All posts by nagaraj11081993

Video: ಹೆತ್ತವರಿಗೆ ತಾನು ಕೆಲಸ ಮಾಡುವ ಬೆಂಗಳೂರಿನ ಮೈಕ್ರೋಸಾಫ್ಟ್ ಆಫೀಸ್ ತೋರಿಸಿದ ಉದ್ಯೋಗಿ – Kannada News

ಹೆತ್ತವರೊಂದಿಗೆ ತರುಣ್ ಖಂಡಾಗರೆImage Credit source: Instagram

ಬೆಂಗಳೂರು, ಜೂನ್ 10: ಮಕ್ಕಳಿಗೆ ತಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಊರು ಸುತ್ತಿಸಬೇಕು. ಕಷ್ಟ ಪಟ್ಟು ಓದಿಸಿ ಒಂದೊಳ್ಳೆ ಉದ್ಯೋಗ ಸಿಗಲು ಕಾರಣರಾದ ತಂದೆ ತಾಯಿಗೆ ತಾನು ಕೆಲಸ ಮಾಡುವ ಆಫೀಸ್ ತೋರಿಸಬೇಕು ಇಂತಹ ಸಾಕಷ್ಟು ಆಸೆಗಳಿರುವುದು ಸಹಜ. ಇದೀಗ ಇಂತಹ ಭಾವನಾತ್ಮಕ ಕ್ಷಣವನ್ನು ಬೆಂಗಳೂರಿನ (Bengaluru) ಮೈಕ್ರೋಸಾಫ್ಟ್ ಉದ್ಯೋಗಿಯೊಬ್ಬರು ಸೆರೆ ಹಿಡಿದಿದ್ದಾರೆ. ತಮ್ಮ ಹೆತ್ತವರನ್ನು ಮೈಕ್ರೋಸಾಫ್ಟ್ (Microsoft) ಆಫೀಸಿಗೆ ಕರೆದುಕೊಂಡು ಹೋಗಿ ತಾನು ಕೆಲಸ ಮಾಡುವ ಸ್ಥಳವನ್ನು ತೋರಿಸುವ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹೆತ್ತವರಿಗೆ ಹೆಮ್ಮೆ ತರುವ ಮಗನಾಗಿ ಇನ್ನು ಬೆಳೆಯಿರಿ ಎಂದು ಕಾಮೆಂಟ್‌ ಮಾಡಿದ್ದಾರೆ.

ತರುಣ್ ಖಂಡಾಗರೆ (me_tarun.khandagare) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೈಕ್ರೋಸಾಫ್ಟ್ ಉದ್ಯೋಗಿಯೊಬ್ಬರು ಹೆತ್ತವರನ್ನು ತಮ್ಮ ಆಫೀಸ್ ತೋರಿಸಲು ಕರೆದುಕೊಂಡು ಹೋಗಿರುವ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಪೋಷಕರು ಮೈಕ್ರೋಸಾಫ್ಟ್ ಬೆಂಗಳೂರಿಗೆ ಭೇಟಿ ನೀಡಿದರು ಎಂದು ಬರೆಯಲಾಗಿದೆ. ಪ್ರತಿಯೊಬ್ಬ ಹುಡುಗನೂ ತನ್ನ ಯಶಸ್ಸನ್ನು ಹೆತ್ತವರಿಗೆ ತೋರಿಸಬೇಕೆಂದು ಕನಸು ಕಾಣುತ್ತಾನೆ ಎಂದು ಕ್ಲಿಪ್ ನಲ್ಲಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ಕ್ಲಿಪಿಂಗ್‌ನಲ್ಲಿ ಮೈಕ್ರೋಸಾಫ್ಟ್ ಉದ್ಯೋಗಿಯೊಬ್ಬರು ಬಹಳ ಹೆಮ್ಮೆಯಿಂದ ತಮ್ಮ ಪೋಷಕರೊಂದಿಗೆ ಆಫೀಸಿನಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಹೆತ್ತವರು ಸಂತೋಷ ಮತ್ತು ಕುತೂಹಲದಿಂದ ಸುತ್ತಲೂ ನೋಡುತ್ತಿರುವುದು ಸೆರೆ ಹಿಡಿಯಲಾಗಿದೆ.

ಇದನ್ನೂ ಓದಿ: ತಿಂಗಳಿಗೆ ಲಕ್ಷ ಸಂಪಾದನೆಯಿದ್ರೂ ವೀಕೆಂಡ್‌ನಲ್ಲಿ ರ‍್ಯಾಪಿಡೋ ಬೈಕ್ ಓಡಿಸುವ ಬೆಂಗಳೂರಿನ ಸಾಫ್ಟ್‌ವೇರ್‌ ಇಂಜಿನಿಯರ್

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಒಬ್ಬ ಬಳಕೆದಾರ, ಈ ವಿಡಿಯೋ ನೋಡಿ ಖುಷಿಯಾಯ್ತು, ನಿಮ್ಮ ಹೆತ್ತವರನ್ನು ಹೆಮ್ಮೆಪಡುವಂತೆ ಮಾಡಿ ಮತ್ತು ಅವರನ್ನು ಯಾವಾಗಲೂ ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದಾರೆ. ಇನ್ನೊಬ್ಬರು, ಈ ವಿಡಿಯೋ ನನ್ನ ದಿನವನ್ನು ಸುಂದರಗೊಳಿಸಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ಪೋಷಕರು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:34 pm, Wed, 10 June 26

Source link

ಸಾರ್ವಜನಿಕ ಸೇವೆಯೇ ಉತ್ತಮ ಆಡಳಿತದ ಶ್ರೇಷ್ಠ ಮಾನದಂಡ: ಪ್ರಧಾನಿ ನರೇಂದ್ರ ಮೋದಿ – Kannada News

ನವದೆಹಲಿ, ಜೂನ್​​ 10: ಸಾರ್ವಜನಿಕ ಸೇವೆಯೇ ಉತ್ತಮ ಆಡಳಿತದ ಶ್ರೇಷ್ಠ ಮಾನದಂಡ ಎಂದು ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಪಾದಿಸಿದ್ದಾರೆ. ಪ್ರಧಾನಿಯಾಗಿ 12 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಜನಸೇವೆಯ ಮಹತ್ವದ ಬಗ್ಗೆ ಸಂದೇಶ ನೀಡಿದ್ದಾರೆ. ಜನಸೇವೆಯು ಉತ್ತಮ ಆಡಳಿತದ ನಿಜವಾದ ಪರೀಕ್ಷೆಯಾಗಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದ್ದಾರೆ. ಮೋದಿಯವರ ಪ್ರಕಾರ, ವಿನಮ್ರತೆ, ಸಮರ್ಪಣಾ ಭಾವನೆ ಮತ್ತು ಕರ್ತವ್ಯ ಪ್ರಜ್ಞೆಯಿಂದ ನಿರಂತರವಾಗಿ ಕೆಲಸ ಮಾಡುವ ವ್ಯಕ್ತಿ ಮಾತ್ರ ಜನರ ವಿಶ್ವಾಸವನ್ನು ಗಳಿಸಲು ಸಾಧ್ಯ. ಸಾರ್ವಜನಿಕರು ನಿಮ್ಮನ್ನು ಒಪ್ಪಿಕೊಂಡರೆ ಮತ್ತು ನಿಮ್ಮ ಮೇಲೆ ವಿಶ್ವಾಸ ಇಟ್ಟರೆ, ಅದಕ್ಕೆ ನೀವು ನೀಡುತ್ತಿರುವ ಆಡಳಿತವೇ ಮೂಲ ಕಾರಣ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಂಗಾತಿ ಜತೆ ಜಗಳವಾಡಿ, ಬೇಸರದಲ್ಲಿ ಮನುಷ್ಯರಂತೆ ಗಲ್ಲದ ಮೇಲೆ ಕೈ ಇಟ್ಟು ಗಾಢವಾಗಿ ಯೋಚಿಸುತ್ತಾ ಕುಳಿತ ಗೋರಿಲ್ಲಾ – Kannada News

ಟೋಕಿಯೋ, ಜೂನ್ 10: ಇಂಟರ್ನೆಟ್ ಜಗತ್ತಿನಲ್ಲಿ ಪ್ರಾಣಿ(Animal)ಗಳ ತಮಾಷೆಯ ಹಾಗೂ ಆಸಕ್ತಿದಾಯಕ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಆದರೆ, ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಂಚಲನ ಮೂಡಿಸುತ್ತಿರುವ ಜಪಾನ್‌ನ ಮೃಗಾಲಯವೊಂದರ ಈ ಗೊರಿಲ್ಲಾ.

