All posts by nagaraj11081993

Viral: ಎಂಟು ವರ್ಷಗಳ ಕಾಲ ಕೆಲಸ ಮಾಡಿದ ಬಾಸ್‌ನ್ನು ವಜಾಗೊಳಿಸಿದ ಕಂಪನಿ ನಿರ್ಧಾರದಿಂದ ಉದ್ಯೋಗಿ ಶಾಕ್

Viral: ಎಂಟು ವರ್ಷಗಳ ಕಾಲ ಕೆಲಸ ಮಾಡಿದ ಬಾಸ್‌ನ್ನು ವಜಾಗೊಳಿಸಿದ ಕಂಪನಿ ನಿರ್ಧಾರದಿಂದ ಉದ್ಯೋಗಿ ಶಾಕ್

ಇತ್ತೀಚೆಗಿನ ದಿನಗಳಲ್ಲಿ ಕೆಲಸ ಉಳಿಸಿಕೊಳ್ಳೋದು ಕಷ್ಟದ ಕೆಲಸ. ಕಂಪನಿಗಳಲ್ಲಿ (company) ವಿವಿಧ ಕಾರಣಗಳಿಂದಾಗಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಹೀಗಾಗಿ ಖಾಸಗಿ ಕಂಪನಿಗಳಿಗೆ ಕೆಲಸಕ್ಕೆ ಸೇರಿಕೊಂಡರೆ ಉದ್ಯೋಗ ಭದ್ರತೆಯಂತೂ ಇಲ್ಲವೇ ಇಲ್ಲ. ಯಾವಾಗ ಹೇಗೆ ಕೆಲಸ ಹೋಗುತ್ತದೆ ಎಂದು ಹೇಳಲು ಅಸಾಧ್ಯ. ಇದೀಗ ಉದ್ಯೋಗಿಯೊಬ್ಬರು ತಮ್ಮ ಕಚೇರಿಯಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಒಂದಲ್ಲ ಎರಡಲ್ಲ, ಬರೋಬ್ಬರಿ ಎಂಟು ವರ್ಷಗಳಿಂದ ಒಂದೇ ಕಂಪನಿಯಿಂದ ಕೆಲಸ ಮಾಡುತ್ತಿದ್ದ ತನ್ನ ಬಾಸ್‌ನ್ನು (Boss) ಹೆಚ್ ಆರ್ ಕೆಲಸದಿಂದ ತೆಗೆದು ಹಾಕಿದ್ದಾರೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.  ಇದು ಉದ್ಯೋಗ ಭದ್ರತೆ ಮತ್ತು ಕಾರ್ಪೊರೇಟ್ ನಿಷ್ಠೆಯ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಬಂಜಿ ಅಲೋ (Banji Alo) ಹೆಸರಿನ ಉದ್ಯೋಗಿಯೊಬ್ಬರು ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ  ಎಂಟು ವರ್ಷಗಳ ಕಾಲ ಕಂಪನಿಯಲ್ಲಿ ನಿಷ್ಠೆಯಿಂದ ದುಡಿಯುತ್ತಿದ್ರೂ ಬಾಸ್‌ನ್ನು ಯಾವುದೇ ಸೂಚನೆ ನೀಡದೇ ವಜಾಗೊಳಿಸಿದ್ದಾರೆ ಎಂದು ವಿವರಿಸಿದ್ದಾರೆ. ನನ್ನ ಮಾಜಿ ಬಾಸ್ ಕಂಪನಿಯಲ್ಲಿ 8 ವರ್ಷಗಳ ಕಾಲ ದುಡಿದರೂ ಕೆಲಸದಿಂದ ತೆಗೆದುಹಾಕಲಾಯಿತು. ಅವರು ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಬಂದರು.

ವೈರಲ್ ಪೋಸ್ಟ್ ಇಲ್ಲಿದೆ

ಆದರೆ ಕೆಲವು ಗಂಟೆಗಳ ನಂತರ, ಹೆಚ್ ಆರ್ ಅವರನ್ನು ಮೀಟಿಂಗ್ ಕರೆದು ಇದು ಅವರ ಕೊನೆಯ ದಿನ ಎಂದು ಹೇಳಿದರು. ಆದರೆ ನನ್ನ ಬಾಸ್ ರಾತ್ರಿ ಮತ್ತು ವಾರಾಂತ್ಯದಲ್ಲಿ ಕೆಲಸ ಮಾಡುತ್ತಿದ್ದ, ಯಾವಾಗಲೂ ಕಂಪನಿಗೆ ಮೊದಲ ಆದ್ಯತೆ ನೀಡುವ ಸಹೋದ್ಯೋಗಿ. ಹೆಚ್ ಆರ್ ಅವರು ಹೇಳಿದ ಮಾತು ಕೇಳಿ ಅವರು ತಮ್ಮ ಲ್ಯಾಪ್‌ಟಾಪ್ ಮತ್ತು ಎಂಟ್ರಿ ಕಾರ್ಡ್‌ನ್ನು ಹಸ್ತಾಂತರಿಸಿದರು. ಈ ಸುದ್ದಿ ಆಘಾತಕಾರಿಯಾಗಿತ್ತು, ಆದ್ದರಿಂದ ಅವರು ವ್ಯವಹಾರ ಮುಗಿಯುವ ಮೊದಲೇ ಹೊರಡಲು ನಿರ್ಧರಿಸಿದರು. ಕಂಪನಿಗಳು ತಮ್ಮನ್ನು ತಾವು ನೋಡಿಕೊಳ್ಳುತ್ತವೆ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ಹೋಗಲು ಇಷ್ಟವಿಲ್ಲ; 34 ಲಕ್ಷ ರೂ ಸಂಬಳದ ಜಾಬ್ ಆಫರ್ ತಿರಸ್ಕರಿಸಿದ ಯುವಕ

ಮಾರ್ಚ್ 31 ರಂದು ಮಾಡಲಾದ ಈ ಪೋಸ್ಟ್ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ ತುಂಬಾ ದುಃಖಕರ ಮತ್ತು ಹೃದಯವಿದ್ರಾವಕ. ಇಂತಹ ನಿರ್ಧಾರದಿಂದ ಕೆಲವರು ಖಿನ್ನತೆಗೆ ಒಳಗಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ನೀವು ಕೆಲಸದಲ್ಲಿ ಎಷ್ಟೇ ಒಳ್ಳೆಯವರಾಗಿದ್ದರೂ ಪರವಾಗಿಲ್ಲ, ಸರದಿ ಬಂದಾಗ ನೀವು ಹೊರಡಲೇ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ತುಂಬಾ ಕರುಣಾಜನಕ ಘಟನೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಟ್ರಂಪ್ ಹಾಕಿದ ಟ್ಯಾರಿಫ್​ಗಳಿಗೆ ಬದಲಾಗಿ ಸಿಗಲಿದೆ ರೀಫಂಡ್; ಯಾರಿಗೆ ಸಿಗುತ್ತೆ ಆದ್ಯತೆ?

