All posts by nagaraj11081993

ಕರ್ನಾಟಕದ ಹಲವು ಜಿಲ್ಲಾ ಕೋರ್ಟ್​ಗಳಿಗೆ ಬಾಂಬ್ ಬೆದರಿಕೆ ಕರೆ – Kannada News | Bomb Threat Calls Received by Several District Courts Across Karnataka

ಬೆಂಗಳೂರು, ಜೂನ್​​ 19: ರಾಜ್ಯದಲ್ಲಿ ಮತ್ತೆ ಹುಸಿ ಬಾಂಬ್​​ ಬೆದರಿಕೆ (bomb threat) ಕರೆಗಳ ಹಾವಳಿ ಜೋರಾಗಿದೆ. ಇಂದು ಒಂದೇ ದಿನ ಬಾಗಲಕೋಟೆ, ದಾವಣಗೆರೆ, ಧಾರವಾಡ, ಕೋಲಾರ ಜಿಲ್ಲಾ ನ್ಯಾಯಾಲಯಗಳಿಗೆ ಅನುಮಾನಾಸ್ಪದ ಐಡಿಯಿಂದ ಬಾಂಬ್ ಬೆದರಿಕೆಯ ಇ-ಮೇಲ್​​​​ಗಳು ಬಂದಿವೆ. ಬಾಂಬ್​​ ಬೆದರಿಕೆ ಹಿನ್ನೆಲೆ ನ್ಯಾಯಾಲಯದ (court) ಆವರಣದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿತ್ತು. ಪೊಲೀಸರು ತಪಾಸಣೆ ಮಾಡಿದ್ದಾರೆ.

ಮುಖ್ಯಾಂಶಗಳು

  • ಕರ್ನಾಟಕ ಜಿಲ್ಲಾ ನ್ಯಾಯಾಲಯಗಳಿಗೆ ಇ-ಮೇಲ್ ಬಾಂಬ್ ಬೆದರಿಕೆ
  • ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸರಿಂದ ತೀವ್ರ ತಪಾಸಣೆ
  • ಬಾಗಲಕೋಟೆ, ದಾವಣಗೆರೆ ಸೇರಿ ಹಲವೆಡೆ ನ್ಯಾಯಾಲಯಗಳಲ್ಲಿ ಆತಂಕ

ಸೈನೈಡ್ ವಾಯು ಗುಂಡಿಗಳು ಸ್ಫೋಟಿಸುವುದಾಗಿ ಬೆದರಿಕೆ

ಬಾಗಲಕೋಟೆ ಜಿಲ್ಲಾ ನ್ಯಾಯಾಲಯಕ್ಕೆ karunanidhi.kundi@underworld.dog ಎಂಬ ಐಡಿಯಿಂದ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ. ಇಂದು ಮಧ್ಯಾಹ್ನ 2 ಗಂಟೆಗೆ 23 ಸೈನೈಡ್ ವಾಯು ಗುಂಡಿಗಳು ಸ್ಫೋಟವಾಗಲಿವೆ ಎಂದು ಮೇಲ್​​ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ಬಾಂಬ್ ಬೆದರಿಕೆ ಹಾಕಿದ ಯುವಕನ ಬಂಧನ

ಮೊದಲು ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶರಿಗೆ ಮೇಲ್ ಬಂದಿದ್ದು, ಅಲ್ಲಿಂದ ಬಾಗಲಕೋಟೆಗೆ ರವಾನಿಸಲಾಗಿದೆ. ನ್ಯಾಯಾಂಗ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದಿಂದ ಜಡ್ಜ್ ಹಾಲ್, ವಿವಿಧ ಕೊಠಡಿ ಸೇರಿ ಇಡೀ ಕೋರ್ಟ್ ತಪಾಸಣೆ ಮಾಡಿದ್ದಾರೆ.

ವಯನಾಡಿನಿಂದ ಬಾಂಬ್ ಬೆದರಿಕೆ ಕರೆ

ದಾವಣಗೆರೆ ನಗರದ ಪಿಬಿ ರಸ್ತೆ ಬಳಿ ಇರುವ ಜಿಲ್ಲಾ ಕೋರ್ಟ್ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ. ಕೆರಳದ ವಯನಾಡಿನಿಂದ ಜಿಲ್ಲಾ ನ್ಯಾಯಾಲಯದ ಅಧಿಕೃತ ಇ-ಮೇಲ್​ ಐಡಿಗೆ ಸಂದೇಶ‌ ಬಂದಿದೆ. ಬೆದರಿಕೆ ಕರೆ ಬೆನ್ನಲ್ಲೇ ಅಲರ್ಟ್​ ಆದ ಪೊಲೀಸರು, ಶ್ವಾನದಳದಿಂದ ತಪಾಸಣೆ ಮಾಡಿದ್ದಾರೆ.

ಇದನ್ನೂ ಓದಿ: Bomb Threat: ಚಾಮರಾಜನಗರ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ: ನೌಕರರಿಗೆ ರಜೆ ಘೋಷಣೆ

ಕೋಲಾರ ಜಿಲ್ಲಾ ನ್ಯಾಯಾಲಯಕ್ಕೂ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಕೂಡಲೇ ಕೋರ್ಟ್ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸಿ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಕೋಲಾರ ಗಲ್ ಪೇಟೆ ಪೊಲೀಸರು ಪರಿಶೀಲನೆ ಮಾಡಿದರು.

ಕೋರ್ಟ್ ಸುತ್ತಮುತ್ತ ಆತಂಕ

ಇನ್ನು ಕೋರ್ಟ್ ಹಾಗೂ ಕಾಂಪ್ಲೆಕ್ಸ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಉಪನಗರ ಠಾಣಾ ವ್ಯಾಪ್ತಿಯ ಧಾರವಾಡ ಜಿಲ್ಲಾ ಕೋರ್ಟ್‌ಗೂ ಬಾಂಬ್ ಬೆದರಿಕೆ ಕರೆ ಬಂದಿದೆ. ಅಪರಿಚಿತನ ಬಾಂಬ್​ ಕರೆ ಕೋರ್ಟ್ ಸುತ್ತಮುತ್ತ ಆತಂಕ ಸೃಷ್ಟಿಸಿತ್ತು. ಕೂಡಲೇ ವಕೀಲರು ಮತ್ತು ಕಕ್ಷಿದಾರರು ನ್ಯಾಯಾಲಯ ಆವರಣದಿಂದ ಹೊರಬಂದಿದ್ದಾರೆ. ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ಆಗಮಿಸಿ ಕೋರ್ಟ್‌ನ ಒಳಗಡೆ ತಪಾಸಣೆ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Reliance AGM 2026: ರಿಲಯನ್ಸ್ ಇಂಡಸ್ಟ್ರೀಸ್​ನಿಂದ ಭರ್ಜರಿ ಬಂಡವಾಳ ವೆಚ್ಚ; ಒಂದು ವರ್ಷದಲ್ಲಿ 1.44 ಲಕ್ಷ ಕೋಟಿ ರೂ ವೆಚ್ಚ – Kannada News | Reliance generates huge revenue and profit in 2025 26, spent over 1.44 lakh crore on capex

