All posts by nagaraj11081993

ಚಿಕ್ಕಬಳ್ಳಾಪುರ: ಗಂಡನ ಕೈ-ಕಾಲು ಮುರಿದು ವಿಕೃತವಾಗಿ ಕೊಲೆ; ನೌಟಂಕಿ ಪತ್ನಿ ಅರೆಸ್ಟ್​

ಚಿಕ್ಕಬಳ್ಳಾಪುರ: ಗಂಡನ ಕೈ-ಕಾಲು ಮುರಿದು ವಿಕೃತವಾಗಿ ಕೊಲೆ; ನೌಟಂಕಿ ಪತ್ನಿ ಅರೆಸ್ಟ್​

ಚಿಕ್ಕಬಳ್ಳಾಪುರ, ಮಾರ್ಚ್​ 28: ಮಂಚದ ಮೇಲಿದ್ದ ಗಂಡ (Husband) ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು  ಪೊಲೀಸರ ಮುಂದೆ ಕಥೆ ಕಟ್ಟಿ, ಏನು ಗೊತ್ತಿಲ್ಲದಂತೆ ಮಳ್ಳಿಯಂತೆ ನಟಿಸಿದ್ದ ಕಿಲಾಡಿ ಮಹಿಳೆಯೇ ತನ್ನ ಗಂಡನನ್ನು ವಿಕೃತವಾಗಿ ಕೊಲೆ (kill) ಮಾಡಿರುವುದು ಇದೀಗ ಬಯಲಾಗಿದೆ. ಸದ್ಯ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ವಿವಿ ಪುರಂ ಬಡಾವಣೆಯಲ್ಲಿ ಘಟನೆ ನಡೆದಿದೆ.

ನಡೆದಿದ್ದೇನು? 

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ವಿವಿ ಪುರಂ ಬಡಾವಣೆಯ ಬಾಡಿಗೆ ಮನೆಯಲ್ಲಿದ್ದ ಶಿವಕುಮಾರ್ ಅಲಿಯಾಸ್ ಸಾದೀಕ್ ಪಾಷ, ಮನೆಯ ಮಂಚದ ಮೇಲೆ ಶವವಾಗಿದ್ದರು. ಅವರ ಪತ್ನಿ ರೇಷ್ಮಾ ಪೊಲೀಸರು ಹಾಗೂ ಗಂಡನ ಸಂಬಂಧಿಕರಿಗೆ ಕರೆ ಮಾಡಿ, ಅಯ್ಯಯ್ಯೋ ನನ್ನ ಗಂಡ, ಮುದ್ದು ಗುಂಡ ಮನೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಗೋಳೋ ಅಂತ ಅತ್ತಿದ್ದಾರೆ.

ಇದನ್ನೂ ಓದಿ: ಸಕಲೇಶಪುರದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ: ಕೈಮುಗಿದರೂ ಬಿಡದ ಕಿಡಿಗೇಡಿಗಳು

ಇತ್ತ ಸ್ಥಳಕ್ಕೆ ಬಂದ ಗೌರಿಬಿದನೂರು ನಗರ ಠಾಣೆ ಪೊಲೀಸರು, ಪರಿಶೀಲನೆ ಮಾಡಿದ್ದಾರೆ. ರೇಷ್ಮಾ ಹೇಳಿರುವುದು ಒಂದಾಗಿದ್ದರೆ, ಅಲ್ಲಿ ನಡೆದಿದ್ದೇ ಇನ್ನೊಂದಾಗಿತ್ತು. ಹೀಗಾಗಿ ಅನುಮಾನ ವ್ಯಕ ಹಿನ್ನೆಲೆ  ಪೊಲೀಸರು ರೇಷ್ಮಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಭಯಾನಕ ಸತ್ಯ ಬಯಲಾಗಿದೆ.

ಪೊಲೀಸರೇ ಶಾಕ್​​

ಇನ್ನು ಪೊಲೀಸರಿಗೆ ಮನೆಯಲ್ಲಿ ಕಂಡದ್ದು ಭಯಾನಕ ದೃಶ್ಯ. ಶಿವಕುಮಾರ್ ಅಲಿಯಾಸ್ ಸಾದೀಕ್ ಪಾಷನ ಕೈ-ಕಾಲು ತಿರುವಲಾಗಿತ್ತು. ಸೊಂಟ ಮುರಿಯಲಾಗಿತ್ತು. ಮೈಮೇಲೆ ರಕ್ತದ ಕಲೆಗಳಿತ್ತು. ಮನೆಯನ್ನು ಆ್ಯಸಿಡ್ ಹಾಕಿ ತೊಳೆಯಲಾಗಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು, ಮೃತನ ಪತ್ನಿ ರೇಷ್ಮಾಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾಗ ಸತ್ಯ ಬಯಲಾಗಿದ್ದು, ಸ್ವತಃ ಆತನ ಪತ್ನಿ ಹಾಗೂ ಆಕೆಯ ತಮ್ಮ ಶಾರುಕ್ ಸೇರಿದಂತೆ 5 ಜನ ಸೇರಿ ಕೊಲೆ ಮಾಡಿದ್ದು ಬಯಲಾಗಿದೆ. ಗಂಡ ತನಗೆ ಕಿರಕುಳ ಕೊಡುತ್ತಿದ್ದಾನೆಂದು ಆತನ ಹತ್ಯೆ ಮಾಡಗಿದೆ.

ಇದನ್ನೂ ಓದಿ: ತನ್ನ ಕಾಮದಾಟಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಪತ್ನಿ!

ಇನ್ನೂ ಗೌರಿಬಿದನೂರು ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ನಿ ರೇಷ್ಮಾಳನ್ನು ಬಂಧಿಸಲಾಗಿದೆ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ಕು ಜನರು ಎಸ್ಕೇಪ್ ಆಗಿದ್ದು, ಪೊಲೀಸರು ಎರಡು ತಂಡಗಳನ್ನ ರಚನೆ ಮಾಡಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಆತ್ಮಹತ್ಯೆ ಮಾಡಿಕೊಂಡ ಮಗನಿಗೆ 23 ವರ್ಷಗಳಿಂದ ಮದುವೆ ಮಾಡುತ್ತಿದ್ದಾರೆ ಅಪ್ಪ-ಅಮ್ಮ!

ಹೈದರಾಬಾದ್, ಮಾರ್ಚ್ 28: ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾಗಲಾರದೆ ರಾಮ್ ಕೋಟಿ ಎಂಬ ಯುವಕ 23 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹೀಗಾಗಿ, ಕಳೆದ 23 ವರ್ಷಗಳಿಂದ ತೆಲಂಗಾಣದಲ್ಲಿ (Telangana) ದಂಪತಿ ಸಾವನ್ನಪ್ಪಿದ ತಮ್ಮ ಮಗನ ಸಾವಿನ ದುಃಖವನ್ನು ಪ್ರಾರ್ಥನೆಗಳು, ಆಚರಣೆಗಳು ಮತ್ತು ಭಕ್ತಿಯಿಂದ ಆಚರಿಸುತ್ತಿದ್ದಾರೆ. ಅಲ್ಲದೆ, ಪ್ರತಿ ವರ್ಷ ಆತ ಮೃತಪಟ್ಟ ದಿನದಂದು ಆತನ ಫೋಟೋಗೆ ಆತ ಪ್ರೀತಿಸಿದ ಯುವತಿಯ ಫೋಟೋದ ಜೊತೆಗೆ ಮದುವೆ ಮಾಡುತ್ತಿದ್ದಾರೆ. ದುಃಖವಾಗಿ ಪ್ರಾರಂಭವಾಗಿದ್ದ ಈ ಸಾವು ಈಗ ಇಡೀ ಗ್ರಾಮವನ್ನು ಒಟ್ಟುಗೂಡಿಸುವ ಸಂಪ್ರದಾಯವಾಗಿ ಬೆಳೆದಿದೆ.

ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯಲ್ಲಿ ಲಾಲು ಮತ್ತು ಸುಕ್ಕಮ್ಮ 2003ರಲ್ಲಿ ಮೃತಪಟ್ಟ ತಮ್ಮ ಮಗ ರಾಮ್ ಕೋಟಿಗಾಗಿ ಪ್ರತಿ ವರ್ಷ ವಿವಾಹ ಸಮಾರಂಭವನ್ನು ನಡೆಸುತ್ತಿದ್ದಾರೆ. ರಾಮ್ ಪ್ರೀತಿಸಿದ ಹುಡುಗಿಯ ಕುಟುಂಬಸ್ಥರು ಅವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ, ಮನನೊಂದು ರಾಮ್ ಕೋಟಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನ ಕೆಲವೇ ದಿನಗಳಲ್ಲಿ ಅವರು ಪ್ರೀತಿಸಿದ ಯುವತಿ ಕೂಡ ಆತ್ಮಹತ್ಯೆ ಮಾಡಿಕೊಂಡಳು. ಇಬ್ಬರೂ ಪ್ರೇಮಿಗಳು ಇಹಲೋಕ ತ್ಯಜಿಸಿದರೂ ಅವರ ಕೊನೆಯಾಸೆಯನ್ನು ಈಡೇರಿಸಲು ರಾಮ್ ಅವರ ತಂದೆ-ತಾಯಿ ನಿರ್ಧರಿಸಿದರು.

ಇದನ್ನೂ ಓದಿ: ತೆಲಂಗಾಣದ ದೇವಸ್ಥಾನದ ಜಾತ್ರೆಯಲ್ಲಿ ಜಾತಿ ಸಂಘರ್ಷ; ಕೂದಲೆಳೆದು ಮಹಿಳೆಯರಿಗೆ ಥಳಿತ, ಮಗು ಸಾವು

ಹೀಗಾಗಿ, ಬದುಕಿದ್ದಾಗ ಅವರಿಬ್ಬರ ಮದುವೆ ಮಾಡಲಾಗದ ಕಾರಣದಿಂದ ಅವರ ಸಾವಿನ ದಿನದಂದು ರಾಮ್ ಅವರ ಮದುವೆ ಸಮಾರಂಭವನ್ನು ಏರ್ಪಡಿಸುತ್ತಿದ್ದಾರೆ. 23 ವರ್ಷಗಳಿಂದ ಅವರು ಈ ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಮೂಲಕ ತಮ್ಮ ಮಗನ ಸಾವಿನ ದಿನವನ್ನು ಅವರು ಸ್ಮರಣೀಯವಾಗಿಸುತ್ತಿದ್ದಾರೆ.

ಸುಕ್ಕಮ್ಮ ಅವರ ಪ್ರಕಾರ, ರಾಮ್​ನ ಸಾವಿನ ನಂತರ ಆತ ಕನಸಿನಲ್ಲಿ ಕಾಣಿಸಿಕೊಂಡು ದೇವಸ್ಥಾನ ಕಟ್ಟಿಸಿ ಮದುವೆ ಮಾಡುವಂತೆ ಕೇಳಿಕೊಂಡರು. ಇದನ್ನು ನಂಬಿದ ದಂಪತಿಗಳು ತಮ್ಮ ಮನೆಯೊಳಗೆ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಿದರು. ಅವರು ಅದರಲ್ಲಿ ಮಗ ರಾಮ್ ಮತ್ತು ಆತ ಪ್ರೀತಿಸಿದ ಹುಡುಗಿಯ ಪ್ರತಿಮೆಗಳನ್ನು ಸ್ಥಾಪಿಸಿ, ಅವರನ್ನು ಒಟ್ಟಿಗೆ ಇರಿಸಿದರು.

ಇದನ್ನೂ ಓದಿ: ತನ್ನ ಗೆಳೆಯನ ಜೊತೆ ಸಂಬಂಧದ ಅನುಮಾನ; ಮುಂಬೈ ವಿದ್ಯಾರ್ಥಿನಿಯನ್ನು ಎಳೆದು, ಕೂದಲು ಕತ್ತರಿಸಿದ ಯುವತಿ

ಅಂದಿನಿಂದ, ಪ್ರತಿ ವರ್ಷ ರಾಮ ನವಮಿಯಂದು ಅವರಿಬ್ಬರಿಗೂ ಸಾಂಪ್ರದಾಯಿಕ ವಿವಾಹ ಸಮಾರಂಭವನ್ನು ನಡೆಸುತ್ತಿದ್ದಾರೆ. ಈ ಆಚರಣೆಯನ್ನು ನಿಜವಾದ ವಿವಾಹದಂತೆಯೇ ಸಂಪ್ರದಾಯ, ಪದ್ಧತಿಗಳೊಂದಿಗೆ ನಡೆಸಲಾಗುತ್ತದೆ. ಈ ಸಮಾರಂಭವನ್ನು ವೀಕ್ಷಿಸಲು ಮತ್ತು ಪ್ರಾರ್ಥನೆಗಳಲ್ಲಿ ಭಾಗವಹಿಸಲು ಗ್ರಾಮಸ್ಥರು, ಸಂಬಂಧಿಕರು ಮತ್ತು ಹತ್ತಿರದ ಪ್ರದೇಶಗಳ ಜನರು ಪ್ರತಿ ವರ್ಷ ಅವರ ಮನೆಗೆ ಆಗಮಿಸುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB vs SRH Playing XI: ಟಾಸ್ ಗೆದ್ದ ಆರ್​ಸಿಬಿ; ಮೊದಲ ಪಂದ್ಯಕ್ಕೆ ಇಬ್ಬರ ಪಾದಾರ್ಪಣೆ

