ಹಾಸನ, ಏಪ್ರಿಲ್ 1: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮತ್ತೂರು ಗ್ರಾಮದಲ್ಲಿ ಕಾಡಾನೆಗಳ ಚಲನವಲನ ಗಮನಿಸುತ್ತಿದ್ದ ಅರಣ್ಯ ಇಲಾಖೆಯ ಎಲಿಫೆಂಟ್ ಟಾಸ್ಕ್ ಫೋರ್ಸ್ (ETF) ಸಿಬ್ಬಂದಿ ಮೇಲೆ ಕಾಡಾನೆಯೊಂದು ಭೀಕರವಾಗಿ ದಾಳಿ ಮಾಡಿದೆ. ಈ ವೇಳೆ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಟಿಎಫ್ ಸಿಬ್ಬಂದಿಯಾದ ಪ್ರಸನ್ನ, ಯುವರಾಜ್ ಮತ್ತು ಧನಂಜಯ ಮತ್ತೂರು ಗ್ರಾಮದ ಬಳಿ ಕಾಡಾನೆಗಳ ಮೇಲೆ ನಿಗಾ ಇರಿಸಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಆನೆಯೊಂದು ಇವರತ್ತ ನುಗ್ಗಿ ಬಂದಿದೆ. ಆನೆ ದಾಳಿ ಮಾಡುತ್ತಿದ್ದಂತೆ ಗಾಬರಿಗೊಂಡ ಸಿಬ್ಬಂದಿ ತಮ್ಮ ಬೈಕ್ಗಳನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಸಿಬ್ಬಂದಿ ಹೋದ ನಂತರ ಆನೆಯು ಅಲ್ಲಿದ್ದ ಬೈಕ್ಗಳನ್ನು ಸಂಪೂರ್ಣವಾಗಿ ಜಖಂಗೊಳಿಸಿದೆ.
ಈ ಘಟನೆಯಿಂದ ರೊಚ್ಚಿಗೆದ್ದಿರುವ ಸ್ಥಳೀಯರು, ಕಾಡಾನೆಗಳನ್ನು ಓಡಿಸುವ ಅರಣ್ಯ ಇಲಾಖೆಯ ಸಿಬ್ಬಂದಿಗೇ ಸರಿಯಾದ ರಕ್ಷಣೆ ಇಲ್ಲದಂತಾಗಿದೆ. ಇನ್ನು ಸಾಮಾನ್ಯ ಜನರ ಕಥೆ ಏನು? ಎಂದು ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ತಮಿಳುನಾಡು: ಕಛೇರಿಯಲ್ಲೇ ಡೌಟ್ ಕೇಳೋ ನೆಪದಲ್ಲಿ ಬಂದು ಮಹಿಳಾ ಉದ್ಯೋಗಿಗೆ ತುಟಿಗೆ ಚುಂಬಿಸಲು ಮುಂದಾದ ಘಟನೆ ತಮಿಳುನಾಡಿದ ಕೊಯಮತ್ತೂರಿನಲ್ಲಿ ನಡೆದಿದೆ. ಕಾಮುಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. @rameshofficial0 ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಮಹಿಳೆ ಕೆಲಸ ಮಾಡುತ್ತಿರುವಾಗ ಅಲ್ಲಿಗೆ ಬಂದ ಪುರುಷ ಸಹೋದ್ಯೋಗಿ ಕಂಪ್ಯೂಟರ್ನಲ್ಲಿ ಏನೋ ತೋರಿಸುತ್ತಾ ಏಕಾಏಕಿ ಆಕೆಯ ತುಟಿಗೆ ಚುಂಬಿಸಲು ಮುಂದಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಬೆಂಗಳೂರು, (ಏಪ್ರಿಲ್ 01): ರಾಜ್ಯದಲ್ಲಿ (Karnataka) ಇಂದಿನಿಂದ ಜನಗಣತಿ (Census) ಆರಂಭಗೊಂಡಿದ್ದು, ಎರಡು ಹಂತಗಳಲ್ಲಿ ಜನಗಣತಿ ನಡೆಯಲಿದೆ. ಮೊದಲ ಹಂತದಲ್ಲಿ ಮನೆಗಳ ಗಣತಿ ಮತ್ತು ಎರಡನೇ ಹಂತದಲ್ಲಿ ಜನ ಗಣತಿ ನಡೆಯಲಿದ್ದು, ಇಂದಿನಿಂದ ಸ್ವಯಂ ಗಣತಿ ಕೂಡ ಆರಂಭವಾಗಿದೆ. ಏ.1ರಿಂದ ಏ.15ರವರೆಗೂ ಸ್ವಯಂ ಗಣತಿಯಲ್ಲಿ ಭಾಗವಹಿಸಬಹುದು. ನಂತರ ಗಣತಿದಾರರು ಮನೆ ಮನೆಗೆ ತೆರಳಿ ಗಣತಿ ಮಾಡಲಿದ್ದಾರೆ. ಎರಡನೇ ಹಂತವಾಗಿ ಏ.16ರಿಂದ ಮೇ 15ರ ಅವಧಿಯಲ್ಲಿ ಗಣತಿದಾರರು ಮನೆ – ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಪರಿಶೀಲಿಸಿ ಸಂಗ್ರಹಿಸಲಿದ್ದಾರೆ. ಸ್ವಯಂ ಗಣತಿಯಲ್ಲಿ ಸ್ವತಃವಾಗಿ ಜನರೇ ಭಾಗವಹಿಸಿ ನೋಂದಣಿ ಮಾಡಿಕೊಳ್ಳಬಹುದು. ಗಣತಿಯ ವೆಬ್ ಪೋರ್ಟಲ್ನಲ್ಲಿ ಸ್ವಯಂ ಗಣತಿಯಲ್ಲಿ ಭಾಗವಹಿಸಬಹುದು. ಮನೆಯ ಯಾವುದೇ ಒಬ್ಬ ಸದಸ್ಯರು ವೆಬ್ ಪೋರ್ಟಲ್ ಮೂಲಕ ಮನೆಯ ವಿವರಗಳನ್ನ ದಾಖಲಿಸಬಹುದು. ನೋಂದಾಣಿ ನಂತರ ಸ್ವಯಂಗಣತಿಯ ಐಡಿಯನ್ನ ಮೊಬೈಲ್ ಅಥವಾ ಇಮೇಲ್ ಮೂಲಕ ಪಡೆಯಬಹುದು. ಇನ್ನು ಈ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದು, ಏನೆಲ್ಲಾ ಮಾಡಬೇಕು ಎನ್ನುವುದನ್ನು ವಿವರಿಸಿದ್ದಾರೆ ಕೇಳಿ.
