ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಭಾರಿ ಪ್ರಶಂಸೆ ಗಳಿಸಿದ್ದ ‘ವಲವಾರ’ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಇಬ್ಬರು ಮಕ್ಕಳು ಮತ್ತು ಹಸುವಿನ ಸುತ್ತ ನಡೆಯುವ ಈ ಕತೆ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ಈ ಸಿನಿಮಾವನ್ನು ಸನ್ನೆಕ್ಸ್ಟ್ನಲ್ಲಿ ವೀಕ್ಷಿಸಬಹುದು.
ಅರ್ಜುನ್ ಸರ್ಜಾ ನಿರ್ದೇಶಿಸಿ, ಅವರ ಪುತ್ರಿ ಐಶ್ವರ್ಯಾ ನಾಯಕಿಯಾಗಿ, ಉಪೇಂದ್ರ ಅವರ ಅಣ್ಣನ ಪುತ್ರ ನಿರಂಜನ್ ನಾಯಕನಾಗಿ ನಟಿಸಿರುವ ‘ಸೀತಾಪಯಣ’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಸನ್ನೆಕ್ಸ್ಟ್ನಲ್ಲಿ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ.
‘ಪೀಕಿ ಬ್ಲೈಂಡರ್ಸ್’ ಜನಪ್ರಿಯ ವೆಬ್ ಸರಣಿ ಆಸ್ಕರ್ ವಿಜೇತ ಕಿಲಿಯನ್ ಮರ್ಫಿ ನಟಿಸಿರುವ ಈ ವೆಬ್ ಸರಣಿಯನ್ನು ಇದೀಗ ಸಿನಿಮಾ ಮಾಡಲಾಗಿದ್ದು, ಸಿನಿಮಾಕ್ಕೆ ‘ಪೀಕಿ ಬ್ಲೈಂಡರ್ಸ್: ದಿ ಇಮ್ಮಾರ್ಟಲ್ ಮ್ಯಾನ್’ ಎಂದು ಹೆಸರಿಡಲಾಗಿದೆ. ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜೀತ್ ದೊಸ್ಸಾಂಜ್ ಇನ್ನೂ ಕೆಲವು ಸ್ಟಾರ್ ನಟರು ನಟಿಸಿರುವ ‘ಬಾರ್ಡರ್ 2’ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಈ ಸಿನಿಮಾ 1971ರ ಇಂಡೊ-ಪಾಕಿಸ್ತಾನ ಯುದ್ಧದ ಕುರಿತಾದ ಕತೆಯನ್ನು ಒಳಗೊಂಡಿದೆ. ಇದೀಗ ಸಿನಿಮಾ ನೆಟ್ಫ್ಲಿಕ್ಸ್ಟ್ನಲ್ಲಿ ಬಿಡುಗಡೆ ಆಗಿದೆ.
ಕೊಲೆಗಳ ತನಿಖೆ ನಡೆಸಲು ಹೋದ ಯುವಕನಿಗೆ ಚಿತ್ರ ವಿಚಿತ್ರಗಳು ಎದುರಾಗುತ್ತದೆ. ಸುರ ಮತ್ತು ಅಸುರರ ಕತೆಯನ್ನು ಒಳಗೊಂಡ ತೆಲುಗು ಸಿನಿಮಾ ‘ಜಟಾಧರ’ ಜೀ5 ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಸುಧೀರ್ ಬಾಬು ಮತ್ತು ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹ ನಟಿಸಿದ್ದಾರೆ.
ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಜಡೇಶ್ ಹಂಪಿ ನಿರ್ದೇಶನ ಮಾಡಿರುವ ‘ಲ್ಯಾಂಡ್ಲಾರ್ಡ್’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಸಿನಿಮಾವನ್ನು ಜೀ5 ನಲ್ಲಿ ವೀಕ್ಷಿಸಬಹುದಾಗಿದೆ.
ಐಪಿಎಲ್ ಎಂದರೆ ಬೌಂಡರಿ ಮತ್ತು ಸಿಕ್ಸರ್ಗಳ ಅಬ್ಬರ. ಇಲ್ಲಿ ಬ್ಯಾಟ್ಸ್ಮನ್ಗಳಿಗೆ ಸಿಗುವಷ್ಟು ಮನ್ನಣೆ ಬೌಲರ್ಗಳಿಗೆ ಸಿಗುವುದಿಲ್ಲ. ಅದರಲ್ಲೂ ತಂಡದಲ್ಲಿ ಸಿಕ್ಸ್ ಹಿಟ್ಟರ್ಗಳ ದಂಡೇ ಇದ್ದರೆ ಆ ತಂಡಕ್ಕೆ ಅಭಿಮಾನಿಗಳ ಬಳಗ ಹೆಚ್ಚಿರುತ್ತದೆ. ಅದರಂತೆ ಅಭಿಮಾನಿಗಳನ್ನು ರಂಜಿಸಿ ಇದುವರೆಗೆ ನಡೆದಿರುವ 18 ಆವೃತ್ತಿಗಳ ಐಪಿಎಲ್ನಲ್ಲಿ ಯಾವ ತಂಡ ಹೆಚ್ಚು ಸಿಕ್ಸ್ಗಳನ್ನು ಹೊಡೆದಿದೆ ಎಂಬುದನ್ನು ನೋಡುವುದಾದರೆ..
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ತಂಡಗಳ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿಯವರೆಗೆ, ತಂಡವು ಒಟ್ಟು 1823 ಸಿಕ್ಸರ್ಗಳನ್ನು ಬಾರಿಸಿದೆ. ಇದಕ್ಕೆ ಪ್ರಮುಖ ಕಾರಣ ಈ ತಂಡದಲ್ಲಿ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯರಂತಹ ಶಕ್ತಿಶಾಲಿ ಹಿಟ್ಟರ್ಗಳ ಉಪಸ್ಥಿತಿ.
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರರು, ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರಂತಹ ವಿಶ್ವ ದರ್ಜೆಯ ಹಿಟ್ಟರ್ಗಳು ತಂಡದಲ್ಲಿ ಆಡಿದ್ದರ ಪರಿಣಾಮವಾಗಿ ಆರ್ಸಿಬಿ ಇದುವರೆಗೆ 1774 ಸಿಕ್ಸರ್ಗಳನ್ನು ಬಾರಿಸಿದೆ. ಮುಂಬೈ ಮತ್ತು ಆರ್ಸಿಬಿ ನಡುವಿನ ಅಂತರವು ತುಂಬಾ ಕಡಿಮೆ ಇದ್ದು, ಈ ಆವೃತ್ತಿಯಲ್ಲಿ ಆರ್ಸಿಬಿ ಈ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಳ್ಳಲು ಪ್ರಯತ್ನಿಸಲಿದೆ.
ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಈ ಪಟ್ಟಿಯಲ್ಲಿ 1610 ಸಿಕ್ಸರ್ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಧೋನಿ ನೇತೃತ್ವದ ಈ ತಂಡ ಯಾವಾಗಲೂ ಸ್ಥಿರ ಪ್ರದರ್ಶನ ನೀಡುತ್ತಿದೆ. ಆದಾಗ್ಯೂ, ಕಳೆದ ಕೆಲವು ಆವೃತ್ತಿಗಳಲ್ಲಿ, ಮುಂಬೈ ಮತ್ತು ಆರ್ಸಿಬಿಗೆ ಹೋಲಿಸಿದರೆ ಸಿಕ್ಸರ್ಗಳನ್ನು ಬಾರಿಸುವ ವಿಚಾರದಲ್ಲಿ ಸಿಎಸ್ಕೆ ಹಿಂದೆ ಬಿದ್ದಿದೆ. ಆದಾಗ್ಯೂ, ಟಾಪ್ 3 ರಲ್ಲಿರುವುದು ಸಿಎಸ್ಕೆಯ ಬ್ಯಾಟಿಂಗ್ ಬಲಕ್ಕೆ ಸಾಕ್ಷಿಯಾಗಿದೆ. ಸುರೇಶ್ ರೈನಾ, ಶೇನ್ ವ್ಯಾಟ್ಸನ್ ಮತ್ತು ಸ್ವತಃ MS ಧೋನಿ ಬಾರಿಸಿದ ಬೃಹತ್ ಸಿಕ್ಸರ್ಗಳು ಈ ದಾಖಲೆಗೆ ಪ್ರಮುಖ ಕಾರಣಗಳಾಗಿವೆ.
ಕಳೆದ ಕೆಲವು ವರ್ಷಗಳಲ್ಲಿ ಐಪಿಎಲ್ನಲ್ಲಿ ಬ್ಯಾಟಿಂಗ್ ಶೈಲಿ ಸಂಪೂರ್ಣವಾಗಿ ಬದಲಾಗಿದೆ. ಹಳೆಯ ತಂಡಗಳು ಮಾತ್ರವಲ್ಲ, ಸನ್ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಂತಹ ತಂಡಗಳು ಸಹ ಸಿಕ್ಸರ್ಗಳ ಮಳೆ ಸುರಿಸುತ್ತಿವೆ. 2024 ರ ಆವೃತ್ತಿಯಲ್ಲಿ ಎಸ್ಆರ್ಹೆಚ್ 178 ಸಿಕ್ಸರ್ಗಳನ್ನು ಬಾರಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು.
ಅದೇ ರೀತಿ, 2025 ರಲ್ಲಿ, ಪಂಜಾಬ್ ಕಿಂಗ್ಸ್ 173 ಸಿಕ್ಸರ್ಗಳನ್ನು ಬಾರಿಸುವ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸಿತು. ಇದರರ್ಥ ಈ ಸಣ್ಣ ತಂಡಗಳು ಮುಂಬರುವ ದಿನಗಳಲ್ಲಿ ಸಾರ್ವಕಾಲಿಕ ದಾಖಲೆಗಳನ್ನು ಪುನಃ ಬರೆಯುವ ಸಾಧ್ಯತೆಯಿದೆ. ಐಪಿಎಲ್ 2026 ರಲ್ಲಿ ಈ ಸಿಕ್ಸರ್ಗಳ ಯುದ್ಧ ಎಷ್ಟು ರಸಭರಿತವಾಗುತ್ತದೆ ಎಂದು ಕಾದು ನೋಡೋಣ.
ದೆಹಲಿ, ಮಾ.21: ಕಳೆದ ಕೆಲವು ದಿನಗಳಿಂದ ಎಲ್ಪಿಜಿ (LPG) ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್, ರೆಸ್ಟೋರೆಂಟ್ ಮತ್ತು ಆಹಾರ ಸಂಸ್ಕರಣಾ ಘಟಕಗಳಿಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಮಹತ್ವದ ಸಮಾಧಾನ ನೀಡಿದೆ. ರಾಜ್ಯಗಳಿಗೆ ಹೆಚ್ಚುವರಿಯಾಗಿ ಶೇ. 20ರಷ್ಟು ಅನಿಲ ಹಂಚಿಕೆ ಮಾಡಲು ನಿರ್ಧರಿಸಲಾಗಿದ್ದು, ಇದರಿಂದ ಒಟ್ಟು ಹಂಚಿಕೆ ಪ್ರಮಾಣ ಶೇಕಾಡ. ಶೇಕಾಡ 50ರ ಮಟ್ಟಕ್ಕೆ ತಲುಪಲಿದೆ. ಮಾರ್ಚ್ 23, 2026ರಿಂದ (ಸೋಮವಾರ) ಜಾರಿಗೆ ಬರುವಂತೆ ರಾಜ್ಯಗಳಿಗೆ ಹೆಚ್ಚುವರಿ ಶೇ. 20ರಷ್ಟು LPG ಹಂಚಿಕೆ ಮಾಡಲಾಗುವುದು. ಮುಂದಿನ ಆದೇಶದವರೆಗೆ ಈ ವ್ಯವಸ್ಥೆ ಜಾರಿಯಲ್ಲಿರುತ್ತದೆ.
ಈ ಹೆಚ್ಚುವರಿ ಅನಿಲವನ್ನು ಪ್ರಮುಖವಾಗಿ ರೆಸ್ಟೋರೆಂಟ್, ಧಾಬಾ, ಹೋಟೆಲ್, ಕೈಗಾರಿಕಾ ಕ್ಯಾಂಟೀನ್, ಆಹಾರ ಸಂಸ್ಕರಣೆ ಮತ್ತು ಡೈರಿ ಕ್ಷೇತ್ರಗಳಿಗೆ ಆದ್ಯತೆಯ ಮೇಲೆ ನೀಡಲು ಸೂಚಿಸಲಾಗಿದೆ. ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ನಡೆಸುವ ಸಬ್ಸಿಡಿ ಊಟದ ಕೇಂದ್ರಗಳು ಮತ್ತು ಸಮುದಾಯ ಅಡುಗೆ ಮನೆಗಳಿಗೆ (Community Kitchens) ತಡೆರಹಿತ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.