ವಾಷಿಂಗ್ಟನ್, ಏಪ್ರಿಲ್ 1: ಡೊನಾಲ್ಡ್ ಟ್ರಂಪ್ ವಿಧಿಸಿರುವ ಟ್ಯಾರಿಫ್ ಕ್ರಮವನ್ನು ಅಮೆರಿಕದ ಸುಪ್ರೀಮ್ ಕೋರ್ಟ್ ಅಮಾನ್ಯಗೊಳಿಸಿದೆ. ಈ ಟ್ಯಾರಿಫ್ ಸಂಗ್ರಹ ಅಕ್ರಮವಾಗಿದೆ ಎಂದು ಹೇಳಿ ಟ್ಯಾರಿಫ್ ಅನ್ನು (US Tariffs) ರದ್ದುಗೊಳಿಸಿದೆ. ಆದರೆ, ಅಷ್ಟರಲ್ಲಾಗಲೇ ಅಮೆರಿಕ ಸಾಕಷ್ಟು ಟ್ಯಾರಿಫ್ ಅನ್ನು ಸಂಗ್ರಹಿಸಿದ್ದಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಸುಂಕ ಪ್ರಾಧಿಕಾರವು ಟ್ಯಾರಿಫ್ ಪಾವತಿಸಿದವರಿಗೆ ರೀಫಂಡ್ ಮಾಡಲು ವ್ಯವಸ್ಥೆ ಮಾಡಿದೆ. ಒಂದು ಅಂದಾಜು ಪ್ರಕಾರ 166 ಬಿಲಿಯನ್ ಡಾಲರ್​ನಷ್ಟು ಟ್ಯಾರಿಫ್ ಸಂಗ್ರಹವಾಗಿದ್ದು, ಅವೆಲ್ಲವನ್ನೂ ಹಂತ ಹಂತವಾಗಿ ರೀಫಂಡ್ ಮಾಡಲಾಗಬಹುದು. ಈ ಪ್ರಕ್ರಿಯೆಗೆ ಸುಮಾರು 45 ದಿನಗಳು ತಗುಲಬಹುದು.

ಈಗಾಗಲೇ ಪೋರ್ಟಲ್ ಇತ್ಯಾದಿ ಟ್ಯಾರಿಫ್ ರೀಫಂಡ್ ಸಿಸ್ಟಂ ಮುಕ್ಕಾಲು ಪಾಲು ಪೂರ್ಣಗೊಂಡಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಅರ್ಜಿ ಸಲ್ಲಿಕೆ ನಂತರ ವಿವಿಧ ಪ್ರಕ್ರಿಯೆ ಪೂರ್ಣಗೊಳಿಸಲು 45 ದಿನಗಳ ಗುರಿ ಇಡಲಾಗಿದೆ. ಅರ್ಜಿ ಸಲ್ಲಿಕೆ ಯಾವಾಗ ಆರಂಭವಾಗುತ್ತದೆ ಎಂಬುದು ಗೊತ್ತಾಗಿಲ್ಲ. ಏಪ್ರಿಲ್ ಅಂತ್ಯದೊಳಗೆ ಈ ಪೋರ್ಟಲ್ ಸಾರ್ವತ್ರಿಕಗೊಳ್ಳಬಹುದು ಎನ್ನಲಾಗಿದೆ.

ಇದನ್ನೂ ಓದಿ: ಜೆಟ್ ಇಂಧನ: ವಿದೇಶೀ ಏರ್ಲೈನ್ಸ್​ಗೆ ಡಬಲ್ ಬೆಲೆ ಏರಿಕೆ; ದೇಶೀಯ ಫ್ಲೈಟ್​ಗಳಿಗೆ ಶೇ. 8.5 ಏರಿಕೆ

ಯಾರಿಗೆ ಸಿಗುತ್ತೆ ರೀಫಂಡ್ಸ್?

ಟ್ಯಾರಿಫ್ ವಿದೇಶಗಳಿಂದ ಸರಬರಾಜು ಮಾಡಲಾಗುವ ಸರಕುಗಳಿಗೆ ವಿಧಿಸುವ ಸುಂಕ. ಇದನ್ನು ಆಮದುಗಾರರು ಪಾವತಿಸುತ್ತಾರೆ. ಉದಾಹರಣೆಗೆ, ಭಾರತದ ಸರಕುಗಳ ಮೇಲೆ ಟ್ರಂಪ್ ಅವರು ಶೇ. 50ರಷ್ಟು ಟ್ಯಾರಿಫ್ ಹಾಕಿದ್ದಾರೆ ಎಂದಿಟ್ಟುಕೊಳ್ಳಿ. ಭಾರತೀಯ ಕಂಪನಿಯೊಂದು ತನ್ನ ಸರಕುಗಳನ್ನು ಅಮೆರಿಕದ ಕಂಪನಿಯೊಂದಕ್ಕೆ ಮಾರುತ್ತದೆ. ಆ ಸರಕುಗಳಿಗೆ ಶೇ. 50ರಷ್ಟು ಟ್ಯಾರಿಫ್ ಇರುತ್ತದೆ. ಈ ಟ್ಯಾರಿಫ್ ಅನ್ನು ಅಮೆರಿಕದ ಕಂಪನಿಯು ಸುಂಕ ಏಜೆನ್ಸಿಗೆ ಪಾವತಿಸಿ, ಸರಕುಗಳನ್ನು ಪಡೆಯಬೇಕು. ಹೀಗಾಗಿ, ಟ್ರಂಪ್ ಹಾಕಿದ ಟ್ಯಾರಿಫ್ ಅನ್ನು ಅಮೆರಿಕದ ಕಂಪನಿಗಳೇ ಪಾವತಿಸುವಂತಾಗುತ್ತದೆ.

ಕೋರ್ಟ್​ನಲ್ಲಿ ಸಲ್ಲಿಕೆಯಾದ ದಾಖಲೆಗಳ ಪ್ರಕಾರ, ಟ್ರಂಪ್​ರ ಟ್ಯಾರಿಫ್ ನೀತಿ ಬಂದ ಮೇಲೆ 3.3 ಲಕ್ಷಕ್ಕೂ ಅಧಿಕ ಆಮದುಗಾರರು ಒಟ್ಟು 166 ಬಿಲಿಯನ್ ಡಾಲರ್​ನಷ್ಟು ಟ್ಯಾರಿಫ್ ಅನ್ನು ಪಾವತಿಸಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಪ್ರೀಮಿಯಮ್ ಪೆಟ್ರೋಲ್, ಡೀಸಲ್ ಬೆಲೆ ಮತ್ತೆ ಏರಿಕೆ; ಲೀಟರ್​ಗೆ 11 ರೂ ದರ ಹೆಚ್ಚಳ

ಆದ್ಯತೆ ಮೇಲೆ ರೀಫಂಡ್ ಹಂಚಿಕೆ

ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ಏಜೆನ್ಸಿಯು ಹೊಸ ಆನ್​ಲೈನ್ ರೀಫಂಡ್ ಕ್ಲೇಮ್ಸ್ ಪೋರ್ಟಲ್ ರಚಿಸುತ್ತಿದೆ. ಇದಾದ ಬಳಿಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತದೆ. ಆ ನಂತರ ಇತರ ಪ್ರಕ್ರಿಯೆಗಳು 45 ದಿನದಲ್ಲಿ ಆಗಬಹುದು. ಮೊದಲಿಗೆ ಬಹಳ ಸುಲಭ ಮತ್ತು ಸರಳ ಇರುವ ಪ್ರಕರಣಗಳನ್ನು ತೆಗೆದುಕೊಂಡು ಇತ್ಯರ್ಥಪಡಿಸಿ, ರೀಫಂಡ್ ಮಾಡಲಾಗುತ್ತದೆ. ರೀಫಂಡ್ ಅನ್ನು ಬಡ್ಡಿಸಮೇತ ನೀಡುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳನ ವೇಗ, ಆವೇಶ ನೋಡಿದ್ರೆ ಈ ರಾಶಿಯವರಿಗೆ ದೊಡ್ಡದಾಗಿ ಏನೋ ಕಾದಿದೆ

ಮೀನ ರಾಶಿಯಲ್ಲಿ ಮಂಗಳ ಮತ್ತು ಶನಿಯರ ಸಂಯೋಗವು ಜ್ಯೋತಿಷ್ಯ ಶಾಸ್ತ್ರದಲ್ಲಿ ದ್ವಂದ್ವ ಯುದ್ಧದಂತೆ ಭಾಸವಾಗುತ್ತದೆ. ಶನಿಯು ಶಿಸ್ತು, ನಿಧಾನಗತಿ ಮತ್ತು ಕರ್ಮದ ಸಂಕೇತವಾದರೆ, ಮಂಗಳನು ವೇಗ, ಆವೇಶ ಮತ್ತು ಶಕ್ತಿಯ ಪ್ರತೀಕ. ಈ ಎರಡು ಶಕ್ತಿಗಳು ಮೀನ ಎಂಬ ಜಲತತ್ವದ ರಾಶಿಯಲ್ಲಿ ಸಂಧಿಸಿದಾಗ ಉಂಟಾಗಲಿದೆ.

​ಜಾಗತಿಕ ಮತ್ತು ಸಾಮಾಜಿಕ ಪ್ರಭಾವಗಳು

​ಮೀನ ರಾಶಿಯು ಸಮುದ್ರ ಮತ್ತು ಜಲಮೂಲಗಳನ್ನು ಪ್ರತಿನಿಧಿಸುವುದರಿಂದ, ಈ ಯುತಿಯು ಜಗತ್ತಿನಾದ್ಯಂತ ಸಂಚಲನ ಮೂಡಿಸುತ್ತದೆ.

​ನೈಸರ್ಗಿಕ ಬದಲಾವಣೆ: ಸಮುದ್ರದಲ್ಲಿ ಚಂಡಮಾರುತ, ಸುನಾಮಿ ಅಥವಾ ಅನಿರೀಕ್ಷಿತ ಮಳೆ ಹೆಚ್ಚಾಗಬಹುದು. ನೌಕಾಪಡೆ ಅಥವಾ ಜಲಸಾರಿಗೆ ಕ್ಷೇತ್ರದಲ್ಲಿ ತಾಂತ್ರಿಕ ಅಡಚಣೆಗಳು ಎದುರಾಗಬಹುದು.

​ರಾಜಕೀಯ ಅಸ್ಥಿರತೆ: ಗಡಿ ವಿವಾದಗಳು ತಾರಕಕ್ಕೇರಬಹುದು. ವಿಶೇಷವಾಗಿ ದಕ್ಷಿಣ ಅಥವಾ ನೈಋತ್ಯ ದಿಕ್ಕಿನ ದೇಶಗಳಲ್ಲಿ ಆಂತರಿಕ ಕಲಹಗಳು ಉಂಟಾಗುವ ಸಾಧ್ಯತೆ ಇರುತ್ತದೆ.

​ಔಷಧೀಯ ಕ್ಷೇತ್ರ: ಹೊಸ ರೋಗಗಳ ಉಗಮ ಅಥವಾ ಇರುವ ರೋಗಗಳಿಗೆ ಹೊಸ ಔಷಧಗಳ ಸಂಶೋಧನೆಯಲ್ಲಿ ಈ ಗ್ರಹಗತಿಗಳು ವೇಗ ನೀಡುತ್ತವೆ.

​​ಲಾಭದಾಯಕ ಸ್ಥಿತಿ

​ಆರ್ಥಿಕ ಸ್ಥಿರತೆ: ಇವರಿಗೆ ಅನಿರೀಕ್ಷಿತವಾಗಿ ಸಿಗಬೇಕಾದ ಹಣಕಾಸು ಸೌಲಭ್ಯಗಳು ದೊರೆಯಲಿವೆ. ಹಳೆಯ ಆಸ್ತಿ ವಿವಾದಗಳು ಇವರ ಪರವಾಗಿ ತೀರ್ಪು ಬರಬಹುದು.

​ಧೈರ್ಯ ಮತ್ತು ಸಾಹಸ: ಮಂಗಳನ ಪ್ರಭಾವದಿಂದ ಹೊಸ ಉದ್ಯಮ ಆರಂಭಿಸಲು ಬೇಕಾದ ಧೈರ್ಯ ಸಿಗುತ್ತದೆ, ಶನಿಯು ಅದಕ್ಕೆ ದೀರ್ಘಕಾಲದ ಭದ್ರತೆಯನ್ನು ನೀಡುತ್ತಾನೆ.

​ಸವಾಲಿನ ಸ್ಥಿತಿ

​ಮಾನಸಿಕ ದ್ವಂದ್ವ: ಮಾಡಬೇಕೋ ಬೇಡವೋ ಎಂಬ ಗೊಂದಲ ಇವರನ್ನು ಕಾಡಬಹುದು. ಶನಿಯು ತಡೆಹಿಡಿದರೆ ಮಂಗಳನು ತಳ್ಳುತ್ತಾನೆ, ಇದು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ.

​ಅಪಘಾತದ ಭಯ: ವಾಹನ ಚಾಲನೆ ಮಾಡುವಾಗ ಅತೀವ ಜಾಗರೂಕತೆ ಇರಲಿ. ರಕ್ತದೊತ್ತಡ ಅಥವಾ ಉಷ್ಣ ಸಂಬಂಧಿ ಕಾಯಿಲೆಗಳು ಬಾಧಿಸಬಹುದು.

​ಸಂಬಂಧಗಳಲ್ಲಿ ಬಿರುಕು: ಕುಟುಂಬದಲ್ಲಿ ಹಿರಿಯರೊಂದಿಗೆ ವಾಗ್ವಾದ ಉಂಟಾಗಬಹುದು. ಮಾತಿನ ಮೇಲೆ ನಿಗಾ ಇಡುವುದು ಅನಿವಾರ್ಯ.

ವೃತ್ತಿ ಮತ್ತು ಆರ್ಥಿಕತೆಯ ಮೇಲೆ ಪ್ರಭಾವ

​ಕಬ್ಬಿಣ ಮತ್ತು ಯಂತ್ರೋಪಕರಣ: ಈ ಕ್ಷೇತ್ರದಲ್ಲಿ ಇರುವವರಿಗೆ ಲಾಭದ ಜೊತೆಗೆ ಹೆಚ್ಚಿನ ಕೆಲಸದ ಒತ್ತಡವಿರುತ್ತದೆ.

