ಪುಟಾಣಿ ಮಕ್ಕಳೇ (little kids) ಹಾಗೆ ಹಾಡು ಕೇಳಿದ ತಕ್ಷಣ ಕುಣಿಯಲು ಶುರು ಮಾಡ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಪುಟಾಣಿಗಳ ಡ್ಯಾನ್ಸ್ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ರಂಗದಲ್ಲಿ ಯಕ್ಷಗಾನ ಕಲಾವಿದ ಕುಣಿಯುತ್ತಿದ್ದರೆ, ಯಕ್ಷಗಾನ (Yakshagana) ನೋಡಲು ಬಂದ ಪುಟಾಣಿಯೂ ಅವರ ಜತೆಯಲ್ಲಿ ಹೆಜ್ಜೆ ಹಾಕಿದೆ. ಈ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಫಿದಾ ಆಗಿದ್ದಾರೆ.
ಸುಬ್ರಮಣ್ಯ ಭಾಗವತ್ (Subramanya Bhagwat) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟಾಣಿಯ ಯಕ್ಷಗಾನ ಆಸಕ್ತಿಯನ್ನು ಕಾಣಬಹುದು. ಈ ವಿಡಿಯೋಗೆ ಪುಟ್ಟಕೂಸಿನ ಯಕ್ಷಗಾನಸಕ್ತಿಗೊಂದು ಭಳಿರೇ ಎಂಬ ಶೀರ್ಷಿಕೆ ನೀಡಲಾಗಿದೆ. ರಂಗದಲ್ಲಿ ಯಕ್ಷಗಾನ ಕಲಾವಿದ ಚಂಡೆಗೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದಂತೆ ಅವರೊಂದಿಗೆ ಪುಟಾಣಿಯೂ ಹೆಜ್ಜೆ ಹಾಕಿದೆ. ಯಕ್ಷಗಾನ ನೋಡಲು ಬಂದ ಪುಟಾಣಿಯೂ ರಂಗದಲ್ಲಿ ಕಲಾವಿದನನ್ನು ಹೆಜ್ಜೆಗಾರಿಕೆಯನ್ನು ಅನುಸರಿಸುತ್ತಿರುವುದನ್ನು ಕಾಣಬಹುದು.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಆ ಮುಗ್ಧ ಮನಸ್ಸಿನ ಕಲೆಯನ್ನು ಪ್ರೋತ್ಸಾಹಿಸಿದ ಯಕ್ಷ ಕಲಾ ವೇದಿಕೆಗೆ ನಮನಗಳು ಎಂದು ಹೇಳಿದ್ದಾರೆ. ಇನ್ನೊಬ್ಬರು ಮಣ್ಣಿನ ಗುಣ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇದಕ್ಕೆ ಇರಬೇಕು ಮಕ್ಕಳನ್ನು ದೇವರು ಎನ್ನುವುದು. ನೋಡುತ್ತಾ ಕುಳಿತರೆ ಮನದಲ್ಲಿ ಸಾರ್ಥಕತೆಯ ಭಾವ ಮೂಡುತ್ತದೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 27: ಹೇರ್ ಟ್ರಾನ್ಸ್ಪ್ಲಾಂಟ್ಗೆಂದು (Hair Transplant) ಬಂದ ವ್ಯಕ್ತಿಗೆ ವಿಗ್ ಹಾಕಿ ಕಳಿಸಿದ್ದ ಸ್ಟೂಡಿಯೋ ವಿರುದ್ಧ ಗ್ರಾಹಕ ಆಯೋಗದಲ್ಲಿ ದೂರು ಸಲ್ಲಿಸಲಾಗಿದ್ದು, ಸಂಸ್ಥೆಗೆ ಕೋರ್ಟ್ ಬಿಸಿ ಮುಟ್ಟಿಸಿದೆ. ವಿಚಾರಣೆ ವೇಳೆ ಸಂಸ್ಥೆ ಹಾಜರಾಗದಿದ್ದರಿಂದ ಅತೃಪ್ತ ಗ್ರಾಹಕನ ಆರೋಪಗಳಿಗೆ ಸಮ್ಮತಿಸಿದಂತಾಗಿದ್ದು, ಆತ ಪಾವತಿಸಿದ ಹಣದೊಂದಿಗೆ ಬಡ್ಡಿಯನ್ನೂ ಸೇರಿಸಿ ಹಿಂದಿರುಗಿಸುವಂತೆ ಆದೇಶಿಸಿದೆ.
ಹೇರ್ ಟ್ರಾನ್ಸ್ಪ್ಲಾಂಟ್ ಬದಲು ವಿಗ್
ಬೆಂಗಳೂರಿನ ನಿವಾಸಿಯಾದ 54 ವರ್ಷದ ವ್ಯಕ್ತಿಯೊಬ್ಬರು ಹೇರ್ ಟ್ರಾನ್ಸ್ಪ್ಲಾಂಟ್ಗೆಂದು 2024ರ ಆಗಸ್ಟ್ 10ರಂದು ಲವೆಲ್ ರೋಡ್ನಲ್ಲಿರುವ ಮ್ಯಾಕ್ಸ್ ಹೇರ್ ಸ್ಟೂಡಿಯೋ ಇಂಟರ್ನ್ಯಾಶನಲ್ ಪ್ರೈ.ಲಿ ಗೆ ಭೇಟಿ ನೀಡಿದ್ದರು. ಈ ವೇಳೆ ಕೂದಲು ಕಸಿ ಬಗ್ಗೆ ಮಾಹಿತಿ ಪಡೆದು, ಪ್ರಾರಂಭದಲ್ಲಿ 500 ರೂಪಾಯಿ ನಗದು ಹಾಗೂ 5,000 ರೂಪಾಯಿ ಕಾರ್ಡ್ ಮೂಲಕ ಪಾವತಿಸಿದ್ದರು. ಆದರೆ ವೈದ್ಯಕೀಯ ಪರಿಶೀಲನೆ ಬಳಿಕ ಅವರಿಗೆ ಟ್ರಾನ್ಸ್ಪ್ಲಾಂಟ್ ಬದಲಿಗೆ ವಿಗ್ ಬಳಸುವಂತೆ ಸಲಹೆ ನೀಡಲಾಗಿತ್ತು.
