವು ಇದ್ದ ಕಾರಣ ಆಸ್ಪತ್ರೆಗೆ ಬಂದಿದ್ದರು.
ಶಸ್ತ್ರ ಚಿಕಿತ್ಸೆ ನಡೆಸಬೇಕೆಂದು ವೈದ್ಯರು ಸಲಹೆ ನಿಡಿದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಾಲಕನ ಬಲಗೈಗೆ ಶಸ್ತ್ರ ಚಿಕಿತ್ಸೆ ಮಾಡಬೇಕಿತ್ತು, ಆದರೆ, ವೈದ್ಯರು ಎಡಗೈಗೆ ತಪ್ಪಾಗಿ ತಪ್ಪಾಗಿ ಶಸ್ತ್ರ ಚಿಕಿತ್ಸೆ ನಡೆಸಿ ತಪ್ಪು ಬೆರಳನ್ನು ತೆಗೆದಿದ್ದಾರೆ. ದೋಷ ಕಂಡುಬಂದ ನಂತರ ಬಾಲಕನ ಕುಟುಂಬವು ತಕ್ಷಣ ದೂರು ದಾಖಲಿಸಿದೆ.
ಆಸ್ಪತ್ರೆ ಅಧಿಕಾರಿಗಳು ಮಗುವಿನ ಎರಡೂ ಕೈಯಲ್ಲೂ ದೋಷವಿತ್ತು ಎಂದು ಹೇಳಿಕೊಂಡಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಬೇಕಿತ್ತು ಎಂದಿದ್ದಾರೆ.ಆದರೆ ಕುಟುಂಬವು ಆತನ ಎಡಗೈಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ, ಎಂದು ಹೇಳಿದ್ದಾರೆ. ಈ ಆರೋಪಗಳ ನಂತರ, ಆರೋಗ್ಯ ಇಲಾಖೆ ವಿವರವಾದ ತನಿಖೆ ನಡೆಸಲು ಇಬ್ಬರು ಸದಸ್ಯರ ಸಮಿತಿಯನ್ನು ರಚಿಸಿತು.
ಬಲಗೈಯಲ್ಲಿ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡುವ NOCಗೆ ಸ್ಪಷ್ಟವಾಗಿ ಸಹಿ ಹಾಕಿದ್ದೇವೆ ಎಂದು ಮಗುವಿನ ಕುಟುಂಬ ಹೇಳಿದೆ. ಇದರ ಹೊರತಾಗಿಯೂ, ವೈದ್ಯರು ಎಡಗೈಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಪಾಟ್ನಾ, ಮಾರ್ಚ್ 30: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ಅವರು ತಮ್ಮ ವಿಧಾನಪರಿಷತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮಾರ್ಚ್ 16 ರಂದು ರಾಜ್ಯಸಭೆಗೆ ಆಯ್ಕೆಯಾದಾಗಿನಿಂದ, ಅವರು 14 ದಿನಗಳಲ್ಲಿ ರಾಜೀನಾಮೆ ನೀಡಬೇಕಾಗಿತ್ತು, ಆ ಗಡುವು ಇಂದು ಮುಕ್ತಾಯಗೊಳ್ಳುತ್ತಿತ್ತು. ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ಪರಿಷತ್ತಿನ ಅಧ್ಯಕ್ಷ ಅವಧೇಶ್ ನಾರಾಯಣ್ ಸಿಂಗ್ ಅವರಿಗೆ ರಾಜೀನಾಮೆ ಸಲ್ಲಿಸಲಾಯಿತು.
ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಅವರು (ನಿತೀಶ್ ಕುಮಾರ್) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ನಿತೀಶ್ ಕುಮಾರ್ ಅವರ ರಾಜೀನಾಮೆ ಬಿಹಾರ ರಾಜಕೀಯದಲ್ಲಿ ಹೊಸ ಯುಗದ ಆರಂಭ ಹುಟ್ಟುಹಾಕಲಿದೆ. 2005 ರಲ್ಲಿ ಎನ್ ಡಿಎ ಮೊದಲ ಜಯ ಸಾಧಿಸಿದ ನಂತರ ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಮೊದಲ ಬಾರಿಗೆ ಬಿಹಾರ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.
ರಾಜ್ಯಸಭೆಯಲ್ಲಿ ಅವರ ಅವಧಿ ಏಪ್ರಿಲ್ 10 ರಂದು ಪ್ರಾರಂಭವಾಗುತ್ತದೆ, ಆದರೆ ಹೊಸ ಮುಖ್ಯಮಂತ್ರಿಯ ನೇತೃತ್ವದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದ ರಾಜಕೀಯ ಚಟುವಟಿಕೆಗಳು ಖಂಡಿತವಾಗಿಯೂ ತೀವ್ರಗೊಳ್ಳುತ್ತವೆ.
ಬಿಜೆಪಿ ಅಥವಾ ಜೆಡಿಯು ಅಧಿಕೃತವಾಗಿ ಯಾವ ಪಕ್ಷವು ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುತ್ತದೆ ಎಂದು ಹೇಳಿಲ್ಲ, ಆದರೆ ಎರಡೂ ಪಕ್ಷಗಳ ಹಿರಿಯ ಅಧಿಕಾರಿಗಳು ನಿತೀಶ್ (75) ಅವರ ಸ್ಥಾನವನ್ನು ಬಿಜೆಪಿ ಅಭ್ಯರ್ಥಿ ಅಲಂಕರಿಸಲಿದ್ದಾರೆ ಎಂದು ಸೂಚಿಸಿದ್ದಾರೆ. ಏತನ್ಮಧ್ಯೆ, ನಿತೀಶ್ ಅವರ ಪುತ್ರ ನಿಶಾಂತ್ ಕುಮಾರ್ ಉಪಮುಖ್ಯಮಂತ್ರಿಯಾಗುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಬಿಜೆಪಿ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರನ್ನು ನಿತೀಶ್ ಕುಮಾರ್ ಸ್ಥಾನಕ್ಕೆ ಮುಂಚೂಣಿಯಲ್ಲಿ ಪರಿಗಣಿಸಲಾಗಿದೆ ಇದಕ್ಕೆ ಹಲವು ಕಾರಣಗಳೂ ಇವೆ.
ಮಾರ್ಚ್ 16 ರಂದು ಜೆಡಿಯು ಅಧ್ಯಕ್ಷರು ಸಂಸತ್ತಿನ ಮೇಲ್ಮನೆಗೆ ಆಯ್ಕೆಯಾದರು. ಸಂವಿಧಾನದ ಪ್ರಕಾರ, ಒಬ್ಬ ವ್ಯಕ್ತಿಯು ಏಕಕಾಲದಲ್ಲಿ ಎರಡು ಸದನಗಳ ಸದಸ್ಯತ್ವವನ್ನು ಹೊಂದಲು ಸಾಧ್ಯವಿಲ್ಲ, ಇದು 14 ದಿನಗಳಲ್ಲಿ ಒಂದು ಸ್ಥಾನವನ್ನು ತ್ಯಜಿಸುವುದು ಕಡ್ಡಾಯಗೊಳಿಸುತ್ತದೆ.