ಜಪಾನ್‌ನ ನಗೋಯಾದಲ್ಲಿರುವ ಪ್ರಸಿದ್ಧ ಹಿಗಾಶಿಯಾಮಾ ಮೃಗಾಲಯದಲ್ಲಿ ವಾಸಿಸುವ 13 ವರ್ಷದ ಕಿಯೋಮಾಸ (Kiyomasa) ಎಂಬ ಗಂಡು ಗೊರಿಲ್ಲಾದ 62 ಸೆಕೆಂಡುಗಳ ವಿಡಿಯೋ ಕ್ಲಿಪ್ ಈಗ ಭಾರಿ ವೈರಲ್ ಆಗುತ್ತಿದೆ.

ಏನಿದು ವಿಡಿಯೋದ ವೈಶಿಷ್ಟ್ಯವೇನು?
ಮಾಧ್ಯಮಗಳ ವರದಿ ಪ್ರಕಾರ, ಕಿಯೋಮಾಸ ತನ್ನ ಸಂಗಾತಿಯೊಂದಿಗೆ ಜಗಳವಾಡಿದೆ. ಮೃಗಾಲಯದ ಅಧಿಕಾರಿಗಳ ಪ್ರಕಾರ ಇದು ಪ್ರಾಣಿಗಳಲ್ಲಿ ಸಹಜವಾಗಿ ನಡೆಯುವ ಸಣ್ಣ ಭಿನ್ನಾಭಿಪ್ರಾಯವೇ ಆಗಿದ್ದರೂ, ಕಿಯೋಮಾಸ ಮಾತ್ರ ಇದನ್ನು ತೀರಾ ಮನಸ್ಸಿಗೆ ಹಚ್ಚಿಕೊಂಡಿದೆ.

ಜಗಳ ಮುಗಿದ ನಂತರ, ಕಿಯೋಮಾಸ ಬೇಸರದಿಂದ ಕಾಂಕ್ರೀಟ್ ಮೆಟ್ಟಿಲುಗಳ ಬಳಿಗೆ ಹೋಗಿ ಯಾರೂ ಇಲ್ಲದೆ ಶಾಂತವಾಗಿ ಒಬ್ಬಂಟಿಯಾಗಿ ಕುಳಿತಿತ್ತು. ವಿಡಿಯೋದಲ್ಲಿ ಆತ ಕುಳಿತಿರುವ ಶೈಲಿ ಒಬ್ಬ ಮನುಷ್ಯ ತೀವ್ರ ಆಲೋಚನೆಯಲ್ಲಿ ಮುಳುಗಿರುವಂತೆ ಕಾಣಿಸುತ್ತದೆ. ಆತ ತನ್ನ ಗಲ್ಲವನ್ನು ಕೈಯಲ್ಲಿ ಹಿಡಿದುಕೊಂಡು, ಯಾವುದೋ ಜೀವನದ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ತತ್ವಜ್ಞಾನಿಯಂತೆ (Philosopher) ಗಂಭೀರವಾಗಿ ಯೋಚಿಸುತ್ತಿದ್ದಾನೆ. ಅಷ್ಟೇ ಅಲ್ಲದೆ, ಮಧ್ಯೆ ಮಧ್ಯೆ ತಲೆ ಕೆರೆದುಕೊಳ್ಳುವುದನ್ನು ಕಾಣಬಹುದು.

ವಿಡಿಯೋ

ಮನುಷ್ಯರಿಗೆ ಎಷ್ಟು ಹತ್ತಿರದಲ್ಲಿವೆ ಗೊರಿಲ್ಲಾಗಳು?
ಕಿಯೋಮಾಸನ ಈ ವಿಶಿಷ್ಟ ನಡವಳಿಕೆಯು ಪ್ರಾಣಿ ಪ್ರಿಯರನ್ನು ಮಾತ್ರವಲ್ಲದೆ ವಿಜ್ಞಾನಿಗಳನ್ನು ಮತ್ತು ಪ್ರಾಣಿ ತಜ್ಞರನ್ನು ಆಶ್ಚರ್ಯಗೊಳಿಸಿದೆ. ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ಗೊರಿಲ್ಲಾಗಳು ಮಾನವರ ಸರಿಸುಮಾರು ಶೇಕಡಾ 98 ರಷ್ಟು ಡಿಎನ್‌ಎ (DNA) ಹಂಚಿಕೊಳ್ಳುತ್ತವೆ.

ಮತ್ತಷ್ಟು ಓದಿ:

ವೈದ್ಯನ ಮನೆಯಲ್ಲಿ ಅಪರೂಪದ ವಿದೇಶಿ ಪ್ರಾಣಿಗಳು ಪತ್ತೆ! 7 ಮಂದಿ ಅಂದರ್

ಅವು ಕೇವಲ ಕಾಡಿನಲ್ಲಿ ಬದುಕುವ ಜೀವಿಗಳಲ್ಲ, ಬದಲಿಗೆ ಅತ್ಯಂತ ಸಾಮಾಜಿಕ ಪ್ರಾಣಿಗಳಾಗಿದ್ದು, ಮನುಷ್ಯರಂತೆಯೇ ಕೋಪ, ದುಃಖ, ಅಸೂಯೆ, ಪ್ರೀತಿ ಮತ್ತು ವಿಷಾದದಂತಹ ಎಲ್ಲಾ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುವ ಮತ್ತು ಅನುಭವಿಸುವ ಸಾಮರ್ಥ್ಯವನ್ನು ಹೊಂದಿವೆ ಎಂಬುದನ್ನು ಈ ವಿಡಿಯೋ ಮತ್ತೊಮ್ಮೆ ಸಾಬೀತುಪಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:14 pm, Wed, 10 June 26

Source link

ಬ್ಯಾಟ್ ಲಾಕ್ ಮಾಡಿದ ಕೀಪರ್: ಟೀಮ್ ಇಂಡಿಯಾ ಆಟಗಾರ ರನೌಟ್! – Kannada News

ಕ್ರಿಕೆಟ್ ಮೈದಾನದಲ್ಲಿ ರನೌಟ್​ಗಳು ಸಾಮಾನ್ಯ. ಆದರೆ ಶ್ರೀಲಂಕಾ ‘ಎ’ ವಿರುದ್ಧದ ಪಂದ್ಯದಲ್ಲಿ ಭಾರತ ‘ಎ’ ತಂಡದ ಯುವ ಬ್ಯಾಟರ್ ಪ್ರಿಯಾಂಶ್ ಆರ್ಯ ಔಟ್ ಆದ ರೀತಿ ಇದೀಗ ಚರ್ಚೆಗೆ ಗ್ರಾಸವಾಗಿದೆ. ವಿಕೆಟ್ ಕೀಪರ್ ಕಾಲಿನ ಕೆಳಗೆ ಬ್ಯಾಟ್ ಸಿಲುಕಿಕೊಂಡ ಕಾರಣ, ಕ್ರೀಸ್ ತಲುಪಲು ಸಾಧ್ಯವಾಗದೆ ಅವರು ವಿಚಿತ್ರವಾಗಿ ವಿಕೆಟ್ ಕೈಚೆಲ್ಲಿದ್ದಾರೆ.

ದಂಬುಲ್ಲಾದಲ್ಲಿ ನಡೆದ ತ್ರಿಕೋನ ಸರಣಿಯ ಆರಂಭಿಕ ಪಂದ್ಯದಲ್ಲಿ ಈ ಅನಿರೀಕ್ಷಿತ ಹಾಗೂ ವಿವಾದಾತ್ಮಕ ಘಟನೆ ನಡೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಪ್ರಿಯಾಂಶ್ ಆರ್ಯ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು.

