All posts by nagaraj11081993

ಕಲಿಯುಗದ ‘ಶ್ರವಣ ಕುಮಾರ’; 90 ವರ್ಷದ ಅತ್ತೆಯನ್ನು ತಲೆ ಮೇಲೆ ಹೊತ್ತು 260 ಕಿ.ಮೀ ಪಾದಯಾತ್ರೆ ಮಾಡಿದ ಗಾಯಕಿ! – Kannada News

ಮಥುರಾ, ಜೂನ್ 4: ಇಂದಿನ ಆಧುನಿಕ ಯುಗದಲ್ಲಿ ಅತ್ತೆ-ಸೊಸೆಯರ ಸಂಬಂಧದ ಬಗ್ಗೆ ನೆಗೆಟಿವ್ ಸುದ್ದಿಗಳೇ ಹೆಚ್ಚಾಗಿ ಕೇಳಿಬರುವಾಗ ಹರಿಯಾಣದ ಪ್ರಸಿದ್ಧ ಜಾನಪದ ಗಾಯಕಿ ಕಾಜಲ್ ಚೌಧರಿ (Kajal Chaudhary) ಅವರು ಇಡೀ ಸಮಾಜಕ್ಕೇ ಮಾದರಿಯಾಗುವಂತಹ ಕೆಲಸ ಮಾಡಿ ಎಲ್ಲರ ಮನ ಗೆದ್ದಿದ್ದಾರೆ. ನಡೆಯಲು ಸಾಧ್ಯವಾಗದ ತಮ್ಮ 90 ವರ್ಷದ ಅತ್ತೆಯನ್ನು ವಿಶೇಷವಾಗಿ ಸಿದ್ಧಪಡಿಸಿದ ಪ್ಲಾಸ್ಟಿಕ್ ಬುಟ್ಟಿಯಲ್ಲಿ ಕೂರಿಸಿಕೊಂಡು, ಆ ಬುಟ್ಟಿಯನ್ನು ತಮ್ಮ ತಲೆಯ ಮೇಲೆ ಹೊತ್ತುಕೊಂಡು ಬರೋಬ್ಬರಿ 260 ಕಿಲೋಮೀಟರ್ ದೂರದ ಪವಿತ್ರ ‘ಬ್ರಜ್ ಪರಿಕ್ರಮ’ (Brij Parikrama) ಯಾತ್ರೆಯನ್ನು ಕೈಗೊಂಡಿದ್ದಾರೆ!

ಈ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕಾಜಲ್ ಅವರ 90 ವರ್ಷದ ಅತ್ತೆ ಚಂದ್ರಿ ದೇವಿ ಅವರಿಗೆ ಶ್ರೀಕೃಷ್ಣನ ಪವಿತ್ರ ಭೂಮಿಯಾದ ಬ್ರಜ್ ಪ್ರದೇಶದ ಸುಮಾರು 260 ಕಿ.ಮೀ ಉದ್ದದ ಧಾರ್ಮಿಕ ಪ್ರದಕ್ಷಿಣೆ ಮಾಡಬೇಕೆಂಬುದು ಬಹುಕಾಲದ ಆಸೆಯಾಗಿತ್ತು. ಆದರೆ ವಯೋಸಹಜ ನಿಶ್ಯಕ್ತಿಯಿಂದಾಗಿ ಅವರಿಗೆ ನಡೆಯಲು ಸಾಧ್ಯವಿರಲಿಲ್ಲ. ಅತ್ತೆಯ ಈ ಕೊನೆಯ ಆಸೆಯನ್ನು ತಿಳಿದ ಸೊಸೆ ಕಾಜಲ್, ತಾವೇ ಅವರನ್ನು ಹೊತ್ತುಕೊಂಡು ಹೋಗಲು ನಿರ್ಧರಿಸಿದರು. ನೆಟ್ಟಿಗರು ಕಾಜಲ್ ಚೌಧರಿ ಅವರನ್ನು ಆಧುನಿಕ ಕಾಲದ ‘ಶ್ರವಣ ಕುಮಾರ’ ಎಂದು ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ: ಪೆನ್ಷನ್ ಹಣಕ್ಕಾಗಿ 90 ವರ್ಷದ ಅತ್ತೆಯನ್ನು ಎತ್ತಿಕೊಂಡು 9 ಕಿ.ಮೀ ನಡೆದ ಬುಡಕಟ್ಟು ಮಹಿಳೆ

“ಇದು ಸಂಪೂರ್ಣವಾಗಿ ನನ್ನದೇ ನಿರ್ಧಾರ. ನನ್ನ ಅತ್ತೆ ನನ್ನ ಬಳಿ ಈ ರೀತಿ ಮಾಡುವಂತೆ ಎಂದಿಗೂ ಹೇಳಿರಲಿಲ್ಲ. ಅವರು ನನ್ನನ್ನು ಮಗಳಿಗಿಂತ ಹೆಚ್ಚಾಗಿ ಸಾಕಿ ಬೆಳೆಸಿದ್ದಾರೆ. ಅವರ ಮುಖದಲ್ಲಿ ಸಂತೋಷ ನೋಡುವುದು ಮತ್ತು ನನ್ನ ಆತ್ಮತೃಪ್ತಿಗಾಗಿ ನಾನು ಈ ಕಠಿಣ ಯಾತ್ರೆಯನ್ನು ಮಾಡುತ್ತಿದ್ದೇನೆ” ಎಂದು ಕಾಜಲ್ ಚೌಧರಿ ಹೇಳಿದ್ದಾರೆ.

ಹರಿಯಾಣದ ಬಂಚಾರಿ ಗ್ರಾಮದಿಂದ ಆರಂಭವಾದ ಈ ಪಯಣವು ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಗಡಿಗಳ ಮೂಲಕ ಸಾಗುತ್ತಿದೆ. ತಲೆಯ ಮೇಲೆ ಅತ್ತೆಯನ್ನು ಹೊತ್ತು ಸಾಗುತ್ತಿರುವ ಕಾಜಲ್ ಅವರನ್ನು ಕಂಡ ಸ್ಥಳೀಯ ಗ್ರಾಮೀಣರು ಮತ್ತು ಇತರ ಭಕ್ತರು ಆಶ್ಚರ್ಯಚಕಿತರಾಗಿದ್ದಾರೆ. ದಾರಿಯುದ್ದಕ್ಕೂ ಜನ ಇವರಿಗೆ ಹೂಮಾಲೆ ಹಾಕಿ, ಆರತಿ ಬೆಳಗಿ, ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಬೇಸಿಗೆ ರಜೆ ಮುಗಿಸಿ ಅಜ್ಜಿ ಮನೆಯಿಂದ ಹೊರಟ ಮೊಮ್ಮಗನನ್ನು ಕಂಡು ಭಾವುಕರಾದ ಅಜ್ಜಿ

ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುವ ಈ ಯಾತ್ರೆಯು ಶ್ರೀಕೃಷ್ಣನ ಲೀಲೆಗಳಿಗೆ ಸಂಬಂಧಿಸಿದ ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದ ಪ್ರಮುಖ ದೇವಸ್ಥಾನಗಳು, ಕಾಡುಗಳು ಮತ್ತು ಪವಿತ್ರ ಸರೋವರಗಳ ಮೂಲಕ ಹಾದುಹೋಗುತ್ತದೆ. ಸಾಮಾನ್ಯವಾಗಿ ಭಕ್ತರು ಈ 260 ಕಿ.ಮೀ ದೂರದ ಪ್ರದಕ್ಷಿಣೆಯನ್ನು ಪೂರ್ಣಗೊಳಿಸಲು ಸುಮಾರು 40 ದಿನಗಳನ್ನು ತೆಗೆದುಕೊಳ್ಳುತ್ತಾರೆ. ಪ್ರಸ್ತುತ ಹಿಂದೂ ಕ್ಯಾಲೆಂಡರ್‌ನ ಪವಿತ್ರ ‘ಅಧಿಕ ಮಾಸ’ ನಡೆಯುತ್ತಿರುವುದರಿಂದ, ಈ ಅವಧಿಯಲ್ಲಿ ಪರಿಕ್ರಮ ಮಾಡುವುದರಿಂದ ವಿಶೇಷ ಪುಣ್ಯ ಫಲ ಸಿಗುತ್ತದೆ ಎಂಬ ನಂಬಿಕೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಖ್ಯಾತ ನಿರ್ಮಾಪಕ, ಸಿಬಿಎಫ್‌ಸಿ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ನಿಧನ – Kannada News

ಬಾಲಿವುಡ್‌ನ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಮತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (CBFC) ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ (76) ಅವರು ನಿಧನರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಹಿಂದಿ ಚಿತ್ರರಂಗದಲ್ಲಿ ದಶಕಗಳ ಕಾಲ ಸಕ್ರಿಯರಾಗಿದ್ದ ಪಹ್ಲಾಜ್ ನಿಹಲಾನಿ (Pahlaj Nihalani) ಅವರು ಪತ್ನಿ ನೀತಾ ಹಾಗೂ ವಿಶಾಲ್, ದೀಪೇಶ್, ಚಿರಾಗ್ ಎಂಬ ಮೂವರು ಪುತ್ರರನ್ನು ಅಗಲಿದ್ದಾರೆ.