ಮುಕೇಶ್ ಅಂಬಾನಿImage Credit source: Youtube @RelianceUpdates

ಮುಂಬೈ, ಜೂನ್ 19: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ತನ್ನ ಆರ್ಥಿಕ ಫಲಿತಾಂಶಗಳನ್ನು ಪ್ರಕಟಿಸಿದ್ದು, ಈ ಬಾರಿಯ ವರದಿಯಲ್ಲಿ ಕಂಪನಿಯು ಭಾರಿ ಬಂಡವಾಳ ಹೂಡಿಕೆ ಮತ್ತು ದಾಖಲೆಯ ಆದಾಯವನ್ನು ದಾಖಲಿಸಿದೆ. 2025-2026ರ ಹಣಕಾಸು ವರ್ಷದಲ್ಲಿ (FY26) ರಿಲಯನ್ಸ್ ಸಂಸ್ಥೆ ಬರೋಬ್ಬರಿ ₹95,754 ಕೋಟಿ ನಿವ್ವಳ ಲಾಭ ದಾಖಲಿಸಿದೆ. ಹಿಂದಿನ ವರ್ಷದಕ್ಕೆ ಹೋಲಿಸಿದರೆ ನಿವ್ವಳ ಲಾಭದಲ್ಲಿ ಬರೋಬ್ಬರಿ ಶೇ. 17.8ರಷ್ಟು ಏರಿಕೆ ಆಗಿದೆ. ಇವತ್ತು ನಡೆದ ಅರ್​ಐಎಲ್​ನ 49ನೇ ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥೆಯ ಛೇರ್ಮನ್ ಮತ್ತು ಎಂಡಿ ಮುಕೇಶ್ ಅಂಬಾನಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

ರಿಲಯನ್ಸ್ ಸಂಸ್ಥೆ ತನ್ನ ವಿವಿಧ ವ್ಯವಹಾರಗಳ ವಿಸ್ತರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ₹1,44,271 ಕೋಟಿಯನ್ನು ಬಂಡವಾಳ ವೆಚ್ಚವಾಗಿ (Capital Expenditure) ವ್ಯಯಿಸಿದೆ. ಅದರ ಆದಾಯವೇ ₹11,75,919 ಕೋಟಿ ಇದೆ. ಹಿಂದಿನ ವರ್ಷದಕ್ಕಿಂತ ಆದಾಯದಲ್ಲಿ ಶೇ. 9.8ರಷ್ಟು ಹೆಚ್ಚಳ ಆಗಿದೆ.

ಇದನ್ನೂ ಓದಿ: ಅಕ್ಸೆಂಚರ್ ಕೊಟ್ಟ ಒಂದು ರಿಪೋರ್ಟ್​ಗೆ ಭಾರತದ ಷೇರುಬಜಾರು ಅಲ್ಲೋಲಕಲ್ಲೋಲ; ಶುಕ್ರವಾರ 2 ಲಕ್ಷ ಕೋಟಿ ರೂ ನಷ್ಟ

ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಮುಕೇಶ್ ಅಂಬಾನಿ, ಕಳೆದ ಐದು ವರ್ಷದಲ್ಲಿ ರಿಲಯನ್ಸ್ ಸಂಸ್ಥೆ ಮಾಡಿರುವ ಬಂಡವಾಳ ವೆಚ್ಚ 6,48,428 ಕೋಟಿ ಎಂದು ತಿಳಿಸಿದ್ದಾರೆ. ‘ಈ ಅವಧಿಯಲ್ಲಿ ಭಾರತದ ಬೇರಾವುದೇ ಕಂಪನಿ ಮಾಡಿರುವುದಕ್ಕಿಂತ ಹೆಚ್ಚಿನ ಬಂಡವಾಳ ವ್ಯಯಿಸಿದ್ದೇವೆ. ಕಳೆದ ಐದು ವರ್ಷದಲ್ಲಿ ಭಾರತದ 50 ಅಗ್ರಗಣ್ಣ ಕಾರ್ಪೊರೇಟ್ ಸಂಸ್ಥೆಗಳು ಮಾಡಿರುವ ಒಟ್ಟು ವೆಚ್ಚದಲ್ಲಿ ರಿಲಯನ್ಸ್ ಪಾಲು ಮೂರನೇ ಒಂದರಷ್ಟಿದೆ’ ಎಂದು ಮುಕೇಶ್ ಅಂಬಾನಿ ತಿಳಿಸಿದ್ದಾರೆ.

ಕಂಪನಿಯು ತನ್ನ ಜಿಯೋ (Jio) ಡಿಜಿಟಲ್ ಸೇವೆಗಳು, ರೀಟೇಲ್ ವಿಭಾಗ ಮತ್ತು ಇಂಧನ ವಲಯದಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಈ ದೊಡ್ಡ ಮೊತ್ತದ ಹೂಡಿಕೆಯನ್ನು ಮಾಡಿದೆ. ಈ ಹೂಡಿಕೆಯು ರಿಲಯನ್ಸ್‌ನ ಭವಿಷ್ಯದ ಬೆಳವಣಿಗೆಯ ಯೋಜನೆಗಳಾದ 5G ವಿಸ್ತರಣೆ, ಗ್ರೀನ್ ಎನರ್ಜಿ ಯೋಜನೆಗಳು ಮತ್ತು ಡಿಜಿಟಲ್ ವ್ಯವಹಾರಗಳನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ. ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ವ್ಯವಹಾರಿಕ ಸ್ಥಿರತೆಯನ್ನು ಕಾಯ್ದುಕೊಂಡಿರುವುದು ಈ ಫಲಿತಾಂಶಗಳ ಮೂಲಕ ಸಾಬೀತಾಗಿದೆ.

ಇದನ್ನೂ ಓದಿ: ಇನ್ಸ್​ಟಾ ಸ್ಕ್ರೋಲ್ ಮಾಡುವಾಗ ಬೇಡದ್ದು ಬರುತ್ತಿವೆಯಾ? ನೀವಿಚ್ಛಿಸುವವೇ ಫೀಡ್​ನಲ್ಲಿ ಬರುವಂತೆ ಮಾಡುತ್ತದೆ ಈ ಹೊಸ ಮೆಟಾ ಫೀಚರ್

ಒಟ್ಟಾರೆಯಾಗಿ, ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಮಾರುಕಟ್ಟೆ ಪಾಲನ್ನು ಉಳಿಸಿಕೊಳ್ಳಲು ಮತ್ತು ಭವಿಷ್ಯದ ತಂತ್ರಜ್ಞಾನಗಳಲ್ಲಿ ಮುಂಚೂಣಿಯಲ್ಲಿರಲು ಭಾರಿ ಪ್ರಮಾಣದ ಬಂಡವಾಳವನ್ನು ಹೂಡಿಕೆ ಮಾಡುತ್ತಿದೆ ಎಂಬುದನ್ನು ಈ ಆರ್ಥಿಕ ವರದಿ ಸ್ಪಷ್ಟಪಡಿಸುತ್ತದೆ.

ರಿಲಯನ್ಸ್ ರೀಟೇಲ್ ಅದಾಯ 3.7 ಲಕ್ಷ ಕೋಟಿ ರೂ

ಇದೇ ವೇಳೆ, ಎಜಿಎಂ ಸಭೆಯಲ್ಲಿ ಮಾತನಾಡಿದ ರಿಲಯನ್ಸ್ ರೀಟೇಲ್ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಇಶಾ ಅಂಬಾನಿ ಅವರು ಆದಾಯದ ಮಾಹಿತಿ ನೀಡಿದ್ದಾರೆ. 2025-26ರಲ್ಲಿ ರಿಲಯನ್ಸ್ ರೀಟೇಲ್​ನ ಒಟ್ಟು ಆದಾಯ 3.70 ಲಕ್ಷ ಕೋಟಿ ರೂ ದಾಖಲಾಗಿದೆ. ಹಿಂದಿನ ವರ್ಷದಕ್ಕಿಂತ ಆದಾಯದಲ್ಲಿ ಶೇ. 11.8ರಷ್ಟು ವೃದ್ಧಿಯಾಗಿದೆ. ಪಿಎಟಿ ಅಥವಾ ನಿವ್ವಳ ಆದಾಯ ಶೇ. 12ರಷ್ಟು ಹೆಚ್ಚಳಗೊಂಡು 13,838 ಕೋಟಿ ರೂ ಆಗಿದೆ. ನೊಂದಾಯಿತ ಗ್ರಾಹಕರ ಸಂಖ್ಯೆ ಶೇ. 11ರಷ್ಟು ಏರಿಕೆಯಾಗಿ 38.7 ಕೋಟಿ ತಲುಪಿರುವ ಮಾಹಿತಿಯನ್ನು ಇಶಾ ಅಂಬಾನಿ ಹಂಚಿಕೊಂಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 3:16 pm, Fri, 19 June 26

Source link

ಭಾರಿ ಸಂಭಾವನೆ ಡಿಮ್ಯಾಂಡ್: ಬ್ಯಾಕ್ ಟು ಬ್ಯಾಕ್ ಆಫರ್ ಕಳೆದುಕೊಳ್ಳುತ್ತಿದ್ದಾರಾ ಪೂಜಾ ಹೆಗ್ಡೆ? – Kannada News | Pooja Hegde’s Stiff Salary Demand: Why Tollywood Producers Are Turning Away?