ಸೆಂಧ್ವಾ, ಏ.1: ಮಧ್ಯಪ್ರದೇಶದ ಸೆಂಧ್ವಾ ಜಿಲ್ಲೆಯ ಜಾತ್ರೆಯೊಂದರಲ್ಲಿ ಕೆಲವು ಕಿಡಿಗೇಡಿಗಳು ಯುವತಿಯರಿಗೆ ಬಹಿರಂಗವಾಗಿ ಕಿರುಕುಳ ನೀಡುತ್ತಿರುವ ಭಯಾನಕ ಘಟನೆ ನಡೆದಿದೆ. ಯಾವುದೇ ಭಯವಿಲ್ಲದೆ ಸಾರ್ವಜನಿಕವಾಗಿ ಯುವತಿಯರನ್ನು ಹಿಂಬಾಲಿಸುವುದು, ಅವರನ್ನು ಅಪ್ಪಿಕೊಳ್ಳಲು ಪ್ರಯತ್ನಿಸುವುದು ಮತ್ತು ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಘಟನೆಯ ವೀಡಿಯೋ ಎಕ್ಸ್ (X) ನಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಮಧ್ಯಪ್ರದೇಶ ಪೊಲೀಸರನ್ನು (@MPPoliceDeptt) ಟ್ಯಾಗ್ ಮಾಡಿ ಈ “ಛಪ್ರಿ” (Chapris) ಕಿಡಿಗೇಡಿಗಳಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. “ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ, ಇಂತಹ ಕಾಮುಕರಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ವರದಿಗಳ ಪ್ರಕಾರ, ಸ್ಥಳೀಯ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ವೀಡಿಯೋ ಆಧರಿಸಿ ಕಿಡಿಗೇಡಿಗಳನ್ನು ಗುರುತಿಸುವ ಪ್ರಕ್ರಿಯೆ ನಡೆಸುತ್ತಿದ್ದಾರೆ. ಮಹಿಳಾ ಸುರಕ್ಷತೆಯ ದೃಷ್ಟಿಯಿಂದ ಜಾತ್ರಾ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.
ಹುಬ್ಬಳ್ಳಿ, ಏಪ್ರಿಲ್ 01: ಇರಾನ್ ಮೇಲೆ ಅಮೆರಿಕಾ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ದದಿಂದಾಗಿ ಈಗಾಗಲೇ ಕಮರ್ಷಿಯಲ್ ಸಿಲಿಂಡರ್ ಅಭಾವ ಉಂಟಾಗಿದೆ. ಆಮದು, ರಫ್ತು ಮೇಲೆ ಬೀರಿದ ಪರಿಣಾಮದಿಂದ ಅನೇಕ ವಸ್ತುಗಳ ಬೆಲೆ ಹೆಚ್ಚಳವಾಗಿವೆ. ಇದೇ ರೀತಿ ಯುದ್ಧ ಮುಂದವರಿದರೆ ವೈದ್ಯಕೀಯ (Medical)ವಸ್ತುಗಳಿಗೆ ಕೂಡ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು ಬಳಕೆಯಾಗುವ ಇಂಜೆಕ್ಷನ್ ಸಿರಿಂಜ್, ಐವಿ ಕೆನಾಲ್ ಸೇರಿದಂತೆ ಇನ್ನಿತರ ವಸ್ತುಗಳ ಉತ್ಫಾದನೆಗೆ ಕಚ್ಚಾವಸ್ತುವಿನ ಕೊರತೆ ಆರಂಭವಾಗಿದೆ. ಬಹುತೇಕ ಘಟಕಗಳು ಕಚ್ಚಾವಸ್ತುಗಳಿಲ್ಲದೇ ಬಂದ್ ಆಗುವ ಸ್ಥಿತಿಗೆ ತಲುಪಿವೆ.
ಯುದ್ದದಿಂದ ಜಗತ್ತಿನ ಅನೇಕ ದೇಶಗಳು ಹತ್ತಾರು ರೀತಿಯ ತೊಂದರೆ ಅನುಭವಿಸುತ್ತಿವೆ. ಈಗಾಗಲೇ ದೇಶದಲ್ಲಿ ಕಮರ್ಷಿಯಲ್ ಸಿಲಿಂಡರ್ ಅಭಾವ, ಆಟೋ ಗ್ಯಾಸ್ ಸಿಗದೇ ಆಟೋ ಚಾಲಕರ ಪರದಾಟ, ಅನೇಕ ವಸ್ತುಗಳ ಬೆಲೆ ಹೆಚ್ಚಳವಾಗಿದ್ದರೆ, ಅನೇಕ ವಸ್ತುಗಳ ಬೆಲೆ ಕಡಿಮೆಯಾಗಿದ್ದರಿಂದ ರೈತರು ಪರದಾಡುತ್ತಿದ್ದಾರೆ. ಆದರೆ ಯುದ್ದ ಹೀಗೆ ಮುಂದವರಿದರೆ ಮತ್ತೊಂದು ದೊಡ್ಡ ಗಂಡಾಂತರ ಉಂಟಾಗುವ ಆತಂಕ ಇದೀಗ ಎದುರಾಗಿದೆ.
ಯುದ್ದ ಮುಂದುವರಿದರೆ ವೈದ್ಯಕೀಯ ಕ್ಷೇತ್ರದ ಮೇಲೆ ದೊಡ್ಡ ಪರಿಣಾಮವನ್ನುಂಟು ಮಾಡಲಿದ್ದು, ರೋಗಿಗಳು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಾಗಿ ಬಳಕೆಯಾಗುವುದು ಇಂಜೆಕ್ಷನ್ ಸಿರಿಂಜ್ಗಳು, ಡ್ರಿಪ್ಗೆ ಹಾಕುವ ಐವಿ ಕ್ಯಾನಲ್ಗಳು ಸಿಗದಂತಹ ಸ್ಥಿತಿ ನಿರ್ಮಾಣವಾಗಲಿದೆ ಎನ್ನುತ್ತಿದ್ದಾರೆ ಫಾರ್ಮಾ ವಸ್ತುಗಳ ಉತ್ಪಾದನಾ ಕಂಪನಿಗಳು.
ಫಾರ್ಮಾ ಕಂಪನಿಗಳ ಆತಂಕ
ಸಿರಿಂಜ್, ಐವಿ ಕ್ಯಾನಲ್ಗಳ ಉತ್ಪಾದನೆಗೆ ಪೆಟ್ರೋಲಿಯಂ ಉಪ ಉತ್ಪನ್ನವಾಗಿರುವ ಪಾಲಿ ಪ್ರಿಪಲಿನ್ ಕಚ್ಚಾವಸ್ತುವಿನ ಅವಶ್ಯಕತೆ ಇದೆ. ಆದರೆ ಯುದ್ದದಿಂದಾಗಿ ಈ ಕಚ್ಚಾವಸ್ತುವಿನ ಕೊರತೆ ದೊಡ್ಡ ಮಟ್ಟದಲ್ಲಿ ಆರಂಭವಾಗಿದೆ. ಹುಬಳ್ಳಿ ಹೊರವಲಯದ ರಕ್ಷಂ ಮೆಡಿಕಲ್ ಡಿವೈಸ್ ಕಂಪನಿಗೆ ಪ್ರತಿ ತಿಂಗಳು 150 ಟನ್ ಪಾಲಿ ಪ್ರಿಪಲಿನ್ ಕಚ್ಚಾವಸ್ತುಬೇಕು. ಆದರೆ 20ಟನ್ ಮಾತ್ರ ಪೂರೈಕೆ ಆಗುತ್ತಿದೆ. ಹೀಗಾಗಿ ಪ್ರತಿ ದಿನ 18 ಲಕ್ಷ ಸಿರಿಂಜ್ ಉತ್ಪಾದನೆ ಮಾಡುತ್ತಿದ್ದ ಘಟಕದಲ್ಲಿ ಇದೀಗ ನಾಲ್ಕು ಲಕ್ಷ ಸಿರಿಂಜ್ಗಳ ಉತ್ಪಾದನೆ ಮಾತ್ರ ಆಗುತ್ತಿದೆ. ಯುದ್ಧ ಹೀಗೆ ಮುಂದುವರಿದರೆ ಸಿಗುವ ಕಚ್ಚಾವಸ್ತುಗಳು ಸಿಗದಂತಾಗಬಹುದು ಎನ್ನುವ ಆತಂಕ ಇದೀಗ ಫಾರ್ಮಾ ಕಂಪನಿಗಳಿಗೆ ಎದುರಾಗಿದೆ.
ಸಿರಿಂಜ್ ಬೆಲೆ ಏರಿಕೆ?