ವಲಸೆ ಕಾರ್ಮಿಕರ ಹಿತದೃಷ್ಟಿಯಿಂದ ಅವರಿಗೆ 5 ಕೆಜಿ ಸಣ್ಣ ಸಿಲಿಂಡರ್ (FTL) ಒದಗಿಸುವ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಹೆಚ್ಚುವರಿ ಅನುದಾನವು ಕೇವಲ ನಿಗದಿಪಡಿಸಿದ ವಲಯಗಳಿಗೆ ತಲುಪುವಂತೆ ನೋಡಿಕೊಳ್ಳಲು ಮತ್ತು ಕಾಳಸಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೆಟ್ರೋಲಿಯಂ ಇಲಾಖೆ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಬೆಂಗಳೂರು, ಮಾ.21: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದ್ದರೂ ರಾಜ್ಯದಲ್ಲಿ ಬಸ್ ಟಿಕೆಟ್ ದರವನ್ನು ಹೆಚ್ಚಿಸುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಟಿಕೆಟ್ ದರ ಏರಿಸಲು ಸದ್ಯಕ್ಕೆ ಅಧಿಕಾರವಿಲ್ಲ ಎಂದು ತಿಳಿಸಿರುವ ಸಚಿವರು, ದರ ಹೆಚ್ಚಳದ ನಿರ್ಧಾರವನ್ನು ತಿರಸ್ಕರಿಸಿದ್ದಾರೆ. ಇಂಧನ ಬೆಲೆ ಏರಿಕೆಗೆ ಜಾಗತಿಕ ಯುದ್ಧದ ಪರಿಸ್ಥಿತಿಯೇ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಯುದ್ಧ ನಿಂತರೆ ಬೆಲೆಗಳು ತಾನಾಗಿಯೇ ಕಡಿಮೆಯಾಗುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಮಲಿಂಗಾರೆಡ್ಡಿ, ಹಿಂದಿನ ದಿನಗಳಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದಾಗಲೂ ಕೇಂದ್ರ ಸರ್ಕಾರ ಜನರಿಗೆ ಯಾವುದೇ ಪ್ರಯೋಜನವನ್ನು ತಲುಪಿಸಲಿಲ್ಲ ಎಂದು ಆರೋಪಿಸಿದರು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 100-130 ಡಾಲರ್ ಇದ್ದ ಕಚ್ಚಾ ತೈಲಕ್ಕೆ ಸಬ್ಸಿಡಿ ನೀಡಲಾಗಿತ್ತು. ಆದರೆ, ಆ ನಂತರದ 10-12 ವರ್ಷಗಳ ಕಾಲ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದಾಗಲೂ ಕೇಂದ್ರ ಸರ್ಕಾರ ಲಾಭ ಮಾಡಿಕೊಂಡಿತೇ ಹೊರತು ಜನರಿಗೆ ಇದರ ಲಾಭ ಸಿಗಲಿಲ್ಲ ಎಂದು ಹೇಳಿದರು. ರಾಜ್ಯ ಸರ್ಕಾರ ಬಸ್ ದರ ಹೆಚ್ಚಿಸುವುದಿಲ್ಲ, ಕೇಂದ್ರ ಸರ್ಕಾರ ಇಂಧನ ಬೆಲೆ ಹೆಚ್ಚಳ ಮಾಡಬಹುದು ಎಂದು ಅವರು ಪುನರುಚ್ಚರಿಸಿದರು.
2026 ರ ಐಪಿಎಲ್ ಆರಂಭಕ್ಕೂ ಮುನ್ನ ಸ್ಟಾರ್ ಆಟಗಾರರ ಇಂಜುರಿ ಸಮಸ್ಯೆ ಪ್ರತಿ ತಂಡವನ್ನು ಕಾಡುತ್ತಿದೆ. ಈಗಾಗಲೇ ಕೆಲವು ತಂಡಗಳ ಸ್ಟಾರ್ ಆಟಗಾರರು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇನ್ನು ಕೆಲವು ತಂಡಗಳಲ್ಲಿ ಗಾಯದ ಮೇಲೆ ಬರೆ ಎಂಬಂತೆ ಎರಡಕ್ಕಿಂತ ಹೆಚ್ಚು ಆಟಗಾರರು ಗಾಯಕ್ಕೆ ತುತ್ತಾಗಿದ್ದಾರೆ. ಇದರಲ್ಲಿ ಕೆಲವರು ಲೀಗ್ನಿಂದ ಹೊರಬಿದಿದ್ದರೆ, ಇನ್ನು ಕೆಲವರು ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
ಅಂತಹ ತಂಡಗಳ ಪೈಕಿ ಮಾಜಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಕೂಡ ಒಂದಾಗಿದೆ. ತಂಡದ ಮತ್ತೊಬ್ಬ ವೇಗದ ಬೌಲರ್ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ನೈಟ್ ರೈಡರ್ಸ್ ತಂಡದ ವೇಗದ ಬೌಲರ್ ಆಕಾಶ್ ದೀಪ್ ಗಾಯದ ಕಾರಣದಿಂದಾಗಿ ಐಪಿಎಲ್ 2026 ರಿಂದ ಹೊರಗುಳಿದಿದ್ದಾರೆ.
ವರದಿಯ ಪ್ರಕಾರ, ಆಕಾಶ್ ದೀಪ್ ಬೆನ್ನುನೋವಿನಿಂದ ಬಳಲುತ್ತಿದ್ದು, ಅದರಿಂದ ಇನ್ನೂ ಚೇತರಿಸಿಕೊಂಡಿಲ್ಲ. ಪ್ರಸ್ತುತ ಅವರು ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ರಿಹ್ಯಾಬ್ಗೆ ಒಳಗಾಗುತ್ತಿದ್ದಾರೆ. ಈ ಕಾರಣದಿಂದಾಗಿ, ಅವರು ಈ ಆವೃತ್ತಿಗೆ ಲಭ್ಯವಿರುವುದಿಲ್ಲ.
ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಇದು ದೊಡ್ಡ ಹೊಡೆತವಾಗಿದೆ. ಏಕೆಂದರೆ ಹರಾಜಿನ ನಂತರ ಈ ಆವೃತ್ತಿಯಲ್ಲಿ ಕೆಕೆಆರ್ ಪರ ಆಡಲು ಸಾಧ್ಯವಾಗದ ಮೂರನೇ ವೇಗಿ ಇವರು. ಮೊದಲನೆಯದಾಗಿ, ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೆಕೆಆರ್ ತಂಡದಿಂದ ಬಿಡುಗಡೆ ಮಾಡಿತ್ತು. ಇದರ ನಂತರ, ಭಾರತದ ಯುವ ಬೌಲರ್ ಹರ್ಷಿತ್ ರಾಣಾ ಗಾಯದ ಕಾರಣ ಪಂದ್ಯಾವಳಿಯಿಂದ ಹೊರಗುಳಿದಿದ್ದು, ಈಗ ಆಕಾಶ್ ದೀಪ್ ಕೂಡ ಲೀಗ್ನಿಂದ ಹೊರಗುಳಿದಿದ್ದಾರೆ.
ಇದು ಸಾಲದೆಂಬಂತೆ ಹರಾಜಿನಲ್ಲಿ 18 ಕೋಟಿಗೆ ಖರೀದಿಸಲಾದ ಶ್ರೀಲಂಕಾದ ವೇಗದ ಬೌಲರ್ ಮಥೀಷ ಪತಿರಾನ ಕೂಡ ಪಂದ್ಯಾವಳಿಯ ಆರಂಭಿಕ ಪಂದ್ಯಗಳಿಗೆ ಲಭ್ಯವಿರುವುದಿಲ್ಲ. ಟಿ20 ವಿಶ್ವಕಪ್ ಸಮಯದಲ್ಲಿ ಗಾಯಗೊಂಡಿದ್ದ ಪತಿರಾನ ಇದುವರೆಗೂ ಫಿಟ್ ಆಗಿಲ್ಲ. ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರೆಗೆ ಅವರಿಗೆ ಐಪಿಎಲ್ನಲ್ಲಿ ಆಡಲು ಅವಕಾಶ ನೀಡಲಾಗುವುದಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಸ್ಪಷ್ಟಪಡಿಸಿದೆ. ಆದ್ದರಿಂದ, ಏಪ್ರಿಲ್ ಮಧ್ಯದ ವೇಳೆಗೆ ಅವರು ತಂಡಕ್ಕೆ ಮರಳುವ ಸಾಧ್ಯತೆಗಳಿವೆ
ಬೆಂಗಳೂರು, ಮಾರ್ಚ್ 21: ಹೈಫೈ ಲೈಫ್ ಹೊಂದಿರುವ ಕೆಲವರ ಶೋಕಿ ಬೇರೆನೇ ಇರುತ್ತೆ. ಅದರಲ್ಲೂ ಕಾರುಗಳಿರುವ ಕೆಲವರು ಓವರ್ ಮಾಡುತ್ತಾರೆ. ಕಳೆದ ಎರಡು ತಿಂಗಳ ಹಿಂದೆ ಗ್ರೀನ್ ಕಲರ್ ಲ್ಯಾಂಬೋರ್ಗಿನಿ (Lamborghini) ಜಿಗ್ ಜಾಗ್ ಜರ್ನಿ ಮಾಡಿ ಸುದ್ದಿಯಾಗಿತ್ತು. ಇದೀಗ ವೈಟ್ ಕಲರ್ ಲ್ಯಾಂಬೋರ್ಗಿನಿ ಕಾರವೊಂದು ಸದ್ದು ಮಾಡುತ್ತಿದೆ. ಸರ್ಕಲ್ ನಡುವೆಯೇ ರಾಜಾ ರೋಷವಾಗಿ ಡ್ರಿಫ್ಟಿಂಗ್ ಮಾಡಲಾಗಿದೆ. ಪೊಲೀಸರ ಬಗ್ಗೆ ಗೊತ್ತಿದ್ದೂ, ಸಿನಿಮಾ ಸ್ಟೈಲ್ನಲ್ಲಿ ಶೋಕಿ ಮಾಡಲಾಗಿದೆ.
ಸರ್ಕಲ್ ನಡುವೆಯೇ ಡ್ರಿಫ್ಟಿಂಗ್
ಬೆಂಗಳೂರಿನ ಪ್ರಸಿದ್ಧ ಅನಿಲ್ ಕುಂಬ್ಳೆ ಸರ್ಕಲ್ನ ಮಧ್ಯೆದಲ್ಲಿ ಹೀಗೆ ರಾಜಾರೋಷವಾಗಿ ಕಾರಿನ ಡ್ರಿಫ್ಟಿಂಗ್ ಮಾಡಲಾಗಿದೆ. ಲ್ಯಾಂಬೋರ್ಗಿನಿ ಕಾರು ಚಾಲಕನೊಬ್ಬ ಸಿನಿಮಾ ಸ್ಟೈಲ್ನಲ್ಲಿ ಡ್ರಿಫ್ಟಿಂಗ್ ಮಾಡಿ ಸುದ್ದಿಯಾಗಿದ್ದಾನೆ. ಇಂದು ಬೆಳಗಿನ ಜಾವ 2 ಅಥವಾ 3ಗಂಟೆ ಸುಮಾರಿಗೆ ಈ ರೀತಿಯಾಗಿ ಕಾರು ಸ್ಟಂಟ್ ಮಾಡಲಾಗಿದೆ. ಸುತ್ತಮುತ್ತ ಸಿಸಿಟಿವಿ, ಪೊಲೀಸ್ ಕಣ್ಗಾವಲು, ಎಂಜಿ ರೋಡ್ ಆಗಿರುವುದರಿಂದ ರಾತ್ರಿಯಾದರೂ ವಾಹನಗಳು ಸಂಚರಿಸುತ್ತಿರುತ್ತವೆ. ಈ ಮಧ್ಯೆ ಬಳಿ ಬಣ್ಣದ ಲ್ಯಾಂಬೋರ್ಗಿನಿ ಕಾರು ಮಾಲೀಕ ಹೀಗೆ ಸಿನಿಮಾ ಸ್ಟೈಲ್ನಲ್ಲಿ ಸರ್ಕಲ್ ನಡುವೆಯೇ ಡ್ರಿಫ್ಟಿಂಗ್ ಮಾಡಿದ್ದಾನೆ. ಅಲ್ಲದೆ ಜೋರಾಗಿ ಕೂಗಾಡುತ್ತಾ ಎಂಜಾಯ್ ಮಾಡಿದ್ದಾನೆ.
ಚಾಲಕನ ಈ ಸಾಹಸವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಪೊಲೀಸರಿಗೂ ರವಾನಿಸಿದ್ದಾರೆ. ಮಾಹಿತಿ ಬಂದ ಕೂಡಲೇ ಎಫ್ಐಆರ್ ದಾಖಲಿಸಿಕೊಂಡಿ ಪರಿಶೀಲನೆ ಮಾಡಿದ್ದು, ಸದ್ಯ KA-05 NR 0009 ಕಾರು ನಂಬರ್ ಪತ್ತೆಯಾಗಿದೆ. ಆದರೆ ಮಾಲೀಕ ಯಾರು? ರಸ್ತೆಯುದ್ದಕ್ಕೂ ಈ ರೀತಿ ಜಾಲಿ ರೈಡ್ ಮಾಡಲಾಗಿದೆ, ಹೀಗೆ ಹಲವು ಆಯಾಮಗಳಲ್ಲಿ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ತನಿಖೆ ನಡೆಸಿದ್ದಾರೆ. ಚಾಲಕನನ್ನ ಪತ್ತೆ ಮಾಡಿ ಆರ್.ಸಿ ರದ್ದು ಮಾಡಿ ಕಾರು ವಶಪಡೆಯುವುದುಕ್ಕೆ ಖಾಕಿ ಮುಂದಾಗಿದೆ.
ಡಿಸಿಪಿ ಸಾಹಿಲ್ ಬಾಗ್ಲಾ ಹೇಳಿದ್ದಿಷ್ಟು
ಇನ್ನು ಈ ಬಗ್ಗೆ ಪಶ್ಚಿಮ ವಿಭಾಗದ ಸಂಚಾರ ಪ್ರಭಾರ ಡಿಸಿಪಿ ಸಾಹಿಲ್ ಬಾಗ್ಲಾ ಪ್ರತಿಕ್ರಿಯಿಸಿದ್ದು, ಬೆಳಗಿನಜಾವ 2-3 ಗಂಟೆ ಸುಮಾರಿಗೆ ಈ ರೀತಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡು ಮಾಲೀಕನ ಪತ್ತೆ ಕಾರ್ಯ ನಡೆಸುತ್ತಿದ್ದೇವೆ. ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದು, ಆರೋಪಿಯನ್ನು ಪತ್ತೆ ಹಚ್ಚುತ್ತೇವೆ. ಘಟನೆ ಸಂಬಂಧ ಆರ್ಸಿ ಕೂಡ ಕ್ಯಾನ್ಸಲ್ ಮಾಡಲು ನಿರ್ಧರಿಸಿದ್ದೇವೆ. ಈ ರೀತಿ ರಸ್ತೆಯಲ್ಲಿ ಯಾರೂ ಕೂಡ ಸ್ಟಂಟ್ ಮಾಡಲು ಅವಕಾಶ ಇಲ್ಲ, ಹೀಗೆ ಮಾಡಿದರೆ ಆರ್ಸಿ ರದ್ದುಗೊಳಿಸಿ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ನವದೆಹಲಿ, ಮಾರ್ಚ್ 21: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತನಾಡಿದ್ದಾರೆ. ಇರಾನ್ನಾದ್ಯಂತ ನಿರ್ಣಾಯಕ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಮೋದಿ ಖಂಡಿಸಿದ್ದು, ಇದು ಪ್ರಾದೇಶಿಕ ಸ್ಥಿರತೆಗೆ ಬೆದರಿಕೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಎಕ್ಸ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಇರಾನ್ ಅಧ್ಯಕ್ಷ ಡಾ. ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತನಾಡಿದೆ. ಈದ್ ಮತ್ತು ನೌರುಜ್ ಶುಭಾಶಯಗಳನ್ನು ತಿಳಿಸಿದೆ. ಈ ಹಬ್ಬದ ಋತುವು ಪಶ್ಚಿಮ ಏಷ್ಯಾಕ್ಕೆ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಬರೆದಿದ್ದಾರೆ.
ಇದೇವೇಳೆ ಪ್ರಧಾನಿ ಮೋದಿ ಸಂಚಾರದ ಸ್ವಾತಂತ್ರ್ಯವನ್ನು ರಕ್ಷಿಸುವ ಮಹತ್ವವನ್ನು ಪುನರುಚ್ಚರಿಸಿದ್ದಾರೆ. ಹಾರ್ಮುಜ್ ಜಲಸಂಧಿಯ ದಿಗ್ಬಂಧನದ ಮಧ್ಯೆ ಹಡಗು ಮಾರ್ಗಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅವರು ಕರೆ ನೀಡಿದ್ದಾರೆ. ಇದು ವಿಶ್ವದ ತೈಲ ಮತ್ತು ಗ್ಯಾಸ್ ವ್ಯಾಪಾರದ ಐದನೇ ಒಂದು ಭಾಗವನ್ನು ಹೊಂದಿರುವ ಪ್ರಮುಖ ಕಡಲ ಚಾಕ್ಪಾಯಿಂಟ್ ಜಾಗತಿಕವಾಗಿ ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರಿತು.
“ಪ್ರಾದೇಶಿಕ ಸ್ಥಿರತೆಗೆ ಬೆದರಿಕೆ ಹಾಕುವ ಮತ್ತು ಜಾಗತಿಕ ಪೂರೈಕೆ ಸರಪಳಿಗಳನ್ನು ಅಡ್ಡಿಪಡಿಸುವ ಈ ಪ್ರದೇಶದಲ್ಲಿನ ನಿರ್ಣಾಯಕ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ಖಂಡಿಸಲಾಯಿತು. ಸಂಚಾರದ ಸ್ವಾತಂತ್ರ್ಯವನ್ನು ಕಾಪಾಡುವ, ಹಡಗು ಮಾರ್ಗಗಳು ಮುಕ್ತ ಮತ್ತು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ಅವರು ಪುನರುಚ್ಚರಿಸಿದರು. ಇರಾನ್ನಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗೆ ಇರಾನ್ನ ನಿರಂತರ ಬೆಂಬಲವನ್ನು ಶ್ಲಾಘಿಸಿದರು” ಎಂದು ಮೋದಿ ಹೇಳಿದ್ದಾರೆ.
Spoke with President Dr. Masoud Pezeshkian and conveyed Eid and Nowruz greetings. We expressed hope that this festive season brings peace, stability and prosperity to West Asia.
Condemned attacks on critical infrastructure in the region, which threaten regional stability and…
ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ಜಂಟಿ ದಾಳಿಯೊಂದಿಗೆ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಪ್ರಾರಂಭವಾದ ನಂತರ ಇದು ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷರಿಗೆ ಮಾಡಿದ ಎರಡನೇ ದೂರವಾಣಿ ಕರೆಯಾಗಿದೆ.
ಮಾರ್ಚ್ 12ರಂದು ಪ್ರಧಾನಿ ಮೋದಿ ಅವರು ಪೆಜೆಶ್ಕಿಯನ್ ಅವರೊಂದಿಗೆ ಮಾತನಾಡಿದ್ದರು. ಪ್ರಾದೇಶಿಕ ಸಂಘರ್ಷದ ಬಗ್ಗೆ ತಮ್ಮ ಕಳವಳಗಳನ್ನು ತಿಳಿಸಿದ್ದರು. “ಪ್ರದೇಶದಲ್ಲಿನ ಗಂಭೀರ ಪರಿಸ್ಥಿತಿಯನ್ನು ಚರ್ಚಿಸಲು ಇರಾನ್ ಅಧ್ಯಕ್ಷ ಡಾ. ಮಸೌದ್ ಪೆಜೆಶ್ಕಿಯನ್ ಅವರೊಂದಿಗೆ ಮಾತುಕತೆ ನಡೆಸಿದೆ. ಉದ್ವಿಗ್ನತೆಗಳ ಉಲ್ಬಣ, ಜನರ ಜೀವಹಾನಿ ಹಾಗೂ ನಾಗರಿಕ ಮೂಲಸೌಕರ್ಯಕ್ಕೆ ಹಾನಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ” ಎಂದು ಪ್ರಧಾನಿ ಮೋದಿ ಎಕ್ಸ್ನಲ್ಲಿ ಮಾಡಿದ ಪೋಸ್ಟ್ನಲ್ಲಿ ಹೇಳಿದ್ದರು.
ಯುದ್ಧಪೀಡಿತ ಪ್ರದೇಶದಲ್ಲಿ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಯು ಭಾರತದ ಪ್ರಮುಖ ಆದ್ಯತೆಯಾಗಿ ಉಳಿದಿದೆ ಎಂದು ಪ್ರಧಾನಿ ಮೋದಿ ದೃಢಪಡಿಸಿದ್ದರು. ಇದರ ಜೊತೆಗೆ ಸರಕು ಮತ್ತು ಇಂಧನದ ಅಡೆತಡೆಯಿಲ್ಲದ ಸಾಗಣೆಯ ಅಗತ್ಯವೂ ಭಾರತದ ಪ್ರಮುಖ ಆದ್ಯತೆಗಳಾಗಿವೆ. ಶಾಂತಿ ಮತ್ತು ಸ್ಥಿರತೆಗೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾ.21: ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಕೋರಮಂಗಲದ ಕಸ-ರಸ ಘಟಕದಲ್ಲಿ ಹಸಿ ಕಸದಿಂದ ಬಯೋಗ್ಯಾಸ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಮಾಡಲಾಗಿದೆ. ಹಿಂದೆ ತ್ಯಾಜ್ಯ ವಿಲೇವಾರಿ ಸಮಸ್ಯೆಯಾಗಿದ್ದ ಈ ಸ್ಥಳದಲ್ಲಿ ಈಗ ಪ್ರತಿದಿನ 13 ಟನ್ ಹಸಿ ಕಸದಿಂದ ಗ್ಯಾಸ್ ಉತ್ಪಾದಿಸಲಾಗುತ್ತಿದೆ. 2018ರಲ್ಲಿ ಕಾರ್ಬನ್ ಮಾಸ್ಟರ್ಸ್ ಕಂಪನಿಯು 4 ಕೋಟಿ ರೂಪಾಯಿ ವೆಚ್ಚದಲ್ಲಿ ದಿನಕ್ಕೆ 8 ಟನ್ ಸಾಮರ್ಥ್ಯದ ಘಟಕವನ್ನು ಪ್ರಾರಂಭಿಸಿತ್ತು. ಇದೀಗ ಹೆಚ್ಚುವರಿ 5 ಟನ್ ಸಾಮರ್ಥ್ಯಕ್ಕೆ ಚಾಲನೆ ನೀಡಲಾಗಿದ್ದು, ಒಟ್ಟು 13 ಟನ್ ಹಸಿ ಕಸದಿಂದ ಗ್ಯಾಸ್ ಉತ್ಪಾದಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಪ್ರತಿದಿನ 2,500 ರಿಂದ 3,000 ಟನ್ ಹಸಿ ಕಸ ಉತ್ಪಾದನೆಯಾಗುತ್ತಿದ್ದು, ಅದರಲ್ಲಿ ಅರ್ಧದಷ್ಟು ಹಸಿ ಕಸವೇ ಇರುತ್ತದೆ. ಹಸಿ ಕಸವನ್ನು ಡಂಪಿಂಗ್ ಯಾರ್ಡ್ಗಳಿಗೆ ಸುರಿಯುವುದರಿಂದ ವಾಸನೆ, ಸೊಳ್ಳೆ ಮತ್ತು ಜಲಮೂಲಗಳ ಮಾಲಿನ್ಯದಂತಹ ಸಮಸ್ಯೆಗಳು ಉಂಟಾಗುತ್ತವೆ. ಬಯೋಗ್ಯಾಸ್ ಉತ್ಪಾದನೆಯಿಂದ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಗುರಿ ಇದೆ. ಈ ಯೋಜನೆಯು ಇತರ ಕ್ಷೇತ್ರಗಳಿಗೂ ಮಾದರಿಯಾಗಲಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗವು (UPSC) ಸಂಯೋಜಿತ ವೈದ್ಯಕೀಯ ಸೇವೆಗಳ ಪರೀಕ್ಷೆ (CMS) 2026ರ ಅಡಿಯಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1,300ಕ್ಕೂ ಹೆಚ್ಚು ವೈದ್ಯಕೀಯ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ upsconline.nic.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 31.
ಹುದ್ದೆಗಳ ವಿವರ ಮತ್ತು ಹಂಚಿಕೆ:
ಒಟ್ಟು 1,300ಕ್ಕೂ ಅಧಿಕ ಹುದ್ದೆಗಳನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ:
ವೈದ್ಯಕೀಯ ಅಧಿಕಾರಿ ದರ್ಜೆ (ಸಾಮಾನ್ಯ ಕರ್ತವ್ಯ): 864 ಹುದ್ದೆಗಳು
ಸಹಾಯಕ ವಿಭಾಗೀಯ ವೈದ್ಯಕೀಯ ಅಧಿಕಾರಿ: 450 ಹುದ್ದೆಗಳು
ದೆಹಲಿ ಮಹಾನಗರ ಪಾಲಿಕೆ (GDMO Grade-II): 30 ಹುದ್ದೆಗಳು
ನವದೆಹಲಿ ಮುನ್ಸಿಪಲ್ ಕೌನ್ಸಿಲ್ (MO): 14 ಹುದ್ದೆಗಳು
ಅರ್ಹತಾ ಮಾನದಂಡಗಳು:
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಭಾರತೀಯ ವೈದ್ಯಕೀಯ ಮಂಡಳಿಯಿಂದ (NMC/MCI) ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಿಂದ ಕಡ್ಡಾಯವಾಗಿ MBBS ಪದವಿ ಪಡೆದಿರಬೇಕು.
ವಯೋಮಿತಿ: ಆಗಸ್ಟ್ 1, 2026ಕ್ಕೆ ಅಭ್ಯರ್ಥಿಯ ವಯಸ್ಸು 32 ವರ್ಷ ಮೀರಿರಬಾರದು (ಅಂದರೆ ಆಗಸ್ಟ್ 2, 1994ಕ್ಕಿಂತ ಮೊದಲು ಜನಿಸಿರಬಾರದು). ಮೀಸಲಾತಿ ವರ್ಗದವರಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.
UPSC CMS ಆಯ್ಕೆ ಪ್ರಕ್ರಿಯೆಯು ಎರಡು ಮುಖ್ಯ ಹಂತಗಳನ್ನು ಒಳಗೊಂಡಿದೆ:
ಹಂತ 1 (ಕಂಪ್ಯೂಟರ್ ಆಧಾರಿತ ಪರೀಕ್ಷೆ): ತಲಾ 250 ಅಂಕಗಳ ಎರಡು ಪತ್ರಿಕೆಗಳಿರುತ್ತವೆ. ಇದರಲ್ಲಿ ಜನರಲ್ ಮೆಡಿಸಿನ್, ಸರ್ಜರಿ, ಗೈನೆಕಾಲಜಿ, ಪೀಡಿಯಾಟ್ರಿಕ್ಸ್ ಮತ್ತು ಸೋಶಿಯಲ್ ಮೆಡಿಸಿನ್ ವಿಷಯಗಳ ಮೇಲೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಹಂತ 2 (ವ್ಯಕ್ತಿತ್ವ ಪರೀಕ್ಷೆ/ಸಂದರ್ಶನ): ಮೊದಲ ಹಂತದಲ್ಲಿ ಉತ್ತೀರ್ಣರಾದವರನ್ನು 100 ಅಂಕಗಳ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಅಂತಿಮವಾಗಿ ಆಯ್ಕೆಯಾದ ವೈದ್ಯರನ್ನು ಭಾರತೀಯ ರೈಲ್ವೆ, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಸೇರಿದಂತೆ ವಿವಿಧ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 200ರೂ. ಶುಲ್ಕವಿರುತ್ತದೆ. ಆದರೆ ಮಹಿಳೆಯರು, ಎಸ್ಸಿ, ಎಸ್ಟಿ ಮತ್ತು ಅಂಗವಿಕಲ (PwD) ಅಭ್ಯರ್ಥಿಗಳಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಜೀವನದಲ್ಲಿ ತಾಳ್ಮೆ ಎನ್ನುವಂತಹದ್ದು ತುಂಬಾನೇ ಮುಖ್ಯ. ಈ ತಾಳ್ಮೆ ಮತ್ತು ಸಹನೆ ಯಶಸ್ವಿ ಜೀವನಕ್ಕೆ ದಾರಿಮಾಡಿಕೊಡುತ್ತದೆ. ಹೀಗಿದ್ದರೂ ಸಹ ಅನೇಕರು ತಾಳ್ಮೆಯನ್ನು ಕಳೆದುಕೊಂಡು ಆತುರದ ನಿರ್ಧಾರಗಳನ್ನು (hasty decisions) ತೆಗೆದುಕೊಳ್ಳುತ್ತಾರೆ. ಈ ಆತುರದ ನಿರ್ಧಾರಗಳಿಂದ ಒಳ್ಳೆಯದಕ್ಕಿಂತ ಕೆಟ್ಟದ್ದು ಸಂಭವಿಸುವುದೇ ಹೆಚ್ಚು. ಹಾಗಾಗಿ ಯಾವುದೇ ವಿಚಾರದಲ್ಲೂ ಸಹ ಆತುರ ಪಡಬಾರದು ಎಂದು ಹಿರಿಯರು ಕಿವಿ ಮಾತು ಹೇಳುವುದು. ಅದರಲ್ಲೂ ಯಶಸ್ವಿ, ಸಮೃದ್ಧ ಜೀವನವನ್ನು ಬಯಸುವವರು ಜೀವನಕ್ಕೆ ಸಂಬಂಧಿಸಿದ ಈ ಐದು ವಿಚಾರಗಳ ಬಗ್ಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ಆತುರ ಪಡಲೇಬಾರದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆಯನ್ನು ನೀಡಿದ್ದಾರೆ. ಹಾಗಿದ್ರೆ ಚಾಣಕ್ಯರ ಪ್ರಕಾರ ಯಶಸ್ವಿ ಜೀವನಕ್ಕಾಗಿ ಯಾವ ವಿಚಾರಗಳ ಬಗ್ಗೆ ಆತುರ ಪಡಬಾರದು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯೋಣ.
ಜೀವನದಲ್ಲಿ ಎಂದಿಗೂ ಈ ವಿಚಾರಗಳಲ್ಲಿ ಆತುರ ಪಡಬಾರದು:
ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಬೇಡ: ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಮನುಷ್ಯನಾದವನು ತನ್ನ ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಪಡಲೇಬಾರದು ಎಂದು ಹೇಳಿದ್ದಾರೆ. ಮುಖ್ಯವಾಗಿ ಉದ್ಯೋಗ, ಅಥವಾ ಹೊಸ ಉದ್ಯಮವನ್ನು ಪ್ರಾರಂಭಿಸುವಂತಹ ಪ್ರಮುಖ ಸಂಗತಿಗಳ ಬಗ್ಗೆ ಆತುರಪಡಬಾರದು ಎಂದು ಹೇಳುತ್ತಾರೆ. ಸಂಪೂರ್ಣ ಮಾಹಿತಿಯನ್ನು ತಿಳಿಯದೆ ಮತ್ತು ಮುಂದೆ ಅದರಿಂದ ಏನೆಲ್ಲಾ ತೊಂದರೆಗಳು ಎದುರಾಗಬಹುದು ಎಂಬುದನ್ನು ತಿಳಿಯದೆ ತೆಗೆದುಕೊಳ್ಳುವ ನಿರ್ಧಾರಗಳು ನಂತರದ ಜೀವನದಲ್ಲಿ ಗಮನಾರ್ಹ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಜೀವನದ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ತಾಳ್ಮೆಯಿಂದ ವರ್ತಿಸುವುದು ಅತ್ಯಗತ್ಯ.
ಸಂಬಂಧಗಳನ್ನು ಬೆಳೆಸುವುದು ಮತ್ತು ಮುರಿಯುವುದು: ಚಾಣಕ್ಯ ನೀತಿಯ ಪ್ರಕಾರ, ಯಾರೊಂದಿಗಾದರೂ ಸ್ನೇಹ, ಸಂಬಂಧ ಬೆಳೆಸುವುದು ಅಥವಾ ಸಂಬಂಧವನ್ನು ಮುರಿಯುವುದು ಎರಡೂ ಬಹಳ ಸೂಕ್ಷ್ಮ ವಿಷಯಗಳು. ಕೆಲವೊಮ್ಮೆ, ಜನರು ಕೋಪದಿಂದ ಸಂಬಂಧವನ್ನು ಮುರಿಯುತ್ತಾರೆ, ಭಾವನೆಗಳಿಗೆ ಒಳಗಾಗಿ ಸಂಬಂಧವನ್ನು ಬೆಳೆಸುತ್ತಾರೆ. ಸಂಬಂಧಕ್ಕೆ ಸಂಬಂಧಿಸಿದ ಈ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದರಿಂದ ಮುಂದೊಂದು ದಿನ ಪಶ್ಚಾತಾಪ ಪಡಬೇಕಾಗುತ್ತದೆ, ಹಾಗಾಗಿ ಸಂಬಂಧಗಳ ವಿಷಯಕ್ಕೆ ಬಂದಾಗ, ನೀವು ಯಾವಾಗಲೂ ತಾಳ್ಮೆ ಮತ್ತು ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ: ಹಣದ ವಿಚಾರಗಳಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಚಾಣಕ್ಯ. ಹೂಡಿಕೆ ಮಾಡುವಾಗ, ಆಸ್ತಿ-ಬಂಗಾರದಂತಹ ಮೌಲ್ಯಯುತ ವಸ್ತುಗಳನ್ನು ಖರೀದಿಸುವಾಗ ನೂರು ಬಾರಿ ಯೋಚನೆ ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
ಕೋಪದಲ್ಲಿರುವಾಗ ನಿರ್ಧಾಗಳನ್ನು ತೆಗೆದುಕೊಳ್ಳಬೇಡಿ: ಚಾಣಕ್ಯ ಹೇಳುವಂತೆ ಕೋಪವು ವ್ಯಕ್ತಿಯ ಬಹುದೊಡ್ಡ ಶತ್ರುವಾಗಿದ್ದು, ಇದು ಒಬ್ಬ ವ್ಯಕ್ತಿಯನ್ನು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ. ಕೋಪದ ಸಮಯದಲ್ಲಿ ತೆಗೆದುಕೊಳ್ಳುವ ಮಾತುಗಳು ಮತ್ತು ಕ್ರಿಯೆಗಳು ನಿಮ್ಮ ಸಂಬಂಧಗಳಿಗೆ ಮಾತ್ರವಲ್ಲದೆ ನಿಮ್ಮ ಖ್ಯಾತಿಗೂ ತೀವ್ರ ಹಾನಿಯನ್ನುಂಟುಮಾಡುತ್ತವೆ. ಹಾಗಾಗಿ ಕೋಪಗೊಂಡ ಸಂದರ್ಭದಲ್ಲಿ ಪ್ರತಿಕ್ರಿಯಿಸುವ ಮೊದಲು ಸ್ವಲ್ಪ ಸಮಯ ತೆಗೆದುಕೊಳ್ಳಿ ಮತ್ತು ನಂತರ ಶಾಂತವಾಗಿ ವಿಷಯಗಳ ಬಗ್ಗೆ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ.
ಯಾರನ್ನಾದರೂ ತಕ್ಷಣವೇ ನಂಬಲು ಹೋಗಬೇಡಿ: ಕೆಲವರು ತಮಗೆ ಯಾರೇ ಪರಿಚಯವಾದರೂ ಅವರನ್ನು ಬಹುಬೇಗನೆ ನಂಬುತ್ತಾರೆ. ಹೀಗೆ ನೀವು ಭೇಟಿಯಾಗುವ ಪ್ರತಿಯೊಬ್ಬರೂ ವಿಶ್ವಾಸಾರ್ಹರಲ್ಲ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಏನು ಯೋಚಿಸದೆ ಯಾರನ್ನಾದರೂ ಕುರುಡಾಗಿ ನಂಬುವುದರಿಂದ ನೀವು ನಂಬಿಕೆ ದ್ರೋಹಗಳಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಯಾರನ್ನೂ ಸಹ ಆತುರದಲ್ಲಿ ನಂಬಲು ಹೋಗಬೇಡಿ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ.