All posts by nagaraj11081993

IND vs ZIM: ಜಿಂಬಾಬ್ವೆ ತೆರಳಲಿದೆ ಟೀಮ್ ಇಂಡಿಯಾ: ಬಿಸಿಸಿಐಯಿಂದ ಟಿ20 ಸರಣಿಯ ವೇಳಾಪಟ್ಟಿ ಪ್ರಕಟ

IND vs ZIM: ಜಿಂಬಾಬ್ವೆ ತೆರಳಲಿದೆ ಟೀಮ್ ಇಂಡಿಯಾ: ಬಿಸಿಸಿಐಯಿಂದ ಟಿ20 ಸರಣಿಯ ವೇಳಾಪಟ್ಟಿ ಪ್ರಕಟ

ಬೆಂಗಳೂರು (ಏ. 01): ಭಾರತ ಕ್ರಿಕೆಟ್ ತಂಡದ (Indian Cricket Team) ಆಟಗಾರರು ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಬಿಸಿಸಿಐ, ಭಾರತ ತಂಡವು ಜುಲೈ 2026 ರಲ್ಲಿ ಮೂರು ಪಂದ್ಯಗಳ ಟಿ20ಐ ಸರಣಿಗಾಗಿ ಜಿಂಬಾಬ್ವೆಗೆ ಪ್ರವಾಸ ಕೈಗೊಳ್ಳಲಿದೆ ಎಂದು ಘೋಷಿಸಿದೆ. ಇದು 2024 ರಲ್ಲಿ ಐದು ಪಂದ್ಯಗಳನ್ನು ಆಡಿದ ನಂತರ ಅವರ ಮೊದಲ ಭೇಟಿಯಾಗಿದೆ. ಸರಣಿಯು ಜುಲೈ 23 ರ ಗುರುವಾರ ಹರಾರೆಯಲ್ಲಿ ಮೊದಲ ಟಿ20 ಯೊಂದಿಗೆ ಆರಂಭಗೊಳ್ಳಲಿದೆ. ಜುಲೈ 19 ರಂದು ಮುಕ್ತಾಯಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ವೈಟ್-ಬಾಲ್ ಸರಣಿ ಬಳಿಕ ಭಾರತ ತಂಡ ಜಿಂಬಾಬ್ವೆಗೆ ತೆರಳಲಿದೆ. ಈ ಸರಣಿಯಲ್ಲಿ ಒಟ್ಟು ಮೂರು ಟಿ20 ಪಂದ್ಯ ನಡೆಯಲಿದೆ.

ಈ ಸರಣಿಯು ಯುವ ಮತ್ತು ಉದಯೋನ್ಮುಖ ಭಾರತೀಯ ಆಟಗಾರರಿಗೆ ಅವಕಾಶಗಳನ್ನು ನೀಡಬಹುದು. ಜೊತೆಗೆ ಸದ್ಯ ಸಾಗುತ್ತಿರುವ ಐಪಿಎಲ್‌ನಲ್ಲಿ ಯುವ ಆಟಗಾರರ ಪ್ರದರ್ಶನದ ಮೇಲೆ ಬಿಸಿಸಿಐ ಗಮನ ಕೊಡಲಿದೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ, ಪ್ರವಾಸಕ್ಕೆ ಕರೆ ಬರುವ ನಿರೀಕ್ಷೆಯಿದೆ. ಅತ್ತ ಜಿಂಬಾಬ್ವೆ ಬಲಿಷ್ಠ ಪ್ರವಾಸಿ ತಂಡದ ವಿರುದ್ಧ ತವರು ನೆಲದಲ್ಲಿ ಆಡುವುದನ್ನು ಸದುಪಯೋಗಪಡಿಸಿಕೊಳ್ಳಲು ನೋಡುತ್ತದೆ.

ಜುಲೈನಲ್ಲಿ ಟೀಮ್ ಇಂಡಿಯಾದ ಜಿಂಬಾಬ್ವೆ ಪ್ರವಾಸ

ಜುಲೈನಲ್ಲಿ ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾ ಮೂರು ಪಂದ್ಯಗಳ ಟಿ20 ಅಂತರರಾಷ್ಟ್ರೀಯ ಸರಣಿಯನ್ನು ಆಡಲಿದೆ. ಸರಣಿಯ ಮೊದಲ ಪಂದ್ಯ ಜುಲೈ 23 ರಂದು ನಡೆಯಲಿದೆ ಎಂದು ಬಿಸಿಸಿಐ ಘೋಷಿಸಿದೆ. ಎರಡನೇ ಪಂದ್ಯ ಜುಲೈ 25 ರಂದು ನಡೆಯಲಿದೆ. ಮೂರನೇ ಮತ್ತು ಅಂತಿಮ ಪಂದ್ಯ ಜುಲೈ 26 ರಂದು ನಡೆಯಲಿದೆ. ಎಲ್ಲಾ ಪಂದ್ಯಗಳು ಹರಾರೆಯಲ್ಲಿರುವ ಹರಾರೆ ಕ್ರೀಡಾ ಕ್ರೀಡಾಂಗಣದಲ್ಲಿ ನಡೆಯಲಿವೆ. ಇದರರ್ಥ ತಂಡವು ಬೇರೆಡೆಗೆ ಪ್ರಯಾಣಿಸಬೇಕಾಗಿಲ್ಲ. ಅದಕ್ಕಾಗಿಯೇ ಕೊನೆಯ ಎರಡು ಪಂದ್ಯಗಳನ್ನು ಕೇವಲ ಎರಡು ದಿನಗಳಲ್ಲಿ ಆಯೋಜನೆ ಮಾಡಲಾಗಿದೆ.

ಅತೀ ವೇಗ… ಬೆನ್​ ಡಕೆಟ್​ಗೆ ಬರೋಬ್ಬರಿ 1,100 ಪೌಂಡ್ ಫೈನ್..!

ಭಾರತ vs ಜಿಂಬಾಬ್ವೆ 2026 ಟಿ20 ವೇಳಾಪಟ್ಟಿ:

  • ಮೊದಲ ಟಿ20ಐ: ಗುರುವಾರ, ಜುಲೈ 23, ಹರಾರೆ
  • ಎರಡನೇ ಟಿ20ಐ: ಶನಿವಾರ, ಜುಲೈ 25, ಹರಾರೆ
  • ಮೂರನೇ ಟಿ20ಐ: ಭಾನುವಾರ, ಜುಲೈ 26, ಹರಾರೆ

ಬಿಸಿಸಿಐ ಪ್ರಕಟಿಸಿದ ಭಾರತ-ಜಿಂಬಾಬ್ವೆ ವೇಳಾಪಟ್ಟಿಯ ಟ್ವೀಟ್:

ಈ ವರ್ಷ ಯಾವುದೇ ಪ್ರಮುಖ ಟಿ20 ಟೂರ್ನಿ ಇಲ್ಲ

ಈ ವರ್ಷ ಪ್ರಸ್ತುತ ಯಾವುದೇ ಪ್ರಮುಖ ಪಂದ್ಯಾವಳಿಗಳಿಲ್ಲ. ಆದ್ದರಿಂದ, ಭಾರತದ ಅಗ್ರ ಆಟಗಾರರು ಈ ಸರಣಿಯಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ. ಇದರರ್ಥ ಭಾರತದ ಕಿರಿಯ ಆಟಗಾರರು ಆಯ್ಕೆ ಆಗಬಹುದು. ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸುವುದು ಅನುಮಾ. ಹೊಸ ಆಟಗಾರನನ್ನು ನಾಯಕನನ್ನಾಗಿ ನೇಮಿಸಬಹುದು. ಈ ವರ್ಷ ಅಥವಾ ಮುಂದಿನ ವರ್ಷ ಯಾವುದೇ ಪ್ರಮುಖ ಐಸಿಸಿ ಟಿ20 ಪಂದ್ಯಾವಳಿಗಳಿಲ್ಲ, ಆದರೆ ಹೊಸ ಆಟಗಾರರಿಗೆ ಅವಕಾಶ ನೀಡಲು ಮತ್ತು ಅವರನ್ನು ಪರೀಕ್ಷಿಸಲು ಟೀಮ್ ಇಂಡಿಯಾ ಇನ್ನೂ ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಮಧ್ಯಂತರವಾಗಿ ಆಡುತ್ತಿದೆ. ಇತ್ತೀಚೆಗೆ, ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಿತ್ತು. ಮುಂದಿನ ಟಿ20 ವಿಶ್ವಕಪ್ 2028 ರಲ್ಲಿ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಮೇಲೆ ಹಾರಿ ನೆಲಕ್ಕೆ ಬಿದ್ದ ಗಂಡ-ಹೆಂಡತಿ, ಮೈ ಜುಂ ಎನ್ನಿಸುವ ದೃಶ್ಯ

ಕನ್ಯಾಕುಮಾರಿ, ಏ.1: ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ಸೊಂದು ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಸವಾರರಿಗೆ ಡಿಕ್ಕಿ ಹೊಡೆದ ಭೀಕರ ಘಟನೆ ನಡೆದಿದೆ. ವೇಗವಾಗಿ ಬಂದ ಬಸ್ ಸವಾರರನ್ನು ಗಾಳಿಯಲ್ಲಿ ತೂರಿದ ದೃಶ್ಯಗಳು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ವರದಿಗಳ ಪ್ರಕಾರ, ಅತಿ ವೇಗವಾಗಿ ಚಲಿಸುತ್ತಿದ್ದ ಕೇರಳ ಸರ್ಕಾರಿ ಬಸ್ ಮೊದಲು ರಸ್ತೆಯಲ್ಲಿದ್ದ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ. ನಂತರ ಚಾಲಕನ ನಿಯಂತ್ರಣ ತಪ್ಪಿದ ಬಸ್, ಎದುರಿಗೆ ಬರುತ್ತಿದ್ದ ದ್ವಿಚಕ್ರ ವಾಹನದಲ್ಲಿದ್ದ ದಂಪತಿಗೆ ನೇರವಾಗಿ ಗುದ್ದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸವಾರರು ಸುಮಾರು ಹತ್ತಾರು ಅಡಿಗಳಷ್ಟು ಗಾಳಿಯಲ್ಲಿ ಹಾರಿ ರಸ್ತೆಗೆ ಬಿದ್ದಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ದಂಪತಿಯನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಬಸ್ ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯೇ ಈ ದುರ್ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕನ್ಯಾಕುಮಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಇರಾನ್​ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ರಷ್ಯಾದಲ್ಲಿದ್ದಾರಾ? ರಾಯಭಾರಿ ಹೇಳಿದ್ದೇನು?

ಟೆಹ್ರಾನ್, ಏಪ್ರಿಲ್ 1: ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ(Murder) ನಡೆದು ಒಂದು ತಿಂಗಳು ಕಳೆದಿದೆ. ಅವರ ಸಾವಿನ ಬಳಿಕ ಮಗ ಮೊಜ್ತಬಾ ಖಮೇನಿಯವರನ್ನು ನೂತನ ಸರ್ವೋಚ್ಚ ನಾಯಕನನ್ನಾಗಿ ನೇಮಿಸಲಾಯಿತು. ಅಧಿಕಾರ ವಹಿಸಿಕೊಂಡ ಬಳಿಕ ಮೊಜ್ತಬಾ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಅವರು ತಮ್ಮ ತಂದೆಯ ಅಂತ್ಯಕ್ರಿಯೆಗೂ ಬಂದಿಲ್ಲ.ಅವರು ಪತ್ರದ ಮೂಲದ ತಮ್ಮ ಹೇಳಿಕೆ ನೀಡುತ್ತಿದ್ದು, ಅವರ ಆರೋಗ್ಯ ಹಾಗೂ ಅವರೆಲ್ಲಿದ್ದಾರೆ ಎನ್ನುವ ಅನುಮಾನ ಕಾಡಿದೆ.
ಕೆಲವರು ಗಂಭೀರವಾಗಿ ಗಾಯಗೊಂಡಿರಬಹುದು ಅಥವಾ ಮೃತಪಟ್ಟಿರಬಹುದು ಎಂದು ಹೇಳಿದ್ದಾರೆ.

ಈ ಎಲ್ಲಾ ಗೊಂದಲಗಳ ನಡುವೆ ಇರಾನ್​ಗೆ ರಷ್ಯಾದ ರಾಯಭಾರಿ ಅಲೆಕ್ಸಿ ಡೆಡೋವ್ ಮೊಜ್ತಾಬಾ ಖಮೇನಿ ಇರಾನ್‌ನಲ್ಲಿದ್ದಾರೆ ಆದರೆ ಕೆಲವು ಕಾರಣಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. ಕೆಲವು ಮಾಧ್ಯಮ ವರದಿಗಳು ಮೊಜ್ತಬಾ ಅವರನ್ನು ಚಿಕಿತ್ಸೆಗಾಗಿ ರಷ್ಯಾಕ್ಕೆ ಕರೆದೊಯ್ಯಲಾಯಿತು, ಅಲ್ಲಿ ವ್ಲಾಡಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ಅವರನ್ನು ಮಾಸ್ಕೋಗೆ ಕಳುಹಿಸಲಾಯಿತು ಎಂದು ಹೇಳಿವೆ.

ಮೊಜ್ತಬಾ ಅನುಪಸ್ಥಿತಿಯ ಹೊರತಾಗಿಯೂ, ಅವರ ಬೆಂಬಲಿಗರ ಉತ್ಸಾಹ ಕಡಿಮೆಯಾಗಿಲ್ಲ. ಕಳೆದ ತಿಂಗಳಲ್ಲಿ ಸಾವಿರಾರು ಜನರು ಬೀದಿಗಿಳಿದು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೂ ಇರಾನ್‌ನ ಹೊಸ ನಾಯಕನ ನಿರಂತರ ಅನುಪಸ್ಥಿತಿಯು ಯುದ್ಧದ ಸಮಯದಲ್ಲಿ ದೇಶವನ್ನು ನಿಜವಾಗಿಯೂ ಯಾರು ನಡೆಸುತ್ತಿದ್ದಾರೆ ಎಂಬ ಆಳವಾದ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಮತ್ತಷ್ಟು ಓದಿ: ಪಾರ್ಟಿಗೆಂದು ಹೋದವ ಸಿಕ್ಕಿದ್ದು ಶವವಾಗಿ: ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ಯಾರು?

56 ವರ್ಷದ ಮೊಜ್ತಾಬಾ ಖಮೇನಿ ತಮ್ಮ ತಂದೆಯ ಆಳ್ವಿಕೆಯಲ್ಲಿ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ವಿರಳವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರು. ಈಗ ಅವರು ದೇಶದ ಅತ್ಯಂತ ಶಕ್ತಿಶಾಲಿ ಸ್ಥಾನವನ್ನು ಹೊಂದಿದ್ದಾರೆ, ಅವರ ಅನುಪಸ್ಥಿತಿಯು ಇರಾನ್‌ನಲ್ಲಿ ನಿಜವಾದ ಅಧಿಕಾರವು ಒಬ್ಬ ವ್ಯಕ್ತಿಯ ಮೇಲೆ ಅಲ್ಲ, ಬದಲಾಗಿ ಸಂಸ್ಥೆಗಳು ಮತ್ತು ಭದ್ರತಾ ಸಂಸ್ಥೆಗಳ ಮೇಲೆ ಅವಲಂಬಿತವಾಗಿದೆ ಎಂಬುದನ್ನು ತೋರಿಸುತ್ತದೆ. ಇಸ್ರೇಲಿ ಮತ್ತು ಯುಎಸ್ ಅಧಿಕಾರಿಗಳು ಮೊಜ್ತಾಬಾ ಖಮೇನಿ ಜೀವಂತವಾಗಿದ್ದಾರೆ ಎಂಬುದನ್ನು ನಂಬಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Source link

ಅತೀ ವೇಗ… ಬೆನ್​ ಡಕೆಟ್​ಗೆ ಬರೋಬ್ಬರಿ 1,100 ಪೌಂಡ್ ಫೈನ್..!

ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಬೆನ್ ಡಕೆಟ್ ಇತ್ತೀಚೆಗೆ ಎರಡು ಪ್ರಮುಖ ಕಾರಣಗಳಿಗಾಗಿ ಸುದ್ದಿಯಲ್ಲಿದ್ದಾರೆ. ಒಂದು, ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಹಿಂದೆ ಸರಿದಿರುವುದು. ಮತ್ತೊಂದು, ಅತಿವೇಗದ ಚಾಲನೆಗಾಗಿ ನ್ಯಾಯಾಲಯದಿಂದ ದಂಡಕ್ಕೆ ಗುರಿಯಾಗಿರುವುದು.

ಬೆನ್ ಡಕೆಟ್ ಅವರು ತಮ್ಮ ಲ್ಯಾಂಡ್ ರೋವರ್ ಕಾರನ್ನು ನಿಗದಿಗಿಂತ ಹೆಚ್ಚಿನ ವೇಗದಲ್ಲಿ ಚಲಾಯಿಸಿದ್ದಕ್ಕಾಗಿ ದಂಡ ತೆತ್ತಿದ್ದಾರೆ. ಆಗಸ್ಟ್ 24, 2025 ರಂದು ಸ್ಟಾಫರ್ಡ್‌ಶೈರ್‌ನ ಎ50 ರಸ್ತೆಯಲ್ಲಿ ಡಕೆಟ್​ 93 ಮೈಲಿ ವೇಗದಲ್ಲಿ ಕಾರು ಚಲಾಯಿಸಿದ್ದರು. ಈ ರಸ್ತೆಯಲ್ಲಿ ಗಂಟೆಗೆ 70 ಮೈಲಿ ವೇಗದಲ್ಲಿ ಮಾತ್ರ ಕಾರು ಓಡಿಸಬೇಕೆಂಬ ನಿಯಮವಿದೆ. ಈ ನಿಯಮವನ್ನು ಮೀರಿ ಬೆನ್ ಡಕೆಟ್ ಅತೀ ವೇಗದಲ್ಲಿ ಕಾರು ಚಲಾಯಿಸಿದ್ದರು.

ಹೀಗೆ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಇದೀಗ ನ್ಯಾಯಾಲಯವು ಬೆನ್ ಡಕೆಟ್​ಗೆ ಒಟ್ಟು £1,100 (ಸುಮಾರು ₹1.2 ಲಕ್ಷ) ದಂಡ ವಿಧಿಸಿದೆ. ಇದರಲ್ಲಿ £700 ದಂಡ, £120 ನ್ಯಾಯಾಲಯದ ವೆಚ್ಚ ಮತ್ತು £280 ಸಂತ್ರಸ್ತರ ಸರ್‌ಚಾರ್ಜ್ ಸೇರಿದೆ. ಹಾಗೆಯೇ ಅವರ ಚಾಲನಾ ಪರವಾನಗಿಗೆ (Driving Licence) 4 ಪೆನಾಲ್ಟಿ ಪಾಯಿಂಟ್‌ಗಳನ್ನು ಸೇರಿಸಲಾಗಿದೆ.

ಐಪಿಎಲ್​ಗೆ ಕೈ ಕೊಟ್ಟ ಡಕೆಟ್:

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗಾಗಿ ಬೆನ್ ಡಕೆಟ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಬರೋಬ್ಬರಿ 2 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಐಪಿಎಲ್ ಆರಂಭಕ್ಕೆ ದಿನಗಳು ಮಾತ್ರ ಉಳಿದಿದ್ದಾಗ ಡಕೆಟ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಮೇಲೆ ಗಮನ ಹರಿಸಲು ಮತ್ತು ದೈಹಿಕ ಹಾಗೂ ಮಾನಸಿಕವಾಗಿ ವಿಶ್ರಾಂತಿ ಪಡೆಯಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಬೆನ್ ಡಕೆಟ್ ತಿಳಿಸಿದ್ದಾರೆ.

ಡಕೆಟ್ ಬ್ಯಾನ್:

ಐಪಿಎಲ್ ನಿಯಮಗಳ ಪ್ರಕಾರ, ಯಾವುದೇ ವೈದ್ಯಕೀಯ ಕಾರಣವಿಲ್ಲದೆ ಕೊನೆಯ ಕ್ಷಣದಲ್ಲಿ ಟೂರ್ನಿಯಿಂದ ಹಿಂದೆ ಸರಿದರೆ, ಆಟಗಾರನ ಮೇಲೆ ಮುಂದಿನ ಎರಡು ವರ್ಷಗಳ ಕಾಲ ನಿಷೇಧ ಹೇರಲಾಗುತ್ತದೆ.

ಇದನ್ನೂ ಓದಿ: Adam Zampa: IPL ತೊರೆದು PSL ಆಡಲು ಇದುವೇ ಮುಖ್ಯ ಕಾರಣ..!

ಅದರಂತೆ ಇದೀಗ ಬೆನ್ ಡಕೆಟ್ ಅವರ ಮೇಲೆ ಎರಡು ವರ್ಷಗಳ ನಿಷೇಧ ಹೇರಲಾಗಿದೆ. ಇದಕ್ಕೂ ಮುನ್ನ ಐಪಿಎಲ್ 2025 ರಲ್ಲಿ ನಿರ್ದಿಷ್ಟ ಕಾರಣವಿಲ್ಲದೇ, ಇಂಗ್ಲೆಂಡ್ ಆಟಗಾರ ಹ್ಯಾರಿ ಬ್ರೂಕ್ ಟೂರ್ನಿಯಿಂದ ಹಿಂದೆ ಸರಿದಿದ್ದರು. ಹೀಗಾಗಿ ಅವರಿಗೆ ಈ ಬಾರಿಯ ಐಪಿಎಲ್​ನಲ್ಲಿ ಚಾನ್ಸ್ ನೀಡಿರಲಿಲ್ಲ. ಇದೀಗ ಬೆನ್ ಡಕೆಟ್ ಕೂಡ ಐಪಿಎಲ್​ಗೆ ಕೈ ಕೊಟ್ಟಿರುವ ಕಾರಣ ಮುಂದಿನ ಸೀಸನ್​ನಲ್ಲಿ ಅವರನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.

 

Source link

ತೆಲಂಗಾಣ ಟೆಕ್ಕಿ ದಂಪತಿಯ ಜೀವವನ್ನೇ ತೆಗೆಯಿತು ಎಐ! ಆಗಿದ್ದೇನು ಗೊತ್ತಾ?

ಬೆಂಗಳೂರು, ಏಪ್ರಿಲ್ 01: ಮಂಗಳವಾರ ಬೆಳಗ್ಗೆ ತೆಲಂಗಾಣ ಮೂಲದ ಟೆಕ್ಕಿ ದಂಪತಿ ಆತ್ಮಹತ್ಯೆ (Suicide) ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಪ್ರಾಥಮಿಕವಾಗಿ ಕೌಟುಂಬಿಕ ಕಲಹದ ಹಿನ್ನೆಲೆ ಗಂಡ-ಹೆಂಡತಿ ಇಬ್ಬರೂ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಟೆಕ್ಕಿ ಸಾವಿಗೆ ನಿಜವಾದ ಕಾರಣ ಈಗ ಬಯಲಾಗಿದೆ. ಕೃತಕ ಬುದ್ಧಿಮತ್ತೆ (AI) ಹೊಡೆತಕ್ಕೆ ಕೆಲಸ ಕಳೆದುಕೊಂಡಿದ್ದ ಭಾನು ಚಂದರ್ ರೆಡ್ಡಿ, ಖಿನ್ನತೆಯಿಂದ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ತೆಲಂಗಾಣ ಮೂಲದ 32 ವರ್ಷದ ಭಾನು ಚಂದರ್ ರೆಡ್ಡಿ ಕುಂಟಾ ಮತ್ತು ಪತ್ನಿ ಬಿಬಿ ಶಾಜಿಯಾ ಸಿರಾಜ್ (31) ಎರಡು ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಅವರ ಅಂತರ್​ಧರ್ಮೀಯ ವಿವಾಹದ ಬಗ್ಗೆ ಶಾಜಿಯಾ ಕುಟುಂಬಕ್ಕೆ ತಿಳಿದೇ ಇರಲಿಲ್ಲ ಎಂದು ತನಿಖೆ ವೇಳೆ ಗೊತ್ತಾಗಿದೆ. ಹೀಗಾಗಿಯೇ ತೆಲಂಗಾಣದಲ್ಲಿ ಸಮಸ್ಯೆ ಆಗಿರಬಹುದು ಅದಕ್ಕಾಗಿಯೇ 8 ತಿಂಗಳ ಹಿಂದೆ ದಂಪತಿ ಬೆಂಗಳೂರಿಗೆ ಬಂದು ನೆಲೆಸಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟೆಕ್ಕಿ ಮೃತ ದೇಹದ ಪಕ್ಕ ಸಿಕ್ಕ ಚೀಟಿ

