ಐಪಿಎಲ್ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಎಲ್ಲೆಡೆ ಕ್ರೇಜ್ ಜೋರಾಗಿದೆ. ಆರ್ಸಿಬಿ ಆಟ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಹೀಗಾಗಿ ಆರ್ಸಿಬಿ ಆಡಳಿತ ಮಂಡಳಿ ಇಂದು ಸುದ್ದಿಗೋಷ್ಠಿ ಮಾಡಿದ್ದು, ಕೆಲ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಆರ್ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ 11 ಜನ ಸಾವು ಹಿನ್ನೆಲೆ ಆಟಗಾರರು 11 ನಂಬರ್ನ ಜರ್ಸಿಯಲ್ಲಿ ಅಭ್ಯಾಸ ಮಾಡಲಿದ್ದಾರೆ. ಜೊತೆಗೆ ತೋಳಿಗೆ ಕಪ್ಪು ಬಣ್ಣದ ಬ್ಯಾಂಡ್ ಕೂಡ ಧರಿಸಲಿದ್ದಾರೆ. ಇನ್ನು ಕ್ರೀಡಾಂಗಣದಲ್ಲಿ 11 ಸೀಟ್ಗಳನ್ನು ಖಾಲಿ ಬಿಡಲಿದ್ದೇವೆ. ಇದು ಕಾಲ್ತುಳಿತದಲ್ಲಿ ಮೃತಪಟ್ಟ ಆರ್ಸಿಬಿ ಅಭಿಮಾನಿಗಳಿಗೆ ಅರ್ಪಣೆ ಎಂದು RCB ತಂಡದ ಉಪಾಧ್ಯಕ್ಷ ರಾಜೇಶ್ ಮೆನನ್ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೊತ್ತದ ಡೀಲ್ ಒಂದು ನಡೆದಿದೆ. ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕತ್ವದ ರೇಸ್ ಕೊನೆಗೊಂಡಿದ್ದು, ಅಮೆರಿಕ ಮೂಲದ ಉದ್ಯಮಿ ಕಲ್ ಸೋಮನಿ (Kal Somani) ನೇತೃತ್ವದ ಒಕ್ಕೂಟವು ತಂಡವನ್ನು ಬರೋಬ್ಬರಿ 1.63 ಬಿಲಿಯನ್ ಡಾಲರ್ (ಸುಮಾರು 15,286 ಕೋಟಿ ರೂ.) ಮೌಲ್ಯಕ್ಕೆ ಖರೀದಿಸಿದೆ.ಈ ಒಪ್ಪಂದದೊಂದಿಗೆ ರಾಜಸ್ಥಾನ ರಾಯಲ್ಸ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಫ್ರಾಂಚೈಸಿಯಾಗಿ ಹೊರಹೊಮ್ಮಿದೆ.
ಸೋಮನಿ ಅವರಿಗೆ ವಾಲ್ಮಾರ್ಟ್ ಕುಟುಂಬದ ರಾಬ್ ವಾಲ್ಟನ್ ಮತ್ತು ಎನ್ಎಫ್ಎಲ್ ತಂಡವಾದ ‘ಡೆಟ್ರಾಯಿಟ್ ಲಯನ್ಸ್’ ಮಾಲೀಕರಾದ ಹ್ಯಾಂಪ್ ಕುಟುಂಬ ಸಾಥ್ ನೀಡಿದೆ. ಫೋರ್ಡ್ ಮೋಟಾರ್ ಕಂಪನಿಯ ಸಹ-ಮಾಲೀಕರಾದ ಶೀಲಾ ಫೋರ್ಡ್ ಹ್ಯಾಂಪ್ ಕೂಡ ಈ ಒಕ್ಕೂಟದ ಭಾಗವಾಗಿದ್ದಾರೆ. ಈ ಮಾಲೀಕತ್ವದ ಬದಲಾವಣೆಯು ಐಪಿಎಲ್ 2026ರ ಸೀಸನ್ ನಂತರ ಅಧಿಕೃತವಾಗಿ ಜಾರಿಗೆ ಬರಲಿದೆ.
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್;
Here is the Track Record of new RR owners:
– Kal Somani (Tech Entrepreneur) :
A data-driven strategist. He focuses on analytics and modernizing sports through technology, ensuring the team stays ahead of the curve digitally and on the field.
ಗಾಯದ ಕಾರಣದಿಂದಾಗಿ ಇಂಗ್ಲೆಂಡ್ನ ಸ್ಟಾರ್ ಆಲ್ರೌಂಡರ್ ಸ್ಯಾಮ್ ಕರನ್ ಐಪಿಎಲ್ 2026 ರಿಂದ ಹೊರಬಿದ್ದಿದ್ದಾರೆ. ಇದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಕರನ್ ಅವರ ಬದಲಿಗೆ ಶ್ರೀಲಂಕಾದ ಟಿ20 ನಾಯಕ ದಾಸುನ್ ಶಾನಕ ಅವರನ್ನು 2 ಕೋಟಿ ರೂ. ಮೊತ್ತಕ್ಕೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ದಾಸುನ್ ಶನಕ 6 ಟೆಸ್ಟ್, 71 ಏಕದಿನ ಮತ್ತು 131 T20I ಗಳಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸಿದ್ದಾರೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 3350 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ರನ್ ಮತ್ತು 86 ವಿಕೆಟ್ಗಳನ್ನು ಗಳಿಸಿದ್ದಾರೆ. ಈ ಹಿಂದೆ ಇವರು ಗುಜರಾತ್ ಟೈಟಾನ್ಸ್ ಪರ ಆಡಿದ್ದರು.”ಸ್ಯಾಮ್ ಕರನ್ ಅವರನ್ನು ಕಳೆದುಕೊಂಡಿರುವುದು ಬೇಸರದ ಸಂಗತಿ. ಆದರೆ ದಾಸುನ್ ಶಾನಕ ಅವರಂತಹ ಅನುಭವಿ ಫಿನಿಶರ್ ತಂಡದ ಸಮತೋಲನವನ್ನು ಕಾಪಾಡಲಿದ್ದಾರೆ,” ಎಂದು ತಂಡದ ನಿರ್ದೇಶಕ ಕುಮಾರ್ ಸಂಗಕ್ಕಾರ ತಿಳಿಸಿದ್ದಾರೆ.
ಐಪಿಎಲ್ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದಲ್ಲಿದ್ದ ಸ್ಯಾಮ್ ಕರನ್ ಮತ್ತು ರವೀಂದ್ರ ಜಡೇಜಾ ಅವರನ್ನು ಆರ್ಆರ್ ತಂಡವು ಪಡೆದುಕೊಂಡಿತ್ತು. ಪ್ರತಿಯಾಗಿ ಸಂಜು ಸ್ಯಾಮ್ಸನ್ ಅವರನ್ನು ಸಿಎಸ್ಕೆ ತಂಡಕ್ಕೆ ಟ್ರೇಡ್ ಮಾಡಲಾಗಿತ್ತು ಎಂಬುದು ಗಮನಾರ್ಹ.
ಜೆರುಸಲೇಂ, ಮಾರ್ಚ್ 24: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ನಿಲ್ಲಿಸಲು ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದ್ದಾರೆ. ಅಮೆರಿಕ ಏಪ್ರಿಲ್ 9ರೊಳಗೆ ಯುದ್ಧವನ್ನು ಕೊನೆಗೊಳಿಸಲು ಬಯಸಿದೆ. ಆದರೆ, ಹೊಸ ಮಾತುಕತೆಗಳಲ್ಲಿ ಹಾಕಲಾದ ಷರತ್ತುಗಳನ್ನು ಒಪ್ಪಲು ಇರಾನ್ ಒಪ್ಪುವುದು ಅನುಮಾನ ಎಂದು ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ರಾಯಿಟರ್ಸ್ ವರದಿ ಮಾಡಿದೆ.
ಫೆಬ್ರವರಿ 28ರಂದು ಇರಾನ್ ವಿರುದ್ಧ ಯುಎಸ್- ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ಆರಂಭವಾಗಿತ್ತು. ಇದು ಇತ್ತೀಚಿನ ವರ್ಷಗಳಲ್ಲಿ ಮಧ್ಯಪ್ರಾಚ್ಯದಲ್ಲಿ ನಡೆದ ಅತ್ಯಂತ ಮಾರಕ ಘರ್ಷಣೆಗಳಲ್ಲಿ ಒಂದಾಗಿದೆ. ಸಂಘರ್ಷ ಪ್ರಾರಂಭವಾದಾಗಿನಿಂದ ಇರಾನ್ನಲ್ಲಿ ಸುಮಾರು 1,500 ಸಾವುಗಳು ವರದಿಯಾಗಿವೆ. ಗಲ್ಫ್ ರಾಷ್ಟ್ರಗಳಲ್ಲೂ ಸಾವುಗಳು ಉಂಟಾಗಿವೆ. ಬಿಕ್ಕಟ್ಟಿನ ಹೊರತಾಗಿಯೂ, ಡೊನಾಲ್ಡ್ ಟ್ರಂಪ್ ರಾಜತಾಂತ್ರಿಕ ಮಾತುಕತೆಯ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ. ಸೋಮವಾರ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಟ್ರಂಪ್, ಯುಎಸ್ ಮತ್ತು ಇರಾನ್ ಮಧ್ಯಪ್ರಾಚ್ಯದಲ್ಲಿ ಹಗೆತನವನ್ನು ನಿಲ್ಲಿಸುವ ಉತ್ತಮ ಮತ್ತು ಉತ್ಪಾದಕ ಮಾತುಕತೆಯಲ್ಲಿ ತೊಡಗಿಸಿಕೊಂಡಿವೆ ಎಂದು ಹೇಳಿದ್ದರು.
ಆದರೆ, ಇರಾನ್ ಈ ಹೇಳಿಕೆಯನ್ನು ನಿರಾಕರಿಸಿತ್ತು. ಅಂತಹ ಯಾವುದೇ ಮಾತುಕತೆಗಳು ನಡೆದಿಲ್ಲ ಎಂದು ಹೇಳಿತ್ತು. ಇಂಧನದ ಬೆಲೆಯಲ್ಲಿ ಕಡಿಮೆ ಮಾಡಲು ಅಮೆರಿಕ ಈ ರೀತಿಯ ಹೇಳಿಕೆ ನೀಡುತ್ತಿದೆ ಎಂದು ಇರಾನ್ ಆರೋಪಿಸಿತ್ತು.
ಅಮೆರಿಕ ಮತ್ತು ಇಸ್ರೇಲ್ ತಮ್ಮ ಗುರಿಗಳಲ್ಲಿ ನಿಕಟವಾಗಿ ಸಮನ್ವಯಗೊಂಡಿವೆ ಎಂದು ಟ್ರಂಪ್ ಹೇಳಿದ್ದರು. “ಸಂಬಂಧವು ತುಂಬಾ ಒಳ್ಳೆಯದು. ನಾವು ಹೆಚ್ಚು ಕಡಿಮೆ ಒಂದೇ ರೀತಿಯ ವಿಷಯಗಳನ್ನು ಬಯಸುತ್ತೇವೆ, ನಾವಿಬ್ಬರೂ ಗೆಲುವು ಬಯಸುತ್ತೇವೆ. ಆ ಗೆಲುವು ನಮ್ಮ ಬಳಿ ಇದೆ” ಎಂದು ಅವರು ಹೇಳಿದ್ದರು.
ಯುದ್ಧ ಪ್ರಾರಂಭವಾದಾಗಿನಿಂದ ಇರಾನ್ ಮತ್ತು ನೆರೆಯ ಗಲ್ಫ್ ರಾಷ್ಟ್ರಗಳಲ್ಲಿ ಪ್ರಮುಖ ಮೂಲಸೌಕರ್ಯಗಳ ಮೇಲಿನ ದಾಳಿಗಳು ತೈಲ ಬೆಲೆಗಳನ್ನು ಸುಮಾರು ಶೇ. 50ರಷ್ಟು ಹೆಚ್ಚಿಸಿವೆ. ಇದು ಜಾಗತಿಕ ಆರ್ಥಿಕ ಆಘಾತದ ಕಳವಳಗಳನ್ನು ಹೆಚ್ಚಿಸಿದೆ. ಈ ಹೋರಾಟವು ಈಗಾಗಲೇ ದೇಶಗಳಲ್ಲಿ 2,000ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ. ಹೆಚ್ಚಿನ ಸಾವುನೋವುಗಳು ಇರಾನ್ ಮತ್ತು ಲೆಬನಾನ್ನಲ್ಲಿ ವರದಿಯಾಗಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಟೀಸರ್ ಬಿಡುಗಡೆಯಾದ ಕ್ಷಣದಿಂದಲೇ ‘ಬಾಸ್’ (BOSS)ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಈ ಸಿನಿಮಾದ ಸುತ್ತ ಹಲವು ವಿವಾದಗಳು ಸೃಷ್ಟಿ ಆಗಿವೆ. ಈ ಸಿನಿಮಾದ ಕಥೆಗೂ, ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೂ ಸಾಮ್ಯತೆ ಇದೆ ಎಂಬುದು ಕೆಲವರ ಅಭಿಪ್ರಾಯ. ಹಾಗಾಗಿ ಈ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡಬಾರದು ಎಂದು ದರ್ಶನ್ (Darshan) ಪರ ವಕೀಲರು ತಕರಾರು ತೆಗೆದಿದ್ದರು. ಆದರೆ ‘ಬಾಸ್’ ಸಿನಿಮಾ ಅಂತಿಮವಾಗಿ ಸೆನ್ಸಾರ್ ಅಗ್ನಿಪರೀಕ್ಷೆಯಲ್ಲಿ ಗೆದ್ದು ಹೊರಬಂದಿದೆ. ವಿ. ಲವ ನಿರ್ದೇಶನದ ಈ ಚಿತ್ರದಲ್ಲಿ ತನುಷ್ ಶಿವಣ್ಣ (Tanush Shivanna) ಅಭಿನಯಿಸಿದ್ದಾರೆ.
ನಟ ದರ್ಶನ್ ಅವರ ಜೀವನದ ಘಟನೆಗಳಿಗೆ ಸಾಮ್ಯತೆ ಹೊಂದಿದೆ ಎಂಬ ಆರೋಪಗಳ ನಡುವೆಯೂ ಚಿತ್ರತಂಡಕ್ಕೆ ಸೆನ್ಸಾರ್ ಮಂಡಳಿ ಹಸಿರು ನಿಶಾನೆ ತೋರಿಸಿದೆ. ‘ಬಾಸ್’ ಸಿನಿಮಾದ ಟೀಸರ್ ಹೊರಬಿದ್ದಾಗ ಗಾಂಧಿನಗರದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಈ ಚಿತ್ರವು ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಜೈಲು ಸೇರಿರುವ ದರ್ಶನ್ ಅವರ ನಿಜ ಜೀವನದ ಕಥೆಯನ್ನೇ ಆಧರಿಸಿರಬಹುದು ಎನ್ನುವ ಗಂಭೀರ ಆರೋಪ ಕೇಳಿಬಂದಿತ್ತು. ಇದೇ ಕಾರಣಕ್ಕೆ ದರ್ಶನ್ ಅಭಿಮಾನಿಗಳು ಹಾಗೂ ಅವರ ಆಪ್ತ ವಲಯದಿಂದ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ವಿವಾದ ಕೇವಲ ಮಾತಿಗೆ ಸೀಮಿತವಾಗದೆ ಕಾನೂನು ಕಟ್ಟೆ ಏರಿತ್ತು. ದರ್ಶನ್ ಪರ ವಕೀಲರು ಚಿತ್ರತಂಡಕ್ಕೆ ಹಾಗೂ ಸೆನ್ಸಾರ್ ಮಂಡಳಿಗೆ ಈ ಮೊದಲೇ ನೋಟಿಸ್ ನೀಡಿದ್ದರು. ಅಷ್ಟೇ ಅಲ್ಲದೆ, ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪ ಅವರು ಖುದ್ದಾಗಿ ಸೆನ್ಸಾರ್ ಮಂಡಳಿಗೆ ಭೇಟಿ ನೀಡಿ, ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡದಂತೆ ಮನವಿ ಮಾಡಿದ್ದರು ಎಂಬ ವರದಿಗಳು ಹರಿದಾಡಿದ್ದವು.
ಬಾಸ್ ಸಿನಿಮಾ ಟೀಸರ್:
ಈ ಎಲ್ಲಾ ಸವಾಲುಗಳ ನಡುವೆಯೂ ಸೈಲೆಂಟಾಗಿ ಸೆನ್ಸಾರ್ ಪ್ರಕ್ರಿಯೆ ಮುಗಿಸಿರುವ ‘ಬಾಸ್’ ಚಿತ್ರಕ್ಕೆ ಮಂಡಳಿಯು ‘ಯು/ಎ’ ಪ್ರಮಾಣಪತ್ರ ನೀಡಿದೆ. ಆದರೆ, ವಿವಾದಾತ್ಮಕ ಎನ್ನಬಹುದಾದ ಕೆಲವು ದೃಶ್ಯಗಳಿಗೆ ಹಾಗೂ ಸಂಭಾಷಣೆಗಳಿಗೆ ಮಂಡಳಿಯು ಕತ್ತರಿ ಹಾಕಿದೆ. ಈ ಮೂಲಕ ಕೆಲವೊಂದು ಬದಲಾವಣೆಗಳೊಂದಿಗೆ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಕ್ಕಂತಾಗಿದೆ.
ಸೆನ್ಸಾರ್ ಪರೀಕ್ಷೆಯಲ್ಲಿ ಪಾಸ್ ಆಗಿರುವ ‘ಬಾಸ್’ ಚಿತ್ರತಂಡ ಈಗ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಬರುವ ಏಪ್ರಿಲ್ ತಿಂಗಳಿನಲ್ಲಿ ಸಿನಿಮಾವನ್ನು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆ ಮಾಡಲಾಗುವುದು. ತನುಶ್ ಶಿವಣ್ಣ ಅವರ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಎಷ್ಟರಮಟ್ಟಿಗೆ ಸದ್ದು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಬೆಂಗಳೂರು, ಮಾರ್ಚ್ 24: ಐಪಿಎಲ್ (IPL) ಅಂದರೆ ಕ್ರಿಕೆಟ್ ಪ್ರೇಮಿಗಳಿಗೆ ಎಲ್ಲಿಲ್ಲದ ಸಂಭ್ರಮ. ಐಪಿಎಲ್ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಆರ್ಸಿಬಿ ಪಂದ್ಯ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡಿಗರ ಹೆಮ್ಮೆಯ ಬ್ರಾಂಡ್ ಕೆಎಂಎಫ್(KMF) 2026ರ ಆವೃತ್ತಿಯಲ್ಲಿ ಆರ್ಸಿಬಿಗೆ ಪ್ರಾಯೋಜಕತ್ವ ನೀಡಿದೆ. ಈ ಮೂಲಕ ನಂದಿನಿ ಉತ್ಪನ್ನಗಳು ದೇಶಕ್ಕೆ ಪರಿಚಯವಾಗಲಿದೆ.
2026ರ ಆವೃತ್ತಿಯಲ್ಲಿ ಕನ್ನಡಿಗರ ಹೆಮ್ಮೆಯ ಬ್ರಾಂಡ್ ಕೆಎಂಎಫ್ ಪ್ರಾಯೋಜಕತ್ವ ನೀಡುವ ಮೂಲಕ ಆರ್ಸಿಬಿಗೆ ಸಾಥ್ ನೀಡಿದೆ. ಆರ್ಸಿಬಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ. ಹಾಗಾಗಿ ಪ್ರಾಯೋಜಕತ್ವ ನೀಡುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಉತ್ಪನ್ನ ಪರಿಚಯಕ್ಕೆ ಮುಂದಾಗಿದೆ.
KMF ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಹೇಳಿದ್ದಿಷ್ಟು
ಈ ಬಗ್ಗೆ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ KMF ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ, 2026ರ ಆವೃತ್ತಿಯಲ್ಲಿ ಆರ್ಸಿಬಿಗೆ KMF ಪ್ರಾಯೋಜಕತ್ವ ನೀಡಿದೆ. ಈ ಮೂಲಕ ನಂದಿನಿ ಉತ್ಪನ್ನಗಳು ದೇಶಕ್ಕೆ ಪರಿಚಯವಾಗಲಿದೆ. ಆರ್ಸಿಬಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ, ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಉತ್ಪನ್ನ ಪರಿಚಯವಾಗಲಿದೆ. ವಿಚಾಟ್ ಕೊಹ್ಲಿ, ರಜತ್ ಪಾಟಿದಾರ್, ದೇವದತ್ತ ಪಡಿಕಲ್ರಿಂದ KMF ಉತ್ಪನ್ನ ಪ್ರಚಾರಕ್ಕೆ ಮುಂದಾಗಿದ್ದೇವೆ. 4 ಕೋಟಿ ರೂ ವೆಚ್ಚದಲ್ಲಿ KMF ಒಂದು ವರ್ಷದ ಟೆಂಡರ್ ಪಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಯುದ್ಧದಿಂದಾಗಿ ನಂದಿನಿ ಉತ್ಪನ್ನಗಳಿಗೆ ದೊಡ್ಡ ಎಫೆಕ್ಟ್ ಆಗಿಲ್ಲ
ಇನ್ನು ಇರಾನ್ ಹಾಗೂ ಅಮೆರಿಕ, ಇಸ್ರೇಲ್ ನಡುವಿನ ಯುದ್ಧದಿಂದ ನಂದಿನಿ ಉತ್ಪನ್ನಗಳಿಗೆ ಎಫೆಕ್ಟ್ ವಿಚಾರವಾಗಿ ಮಾತನಾಡಿದ ಅವರು, ಯುದ್ಧದಿಂದ ಹಾಲಿನ ಮಾರಾಟದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. 4-5 ಸಾವಿರ ಲೀಟರ್ ಹಾಲು ಮಾರಾಟ ಮಾತ್ರ ಕಡಿಮೆಯಾಗಿದೆ. ಯುದ್ಧದಿಂದಾಗಿ ನಂದಿನಿ ಉತ್ಪನ್ನಗಳಿಗೆ ದೊಡ್ಡ ಎಫೆಕ್ಟ್ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಟಿಟಿಡಿ ತುಪ್ಪದ ಟೆಂಡರ್ನಲ್ಲಿ ಮಾತುಕಥೆ ನಡೆದಿದೆ. ಟೆಂಡರ್ ಹಾಕಿದ್ದೇವೆ ಇನ್ನು ಅಂತಿಮ ಆಗಿಲ್ಲ. ನಮ್ಮಲ್ಲಿ ಉತ್ಪಾದನೆ ಸಾಕಷ್ಟಿದೆ. ಟಿಟಿಡಿಗೆ ಬೇಕಾದಷ್ಟು ತುಪ್ಪ ಪೂರೈಕೆ ಮಾಡಲು ಶಕ್ತವಾಗಿದ್ದೇವೆ ಎಂದು KMF ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಹೇಳಿದ್ದಾರೆ.
ನೀವು ಎಂದಾದರೂ ಮೌತ್ ಕೊಂಡೋಮ್ (Mouth Condoms)ಅಥವಾ ಡೆಂಟಲ್ ಡ್ಯಾಮ್ ಬಗ್ಗೆ ಕೇಳಿದ್ದೀರಾ… ಸಾಮಾನ್ಯವಾಗಿ ಈ ಬಗ್ಗೆ ಜನರಿಗೆ ಅಷ್ಟಾಗಿ ತಿಳಿದಿಲ್ಲ. ಆದರೆ ಇತ್ತೀಚಿಗೆ ಇವುಗಳಿಂದ ಸಿಗುವ ಪ್ರಯೋಜನಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು ಹಾಗಾಗಿ ಈ ಬಗ್ಗೆ ತಿಳಿಯುವುದು ಬಹಳ ಉತ್ತಮವಾಗಿದೆ. ಇದೊಂದು ಲೇಟೆಕ್ಸ್ನಿಂದ ತಯಾರಿಸಲಾದ ತೆಳ್ಳಗಿನ ಮತ್ತು ಲವಚಿಕ ಶೀಟ್ ಆಗಿದೆ. ಇದನ್ನು ಓರಲ್ ಸಂಪರ್ಕದ ವೇಳೆ ಬಳಸಲಾಗುತ್ತದೆ, ಇದರಿಂದ ಬಾಯಿ ಮತ್ತು ಚರ್ಮದ ನಡುವೆ ನೇರ ಸಂಪರ್ಕವಾಗುವುದನ್ನು ತಡೆಯಬಹುದು. ಇದರ ಮುಖ್ಯ ಉದ್ದೇಶ ಸೋಂಕು ಹರಡುವ ಅಪಾಯವನ್ನು ಕಡಿಮೆ ಮಾಡುವುದಾಗಿದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸಿದಾಗ, ಇದು ರಕ್ಷಾಕವಚದಂತೆ ಕಾರ್ಯನಿರ್ವಹಿಸಿ ದೇಹದ ದ್ರವಗಳು ಅಥವಾ ಸೋಂಕಿತ ಚರ್ಮದ ನೇರ ಸಂಪರ್ಕವನ್ನು ತಪ್ಪಿಸುವುದಕ್ಕೆ ಸಹಾಯವಾಗುತ್ತದೆ. ಅದರಲ್ಲಿಯೂ ಸುರಕ್ಷಿತ ವಿಧಾನಗಳನ್ನು ಅನುಸರಿಸಲು ಬಯಸುವವರಿಗೆ ಮತ್ತು ಲೈಂಗಿಕ ಆರೋಗ್ಯದ ಬಗ್ಗೆ ಜಾಗರೂಕರಾಗಿರುವವರಿಗೆ ಇದು ವಿಶೇಷವಾಗಿ ಉಪಯುಕ್ತವಾಗಿದೆ. ಹಾಗಾದರೆ ಮೌತ್ ಕೊಂಡೋಮ್ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ನಿಂದ ರಕ್ಷಣೆ ನೀಡುತ್ತದೆಯೇ, ಇದು ಓರಲ್ ಕ್ಯಾನ್ಸರ್ನಿಂದ ರಕ್ಷಿಸಬಹುದೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಮೌತ್ ಕೊಂಡೋಮ್ HPV ವೈರಸ್ನಿಂದ ರಕ್ಷಿಸುತ್ತದೆಯೇ?
ತಜ್ಞರ ಪ್ರಕಾರ, ಹ್ಯೂಮನ್ ಪ್ಯಾಪಿಲೋಮಾವೈರಸ್ (HPV) ಇದು ಚರ್ಮದಿಂದ ಚರ್ಮ ಸಂಪರ್ಕದ ಮೂಲಕ ಹರಡುತ್ತದೆ ಮತ್ತು ಓರಲ್ ಸಂಪರ್ಕದ ಮೂಲಕವೂ ದೇಹಕ್ಕೆ ಪ್ರವೇಶಿಸಬಹುದು. ಮೌತ್ ಕೊಂಡೋಮ್ ನೇರ ಸಂಪರ್ಕವನ್ನು ತಡೆಯುವುದರಿಂದ ಈ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ, ಇದು 100% ರಕ್ಷಣೆ ನೀಡುವುದಿಲ್ಲ ಎಂಬುದನ್ನು ಗಮನದಲ್ಲಿಡಬೇಕು. HPV ಕೇವಲ ದ್ರವಗಳ ಮೂಲಕವಷ್ಟೇ ಅಲ್ಲ, ಚರ್ಮದ ಸಂಪರ್ಕದಿಂದಲೂ ಹರಡುತ್ತದೆ. ಹೀಗಾಗಿ, ಸುತ್ತಮುತ್ತಲಿನ ಚರ್ಮ ಸೋಂಕಿತವಾಗಿದ್ದರೆ ಅಪಾಯ ಮುಂದುವರಿಯಬಹುದು. ಆದರೂ, ನಿಯಮಿತವಾಗಿ ಮತ್ತು ಸರಿಯಾಗಿ ಬಳಸಿದರೆ ಸೋಂಕಿನ ಸಾಧ್ಯತೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ಆದರೆ ಇದಕ್ಕಿಂತಲೂ ಪರಿಣಾಮಕಾರಿ ರಕ್ಷಣಾ ಕ್ರಮವೆಂದರೆ HPV ಲಸಿಕೆ (ವ್ಯಾಕ್ಸಿನೇಷನ್) ತೆಗೆದುಕೊಳ್ಳುವುದಾಗಿದೆ.
ಇದು ಓರಲ್ ಕ್ಯಾನ್ಸರ್ನಿಂದ ರಕ್ಷಣೆ ನೀಡುತ್ತದೆಯೇ?
ಓರಲ್ ಕ್ಯಾನ್ಸರ್ ಬರುವುದಕ್ಕೆ ಹಲವು ಕಾರಣಗಳಿದ್ದು, HPV ಸೋಂಕು ಕೂಡ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಮೌತ್ ಕೊಂಡೋಮ್ HPV ಹರಡುವಿಕೆಯನ್ನು ಕಡಿಮೆ ಮಾಡುವುದರಿಂದ, ಇದು ಓರಲ್ ಕ್ಯಾನ್ಸರ್ನ ಅಪಾಯವನ್ನು ಕೆಲವು ಮಟ್ಟಿಗೆ ಕಡಿಮೆ ಮಾಡಬಹುದು. ಆದರೆ, ಇದು ನೇರವಾಗಿ ಕ್ಯಾನ್ಸರ್ನಿಂದ ಸಂಪೂರ್ಣ ರಕ್ಷಣೆ ನೀಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಧೂಮಪಾನ, ತಂಬಾಕು ಸೇವನೆ ಮತ್ತು ಅಸ್ವಸ್ಥ ಜೀವನಶೈಲಿ ಕೂಡ ಓರಲ್ ಕ್ಯಾನ್ಸರ್ಗೆ ಪ್ರಮುಖ ಕಾರಣಗಳಾಗಿವೆ. ಆದ್ದರಿಂದ, ಕೇವಲ ಮೌತ್ ಕೊಂಡೋಮ್ನ ಮೇಲೆ ಅವಲಂಬಿಸದೇ, ಆರೋಗ್ಯಕರ ಜೀವನಶೈಲಿ ಮತ್ತು ನಿಯಮಿತ ವೈದ್ಯಕೀಯ ತಪಾಸಣೆ ಅಗತ್ಯವಾಗಿದೆ.
ಬೆಂಗಳೂರು, ಮಾ.24: ಐಪಿಎಲ್ 2026ರ (IPL 2026) ಉದ್ಘಾಟನಾ ಪಂದ್ಯ ಮಾರ್ಚ್ 28ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಆರ್ಸಿಬಿ ಮತ್ತು ಎಸ್ಆರ್ಎಚ್ ನಡುವಿನ ಪಂದ್ಯ ನಡೆಯಲಿದೆ. ಈ ಬಾರಿ ಪಂದ್ಯಕ್ಕೆ ಭಾರೀ ಜನ ಸೇರುವ ಸಾಧ್ಯತೆಗಳು ಇದೆ. ಅದರಲ್ಲೂ ನೆಚ್ಚಿನ ಟೀಮ್ ಆರ್ಸಿಬಿ ಬೆಂಗಳೂರಿನಲ್ಲಿ ಆಡುತ್ತಿದೆ ಎಂದರೆ ಖಂಡಿತ ಜನ ಬರುವುದು ಖಂಡಿತ. ಅದಕ್ಕಾಗಿ ಜನರನ್ನು ಹಾಗೂ ವಾಹನಗಳನ್ನು ನಿಭಾಯಿಸಲು ಹಲವು ಕ್ರಮಗಳನ್ನು ಸಂಚಾರಿ ಪೊಲೀಸರು ಹಾಗೂ ಚಿನ್ನಸ್ವಾಮಿ ಸ್ಟೇಡಿಯಂ ಆಡಳಿಯ ಮಂಡಳಿ ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ. ವಾಹನ ಸಂಚಾರ ಹಾಗೂ ಪಾರ್ಕಿಂಗ್, ಜನರ ಓಡಾಟ ಎಲ್ಲದಕ್ಕೂ ಹೊಸ ರೂಲ್ಸ್ ತರಲಾಗಿದೆ. ಪಂದ್ಯಗಳ ದಿನದಂದು ಕ್ರೀಡಾಂಗಣದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆಯನ್ನು ನಿರ್ಬಂಧಿಸಲಾಗಿದೆ.
ಮಾರ್ಚ್ 28 & ಏಪ್ರಿಲ್ 5ರವರೆಗೆ ಕ್ವೀನ್ಸ್ ರಸ್ತೆ, ಬಾಳೆಕುಂದ್ರಿ ರಸ್ತೆ ಮತ್ತು ಸಿಟಿ ಓ ಜಂಕ್ಷನ್ ಸಂಪೂರ್ಣ ಬಂದ್ ಮಾಡಲಾಗುವುದು. ಎಂ.ಜಿ. ರಸ್ತೆಯ ಅನಿಲ್ ಕುಂಬಳೆ ವೃತ್ತದಿಂದ ಅನಿಲ್ ಕುಂಬಳೆ ಜಂಕ್ಷನ್ ವರೆಗೆ ನಿಷೇಧವನ್ನು ಮಾಡಲಾಗಿದೆ. ಈ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಇಲ್ಲ. ಎಂ.ಜಿ. ರಸ್ತೆಯಿಂದ ಕಬ್ಬನ್ ರಸ್ತೆಯವರೆಗೆ ಬಂದ್ ಮಾಡಲಾಗುವುದು ಎಂದು ಹೇಳಿದ್ದಾರೆ.
ಇದರ ಜತೆಗೆ ರಾಜಭವನ ರಸ್ತೆ, ಟಿ. ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ ಮತ್ತು ಸೆಂಟ್ರಲ್ ಸ್ಟ್ರೀಟ್ ರಸ್ತೆಯ ಎರಡು ಬದಿಗಳಲ್ಲಿ ಸಂಚಾರ ನಿಷೇಧ ಮಾಡಲಾಗುವುದು. ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದವರೆಗೆ ನಿರ್ಬಂಧ ಮಾಡಲಾಗಿದೆ. ಕ್ಯಾಶ್ ಫಾರ್ಮಸಿ ಜಂಕ್ಷನ್ನಿಂದ ಅನಿಲ್ ಕುಂಬಳೆ ವೃತ್ತದವರೆಗೆ ಹಾಗೂ ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗ ಮತ್ತು ಬಾಲಭವನ ಮುಂಭಾಗದ ಫೌಂಟೇನ್ ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ.
ಇನ್ನು ಪಂದ್ಯ ನೋಡಲು ಬರುವ ಕ್ರಿಕೆಟ್ ಪ್ರೇಮಿಗಳಿಗೆ ವಾಹನಗಳನ್ನು ನಿಲ್ಲಿಸಲು ಕೂಡ ವ್ಯವಸ್ಥೆಗಳನ್ನು ಕೂಡ ಮಾಡಲಾಗಿದೆ. ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಂಚಾರಿ ಪೊಲೀಸರ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂ ಆಡಳಿಯ ಮಂಡಳಿ ಸೂಚಿಸಿರುವ ಕಡೆಗಳಲ್ಲಿ ವಾಹನ ನಿಲುಗಡೆ ಮಾಡಬಹುದು. ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಸೇಂಟ್ ಜೋಸೆಫ್ ಸ್ಕೂಲ್ ಮೈದಾನ (ವಿಠ್ಠಲ್ ಮಲ್ಯ ರಸ್ತೆ), ಫ್ರೀಡಂ ಪಾರ್ಕ್ (MLCP ಮಲ್ಟಿ ಲೆವೆಲ್ ಪಾರ್ಕಿಂಗ್), ಗರುಡ ಮಾಲ್ ಪಾರ್ಕಿಂಗ್ ಸ್ಥಳ, ಶಿವಾಜಿನಗರ ಬಸ್ ನಿಲ್ದಾಣದ ಮೊದಲ ಮಹಡಿ, ಯುಬಿ ಸಿಟಿ (UB City) ಪಾರ್ಕಿಂಗ್ ಸ್ಥಳ ಪಾರ್ಕಿಂಗ್ ಮಾಡಬಹುದು.
ಇನ್ನು ಸ್ಟೇಡಿಯಂ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಕೂಡ ಸೂಚಿಸಲಾಗಿದೆ. ಪ್ರವೇಶ ಗೇಟ್ ನಂಬರ್ E1 ರಿಂದ E3, E18, E19, E22 ಮತ್ತು E11 ರಿಂದ E17 ರ ಮೂಲಕ ಪ್ರವೇಶಿಸಬಹುದು. ಪಂದ್ಯ ಮುಗಿದ ನಂತರ E5, E8, E09, E9A ಗೇಟ್ಗಳ ಮೂಲಕ ಮಾತ್ರ ಹೊರಗೆ ಹೋಗಲು ಅವಕಾಶವಿದೆ. ಗೇಟ್ ನಂಬರ್ E10 ಕೇವಲ ಆಟಗಾರರು, ವಿಐಪಿಗಳು ಮತ್ತು ಪ್ರಮುಖ ಅತಿಥಿಗಳಿಗೆ ಮೀಸಲಾಗಿದೆ. ಕ್ಯಾಬ್/ಆಟೋ ಪಿಕ್-ಅಪ್ ಮತ್ತು ಡ್ರಾಪ್ ಪಾಯಿಂಟ್ಸ್ ಬಗ್ಗೆಯೂ ಇಲ್ಲಿ ತಿಳಿಸಿದ್ದಾರೆ. ಬಿಆರ್ವಿ (BRV) ಮೈದಾನ ಗೇಟ್ ನಂಬರ್ 6 ತಿಳಿಸಿದ್ದಾರೆ. ಮಾಣಿಕ್ ಷಾ ಪರೇಡ್ ಮೈದಾನ ಗೇಟ್ ನಂಬರ್ 3 ಕೂಡ ಗುರುತು ಮಾಡಲಾಗಿದೆ.
ಹಿರಿಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ ಈವರೆಗೂ 4 ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದಾರೆ. ಪ್ರತಿ ಸಿನಿಮಾದಲ್ಲಿ ಬೇರೆ ಬೇರೆ ರೀತಿಯ ಪ್ರಯತ್ನ ಮಾಡಿದ್ದರು. ಈಗ ಪ್ಯಾನ್ ಏಷ್ಯಾ ಪ್ರಯತ್ನಕ್ಕೆ ಕೈ ಹಾಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅವರ ಹೊಸ ಸಿನಿಮಾಗೆ ಈಗಾಗಲೇ ಮುಹೂರ್ತ ನೇರವೇರಿದೆ. ಗಣಪತಿ ದೇವಸ್ಥಾನದಲ್ಲಿ ಸಿನಿಮಾದ ಮುಹೂರ್ತಕ್ಕೆ ಚಾಲನೆ ನೀಡುವ ಮೂಲಕ ಕೆಲಸಗಳನ್ನು ಆರಂಭಿಸಲಾಗಿದೆ. ಈ ಸಿನಿಮಾಗಾಗಿ ರಾಜವರ್ಧನ್ (Rajavardhan) ಅವರು ಇತ್ತೀಚಿನ ಕೆಲವು ವರ್ಷಗಳಿಂದ ತಯಾರಿ ಮಾಡಿಕೊಂಡಿದ್ದಾರೆ.
ಕೆಜಿಎಫ್, ಕಾಂತಾರ, ಟಾಕ್ಸಿಕ್ ರೀತಿ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಬೇಕು ಎಂಬುದು ರಾಜವರ್ಧನ್ ಕನಸು. ಅದಕ್ಕಾಗಿ ಒಂದು ತಂಡ ಕಟ್ಟಿಕೊಂಡು ಸುಮಾರು 5 ವರ್ಷಗಳಿಂದ ಸತತವಾಗಿ ಪೂರ್ವ ತಯಾರಿ ನಡೆಸುತ್ತಿದ್ದಾರಂತೆ. ಇದೀಗ ಎಲ್ಲ ತಯಾರಿ ಕೊನೆಯ ಹಂತಕ್ಕೆ ಬಂದಿದೆ. ಸದ್ಯದಲ್ಲೇ ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದ್ದಾರೆ.
ಇತ್ತೀಚೆಗೆ ರಾಜವರ್ಧನ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ನಟನೆಯಿಂದ ಅವರು ದೂರ ಉಳಿದಿದ್ದು ಕೂಡ ಇದೇ ಹೊಸ ಪ್ರಾಜೆಕ್ಟ್ ಕಾರಣಕ್ಕೆ ಎಂದು ಹೇಳಲಾಗುತ್ತಿದೆ. ಇದನ್ನು ಅವರು ಪ್ಯಾನ್ ಏಷ್ಯಾ ಸಿನಿಮಾ ಎಂದು ಕರೆದಿರುವ ಕಾರಣ ಸಹಜವಾಗಿಯೇ ಸಿನಿಪ್ರಿಯರಲ್ಲಿ ಕೌತುಕ ಮೂಡಿದೆ. ಆ ಬಗ್ಗೆ ಇನ್ನಷ್ಟೇ ಅಪ್ಡೇಟ್ ಸಿಗಬೇಕಿದೆ.
ಈ ಬಗ್ಗೆ ರಾಜವರ್ಧನ್ ಅವರು ಮಾತನಾಡಿದ್ದಾರೆ. ‘ಬಿಚ್ಚುಗತ್ತಿ ಚಿತ್ರದಿಂದ ಗಜರಾಮ ಸಿನಿಮಾದ ತನಕವೂ ಮಾಡಿದ ಎಲ್ಲಾ ಸಿನಿಮಾಗಳು ಒಂದೊಂದು ಬಗೆಯಲ್ಲಿ ಪಾಠ ಹೇಳಿಕೊಟ್ಟಿವೆ. ಕಳೆದ ವರ್ಷ ನಾನು ಕ್ರಿಯೇಟೀವ್ ಹೆಡ್ ಆಗಿ, ನಿರ್ಮಾಪಕನಾಗಿ ಕೆಲಸ ಮಾಡಿದ್ದ ‘ಕಮಲ್ ಶ್ರೀದೇವಿ’ ಸಿನಿಮಾದೊಳಗಿನ, ಹೊರಗಿನ
ಬೇಕು-ಬೇಡ ಮತ್ತು ವ್ಯವಹಾರಿಕ ಜ್ಞಾನವನ್ನ ಕಲಿಸಿದೆ’ ಎಂದು ಅವರು ಹೇಳಿದ್ದಾರೆ.
‘ನಾನೂ ಮೂಲತಃ ಚಿತ್ರಕಲಾ ವಿದ್ಯಾರ್ಥಿ. ಸಿನಿಮಾದೊಳಗೆ ಕೊನೆಯವರೆಗೂ ನಾನು ವಿದ್ಯಾರ್ಥಿಯೇ. ಈವರೆಗೂ ನಾನು ಮಾಡಿದ ಚಿತ್ರಗಳೆಲ್ಲವೂ ಸಿನಿಮಾ ಕೆಲಸಗಳೆಲ್ಲವೂ ಒಂದೊಂದು ಕಲಿಕೆ. ಈವರೆಗೂ ನಾನೇನು ಮಾಡಿದ್ದೇನೂ ಅದೆಲ್ಲವೂ ಅನುಭವ ಅಷ್ಟೇ. ನನ್ನ ಅಸಲಿ ಸಿನಿಮಾ ಪಯಣ ಇಲ್ಲಿಂದ ಆರಂಭ. ನನ್ನ ಸಿನಿಮಾ ಕನಸು, ದಾರಿ, ಗುರಿ ಈ ಪ್ರಾಜೆಕ್ಟ್ ಆಗಲಿದೆ ಎಂಬುದು ನನ್ನ ಭರವಸೆ’ ಎಂದು ರಾಜ್ವರ್ಧನ್ ಹೇಳಿದ್ದಾರೆ.
ನವದೆಹಲಿ, ಮಾರ್ಚ್ 24: ಭಾರತದ ಕ್ರೀಡಾ ಆರ್ಥಿಕತೆ ಬಹಳ ವೇಗದಲ್ಲಿ ಬೆಳೆಯುತ್ತಿದೆ. ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಕ್ರೀಡಾ ಆರ್ಥಿಕತೆಯ (Indian Sports Economy) ಗಾತ್ರ ಎರಡು ಬಿಲಿಯನ್ ಡಾಲರ್ ದಾಟಿದೆ. ಡಬ್ಲ್ಯುಪಿಪಿ ಮೀಡಿಯಾದ ವರದಿಯೊಂದರ ಪ್ರಕಾರ ಸ್ಪೋರ್ಟ್ಸ್ ಎಕನಾಮಿ ಗಾತ್ರ 2.13 ಬಿಲಿಯನ್ ಡಾಲರ್ ಮುಟ್ಟಿದೆ. ಅಂದರೆ, 18,864 ಕೋಟಿ ರೂ ಗಾತ್ರದ ಆರ್ಥಿಕತೆಯು ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಅಡಕವಾಗಿದೆ.
ಭಾರತೀಯ ಕ್ರೀಡಾ ಕ್ಷೇತ್ರದ ಆರ್ಥಿಕತೆ ಕಳೆದ ನಾಲ್ಕು ವರ್ಷದಲ್ಲಿ ಅದ್ವಿತೀಯವಾಗಿ ಹಿಗ್ಗಿದೆ. ಶೇ. 19ರ ಸಿಎಜಿಆರ್ನಲ್ಲಿ ಬೆಳೆದಿದೆ. ನಾಲ್ಕು ವರ್ಷದ ಹಿಂದೆ ಇದ್ದುದಕ್ಕೆ ಹೋಲಿಸಿದರೆ ಅದರ ಗಾತ್ರ ಎರಡು ಪಟ್ಟು ಹೆಚ್ಚಿದೆ. ಅಂದರೆ, ನಾಲ್ಕೇ ವರ್ಷದಲ್ಲಿ ಡಬಲ್ ಆಗಿದೆ.
ಕ್ರಿಕೆಟ್ ಸಿಕ್ಕಾಪಟ್ಟೆ ವೇಗದಲ್ಲಿ ಬೆಳವಣಿಗೆ
ಭಾರತದ ಕ್ರೀಡಾ ಆರ್ಥಿಕತೆಗೆ ಅತಿಹೆಚ್ಚು ಕೊಡುಗೆ ಕೊಡುತ್ತಿರುವುದು ಕ್ರಿಕೆಟ್. ಶೇ 89ರಷ್ಟು ಕೊಡುಗೆ ಇದರದ್ದು. 2024ರಲ್ಲಿ ಒಟ್ಟಾರೆ ಕ್ರೀಡಾ ಆರ್ಥಿಕತೆಯಲ್ಲಿ ಕ್ರಿಕೆಟ್ನ ಪಾಲು ಶೇ. 84 ಇತ್ತು. ಕುತೂಹಲ ಎಂದರೆ 2024ರಲ್ಲಿ ಒಟ್ಟಾರೆ ಭಾರತೀಯ ಕ್ರೀಡಾ ಆರ್ಥಿಕತೆ ಹೊಂದಿದ್ದ ಗಾತ್ರಕ್ಕಿಂತ ದೊಡ್ಡದಾಗಿ ಕ್ರಿಕೆಟ್ ಈಗ ಬೆಳೆದಿದೆ ಎಂಬುದು ಡಬ್ಲ್ಯುಪಿಪಿ ಮೀಡಿಯಾದ ‘ಸ್ಪೋರ್ಟಿಂಗ್ ನೇಶನ್: ಬ್ಯುಲ್ಡಿಂಗ್ ಎ ಲೆಗಸಿ’ ವರದಿಯಿಂದ ತಿಳಿದುಬರುತ್ತದೆ.
ಡಬ್ಲ್ಯುಪಿಪಿ ಮೀಡಿಯಾದ ಅಧ್ಯಯನದಲ್ಲಿ, ಕ್ರೀಡಾ ಆರ್ಥಿಕತೆಯ ಗಾತ್ರವನ್ನು ಅಳೆಯಲು ಮೂರು ಅಂಶಗಳನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ಪ್ರಾಯೋಜತ್ವ, ಕ್ರೀಡಾಪಟು ಪ್ರಚಾರ, ಜಾಹೀರಾತು ವೆಚ್ಚ, ಈ ಮೂರು ಆದಾಯ ಮೂಲಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
ಭಾರತದಲ್ಲಿ ಕ್ರಿಕೆಟ್ ಪ್ರಾಬಲ್ಯ ನಿಚ್ಚಳವಾಗಿ ಕಾಣುತ್ತದೆ. ಶೇ. 89ರಷ್ಟು ಕ್ರೀಡಾ ಆರ್ಥಿಕತೆಯು ಕ್ರಿಕೆಟ್ನದ್ದಾಗಿದೆ. ಇತರ ಕ್ರೀಡೆಗಳ ಪಾಲು ಶೇ. 11 ಮಾತ್ರ. ಫುಟ್ಬಾಲ್ ಕಳೆದ ವರ್ಷ ಹೆಚ್ಚಿನ ಬೆಳವಣಿಗೆ ಹೊಂದಿಲ್ಲದಿರುವುದು ಇದಕ್ಕೆ ಕಾರಣ. ಪ್ರೋಕಬಡ್ಡಿ ಲೀಗ್ ಮೂಲಕ ಕಬಡ್ಡಿ ತನ್ನ ಸ್ಥಾನ ಉಳಿಸಿಕೊಂಡಿದೆ.
ಆದರೆ, ಆದಾಯ ಗಳಿಕೆ ಮತ್ತು ವೀಕ್ಷಣೆ ಎರಡರಲ್ಲೂ ಕ್ರಿಕೆಟ್ಗೆ ಭಾರತದಲ್ಲಿ ಯಾವ ಕ್ರೀಡೆಯೂ ಸಾಟಿ ಇಲ್ಲ. ಅದರಲ್ಲೂ ಐಪಿಎಲ್ನ ಕೊಡುಗೆಯೂ ಗಣನೀಯವಾಗಿ ಇದೆ. ಮಹಿಳಾ ಕ್ರಿಕೆಟ್ ಕೂಡ ಇತ್ತಿಚಿನ ವರ್ಷಗಳಲ್ಲಿ ಕೊಡುಗೆ ನೀಡುತ್ತಿದೆ.
ಕ್ರೀಡಾ ಆರ್ಥಿಕತೆಗೆ ಮಾಧ್ಯಮ ವೆಚ್ಚದ ಕೊಡುಗೆ ಶೇ. 50ರಷ್ಟು ಇದೆ. 9,571 ಕೋಟಿ ರೂ ಅನ್ನು ಮಾಧ್ಯಮಗಳು ಕ್ರೀಡಾ ಪ್ರಸಾರಕ್ಕೆ ವ್ಯಯಿಸುತ್ತವೆ. ಇದರಲ್ಲಿ ಕ್ರಿಕೆಟ್ಗೆ ಮಾಡುವ ವೆಚ್ಚವೇ 9,026 ಕೋಟಿ ರೂ.
ಧಾರವಾಡ, ಮಾ.24: ಜಿಲ್ಲೆಯ ರಾಮಾಪುರ ಅರಣ್ಯ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಅವರ ಶವವು ಕಾರಿನಲ್ಲೇ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆಯು ಜಿಲ್ಲೆಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದು, ಇದು ಪೂರ್ವನಿಯೋಜಿತ ಕೊಲೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.ಧಾರವಾಡ ತಾಲೂಕಿನ ರಾಮಾಪುರ ಗ್ರಾಮದ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ಈ ದಾರುಣ ಘಟನೆ ಸಂಭವಿಸಿದೆ. ಕಾರಿಗೆ ಬೆಂಕಿ ಹಚ್ಚಲಾಗಿದ್ದು, ಒಳಗಿದ್ದ ರಾಜು ಬೋಳಶೆಟ್ಟಿ ಅವರ ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ. ಗುರುತು ಸಿಗದಷ್ಟು ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಧಾರವಾಡ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿರ್ಜನ ಪ್ರದೇಶದಲ್ಲಿ ಕಾರಿಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.