ಭಾರತ ಇನಿಂಗ್ಸ್‌ನ 13ನೇ ಓವರ್‌ನಲ್ಲಿ ರುತುರಾಜ್ ಗಾಯಕ್ವಾಡ್ ಲಾಂಗ್-ಆಫ್ ಕಡೆಗೆ ಚೆಂಡನ್ನು ಬಾರಿಸಿ, ಎರಡನೇ ರನ್ ಗಳಿಸಲು ಪ್ರಿಯಾಂಶ್ ಆರ್ಯ ಅವರಿಗೆ ಕರೆ ನೀಡಿದರು. ಆದರೆ ಆರ್ಯ ಆರಂಭದಲ್ಲಿ ಓಡಲು ಹಿಂಜರಿದರು. ಅಷ್ಟರಲ್ಲಾಗಲೇ ಗಾಯಕ್ವಾಡ್ ಪಿಚ್‌ನ ಮಧ್ಯಭಾಗವನ್ನು ದಾಟಿ ವೇಗವಾಗಿ ಧಾವಿಸಿ ಬಂದಿದ್ದರು.

ಈ ಗೊಂದಲದಿಂದಾಗಿ ಇಬ್ಬರೂ ಬ್ಯಾಟರ್‌ಗಳು ರನ್ ಔಟ್‌ನಿಂದ ಬಲಿಯಾಗುವುದನ್ನು ತಪ್ಪಿಸಿಕೊಳ್ಳಲು ಒಂದೇ ತುದಿಯ (ಸ್ಟ್ರೈಕರ್ ಎಂಡ್) ಕ್ರೀಸ್‌ನತ್ತ ಓಡಿದರು.

ವಿಚಿತ್ರ ರನೌಟ್!

ಸ್ಟ್ರೈಕರ್ ಎಂಡ್​ನಲ್ಲಿದ್ದ ಪ್ರಿಯಾಂಶ್ ಆರ್ಯ ತಿರುಗಿ ನಿಂತು ಕ್ರೀಸ್​ಗೆ ಬ್ಯಾಟ್ ಹಿಡಲು ಮುಂದಾದಾಗ, ಚೆಂಡನ್ನು ಹಿಡಿಯಲು ನಿಂತಿದ್ದ ಶ್ರೀಲಂಕಾದ ವಿಕೆಟ್ ಕೀಪರ್ ನಿರೋಶನ್ ಡಿಕ್ವೆಲ್ಲಾ ಕಾಲಿನಲ್ಲಿ ಬ್ಯಾಟ್ ಅನ್ನು ಲಾಕ್ ಮಾಡಿದರು.

ಡಿಕ್ವೆಲ್ಲಾ ಕಾಲು ಅಡ್ಡ ಬಂದಿದ್ದರಿಂದ ಆರ್ಯ ಅವರಿಗೆ ಬ್ಯಾಟನ್ನು ಕ್ರೀಸ್‌ನ ಗೆರೆಯ ಒಳಗೆ ಸ್ಲೈಡ್ ಮಾಡಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಾಗಲೇ ರುತುರಾಜ್ ಗಾಯಕ್ವಾಡ್ ಮೊದಲಿಗನಾಗಿ ಕ್ರೀಸ್‌ನೊಳಗೆ ಬ್ಯಾಟ್ ಇಟ್ಟು ಸುರಕ್ಷಿತರಾದರು.  ತಕ್ಷಣವೇ ಎಚ್ಚೆತ್ತ ವಿಕೆಟ್ ಕೀಪರ್ ಡಿಕ್ವೆಲ್ಲಾ, ಚೆಂಡನ್ನು ನಾನ್-ಸ್ಟ್ರೈಕರ್ ತುದಿಗೆ ಎಸೆದು ಸ್ಟಂಪ್ ಉರುಳಿಸಿದರು.

ಥರ್ಡ್ ಅಂಪೈರ್ ತೀರ್ಪು ಮತ್ತು ವಿವಾದ:

ಮೂರನೇ ಅಂಪೈರ್ ದೃಶ್ಯಗಳನ್ನು ಪರಿಶೀಲಿಸಿದಾಗ, ಇಬ್ಬರೂ ಬ್ಯಾಟರ್‌ಗಳು ಒಂದೇ ಕ್ರೀಸ್‌ನತ್ತ ಓಡಿ ಬಂದಾಗ ಗಾಯಕ್ವಾಡ್ ಮೊದಲು ಗೆರೆ ದಾಟಿದ್ದು ಸ್ಪಷ್ಟವಾಗಿ ತಿಳಿಯಿತು. ಹೀಗಾಗಿ ನಿಯಮದ ಪ್ರಕಾರ ಪ್ರಿಯಾಂಶ್ ಆರ್ಯ (32 ರನ್) ಔಟ್ ಎಂದು ಘೋಷಿಸಲಾಯಿತು. ಆದರೆ ಈ ತೀರ್ಪು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಏಕೆಂದರೆ ವಿಕೆಟ್ ಕೀಪರ್ ಕಾಲು ಅಡ್ಡ ಇಟ್ಟು ಬ್ಯಾಟನ್ನು ತಡೆದಿದ್ದರಿಂದ ಇದು ಕ್ರಿಕೆಟ್‌ನ ‘ಎಂಸಿಸಿ ನಿಯಮ 37’ ಅಡಿಯಲ್ಲಿ ಬರುತ್ತದೆ ಎಂದು ಅನೇಕ ಅಭಿಮಾನಿಗಳು ವಾದಿಸಿದ್ದಾರೆ. ಅಂದರೆ ಫೀಲ್ಡಿಂಗ್​ ಅಥವಾ ಬ್ಯಾಟಿಂಗ್​ಗೆ ಅಡ್ಡಿಪಡಿಸಿದ ನಿಯಮದಡಿಯಲ್ಲಿ ಇದನ್ನು ನಾಟೌಟ್​ ಎಂದು ಪರಿಗಣಿಸಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಇದೇ ಮೊದಲ ಬಾರಿ… ‘ಲಾರ್ಡ್ಸ್’ ಪಿಚ್​ಗೆ ಡಿಮೆರಿಟ್ ಪಾಯಿಂಟ್!

ಮೇಲ್ನೋಟಕ್ಕೆ  ಡಿಕ್ವೆಲ್ಲಾ ಉದ್ದೇಶಪೂರ್ವಕವಾಗಿ ಕಾಲು ಇಟ್ಟಿರಲಿಲ್ಲ, ಅದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಅಂಪೈರ್‌ಗಳು ಪರಿಗಣಿಸಿದ್ದರಿಂದ ಪ್ರಿಯಾಂಶ್ ಆರ್ಯ ಪೆವಿಲಿಯನ್ ಹಾದಿ ಹಿಡಿಯಬೇಕಾಯಿತು. ಈ ವಿಚಿತ್ರ ಗೊಂದಲದ ಹೊರತಾಗಿಯೂ ಭಾರತ ‘ಎ’ ತಂಡ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದೆ.

Source link

Kottiyoor Temple Incident: ಕನ್ನಡಿಗರಿಗಾಗಿ ಕನ್ನಡದಲ್ಲೇ ಮಾತನಾಡಿದ ಕೇರಳಂ ಡಿಐಜಿ ಯತೀಶ್ ಚಂದ್ರ! – Kannada News

ಕಣ್ಣೂರು ರೇಂಜ್ ಡಿಐಜಿ ಯತೀಶ್ ಚಂದ್ರImage Credit source: Yathish Chandra instagram account

ಬೆಂಗಳೂರು, ಜೂನ್ 10: ಕೇರಳಂನ ಕೊಟ್ಟಿಯೂರು ದೇವಾಲಯಕ್ಕೆ (Kottiyoor Temple) ಹೋಗಿದ್ದ ಕರ್ನಾಟಕದ ಭಕ್ತರ ಮೇಲೆ ದೌರ್ಜನ್ಯವಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಯಾರೂ ಈ ದೇವಾಲಯಕ್ಕೆ ಭೇಟಿ ನೀಡಬೇಡಿ ಎಂದು ನೊಂದ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲಿನ ವ್ಯವಸ್ಥೆ, ನಿರ್ವಹಣೆಯ ಕುರಿತು ಆಕ್ಷೇಪಿಸಿದ್ದರು. ಇದರ ಬೆನ್ನಲ್ಲೇ ದೇವಾಲಯದ ಸೆಕ್ಯೂರಿಟಿಯ ಕುರಿತಾದಂತೆ ಮಾಹಿತಿ ನೀಡಿರುವ ಕಣ್ಣೂರು ವಲಯದ ಡಿಐಜಿ ಯತೀಶ್ ಚಂದ್ರ, ಕನ್ನಡದಲ್ಲೇ ಮಾತನಾಡಿ ಕರ್ನಾಟಕದ ಭಕ್ತರನ್ನು ಸ್ವಾಗತಿಸಿದ್ದಾರೆ.

ಮುಖ್ಯಾಂಶಗಳು

  • ಕೊಟ್ಟಿಯೂರು ದೇವಾಲಯದ ವಿವಾದ ಬೆನ್ನಲ್ಲೇ ಕಣ್ಣೂರು ಡಿಐಜಿ ಕನ್ನಡದಲ್ಲೇ ಸಂದೇಶ ನೀಡಿದ್ದಾರೆ.
  • ಕರ್ನಾಟಕದ ಭಕ್ತರ ಅನುಕೂಲಕ್ಕಾಗಿ ಕ್ಷೇತ್ರದಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸಲಾಗಿದೆ.
  • ಕನ್ನಡಿಗರೇ ಆದ ಯತೀಶ್ ಚಂದ್ರರ ಕನ್ನಡದ ವೀಡಿಯೋ ಸಖತ್ ವೈರಲ್ ಆಗಿದೆ.

ಡಿಐಜಿ ಹೇಳಿದ್ದೇನು?

ಕೇರಳಂ ರೇಂಜ್ ಡಿಐಜಿ ಯತೀಶ್ ಚಂದ್ರ, ಕರ್ನಾಟಕದ ಭಕ್ತರಿಗಾಗಿ ಕನ್ನಡದಲ್ಲಿಯೇ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಾರೆ. ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಅವರು, ಕೊಟ್ಟಿಯೂರು ದೇವಸ್ಥಾನದವರು ಹಾಗೂ ಪಂಚಾಯತ್​ನವರು ವೈಶಾಖ ಮಹೋತ್ಸವಕ್ಕೆ ಬಹಳ ಚೆನ್ನಾಗಿ ಸಿದ್ಧತೆ ಮಾಡಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಇನ್ಫ್ರಾಸ್ಟ್ರಕ್ಚರ್ ಡೆವಲಪ್ ಆಗಿದೆ. ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಕರ್ನಾಟಕದಿಂದ ಬಹಳಷ್ಟು ಭಕ್ತಾದಿಗಳು ಬರುತ್ತೀರಿ. ನಿಮಗಾಗಿ ದೇವಸ್ಥಾನದ ಆವರಣದಲ್ಲಿ ಕನ್ನಡದಲ್ಲೇ ನಾಮಫಲಕಗಳು (ಬೋರ್ಡ್‌ಗಳು) ಮತ್ತು ಕನ್ನಡದಲ್ಲೇ ಧ್ವನಿವರ್ಧಕದ ಮೂಲಕ ಪ್ರಕಟಣೆ ಹೊರಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಪವಿತ್ರವಾದ ಈ ಕಾಡಿನ ಸನ್ನಿಧಿಗೆ ಬರುವಾಗ ಪರಿಸರವನ್ನು ಸ್ವಚ್ಛವಾಗಿಡುವಂತೆ ಮತ್ತು ಪ್ಲಾಸ್ಟಿಕ್ ಹಾಗೂ ಬಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆಯದೆ ಸಹಕರಿಸುವಂತೆ ಕನ್ನಡಿಗರಲ್ಲಿ ಅತ್ಯಂತ ಆಪ್ತವಾಗಿ ವಿನಂತಿಸಿಕೊಂಡಿದ್ದಾರೆ. ಕ್ಯೂನಲ್ಲಿ ಆರಾಮಾಗಿ ಬಂದು ದೇವರ ದರ್ಶನ ಮಾಡಿ. ನಾವು ಪೊಲೀಸರು ಭದ್ರತೆಗೆ ಎಲ್ಲಾ ತಯಾರಿ ಮಾಡಿದ್ದೇವೆ. ತಾವೆಲ್ಲರೂ ಇಲ್ಲಿಗೆ ಬಂದು ದರ್ಶನ ಮಾಡಿ, 26 ದಿನಗಳ ಈ ಮಹೋತ್ಸವವನ್ನು ಯಶಸ್ವಿಯಾಗಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.

ಅಧಿಕಾರಿ ಹಂಚಿಕೊಂಡಿರುವ ಪೋಸ್ಟ್

ಯಾರು ಈ ಖಡಕ್ ಪೊಲೀಸ್ ಯತೀಶ್ ಚಂದ್ರ?

ಕೇರಳ ಪೊಲೀಸ್ ಅಧಿಕಾರಿಯೊಬ್ಬರ ಈ ಕನ್ನಡದ ವೀಡಿಯೊ ವೈರಲ್ ಆಗುತ್ತಿದ್ದಂತೆ, ಯಾರು ಈ ಯತೀಶ್ ಚಂದ್ರ? ಎಂದು ಹುಡುಕುವವರ ಸಂಖ್ಯೆ ಹೆಚ್ಚಾಗಿದೆ. ವಿಶೇಷವೆಂದರೆ, ಈ ಖಡಕ್ ಅಧಿಕಾರಿ ಮೂಲತಃ ನಮ್ಮ ಹೆಮ್ಮೆಯ ಕನ್ನಡಿಗನೇ ಆಗಿದ್ದಾರೆ. ದಾವಣಗೆರೆ ಮೂಲದವರಾದ ಇವರು ಇಂಜಿನಿಯರಿಂಗ್ ಪದವಿ ಮುಗಿಸಿ ಉನ್ನತ ಹುದ್ದೆಯಲ್ಲಿದ್ದರೂ ಸಮಾಜ ಸೇವೆ ಮಾಡುವ ಹಂಬಲದಿಂದ ಯುಪಿಎಸ್‌ಸಿ ಪರೀಕ್ಷೆ ಬರೆದು ಐಪಿಎಸ್ (IPS) ಅಧಿಕಾರಿಯಾಗಿದ್ದಾರೆ.

ಇದನ್ನೂ ಓದಿ ಕೊಟ್ಟಿಯೂರು ದೇವಾಲಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಆರೋಪ: ತಾರತಮ್ಯದ ಬಗ್ಗೆಯೂ ಭಕ್ತರ ಅಸಮಾಧಾನ

ಈ ಹಿಂದೆ ಪ್ರಧಾನಮಂತ್ರಿಯವರ ಫಿಟ್‌ನೆಸ್ ಚಾಲೆಂಜ್ ಸ್ವೀಕರಿಸಿ ತಮ್ಮ ಅತ್ಯುತ್ತಮ ಫಿಟ್‌ನೆಸ್ ಮೂಲಕ ಇವರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರು. ಕಳೆದ 2021 ರಲ್ಲಿ ಡೆಪ್ಯುಟೇಶನ್ ಮೇಲೆ ಕರ್ನಾಟಕಕ್ಕೆ ಬಂದಿದ್ದ ಯತೀಶ್ ಚಂದ್ರ ಅವರು ಬೆಂಗಳೂರು ನಗರ ಪೊಲೀಸ್‌ನ ಡೆಪ್ಯುಟಿ ಕಮಿಷನರ್ (DCP) ಆಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕದಲ್ಲಿ ಸೇವೆ ಮುಗಿಸಿ ಮರಳಿ ಕೇರಳಕ್ಕೆ ತೆರಳಿದ ಇವರನ್ನು ಅಲ್ಲಿನ ಸರ್ಕಾರ ಮಾಹಿತಿ, ಸಂವಹನ ಮತ್ತು ತಂತ್ರಜ್ಞಾನ (ICT) ವಿಭಾಗದ ಎಸ್ಪಿಯಾಗಿ ನೇಮಿಸಿತ್ತು. ಪ್ರಸ್ತುತ ಕಣ್ಣೂರು ರೇಂಜ್ ಡಿಐಜಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಕೊಟ್ಟಿಯೂರು ದೇವಸ್ಥಾನಕ್ಕೆ ಬರುವ ಕನ್ನಡಿಗರಿಗೆ ತಮ್ಮ ಮಾತೃಭಾಷೆಯಲ್ಲೇ ಸಂದೇಶ ನೀಡಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Rudraksha: ಮಹಿಳೆಯರು ರುದ್ರಾಕ್ಷಿ ಧರಿಸಬಾರದೇ? ಶಾಸ್ತ್ರಗಳು ಹೇಳುವುದೇನು ಗೊತ್ತಾ? – Kannada News

ಮಹಿಳೆಯರು ರುದ್ರಾಕ್ಷಿ ಧರಿಸಬಹುದೇ? Image Credit source: Pinterest

ರುದ್ರಾಕ್ಷಿಯನ್ನು ಸಾಕ್ಷಾತ್ ಶಿವನ ಆಶೀರ್ವಾದ ಎಂದು ಪರಿಗಣಿಸಲಾಗುತ್ತದೆ. ಶತಮಾನಗಳಿಂದಲೂ ಸಾಧು-ಸಂತರು, ಯೋಗಿಗಳು ಮತ್ತು ಸಾಮಾನ್ಯ ಜನರು ಧ್ಯಾನ, ಮಾನಸಿಕ ಶಾಂತಿ ಹಾಗೂ ಆಧ್ಯಾತ್ಮಿಕ ಉನ್ನತಿಗಾಗಿ ಇದನ್ನು ಬಳಸುತ್ತಾ ಬಂದಿದ್ದಾರೆ. ಆದರೆ ಇಂದಿಗೂ ಸಮಾಜದಲ್ಲಿ ಒಂದು ದೊಡ್ಡ ಪ್ರಶ್ನೆ ಉಳಿದುಕೊಂಡಿದೆ, ಅದೇನೆಂದರೆ, ಮಹಿಳೆಯರು ರುದ್ರಾಕ್ಷಿಯನ್ನು ಧರಿಸಬಹುದೇ ಅಥವಾ ಇಲ್ಲವೇ? ಧರಿಸಬಾರದು ಎಂಬ ಕಟ್ಟುಕತೆಗಳನ್ನು ಕೇಳಿ ಬೆಳೆದಿರುವ ಅನೇಕ ಮಹಿಳೆಯರು ಇದನ್ನು ಧರಿಸಲು ಇಂದಿಗೂ ಹಿಂಜರಿಯುತ್ತಾರೆ.

ರುದ್ರಾಕ್ಷಿಯ ರಹಸ್ಯ ಮತ್ತು ಅದರ ಪವಿತ್ರ ಉತ್ಪತ್ತಿ:

‘ರುದ್ರಾಕ್ಷಿ’ ಎಂಬ ಪದವು ಸಂಸ್ಕೃತದ ಎರಡು ಪದಗಳಿಂದ ಬಂದಿದೆ — ‘ರುದ್ರ’ (ಶಿವ) ಮತ್ತು ‘ಅಕ್ಷ’ (ಕಣ್ಣೀರು). ಶಿವಪುರಾಣದ ಪ್ರಕಾರ, ಒಮ್ಮೆ ತಪಸ್ಸಿನಿಂದ ಜಾಗೃತನಾದ ಶಿವನ ಕಣ್ಣುಗಳಿಂದ ಬಿದ್ದ ಆನಂದಬಾಷ್ಪದ ಬಿಂದುಗಳೇ ಭೂಮಿಯ ಮೇಲೆ ರುದ್ರಾಕ್ಷಿ ವೃಕ್ಷಗಳಾಗಿ ಮೊಳಕೆಯೊಡೆದವು. ವೈಜ್ಞಾನಿಕವಾಗಿ ಹೇಳುವುದಾದರೆ, ಇದು ‘ಎಲಿಯೋಕಾರ್ಪಸ್ ಗ್ಯಾನಿಟ್ರಸ್’ (Elaeocarpus ganitrus) ಎಂಬ ಮರದ ಬೀಜವಾಗಿದೆ. ಇದು ಮುಖ್ಯವಾಗಿ ಹಿಮಾಲಯದ ಅರುಣ್ ಕಣಿವೆಯಂತಹ ಪರ್ವತ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತದೆ. ಇದನ್ನು ಧರಿಸುವುದರಿಂದ ಮನುಷ್ಯನ ಸುತ್ತಲೂ ಒಂದು ಧನಾತ್ಮಕ ಶಕ್ತಿಯ ರಕ್ಷಣಾ ಕವಚ ನಿರ್ಮಾಣವಾಗುತ್ತದೆ, ಇದು ನಕಾರಾತ್ಮಕ ಪ್ರಭಾವಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ.

ಶಾಸ್ತ್ರಗಳಲ್ಲಿ ಮಹಿಳೆಯರಿಗೆ ರುದ್ರಾಕ್ಷಿ ನಿಷೇಧಿಸಲಾಗಿದೆಯೇ?

ನಮ್ಮ ಪ್ರಾಚೀನ ಮತ್ತು ಪ್ರಮುಖ ಗ್ರಂಥಗಳಾದ ಶಿವಪುರಾಣ ಹಾಗೂ ಪದ್ಮಪುರಾಣಗಳಲ್ಲಿ ರುದ್ರಾಕ್ಷಿಯ ಅಪಾರ ಮಹಿಮೆಯನ್ನು ವರ್ಣಿಸಲಾಗಿದೆ. ಅತ್ಯಂತ ಪ್ರಮುಖವಾದ ವಿಷಯವೆಂದರೆ, ಯಾವುದೇ ಅಧಿಕೃತ ಶಾಸ್ತ್ರಗಳಲ್ಲೂ ಮಹಿಳೆಯರು ರುದ್ರಾಕ್ಷಿಯನ್ನು ಧರಿಸಬಾರದು ಎಂಬ ಉಲ್ಲೇಖ ಎಲ್ಲೂ ಇಲ್ಲ. ಆಧ್ಯಾತ್ಮಿಕ ದೃಷ್ಟಿಕೋನದಿಂದ ರುದ್ರಾಕ್ಷಿಯು ಮನಸ್ಸನ್ನು ಏಕಾಗ್ರಗೊಳಿಸಲು, ಸಕಾರಾತ್ಮಕ ಆಲೋಚನೆಗಳನ್ನು ವೃದ್ಧಿಸಲು ಮತ್ತು ಸಾಧನೆಯನ್ನು ಆಳವಾಗಿಸಲು ಸಹಾಯ ಮಾಡುವ ಒಂದು ಅದ್ಭುತ ಸಾಧನವಾಗಿದೆ. ಆತ್ಮ ಮತ್ತು ಆಧ್ಯಾತ್ಮಿಕ ಸಾಧನೆಗೆ ಯಾವುದೇ ಲಿಂಗಭೇದವಿಲ್ಲ. ಆದ್ದರಿಂದ ಪುರುಷರು ಮತ್ತು ಮಹಿಳೆಯರಿಬ್ಬರೂ ಇದನ್ನು ಸಮಾನವಾಗಿ ಧರಿಸಬಹುದು.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ಮಹಿಳೆಯರು ರುದ್ರಾಕ್ಷಿ ಧರಿಸಬಾರದು ಎಂಬ ಭ್ರಮೆ ಮೂಡಿದ್ದು ಹೇಗೆ?

