All posts by nagaraj11081993

ಐದು ರಾಜ್ಯಗಳಲ್ಲಿ ಹೊಸ ಸರ್ಕಾರ; ವೇಗವಾಗಿ ಪಿಕಪ್ ಆದವೆಷ್ಟು, ಆಕ್ಸಲರೇಟರ್ ಆಗದ ಸರ್ಕಾರಗಳೆಷ್ಟು?

ಈ ವರ್ಷದಲ್ಲಿ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ, ಸೇರಿ ಐದು ಕಡೆ ವಿಧಾನಸಭಾ ಚುನಾವಣೆಗಳು (Five states assembly elections 2026) ನಡೆದಿದ್ದವು. ಕೇರಳದಿಂದ ಹಿಡಿದು ಅಸ್ಸಾಮ್​ವರೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಕೂಟ ಮೂರರಲ್ಲಿ ವಿಕ್ರಮ ಸಾಧಿಸಿದೆ. ಚುನಾವಣೆಗಳ ನಂತರ ಹೊಸದಾಗಿ ರಚನೆಯಾದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಮೊದಲ 15 ದಿನಗಳ ಪ್ರಮುಖ ಅಂಶಗಳ ವಿವರವಾದ ಮಾಹಿತಿ ಇಲ್ಲಿದೆ.

1. ಕೇರಳ (ಯುಡಿಎಫ್ ಸರ್ಕಾರ)

ಮುಖ್ಯಮಂತ್ರಿ: ವಿ.ಡಿ. ಸತೀಶನ್

  • ಆರಂಭಿಕ ಸಂಕಷ್ಟಗಳು ಮತ್ತು ವಿಳಂಬ: ವಿ.ಡಿ. ಸತೀಶನ್ ಮತ್ತು ಕೆ.ಸಿ. ವೇಣುಗೋಪಾಲ್ ಬಣಗಳ ನಡುವಿನ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ಸಿಎಂ ಹೆಸರಿಸಲು 10 ದಿನಗಳ ಕಾಲ ವಿಳಂಬವಾಯಿತು. ಇದು ಯುಡಿಎಫ್‌ನ ಆಡಳಿತಾತ್ಮಕ ಸಿದ್ಧತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತು.
  • ಸಾಂಕೇತಿಕತೆ ಮತ್ತು ವಿರೋಧ: ಪ್ರಮಾಣವಚನ ಸ್ವೀಕಾರದ ವೇಳೆ ಸಿಎಂ ತಮ್ಮ ಪೂರ್ಣ ಹೆಸರನ್ನು (ತಂದೆಯ ಜಾತಿ ಗುರುತು ಸೇರಿ) ಬಳಸಿದ್ದಕ್ಕೆ ಟೀಕೆ ವ್ಯಕ್ತವಾಯಿತು. ಇದು ಕಾಂಗ್ರೆಸ್‌ನ ಜಾತಿ-ವಿರೋಧಿ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದು ವಿಮರ್ಶಕರು ವಾದಿಸಿದರು. ಜೊತೆಗೆ ಆರು ಚರಣಗಳ ವಂದೇ ಮಾತರಂ ಹಾಡಿದ್ದೂ ವಿವಾದ ಸೃಷ್ಟಿಸಿತು.
  • ಖಾತೆ ಹಂಚಿಕೆಯಲ್ಲಿ ಭಿನ್ನಾಭಿಪ್ರಾಯಗಳು: ಮೀನುಗಾರಿಕೆ ಮತ್ತು ಉನ್ನತ ಶಿಕ್ಷಣ ಖಾತೆಗಳ ಕುರಿತು ಕಾಂಗ್ರೆಸ್ ಮತ್ತು ಐಯುಎಂಎಲ್ ನಡುವಿನ ಘರ್ಷಣೆಯಿಂದಾಗಿ ಖಾತೆ ಹಂಚಿಕೆ ವಿಳಂಬವಾಯಿತು. ಕ್ಯಾಥೋಲಿಕ್ ಸಮುದಾಯದ ಅಸಮಾಧಾನವನ್ನು ಶಮನಗೊಳಿಸಲು ಚರ್ಚ್ ಪ್ರತಿನಿಧಿಗಳೊಂದಿಗೆ ತ್ವರಿತ ಮಾತುಕತೆ ನಡೆಸಬೇಕಾಯಿತು.
  • ಆರಂಭಿಕ ಕಾನೂನು ಮತ್ತು ಸುವ್ಯವಸ್ಥೆ ಸವಾಲುಗಳು: ಎರ್ನಾಕುಲಂನಲ್ಲಿ ಜಲಫಿರಂಗಿ ಬಳಸಿ ಏಳು ಪರಿಶಿಷ್ಟ ಜಾತಿ ಕುಟುಂಬಗಳನ್ನು ಒಕ್ಕಲೆಬ್ಬಿಸಿದ್ದು ಮತ್ತು ಹಿಂದಿನ ಎಲ್‌ಡಿಎಫ್ ಸರ್ಕಾರಕ್ಕೆ ಆಪ್ತರಾಗಿದ್ದ ಪೊಲೀಸ್ ಅಧಿಕಾರಿಗಳ ಸಾಮೂಹಿಕ ವರ್ಗಾವಣೆ ರಾಜಕೀಯ ದ್ವೇಷದ ಆರೋಪಗಳಿಗೆ ಕಾರಣವಾಯಿತು.
  • ಮುನಂಬಂ ವಕ್ಫ್ ವಿವಾದ ಮರುಕಳಿಸುವಿಕೆ: ವಿವಾದಿತ ಭೂಮಿಯನ್ನು UMEED ಪೋರ್ಟಲ್‌ಗೆ ಅಪ್‌ಲೋಡ್ ಮಾಡಿದ್ದರಿಂದ 600 ಕ್ಕೂ ಹೆಚ್ಚು ಸ್ಥಳೀಯ ಕುಟುಂಬಗಳು ಆತಂಕಗೊಂಡಿವೆ. ಸಿಎಂ ಯಾವುದೇ ಒಕ್ಕಲೆಬ್ಬಿಸುವಿಕೆ ಆಗುವುದಿಲ್ಲ ಎಂದು ಭರವಸೆ ನೀಡಿದ್ದರೂ, ನಿಖರವಾದ ಪರಿಹಾರ ಇನ್ನೂ ದೊರೆತಿಲ್ಲ.

ಇದನ್ನೂ ಓದಿ: ಹಿಮಾಚಲ ಸ್ಥಳೀಯ ಸಂಸ್ಥೆ ಚುನಾವಣೆ; ಆಡಳಿತಾರೂಢ ಕಾಂಗ್ರೆಸ್​ಗೆ ಆಘಾತ; ಬಿಜೆಪಿ ಗೆಲುವಿನ ಕೇಕೆ

2. ಅಸ್ಸಾಂ (ಎನ್‌ಡಿಎ ಸರ್ಕಾರ)

ಮುಖ್ಯಮಂತ್ರಿ: ಹಿಮಂತ ಬಿಸ್ವಾ ಶರ್ಮಾ

  • ಬಲವಾದ ಜನಾದೇಶ ಮತ್ತು ರಾಜಕೀಯ ಸ್ಥಿರತೆ: 126 ಸ್ಥಾನಗಳ ಪೈಕಿ 102 ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್‌ಡಿಎ ಪ್ರಬಲ ಜನಾದೇಶ ಪಡೆಯಿತು. ಇದು ತನ್ನ ನೀತಿ ಆದ್ಯತೆಗಳನ್ನು ತ್ವರಿತವಾಗಿ ಜಾರಿಗೊಳಿಸಲು ಮತ್ತು ಆಡಳಿತದಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡಿದೆ.
  • ಉದ್ಯೋಗ ಸೃಷ್ಟಿ ಅಭಿಯಾನ: ಐದು ವರ್ಷಗಳಲ್ಲಿ 2 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಸೃಷ್ಟಿಸುವ ಬೃಹತ್ ಉದ್ಯೋಗ ಯೋಜನೆಯನ್ನು ಕಾರ್ಯಗತಗೊಳಿಸಲು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದೆ.
  • ಹಣಕಾಸು ಶಿಸ್ತು (ಮಿತವ್ಯಯ ಕ್ರಮಗಳು): ಇಂಧನ ಬಳಕೆಯಲ್ಲಿ 20% ಕಡಿತ, ಅಧಿಕಾರಿಗಳ ವಾಹನಗಳ ಬೆಂಗಾವಲು ಪಡೆಯ ಕಡಿತ, ಅಧಿಕೃತ ಬಳಕೆಗೆ ವಿದೇಶಿ ವಸ್ತುಗಳ ನಿಷೇಧ ಮತ್ತು ಭೌತಿಕ ಸೆಮಿನಾರ್‌ಗಳ ಬದಲಿಗೆ ವಿಡಿಯೋ ಕಾನ್ಫರೆನ್ಸಿಂಗ್‌ಗೆ ಬದಲಾಯಿಸುವ ಆರು-ತಿಂಗಳ ಕಠಿಣ ಮಿತವ್ಯಯ ಅಭಿಯಾನವನ್ನು ಪ್ರಾರಂಭಿಸಲಾಯಿತು.
  • ಡಿಜಿಟಲ್ ಏಕೀಕರಣ: ಕೃತಕ ಬುದ್ಧಿಮತ್ತೆ (AI) ಮತ್ತು ಸುಧಾರಿತ ವಿಶ್ಲೇಷಣೆಗಳೊಂದಿಗೆ ಇಲಾಖೆಗಳಾದ್ಯಂತ ಡೇಟಾವನ್ನು ಏಕೀಕರಿಸಲು ಡೇಟಾ ನಿರ್ವಹಣಾ ಕೇಂದ್ರವನ್ನು ಸ್ಥಾಪಿಸುವ ಅಸ್ಸಾಂ ರಾಜ್ಯ ಡೇಟಾ ನೀತಿ (ASDP) 2026 ಕ್ಕೆ ಅನುಮೋದನೆ ನೀಡಲಾಯಿತು.
  • ಸಮಾನ ನಾಗರಿಕ ಸಂಹಿತೆ (UCC) ಮಸೂದೆ, 2026: ಯುಸಿಸಿ ಚೌಕಟ್ಟನ್ನು ಪರಿಚಯಿಸಿದ ಮೂರನೇ ರಾಜ್ಯವಾಗಿ ಅಸ್ಸಾಂ ಹೊರಹೊಮ್ಮಿದೆ. ಈ ಮಸೂದೆಯು ಮದುವೆ/ವಿಚ್ಛೇದನಗಳನ್ನು 60 ದಿನಗಳಲ್ಲಿ ನೋಂದಾಯಿಸುವುದನ್ನು ಕಡ್ಡಾಯಗೊಳಿಸುತ್ತದೆ, ಲಿವ್-ಇನ್ ಸಂಬಂಧಗಳನ್ನು ನೋಂದಾಯಿಸುತ್ತದೆ, ಬಹುಪತ್ನಿತ್ವವನ್ನು ನಿಷೇಧಿಸುತ್ತದೆ ಮತ್ತು 2024 ರ ಮುಸ್ಲಿಂ ವಿವಾಹ ನೋಂದಣಿ ಕಾಯ್ದೆಯನ್ನು ಬದಲಾಯಿಸುತ್ತದೆ.

3. ಪಶ್ಚಿಮ ಬಂಗಾಳ (ಬಿಜೆಪಿ ಸರ್ಕಾರ)

ಮುಖ್ಯಮಂತ್ರಿ: ಸುವೇಂದು ಅಧಿಕಾರಿ

  • ಐತಿಹಾಸಿಕ ರಾಜಕೀಯ ಬದಲಾವಣೆ: 294 ಸ್ಥಾನಗಳ ಪೈಕಿ 207 ಸ್ಥಾನಗಳನ್ನು ಗೆದ್ದು ಮಮತಾ ಬ್ಯಾನರ್ಜಿ ಅವರ ಸತತ ಮೂರು ಅವಧಿಯ ಟಿಎಂಸಿ ಆಡಳಿತವನ್ನು ಅಂತ್ಯಗೊಳಿಸುವ ಮೂಲಕ ಬಿಜೆಪಿ ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ.
  • ರಾಷ್ಟ್ರೀಯ ಯೋಜನೆಗಳ ಜೋಡಣೆ: ಗಡಿ ಬೇಲಿ ನಿರ್ಮಾಣಕ್ಕಾಗಿ ಬಿಎಸ್‌ಎಫ್‌ಗೆ ತ್ವರಿತವಾಗಿ ಭೂಮಿ ಮಂಜೂರು ಮಾಡಲಾಯಿತು. ಜೊತೆಗೆ ಬಹುಕಾಲದಿಂದ ಬಾಕಿ ಉಳಿದಿದ್ದ ಆಯುಷ್ಮಾನ್ ಭಾರತ್, ಪಿಎಂ-ಕಿಸಾನ್ ಮತ್ತು ಉಜ್ವಲ ಯೋಜನೆಗಳನ್ನು ಹಾಗೂ ರಾಷ್ಟ್ರೀಯ ಜನಗಣತಿಯನ್ನು ಜಾರಿಗೊಳಿಸಲಾಯಿತು.
  • ಸಿಂಡಿಕೇಟ್‌ಗಳ ಮೇಲೆ ಕಠಿಣ ಕ್ರಮ: ಸ್ಥಳೀಯ ಸಿಂಡಿಕೇಟ್‌ಗಳು, ಅಕ್ರಮ ಗಣಿಗಾರಿಕೆ ಮತ್ತು ಜಾನುವಾರು ಕಳ್ಳಸಾಗಣೆ ವಿರುದ್ಧ ತಕ್ಷಣದ ಮತ್ತು ಕಠಿಣ ಕ್ರಮ ಕೈಗೊಳ್ಳಲಾಯಿತು. ಶಾಸನಬದ್ಧವಲ್ಲದ ಸಂಸ್ಥೆಗಳು ಮತ್ತು ಪಿಎಸ್‌ಯುಗಳಲ್ಲಿ ನಾಮನಿರ್ದೇಶಿತ ಸದಸ್ಯರನ್ನು ವಜಾಗೊಳಿಸಲಾಯಿತು.
  • ಸಾಂಸ್ಕೃತಿಕ ಮತ್ತು ನಾಗರಿಕ ಸುಧಾರಣೆಗಳು: ರಾಜ್ಯದ ಸಾರ್ವಜನಿಕ ಮೂಲಸೌಕರ್ಯಗಳ ಬಣ್ಣವನ್ನು ನೀಲಿ-ಬಿಳಿಯಿಂದ ಹಳದಿ-ಬಿಳಿಗೆ ಬದಲಾಯಿಸಲಾಯಿತು. ಶಾಲೆಗಳು ಮತ್ತು ಮದರಸಾಗಳಲ್ಲಿ ವಂದೇ ಮಾತರಂ ಅನ್ನು ಕಡ್ಡಾಯಗೊಳಿಸಲಾಯಿತು ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ನಿರ್ಬಂಧಿಸಲಾಯಿತು.
  • ಸಮಾಜ ಕಲ್ಯಾಣ ಮತ್ತು ಒಬಿಸಿ ಪರಿಶೀಲನೆ: ಅನ್ನಪೂರ್ಣ ಯೋಜನೆ (₹3,000 ಮಾಸಿಕ ಆರ್ಥಿಕ ನೆರವು) ಗೆ ಅನುಮೋದನೆ, ಸಿಎಎ ಅರ್ಜಿದಾರ ಮಹಿಳೆಯರಿಗೆ ಸೌಲಭ್ಯಗಳ ವಿಸ್ತರಣೆ ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಪರಿಚಯಿಸಲಾಯಿತು. ಅದೇ ಸಮಯದಲ್ಲಿ ಒಬಿಸಿ ಪಟ್ಟಿಯನ್ನು ಪರಿಶೀಲಿಸಲು 1.69 ಕೋಟಿ ಜಾತಿ ಪ್ರಮಾಣಪತ್ರಗಳ ಮರು-ಪರಿಶೀಲನೆಗೆ ಆದೇಶಿಸಲಾಯಿತು ಮತ್ತು 2026 ರ ಜೂನ್‌ನಿಂದ ಧರ್ಮ-ಆಧಾರಿತ ಸಹಾಯ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಯಿತು.

ಇದನ್ನೂ ಓದಿ: ನೂತನ ಸಿಡಿಎಸ್ ಆಗಿ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅಧಿಕಾರ; ಸಶಸ್ತ್ರ ಪಡೆಗಳ ಬಲವರ್ಧನೆಗೆ ಆಲೋಚನೆ

4. ತಮಿಳುನಾಡು (ಟಿವಿಕೆ ಸರ್ಕಾರ)

ಮುಖ್ಯಮಂತ್ರಿ: ಸಿ. ಜೋಸೆಫ್ ವಿಜಯ್

  • ಎರಡು ಪಕ್ಷಗಳ ಪ್ರಾಬಲ್ಯದ ಅಂತ್ಯ: ಹೊಸದಾಗಿ ರಚನೆಯಾದ ಟಿವಿಕೆ ಅತಿ ದೊಡ್ಡ ಪಕ್ಷವಾಗಿ (108 ಸ್ಥಾನಗಳು) ಹೊರಹೊಮ್ಮುವ ಮೂಲಕ ದಶಕಗಳ ಡಿಎಂಕೆ-ಎಐಎಡಿಎಂಕೆ ಪ್ರಾಬಲ್ಯವನ್ನು ಕೊನೆಗೊಳಿಸಿತು. ಆದಾಗ್ಯೂ, ಕಾಂಗ್ರೆಸ್, ಎಡಪಕ್ಷಗಳು, ವಿಸಿಕೆ, ಐಯುಎಂಎಲ್ ಸೇರಿದಂತೆ ವಿವಿಧ ಮೈತ್ರಿಕೂಟಗಳ ಮೇಲಿನ ಅವಲಂಬನೆಯಿಂದಾಗಿ ಆರಂಭಿಕ ಸರ್ಕಾರ ರಚನೆಯು ವಿಳಂಬವಾಯಿತು.
  • ಕಲ್ಯಾಣ ಯೋಜನೆಗಳ ಕಡಿತದ ಟೀಕೆಗಳು: ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್‌ ಬದಲಿಗೆ, ಎರಡು ತಿಂಗಳಿಗೊಮ್ಮೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದು ಸಾರ್ವಜನಿಕರ ವಿರೋಧಕ್ಕೆ ಕಾರಣವಾಯಿತು. 5 ಎಕರೆವರೆಗಿನ ಕೃಷಿ ಸಾಲ ಮನ್ನಾದ ಬದಲಿಗೆ ಸಣ್ಣ ರೈತರಿಗೆ ₹50,000 ಕ್ಕೆ ಸಾಲ ಮನ್ನಾವನ್ನು ಸೀಮಿತಗೊಳಿಸಿದ್ದು ಟೀಕೆಗೆ ಗುರಿಯಾಯಿತು.
  • ಆಡಳಿತಾತ್ಮಕ ಎಡವಟ್ಟು: ಸಿಎಂ ಅವರ ಜ್ಯೋತಿಷಿಯನ್ನು ವಿಶೇಷ ಕರ್ತವ್ಯಾಧಿಕಾರಿಯಾಗಿ (ರಾಜಕೀಯ) ನೇಮಕ ಮಾಡಿದ್ದು ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು, ಮತ್ತು 24 ಗಂಟೆಗಳ ಒಳಗೆ ಈ ನೇಮಕಾತಿಯನ್ನು ಹಿಂಪಡೆಯಲಾಯಿತು.
  • ಖಾತೆ ವಿಳಂಬ ಮತ್ತು ಟೆಂಡರ್ ರದ್ದತಿ: ಪ್ರಮಾಣ ವಚನ ಸ್ವೀಕರಿಸಿದ ನಂತರವೂ ಆರು ದಿನಗಳ ಕಾಲ ಖಾತೆಗಳನ್ನು ಹಂಚಿಕೆ ಮಾಡದಿರುವುದು ಮೈತ್ರಿಕೂಟದೊಳಗಿನ ಘರ್ಷಣೆಯನ್ನು ಎತ್ತಿತೋರಿಸಿತು. ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ₹16.83 ಲಕ್ಷದ ಲೋಕೋಪಯೋಗಿ ಕಾಮಗಾರಿ ಟೆಂಡರ್ ಅನ್ನು ತ್ವರಿತವಾಗಿ ರದ್ದುಗೊಳಿಸಬೇಕಾಯಿತು.
  • ಮೂಲಸೌಕರ್ಯ ಮತ್ತು ಭದ್ರತಾ ಸವಾಲುಗಳು: ಚೆನ್ನೈನಲ್ಲಿ ವ್ಯಾಪಕ ವಿದ್ಯುತ್ ಕಡಿತವು ವಿದ್ಯುತ್ ಸಬ್ಸಿಡಿಯ ಘೋಷಣೆಗಳನ್ನು ಮಂಕಾಗಿಸಿತು. ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಮತ್ತು ಕೊಯಮತ್ತೂರಿನಲ್ಲಿ ನಡೆದ ಗಂಭೀರ ಅಪರಾಧದ ಬಗ್ಗೆ ಸರ್ಕಾರದ ಅಸೂಕ್ಷ್ಮ ಸಂವಹನ ವಿಧಾನದ ಬಗ್ಗೆ ಸಾರ್ವಜನಿಕರ ಆಕ್ರೋಶ ಹೆಚ್ಚಾಯಿತು.