ಸಾಮಾನ್ಯವಾಗಿ ನಟ-ನಟಿಯರು ನಿರಂತರ ಫ್ಲಾಪ್ ಕೊಟ್ಟರೆ ಬೇಡಿಕೆ ಕಡಿಮೆ ಆಗುತ್ತದೆ. ಆ ಸಂದರ್ಭದಲ್ಲಿ ಸಂಭಾವನೆ ತಗ್ಗಿಸಿಕೊಂಡರೆ ಆಫರ್​​ಗಳು ಬರುತ್ತವೆ. ಆದರೆ, ನನಗೆ ಇಷ್ಟೇ ಹಣ ಬೇಕು ಎಂದು ಕುಳಿತರೆ ಸಿಕ್ಕ ಆಫರ್ ಕೂಡ ಕೈ ತಪ್ಪುತ್ತದೆ. ಈಗ ನಟಿ ಪೂಜಾ ಹೆಗ್ಡೆ ಅವರಿಗೂ (Pooja Hegde) ಇದೇ ರೀತಿ ಆಗಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಪೂಜಾ ಹೆಗ್ಡೆ ಸದ್ಯ ತೆಲುಗು ಚಿತ್ರರಂಗದಲ್ಲಿ ಸಾಲು ಸಾಲು ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ಬಿಸಿಬಿಸಿ ಚರ್ಚೆಯೊಂದು ಟಾಲಿವುಡ್ ವಲಯದಲ್ಲಿ ಕೇಳಿಬರುತ್ತಿದೆ. ಸದ್ಯಕ್ಕೆ ಕೈಯಲ್ಲಿ ದೊಡ್ಡ ಮಟ್ಟದ ತೆಲುಗು ಸಿನಿಮಾಗಳಿಲ್ಲದ ಪೂಜಾ ಹೆಗ್ಡೆ ಅವರ ಈ ಹಿನ್ನಡೆಗೆ ಅವರ ‘ಭಾರಿ ಸಂಭಾವನೆ’ಯೇ ಮುಖ್ಯ ಕಾರಣ ಎನ್ನಲಾಗುತ್ತಿದೆ. 2021ರಲ್ಲಿ ತೆರೆಗೆ ಬಂದ ‘ಮೋಸ್ಟ್ ಎಲಿಬೆಲ್ ಬ್ಯಾಚುಲರ್’ ಚಿತ್ರವೇ ಕೊನೆ. ಇದಾದ ಬಳಿಕ ತೆಲುಗಿಗೆ ಅವರು ಬಂದಿಲ್ಲ. ಇಷ್ಟೇ ಅಲ್ಲದೆ, ಇನ್ನೂ ಕೆಲವು ತೆಲುಗು ಸಿನಿಮಾಗಳನ್ನು ಅವರು ರಿಜೆಕ್ಟ್ ಮಾಡಿದ್ದರು.

ವರದಿಗಳ ಪ್ರಕಾರ, ಸಿನಿಮಾವೊಂದಕ್ಕೆ ನಟಿ ಪೂಜಾ ಹೆಗ್ಡೆ ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆಗೆ ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಕಥೆ ಇಷ್ಟವಾಗಿ ಚಿತ್ರತಂಡಗಳು ಇವರನ್ನು ಸಂಪರ್ಕಿಸಿದರೂ, ಈ ಭಾರಿ ಮೊತ್ತದ ಪ್ರೈಸ್ ಟ್ಯಾಗ್ ಕೇಳಿ ನಿರ್ಮಾಪಕರು ಹಿಂದೇಟು ಇಡುತ್ತಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ಪೂಜಾ ಹೆಗ್ಡೆ ನಟನೆಯ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದೇ ಫ್ಲಾಪ್ ಆಗಿವೆ. ಇದರ ಬೆನ್ನಲ್ಲೇ ಚಿತ್ರರಂಗಕ್ಕೆ ಹೊಸ ಹಾಗೂ ಯುವ ನಟಿಯರ ಎಂಟ್ರಿ ಹೆಚ್ಚಾಗಿದೆ. ಹೀಗಾಗಿ ನಿರ್ಮಾಪಕರು ಕಮ್ಮಿ ಬಜೆಟ್‌ನಲ್ಲಿ ಸಿಗುವ ಇತರೆ ಯುವ ನಟಿಯರನ್ನು ಆಯ್ಕೆ ಮಾಡಿಕೊಳ್ಳಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.

ಇದನ್ನೂ ಓದಿ: ಪೂಜಾ ಹೆಗ್ಡೆ ಅದೃಷ್ಟ ಬದಲಿಸುತ್ತಾ ವರುಣ್ ಧವನ್ ಸಿನಿಮಾ?

ಪೂಜಾ ಹೆಗ್ಡೆ ಅವರ ಈ ಕಠಿಣ ಸಂಭಾವನೆ ನಿಲುವಿನಿಂದಾಗಿ ಟಾಲಿವುಡ್ ನಿರ್ಮಾಪಕರು ಬೇರೆ ನಟಿಯರತ್ತ ಮುಖ ಮಾಡುತ್ತಿದ್ದು, ಸ್ಟಾರ್ ನಟಿಗೆ ಆಫರ್‌ಗಳು ಕೈತಪ್ಪುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ, ಅವರಿಗೆ ಸಂಭಾವನೆ ಕಡಿಮೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಾಲಿವುಡ್​​ ಸೂಪರ್​​ಹೀರೋಗೆ ಬಾಲಿವುಡ್​​ಗೆ ಬರುವ ಆಸೆ, ಸಹಾಯ ಕೇಳಿದ ಸ್ಟಾರ್ ನಟ – Kannada News | Jason Momoa wants to act in Indian movie, says Vidyut is most handsome actor

ಜೇಸನ್ ಮೊಮೊವಾ (Jason Momoa) ಅಂದರೆ ಹೆಚ್ಚು ಜನರಿಗೆ ಗೊತ್ತಾಗುವುದಿಲ್ಲ ಅದೇ ‘ಆಕ್ವಾಮನ್’ ಎಂದರೆ ಥಟ್ಟನೆ ಹೊಳೆಯುತ್ತದೆ. ಹಾಲಿವುಡ್​ನ ಜನಪ್ರಿಯ ಸೂಪರ್ ಹೀರೋ ಸಿನಿಮಾಗಳಲ್ಲಿ ಒಂದಾಗಿರುವ ‘ಆಕ್ವಾಮನ್’ ಪಾತ್ರಧಾರಿ ಝೇಸನ್ ಮೊಮೊವಾ ಅವರಿಗೆ ಬಾಲಿವುಡ್​ಗೆ ಬರುವ ಆಸೆಯಂತೆ. ಈ ಬಗ್ಗೆ ಮಾತನಾಡಿರುವ ಹಾಲಿವುಡ್ ಸ್ಟಾರ್ ನಟ, ತಮಗೆ ಭಾರತೀಯ ಚಿತ್ರರಂಗ ಪ್ರವೇಶಿಸಲು ಬಾಲಿವುಡ್​ನ ನಟನ ಸಹಾಯ ಅಗತ್ಯವಿದೆ ಎಂದು ಮನವಿ ಸಹ ಮಾಡಿದ್ದಾರೆ.

ಹಾಲಿವುಡ್ ತಾರೆ ಜೇಸನ್ ಮೊಮೊವಾ ಇದೀಗ ‘ಸ್ಟ್ರೀಟ್ ಫೈಟರ್’ ಸಿನಿಮಾನಲ್ಲಿ ನಟಿಸಿದ್ದಾರೆ. ಇದೇ ಸಿನಿಮಾನಲ್ಲಿ ಭಾರತೀಯ ನಟ ವಿದ್ಯುತ್ ಜಾಮ್ವಾಲ್ ಸಹ ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿರುವ ಜೇಸನ್ ಮೊಮೊವಾ, ‘ನಾನು ನೋಡಿದ ಅತ್ಯಂತ ಸುಂದರ ವ್ಯಕ್ತಿಗಳಲ್ಲಿ ಒಬ್ಬರು’ ಎಂದು ವಿದ್ಯುತ್ ಜಾಮ್ವಾಲ್ ಅವರನ್ನು ಬಣ್ಣಿಸಿದ್ದಾರೆ. ಅಲ್ಲದೆ ತಮಗೆ ಬಾಲಿವುಡ್ ಚಿತ್ರರಂಗಕ್ಕೆ ಪ್ರವೇಶಿಸಲು ವಿದ್ಯುತ್ ಸಹಾಯ ಮಾಡಬೇಕೆಂದು ಹೇಳಿದ್ದಾರೆ.

ವಿದ್ಯುತ್ ಅವರು ತಮಗೆ ಭಾರತೀಯ ಚಿತ್ರರಂಗದಲ್ಲಿ (ಬಾಲಿವುಡ್) ಕೆಲಸ ಪಡೆಯಲು ಸಹಾಯ ಮಾಡಬೇಕೆಂದು ತಮಾಷೆಯಾಗಿ ಹೇಳಿದ್ದಾರೆ. ‘ಅವರು (ವಿದ್ಯುತ್) ನನಗೆ ಬಾಲಿವುಡ್‌ನಲ್ಲಿ ಕೆಲಸ ಕೊಡಿಸಬೇಕು. ನಾವಿಬ್ಬರೂ ಸೇರಿ ಏನಾದರೂ ವಿಶೇಷ ಮಾಡಬೇಕು, ಅದು ಖುಷಿ ಕೊಡುತ್ತದೆ. ನಾನು ಹೇಳಿದ್ದೇನೆ, ಅದಕ್ಕೆ ಬದ್ಧನಾಗಿದ್ದೇನೆ. ಒಂದಲ್ಲ ಒಂದು ದಿನ ಭಾರತಕ್ಕೆ ಬರಲು ನಾನು ಕಾಯುತ್ತಿದ್ದೇನೆ’ ಎಂದು ಜೇಸನ್ ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ರಶ್ಮಿಕಾ-ವಿಜಯ್ ಚಿತ್ರಕ್ಕೆ ವಿಲನ್ ಆದ ಹಾಲಿವುಡ್​ನ ‘ದಿ ಮಮ್ಮಿ’ ಚಿತ್ರದ ಖಳ

‘ಸ್ಟ್ರೀಟ್ ಫೈಟರ್’ ಸಿನಿಮಾ ಮೂಲಕ ವಿದ್ಯುತ್ ಜಮ್ವಾಲ್ ಹಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ಅವರು ‘ಧಾಲ್ಸಿಮ್’ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಬೋಳು ತಲೆ, ಗಂಭೀರ ನೋಟ ಮತ್ತು ವಿಭಿನ್ನ ಅವತಾರದಲ್ಲಿ ವಿದ್ಯುತ್ ಕಾಣಿಸಿಕೊಂಡಿದ್ದು, ಅವರ ಈ ಹೊಸ ಲುಕ್ ಎಲ್ಲರ ಗಮನ ಸೆಳೆದಿದೆ. ‘ಸ್ಟ್ರೀಟ್ ಫೈಟರ್’ ಬಲು ಜನಪ್ರಿಯ ಗೇಮ್ ಒಂದರಿಂದ ಸ್ಪೂರ್ತಿ ಪಡೆದು ನಿರ್ಮಿಸಲಾಗಿರುವ ಸಿನಿಮಾ ಆಗಿದೆ. ಈ ಸಿನಿಮಾ ಅಕ್ಟೋಬರ್ 16ರಂದು ತೆರೆಗೆ ಬರಲಿದೆ.

ಜೇಸನ್ ಮೊಮೊವಾ, ಹಾಲಿವುಡ್​ನ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ. ‘ಗೇಮ್ ಆಫ್ ಥ್ರೋನ್ಸ್’ ನಕ್ಲಿ ಕಾರ್ಲ್ಸ್ ಡ್ರಾಗೊ ಪಾತ್ರದಲ್ಲಿ ನಟಿಸಿದ್ದ ಜೇಸನ್ ಅವರಿಗೆ ಭಾರಿ ಹೆಸರು ತಂದುಕೊಟ್ಟಿದ್ದು ‘ಆಕ್ವಮಾನ್’ ಸಿನಿಮಾ. ಆ ಬಳಿಕ ಅವರು ಸೂಪರ್ ಮ್ಯಾನ್, ಬ್ಯಾಟ್​​ಮ್ಯಾನ್ ಸಿನಿಮಾಗಳಲ್ಲಿ, ‘ಜಸ್ಟಿಸ್ ಲೀಗ್’ ಸಿನಿಮಾಗಳಲ್ಲಿಯೂ ನಟಿಸಿದರು. ಇತ್ತೀಚೆಗೆ ಬಂದ ‘ತ್ರಿಬಲ್ ಎಕ್ಸ್’ ಸಿನಿಮಾನಲ್ಲಿ ವಿಲನ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಈಗ ಭಾರತೀಯ ಸಿನಿಮಾಗಳಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶ್ರೇಯಾಂಕ ಪಾಟೀಲ್ ಬದಲಿಗೆ ಟೀಂ ಇಂಡಿಯಾ ಸೇರಿಕೊಂಡ ಆರ್​ಸಿಬಿ ಆಟಗಾರ್ತಿ – Kannada News | Shreyanka Patil Out of T20 World Cup 2026 Due to Injury; Prema Rawat Replaces Her

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಶ್ರೇಯಾಂಕ ಪಾಟೀಲ್ (Shreyanka Patil) ಅವರನ್ನು ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 (Women’s T20 World Cup 2026) ರಿಂದ ಹೊರಗಿಡಲಾಗಿದೆ. ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದ ಸಮಯದಲ್ಲಿ ಶ್ರೇಯಾಂಕ ಪಾಟೀಲ್ ಗಾಯಕ್ಕೆ ಒಳಗಾಗಿದ್ದರು. ಗಾಯ ಗಂಭೀರವಾಗಿರುವ ಕಾರಣ ಶ್ರೇಯಾಂಕರನ್ನು ಪಂದ್ಯಾವಳಿಯಿಂದ ಹೊರಗಿಟ್ಟಿರುವ ಬಿಸಿಸಿಐ, ಅವರ ಬದಲಿ ಆಟಗಾರ್ತಿಯನ್ನು ಸಹ ತಂಡಕ್ಕೆ ಆಯ್ಕೆ ಮಾಡಿದೆ. ಅದರಂತೆ ಟೀಂ ಇಂಡಿಯಾ ಪರ ಇದುವರೆಗೆ ಒಂದೇ ಒಂದು ಅಂತರರಾಷ್ಟ್ರೀಯ ಪಂದ್ಯವನ್ನು ಆಡದ ಲೆಗ್ ಸ್ಪಿನ್ನರ್ ಪ್ರೇಮಾ ರಾವತ್ (Prema Rawat) ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಪ್ರೇಮಾ ರಾವತ್ ಡಬ್ಲ್ಯೂಪಿಎಲ್​ನಲ್ಲಿ ಆರ್​ಸಿಬಿ ಪರ ಆಡುತ್ತಿದ್ದು, ಇದೀಗ ಆರ್​ಸಿಬಿ ಪರ ಆಡುವ ಶ್ರೇಯಾಂಕ ಪಾಟೀಲ್ ಬದಲಿಗೆ ತಂಡವನ್ನು ಕೂಡಿಕೊಂಡಿದ್ದಾರೆ.

ಶ್ರೇಯಾಂಕ ಬದಲಿಯಾಗಿ ಬಂದ ಪ್ರೇಮಾ

ಶ್ರೇಯಾಂಕ ಪಾಟೀಲ್ ಬದಲಿಗೆ ಬಿಸಿಸಿಐ, ಯುವ ಲೆಗ್ ಸ್ಪಿನ್ನರ್ ಪ್ರೇಮಾ ರಾವತ್ ಅವರನ್ನು ಭಾರತ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿದೆ. ಮೇಲೆ ಹೇಳಿದಂತೆ ಪ್ರೇಮಾ ರಾವತ್ ಭಾರತ ತಂಡಕ್ಕೆ ಆಯ್ಕೆಯಾಗಿರುವುದು ಇದೇ ಮೊದಲು. ಮಹಿಳಾ ಪ್ರೀಮಿಯರ್ ಲೀಗ್ ಮತ್ತು ಮಹಿಳಾ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಪಂದ್ಯಾವಳಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಪ್ರೇಮಾ ರಾವತ್ ಅವರನ್ನು ಶ್ರೇಯಾಂಕ ಪಾಟೀಲ್ ಬದಲಿಗೆ ತಂಡಕ್ಕೆ ಸೇರಿಸಿಕೊಳ್ಳಲು ಐಸಿಸಿಯ ತಾಂತ್ರಿಕ ಸಮಿತಿ ಕೂಡ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಪ್ರೇಮಾ ಇಷ್ಟರಲ್ಲೇ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಅನುಕೂಲಕರವೆಂಬಂತೆ ಪ್ರೇಮಾ ರಾವತ್ ಈಗಾಗಲೇ ಇಂಗ್ಲೆಂಡ್‌ನಲ್ಲಿದ್ದಾರೆ. ಪರಿಣಾಮವಾಗಿ, ಐಸಿಸಿ ಅನುಮೋದನೆ ಪಡೆದ ತಕ್ಷಣ ಅವರು ವಿಶ್ವಕಪ್ ತಂಡವನ್ನು ಸೇರಲಿದ್ದಾರೆ.

ಶ್ರೇಯಾಂಕ ಗಾಯಗೊಂಡಿದ್ದು ಹೇಗೆ?

ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದ ವೇಳೆ ಶ್ರೇಯಾಂಕ ಪಾಟೀಲ್ ಬಲಗಾಲಿನ ಗಂಭೀರ ಗಾಯಕ್ಕೆ ತುತ್ತಾಗಿದ್ದರು. ನೆದರ್ಲ್ಯಾಂಡ್ಸ್ ಇನ್ನಿಂಗ್ಸ್‌ನ ಆರನೇ ಓವರ್‌ನ ಮೊದಲ ಎಸೆತದಲ್ಲಿ ಈ ಅವಘಡ ಸಂಭವಿಸಿತ್ತು. ಚೆಂಡನ್ನು ಹಿಡಿಯುವ ಯತ್ನದಲ್ಲಿ ಶ್ರೇಯಾಂಕ ಅವರ ಬಲಗಾಲು ಉಳುಕಿತ್ತು. ಹೀಗಾಗಿ ಅವರನ್ನು ಸ್ಟ್ರೆಚರ್‌ನಲ್ಲಿ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಟೂರ್ನಿಯ ಆರಂಭದಲ್ಲೇ ಶ್ರೇಯಾಂಕ ತಂಡದಿಂದ ಹೊರಬಿದ್ದಿರುವುದು ನಾಯಕಿ ಹರ್ಮನ್ಪ್ರೀತ್ ಕೌರ್ ಮತ್ತು ತಂಡದ ನಿರ್ವಹಣೆಗೆ ದೊಡ್ಡ ಹೊಡೆತ ಬಿದ್ದಿದೆ. ಏಕೆಂದರೆ ಶ್ರೇಯಾಂಕ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದು, ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ ಕೂಡ ಮಾಡುತ್ತಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:49 pm, Fri, 19 June 26

Source link

ಹೆಚ್‌ಐವಿ ಇದೆ ಎಂದು ವದಂತಿ ಹಬ್ಬಿಸುವುದಾಗಿ ಬೆದರಿಸಿ 50 ಲಕ್ಷಕ್ಕೆ ಬೇಡಿಕೆ: ಪತ್ನಿ ವಿರುದ್ಧವೇ ಉದ್ಯಮಿ ದೂರು – Kannada News | Wife Booked After Tech Firm Owner Alleges Blackmail with Fake HIV Rumours and 50 Lakh Demand

ಬೆಂಗಳೂರು, ಜೂನ್​​ 19: ಹೆಚ್‌ಐವಿ/ಏಡ್ಸ್‌ ಸೋಂಕು ಇದೆ ಎಂಬ ಸುಳ್ಳು ಸುದ್ದಿ ಹಬ್ಬಿಸುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಪತ್ನಿ ವಿರುದ್ಧವೇ ಬೆಂಗಳೂರಿನ (Bengaluru) ಉದ್ಯಮಿಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ. 51 ವರ್ಷದ ವ್ಯಕ್ತಿ ನೀಡಿರುವ ದೂರಿನ ಆಧಾರದಲ್ಲಿ ಮಾರತ್ತಹಳ್ಳಿ ಪೊಲೀಸರು 37 ವರ್ಷದ ಸ್ವಾತಿ ಬಿ. ವಿರುದ್ಧ ವಂಚನೆ, ನಂಬಿಕೆ ದ್ರೋಹ, ಕಳವು, ಸುಲಿಗೆ, ಮಾನಹಾನಿ ಹಾಗೂ ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಉದ್ಯಮಿ ಆರೋಪವೇನು?

ಮಾರತ್ತಹಳ್ಳಿಯಲ್ಲಿ ಕಂಪ್ಯೂಟರ್ ಏಡೆಡ್ ಡಿಸೈನ್ ಅಂಡ್ ಡ್ರಾಫ್ಟಿಂಗ್ (CADD) ತರಬೇತಿ ಸಂಸ್ಥೆ ನಡೆಸುತ್ತಿರುವ ಉದ್ಯಮಿ, 2021ರ ಅಕ್ಟೋಬರ್‌ನಲ್ಲಿ ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಸ್ವಾತಿಯನ್ನು ಪರಿಚಯಿಸಿಕೊಂಡು 2022ರ ಫೆಬ್ರವರಿಯಲ್ಲಿ ವಿವಾಹವಾಗಿದ್ದರು. ವಿವಾಹದ ನಂತರ ಮಹಿಳೆ ತನ್ನ ಅಸಲಿ ಮುಖ ತೋರಿಸಿದ್ದು, ಬೇಡಿಕೆಗಳನ್ನು ಈಡೇರಿಸದಿದ್ದರೆ ಸುಳ್ಳು ಆರೋಪಗಳನ್ನು ಹರಡುತ್ತೇನೆ ಎಂದು ಉದ್ಯಮಿಯಾಗಿರುವ ಪತಿಗೆ ಬೆದರಿಕೆ ಹಾಕಿದ್ದಾಳೆ. 50 ಲಕ್ಷ ಹಣಕ್ಕೂ ಬೇಡಿಕೆ ಇಟ್ಟಿದ್ದಾಳೆ. ಹಣ ನೀಡದಿದ್ದರೆ  ಹೆಚ್‌ಐವಿ/ಏಡ್ಸ್‌ ಇದೆ ಹಾಗೂ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದೇನೆ ಎಂಬ ಸುಳ್ಳು ಪ್ರಚಾರ ಮಾಡುವುದಾಗಿ ತನಗೆ ಬೆದರಿಸಿದ್ದಾಳೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಉಚಿತ 5G ಅಪ್‌ಗ್ರೇಡ್ ಆಸೆಗೆ ಬಿದ್ದ ಬೆಂಗಳೂರು ವ್ಯಕ್ತಿಗೆ ಶಾಕ್; ಅಕೌಂಟ್ ಹ್ಯಾಕ್ ಮಾಡಿ 15 ಲಕ್ಷ ರೂ. ಸಾಲ ಪಡೆದ ಸೈಬರ್ ವಂಚಕರು!

3 ಮದುವೆ ಆರೋಪ

ಮನೆಯಿಂದ 18 ಲಕ್ಷ ನಗದು, ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ ಆಭರಣಗಳನ್ನು ಕಳವು ಮಾಡಿರುವುದಲ್ಲದೆ, ನಕಲಿ ಕೀಲಿ ಬಳಸಿ ಕಾರು ಕೂಡ ತೆಗೆದುಕೊಂಡು ಹೋಗಿದ್ದಾಳೆ. ಸಾಲದ್ದಕ್ಕೆ ಕಚೇರಿಗೆ ಹಾನಿ ಮಾಡುವ ಜೊತೆಗೆ ಚೆಕ್‌ಗೆ ನಕಲಿ ಸಹಿ ಹಾಕಿ ಬ್ಯಾಂಕ್ ಖಾತೆಯಿಂದ 83 ಸಾವಿರ ಹಣ ಡ್ರಾ ಮಾಡಿಕೊಂಡಿರುವುದಾಗಿ ಕೂಡ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ತನ್ನನ್ನು ಮದುವೆಯಾಗುವ ಮೊದಲು ಆಕೆ ಮೂರು ಬಾರಿ ಮದುವೆಯಾಗಿದ್ದಳು. ನ್ಯಾಯಾಧೀಶರು, ರಾಜಕಾರಣಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಪರಿಚಯವಿದೆ ಎಂದು ಹೇಳಿಕೊಂಡು, ನನ್ನ ವಿರುದ್ಧ ಏನು ಬೇಕಾದರೂ ಮಾಡಬಲ್ಲೆ ಎಂದು ಆಗಾಗ ಬೆದರಿಸುತ್ತಿದ್ದಳು. ಮದುವೆಗೆ ಮುನ್ನವೂ ಹಿಂದಿನ ವಿವಾಹದಿಂದ ಜನಿಸಿದ ಮಗನ ಶಿಕ್ಷಣಕ್ಕಾಗಿ ತನ್ನಿಂದ ಹೆಚ್ಚಿನ ಹಣ ಖರ್ಚು ಮಾಡಿಸಿಕೊಂಡಿದ್ದಾಳೆ ಎಂದು ಉದ್ಯಮಿ ಆರೋಪಿಸಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ದೇವಸ್ಥಾನದಲ್ಲಿ ಹುಂಡಿ ಹಣ ಎಣಿಸುವಾಗ 20 ರೂ. ನೋಟಿನ ಮೇಲೆ ಬರೆದಿದ್ದ ಕೋರಿಕೆ ನೋಡಿ ಸಿಬ್ಬಂದಿ ಶಾಕ್ – Kannada News | Viral 20 Rupee Note Shocks Temple Staff: A Plea for Mother in Law’s Death

ಅನಂತಪುರ, ಜೂನ್ 19: ಭಕ್ತರು ಸಾಮಾನ್ಯವಾಗಿ ದೇವರ ಹುಂಡಿಗೆ ಕಾಣಿಕೆ ಹಾಕುವಾಗ ತಮಗೆ ಒಳ್ಳೆಯದಾಗಲಿ, ಆರೋಗ್ಯ, ಅಷ್ಟೈಶ್ವರ್ಯ ಸಿಗಲು, ಒಳ್ಳೆಯ ಕೆಲಸ ಸಿಗಲಿ ಎಂದು ಬೇಡಿಕೊಳ್ಳುತ್ತಾರೆ. ಆದರೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪಂಪನೂರು ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯ(Temple)ದಲ್ಲಿ ಇತ್ತೀಚೆಗೆ ಹುಂಡಿ ಎಣಿಕೆಯ ವೇಳೆ ಕಂಡುಬಂದ ನೋಟೊಂದು ದೇವಾಲಯದ ಸಿಬ್ಬಂದಿ ಹಾಗೂ ಭಕ್ತರನ್ನು ಅಚ್ಚರಿಗೊಳಿಸಿದೆ.

ಹುಂಡಿಯಲ್ಲಿ ಸಿಕ್ಕ ಇಪ್ಪತ್ತು ರೂಪಾಯಿ ನೋಟಿನ ಮೇಲೆ ಭಕ್ತರೊಬ್ಬರು ಬರೆದಿದ್ದ ವಿಚಿತ್ರ ಕೋರಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಹುಂಡಿ ಎಣಿಕೆ ಮಾಡುವಾಗ ಸಿಬ್ಬಂದಿಗೆ ಸಿಕ್ಕ 20 ರೂ. ನೋಟಿನ ಮೇಲೆ ತೆಲುಗಿನಲ್ಲಿ ದೇವರೇ ನನ್ನ ಅತ್ತೆ ಬೇಗ ಸಾಯಬೇಕು ಎಂದು ಬರೆಯಲಾಗಿತ್ತು.

ಸಾಮಾನ್ಯವಾಗಿ ಕಾಗದದ ಮೇಲೆ ಕಷ್ಟಗಳನ್ನು ಬರೆದು ಹಾಕುವುದನ್ನು ನೋಡಿದ್ದ ಸಿಬ್ಬಂದಿಗೆ, ನೋಟಿನ ಮೇಲೆಯೇ ಯಾರೋ ಒಬ್ಬರ ಸಾವು ಬಯಸಿ ದೂರು ನೀಡಿರುವುದು ತೀವ್ರ ಆಶ್ಚರ್ಯ ಮೂಡಿಸಿದೆ.
ಈ ವಿಚಿತ್ರ ಪ್ರಾರ್ಥನೆಯ ಫೋಟೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಮತ್ತಷ್ಟು ಓದಿ: 85 ಕೋಟಿ ರೂ. ಗಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ

ಆಕೆ ಕೇವಲ 20 ರೂಪಾಯಿ ಸುಪಾರಿ ನೀಡಿ ದೇವರಿಗೇ ನೇರ ದೂರು ದಾಖಲಿಸಿದ್ದಾಳೆ, ಇಪ್ಪತ್ತು ರೂಪಾಯಿಗೆ ಅತ್ತೆಯನ್ನೇ ಕೊಲ್ಲಲು ಹೊರಟಿದ್ದಾಳೆ. ದೇವರು ಕೂಡ ಇಂತಹ ವಿನಂತಿಯನ್ನು ಖಂಡಿತಾ ಊಹಿಸಿರಲ್ಲ ಎಂದು ಹಲವರು ತಮಾಷೆ ಮಾಡಿದ್ದಾರೆ.

ಇನ್ನು ಕೆಲವರು, ಇದು ಕೇವಲ ನಗುವ ವಿಷಯವಲ್ಲ. ಆ ಮಹಿಳೆ ಮನೆಯಲ್ಲಿ ಎಂತಹ ನರಕಯಾತನೆ ಮತ್ತು ಮಾನಸಿಕ ಒತ್ತಡ ಅನುಭವಿಸುತ್ತಿರಬಹುದು ಎಂಬುದಕ್ಕೆ ಈ ನೋಟೇ ಸಾಕ್ಷಿ. ಕೌಟುಂಬಿಕ ಕಲಹಗಳು ಈ ಮಟ್ಟಕ್ಕೆ ತಲುಪಿರುವುದು ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸದ್ಯಕ್ಕೆ ಇಂಟರ್ನೆಟ್‌ನಲ್ಲಿ ನಗುವಿನ ಅಲೆ ಎಬ್ಬಿಸಿದ್ದರೂ, ಸಮಾಜದಲ್ಲಿ ಮತ್ತು ಕುಟುಂಬಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ ಹಾಗೂ ಭಿನ್ನಾಭಿಪ್ರಾಯಗಳಿಗೆ ಕನ್ನಡಿ ಹಿಡಿದಂತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಗರ್ ಹುಕುಂ ಹಗರಣ: ಜೆಡಿಎಸ್​​ ಮಾಜಿ ಶಾಸಕ ಸಿಐಡಿ ವಶಕ್ಕೆ – Kannada News | JDS belur Former MLA lingesh arrested By CID In bagar hukum Land Scam

ಹಾಸನ, (ಜೂನ್ 19): ಅಕ್ರಮವಾಗಿ ಬಗರ್ ಹುಕುಂ ಜಮೀನು (bagar hukum Land) ಮಂಜೂರಾತಿ ಮಾಡಿ ಆರೋಪದಲ್ಲಿ ಹಾಸನ (Hassan) ಜಿಲ್ಲೆ ಬೇಲೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೇಲೂರು ಬಗರ್ ಹುಕ್ಕುಂ ಸಮಿತಿ ಅಧ್ಯಕ್ಷರಾಗಿದ್ದ ವೇಳೆ 2016 ರಿಂದ 2022ರ ನಡುವೆ ಬರೋಬ್ಬರಿ 2,750 ಎಕರೆ ಸರ್ಕಾರಿ ಜಮೀನುಗಳನ್ನು ನಿಯಮಬಾಹಿರವಾಗಿ ಮಂಜೂರು ಮಾಡಲಾಗಿದೆ ಎಂದು ಕೋಲಾರದ ಸಾಮಾಜಿಕ ಕಾರ್ಯಕರ್ತ ರಮೇಶ್‌ ಕುಮಾರ್ ಎಂಬುವರು ದಾಖಲಿಸಿದ್ದ ದೂರಿನ ಮೇರೆಗೆ ಸಿಐಡಿ ಅಧಿಕಾರಿಗಳು, ಇಂದು (ಜೂನ್ 19) ಹಳೇಬೀಡಿನಲ್ಲಿರುವ ಅವರ ನಿವಾಸದಲ್ಲೇ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಮುಖ್ಯಾಂಶಗಳು

  • ಬೇಲೂರು ಕ್ಷೇತ್ರದ ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಸಿಐಡಿ ವಶಕ್ಕೆ
  • ಬೆಂಗಳೂರಿನಿಂದ ಬಂದು ವಿಚಾರಣೆಗೆ ಕರೆದೊಯ್ದ ಸಿಐಡಿ ಪೊಲೀಸರು
  • ಬಗರ್ ಹುಕುಂ ಕಮಿಟಿಯ ಅಧ್ಯಕ್ಷರಾಗಿದ್ದ ವೇಳೆ ಅಕ್ರಮ ಆರೋಪ
  • ಅಕ್ರಮವಾಗಿ ಮಾಜಿ ಶಾಸಕ ಲಿಂಗೇಶ್ ಭೂಮಂಜೂರಾತಿ ಆರೋಪ
  • ಬೇಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ
  • ಕೋಲಾರದ RTI ಕಾರ್ಯಕರ್ತ ರಮೇಶ್‌ಕುಮಾರ್ ನೀಡಿದ್ದ ದೂರು

2018ರಲ್ಲಿ ಜೆಡಿಎಸ್ ಪಕ್ಷದಿಂದ ಗೆದ್ದು ಶಾಸಕರಾಗಿದ್ದ ಕೆ.ಎಸ್.ಲಿಂಗೇಶ್, ಬಗರ್ ಹುಕುಂ ಕಮಿಟಿಯ ಅಧ್ಯಕ್ಷರಾಗಿದ್ದರು. ಬರೋಬ್ಬರಿ 2,750 ಎಕರೆ ಸರ್ಕಾರಿ ಜಮೀನುಗಳನ್ನು ನಿಯಮಬಾಹಿರವಾಗಿ ಮಂಜೂರು ಮಾಡಲಾಗಿದೆ ಎಂದು ಕೋಲಾರದ ಸಾಮಾಜಿಕ ಕಾರ್ಯಕರ್ತ ರಮೇಶ್‌ ಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಬಳಿಕ ಪ್ರಕರಣವನ್ನು ಸಿಐಡಿಗೆ ಹಸ್ತಾಂತಿರಿಸಲಾಗಿತ್ತು.

ದೂರಿನಲ್ಲಿ ಸುಮಾರು 2750 ಎಕರೆ ಸರ್ಕಾರಿ ಜಮೀನನನ್ನು ನಕಲಿ ದಾಖಲೆಗಳ ಆಧಾರದ ಮೇಲೆ 1430 ಬೋಗಸ್ ಫಲಾನುಭವಿಗಳಿಗೆ ಮಂಜೂರು ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಮಾಜಿ ಶಾಸಕ ಲಿಂಗೇಶ್ ಸೇರಿದಂತೆ ಇತರರ ವಿರುದ್ಧ ವಿವಿಧ ಸೆಕ್ಷನ್​​ಗಳಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ನಂತರದ ಬಂಧನ ಭೀತಿ ಎದುರಾಗುತ್ತಿದ್ದಂತೆಯೇ ಲಿಂಗೇಶ್ ಹಾಗೂ ಇತರರು ಅವರು ತಮ್ಮ ವಿರುದ್ಧ ಪ್ರಕರಣ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್​ ವಜಾ ಮಾಡಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶುರುವಾಯ್ತಾ ಮೈತ್ರಿ ಕುಸ್ತಿ? ಹೆಚ್​ಡಿ ರೇವಣ್ಣಗೆ ಮಾತಾಡೋ ಅಧಿಕಾರವಿಲ್ಲ: ಅಶೋಕ್ ತಿರುಗೇಟು

ಬೆಂಗಳೂರು, ಜೂನ್ 19: ಮಂಡ್ಯ ಮಾಜಿ ಸಂಸದೆ ಸುಮಲತಾ ಅಂಬರೀಶ್​ಗೆ ಬಿಜೆಪಿ ರಾಜ್ಯಸಭಾ ಟಿಕೆಟ್ ನೀಡುವ ವಿಚಾರದಲ್ಲಿ ಭರವಸೆ ನೀಡಿ ನಂತರ ನಿರಾಕರಿಸಿದೆ ಎಂಬರ್ಥದಲ್ಲಿ ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣ ನೀಡಿರುವ ಹೇಳಿಕೆಗೆ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ರೇವಣ್ಣ ಈ ಹೇಳಿಕೆಯು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಆರ್. ಅಶೋಕ್, ಇದು ತಮ್ಮ ಪಕ್ಷದ ಆಂತರಿಕ ವಿಚಾರ ಎಂದು ಸ್ಪಷ್ಟಪಡಿಸಿದರು. ಈ ಬಗ್ಗೆ ಜೆಡಿಎಸ್ ಪಕ್ಷದ ನಾಯಕರಾದ ಹೆಚ್.ಡಿ. ರೇವಣ್ಣಗಾಗಲಿ ಅಥವಾ ಇತರ ಯಾವುದೇ ಹೊರಗಿನವರಿಗಾಗಲಿ ಮಾತನಾಡುವ ಅಧಿಕಾರ ಇಲ್ಲ ಎಂದು ಅವರು ಖಡಾಖಂಡಿತವಾಗಿ ಹೇಳಿದ್ದಾರೆ.

ಬಿಜೆಪಿ ಯಾರಿಗೂ ರಾಜ್ಯಸಭಾ ಟಿಕೆಟ್ ಭರವಸೆ ನೀಡಿರಲಿಲ್ಲ ಎಂದು ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ. ಪಕ್ಷದ ನಿಯಮಾನುಸಾರ, ನಾವು ನಮ್ಮ ನಿಷ್ಠಾವಂತ ಕಾರ್ಯಕರ್ತರಿಗೆ ಮಾತ್ರ ರಾಜ್ಯಸಭಾ ಟಿಕೆಟ್ ನೀಡಿದ್ದೇವೆ. ಈ ನಿರ್ಧಾರ ಸಂಪೂರ್ಣವಾಗಿ ನಮ್ಮ ಪಕ್ಷದ ಆಂತರಿಕ ಪ್ರಕ್ರಿಯೆಯ ಭಾಗವಾಗಿದೆ. ರೇವಣ್ಣ ಅವರು ಈ ಕುರಿತು ಅನಗತ್ಯವಾಗಿ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸಬಾರದು ಎಂದು ಆರ್. ಅಶೋಕ್ ಹೇಳಿದ್ದಾರೆ. ರಾಜ್ಯಸಭಾ ಸ್ಥಾನಕ್ಕೆ ಮೊದಲು ದೇವೇಗೌಡರು ಮತ್ತು ಸದಾನಂದಗೌಡರ ಹೆಸರುಗಳು ಕೇಳಿಬಂದಿದ್ದವು. ನಂತರ ಮಂಡ್ಯದ ಮೇಡಂ ಹೆಸರು ಕೇಳಿಬಂದಿತ್ತು. ನಂತರ ಅವರಿಗೂ ಟೋಪಿ ಹಾಕಿದರು ಎಂದು ರೇವಣ್ಣ ಹೇಳಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BOB Recruitment 2026: ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗಾವಕಾಶ; 86 ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | Bank of Baroda Recruitment 2026: 86 Manager Posts in C&IC Dept | Apply by July 6

ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗಾವಕಾಶImage Credit source: Pinterest

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ ಇಲ್ಲಿದೆ. ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆದ ಬ್ಯಾಂಕ್ ಆಫ್ ಬರೋಡಾ (BOB) ತನ್ನ ಕಾರ್ಪೊರೇಟ್ ಮತ್ತು ಸಾಂಸ್ಥಿಕ ಕ್ರೆಡಿಟ್ (C&IC) ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಖಾಲಿ ಇರುವ ಒಟ್ಟು ಹುದ್ದೆಗಳ ವಿವರ:

ಈ ನೇಮಕಾತಿ ಪ್ರಕ್ರಿಯೆಯ ಅಡಿಯಲ್ಲಿ ದೇಶದ ವಿವಿಧ ಶಾಖೆಗಳಲ್ಲಿ ಒಟ್ಟು 86 ನಿಯಮಿತ (Regular) ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಮ್ಯಾನೇಜರ್ – ಕ್ರೆಡಿಟ್ ವಿಶ್ಲೇಷಕ (4 ಹುದ್ದೆಗಳು), ಹಿರಿಯ ವ್ಯವಸ್ಥಾಪಕ – ಕ್ರೆಡಿಟ್ ವಿಶ್ಲೇಷಕ (38 ಹುದ್ದೆಗಳು), ಮುಖ್ಯ ವ್ಯವಸ್ಥಾಪಕ – ಕ್ರೆಡಿಟ್ ವಿಶ್ಲೇಷಕ (1 ಹುದ್ದೆ), ಸೀನಿಯರ್ ಮ್ಯಾನೇಜರ್ – C&IC ರಿಲೇಶನ್‌ಶಿಪ್ (36 ಹುದ್ದೆಗಳು) ಮತ್ತು ಮುಖ್ಯ ವ್ಯವಸ್ಥಾಪಕ – C&IC ರಿಲೇಶನ್‌ಶಿಪ್ (7 ಹುದ್ದೆಗಳು) ಸೇರಿವೆ.

ಅಗತ್ಯವಿರುವ ಶೈಕ್ಷಣಿಕ ಅರ್ಹತೆ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ (Graduation) ಮುಗಿಸಿರಬೇಕು. ಇದರೊಂದಿಗೆ ಫೈನಾನ್ಸ್ ಸ್ಪೆಷಲೈಸೇಶನ್‌ನಲ್ಲಿ ಪಿಜಿ (PG) ಅಥವಾ ಡಿಪ್ಲೊಮಾ ಹೊಂದಿರಬೇಕು. ಅಥವಾ CA/CMA/CS/CFA ನಂತಹ ವೃತ್ತಿಪರ ಅರ್ಹತೆಗಳನ್ನು ಪಡೆದಿರಬೇಕು. ಇದರ ಜೊತೆಗೆ ಬ್ಯಾಂಕಿಂಗ್ ಅಥವಾ ಹಣಕಾಸು ಕ್ಷೇತ್ರದಲ್ಲಿ ಸಂಬಂಧಿತ ಕೆಲಸದ ಅನುಭವ ಇರುವುದು ಕಡ್ಡಾಯವಾಗಿದೆ.

ವಯೋಮಿತಿ ಮತ್ತು ಸಡಿಲಿಕೆ:

ವಿವಿಧ ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಮ್ಯಾನೇಜರ್ ಹುದ್ದೆಗಳಿಗೆ 25 ರಿಂದ 30 ವರ್ಷಗಳು, ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ 28 ರಿಂದ 35 ವರ್ಷಗಳು ಮತ್ತು ಚೀಫ್ ಮ್ಯಾನೇಜರ್ ಹುದ್ದೆಗಳಿಗೆ 32 ರಿಂದ 42 ವರ್ಷಗಳ ವಯೋಮಿತಿ ಇರಬೇಕು. ನಿಯಮಾವಳಿಗಳ ಪ್ರಕಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಶುಲ್ಕದ ವಿವರ:

ಅರ್ಜಿ ಸಲ್ಲಿಸಲು ಸಾಮಾನ್ಯ (General), EWS ಮತ್ತು OBC ಅಭ್ಯರ್ಥಿಗಳಿಗೆ ರೂ. 850 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಇನ್ನುಳಿದಂತೆ ಎಸ್‌ಸಿ/ಎಸ್‌ಟಿ, ಮಹಿಳೆಯರು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 175 ಅರ್ಜಿ ಶುಲ್ಕ ಇರಲಿದೆ. ಅಭ್ಯರ್ಥಿಗಳು ಆನ್‌ಲೈನ್ ಪಾವತಿ ವಿಧಾನಗಳ ಮೂಲಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಆಯ್ಕೆ ವಿಧಾನ ಮತ್ತು ಆಕರ್ಷಕ ವೇತನ:

ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡದೆ ಆನ್‌ಲೈನ್ ಲಿಖಿತ ಪರೀಕ್ಷೆ, ಸೈಕೋಮೆಟ್ರಿಕ್ ಪರೀಕ್ಷೆ, ಗುಂಪು ಚರ್ಚೆ (GD) ಮತ್ತು ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಗ್ರೇಡ್ 2 ಹುದ್ದೆಗಳಿಗೆ ಮಾಸಿಕ ರೂ. 93,960, ಗ್ರೇಡ್ 3 ಹುದ್ದೆಗಳಿಗೆ ರೂ. 1,05,280 ಮತ್ತು ಗ್ರೇಡ್ 4 ಹುದ್ದೆಗಳಿಗೆ ರೂ. 1,20,940 ರವರೆಗೆ ಇತರೆ ಭತ್ಯೆಗಳೊಂದಿಗೆ ಅತ್ಯುತ್ತಮ ವೇತನ ಸಿಗಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಅರ್ಹ ಅಭ್ಯರ್ಥಿಗಳು ಜುಲೈ 6 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಆದ bankofbaroda.in ಗೆ ಭೇಟಿ ನೀಡಿ ‘Careers’ ವಿಭಾಗದಲ್ಲಿ ಲಾಗ್ ಇನ್ ಆಗುವ ಮೂಲಕ ಆಸಕ್ತರು ತಮ್ಮ ಫಾರ್ಮ್‌ಗಳನ್ನು ಸಲ್ಲಿಸಬಹುದು. ಅಂತಿಮ ದಿನಾಂಕದ ವರೆಗೆ ಕಾಯದೇ ಅಭ್ಯರ್ಥಿಗಳು ಮೊದಲೇ ಅರ್ಜಿ ಸಲ್ಲಿಸುವುದು ಸೂಕ್ತ.

Source link