​ರಿಯಲ್ ಎಸ್ಟೇಟ್: ಭೂಮಿ ಖರೀದಿ ಅಥವಾ ಮಾರಾಟ ಪ್ರಕ್ರಿಯೆಯಲ್ಲಿ ಕಾನೂನು ತೊಡಕುಗಳು ಎದುರಾಗಬಹುದು. ದಾಖಲೆಗಳನ್ನು ಸರಿಯಾಗಿ ಪರಿಶೀಲಿಸುವುದು ಉತ್ತಮ.

​ಷೇರು ಮಾರುಕಟ್ಟೆ: ಪೆಟ್ರೋಲಿಯಂ, ರಾಸಾಯನಿಕ ಮತ್ತು ರಕ್ಷಣಾ ವಲಯದ ಷೇರುಗಳಲ್ಲಿ ಏರಿಳಿತ ಕಂಡುಬರಬಹುದು.

​ಆಧ್ಯಾತ್ಮಿಕ ಮತ್ತು ಮಾನಸಿಕ ಪರಿಣಾಮ

​ಮೀನ ರಾಶಿಯು ಆಧ್ಯಾತ್ಮದ ನೆಲೆ. ಇಲ್ಲಿ ಈ ಎರಡು ಪಾಪ ಗ್ರಹಗಳ ಭೇಟಿಯು ವ್ಯಕ್ತಿಯಲ್ಲಿ ವೈರಾಗ್ಯ ಅಥವಾ ತೀವ್ರ ಜಿಜ್ಞಾಸೆಯನ್ನು ಹುಟ್ಟಿಸುತ್ತದೆ. ಕೆಟ್ಟ ಹವ್ಯಾಸಗಳಿಂದ ದೂರವಿರಲು ಇದು ಸುಸಮಯ. ಧ್ಯಾನ ಮತ್ತು ಪ್ರಾಣಾಯಾಮದ ಮೂಲಕ ಮಂಗಳನ ಆವೇಶವನ್ನು ಶಾಂತಗೊಳಿಸಿ ಶನಿಯ ಸ್ಥಿರತೆಯನ್ನು ಪಡೆಯಬಹುದು.

​ಪರಿಣಾಮಕಾರಿ ಪರಿಹಾರಗಳು ​ಸುಬ್ರಹ್ಮಣ್ಯ ಆರಾಧನೆ: ಮಂಗಳನ ದೋಷ ನಿವಾರಣೆಗೆ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಅಥವಾ ಷಷ್ಠಿ ಪಾರಾಯಣ ಮಾಡುವುದು ಶ್ರೇಯಸ್ಕರ. ಶನಿವಾರದಂದು ಅಶ್ವತ್ಥ ಮರದ ಕೆಳಗೆ ಎಳ್ಳೆಣ್ಣೆ ದೀಪ ಹಚ್ಚುವುದು ಮತ್ತು ಬಡವರಿಗೆ ಅನ್ನದಾನ ಮಾಡುವುದು ಶುಭ ತರುತ್ತದೆ.

– ಲೋಹಿತ ಹೆಬ್ಬಾರ್

Source link

ಸಿನಿಮಾ ಬಿಡುಗಡೆಗೂ ಮುನ್ನ ದೇವರ ಮೊರೆಹೋಗಿ, ‘ಇಡೀ ದೇಶಕ್ಕಾಗಿ ಪ್ರಾರ್ಥಿಸಿದೆ’ ಎಂದ ಅಕ್ಷಯ್ ಕುಮಾರ್

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ‘ಭೂತ್ ಬಂಗ್ಲಾ’ (Bhooth Bangla) ಸಿನಿಮಾದ ಬಿಡುಗಡೆಯ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಶೀಘ್ರದಲ್ಲೇ ಈ ಚಿತ್ರ ರಿಲೀಸ್ ಆಗಲಿದೆ. ಬಿಡುಗಡೆಗೂ ಮುನ್ನ ಅವರು ದೇವರ ಮೊರೆಹೋಗಿದ್ದಾರೆ. ಬುಧವಾರ (ಏಪ್ರಿಲ್ 1) ಬೆಳಿಗ್ಗೆ ಮಧ್ಯಪ್ರದೇಶದ ಉಜ್ಜಯಿನಿಯ ಪ್ರಸಿದ್ಧ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಕ್ಷಯ್ ಕುಮಾರ್ (Akshay Kumar) ಜೊತೆ ಅವರ ಅತ್ತೆ, ಹಿರಿಯ ನಟಿ ಡಿಂಪಲ್ ಕಪಾಡಿಯಾ ಸಾಥ್ ನೀಡಿದರು. ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ದೇವಸ್ಥಾನದಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅಕ್ಷಯ್ ಕುಮಾರ್, ‘ದರ್ಶನ ತುಂಬಾ ಚೆನ್ನಾಗಿ ಆಯಿತು. ಇಡೀ ದೇಶ ಮತ್ತು ನನ್ನ ಕುಟುಂಬದ ಏಳಿಗೆಗಾಗಿ ನಾನು ಪ್ರಾರ್ಥಿಸಿದ್ದೇನೆ. ನಮ್ಮ ದೇಶವು ಯಾವಾಗಲೂ ಉನ್ನತ ಮಟ್ಟಕ್ಕೆ ಏರಲಿ ಮತ್ತು ಸದಾ ಪ್ರಗತಿ ಹೊಂದಲಿ ಅಂತ ಶಿವನಲ್ಲಿ ಬೇಡಿಕೊಂಡಿದ್ದೇನೆ’ ಎಂದು ತಿಳಿಸಿದರು.

ಶಿಪ್ರಾ ನದಿಯ ದಡದಲ್ಲಿರುವ ಈ ಜ್ಯೋತಿರ್ಲಿಂಗಕ್ಕೆ ಭೇಟಿ ನೀಡಿದ ವೇಳೆ ಅಕ್ಷಯ್ ಕುಮಾರ್ ಬಿಳಿ ಬಣ್ಣದ ಕುರ್ತಾ-ಪೈಜಾಮ ಧರಿಸಿದ್ದರು. ಡಿಂಪಲ್ ಕಪಾಡಿಯಾ ಅವರು ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದರು. ‘ಎಎನ್‌ಐ’ ಸುದ್ದಿ ಸಂಸ್ಥೆ ಹಂಚಿಕೊಂಡಿರುವ ವಿಡಿಯೋದಲ್ಲಿ ಇಬ್ಬರೂ ತಾರೆಯರು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡುಬಂದಿದೆ.

ಅಕ್ಷಯ್ ಕುಮಾರ್ ಮತ್ತು ನಿರ್ದೇಶಕ ಪ್ರಿಯದರ್ಶನ್ ಸುಮಾರು 14 ವರ್ಷಗಳ ಸುದೀರ್ಘ ಬಿಡುವಿನ ನಂತರ ‘ಭೂತ್ ಬಂಗ್ಲಾ’ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಈ ಹಿಂದೆ ‘ಹೇರಾ ಫೇರಿ’, ‘ಭೂಲ್ ಭುಲಯ್ಯ’ ರೀತಿಯ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಈ ಜೋಡಿಯ ಮೇಲೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾರರ್-ಕಾಮಿಡಿ ಕಥಾಹಂದರ ಹೊಂದಿರುವ ಈ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.

ಇದನ್ನೂ ಓದಿ: ‘ಧುರಂಧರ್ 2’ ಆರ್ಭಟಕ್ಕೆ ಬೆದರಿದ ‘ಭೂತ್ ಬಂಗ್ಲ’: ಅಕ್ಷಯ್ ಕುಮಾರ್ ಚಿತ್ರದ ಬಿಡುಗಡೆ ಮುಂದೂಡಿಕೆ

‘ಭೂತ್ ಬಂಗ್ಲಾ’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ಟಬು, ಪರೇಶ್ ರಾವಲ್, ರಾಜ್‌ಪಾಲ್ ಯಾದವ್, ಜಿಸ್ಸು ಸೇನ್‌ಗುಪ್ತಾ, ಅಸ್ರಾನಿ ಮತ್ತು ವಾಮಿಕಾ ಗಬ್ಬಿ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಬಾಲಾಜಿ ಮೋಷನ್ ಪಿಕ್ಚರ್ಸ್ ಮತ್ತು ಕೇಪ್ ಆಫ್ ಗುಡ್ ಫಿಲ್ಮ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜೂ ಎನ್​​ಟಿಆರ್-ನೀಲ್ ಸಿನಿಮಾಕ್ಕೆ ಜೊತೆಯಾದ ಹಾಲಿವುಡ್ ತಂಡ

ಜೂ ಎನ್​​ಟಿಆರ್ (Jr NTR) ನಟಿಸಿ ಪ್ರಶಾಂತ್ ನೀಲ್ (Prashant Neel) ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾ ‘ಡ್ರ್ಯಾಗನ್’, ‘ವಾರಣಾಸಿ’, ‘ಪೆದ್ದಿ’ ಇನ್ನಿತರೆ ಕೆಲ ಸಿನಿಮಾಗಳ ರೀತಿ ದೊಡ್ಡ ಸದ್ದು ಮಾಡುತ್ತಿಲ್ಲ ಆದರೆ ಸದ್ದಿಲ್ಲದೇ ಬೃಹತ್ ಆದ, ಭಾರಿ ಬಜೆಟ್​​ನ ಹಾಗೂ ಅಂತರಾಷ್ಟ್ರೀಯ ಗುಣಮಟ್ಟದ ಸಿನಿಮಾವನ್ನು ತಯಾರು ಮಾಡುತ್ತಿದೆ ಚಿತ್ರತಂಡ. ಪ್ರಶಾಂತ್ ನೀಲ್ ತಮ್ಮ ಈ ವರೆಗಿನ ಸಿನಿಮಾಗಳನ್ನು ಸೆಟ್​​ಗಳಲ್ಲಿಯೇ ನಿರ್ಮಿಸಿರುವುದು ಹೆಚ್ಚು. ಆದರೆ ಇದೇ ಮೊದಲ ಬಾರಿಗೆ ನೀಲ್ ಅವರು ಹೊರದೇಶಕ್ಕೆ ಸಹ ಹೋಗಿದ್ದು, ಅಲ್ಲಿ ಆಕ್ಷನ್ ದೃಶ್ಯಗಳ ಚಿತ್ರೀಕರಣ ಮಾಡಿದ್ದಾರೆ. ಮಾತ್ರವಲ್ಲದೆ ಸಿನಿಮಾಕ್ಕೆ ಖ್ಯಾತ ಹಾಲಿವುಡ್ ತಂಡದ ನೆರವನ್ನು ಸಹ ಪಡೆದಿದ್ದಾರೆ.

ಇತ್ತೀಚೆಗಷ್ಟೆ ಇಡೀ ಚಿತ್ರತಂಡ ಜೋರ್ಡನ್​​ಗೆ ಹೋಗಿದ್ದು ಅಲ್ಲಿ ಅದ್ಧೂರಿ ಆಕ್ಷನ್ ಮತ್ತು ಚೇಸ್ ದೃಶ್ಯಗಳ ಚಿತ್ರೀಕರಣವನ್ನು ಮಾಡಿದೆ. ಈ ವೇಳೆ ಜೋರ್ಡನ್ ಎಸ್​​ಎಫ್​​ಎಕ್ಸ್ ಹೆಸರಿನ ಖ್ಯಾತನಾಮ ತಂಡದ ನೆರವನ್ನು ಚಿತ್ರತಂಡ ಪಡೆದುಕೊಂಡಿದೆ. ಜೋರ್ಡನ್ ಎಸ್​​ಎಫ್​​ಎಕ್ಸ್ ತಂಡವು ಸಿನಿಮಾ ತಂತ್ರಜ್ಞರ ತಂಡವಾಗಿದ್ದು, ವಿಶೇಷವಾಗಿ ಸಿನಿಮಾಗಳ ಆಕ್ಷನ್ ದೃಶ್ಯ, ವಿಎಫ್​​ಎಕ್ಸ್ ಮತ್ತು ಸೌಂಡ್ ಡಿಸೈನ್​​ಗಳಲ್ಲಿ ಪರಿಣಿತಿ ಪಡೆದುಕೊಂಡಿದೆ.

ಆಸ್ಕರ್ ವಿಜೇತ ‘ಡ್ಯೂನ್’, ‘ಜಾನ್ ವಿಕ್’ ಇನ್ನೂ ಹತ್ತು ಹಲವು ಅದ್ಧೂರಿ ಹಾಲಿವುಡ್ ಆಕ್ಷನ್ ಸಿನಿಮಾಗಳಿಗೆ ಜೋರ್ಡನ್ ಎಸ್​​ಎಫ್​​ಎಕ್ಸ್ ತಂಡ ಕೆಲಸ ಮಾಡಿದೆ. ಇದೀಗ ಇದೇ ತಂಡ ಜೂ ಎನ್​​ಟಿಆರ್-ನೀಲ್ ಸಿನಿಮಾಕ್ಕೂ ಕೆಲಸ ಮಾಡಿದೆ. ಪ್ರಶಾಂತ್ ನೀಲ್ ಚಿತ್ರೀಕರಣ ಮಾಡುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಸಾಮಾನ್ಯವಾದ ಸಿನಿಮಾ ಅಲ್ಲ, ಭಾರಿ ದೊಡ್ಡ ಆಕ್ಷನ್ ಸಿನಿಮಾ ಎಂಬುದಕ್ಕೆ ಆ ಚಿತ್ರ ಸಾಕ್ಷಿಯಾಗಿದೆ.

ಇದನ್ನೂ ಓದಿ:ಅಡ್ವಾನ್ಸ್ ಬುಕಿಂಗ್​ನಲ್ಲಿ ‘ಜವಾನ್’ ಚಿತ್ರವನ್ನೂ ಹಿಂದಿಕ್ಕಿದ ‘ಸಲಾರ್’; ಇದು ಪ್ರಶಾಂತ್ ನೀಲ್ ಕಮಾಲ್

ಜೂ ಎನ್​​ಟಿಆರ್ ಹಾಗೂ ನೀಲ್ ಅವರ ಸಿನಿಮಾಕ್ಕೆ ರುಕ್ಮಿಣಿ ವಸಂತ್ ನಾಯಕಿ. ಸಿನಿಮಾನಲ್ಲಿ ಮಲಯಾಳಂನ ಟೊವಿನೊ ಥಾಮಸ್ ಅವರೂ ಸಹ ನಟಿಸಬೇಕಿತ್ತು. ಆದರೆ ಅವರು ಅವಕಾಶ ಒಲ್ಲೆ ಎಂದಿದ್ದು, ಅವರ ಜಾಗಕ್ಕೆ ಯಾವ ನಟ ಆಯ್ಕೆ ಆಗಲಿದ್ದಾರೆ ಎಂಬ ಕುತೂಹಲ ಇದೆ. ಸಿನಿಮಾದ ಚಿತ್ರೀಕರಣ ತುಸು ನಿಧಾನ ಗತಿಯಲ್ಲಿಯೇ ಸಾಗಿದೆ. ಸಿನಿಮಾವನ್ನು ಕರ್ನಾಟಕ, ಹೈದರಾಬಾದ್, ಜೋರ್ಡನ್ ಇನ್ನೂ ಕೆಲವು ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟೋಲ್‌ನಲ್ಲಿ ಹೊಸ ನಿಯಮ: ಕ್ಯಾಶ್‌ಲೆಸ್‌ನಿಂದ ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ

ನೆಲಮಂಗಲ, ಏಪ್ರಿಲ್ 1: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂದಿನಿಂದ (ಏಪ್ರಿಲ್ 1) ನಗದುರಹಿತ ಟೋಲ್ ಪಾವತಿ ಕಡ್ಡಾಯಗೊಳಿಸಲಾಗಿದೆ. ಹೊಸ ನಿಯಮದ ಪ್ರಕಾರ, ವಾಹನ ಸವಾರರು ಟೋಲ್ ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸುವಂತಿಲ್ಲ. ಬದಲಿಗೆ, ಫಾಸ್ಟ್‌ಟ್ಯಾಗ್ ಅಥವಾ ಡಿಜಿಟಲ್ ಪಾವತಿ ವಿಧಾನಗಳಾದ ಫೋನ್‌ಪೇ ಮತ್ತು ಗೂಗಲ್‌ಪೇ ಮೂಲಕ ಸ್ಕ್ಯಾನ್ ಮಾಡಿ ಶುಲ್ಕ ಪಾವತಿಸಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಹಿಂದೆ ಹೊರಡಿಸಿದ್ದ ಸುತ್ತೋಲೆಯಂತೆ ಈ ಕ್ರಮ ಜಾರಿಯಾಗಿದೆ.

ಬೆಂಗಳೂರು ಸಮೀಪದ ನೆಲಮಂಗಲದ ಟೋಲ್ ಬಳಿ ಈ ಹೊಸ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ಬೆಳಗ್ಗಿನಿಂದಲೂ ಫಾಸ್ಟ್‌ಟ್ಯಾಗ್ ಮೂಲಕ ಅಥವಾ ಸ್ಕ್ಯಾನರ್ ಬಳಸಿ ಫೋನ್‌ಪೇ ಮೂಲಕ ಪಾವತಿಸುವವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ನಗದು ಪಾವತಿಗೆ ಯಾವುದೇ ಅವಕಾಶವಿರುವುದಿಲ್ಲ. ಹಿಂದೆ ನಗದು ಪಾವತಿಯಲ್ಲಿ ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿತ್ತು (ಉದಾಹರಣೆಗೆ, ₹37 ರ ಬದಲು ₹80). ಈಗ ಫಾಸ್ಟ್‌ಟ್ಯಾಗ್‌ನಲ್ಲಿ ₹37 ಹಾಗೂ ಫೋನ್‌ಪೇ ಮೂಲಕ ₹45 ಪಾವತಿಸಬೇಕಾಗುತ್ತದೆ. ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಡಿಜಿಟಲ್ ಪಾವತಿಯನ್ನು ಉತ್ತೇಜಿಸಲು ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಹೆದ್ದಾರಿ ಪ್ರಾಧಿಕಾರ ಹೇಳಿಕೊಂಡಿದೆ. ಏತನ್ಮಧ್ಯೆ, ಟೋಲ್​​ಗಳಲ್ಲಿ ಫಾಸ್ಟ್‌ಟ್ಯಾಗ್​ಗೆ ಬೇಡಿಕೆ ಹೆಚ್ಚಾಗಿದ್ದು, ಅದನ್ನು ಆ್ಯಕ್ಟಿವೇಶನ್ ಮಾಡುವವರು ಮತ್ತೆ ಸಕ್ರಿಯರಾಗಿದ್ದಾರೆ.

ವಿಡಿಯೋ ಹಾಗೂ ವರದಿ: ಮಂಜುನಾಥ್, ನೆಲಮಂಗಲ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತನ್ನದೇ ಟೆಂಪೋದಲ್ಲಿ ಶವವಾಗಿ ಪತ್ತೆಯಾದ ಮಾಲೀಕ: ಸಾವಿನ ಸುತ್ತ ಅನುಮಾನದ ಹುತ್ತ

ಚಿಕ್ಕಬಳ್ಳಾಪುರ, ಏಪ್ರಿಲ್​ 01: ಅಶೋಕ್ ಲೇಲ್ಯಾಂಡ್ ಮಿನಿ ಟೆಂಪೋ ಮಾಲೀಕ ಕಂ ಚಾಲಕನೋರ್ವ ತನ್ನ ಟೆಂಪೋವನ್ನು ನಂಬಿಕೊಂಡು ಬಾಡಿಗೆಗೆ ಹೋಗುವುದರ ಮೂಲಕ ಜೀವನ ಸಾಗಿಸುತ್ತಿದ್ದ. ಬಾಡಿಗೆಗೆ ಹೋಗಿ ಬರುವುದಾಗಿ ಹೇಳಿ ಹೋದವನು ಟೆಂಪೋದಲ್ಲೇ ಶವವಾಗಿ ಪತ್ತೆಯಾಗಿದ್ದು (death), ಕೊಲೆ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ತಾಲೂಕಿನ ಆರೂರು ಗ್ರಾಮದಲ್ಲಿ ಘಟನೆ ನಡೆದಿದೆ.

ನಡೆದಿದ್ದೇನು?

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕುರುಬರಕುಂಟೆಯ ಕಾಲೋನಿ ನಿವಾಸಿ 48 ವರ್ಷದ ಸುಬ್ರಮಣಿ, ಶನಿವಾರ ಮನೆಯಿಂದ ಬಾಡಿಗೆಗೆ ಹೋಗಿ ಬರ್ತಿನಿ ಎಂದವನು ವಾಪಸ್ ಬಂದಿಲ್ಲ. ಇದರಿಂದ ಅನುಮಾನಗೊಂಡು ಹೆದ್ದಾರಿ ಬಳಿ ವಾಹನ ಹುಡುಕಿಕೊಂಡು ಬಂದಾಗ ಸುಬ್ರಮಣಿಯ ವಾಹನ ಹಾಗೂ ಶವ ಪತ್ತೆಯಾಗಿದೆ.

ಇದನ್ನೂ ಓದಿ: ಕೆಲಸದಿಂದ ತೆಗೆದ ಸಿಟ್ಟಿಗೆ ಮ್ಯಾನೇಜರ್​​​ಗೆ ಚಾಕುವಿನಿಂದ 10 ಬಾರಿ ಇರಿದ, ಬೆಂಗಳೂರನ್ನೇ ಬೆಚ್ಚಿಬೀಳಿಸಿದ ಕೃತ್ಯ

ಇನ್ನು ಸುಬ್ರಮಣಿಗೆ ಚಿಕ್ಕಬಳ್ಳಾಪುರ ತಾಲೂಕಿನ ಪರೇಸಂದ್ರ ಗ್ರಾಮದ ಪರಿಚಯಸ್ಥ ಮಹಿಳೆಯ ಜೊತೆ ಅನೈತಿಕ ಸಂಬಂಧ ಇತ್ತಂತೆ. ಆಕೆಯನ್ನು ನೋಡಿಕೊಂಡು ವಾಪಸ್ ಬರುವಾಗ ಏನೋ ನಡೆದಿದೆ ಅಂತ ಸುಬ್ರಮಣಿ ಸಾವಿನ ಬಗ್ಗೆ ಆತನ ತಮ್ಮ ಮುನಿರಾಜು ಅನುಮಾನ ವ್ಯಕ್ತಪಡಿಸಿದ್ದಾರೆ.

ಪೆರೇಸಂದ್ರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸುಬ್ರಮಣಿ ಟೆಂಪೋದಲ್ಲೇ ಶವವಾಗಿದ್ದು, ಸಹಜ ಸಾವಾ, ಇಲ್ಲಾ ಯಾರಾದರೂ ಕೊಂದು ಶವ ಹಾಗೂ ವಾಹನ ಬಿಟ್ಟು ಪರಾರಿಯಾಗಿದ್ದಾರಾ ಎಂದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.

ಹಿಂಬದಿಯಿಂದ ಲಾರಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿಯೊಂದು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರ ಬಳಿ ನಡೆದಿದೆ.  ಗುಂಡಾ ತಾಂಡಾದ ನಿವಾಸಿ ಕಿರಣ್ (27) ಮೃತ ಬೈಕ್ ಸವಾರ. ಹಗರಿಬೊಮ್ಮನ ಹಳ್ಳಿ ಸಿಪಿಐ, ವಿಕಾಸ್ ಲಮಾಣಿ, ಮರಿಯಮ್ಮನ ಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ತಾರಾಬಾಯಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: ಗೃಹ ಸಚಿವ ಪರಮೇಶ್ವರ ಆಪ್ತನ ಹತ್ಯೆ ಯತ್ನ: ಚಾಕುವಿನಿಂದ ಚುಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಗುಂಡಾ ತಾಂಡದಿಂದ, ಹೊಸಪೇಟೆಗೆ ಮಾತ್ರೆ ತರಲು ಬೈಕ್ ಸವಾರ ಕಿರಣ್ ಹೊರಟ್ಟಿದ್ದರು. ಬೆಂಗಳೂರಿನಿಂದ ಅಹಮದಾಬಾದ್ ಕಡೆ ಹೋಗುತ್ತಿದ್ದ ಲಾರಿ, ಬೈಕ್ ಸವಾರನಿಗೆ ಗುದ್ದಿದೆ. ತಲೆ ಮತ್ತು ಬೆನ್ನು, ಮುಖಕ್ಕೆ ಬಲವಾದ ಗಾಯವಾದ ಹಿನ್ನೆಲೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲಾರಿ ಚಾಲಕನನ್ನು ಮರಿಯಮ್ಮನ ಹಳ್ಳಿ ಪೊಲೀಸರು ವಿಚಾರಣೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಸ್ಸಾಂನ ಚಹಾ ತೋಟಕ್ಕೆ ಪ್ರಧಾನಿ ಭೇಟಿ, ಕಾರ್ಮಿಕರೊಂದಿಗೆ ಚಹಾ ಎಲೆಗಳ ಕಿತ್ತ ಮೋದಿ, ಸೆಲ್ಫಿ, ಒಂದಿಷ್ಟು ಹರಟೆ

Source link

ಹಾವು ರಕ್ಷಣೆ ಕುರಿತ ಕರೆಗಳ ಏರಿಕೆಗೆ GBA ಹೈರಾಣ: ಇತ್ತ ಅಗತ್ಯ ಸೌಲಭ್ಯ, ವೇತನ ಇಲ್ಲದೆ ಸಂಕಷ್ಟದಲ್ಲಿ ಉರಗ ರಕ್ಷಕರು

ಬೆಂಗಳೂರು, ಏಪ್ರಿಲ್​​ 01: ನಗರದಲ್ಲಿ ಹಾವುಗಳ ಕಾಟ ಹೆಚ್ಚಿದ್ದು ಇವುಗಳನ್ನು ಹಿಡಿಯಲು ಸಹಾಯ ಕೋರಿ ಜಿಬಿಎಗೆ ಪ್ರತಿದಿನ 150ಕ್ಕೂ ಹೆಚ್ಚು ಕರೆಗಳು ಬರುತ್ತಿವೆ. ಆದರೆ ಈ ಸೇವೆಗೆ ಇರುವ 7 ಸದಸ್ಯರ ತಂಡಕ್ಕೆ ಎಲ್ಲ ಕರೆಗಳಿಗೂ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಮೇ ಮತ್ತು ಜೂನ್ ತಿಂಗಳಲ್ಲಿ ಹಾವುಗಳು ಮೊಟ್ಟೆ ಇಡುವ ಹಾಗೂ ಮರಿ ಹೊರಬರುವ ಅವಧಿಯಾಗಿರುವುದರಿಂದ ಕರೆಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ರಕ್ಷಕರ ಸಂಖ್ಯೆಯನ್ನು ದ್ವಿಗುಣಗೊಳಿಸಲು GBA ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

ಪಶ್ಚಿಮ ನಗರ ಪಾಲಿಕೆಯ (112 ವಾರ್ಡ್‌ಗಳು) ಹಾಗೂ ದಕ್ಷಿಣ ನಗರ ಪಾಲಿಕೆಯ (72 ವಾರ್ಡ್‌ಗಳು) ವ್ಯಾಪ್ತಿಗೆ ತಲಾ ಇಬ್ಬರು ರಕ್ಷಕರನ್ನು ನಿಯೋಜಿಸಲಾಗಿದ್ದು, ಉಳಿದ ಪಾಲಿಕೆಗಳಿಗೆ ತಲಾ ಒಬ್ಬರಂತೆ ನೇಮಕ ಮಾಡಲಾಗಿದೆ. ಇವರಿಗೆ ಮೂರು ಅಥವಾ ಐದು ತಿಂಗಳಿಗೊಮ್ಮೆ ಮಾತ್ರ 18,000 ರೂ. ಗೌರವಧನ ಸಿಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಳಕ್ಕೆ ತಲುಪಿ ಹಾವುಗಳನ್ನೂ, ಜನರ ಜೀವವನ್ನೂ ರಕ್ಷಿಸುವುದು ಕಷ್ಟವಾಗುತ್ತಿದೆ. ಈ ಕೆಲಸ ಮಾನಸಿಕವಾಗಿ ಕೂಡ ಒತ್ತಡ ಉಂಟುಮಾಡುತ್ತಿದೆ ಎಂದು ಉರಗ ಸಂರಕ್ಷರೊಬ್ಬರು ತಿಳಿಸಿದ್ದಾರೆ. ಅಲ್ಲದೆ ಪಾಲಿಕೆಯಿಂದ ವಾಹನ ಹಾಗೂ ಅಗತ್ಯ ಸಾಧನಗಳಿಲ್ಲದ ಕಾರಣ, ರಕ್ಷಕರು ಬೈಕ್‌ನಲ್ಲಿ ಪ್ರಯಾಣಿಸಿ,  ಹಾವು ಹಿಡಿಯುವ ಸಾಧನ (ಟಾಂಗ್), ಲೋಹದ ಹುಕ್, ಚೀಲ, ಪಿನ್ನಿಂಗ್ ಟೂಲ್, ಗೇಟರ್ಸ್ (ಕಾಲು ರಕ್ಷಣಾ ಉಪಕರಣ), ಕೈಗವಸುಗಳು ಹಾಗೂ PVC ಪೈಪ್‌ಗಳನ್ನು ಸ್ವಂತ ಖರ್ಚಿನಲ್ಲಿ ಖರೀದಿಸಿ ಬಳಸುತ್ತಿದ್ದಾರೆ.

