ಬೆಂಗಳೂರು, ಮಾರ್ಚ್ 25: ಕರ್ನಾಟಕ ವಿಧಾನಸಭೆಯ ಮುಂಬರುವ ಬಜೆಟ್ 2026ರ ಅಧಿವೇಶನಕ್ಕೆ ಮುನ್ನ, ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಶಾಸಕರ ಸಮೂಹ ಫೋಟೋಶೂಟ್ ಆಯೋಜಿಸಲಾಗಿತ್ತು. ಈ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಶಾಸಕರು ಮತ್ತು ಸಚಿವರು ಭಾಗವಹಿಸಿದರು. ವಿಧಾನಸಭೆಯ ಸದಸ್ಯರು ಒಟ್ಟಾಗಿ ಕ್ಯಾಮರಾ ಮುಂದೆ ನಿಂತು ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಟೆಹ್ರಾನ್, ಮಾರ್ಚ್ 25:ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ ಸಂಭಾವ್ಯ ಕದನ ವಿರಾಮಕ್ಕೆ ಇರಾನ್(Iran) ಹೆಚ್ಚಿನ ಮತ್ತು ಕಠಿಣ ಷರತ್ತುಗಳನ್ನು ವಿಧಿಸಿದೆ. ಡೊನಾಲ್ಡ್ ಟ್ರಂಪ್ ಅವರ ಹೊಸ ಮಾತುಕತೆಗಳ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿ, ಗಲ್ಫ್ನಲ್ಲಿನ ಅಮೆರಿಕದ ಮಿಲಿಟರಿ ನೆಲೆಗಳನ್ನು ಮುಚ್ಚುವುದರಿಂದ ಹಿಡಿದು ನಿರ್ಬಂಧಗಳನ್ನು ತೆಗೆದುಹಾಕುವುದು ಮತ್ತು ಪ್ರಮುಖ ಹಡಗು ಮಾರ್ಗದ ಮೇಲೆ ನಿಯಂತ್ರಣ ಸಾಧಿಸುವವರೆಗೆ ಇರಾನ್ ವ್ಯಾಪಕ ಬೇಡಿಕೆಗಳನ್ನು ಮುಂದಿಟ್ಟಿದೆ.
ಅಮೆರಿಕ ಮತ್ತು ಇಸ್ರೇಲ್ ಜತೆಗಿನ ನೇರ ಮುಖಾಮುಖಿ ಸಂದರ್ಭದಲ್ಲಿ ಯಾವುದೇ ಒತ್ತಡಕ್ಕೆ ತಾನು ಮಣಿಯುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಅಮೆರಿಕ ಸಿದ್ಧಪಡಿಸಿದ ಶಾಂತಿ ಪ್ರಸ್ತಾವನೆಯನ್ನು ಇರಾನ್ಗೆ ಕಳುಹಿಸಲಾಗಿದೆ, ಇರಾನ್ನ ಸೇನೆಯು ಅಮೆರಿಕ ನಿರ್ಧಾರಗಳನ್ನು ಸಾರ್ವಜನಿಕವಾಗಿ ಅಪಹಾಸ್ಯ ಮಾಡಿದ್ದರಿಂದ, ಪಶ್ಚಿಮ ಏಷ್ಯಾದಲ್ಲಿ ತೀವ್ರ ಮಾತಿನ ಸಮರ ಭುಗಿಲೆದ್ದಿದೆ.
ಇರಾನ್ನ ಸಶಸ್ತ್ರ ಪಡೆಗಳ ಏಕೀಕೃತ ಕಮಾಂಡ್ ಆಗಿರುವ ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ವಕ್ತಾರ ಇಬ್ರಾಹಿಂ ಝೋಲ್ಫಾಕರಿ, ಅಮೆರಿಕವನ್ನು ಅಪಹಾಸ್ಯ ಮಾಡಿದ್ದರು. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಒಪ್ಪಂದವನ್ನು ಬಯಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಒಂದು ದಿನದ ನಂತರ ಅವರ ಹೇಳಿಕೆಗಳು ಬಂದಿವೆ.
ಇರಾನ್ನ ಮೊದಲ ಬೇಡಿಕೆ ಎಂದರೆ ಅಮೆರಿಕ ಮತ್ತು ಇಸ್ರೇಲ್ ತನ್ನ ಮಿಲಿಟರಿ ನೆಲೆಗಳು, ಇಂಧನ ಮೂಲಸೌಕರ್ಯ ಮತ್ತು ಪರಮಾಣು ಸ್ಥಾವರಗಳ ಮೇಲಿನ ಎಲ್ಲಾ ವಾಯು ಮತ್ತು ಕ್ಷಿಪಣಿದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು. ಇಸ್ರೇಲ್ ಮತ್ತು ಅಮೆರಿಕವು ತಮ್ಮ ಉಳಿದ ಉನ್ನತ ನಾಯಕರನ್ನು ಗುರಿಯಾಗಿಸಬಾರದು. ಹಾಗಾಗಿ ಮಾತುಕತೆಗೆ ಬರುವ ಮುನ್ನ ತಮ್ಮ ನಾಯಕರ ಸುರಕ್ಷತೆ ಬಗ್ಗೆ ಖಾತ್ರಿ ಬಯಸುತ್ತಿದ್ದಾರೆ.
ಗಲ್ಫ್ ರಾಷ್ಟ್ರಗಳಲ್ಲಿನ ಸೇನಾ ನೆಲೆಗಳನ್ನು ಮುಚ್ಚಬೇಕು, ಯುದ್ಧ ಪರಿಹಾರವನ್ನು ಪಾವತಿಸಬೇಕು, ಇರಾನ್ ಮೇಲಿನ ಎಲ್ಲಾ ಅಂತಾರಾಷ್ಟ್ರೀಯ ಮತ್ತು ಯುಎಸ್ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು. ಇರಾನ್ ತನ್ನ ಕ್ಷಿಪಣಿ ಕಾರ್ಯಗಳನ್ನು ಯಾವುದೇ ನಿರ್ಬಂಧಗಳಿಲ್ಲದೆ ಮುಂದುವರೆಸಲು ಅವಕಾಶ ನೀಡಬೇಕು ಎಂದು ಇರಾನ್ ಕೇಳಿದೆ.
ಯುದ್ಧ ಮತ್ತು ನಿರಂತರ ನಿರ್ಬಂಧಗಳಿಂದಾಗಿ ಇರಾನ್ ಆರ್ಥಿಕತೆಯು ಒತ್ತಡದಲ್ಲಿದೆ. ಯಾವುದೇ ಒಪ್ಪಂದದ ಭಾಗವಾಗಿ ತನ್ನ ತೈಲರಫ್ತು ಮತ್ತು ಇಂಧನಗಳ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ತೆಗೆದುಹಾಕಬೇಕು ಎಂದು ಹೇಳಿದೆ.
ಇತ್ತೀಚೆಗಷ್ಟೇ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮಾತನಾಡಿ, ಇರಾನ್ ಎಂದಿಗೂ ಕದನವಿರಾಮಕ್ಕಾಗಿ ಅಮೆರಿಕವನ್ನು ಬೇಡಿಕೊಂಡಿಲ್ಲ, ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಗತ್ಯವಿರುವಷ್ಟು ಕಾಲ ಹೋರಾಡಲು ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದರು.
ನವದೆಹಲಿ, ಮಾರ್ಚ್ 25: ಎಲ್ಪಿಜಿ(LPG) ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಎಲ್ಪಿಜಿ ಸಿಲಿಂಡರ್ಗಳ ಕೊರತೆಯ ನಡುವೆ, ಅನಿಲ ಕಂಪನಿಗಳು ತಮ್ಮ ಬುಕಿಂಗ್ ನಿಯಮಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿವೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ಅಂತಹ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಸರ್ಕಾರ ಹೇಳಿದೆ.
ತಮ್ಮ ಮುಂದಿನ ಸಿಲಿಂಡರ್ ಬುಕ್ ಮಾಡಲು ಹೆಚ್ಚು ಸಮಯ ಕಾಯಬೇಕಾಗುತ್ತದೆ ಎಂದು ಹೇಳಲಾಗಿತ್ತು.
ಗ್ರಾಹಕರು ನಿಗದಿತ ಸಮಯಕ್ಕಿಂತ ಮೊದಲು ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಲು ಸಾಧ್ಯವಾಗುವುದಿಲ್ಲ. ಪೂರೈಕೆಯನ್ನು ಸಮತೋಲನಗೊಳಿಸಲು ಮತ್ತು ಅಗತ್ಯವಿರುವವರಿಗೆ ಅನಿಲ ಲಭ್ಯವಾಗುವಂತೆ ನೋಡಿಕೊಳ್ಳಲು ಈ ರೀತಿ ಮಾಡಲಾಗಿದೆ ಎಂದು ವರದಿಗಳು ಹೇಳಿದ್ದವು.
ವರದಿಗಳಲ್ಲಿ ಏನಿತ್ತು?
14.2 ಕೆಜಿ ಗೃಹಬಳಕೆ ಸಿಲಿಂಡರ್ಗಳ ಬುಕಿಂಗ್ ಅಂತರವನ್ನು ಈಗ ಹೆಚ್ಚಿಸಲಾಗಿದೆ. ಹಿಂದಿನ 25 ದಿನಗಳ ಅವಧಿಯನ್ನು ಈಗ 35 ದಿನಗಳವರೆಗೆ ವಿಸ್ತರಿಸಲಾಗಿದೆ. ಇದರರ್ಥ ನೀವು ಒಂದು ಸಿಲಿಂಡರ್ ಖರೀದಿಸಿದ್ದರೆ, ಮುಂದಿನ ಬುಕಿಂಗ್ಗಾಗಿ ನೀವು ಕನಿಷ್ಠ 35 ದಿನಗಳು ಕಾಯಬೇಕಾಗುತ್ತದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಡಿಯಲ್ಲಿ, ಈ ನಿಯಮವು ನಿರ್ದಿಷ್ಟವಾಗಿ ಎರಡು ಸಿಲಿಂಡರ್ ಸಂಪರ್ಕವನ್ನು ಹೊಂದಿರುವವರಿಗೆ ಅನ್ವಯಿಸುತ್ತದೆ, ಅಂದರೆ ಡಬಲ್-ಬಾಟಮ್ ಸಂಪರ್ಕವನ್ನು ಹೊಂದಿರುವವರಿಗೆ ಅನ್ವಯವಾಗುತ್ತೆ ಎಂದು ಹೇಳಲಾಗಿತ್ತು.
ಅನಿಲ ಕಂಪನಿಗಳು ವಿವಿಧ ರೀತಿಯ ಗ್ರಾಹಕರಿಗೆ ವಿಭಿನ್ನ ನಿಯಮಗಳನ್ನು ನಿಗದಿಪಡಿಸಿವೆ. ಉಜ್ವಲ ಯೋಜನೆಯ ಫಲಾನುಭವಿಗಳು ಈಗ ಇನ್ನೂ ಹೆಚ್ಚು ಸಮಯ ಕಾಯಬೇಕಾಗುತ್ತದೆ. ಈ ಯೋಜನೆಯಡಿಯಲ್ಲಿ ದಾಖಲಾದವರು ತಮ್ಮ ಮುಂದಿನ ಬುಕಿಂಗ್ಗಾಗಿ 45 ದಿನಗಳು ಕಾಯಬೇಕಾಗುತ್ತದೆ. ಸಿಂಗಲ್-ಸಿಲಿಂಡರ್ ಸಂಪರ್ಕ ಹೊಂದಿರುವ ಗ್ರಾಹಕರು ಹಿಂದಿನ ವಿತರಣೆಯ 25 ದಿನಗಳ ನಂತರ ಮಾತ್ರ ಹೊಸ ಸಿಲಿಂಡರ್ ಅನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ ಎನ್ನಲಾಗಿತ್ತು.