2026 ರ ಐಪಿಎಲ್ (IPL 2026) ಸೀಸನ್ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ (RCB vs SRH) ನಡುವಿನ ಪಂದ್ಯದೊಂದಿಗೆ ಆರಂಭವಾಗಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಈ ಪಂದ್ಯಕ್ಕೆ ಆತಿಥ್ಯವಹಿಸಿದೆ. ಸುಮಾರು 10 ತಿಂಗಳ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯವೊಂದು ನಡೆಯುತ್ತಿರುವುದು ಅಭಿಮಾನಿಗಳ ಪಾಲಿಗೆ ಸಂತಸದ ಕ್ಷಣವಾಗಿದೆ. ಆರ್‌ಸಿಬಿ ಹಾಲಿ ಚಾಂಪಿಯನ್ ಆಗಿದ್ದು, ತವರಿನಲ್ಲಿ ಬಲಿಷ್ಠವಾಗಿ ಕಾಣುತ್ತಿದೆ. ಇತ್ತ ಸನ್‌ರೈಸರ್ಸ್ ಹೈದರಾಬಾದ್ ಕೂಡ ಯುವ ನಾಯಕ ಇಶಾನ್ ಕಿಶನ್ ನೇತೃತ್ವದಲ್ಲಿ ಕಣಕ್ಕಿಳಿಯುತ್ತಿದೆ. ಹೀಗಾಗಿ ಉಭಯ ತಂಡಗಳಿಗೂ ಗೆಲುವು ಅತ್ಯಗತ್ಯವಾಗಿದೆ.​

ಟಾಸ್ ಗೆದ್ದ ಆರ್​ಸಿಬಿ

2026 ರ ಆವೃತ್ತಿಯ ಮೊದಲ ಪಂದ್ಯದಲ್ಲೇ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದರ್ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಸನ್​ರೈಸರ್ಸ್​ ಹೈದರಾಬಾದ್ ಮೊದಲು ಬ್ಯಾಟಿಂಗ್‌ ಮಾಡಲಿದೆ. ಆರ್​ಸಿಬಿ ಪರ ಇಬ್ಬರು ಆಟಗಾರರು ಐಪಿಎಲ್​ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅದರಲ್ಲಿ ನ್ಯೂಜಿಲೆಂಡ್ ವೇಗಿ ಜಾಕೋಬ್ ಡಫಿ, ಹೇಜಲ್‌ವುಡ್ ಬದಲಿಗೆ ಆಡುತ್ತಿದ್ದರೆ, ಮತ್ತೊಬ್ಬ ಯುವಿ ವೇಗಿ ಅಭಿನಂದನ್ ಸಿಂಗ್, ಯಶ್ ದಯಾಳ್ ಸ್ಥಾನವನ್ನು ತುಂಬಲು ಸಜ್ಜಾಗಿದ್ದಾರೆ.

ಹೆಡ್ ಟು ಹೆಡ್ ದಾಖಲೆ

ಅಂಕಿಅಂಶಗಳ ಪ್ರಕಾರ ಸನ್‌ರೈಸರ್ಸ್ ಹೈದರಾಬಾದ್, ಆರ್‌ಸಿಬಿ ವಿರುದ್ಧ ಮೇಲುಗೈ ಸಾಧಿಸಿರುವುದನ್ನು ಗಮಿನಸಬಹುದು. ಐಪಿಎಲ್ ಇತಿಹಾಸದಲ್ಲಿ ಈ ಎರಡೂ ತಂಡಗಳ ನಡುವೆ ಒಟ್ಟು 26 ಪಂದ್ಯಗಳು ನಡೆದಿವೆ. ಇದರಲ್ಲಿ ಸನ್‌ರೈಸರ್ಸ್ ಹೈದರಾಬಾದ್ 13 ಪಂದ್ಯಗಳನ್ನು ಗೆದ್ದಿದ್ದರೆ, ಆರ್‌ಸಿಬಿ 11 ಪಂದ್ಯಗಳನ್ನು ಗೆದ್ದಿದೆ. ಎರಡು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಇನ್ನು ಕಳೆದ ಆವೃತ್ತಿಯಲ್ಲಿ ರಜತ್ ಪಾಟಿದಾರ್ ನಾಯಕತ್ವದಲ್ಲಿ, ಆರ್‌ಸಿಬಿ ಅದ್ಭುತ ಪ್ರದರ್ಶನ ನೀಡಿತ್ತಾದರೂ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿತ್ತು. ಇದರ ಹೊರತಾಗಿಯೂ, ಆರ್‌ಸಿಬಿ ಐಪಿಎಲ್ 2025 ಪ್ರಶಸ್ತಿಯನ್ನು ಗೆದ್ದುಕೊಂಡಿತು.

RCB vs SRH Live Score, IPL 2026: ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ಕೆ

ಉಭಯ ತಂಡಗಳ ಪ್ಲೇಯಿಂಗ್ 11

ಆರ್​ಸಿಬಿ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ, ಜಾಕೋಬ್ ಡಫ್ಫಿ, ಅಭಿನಂದನ್ ಸಿಂಗ್.

ಎಸ್​ಆರ್​ಎಚ್: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ವಿಕೆಟ್ ಕೀಪರ್/ ನಾಯಕ), ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಸಲೀಲ್ ಅರೋರಾ, ಹರ್ಷ್ ದುಬೆ, ಹರ್ಷಲ್ ಪಟೇಲ್, ಜಯದೇವ್ ಉನದ್ಕತ್, ಇಶಾನ್ ಮಾಲಿಂಗ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪತ್ನಿ ಆರ್‌ಸಿಬಿ ಫ್ಯಾನ್, ಪತಿ ಹೈದರಾಬಾದ್ ಸಪೋರ್ಟರ್: ಸ್ಟೇಡಿಯಂನಲ್ಲಿ ಈ ಜೋಡಿಯೇ ಹೈಲೈಟ್