ಶಾಸ್ತ್ರಗಳಲ್ಲಿ ಯಾವುದೇ ನಿಷೇಧವಿಲ್ಲದಿದ್ದರೂ ಸಮಾಜದಲ್ಲಿ ಈ ತಪ್ಪು ಕಲ್ಪನೆ ಮೂಡಿದ್ದು ಹೇಗೆ ಎಂಬ ಪ್ರಶ್ನೆ ಹಲವರಲ್ಲಿದೆ. ವಾಸ್ತವವಾಗಿ, ಹಳೆಯ ಕಾಲದಲ್ಲಿ ಋತುಸ್ರಾವ, ಶಾರೀರಿಕ ಶುದ್ಧತೆ ಮತ್ತು ಅಂದಿನ ಕಠಿಣ ಜೀವನಶೈಲಿಗೆ ಸಂಬಂಧಿಸಿದಂತೆ ಕೆಲವು ಪ್ರಾಯೋಗಿಕ ನಿಯಮಗಳನ್ನು ಮಾಡಲಾಗಿತ್ತು. ಕಾಲಕ್ರಮೇಣ, ಜನರು ಈ ಪ್ರಾಯೋಗಿಕ ಸಲಹೆಗಳನ್ನೇ ಕಠಿಣ ಧಾರ್ಮಿಕ ನಿಯಮಗಳೆಂದು ತಪ್ಪಾಗಿ ಭಾವಿಸಿದರು. ಇದರ ಪರಿಣಾಮವಾಗಿ, ಮಹಿಳೆಯರಿಗೆ ರುದ್ರಾಕ್ಷಿ ನಿಷಿದ್ಧ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿ ಹರಡಿತು. ಇದು ಸಂಪೂರ್ಣವಾಗಿ ಸಾಮಾಜಿಕ ಭ್ರಮೆಯಾಗಿದ್ದು, ಇದಕ್ಕೆ ಯಾವುದೇ ಆಧಾರವಿಲ್ಲ.

ರುದ್ರಾಕ್ಷಿ ಧರಿಸುವಾಗ ಪಾಲಿಸಬೇಕಾದ ಅತಿ ಮುಖ್ಯ ನಿಯಮಗಳು:

ರುದ್ರಾಕ್ಷಿಯು ಅತ್ಯಂತ ಶಕ್ತಿಶಾಲಿ ಮತ್ತು ತೀವ್ರವಾದ ಶಕ್ತಿಯನ್ನು ಹೊಂದಿರುವುದರಿಂದ, ಅದರ ಸಕಾರಾತ್ಮಕ ಪರಿಣಾಮವನ್ನು ಕಾಯ್ದುಕೊಳ್ಳಲು ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ:

  • ರಾತ್ರಿ ಮಲಗುವಾಗ ರುದ್ರಾಕ್ಷಿ ಮಾಲೆ ಮುರಿಯುವ ಸಾಧ್ಯತೆ ಇರುತ್ತದೆ ಮತ್ತು ದೇಹದ ಒತ್ತಡದಿಂದ ಅದರ ಶಕ್ತಿ ಕುಂದಬಹುದು. ಆದ್ದರಿಂದ ಮಲಗುವ ಮುನ್ನ ಅದನ್ನು ತೆಗೆದು ಪವಿತ್ರವಾದ ಸ್ಥಳದಲ್ಲಿ ಇಡಿ.
  • ರುದ್ರಾಕ್ಷಿಯನ್ನು ಧರಿಸಿದ ನಂತರ ತಾಮಸಿಕ ಆಹಾರಗಳಾದ ಮಾಂಸ ಮತ್ತು ಮದ್ಯಪಾನದಿಂದ ದೂರವಿರುವುದು ಉತ್ತಮ. ಇದು ಮನಸ್ಸು ಮತ್ತು ಶರೀರದ ಸಾತ್ವಿಕತೆಯನ್ನು ಕಾಪಾಡುತ್ತದೆ.
  • ರುದ್ರಾಕ್ಷಿಯನ್ನು ನಿಯಮಿತವಾಗಿ ಧರಿಸಿ ಮತ್ತು ಅದರ ಸ್ವಚ್ಛತೆಯ ಬಗ್ಗೆ ವಿಶೇಷ ಗಮನ ಹರಿಸಿ. ಸಮಯ ಸಿಕ್ಕಾಗ ಹಗುರವಾದ ಉಗುರುಬೆಚ್ಚಗಿನ ನೀರಿನಿಂದ ತೊಳೆದು, ಬಾದಾಮಿ ಅಥವಾ ಸಾಸಿವೆ ಎಣ್ಣೆಯನ್ನು ಹಚ್ಚಿ ಆರೈಕೆ ಮಾಡಿ.
  • ರುದ್ರಾಕ್ಷಿ ಧರಿಸಿರುವಾಗ ನಿಮ್ಮ ಆಲೋಚನೆಗಳು ಶುದ್ಧವಾಗಿರಲಿ. ಕೋಪ, ಅಸೂಯೆ ಮತ್ತು ನಕಾರಾತ್ಮಕ ಭಾವನೆಗಳಿಂದ ದೂರವಿರಲು ಪ್ರಯತ್ನಿಸಿ.
  • ಯಾವುದೇ ಶುಭ ಮುಹೂರ್ತದಲ್ಲಿ, ಸ್ನಾನದ ನಂತರ “ಓಂ ನಮಃ ಶಿವಾಯ” ಮಂತ್ರವನ್ನು ಜಪಿಸುತ್ತಾ ಪೂರ್ಣ ಶ್ರದ್ಧೆಯಿಂದ ರುದ್ರಾಕ್ಷಿಯನ್ನು ಧರಿಸಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮೋದಿ ಒಳಿತಿಗಾಗಿ ಅರಳಿಕಟ್ಟೆ ಮುನೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ವಿಪಕ್ಷ ನಾಯಕ ಅಶೋಕ್​ – Kannada News

ಬೆಂಗಳೂರು, ಜೂನ್​​ 10: ವಿಧಾನಸೌಧದ ಅರಳಿಕಟ್ಟೆ ಮುನೇಶ್ವರ ದೇವಾಲಯದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಚನ್ನಬಸಪ್ಪ ಸೇರಿದಂತೆ ಹಲವು ನಾಯಕರು ಮತ್ತು ಬೆಂಬಲಿಗರು ಉಪಸ್ಥಿತರಿದ್ದರು. ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ನೆಹರು ಅವರ ದಾಖಲೆ ಮುರಿದ ಹಿನ್ನೆಲೆಯಲ್ಲಿ ಈ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು. ಪ್ರಧಾನಿ ಮೋದಿ ಅವರ ಭಾವಚಿತ್ರವನ್ನು ದೇವರ ಮುಂದೆ ಇಟ್ಟು ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮೋದಿ ಪರ ಜಯಘೋಷಗಳೂ ಈ ವೇಳೆ ಮೊಳಗಿದವು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಧ್ಯಕ್ಷರಾಗಿ ಮೊದಲ ಬಾರಿಗೆ ಕೆಪಿಸಿಸಿ ಕಚೇರಿಗೆ ಬಿಕೆ ಹರಿಪ್ರಸಾದ್ ಆಗಮನ: ಅದ್ದೂರಿ ಸ್ವಾಗತ, ಜಿಬಿಎ ಚುನಾವಣೆ ಕುರಿತು ಮಹತ್ವದ ಸಭೆ – Kannada News

ಬೆಂಗಳೂರು, ಜೂನ್ 10: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿಕೆ ಹರಿಪ್ರಸಾದ್ ಬುಧವಾರ ಮೊದಲ ಬಾರಿಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದಾರೆ. ಪಕ್ಷದ ಸಾರಥ್ಯ ವಹಿಸಿಕೊಂಡ ಬಳಿಕ ಮೊದಲ ಬಾರಿ ಕಚೇರಿಗೆ ಆಗಮಿಸಿದ ನೂತನ ಸಾರಥಿಗೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಅತ್ಯಂತ ಅದ್ದೂರಿ ಮತ್ತು ಸಡಗರದ ಸ್ವಾಗತ ಕೋರಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರು, ಮಾಜಿ ಸಚಿವರು ಹಾಗೂ ಹಿರಿಯ ಎಂಎಲ್‌ಸಿಗಳು ಹೂಗುಚ್ಛ ನೀಡಿ ಹರಿಪ್ರಸಾದ್ ಅವರನ್ನು ಬರಮಾಡಿಕೊಂಡರು. ಇದೇ ವೇಳೆ ಸಚಿವರಾದ ಜಮೀರ್ ಅಹಮದ್ ಖಾನ್ ಕೂಡ ಕೆಪಿಸಿಸಿ ಕಚೇರಿಗೆ ಆಗಮಿಸಿ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.

ಕಚೇರಿಗೆ ಭೇಟಿ ನೀಡಿದ ಬೆನ್ನಲ್ಲೇ ಆಡಳಿತಾತ್ಮಕವಾಗಿ ಸಕ್ರಿಯರಾದ ಬಿಕೆ ಹರಿಪ್ರಸಾದ್, ಮೊದಲ ಅಧಿಕೃತ ಸಭೆ ನಡೆಸಿದರು. ಮುಂಬರುವ ಜಿಬಿಎ (GBA) ಚುನಾವಣೆಗಳ ಸಿದ್ಧತೆಗಾಗಿ ಪಕ್ಷದಿಂದ ನಿಯೋಜಿಸಲಾಗಿರುವ ವೀಕ್ಷಕರೊಂದಿಗೆ (Observers) ಅವರು ಸುದೀರ್ಘ ಸಮಾಲೋಚನೆ ನಡೆಸಿದರು. ಈ ಪ್ರಮುಖ ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್, ಹಿರಿಯ ಮುಖಂಡರಾದ ನಸೀರ್ ಅಹಮದ್, ಸಲೀಂ ಅಹಮದ್, ಜಿ.ಸಿ. ಚಂದ್ರಶೇಖರ್, ಬೇಳೂರು ಗೋಪಾಲಕೃಷ್ಣ ಹಾಗೂ ಐವಾನ್ ಡಿಸೋಜ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಿ ಮಹತ್ವದ ಚರ್ಚೆ ನಡೆಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿವಾಹದ ಬಳಿಕ ಬ್ರೇಕ್​​ಲೆಸ್ ಆಗಿ ಶೂಟ್ ಮಾಡಿದ ರಶ್ಮಿಕಾ; ಬಿಗ್ ಅಪ್​​ಡೇಟ್ – Kannada News

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಸಿಹಿ ಸುದ್ದಿ ಸಿಗುತ್ತಿದೆ. ಇತ್ತೀಚೆಗಷ್ಟೇ ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿಟ್ಟಿದ್ದ ಕೊಡಗಿನ ಬೆಡಗಿ, ಮದುವೆಯ ನಂತರವೂ ಯಾವುದೇ ಬ್ರೇಕ್ ತೆಗೆದುಕೊಳ್ಳದೆ ಸಖತ್ ಸ್ಪೀಡ್ ಆಗಿ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಯ ಸಂಭ್ರಮ ಮುಗಿಯುತ್ತಿದ್ದಂತೆ ಮಗದೊಮ್ಮೆ ಕ್ಯಾಮೆರಾ ಮುಂದೆ ನಿಂತಿರುವ ರಶ್ಮಿಕಾ, ತಮ್ಮ ಬಹುನಿರೀಕ್ಷಿತ ಸಿನಿಮಾದ ಶೂಟಿಂಗ್ ಅನ್ನು ವೇಗವಾಗಿ ಮುಗಿಸುತ್ತಿದ್ದಾರೆ.

ಖ್ಯಾತ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಬಯೋಪಿಕ್‌ನಲ್ಲಿ ರಶ್ಮಿಕಾ ನಟಿಸಲಿದ್ದಾರೆ ಎಂಬ ಬಿಸಿಬಿಸಿ ಸುದ್ದಿಯ ನಡುವೆಯೇ, ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ಯಾನ್ ಇಂಡಿಯಾ ಬಿಗ್ ಪ್ರಾಜೆಕ್ಟ್ ‘ಮೈಸಾ’ ಚಿತ್ರದ ಕೆಲಸಗಳು ಸದ್ದಿಲ್ಲದೆ ಭರದಿಂದ ಸಾಗುತ್ತಿವೆ. ಇದೊಂದು ಬುಡಕಟ್ಟು ಜನಾಂಗದ ಹಿನ್ನೆಲೆಯುಳ್ಳ ಹೈ-ವೋಲ್ಟೇಜ್ ಆಕ್ಷನ್ ಡ್ರಾಮಾ ಸಿನಿಮಾವಾಗಿದ್ದು, ಚಿತ್ರದ 5ನೇ ಹಂತದ ಶೂಟಿಂಗ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಸಾಮಾನ್ಯವಾಗಿ ನಟಿಯರು ಮದುವೆಯ ನಂತರ ಸಿನಿಮಾಗಳಿಂದ ಕೊಂಚ ಬ್ರೇಕ್ ಪಡೆಯುತ್ತಾರೆ. ಆದರೆ ರಶ್ಮಿಕಾ ಮಾತ್ರ ಮದುವೆಯ ಬೆನ್ನಲ್ಲೇ ದುಪ್ಪಟ್ಟು ಉತ್ಸಾಹದಿಂದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದು, ‘ಮೈಸಾ’ ಚಿತ್ರದ ಹೊಸ ಶೆಡ್ಯೂಲ್ ಮುಗಿಸಿ ಮುನ್ನುಗ್ಗುತ್ತಿದ್ದಾರೆ.

ಇದನ್ನೂ ಓದಿ: ಸ್ಟಾರ್ ನಟಿಗೆ ಫಿಕ್ಸ್ ಆಗಿದ್ದ ಪ್ರಮುಖ ಸಿನಿಮಾ ಈಗ ರಶ್ಮಿಕಾ ಮಂದಣ್ಣ ಕೈಗೆ

ಚಿತ್ರದ 5ನೇ ಶೆಡ್ಯೂಲ್ ಕಂಪ್ಲೀಟ್ ಆಗಿರುವ ಖುಷಿಯ ಬೆನ್ನಲ್ಲೇ ಚಿತ್ರದ ನಿರ್ಮಾಪಕ ಅಜಯ್ ಸಾಯಿಪುರೆಡ್ಡಿ ಅಭಿಮಾನಿಗಳಿಗೆ ಮತ್ತೊಂದು ಬಿಗ್ ಅಪ್‌ಡೇಟ್ ನೀಡಿದ್ದಾರೆ. ಸದ್ಯದಲ್ಲೇ ಚಿತ್ರದ ಅಧಿಕೃತ ಟೀಸರ್ ಅನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗುತ್ತಿದೆಯಂತೆ. ಮದುವೆಯ ನಂತರ ರಶ್ಮಿಕಾ ಅವರ ಮೊದಲ ಪ್ಯಾನ್ ಇಂಡಿಯಾ ಅಪ್‌ಡೇಟ್ ಇದಾಗಿರುವುದರಿಂದ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಹೈ ಬಜೆಟ್‌ನಲ್ಲಿ ‘ಮೈಸಾ’ ಉದಯ
ನವನಿರ್ದೇಶಕ ರವೀಂದ್ರ ಪುಲ್ಲೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ‘ಅನ್‌ಫಾರ್ಮುಲಾ ಫಿಲ್ಮ್ಸ್’ ಸಂಸ್ಥೆ ಅತ್ಯಂತ ಬೃಹತ್ ಬಜೆಟ್‌ನಲ್ಲಿ ನಿರ್ಮಿಸುತ್ತಿದೆ. ಚಿತ್ರಕ್ಕೆ ಜೇಕ್ಸ್ ಬಿಜಾಯ್ ಸಂಗೀತ ನೀಡುತ್ತಿದ್ದಾರೆ. ವಿಶೇಷವೆಂದರೆ, ಕನ್ನಡದ ಪ್ರತಿಭಾವಂತ ನಟ ತಾರಕ್ ಪೊನ್ನಪ್ಪ ಈ ಚಿತ್ರದಲ್ಲಿ ಅತ್ಯಂತ ಪ್ರಮುಖ ಹಾಗೂ ಮಹತ್ವದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:05 am, Wed, 10 June 26

Source link

Ganesha Shlokas for Kids: ಮಕ್ಕಳ ಏಕಾಗ್ರತೆ ಮತ್ತು ಜ್ಞಾಪಕಶಕ್ತಿ ಹೆಚ್ಚಿಸುವ 4 ಸರಳ ಗಣೇಶ ಶ್ಲೋಕಗಳು! – Kannada News

ಸನಾತನ ಸಂಸ್ಕೃತಿಯಲ್ಲಿ ಯಾವುದೇ ಶುಭ ಕಾರ್ಯ, ಪೂಜೆ ಅಥವಾ ಹೊಸ ಕೆಲಸವನ್ನು ಆರಂಭಿಸುವ ಮುನ್ನ ವಿಘ್ನನಿವಾರಕನಾದ ಗಣೇಶನನ್ನು ಆರಾಧಿಸುವುದು ಅನಾದಿ ಕಾಲದಿಂದಲೂ ನಡೆದುಬಂದಿರುವ ಸಂಪ್ರದಾಯವಾಗಿದೆ. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳಿಗೆ ಮುಂಜಾನೆ ಹಾಗೂ ಓದಲು ಕುಳಿತುಕೊಳ್ಳುವ ಮುನ್ನ ಗಣೇಶನ ಶ್ಲೋಕಗಳನ್ನು ಹೇಳಿಕೊಡುವುದು ಅವರ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮುಂಜಾನೆಯ ಸಮಯದಲ್ಲಿ ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮವಾಗಿರುತ್ತದೆ. ಈ ಪವಿತ್ರ ಮುಹೂರ್ತದಲ್ಲಿ ದೈವಿಕ ಶ್ಲೋಕಗಳನ್ನು ಉಚ್ಚರಿಸುವುದರಿಂದ ಮೆದುಳಿನ ನರಗಳು ಉತ್ತೇಜನಗೊಂಡು, ಜ್ಞಾಪಕಶಕ್ತಿ ಮತ್ತು ಏಕಾಗ್ರತೆ ಅದ್ಭುತವಾಗಿ ವೃದ್ಧಿಯಾಗುತ್ತದೆ. ಶಾಲೆಗೆ ಹೋಗುವ ಮಕ್ಕಳಿಗೆ ಸುಲಭವಾಗಿ ಕಲಿಸಬಹುದಾದ 4 ಪ್ರಮುಖ ಗಣೇಶ ಶ್ಲೋಕಗಳು ಮತ್ತು ಅವುಗಳ ಭಾವಾರ್ಥವನ್ನು ಕೆಳಗೆ ನೀಡಲಾಗಿದೆ.

ವಿದ್ಯಾರಂಭದ ಮುನ್ನ ಜಪಿಸಲು ಶುಕ್ಲಾಂಬರಧರಂ ಶ್ಲೋಕ:

ಯಾವುದೇ ಹೊಸ ಪಾಠ, ಶಾಲೆಯ ಹೋಂವರ್ಕ್ ಅಥವಾ ದಿನನಿತ್ಯದ ಓದನ್ನು ಪ್ರಾರಂಭಿಸುವ ಮುನ್ನ ಮಕ್ಕಳು ಈ ಶ್ಲೋಕವನ್ನು ಕಡ್ಡಾಯವಾಗಿ ಹೇಳಬೇಕು. ಇದು ಮನಸ್ಸಿನ ಚಂಚಲತೆಯನ್ನು ದೂರ ಮಾಡಿ ಬುದ್ಧಿಶಕ್ತಿ ಚುರುಕಾಗಲು ನೆರವಾಗುತ್ತದೆ.

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ ।
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ॥

ಸರ್ವ ಕಾರ್ಯಗಳ ಯಶಸ್ಸಿಗಾಗಿ ವಕ್ರತುಂಡ ಮಹಾಕಾಯ ಶ್ಲೋಕ:

ಮಕ್ಕಳು ಶಾಲೆಗೆ ಹೊರಡುವಾಗ, ಪರೀಕ್ಷೆ ಬರೆಯಲು ಹೋಗುವಾಗ ಅಥವಾ ಕ್ರೀಡೆ ಹಾಗೂ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸುವಾಗ ಈ ಶ್ಲೋಕವನ್ನು ಜಪಿಸುವುದು ಒಳ್ಳೆಯದು. ಇದು ಅವರಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ।
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ॥

ಪುಟ್ಟ ಮಕ್ಕಳಿಗೆ ಅತ್ಯಂತ ಸುಲಭವಾದ ಏಕದಂತಂ ಮಹಾಕಾಯಂ ಶ್ಲೋಕ:

ಎಲ್.ಕೆ.ಜಿ, ಯು.ಕೆ.ಜಿ ಅಥವಾ ಪ್ರಾಥಮಿಕ ಶಾಲೆಗೆ ಹೋಗುವ ಪುಟ್ಟ ಮಕ್ಕಳಿಗೆ ದೊಡ್ಡ ಶ್ಲೋಕಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟವಾಗಬಹುದು. ಅಂತಹ ಮಕ್ಕಳಿಗೆ ಬೇಗನೆ ಬಾಯಿಪಾಠವಾಗುವಂತಹ ಅತ್ಯಂತ ಸರಳ ಹಾಗೂ ಮಧುರವಾದ ಶ್ಲೋಕವಿದು.

ಏಕದಂತಂ ಮಹಾಕಾಯಂ ತಪ್ತಕಾಂಚನಸನ್ನಿಭಮ್ ।
ಲಂಬೋದರಂ ವಿಶಾಲಾಕ್ಷಂ ವಂದೇಹಂ ಗಣನಾಯಕಮ್ ॥

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಭಯ ಮತ್ತು ಹಿಂಜರಿಕೆ ನಿವಾರಣೆಗಾಗಿ ಗಜಾನನಂ ಶ್ಲೋಕ:

ಕೆಲವು ಮಕ್ಕಳಿಗೆ ಪರೀಕ್ಷೆ ಎಂದರೆ ಅತಿಯಾದ ಭಯವಿರುತ್ತದೆ, ಇನ್ನು ಕೆಲವರಿಗೆ ವೇದಿಕೆಯ ಮೇಲೆ ಹೋಗಿ ಮಾತನಾಡಲು ಹಿಂಜರಿಕೆಯಿರುತ್ತದೆ. ಮಕ್ಕಳ ಮನಸ್ಸಿನಲ್ಲಿರುವ ಇಂತಹ ನಕಾರಾತ್ಮಕ ಭಾವನೆಗಳನ್ನು ದೂರಮಾಡಿ ಧೈರ್ಯ ತುಂಬಲು ಈ ಶ್ಲೋಕ ಸಹಕಾರಿಯಾಗಿದೆ.

ಗಜಾನನಂ ಭೂತಗಣಾದಿಸೇವಿತಂ ಕಪಿತ್ಥಜಂಬೂಫಲಸಾರಭಕ್ಷಿತಮ್ ।
ಉಮಾಸುತಂ ಶೋಕವಿನಾಶಕಾರಣಂ ನಮಾಮಿ ವಿಘ್ನೇಶ್ವರ ಪಾದಪಂಕಜಮ್ ॥

ಪೋಷಕರು ಗಮನಿಸಬೇಕಾದ ಪ್ರಮುಖ ನಿಯಮಗಳು:

ಮಕ್ಕಳಿಗೆ ಶ್ಲೋಕಗಳನ್ನು ಕಲಿಸುವಾಗ ಕೇವಲ ಬಾಯಿಪಾಠ ಮಾಡಿಸುವುದಷ್ಟೇ ಮುಖ್ಯವಲ್ಲ. ದಿನವೂ ಬೆಳಿಗ್ಗೆ ಸ್ನಾನದ ನಂತರ ಅಥವಾ ಸಂಜೆ ಮನೆಯಲ್ಲಿ ದೀಪ ಹಚ್ಚಿದಾಗ ಈ ಶ್ಲೋಕಗಳನ್ನು ಹೇಳುವುದನ್ನು ರೂಢಿಸಬೇಕು. ಶ್ಲೋಕ ಹೇಳುವಾಗ ಕೈಮುಗಿದು, ಕಣ್ಣು ಮುಚ್ಚಿ ಬೆನ್ನು ನೇರಮಾಡಿ ಕುಳಿತುಕೊಳ್ಳಲು ತಿಳಿಸಿಕೊಡಿ. ಇದರಿಂದ ಅವರ ದೈಹಿಕ ಮತ್ತು ಮಾನಸಿಕ ಏಕಾಗ್ರತೆ ಹೆಚ್ಚುತ್ತದೆ. ಆರಂಭದಲ್ಲಿ ನೀವೇ ಶ್ಲೋಕಗಳನ್ನು ಸ್ಪಷ್ಟವಾಗಿ ಉಚ್ಚರಿಸಿ ಹೇಳಿಕೊಡುವುದರಿಂದ ಮಕ್ಕಳ ವಾಕ್ಚಾತುರ್ಯ ಮತ್ತು ಭಾಷಾ ಶುದ್ಧತೆಯೂ ಉತ್ತಮಗೊಳ್ಳುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link