ಹಿಂದಿ ಚಿತ್ರರಂಗದ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ನಿಹಲಾನಿ ಅವರು ಹಲವು ಸೂಪರ್ ಹಿಟ್ ಕಮರ್ಷಿಯಲ್ ಚಲನಚಿತ್ರಗಳನ್ನು ನಿರ್ಮಿಸಿದ್ದರು. ಗೋವಿಂದ ನಟನೆಯ ‘ಆಂಖೇ’, ‘ಅಂದಾಜ್’, ‘ತಲಾಶ್’, ‘ರಂಗೀಲಾ ರಾಜಾ’ ಮತ್ತು ‘ಜೂಲಿ 2’ ಸೇರಿದಂತೆ ವಿಭಿನ್ನ ಶೈಲಿಯ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಪಹ್ಲಾಜ್ ನಿಹಲಾನಿ ಅವರು 2015ರಿಂದ 2017ರವರೆಗೆ ಸೆನ್ಸಾರ್ ಮಂಡಳಿಯ (CBFC) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರ ಅಧಿಕಾರಾವಧಿಯು ಚಿತ್ರರಂಗದಲ್ಲಿ ತೀವ್ರ ಚರ್ಚೆ ಮತ್ತು ವಿವಾದಗಳಿಗೆ ಕಾರಣವಾಗಿತ್ತು. ಸಿನಿಮಾಗಳ ಸೆನ್ಸಾರ್‌ಶಿಪ್ ಹಾಗೂ ಕತ್ತರಿ ಪ್ರಯೋಗಕ್ಕೆ ಸಂಬಂಧಿಸಿದಂತೆ ಇವರು ತೆಗೆದುಕೊಂಡ ಕಠಿಣ ನಿರ್ಧಾರಗಳು ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಆಕ್ರೋಶ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದ್ದವು. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಸುದ್ದಿಯಾದ ಸೆನ್ಸಾರ್ ಮಂಡಳಿಯ ಮುಖ್ಯಸ್ಥರಲ್ಲಿ ಇವರು ಒಬ್ಬರಾಗಿದ್ದರು.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ; ಖ್ಯಾತ ಕಿರುತೆರೆ ನಟ ನಿಧನ, ಮೂವರ ಸ್ಥಿತಿ ಗಂಭೀರ

ಪಹ್ಲಾಜ್ ನಿಹಲಾನಿ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಮುಂಬೈನಲ್ಲೇ ಇಂದು (ಜೂನ್ 4) ಅಂತ್ಯಕ್ರಿಯೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Peddi Movie review: ‘ಪೆದ್ದಿ’: ರಾಮ್ ಚರಣ್ ಸಿಕ್ಸರ್, ನಿರ್ದೇಶಕ ರನೌಟ್ – Kannada News

ಬೆಟ್ಟಗುಡ್ಡಗಳ ಬುಡದಲ್ಲಿರುವ ಒಂದು ಹೆಸರೇ ಇಲ್ಲದ ಊರು, ಆ ಊರಿನ ಜನರಿಗೆ ‘ಕೂಲಿ’ ಎಂದು ಬಿಟ್ಟರೆ ಬೇರೆ ಗುರುತು ಇಲ್ಲ. ಆ ಊರಿಗೆ ಆ ಊರಿನ ಜನ ಬಿಟ್ಟರೆ ಬೇರೆ ಯಾರೂ ಬರುವುದೂ ಇಲ್ಲ, ಬರಲು ಸೌಕರ್ಯವೂ ಇಲ್ಲ. ಊರಿನ ಬದಿಯಲ್ಲೇ ಒಂದು ರೈಲು ಹಳಿ ಹಾದಿ ಹೋಗಿದೆ, ಆದರೆ ಒಮ್ಮೆಯೂ ಆ ರೈಲು ನಿಲ್ಲುವುದಿಲ್ಲ. ಯಾವ ಸೌಕರ್ಯವೂ ಇಲ್ಲದ ಊರಿನ ಜನರಿಗೆ ಶಿಕ್ಷಣ, ಆರೋಗ್ಯ ಎಂಬುದು ಕನಸಷ್ಟೆ. ಆ ಊರಿನ ಯುವಕ ‘ಪೆದ್ದಿ’ ಬೆಟ್ಟ, ಗುಡ್ಡ ಹತ್ತಿ ಮೈ-ಕೈ ಗಟ್ಟಿಯಾಗಿರುವ ಅವನಿಗೆ ಕ್ರೀಡೆಯೂ ‘ಕೂಲಿ’ಯೇ. ಯಾರು ದುಡ್ಡು ಕೊಟ್ಟರೆ ಅವರ ಜೊತೆ ಆಡುತ್ತಾನೆ, ಗೆಲ್ಲಿಸುತ್ತಾನೆ. ಆದರೆ ಅದೇ ಆಟವನ್ನು ಕೂಲಿಗಾಗಿ ಅಲ್ಲದೆ, ಗುರುತಿ (ಐಡೆಂಟಿಟಿ)ಗಾಗಿ ಆಡಿದರೆ, ತನಗೆ ಮಾತ್ರವಲ್ಲ, ಹೆಸರು-ಗುರುತು ಇಲ್ಲದ ತನ್ನ ಊರಿನ ಐಡೆಂಟಿಗಾಗಿ ಆಡಿದರೆ? ಅದೇ ‘ಪೆದ್ದಿ’ ಸಿನಿಮಾದ ಕತೆ.

ಸಾಮಾನ್ಯವಾಗಿ ಸ್ಪೋರ್ಟ್ಸ್ ಡ್ರಾಮಾ ಸಿನಿಮಾಗಳು ಯಾವುದಾದರೂ ಒಂದು ಆಟದ ಮೇಲೆ ಫೋಕಸ್ ಆಗಿರುತ್ತವೆ. ಆದರೆ ನಿರ್ದೇಶಕ ಬುಚ್ಚಿಬಾಬು ಸನಾ ‘ಪೆದ್ದಿ’ ಸಿನಿಮಾನಲ್ಲಿ ನಾಯಕ ಮೂರು ಆಟಗಳನ್ನು ಆಡುವಂತೆ ಮಾಡಿದ್ದಾರೆ. ಕ್ರಿಕೆಟ್ ಆಟಗಾರನಾಗಿ ಕೂಲಿಗಾಗಿ ಆಡುವ ಪೆದ್ದಿ, ಆ ಬಳಿಕ ತನ್ನದೇ ಒಂದು ಗುರುತು ಮೂಡಿಸಲೆಂದು ಕುಸ್ತಿ ಅಖಾಡಕ್ಕೆ ಇಳಿಯುತ್ತಾನೆ. ಆ ನಂತರ ವಿಧಿಯಾಟದಿಂದಾಗಿ ಅನಿವಾರ್ಯವಾಗಿ ಮತ್ತೊಂದು ಆಟವನ್ನೂ ಪೆದ್ದಿ ಆಡಬೇಕಾಗುತ್ತದೆ. ಈ ಆಟಗಳ ನಡುವೆ ಪೆದ್ದಿ ಪಡುವ ಪಾಡು, ಕಂಡುಕೊಳ್ಳುವ ಸತ್ಯಗಳು, ಅನುಭವಿಸುವ ನೋವು, ಸಾಧಿಸುವ ಗುರಿ ಪ್ರೇಕ್ಷಕರನ್ನು ತಾಕುತ್ತದೆ.

ನಾಯಕ ರಾಮ್ ಚರಣ್, ಡ್ಯಾನ್ಸ್, ಆಕ್ಷನ್ ಜೊತೆಗೆ ಎಮೋಷನಲ್​​ ದೃಶ್ಯಗಳಲ್ಲಿಯೂ ಗಮನ ಸೆಳೆಯುತ್ತಾರೆ. ಅವರ ಸಮಕಾಲೀನ ನಟರು ಲಾರ್ಜರ್ ದ್ಯಾನ್ ಲೈಫ್ (Larger than life) ಪಾತ್ರಗಳು, ಸಿನಿಮ್ಯಾಟಿಕ್ ಯೂನಿವರ್ಸ್​​ಗಳ ಹಿಂದೆ ಓಡುತ್ತಿದ್ದಾಗಲೂ ರಾಮ್ ಚರಣ್, ಒಂದು ಹಳ್ಳಿಯ ಸಾಮಾನ್ಯ ಯುವಕನ ಪಾತ್ರದಲ್ಲಿ ನಟಿಸಲು ಒಪ್ಪಿರುವುದು ಪ್ರಶಂಸನಾರ್ಹ. ಸಿನಿಮಾಕ್ಕಾಗಿ ರಾಮ್ ಚರಣ್ ತಮ್ಮ ದೇಹವನ್ನು ಹುರಿಗೊಳಿಸಿಕೊಂಡಿರುವ ರೀತಿ ಅತ್ಯದ್ಭುತ. ಕುಸ್ತಿ ಅಖಾಡದಲ್ಲಿ ಅವರ ದೇಹ ಮಿರಿ-ಮಿರಿ ಮಿಂಚುತ್ತದೆ. ದೇಹದ ಕಟ್ಟುಗಳು ಎದ್ದೆದ್ದು ಕಾಣುತ್ತವೆ. ಪಾತ್ರಕ್ಕಾಗಿ ಅವರು ಪಟ್ಟಿರುವ ಶ್ರಮ ತೆರೆಯ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ.

ಇದನ್ನೂ ಓದಿ:Peddi First Half review: ‘ಪೆದ್ದಿ’ ಮೊದಲಾರ್ಧದಲ್ಲಿ ಏನಿದೆ? ಏನಿಲ್ಲ?

ಶಿವರಾಜ್ ಕುಮಾರ್ ಅವರಿಗೂ ಇಲ್ಲಿ ಪ್ರಮುಖವಾದ ಪಾತ್ರವಿದೆ. ಕ್ರಿಕೆಟ್ ಆಡುತ್ತಾ, ಕೂಲಿ ಮಾಡುತ್ತಾ, ನಾಯಕಿಗೆ ಲೈನ್ ಹೊಡೆಯುತ್ತಾ ಇರುವ ನಾಯಕನಿಗೆ ಒಂದು ಧ್ಯೇಯವನ್ನು, ಗುರಿಯನ್ನು ನೀಡುವುದು ಹಾಗೂ ಆ ಗುರಿ ಸಾಧಿಸಲು ನಾಯಕನಿಗೆ ಶಕ್ತಿ ಕೊಡುವ ಮಹತ್ವದ ಪಾತ್ರ ಅವರದ್ದು. ಸಿನಿಮಾಕ್ಕೆ ತಿರುವು ಕೊಡುವುದೇ ಶಿವಣ್ಣನ ಗೌಡನಾಯ್ಡು ಪಾತ್ರ. ಶಿವಣ್ಣ ತಮ್ಮ ಗತ್ತಿನಿಂದ ಹಾಗೂ ಎಮೋಷನಲ್ ದೃಶ್ಯಗಳಲ್ಲಿಯೂ ಫುಲ್ ಮಾರ್ಕ್ಸ್ ಸ್ಕೋರ್ ಮಾಡಿದ್ದಾರೆ. ಆದರೆ ಒಂದು ಪ್ರಮುಖವಾದ ಆಸ್ಪತ್ರೆ ದೃಶ್ಯದಲ್ಲಿ ಶಿವಣ್ಣನ ಪಾತ್ರದ ಮೇಲೆ ಇನ್ನಷ್ಟು ಫೋಕಸ್ ನೀಡಬಹುದಾಗಿತ್ತು ಎನಿಸುತ್ತದೆ. ಅಂಥಹಾ ಪ್ರಮುಖ ಭಾವುಕ ದೃಶ್ಯದಲ್ಲಿ ನಿರ್ದೇಶಕರು ಸಂಪೂರ್ಣವಾಗಿ ನಾಯಕನ ಮೇಲೆಯೇ ಕ್ಯಾಮೆರಾ ಫೋಕಸ್ ಮಾಡಿಸಿದ್ದಾರೆ.

ಇನ್ನು ನಾಯಕಿ ಜಾನ್ಹವಿ ಕಪೂರ್ ಇದ್ದಾರೆ ಅಷ್ಟೆ. ಅವರನ್ನು ಗ್ಲಾಮರ್​​ ಹೊರತಾಗಿ ಇನ್ಯಾವುದಕ್ಕೂ ಬಳಸಿಲ್ಲ ನಿರ್ದೇಶಕರು. ಜಾನ್ಹವಿಯ ಆರಂಭದ ಕೆಲ ದೃಶ್ಯಗಳಲ್ಲಿ ಅವರ ಮುಖಕ್ಕಿಂತಲೂ ಬೇರೆ ಭಾಗಗಳನ್ನೇ ಹೆಚ್ಚು ತೋರಿಸಲಾಗಿದೆ. ಅವರ ಪಾತ್ರ, ಕತೆ ನಡೆಯುವ ಆ ಪ್ರದೇಶದ್ದೇ ಅಲ್ಲ ಅನಿಸುತ್ತದೆ. ನಟ ದಿವ್ಯೇಂದು ಹಾಗೂ ಕನ್ನಡಿಗ ತಾರಕ್ ಪೊನ್ನಪ್ ನೆಗೆಟಿವ್ ಪಾತ್ರಗಳಲ್ಲಿ ಗಮನ ಸೆಳೆಯುತ್ತಾರೆ. ನಟ ಬೊಮನ್ ಇರಾನಿಗೆ ಹೆಚ್ಚೇನೂ ಕೆಲಸವಿಲ್ಲ. ಜಗಪತಿ ಬಾಬು ಅವರ ಪಾತ್ರ ಚೆನ್ನಾಗಿದೆ.

ಆದರೆ ಸಿನಿಮಾನಲ್ಲಿ ಕೆಲವಾರು ನೆಗೆಟಿವ್ ಅಂಶಗಳೂ ಸಹ ಇವೆ. ನಾಯಕ, ತನ್ನ ಊರಿಗಾಗಿ ಅಷ್ಟೆಲ್ಲ ಹೋರಾಡುತ್ತಾನೆ. ಆದರೆ ಆ ಊರಿನ ಬಗ್ಗೆ ಊರ ಜನರಿಗೆ ಇರುವ ಭಾವುಕತೆಗೆ ಕಾರಣಗಳೇ ಗೊತ್ತಾಗುವುದಿಲ್ಲ. ಆ ಊರನ್ನು ಸಹ ಸಿನಿಮಾನಲ್ಲಿ ಸರಿಯಾಗಿ ತೋರಿಸುವುದಿಲ್ಲ. ದ್ವಿತೀಯಾರ್ಧದಲ್ಲಿ ಕುಸ್ತಿ ಅಖಾಡದಲ್ಲಿ ನಡೆಯುವ ಫೈಟ್​​ ಅದ್ಭುತವಾಗಿದೆ ಆದರೆ ಅದಾದ ಬಳಿಕ ರಾಷ್ಟ್ರೀಯ ಪಂದ್ಯದಲ್ಲಿ ನಡೆಯುವ ಫೈಟ್ ದೃಶ್ಯಕ್ಕೆ ಮಹತ್​ವವನ್ನೇ ನೀಡಿಲ್ಲ. ಅದು ಬಹಳ ಪೇಲವವಾಗಿದೆ. ಕತೆಯಲ್ಲಿ ಎಮೋಷನ್​ಗೆ ಹೆಚ್ಚಿನ ಬೆಲೆ ನೀಡಲಾಗಿದೆ ಲಾಜಿಕ್ಕಿಗಲ್ಲ. ನಾಯಕ ಪಾತ್ರಕ್ಕೆ ಸಿಂಪತಿ ಧಕ್ಕಲೆಂದು, ಕೆಲವು ಪಾತ್ರಗಳು ಸಾಮಾನ್ಯ ಸನ್ನಿವೇಶಗಳಲ್ಲಿಯೂ ನಾಯಕನ ಮೇಲೆ ಅತಿಯಾದ ವಿಲನ್​​ಗಿರಿ ತೋರುತ್ತವೆ. ಇನ್ನು ಸಿನಿಮಾದ ರೊಮ್ಯಾಂಟಿಕ್ ಆಂಗಲ್ ತೀರ ಪೇಲವ, ಮೊದಲಾರ್ಧದಲ್ಲಿ ನಾಯಕಿಗೆ ಪೆದ್ದಿ ಒಬ್ಬ ವ್ಯಕ್ತಿ ಇದ್ದಾನೆಂಬುದೇ ಗೊತ್ತಿರುವುದಿಲ್ಲ, ಆದರೆ ದ್ವೀತೀಯಾರ್ಧದಲ್ಲಿ ಹಠಾತ್ತನೇ ನಾಯಜಕಿಯೇ ಪೆದ್ದಿಯನ್ನು ಅರ್ಧ ರಾತ್ರಿ ಹುಡುಕಿಕೊಂಡು ಬಂದು ಮುತ್ತುಕೊಡುತ್ತಾಳೆ. ಅವಳ ಆ ಬದಲಾವಣೆಗೆ ಕಾರಣವೇ ಇಲ್ಲ. ನಾಯಕಿಯನ್ನು ಅತಿಯಾಗಿ ಆಬ್ಜೆಕ್ಟಿಫೈ ಮಾಡಲಾಗಿದೆ. ನಾಯಕಿಯ ಅಂಕು-ಡೊಂಕುಗಳ ಮೇಲೆ ಅತಿಯಾಗಿ ಕ್ಯಾಮೆರಾ ಕಣ್ಣು ಹಾಯಿಸಲಾಗಿದೆ. ಇಂಥಹಾ ಇನ್ನೂ ಹಲವನ್ನು ಪಟ್ಟಿ ಮಾಡಬಹುದು.

ಸಿನಿಮಾ ತಾಂತ್ರಿಕವಾಗಿ ಉತ್ತಮವಾಗಿದೆ. ಸಾಕಷ್ಟು ಗ್ರೀನ್ ಸ್ಕ್ರೀನ್​​ಗಳನ್ನು, ಸೆಟ್​​ಗಳನ್ನು ಬಳಸಲಾಗಿದೆ. ಹಾಗಿದ್ದರೂ ಸಹ ಸಿನಿಮಾದ ಪ್ರತಿ ಫ್ರೇಮು ರಿಚ್ ಆಗಿ ಕಾಣುತ್ತದೆ. ನುರಿತ ಕ್ಯಾಮೆರಾಮ್ಯಾನ್ ರತ್ನವೇಲು ಅದ್ಭುತವಾದ ಕೆಲಸ ಮಾಡಿದ್ದಾರೆ. ನಾಯಕ, ಇಬ್ಬರು ಪೈಲ್ವಾನ್​​ಗಳ ಜೊತೆ ಮಾಡುವ ಕುಸ್ತಿ ಸನ್ನಿವೇಶವಂತೂ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಸಿನಿಮಾದ ಸಂಗೀತವೂ ಚೆನ್ನಾಗಿದೆ. ಎಸ್ ತಮನ್, ಅನಿರುದ್ಧ್, ರವಿ ಬಸ್ರೂರು ಅವರ ಅಬ್ಬರದ ಸಂಗೀತವೇ ಕೇಳಿದ್ದವರಿಗೆ ‘ಪೆದ್ದಿ’ಯ ಹಿನ್ನೆಲೆ ಸಂಗೀತ ಭಿನ್ನ ಎನಿಸುತ್ತದೆ. ಒಟ್ಟಾರೆಯಾಗಿ ‘ಪೆದ್ದಿ’ ಒಂದು ನೋಡಬಲ್ಲ ಸಿನಿಮಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಪೆದ್ದಿ’ ರಿಲೀಸ್, ಮಗನ ಸಿನಿಮಾ ಬಗ್ಗೆ ಚಿರಂಜೀವಿಗೆ ಅದೆಷ್ಟು ಕಾಳಜಿ – Kannada News

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಇಂದು (ಜೂನ್ 4) ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಸ್ವತಃ ರಾಮ್ ಚರಣ್ ಅವರಿಗೆ ಭಾರಿ ನಿರೀಕ್ಷೆಗಳಿವೆ. ‘ಆರ್​​ಆರ್​​ಆರ್’ ಬಳಿಕ ರಾಮ್ ಚರಣ್ ನಟಿಸಿರುವ ಎರಡು ಸಿನಿಮಾಗಳು ಒಂದರ ಹಿಂದೊಂದರಂತೆ ಸೋತಿವೆ. ಹಾಗಾಗಿ ‘ಪೆದ್ದಿ’ ಮೂಲಕ ಗೆಲ್ಲಲೇ ಬೇಕಾದ ಅನಿವಾರ್ಯತೆ ರಾಮ್ ಚರಣ್​​ಗೆ ಇದೆ. ಇದೇ ಕಾರಣಕ್ಕೆ ರಾಮ್ ಚರಣ್ ತಂದೆ ಮೆಗಾಸ್ಟಾರ್ ಚಿರಂಜೀವಿ ಸಹ ‘ಪೆದ್ದಿ’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ, ಕುತೂಹಲಗಳನ್ನು ಇರಿಸಿಕೊಂಡಿದ್ದಾರೆ. ಸಿನಿಮಾದ ಶೂಟಿಂಗ್ ಸಮಯದಲ್ಲಿಯೂ ಸಹ ಚಿರಂಜೀವಿ ಸಾಕಷ್ಟು ಇನ್ವಾಲ್ವ್ ಆಗಿದ್ದರು. ಸಿನಿಮಾದ ಬಿಡುಗಡೆಗೆ ವಿತರಕರು ಸಮಸ್ಯೆ ಸೃಷ್ಟಿಸಿದಾಗಲೂ ಚಿರಂಜೀವಿ ಖುದ್ದು ಹೋಗಿ ಮಾತನಾಡಿ ಸಮಸ್ಯೆ ಬಗೆಹರಿಸಿದ್ದರು. ಇದೀಗ ಸಿನಿಮಾ ಬಿಡುಗಡೆ ದಿನದಂದು ‘ಪೆದ್ದಿ’ ಬಗ್ಗೆ ಟ್ವೀಟ್ ಮಾಡಿದ್ದಾರೆ.

‘ನಮ್ಮ ಪೆದ್ದಿ, ನನ್ನ ಪ್ರೀತಿಯ ರಾಮ್ ಚರಣ್ ಮತ್ತು ಇಡೀ ಚಿತ್ರತಂಡ ಹಾಗೂ ಕಲಾವಿದರಿಗೆ ಈ ಅದ್ಭುತ ಬ್ಲಾಕ್‌ಬಸ್ಟರ್ ಯಶಸ್ಸಿಗೆ ಅಭಿನಂದನೆಗಳು! ನಾನು ಶೂಟಿಂಗ್ ನಿಮಿತ್ತ ಪೊಲ್ಲಾಚಿಯಲ್ಲಿದ್ದರೂ ಸಹ, ನನ್ನ ಮನಸೆಲ್ಲಾ ‘ಪೆದ್ದಿ’ ಚಿತ್ರದ ಮೇಲೆಯೇ ಇದೆ. ಕಳೆದ ಎರಡು ವರ್ಷಗಳಿಂದ ಈ ಸಿನಿಮಾಕ್ಕಾಗಿ ಚರಣ್ ಪಟ್ಟ ಶ್ರಮ, ತೋರಿಸಿದ ಕಾಳಜಿ ಮತ್ತು ಭಕ್ತಿ ಎಲ್ಲವನ್ನೂ ನಾನು ತೀರಾ ಹತ್ತಿರದಿಂದ ನೋಡಿದ್ದೇನೆ. ಈ ದಿನ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರೀತಿ ಮತ್ತು ಪ್ರಶಂಸೆಯನ್ನು ನೋಡುತ್ತಿದ್ದರೆ ಒಬ್ಬ ತಂದೆಯಾಗಿ ಮಾತ್ರವಲ್ಲದೆ, ಒಬ್ಬ ನಟನಾಗಿಯೂ ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ’ ಎಂದಿದ್ದಾರೆ.

ಮುಂದುವರೆದು, ‘‘ಪೆದ್ದಿ’ ಪಾತ್ರದಲ್ಲಿ ಸಂಪೂರ್ಣವಾಗಿ ಲೀನವಾಗಲು ಆತ (ರಾಮ್ ಚರಣ್) ಹಗಲಿರುಳು ಪಟ್ಟ ಶ್ರಮ, ಹಠ ಮತ್ತು ಪ್ರಾಮಾಣಿಕತೆ ಪ್ರತಿ ದೃಶ್ಯದಲ್ಲೂ ಸ್ಪಷ್ಟವಾಗಿ ಎದ್ದು ಕಾಣಿಸುತ್ತಿದೆ. ಆ ಕಷ್ಟಕ್ಕೆ ಸಿಕ್ಕ ಪ್ರತಿಫಲವೇ ಈ ಮಹಾ ವಿಜಯ. ಇಂತಹ ಒಂದು ಅದ್ಭುತವಾದ ಕಥೆಯನ್ನು ಬರೆದು, ಅಷ್ಟೇ ಅದ್ಭುತವಾಗಿ ತೆರೆಯ ಮೇಲೆ ದೃಶ್ಯರೂಪಕ್ಕೆ ತಂದ ನಿರ್ದೇಶಕ ಬುಚ್ಚಿ ಬಾಬು ಸನಾ ಅವರಿಗೆ ನನ್ನ ವಿಶೇಷ ಅಭಿನಂದನೆಗಳು’ ಎಂದಿದ್ದಾರೆ.