ಒಂದು ವೇಳೆ ವಿಗ್ ಅವರಿಗೆ ಹಿಡಿಸದಿದ್ದರೆ ಸಂಪೂರ್ಣ ಹಣ ಹಿಂತಿರುಗಿಸುವುದಾಗಿ ಭರವಸೆ ನೀಡಲಾಗಿತ್ತು. ಅದರಂತೆ ವಿಗ್ ಅಳವಡಿಸಿಕೊಂಡ ವ್ಯಕ್ತಿಗೆ ತನ್ನ ಹೊಸ ಲುಕ್ ಇಷ್ಟವಾಗದಾಗ ಹಣ ಹಿಂದಿರುಗಿಸುವಂತೆ ಕೇಳಿದ್ದರು. ಅವರ ಮಾತಿನಂತೆ ಆನ್ಲೂನ್ ಮೂಲಕ ಹಣವನ್ನು ಮರು ಪಾವತಿಸುತ್ತೇವೆಂದು ಭರವಸೆ ನೀಡಿದ್ದರು. ಆದರೆ ನಂತರದಲ್ಲಿ ಅವರಿಗೆ ಹಣ ವಾಪಸ್ ಬರದ ಹಿನ್ನೆಲೆ 2025ರ ಜೂನ್ 20ರಂದು ಬೆಂಗಳೂರು ಅರ್ಬನ್ II ಹೆಚ್ಚುವರಿ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಹಣ ಮರುಪಾವತಿ ಜೊತೆಗೆ ಬಡ್ಡಿಯನ್ನೂ ಕೊಡುವಂತೆ ಆದೇಶ
ಆಯೋಗದ ವಿಚಾರಣೆ ವೇಳೆಯಲ್ಲೂ ಸಂಸ್ಥೆ ಹಾಜರಾಗದ ಹಿನ್ನೆಲೆ ಗ್ರಾಹಕನ ಆರೋಪಗಳು ನಿಜವೆಂದು ಪರಿಗಣಿಸಿದ ಅಧ್ಯಕ್ಷ ವಿಜಯಕುಮಾರ್ ಎಂ ಪವಾಲೆ ಮತ್ತು ಸದಸ್ಯೆ ಅನುರಾಧಾ ವಿ ಒಳಗೊಂಡ ಗ್ರಾಹಕ ಆಯೋಗ ಪೀಠವು ಮಹತ್ವದ ತೀರ್ಪು ನೀಡಿದೆ. ವಿಗ್ ಸೇವೆಯಲ್ಲಿ ದೋಷ ಕಂಡ ಹಿನ್ನೆಲೆಯಲ್ಲಿ, ಸಂಬಂಧಿತ ಸ್ಟುಡಿಯೋವಿಗ್ ಹಿಂತೆಗೆದುಕೊಂಡು 55,000 ರೂ. ಹಣವನ್ನು ಗ್ರಾಹಕನಿಗೆ ವಾಪಾಸ್ ನೀಡಬೇಕು. ಅಲ್ಲದೆ ಆತ ಹಣ ಪಾವತಿಸಿದ ದಿನಾಂಕದಿಂದ 6 ಪ್ರತಿಶತ ಬಡ್ಡಿಯೊಂದಿಗೆ ಹಣವನ್ನು ಮರಳಿಸುವಂತೆ ಆದೇಶಿಸಿದೆ. ಜೊತೆಗೆ ಮಾನಸಿಕ ವೇದನೆ ಮತ್ತು ನ್ಯಾಯಾಂಗ ವೆಚ್ಚಕ್ಕಾಗಿ 5,000 ರೂ. ಪರಿಹಾರ ನೀಡುವಂತೆಯೂ ಸೂಚಿಸಿದೆ.
ಬ್ಯಾಂಕ್ ಆಫ್ ಬರೋಡಾ (BOB) ದೇಶಾದ್ಯಂತ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಒಟ್ಟು 104 ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಭಿಯಾನವನ್ನು ಕೈಗೊಂಡಿದೆ. ಇದರಲ್ಲಿ ಮುಖ್ಯವಾಗಿ ಎವಿಪಿ (AVP II) ಮತ್ತು ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳು ಸೇರಿವೆ. ಎವಿಪಿ II ಗ್ರೂಪ್ ಹೆಡ್ ವಿಭಾಗದಲ್ಲಿ 4, ಟೆರಿಟರಿ ಹೆಡ್ ವಿಭಾಗದಲ್ಲಿ 17, ಸೀನಿಯರ್ ರಿಲೇಶನ್ಶಿಪ್ ಮ್ಯಾನೇಜರ್ ವಿಭಾಗದಲ್ಲಿ ಗರಿಷ್ಠ 70 ಮತ್ತು ವೆಲ್ತ್ ಸ್ಟ್ರಾಟೆಜಿಸ್ಟ್ ವಿಭಾಗದಲ್ಲಿ 13 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಹ ಅಭ್ಯರ್ಥಿಗಳು ಇಂದಿನಿಂದಲೇ ಅಂದರೆ ಮಾರ್ಚ್ 27 ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು ಮತ್ತು ಆಯಾ ಕ್ಷೇತ್ರದಲ್ಲಿ ಕೆಲಸದ ಅನುಭವ ಹೊಂದಿರುವುದು ಕಡ್ಡಾಯವಾಗಿದೆ. ಮಾರ್ಚ್ 1, 2026 ಕ್ಕೆ ಅನ್ವಯವಾಗುವಂತೆ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು, ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 24 ವರ್ಷದಿಂದ ಗರಿಷ್ಠ 45 ವರ್ಷಗಳವರೆಗೆ ವಯೋಮಿತಿ ಇರುತ್ತದೆ. ಸರ್ಕಾರದ ನಿಯಮದಂತೆ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕ ಮತ್ತು ಪ್ರಮುಖ ದಿನಾಂಕಗಳು:
ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 16 ರೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿ ಶುಲ್ಕದ ವಿಷಯಕ್ಕೆ ಬಂದರೆ, ಸಾಮಾನ್ಯ (General), ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು ರೂ. 850 ಪಾವತಿಸಬೇಕು. ಇನ್ನುಳಿದಂತೆ ಎಸ್ಸಿ, ಎಸ್ಟಿ, ಪಿಡಬ್ಲ್ಯೂಡಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರಿಯಾಯಿತಿ ದರದಲ್ಲಿ ರೂ. 175 ಶುಲ್ಕ ನಿಗದಿಪಡಿಸಲಾಗಿದೆ. ಆನ್ಲೈನ್ ಪಾವತಿ ವಿಧಾನದ ಮೂಲಕವೇ ಶುಲ್ಕವನ್ನು ಪಾವತಿಸಲು ಅವಕಾಶ ನೀಡಲಾಗಿದೆ.
ಅಭ್ಯರ್ಥಿಗಳ ಅಂತಿಮ ಆಯ್ಕೆಯು ಕೇವಲ ಒಂದು ಹಂತಕ್ಕೆ ಸೀಮಿತವಾಗಿರದೆ, ಲಿಖಿತ ಪರೀಕ್ಷೆ, ಸೈಕೋಮೆಟ್ರಿಕ್ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ನಡೆಯಲಿದೆ. ಈ ಎಲ್ಲಾ ಹಂತಗಳಲ್ಲಿ ಯಶಸ್ವಿಯಾದವರಿಗೆ ಬ್ಯಾಂಕ್ ನಿಯಮಾವಳಿಗಳ ಪ್ರಕಾರ ಆಕರ್ಷಕ ವೇತನ ಮತ್ತು ಇತರೆ ಭತ್ಯೆಗಳನ್ನು ನೀಡಲಾಗುತ್ತದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉನ್ನತ ಮಟ್ಟದ ಅಧಿಕಾರಿಯಾಗಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ.
ರಣ್ಬೀರ್ ಕಪೂರ್ (Ranbir Kapoor), ಯಶ್ ಮತ್ತು ಸಾಯಿ ಪಲ್ಲವಿ ನಟಿಸುತ್ತಿರುವ ‘ರಾಮಾಯಣ’ ಸಿನಿಮಾ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಹಾಲಿವುಡ್ನಲ್ಲಿ ನಡೆಯುತ್ತಿದೆ. ಇಂದು (ಮಾರ್ಚ್ 27) ರಾಮನವಮಿ ಆಗಿದ್ದು, ಇಂದು ಸಿನಿಮಾದ ಅಪ್ಡೇಟ್ ಹೊರಬರಬಹುದು ಎಂಬ ನಿರೀಕ್ಷೆ ಅಭಿಮಾನಿಗಳಿಗೆ, ಸಿನಿಮಾ ಪ್ರೇಮಿಗಳಿಗೆ ಇತ್ತು. ಆದರೆ ಹಾಗಾಗಿಲ್ಲ. ಆದರೆ ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದು, ಅಪ್ಡೇಟ್ ಯಾವಾಗ ಬರಲಿದೆ ಎಂದು ತಿಳಿಸಿದ್ದಾರೆ.
ರಾಮನವಮಿಯ ಶುಭ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ‘ರಾಮಾಯಣ’ ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರಾ, ಏಪ್ರಿಲ್ 2ಕ್ಕೆ ಅಂದರೆ ಹನುಮ ಜಯಂತಿಯಂತೆ ರಣಬೀರ್ ಕಪೂರ್ ಅವರ ‘ರಾಮಾಯಣ’ ಸಿನಿಮಾದ ಅಪ್ಡೇಟ್ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ. ಸಿನಿಮಾದ ಅಪ್ಡೇಟ್ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ನಮಿತ್ ಮಲ್ಹೋತ್ರಾ ಹಂಚಿಕೊಂಡಿರುವ ಮಾಹಿತಿಯಿಂದ ಸಹಜಾಗಿಯೇ ಅಭಿಮಾನಿಗಳಿಗೆ ಕಾತರತೆ ಹೆಚ್ಚಾಗಿದೆ.
ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಮಿತ್ ಮಲ್ಹೋತ್ರಾ, ‘ಇದು (ರಾಮಾಯಣ) ನಮ್ಮೆಲ್ಲರಿಗೂ ಸೇರಿದ ಕಥೆ. ನಮ್ಮದೇ ಆದ ‘ರಾಮಾಯಣ’ವನ್ನು ಅದರ ನೈಜತೆ ಮತ್ತು ಭವ್ಯತೆಯೊಂದಿಗೆ, ಅತ್ಯಂತ ಪ್ರಾಮಾಣಿಕತೆಯಿಂದ ತೆರೆಯ ಮೇಲೆ ತರಲು ನಾವು ಪ್ರತಿ ಹೆಜ್ಜೆಯನ್ನು ಭಕ್ತಿ, ಕಾಳಜಿ ಮತ್ತು ಪ್ರಾಮಾಣಿಕತೆಯಿಂದ ಇಡುತ್ತಿದ್ದೇವೆ. ಹನುಮ ಜಯಂತಿಯ ಶುಭ ಸಂದರ್ಭದಲ್ಲಿ, ಅಂದರೆ ಏಪ್ರಿಲ್ 2ರಂದು, ‘ರಾಮ’ನ ಹೊಸ ದೃಶ್ಯದ ತುಣುಕೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ. ಇಷ್ಟು ವರ್ಷಗಳ ನಮ್ಮ ಶ್ರಮವನ್ನು ಜಗತ್ತಿನಾದ್ಯಂತ ಇರುವ ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಅನಾವರಣಗೊಳಿಸುವ ಮೂಲಕ ಈ ಕ್ಷಣವನ್ನು ಆಚರಿಸಲಿದ್ದೇವೆ’ ಎಂದಿದ್ದಾರೆ.
‘ರಾಮಾಯಣ’ ಸಿನಿಮಾದ ಕೆಲ ಕ್ಯಾರೆಕ್ಟರ್ ಟೀಸರ್ಗಳು ಈಗಾಗಲೇ ಬಿಡುಗಡೆ ಆಗಿವೆ. ರಣ್ಬೀರ್ ಅವರ ಪಾತ್ರ, ಯಶ್ ಅವರ ಪಾತ್ರದ ಸಣ್ಣ ವಿಡಿಯೋ ತುಣುಕುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಆದರೆ ಇದೀಗ ಏಪ್ರಿಲ್ 2 ಕ್ಕೆ ಶ್ರೀರಾಮನ ಪಾತ್ರದ ವಿಡಿಯೋ ಅನ್ನು ಬಿಡುಗಡೆ ಮಾಡಲಾಗುತ್ತಿದೆ. ರಣ್ಬೀರ್ ಕಪೂರ್ ಅವರು ರಾಮನ ಪಾತ್ರದಲ್ಲಿ ನಟಿಸಿದ್ದಾರೆ. ಯಶ್ ಅವರದ್ದು ರಾವಣನ ಪಾತ್ರವಾಗಿದ್ದು, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನ ಮಾಡಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದ ಮೊದಲ ಭಾಗ ಇದೇ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ. ಎರಡನೇ ಭಾಗ ಮುಂದಿನ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ. ಸಿನಿಮಾಕ್ಕೆ ಇಬ್ಬರು ಆಸ್ಕರ್ ವಿಜೇತ ಸಂಗೀತ ನಿರ್ದೇಶಕರುಗಳಾಗ ಎಆರ್ ರೆಹಮಾನ್ ಮತ್ತು ಹಾಲಿವುಡ್ನ ಹಾನ್ಸ್ ಜೀಮರ್ ಸಂಗೀತ ನೀಡುತ್ತಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯದ ಮೇಲುಸ್ತುವಾರಿ ಮಾಡುತ್ತಿರುವುದು ವಿಶ್ವ ಶ್ರೇಷ್ಠ ನಿರ್ದೇಶಕರುಗಳಲ್ಲಿ ಒಬ್ಬರಾಗಿರುವ ಕ್ರಿಸ್ಟೊಫರ್ ನೋಲನ್.
ಹಲವು ಆಸ್ಕರ್ಗಳನ್ನು ಗೆದ್ದಿರುವ ಡಿಎನ್ಇಜಿ ವಿಎಫ್ಎಕ್ಸ್ ಸಂಸ್ಥೆಯ ಸಿಇಓ ಆಗಿರುವ ನಮಿತ್ ಮಲ್ಹೋತ್ರಾ ಅವರು ಭಾರಿ ಬಜೆಟ್ನಲ್ಲಿ ‘ರಾಮಾಯಣ’ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಯಶ್ ಅವರು ಸಹ ಬಂಡವಾಳ ಹೂಡಿದ್ದು, ಅವರ ಮಾನ್ಸ್ಟರ್ ಮೈಂಡ್ ಸಹ ಹೂಡಿಕೆ ಮಾಡಿದೆ. ಈ ಸಿನಿಮಾವು IMAX ಫಾರ್ಮ್ಯಾಟ್ನಲ್ಲಿ ಬಿಡುಗಡೆಯಾಗಲಿದ್ದು, ಭಾರತೀಯ ಸಂಸ್ಕೃತಿಯನ್ನು ವಿಶ್ವದಾದ್ಯಂತ ಭವ್ಯವಾಗಿ ಪ್ರಚಾರ ಪಡಿಸುವ ಗುರಿಯನ್ನು ಹೊಂದಿದೆ.
ಬೆಂಗಳೂರು, (ಮಾರ್ಚ್ 27): ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ (Rikki Rai) ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಕಾರು ಡ್ರಿಫ್ಟಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ರಿಕ್ಕಿ ವಿರುದ್ಧ ಇದೀಗ ಹೊಸ ಮತ್ತೊಂದು ವಂಚನೆ ಕೇಸ್ ದಾಖಲಾಗಿದೆ. ಹೌದು…ಬೆಂಗಳೂರಿನ ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಡ್ರಿಫ್ಟಿಂಗ್ ಮಾಡಿದ್ದ ಲ್ಯಾಂಬೋರ್ಗಿನಿ ಕಾರನ್ನ ರಿಜಿಸ್ಟರ್ ಮಾಡಿಸಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ದೆಹಲಿಯಲ್ಲಿ ಖರೀದಿಸಿದ್ದ ಸುಮಾರು ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರು ಕರ್ನಾಟಕದಲ್ಲಿ ರಿಜಿಸ್ಟರ್ ಮಾಡಿಸಿಲ್ಲ. ಹಾಗೇ RTO ಹರಾಜಿನಲ್ಲಿ ಫ್ಯಾನ್ಸಿ ನಂಬರ್ ಖರೀದಿ ಮಾಡಿ ಟ್ಯಾಕ್ಸ್ ಕಟ್ಟದೇ ವಂಚನೆ ಮಾಡಿದ್ದಾರೆ. ಈ ಸಂಬಂಧ ರಿಕ್ಕಿ ರೈ ವಿರುದ್ಧ ವಂಚನೆ ಕೇಸ್ ದಾಖಲಾಗಿದೆ.
ಬೆಂಗಳೂರಿನ ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಸುಮಾರು ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರಿನಿಂದ ಹಲವು ಬಾರಿ ಡ್ರಿಫ್ಟಿಂಗ್ ನಡೆಸಿರುವ ವಿಡಿಯೋಗಳು ವೈರಲ್ ಆಗಿದ್ದವು. ಸ್ಥಳೀಯರೊಬ್ಬರು ಈ ಪುಂಡಾಟದ ದೃಶ್ಯವನ್ನು ಸೆರೆ ಹಿಡಿದಿದ್ದರು. ಅದು ಮಾಜಿ ಡಾನ್ ಮುತ್ತಪ್ಪ ರೈ ಅವರ ಮಗ ರಿಕ್ಕಿ ರಾಯ್ ಚಲಾಯಿಸುತ್ತಿರುವ ಕಾರು ಎಂದು ತಿಳಿದು ಬಂದಿತ್ತು. ಅಲ್ಲಿಗೆ ಬರುವ ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿರುವುದಾಗಿ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಈ ಅಪಾಯಕಾರಿ ಸ್ಟಂಟ್ ವಿರುದ್ಧ ಆಕ್ರೋಶದ ಬಳಿಕ ಪೊಲೀಸರು ರಿಕ್ಕಿ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡು ಕಾರು ಸೀಜ್ ಮಾಡಿದ್ದರು. ಆದ್ರೆ, ಹೈಕೋರ್ಟ್, ಕಾರನ್ನು ಮಾಲೀಕರಿಗೆ ಹಿಂದಿರುಗಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಇದೀಗ ಕಾರಿನ ಮತ್ತೊಂದು ಕಳ್ಳಾಟ ಬಟಾಬಯಲಾಗಿದ್ದು, ರಿಕ್ಕಿ ರೈ ಮೇಲೆ ವಂಚನೆ ಕೇಸ್ ದಾಖಲಾಗಿದೆ.
ದೆಹಲಿಯಲ್ಲಿ ಖರೀದಿಸಿದ್ದ ಕಾರು ರಿಜಿಸ್ಟರ್ ಮಾಡಿಸಿಲ್ಲ. RTO ಹರಾಜಿನಲ್ಲಿ ಫ್ಯಾನ್ಸಿ ನಂಬರ್ ಖರೀದಿ ಮಾಡಿ ಟ್ಯಾಕ್ಸ್ ಕಟ್ಟದೇ ಕಾರಿಗೆ ಅಳವಡಿಕೆ ಮಾಡಿದ್ದಾರೆ. ಈ ಬಗ್ಗೆ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರ ದಾಖಲೆ ಪರಿಶೀಲನೆ ವೇಳೆ ಅಕ್ರಮ ಬಯಲಿಗೆ ಬಂದಿದೆ. ಡ್ರಿಫ್ಟಿಂಗ್ ಮಾಡಿದ ಮೊದಲ ದಿನ ಕಾರಿನ ನಂಬರ್ ಪತ್ತೆಯಾಗಿದ್ದರೂ ಸಹ ಕಾರಿನ ಮಾಲೀಕರು ಪತ್ತೆಯಾಗಿರಲಿಲ್ಲ. ದೆಹಲಿಯಲ್ಲಿ ಲ್ಯಾಂಬೋರ್ಗಿನಿ ಕಾರು ಖರೀದಿ ಮಾಡಿರೋ ರಿಕ್ಕಿ ರೈ, ಅದಕ್ಕೆ ಹೊಸ ಕಲರ್ ಮಾಡಿಸಿದ್ದರು.ಆದ್ರೆ ಇಲ್ಲಿವರೆಗೂ ಅದನ್ನು ಬೆಂಗಳೂರಿನಲ್ಲಿ ರಿಜಿಸ್ಟರ್ ಮಾಡಿಸಿಲ್ಲ. ಜೊತೆಗೆ ತನ್ನ ಕಾರಿಗೆ ka 05 NR 0009 ನಂಬರ್ ನ ಫ್ಯಾನ್ಸಿ ನಂಬರ್ ಪಡೆದಿದ್ದಾರೆ. ಅದನ್ನು ಕೂಡ ರಿಜಿಸ್ಟರ್ ಮಾಡಿಸಿ ಅದಕ್ಕೆ ಟ್ಯಾಕ್ಸ್ ಕಟ್ಟಬೇಕಿದೆ. ಆದ್ರೆ, ಅದನ್ನೂ ಸಹ ಕಟ್ಟಿಲ್ಲ.
ರಿಕ್ಕಿ ರೈ ವಿರುದ್ಧ ವಂಚನೆ ಕೇಸ್ ದಾಖಲು
ಲ್ಯಾಂಬೋರ್ಗಿನಿ ಕಾರು ಅಗಿರೋ ಹಿನ್ನೆಲೆಯಲ್ಲಿ ರಿಜಿಸ್ಟರ್ ಗೆ ಲಕ್ಷಾಂತರ ರೂಪಾಯಿ ಟ್ಯಾಕ್ಸ್ ಕಟ್ಟಿಬೇಕಿತ್ತು.
ಆದರೆ ಇದ್ಯಾವುದೂ ಮಾಡದೇ ನಿಯಮ ಉಲ್ಲಂಘನೆ ಮಾಡಿ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ನೀಡಿದ ದೂರಿನ ಅನ್ವಯ ಕಬ್ಬನ್ ಪಾರ್ಕ್ ಕಾನೂನು ಸುವ್ಯವಸ್ಥೆ ಠಾಣೆಯಲ್ಲಿ ಬಿ ಎನ್ ಎಸ್ 318(4) 304(2) 341 ಅಡಿಯಲ್ಲಿ ಕೇಸ್ ದಾಖಲಾಗಿದೆ.
ಈ ನಡುವೆ ಅನಿಲ್ ಕುಂಬ್ಳೆ ಸರ್ಕಲ್ ನಲ್ಲಿ ಡ್ರಿಫ್ಟಿಂಗ್ ಕೇಸ್ ನಲ್ಲಿ ಸ್ಥಳ ಪರಿಶೀಲನೆಗೆ ಪೊಲೀಸರು ನೀಡಿದ
ನೋಟಿಸ್ ಗೂ ರಿಕ್ಕಿ ರೈ ಯಾವುದೇ ಉತ್ತರ ನೀಡದೇ ನಿರ್ಲಕ್ಷ್ಯ ಮಾಡಿದ್ದಾರೆ. ಇದೀಗ ವಂಚನೆ ಕೇಸ್ ಸಂಬಂಧ
ಈಗ ಕಾನೂನು ಸುವ್ಯವಸ್ಥೆ ಪೊಲೀಸರು ಸಹ ತನಿಖೆ ನಡೆಸುತ್ತಿದ್ದು, ಸದ್ಯ ಕಾರು ಸಂಚಾರಿ ಪೊಲೀಸರ ವಶದಲ್ಲಿದೆ.
ಐಪಿಎಲ್ನಲ್ಲಿ ಸಾಕಷ್ಟು ಹೆಸರು ಮಾಡಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾರಾಟ ಇತ್ತೀಚೆಗೆ ನಡೆದಿದೆ. 16,600 ಕೋಟಿ ರೂಪಾಯಿಗೆ ಈ ಡೀಲ್ ನಡೆದಿದೆ. ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟವು ಇದನ್ನು ಖರೀದಿ ಮಾಡಿದೆ. ಬಿಸಿಸಿಐ ಒಪ್ಪಿಗೆ ಬಳಿಕ ತಂಡ ಅಧಿಕೃತವಾಗಿ ಆದಿತ್ಯ ಬಿರ್ಲಾ ಗ್ರೂಪ್ ತೆಕ್ಕೆಗೆ ಸೇರಲಿದೆ. ಈ ತಂಡವನ್ನು ಮೊದಲು ಖರೀದಿ ಮಾಡಿದ್ದು ಮಲ್ಯ. ಹಾಗಾದರೆ, ಆರ್ಸಿಬಿ ತಂಡದ ಮಾರಾಟದಿಂದ ಅವರಿಗೆ ಸಿಕ್ಕ ಹಣ ಎಷ್ಟು? ಆ ಬಗ್ಗೆ ಇಲ್ಲಿದೆ ವಿವರ.
ಮಲ್ಯ ಅವರು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್ಎಲ್) ಒಡೆತನ ಹೊಂದಿದ್ದರು. ರಾಯಲ್ ಚಾಲೆಂಜ್ ವಿಸ್ಕಿ ಬ್ರ್ಯಾಂಡ್ ಪ್ರಚಾರಕ್ಕಾಗಿ ವಿಜಯ್ ಮಲ್ಯ ಅವರು 2008ರಲ್ಲಿ 446 ಕೋಟಿ ರೂಪಾಯಿ ಕೊಟ್ಟು ಐಪಿಎಲ್ ತಂಡವನ್ನು ಖರೀದಿ ಮಾಡಿದರು. ಈ ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದೇ ಹೆಸರಿಟ್ಟರು. ಕ್ರಿಕೆಟ್ ಕ್ಷೇತ್ರಕ್ಕೂ, ವಿಸ್ಕಿ ಬ್ರ್ಯಾಂಡ್ ಪ್ರಚಾರಕ್ಕೂ ಏನು ಸಂಬಂಧ ಎಂದು ಎಲ್ಲರೂ ನಕ್ಕರು. ಆದರೆ, ಊಹೆ ತಪ್ಪಾಗಿತ್ತು. ಆರ್ಸಿಬಿ ತಂಡ ಬಹುಬೇಗನೆ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿತು.
2012ರಲ್ಲಿ ಬ್ರಿಟಿಷ್ ಮೂಲದ ಡಿಯಾಜಿಯೋ ಕಂಪನಿ ಮಲ್ಯ ಅವರ ಯುಎಸ್ಎಲ್ನ ಶೇ.53.4 ಷೇರನ್ನು ಖರೀದಿ ಮಾಡಿತು. ಈ ಡೀಲ್ 11,166 ಕೋಟಿ ರೂಪಾಯಿಗೆ ನಡೆಯಿತು. ಆರಂಭದಲ್ಲಿ ಮಲ್ಯಗೆ 3,635 ಕೋಟಿ ರೂಪಾಯಿ ಸಿಕ್ಕಿತು. 2013-14ರ ಅವಧಿಯಲ್ಲಿ ಮಲ್ಯ ಅವರ ಕಿಂಗ್ಫಿಶರ್ ಏರ್ಲೈನ್ಸ್ ಮುಳಗಿ ಹೋಯಿತು. 9000 ಕೋಟಿ ರೂಪಾಯಿ ಸಾಲವನ್ನು ಹೊಂದಿದ್ದರು. ಯುಎಸ್ಎಲ್ ಮಾರಾಟದಿಂದ ಬಂದ ಹಣವನ್ನು (1,225 ಕೋಟಿ ರೂಪಾಯಿ) ಮಲ್ಯ ಎಫ್ 1ತಂಡ, ಏರ್ಲೈನ್ಸ್ ಹಾಗೂ ವಿದೇಶಿ ಖಾತೆಗೆ ವರ್ಗಾವಣೆ ಮಾಡಿದ್ದರು.
I would like to heartily congratulate the new owners of RCB. I wish them the very best and Godspeed with the most valuable IPL franchise. When I bought the franchise in 2008 for INR 450 crores, most people laughed at me and criticised my investment as a vanity project. Behind my…
ಡಿಯಾಜಿಯೋ ಯುಎಸ್ಎಲ್ ಸ್ಟೇಕ್ಸ್ನ ಶೇ.56ಕ್ಕೆ ಏರಿಕೆ ಮಾಡಿಕೊಂಡಿತು. ಆ ಸಂದರ್ಭದಲ್ಲಿ ಮಲ್ಯ ಅವರು ಅಧ್ಯಕ್ಷ ಸ್ಥಾನದಿಂದ ಕೆಳಕ್ಕೆ ಇಳಿದರು. ಹೆಚ್ಚುವರಿ ಷೇರುಗಳಿಗಾಗಿ ಅವರಿಗೆ 515 ಕೋಟಿ ರೂಪಾಯಿ ಪಾವತಿಸಲಾಯಿತು.2016ರಲ್ಲಿ ಮಲ್ಯ ಅವರು 17 ಸಾವಿರ ಕಿಂಗ್ಫಿಶರ್ ಸಾಲದೊಂದಿಗೆ ಇಂಗ್ಲೆಂಡ್ಗೆ ಹಾರಿದರು. ಈ ವೇಳೆ ಯುಎಸ್ಎಲ್ ಸಂಪೂರ್ಣವಾಗಿ ಡಿಯಾಜಿಯೋ ತೆಕ್ಕೆಗೆ ಹೋಯಿತು. ಆ ಸಂದರ್ಭದಲ್ಲಿ ಆರ್ಸಿಬಿ ವ್ಯಾಲ್ಯೂ 1,200 ಕೋಟಿ ರೂಪಾಯಿ ಎಂದು ಪರಿಗಣಿಸಿ ಡಿಯಾಜಿಯೋ ಸಂಪೂರ್ಣವಾಗಿ ತಮ್ಮ ತೆಕ್ಕೆಗೆ ತೆಗೆದುಕೊಂಡಿತು. ಈ ಮೂಲಕ ಮಲ್ಯ ಅವರ ಬಳಿ ಯಾವುದೇ ಷೇರು ಉಳಿದುಕೊಂಡಿರಲಿಲ್ಲ.
2026ರಲ್ಲಿ ಡಿಯಾಜಿಯೋ 16,660 ಕೋಟಿ ರೂಪಾಯಿಗೆ ಐಪಿಎಲ್ ತಂಡವನ್ನು ಮಾರಾಟ ಮಾಡಿತು. ಇದರಿಂದ ಯುಎಸ್ಎಲ್ಗೆ ಲಾಭ ಆಗಿದೆ. ಮಲ್ಯ ಷೇರು ಇದರಲ್ಲಿ ಇಲ್ಲದ ಕಾರಣ ಅವರಿಗೆ ಯಾವುದೇ ಹಣ ಸಿಕ್ಕಿಲ್ಲ.
ನವದೆಹಲಿ, ಮಾರ್ಚ್ 27: ಹಾರ್ಮುಜ್ ಜಲಸಂಧಿಯಿಂದ ಎಲ್ಪಿಜಿ ಹೊತ್ತು ಒಂದೊಂದೇ ಭಾರತೀಯ ಎಲ್ಪಿಜಿ ಟ್ಯಾಂಕರ್ಗಳು ಹೊರಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅನಿಲ ಕೊರತೆಯ ಸಮಸ್ಯೆ ಸ್ವಲ್ಪ ಕಡಿಮೆ ಆಗಿದೆ. ಇದರ ಪರಿಣಾಮವಾಗಿ ಕೈಗಾರಿಕೆ ಮತ್ತಿತರ ಗೃಹೇತರ ಕ್ಷೇತ್ರಗಳಿಗೆ ಎಲ್ಪಿಜಿ ಪೂರೈಕೆಯನ್ನು ಹಂತ ಹಂತವಾಗಿ ಹೆಚ್ಚಿಸುತ್ತಿದೆ. ಪೆಟ್ರೋಲಿಯಂ ಸಚಿವಾಲಯ ಇವತ್ತು ಹೊರಡಿಸಿದ ಪ್ರಕಟಣೆಯಲ್ಲಿ ಗೃಹೇತರ ಎಲ್ಪಿಜಿ ಹಂಚಿಕೆಯನ್ನು ಶೇ. 20ರಷ್ಟು ಹೆಚ್ಚಿಸುವ ಪ್ರಸ್ತಾವ ಇರುವುದಾಗಿ ತಿಳಿಸಿದೆ. ಈ ಹೆಚ್ಚುವರಿ ಶೇ. 20 ಅನ್ನು ನಿರ್ದಿಷ್ಟ ಕ್ಷೇತ್ರಗಳಿಗೆ ಉದ್ದೇಶಿಸಿ ಹಂಚಿಕೆ ಮಾಡಲಾಗುತ್ತಿದೆ.
ಇದರೊಂದಿಗೆ, ಸರ್ಕಾರವು ಗೃಹೇತರ ಎಲ್ಪಿಜಿ ಹಂಚಿಕೆಯ ಮಟ್ಟ ಶೇ. 70ಕ್ಕೆ ಏರಿದೆ. ಅಂದರೆ, ಬಿಕ್ಕಟ್ಟು ಶುರುವಾಗುವ ಮುನ್ನ ಮಾಡಲಾಗುತ್ತಿದ್ದ ಹಂಚಿಕೆಗೆ ಹೋಲಿಸಿದರೆ, ಅದರ ಶೇ. 70ರ ಪೂರೈಕೆ ಮಟ್ಟ ಮುಟ್ಟಲಾಗಿದೆ. ಬಿಕ್ಕಟ್ಟು ಉದ್ಭವವಾದಾಗ ಸರ್ಕಾರವು ಹಂಚಿಕೆಯನ್ನು ಶೇ. 40ಕ್ಕೆ ಮೊಟಕುಗೊಳಿಸಿತ್ತು. ನಂತರ, ಪಿಎನ್ಜಿ ಸೌಕರ್ಯ ಅಭಿವೃದ್ಧಿಗೆ ಮುಂದಾಗುವ ರಾಜ್ಯಗಳಿಗೆ ಹಂಚಿಕೆಯನ್ನು ಶೇ. 10ರಷ್ಟು ಹೆಚ್ಚಿಸಿತು. ಇದೀಗ ಹೆಚ್ಚುವರಿ ಶೇ. 20 ಅನ್ನು ಹಂಚಿಕೆ ಮಾಡಿದೆ.
ಹೆಚ್ಚುವರಿ ಶೇ. 20 ಎಲ್ಪಿಜಿ ಈ ಕ್ಷೇತ್ರಗಳಿಗೆ ಸಲ್ಲಿಕೆ
ನೈಸರ್ಗಿಕ ಅನಿಲ ಬಳಕೆ ಸಾಧ್ಯವಿಲ್ಲದ, ಮತ್ತು ಎಲ್ಪಿಜಿ ಬಳಕೆ ಅನಿವಾರ್ಯವಾಗಿರುವ ಉದ್ಯಮಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ಎಲ್ಪಿಜಿ ಹಂಚಿಕೆ ಮಾಡಲಾಗಿದೆ. ಕಾರ್ಮಿಕರು ಹೆಚ್ಚು ಇರುವ ಮತ್ತು ಇತರ ಉದ್ದಿಮೆಗಳಿಗೆ ಪೂರಕವಾಗಿರುವಂತಹ ಉಕ್ಕು, ಆಟೊಮೊಬೈಲ್, ಟೆಕ್ಸ್ಟೈಲ್ ಡೈ, ಕೆಮಿಕಲ್, ಪ್ಲಾಸ್ಟಿಕ್ ಉದ್ಯಮಗಳಿಗೆ ಹಂಚಿಕೆ ಮಾಡಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಎಲ್ಪಿಜಿ ಅತ್ಯಗತ್ಯವಾಗಿರುವ ಕೈಗಾರಿಕೆಗಳಿಗೆ ಮೊದಲ ಪ್ರಾಶಸ್ತ್ಯ ಇರುತ್ತದೆ.
ಪೈಪ್ಡ್ ಗ್ಯಾಸ್ ಅಥವಾ ಪಿಎನ್ಜಿ ಮತ್ತು ಎಲ್ಎನ್ಜಿ ನೈಸರ್ಗಿಕ ಅನಿಲಗಳಾಗಿವೆ. ಇವುಗಳ ಅರ್ಧಕ್ಕಿಂತ ಹೆಚ್ಚು ಉತ್ಪಾದನೆ ಸ್ಥಳೀಯವಾಗಿ ಆಗುತ್ತದೆ. ಆಮದು ಮೇಲಿನ ಅವಲಂಬನೆ ಕಡಿಮೆ. ಅತ್ತ, ಎಲ್ಪಿಜಿ ಪೆಟ್ರೋಲಿಯಂ ಅನಿಲವಾಗಿದೆ. ಇದರ ಅಗತ್ಯದಲ್ಲಿ ಹೆಚ್ಚಿನದನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಅದರಲ್ಲೂ ಗಲ್ಫ್ ರಾಷ್ಟ್ರಗಳ ಮೇಲೆ ಅವಲಂಬನೆ ಹೆಚ್ಚು. ಈಗ ಗಲ್ಫ್ನಲ್ಲೇ ಬಿಕ್ಕಟ್ಟು ಉದ್ಭವವಾಗಿರುವುದರಿಂದ ಭಾರತಕ್ಕೆ ಎಲ್ಪಿಜಿ ಸಂಕಟ ಹೆಚ್ಚಾಗಿದೆ.
ಪಾಕಿಸ್ತಾನ ಪ್ರೀಮಿಯರ್ ಲೀಗ್ ಸದ್ಯ ಚರ್ಚೆಯಲ್ಲಿದೆ. ಈ ಸೀಸನ್ ಅಲ್ಲಿ ಫ್ಯಾನ್ಸ್ಗೆ ಎಂಟ್ರಿ ಇಲ್ಲ. ಕಾಸ್ಟ್ ಕಟಿಂಗ್ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಇಸ್ರೇಲ್, ಅಮೆರಿಕ-ಇರಾನ್ ಯುದ್ಧದಿಂದ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ಕಾಣಿಸಿದ್ದು, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬೆನ್ನಲ್ಲೇ ಒಂದು ಪಿಎಸ್ಎಲ್ ಎಷ್ಟು ಬಡ ಲೀಗ್ ಎಂಬುದು ಸಾಬೀತಾಗಿದೆ. ಆಟಗಾರರ ಬೆವರಿಗೆ ಶರ್ಟ್ ಬಣ್ಣ ಬಿಟ್ಟುಕೊಂಡಿದೆ.
2008ರ ಐಪಿಎಲ್ನಲ್ಲಿ ಪಾಕ್ ಆಟಗಾರರು ಕೂಡ ಇದ್ದರು. ಆದರೆ, ಅದೇ ವರ್ಷ ಪಾಕ್ ಬೆಂಬಲಿತ ಉಗ್ರರು ಮುಂಬೈ ಮೇಲೆ ದಾಳಿ ಮಾಡಿದ ಬಳಿಕ ಪಾಕಿಸ್ತಾನ ಆಟಗಾರರನ್ನು ಐಪಿಎಲ್ನಿಂದ ಹೊರಕ್ಕೆ ಇಡಲಾಯಿತು. ವರ್ಷ ಕಳೆದಂತೆ ಐಪಿಎಲ್ ತನ್ನ ಖ್ಯಾತಿ ಹೆಚ್ಚಿಸಿಕೊಳ್ಳುತ್ತಾ ಹೋಯಿತು. ಈ ಸಂದರ್ಭದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುತ್ತಿರಲಿಲ್ಲ. ಈ ಅವಧಿಯಲ್ಲಿ ಪಾಕ್ ಆಟಗಾರರು ಖಾಲಿ ಕೂರಬೇಕಿತ್ತು ಅಥವಾ ಜಿಂಬಾಬ್ವೆ ಜೊತೆ ಸರಣಿ ಆಡಬೇಕಿತ್ತು. ಹೀಗಾಗಿ, 2016ರಲ್ಲಿ ಪಾಕಿಸ್ತಾನ್ ಸೂಪರ್ ಲೀಗ್ ಆರಂಭಿಸಲಾಯಿತು.
ಐಪಿಎಲ್ನಲ್ಲಿ ಅವಕಾಶ ಸಿಗದ ಕೆಲ ವಿದೇಶಿ ಆಟಗಾರರು ಹಾಗೂ ಪಾಕಿಸ್ತಾನ ಆಟಗಾರರು ಇದರಲ್ಲಿ ಆಡುತ್ತಿದ್ದಾರೆ. ವರ್ಷ ಕಳೆದಂತೆ ಪಾಕಿಸ್ತಾನ ಸೂಪರ್ ಲೀಗ್ ಸಂಕಷ್ಟ ಅನುಭವಿಸುತ್ತಿದೆ. ಈ ಬಾರಿ ಫ್ಯಾನ್ಸ್ಗಳಿಗೂ ಅವಕಾಶ ನೀಡಿಲ್ಲ. ಹೀಗಿರುವಾಗಲೇ ಆಟಗಾರರಿಗೆ ನೀಡಲಾದ ಜೆರ್ಸಿ ಗುಣಮಟ್ಟದ ಬಗ್ಗೆ ಚರ್ಚೆ ನಡೆದಿದೆ.
Hands got pink. Ball got pink due to Jersey leaving its colour. Man, PSL is full comedy. I know they are gareeb but this gareebpic.twitter.com/WsI96OdeD2
ಮಾರ್ಚ್ 26ರ ಉದ್ಘಾಟನಾ ಪಂದ್ಯದಲ್ಲಿ ಲಾಹೋರ್ ಹಾಗೂ ಹೈದರಾಬಾದ್ ಕಿಂಗ್ಸ್ಮನ್ ಮುಖಾಮುಖಿ ಆಗಿದ್ದವು. ಆಗ ಇದ್ದಕ್ಕಿಂದ ಬಿಳಿ ಬಾಲ್ ಬಣ್ಣ ಬದಲಿಸಿದೆ. ಇದನ್ನು ನೋಡಿ ಅಂಪೈರ್ಗಳು ಶಾಕ್ ಆದರು. ಆ ಬಳಿಕ ತಿಳಿದು ಬಂದಿದ್ದೇನೆಂದರೆ ಬಾಲ್ನ ಆಟಗಾರರು ಬಟ್ಟೆಗೆ ಉಜ್ಜಿದಾಗ ಅದು ಬಣ್ಣ ಬಿಟ್ಟಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಟ್ರೋಲ್ ಆಗುತ್ತಿದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಬೆಂಗಳೂರು, (ಮಾರ್ಚ್ 27): ಆನ್ಲೈನ್ ಫುಡ್ ಡೆಲಿವರಿ (Online Food) ಸೇವೆಗಳಲ್ಲಿ ಡೆಲಿವರಿ ಚಾರ್ಜ್, ಪ್ಯಾಕಿಂಗ್ ಶುಲ್ಕ, ಪ್ಲಾಟ್ಫಾರ್ಮ್ ಫೀ, ಜಿಎಸ್ಟಿ ಸೇರಿದಂತೆ ಹಲವು ವಿಧದ ಹೆಚ್ಚುವರಿ ಶುಲ್ಕಗಳು ಸೇರಿಸುವುದು ಸಾಮಾನ್ಯವಾಗಿದೆ. ಆದರೆ ಕೆಲವೊಮ್ಮೆ ಈ ಶುಲ್ಕಗಳು ಆಹಾರದ ಮೂಲ ಬೆಲೆಯನ್ನೇ ಮೀರಿ ಹೋಗುತ್ತಿರುವುದರಿಂದ ಗ್ರಾಹಕರ ಅಸಮಾಧಾನ ಹೆಚ್ಚುತ್ತಿದೆ. ಅದು ಇದೀಗ ಮಾಜಿ ಸಂಸದೆ ಸುಮಲತಾ ಅಂಬರೀಶ್ (Sumalath Ambareesh) ಅವರಿಗೂ ಅನುಭವವಾಗಿದೆ. ಹೌದು…ತಾವು ಆರ್ಡರ್ ಮಾಡಿದ್ದ ಪೊಂಗಲ್ ದರಕ್ಕಿಂತ ಹೆಚ್ಚು ಇತರೆ ಶುಲ್ಕು ವಿಧಿಸಿದ ಸ್ವಿಗ್ಗಿ (Swiggy) ವಿರುದ್ಧ ಸುಮಲತಾ ಅಂಬರೀಶ್ ಅಸಮಾಧಾನ ಹೊರಹಾಕಿದ್ದು, ಆಹಾರದ ಮೂಲ ಬೆಲೆಗೆ ಹೋಲಿಸಿದರೆ ಅತಿಯಾದ ಡೆಲಿವರಿ ಹಾಗೂ ಇತರೆ ಶುಲ್ಕಗಳನ್ನು ವಿಧಿಸಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.
115 ರೂ. ಪೊಂಗಲ್ಗೆ 158 ರೂ ಶುಲ್ಕ
ಸುಮಲತಾ ಅಂಬರೀಶ್ ಅವರು ರಾಮೇಶ್ವರಂ ಕೆಫೆಯಿಂದ ಪೊಂಗಲ್ ಆರ್ಡರ್ ಮಾಡಿದ್ದರು. ಆರ್ಡರ್ ಮಾಡಿದ ಆಹಾರದ ಮೂಲ ಬೆಲೆ 115 ರೂಪಾಯಿ ಮಾತ್ರವಾಗಿದ್ದರೂ, ಸ್ವಿಗ್ಗಿ ಐಟಂ ಹಾಗೂ ಇತರೆ ಶುಲ್ಕ ಸೇರಿಸಿ ಒಟ್ಟು 273 ರೂ. ವಸೂಲಿ ಮಾಡಿದೆ. ಅಂದರೆ ಮೂಲ 115 ರೂಪಾಯಿಯ ಪೊಂಗಲ್ಗೆ 158 ರೂ. ಶುಲ್ಕ ವಿಧಿಸಲಾಗಿದೆ. ಇದರಿಂದ ಆಹಾರದ ಬೆಲೆಯಿಗಿಂತಲೂ ಹೆಚ್ಚು ಮೊತ್ತವನ್ನು ಡೆಲಿವರಿ ಹಾಗೂ ಇತರೆ ಶುಲ್ಕಗಳ ಹೆಸರಿನಲ್ಲಿ ಪಡೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಸಿದ್ದಾರೆ.
ಈ ಕುರಿತು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, 115 ರೂಪಾಯಿಯ ಪೊಂಗಲ್ಗೆ 273 ಯಾಕೆ? ಆಹಾರದ ಬೆಲೆಯಿಗಿಂತ ಡಬಲ್ ಚಾರ್ಜ್ ಮಾಡುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ಗ್ರಾಹಕರಿಗೆ ಪಾರದರ್ಶಕ ಬೆಲೆ ಮಾಹಿತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
Good morning !
Had placed an order on #Swiggy & noticed that they charge more than double the order’s actual price . Is this common practise/allowed/ethical ?? I was charged 273 Rs for a 115 Rs item !
— Sumalatha Ambareesh ಸುಮಲತಾ ಅಂಬರೀಶ್ (@sumalathaA) March 27, 2026
ಸುಮಲತಾ ಅವರ ಪೋಸ್ಟ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರು ತಮ್ಮದೇ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ. ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದಾಗಿ ತಿಳಿಸಿದ್ದಾರೆ. ಕೆಲವರು ಫುಡ್ ಡೆಲಿವರಿ ಕಂಪನಿಗಳು ಪಾರದರ್ಶಕ ದರ ವ್ಯವಸ್ಥೆಯನ್ನು ಅನುಸರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಯೋಧ್ಯೆ ಸೇರಿದಂತೆ ದೇಶಾದ್ಯಂತ ಶ್ರೀ ರಾಮನವಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನೂತನ ರಾಮ ಮಂದಿರದಲ್ಲಿ ಬಾಲರಾಮಲಲ್ಲಾನ ವಿಗ್ರಹದ ಹಣೆಯ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಸ್ಪರ್ಶಿಸಿ, ಸೂರ್ಯ ತಿಲಕವಿಟ್ಟಂತೆ ಭಾಸವಾದ ಐತಿಹಾಸಿಕ ಕ್ಷಣಕ್ಕೆ ಅಯೋಧ್ಯೆ ಸಾಕ್ಷಿಯಾಯಿತು. ಈ ಅದ್ಭುತ ದೃಶ್ಯದ ವಿಡಿಯೋ ಇಲ್ಲಿದೆ ನೋಡಿ
ರಾಮಲಲ್ಲಾನ ವಿಗ್ರಹದ ಹಣೆಗೆ ಸೂರ್ಯನ ಕಿರಣಗಳು ಬೀಳುವಂತೆ ವಿಶೇಷ ವಾಸ್ತು ವಿನ್ಯಾಸ ಮಾಡಲಾಗಿದೆ. ಐಐಟಿ, ಭಾರತೀಯ ತಂತ್ರಜ್ಞಾನ ಸಂಸ್ಥೆ ವಿಜ್ಞಾನಿಗಳು ಮತ್ತು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ನ ತಜ್ಞರು ಜಂಟಿಯಾಗಿ ಈ ಆಪ್ಟೋ-ಮೆಕ್ಯಾನಿಕಲ್ ಸಿಸ್ಟಮ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಮಂದಿರದ ಶಿಖರದ ಮೇಲ್ಭಾಗದಲ್ಲಿ ಅಳವಡಿಸಲಾಗಿರುವ ಕನ್ನಡಿಗಳು ಮತ್ತು ಲೆನ್ಸ್ಗಳ ಮೂಲಕ ಸೂರ್ಯನ ಬೆಳಕು ಗರ್ಭಗುಡಿಯನ್ನು ಪ್ರವೇಶಿಸಿ, ಸರಿಯಾಗಿ ಮಧ್ಯಾಹ್ನ 12 ಗಂಟೆಗೆ ಬಾಲರಾಮನ ಹಣೆಯ ಮೇಲೆ 58 ಮಿಲಿಮೀಟರ್ ಗಾತ್ರದ ತಿಲಕವಾಗಿ ಗೋಚರಿಸಿತು.
51 ಇಂಚು ಎತ್ತರದ ಬಾಲರಾಮನ ವಿಗ್ರಹವನ್ನು ನಮ್ಮ ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕಪ್ಪು ಶಿಲೆಯಲ್ಲಿ ಕೆತ್ತಿದ್ದಾರೆ. ವಾಲ್ಮೀಕಿ ರಾಮಾಯಣದ ಪ್ರಕಾರ, ಶ್ರೀರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಮಧ್ಯಾಹ್ನ 12 ಗಂಟೆಗೆ ಜನಿಸಿದನು ಎಂಬ ಪ್ರತೀತಿಯ ಹಿನ್ನೆಲೆಯಲ್ಲಿ, ಪ್ರತಿ ವರ್ಷ ರಾಮನವಮಿಯಂದು ಇದೇ ರೀತಿ ಸೂರ್ಯ ತಿಲಕವು ಗೋಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಇದು ಆಧುನಿಕ ವಿಜ್ಞಾನ ಮತ್ತು ಪ್ರಾಚೀನ ಸಂಪ್ರದಾಯದ ಅದ್ಭುತ ಸಂಗಮಕ್ಕೆ ಸಾಕ್ಷಿಯಾಗಿದೆ.