ಬೆಂಗಳೂರು, ಮಾ.28: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ.) ಮತ್ತು ಸನ್​ರೈಸರ್ಸ್ ಹೈದರಾಬಾದ್ (ಎಸ್.ಆರ್.ಹೆಚ್.) ತಂಡಗಳು ಮುಖಾಮುಖಿಯಾಗಿದೆ. ಈ ಮಹತ್ವದ ಕಾದಾಟವನ್ನು ವೀಕ್ಷಿಸಲು ಆಗಮಿಸಿದ್ದ ಸಾವಿರಾರು ಅಭಿಮಾನಿಗಳ ನಡುವೆ ಒಂದು ಅಪರೂಪದ ಜೋಡಿ ಎಲ್ಲರ ಗಮನ ಸೆಳೆದಿದೆ. ಬದ್ರಿನಾಥ್ ಮತ್ತು ಮಲ್ಲಿಕಾ ಎಂಬ ದಂಪತಿಗಳು ತಮ್ಮ ವಿಶಿಷ್ಟ ಕ್ರಿಕೆಟ್ ಅಭಿಮಾನದಿಂದಾಗಿ ಕುತೂಹಲ ಮೂಡಿಸಿದ್ದಾರೆ. ಈ ದಂಪತಿಗಳು 42 ವರ್ಷಗಳ ಸುದೀರ್ಘ ದಾಂಪತ್ಯ ಜೀವನವನ್ನು ಪೂರೈಸಿದ್ದಾರೆ. ಅವರಲ್ಲಿ ಪತಿ ಬದ್ರಿನಾಥ್ ಅವರು ಸನ್​ರೈಸರ್ಸ್ ಹೈದರಾಬಾದ್ ತಂಡದ ಕಟ್ಟಾ ಬೆಂಬಲಿಗರಾಗಿದ್ದರೆ, ಪತ್ನಿ ಮಲ್ಲಿಕಾ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿ. ಈ ಭಿನ್ನ ತಂಡಗಳ ಬೆಂಬಲವು ಅವರ ಮನೆಯಲ್ಲಿ ಪಂದ್ಯಗಳನ್ನು ನೋಡುವಾಗ ಒಂದು ಸಿಹಿ-ಸಿಹಿ ಜಗಳಕ್ಕೆ ಕಾರಣವಾಗುತ್ತದೆ ಎಂದು ದಂಪತಿಗಳು ನಗೆಯಾಡುತ್ತಾ ಹೇಳಿಕೊಂಡಿದ್ದಾರೆ. ಮಲ್ಲಿಕಾ ಅವರ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ. ಈ ಕಾರಣಕ್ಕಾಗಿ ಅವರು ಆರ್.ಸಿ.ಬಿ. ತಂಡವನ್ನು ಪ್ರಾರಂಭದಿಂದಲೂ ಬೆಂಬಲಿಸುತ್ತಾ ಬಂದಿದ್ದಾರೆ. ಇದಕ್ಕೆ ಪ್ರತಿಯಾಗಿ, ಬದ್ರಿನಾಥ್ ಅವರು ಹೈದರಾಬಾದ್‌ನಲ್ಲಿ ವಾಸವಾಗಿರುವ ತಮ್ಮ ಮಗನ ಕಾರಣದಿಂದಾಗಿ ಎಸ್.ಆರ್.ಹೆಚ್. ತಂಡಕ್ಕೆ ತಮ್ಮ ಬೆಂಬಲವನ್ನು ನೀಡುತ್ತಾರೆ. ಈ ಕಾರಣದಿಂದಾಗಿ, ಮನೆಯಲ್ಲಿ ಪಂದ್ಯಗಳನ್ನು ಟಿವಿ ಮುಂದೆ ಕುಳಿತು ನೋಡುವಾಗ ಇಬ್ಬರ ನಡುವೆ ವಾಗ್ವಾದಗಳು, ಸವಾಲುಗಳು ಮತ್ತು ಬೆಟ್​ಗಳು ಸಾಮಾನ್ಯ ಎನ್ನಲಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಆರ್.ಸಿ.ಬಿ. ಬೆಂಬಲಿಸುವ ಮಲ್ಲಿಕಾ ಅವರೇ ಗೆಲುವು ಸಾಧಿಸುತ್ತಾರೆ ಎಂದು ಬದ್ರಿನಾಥ್ ಅವರು ಒಪ್ಪಿಕೊಂಡಿದ್ದಾರೆ. ಈ ದಂಪತಿಗಳು ನೇರವಾಗಿ ಚಿನ್ನಸ್ವಾಮಿ ಸ್ಟೇಡಿಯಂಗೆ ಆಗಮಿಸಿ, ತಮ್ಮ ನೆಚ್ಚಿನ ತಂಡಗಳ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಪಂದ್ಯದ ದಿನ ಸ್ಟೇಡಿಯಂ ಸುತ್ತಲೂ ಪೊಲೀಸರು ಬ್ಯಾರಿಕೇಡ್​ಗಳನ್ನು ಹಾಕಿದ್ದು, ಟಿಕೆಟ್ ಹೊಂದಿರುವವರನ್ನು ಪರಿಶೀಲಿಸಿ ಒಳಗೆ ಬಿಡಲಾಗುತ್ತಿತ್ತು. ಇಂತಹ ಬಿಗುವಿನ ವಾತಾವರಣದಲ್ಲೂ, ಈ ದಂಪತಿಗಳ ವಿಭಿನ್ನ ಅಭಿಮಾನ ಮತ್ತು ಅದರ ಹಿಂದಿರುವ ಪ್ರೀತಿ, ದೀರ್ಘಕಾಲದ ಬಾಂಧವ್ಯವು ಎಲ್ಲರಿಗೂ ಮಾದರಿಯಾಗಿದೆ. ಕ್ರಿಕೆಟ್ ಪಂದ್ಯಾವಳಿಯು ಕೇವಲ ಆಟಗಾರರ ನಡುವಿನ ಸ್ಪರ್ಧೆಯಲ್ಲದೆ, ಅಭಿಮಾನಿಗಳ ನಡುವಿನ ಭಾವನಾತ್ಮಕ ಬಂಧ ಮತ್ತು ದಾಂಪತ್ಯದೊಳಗೆ ಸೃಜನಾತ್ಮಕ ಪೈಪೋಟಿಯನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಈ ಜೋಡಿ ಒಂದು ಉತ್ತಮ ಉದಾಹರಣೆಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಯಶಸ್ಸು, ರಣ್ವೀರ್ ಸಿಂಗ್​​ಗೆ ಐದು ಕೋಟಿ ಮೌಲ್ಯದ ಕಾರು ಕೊಟ್ಟ ಆದಿತ್ಯ-ಗೌತಮಿ

ಧುರಂಧರ್ 2’ (Dhurandhar) ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭಾರಿ ದೊಡ್ಡ ಹಿಟ್ ಆಗಿದೆ. ಸಿನಿಮಾ ಬಿಡುಗಡೆ ಆದ ಎರಡು ವಾರಗಳಲ್ಲೇ ಸಾವಿರ ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಅದೂ ‘ಧುರಂಧರ್ 2’ ಸಿನಿಮಾದ ನಿರ್ಮಾಣಕ್ಕೆ, ಪ್ರಚಾರಕ್ಕೆ ಬಹಳ ಕಡಿಮೆ ಹಣ ಖರ್ಚು ಮಾಡಲಾಗಿದೆ. ಸಿನಿಮಾ ನಿರ್ದೇಶನ ಮಾಡಿರುವ ಆದಿತ್ಯ ಧರ್ ಅವರು ಸಿನಿಮಾದ ಮೂವರು ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ‘ಧುರಂಧರ್’ ಸಿನಿಮಾ ಈಗಾಗಲೇ 1000 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು ‘ಧುರಂಧರ್ 2’ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ 2 ಸಾವಿರ ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡುವ ನಿರೀಕ್ಷೆ ಇದೆ. ಇದೀಗ ಸಿನಿಮಾದ ನಾಯಕ ರಣ್ವೀರ್ ಸಿಂಗ್ ಅವರಿಗೆ ಆದಿತ್ಯ ಧರ್ ಮತ್ತು ಅವರ ಪತ್ನಿ ಯಾಮಿ ಗೌತಮ್ ಭರ್ಜರಿ ಉಡುಗೊರೆ ನೀಡಿದ್ದಾರೆ.