ಇದನ್ನೂ ಓದಿ:Peddi First Half review: ‘ಪೆದ್ದಿ’ ಮೊದಲಾರ್ಧದಲ್ಲಿ ಏನಿದೆ? ಏನಿಲ್ಲ?

ಹಾಗೆಯೇ, ಈ ಚಿತ್ರವನ್ನೇ ಇಷ್ಟು ಬೃಹತ್ ಮಟ್ಟದಲ್ಲಿ, ಯಾವುದೇ ತರಹದ ರಾಜಿ ಮಾಡಿಕೊಳ್ಳದೆ ನಿರ್ಮಿಸಿದ ನಿರ್ಮಾಪಕ ವೆಂಕಟ್ ಸತೀಶ್ ಕೀಲಾರು ಅವರಿಗೆ ನನ್ನ ಹೃದಯಪೂರ್ವಕ ಶುಭಾಶಯಗಳು. ಈ ಪ್ರತಿಷ್ಠಿತ ಚಿತ್ರದಲ್ಲಿ ನಟಿಸಿದ ನನ್ನ ಆತ್ಮೀಯ ಸ್ನೇಹಿತ, ‘ಕರುನಾಡ ಚಕ್ರವರ್ತಿ’ ಶ್ರೀ ಶಿವರಾಜ್‌ಕುಮಾರ್ ಅವರಿಗೆ ಹಾಗೂ ಅಪ್ಪಲಸೂರಿ ಪಾತ್ರದಲ್ಲಿ ಅದ್ಭುತವಾಗಿ ಜೀವಿಸಿದ ನನ್ನ ಸಹೋದರ ಸಮಾನರಾದ ಜಗಪತಿ ಬಾಬು ಅವರಿಗೆ ಅಭಿನಂದನೆಗಳು’ ಎಂದು ನಟರನ್ನು ಅಭಿನಂದಿಸಿದ್ದಾರೆ.

ಅದ್ಭುತವಾದ ಹಾಡುಗಳು ಮತ್ತು ಹೃದಯ ಸ್ಪರ್ಶಿ ಹಿನ್ನೆಲೆ ಸಂಗೀತವನ್ನು ನೀಡಿದ ಎಆರ್ ರೆಹಮಾನ್ ಅವರಿಗೆ, ತಮ್ಮ ಅದ್ಭುತ ಛಾಯಾಗ್ರಹಣದಿಂದ ಪ್ರತಿ ಫ್ರೇಮ್ ಅನ್ನು ಅತ್ಯದ್ಭುತವಾಗಿ ಮಲಿಸಿದ ರತ್ನವೇಲು ಅವರಿಗೆ, ಅಮೋಘವಾದ ಕಲಾ ನಿರ್ದೇಶನ ನೀಡಿದ ಅವಿನಾಶ್ ಕೊಲ್ಲಾ ಅವರಿಗೆ, ತಮ್ಮ ಅದ್ಭುತ ಎಡಿಟಿಂಗ್ ಕೌಶಲ್ಯದಿಂದ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಎಡಿಟರ್ ನವೀನ್ ನೂಲಿ ಅವರಿಗೆ ನನ್ನ ವಿಶೇಷ ಅಭಿನಂದನೆಗಳು’ ಎಂದು ತಂತ್ರಜ್ಞರಿಗೆ ಧನ್ಯವಾದ ಹೇಳಿದ್ದಾರೆ.

‘ಈ ಚಿತ್ರದ ಯಶಸ್ಸಿನ ಭಾಗವಾಗಿರುವ ಜಾನ್ಹವಿ ಕಪೂರ್, ದಿವ್ಯೇಂದು, ಇತರ ನಟ-ನಟಿಯರು, ತಾಂತ್ರಿಕ ಪ್ರವೀಣರು ಹಾಗೂ ವೃದ್ಧಿ ಸಿನಿಮಾಸ್, ಮೈತ್ರಿ ಮೂವಿ ಮೇಕರ್ಸ್ , ಸುಕುಮಾರ್ ರೈಟಿಂಗ್ಸ್ ಸಂಸ್ಥೆಗಳಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ‘ಪೆದ್ದಿ’ ಸಾಧಿಸಿದ ಈ ಘನ ವಿಜಯವು ತೆಲುಗು ಚಿತ್ರರಂಗ ಹೆಮ್ಮೆ ಪಡುವಂತೆ ಮಾಡಲಿ ಮತ್ತು ಮುಂದೆಯೂ ಇನ್ನೂ ಮರೆನ್ನೋ ಮೈಲಿಗಲ್ಲುಗಳನ್ನು ಸಾಧಿಸಲಿ ಎಂದು ಮನಸ್ಸುಪೂರ್ವಕವಾಗಿ ಹಾರೈಸುತ್ತೇನೆ’ ಎಂದಿದ್ದಾರೆ ನಟ ಚಿರಂಜೀವಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್: ಬೆಂಗಳೂರಿಗೆ ಬಂದೇ ಬಿಡ್ತು ಮೊದಲ ‘ಬ್ಲೂ ಲೈನ್’ ರೈಲು – Kannada News

ಬೆಂಗಳೂರು, ಜೂನ್​ 04: ಬ್ಲೂ ಲೈನ್ (Blue Line Metro) ಬೆಂಗಳೂರಿಗರ ಬಹುನಿರೀಕ್ಷಿತ ನಮ್ಮ ಮೆಟ್ರೋ ಮಾರ್ಗ. ಈ ವರ್ಷ ಡಿಸೆಂಬರ್​ನಲ್ಲಿ ಓಪನ್ ಮಾಡಲು ಬಿಎಂಆರ್​ಸಿಎಲ್​ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬೆನ್ನಲ್ಲೇ ಕೆಂಪೇಗೌಡ ಏರ್​ಪೋರ್ಟ್ (Kempegowda International Airport)​​ ಮಾರ್ಗಕ್ಕೆ ಮೊದಲ ರೈಲು ಬಂದಿದೆ. ಇಂದು ಬೆಳಿಗ್ಗೆ ಬೈಯಪ್ಪನಹಳ್ಳಿ ಡಿಪೋಗೆ ಟ್ರೈನ್ ಸೆಟ್​ ತಲುಪಿದೆ. ಆ ಮೂಲಕ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್ ನೀಡಿದೆ.

ಮುಖ್ಯಾಂಶಗಳು

  • ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್​
  • ಬ್ಲೂ ಲೈನ್ ಮೆಟ್ರೋ ಮಾರ್ಗದ​​ ಮೊದಲ ರೈಲು ನಗರಕ್ಕೆ ಎಂಟ್ರಿ
  • ಇಂದು ಬೆಳಿಗ್ಗೆ ಬೈಯಪ್ಪನಹಳ್ಳಿ ಡಿಪೋ ತಲುಪಿದ ಟ್ರೈನ್ ಸೆಟ್

ಬ್ಲೂ ಲೈನ್ ಮೆಟ್ರೋ ಮಾರ್ಗವು ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ​ವರೆಗೆ ಸಂಪರ್ಕ ಕಲ್ಪಿಸಲಿದ್ದು, ಇದು ನಗರದ ಜನರಿಗೆ ಮತ್ತು ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. 58.19 ಕಿಮೀ ವಿಸ್ತೀರ್ಣದ ಬ್ಲೂ ಲೈನ್ ಮೆಟ್ರೋ ಮಾರ್ಗಕ್ಕೆ ಬೆಂಗಳೂರಿನ ಬೆಮಲ್‌ನಲ್ಲಿ ರೈಲುಗಳನ್ನು ಆರ್ಡರ್ ಮಾಡಲಾಗಿದೆ. ಈ ಮಾರ್ಗಕ್ಕಾಗಿ 38 ಡ್ರೈವರ್ ಲೆಸ್​ ರೈಲುಗಳಿಗಾಗಿ ಆರ್ಡರ್ ನೀಡಲಾಗಿದೆ. ಬ್ಲೂ ಲೈನ್​​ಗೆ ಇನ್ನು ಎರಡು ಮೆಟ್ರೋ ರೈಲು ಬರಬೇಕಿದೆ. ಈ ವರ್ಷ ಡಿಸೆಂಬರ್‌ನಲ್ಲಿ 19.75 ಕಿಮೀ ಉದ್ದದ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರದವರೆಗಿನ ಮೊದಲ ಹಂತವನ್ನು ಆರಂಭಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ.

ಇದನ್ನೂ ಓದಿ: ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್, ಬುಧವಾರದಿಂದ 2 ಹೆಚ್ಚುವರಿ ರೈಲು ಸೇರ್ಪಡೆ

ಸಿಲ್ಕ್ ಬೋರ್ಡ್ ಟು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಮೆಟ್ರೋ 58.19 ಕಿಮೀ ವಿಸ್ತೀರ್ಣವಿದ್ದು, ಈ ಮಾರ್ಗದಲ್ಲಿ 30 ಮೆಟ್ರೋ ಸ್ಟೇಷನ್​​ಗಳಿರಲಿವೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೆ.ಆರ್ ಪುರ 19.75 ಕಿಮೀ ಮಾರ್ಗದಲ್ಲಿ 13 ಸ್ಟೇಷನ್​​ಗಳಿರಲಿದ್ದು, ಕೆ.ಆರ್ ಪುರ ಟು ಏರ್​ಪೋರ್ಟ್​​ವರೆಗೆ 38.44 ಕಿಮೀ ಮಾರ್ಗದಲ್ಲಿ 17 ಮೆಟ್ರೋ ಸ್ಟೇಷನ್​ ಗಳಿರಲಿವೆ. ನೀಲಿ ಮಾರ್ಗವನ್ನು ಬರೋಬ್ಬರಿ 14,788 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:58 pm, Thu, 4 June 26

Source link

ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ: ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು – Kannada News

ತುಮಕೂರು, ಜೂನ್​ 04: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಗ್ರಾಮದ ಬಳಿ ನಡೆದಿದೆ. ಮೃತಪಟ್ಟವರು ಆಂಧ್ರಪ್ರದೇಶ ಮೂಲದವರು ಎನ್ನಲಾಗುತ್ತಿದೆ. ಇನ್ನು ಮೂವರಿಗೆ ಗಂಭೀರ ಗಾಯಗಳಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ.

Source link

ಪ್ರಧಾನಿ ಮೋದಿಯೊಂದಿಗೆ ವೆನಿಜುವೆಲಾ ಅಧ್ಯಕ್ಷೆ ಮಾತುಕತೆ; ಪ್ರಸ್ತಾಪಿತ ಇಂಧನ ಒಪ್ಪಂದದಿಂದ ಭಾರತಕ್ಕೇನು ಲಾಭ? – Kannada News

ಡೆಲ್ಸಿ ರೊಡ್ರಿಗಸ್, ನರೇಂದ್ರ ಮೋದಿ

ನವದೆಹಲಿ, ಜೂನ್ 4: ಭಾರತಕ್ಕೆ ಐದು ದಿನಗಳ ಪ್ರವಾಸಕ್ಕೆ ಬಂದಿರುವ ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ (Delcy Rodriguez) ಅವರು ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇಂಧನ, ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳಿಸುವ ಇರಾದೆಯೊಂದಿಗೆ ಮಾತುಕತೆಗಳು ನಡೆದಿವೆ. ಡೆಲ್ಸಿ ಅವರು ನಿನ್ನೆ ಭಾರತಕ್ಕೆ ಆಗಮಿಸಿದ್ದು, ಜೂನ್ 7 ರವರೆಗೆ ಇಲ್ಲಿರಲಿದ್ದಾರೆ.

ವಿಶ್ವದಲ್ಲೇ ಅತಿ ಹೆಚ್ಚು ಕಚ್ಚಾ ತೈಲ (Crude Oil) ನಿಕ್ಷೇಪವನ್ನು ಹೊಂದಿರುವ ದೇಶಗಳಲ್ಲಿ ವೆನೆಜುವೆಲಾ ಪ್ರಮುಖವಾದದ್ದು. ಭಾರತವು ತನ್ನ ಇಂಧನ ಅಗತ್ಯದ ಸುಮಾರು 80% ಕ್ಕಿಂತ ಹೆಚ್ಚು ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ವೆನೆಜುವೆಲಾದಿಂದ ರಿಯಾಯಿತಿ ದರದಲ್ಲಿ ಅಥವಾ ಸುಲಭ ನಿಯಮಗಳ ಅಡಿಯಲ್ಲಿ ತೈಲವನ್ನು ಆಮದು ಮಾಡಿಕೊಳ್ಳಲು ಈ ಒಪ್ಪಂದವು ದಾರಿ ಮಾಡಿಕೊಡಲಿದೆ.

ಇದನ್ನೂ ಓದಿ: ವಿದೇಶಿ ಹೂಡಿಕೆದಾರರನ್ನು ಮರಳಿ ಆಕರ್ಷಿಸಲು ಸರ್ಕಾರದ ಯತ್ನ; ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಸುಗ್ರೀವಾಜ್ಞೆಗೆ ಅನುಮೋದನೆ

ಭಾರತ ದೇಶಕ್ಕೆ ಆಗುವ ಪ್ರಯೋಜನಗಳು

  1. ಇಂಧನ ಭದ್ರತೆ (Energy Security): ಜಾಗತಿಕವಾಗಿ ಮಧ್ಯಪ್ರಾಚ್ಯ (Middle East) ರಾಷ್ಟ್ರಗಳಲ್ಲಿ ಆಗಾಗ ಉಂಟಾಗುವ ರಾಜಕೀಯ ಅಸ್ಥಿರತೆಯಿಂದಾಗಿ ತೈಲ ಪೂರೈಕೆಗೆ ಧಕ್ಕೆಯಾಗುವ ಆತಂಕವಿರುತ್ತದೆ. ವೆನೆಜುವೆಲಾದೊಂದಿಗೆ ಉತ್ತಮ ಒಪ್ಪಂದ ಮಾಡಿಕೊಳ್ಳುವುದರಿಂದ ಭಾರತಕ್ಕೆ ತೈಲ ಪೂರೈಕೆಯ ಪರ್ಯಾಯ ಮಾರ್ಗ ಸಿಗಲಿದ್ದು, ದೇಶದ ಇಂಧನ ಭದ್ರತೆ ಗಟ್ಟಿಯಾಗುತ್ತದೆ.
  2. ವಿದೇಶಿ ವಿನಿಮಯ ಉಳಿತಾಯ: ವೆನೆಜುವೆಲಾದಿಂದ ಕಡಿಮೆ ದರದಲ್ಲಿ ತೈಲ ಸಿಕ್ಕರೆ ಭಾರತ ಸರ್ಕಾರಕ್ಕೆ ಭಾರಿ ಪ್ರಮಾಣದ ವಿದೇಶಿ ಹಣ (ಡಾಲರ್) ಉಳಿತಾಯವಾಗುತ್ತದೆ. ಈ ಹಣವನ್ನು ದೇಶದ ಮೂಲಸೌಕರ್ಯ (ರಸ್ತೆ, ರೈಲ್ವೆ ಇತ್ಯಾದಿ) ಅಭಿವೃದ್ಧಿಗೆ ಬಳಸಬಹುದು.
  3. ಭಾರತೀಯ ಕಂಪನಿಗಳಿಗೆ ಲಾಭ: ಭಾರತದ ಪ್ರಮುಖ ತೈಲ ರಿಫೈನರಿ ಕಂಪನಿಗಳಾದ ರಿಲಯನ್ಸ್ (RIL) ಮತ್ತು ನಯಾರಾ ಎನರ್ಜಿ (Nayara Energy) ವೆನೆಜುವೆಲಾದ ‘ಹೆವಿ ಕ್ರೂಡ್’ (ಭಾರೀ ಕಚ್ಚಾ ತೈಲ) ಅನ್ನು ಸಂಸ್ಕರಿಸುವ ಅತ್ಯಾಧುನಿಕ ತಂತ್ರಜ್ಞಾನ ಹೊಂದಿವೆ. ಈ ಒಪ್ಪಂದದಿಂದ ಭಾರತೀಯ ಸಂಸ್ಕರಣಾ ವಲಯಕ್ಕೆ ದೊಡ್ಡ ಮಟ್ಟದ ಉದ್ಯೋಗ ಮತ್ತು ಲಾಭ ಸಿಗಲಿದೆ.