ಹುಬ್ಬಳ್ಳಿ ರಕ್ಷಂ ಮೆಡಿಕಲ್ ಡಿವೈಸ್ ಕಂಪನಿಯಲ್ಲಿ ಮೂರು ಶಿಫ್ಟ್ನಲ್ಲಿ 300ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ ಇದೀಗ ಕಚ್ಚಾವಸ್ತುಗಳ ಪೂರೈಕೆ ಕಡಿಮೆ ಆಗಿದ್ದರಿಂದ ಎರಡು ಶಿಫ್ಟ್ ಕ್ಯಾನ್ಸಲ್ ಮಾಡಿದ್ದು, ಕೇವಲ ಒಂದೇ ಒಂದು ಶಿಫ್ಟ್ನಲ್ಲಿ ಮಾತ್ರ ಕೆಲಸ ನಡೆಯುತ್ತಿದೆ. ಇದೀಗ ಬರುತ್ತಿರುವ ಕಚ್ಚಾವಸ್ತುವು ಬರದೇ ಇದರೆ ಸಿರಿಂಜ್ ತಯಾರಾಗುವ ಘಟಕವನ್ನು ಬಂದ್ ಮಾಡಬೇಕಾಗುತ್ತದಯಂತೆ. ಇದರಿಂದ ಮುಂದಿನ ದಿನಗಳಲ್ಲಿ ಸಿರಿಂಜ್ ಬೆಲೆ ಏರಿಕೆ ಜೊತೆಗೆ ಅವುಗಳು ಸಿಗದಂತಾಗಬಹುದು. ರೋಗಿಗಳಿಗೆ ಇದರಿಂದ ದೊಡ್ಡ ಮಟ್ಟದ ಹೊಡೆತ ಬೀಳಲಿದೆಯಂತೆ.
ಸದ್ಯ ಎಲ್ಲರು ಕೇವಲ ಪೆಟ್ರೋಲ್, ಡಿಸೇಲ್, ಕಮರ್ಷಿಯಲ್ ಸಿಲಿಂಡರ್ ಕೊರತೆ ಬಗ್ಗೆ ಮಾತ್ರ ಚಿಂತಿಸುತ್ತಿದ್ದಾರೆ. ಆದರೆ ವೈದ್ಯಕೀಯ ಕ್ಷೇತ್ರದ ಮೇಲೆ ಉಂಟಾಗಲಿರುವ ಪರಿಣಾಮದ ಬಗ್ಗೆ ಯಾರು ಗಂಭೀರವಾಗಿಲ್ಲ. ವೈದ್ಯಕೀಯ ವಸ್ತುಗಳು ಸಿಗದಿದ್ದರೆ ಅನೇಕರ ಜೀವಕ್ಕೆ ಅಪಾಯವಾಗುವ ಆತಂಕ ಎದುರಾಗಿದೆ.
ಸದ್ಯ ಕೇಂದ್ರ ಸರ್ಕಾರ ವೈದ್ಯಕೀಯ ಕ್ಷೇತ್ರಕ್ಕೆ ಬೇಕಾದ ವಸ್ತುಗಳು ತಯಾರಾಗಲು ಬೇಕಾದ ಕಚ್ಚಾವಸ್ತುಗಳನ್ನು ಪೂರೈಕೆ ಮಾಡೋದರ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ಇಲ್ಲದೇ ಇದರೆ ಭವಿಷ್ಯದಲ್ಲಿ ಆರೋಗ್ಯ ಕ್ಷೇತ್ರದ ಮೇಲೆ ಯುದ್ದದ ದುಷ್ಪರಿಣಾಮಗಳು ದೊಡ್ಡಮಟ್ಟದಲ್ಲಿ ಆಗುವ ಸಾಧ್ಯತೆಯಿದೆ.
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಬಾಲಿವುಡ್ ನಟ ಜಾನ್ ಅಬ್ರಹಾಂ ಅವರ ಹೆಸರಿನಲ್ಲಿ ಒಂದು ಪೋಸ್ಟ್ ಭಾರಿ ವೈರಲ್ ಆಗುತ್ತಿದೆ. ಅದರಲ್ಲಿ ಜಾನ್ ಅಬ್ರಹಾಂ (John Abraham) ಅವರು ಇತ್ತೀಚಿನ ಸೂಪರ್ ಹಿಟ್ ಸಿನಿಮಾ ‘ಧುರಂಧರ್ 2’ (Dhurandhar 2) ಬಗ್ಗೆ ಟೀಕೆ ಮಾಡಿದ್ದಾರೆ ಎಂದು ಬಿಂಬಿಸಲಾಗಿದೆ. ಆದರೆ, ಈ ಸುದ್ದಿಯನ್ನು ಪರಿಶೀಲಿಸಿದಾಗ ಇದು ಕೇವಲ ಒಂದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ.
ವೈರಲ್ ಆಗಿರುವ ಮೀಮ್ ಒಂದರಲ್ಲಿ, ‘ಧುರಂಧರ್ ಮತ್ತು ದಿ ಕಾಶ್ಮೀರ್ ಫೈಲ್ಸ್ನಂತಹ ಚಿತ್ರಗಳು ಜನರನ್ನು ತಪ್ಪು ದಾರಿಗೆ ಎಳೆಯುತ್ತವೆ. ಇಂತಹ ಸಿನಿಮಾಗಳನ್ನು ಜನರು ಅದ್ದೂರಿಯಾಗಿ ಸ್ವಾಗತಿಸುತ್ತಿರುವುದು ಭಯ ಹುಟ್ಟಿಸುತ್ತದೆ. ನಾನು ಎಂದಿಗೂ ಇಂತಹ ಸಿನಿಮಾಗಳನ್ನು ನಿರ್ಮಾಣ ಮಾಡುವುದಿಲ್ಲ’ ಎಂದು ಜಾನ್ ಅಬ್ರಹಾಂ ಹೇಳಿದ್ದಾರೆಂದು ಉಲ್ಲೇಖಿಸಲಾಗಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಕೆಲವರು ಜಾನ್ ಪರವಾಗಿ ಮತ್ತು ಇನ್ನು ಕೆಲವರು ಅವರ ವಿರುದ್ಧವಾಗಿ ಕಮೆಂಟ್ ಮಾಡುತ್ತಿದ್ದಾರೆ.
ಜಾನ್ ಅಬ್ರಹಾಂ ಅವರು ‘ಧುರಂಧರ್’ ಚಿತ್ರದ ಬಗ್ಗೆ ಸಾರ್ವಜನಿಕವಾಗಿಯಾಗಲಿ ಅಥವಾ ಮಾಧ್ಯಮಗಳ ಮುಂದಾಗಲಿ ಯಾವುದೇ ಹೇಳಿಕೆ ನೀಡಿಲ್ಲ. ಅಸಲಿಗೆ, ಅವರು 2025ರ ಆಗಸ್ಟ್ ತಿಂಗಳಲ್ಲಿ ‘ಇಂಡಿಯಾ ಟುಡೇ’ಗೆ ನೀಡಿದ ಸಂದರ್ಶನವೊಂದರಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಮತ್ತು ‘ಛಾವಾ’ ಚಿತ್ರಗಳ ಬಗ್ಗೆ ಮಾತನಾಡುತ್ತಾ, ಇಂತಹ ಅತಿ-ರಾಷ್ಟ್ರೀಯತೆಯ ಚಿತ್ರಗಳನ್ನು ತಾವು ನಿರ್ಮಿಸುವುದಿಲ್ಲ ಎಂದು ಹೇಳಿದ್ದರು.
ಜಾನ್ ಅಬ್ರಹಾಂ ಈ ಹೇಳಿಕೆ ನೀಡಿದಾಗ ‘ಧುರಂಧರ್’ ಸಿನಿಮಾ ಇನ್ನು ಬಿಡುಗಡೆಯೇ ಆಗಿರಲಿಲ್ಲ. ಸಂದರ್ಶನ ನೀಡಿದ ನಾಲ್ಕು ತಿಂಗಳ ನಂತರ ಈ ಚಿತ್ರ ತೆರೆಕಂಡಿತು. ಹಳೆಯ ಸಂದರ್ಶನದ ಹೇಳಿಕೆಗೆ ಈಗಿನ ‘ಧುರಂಧರ್’ ಚಿತ್ರದ ಹೆಸರನ್ನು ಸೇರಿಸಿ ಕಿಡಿಗೇಡಿಗಳು ಮೀಮ್ ಸೃಷ್ಟಿಸಿದ್ದಾರೆ. ಜಾನ್ ಅಬ್ರಹಾಂ ನಿಜವಾಗಿಯೂ ಇಂತಹ ಹೇಳಿಕೆ ನೀಡಿದ್ದರೆ ದೊಡ್ಡ ಸುದ್ದಿಯಾಗುತ್ತಿತ್ತು. ಆದರೆ ಯಾವುದೇ ಅಧಿಕೃತ ಸುದ್ದಿ ಸಂಸ್ಥೆಗಳು ಇಂತಹ ವರದಿ ಪ್ರಕಟಿಸಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಇಂತಹ ಆಧಾರರಹಿತ ಪೋಸ್ಟ್ಗಳನ್ನು ನಂಬುವ ಮೊದಲು ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಒಟ್ಟಾರೆ ಹೇಳುವುದಾದರೆ, ‘ಧುರಂಧರ್’ ಚಿತ್ರದ ಬಗ್ಗೆ ಜಾನ್ ಅಬ್ರಹಾಂ ಯಾವುದೇ ನಕಾರಾತ್ಮಕ ಹೇಳಿಕೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಅವರು ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬ ಕುತೂಹಲ ಇದೆ.
ಬೆಂಗಳೂರು, ಏಪ್ರಿಲ್ 01: ರೌಡಿಶೀಟರ್ನಿಂದ ಪಬ್ಲಿಕ್ ಪ್ರೆಸ್ ಆರ್ಮಿ ಹೆಸರಿನ ಟ್ರಸ್ಟ್ನಡಿ ನೈತಿಕ ಪೊಲೀಸ್ಗಿರಿ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣ ರದ್ದುಪಡಿಸಲು ನಕಾರ ಎತ್ತಿರುವ ಕರ್ನಾಟಕ ಹೈಕೋರ್ಟ್ (High Court), ತಡೆ ನೀಡಲು ಸಾಧ್ಯವಿಲ್ಲವೆಂದು ಅರ್ಜಿಯನ್ನು ವಜಾಗೊಳಿಸಿ ಬುಧವಾರ ಆದೇಶ ಹೊರಡಿಸಿದೆ.