ಆದರೆ, ಅಸ್ತಿತ್ವದಲ್ಲಿರುವ ಮರುಪೂರಣ ಬುಕಿಂಗ್ ಸಮಯ ಮಿತಿಗಳು ಬದಲಾಗದೆ ಉಳಿದಿವೆ ಮತ್ತು ಮುಂದುವರಿಯುತ್ತವೆ. ನಗರ ಪ್ರದೇಶಗಳಲ್ಲಿ 25 ದಿನಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳಲ್ಲಿ ಮತ್ತೊಂದು ಸಿಲಿಂಡರ್ ಬುಕ್ ಮಾಡಬಹುದು. ದೇಶದಲ್ಲಿ ಸಾಕಷ್ಟು LPG ಸ್ಟಾಕ್ಗಳು ಲಭ್ಯವಿದೆ. ಯಾವುದೇ ವದಂತಿಯನ್ನು ನಂಬಬಾರದು ಎಂದು ಪಿಐಬಿಯಲ್ಲಿ ಬರೆಯಲಾಗಿದೆ.
ಐಪಿಎಲ್ ಆರಂಭಕ್ಕೂ ಮೊದಲು ಕೆಲವು ಮಹತ್ವದ ಬೆಳವಣಿಗೆ ನಡೆದಿದೆ. ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರಾಟ ಆಗಿದೆ. ಆರ್ಸಿಬಿ ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ಖರೀದಿಸಿದರೆ, ರಾಜಸ್ಥಾನ ರಾಯಲ್ಸ್ ತಂಡವನ್ನು ಅಮೆರಿಕ ಮೂಲದ ಕಲ್ ಸೋಮಾನಿ ಒಕ್ಕೂಟ ಈ ಕಂಪನಿಯ ಶೇ. 100ರಷ್ಟು ಷೇರನ್ನು ಖರೀದಿ ಮಾಡಿದೆ. ಇದಕ್ಕಾಗಿ 15,290 ಕೋಟಿ ರೂಪಾಯಿ ಪಾವತಿಸಿದೆ. ಈ ಹಣದಲ್ಲಿ ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ದಿವಂಗತ ಶೇನ್ ವಾರ್ನ್ ಕುಟುಂಬಕ್ಕೂ 450 ಕೋಟಿ ರೂಪಾಯಿ ಸಿಗಲಿದೆ.
2008ರಲ್ಲಿ ಶೇನ್ ವಾರ್ನ್ ಅವರು ರಾಜಸ್ಥಾನ ರಾಯಲ್ಸ್ ಪರ ಆಡಿದ್ದರು. ಅವರು ತಂಡದ ಕ್ಯಾಪ್ಟನ್ ಹಾಗೂ ಆಗಿದ್ದರು. ಆ ಬಾರಿ ಆರ್ಆರ್ ತಂಡ ಗೆಲುವು ಕಂಡಿತು. ವಾರ್ನ್ ಅವರು ತಂಡವನ್ನು ಪ್ರತಿನಿಧಿಸಿದ್ದಕಾಗಿ ಪ್ರತಿ ವರ್ಷ ತಂಡದ ಶೇ.0.75 ಶೇರನ್ನು ಪಡೆದಿದ್ದರು. ‘ನನ್ನ ಒಪ್ಪಂದದ ಭಾಗವಾಗಿ ನಾನು ತಂಡದ ನಾಯಕ, ಕೋಚ್ ಮತ್ತು ನಾನು ಬಯಸಿದ ರೀತಿಯಲ್ಲಿ ಕ್ರಿಕೆಟ್ ತಂಡವನ್ನು ನಡೆಸಲು ಕೇಳಿಕೊಂಡರು. ನಾನು ಎಲ್ಲವೂ ಆಗಿದ್ದೆ’ ಎಂದು ಶೇನ್ ವಾರ್ನ್ ಹೇಳಿದ್ದರು.
ನಾಲ್ಕು ಆವೃತ್ತಿಗಳಲ್ಲಿ ರಾಯಲ್ಸ್ ಅನ್ನು ವಾರ್ನ್ ಪ್ರತಿನಿಧಿಸಿದ್ದರಿಂದ, ಫ್ರಾಂಚೈಸಿಯ ಮಾಲೀಕತ್ವದಲ್ಲಿ ಅವರಿಗೆ ಶೇ.3 ಪಾಲು ನಿಡಲಾಗಿದೆ. ಇದರಿಂದಾಗಿ ಅವರ ಪಾಲಿನ ಮೌಲ್ಯ ಸುಮಾರು $48 ಮಿಲಿಯನ್ (ರೂ. 450-460 ಕೋಟಿ) ಆಗಿತ್ತು. ಹೀಗಾಗಿ, ಕುಟುಂಬದವರಿಗೆ ತಂಡದ ಮಾರಾಟದಿಂದ ದೊಡ್ಡ ಮೊತ್ತ ಸಿಗುತ್ತಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಈ ಡೀಲ್ ಕೊನೆಯಾಗಲಿದೆ.
2022ರಲ್ಲಿ ಸ್ಪಿನ್ ದಿಗ್ಗಜ ಶೇನ್ ವಾರ್ನ್ ನಿಧನರಾದರು. ಅವರು ಮೂವರು ಮಕ್ಕಳನ್ನು ಅಗಲಿದ್ದರು. ಅವರಿಗೆ ಹೃದಯಾಘಾತ ಆಗಿತ್ತು ಎನ್ನಲಾಗಿದೆ. ಅವರ ಸಾವಿನ ಸುತ್ತ ಸಾಕಷ್ಟು ಅನುಮಾನ ಕೂಡ ಮೂಡಿತ್ತು.
ದುನಿಯಾ ವಿಜಿ (Duniya Viji) ಈಗ ಕೇವಲ ಕನ್ನಡ ನಟರು ಮಾತ್ರವೇ ಅಲ್ಲ. ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿಯೂ ನಟಿಸುತ್ತಾ ಪ್ಯಾನ್ ಇಂಡಿಯಾ ನಟರಾಗುವತ್ತ ದಾಪುಗಾಲು ಹಾಕಿದ್ದಾರೆ. ಈಗಾಗಲೇ ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ಜೊತೆಗೆ ‘ವೀರ ನರಸಿಂಹ ರೆಡ್ಡಿ’ ಸಿನಿಮಾನಲ್ಲಿ ನಟಿಸಿದ್ದಾರೆ. ತಮಿಳಿನ ‘ಮೂಕುತ್ತಿ ಅಮ್ಮನ್ 2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತೆಲುಗಿನಲ್ಲಿ ಬಹಳ ಪ್ರಮುಖವಾದ ಸಿನಿಮಾ ಒಂದರಲ್ಲಿ ಇದೀಗ ದುನಿಯಾ ವಿಜಿ ನಟಿಸುತ್ತಿದ್ದು, ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ ಆದರೆ ಈ ಸಿನಿಮಾಕ್ಕೆ ಸಂಕಷ್ಟ ಎದುರಾಗುವ ಸಂಭವ ಗೋಚರವಾಗುತ್ತಿದೆ.
ಒಂದು ಕಾಲದಲ್ಲಿ ತೆಲುಗಿನ ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದ ಪುರಿ ಜಗನ್ನಾಥ್ ನಿರ್ದೇಶನ ಮಾಡಿರುವ ‘ಸ್ಮಂ ಡಾಗ್: 33 ಕಾಲೊನಿ’ ಸಿನಿಮಾನಲ್ಲಿ ದುನಿಯಾ ವಿಜಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾನಲ್ಲಿ ವಿಜಯ್ ಸೇತುಪತಿ ನಾಯಕ. ಆದರೆ ದುನಿಯಾ ವಿಜಿ ಸಹ ಅಷ್ಟೇ ಪ್ರಮುಖವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯವಾಗಿದೆ. ಆದರೆ ಇದೀಗ ಸಿನಿಮಾಕ್ಕೆ ಸಂಕಷ್ಟ ಎದುರಾಗುವ ಸ್ಪಷ್ಟ ಲಕ್ಷಣ ಕಾಣಿಸಿಕೊಂಡಿದೆ.
ಪುರಿ ಜಗನ್ನಾಥ್ ಅವರು ಕೆಲ ವರ್ಷಗಳ ಹಿಂದೆ ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ ನಟಿಸಿದ್ದ ‘ಲೈಗರ್’ ಸಿನಿಮಾ ನಿರ್ದೇಶಿಸಿದ್ದರು. ಈ ಸಿನಿಮಾವನ್ನು ಭಾರಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿತ್ತು. ಆದರೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಟ್ಟರ್ ಫ್ಲಾಪ್ ಆಯ್ತು. ಸಿನಿಮಾವನ್ನು ಸ್ವತಃ ಪುರಿ ಅವರೇ ಸಹ ನಿರ್ಮಾಣ ಮಾಡಿದ್ದರು, ಭಾರಿ ದೊಡ್ಡ ಮೊತ್ತವನ್ನು ಕಳೆದುಕೊಂಡರು. ಆ ಸಮಯದಲ್ಲಿ ಹಲವು ಸಿನಿಮಾ ವಿತರಕರು ತಮ್ಮ ಹಣ ವಾಪಸ್ಸು ಮಾಡುವಂತೆ ಪುರಿ ಅವರ ಬಳಿ ಜಗಳ ಮಾಡಿದ್ದರು, ಕೆಲವರು ನಿರ್ಮಾಪಕರ ಸಂಘಗಳಿಗೆ ದೂರು ಸಹ ದಾಖಲಾಗಿತ್ತು. ಆದರೆ ಈಗ ಪುರಿ ಅವರ ಹೊಸ ಸಿನಿಮಾ ಬಿಡುಗಡೆ ಸಮಯದಲ್ಲಿ ಅವರೆಲ್ಲ ಮತ್ತೆ ಸಮಸ್ಯೆ ಸೃಷ್ಟಿಸುವ ಸಾಧ್ಯತೆ ಇದೆ.
ಪುರಿ ಜಗನ್ನಾಥ್ ನಿರ್ದೇಶಿಸಿ, ಮಹೇಶ್ ಬಾಬು ನಟಿಸಿದ್ದ ಬ್ಲಾಕ್ ಬಸ್ಟರ್ ಸಿನಿಮಾ ‘ಪೋಕಿರಿ’ಯ ರೀ ರಿಲೀಸ್ ಘೋಷಣೆ ಆಗಿತ್ತು. ಆದರೆ ಆ ಸಿನಿಮಾದ ನಿರ್ದೇಶಕ ಪುರಿ ಅವರಾಗಿರುವ ಕಾರಣ ಹಲವು ವಿತರಕರು ಆ ಸಿನಿಮಾವನ್ನು ವಿತರಣೆ ಮಾಡುವುದಿಲ್ಲ ಎಂದರು. ಕೊನೆಗೆ ‘ಪೋಕಿರಿ’ ಬದಲಿಗೆ ಮಹೇಶ್ ಬಾಬು ಅವರ ‘ಅತಿಥಿ’ ಸಿನಿಮಾವನ್ನು ಮರು ಬಿಡುಗಡೆ ಮಾಡುವ ನಿರ್ಧಾರಕ್ಕೆ ಬರಲಾಯ್ತು. ಪುರಿ ಜಗನ್ನಾಥ್ ಅವರ ‘ಲೈಗರ್’ ಸಿನಿಮಾದ ಲೆಕ್ಕ ತೀರುವವರೆಗೆ ಅವರ ಸಿನಿಮಾಗಳನ್ನು ವಿತರಣೆ ಮಾಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದರಿಂದಾಗಿ ಅವರ ಮುಂದಿನ ಸಿನಿಮಾಗಳಿಗೆ ಭಾರಿ ಹೊಡೆತ ಬೀಳುವುದು ಖಾತ್ರಿ ಆಗಿದೆ.
‘ಸ್ಲಂ ಡಾಗ್: 33 ಕಾಲೊನಿ’ ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಆದರೆ ವಿತರಕರನ್ನು ಎದುರು ಹಾಕಿಕೊಂಡು ಸಿನಿಮಾ ಬಿಡುಗಡೆ ಮಾಡುವುದು ಭಾರಿ ಕಷ್ಟವೇ ಆಗಲಿದೆ ಪುರಿ ಅವರಿಗೆ. ಸಿನಿಮಾನಲ್ಲಿ ದುನಿಯಾ ವಿಜಯ್ ಅವರಿಗೆ ಬಹಳ ಭಿನ್ನವಾದ ಪಾತ್ರವನ್ನು ಪುರಿ ಅವರು ನೀಡಿದ್ದರು. ಆದರೆ ಈಗ ಸಿನಿಮಾದ ಬಿಡುಗಡೆಯೇ ಇಕ್ಕಟ್ಟಿಗೆ ಸಿಲುಕುವಂತೆ ಕಾಣುತ್ತಿದೆ.
ಗದಗ ಜಿಲ್ಲೆಯಲ್ಲಿ ಭಾರಿ ಗಾಳಿ, ಮಳೆ ಹಾಗೂ ಆಲಿಕಲ್ಲು ಮಳೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿ ನೂರಾರು ಎಕರೆಗಳಲ್ಲಿ ಬೆಳೆದ ಕಲ್ಲಂಗಡಿ ತೋಟಗಳು ಹಾನಿಗೊಳಗಾಗಿ ಅನ್ನದಾತರು ಕಂಗಾಲಾಗಿದ್ದಾರೆ. ಬೇಸಿಗೆಯಲ್ಲಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ವರುಣನ ಆರ್ಭಟ ದೊಡ್ಡ ಹೊಡೆತ ನೀಡಿದೆ.
ಕಳೆದ ನಾಲ್ಕು–ಐದು ದಿನಗಳಿಂದ ನಿರಂತರವಾಗಿ ಸುರಿದ ಆಲಿಕಲ್ಲು ಮಳೆಯಿಂದ ಕಲ್ಲಂಗಡಿ ಹಣ್ಣುಗಳು ಹಾನಿಗೊಳಗೊಂಡಿವೆ. ಹೊಲದಲ್ಲೇ ಹಣ್ಣುಗಳು ಒಡೆದು ಹಾಳಾಗಿದ್ದು, ರಾಶಿ ರಾಶಿಯಾಗಿ ಕೊಳೆಯುತ್ತಿವೆ. ಉತ್ತಮ ಗುಣಮಟ್ಟದ ಹಣ್ಣುಗಳು ಸಂಪೂರ್ಣ ಹಾನಿಯಾಗಿರುವುದರಿಂದ ರೈತರಿಗೆ ಆರ್ಥಿಕ ನಷ್ಟ ಭಾರೀ ಪ್ರಮಾಣದಲ್ಲಿ ಉಂಟಾಗಿದೆ.
ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗಬೇಕಿದ್ದ ಕಲ್ಲಂಗಡಿ ಹಣ್ಣುಗಳು ಈಗ ತೀವ್ರ ಹಾನಿಯಿಂದ ಬೆಲೆ ಕುಸಿದಿವೆ. ಕಿಲೋಗೆ 20 ರೂಪಾಯಿ ಸಿಗಬೇಕಿದ್ದ ಹಣ್ಣುಗಳನ್ನು 2 ರಿಂದ 3 ರೂಪಾಯಿಗೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಹಾಳಾದ ಹಣ್ಣುಗಳನ್ನು ಖರೀದಿಸಲು ವ್ಯಾಪಾರಿಗಳು ಮುಂದೆ ಬರುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ನೂರಾರು ಎಕರೆಯಲ್ಲಿ ಬೆಳೆದ ಕಲ್ಲಂಗಡಿ ಬೆಳೆ ಸಂಪೂರ್ಣ ನಾಶ!
ಒಂದು ಎಕರೆಗೆ ಸುಮಾರು 1.20 ಲಕ್ಷ ರೂಪಾಯಿ ವೆಚ್ಚ ಮಾಡಿ ಕಲ್ಲಂಗಡಿ ಬೆಳೆದ ರೈತರಿಗೆ ಭರ್ಜರಿ ಫಸಲು ಬಂದಿತ್ತು. ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ಸಮಯದಲ್ಲೇ ಪ್ರಕೃತಿ ವಿಪತ್ತು ಸಂಭವಿಸಿ ಸಂಪೂರ್ಣ ಬೆಳೆ ಹಾನಿಯಾಗಿದೆ. ಹಣ್ಣುಗಳನ್ನು ನೆಲಕ್ಕೆ ಹೊಡೆದು ರೈತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಸಂಕಷ್ಟದಲ್ಲಿರುವ ರೈತರು ಸರ್ಕಾರದಿಂದ ತಕ್ಷಣ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಹಾನಿಗೊಳಗಾದ ಜಮೀನುಗಳನ್ನು ತ್ವರಿತವಾಗಿ ಸರ್ವೇ ಮಾಡಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ರೈತರ ಪರಿಸ್ಥಿತಿಯನ್ನು ಗಮನಿಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಹಾಗೂ ರೈತರ ಒಗ್ಗಟ್ಟಿನ ಆಗ್ರಹವಾಗಿದೆ.
ಪ್ರಯಾಗ್ರಾಜ್ ಕುಂಭಮೇಳದಿಂದ ರಾತ್ರೋರಾತ್ರಿ ಖ್ಯಾತಿ ಪಡೆದ ಮೊನಾಲಿಸಾ ಭೋಸ್ಲೆ ಇತ್ತೀಚೆಗೆ ತಮ್ಮ ಮುಸ್ಲಿಂ ಗೆಳೆಯ ಫರ್ಮಾನ್ ಖಾನ್ ಅವರನ್ನು ಮದುವೆ ಆದರು. ಇದರಿಂದಾಗಿ ಮೊನಾಲಿಸಾ ವಿವಾದದ ಸುಳಿಯಲ್ಲಿ ಸಿಲುಕಿದ್ದರು. ಇದೇ ವೇಳೆ ಮೊನಾಲಿಸಾ ಅವರ ಚೊಚ್ಚಲ ಚಿತ್ರ ‘ದಿ ಡೈರಿ ಆಫ್ ಮಣಿಪುರ’ದ ನಿರ್ದೇಶಕ ಸನೋಜ್ ಮಿಶ್ರಾ ಗಂಭೀರ ಆರೋಪ ಮಾಡಿದ್ದರು. ಇದು ಲವ್ ಜಿಹಾದ್ ಎಂದಿದ್ದರು. ಈ ಬಗ್ಗೆ ಮೋನಾಲಿಸಾ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ನಿರ್ದೇಶಕನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
‘ಸನೋಹ್ ಮಿಶ್ರಾ ಚಲನಚಿತ್ರಗಳ ಹೆಸರಿನಲ್ಲಿ ಅಪ್ರಾಪ್ತ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ನನಗೆ ಮತ್ತು ನನ್ನ ಪತಿಗೆ ಜೀವ ಬೆದರಿಕೆ ಇದೆ’ ಎಂದು ಆರೋಪಿಸಿರುವ ಮೊನಾಲಿಸಾ ಕೇಂದ್ರ, ಕೇರಳ ಮತ್ತು ಮಧ್ಯಪ್ರದೇಶ ರಾಜ್ಯ ಸರ್ಕಾರಗಳಿಂದ ಸಹಾಯವನ್ನು ಕೋರಿದ್ದಾರೆ. ನಿರ್ದೇಶಕರು ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಮತ್ತು ಅವರ ಚಲನಚಿತ್ರಗಳಲ್ಲಿ ಅವಕಾಶ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
‘ಅವರು ತುಂಬಾ ಕೆಟ್ಟ ಮತ್ತು ಅಸಹ್ಯಕರ ವ್ಯಕ್ತಿ. ಅವರು ಚಲನಚಿತ್ರಗಳ ಹೆಸರಿನಲ್ಲಿ ಅಪ್ರಾಪ್ತ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಅವರ ಹೆಸರನ್ನು ಹೇಳಲು ನನಗೆ ನಾಚಿಕೆಯಾಗುತ್ತದೆ’ ಎಂದು ಹೇಳಿದರು.
‘ಶೂಟಿಂಗ್ ಸಮಯದಲ್ಲಿ ಸನೋಜ್ ಮಿಶ್ರಾ ಹಲವಾರು ಬಾರಿ ಅವರ ದೇಹದ ಭಾಗಗಳನ್ನು ಸ್ಪರ್ಶಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದರು. ಮನೆಯಲ್ಲಿ ಆ ಕಹಿ ಅನುಭವದ ಬಗ್ಗೆ ನಾನು ಅವರಿಗೆ ಹೇಳಿದಾಗ ಬೆಂಬಲ ಸಿಗಲಿಲ್ಲ. ಅದು ನನ್ನ ಮೊದಲ ಚಿತ್ರ ಮತ್ತು ನಾನು ಹೊಂದಿಕೊಳ್ಳಬೇಕಾಯಿತು. ನಾನು ಯಾರಿಗೂ ಹೇಳಲು ಸಾಧ್ಯವಾಗಲಿಲ್ಲ ಮತ್ತು ಆದ್ದರಿಂದ ನಾನು ಮೌನವಾಗಿದ್ದೆ’ ಎಂದು ಅವರು ಹೇಳಿದರು.
ತಮ್ಮ ಮದುವೆಯನ್ನು ಲವ್ ಜಿಹಾದ್ ಎಂದು ಕರೆದಿದ್ದಕ್ಕೆ ಕಾರಣ ತನ್ನ ಮೇಲಿನ ದ್ವೇಷ ಎಂದು ಅವರು ಹೇಳಿದರು. ನನ್ನ ಮದುವೆಯ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುತ್ತಿರುವ ನಿರ್ದೇಶಕರ ವಿರುದ್ಧ ಪೊಲೀಸ್ ದೂರು ದಾಖಲಿಸುವುದಾಗಿ ಅವರು ಹೇಳಿದರು. ‘ನಾವು ಹಿಂದೂ ಸಂಪ್ರದಾಯಗಳ ಪ್ರಕಾರ ದೇವಾಲಯದಲ್ಲಿ ವಿವಾಹವಾದೆವು. ದೇಶದ ಪ್ರತಿಯೊಬ್ಬರಿಗೂ ಅದು ತಿಳಿದಿದೆ. ನಿರ್ದೇಶಕರು ಭಯೋತ್ಪಾದನೆ ಇರಬೇಕು ಮತ್ತು ಜನರು ಪರಸ್ಪರ ಜಗಳವಾಡಬೇಕು ಎಂದು ಬಯಸುತ್ತಾರೆ. ಅವರು ನಮ್ಮ ಮದುವೆಯನ್ನು ಲವ್ ಜಿಹಾದ್ ಎಂದು ಕರೆಯುತ್ತಿದ್ದಾರೆ. ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’ ಎಂದು ಮೊನಾಲಿಸಾ ಹೇಳಿದರು.
ನಿಮ್ಮ ಏಕಾಗ್ರತೆ ಹಾಗೂ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಮುಂದಾಗಿದ್ದೀರಾ. ಈ ಆಪ್ಟಿಕಲ್ ಇಲ್ಯೂಷನ್ (Optical Illusion) ಹಾಗೂ ಬ್ರೈನ್ ಟೀಸರ್ ಚಿತ್ರಗಳು ನಿಮಗೆ ಖಂಡಿತ ಸಹಾಯ ಮಾಡುತ್ತದೆ. ಈ ಒಗಟಿನ ಆಟದಿಂದ ಆಲೋಚನಾ ಕೌಶಲ್ಯವನ್ನು ಹೆಚ್ಚಿಸಿ, ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗಿದೆ. ಮೆದುಳಿಗೆ ವ್ಯಾಯಾಮ ನೀಡುವ ಇಂತಹ ಮನೋರಂಜನಾತ್ಮಕ ಈ ಒಗಟಿನ ಆಟಗಳನ್ನು ನೀವು ಇಷ್ಟ ಪಡುತ್ತೀರಾ ಅಲ್ವಾ, ಇದೀಗ ಅಂತಹದ್ದೇ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿ ಕರಡಿಯೊಂದನ್ನು ಮರೆ ಮಾಡಲಾಗಿದ್ದು, ನೀವು ಕೇವಲ 10 ಸೆಕೆಂಡುಗಳೊಳಗೆ ಈ ಪ್ರಾಣಿಯನ್ನು ಗುರುತಿಸಬೇಕು. ನೀವು ಬುದ್ಧಿವಂತರೆಂದು ಪರೀಕ್ಷಿಸಿಕೊಳ್ಳಲು ಇದು ಒಳ್ಳೆಯ ಸಮಯ, ಈ ಟ್ರಿಕ್ಕಿ ಒಗಟು ಬಿಡಿಸಲು ಸಿದ್ಧರಾಗಿ.
ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಏನು ಕಾಣಿಸಿತು?
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಪ್ರಕೃತಿಯ ಸುಂದರ ನೋಟವನ್ನು ಕಾಣಬಹುದು. ಬೆಟ್ಟಗಳು, ಸಸ್ಯಗಳು, ಹಸಿರಾದ ಹುಲ್ಲು ಮತ್ತು ಸರೋವರವಿದ್ದು, ಈ ಸುಂದರ ಪ್ರಕೃತಿಯ ನಡುವೆ ಕರಡಿಯೂ ಇದೆ. ಈ ಪ್ರಾಣಿಯನ್ನು ನೀವು 10 ಸೆಕೆಂಡುಗಳಲ್ಲಿ ಕಂಡುಹಿಡಿಯಲು ಸಾಧ್ಯವಾದರೆ, ನಿಮ್ಮ ವೀಕ್ಷಣಾ ಶಕ್ತಿ ಅತ್ಯುತ್ತಮ ಎನ್ನುವುದು ಖಚಿತವಾಗುತ್ತದೆ.
ಈ ಚಿತ್ರದಲ್ಲಿ ಅಡಗಿರುವ ಕರಡಿಯನ್ನು ಹುಡುಕುವ ಸವಾಲನ್ನು ಸ್ವೀಕರಿಸಿದ್ದೀರಿ eಎಂದು ನಾವು ಭಾವಿಸುತ್ತೇವೆ. ತಕ್ಷಣವೇ ನಿಮ್ಮ ಕಣ್ಣಿಗೆ ಕರಡಿ ಕಾಣಿಸದೇ ಇದ್ದರೆ ಚಿಂತಿಸಬೇಡಿ. ಈ ಚಿತ್ರವು ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸುತ್ತದೆ. ನೀವು ಕಣ್ಣು ಬಿಟ್ಟು ಈ ಚಿತ್ರ ನೋಡಿ, ಆಗ ಮಾತ್ರ ನಿಮ್ಮ ಕಣ್ಣಿಗೆ ಕರಡಿ ಕಾಣಿಸುತ್ತದೆ. ಈ ಕೆಳಗಿನ ಚಿತ್ರದಲ್ಲಿ ಈ ಪ್ರಾಣಿ ಎಲ್ಲಿದೆ ಎಂದು ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 25: ಭಾರತ್ ಪೆಟ್ರೋಲಿಯಂ ಲಿಮಿಟೆಡ್ನಿಂದ ಇಂಧನ ಪೂರೈಕೆ ಸ್ಥಗಿತಗೊಂಡಿರುವುದರಿಂದ ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಉಂಟಾಗುವ ಆತಂಕ ಎದುರಾಗಿದೆ. ಅಖಿಲ ಕರ್ನಾಟಕ ಫೆಡರೇಶನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ಈ ಕುರಿತು ಎಚ್ಚರಿಕೆ ನೀಡಿದೆ. ಕಂಪನಿಯು ಮುಂಗಡ ಹಣ ಪಡೆದಿದ್ದರೂ ಲೋಡ್ ನೀಡುತ್ತಿಲ್ಲ ಎಂದು ಫೆಡರೇಶನ್ ತಿಳಿಸಿದೆ. ಈ ಸಮಸ್ಯೆ ಪ್ರಸ್ತುತ ಬೆಂಗಳೂರು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಾದ ಆನೇಕಲ್, ಕೋಲಾರ, ದೊಡ್ಡಬಳ್ಳಾಪುರ, ನೆಲಮಂಗಲ ಮತ್ತು ಹೊಸಕೋಟೆ ಭಾಗಗಳಲ್ಲಿ ಕಂಡುಬಂದಿದೆ. ಇದು ಮುಂದಿನ ದಿನಗಳಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ. ಹೆಚ್ಪಿಸಿ ಮತ್ತು ಐಓಸಿ ಕೂಡ ಇದೇ ಹಾದಿ ಹಿಡಿದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು ಎಂದು ಫೆಡರೇಶನ್ ಆತಂಕ ವ್ಯಕ್ತಪಡಿಸಿದೆ. ಕೂಡಲೇ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಮಧ್ಯ ಪ್ರವೇಶಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಅಖಿಲ ಕರ್ನಾಟಕ ಫೆಡರೇಶನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ಮನವಿ ಮಾಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 25: ಅಮೆರಿಕ-ಇರಾನ್-ಇಸ್ರೇಲ್ ಸಂಘರ್ಷದ ಪರಿಣಾಮ ಭಾರತ ಸೇರಿ ಹಲವು ದೇಶಗಳ ಮೇಲಾಗುತ್ತಿದೆ. ಭಾರತದಲ್ಲಿ ಎಲ್ಪಿಜಿ(LPG) ಕೊರತೆ ಎದುರಾಗಿದೆ. ಇದರ ನಡುವೆ ಕೇಂದ್ರ ಸರ್ಕಾರವು ಬುಕಿಂಗ್ ನಿಯಮವನ್ನು ಬದಲಿಸಿದೆ. ನಿನ್ನೆ ಸಂಜೆ ಹೊಸ ನಿಯಮ ಜಾರಿಗೆ ಬಂದಿದ್ದು, 14.2 ಕೆಜಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ನ ವಿತರಣಾ ಸಮಯವನ್ನು 25 ದಿನಗಳಿಂದ 35 ದಿನಗಳಿಗೆ ಹೆಚ್ಚಿಸಲಾಗಿದೆ. ನಿಯಮದ ಪ್ರಕಾರ ಒಂದು ಸಿಲಿಂಡರ್ ಬುಕ್ ಮಾಡಿದ ನಂತರ, 35 ದಿನಗಳ ನಂತರವೇ ಎರಡನೇ ಸಿಲಿಂಡರ್ ಬುಕ್ ಮಾಡಲು ಸಾಧ್ಯವಾಗುತ್ತದೆ.
ನಿಮ್ಮ ಬಳಿ 5 ಕೆಜಿ ಗ್ಯಾಸ್ ಸಿಲಿಂಡರ್ ಇದ್ದರೆ, ನೀವು ಅದನ್ನು 9 ರಿಂದ 16 ದಿನಗಳ ಅಂತರದಲ್ಲಿ ಬುಕ್ ಮಾಡಬಹುದು. ನೀವು 18 ರಿಂದ 32 ದಿನಗಳ ಅಂತರದಲ್ಲಿ 10 ಸಿಲಿಂಡರ್ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಬಹುದು.
ತಿಂಗಳಿಗೆ ಎರಡು ಸಿಲಿಂಡರ್ಗಳನ್ನು ಮಾತ್ರ ಬುಕ್ ಮಾಡಬಹುದು
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಒಬ್ಬ ಸಾಮಾನ್ಯ ನಾಗರಿಕರು ತಿಂಗಳಿಗೆ ಗರಿಷ್ಠ ಎರಡು ಸಿಲಿಂಡರ್ಗಳನ್ನು ಬುಕ್ ಮಾಡಬಹುದು ಎಂದು ಅಧಿಸೂಚನೆ ಹೊರಡಿಸಿದೆ.
ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇ-ಕೆವೈಸಿ ಕಡ್ಡಾಯ
ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಮಾತ್ರ ಸಿಲಿಂಡರ್ ಬುಕಿಂಗ್ ಮಾಡಬಹುದು. ಗ್ರಾಹಕರು ತಮ್ಮ ಸಂಖ್ಯೆಯನ್ನು ಬದಲಾಯಿಸಿದ್ದರೆ, ಅದನ್ನು ಏಜೆನ್ಸಿಯಲ್ಲಿ ಅಥವಾ ಅಪ್ಲಿಕೇಶನ್ ಮೂಲಕ ನವೀಕರಿಸಬೇಕು.
ಸಿಲಿಂಡರ್ ಪಡೆಯುವ ಸಮಯದಲ್ಲಿ ಒಟಿಪಿ ಅಗತ್ಯ
ವಿತರಣೆಯ ಸಮಯದಲ್ಲಿ, ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಡೆಲಿವರಿ ಅಥೆಂಟಿಕೇಶನ್ ಕೋಡ್ (DAC) ಎಂಬ OTP ಅನ್ನು ಸ್ವೀಕರಿಸುತ್ತಾರೆ.
ಈವೆಂಟ್ ಮತ್ತು ಅತಿಥಿಗಳ ಕುರಿತು ಪ್ರಶ್ನೆಗಳಿರುತ್ತವೆ
ಆ್ಯಪ್ ಮೂಲಕ ಹೆಚ್ಚುವರಿ ಸಿಲಿಂಡರ್ ಬಗ್ಗೆ ಬೇಡಿಕೆ ಇಡುವಾಗ, ಗ್ರಾಹಕರು ಅಂದಾಜು ಅತಿಥಿಗಳ ಸಂಖ್ಯೆ ಮತ್ತು ಹೆಚ್ಚುವರಿ ಬೇಡಿಕೆಗೆ ಕಾರಣವನ್ನು ನಮೂದಿಸಬೇಕಾಗಬಹುದು. ಗ್ರಾಹಕರು ಈಗಾಗಲೇ ತಮ್ಮ 12 ಸಬ್ಸಿಡಿ ಸಿಲಿಂಡರ್ಗಳನ್ನು ಬಳಸಿದ್ದರೂ ಇನ್ನೂ ಹೆಚ್ಚಿನದನ್ನು ಬಯಸಿದರೆ, ಅವರು ಹಲೋ ಬಿಪಿಸಿಎಲ್ ಮೊಬೈಲ್ ಅಪ್ಲಿಕೇಶನ್ ಮೂಲಕ ವಿವರಗಳನ್ನು ಒದಗಿಸಬೇಕು.
ಮುಂದಿನ ಬುಕಿಂಗ್ಗಾಗಿ ಹೆಚ್ಚು ಸಮಯ ಕಾಯಬೇಕು
ಈ ಹಿಂದೆ, ಗ್ರಾಹಕರು ಹಿಂದಿನ ಬುಕಿಂಗ್ ಮಾಡಿದ 21 ದಿನಗಳ ನಂತರ ಮುಂದಿನ ಸಿಲಿಂಡರ್ ಅನ್ನು ಬುಕ್ ಮಾಡಬಹುದಿತ್ತು. ಈಗ ಹೆಚ್ಚು ದಿನ ಕಾಯಬೇಕು.
ವರ್ಷಕ್ಕೆ ಗರಿಷ್ಠ 15 ಸಿಲಿಂಡರ್ಗಳು
ಗ್ರಾಹಕರು ಈಗಾಗಲೇ ತಮ್ಮ 12 ಸಬ್ಸಿಡಿ ಸಿಲಿಂಡರ್ಗಳನ್ನು ಬಳಸಿದ್ದರೂ ಇನ್ನೂ ಹೆಚ್ಚಿನದನ್ನು ಬಯಸಿದರೆ, ಅವರು ಹಲೋ ಬಿಪಿಸಿಎಲ್ ಮೊಬೈಲ್ ಅಪ್ಲಿಕೇಶನ್ ಮೂಲಕ ವಿವರಗಳನ್ನು ಒದಗಿಸಬೇಕು. ಮನೆಯಲ್ಲಿ ಮದುವೆ, ಕುಟುಂಬ ಕಾರ್ಯಕ್ರಮ ಅಥವಾ ವಿಶೇಷ ಕಾರ್ಯಕ್ರಮವಿದೆಯೇ ಎಂಬಂತಹ ಪ್ರಶ್ನೆಗಳನ್ನು ಕೇಳಬಹುದು. ಗ್ರಾಹಕರು ಈ ನಿಯಮಗಳಲ್ಲಿ ಯಾವುದೇ ತೊಂದರೆಗಳನ್ನು ಎದುರಿಸಿದರೆ ಅಥವಾ ಹೆಚ್ಚಿನ ಮಾಹಿತಿ ಅಗತ್ಯವಿದ್ದರೆ, ಅವರು ಅಧಿಕೃತ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 1800-2333-555 ಅನ್ನು ಸಂಪರ್ಕಿಸಬಹುದು.