ಸಿನಿಮಾಗಳು ಯಶಸ್ವಿಯಾದರೆ ಮುಖ್ಯ ನಟರಿಗೆ, ತಂತ್ರಜ್ಞರಿಗೆ ಐಶಾರಾಮಿ ಕಾರುಗಳನ್ನು ಉಡುಗೊರೆಯಾಗಿ ಕೊಡುವ ಸಂಪ್ರದಾಯ ದಕ್ಷಿಣ ಭಾರತ ಚಿತ್ರರಂಗದಲ್ಲಿ ಶುರುವಾಗಿದೆ. ಇದೀಗ ಆದಿತ್ಯ ಧರ್ ಅವರೂ ಸಹ ರಣ್ವೀರ್ ಸಿಂಗ್​​ಗೆ ಐಶಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದೂ ಸಾಮಾನ್ಯ ಕಾರಲ್ಲ ಬದಲಿಗೆ ಐದು ಕೋಟಿಗೂ ಹೆಚ್ಚು ಮೌಲ್ಯದ ಐಶಾರಾಮಿ ಜಿಎಂಸಿ ಹಮ್ಮರ್ ಇವಿ ಕಾರನ್ನು ನೀಡಿದ್ದಾರೆ. ವಿಶ್ವದ ರಗಡ್ ಮತ್ತು ಐಶಾರಾಮಿ ಕಾರುಗಳಲ್ಲಿ ಒಂದಾಗಿರುವ ಹಮ್ಮರ್ ಕಾರಿನ ಅತ್ಯಾಧುನಿಕ ವರ್ಷನ್​​ ಕಾರು ಇದಾಗಿದೆ. ವಿಶೇಷವೆಂದರೆ ಈ ಕಾರು ಎಲೆಕ್ಟ್ರಾನಿಕ್ ಕಾರಾಗಿದೆ.

ಇದನ್ನೂ ಓದಿ:ಪ್ರಶ್ನೆ ಪತ್ರಿಕೆಯಲ್ಲೂ ಕಾಣಿಸಿದ ‘ಧುರಂಧರ್’ ಸಿನಿಮಾದ ಪಾತ್ರಗಳು: ಫೋಟೋ ವೈರಲ್

ರಣ್ವೀರ್ ಅವರು ಇತ್ತೀಚೆಗಷ್ಟೆ ಈ ಜಿಎಂಸಿ ಹಮ್ಮರ್ ಇವಿ ಕಾರಿನಲ್ಲಿ ಓಡಾಡುತ್ತಿರುವಾಗ ಪಾಪರಾಟ್ಜಿಗಳ ಕಣ್ಣಿಗೆ ಬಿದ್ದಿದ್ದು, ಈ ಕಾರನ್ನು ಆದಿತ್ಯ ಮತ್ತು ಯಾಮಿ ಅವರು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗುತ್ತಿದೆ. ಆದಿತ್ಯ ಮತ್ತು ರಣ್ವೀರ್ ಸಿಂಗ್ ನಡುವೆ ಇರುವ ಗೆಳೆತನದ ಸಂಕೇತವಾಗಿ ಈ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆಯಂತೆ. ಅಲ್ಲದೆ, ಆದಿತ್ಯ ಹಾಗೂ ರಣ್ವೀರ್ ಅವರುಗಳು ಮುಂದೆ ಸಹ ಒಟ್ಟಿಗೆ ಕೆಲಸ ಮಾಡಲಿದ್ದು, ಅದರ ದ್ಯೋತಕವಾಗಿ ಈ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ ‘ಧುರಂಧರ್ 2’ ಸಿನಿಮಾದ ಸಕ್ಸಸ್ ಪಾರ್ಟಿ ನಡೆದಿತ್ತು, ಆ ಪಾರ್ಟಿ ವೇಳೆ ರಣ್ವೀರ್​​ಗೆ ಈ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ ಎನ್ನಲಾಗುತ್ತಿದೆ.

ಜಿಎಂಸಿ ಹಮ್ಮರ್ ಇವಿ ಕಾರು 5 ಕೋಟಿ ರೂಪಾಯಿ ಮೌಲ್ಯದ್ದಾಗಿದ್ದು, ಇದು ವಿಶ್ವದ ಅತ್ಯಂತ ವೇಗದ ಮತ್ತು ಐಷಾರಾಮಿ ಕಾರುಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ. ರಣವೀರ್ ಸಿಂಗ್ ಮೊದಲೇ ವಾಹನ ಪ್ರೇಮಿಯಾಗಿದ್ದು, ಅವರ ಗ್ಯಾರೇಜ್‌ನಲ್ಲಿ ಈಗಾಗಲೇ ಲಂಬೋರ್ಗಿನಿ, ಆಸ್ಟನ್ ಮಾರ್ಟಿನ್‌, ಆಡಿ, ಮರ್ಸಿಡೀಸ್, ಬಿಎಂಡಬ್ಲುನಂತಹ ದುಬಾರಿ ಕಾರುಗಳಿವೆ. ಈಗ ಈ ಹೊಸ ಅತಿಥಿಯ ಸೇರ್ಪಡೆಯಿಂದ ಅವರ ಸಂಗ್ರಹ ಮತ್ತಷ್ಟು ಶ್ರೀಮಂತವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್ ಯುದ್ಧದ ಬಗ್ಗೆ ಟ್ರಂಪ್-ಮೋದಿ ಮಾತನಾಡುವಾಗ ಎಲಾನ್ ಮಸ್ಕ್ ಇರಲಿಲ್ಲ; ಭಾರತ ಸ್ಪಷ್ಟನೆ

ನವದೆಹಲಿ, ಮಾರ್ಚ್ 28: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನಡುವಿನ ದೂರವಾಣಿ ಸಂಭಾಷಣೆಯಲ್ಲಿ ಅಮೆರಿಕದ ಬಿಲಿಯನೇರ್ ಎಲಾನ್ ಮಸ್ಕ್ ಕೂಡ ಭಾಗಿಯಾಗಿದ್ದರು ಎಂಬ ಅಮೆರಿಕದ ಮಾಧ್ಯಮಗಳ ವರದಿಯನ್ನು ಭಾರತ ತಿರಸ್ಕರಿಸಿದೆ. “ಮಾರ್ಚ್ 24ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮಾತ್ರ ದೂರವಾಣಿ ಸಂಭಾಷಣೆ ನಡೆದಿತ್ತು” ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಮಾರ್ಚ್ 24ರಂದು ನಡೆದ ದೂರವಾಣಿ ಸಂಭಾಷಣೆಯ ಸಮಯದಲ್ಲಿ ಪ್ರಧಾನಿ ಮೋದಿ ಮತ್ತು ಟ್ರಂಪ್ ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ಯುಎಸ್ ಅಧಿಕಾರಿಗಳನ್ನು ಉಲ್ಲೇಖಿಸಿ, ಎಲಾನ್ ಮಸ್ಕ್ ಈ ದೂರವಾಣಿ ಕರೆಯ ಭಾಗವಾಗಿದ್ದರು ಎಂದು ಉಲ್ಲೇಖಿಸಲಾಗಿತ್ತು.

ಇದನ್ನೂ ಓದಿ: ಸತ್ತಿರಬಹುದು ಅಥವಾ ಕೆಟ್ಟ ಸ್ಥಿತಿಯಲ್ಲಿರಬಹುದು; ಇರಾನ್‌ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಬಗ್ಗೆ ಟ್ರಂಪ್ ಶಾಕಿಂಗ್ ಹೇಳಿಕೆ

“ಮಂಗಳವಾರ ಎಲಾನ್ ಮಸ್ಕ್ ಭಾರತದ ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಫೋನ್ ಕರೆಯಲ್ಲಿ ಭಾಗವಹಿಸಿದ್ದರು. ಯುದ್ಧಕಾಲದ ಬಿಕ್ಕಟ್ಟಿನ ಸಂದರ್ಭದಲ್ಲಿ ಇಬ್ಬರು ರಾಷ್ಟ್ರಗಳ ಮುಖ್ಯಸ್ಥರ ನಡುವಿನ ಕರೆಯಲ್ಲಿ ಇನ್ನೊಬ್ಬರು ವ್ಯಕ್ತಿ ಕೂಡ ಕಾಣಿಸಿಕೊಂಡರು” ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಹೇಳಿತ್ತು.

ಈ ಮಾತುಕತೆಯ ಸಮಯದಲ್ಲಿ ಪಶ್ಚಿಮ ಏಷ್ಯಾದಲ್ಲಿ ಶಾಂತಿ ಪುನಃಸ್ಥಾಪನೆಗೆ ಭಾರತದ ಬೆಂಬಲವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು. ಇಂಧನ ವ್ಯಾಪಾರವನ್ನು ಅಭಿನಂದಿಸಲು ಹಾರ್ಮುಜ್ ಜಲಸಂಧಿಯು ಮುಕ್ತವಾಗಿರಬೇಕು ಎಂದು ಮೋದಿ ಪುನರುಚ್ಚರಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಇವ್ಳು ಪುಟ್ಟ ಟೀಚರಮ್ಮ; ಅಪ್ಪನಿಗೆ ಪದ್ಯ ಹೇಳಿಕೊಡುತ್ತಿರುವ ಪುಟಾಣಿ

ಅಪ್ಪ ಮಗಳ ಬಾಂಧವ್ಯಕ್ಕೆ ಹಾಗೆ, ಬೆಲೆ ಕಟ್ಟಲು ಸಾಧ್ಯವಿಲ್ಲ. ಮಗಳ ಪಾಲಿಗೆ ಅಪ್ಪನೇ (father) ಪ್ರಪಂಚ. ತಂದೆ ಮಗಳ ಮಾತನ್ನು ಯಾವತ್ತೂ ಮೀರಲ್ಲ. ಈ ಸುಂದರ ಬಾಂಧವ್ಯ ಸಾರುವ ಹೃದಯ ಸ್ಪರ್ಶಿ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಪುಟಾಣಿಯೊಂದು ಕೈಯಲ್ಲಿ ಪಠ್ಯ ಪುಸ್ತಕ ಹಿಡಿದು ತನ್ನ ಅಪ್ಪನಿಗೆ ಪದ್ಯ ಹೇಳಿ ಕೊಡುತ್ತಿದೆ. ತಂದೆ ತಪ್ಪು ಉಚ್ಚಾರಣೆ ಮಾಡಿದ್ರೆ ಈ ಪುಟಾಣಿ ತಿದ್ದುವ ಕೆಲಸ ಮಾಡುತ್ತಿದೆ. ಅಪ್ಪನಿಗೆ ಪುಟ್ಟ ಟೀಚರಮ್ಮ ಆಗಿರುವ ಈ ಪುಟ್ಟ ಹುಡುಗಿಯ ಈ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.

ಸಿಯಾ (siyainstyle) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ತಂದೆಗೆ ತನ್ನ ಮಗಳೇ ಟೀಚರ್ ಆಗಿರುವುದನ್ನು ಕಾಣಬಹುದು. ಪುಟಾಣಿ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿರುವ ತಂದೆಯೂ ಪದ್ಯ ಕಲಿಸುತ್ತಿದ್ದಾನೆ. ಇಲ್ಲಿ ಪುಟ್ಟ ಹುಡುಗಿ ತನ್ನ ಪುಟ್ಟ ಕೈಯಲ್ಲಿ ಇಂಗ್ಲಿಷ್ ಟೆಕ್ಸ್ಟ್ ಬುಕ್ ಹಿಡಿದುಕೊಂಡು ಆತ್ಮವಿಶ್ವಾಸದಿಂದ ತನ್ನ ತಂದೆಗೆ ಪದ್ಯ ಹೇಳಿಕೊಡುತ್ತಿದ್ದಾಳೆ. ಈ ವೇಳೆ ಅಪ್ಪ ತಪ್ಪಾಗಿ ಉಚ್ಚಾರಣೆ ಮಾಡುತ್ತಿದ್ದರೆ ತಿದ್ದಿ ಸರಿಯಾಗಿ ಮಾರ್ಗದರ್ಶನ ಮಾಡುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮಗಳ ರೀಲ್ಸ್ ನಡುವೆ ಎಂಟ್ರಿ ಕೊಟ್ಟ ತಂದೆಯ ಚಿಂದಿ ಮೂನ್‌ ವಾಕ್‌ ಸ್ಟೆಪ್‌ 

ಈ ವಿಡಿಯೋ ಇದುವರೆಗೆ ಹತ್ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತುಂಬಾ ಸ್ಟ್ರಿಕ್ ಟೀಚರ್ ಎಂದು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ಎಷ್ಟು ಮುದ್ದಾಗಿ ಹೇಳಿಕೊಡುತ್ತಿದ್ದಾಳೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಕ್ಯೂಟ್ ಮೇಡಂ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ನಮ್ಮ ಕಾಲದಲ್ಲೂ ಹಿಂದಿ ಕಡ್ಡಾಯವಾಗಿರಲಿಲ್ಲ ಎಂದ ಸಿಎಂ ಸಿದ್ದರಾಮಯ್ಯ

ಮೈಸೂರು, ಮಾರ್ಚ್​ 28: ರಾಜ್ಯ ಸರ್ಕಾರ SSLC ಪರೀಕ್ಷೆಯಲ್ಲಿ ಹಿಂದಿ ತೃತೀಯ ಭಾಷೆಯನ್ನು ಕಡ್ಡಾಯವಲ್ಲ ಎಂದು ಘೋಷಿಸಿದೆ. ಸದ್ಯ ಈ ವಿಚಾರವಾಗಿ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಹಿಂದಿ ಕಲಿಯಬಾರದು ಎಂದು ಹೇಳುತ್ತಿಲ್ಲ. ಕಡ್ಡಾಯ ಬೇಡ ಎಂದು ಹೇಳುತ್ತಿದ್ದೇನೆ‌. ಸುಮ್ಮನೆ ಹಿಂದಿ ಹೇರಿಕೆಯಾಗಬಾರದು ಎಂದಿದ್ದಾರೆ. ವಿರೋಧ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರದ ಈ ನಿರ್ಧಾರವನ್ನ ಎಲ್ಲರೂ ಒಪ್ಪಿಕೊಳ್ಳಬೇಕು. ಯಾರೋ ಕೆಲವರು ವಿರೋಧಿಸಿದರೆ ಹಿಂದೆ ಸರಿಯಲ್ಲ. ಎಲ್ಲ ರೀತಿ ಪರಾಮರ್ಶಿಸಿ ಸರ್ಕಾರ ನಿರ್ಧಾರ ಮಾಡಿದೆ. ಎಲ್ಲರೂ ಈ ನಿರ್ಧಾರವನ್ನು ಒಪ್ಪಿಕೊಳ್ಳಬೇಕು. ಈ ವರ್ಷದಿಂದಲೇ ಪರೀಕ್ಷೆಯಲ್ಲಿ ಇದು ಜಾರಿ ಆಗುತ್ತೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಐವರು ಮಹಿಳಾ ಕಾರ್ಮಿಕರು ಅಸ್ವಸ್ಥ; ಒಬ್ಬರ ಸ್ಥಿತಿ ಗಂಭೀರ!

ಸಕಲೇಶಪುರ, ಮಾ.28: ಹಾಸನ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಬಿರುಗಾಳಿ ಮಳೆ ಅಬ್ಬರಿಸುತ್ತಿದ್ದು, ಸಕಲೇಶಪುರ ತಾಲೂಕಿನ ದೀನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಐವರು ಮಹಿಳಾ ಕಾರ್ಮಿಕರು ಗಂಭೀರವಾಗಿ ಅಸ್ವಸ್ಥಗೊಂಡಿದ್ದಾರೆ. ಕುದರಂಗಿ ಗ್ರಾಮದ ಕಾರ್ಮಿಕ ಮಹಿಳೆಯರಾದ ರೂಪಾ, ಲಕ್ಷ್ಮಿ, ಸುಮಿತ್ರಾ ಮತ್ತು ಜಯಮ್ಮ ಸೇರಿದಂತೆ ಐವರು ದೀನಹಳ್ಳಿ ಗ್ರಾಮದ ಕಾಫಿ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಬಿರುಗಾಳಿ ಸಹಿತ ಮಳೆ ಆರಂಭವಾಗಿದ್ದು, ಆಕಸ್ಮಿಕವಾಗಿ ಸಿಡಿಲು ಬಡಿದಿದೆ. ಸಿಡಿಲಿನ ತೀವ್ರತೆಗೆ ಐವರು ಮಹಿಳೆಯರು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.ಗಾಯಗೊಂಡವರನ್ನು ಕೂಡಲೇ ಸಕಲೇಶಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ರೂಪಾ ಎಂಬ ಕಾರ್ಮಿಕ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ನಿಗಾ ವಹಿಸಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

GBA Budget: ಜಿಬಿಎ ಅಡಿಯಲ್ಲಿನ ಐದು ಪಾಲಿಕೆಗಳ ಬಜೆಟ್ ಮಂಡನೆ; ಬೆಂಗಳೂರಿನ ಅಭಿವೃದ್ಧಿಗೆ 20,213 ಕೋಟಿ ರೂ

ಬೆಂಗಳೂರು, ಮಾರ್ಚ್​ 28: ಬೆಂಗಳೂರು ಮಹಾಜನತೆಗೆ ಶುಕ್ರವಾರ ಹಾಗೂ ಶನಿವಾರ ಮಹತ್ವದ ದಿನ ಅಂತಾನೇ ಹೇಳಬಹುದು. ಏಕೆಂದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಡಿಯಲ್ಲಿ 5 ನಗರ ಪಾಲಿಕೆಗಳ 2026-27ರ ಸಾಲಿನ ಆಯವ್ಯಯ ಮಂಡನೆಯಾಗಿದೆ. ಒಟ್ಟಾರೆಯಾಗಿ ಬೆಂಗಳೂರಿಗೆ 20 ಸಾವಿರ ಕೋಟಿ ರೂ ಮೀಸಲಿಡಲಾಗಿದೆ.

ಬಿಬಿಎಂಪಿ ಇತಿಹಾಸದ ಪುಟಗಳನ್ನ ಸೇರಿದ ಬಳಿಕ ಜಿಬಿಎ ಅಡಿಯಲ್ಲಿ 5 ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿವೆ. ಇದಾದ ಬಳಿಕ ಎಲ್ಲಾ ನಗರ ಪಾಲಿಕೆಗಳ ಚೊಚ್ಚಲ ಬಜೆಟ್​ಗೆ ಬೆಂಗಳೂರಿಗರು ಸಾಕ್ಷಿಯಾಗಿದ್ದಾರೆ. ಶುಕ್ರವಾರ 3,889 ಕೋಟಿ ರೂಪಾಯಿಗಳ ಪೂರ್ವ ನಗರ ಪಾಲಿಕೆ ಬಜೆಟ್ ಹಾಗೂ 3,426 ಕೋಟಿ ರೂಪಾಯಿಗಳ ಕೇಂದ್ರ ನಗರ ಪಾಲಿಕೆ ಬಜೆಟ್ ಮಂಡಿಸಲಾಗಿತ್ತು. ಇಂದು ಉಳಿದ ಉತ್ತರ, ಪಶ್ಚಿಮ ಹಾಗೂ ದಕ್ಷಿಣ ನಗರ ಪಾಲಿಕೆಗಳ ಬಜೆಟ್ ಮಂಡಿಸಲಾಗಿದೆ. 5 ಪಾಲಿಕೆಗಳ ಒಟ್ಟಾರೆ ಬಜೆಟ್ ಮೌಲ್ಯ ಬರೋಬ್ಬರಿ 20,213 ಕೋಟಿ ರೂಪಾಯಿ ಆಗಿದೆ.

ಉತ್ತರ ನಗರ ಪಾಲಿಕೆಯ ಮುಖ್ಯಾಂಶಗಳು

  • 4341 ಕೋಟಿ ರೂ ಬಜೆಟ್​​ನಲ್ಲಿ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ ಶೇ.61ರಷ್ಟು ಹಣ ಮೀಸಲು.
  • ಘನತ್ಯಾಜ್ಯ ನಿರ್ವಹಣೆಗೆ 301 ಕೋಟಿ ರೂ ಹಣ ಮೀಸಲು.
  • ಪೌರ ಕಾರ್ಮಿಕರ ಕಲ್ಯಾಣಕ್ಕೆ 10 ಕೋಟಿ ರೂ.
  • ಕೆರೆಗಳ ವಾರ್ಷಿಕ ನಿರ್ವಹಣೆಗೆ 8 ಕೋಟಿ ರೂ.
  • ಅಪಾಯಕಾರಿ ಮರಗಳ ತೆರವಿಗೆ 5 ಕೋಟಿ ರೂ.
  • ಅರಣ್ಯ ವಿಭಾಗಕ್ಕೆ 10 ಕೋಟಿ ರೂ.
  • ಪಾರ್ಕ್​ಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ 62 ಕೋಟಿ ರೂ.
  • ಸೊಳ್ಳೆಗಳ ನಿಯಂತ್ರಣಕ್ಕೆ 8.86 ಕೋಟಿ ರೂ.
  • ಇಂದಿರಾ ಕ್ಯಾಂಟೀನ್​ಗಳ ನಿರ್ವಹಣೆಗೆ 11 ಕೋಟಿ ರೂ.
  • ಆಧುನಿಕ ಕಸಾಯಿಖಾನೆ ಸ್ಥಾಪನೆಗೆ 14 ಕೋಟಿ ರೂ.

ಪಶ್ಚಿಮ ನಗರ ಪಾಲಿಕೆಯ ಮುಖ್ಯಾಂಶಗಳು

  • 4,732 ಕೋಟಿ ರೂ ಬಜೆಟ್​ನಲ್ಲಿ 60% ಹಣ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲು.
  • ಘನತ್ಯಾಜ್ಯ ನಿರ್ವಹಣೆಗೆ 322 ಕೋಟಿ ರೂ.
  • ಆರೋಗ್ಯ, ಶಿಕ್ಷಣ, ಕಲ್ಯಾಣ ಕಾರ್ಯಕ್ರಮಗಳಿಗೆ 242 ಕೋಟಿ ರೂ.
  • ಒಂಟಿ ಮನೆ ಯೋಜನೆಯಡಿ 71 ಕೋಟಿ ರೂ ವೆಚ್ಚದಲ್ಲಿ ವಸತಿ ಯೋಜನೆ.
  • ಬಡ ಸಮುದಾಯದ ಜನರಿಗೆ 334 ಕೋಟಿ ರು ಸಹಾಯಧನ.
  • 496 ಪಾರ್ಕ್​ಗಳ ನಿರ್ವಹಣೆಗೆ 47 ಕೋಟಿ ರೂ.
  • 100 ಮಿಯಾವಕಿ ಕಾಡುಗಳ ನಿರ್ಮಾಣಕ್ಕೆ ಕ್ರಮ.
  • 49 ಕೆರೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ 30 ಕೋಟಿ ರೂ.
  • 2 ಕೋಟಿ ರೂ ವೆಚ್ಚದಲ್ಲಿ ಮಕ್ಕಳಿಗೆ ಕರ್ನಾಟಕ ದರ್ಶನ ಪ್ರವಾಸ ಯೋಜನೆ10. 5 ವಾರ್ಡ್​ಗಳ ಶಾಲೆಯನ್ನ ಸ್ಮಾರ್ಟ್​​ ಶಾಲೆಗಳನ್ನಾಗಿ ಪರಿವರ್ತಿಸುವುದು.

ದಕ್ಷಿಣ ನಗರ ಪಾಲಿಕೆಗೆ ಸಿಕ್ಕಿದ್ದೇನು?

  • 3825 ಕೋಟಿ ರೂ ಬಜೆಟ್​ನಲ್ಲಿ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ 43%.
  • ಬಿ-ಸ್ಮೈಲ್ ಕಾಮಗಾರಿಗಳಿಗೆ 16%.
  • ವಿದ್ಯಾರ್ಥಿಗಳಿಗೆ 5 ಕೋಟಿ ರೂ ಅನುದಾನಲ್ಲಿ ಉಚಿತವಾಗಿ ಲ್ಯಾಪ್ ಟಾಪ್.
  • 11.92 ಕೋಟಿ ರೂ ಅನುದಾನದಲ್ಲಿ ಬೀದಿ ವ್ಯಾಪಾರಿಗಳಿಗೆ ಇ-ವೆಂಡಿಂಗ್ ಮಾರಾಟ.
  • ಪೌರಕಾರ್ಮಿಕರಿಗೆ ಅಂದಾಜು 6 ಕೋಟಿ ರೂ ವೆಚ್ಚದಲ್ಲಿ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ.
  • ಅಮೃತ ಮಹೋತ್ಸವ ಯೋಜನೆಯಡಿ 1 ಬಿಹೆಚ್​ಕೆ ಫ್ಲಾಟ್ ಖರೀದಿಸಲು 88.25 ಕೋಟಿ ರೂ ಅನುದಾನ.
  • 500 ಬೀದಿ ನಾಯಿಗಳ ಸಾಮರ್ಥ್ಯವಿರುವ ಆಶ್ರಯ ತಾಣ ನಿರ್ಮಾಣ
  • ಕಸದಿಂದ ರಸ ರೀತಿಯ ಯೋಜನೆಗಳಿಗೆ ಒತ್ತು, ಶೂನ್ಯ ತ್ಯಾಜ್ಯ ವಾರ್ಡ್‌ಗಳನ್ನು ರಚಿಸಲು ಕ್ರಮ.
  • ಪ್ರಸಕ್ತ ವರ್ಷದಲ್ಲಿ 200 ಇಂಗು ಗುಂಡಿಗಳನ್ನು CSR ಅಡಿ ನಿರ್ಮಿಸಲು ಕ್ರಮ.
  • ಪಾದಚಾರಿ ಮಾರ್ಗವನ್ನು ಮೇಲ್ದರ್ಜೆಗೆ ಏರಿಸಲು ಮತ್ತು ಸ್ಕೈ ವಾಕ್‌ಗಳ ನಿರ್ಮಾಣ ಮಾಡಲು 50 ಕೋಟಿ ರೂ ಮೀಸಲಿಡಲಾಗಿದೆ.

ಇದನ್ನೂ ಓದಿ: ಲೋಪ ಆರೋಪ ಬೆನ್ನಲ್ಲೇ ಜಿಬಿಎ ಮತದಾರರ ಪಟ್ಟಿ ಆಕ್ಷೇಪಣೆಗೆ ನೀಡಿದ್ದ ಕಾಲಾವಕಾಶ ವಿಸ್ತರಣೆ

ಒಟ್ಟಾರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯ ಪೂರ್ವ, ಕೇಂದ್ರ, ಉತ್ತರ, ಪಶ್ಚಿಮ ಹಾಗೂ ದಕ್ಷಿಣ ನಗರ ಪಾಲಿಕೆಗಳು ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗೆ ಸುಮಾರು 20 ಸಾವಿರ ಕೋಟಿ ರೂ ಹಣ ಖರ್ಚು ಮಾಡುವುದಾಗಿ ಬಜೆಟ್ ಮೂಲಕ ಭರವಸೆ ನೀಡಿದೆ. ಇದೆಲ್ಲಾ ಯಾವಾಗ ಕಾರ್ಯರೂಪಕ್ಕೆ ಬರುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link