ಇದನ್ನೂ ಓದಿ: ಆಸ್ತಿ ತೆರಿಗೆ ಪಾವತಿಗೂ EMI?; ಜಿಬಿಎಯಿಂದ ಬೆಂಗಳೂರಿಗರಿಗೆ ಸಿಗುತ್ತಾ ಗುಡ್​​ ನ್ಯೂಸ್​?

ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಹಾವುಗಳಲ್ಲಿ ನಾಗರಹಾವು, ರಸೆಲ್ ವೈಪರ್, ಸ್ಪೆಕ್ಟಾಕಲ್ಡ್ ಕೋಬ್ರಾ ಮತ್ತು ಚೆಕ್ವರ್ಡ್ ಕೀಲ್‌ಬ್ಯಾಕ್ ಸೇರಿವೆ. ಬೇಸಿಗೆ ಸಮಯದಲ್ಲಿ ತಂಪು ಹುಡುಕಿಕೊಂಡು ಹಾವುಗಳು ತಮ್ಮ ವಾಸಸ್ಥಳಗಳಿಂದ ಹೊರಬಂದು ತೋಟಗಳು ಹಾಗೂ ಉದ್ಯಾನವನಗಳಿಗೆ ಬರುತ್ತವೆ. ಹಾವುಗಳು ಅನಿಶ್ಚಿತ ಸ್ವಭಾವ ಹೊಂದಿರುವುದರಿಂದ, ಜನರು ಸ್ವತಃ ಹಿಡಿಯಲು ಯತ್ನಿಸಿದರೆ ಕಚ್ಚಿಸಿಕೊಳ್ಳುವ ಅಥವಾ ಭಯದಿಂದ ಹಾವನ್ನು ಕೊಲ್ಲುವ ಸಾಧ್ಯತೆ ಇದೆ. ಆದ್ದರಿಂದ ತಕ್ಷಣ ಸ್ಥಳಕ್ಕೆ ತೆರಳಿ ರಕ್ಷಣೆ ಕಾರ್ಯ ಮಾಡುವುದು ಅಗತ್ಯ ಎಂದು ರಕ್ಷಕರು ತಿಳಿಸಿದ್ದಾರೆ. ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ ಮರಿ ಹೊರಬರುವ ಅವಧಿ ಹಾಗೂ ಭಾರೀ ಮಳೆಯಿಂದಾಗಿ, ದಿನಕ್ಕೆ 200ಕ್ಕೂ ಹೆಚ್ಚು ಕರೆಗಳು ಬರಬಹುದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ: ನಮ್ಮ ಯೋಜನೆಯಿಂದ ಅವನಿಗೆ ಕೆಲಸವಿಲ್ಲದಂತಾಗಲಿದೆ

ಬಾಲುಸ್ಸೇರಿ, ಏ.1 : ಕೇರಳ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಯುಡಿಎಫ್ (UDF) ನಾಯಕರು ಮತದಾರರನ್ನು ಸೆಳೆಯಲು ವಿನೂತನ ಹಾದಿ ಹಿಡಿದಿದ್ದಾರೆ. ಬಾಲುಸ್ಸೇರಿಯಲ್ಲಿ ಬಸ್ ಪ್ರಯಾಣದ ವೇಳೆ ‘ಯಮರಾಜನ’ ವೇಷಧಾರಿ ವ್ಯಕ್ತಿಯನ್ನು ಭೇಟಿಯಾದ ನಾಯಕರು, ತಮ್ಮ ಹೊಸ ಆರೋಗ್ಯ ಯೋಜನೆಯಿಂದ ಯಮರಾಜನಿಗೆ ಕೆಲಸವಿಲ್ಲದಂತಾಗಲಿದೆ ಎಂದು ವ್ಯಂಗ್ಯವಾಡಿದ್ದಾರೆ. ಯುಡಿಎಫ್ ಅಧಿಕಾರಕ್ಕೆ ಬಂದರೆ ಜಾರಿಗೆ ತರಲಿರುವ ‘ಉಮ್ಮನ್ ಚಾಂಡಿ ಆರೋಗ್ಯ ವಿಮಾ ಯೋಜನೆ’ಯಡಿ ಪ್ರತಿ ಕುಟುಂಬಕ್ಕೆ ವಾರ್ಷಿಕ 25 ಲಕ್ಷ ರೂಪಾಯಿ ಮೊತ್ತದ ಆರೋಗ್ಯ ವಿಮೆಯನ್ನು ಒದಗಿಸುವುದಾಗಿ ಭರವಸೆ ನೀಡಲಾಗಿದೆ. ಯಾವುದೇ ಕುಟುಂಬ ವೈದ್ಯಕೀಯ ತುರ್ತು ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು ಎಂಬುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. “ಆರೋಗ್ಯ ರಕ್ಷಣೆ ಎಂಬುದು ಪ್ರತಿಯೊಬ್ಬ ಕೇರಳೀಯನ ಹಕ್ಕು. 25 ಲಕ್ಷ ರೂ.ಗಳ ಈ ಬೃಹತ್ ಕವರೇಜ್‌ನಿಂದಾಗಿ ಅನಾರೋಗ್ಯವು ಯಾವುದೇ ಕುಟುಂಬದ ಗೌರವ, ಉಳಿತಾಯ ಅಥವಾ ಭವಿಷ್ಯವನ್ನು ಕದಿಯಲು ಸಾಧ್ಯವಿಲ್ಲ. ನಾವು ಯಮರಾಜನನ್ನು ಕೆಲಸದಿಂದ ತೆಗೆಯುತ್ತಿದ್ದೇವೆ, ಆದರೆ ಅವನಿಗೆ ಬೇರೆ ಕೆಲಸ ಹುಡುಕಿಕೊಡುತ್ತೇವೆ” ಎಂದು ನಾಯಕರು ಹಾಸ್ಯಮಯವಾಗಿ ಪ್ರಚಾರ ನಡೆಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link