ಇದನ್ನೂ ಓದಿ: ಭಾರತದ ವಾಯುಸೇನಾ ಬಲದ ಕೊರತೆ ನೀಗಿಸಲಿರುವ 114 ರಫೇಲ್ ಯುದ್ಧವಿಮಾನಗಳು

ಸಾಮಾನ್ಯ ಭಾರತೀಯರಿಗೆ ಸಿಗುವ ಪ್ರಯೋಜನಗಳು

  • ಪೆಟ್ರೋಲ್ ಮತ್ತು ಡೀಸೆಲ್ ದರ ನಿಯಂತ್ರಣ: ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಾದಾಗ ಭಾರತದಲ್ಲಿಯೂ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತದೆ. ವೆನೆಜುವೆಲಾದಿಂದ ಅಗ್ಗದ ದರದಲ್ಲಿ ತೈಲ ಆಮದಾದರೆ, ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಸ್ಥಿರವಾಗಿರಲು ಅಥವಾ ಕಡಿಮೆಯಾಗಲು ನೆರವಾಗುತ್ತದೆ.
  • ಹಣದುಬ್ಬರ (Inflation) ಇಳಿಕೆ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಡಿಮೆಯಾದರೆ ಸರಕು ಸಾಗಣೆ ವೆಚ್ಚ (Transportation cost) ಗಣನೀಯವಾಗಿ ಇಳಿಯುತ್ತದೆ. ಇದು ನೇರವಾಗಿ ತರಕಾರಿ, ಹಾಲು, ದಿನಸಿ ಪದಾರ್ಥಗಳು ಮತ್ತು ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರಿಂದ ಸಾಮಾನ್ಯ ಮಧ್ಯಮ ವರ್ಗದ ಜನರ ಮಾಸಿಕ ಬಜೆಟ್ ಮೇಲಿನ ಹೊರೆ ಕಡಿಮೆಯಾಗುತ್ತದೆ.
  • ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ: ಇಂಧನ ಬೆಲೆಗಳು ನಿಯಂತ್ರಣದಲ್ಲಿದ್ದರೆ ಉದ್ಯಮಗಳು ಉತ್ತಮವಾಗಿ ರನ್ ಆಗುತ್ತವೆ. ಇದು ದೇಶದ ಆರ್ಥಿಕತೆಗೆ ಚೇತರಿಕೆ ನೀಡುವುದಲ್ಲದೆ, ಪರೋಕ್ಷವಾಗಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡಿದ ಡಿಕೆ ಶಿವಕುಮಾರ್, ರೌಡಿ ನಿಗ್ರಹ ತಂಡ ರಚನೆಗೆ ಆದೇಶ – Kannada News

ಬೆಂಗಳೂರು, (ಜೂನ್ 04): ಕರ್ನಾಟಕದ (Karnataka) ಹಲವು ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಆರೋಪಗಳು ಕೇಳಿಬರುತ್ತಿವೆ. ಪುಡಿ ರೌಡಿಗಳ ಅಟ್ಟಹಾಸ, ಡ್ರಗ್ಸ್, ಗಾಂಜಾ, ಜೂಜಾಟ, ಅಕ್ರಮ ಮರಳು ದಂಧೆ, ಮಟ್ಕಾ ಸೇರಿದಂತೆ ಅಪರಾಧ ಪ್ರಕರಣಗಳು ಹೆಚ್ಚಿತ್ತಿವೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ಕೊಲೆ, ಸುಲಿಗೆ, ಡ್ರಗ್ಸ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಇದೀಗ ಇವುಗಳಿಗೆ ಕಡಿವಾಣ ಹಾಕಲು ನೂತನ ಸಿಎಂ ಡಿಕೆ ಶಿವಕುಮಾರ್  (DK Shivakumar) ಸಮರ ಸಾರಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇಂದು (ಜೂನ್ 04) ವಿಧಾನಸೌಧದಲ್ಲಿ ನಡೆದ ಮೊದಲ ಸಭೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕೆಲ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ರೌಡಿ ನಿಗ್ರಹಕ್ಕೆ ವಿಶೇಷ ತಂಡಗಳ ರಚನೆಗೆ ಆದೇಶಿಸಿದ್ದಾರೆ. ರಾಜ್ಯದ ಪ್ರತಿ ತಾಲೂಕಿನಲ್ಲಿ ರೌಡಿಗಳ ಚಟುವಟಿಕೆಗಳ ಮೇಲೆ ನಿಗಾ ಇಡಲು ಮತ್ತು ಅವರನ್ನು ಮಟ್ಟಹಾಕಲು ವಿಶೇಷ ಸ್ಕ್ವಾಡ್‌ಗಳನ್ನು ಸ್ಥಾಪಿಸಬೇಕೆಂದು ಹೇಳಿದ್ದೇನೆ. ಈ ತಂಡಗಳು 10 ರಿಂದ 15 ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ಒಳಗೊಂಡಿರುತ್ತವೆ. ಹಳೆಯ ರೌಡಿಗಳು ಮತ್ತು ಹೊಸದಾಗಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಯುವಕರ ಮೇಲೆ ನಿಗಾ ಇಡುವುದು, ಅವರನ್ನು ಪತ್ತೆಹಚ್ಚಿ ದಾರಿಗೆ ತರುವುದು ಮತ್ತು ಯಾವುದೇ ಕ್ರಿಮಿನಲ್ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳುವುದು ಈ ತಂಡಗಳ ಪ್ರಮುಖ ಜವಾಬ್ದಾರಿಯಾಗಿದೆ. ಇದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಲು ಮತ್ತು ಸಾರ್ವಜನಿಕರಲ್ಲಿ ಭದ್ರತೆಯ ಭಾವನೆ ಮೂಡಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಸಿಎಂ ಡಿಕೆಶಿ, ಅಧಿಕಾರಿಗಳಿಗೆ ಕೊಟ್ಟ ಖಡಕ್ ಸೂಚನೆಗಳೇನು?

Source link

Donation Rules: ವಸ್ತ್ರದಾನ ಮಾಡುವ ಮುನ್ನ ಈ ನಿಯಮಗಳು ತಿಳಿದಿರಲಿ; ಇಲ್ಲದಿದ್ದರೆ ಪುಣ್ಯದ ಬದಲು ದೋಷ ಗ್ಯಾರಂಟಿ! – Kannada News

ಹಿಂದೂ ಧಾರ್ಮಿಕ ಗ್ರಂಥಗಳು ಮತ್ತು ಸನಾತನ ಸಂಪ್ರದಾಯದಲ್ಲಿ ಮಾನವನ ಪ್ರತಿಯೊಂದು ದೈನಂದಿನ ಕಾರ್ಯಕ್ಕೂ ಕೆಲವು ನಿರ್ದಿಷ್ಟ ನಿಯಮಗಳು ಮತ್ತು ಆಚರಣೆಗಳನ್ನು ಸೂಚಿಸಲಾಗಿದೆ. ಅವುಗಳಲ್ಲಿ ‘ದಾನ’ ಪ್ರಕ್ರಿಯೆಯೂ ಒಂದು. ದಾನ ಮಾಡುವುದನ್ನು ಅತ್ಯಂತ ದೊಡ್ಡ ಪುಣ್ಯ ಕಾರ್ಯವೆಂದು ಪರಿಗಣಿಸಲಾಗಿದ್ದರೂ, ಅದನ್ನು ಶಾಸ್ತ್ರೋಕ್ತವಾಗಿ ಮತ್ತು ಸರಿಯಾದ ರೀತಿಯಲ್ಲಿ ಮಾಡದಿದ್ದರೆ ಅಪೇಕ್ಷಿತ ಫಲಿತಾಂಶಗಳು ಸಿಗುವುದಿಲ್ಲ ಎಂದು ಆಧ್ಯಾತ್ಮಿಕ ಗ್ರಂಥಗಳು ಹೇಳುತ್ತವೆ. ಅದಕ್ಕಾಗಿಯೇ ಬಟ್ಟೆ ಅಥವಾ ಇತರ ವಸ್ತುಗಳನ್ನು ದಾನ ಮಾಡುವ ಮೊದಲು ಕೆಲವು ಪ್ರಮುಖ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಅತ್ಯಗತ್ಯ ಎಂದು ವಿದ್ವಾಂಸರು ಸೂಚಿಸುತ್ತಾರೆ.

ಹಳೆಯ ಬಟ್ಟೆಗಳನ್ನು ದಾನ ಮಾಡುವಾಗ ಈ ಮುನ್ನೆಚ್ಚರಿಕೆ ವಹಿಸಿ:

ಹಬ್ಬ ಹರಿದಿನಗಳು, ವಿಶೇಷ ಸಂದರ್ಭಗಳಲ್ಲಿ ಅಥವಾ ಚಳಿಗಾಲದಂತಹ ಸಮಯಗಳಲ್ಲಿ, ಅನೇಕ ಜನರು ತಮ್ಮ ಬಳಿ ಇರುವ, ತಮಗೆ ಬೇಡದ ಹಳೆಯ ಬಟ್ಟೆಗಳನ್ನು ಬಡವರಿಗೆ ಮತ್ತು ರಸ್ತೆ ಬದಿಯ ನಿರಾಶ್ರಿತರಿಗೆ ದಾನ ಮಾಡುತ್ತಾರೆ. ಇದು ಖಂಡಿತವಾಗಿಯೂ ಅತ್ಯಂತ ಶ್ರೇಷ್ಠ ಹಾಗೂ ಮಾನವೀಯತೆಯ ಕಾರ್ಯವಾಗಿದೆ. ಆದರೆ, ಹಳೆಯ ಬಟ್ಟೆಗಳನ್ನು ಇತರರಿಗೆ ನೀಡುವಾಗ ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಉಪ್ಪು ನೀರಿನಲ್ಲಿ ತೊಳೆದ ನಂತರವೇ ದಾನ ಮಾಡಿ:

ನಿಮ್ಮ ಹಳೆಯ ಬಟ್ಟೆಗಳನ್ನು ನೇರವಾಗಿ ದಾನ ಮಾಡುವ ಬದಲು, ಮೊದಲು ಅವುಗಳನ್ನು ಸ್ವಚ್ಛವಾಗಿ ತೊಳೆಯಬೇಕು. ಅದರಲ್ಲೂ ಬಟ್ಟೆಗಳನ್ನು ಸ್ವಲ್ಪ ಸಮಯದವರೆಗೆ ಉಪ್ಪುಸಹಿತ ನೀರಿನಲ್ಲಿ ನೆನೆಸಿ, ನಂತರ ಚೆನ್ನಾಗಿ ಒಣಗಿಸಿ ದಾನ ಮಾಡುವುದು ಅತ್ಯುತ್ತಮ ಎಂದು ಹೇಳಲಾಗುತ್ತದೆ. ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ನಾವು ದೀರ್ಘಕಾಲ ಬಳಸುವ ವಸ್ತುಗಳ ಮೇಲೆ ನಮ್ಮ ಭಾವನೆಗಳು, ಧನಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳ ಪ್ರಭಾವ ಇರುತ್ತದೆ. ಉಪ್ಪು ನೀರು ಆ ಬಟ್ಟೆಗಳಲ್ಲಿರುವ ನಕಾರಾತ್ಮಕ ಶಕ್ತಿಯನ್ನು (Negative Energy) ಸಂಪೂರ್ಣವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ.

ಉತ್ತಮ ಸ್ಥಿತಿಯಲ್ಲಿರುವ ಬಟ್ಟೆಗಳನ್ನು ಮಾತ್ರ ನೀಡಿ:

ದಾನ ಮಾಡುವುದೆಂದರೆ ಇತರರಿಗೆ ಉಪಯುಕ್ತವಾಗುವ ಮತ್ತು ಅವರ ಮನಸ್ಸಿಗೆ ಸಂತೋಷ ನೀಡುವ ವಸ್ತುವನ್ನು ಒದಗಿಸುವುದು ಎಂದರ್ಥ. ಆದ್ದರಿಂದ ಹರಿದ, ಕಲೆಯಾದ ಅಥವಾ ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಿರುವ ಬಟ್ಟೆಗಳನ್ನು ಎಂದಿಗೂ ದಾನ ಮಾಡಬಾರದು. ದಾನ ನೀಡುವ ಮುನ್ನ ಬಟ್ಟೆಗಳು ಸ್ವಚ್ಛವಾಗಿವೆ ಮತ್ತು ಇತರರು ಧರಿಸಲು ಯೋಗ್ಯವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಬಟ್ಟೆಯಲ್ಲಿ ಸಣ್ಣಪುಟ್ಟ ಹರಿತಗಳಿದ್ದರೆ, ಅವುಗಳನ್ನು ಸೂಜಿಯಿಂದ ಹೊಲಿದು ನೀಡುವುದು ದಾನದ ಶ್ರೇಷ್ಠತೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ದಾನವನ್ನು ಪ್ರದರ್ಶನವನ್ನಾಗಿ (ಪಬ್ಲಿಸಿಟಿ) ಪರಿವರ್ತಿಸಬೇಡಿ:

ಇತ್ತೀಚಿನ ದಿನಗಳಲ್ಲಿ ದಾನ ಮಾಡುವುದನ್ನು ಒಂದು ಪ್ರದರ್ಶನದ ವಸ್ತುವನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ಆದರೆ ದಾನದ ಬಗ್ಗೆ ಜಾಹೀರಾತು ನೀಡುವುದು, ವೀಡಿಯೊಗಳು ಅಥವಾ ಫೋಟೋಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ (Social Media) ಹಂಚಿಕೊಳ್ಳುವುದು ಒಳ್ಳೆಯದಲ್ಲ ಎಂದು ಧಾರ್ಮಿಕ ಗ್ರಂಥಗಳು ಸ್ಪಷ್ಟವಾಗಿ ಸೂಚಿಸುತ್ತವೆ. ನಿಜವಾದ ದಾನವನ್ನು ನಿಸ್ವಾರ್ಥವಾಗಿ ಮತ್ತು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಬೇಕು. ಅದಕ್ಕಾಗಿಯೇ ಬಲಗೈಯಲ್ಲಿ ನೀಡಿದ ದಾನ ಎಡಗೈಗೆ ತಿಳಿಯದಂತೆ ಮಾಡುವ ‘ಗುಪ್ತ ದಾನ’ ಅಥವಾ ರಹಸ್ಯ ದಾನವನ್ನು ಅತ್ಯುತ್ತಮ ದಾನವೆಂದು ಪರಿಗಣಿಸಲಾಗುತ್ತದೆ.

ವಸ್ತ್ರ ದಾನ ಮಾಡಲು ಶುಭ ಸಮಯ ಯಾವುದು?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ದಾನ ಧರ್ಮಗಳನ್ನು ಮಾಡಲು ಬೆಳಗಿನ ಸಮಯವನ್ನು ಅತ್ಯಂತ ಶುಭ ಮತ್ತು ಸಕಾರಾತ್ಮಕ ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಅಮಾವಾಸ್ಯೆ, ಹುಣ್ಣಿಮೆ, ಸಂಕ್ರಾಂತಿ ಮತ್ತು ಶನಿವಾರದ ದಿನಗಳಂದು ಬಡವರಿಗೆ ಹಾಗೂ ನಿರ್ಗತಿಕರಿಗೆ ಮಾಡುವ ವಸ್ತ್ರದಾನಕ್ಕೆ ಜಾತಕದಲ್ಲಿನ ದೋಷಗಳನ್ನು ನಿವಾರಿಸುವ ವಿಶೇಷ ಮಹತ್ವ ಮತ್ತು ಶಕ್ತಿ ಇದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಿಲ್ಲೆಗಳ ಪ್ರತಿ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ವರದಿ ಕೊಡಿ: ಡಿಕೆ ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ – Kannada News

ಬೆಂಗಳೂರು, ಜೂನ್ 4: ಎಲ್ಲಾ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಕೆಲಸಗಳನ್ನು 25 ದಿನಗಳಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಗಳ ಪ್ರತಿಯೊಂದು ಸಮಸ್ಯೆಗಳನ್ನು ಪಟ್ಟಿ ಮಾಡಿ ಸಲ್ಲಿಸಿ. ಜಿಲ್ಲಾ ಉಸ್ತುವಾರಿ ಸಚಿವರು ಆ ಬಗ್ಗೆ ಗಮನಹರಿಸುವಂತೆ ಸೂಚಿಸಲಾಗುವುದು. ಎಲ್ಲಾ ಜಿಲ್ಲಾ ಕಾರ್ಯದರ್ಶಿಗಳು ಇಲಾಖೆಗೆ ಸಂಬಂಧಿಸಿದಂತೆ ಬಾಕಿ ಇರುವ ಕೆಲಸಗಳ ಪಟ್ಟಿಯನ್ನು ಒದಗಿಸಬೇಕು. ಇದಲ್ಲದೆ, 25 ದಿನಗಳೊಳಗೆ, ಬಾಕಿ ಕೆಲಸಗಳ ಜೊತೆಗೆ, ಆಯಾ ಜಿಲ್ಲೆಗೆ ಸಂಬಂಧಿಸಿದಂತೆ ಹೊಸದಾಗಿ ಏನು ಮಾಡಬಹುದು, ಆರ್ಥಿಕ ವ್ಯವಸ್ಥೆಯ ಮಿತಿಯೊಳಗೆ ಯಾವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದರ ಪಟ್ಟಿಯನ್ನೂ ಸಲ್ಲಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.

ನನಗೆ ಇತಿಹಾಸ ಬರೆಯಲು ಅಥವಾ ಓದಲು ಇಷ್ಟವಿಲ್ಲ. ಇತಿಹಾಸ ನಿರ್ಮಾಣ ಮಾಡಬೇಕು. ಏನಾದರೂ ಸಾಕ್ಷಿ ಗುಡ್ಡಗಳನ್ನು ಬಿಟ್ಟು ಹೋಗಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಸಕಾರಾತ್ಮಕ ಮನೋಭಾವ ಮತ್ತು ವ್ಯವಸ್ಥೆಯೊಳಗೆ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಕೆಲಸ ಮಾಡುವಂತೆ ಅವರು ಕರೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link