ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮನೆ ಕಟ್ಟುವಾಗ ಅಡಿಪಾಯ ಯಾವ ದಿನ ಕಾಕಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಹಿಂದೂ ಸನಾತನ ಸಂಸ್ಕೃತಿಯ ಪ್ರಕಾರ, ಮನೆಯ ನಿರ್ಮಾಣ ಕಾರ್ಯವನ್ನು (ಗೃಹಾರಂಭ) ಪ್ರಾರಂಭಿಸುವ ಸಮಯ ಬಹಳ ಮಹತ್ವಪೂರ್ಣವಾಗಿದೆ. ಸರಿಯಾದ ಮಾಸದಲ್ಲಿ ಗೃಹಾರಂಭ ಮಾಡಿದರೆ ಅದು ನಿರ್ವಿಘ್ನವಾಗಿ ಪೂರ್ಣಗೊಂಡು ಮನೆ ನಿವಾಸಿಗಳಿಗೆ ಶುಭ ಫಲ ನೀಡುತ್ತದೆ. ವೈಶಾಖ, ಫಾಲ್ಗುಣ, ಶ್ರಾವಣ ಮತ್ತು ಮಾಘ ಮಾಸಗಳು ಗೃಹಾರಂಭಕ್ಕೆ ಅತ್ಯಂತ ಶುಭಕರ ಎಂದು ಬಾದರಾಯಣರು ತಮ್ಮ ಗ್ರಂಥಗಳಲ್ಲಿ ಹೇಳಿದ್ದಾರೆ. ನಾರದ ಮಹರ್ಷಿಗಳು ಪುಷ್ಯ ಮಾಸವನ್ನೂ ಶುಭ ಎಂದು ಪರಿಗಣಿಸಿದ್ದಾರೆ ಎಂದು ಗುರೂಜಿ ಹೇಳಿದ್ದಾರೆ.
ಮೇಷ ರಾಶಿ :
ನಿರಂತರ ಅಭ್ಯಾಸಗಳ ಬಗ್ಗೆ ಎಚ್ಚರಿಕೆ ಇರಲಿ. ಕೆಲವು ದೌರ್ಬಲ್ಯವನ್ನು ಪ್ರಯತ್ನಪೂರ್ವಕವಾಗಿ ಬಿಡಬೇಕಾಗಬಹುದು. ನಿಮ್ಮ ಸಾಧ್ಯವಾದುದನ್ನು ಮಾತ್ರ ಒಪ್ಪಿಕೊಳ್ಳಿ. ನಿಮಗೆ ಆಪ್ತರ ಜೊತೆ ಮಾತನಾಡದೇ ನೆಮ್ಮದಿಯು ಸಿಗದೇಹೋದೀತು. ಸಂಗಾತಿಯ ಜೊತೆ ಆರ್ಥಿಕತೆಯ ಬಗ್ಗೆ ವಾಗ್ವಾದ ಮಾಡುವಿರಿ. ತನ್ನವರ ಬಗ್ಗೆ ನಂಬಿಕೆ ಇರದು. ಮಾತನ್ನು ಕಡಿಮೆ ಮಾಡಿ ಏಕಾಂಗಿಯಾಗಿ ಇರುವಿರಿ. ನಿಮಗೆ ಹಲವು ದಿನಗಳಿಂದ ಬಯಸಿದ್ದು ಸಿಗದೆ ಬೇಸರವಾದೀತು. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಬರಲಿವೆ.
ವೃಷಭ ರಾಶಿ :
ಇಂದು ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ತೋರಿಸಬಹುದು. ಅಪನಂಬಿಕೆಗಳು ದೂರಾಗಬೇಕಿದೆ. ಸಾಮಾಜಿಕ ಕಾರ್ಯಗಳನ್ನು ಮಾಡಲು ನಿಮಗೆ ಇಂದು ಉತ್ಸಾಹ ಇರಲಿದೆ. ಸಜ್ಜನರ ಸಹವಾಸವು ಅನಿರೀಕ್ಷಿತವಾಗಿ ಸಿಗುವುದು. ಅನಪೇಕ್ಷಿತ ಸಹಕಾರದಿಂದ ಆರ್ಥಿಕ ಚಿಂತೆ. ಸ್ವತಃ ಉದ್ಯೋಗವನ್ನು ಮಾಡುವ ಆಲೋಚನೆಯು ಬರಬಹುದು. ಅಪರಿಚಿತರ ಜೊತೆ ಸಲುಗೆಯಿಂದ ಇರುವಿರಿ. ಅಧಿಕ ಬೆಲೆ ಉತ್ತಮ ವಸ್ತುಗಳ ಖರೀದಿ ಮಾಡುವಿರಿ. ಸಂತೋಷದಿಂದ ನೀವು ಹೆಚ್ಚು ದಿನವನ್ನು ಕಳೆಯುವಿರಿ.
ಮಿಥುನ ರಾಶಿ :
ನಿಮ್ಮ ವೃತ್ತಿಪರ ಜೀವನದಲ್ಲಿ ದೊಡ್ಡ ಬದಲಾವಣೆಗಳು ಬರಲಿವೆ. ಸ್ತ್ರೀಯರಿಗೆ ಮನೆಯ ಕೆಲಸವು ಸಾಕೆನಿಸಿ ಹೊರಗೆ ಹೋಗಬೇಕು ಎನಿಸಬಹುದು. ನಿಮ್ಮ ಪ್ರೀತಿಗೆ ಅಡ್ಡಿ ಆತಂಕಗಳು ಬರಬಹುದು. ಇಂದಿನ ಕಾರ್ಯವನ್ನು ಸರಿಯಾಗಿ ಯೋಜಿಸಿಕೊಂಡು. ಮಾತಿನ ಅಸ್ಪಷ್ಟತೆಯು ಕೇಳುಗರಿಗೆ ಕಷ್ಟವಾದೀತು. ಯಶಸ್ಸಿನ ಗುಟ್ಟನ್ನು ಬಯಲುಮಾಡುಬಿರಿ. ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕಾದಲ್ಲಿ ತಿಳಿಸಿ. ಕಲಾವಿದರು ಹೆಚ್ಚು ಶ್ರಮ ಹಾಕಿದರೆ ತಮ್ಮ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಿಯಾರು.
ಕರ್ಕಾಟಕ ರಾಶಿ :
ಅದೃಷ್ಟವು ನಿಮ್ಮ ದಾರಿಯಲ್ಲಿ ಬರುತ್ತಿದೆ ಮತ್ತು ನಿಮ್ಮ ಕನಸುಗಳನ್ನು ನೀವು ನಂಬಿದರೆ, ನಿಮ್ಮ ಗುರಿಯಲ್ಲಿ ನಿರತರಾಗಿದ್ದರೆ, ನಿಮಗೆ ಯಶಸ್ಸು ಖಚಿತ. ಮಕ್ಕಳಿಗೆ ಶಿಸ್ತನ್ನು ಕಲಿಸಲು ನಿಮಗೆ ಆಗದೇ ಹೋದೀತು. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಸಂಗಾತಿಯಿಂದ ಪ್ರಚೋದಿತರಾಗುವಿರಿ. ಉದ್ಯೋಗದಲ್ಲಿ ನಿಮಗೆ ಬೆಂಬಲಿಸುವವರು ಹೆಚ್ಚಿರಬಹುದು. ಕೃಷಿಯು ಕಡೆಗೆ ಗಮನ ಹೆಚ್ಚಾಗಿ ನೀಡುವಿರಿ. ಸಂಗಾತಿಯು ನಿಮ್ಮ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಹೋಗಬಹುದು. ನಿಮಗೆ ಕೆಲವು ವಿಚಾರದಲ್ಲಿ ಕಾನೂನಿನ ತೊಂದರೆ ಕಾಡಬಹುದು.
ಸಿಂಹ ರಾಶಿ :
ನಿಮಗೆ ಸಿಗುವ ಜನರ ಪ್ರೀತಿಗೆ ಪ್ರತಿಯಾಗಿ ಸಮಯವನ್ನಾದರೂ ಕೊಡಿ. ಮುಕ್ತವಾಗಿ ಸಂವಾದ ಮಾಡಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ. ಅತಿಯಾದ ಚಿಂತೆಯಿಂದ ಆರೋಗ್ಯವನ್ನು ಹಾಳು ಮಾಡಿಕೊಳ್ಳುವಿರಿ. ಬೇಕಾದಷ್ಟು ಸಂಪತ್ತಿದ್ದರೂ ನಿಮಗೆ ಸರಿಯಾದ ನೆಮ್ಮದಿಯ ಸಿಗದು. ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಕಾರ್ಯದಲ್ಲಿ ಸಕ್ರಿಯರಾಗಿ. ಸಂಗಾತಿಯೂ ನಿಮಗೆ ಮಾನಸಿಕವಾಗಿ ಘಾಸಿ ಮಾಡಬಹುದು. ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ, ಇನ್ನೊಬ್ಬರಿಗೆ ಸಹಾಯ ಮಾಡುವಿರಿ. ಮನಸ್ಸಿನ ತಾದಾತ್ಮ್ಯದಿಂದ ನಿಮಗೆ ಕಷ್ಟದ ಪೂರ್ಣ ಪ್ರಭಾವವು ನಿಮ್ಮ ಮೇಲೆ ಆಗದು.
ಕನ್ಯಾ ರಾಶಿ :
ಇಂದು ನಿಮ್ಮನ್ನು ನೀವು ಧನಾತ್ಮಕವಾಗಿ ಪ್ರಸ್ತುತಪಡಿಸುವತ್ತ ಗಮನಹರಿಸಿ. ಋಣಶೇಣವನ್ನು ಉಳಿಸಿಕೊಳ್ಳದೇ ತೀರಿಸಿಕೊಂಡು ಮುಂದಿನ ಯೋಜನೆಗೆ ಸಿದ್ಧತೆ ನಡೆಸುವಿರಿ. ಅಂತಸ್ಸಾಕ್ಷಿಯನ್ನು ಬಿಟ್ಟು ನೀವು ದೂರಾಗಬಹುದು. ನಿಮಗೆ ಇನ್ನೊಬ್ಬರ ಬಗ್ಗೆಯೇ ಅಧಿಕ ಆಲೋಚನೆ ಇರುವುದು. ಅಪರಾಧಿ ಪ್ರಜ್ಞೆ ನಿಮ್ಮನ್ನು ಕಾಡುವುದು. ಕಾಲಾತ್ಮಕ ಕೆಲಸದಲ್ಲಿ ಆಸಕ್ತಿ ಹೆಚ್ಚಾಗುವುದು. ಇಂದಿನ ದೂರಪ್ರಯಾಣವು ನಿರಾಶಾದಾಯಕವಾಗಿದ್ದು ಎಲ್ಲರನ್ನೂ ಹೀಗಳೆಯುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಗೊಂದಲವು ನಿವಾರಣೆಯಾಗುವುದು.
ತುಲಾ ರಾಶಿ :
ಇಂದು ದೀರ್ಘಕಾಲದ ನಿಮ್ಮ ಸಂಬಂಧಕ್ಕೆ ವಿರಾಮವು ಸಿಗಬಹುದು. ಪಡೆದುಕೊಳ್ಳಬೇಕಾದ ಸ್ಥಿರಾಸ್ತಿ ನಿಮಗೆ ಬರುವುದು. ವಿದ್ಯಾಭ್ಯಾಸಕ್ಕೆ ಉಂಟಾದ ತೊಂದರೆಯನ್ನು ನೀವು ಬಗೆಹರಿಸಿಕೊಳ್ಳುವಿರಿ. ನಿಮ್ಮ ಸಹಜ ವರ್ತನೆಯೂ ನಿಮ್ಮರಿಗೆ ಸಿಟ್ಟನ್ನು ಉಂಟುಮಾಡೀತು. ನಿಮಗೆ ಕಛೇರಿಯಲ್ಲಿ ಪ್ರಶಂಸೆಯು ಸಿಗಬಹುದು. ಕೆಲವರು ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ವಿಶ್ವಾಸಕ್ಕೆ ಯೋಗ್ಯವಾದ ಕೆಲಸವನ್ನು ಮಾಡುವಿರಿ. ಭೂಮಿಯ ವ್ಯವಹಾರವು ಸಾಕೆನಿಸಬಹುದು. ನಿಮ್ಮ ಶಿಸ್ತಿನ ಜೀವನವನ್ನು ಯಾರೂ ಕೇಳರು.