ಮಲ್ಟಿ ನ್ಯಾಶನಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಾಜಿಯಾ, ಮಂಗಳವಾರ ಬೆಳಗ್ಗೆ 7.30ಕ್ಕೆ ತನ್ನ ನೈಟ್ ಶಿಫ್ಟ್ ಮುಗಿಸಿ ಮನೆಗೆ ಮರಳಿದ್ದಳು. ಈ ವೇಳೆ ಪತಿ ಬಾಗಿಲು ತೆರೆಯದ ಕಾರಣ ಬಳಿಕ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಳು. ಒಳಗಿನಿಂದ ಲಾಕ್ ಆಗಿದ್ದ ಬಾಗಿಲು ಒಡೆದು ನೋಡಿದಾಗ ರೆಡ್ಡಿ ಮೃತ ಪತ್ತೆಯಾಗಿತ್ತು. ಮೃತದೇಹದ ಪಕ್ಕ ಒಂದು ಚೀಟಿಯೂ ಪತ್ತೆಯಾಗಿತ್ತು. ಈ ವೇಳೆ ಸುಮಾರು 20 ನಿಮಿಷಗಳ ಕಾಲ ಘಟನಾ ಸ್ಥಳದಲ್ಲೇ ಇದ್ದ ಶಾಜಿಯಾ, ದಿಕ್ಕು ತೋಚದಂತಾಗಿ, ಯಾರಿಗೂ ತಿಳಿಯದಂತೆ 17ನೇ ಮಹಡಿಗೆ ತೆರಳಿ ಅಲ್ಲಿಂದ ಜಿಗಿದು ಪ್ರಾಣ ಬಿಟ್ಟಿದ್ದಾಳೆ ಎನ್ನಲಾಗಿದೆ.

ವರ್ಷಕ್ಕೆ 80 ಲಕ್ಷ ರೂ, ಪ್ಯಾಕೇಜ್ ಇದ್ದವ ಜಾಬ್ ಎಐಗೆ ಬಲಿ!

ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದ ಭಾನು ಚಂದರ್ ರೆಡ್ಡಿ ವರ್ಷಕ್ಕೆ ಸುಮಾರು 80 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಕುಟುಂಬ ಹೇಳುವಂತೆ ಅಮೆರಿಕಾದಲ್ಲೇ ಒಂದು ಸಣ್ಣ ಮನೆ ಖರೀದಿಸಿದ್ದಲ್ಲದೆ, ತನ್ನ ಕುಟುಂಬಕ್ಕಾಗಿ ತೆಲಂಗಾಣದಲ್ಲೂ ಮತ್ತೊಂದು ಮನೆ ನಿರ್ಮಿಸಿದ್ದನು. ಆದರೆ ಕೃತಕ ಬುದ್ಧಿಮತ್ತೆ (AI) ಪರಿಣಾಮದಿಂದ ಉದ್ಯೋಗ ಕಳೆದುಕೊಂಡಿದ್ದು ಆತನಿಗೆ ಮಾನಸಿಕ ಆಘಾತವನ್ನುಂಟುಮಾಡಿತ್ತು.ಇದೇ ಕಾರಣವನ್ನು ಆತ ತನ್ನ ಡೆತ್​ನೋಟ್​ನಲ್ಲಿಯೂ ಬರೆದಿದ್ದ ಎನ್ನಲಾಗಿದೆ.

ಇದನ್ನೂ ಓದಿ ಬೆಂಗಳೂರಿನಲ್ಲಿ ತೆಲಂಗಾಣದ ಯುವ ದಂಪತಿ ಸಾವು; ಪತಿಯ ಶವ ಕಂಡು 17ನೇ ಮಹಡಿಯಿಂದ ಜಿಗಿದ ಪತ್ನಿ!

ಉದ್ಯೋಗ ಕಳೆದುಕೊಂಡ ನಂತರ ಭಾರತಕ್ಕೆ ಮರಳಿದ ರೆಡ್ಡಿ, ಹೊಸ ಕೆಲಸಕ್ಕಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದನು. ಆದರೆ ಅವಕಾಶಗಳು ಸಿಗದೇ ಹೋದ ಕಾರಣ ಆತಂಕ ಮತ್ತು ಒತ್ತಡ ಹೆಚ್ಚಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಕುಟುಂಬದವರು ಮತ್ತು ಪತ್ನಿ ಶಾಜಿಯಾ ಅವನಿಗೆ ಬೆಂಬಲವಾಗಿ ನಿಂತಿದ್ದರು ಎಂಬುದೂ ತಿಳಿದುಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಎಲೆಕ್ಟ್ರಿಕ್ ಕಾರು ಪ್ರಿಯರಿಗೆ ಶಾಕ್: ಇನ್ಮುಂದೆ ಕರ್ನಾಟಕದಲ್ಲಿ ಇವಿ ವಾಹನಗಳೂ ದುಬಾರಿ! ಕಾರಣ ಇಲ್ಲಿದೆ

ಬೆಂಗಳೂರು, ಏಪ್ರಿಲ್ 1: ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು (Electric Vehicle) ಉತ್ತೇಜಿಸಲು ಕಳೆದ ಹತ್ತು ವರ್ಷಗಳಿಂದ ನೀಡಲಾಗುತ್ತಿದ್ದ ರಸ್ತೆ ತೆರಿಗೆ (Road Tax) ವಿನಾಯಿತಿಯನ್ನು ಹಿಂಪಡೆಯಲು ಕರ್ನಾಟಕ ಸರ್ಕಾರ ಮುಂದಾಗಿದೆ. ಈ ಸಂಬಂಧ ‘ಕರ್ನಾಟಕ ಮೋಟಾರು ವಾಹನ ತೆರಿಗೆ (ತಿದ್ದುಪಡಿ) ವಿಧೇಯಕ 2026’ಕ್ಕೆ ಈಗಾಗಲೇ ಅನುಮೋದನೆ ಪಡೆಯಲಾಗಿದ್ದು, ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಯಾವ ಇವಿ ವಾಹನಕ್ಕೆ ಎಷ್ಟು ತೆರಿಗೆ?

ಹೊಸ ನಿಯಮದ ಪ್ರಕಾರ, ಎಲೆಕ್ಟ್ರಿಕ್ ಕಾರುಗಳು, ಜೀಪುಗಳು ಮತ್ತು ಖಾಸಗಿ ಬಸ್‌ಗಳ ಬೆಲೆಯ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಆ ಮಾಹಿತಿ ಇಲ್ಲಿದೆ.

  • 10 ಲಕ್ಷ ರೂ.ವರೆಗಿನ ಕಾರುಗಳಿಗೆ: ಶೇ 5 ರಷ್ಟು ತೆರಿಗೆ.
  • 10 ರೂ.ನಿಂದ 25 ಲಕ್ಷ ರೂ.ವರೆಗಿನ ಕಾರುಗಳಿಗೆ: ಶೇ 8 ರಷ್ಟು ತೆರಿಗೆ.
  • 25 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ಕಾರುಗಳಿಗೆ: ಶೇ 10 ರಷ್ಟು ತೆರಿಗೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗಿಲ್ಲ ಟ್ಯಾಕ್ಸ್

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಈ ಹೊಸ ತೆರಿಗೆ ಅನ್ವಯಿಸುವುದಿಲ್ಲ, ಅವುಗಳಿಗೆ ಹಳೆಯ ವಿನಾಯಿತಿ ಮುಂದುವರಿಯಲಿದೆ.

ಸರ್ಕಾರದ ನಿರ್ಧಾರಕ್ಕೆ ಕಾರಣವೇನು?

ಈ ಹೊಸ ತೆರಿಗೆಯಿಂದ ರಾಜ್ಯ ಸರ್ಕಾರಕ್ಕೆ ಸುಮಾರು 259 ಕೋಟಿ ರೂ. ಹೆಚ್ಚುವರಿ ಆದಾಯ ಬರಲಿದೆ. 2016 ರಿಂದ ನೀಡಲಾಗುತ್ತಿದ್ದ ಸಂಪೂರ್ಣ ವಿನಾಯಿತಿಯನ್ನು ಈಗ ಹಂತ ಹಂತವಾಗಿ ಹಿಂಪಡೆಯಲಾಗುತ್ತಿದೆ. ಆದರೂ, ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆ ಇಂದಿಗೂ ಕಡಿಮೆ ಇದೆ (ಸಾಮಾನ್ಯ ಕಾರುಗಳಿಗೆ ಶೇ 13 ರಿಂದ ಶೇ 18 ರಷ್ಟು ತೆರಿಗೆ ಇದೆ) ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

2024 ರಲ್ಲೇ ಎಲ್ಲಾ ಎಲೆಕ್ಟ್ರಿಕ್ ಕಾರುಗಳ ಮೇಲೆ ಒಂದು ಬಾರಿಯ ಲೈಫ್​ಟೈಂ ತೆರಿಗೆ ವಿಧಿಸುವ ಯೋಜನೆಗಳಿದ್ದವು. ಆದರೆ ತೀವ್ರ ವಿರೋಧದ ನಂತರ 25 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ವಾಹನಗಳಿಗೆ ಮಾತ್ರ ತೆರಿಗೆ ವಿಧಿಸುವ ನಿರ್ಧಾರಕ್ಕೆ ಬರಲಾಗಿತ್ತು. ನೋಂದಣಿ ವಿಷಯದಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡಿನ ನಂತರ ಕರ್ನಾಟಕವು ಭಾರತದಲ್ಲಿ ನಾಲ್ಕನೇ ಅತಿದೊಡ್ಡ ವಾಹನ ಮಾರುಕಟ್ಟೆಯಾಗಿದೆ. ಹೆಚ್ಚಿನ ರಾಜ್ಯಗಳು ವಿದ್ಯುತ್ ವಾಹನಗಳಿಗೆ ತೆರಿಗೆ ವಿನಾಯಿತಿ ಅಥವಾ ರಿಯಾಯಿತಿಗಳನ್ನು ನೀಡುತ್ತವೆ. ಆದಾಗ್ಯೂ ಗುಜರಾತ್ ಮತ್ತು ಕೇರಳದಂತಹ ಕೆಲವು ರಾಜ್ಯಗಳು ತೆರಿಗೆ ವಿಧಿಸುತ್ತವೆ.

ಖರೀದಿದಾರರ ಮೇಲೆ ಪ್ರಭಾವ

ಬೆಂಗಳೂರಿನಲ್ಲಿ ಈಗಾಗಲೇ 4.1 ಲಕ್ಷ ಎಲೆಕ್ಟ್ರಿಕ್ ವಾಹನಗಳಿದ್ದು, ಅದರಲ್ಲಿ ಕಾರುಗಳ ಸಂಖ್ಯೆ ಸುಮಾರು 37,000 ದಾಟಿದೆ. ಈಗ ಏಕಾಏಕಿ ತೆರಿಗೆ ವಿಧಿಸಿರುವುದರಿಂದ ಹೊಸದಾಗಿ ಕಾರು ಖರೀದಿಸುವವರ ಜೇಬಿಗೆ ಕತ್ತರಿ ಬೀಳಲಿದ್ದು, ಎಲೆಕ್ಟ್ರಿಕ್ ವಾಹನಗಳ ಖರೀದಿ ಪ್ರಮಾಣ ತುಸು ಕಡಿಮೆಯಾಗುವ ಆತಂಕ ಎದುರಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

UPSC Free Coaching: UPSC ಆಕಾಂಕ್ಷಿಗಳಿಗೆ ಗುಡ್​ನ್ಯೂಸ್; ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳ ತಯಾರಿಗಾಗಿ ಉಚಿತ ವಸತಿ ಸಹಿತ ತರಬೇತಿ

ನಾಗರಿಕ ಸೇವಾ ಪರೀಕ್ಷೆಗಳ (UPSC) ತಯಾರಿಯಲ್ಲಿ ತೊಡಗಿರುವ ಅಭ್ಯರ್ಥಿಗಳಿಗೆ ದೆಹಲಿಯ ಪ್ರತಿಷ್ಠಿತ ಜಾಮಿಯಾ ಮಿಲಿಯಾ ಇಸ್ಲಾಮಿಯಾ (JMI) ವಿಶ್ವವಿದ್ಯಾಲಯವು ಒಂದು ಅದ್ಭುತ ಅವಕಾಶವನ್ನು ಹೊತ್ತು ತಂದಿದೆ. 2027ರ ಯುಪಿಎಸ್‌ಸಿ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳ ತಯಾರಿಗಾಗಿ ಉಚಿತ ವಸತಿ ಸಹಿತ ತರಬೇತಿಯನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕರ್ನಾಟಕದ ಅಭ್ಯರ್ಥಿಗಳಿಗೆ ಗಮನಾರ್ಹ ಅಂಶ:

ಈ ತರಬೇತಿ ಕಾರ್ಯಕ್ರಮದ ಪ್ರವೇಶ ಪರೀಕ್ಷೆಯು ದೇಶದ ಪ್ರಮುಖ 13 ನಗರಗಳಲ್ಲಿ ನಡೆಯಲಿದ್ದು, ನಮ್ಮ ಬೆಂಗಳೂರಿನಲ್ಲಿಯೂ ಪರೀಕ್ಷಾ ಕೇಂದ್ರವಿರಲಿದೆ. ಇದರಿಂದಾಗಿ ಕರ್ನಾಟಕದ ವಿದ್ಯಾರ್ಥಿಗಳು ದೆಹಲಿ ಅಥವಾ ಇತರ ರಾಜ್ಯಗಳಿಗೆ ಪ್ರಯಾಣಿಸದೆ ಸುಲಭವಾಗಿ ಪರೀಕ್ಷೆ ಬರೆಯಬಹುದಾಗಿದೆ.

ಯಾರಿಗೆ ಈ ಸೌಲಭ್ಯ ಉಚಿತ?

ಈ ವಿಶೇಷ ತರಬೇತಿ ಕಾರ್ಯಕ್ರಮವು ಮುಖ್ಯವಾಗಿ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಸಂಪೂರ್ಣವಾಗಿ ಉಚಿತವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ತರಬೇತಿಯ ಜೊತೆಗೆ ಹಾಸ್ಟೆಲ್ ಸೌಲಭ್ಯ ಮತ್ತು 24×7 ಕಾರ್ಯನಿರ್ವಹಿಸುವ ಸುಸಜ್ಜಿತ ಗ್ರಂಥಾಲಯದ ಸೌಲಭ್ಯವೂ ದೊರೆಯಲಿದೆ.

ಪ್ರಮುಖ ದಿನಾಂಕಗಳು:

ಒಂದು ವೇಳೆ ನೀವು ಈ ಅವಕಾಶವನ್ನು ಬಳಸಿಕೊಳ್ಳಲು ಬಯಸಿದರೆ, ಈ ಕೆಳಗಿನ ದಿನಾಂಕಗಳನ್ನು ಡೈರಿಯಲ್ಲಿ ನೋಟ್ ಮಾಡಿಕೊಳ್ಳಿ:

  • ಅರ್ಜಿ ಸಲ್ಲಿಸಲು ಆರಂಭ: ಏಪ್ರಿಲ್ 1, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 26, 2026
  • ಪ್ರವೇಶ ಪರೀಕ್ಷೆ ನಡೆಯುವ ದಿನಾಂಕ: ಜೂನ್ 6, 2026
  • ಅಂತಿಮ ಫಲಿತಾಂಶ ಪ್ರಕಟಣೆ: ಆಗಸ್ಟ್ 7, 2026
  • ತರಗತಿಗಳ ಪ್ರಾರಂಭ: ಸೆಪ್ಟೆಂಬರ್ 1, 2026

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಪಡೆಯುವುದು ಹೇಗೆ? ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ಮಾದರಿ:

ಒಟ್ಟು 100 ಸೀಟುಗಳಿಗಾಗಿ ಈ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಪರೀಕ್ಷೆಯು ಯುಪಿಎಸ್‌ಸಿ ಮಾದರಿಯನ್ನೇ ಹೊಂದಿರುತ್ತದೆ.

  • ಪತ್ರಿಕೆ-1 (ಸಾಮಾನ್ಯ ಅಧ್ಯಯನ): 60 ವಸ್ತುನಿಷ್ಠ (Objective) ಪ್ರಶ್ನೆಗಳಿರುತ್ತವೆ. ತಪ್ಪು ಉತ್ತರಕ್ಕೆ ನಕಾರಾತ್ಮಕ ಅಂಕಗಳಿರುತ್ತವೆ (1/3rd Negative Marking).
  • ಪತ್ರಿಕೆ-2 (ಪ್ರಬಂಧ): ಇಲ್ಲಿ ಅಭ್ಯರ್ಥಿಗಳು ಎರಡು ಪ್ರಬಂಧಗಳನ್ನು ಬರೆಯಬೇಕು. ಮೊದಲ ಪತ್ರಿಕೆಯಲ್ಲಿ ಅಗ್ರ 900 ಸ್ಥಾನ ಪಡೆದವರ ಪ್ರಬಂಧಗಳನ್ನು ಮಾತ್ರ ಮೌಲ್ಯಮಾಪನ ಮಾಡಲಾಗುತ್ತದೆ.
  • ಸಂದರ್ಶನ: ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ 30 ಅಂಕಗಳ ಸಂದರ್ಶನವಿರುತ್ತದೆ.

ಅಭ್ಯರ್ಥಿಗಳು ಇಂಗ್ಲಿಷ್, ಹಿಂದಿ ಅಥವಾ ಉರ್ದು ಈ ಮೂರರಲ್ಲಿ ತಮಗೆ ಇಷ್ಟವಾದ ಭಾಷೆಯಲ್ಲಿ ಪರೀಕ್ಷೆ ಬರೆಯುವ ಆಯ್ಕೆಯನ್ನು ಹೊಂದಿರುತ್ತಾರೆ.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತರು ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಅಧಿಕೃತ ಪ್ರವೇಶ ಪೋರ್ಟಲ್ admission.jmi.ac.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಉನ್ನತ ಮಟ್ಟದ ತರಬೇತಿ ಮತ್ತು ಉತ್ತಮ ಕಲಿಕಾ ಪರಿಸರವನ್ನು ಹೊಂದಿರುವ ಈ ಅಕಾಡೆಮಿಯು ದೇಶಕ್ಕೆ ಹಲವಾರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ನೀಡಿದ ಹೆಗ್ಗಳಿಕೆ ಹೊಂದಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: RCB ತಂಡದ ಏಪ್ರಿಲ್ ತಿಂಗಳ ವೇಳಾಪಟ್ಟಿ ಇಲ್ಲಿದೆ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಉದ್ಘಾಟನಾ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ದ್ವಿತೀಯ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಆರ್‌ಸಿಬಿ ತನ್ನ ಎರಡನೇ ಪಂದ್ಯದಲ್ಲಿ ಬದ್ಧ ವೈರಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಎದುರಿಸಲಿದೆ. ಹೈವೋಲ್ಟೇಜ್ ಪಂದ್ಯವೆಂದೇ ಬಿಂಬಿತವಾಗಿರುವ ಈ ಮ್ಯಾಚ್​ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ಪಂದ್ಯ ಯಾವಾಗ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯವು ಏಪ್ರಿಲ್ 5 ರಂದು ನಡೆಯಲಿದೆ. ಅಂದರೆ ಮುಂದಿನ ಭಾನುವಾರ ಬದ್ಧವೈರಿಗಳು ಮುಖಾಮುಖಿಯಾಗಲಿದ್ದಾರೆ.

ಪಂದ್ಯ ನಡೆಯುವುದು ಎಲ್ಲಿ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಎರಡನೇ ಪಂದ್ಯವನ್ನು ಸಹ ತವರಿನಲ್ಲೇ ಆಡಲಿದೆ. ಅಂದರೆ ಆರ್​ಸಿಬಿ-ಸಿಎಸ್​ಕೆ ನಡುವಣ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಎಷ್ಟು ಗಂಟೆಗೆ ಮ್ಯಾಚ್ ಶುರು?

ಆರ್​ಸಿಬಿ ಮತ್ತು ಸಿಎಸ್​ಕೆ ನಡುವಣ ಪಂದ್ಯವು ಭಾನುವಾರ ರಾತ್ರಿ 7.30 ರಿಂದ ಶುರುವಾಗಲಿದೆ. ಇನ್ನು ಈ ಪಂದ್ಯದ ಟಾಸ್ ಪ್ರಕ್ರಿಯೆ 7 ಗಂಟೆಗೆ ನಡೆಯಲಿದೆ.

ರಣರೋಚಕದ ಪೈಪೋಟಿ ನಿರೀಕ್ಷೆ:

ಆರ್​​ಸಿಬಿ ತಂಡದ ತವರು ಮೈದಾನವಾದ ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಈ ಪಂದ್ಯವು ಅತ್ಯಂತ ರೋಚಕವಾಗಿರಲಿದೆ. ಭಾನುವಾರ ಪಂದ್ಯವಿರುವುದರಿಂದ ಕ್ರೀಡಾಂಗಣವು ಕಿಕ್ಕಿರಿದು ತುಂಬುವ ನಿರೀಕ್ಷೆಯಿದೆ. ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಹಣಾಹಣಿಯು ಯಾವಾಗಲೂ “ಸೌತ್ ಡರ್ಬಿ” ಎಂದೇ ಪ್ರಸಿದ್ಧವಾಗಿದ್ದು, ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.

ಅದರಲ್ಲೂ ಉಭಯ ತಂಡಗಳ ನಡುವಣ ಪೈಪೋಟಿಯು ಸದಾ ಪೈಪೋಟಿಯಿಂದ ಕೂಡಿರುವುದರಿಂದ ಈ ಬಾರಿ ಕೂಡ ಜಿದ್ದಾಜಿದ್ದಿ ಹೋರಾಟವನ್ನು ನಿರೀಕ್ಷಿಸಬಹುದು.

ಉಭಯ ತಂಡಗಳು:

ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್‌ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಎಂಎಸ್ ಧೋನಿ, ಸಂಜು ಸ್ಯಾಮ್ಸನ್, ಡೆವಾಲ್ಡ್ ಬ್ರೆವಿಸ್, ಉರ್ವಿಲ್ ಪಟೇಲ್, ಶಿವಂ ದುಬೆ, ಜೇಮಿ ಓವರ್‌ಟನ್, ರಾಮಕೃಷ್ಣ ಘೋಷ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಶ್ರೇಯಸ್ ಗೋಪಾಲ್, ಮುಖೇಶ್ ಚೌಧರಿ, ನಾಥನ್ ಎಲ್ಲಿಸ್, ಅಕೇಲ್ ಹೊಸೈನ್, ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ, ಮ್ಯಾಥ್ಯೂ ಶಾರ್ಟ್, ಅಮನ್ ಖಾನ್, ಸರ್ಫರಾಝ್ ಖಾನ್, ಮ್ಯಾಟ್ ಹೆನ್ರಿ, ರಾಹುಲ್ ಚಹರ್, ಝಾಕ್ ಫೌಲ್ಕ್ಸ್.

ಇದನ್ನೂ ಓದಿ: IPL 2026: ಗೆಲುವಿನ ಬೆನ್ನಲ್ಲೇ ಶ್ರೇಯಸ್ ಅಯ್ಯರ್​​ಗೆ 12 ಲಕ್ಷ ರೂ. ದಂಡ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್.

ಆರ್​ಸಿಬಿ ತಂಡದ ಏಪ್ರಿಲ್ ತಿಂಗಳ ವೇಳಾಪಟ್ಟಿ:

  • ಏಪ್ರಿಲ್ 15: vs ಚೆನ್ನೈ ಸೂಪರ್ ಕಿಂಗ್ಸ್ (ಬೆಂಗಳೂರು)
  • ಏಪ್ರಿಲ್ 10: vs ರಾಜಸ್ಥಾನ್ ರಾಯಲ್ಸ್ (ಗುವಾಹಟಿ)
  • ಏಪ್ರಿಲ್ 12: vs ಮುಂಬೈ ಇಂಡಿಯನ್ಸ್ (ಮುಂಬೈ)
  • ಏಪ್ರಿಲ್ 15: vs ಲಕ್ನೋ ಸೂಪರ್ ಜೈಂಟ್ಸ್ (ಬೆಂಗಳೂರು)
  • ಏಪ್ರಿಲ್ 18: vs ಡೆಲ್ಲಿ ಕ್ಯಾಪಿಟಲ್ಸ್ (ಬೆಂಗಳೂರು)
  • ಏಪ್ರಿಲ್ 24: vs ಗುಜರಾತ್ ಟೈಟಾನ್ಸ್​ (ಬೆಂಗಳೂರು)
  • ಏಪ್ರಿಲ್ 27: vs ಡೆಲ್ಲಿ ಕ್ಯಾಪಿಟಲ್ಸ್ (ದೆಹಲಿ)
  • ಏಪ್ರಿಲ್ 30: vs ಗುಜರಾತ್ ಟೈಟಾನ್ಸ್ (ಅಹಮದಾಬಾದ್)

 

Source link

ಏಪ್ರಿಲ್ 4ರಿಂದ ಜೀ ಕನ್ನಡದಲ್ಲಿ ‘ಜೋಡಿ ನಂ.1′ ಶೋ; ಜಡ್ಜ್​​-ಸ್ಪರ್ಧಿ ಇಬ್ಬರೂ ಸೂಪರ್

ಜೀ ಕನ್ನಡದಲ್ಲಿ ಹೊಸ ಹೊಸ ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತಾ ಇರುತ್ತವೆ. ಎಲ್ಲಾ ರಿಯಾಲಿಟಿ ಶೋಗಳು ಸಾಕಷ್ಟು ಮನರಂಜನೆ ನೀಡುವ ರೀತಿಯಲ್ಲಿ ಇದೆ. ಈಗ ಹೊಸ ರಿಯಾಲಿಟಿ ಶೋ ಪ್ರಸಾರ ಕಾಣಲು ರೆಡಿ ಆಗಿದೆ. ಅದುವೇ ‘ಜೋಡಿ ನಂಬರ್ 1’. ಏಪ್ರಿಲ್ 4ರಂದು ರಾತ್ರಿ 9 ಗಂಟೆಗೆ ಈ ಶೋ ಪ್ರಸಾರ ಕಾಣಲಿದೆ. ‘ಅಮೃತಧಾರೆ’ ಧಾರಾವಾಹಿ ಜೋಡಿ ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಸೇರಿದಂತೆ ಅನೇಕರು ಜಡ್ಜ್ ಸ್ಥಾನದಲ್ಲಿ ಇದ್ದಾರೆ ಅನ್ನೋದು ವಿಶೇಷ.

ಜೀ ಕನ್ನಡದಲ್ಲಿ ಕಾಮಿಡಿ ಕಿಲಾಡಿಗಳು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸರಿಗಮಪ ಸೇರಿದಂತೆ ಅನೇಕ ರಿಯಾಲಿಟಿ ಶೋಗಳು ಪ್ರಸಾರ ಕಂಡಿವೆ. ಇದರ ಮೂಲಕ ಅನೇಕ ಪ್ರತಿಭೆಗಳಿಗೆ ವಾಹಿನಿ ವೇದಿಕೆ ಆಗಿದೆ. ಈಗ ಸೆಲೆಬ್ರಿಟಿ ಜೋಡಿಯನ್ನು ಪ್ರೇಕ್ಷಕರ ಎದುರು ತರುವ ಪ್ರಯತ್ನ ನಡೆದಿದೆ. ಈ ಶೋಗೆ ‘ಜೋಡಿ ನಂಬರ್ 1’ ಎಂದು ಹೆಸರು ಇಡಲಾಗಿದೆ.

ಹಿರಿಯ ಹಾಗೂ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೆಲೆಬ್ರಿಟಿ ಜೋಡಿಯನ್ನು ಈ ಶೋನಲ್ಲಿ ಕರೆತರಲಾಗುತ್ತಿದೆ. ಮನರಂಜನೆ ಜೊತೆಗೆ ಜೋಡಿಯ ಹಿನ್ನೆಲೆ, ಪರಸ್ಪರ ಭೇಟಿ ಆದ ಕಥೆ ಹಾಗೂ ಮದುವೆ ಆದ ಬಳಿಕ ಜೀವನದಲ್ಲಿ ಆದ ಬದಲಾವಣೆಯನ್ನು ರಿಯಾಲಿಟಿ ಶೋನಲ್ಲಿ ಹೇಳಲಾಗುತ್ತಿದೆ.

ಈ ಶೋನಲ್ಲಿ ತೀರ್ಪುಗಾರರೇ ಹೈಲೈಟ್. ಏಕೆಂದರೆ ಹಿರಿಯ ನಟಿ ಮಾಳವಿಕಾ ಅವಿನಾಶ್ ಜಡ್ಜ್ ಸ್ಥಾನದಲ್ಲಿದ್ದಾರೆ. ‘ಅಮೃತಧಾರೆ’ ಧಾರಾವಾಹಿ ಮೂಲಕ ಎಲ್ಲರ ಮೆಚ್ಚುಗೆ ಪಡೆದ ಭೂಮಿಕಾ-ಗೌತಮ್ ಅಲಿಯಾಸ್ ಛಾಯಾ ಸಿಂಗ್ ಮತ್ತು ರಾಜೇಶ್ ನಟರಂಗ, ನೆನಪಿರಲಿ ಪ್ರೇಮ್ ಈ ಶೋ ನ ತೀರ್ಪುಗಾರರು. ಇವರು ಸ್ಪರ್ಧಿಗಳಿಗೆ ಮಾರ್ಗದರ್ಶಕರೂ ಆಗಿರಲಿದ್ದಾರೆ. ತೀರ್ಪುಗಾರರು ಶೋನಲ್ಲಿರೋ ಜೋಡಿಗಳಿಗೆ ಮಾತ್ರವಲ್ಲ, ವೀಕ್ಷಕರ ದಾಂಪತ್ಯಕ್ಕೂ ಟಿಪ್ಸ್ ನೀಡುವ ಕೆಲಸ ಮಾಡಲಿದ್ದಾರೆ. ಈ ಶೋನ ಕುರಿ ಪ್ರತಾಪ್ ಮತ್ತು ಚೆಲುವೆ ಶ್ವೇತಾ ಚೆಂಗಪ್ಪ ಅವರು ನಿರೂಪಿಸಲಿದ್ದಾರೆ. ಹೀಗಾಗಿ, ಇಲ್ಲಿ ಹಾಸ್ಯಕ್ಕೆ ಯಾವುದೇ ಕೊರತೆ ಇರೋದಿಲ್ಲ.

ಇದನ್ನೂ ಓದಿ: ‘ಹೂವಿನ ಬಾಣದಂತೆ’ ಹುಡುಗಿಗೆ ಜೀ ಕನ್ನಡ ಅವಕಾಶ; ಟ್ರೋಲ್ ಮಾಡಿದವರಿಗೆ ನಿತ್ಯಶ್ರೀ ತಿರುಗೇಟು

ಶೋನಲ್ಲಿ ಭಾಗವಹಿಸಲಿರೋ ಜೋಡಿಗಳು:

ರುದ್ರ ಮಾಸ್ಟರ್ – ನಿರೀಕ್ಷ, ಧನರಾಜ್ – ಪ್ರಜ್ಞಾ, ರಜನಿ-ಅರುಣ್ ಗೌಡ, ನಯನಾ ನಾಗರಾಜ್ – ಸುಹಾಸ್, ಬಾಳು ಬೆಳಗುಂದಿ – ಮಾಲಾಶ್ರೀ, ಜಗ್ಗಪ್ಪ – ಸುಶ್ಮಿತಾ, ಮಿಮಿಕ್ರಿ ಗೋಪಿ – ಉಷಾರಾಣಿ, ಗೀತಾ ಭಾರತೀ ಭಟ್ – ರಾಜಾರಾಮ್ ಭಟ್, ಕೋಟೆ ಪ್ರಭಾಕರ್ – ಮಾಲತಿ ಹಾಗೂ ಅಭಿಲಾಷ್ – ಅಪೂರ್ವ ಅವರು ಜೋಡಿ.ನಂ.1 ನಲ್ಲಿ ಸ್ಪರ್ಧಿಗಳಾಗಿದ್ದಾರೆ. ಇವರಿಗೆ ವಿವಿಧ ಟಾಸ್ಕ್​​ಗಳು,ರ‍್ಯಾಪಿಡ್ ಫೈಯರ್ ರೀತಿಯ ಟಾಸ್ಕ್ ಇರಲಿದೆ. ಜೀ ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಶೋ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಿವಕುಮಾರ ಸ್ವಾಮೀಜಿ ಜನ್ಮದಿನೋತ್ಸವ: ಸಿದ್ಧಗಂಗಾ ಮಠದ ಗುಣಗಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ತುಮಕೂರು, ಏಪ್ರಿಲ್​​ 01: ದೇಶದ ವಿಕಾಸಕ್ಕೆ ಸಿದ್ಧಗಂಗಾ ಮಠದ ಪಾತ್ರ ಬಹುದೊಡ್ಡದಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ಸಿದ್ಧಗಂಗಾಮಠದ ವಸ್ತು ಪ್ರದರ್ಶನಾಲಯ ಮೈದಾನದಲ್ಲಿ ನಡೆದ ಡಾ.ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಿದ್ಧಗಂಗಾ ಮಠಕ್ಕೆ ಬಂದಿರುವುದಕ್ಕೆ ನನಗೆ ಖುಷಿಯಾಗಿದೆ. ಬಡ ಮಕ್ಕಳಿಗೆ ಶಿಕ್ಷಣ, ದಾಸೋಹ‌ ಆಶ್ರಯದ ಮೂಲಕ ಮಠ ಸೇವೆ ಸಲ್ಲಿಸಿದ್ದು, ದಯವೇ ಧರ್ಮದ ಮೂಲವಯ್ಯ ಎಂಬಂತೆ ಶ್ರೀಮಠ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

‘ಸ್ವಾಮೀಜಿಗಳ ದಾರಿ ಪವಾಡ ಎನ್ನಬಹುದು

ವೀರಶೈವ-ಲಿಂಗಾಯತ ಮಠಗಳು ತಮ್ಮದೇ ಆದ ಸೇವೆ ಸಲ್ಲಿಸುತ್ತಾ ಬಂದಿದ್ದು, ಅದರಲ್ಲಿ ಸಿದ್ಧಗಂಗಾಮಠ ಮುಂಚೂಣಿಯಲ್ಲಿದೆ. ಶಿವಕುಮಾರ ಸ್ವಾಮೀಜಿಗಳು ಇಷ್ಟು ವರ್ಷಗಳು ಒಂದೇ ಸ್ಥಳದಲ್ಲಿ ಒಂದೇ ಕಾರ್ಯ ನಿರಂತರವಾಗಿ ಮಾಡುವ ಮೂಲಕ ಜೀವನ ಸಮರ್ಪಣೆ ಮಾಡಿದ್ದಾರೆ. ಸ್ವಾಮೀಜಿಗಳ ದಾರಿಯನ್ನು ವಿಸ್ಮಯ ಹಾಗೂ ಪವಾಡ ಎನ್ನಬಹುದು ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಲಿಂಗಸ್ವಾಮೀಜಿ ಹೇಳಿದ್ದಾರೆ. ಶಿವಕುಮಾರ ಸ್ವಾಮೀಜಿಗಳ ಬದುಕಿನಲ್ಲಿ 2 ಘಟನೆಗಳಿವೆ. ಅವೆಂದರೆ ಬಡಮಕ್ಕಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡೋದು ಎಂದು ಶ್ರೀಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಡಾ. ಶಿವಕುಮಾರ ಸ್ವಾಮೀಜಿಯವರ 119ನೇ ಜನ್ಮದಿನೋತ್ಸವ; ಬೆಳ್ಳಂ ಬೆಳಿಗ್ಗೆ ಮಠಕ್ಕೆ ಭಕ್ತರ ದಂಡು

ಇದೇ ವೇಳೆ ಮಾತನಾಡಿದ ರಾಜ್ಯಪಾಲ ಗೆಹ್ಲೋಟ್​​, ಮಾನವತಾ ಕಲ್ಯಾಣಕ್ಕಾಗಿ ದುಡಿದ ಶಿವಕುಮಾರ ಶ್ರಿಗಳ ಸೇವೆ ಅನನ್ಯವಾಗಿದೆ. ಸಬಕ್ ಸಾಥ್ ಸಬ್ ಕಾ ವಿಕಾಸ್ ರೀತಿ ಶ್ರೀಗಳು ಸೇವೆ ಮಾಡುತಿದ್ದರು ಎಂದು ಗುಣಗಾನ ಮಾಡಿದ್ದಾರೆ. ಶಿವಕುಮಾರ ಸ್ವಾಮಿಜಿಗಳು ಒಂದು ಶಕ್ತಿಯಾಗಿದ್ದರು. ಅನಾಥ ಮಕ್ಕಳ ಅಪ್ಪನಾಗಿ ಸಲಹಿದ ಕಥೆ ಅವರದ್ದು. ಸ್ವಾಮೀಜಿ ಮನ್ಯಷ್ಯನಿಂದ ಮಹದೇವರಾದವರು ಎಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಅಭಿಪ್ರಾಯಪಟ್ಟಿದ್ದಾರೆ. ತ್ರಿವಿಧ ದಾಸೋಹದ ಮೂಲಕ ಸಿದ್ಧಗಂಗಾ ಮಠ ಪ್ರಸಿದ್ಧಿಯಾಗಿದ್ದು, ಆಧ್ಯಾತ್ಮಿಕ ಕ್ಷೇತ್ರವಾಗಿ ಸಿದ್ಧಗಂಗಾ ಮಠ ಜನಪರ ಕೆಲಸ ಮಾಡಿದೆ. ಸಿದ್ಧಗಂಗಾ ಮಠ ಕೇವಲ ಧರ್ಮ ಕ್ಷೇತ್ರವಲ್ಲ. ಬದಲಾಗಿ ಶೈಕ್ಷಣಿಕ ಮತ್ತು ಸಾಮಾಜಿಕ ಕ್ರಾಂತಿಯ ಕ್ಷೇತ್ರ ಎಂದು ಗೃಹ ಸಚಿವ ಡಾ.ಪರಮೇಶ್ವರ್ ಕೂಡ ಶ್ರೀಗಳ ಸಮಾಜ ಸೇವೆಯನ್ನು ಕೊಂಡಾಡಿದ್ದಾರೆ. ಇದೇ ವೇಳೆ ರಾಷ್ಟ್ರಪತಿಗಳಿಗೆ ಮಠದ ಪರವಾಗಿ ಬಸವಣ್ಣನ ಮೂರ್ತಿಯನ್ನ ಸಿದ್ದಲಿಂಗ ಸ್ವಾಮೀಜಿ ಉಡುಗೊರೆಯಾಗಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link