5. ಪುದುಚೇರಿ (ಎನ್‌ಡಿಎ ಸರ್ಕಾರ)

ಮುಖ್ಯಮಂತ್ರಿ: ಎನ್. ರಂಗಸ್ವಾಮಿ

  • ತಡೆರಹಿತ ನಿರಂತರತೆ: 30 ಸ್ಥಾನಗಳ ಪೈಕಿ 18 ಸ್ಥಾನಗಳನ್ನು ಗೆದ್ದು ಮರಳಿ ಅಧಿಕಾರಕ್ಕೆ ಬಂದ ಆಡಳಿತವು ತ್ವರಿತ ಮೂಲಸೌಕರ್ಯ ಮತ್ತು ಆರ್ಥಿಕ ಪುನರುಜ್ಜೀವನದ ಮೇಲೆ ಹೆಚ್ಚು ಗಮನಹರಿಸಿತು.
  • ಸಂಪರ್ಕ ಮೈಲಿಗಲ್ಲು: ಧಾರ್ಮಿಕ ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುವ ಉದ್ದೇಶದಿಂದ, 40 ವರ್ಷಗಳ ಅಂತರದ ನಂತರ ತಿರುನಳ್ಳಾರ್ ಮೂಲಕ ಕಾರೈಕಾಲ್-ಪೆರಲಂ ರೈಲು ಮಾರ್ಗವನ್ನು ಯಶಸ್ವಿಯಾಗಿ ಮರುಸ್ಥಾಪಿಸಲಾಯಿತು.
  • ಹಸಿರು ಇಂಧನಕ್ಕೆ ಉತ್ತೇಜನ: ಮೇಲ್ಛಾವಣಿ ಸೌರ ಫಲಕಗಳ ಅಳವಡಿಕೆಗಾಗಿ ಪಿಎಂ ಸೂರ್ಯ ಘರ್ ಯೋಜನೆಯಡಿ ಹೆಚ್ಚುವರಿಯಾಗಿ ₹30,000 ರಾಜ್ಯ ಸಬ್ಸಿಡಿಯನ್ನು ಘೋಷಿಸಲಾಯಿತು. ಇದು 13,000 ಕೆಳ-ಮಧ್ಯಮ-ಆದಾಯದ ಕುಟುಂಬಗಳನ್ನು ಗುರಿಯಾಗಿಸಿಕೊಂಡಿದೆ.
  • ವಸತಿ ಮತ್ತು ಸಾಲ ಪರಿಹಾರ: ಕಾಮರಾಜರ್ ಶತಮಾನೋತ್ಸವ ಕಲ್ಲಿನ ಮನೆ ನಿರ್ಮಾಣ ಯೋಜನೆಯಡಿ 8,600 ಕುಟುಂಬಗಳಿಗೆ ಬಡ್ಡಿ ಹೊರೆಯನ್ನು ಮನ್ನಾ ಮಾಡುವ ಮೂಲಕ ಪರಿಹಾರ ಒದಗಿಸಲಾಯಿತು. ಕೇವಲ ಅಸಲನ್ನು ಪಾವತಿಸುವ ಮೂಲಕ ತಮ್ಮ ಭೂಮಿಯ ಹಕ್ಕುಗಳನ್ನು ಮರಳಿ ಪಡೆಯಲು ಅವಕಾಶ ನೀಡಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗೆ ಮುಂದಿನ 3 ಗಂಟೆ ಭಾರಿ ಮಳೆ ಮುನ್ಸೂಚನೆ!; ಯಲ್ಲೋ ಅಲರ್ಟ್ ಘೋಷಣೆ!

ಬೆಂಗಳೂರು,ಮೇ.31: ಸಿಲಿಕಾನ್ ಸಿಟಿಯಲ್ಲಿ ಐಪಿಎಲ್ ಮಹಾಸಮರದ ಕ್ರೇಜ್ ತುತ್ತತುದಿಗೆ ತಲುಪಿರುವ ಬೆನ್ನಲ್ಲೇ, ರಾಜಧಾನಿ ಜನತೆಗೆ ಹವಾಮಾನ ಇಲಾಖೆ ಬಿಗ್ ಶಾಕ್ ನೀಡಿದೆ. ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯ ಹವಾಮಾನ ಇಲಾಖೆಯ ಲೇಟೆಸ್ಟ್ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ , ಬೆಂಗಳೂರು ಗ್ರಾಮಾಂತರ ಹಾಗೂ ನೆರೆಯ ಕೋಲಾರ ಜಿಲ್ಲೆಗಳಲ್ಲಿ ಬಿರುಗಾಳಿ ಮತ್ತು ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಈ ಮೂರೂ ಜಿಲ್ಲೆಗಳಿಗೆ ತಕ್ಷಣದಿಂದಲೇ ಅನ್ವಯವಾಗುವಂತೆ ‘ಯಲ್ಲೋ ಅಲರ್ಟ್’ ಘೋಷಿಸಲಾಗಿದೆ.

ಇವತ್ತು ರಾತ್ರಿ ಐಪಿಎಲ್ ಫೈನಲ್ ಪಂದ್ಯದ ಸಂಭ್ರಮಾಚರಣೆಗಾಗಿ ಎಂ.ಜಿ. ರೋಡ್, ಅಡುಗೋಡಿ ಹಾಗೂ ಸ್ಟೇಡಿಯಂ ಸುತ್ತಮುತ್ತ ಜನ ಜಮಾಯಿಸುತ್ತಿರುವ ಹೊತ್ತಿನಲ್ಲೇ ಈ ಮಳೆ ಮುನ್ಸೂಚನೆ ಬಂದಿರುವುದು ಅಭಿಮಾನಿಗಳಲ್ಲಿ ಮತ್ತು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಮುಂದಿನ 3 ಗಂಟೆಗಳ ಕಾಲ ಅನಿವಾರ್ಯ ಕೆಲಸಗಳಿದ್ದರೆ ಮಾತ್ರ ರಸ್ತೆಗಿಳಿಯುವಂತೆ ಮತ್ತು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಹವಾಮಾನ ತಜ್ಞರು ಸೂಚಿಸಿದ್ದಾರೆ.

ಯಾವೆಲ್ಲಾ ಪರಿಣಾಮಗಳು ಎದುರಾಗಬಹುದು?:

ವಿದ್ಯುತ್ ವ್ಯತ್ಯಯ: ನಗರದ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಬಹುದು.

ಸಂಚಾರ ದಟ್ಟಣೆ: ದಿಢೀರ್ ಮಳೆಯಿಂದಾಗಿ ರಸ್ತೆಗಳಲ್ಲಿ ಸಣ್ಣಪುಟ್ಟ ಸಂಚಾರ ದಟ್ಟಣೆ (Traffic Snarls) ಉಂಟಾಗಬಹುದು.

ಮರಗಳು ಉರುಳುವ ಭೀತಿ: ಬಿರುಗಾಳಿಯ ತೀವ್ರತೆಗೆ ದುರ್ಬಲ ಹಾಗೂ ಒಣಗಿದ ಮರದ ಕೊಂಬೆಗಳು ಮುರಿದು ಬೀಳುವ ಸಾಧ್ಯತೆಯಿದೆ.

ಬೆಳೆಗಳಿಗೆ ಹಾನಿ: ಬಯಲು ಪ್ರದೇಶದಲ್ಲಿ ಕೊಯ್ಲು ಮಾಡಿ ಇಟ್ಟಿರುವ ಬೆಳೆಗಳಿಗೆ ಹಾನಿಯಾಗಬಹುದು.

ಇದನ್ನೂ ಓದಿ: ಬೆಂಗಳೂರು ಜಂಗಲ್ ರಾಜ್‌ ಆಗಿ ಬದಲಾಗುತ್ತಿದೆ?: ಶಾಲೆಯ ಮುಂದೆಯೇ ಲಾಂಗ್ ಬೀಸಿದ ಪುಂಡರು!; ವಿಡಿಯೋ ವೈರಲ್!

ಹವಾಮಾನ ಇಲಾಖೆ ಸೂಚಿಸಿರುವ ಪ್ರಮುಖ ಸುರಕ್ಷತಾ ಕ್ರಮಗಳು:

ಮನೆಯೊಳಗೇ ಇರಿ: ಮಳೆ ಮತ್ತು ಗಾಳಿ ಇರುವಾಗ ಮನೆಯೊಳಗೆ ಇರಿ, ಕಿಟಕಿ ಹಾಗೂ ಬಾಗಿಲುಗಳನ್ನು ಕಡ್ಡಾಯವಾಗಿ ಮುಚ್ಚಿ. ಸಾಧ್ಯವಾದಷ್ಟು ಪ್ರಯಾಣ ಮಾಡುವುದನ್ನು ತಪ್ಪಿಸಿ.

ಮರಗಳ ಕೆಳಗೆ ಆಶ್ರಯ ಬೇಡ: ಬಿರುಗಾಳಿ ಬೀಸುವಾಗ ಯಾವುದೇ ಕಾರಣಕ್ಕೂ ಮರಗಳ ಕೆಳಗೆ ಅಥವಾ ಕಾಂಕ್ರೀಟ್ ಗೋಡೆಗಳ ಪಕ್ಕದಲ್ಲಿ ನಿಲ್ಲಬೇಡಿ.

ಪ್ಲಗ್‌ಗಳನ್ನು ಅನ್‌ಪ್ಲಗ್ ಮಾಡಿ: ಗುಡುಗು-ಮಿಂಚಿನ ಸಂದರ್ಭದಲ್ಲಿ ಮನೆಯಲ್ಲಿರುವ ಇಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಪ್ಲಗ್‌ಗಳನ್ನು ತಕ್ಷಣವೇ ಕಡಿತಗೊಳಿಸಿ (Unplug).

ನೀರಿನಿಂದ ಹೊರಬನ್ನಿ: ಕೆರೆ, ಕುಂಟೆ ಅಥವಾ ಯಾವುದೇ ನೀರಿನ ಜಲಮೂಲಗಳ ಬಳಿ ಇದ್ದರೆ ತಕ್ಷಣವೇ ಅಲ್ಲಿಂದ ಹೊರಗೆ ಬನ್ನಿ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಜೆಪಿ ಖಾತೆಗಳಲ್ಲಿ ಮಿಂಚುತ್ತಿರುವ ನಟ ರಾಮ್ ಚರಣ್

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ನಟ ರಾಮ್ ಚರಣ್ ‘ಪೆದ್ದಿ’ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ದೇಶದಾದ್ಯಂತ ಸಂಚರಿಸಿ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನು ನಾಲ್ಕು ದಿನಗಳಷ್ಟೆ ಉಳಿದಿದ್ದು, ಈ ಸಂದರ್ಭದಲ್ಲಿ ಬಿಜೆಪಿಯ ಹಲವು ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ನಟ ರಾಮ್ ಚರಣ್ ಅವರು ಮಿಂಚುತ್ತಿದ್ದಾರೆ. ಹಲವು ರಾಜ್ಯಗಳ ಅಧಿಕೃತ ಬಿಜೆಪಿ ಖಾತೆಗಳು ರಾಮ್ ಚರಣ್ ಅವರ ವಿಡಿಯೋ ಮತ್ತು ಚಿತ್ರಗಳನ್ನು ಹಂಚಿಕೊಂಡಿದ್ದು, ‘ಪೆದ್ದಿ’ ಸಿನಿಮಾಕ್ಕೆ ಪರೋಕ್ಷೆ ಬೆಂಬಲ ವ್ಯಕ್ತಪಡಿಸಿವೆ.

ರಾಷ್ಟ್ರೀಯ ಬಿಜೆಪಿ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆ, ‘ಬಿಜೆಪಿ ಇಂಡಿಯಾ’, ಬಿಜೆಪಿ ತೆಲಂಗಾಣ, ಬಿಜೆಪಿ ಆಂಧ್ರ ಪ್ರದೇಶ, ಬಿಜೆಪಿ ಬಿಹಾರ್, ಬಿಜೆಪಿ ಅಂಡಮಾನ್ ನಿಕೋಬಾರ್, ಬಿಜೆಪಿ ಅರುಣಾಚಲ್ ಪ್ರದೇಶ ಇನ್ನೂ ಕೆಲವು ರಾಜ್ಯಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ರಾಮ್ ಚರಣ್ ಅವರ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಎಲ್ಲ ಖಾತೆಗಳಲ್ಲಿಯೂ ರಾಮ್ ಚರಣ್ ಅವರು ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡಿದ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ.

ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ರಾಮ್ ಚರಣ್, ಮೋದಿ ಅವರೊಟ್ಟಿಗೆ ನಡೆಸಿದ ಸಂಭಾಷಣೆಯನ್ನು ನೆನಪು ಮಾಡಿಕೊಂಡಿದ್ದರು. ವಿಶೇಷವಾಗಿ ತಮ್ಮೊಟ್ಟಿಗೆ ಮೋದಿ ಅವರು ‘ಪೆದ್ದಿ’ ಸಿನಿಮಾದ ಬಗ್ಗೆ ವಿಚಾರಿಸಿದ್ದು ಹಾಗೂ ಮೋದಿ ಅವರು ಪಶ್ಚಿಮ ಬಂಗಾಳದ ಪುಟ್ಟ ಗ್ರಾಮವೊಂದು ಫುಟ್​​ಬಾಲ್​ ಕ್ರೀಡೆಯಲ್ಲಿ ಸಾಧನೆ ಮಾಡಿರುವ ವಿಷಯವನ್ನು ಹಂಚಿಕೊಂಡಿದ್ದನ್ನು ರಾಮ್ ಚರಣ್ ಹೇಳಿದ್ದರು. ಇದೀಗ ಬಿಜೆಪಿಗರು ರಾಮ್ ಚರಣ್ ಅವರ ಇದೇ ವಿಡಿಯೋ ಅನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ರಾಮ್ ಚರಣ್ ಅವರೊಟ್ಟಿಗೆ ಮಾತನಾಡಿದ್ದ ಮೋದಿ ಅವರು ‘ಪಶ್ಚಿಮ ಬಂಗಾಳಕ್ಕೆ ಚುನಾವಣೆ ಪ್ರಚಾರಕ್ಕೆ ಹೋಗಿದ್ದಾಗ ಅಲ್ಲಿ ಕೆಲವು ಯುವಕರು ಮೇಲೆ ಸ್ಪೋರ್ಟ್ಸ್ ಜರ್ಸಿ ಧರಿಸಿ ಕೆಳಗೆ ಲಂಗೋಟಿ ಧರಿಸಿದ್ದನ್ನು ಕಂಡು ವಿಚಾರಿಸಿದಾಗ ಆ ಇಡೀ ಊರು ಫುಟ್​​ಬಾಲ್ ಕ್ರೀಡಾಪಟುಗಳನ್ನು ಹೊಂದಿರುವುದಾಗಿ ಹೇಳಿದ್ದರಂತೆ. ಆ ಊರಿನಿಂದ ಬಂದು ಖ್ಯಾತ ಫುಟ್​​ಬಾಲ್ ಆಟಗಾರನಾದ ಮೊಹಮ್ಮದ್ ಬಗ್ಗೆಯೂ ಮೋದಿ ಹೇಳಿದ್ದರಂತೆ.

ದೆಹಲಿಯಲ್ಲಿ ಮಾತನಾಡಿದ್ದ ನಟ ರಾಮ್ ಚರಣ್, ತಮ್ಮ ‘ಪೆದ್ದಿ’ ಸಿನಿಮಾವು ಮೋದಿ ಅವರ ಕನಸಾದ ‘ವಿಕಸಿತ್ ಭಾರತ್’ ಅನ್ನು ಪ್ರತಿನಿಧಿಸುತ್ತದೆ ಎಂದು ಸಹ ಹೇಳಿದ್ದರು. ಈ ಎಲ್ಲ ಕಾರಣಗಳಿಂದಾಗಿ ಬಿಜೆಪಿಗರು ‘ಪೆದ್ದಿ’ ಸಿನಿಮಾವನ್ನು ಬೆಂಬಲಿಸುತ್ತಿದ್ದಾರೆ. ‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದೆ. ಸಿನಿಮಾ ಅನ್ನು ಬುಚ್ಚಿಬಾಬು ಸನಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾನಲ್ಲಿ ಶಿವರಾಜ್ ಕುಮಾರ್, ಜಾನ್ಹವಿ ಕಪೂರ್ ನಟಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳೆಯರೇ… ಗಾಜಿನ ಧರಿಸೋದು ಎಷ್ಟು ಪ್ರಯೋಜನಕಾರಿ ಗೊತ್ತೇ?

ಹೆಂಗಳೆಯರಿಗೆ ಬಳೆಗಳೇ (bangles) ಭೂಷಣ. ಅದರಲ್ಲೂ ನಮ್ಮ ಸಂಪ್ರದಾಯದಲ್ಲಿ ಮದುವೆಯಾದ ಹೆಣ್ಣು ಮಕ್ಕಳು ಬಳೆಗಳನ್ನು ಧರಿಸಲೇಬೇಕು ಎನ್ನಲಾಗುತ್ತದೆ. ವಿವಾಹಿತ ಮಹಿಳೆಯರು ಕೈಗಳಿಗೆ ಬಳೆಹಳನ್ನು ಧರಿಸುವುದು ಅವರ ವೈವಾಹಿಕತೆಯ ಸಂಕೇತವಾಗಿದೆ ಹೌದು ಸಿಂಧೂರ ಮತ್ತು ಮಂಗಳಸೂತ್ರದಂತೆಯೇ ವಿವಾಹಿತ ಮಹಿಳೆಯರಿಗೆ ಗಾಜಿನ ಬಳೆಗಳು ವೈವಾಹಿಕ ಆನಂದದ ಸಂಕೇತವಾಗುದೆ.   ಮತ್ತು ಇದು ಸೌಭಾಗ್ಯದ ಸಂಕೇತ. ಬಳೆಗಳನ್ನು ಧರಿಸುವುದರಿಂದ ಪತಿಯ ಆಯಸ್ಸು ಹೆಚ್ಚಾಗುತ್ತದೆ ಎಂಬ ನಂಬಿಕೆಯೂ ಇದೆ. ಧಾರ್ಮಿಕ ನಂಬಿಕೆಗಳ ಪ್ರಕಾರ,  ಬಳೆಗಳ ಶಬ್ದವು ಸಕಾರಾತ್ಮಕ ಶಕ್ತಿಯನ್ನು ತರುತ್ತದೆ ಮತ್ತು ದುಷ್ಟಶಕ್ತಿಗಳನ್ನು ದೂರ ಮಾಡುತ್ತದೆ. ಇದು ಮಾತ್ರವಲ್ಲದೆ ಗಾಜಿನ ಬಳೆಗಳನ್ನು ಧರಿಸುವುದರಿಂದ ಮಹಿಳೆಯ ಆರೋಗ್ಯವೂ ವೃದ್ಧಿಸುತ್ತದಂತೆ. ಹಾಗಿದ್ದರೆ ಗಾಜಿನ ಬಳೆಗಳನ್ನು ಧರಿಸುವುದರಿಂದ ಏನೆಲ್ಲಾ ಆರೋಗ್ಯ  ಪ್ರಯೋಜನಗಳು ಲಭಿಸುತ್ತವೆ ಅನ್ನೋದನ್ನು ನೋಡೋಣ ಬನ್ನಿ.

ಮಹಿಳೆಯರೇಕೆ ಗಾಜಿನ ಬಳೆಗಳನ್ನು ಧರಿಸಬೇಕು?

ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ: ಬಳೆಗಳನ್ನು ಧರಿಸುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಹೌದು ಬಳೆಗಳು ಮಣಿಕಟ್ಟಿನ ಚರ್ಮಕ್ಕೆ ಉಜ್ಜುವ ಮೂಲಕ ಕೈಗಳಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ.

ಶಕ್ತಿಯನ್ನು ಹೆಚ್ಚಿಸುತ್ತದೆ: ಚಿನ್ನ, ಬೆಳ್ಳಿ ಮತ್ತು ಗಾಜಿನಂತಹ ಲೋಹಗಳಿಂದ ಮಾಡಿದ ಬಳೆಗಳನ್ನು ಧರಿಸುವುದರಿಂದ ಸಕಾರಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ. ಗಾಜಿನ ಬಳೆಗಳ ಶಬ್ದವು ಮನೆ ಮತ್ತು ಸುತ್ತಮುತ್ತಲಿನ ವಾತಾವರಣದಲ್ಲಿ ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಬಳೆಗಳು ಮನಸ್ಸು ಮತ್ತು ಮೆದುಳಿಗೆ ಸಕಾರಾತ್ಮಕ ಕಂಪನಗಳನ್ನು ಒದಗಿಸುತ್ತವೆ.

ಮಾನಸಿಕ ಸಮತೋಲನ: ವೈಜ್ಞಾನಿಕ ಪುರಾವೆಗಳ ಪ್ರಕಾರ, ಬಳೆಗಳನ್ನು ಧರಿಸುವುದರಿಂದ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಮಾನಸಿಕ ಸಮತೋಲನ ಕಾಯ್ದುಕೊಳ್ಳುಲು ಸಹಾಯ ಮಾಡುತ್ತದೆ. ಇದಲ್ಲದೆ, ಬಳೆಗಳು ನಕಾರಾತ್ಮಕ ಆಲೋಚನೆಗಳನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತವೆ.

ಹಾರ್ಮೋನು ಸಮತೋಲನ: ಮಹಿಳೆಯರ ದೇಹವು ಪುರುಷರಿಗಿಂತ ಹೆಚ್ಚು ಸೂಕ್ಷ್ಮವಾಗಿರುತ್ತದೆ ಮತ್ತು ಅವರ ಹಾರ್ಮೋನುಗಳ ಮಟ್ಟವು ಹೆಚ್ಚು ವೇಗವಾಗಿ ಏರಿಳಿತಗೊಳ್ಳುತ್ತದೆ. ಬಳೆಗಳನ್ನು ಧರಿಸುವುದರಿಂದ ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ಇದನ್ನೂ ಓದಿ: ಗಿಡಮೂಲಿಕೆಗಳ ರಾಣಿ ತುಳಸಿಯನ್ನು ಮನೆಯಲ್ಲಿ ನೆಡುವುದು ಏಕೆ ಮುಖ್ಯ ನೋಡಿ

ಭಾವನಾತ್ಮಕ ಸಮತೋಲನ:ಬಳೆಗಳ ಝಣಝಣ ಶಬ್ದವು ಮಹಿಳೆಯರಿಗೆ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬಳೆಗಳನ್ನು ಧರಿಸುವುದರಿಂದ ಮಹಿಳೆಯರು ಭಾವನಾತ್ಮಕವಾಗಿ ಸಮತೋಲನದಲ್ಲಿರುತ್ತಾರೆ.  ಬಳೆಗಳನ್ನು ಧರಿಸುವ ಮಹಿಳೆಯರು ಇತರ ಮಹಿಳೆಯರಿಗಿಂತ ತಮ್ಮ ಭಾವನೆಗಳನ್ನು ನಿಯಂತ್ರಿಸುವಲ್ಲಿ ಉತ್ತಮರು ಎಂದು ಸಂಶೋಧನೆ ತೋರಿಸಿದೆ.

ಆಯಾಸವನ್ನು ನಿವಾರಿಸುತ್ತದೆ:  ಬಳೆಗಳಿಂದ ಉಂಟಾಗುವ ಘರ್ಷಣೆಯು ದೇಹದಲ್ಲಿ ಶಕ್ತಿಯನ್ನು ಉತ್ಪಾದಿಸುತ್ತದೆ, ಇದು ಮಹಿಳೆಯರಿಗೆ ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಮಾನಸಿಕ ಸಮತೋಲನ: ಬಳೆಗಳನ್ನು ಧರಿಸುವುದರಿಂದ ಮಹಿಳೆಯರಲ್ಲಿ ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ವೈಜ್ಞಾನಿಕವಾಗಿ, ಗಾಜಿನ ಬಳೆಗಳ ಶಬ್ದವು ಪರಿಸರದಲ್ಲಿ ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ ಮತ್ತು ಅದರ ಸುತ್ತಲೂ ಸಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಅಹಮದಾಬಾದ್‌ನಲ್ಲೂ ಆರ್‌ಸಿಬಿ ಅಲೆ!: ಎಲ್ಲಿ ನೋಡಿದ್ರೂ ನಮ್ಮದೇ ಜರ್ಸಿ

ಅಹಮದಾಬಾದ್, ಮೇ,31: ಐಪಿಎಲ್ 2026 ರ ಮಹಾ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟನ್ಸ್ (GT) ತಂಡಗಳು ಪ್ರಶಸ್ತಿಗಾಗಿ ಮುಖಾಮುಖಿಯಾಗುತ್ತಿದ್ದು, ಇಡೀ ಅಹಮದಾಬಾದ್ ನಗರವೀಗ ಕೆಂಪು ಮಯವಾಗಿದೆ. ಗುಜರಾತ್‌ನ ತವರಿನಲ್ಲೇ ಆರ್‌ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡಕ್ಕೆ ಭರ್ಜರಿ ಬೆಂಬಲ ವ್ಯಕ್ತಪಡಿಸುತ್ತಿದ್ದು, ಕ್ರೀಡಾಂಗಣದ ಹೊರಗಿನ ಜೋಶ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಂದ್ಯದ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್‌ಸಿಬಿ ಕಟ್ಟಾ ಅಭಿಮಾನಿಯೊಬ್ಬರು, “ಅಹಮದಾಬಾದ್‌ನಲ್ಲಿ ಇವತ್ತು ಎಲ್ಲಿ ಕಣ್ಣು ಹಾಯಿಸಿದರೂ ಆರ್‌ಸಿಬಿ ಜರ್ಸಿಗಳೇ ಕಾಣಿಸುತ್ತಿವೆ. ಗುಜರಾತ್‌ನಲ್ಲೇ ನಮ್ಮ ಆರ್ಮಿ ಧೂಳೆಬ್ಬಿಸುತ್ತಿದೆ. ಕಳೆದ ಬಾರಿಯಂತೆ ಈ ವರ್ಷವೂ ನಾವು ಕಪ್ ಅನ್ನು ನಮ್ಮ ಮನೆಗೆ (ಬೆಂಗಳೂರಿಗೆ) ಕೊಂಡೊಯ್ಯಲಿದ್ದೇವೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ” ಎಂದು ಹೇಳಿದ್ದಾರೆ. ಇದೇ ವೇಳೆ ಗುಜರಾತ್ ತಂಡದ ವಿರುದ್ಧ ಆರ್‌ಸಿಬಿ ಗೆಲುವಿನ ತಂತ್ರದ ಬಗ್ಗೆ ಮಾತನಾಡಿದ ಅಭಿಮಾನಿಗಳು, “ಗುಜರಾತ್ ಟೈಟನ್ಸ್ ತಂಡಕ್ಕೆ ಹೋಲಿಸಿದರೆ ನಮ್ಮ ಆರ್‌ಸಿಬಿಯ ಬ್ಯಾಟಿಂಗ್ ಲೈನ್ ಅತ್ಯಂತ ಬಲಿಷ್ಠವಾಗಿದೆ ಮತ್ತು ಅದ್ಭುತ ಫಾರ್ಮ್‌ನಲ್ಲಿದೆ. ಈ ಬಾರಿ ನಮ್ಮ ತಂಡದ ಬ್ಯಾಟರ್‌ಗಳು ಗುಜರಾತ್ ಬೌಲರ್‌ಗಳನ್ನು ಧೂಳೀಪಟ ಮಾಡಲಿದ್ದಾರೆ. ಈ ವರ್ಷವೂ ಟ್ರೋಫಿ ನಮ್ಮ ಮುಡಿಗೇರಲಿದ್ದು, ನಮ್ಮ ತಂಡದ ಮೇಲೆ ನಮಗೆ ನೂರಕ್ಕೆ ನೂರು ನಂಬಿಕೆಯಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026 Final: ಟಾಸ್ ಗೆದ್ದ ಆರ್​ಸಿಬಿ, ಫೈನಲ್ ಪಂದ್ಯ ಆಡದ ಸಾಲ್ಟ್; ಗುಜರಾತ್ ತಂಡದಲ್ಲೂ ಬದಲಾವಣೆ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ (RCB vs GT) ನಡುವೆ ಐಪಿಎಲ್ 2026 ರ ಫೈನಲ್ (IPL 2026 Final) ಪಂದ್ಯ ನಡೆಯುತ್ತಿದೆ. ಸತತ ಎರಡನೇ ಬಾರಿಗೆ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಬೆಂಗಳೂರು ಇತಿಹಾಸ ನಿರ್ಮಿಸುವ ಅವಕಾಶವನ್ನು ಹೊಂದಿದೆ. ಆರ್​ಸಿಬಿ ಈ ಸಾಧನೆ ಮಾಡಿದರೆ ಐಪಿಎಲ್‌ನಲ್ಲಿ ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದ ಮೂರನೇ ತಂಡ ಎನಿಸಿಕೊಳ್ಳಲಿದೆ. ಇತ್ತ ಗುಜರಾತ್ ಕೂಡ 2022 ರ ನಂತರ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಲು ನೋಡುತ್ತಿದೆ. ಇನ್ನು ಈ ಪಂದ್ಯದ ಟಾಸ್ ಕೂಡ ನಡೆದಿದ್ದು, ಟಾಸ್ ಗೆದ್ದ ಆರ್​ಸಿಬಿ ನಾಯಕ ರಜತ್ ಪಾಟಿದರ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

ಟಾಸ್ ಗೆದ್ದ ಆರ್​ಸಿಬಿ

ಮೇಲೆ ಹೇಳಿದಂತೆ ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ರಜತ್ ಪಾಟಿದಾರ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆ ಬಳಿಕ ಪ್ಲೇಯಿಂಗ್ 11 ಬಗ್ಗೆ ಮಾಹಿತಿ ನೀಡಿದ ರಜತ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದರು. ಅಂದರೆ ಈ ನಿರ್ಣಾಯಕ ಪಂದ್ಯದಲ್ಲೂ ಫಿಲ್ ಸಾಲ್ಟ್ ಇಲ್ಲದೆ ಆರ್​ಸಿಬಿ ಕಣಕ್ಕಿಳಿಯುತ್ತಿದೆ. ಇತ್ತ ಟಾಸ್ ಸೋತ ಗುಜರಾತ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಸಾಯಿ ಕಿಶೋರ್ ಬದಲಿಗೆ ಅರ್ಷದ್ ಖಾನ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

RCB vs GT, IPL 2026 Final Live Score: ಟಾಸ್ ಗೆದ್ದ ಆರ್​​ಸಿಬಿ ಬೌಲಿಂಗ್ ಆಯ್ಕೆ

ಉಭಯ ತಂಡಗಳ ಪ್ಲೇಯಿಂಗ್ 11

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಜಾಕೋಬ್ ಡಫ್ಫಿ ಮತ್ತು ರಸಿಖ್ ಸಲಾಂ.

ಇಂಪ್ಯಾಕ್ಟ್ ಪ್ಲೇಯರ್ಸ್​: ವೆಂಕಟೇಶ್ ಅಯ್ಯರ್, ಕನಿಷ್ಕ್ ಚೌಹಾನ್, ಸ್ವಪ್ನಿಲ್ ಸಿಂಗ್, ಅಭಿನಂದನ್ ಸಿಂಗ್ ಮತ್ತು ಜೋರ್ಡಾನ್ ಕಾಕ್ಸ್.

ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ XI: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್, ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನಿಶಾಂತ್ ಸಿಂಧು, ಕಗಿಸೋ ರಬಾಡ, ಅರ್ಷದ್ ಖಾನ್ (ಸಾಯಿ ಕಿಶೋರ್ ಬದಲಿಗೆ) ಮೊಹಮ್ಮದ್ ಸಿರಾಜ್.

ಇಂಪ್ಯಾಕ್ಟ್ ಪ್ಲೇಯರ್ಸ್​: ಪ್ರಸಿದ್ಧ್ ಕೃಷ್ಣ, ಗ್ಲೆನ್ ಫಿಲಿಪ್ಸ್, ಅನುಜ್ ರಾವತ್, ಕುಮಾರ್ ಕುಶಾಗ್ರಾ, ಸಾಯಿ ಕಿಶೋರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:17 pm, Sun, 31 May 26

Source link

ಹಿಮಾಚಲ ಸ್ಥಳೀಯ ಸಂಸ್ಥೆ ಚುನಾವಣೆ; ಆಡಳಿತಾರೂಢ ಕಾಂಗ್ರೆಸ್​ಗೆ ಆಘಾತ; ಬಿಜೆಪಿ ಗೆಲುವಿನ ಕೇಕೆ

ಹಿಮಾಚಲ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಗೆಲುವನ್ನು ಸಂಭ್ರಮಿಸುತ್ತಿರುವ ಪಕ್ಷದ ನಾಯಕರು, ಕಾರ್ಯಕರ್ತರುImage Credit source: PTI

ಶಿಮ್ಲಾ, ಮೇ 31: ಹಿಮಾಚಲ ಪ್ರದೇಶದಲ್ಲಿ ಮೇ 17ರಂದು ನಡೆದಿದ್ದ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಳ (Himachal Pradesh Local Bodies elections) ಫಲಿತಾಂಶ ಇವತ್ತು ಭಾನುವಾರ (ಮೇ 31) ಪ್ರಕಟವಾಗಿದ್ದು, ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಜೈ ಎಂದಿದ್ದಾರೆ. ಪ್ರಮುಖ ಮೂರು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ವಿಜಯಪತಾಕೆ ಹಾರಿಸಿದೆ.

ಮೂರು ಪಾಲಿಕೆಗಳು ಬಿಜೆಪಿ ವಶ

ರಾಜ್ಯದ ಅತ್ಯಂತ ಪ್ರಮುಖ ಮುನ್ಸಿಪಲ್ ಕಾರ್ಪೊರೇಷನ್‌ಗಳಾದ ಧರ್ಮಶಾಲಾ, ಸೋಲನ್ ಮತ್ತು ಮಂಡಿ ಪಾಲಿಕೆಗಳಲ್ಲಿ ಬಿಜೆಪಿ ಭರ್ಜರಿ ಬಹುಮತ ಪಡೆದು ಅಧಿಕಾರ ಹಿಡಿದಿದೆ. ಪಲಂಪುರ್ ಪಾಲಿಕೆಯನ್ನು ಮಾತ್ರ ಕಾಂಗ್ರೆಸ್ ಉಳಿಸಿಕೊಂಡಿದೆ. ಮಂಡಿ ಪಾಲಿಕೆಯ 15 ವಾರ್ಡ್​ಗಳಲ್ಲಿ ಬಿಜೆಪಿ 12ರಲ್ಲಿ ಗೆದ್ದರೆ, ಕಾಂಗ್ರೆಸ್​ಗೆ ದಕ್ಕಿದ್ದು ಒಂದು ಮಾತ್ರ. ಸೋಲನ್​ನಲ್ಲಿ 17 ವಾರ್ಡ್​ಗಳ ಪೈಕಿ ಬಿಜೆಪಿಗೆ 10, ಕಾಂಗ್ರೆಸ್​ಗೆ 6 ಸಿಕ್ಕಿವೆ. ಧರ್ಮಶಾಲಾದ 17 ವಾರ್ಡ್​ಗಳಲ್ಲಿ ಬಿಜೆಪಿಗೆ 11, ಕಾಂಗ್ರೆಸ್​ಗೆ 5 ಸ್ಥಾನ ಸಿಕ್ಕಿದೆ. ಆದರೆ, ಪಲಂಪುರ್​ನಲ್ಲಿ ಕಾಂಗ್ರೆಸ್​ಗೆ 11, ಬಿಜೆಪಿಗೆ 4 ಸ್ಥಾನ ಸಿಕ್ಕಿವೆ.

ಇತರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿ ಗೆಲುವಿನ ಕೇಕೆ ಹಾಕಿದೆ. 25 ನಗರಸಭೆ ಪೈಕಿ 18ರಲ್ಲಿ ಗದ್ದುಗೆ ಹಿಡಿದಿದೆ. 22 ನಗರ ಪಂಚಾಯಿತಿಗಳಲ್ಲಿ ಬಿಜೆಪಿ 12ರಲ್ಲಿ ಗೆದ್ದಿದೆ. ಕಾಂಗ್ರೆಸ್ ಆಡಳಿತ ಇರುವ ಹಿಮಾಚಲಪ್ರದೇಶ ಮುಂದಿನ ವರ್ಷ (2027) ವಿಧಾನಸಭಾ ಚುನಾವಣೆಗಳನ್ನು ಎದುರಿಸಲಿದೆ. ಅದಕ್ಕೆ ಮುನ್ನ ನಡೆದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ವಿಧಾನಸಭಾ ಚುನಾವಣೆಯ ಮತದಾರನ ತೀರ್ಪಿಗೆ ದಿಕ್ಸೂಚಿಯಾಗಿರಬಹುದಾ?

ಇದನ್ನೂ ಓದಿ: ನೂತನ ಸಿಡಿಎಸ್ ಆಗಿ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅಧಿಕಾರ; ಸಶಸ್ತ್ರ ಪಡೆಗಳ ಬಲವರ್ಧನೆಗೆ ಆಲೋಚನೆ

ಕಾಂಗ್ರೆಸ್ಸನ್ನು ತಿರಸ್ಕರಿಸಿದ ಜನರು: ಜೈರಾಮ್ ಠಾಕೂರ್

ಈ ಅದ್ಭುತ ಗೆಲುವಿನ ಬೆನ್ನಲ್ಲೇ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಜೈರಾಮ್ ಠಾಕೂರ್ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. “ರಾಜ್ಯದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಮತ್ತು ಆಡಳಿತ ವೈಫಲ್ಯಕ್ಕೆ ಈ ಫಲಿತಾಂಶವೇ ಕನ್ನಡಿಯಾಗಿದೆ. ಮತದಾರರು ಮುಖ್ಯಮಂತ್ರಿ ಸುಖು ಅವರ ನಾಯಕತ್ವವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ಗೆ ಆಂತರಿಕ ಪೆಟ್ಟು: ವಿಧಾನಸಭೆ ಚುನಾವಣೆಯ ನಂತರ ರಾಜ್ಯದಲ್ಲಿ ಹಿಡಿತ ಸಾಧಿಸಿದ್ದ ಕಾಂಗ್ರೆಸ್‌ಗೆ ಈ ನಗರ ಪ್ರದೇಶಗಳ ಫಲಿತಾಂಶ ಭಾರಿ ಆಘಾತ ನೀಡಿದೆ. ಮುಂಬರುವ ದಿನಗಳಲ್ಲಿ ಇದು ಪಕ್ಷದ ಒಳಗಿನ ಆಂತರಿಕ ಭಿನ್ನಾಭಿಪ್ರಾಯಗಳನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಅಭಿಷೇಕ್ ಬ್ಯಾನರ್ಜಿ ಹಲ್ಲೆ ಪ್ರಕರಣದಲ್ಲಿ ಟ್ವಿಸ್ಟ್; ಬಂಧಿತ ಆರೋಪಿಗಳಿಗೆ ಮಾಜಿ ಶಾಸಕಿ ಲವ್ಲಿ ಮೈತ್ರಾರೊಂದಿಗೆ ನಿಕಟ ಸಂಪರ್ಕ

ಬಿಜೆಪಿ ಗೆಲುವಿಗೆ ಕಾರಣಗಳೇನು?

ಸ್ಥಳೀಯ ಮೂಲಸೌಕರ್ಯಗಳ ಅಭಿವೃದ್ಧಿ, ನಗರಾಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರದ ವಿಳಂಬ ನೀತಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಜನಕಲ್ಯಾಣ ಯೋಜನೆಗಳು ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎನ್ನಲಾಗಿದೆ. ಬಿಜೆಪಿಯ ಬಲಿಷ್ಠ ತಳಮಟ್ಟದ ಪ್ರಚಾರ ಮತ್ತು ಒಗ್ಗಟ್ಟಿನ ಹೋರಾಟವು ಪಕ್ಷಕ್ಕೆ ಈ ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ.

ಈ ಜಯವು ಹಿಮಾಚಲ ಪ್ರದೇಶದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹವನ್ನು ತುಂಬಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷವು ತನ್ನ ಆಡಳಿತ ವೈಖರಿಯನ್ನು ಪುನರ್ ವಿಮರ್ಶಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಂಪುಟ ಸೇರಲು ಕಸರತ್ತು: ಡಿಕೆ ಶಿವಕುಮಾರ್​ ನಿವಾಸಕ್ಕೆ ಮಾಜಿ ಸಚಿವರು, ಶಾಸಕರ ಪರೇಡ್‌!

ಬೆಂಗಳೂರು, ಮೇ 31: ಸರ್ಕಾರ ರಚಿಸಲು ಡಿಕೆ ಶಿವಕುಮಾರ್​​ಗೆ ರಾಜ್ಯಪಾಲರು ಆಹ್ವಾನ ನೀಡ್ತಿದ್ದಂತೆ, ಭದ್ರತೆ ಹೆಚ್ಚಾಗಿದೆ. ನಿಯೋಜಿತ ಸಿಎಂ ಆಗಿರುವ ಡಿಕೆ ಶಿವಕುಮಾರ್​​ (DK Shivakumar) ಇದೀಗ ಸಂಪುಟ ರಚನೆಯ ಕಸರತ್ತು ಆರಂಭಿಸಿದ್ದು, ಅವರ ನಿವಾಸಕ್ಕೆ ಮಾಜಿ ಸಚಿವರು ಮತ್ತು ಶಾಸಕರ ದಂಡೇ ಹರಿದು ಬರುತ್ತಿದೆ. ಡಿಕೆ ಶಿವಕುಮಾರ್​ನ್ನು ಭೇಟಿ ಮಾಡಿ ವಿಶ್‌ ಮಾಡಿದ್ದು, ಜೊತೆಗೆ ಸಚಿವ ಸ್ಥಾನಕ್ಕೂ ಡಿಮ್ಯಾಂಡ್​ ಕೂಡ ಮಾಡಿದ್ದಾರೆ.

ಮುಖ್ಯಾಂಶಗಳು

  • ಡಿಕೆ ಶಿವಕುಮಾರ್​​ ನಿವಾಸಕ್ಕೆ ಪೊಲೀಸ್‌ ಭದ್ರತೆ, ಹೆಜ್ಜೆ ಹೆಜ್ಜೆಗೂ ಖಾಕಿ ಕಾವಲು
  • ಹರಿದು ಬರುತ್ತಿದೆ ಮಾಜಿ ಸಚಿವರು ಮತ್ತು ಶಾಸಕರ ದಂಡು
  • ಡಿಸಿಎಂ ಸ್ಥಾನಕ್ಕೆ ಇನ್ನೂ ಪ್ರಪೋಸಲ್ ಬಂದಿಲ್ಲ ಎಂದಿದ್ದಾರೆ ಮಲ್ಲಿಕಾರ್ಜುನ ಖರ್ಗೆ

ಯಾರೆಲ್ಲಾ ಡಿಕೆ ಶಿವಕುಮಾರ್​ ನಿವಾಸಕ್ಕೆ ಭೇಟಿ

ನಿನ್ನೆಯಷ್ಟೇ ಸಿಎಲ್‌ಪಿ ನಾಯಕನಾಗಿ ಆಯ್ಕೆ ಆಗಿರಿವ ಡಿ.ಕೆ ಶಿವಕುಮಾರ್‌, ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದಾರೆ. ಡಿಕೆ ಶಿವಕುಮಾರ್​ ನಿಯೋಜಿತ ಸಿಎಂ ಆಗ್ತಿದ್ದಂತೆ ಪ್ರೋಟೋಕಾಲ್ ಪ್ರಕಾರ ಅವರ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದೆ. ಕಾರ್ಯಕರ್ತರು, ಸಾರ್ವಜನಿಕರ ಭೇಟಿಗೆ ನಿರ್ಬಂಧ ಹಾಕಲಾಗಿದೆ. ಬೆಂಗಳೂರಿನ ಸದಾಶಿವನಗರದಲ್ಲಿನ ಅವರ ನಿವಾಸ ಪವರ್ ಸೆಂಟರ್ ಆಗಿ ಬದಲಾಗಿದ್ದು, ಮಾಜಿ ಸಚಿವರಾದ ಎಂಬಿ ಪಾಟೀಲ್‌, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ, ಕೆ.ಹೆಚ್‌. ಮುನಿಯಪ್ಪ, ಟಿಬಿ ಜಯಚಂದ್ರ ಮತ್ತು ಶಾಸಕರಾದ ಪುಟ್ಟರಂಗಶೆಟ್ಟಿ, ಅಶೋಕ್ ಪಟ್ಟಣ್, ಕೆ.ವೈ.ನಂಜೇಗೌಡ, ಗಣೇಶ್ ಹುಕ್ಕೇರಿ ಸೇರಿದಂತೆ ಹಲವರು ಭೇಟಿ ನೀಡಿದ್ದಾರೆ.

ಸಂಪುಟ ರಚನೆ ಕಸರತ್ತು: ನಾಳೆ ದೆಹಲಿಗೆ ಡಿಕೆ ಶಿವಕುಮಾರ್​ ಪಯಣ

ಸಾಲು ಸಾಲು ನಾಯಕರು ಸಚಿವ ಸ್ಥಾನಕ್ಕಾಗಿ ಒತ್ತಡ ಹಾಕುತ್ತಿದ್ದಂತೆ, ಡಿಕೆ ಶಿವಕುಮಾರ್​​ ನಾಳೆಯೇ ದೆಹಲಿಗೆ ಹಾರಲಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮ ಹಾಗೂ ಸಚಿವರ ಹೆಸರು ಫೈನಲ್ ಮಾಡಲು ಹೈಕಮಾಂಡ್ ಭೇಟಿ ಮಾಡಲಿದ್ದಾರೆ. ಸಚಿವ ಸಂಪುಟ ಕುರಿತು ಚರ್ಚಿಸಲಿರುವ ಡಿಕೆ ಶಿವಕುಮಾರ್​ ತಮ್ಮ ಜೊತೆ ಎಷ್ಟು ಸಚಿವರು ಪ್ರಮಾಣ ವಚನ ಸ್ವೀಕರಿಸಬೇಕು. ಮುಂದಿನ ಪ್ರಕ್ರಿಯೆ ಸೇರಿ ಹಲವು ವಿಚಾರದ ಬಗ್ಗೆ ಚರ್ಚಿಸಲಿದ್ದಾರೆ.

ಇದನ್ನೂ ಓದಿ: ಡಿಕೆಶಿ ಸಂಪುಟದಲ್ಲಿ ಯಾರ್ಯಾರು ಸಚಿವರಾಗುತ್ತಾರೆ?: ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ನಿಯೋಜಿತ ಸಿಎಂ

ಸಿದ್ದರಾಮಯ್ಯ ಕೂಡ ಮತ್ತೆ ನಾಳೆ ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ. ಬೆಳಗ್ಗೆ 9.30ಕ್ಕೆ ದೆಹಲಿಗೆ ತೆರಳಲಿದ್ದಾರೆ. ತಮ್ಮ ಆಪ್ತರಿಗೆ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿರುವ ಸಿದ್ದರಾಮಯ್ಯ ಹೈಕಮಾಂಡ್ ನಾಯಕರ ಜೊತೆ ಚರ್ಚೆ ಸಾಧ್ಯತೆ ಇದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ನಿಯೋಜಿತ ಸಿಎಂ ಡಿಕೆ ಶಿವಕುಮಾರ್​​, ಯಾರು ಯಾರು  ಸಚಿವರಾಗುತ್ತಾರೆ ಹೈಕಮಾಂಡ್ ನಿರ್ಧರಿಸುತ್ತೆ, ಈ ಬಗ್ಗೆ ನನಗೆ ಇನ್ನೂ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.

ಡಿಸಿಎಂ ಹುದ್ದೆಗಳು ಸೃಷ್ಟಿಯಾಗುತ್ತೋ? ಇಲ್ಲವೋ? ಮಲ್ಲಿಕಾರ್ಜುನ ಖರ್ಗೆ ಸ್ಫೋಟಕ ಹೇಳಿಕೆ

ಇನ್ನು ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟವರಿಗೆ ಹೈಕಮಾಂಡ್ ಶಾಕ್​ ನೀಡಿದೆ. ಈ ಬಗ್ಗೆ ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಸ್ಥಾನಕ್ಕೆ ಇನ್ನೂ ಪ್ರಪೋಸಲ್ ಬಂದಿಲ್ಲ. ಜೂನ್ 3ರ ನಂತರ ನಿರ್ಧಾರ ಮಾಡುತ್ತೇವೆ. ಸಿಎಂ ಜೊತೆ ಎಷ್ಟು ಜನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ ಗೊತ್ತಿಲ್ಲ. 15 ದಿನದ ಬಳಿಕ ಮತ್ತೊಮ್ಮೆ ಸಂಪುಟ ವಿಸ್ತರಣೆಯಾಗಲಿದೆ. ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ಹೊಂದಾಣಿಕೆ ಇರಬೇಕು, ಅಂತಹ ವ್ಯಕ್ತಿಯನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲಾಗುತ್ತೆ ಎಂದಿದ್ದಾರೆ.

ವರದಿ: ಬ್ಯೂರೋ ರಿಪೋರ್ಟ್‌ ಟಿವಿ9.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಕಾಲಾ ಹಿರನ್’: ಸಲ್ಮಾನ್ ಖಾನ್ ಕೃಷ್ಣಮೃಗ ಭೇಟೆ ಕೇಸು ಕುರಿತು ಸಿನಿಮಾ

ಸಲ್ಮಾನ್ ಖಾನ್ (Salman Khan) ಬಾಲಿವುಡ್​​ನ ಸೂಪರ್ ಸ್ಟಾರ್ ನಟ. ಅದ್ಭುತವಾದ ವೃತ್ತಿ ಜೀವನ ನೋಡಿರುವ, ನೋಡುತ್ತಿರುವ ಸಲ್ಮಾನ್ ಖಾನ್ ಅವರ ವೈಯಕ್ತಿಕ ಜೀವನ ಮಾತ್ರ ಸಾಕಷ್ಟು ಏರು-ಪೇರುಗಳಿಂದ ಕೂಡಿತ್ತು. ಅಪಘಾತ ಪ್ರಕರಣ, ಸಹ ನಟನಿಗೆ ಬೆದರಿಕೆ, ಹಲ್ಲೆ ಪ್ರಕರಣ, ಕೃಷ್ಣಮೃಗ ಭೇಟೆ ಪ್ರಕರಣ, ಇನ್ನೂ ಹಲವಾರು ವಿವಾದಗಳಿಗೆ ಸಲ್ಮಾನ್ ಖಾನ್ ಸಿಲುಕಿಕೊಂಡಿದ್ದರು. ಅವುಗಳಲ್ಲಿ ಹೆಚ್ಚು ಸಾರ್ವಜನಿಕರ ಗಮನ ಸೆಳೆದಿದ್ದೆಂದರೆ ಕಾರು ಅಪಘಾತ ಪ್ರಕರಣ ಮತ್ತು ಕೃಷ್ಣಮೃಗ ಭೇಟೆ ಪ್ರಕರಣ. ಇದೀಗ ಸಲ್ಮಾನ್ ಖಾನ್ ಅವರ ಕೃಷ್ಣಮೃಗ ಭೇಟೆ ಪ್ರಕರಣದ ಬಗ್ಗೆ ಸಿನಿಮಾ ಒಂದು ಬಾಲಿವುಡ್​​ನಲ್ಲಿ ನಿರ್ಮಾಣ ಆಗುತ್ತಿದೆ.

ವಿವಾದಾತ್ಮಕ ಸಿನಿಮಾಗಳ ನಿರ್ಮಾಣದಿಂದಲೇ ಹೆಸರಾಗುತ್ತಿರುವ ಅಮಿತ್ ಜಾನಿ ನಿರ್ಮಾಣದಲ್ಲಿ ‘ಕಾಲಾ ಹಿರನ್: ದಿ ಬ್ಯಾಟಲ್ ಆಫ್ ಲೆಗಸಿ’ ಹೆಸರಿನ ಸಿನಿಮಾ ತಯಾರಾಗುತ್ತಿದ್ದು, ಈ ಸಿನಿಮಾ ಸಲ್ಮಾನ್ ಖಾನ್ ಅವರ ಕೃಷ್ಣಮೃಗ ಭೇಟೆ ಪ್ರಕರಣಕ್ಕೆ ಸಂಬಂಧಿಸಿದ ಕತೆಯನ್ನು ಒಳಗೊಂಡಿದೆ. ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು, ಸಲ್ಮಾನ್ ಖಾನ್ ಅವರನ್ನು ಹೋಲುವ ವ್ಯಕ್ತಿಯೊಬ್ಬ ಕೈಯಲ್ಲಿ ರೈಫಲ್ ಹಿಡಿದು ಗುರಿ ನೋಡುತ್ತಿದ್ದಾರೆ. ಸಲ್ಮಾನ್ ಖಾನ್ ಕೈಗೆ ಧರಿಸುವ ಚೈನ್ ಮಾದರಿಯ ಚೈನ್ ಪೋಸ್ಟರ್​​ನಲ್ಲಿರುವ ವ್ಯಕ್ತಿಯ ಕೈಯಲ್ಲೂ ಇದೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿರುವ ನಿರ್ಮಾಪಕ ಅಮಿತ್ ಜಾನಿ, ‘ಇದು ನಿಜ ಘಟನೆ ಮತ್ತು ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಕತೆಯನ್ನು ಒಳಗೊಂಡಿದೆ’ ಎಂದಿದ್ದಾರೆ. ಅಲ್ಲದೆ ಈ ಸಿನಿಮಾ ಭಾರತದ ಅತಿ ದೊಡ್ಡ ವಿವಾದಾತ್ಮಕ ಸಿನಿಮಾ ಆಗಲಿದೆ ಎಂದು ಸಹ ಅವರು ಹೇಳಿದ್ದಾರೆ. ಕೃಷ್ಣಮೃಗ ಭೇಟೆ ಕುರಿತ ಈ ಸಿನಿಮಾ ಸಲ್ಮಾನ್ ಖಾನ್ ಜೊತೆಗೆ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಕತೆಯನ್ನೂ ಒಳಗೊಂಡಿರಲಿದೆ.

‘ಉದಯಪುರ ಫೈಲ್ಸ್’ ಸಿನಿಮಾ ನಿರ್ಮಾಣ ಮಾಡಿದ್ದ ಅಮಿತ್ ಜಾನಿ ಇದೀಗ ‘ಕಾಲಾ ಹಿರನ್’ ಸಿನಿಮಾಕ್ಕೆ ಕೈ ಹಾಕಿದ್ದು, ಈ ಸಿನಿಮಾವನ್ನು ಭರತ್ ಎಸ್ ಶ್ರೀನಾಥ್ ಎಂಬುವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಜಾನಿ ಫೈರ್ ಫಾಕ್ಸ್ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಸಿನಿಮಾದ ಟೀಸರ್ ಜೂನ್ 20 ರಂದು ಬಿಡುಗಡೆ ಆಗಲಿದೆಯಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಜಂಗಲ್ ರಾಜ್‌ ಆಗಿ ಬದಲಾಗುತ್ತಿದೆ?: ಶಾಲೆಯ ಮುಂದೆಯೇ ಲಾಂಗ್ ಬೀಸಿದ ಪುಂಡರು!; ವಿಡಿಯೋ ವೈರಲ್!

ಬೆಂಗಳೂರು, ಮೇ,31: ಕಾನೂನು ಸುವ್ಯವಸ್ಥೆಗೆ ಹೆಸರಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಪುಂಡರ ಅಡ್ಡೆಯಾಗುತ್ತಿದೆಯೇ ಎಂಬ ಅನುಮಾನ ಮೂಡಲಾರಂಭಿಸಿದೆ. ನಗರದ ಡೇನಿಸ್ ರಸ್ತೆಯ (Davis Road) ಸೆಂಟ್ ಅಲ್ಫೋನ್ಸಸ್ ಶಾಲೆಯ (St. Alphonsus School) ಜಂಕ್ಷನ್ ಬಳಿ, ಸಾರ್ವಜನಿಕವಾಗಿ ಯುವಕರ ಗುಂಪೊಂದು ಮಾರಕಾಸ್ತ್ರ ಪ್ರದರ್ಶಿಸಿ ದಾದಾಗಿರಿ ನಡೆಸಿರುವ ಬೆಚ್ಚಿಬೀಳಿಸುವ ಘಟನೆ ಶನಿವಾರ ಮುಂಜಾನೆ ನಡೆದಿದೆ. ಈ ಕುರಿತಾದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋವನ್ನು ನೋಡಿ ನಾಗರಿಕರು ಆತಂಕಗೊಂಡಿದ್ದಾರೆ.

ಲಕ್ಕಿ ಜಂಕ್ಷನ್‌ನ ಗೌಸಿಯಾ ಟೀ ಹೋಟೆಲ್ ಎದುರು ಶನಿವಾರ ಬೆಳಿಗ್ಗೆ ಸುಮಾರು 7:30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಈ ಬಗ್ಗೆ ಸ್ಥಳೀಯ ನಿವಾಸಿಯೊಬ್ಬರು ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಎರಡು ಸ್ಕೂಟರ್‌ಗಳಲ್ಲಿ ಹೆಲ್ಮೆಟ್ ಧರಿಸದೆ, ಟ್ರಾಫಿಕ್ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಿ ಒಂದೊಂದು ದ್ವಿಚಕ್ರ ವಾಹನದಲ್ಲಿ ತಲಾ ನಾಲ್ಕು ಜನರಂತೆ ಒಟ್ಟು ಎಂಟು ಜನ ಯುವಕರು ಬಂದಿದ್ದರು. ಅಲ್ಲಿ ಸಣ್ಣ ವಿಷಯಕ್ಕೆ ಪರಸ್ಪರ ತೀವ್ರ ಜಗಳ ಆರಂಭಿಸಿದ್ದಾರೆ.

ಇಲ್ಲಿದೆ ನೋಡಿ ಎಕ್ಸ್​​ ವಿಡಿಯೋ:

ಯುವಕರ ನಡುವಿನ ಮಾತಿನ ಚಕಮಕಿ ತೀವ್ರಗೊಳ್ಳುತ್ತಿದ್ದಂತೆ, ಆ ಗುಂಪಿನಲ್ಲಿದ್ದ ಒಬ್ಬ ಪುಂಡ ಸಾರ್ವಜನಿಕ ರಸ್ತೆಯಲ್ಲೇ ದೊಡ್ಡ ಲಾಂಗ್ ಹೊರತೆಗೆದು ಬೀಸುತ್ತಾ ಎದುರಾಳಿಗಳಿಗೆ ಮತ್ತು ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದಾನೆ. ಈ ಘಟನೆ ನಡೆದ ಸ್ಥಳದ ಅಕ್ಕಪಕ್ಕದಲ್ಲೇ ಶಾಲೆ, ಟೀ ಸ್ಟಾಲ್ ಹಾಗೂ ಸಿಗರೇಟ್ ಅಂಗಡಿಗಳಿರುವುದರಿಂದ, ಮುಂಜಾನೆ ಶಾಲೆಗೆ ತೆರಳುತ್ತಿದ್ದ ಸಣ್ಣ ಸಣ್ಣ ಮಕ್ಕಳು, ಪೋಷಕರು ಹಾಗೂ ಸವಾರರು ಈ ರೌಡಿಸಂ ನೋಡಿ ತೀವ್ರ ಭಯಭೀತರಾಗಿದ್ದಾರೆ. ಇತ್ತೀಚೆಗೆ ಈ ಭಾಗದಲ್ಲಿ ಇಂತಹ ಗಾಂಜಾ ಪುಂಡರ ಮತ್ತು ರೌಡಿಗಳ ಹಾವಳಿ ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ: ‘ನಿನ್ನ ಜೀವನ ನಡೆಯೋದೇ ನಮ್ಮಿಂದ!’: ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ

ಘಟನೆ ನಡೆದ ಜಂಕ್ಷನ್‌ನಲ್ಲಿ ಬೆಂಗಳೂರು ನಗರ ಪೊಲೀಸರ ಅಧಿಕೃತ ಸಿಸಿಟಿವಿ (CCTV) ಕ್ಯಾಮೆರಾಗಳು ಹಾಗೂ ಖಾಸಗಿ ಅಂಗಡಿಗಳ ಕಣ್ಗಾವಲು ಕ್ಯಾಮೆರಾಗಳಿದ್ದು, ಇಡೀ ಕೃತ್ಯದ ದೃಶ್ಯಾವಳಿಗಳು ಅದರಲ್ಲಿ ಸೆರೆಯಾಗಿವೆ. “ಇಂತಹ ರೌಡಿಸಂ ಮತ್ತು ಮಾರಕಾಸ್ತ್ರ ಪ್ರದರ್ಶನವನ್ನು ಸಣ್ಣ ಗಲಾಟೆ ಎಂದು ನಿರ್ಲಕ್ಷಿಸದೆ, ಪೊಲೀಸರು ತಕ್ಷಣವೇ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಬೇಕು” ಎಂದು ಸಾರ್ವಜನಿಕರು ಸಿಟಿ ಪೊಲೀಸ್ ಕಮಿಷನರ್‌ಗೆ ಜಾಲತಾಣಗಳ ಮೂಲಕ ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link