ತುಮಕೂರಿನ ತಿಲಕ್ಪಾರ್ಕ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿತ್ತು. ಪ್ರಕರಣ ರದ್ದುಪಡಿಸುವಂತೆ ಕೋರಿ ಮೊಹಮ್ಮದ್ ಖಲಂದರ್, ಗೌಸ್ ಪಾಷಾ ಮತ್ತು ಆಶಿಯಾ ಸಲ್ಲಿಸಿದ್ದ ಅರ್ಜಿಯನ್ನು ಇಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ಮಾಡಿ ರೌಡಿಶೀಟರ್ ಅರ್ಜಿ ವಜಾಗೊಳಿಸಿದೆ.
ಪಬ್ಲಿಕ್ ಪ್ರೆಸ್ ಆರ್ಮಿ ಹೆಸರಿಡಲು ಅಧಿಕಾರ ಕೊಟ್ಟವರು ಯಾರು? ಈ ಟ್ರಸ್ಟ್ಗೆ ನಿಮಗೆ ಅಧಿಕಾರ ನೀಡಿದವರು ಯಾರು? ಈ ಟ್ರಸ್ಟ್ಗೆ ತಡೆ ನೀಡುವ ಪ್ರಶ್ನೆಯೇ ಇಲ್ಲ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ. ಆ ಮೂಲಕ ಪ್ರಕರಣಕ್ಕೆ ತಡೆ ನೀಡಲು ಸಾಧ್ಯವಿಲ್ಲವೆಂದು ಅರ್ಜಿಯನ್ನು ವಜಾಗೊಳಿಸಲಾಗಿದೆ. ಅರ್ಜಿದಾರರ ಪರ ವಕೀಲ ಜಿ.ಎ ಪ್ರೇಮ್ ಕುಮಾರ್ ಅವರು ವಾದ ಮಂಡಿಸಿದರು.
ಪ್ರಕರಣದ ಹಿನ್ನೆಲೆ
ರೌಡಿಶೀಟರ್ಗಳು ಪೊಲೀಸ್ ಪಬ್ಲಿಕ್ ಪ್ರೆಸ್ ಆರ್ಮಿ ಎಂಬ ಟ್ರಸ್ಟ್ ಆರಂಭಿಸಿದ್ದರು. ಆ ಮೂಲಕ ಅಮಾಯಕ ಯುವಕರಿಗೆ ಪ್ರಚೋದನೆ ನೀಡುವುದು, ಜೊತೆಗೆ ಸದಾಶಿವನಗರದ ಕನ್ನಿಕಾ ಶಾಲೆಯ ಬಳಿ ಎಲ್ಲರನ್ನು ಸೇರಿಸುತ್ತಿದ್ದರು. ನಾವು ಪೊಲೀಸರು ನಿಮ್ಮ ಯಾವುದೇ ದೂರುಗಳನ್ನು ನಮ್ಮ ಸಂಸ್ಥೆಯ ಸದಸ್ಯರಿಗೆ ತಿಳಿಸಿದರೆ ನಾವು ಪರಿಹರಿಸುತ್ತೇವೆ ಎಂದು ಸುಳ್ಳು ಹೇಳುತ್ತಿದ್ದರು.
ಇನ್ನು ಸಂಸ್ಥೆಯ ಸದಸ್ಯರು ತಾವು ಸಾರ್ವಜನಿಕ ನೌಕರರಂತೆ ವರ್ತಿಸುತ್ತಿದ್ದರು. ಪೊಲೀಸ್ ಇಲಾಖೆಯ ಹೆಸರನ್ನು ದುರುಪಯೋಗಪಡಿಸಿಕೊಂಡು, ಇಲಾಖೆಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು. ಅಲ್ಲದೆ, ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ನೈತಿಕ ಪೊಲೀಸ್ಗಿರಿ ನಡೆಸುತ್ತಿದ್ದರು ಎಂಬ ಆರೋಪದ ಮೇರೆಗೆ, ತುಮಕೂರಿನ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತವಾಗಿ ಬಿಎನ್ಎಸ್ ಸೆಕ್ಷನ್ 204, 353(1)(b), 190 ಅಡಿ ಪ್ರಕರಣ ದಾಖಲಿಸಲಾಗಿತ್ತು.
ತಿರುವನಂತಪುರಂ, ಏಪ್ರಿಲ್ 1: ಕೇರಳದಲ್ಲಿ ಕಳ್ಳತನದ ಆರೋಪದ ಮೇಲೆ ಅಸ್ಸಾಂ ಮೂಲದ ವ್ಯಕ್ತಿಯೊಬ್ಬನನ್ನು ಇಂದು ಬೆಳಿಗ್ಗೆ ಪೆರುಂಬವೂರ್ ಬಳಿ ಕೇರಳದ (Kerala) 6 ಸಹೋದ್ಯೋಗಿಗಳು ಥಳಿಸಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು (ಬುಧವಾರ) ಬೆಳಿಗ್ಗೆ ಪೆರುಂಬವೂರ್ ಬಳಿ ಅದೇ ರಾಜ್ಯದವರಾದ 6 ಜನ ಸೇರಿ ಈ ಕೊಲೆ ಮಾಡಿದ್ದಾರೆ. ಅವರು ಆತ ತಮ್ಮ ಫೋನ್ ಕದಿಯಲು ಪ್ರಯತ್ನಿಸುತ್ತಿದ್ದಾನೆ ಎಂದು ಅನುಮಾನಗೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
6 ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೆರುಂಬವೂರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಅವರನ್ನು ಔಪಚಾರಿಕವಾಗಿ ಬಂಧಿಸಲಾಗಿಲ್ಲ. ಅವರ ವಿರುದ್ಧ ಇನ್ನೂ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
“ನಾವು ಇದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ” ಎಂದು ಪೊಲೀಸರು ಹೇಳಿದ್ದಾರೆ. ಮೃತ ವ್ಯಕ್ತಿಗೆ 25 ವರ್ಷ ವಯಸ್ಸಾಗಿತ್ತು. ಆತ ಮತ್ತು ಇತರ 6 ಆರೋಪಿಗಳು ಪೆರುಂಬವೂರ್ನ ಪ್ಲೈವುಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
“ಆ ವ್ಯಕ್ತಿಯನ್ನು ಥಳಿಸಿದ ನಂತರ ಆರೋಪಿಗಳು ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಚಿಕಿತ್ಸೆ ಆರಂಭಿಸುವ ಮೊದಲೇ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ಬಗ್ಗೆ ತಕ್ಷಣ ಆಸ್ಪತ್ರೆಯ ಸಿಬ್ಬಂದು ನಮಗೆ ಮಾಹಿತಿ ನೀಡಿದರು” ಎಂದು ಪೊಲೀಸರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘ಪೆದ್ದಿ’ (Peddi) ಚಿತ್ರದ ಬಗ್ಗೆ ಇದೀಗ ಹೊಸದೊಂದು ಅಪ್ಡೇಟ್ ಹೊರಬಿದ್ದಿದೆ. ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟು ಮಾಡಿದೆ. ಮುಂದಿನ ವಾರದಿಂದ ಈ ಚಿತ್ರದ ಪ್ರಮುಖ ಹಾಡೊಂದರ ಚಿತ್ರೀಕರಣ ಆರಂಭವಾಗಲಿದ್ದು, ಚಿತ್ರತಂಡ ಅದ್ದೂರಿ ಸಿದ್ಧತೆ ಮಾಡಿಕೊಂಡಿದೆ. ಈ ಹಾಡಿನಲ್ಲಿ ರಾಮ್ ಚರಣ್ (Ram Charan) ಜೊತೆ ಜಾನ್ವಿ ಕಪೂರ್ ಮತ್ತು ಮೃಣಾಲ್ ಠಾಕೂರ್ ಕೂಡ ಹೆಜ್ಜೆ ಹಾಕಲಿದ್ದಾರೆ.
ಹಳ್ಳಿ ಸೊಗಡಿನ ಕಥಾಹಂದರ ಹೊಂದಿರುವ ‘ಪೆದ್ದಿ’ ಸಿನಿಮಾಗೆ ‘ಉಪ್ಪೆನಾ’ ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ವಿಶೇಷವೆಂದರೆ, ಇದರಲ್ಲಿ ಬಾಲಿವುಡ್ ಸುಂದರಿಯರಾದ ಜಾನ್ವಿ ಕಪೂರ್ ಮತ್ತು ಮೃಣಾಲ್ ಠಾಕೂರ್ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ವಾರ ಚಿತ್ರೀಕರಣಗೊಳ್ಳಲಿರುವ ಹಾಡಿನಲ್ಲಿ ಈ ಇಬ್ಬರು ನಟಿಯರು ರಾಮ್ ಚರಣ್ ಜೊತೆ ಹೆಜ್ಜೆ ಹಾಕಲಿದ್ದು, ಇದು ಪ್ರೇಕ್ಷಕರ ಕಣ್ಣಿಗೆ ಹಬ್ಬವಾಗುವುದರಲ್ಲಿ ಅನುಮಾನವಿಲ್ಲ.
ತೆಲುಗು ಚಿತ್ರರಂಗದ ಖ್ಯಾತ ನೃತ್ಯ ಸಂಯೋಜಕ ಶೇಖರ್ ಮಾಸ್ಟರ್ ಈ ಹಾಡಿಗೆ ಕೊರಿಯೋಗ್ರಫಿ ಮಾಡುತ್ತಿದ್ದಾರೆ. ಶೇಖರ್ ಮಾಸ್ಟರ್ ಅವರ ಎನರ್ಜಿಟಿಕ್ ಸ್ಟೆಪ್ಗಳಿಗೆ ರಾಮ್ ಚರಣ್ ಅವರ ಡ್ಯಾನ್ಸ್ ಸೇರಿದರೆ ಸಿನಿಮಾ ಮಂದಿರದಲ್ಲಿ ಶಿಳ್ಳೆ-ಚಪ್ಪಾಳೆ ಗ್ಯಾರಂಟಿ. ಈಗಾಗಲೇ ಬಿಡುಗಡೆ ಆಗಿರುವ ‘ಚಿಕಿರಿ ಚಿಕಿರಿ’ ಹಾಡು ಅಭಿಮಾನಿಗಳಿಗೆ ಇಷ್ಟ ಆಗಿದೆ.
ಈ ಮೊದಲು ‘ಪೆದ್ದಿ’ ಚಿತ್ರವನ್ನು ಏಪ್ರಿಲ್ 30ರಂದು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿತ್ತು. ಆದರೆ ಸದ್ಯದ ಮಾಹಿತಿ ಪ್ರಕಾರ, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇರುವುದರಿಂದ ಬಿಡುಗಡೆ ದಿನಾಂಕ ಸ್ವಲ್ಪ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ. ಸ್ಟಾರ್ ಕಲಾವಿದರು ಮತ್ತು ಪ್ರತಿಭಾವಂತ ತಾಂತ್ರಿಕ ವರ್ಗವನ್ನು ಹೊಂದಿರುವ ‘ಪೆದ್ದಿ’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.
‘ಪೆದ್ದಿ’ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಿಕೆ ಆಗಿದೆಯೋ ಇಲ್ಲವೋ ಎಂಬ ಬಗ್ಗೆ ಚಿತ್ರತಂಡದ ಕಡೆಯಿಂದ ಇನ್ನೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ ಕೇಳಿಬರುತ್ತಿರುವ ವದಂತಿಗಳಿಗೆ ಚಿತ್ರತಂಡ ಸ್ಪಷ್ಟನೆ ಕೂಡ ನೀಡಿಲ್ಲ. ಹಾಗಾಗಿ ರಿಲೀಸ್ ದಿನಾಂಕದ ಬಗ್ಗೆ ಅಭಿಮಾನಿಗಳಲ್ಲಿ ಗೊಂದಲ ಮೂಡಿದೆ.
ಬೆಂಗಳೂರು, ಏಪ್ರಿಲ್ 1: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲು ಸಕಲ ಸಿದ್ಧತೆ ನಡೆಸಿದೆ. ಮಾರ್ಚ್ 31ರಂದು ಪ್ರಥಮ ಪಿಯುಸಿ ಫಲಿತಾಂಶ ಯಶಸ್ವಿಯಾಗಿ ಪ್ರಕಟಗೊಂಡ ಬೆನ್ನಲ್ಲೇ, ಈಗ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಕೌತುಕ ಹೆಚ್ಚಾಗಿದೆ. ಅಧಿಕೃತ ಮೂಲಗಳ ಪ್ರಕಾರ, ಏಪ್ರಿಲ್ ಎರಡನೇ ವಾರದಲ್ಲಿ (ಏಪ್ರಿಲ್ 7 ಅಥವಾ 8) ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ. ಮಂಡಳಿಯು ಮೊದಲು ಸುದ್ದಿಗೋಷ್ಠಿಯ ಮೂಲಕ ಫಲಿತಾಂಶದ ವಿವರಗಳನ್ನು ಹಂಚಿಕೊಂಡು, ನಂತರ ಅಧಿಕೃತ ವೆಬ್ಸೈಟ್ಗಳಾದ kseab.karnataka.gov.in ಅಥವಾ karresults.nic.in ನಲ್ಲಿ ಫಲಿತಾಂಶ ಪ್ರಕಟಿಸಲಿದೆ.
ಆನ್ಲೈನ್ನಲ್ಲಿ ಸೆಕೆಂಡ್ ಪಿಯುಸಿ ಫಲಿತಾಂಶ ನೋಡುವುದು ಹೇಗೆ?
ಅಧಿಕೃತ ವೆಬ್ಸೈಟ್ karresults.nic.in ಗೆ ಭೇಟಿ ನೀಡಿ.
ಮುಖಪುಟದಲ್ಲಿರುವ ‘Karnataka 2nd PUC Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
‘Submit’ ಬಟನ್ ಒತ್ತಿದ ತಕ್ಷಣ ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಕಾಣಿಸುತ್ತದೆ.
ಭವಿಷ್ಯದ ಉಲ್ಲೇಖಕ್ಕಾಗಿ ಇದರ ಪ್ರಿಂಟ್ಔಟ್ ತೆಗೆದುಕೊಳ್ಳಿ.
ಫಲಿತಾಂಶದ ನಂತರ ಅಂಕಗಳ ಬಗ್ಗೆ ತೃಪ್ತಿ ಇಲ್ಲದ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನಕ್ಕೆ (Re-evaluation) ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಏಪ್ರಿಲ್ 25 ರಿಂದ ಮೇ ಮೊದಲ ವಾರದವರೆಗೆ ಪೂರಕ ಪರೀಕ್ಷೆಗಳನ್ನು ನಡೆಸಲು ಮಂಡಳಿ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
2026ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 28 ರಿಂದ ಮಾರ್ಚ್ 17ರವರೆಗೆ ರಾಜ್ಯದ 1217 ಕೇಂದ್ರಗಳಲ್ಲಿ ನಡೆದಿದ್ದವು. ಈ ಬಾರಿ 7 ಲಕ್ಷಕ್ಕೂ ಹೆಚ್ಚು ಮಂದಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು.