ಬೆಳ್ಳಿ ಮತ್ತು ಚಿನ್ನದ ಬೆಲೆ ಕಳೆದ ಒಂದು ವರ್ಷದಲ್ಲಿ ಸಿಕ್ಕಾಪಟ್ಟೆ ಏರಿದೆ. ಹೀಗಾಗಿ ಹಲವರು ಚಿನ್ನ ಹಾಗೂ ಬೆಳ್ಳಿ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಬಹಳಷ್ಟು ತಜ್ಞರು ಚಿನ್ನದ ಮೇಲೆ ಸ್ವಲ್ಪ ಭಾಗವಾದರೂ ಹೂಡಿಕೆ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆ. ಹೀಗಾಗಿ ಹಲವರು ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಚಿನ್ನ, ಬೆಳ್ಳೆ ದರ ಇನ್ನೂ ಏರಿಕೆಯಾಗುತ್ತೆ ಎಂದು ಅನೇಕ ಜನ ಸಾಲ ಮಾಡಿ ಹೂಡಿಕೆ ಮಾಡಲು ಮುಗಿಬಿದ್ದಿದ್ದಾರೆ. ಆದ್ರೆ, ಮತ್ತೊಂದೆಡೆ ಚಿನ್ನ ಬೆಳ್ಳಿ ಇಳಿಕೆಯತ್ತ ಸಾಗಿದೆ. ಇನ್ನು ಚಿನ್ನ ಬೆಳ್ಳಿ ಹೂಡಿಕೆ ಮಾಡುವವರಿಗೆ ಆರ್ಥಿಕ ತಜ್ಞ ರುದ್ರಮೂರ್ತಿ ಅವರು ಮಹತ್ವದ ಸಲಹೆ ನೀಡಿದ್ದಾರೆ.
ಗಲ್ಫ್ ದೇಶಗಳ ಯುದ್ಧದ ಟೆನ್ಷನ್ ನಡುವೆ ಚಿನ್ನ (Gold) ಮತ್ತು ಬೆಳ್ಳಿ (Silver) ರೇಟ್ ದಿಢೀರ್ ಅಂತ ಪಾತಾಳಕ್ಕೆ ಕುಸಿದಿದೆ. ಮದುವೆ ಸೀಸನ್ (Wedding Season) ಹಾಗೂ ಸಾಲು ಸಾಲು ಹಬ್ಬಗಳ ಹೊತ್ತಲ್ಲೇ ಈ ಭಾರಿ ಬೆಲೆ ಇಳಿಕೆ (Price Drop) ಆಭರಣ ಪ್ರಿಯರಿಗೆ ಅಕ್ಷರಶಃ ಹಬ್ಬದ ವಾತಾವರಣ ಸೃಷ್ಟಿಸಿದೆ. ಇನ್ನು ಈ ಚಿನ್ನ ಬೆಳ್ಳಿ ಏರಿಳಿತ ಬಗ್ಗೆ ಆರ್ಥಿಕ ತಜ್ಞ ರುದ್ರಮೂರ್ತಿ ಅವರು ಮಾತನಾಡಿದ್ದಾರೆ. ಅಲ್ಲದೇ ಚಿನ್ನ-ಬೆಳ್ಳಿ ಮೇಲೆ ಹೂಡಿಕೆ ಮಾಡುವವರಿಗೂ ಕೆಲ ಸಲಹೆ ಸೂಚನೆಗಳನ್ನು ಸಹ ನೀಡಿದ್ದಾರೆ.
ದೇಶಾದ್ಯಂತ ಭಾರಿ ಕುತೂಹಲ ಮೂಡಿಸಿದ್ದ ಬಾಲಿವುಡ್ನ ಬಿಗ್ ಬಜೆಟ್ ಸಿನಿಮಾ ‘ಧುರಂಧರ್ 2’ (Dhurandhar 2) ಎಲ್ಲ ಕಡೆಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಾರ್ಚ್ 18ರ ಸಂಜೆಯಿಂದಲೇ ಈ ಚಿತ್ರದ ಪ್ರದರ್ಶನ ಆರಂಭ ಆಯಿತು. ಆದರೆ ಕನ್ನಡ ವರ್ಷನ್ ಬಿಡುಗಡೆ ಆಗಿರಲಿಲ್ಲ. ತಾಂತ್ರಿಕ ಕಾರಣಗಳಿಂದಾಗಿ ಕನ್ನಡ ಅವತರಣಿಕೆಯ (Dhurandhar 2 Kannada Version) ಬಿಡುಗಡೆ ಕೆಲವು ದಿನಗಳ ಕಾಲ ವಿಳಂಬವಾಗಿತ್ತು. ಇದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಆದರೆ ಈಗ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದೆ. ಕನ್ನಡದ ಪ್ರೇಕ್ಷಕರು ಕೂಡ ಈ ‘ಧುರಂಧರ್ 2’ ನೋಡಿ ಎಂಜಾಯ್ ಮಾಡುತ್ತಿದ್ದಾರೆ.
ಕನ್ನಡ ವರ್ಷನ್ ವಿಳಂಬಕ್ಕೆ ಕಾರಣವೇನು? ಮಾರ್ಚ್ 19ರಂದು ಹಿಂದಿ ಆವೃತ್ತಿಯು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಯಿತು. ಆದರೆ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳ ಡಬ್ಬಿಂಗ್ ಆವೃತ್ತಿಗಳು ಅದೇ ದಿನ ತೆರೆಗೆ ಬರಲು ಸಾಧ್ಯವಾಗಲಿಲ್ಲ. ಇದಕ್ಕೆ ಕೆಲವು ಪ್ರಮುಖ ಕಾರಣಗಳು ಇವೆ. ಪ್ರಾದೇಶಿಕ ಭಾಷೆಗಳ ಸೆನ್ಸಾರ್ ಪ್ರಮಾಣಪತ್ರ ಸಿಗುವುದು ವಿಳಂಬವಾದ ಕಾರಣ ಕೊನೆಯ ಕ್ಷಣದಲ್ಲಿ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿತ್ತು.
‘ಧುರಂಧರ್ 2’ ಚಿತ್ರದ ಡಬ್ಬಿಂಗ್ ಕೆಲಸಗಳು ಅಂತಿಮ ಹಂತದಲ್ಲಿ ಬಾಕಿ ಉಳಿದಿದ್ದವು ಮತ್ತು ಡಿಜಿಟಲ್ ಕಂಟೆಂಟ್ (DCP) ಚಿತ್ರಮಂದಿರಗಳಿಗೆ ತಲುಪಲು ಸಮಯ ಹಿಡಿಯಿತು ಎಂಬ ಮಾಹಿತಿ ಕೂಡ ಇದೆ. ಆ ಕಾರಣದಿಂದ ಕನ್ನಡ ವರ್ಷನ್ ಬಿಡುಗಡೆಗೆ ಸಮಸ್ಯೆ ಆಗಿತ್ತು. ಅದಕ್ಕಾಗಿ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ನಿರ್ದೇಶಕ ಆದಿತ್ಯ ಧರ್ ಅವರು ಈ ವಿಳಂಬಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆಯಾಚಿಸಿದ್ದರು. ‘ನಮ್ಮ ಚಿತ್ರವನ್ನು ಎಲ್ಲ ಭಾಷೆಗಳಲ್ಲಿ ಏಕಕಾಲಕ್ಕೆ ತೋರಿಸಬೇಕೆಂಬ ಆಸೆ ಇತ್ತು. ಆದರೆ ಅನಿವಾರ್ಯ ಕಾರಣಗಳಿಂದ ವಿಳಂಬವಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು.
ವಿಳಂಬದ ನಂತರ ಬಿಡುಗಡೆಯಾದರೂ ಕೂಡ ಕರ್ನಾಟಕದಲ್ಲಿ ‘ಧುರಂಧರ್ 2’ ಕನ್ನಡ ವರ್ಷನ್ಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಕನ್ನಡ ಆವೃತ್ತಿಯ ಪ್ರದರ್ಶನಗಳು ಹೌಸ್ಫುಲ್ ಆಗುತ್ತಿವೆ. ಸ್ಪೈ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಸಂಜಯ್ ದತ್, ಅರ್ಜುನ್ ರಾಮ್ಪಾಲ್, ರಣವೀರ್ ಸಿಂಗ್, ಸಾರಾ ಅರ್ಜುನ್, ಆರ್. ಮಾಧವನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ.
ಸಿನಿಮಾದ ಮೇಕಿಂಗ್ ಮತ್ತು ರಣವೀರ್ ಸಿಂಗ್ ಅವರ ಆ್ಯಕ್ಷನ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ, ಅನೇಕರಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ಕನ್ನಡದ ಖ್ಯಾತ ನಟಿ ರಮ್ಯಾ ಅವರು ಈ ಸಿನಿಮಾವನ್ನು ಟೀಕಿಸಿದ್ದಾರೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಭರ್ಜರಿ ಕಲೆಕ್ಷನ್ ಆಗುತ್ತಿದೆ. ಕೇವಲ ನಾಲ್ಕೇ ದಿನಗಳಲ್ಲಿ ಈ ಚಿತ್ರವು ವಿಶ್ವದಾದ್ಯಂತ 600 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿ ದಾಖಲೆ ಬರೆದಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಅಥವಾ ಇಪಿಎಫ್ (EPF) ವಿಚಾರದಲ್ಲಿ ಬಹಳ ಜನರಿಗೆ ಗೊಂದಲಗಳಿವೆ. ಒಂದಕ್ಕಿಂತ ಹೆಚ್ಚು ಇಪಿಎಫ್ ಅಕೌಂಟ್ಗಳಿದ್ದು, ಅವು ವಿಲೀನಗೊಂಡಿರದಿದ್ದರೆ ಅವುಗಳಿಗೆ ವಾರ್ಷಿಕ ಬಡ್ಡಿ ಜಮೆ ಆಗುವುದಿಲ್ಲ ಎಂದು ಬಹಳ ಜನರು ಭಾವಿಸಿದ್ದಾರೆ. ನಿಷ್ಕ್ರಿಯ ಇಪಿಎಫ್ ಅಕೌಂಟ್ಗೆ ಸಂದಾಯವಾಗುವ ಬಡ್ಡಿಗೆ ಟ್ಯಾಕ್ಸ್ ಇರುತ್ತಾ ಎನ್ನುವುದು ಕೆಲವರ ಸಂದೇಹ. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
ನಿಷ್ಕ್ರಿಯ ಇಪಿಎಫ್ ಅಕೌಂಟ್ಗೆ ಬಡ್ಡಿ ಸಿಗುತ್ತೆ?
ಕೆಲಸ ಬಿಟ್ಟು ಬೇರೆ ಕೆಲಸಕ್ಕೆ ಸೇರಿದಾಗೆಲ್ಲಾ ಹೊಸ ಇಪಿಎಫ್ ಅಕೌಂಟ್ಗಳನ್ನು ತೆರೆಯಲಾಗುತ್ತದೆ. ಹಳೆಯ ಅಕೌಂಟ್ಗಳನ್ನು ಹೊಸ ಅಕೌಂಟ್ಗೆ ವಿಲೀನ ಮಾಡದೇ ಇದ್ದರೆ ಒಬ್ಬ ಉದ್ಯೋಗಿಗೆ ಒಂದಕ್ಕಿಂತ ಹೆಚ್ಚು ಇಪಿಎಫ್ ಅಕೌಂಟ್ಗಳು ಇರಬಹುದು.
ಮೂರು ವರ್ಷ ಇಪಿಎಫ್ ಅಕೌಂಟ್ಗೆ ಕೊಡುಗೆ ಬರದೇ ಹೋದರೆ ಅದು ನಿಷ್ಕ್ರಿಯ ಅಕೌಂಟ್ ಎನಿಸುತ್ತದಾ? ಹಿಂದೆ ಇದ್ದ ನಿಯಮದಲ್ಲಿ ಹಾಗಿತ್ತು. ಆದರೆ, ಈಗ ಬದಲಾಗಿದೆ. ಉದ್ಯೋಗಿಯಿಂದಾಗಲೀ, ಕಂಪನಿ ವತಿಯಿಂದಾಗಲೇ ಕೊಡುಗೆ ಬರುವುದು ನಿಂತು ಹೋದರೂ ಆ ಅಕೌಂಟ್ನಲ್ಲಿರುವ ಹಣಕ್ಕೆ ಸರ್ಕಾರದಿಂದ ಬಡ್ಡಿ ಸಂದಾಯವಾಗುವುದು ಮುಂದುವರಿಯುತ್ತಿರುತ್ತದೆ.
ನೀವು ನಿವೃತ್ತರಾಗುವವರೆಗೂ, ಅಥವಾ 58 ವರ್ಷ ವಯಸ್ಸು ಪೂರ್ಣಗೊಳ್ಳುವವರೆಗೂ ನಿಮ್ಮ ಎಲ್ಲಾ ಇಪಿಎಫ್ ಅಕೌಂಟ್ಗಳಲ್ಲಿರುವ ಹಣಕ್ಕೆ ಬಡ್ಡಿ ಸಂದಾಯ ನಿಲ್ಲುವುದಿಲ್ಲ. ಇಪಿಎಫ್ ಸದಸ್ಯರ ವಯಸ್ಸು 58 ವರ್ಷವಾದ ಬಳಿಕ ಅವರ ಇಪಿಎಫ್ ಅಕೌಂಟ್ಗಳಿಗೆ ಬಡ್ಡಿ ಸಂದಾಯವಾಗುವುದು ನಿಲ್ಲುತ್ತದೆ.
ಒಂದು ವೇಳೆ ನೀವು ಮಧ್ಯದಲ್ಲೇ ಕೆಲಸ ಬಿಟ್ಟು ಹೊಸ ಕೆಲಸಕ್ಕೆ ಸೇರಿದಂತೆ ಅರ್ಲಿ ರಿಟೈರ್ಮೆಂಟ್ ಆಗಿದ್ದೀರಿ ಎಂದಿಟ್ಟುಕೊಳ್ಳಿ. ನೀವು ಇಪಿಎಫ್ ಸರಪಳಿಯಿಂದ ಕತ್ತರಿಸಿಕೊಂಡಂತೆ ಆಗುತ್ತದೆ. ನಿಮಗೆ 58 ವರ್ಷ ಆಗುವವರೆಗೂ ಇಪಿಎಫ್ ಅಕೌಂಟ್ಗೆ ಬಡ್ಡಿ ಜಮೆ ಆಗುವುದು ತಪ್ಪುವುದಿಲ್ಲ. ಆದರೆ, ಕೊನೆಯ ಇಪಿಎಫ್ ಕೊಡುಗೆಯ ದಿನದಿಂದ ಹಿಡಿದು ನಿವೃತ್ತಿಯವರೆಗಿನ ದಿನದವರೆಗೆ ನಿಮ್ಮ ಇಪಿಎಫ್ ಹಣಕ್ಕೆ ಸಂದಾಯವಾಗುವ ಬಡ್ಡಿ ಹಣಕ್ಕೆ ಟ್ಯಾಕ್ಸ್ ಅನ್ವಯ ಆಗುತ್ತದೆ. ಇದು ಗಮನದಲ್ಲಿರಲಿ. ಇಪಿಎಫ್ ಹಣಕ್ಕೆ ಟ್ಯಾಕ್ಸ್ ಹಾಕಲಾಗುವುದಿಲ್ಲ. ಬದಲಾಗಿ, ಬಡ್ಡಿ ಹಣಕ್ಕೆ ಟ್ಯಾಕ್ಸ್ ಇರುತ್ತೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ವಾಷಿಂಗ್ಟನ್, ಮಾರ್ಚ್ 23: ಇರಾನ್ ಜೊತೆಗಿನ ಯುದ್ಧದ ಕಾರ್ಮೋಡ ಸರಿಯುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ. ಇರಾನ್, ಇಸ್ರೇಲ್ ಮತ್ತು ಅಮೆರಿಕದ ನಡುವಿನ ಯುದ್ಧದ ಪರಿಣಾಮವನ್ನು ಗಲ್ಫ್ ರಾಷ್ಟ್ರಗಳೂ ಅನುಭವಿಸಿದ್ದವು. ಇದರ ಪರೋಕ್ಷ ಪರಿಣಾಮವನ್ನು ಭಾರತ ಸೇರಿದಂತೆ ಇತರೆ ದೇಶಗಳೂ ಅನುಭವಿಸಿದ್ದವು. ಜಗತ್ತಿನಾದ್ಯಂತ ತೈಲ, ಇಂಧನದ ಬಿಕ್ಕಟ್ಟು ಎದುರಾಗಿದೆ. ಯುದ್ಧ ಶುರುವಾಗಿ 24 ದಿನಗಳ ನಂತರ ಇದೀಗ ಈ ಯುದ್ಧಕ್ಕೆ ತೆರೆ ಬೀಳುವ ಲಕ್ಷಣಗಳೂ ಗೋಚರಿಸುತ್ತಿವೆ.
ವಿಶ್ವದಾದ್ಯಂತ ಟಿ20 ಲೀಗ್ನ (T20 League) ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದನ್ನು ಗಮನಿಸಿರುವ ನಾನಾ ದೇಶಗಳು ತಮ್ಮ ದೇಶದಲ್ಲೂ ಟಿ20 ಲೀಗ್ಗಳನ್ನು ಆರಂಭಿಸಿವೆ. ಅಂತಹ ದೇಶಗಳ ಸಾಲಿಗೆ ಇದೀಗ ನ್ಯೂಜಿಲೆಂಡ್ ದೇಶವೂ ಸೇರ್ಪಡೆಯಾಗುತ್ತಿದೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಯುನೈಟೆಡ್ ಸ್ಟೇಟ್ಸ್ ಮತ್ತು ದುಬೈ ಈಗಾಗಲೇ ಟಿ20 ಲೀಗ್ಗಳನ್ನು ಪ್ರಾರಂಭಿಸಿ ಸಾಕಷ್ಟು ಯಶಸ್ಸು ಗಳಿಸಿವೆ. ಇದನ್ನು ಗಮನಿಸಿರುವ ನ್ಯೂಜಿಲೆಂಡ್ ತನ್ನದೇ ಆದ ಟಿ20 ಲೀಗ್ ಪ್ರಾರಂಭಿಸಲು ನಿರ್ಧರಿಸಿದೆ. ಈ ಲೀಗ್ನಲ್ಲಿ 6 ತಂಡಗಳು ಭಾಗವಹಿಸಲಿದ್ದು, ಈ ಆರು ತಂಡಗಳು ಐಪಿಎಲ್ನಂತೆಯೇ ಪ್ರತ್ಯೇಕ ಮಾಲೀಕರನ್ನು ಹೊಂದಿರುತ್ತವೆ ಎಂದು ವರದಿಯಾಗಿದೆ. ಹಾಗೆಯೇ ಈ ಲೀಗ್ 2027 ರ ಜನವರಿಯಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಪುರುಷರಿಗೆ ಮಾತ್ರವಲ್ಲದೆ ಮಹಿಳೆಯರಿಗೂ ಈ ಪಂದ್ಯಾವಳಿಯನ್ನು ಪ್ರಾರಂಭಿಸುವುದಾಗಿ ನ್ಯೂಜಿಲೆಂಡ್ ಕ್ರಿಕೆಟ್ ಹೇಳಿದೆ.
ನ್ಯೂಜಿಲೆಂಡ್ ಕ್ರಿಕೆಟ್ ಪ್ರಮುಖ ಘೋಷಣೆ
ಈ ಬಗ್ಗೆ ಮಾಹಿತಿ ನೀಡಿರುವ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಲಿಂಡನ್, ‘NZ20 ಲೀಗ್ ಪ್ರಸ್ತಾವನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಮಂಡಳಿ ಚಿಂತಿಸಿದೆ. ಈ ಲೀಗ್ ಕೇವಲ ಮನರಂಜನೆಯ ಬಗ್ಗೆ ಮಾತ್ರವಲ್ಲ, ಯುವ ಸ್ಥಳೀಯ ಕ್ರಿಕೆಟಿಗರಿಗೆ ಉತ್ತಮ ವೇದಿಕೆಯಾಗಲಿದೆ. ಪ್ರತಿ ತಂಡವು ಸ್ಥಳೀಯ ಸ್ಟಾರ್ ಕ್ರಿಕೆಟಿಗರನ್ನು ಹೊಂದಿರಬೇಕು, ಇದರಿಂದ ಯುವ ಆಟಗಾರರು ಹೆಚ್ಚು ಕಲಿಯಬಹುದು ಎಂದಿದ್ದಾರೆ. ಇನ್ನು ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ನಲ್ಲಿ ನ್ಯೂಜಿಲೆಂಡ್ ತಂಡಗಳನ್ನು ಸೇರಿಸುವ ಬಗ್ಗೆ ಆರಂಭದಲ್ಲಿ ಚರ್ಚೆಗಳು ನಡೆದಿದ್ದರೂ, ಮಂಡಳಿಯು ಅಂತಿಮವಾಗಿ ತಮ್ಮದೇ ಆದ ಲೀಗ್ ಪ್ರಾರಂಭ ಮಾಡುವುದು ಉತ್ತಮ ಎಂದು ನಿರ್ಧರಿಸಿದೆ’ ಎಂದು ಅವರು ಹೇಳಿದ್ದಾರೆ.
ನ್ಯೂಜಿಲೆಂಡ್ ಕ್ರಿಕೆಟ್ಗೆ ಏನು ಲಾಭ?
ನ್ಯೂಜಿಲೆಂಡ್ ಕ್ರಿಕೆಟ್ ಟಿ20 ಫ್ರಾಂಚೈಸ್ ಲೀಗ್ ಪ್ರಾರಂಭಿಸುವುದರಿಂದ ಸಾಕಷ್ಟು ಪ್ರಯೋಜನ ಪಡೆಯಲಿದೆ. ಖಾಸಗಿ ಉದ್ಯಮಿಗಳು ಈ ಲೀಗ್ನಲ್ಲಿ ಹೂಡಿಕೆ ಮಾಡಿದರೆ, ಅದು ಸ್ಪಷ್ಟವಾಗಿ ನ್ಯೂಜಿಲೆಂಡ್ ಮಂಡಳಿಗೆ ಆರ್ಥಿಕವಾಗಿ ಪ್ರಯೋಜನವನ್ನು ನೀಡುತ್ತದೆ ಮತ್ತು ಕಿವಿ ತಂಡಕ್ಕೆ ಯುವ ಆಟಗಾರರ ಆಗಮನ ಹೆಚ್ಚಾಗಲಿದೆ. ನ್ಯೂಜಿಲೆಂಡ್ ಕ್ರಿಕೆಟ್ಗೆ ಹೆಚ್ಚಿನ ಹಣ ಬರುವುದರಿಂದ, ಜನರು ಕ್ರಿಕೆಟ್ನಲ್ಲಿ ಹೆಚ್ಚು ಆಸಕ್ತಿ ಹೊಂದುತ್ತಾರೆ. ನ್ಯೂಜಿಲೆಂಡ್ನಲ್ಲಿ ಕ್ರಿಕೆಟ್ಗಿಂತ ರಗ್ಬಿಗೆ ಆದ್ಯತೆ ನೀಡಲಾಗುತ್ತದೆ. ಕ್ರಿಕೆಟ್ ಆರ್ಥಿಕವಾಗಿ ಬಲಗೊಂಡರೆ, ಅದರ ಅನುಯಾಯಿಗಳು ಮತ್ತಷ್ಟು ಹೆಚ್ಚಾಗುತ್ತಾರೆ.
ಟಿ20 ಲೀಗ್ ಆಯೋಜಿಸುತ್ತಿರುವ ದೇಶಗಳು
ಪ್ರಸ್ತುತ, ಭಾರತ (ಐಪಿಎಲ್) ದಕ್ಷಿಣ ಆಫ್ರಿಕಾ (ಎಸ್ಎ20), ಪಾಕಿಸ್ತಾನ (ಪಿಎಸ್ಎಲ್), ಬಾಂಗ್ಲಾದೇಶ (ಬಿಪಿಎಲ್), ವೆಸ್ಟ್ ಇಂಡೀಸ್ (ಸಿಪಿಎಲ್)ನಲ್ಲಿ ಆಯೋಜನೆಗೊಳ್ಳುತ್ತಿರುವ ಲೀಗ್ಗಳು ಈಗಾಗಲೇ ಯಶಸ್ವಿಯಾಗಿವೆ. ಈ ಲೀಗ್ಗಳು ಹೊಸ ಪ್ರತಿಭೆಗಳನ್ನು ಮುನ್ನೆಲೆಗೆ ತರುತ್ತಿವೆ, ಇದರಿಂದ ಜಾಗತಿಕ ಕ್ರಿಕೆಟ್ ಮಾರುಕಟ್ಟೆಯೂ ಬೆಳೆಯುತ್ತಿದೆ. ಈ ಹೊಸ ಲೀಗ್ನೊಂದಿಗೆ ಜಾಗತಿಕ ಕ್ರಿಕೆಟ್ ನಕ್ಷೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ನ್ಯೂಜಿಲೆಂಡ್ ಆಶಿಸುತ್ತಿದೆ.ಇದೀಗ ಕಿವೀಸ್ ಲೀಗ್ನಲ್ಲಿ ಯಾವ ಐಪಿಎಲ್ ತಂಡದ ಮಾಲೀಕರು ತಂಡಗಳನ್ನು ಖರೀದಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.
ಕಾಲಜ್ಞಾನ ಶಾಸ್ತ್ರದ ಪ್ರಕಾರ 2026ರ ಏಪ್ರಿಲ್ ತಿಂಗಳಲ್ಲಿ ಗ್ರಹಗತಿಗಳ ಬದಲಾವಣೆ ಹಾಗೂ ಗೋಚಾರ ಫಲಗಳ ಆಧಾರದ ಮೇಲೆ ಮೇಷ ರಾಶಿಯವರ ಭವಿಷ್ಯದ ಸಮೀಕ್ಷೆ ಇಲ್ಲಿದೆ. ಈ ತಿಂಗಳು ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡಲಿದ್ದು, ಕೆಲವು ಕ್ಷೇತ್ರಗಳಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯವಾಗಿ ಬೇಕು.
ಉದ್ಯೋಗ ಮತ್ತು ವೃತ್ತಿ ಜೀವನ
ಉದ್ಯೋಗ ಕ್ಷೇತ್ರದಲ್ಲಿ ಈ ತಿಂಗಳು ಸಮಾಧಾನಕರವಾದ ಪರಿಸ್ಥಿತಿ ಇರಲಿದೆ. ಶನಿಯ ಪ್ರಭಾವದಿಂದ ಕೆಲಸದಲ್ಲಿ ಹೆಚ್ಚಿನ ಒತ್ತಡ ಅಥವಾ ಜವಾಬ್ದಾರಿಗಳು ಹೆಗಲಿಗೆ ಬೀಳಬಹುದು. ಸಹೋದ್ಯೋಗಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಇರುವುದರಿಂದ ತಾಳ್ಮೆಯಿಂದ ವರ್ತಿಸುವುದು ಒಳಿತು. ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ತಿಂಗಳ ದ್ವಿತೀಯಾರ್ಧದಲ್ಲಿ ಉತ್ತಮ ಅವಕಾಶಗಳು ದೊರೆಯಬಹುದು.
ವಿದ್ಯಾಭ್ಯಾಸ
ವಿದ್ಯಾರ್ಥಿಗಳಿಗೆ ಈ ಸಮಯವು ಬಹಳ ಅನುಕೂಲಕರವಾಗಿದೆ. ಬುಧನ ಶುಭ ದೃಷ್ಟಿಯಿಂದ ಏಕಾಗ್ರತೆ ಹೆಚ್ಚಾಗಲಿದೆ. ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರಿಗೆ ಹಿರಿಯರ ಮಾರ್ಗದರ್ಶನ ಮತ್ತು ಉತ್ತಮ ಫಲಿತಾಂಶದ ಸೂಚನೆಗಳಿವೆ. ಸಂಶೋಧನೆ ಅಥವಾ ಶಾಸ್ತ್ರೀಯ ಅಧ್ಯಯನದಲ್ಲಿ ತೊಡಗಿರುವವರಿಗೆ ಹೊಸ ಆಯಾಮಗಳು ಗೋಚರಿಸಲಿವೆ.
ಹಣಕಾಸು ಮತ್ತು ಆರ್ಥಿಕ ಸ್ಥಿತಿ
ಆರ್ಥಿಕವಾಗಿ ಈ ತಿಂಗಳು ಏರಿಳಿತಗಳಿಂದ ಕೂಡಿರುತ್ತದೆ. ಆದಾಯದ ಮೂಲಗಳು ಉತ್ತಮವಾಗಿದ್ದರೂ, ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಕೃಷಿ ಭೂಮಿ ಅಥವಾ ಆಸ್ತಿಯಿಂದ ಬರಬೇಕಾದ ಲಾಭಗಳು ಸ್ವಲ್ಪ ವಿಳಂಬವಾಗಬಹುದು. ಹೂಡಿಕೆ ಮಾಡುವ ಮುನ್ನ ಅನುಭವೀ ವ್ಯಕ್ತಿಗಳ ಸಲಹೆ ಪಡೆಯುವುದು ಉತ್ತಮ. ಲಾಟರಿ ಅಥವಾ ಶೇರ್ ಮಾರ್ಕೆಟ್ನಂತಹ ಸಾಹಸಗಳಿಗೆ ಕೈಹಾಕದಿರುವುದು ಸೂಕ್ತ.
ವಿವಾಹ ಮತ್ತು ಕೌಟುಂಬಿಕ ಜೀವನ
ಕುಟುಂಬದಲ್ಲಿ ಮಂಗಳ ಕಾರ್ಯಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ ಹೆಚ್ಚಿದೆ. ದಾಂಪತ್ಯ ಜೀವನದಲ್ಲಿ ಪರಸ್ಪರ ಅರ್ಥೈಸಿಕೊಳ್ಳುವಿಕೆ ಹೆಚ್ಚಾಗಲಿದ್ದು, ಪತ್ನಿಯ ಬೆಂಬಲವು ನಿಮ್ಮ ಕೆಲಸ ಕಾರ್ಯಗಳಲ್ಲಿ ಸ್ಫೂರ್ತಿ ನೀಡಲಿದೆ. ಸಂಬಂಧಿಕರ ಭೇಟಿಯಿಂದ ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ.
ವಿದೇಶ ಪ್ರವಾಸ
ವಿದೇಶ ಪ್ರವಾಸದ ಆಕಾಂಕ್ಷೆ ಹೊಂದಿರುವವರಿಗೆ ಈ ತಿಂಗಳು ಅಡೆತಡೆಗಳು ಎದುರಾಗಬಹುದು. ವೀಸಾ ಸಂಬಂಧಿತ ಕೆಲಸಗಳಲ್ಲಿ ವಿಳಂಬ ಅಥವಾ ತಾಂತ್ರಿಕ ತೊಂದರೆಗಳು ಕಾಣಿಸಿಕೊಳ್ಳಬಹುದು. ಪ್ರವಾಸಕ್ಕೆ ಯೋಜನೆ ಹಾಕಿದ್ದಲ್ಲಿ, ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ. ಸದ್ಯಕ್ಕೆ ದೂರದ ಪ್ರಯಾಣಕ್ಕಿಂತ ಸ್ಥಳೀಯ ಪ್ರವಾಸಗಳು ಹೆಚ್ಚು ಸುಖಕರವಾಗಿರುತ್ತವೆ.
ಸಾಲ ಮತ್ತು ಋಣ ಬಾಧೆ
ಹಳೆಯ ಸಾಲಗಳನ್ನು ತೀರಿಸಲು ನೀವು ಪ್ರಯತ್ನ ನಡೆಸಲಿದ್ದೀರಿ. ಆದರೆ ಹೊಸದಾಗಿ ಯಾರಿಗೂ ಸಾಲ ನೀಡಬೇಡಿ ಅಥವಾ ದೊಡ್ಡ ಮೊತ್ತದ ಸಾಲಕ್ಕೆ ಸಹಿ ಹಾಕಬೇಡಿ. ಶತ್ರುಗಳ ಕಾಟ ಕಡಿಮೆಯಾಗಿದ್ದರೂ, ಹಣಕಾಸಿನ ವಿಚಾರದಲ್ಲಿ ಯಾರನ್ನೂ ಅತಿಯಾಗಿ ನಂಬುವುದು ಬೇಡ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದರಿಂದ ಸಾಲದ ಸುಳಿಗೆ ಸಿಲುಕುವುದನ್ನು ತಪ್ಪಿಸಬಹುದು.
ಪ್ರತಿದಿನ ಸುಬ್ರಹ್ಮಣ್ಯ ಸ್ವಾಮಿಯ ಸ್ತೋತ್ರ ಪಠಣ, ದರ್ಶನ, ಸೇವೆ, ಆರಾಧನೆ ಮಾಡುವುದು ಹಾಗೂ ಮಂಗಳವಾರದಂದು ದೀಪ ಹಚ್ಚುವುದು ಶ್ರೇಯಸ್ಕರ.
– ಲೋಹಿತ ಹೆಬ್ಬಾರ್
ನೆಲಮಂಗಲ, ಮಾರ್ಚ್ 23: ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ಮನೆ ಕಳ್ಳತನವಾಗಿದ್ದು (house theft), 5 ಲಕ್ಷ ರೂ ಬೆಲೆ ಬಾಳುವ ಗ್ರಾಂ ಚಿನ್ನ, 5 ಲಕ್ಷ ರೂ ಬೆಲೆ ಬಾಳುವ 2 ಕೆಜಿ ಬೆಳ್ಳಿ ವಸ್ತು ಹಾಗೂ ನಗದು ಸೇರಿದಂತೆ 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಖತರ್ನಾಕ್ ಕಳ್ಳರು ದೋಚಿದ್ದಾರೆ. ನವೀನ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಮಾಚೋಹಳ್ಳಿಯಲ್ಲಿ ನವೀನ್ ಎಂಬುವವರು ತಮ್ಮ ಪತ್ನಿ ಹಾಗೂ ತಾಯಿಯೊಂದಿಗೆ ವಾಸವಿದ್ದಾರೆ. ಪತ್ನಿ ಬಾಣಂತಿ ಆಗಿದ್ದರಿಂದ ಕಳೆದ ಎರಡು ದಿನದ ಹಿಂದೆ ತವರು ಮನೆಗೆ ತೆರಳಿದ್ದರು. ಈ ಮಧ್ಯೆ ಮಗುವಾಗಿದೆ. ಹೀಗಾಗಿ ಹೆಂಡತಿ ಹಾಗೂ ಮಗುವನ್ನ ನೊಡಿ ಬರಲು ನವೀನ್ ತಮ್ಮ ತಾಯಿ ಜೊತೆಗೆ ತೆರಳಿದ್ದಾರೆ.
ಬರೋಬ್ಬರಿ 10 ಲಕ್ಷ ರೂ ಬೆಲೆಬಾಳುವ ಚಿನ್ನಾಭರಣ ಕಳ್ಳತನ
ಅತ್ತ ನವೀನ್ ಹೋಗುತ್ತಿದ್ದಂತೆ ಹೊಂಚು ಹಾಕಿ ಕುಳಿತ್ತಿದ್ದ ಖದೀಮರು ತಮ್ಮ ಕೈಚಳಕ ತೋರಿದ್ದಾರೆ. ಮನೆ ಬಾಗಿಲು ಮುರಿದು ಒಳಹೊಕ್ಕ ಕಳ್ಳರು ನಗದು ಸೇರಿದಂತೆ ಬರೋಬ್ಬರಿ 10 ಲಕ್ಷ ರೂ ಬೆಲೆಬಾಳುವ ಚಿನ್ನಾಭರಣ ಎಗರಿಸಿ ಪರಾರಿ ಆಗಿದ್ದಾರೆ. ನವೀನ್ ತಮ್ಮ ಹೆಂಡತಿ ಊರಿಗೆ ತೆರಳಿದ 24 ಗಂಟೆಯೊಳಗೆ ಅನಾಹುತ ನಡೆದಿದೆ.
ಇನ್ನು ಮನೆ ಎದುರಿನ ನಿವಾಸಿ ಸಿಸಿಟಿವಿ ಮುರಿದು ಹೋಗಿರುವುದನ್ನ ಗಮನಿಸಿ ನವೀನ್ಗೆ ಕರೆ ಮಾಡಿದ್ದಾರೆ. ಈ ವೇಳೆ ವಿಡಿಯೋಕಾಲ್ ಮೂಲಕ ನೋಡಿದಾಗ ಮನೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಇನ್ನು ಘಟನೆ ಸಂಬಂಧ ಅಪರಿಚಿತ ವ್ಯಕ್ತಿಗಳು ಮನೆ ಮುಂದೆ ಓಡಾಡಿರುವ ಪತ್ತೆ ಆಗಿದೆ. ಬೆಳಿಗ್ಗೆ ಮನೆ ಮುಂದೆ ಮೂವರು ಅಪರಿಚಿತ ಓಡಾಡಿದ್ದು, ರಾತ್ರಿ ಕಳ್ಳತನ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸದ್ಯ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲಿಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.
ಬೆಂಗಳೂರು, (ಮಾರ್ಚ್ 23): ನಗರದ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ (luxury car drifting Case) ವಿಡಿಯೋ ಬೆಚ್ಚಿಬೀಳಿಸಿದ್ದು, ಎಲ್ಲೆಡೆ ಫುಲ್ ವೈರಲ್ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು, ದಿವಂಗತ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ (Rikki Rai) ಹೆಸರು ಕೇಳಿಬಂದಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ರಿಕ್ಕಿ ರೈ ವಿರುದ್ಧದ ಎಫ್ಐಆರ್ ದಾಖಲಿಸಿ ನೋಟಿಸ್ ಜಾರಿ ಮಾಡಲಾಗಿದೆ. ಇದರ ಬೆನ್ನಲ್ಲೇ ಇತ್ತ ರಿಕ್ಕಿ ರೈ ಬೆಂಗಳುರಿನ 5ನೇ ಎಸಿಎಂಎಂ ಕೋರ್ಟ್ನಿಂದ ಜಾಮೀನು ಪಡೆದುಕೊಂಡಿದ್ದಾರೆ.
ಡ್ರಿಪ್ಟಿಂಗ್ ವಿಡಿಯೋ ವೈರಲ್
ಮಾರ್ಚ್ 21ರ ಮಧ್ಯರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಲ್ಯಾಬೋರ್ಗಿನಿ ಕಾರು (ಕೆಎ-05, ಎನ್ಆರ್-0009) ಶಿವಾಜಿನಗರ ಕಡೆಯಿಂದ ಅನಿಲ್ ಕುಂಬ್ಳೆ ವೃತ್ತಕ್ಕೆ ಅತಿ ವೇಗವಾಗಿ ಬಂದಿತ್ತು. ಬಳಿಕ ಕಾರು ಚಾಲಕ ಅದೇ ವೃತ್ತದಲ್ಲಿಕಾರನ್ನು ಎರಡು ಸುತ್ತು ಅತಿ ವೇಗವಾಗಿ ತಿರುಗಿಸಿದ್ದ. ನಂತರ ಶಿವಾಜಿನಗರದ ಕಡೆಗೆ ಶರವೇಗದಲ್ಲಿ ಕಾರು ಚಾಲನೆ ಮಾಡಿಕೊಂಡು ಹೋಗಿದ್ದ. ಕಾರು ಚಾಲಕನ ಅಪಾಯಕಾರಿ ಚಾಲನೆಯ ವಿಡಿಯೊ ಸಮೀಪದ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ಪೊಲೀಸರು ಕಾರು ಸಂಚರಿಸಿದ ಮಾರ್ಗದುದ್ದಕ್ಕೂ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಅದರಲ್ಲಿ ರಿಕ್ಕಿ ರೈ ಸ್ವತಃ ವಾಹನ ಚಲಾಯಿಸುತ್ತಿರುವುದು ದೃಢಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಿಕ್ಕಿ ರೈ ವಿರುದ್ಧ IMV 184, 189,BNS 281 ಅಡಿ ಎಫ್ ಐ ಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ರಿಕ್ಕಿ ರೈ ನಿರೀಕ್ಷಣಾ ಜಾಮೀನು ಮೊರೆ ಕೋರ್ಟ್ ಮೆಟ್ಟಿಲೇರಿದ್ದರು.
ಲ್ಯಾಂಬೋರ್ಗಿನಿ ಕಾರು ರಿಕ್ಕಿ ರೈ ಅವರಿಗೆ ಸೇರಿದೆ ಎಂದು ಗೊತ್ತಾಗಿದ್ದು, ಸದಾಶಿವನಗರದಲ್ಲಿನ ಅವರ ನಿವಾಸದಲ್ಲಿಕಾರನ್ನು ವಶಕ್ಕೆ ಪಡೆದಿದ್ದಾರೆ. ಆದ್ರೆ, ಕಾರು ಯಾರು ಚಾಲನೆ ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮಾರ್ಚ್ 2026ರ ಈ ಅವಧಿಯಲ್ಲಿ ಮೀನ ರಾಶಿಯಲ್ಲಿ ಶನಿ ಮತ್ತು ಸೂರ್ಯರ ಸಂಯೋಗ ಸಂಭವಿಸುತ್ತಿದೆ. ಕಾಲಜ್ಞಾನ ಶಾಸ್ತ್ರದ ಪ್ರಕಾರ ಸೂರ್ಯ ತಂದೆ ಮತ್ತು ಶನಿ ಮಗ. ಇಬ್ಬರೂ ಪರಸ್ಪರ ಶತ್ರು ಗ್ರಹಗಳು. ಈ ಇಬ್ಬರೂ ಒಂದೇ ರಾಶಿಯಲ್ಲಿದ್ದಾಗ ಸಂಘರ್ಷ, ಶಿಸ್ತು ಮತ್ತು ಪರಿವರ್ತನೆಯ ಕಾಲಘಟ್ಟ ನಿರ್ಮಾಣವಾಗುತ್ತದೆ.
ಈ ಸಂಯೋಗದಿಂದ ಯಾವ ರಾಶಿಯವರಿಗೆ ಶುಭ ಮತ್ತು ಅಶುಭ ಫಲಗಳ ಮಿಶ್ರಣವಿರಲಿದೆ ಎಂಬ ವಿವರ ಇಲ್ಲಿದೆ.
ಮೀನ ರಾಶಿ :
ಈ ಸಂಯೋಗ ನಿಮ್ಮ ಸ್ವಂತ ರಾಶಿಯಲ್ಲೇ ನಡೆಯುತ್ತಿರುವುದರಿಂದ ನೀವು ಹೆಚ್ಚಿನ ಮಿಶ್ರಫಲ ಅನುಭವಿಸುವಿರಿ. ವೃತ್ತಿಜೀವನದಲ್ಲಿ ದೊಡ್ಡ ಜವಾಬ್ದಾರಿಗಳು ಅರಸಿ ಬರುತ್ತವೆ. ಸಮಾಜದಲ್ಲಿ ಗೌರವ ಹೆಚ್ಚಾಗಬಹುದು. ಮಾನಸಿಕ ಒತ್ತಡ, ಅನಗತ್ಯ ಭಯ ಮತ್ತು ಆರೋಗ್ಯದಲ್ಲಿ ಏರುಪೇರಾಗಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲ ಉಂಟಾಗಬಹುದು.
ಕನ್ಯಾ ರಾಶಿ :
ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ಅಂದರೆ ಸಪ್ತಮ ಭಾವ ಈ ಯುತಿ ನಡೆಯುತ್ತಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಹೊಸ ಆಯಾಮಗಳು ತೆರೆದುಕೊಳ್ಳುತ್ತವೆ. ಹಳೆಯ ಬಾಕಿ ಕೆಲಸಗಳು ಪೂರ್ಣಗೊಳ್ಳಬಹುದು. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸಾರ್ವಜನಿಕ ಜೀವನದಲ್ಲಿ ಟೀಕೆಗಳನ್ನು ಎದುರಿಸಬೇಕಾಗಬಹುದು.
ಸಿಂಹ ರಾಶಿ :
ನಿಮ್ಮ ರಾಶ್ಯಾಧಿಪತಿ ಸೂರ್ಯ ಎಂಟನೇ ರಾಶಿಯಲ್ಲಿ ಶನಿಯೊಂದಿಗೆ ಇರುವುದರಿಂದ ಜಾಗರೂಕತೆ ಅಗತ್ಯ. ನಿಗೂಢ ಶಾಸ್ತ್ರಗಳಲ್ಲಿ ಆಸಕ್ತಿ ಹೆಚ್ಚುವುದು. ಪಿತ್ರಾರ್ಜಿತ ಆಸ್ತಿಯಿಂದ ಅನಿರೀಕ್ಷಿತ ಲಾಭವಾಗಬಹುದು. ಸರ್ಕಾರಿ ಕೆಲಸಗಳಲ್ಲಿ ಅಡೆತಡೆಗಳು ಎದುರಾಗಬಹುದು. ಆರೋಗ್ಯದ ದೃಷ್ಟಿಯಿಂದ ಇದು ಸ್ವಲ್ಪ ಕಠಿಣ ಸಮಯ. ವಾಹನ ಚಾಲನೆಯಲ್ಲಿ ಎಚ್ಚರವಿರಲಿ.
ಕುಂಭ ರಾಶಿ :
ನಿಮ್ಮ ರಾಶಿಯಿಂದ ಎರಡನೇ ರಾಶಿಯಲ್ಲಿ ಈ ಸಂಯೋಗ ಆಗಲಿದೆ. ಸ್ಥಿರ ಆಸ್ತಿಯಲ್ಲಿ ಹೂಡಿಕೆ ಮಾಡಲು ಅವಕಾಶ ಸಿಗಲಿದೆ. ಕುಟುಂಬದ ಹಿರಿಯರಿಂದ ಮಾರ್ಗದರ್ಶನ ದೊರೆಯುತ್ತದೆ. ಹಣಕಾಸಿನ ಹರಿವು ಇದ್ದರೂ ಉಳಿತಾಯ ಮಾಡುವುದು ಕಷ್ಟವಾಗಬಹುದು. ಮಾತಿನಿಂದಾಗಿ ಆಪ್ತರೊಂದಿಗೆ ಕಹಿಯಾದ ಸಂಬಂಧ ಉಂಟಾಗುವ ಸಾಧ್ಯತೆ ಇದೆ.
ಈ ಅವಧಿಯಲ್ಲಿ ಸೂರ್ಯ ಮತ್ತು ಶನಿಯ ಅಶುಭ ಪ್ರಭಾವ ತಗ್ಗಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು. ಶನಿ ಚಾಲೀಸಾ ಅಥವಾ ಹನುಮಾನ್ ಚಾಲೀಸಾ ಪಠಿಸುವುದು. ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ನಮಸ್ಕಾರ ಅರ್ಪಿಸುವುದು. ಶನಿವಾರದಂದು ಕಪ್ಪು ಎಳ್ಳನ್ನು ಸಂಕಲ್ಪ ಪೂರ್ವಕ ದಾನ ಮಾಡುವುದು.