ವೃಶ್ಚಿಕ ರಾಶಿ :
ಕೆಲಸದಲ್ಲಿ ಹೊಸತನ ಬಹಳ ಮುಖ್ಯವಾಗುತ್ತದೆ. ಮಕ್ಕಳ ವಿವಾಹಕ್ಕಾಗಿ ಓಡಾಟ, ಮಾತುಕತೆಗಳನ್ನು ಮಾಡಬೇಕಾದೀತು. ಮಕ್ಕಳನ್ನು ಪಡೆಯಬೇಕು ಎಂಬ ಆಸೆ ಬರುವುದು. ನಿಮ್ಮ ಸಂಬಂಧಿಕರೊಂದಿಗೆ ಸಮಯ ಕಳೆಯಬಹುದು. ವಿದ್ಯಾರ್ಥಿಗಳ ಅಭ್ಯಾಸ ಉನ್ನತ ಅಧ್ಯಯನಕ್ಕೆ ಸಹಕಾರಿ. ಯಾವುದೇ ಆಸ್ತಿಯಲ್ಲಿ ಹೂಡಿಕೆ ಮಾಡುವುದು ಬೇಡ. ಮಕ್ಕಳಿಗೆ ಮನೆಯ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತರಾಗಲು ಇಷ್ಟಪಡುವಿರಿ. ವೃತ್ತಿಯಲ್ಲಿ ಕಾರ್ಯವು ಸರಿಯಾಗದೇ ಸಂಕಷ್ಟಕ್ಕೆ ಬೀಳುವಿರಿ. ಅಧಿಕಾರಿಗಳಿಂದ ನಿಮಗೆ ಅಪಮಾನವೂ ಆದೀತು.
ಧನು ರಾಶಿ :
ಹಿತಶತ್ರುಗಳನ್ನು ಇಂದು ಅವರಾಡುವ ಮಾತುಗಳಿಂದ ಗುರುತಿಸುವಿರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿಲ್ಲ. ಖರ್ಚಿನ ವಿಚಾರದಲ್ಲಿ ಔದಾರ್ಯ ಬೇಡ. ವಾಸಸ್ಥಳ ಬದಲಾವಣೆಯಿಂದ ಹೆಚ್ಚು ಸಂತೋಷ ಇರುವುದು. ನಿಮ್ಮವರ ಮೇಲಿರುವ ಅನುಮಾನ ನಿವಾರಣೆ ಮಾಡಿಕೊಳ್ಳುವಿರಿ. ಚಂಚಲ ಮನಃಸ್ಥಿತಿಯು ನಿಮ್ಮ ಕಛೇರಿಯ ಕಾರ್ಯವನ್ನು ಮಾಡಲು ಬಿಡದು. ಸಹನೆ ನಿಮ್ಮ ಜೊತೆ ದಿನಪೂರ್ತಿ ಇರಲಿ. ನಿಮ್ಮ ಅಂದಾಜಿನ ಆದಾಯವನ್ನು ತಲುಪುವಿರಿ. ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾದೀತು.
ಮಕರ ರಾಶಿ :
ಯಾರಿಂದಲಾದರೂ ಹಣವನ್ನು ಎರವಲು ಪಡೆದ ಜನರಿಗೆ ಯಾವುದೇ ಪರಿಸ್ಥಿತಿಯಲ್ಲಿ ಸಾಲವನ್ನು ಮರುಪಾವತಿ ಮಾಡಬೇಕಾಗಬಹುದು. ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಉತ್ಸಾಹವನ್ನು ನೀವು ನಿಯಂತ್ರಿಸಬೇಕು. ದೂರವಾಣಿ ಕರೆಗಳಿಂದ ನಿಮಗೆ ತೊಂದರೆ. ಓಡಾಟದಲ್ಲಿ ಕೆಲವು ಅಡೆತಡೆಗಳ ಬರಬಹುದು. ನಿಮ್ಮ ದೌರ್ಬಲ್ಯಗಳಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ. ವ್ಯಕ್ತಿತ್ವದಲ್ಲಿ ಬದಲಾದಂತೆ ಕಾಣುವಿರಿ. ಆರ್ಥಿಕತೆಯ ಬೆಳವಣಿಗೆಯು ನಿಮಗೆ ಸಂತೋಷವನ್ನು ಕೊಡುವುದು.
ಕುಂಭ ರಾಶಿ :
ಇಂದು ಹೊಸ ಸಂಪರ್ಕದಿಂದ ಕಾರ್ಯ ಸಾಧನೆ. ವೃತ್ತಿಜೀವನದ ಕೌಶಲ್ಯಗಳನ್ನು ಹೆಚ್ಚಿಸಲು ಸಮಯವನ್ನು ಬಳಸಿಕೊಳ್ಳುವಿರಿ. ಹೂಡಿಕೆ ಮಾಡಲು ಹೊಸ ಮಾರ್ಗಗಳನ್ನು ತೆರೆಯಬಹುದು. ಹಾಸ್ಯಯುಕ್ತವಾದ ಮಾತಿನಿಂದ ಗೌರವವನ್ನು ಕಳೆದುಕೊಳ್ಳುವಿರಿ. ಹಲವರ ಅಭಿಪ್ರಾಯದಿಂದ ನಿಮಗೆ ಗೊಂದಲವಾಗುವುದು. ಇಂದು ಹಳೆಯ ತಪ್ಪಿಗೆ ನೀವು ಪಶ್ಚಾತ್ತಾಪ ಪಡಪಡುವಿರಿ. ಇಂದಿನ ನಿಮ್ಮ ಖರ್ಚು ಹೆಚ್ಚಾದಂತೆ ಅನ್ನಿಸೀತು. ನಿಮ್ಮ ನಿರ್ಮಾಣದ ಕಾರ್ಯಗಳು ನಿಧಾನವಾಗುವುದು. ನಿಮ್ಮ ಮನೋಬಲವನ್ನು ಕುಗ್ಗಿಸುವ ಪ್ರಯತ್ನವನ್ನು ಜೊತೆಗಾರರು ಮಾಡುವರು.
ಮೀನ ರಾಶಿ :
ಆರ್ಥಿಕತೆಯ ಬಗ್ಗೆ ನೀವು ಸರಿಯಾಗಿ ತಿಳಿದುಕೊಳ್ಳಬೇಕಾಗಬಹುದು. ಇಂದು ಬದಲಾವಣೆಯ ದಿನವಾಗಿದ್ದರೂ, ಆಶ್ಚರ್ಯವು ಕಾಣಿಸಿಕೊಳ್ಳಬಹುದು. ನಿಮ್ಮನ್ನು ಯಾರಾದರೂ ಆರ್ಥಿಕ ತೊಂದರೆಗೆ ಸಿಲುಕಿಸಬಹುದು. ಒಡೆದ ಬಾಂಧವ್ಯ ಮತ್ತೆ ಕೂಡಲಿದೆ. ಇಂದು ನೀವು ನಿಮ್ಮ ಕುಟುಂಬದವರ ಜೊತೆ ಅಧಿಕ ಕಾಲವನ್ನು ಕಳೆಯುವಿರಿ. ಸ್ಥಿರಾಸ್ತಿಯನ್ನು ಉಳಿಸಿಕೊಳ್ಳಲು ಶತಪ್ರಯತ್ನ ಮಾಡಬೇಕಾದೀತು. ಮನೆಯಲ್ಲಿ ಬಹಳ ಕಾರ್ಯಗಳಿದ್ದು ಅದರಲ್ಲಿ ತನ್ಮಯರಾಗುವಿರಿ. ನಿಮ್ಮ ವಸ್ತುಗಳನ್ನು ಜೋಪಾನವಾಗಿ ಇಡಿ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಚಿತ್ರಾ, ಯೋಗ : ಧ್ರುವ, ಕರಣ : ವಣಿಜ, ಸೂರ್ಯೋದಯ – 06 – 20 am, ಸೂರ್ಯಾಸ್ತ – 06 – 35 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:56 – 12:28, ಯಮಗಂಡ ಕಾಲ 15:32 – 17:04, ಗುಳಿಕ ಕಾಲ 07:52 – 09:24
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯವನ್ನು ಗೆಲ್ಲು ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ 2026 ರಲ್ಲಿ ತನ್ನ ಗೆಲುವಿನ ಖಾತೆಯನ್ನು ತೆರೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 226 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ ಉತ್ತಮ ಆರಂಭದ ಹೊರತಾಗಿಯೂ 65 ರನ್ಗಳ ಹೀನಾಯ ಸೋಲುಂಡು ಲೀಗ್ನಲ್ಲಿ ಸತತ ಎರಡನೇ ಸೋಲನ್ನು ಅನುಭವಿಸಿತು.
226 ರನ್ ಕಲೆಹಾಕಿದ ಎಸ್ಆರ್ಎಚ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಭರ್ಜರಿ ಆರಂಭ ನೀಡಿದರು. ಅಭಿಷೇಕ್ ಶರ್ಮಾ 21 ಎಸೆತಗಳಲ್ಲಿ 48 ರನ್ ಗಳಿಸಿದರೆ, ಟ್ರಾವಿಸ್ ಹೆಡ್ 21 ಎಸೆತಗಳಲ್ಲಿ 46 ರನ್ ಗಳಿಸಿದರು. ಇಬ್ಬರೂ 34 ಎಸೆತಗಳಲ್ಲಿ 82 ರನ್ಗಳ ಸ್ಫೋಟಕ ಜೊತೆಯಾಟವನ್ನು ಹಂಚಿಕೊಂಡರು. ನಂತರ ಹೆನ್ರಿಕ್ ಕ್ಲಾಸೆನ್ 52 ರನ್ಗಳೊಂದಿಗೆ ಗಮನಾರ್ಹ ಕೊಡುಗೆ ನೀಡಿದರು. ಈ ಮಧ್ಯೆ ನಿತೀಶ್ ಕುಮಾರ್ ರೆಡ್ಡಿ 39 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು 226 ರನ್ಗಳ ಬೃಹತ್ ಮೊತ್ತಕ್ಕೆ ಕೊಂಡೊಯ್ದರು.
ಮತ್ತೊಂದೆಡೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬೌಲಿಂಗ್ ಮತ್ತೊಮ್ಮೆ ದುಬಾರಿಯಾಯಿತು. ಆದರೆ ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಅದ್ಭುತ ಪ್ರದರ್ಶನ ನೀಡಿ 4 ಓವರ್ಗಳಲ್ಲಿ 41 ರನ್ ನೀಡಿ 4 ವಿಕೆಟ್ಗಳನ್ನು ಪಡೆದರು. ಇದರಲ್ಲಿ ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಹೆನ್ರಿಕ್ ಕ್ಲಾಸೆನ್ ಮತ್ತು ಶಿವಾಂಗ್ ಕುಮಾರ್ ಅವರ ವಿಕೆಟ್ಗಳು ಸೇರಿದ್ದವು.
ಕೆಕೆಆರ್ ಬ್ಯಾಟಿಂಗ್ ವೈಫಲ್ಯ
227 ರನ್ಗಳ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ಉತ್ತಮ ಆರಂಭವನ್ನು ಪಡೆದುಕೊಂಡಿತು. ಆದರೆ ವಿಕೆಟ್ಗಳು ನಿರಂತರವಾಗಿ ಬಿದ್ದ ಕಾರಣ ತಂಡದ ಮೇಲೆ ಒತ್ತಡ ಹೆಚ್ಚಾಯಿತು. ತಂಡದ ಪರ ಯುವ ಬ್ಯಾಟರ್ ಅಂಗ್ಕ್ರಿಶ್ ರಘುವಂಶಿ 52 ರನ್ಗಳಿಸಿ ರನೌಟ್ ಆದರೆ, ರಿಂಕು ಸಿಂಗ್ ಕೂಡ 35 ರನ್ಗಳಿಗೆ ಸುಸ್ತಾದರು. ಇದಕ್ಕೂ ಮೊದಲು, ಫಿನ್ ಅಲೆನ್ 7 ಎಸೆತಗಳಲ್ಲಿ 28 ರನ್ಗಳನ್ನು ಗಳಿಸಿ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಆದರೆ ಎಸ್ಆರ್ಹೆಚ್ನ ಬೌಲರ್ಗಳು ಬಿಗಿಯಾಗಿ ಬೌಲಿಂಗ್ ಮಾಡಿದ ಕೆಕೆಆರ್ ತಂಡವನ್ನು 161 ರನ್ಗಳಿಗೆ ಆಲೌಟ್ ಮಾಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಸತ್ಯ ಘಟನೆಗಳನ್ನು ಆಧರಿಸಿ ‘ಬಾಸ್’ ಸಿನಿಮಾ (Boss Movie) ನಿರ್ಮಾಣ ಆಗಿದೆ. ಈ ಚಿತ್ರಕ್ಕೆ ಲವ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಕಥೆಗೂ ನಟ ದರ್ಶನ್ (Darshan) ಅವರ ಜೀವನದ ಘಟನೆಗಳಿಗೂ ಸಾಮ್ಯತೆ ಕಾಣಿಸಿದೆ ಎಂಬ ಆರೋಪ ಇದೆ. ಆ ಬಗ್ಗೆ ನಿರ್ದೇಶಕರು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ‘ನಮ್ಮ ಸಿನಿಮಾಗೆ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿದೆ. ಯಾರ ಪ್ರಭಾವಕ್ಕೂ ಒಳಗಾಗದೇ ಕಾನೂನಿನ ಪ್ರಕಾರ ಯು/ಎ ಪ್ರಮಾಣಪತ್ರ ನೀಡಲಾಗಿದೆ. ಸ್ಪಷ್ಟವಾಗಿ ನಾನು ಹೇಳುತ್ತೇನೆ.. ಇದು ಪ್ರತಿ ದಿನ ಸಮಾಜದಲ್ಲಿ ನಡೆಯುವ ಸತ್ಯ ಘಟನೆಗಳನ್ನು ಆಧರಿಸಿ ಮಾಡಿದ ಸಿನಿಮಾ. ಈ ಚಿತ್ರಕ್ಕೂ ದರ್ಶನ್ ಅವರಿಗೂ ಸಂಬಂಧ ಇಲ್ಲ. ಅವರ ಕಥೆಯನ್ನು ಇಟ್ಟುಕೊಂಡು ನಾವು ಸಿನಿಮಾ ಮಾಡಿಲ್ಲ’ ಎಂದು ಲವ ಅವರು ಹೇಳಿದ್ದಾರೆ.
ನವದೆಹಲಿ, (ಏಪ್ರಿಲ್ 02): ಕರ್ನಾಟಕ ಸರ್ಕಾರ (Karnataka Government) EVM ಬದಲು ಬ್ಯಾಲೆಟ್ ಪೇಪರ್ ಬಳಸಿ ತಂತ್ರಜ್ಞಾನದಿಂದ ದೂರ ಸರಿದ ಬೆನ್ನಲ್ಲೇ ಇದೀಗ “EVಗಳ ಮೇಲಿನ ತೆರಿಗೆ ವಿನಾಯಿತಿ ಹಿಂಪಡೆದು ಲೈಫ್ಟೈಮ್ ರಸ್ತೆ ತೆರಿಗೆ ವಿಧಿಸುತ್ತಿರುವುದು ಸುಧಾರಣೆಯಿಂದ ಮತ್ತೊಂದು ಹೆಜ್ಜೆ ಹಿಂದೆ ಹೋದಂತಿದೆ” ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ (Union Minister pralhad joshi) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರ್ಕಾರ ಈ ಮೂಲಕ EV ನೀತಿಗೆ ಭಾರೀ ಯು-ಟರ್ನ್ ಹೊಡೆಯುತ್ತಿದೆ. ಶುದ್ಧ ಇಂಧನಕ್ಕಾಗಿ ಇಡೀ ಜಗತ್ತೇ ಇಂದು ಭಾರತ ದೇಶದ ಜತೆ ಮುಂದಡಿ ಇಟ್ಟಿದೆ. ಅಂಥದ್ದರಲ್ಲಿ ಕರ್ನಾಟಕ ಏಕೆ ಹೀಗೆ ರಿವರ್ಸ್ ಗೇರ್ ಹಾಕುತ್ತಿದೆ? ಎಂದು ಸಚಿವರು ಪ್ರಶ್ನಿಸಿದ್ದಾರೆ.
ಕರ್ನಾಟಕ ಸರ್ಕಾರ ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ (EV) ಮೇಲೆ ವಿಧಿಸಿದ್ದ ತೆರಿಗೆ ವಿನಾಯಿತಿಯನ್ನು ಹಿಂಪಡೆದು, ಈಗ ಲೈಫ್ಟೈಮ್ ರಸ್ತೆ ತೆರಿಗೆ ವಿಧಿಸುವ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ಮಧ್ಯಮ ವರ್ಗದವರ ಮೇಲೆ ಹೆಚ್ಚುವರಿ ಭಾರ ಹಾಕುತ್ತಿದೆ ಎಂದು ಜೋಶಿ ಕಿಡಿ ಕಾರಿದ್ದಾರೆ.
ದೇಶದಲ್ಲಿನ ಇತರೆ ರಾಜ್ಯಗಳು EV ಬಳಕೆಯನ್ನು ಉತ್ತೇಜಿಸುತ್ತಿವೆ. ವಾಸ್ತವ ಹೀಗಿರುವಾಗ ಕರ್ನಾಟಕ ಮಾತ್ರ ಹಸಿರು ಇಂಧನ ಆಯ್ಕೆಯನ್ನು ಪ್ರೋತ್ಸಾಹಿಸುವಲ್ಲಿ ನಿರುತ್ಸಾಹ ತೋರುತ್ತಿದೆ. ಸ್ವಚ್ಛ ಸಾರಿಗೆಗೆ ಮಾದರಿಯಾಗಿದ್ದ ಕರ್ನಾಟಕವನ್ನು ಸುಧಾರಣೆಯಿಂದ ಹಿಂದಡಿ ಇಡುವಂತೆ ಮಾಡಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಜನಸಾಮಾನ್ಯರು EV ಖರೀದಿಸುವಾಗ ಹೆಚ್ಚುವರಿ ವೆಚ್ಚ ಭರಿಸುವಂತೆ ಆಗಿದೆ. ಮಧ್ಯಮ ವರ್ಗದವರಿಗೆ EV ತೆಗೆದುಕೊಳ್ಳುವುದು ಬಲು ದುಬಾರಿಯಾಗಿ ಪರಿಣಮಿಸುತ್ತಿದೆ ಎಂದು ಸಚಿವ ಜೋಶಿ ಕಳವಳ ವ್ಯಕ್ತಪಡಿಸಿದ್ದಾರೆ.
ಇತರ ರಾಜ್ಯಗಳಲ್ಲಿ EVಗಳಿಗೆ ತೆರಿಗೆ ವಿನಾಯಿತಿ, ಮತ್ತು ಕಡಿಮೆ ತೆರಿಗೆ ವಿಧಿಸಲಾಗುತ್ತಿದೆ. ಅಲ್ಲದೇ, ಹಸಿರು ಇಂಧನವನ್ನು ಉತ್ತೇಜಿಸುವ ನೀತಿಗಳು ಮುಂದುವರಿದಿವೆ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಜನವಿರೋಧಿ, ಆವಿಷ್ಕಾರ, ತಂತ್ರಜ್ಞಾನ ನೀತಿಗಳಿಂದಾಗಿ ರಾಜ್ಯವನ್ನು ಹಿಮ್ಮುಖವಾಗಿ ಕೊಂಡೊಯ್ಯುತ್ತಿದೆ. ರಾಜ್ಯ ಸರ್ಕಾರದ ಈ ನಡೆ EV ಬಳಕೆಯನ್ನು ಉತ್ತೇಜಿಸುವ ಬದಲು, ಕಡಿಮೆ ಮಾಡುವ ಸಾಧ್ಯತೆ ಇದೆ ಆತಂಕ ಪಟ್ಟಿರುವ ಸಚಿವರು, ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ದೇವನಹಳ್ಳಿ, ಏಪ್ರಿಲ್ 02: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಜಿಲ್ಲಾಡಳಿತ ಭವನದಲ್ಲಿ ಸಚಿವ ಕೆ.ಹೆಚ್ ಮುನಿಯಪ್ಪ ನೇತೃತ್ವದಲ್ಲಿ ನಡೆದ ಡಾ. ಬಿಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತಿನ ಜಟಾಪಟಿಯೇ ನಡೆಯಿತು. ಇದೇ ವೇಳೆ ಸಚಿವರ ಎದುರೇ ವಿಷ ಕುಡಿಯುವುದಾಗಿ ರೈತರೊಬ್ಬರು ಹೇಳಿದ್ದಾರೆ. ದೇವನಹಳ್ಳಿಯ ಮುದಗುರ್ಕಿ ಗ್ರಾಮದ ನಿವಾಸಿ ಆಂಜಿನಪ್ಪ ಸಭೆಗೆ ವಿಷದ ಬಾಟಲ್ ತಂದಿದ್ದರು. 20 ಗುಂಟೆ ಜಮೀನು ವ್ಯಾಜ್ಯ ವಿಚಾರಕ್ಕೆ ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಆರೋಪ ಮಾಡಿದ್ದಾರೆ. ಅಂಬೇಡ್ಕರ್ ಜಯಂತಿ ಒಳಗಾಗಿ ವ್ಯಾಜ್ಯ ಬಗೆ ಹರಿಸದಿದ್ದರೆ ಕುಟುಂಬ ಸಮೇತ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಪೊಲೀಸರು ವಿಷದ ಬಾಟಲ್ ಕಿತ್ತುಕೊಂಡು ಬುದ್ದಿವಾದ ಹೇಳಿದ್ದಾರೆ.
ನವದೆಹಲಿ, ಏಪ್ರಿಲ್ 2: ಆಮ್ ಆದ್ಮಿ ಪಕ್ಷ (ಎಎಪಿ) ಸಂಸದ ರಾಘವ್ ಚಡ್ಡಾ (Raghav Chadha) ಅವರನ್ನು ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಹುದ್ದೆಯಿಂದ ವಜಾಗೊಳಿಸಿದೆ. ಅವರನ್ನು ತೆಗೆದುಹಾಕುವಂತೆ ಕೋರಿ ಎಎಪಿ ರಾಜ್ಯಸಭಾ ಸಚಿವಾಲಯಕ್ಕೆ ಪತ್ರ ಬರೆದಿದೆ. ಎಎಪಿಯ ವತಿಯಿಂದ ಅವರಿಗೆ ರಾಜ್ಯಸಭೆಯಲ್ಲಿ ಮಾತನಾಡುವ ಸಮಯವನ್ನು ನೀಡಬಾರದು ಎಂದು ಮನವಿ ಮಾಡಿದೆ. ಆದರೆ, ಈ ನಿರ್ಧಾರಕ್ಕೆ ಕಾರಣವೇನೆಂಬುದರ ಬಗ್ಗೆ ಪಕ್ಷ ಯಾವುದೇ ಮಾಹಿತಿ ನೀಡದಿರುವುದು ಕುತೂಹಲ ಮೂಡಿಸಿದೆ.
ಇನ್ನೊಂದೆಡೆ ರಾಘವ್ ಚಡ್ಡಾ ಕೂಡ ಈ ಸುದ್ದಿಯ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲವಾದರೂ ಈ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ರಾಜ್ಯಸಭಾ ಅಧಿವೇಶನದಲ್ಲಿ ತಾವು ಮಾಡಿದ ಭಾಷಣದ, ಹೈಲೈಟ್ ಮಾಡಿದ ಸಮಸ್ಯೆಗಳ ಕುರಿತಾದ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋ ಮೇಲೆ ಕೆಟ್ಟ ದೃಷ್ಟಿ ತಾಗದಿರಲಿ ಎಂಬ ಇಮೋಜಿ ಕೂಡ ಹಾಕಿದ್ದಾರೆ.
ರಾಘವ್ ಚಡ್ಡಾ ಅವರು ಸಂಸತ್ತಿನಲ್ಲಿ ಎತ್ತಿದ್ದ ಸಮಸ್ಯೆಗಳ ಕೊಲಾಜ್ ಹೊಂದಿರುವ ವೀಡಿಯೊವನ್ನು ಹಂಚಿಕೊಂಡಿದ್ದು, ಇದು ರಾಷ್ಟ್ರವ್ಯಾಪಿ ಗಮನ ಸೆಳೆದಿದೆ. ಆನ್ಲೈನ್ ಪ್ಲಾಟ್ಫಾರ್ಮ್ಗಳ ಡೆಲಿವರಿ ವ್ಯಕ್ತಿಗಳಿಗೆ ಸೌಲಭ್ಯಗಳು, ಪಿತೃತ್ವ ರಜೆ, ಆಹಾರ ಕಲಬೆರಕೆ, ಮೊಬೈಲ್ ಡೇಟಾ ಬಳಕೆ ಮತ್ತು ವಿಮಾನ ವಿಳಂಬದಂತಹ ಸಮಸ್ಯೆಗಳ ಬಗ್ಗೆ ಮಾತನಾಡಿರುವುದನ್ನು ಕಾಣಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ 2026 ರ 6ನೇ ಪಂದ್ಯದಲ್ಲಿ ಕೆಕೆಆರ್ ತಂಡ, ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ 226 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ ಪರ ಆರಂಭಿಕ ಫಿನ್ ಅಲೆನ್ ಮೊದಲ ಓವರ್ನಲ್ಲೇ ಬೌಂಡರಿ ಹಾಗೂ ಸಿಕ್ಸರ್ಗಳ ಮಳೆಗರೆದು 25 ರನ್ ಕಲೆಹಾಕಿದರು.
ಸನ್ರೈಸರ್ಸ್ ಪರ ಡೇವಿಡ್ ಪೇನ್ ಮೊದಲ ಓವರ್ ಬೌಲ್ ಮಾಡಿದರು. ಈ ಓವರ್ನ ಮೊದಲ ಎಸೆತವನ್ನು ಎದುರಿಸಿದ ನಾಯಕ ಅಜಿಂಕ್ಯ ರಹಾನೆ ಸಿಂಗಲ್ ತೆಗೆದುಕೊಂಡು ಅಲೆನ್ಗೆ ಸ್ಟ್ರೈಕ್ ನೀಡಿದರು. ಅಲೆನ್ ತಾವು ಎದುರಿಸಿದ ಮೊದಲ ಎಸೆತವನ್ನೇ ಬೌಂಡರಿಗಟ್ಟಿದರು. ನಂತರದ ಎರಡು ಎಸೆತಗಳಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು. ಕೊನೆಯ ಎರಡು ಎಸೆತಗಳಲ್ಲಿ ಬೌಂಡರಿ ಬಂತು. ಈ ಮೂಲಕ ಅಲೆನ್ ತಾವು ಎದುರಿಸಿದ ಐದು ಎಸೆತಗಳಲ್ಲಿ 24 ರನ್ ಕಲೆಹಾಕಿದರು.
ಆ ಬಳಿಕವೂ ಅಬ್ಬರಿಸಿದ ಅಲೆನ್ ಮುಂದಿನ ಓವರ್ನಲ್ಲಿ ಎದುರಿಸಿದ ಮೊದಲ ಎಸೆತವನ್ನು ಬೌಂಡರಿಗಟ್ಟಿದರು. ಆದರೆ ಮುಂದಿನ ಎಸೆತದಲ್ಲಿ ಮತ್ತೊಂದು ಬೌಂಡರಿ ಬಾರಿಸಲು ಯತ್ನಿಸಿ ಬೌಲರ್ ಹರ್ಷ್ ದುಬೆಗೆ ಕ್ಯಾಚಿತ್ತು ಔಟಾದರು. ಅಂತಿಮವಾಗಿ ಅಲೆನ್ ತಮ್ಮ ಇನ್ನಿಂಗ್ಸ್ನಲ್ಲಿ 7 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 28 ರನ್ ಬಾರಿಸಿ ಔಟಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಏಪ್ರಿಲ್ 2: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ತಮ್ಮ ಪ್ರಸ್ತುತ ಹುದ್ದೆಯಿಂದ ಕೆಳಗಿಳಿಯುವ ಸಾಧ್ಯತೆಯಿದ್ದು, ರಾಜ್ಯಸಭೆಗೆ ಪ್ರವೇಶಿಸಲು ಸಜ್ಜಾಗಿದ್ದಾರೆ. ನಿತೀಶ್ ಕುಮಾರ್ ಏಪ್ರಿಲ್ 10ರಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರು ಏಪ್ರಿಲ್ 9ರಂದು ಪಾಟ್ನಾದಿಂದ ದೆಹಲಿಗೆ ಪ್ರಯಾಣಿಸಿ ದೆಹಲಿಯಲ್ಲಿ ಉಳಿಯಲಿದ್ದು, ಈ ಭೇಟಿಯ ಸಮಯದಲ್ಲಿ ಅವರು ಹಿರಿಯ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸುವ ಸಾಧ್ಯತೆಯಿದೆ.
ನಿತೀಶ್ ಕುಮಾರ್ ಪಾಟ್ನಾಗೆ ಹಿಂದಿರುಗಿದ ಸ್ವಲ್ಪ ಸಮಯದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಇದು ಬಿಹಾರದಲ್ಲಿ ಹೊಸ ಸರ್ಕಾರ ರಚನೆಗೆ ದಾರಿ ಮಾಡಿಕೊಡುತ್ತದೆ ಎಂದು ಜೆಡಿಯು ಮೂಲಗಳು ತಿಳಿಸಿವೆ. ಏಪ್ರಿಲ್ 11ರಂದು ಅಥವಾ ನಂತರ ಅವರು ಬಿಹಾರಕ್ಕೆ ಮರಳುವ ನಿರೀಕ್ಷೆಯಿದೆ. ಇದಾದ ಬಳಿಕ ಬಿಹಾರದಲ್ಲಿ ಹೊಸ ಸರ್ಕಾರ ರಚನೆಯಾಗುವ ನಿರೀಕ್ಷೆಯಿದೆ. ಏಪ್ರಿಲ್ ಮಧ್ಯಭಾಗದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ ಎನ್ನಲಾಗಿದೆ.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಸಭೆಗೆ ಪ್ರವೇಶಿಸಿದ ನಂತರ Z-ಪ್ಲಸ್ ಭದ್ರತೆಯನ್ನು ಪಡೆಯುತ್ತಾರೆ ಎಂದು ರಾಜ್ಯ ಗೃಹ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ.
ಮಾರ್ಚ್ 16ರಂದು ರಾಜ್ಯಸಭೆಗೆ ಆಯ್ಕೆಯಾದ ನಿತೀಶ್ ಕುಮಾರ್ ಈ ತಿಂಗಳು ನಿವೃತ್ತರಾಗುವ ಸದಸ್ಯರ ಅವಧಿ ಮುಗಿದ ನಂತರ ತಮ್ಮ ಹೊಸ ಹುದ್ದೆಯನ್ನು ವಹಿಸಿಕೊಳ್ಳುವ ನಿರೀಕ್ಷೆಯಿದೆ. ಬಿಹಾರದ 5 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆಗಳು ನಡೆದಿದ್ದು, ಅವರ ಅಧಿಕಾರಾವಧಿ ಏಪ್ರಿಲ್ 9ರಂದು ಕೊನೆಗೊಳ್ಳಲಿದೆ.
ನಿತೀಶ್ ಕುಮಾರ್ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಪ್ರತಿನಿಧಿಸದ ಏಕೈಕ ಸದನವಾದ ರಾಜ್ಯಸಭೆಗೆ ಪಾದಾರ್ಪಣೆ ಮಾಡಲು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ. ಇದು ರಾಜ್ಯ ವಿಧಾನಸಭೆಯಲ್ಲಿ ಅತಿದೊಡ್ಡ ಪಕ್ಷವಾದ ಬಿಜೆಪಿಗೆ ಬಿಹಾರದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ನೀಡುವ ಸಾಧ್ಯತೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಯಾದಗಿರಿ, ಏಪ್ರಿಲ್ 02: ಗುತ್ತಿಗೆದಾರನಿಂದ ಲಂಚ (Bribe) ಸ್ವೀಕರಿಸುತ್ತಿದ್ದ ವೇಳೆ ಕೆಬಿಜೆಎನ್ಎಲ್ ಭೀಮರಾಯನಗುಡಿ ವಿಭಾಗದ ಎಇಇ ಮತ್ತು ಜೆಇ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ. ಎಇಇ ಮಧುಸೂದನ್ ಮತ್ತು ಜೆಇ ಮಂಜುನಾಥ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು. ಲೋಕಾಯುಕ್ತ ಡಿವೈಎಸ್ಪಿ ಜೆ.ಹೆಚ್.ಇನಾಂದಾರ್ ನೇತೃತ್ವದಲ್ಲಿ ದಾಳಿ ಮಾಡಿ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ.
ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದ ಅಧಿಕಾರಿಗಳು
ಎಇಇ ಮಧುಸೂದನ್ ಮತ್ತು ಜೆಇ ಮಂಜುನಾಥ ಕಾಮಗಾರಿ ಬಿಲ್ ಮಂಜೂರು ಮಾಡಲು ಗುತ್ತಿಗೆದಾರ ಖಾಸಿಂ ಸಾಬ್ನಿಂದ 35 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಇತ್ತ ಅಧಿಕಾರಿಗಳು ಲಂಚಕ್ಕೆ ಬೇಡಿಕೆಯಿಟ್ಟ ಬಗ್ಗೆ ಗುತ್ತಿಗೆದಾರ ದೂರು ಕೂಡ ನೀಡಿದ್ದ. ಇಂದು ಫೋನ್ಪೇ ಮೂಲಕ ಲಂಚ ಸ್ವೀಕರಿಸಲು ಮುಂದಾದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಅಧಿಕಾರಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
3 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಜಿಬಿಎ ಅಧಿಕಾರಿಗಳು ಲೋಕಾ ಬಲೆಗೆ
ಇನ್ನು ಇತ್ತ ಬೆಂಗಳೂರಿನ ಥಣಿಸಂದ್ರದಲ್ಲಿ ಕೂಡ ಜಿಬಿಎ ಅಧಿಕಾರಿಗಳಿಬ್ಬರು ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದಿದ್ದಾರೆ. ಆರ್ಐ ವೆಂಕಟೇಶ್ ಮತ್ತು ತೆರಿಗೆ ಅಧಿಕಾರಿ ಶ್ರೀನಿವಾಸ್ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಕಟ್ಟಡದ ಖಾತೆ ಮಾಡಿಕೊಡಲು 3 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಬೆಂಗಳೂರಿನ ಥಣಿಸಂದ್ರದಲ್ಲಿ ನ್ಯಾಮತುಲ್ಲಾ ಖಾನ್ ಎಂಬುವವರಿಂದ 3 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಇಬ್ಬರು ಅಧಿಕಾರಿಗಳು ರೆಡ್ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳು ಹಿಡಿದಿದ್ದಾರೆ. ಈ ಬಗ್ಗೆ ನ್ಯಾಮತುಲ್ಲಾ ಖಾನ್ ದೂರು ನೀಡಿದ್ದರು. ಹೀಗಾಗಿ ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸದ್ಯ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಕೈದಿಯ ಕೂಲಿ ಹಣಕ್ಕೆ ಲಂಚ ಕೇಳಿದ ಅಧಿಕಾರಿ ಲೋಕಾ ಬಲೆಗೆ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಉಪಕಾರಾಗೃಹದಲ್ಲಿ ಕೈದಿಯ ಕೂಲಿ ಹಣಕ್ಕೆ ಲಂಚ ಕೇಳಿದ ಅಧಿಕಾರಿ ಲೋಕಾ ಬಲೆಗೆ ಬಿದಿದ್ದಾರೆ. ಕಲ್ಲಪ್ಪ ಗಸ್ತಿ ಲೋಕಾಯುಕ್ತ ಬಲೆಗೆ ಬಿದ್ದ ಉಪ ಕಾರಾಗೃಹದ ಅಧೀಕ್ಷಕ. ಕೊಲೆ ಆರೋಪಿ ರಾಜಕುಮಾರ್ ಹುಂದೇಕರನಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಹಳಿಯಾಳ ತಾಲೂಕಿನ ಯಡೋಗಾ ಗ್ರಾಮದ ರಾಜಕುಮಾರ್ 2022ರಲ್ಲಿ ಪತ್ನಿಯ ಕತ್ತು ಸಿಳಿ ಜೈಲು ಪಾಲಾಗಿದ್ದ. ಕೊಲೆ ಆರೋಪದ ಮೇರೆಗೆ ಎರಡು ವರ್ಷ ಜೈಲು ಸೇರಿದ್ದ. ಜಾಮೀನು ಸಿಕ್ಕ ಹಿನ್ನೆಲೆ ಜೈಲಿನಿಂದ ಹೊರ ಬಂದಿದ್ದ. ಎರಡು ವರ್ಷ ಜೈಲಿನಲ್ಲಿ ಕೂಲಿ ಕೆಲಸ ಮಾಡಿ 1 ಲಕ್ಷ 40 ಸಾವಿರ ರೂ ಸಂಪಾದಿಸಿದ್ದ. ಜೈಲಿನ ಕೂಲಿ ವೇತನ ನೀಡಲು ಜೈಲರ್ನಿಂದ 60 ಸಾವಿರ ರೂ ಬೇಡಿಕೆ ಇಟ್ಟಿದ್ದರು. ಹಣವನ್ನು ಧಾರವಾಡದ ಮಹಿಳಾ ವಕೀಲೆಯೊಬ್ಬರಿಗೆ ಫೋನ್ ಪೇ ಮಾಡಲು ತಾಕೀತು ಮಾಡಿದ್ದರು. ಹಣಕ್ಕೆ ಪೀಡಿಸಿದ್ದರಿಂದ ರಾಜಕುಮಾರ್ ಹುಂದೇಕರ್ ಲೋಕಾಯುಕ್ತಕ್ಕೆ ದೂರು ನೀಡಿದ್ದ. ಲೋಕಾಯುಕ್ತ ಎಸ್.ಪಿ ಧನ್ಯ ನಾಯ್ಕ, ಸಿಪಿಐ ವಿನಾಯಕ್ ಬಿಲ್ಲವ ತಂಡದಿಂದ ದಾಳಿ ಹಿಡಿದಿದ್ದಾರೆ. ಸದ್ಯ ಜೈಲರ್ಗೆ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದೆ.