All posts by nagaraj11081993

ಬೆಂಗಳೂರು: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ನಿಂದ ಕೋಟಿ ಕೋಟಿ ವಂಚನೆ ಆರೋಪ, 18 ಜನರ ವಿರುದ್ಧ ಪ್ರಕರಣ

ಬೆಂಗಳೂರು: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ನಿಂದ ಕೋಟಿ ಕೋಟಿ ವಂಚನೆ ಆರೋಪ, 18 ಜನರ ವಿರುದ್ಧ ಪ್ರಕರಣ

ಬೆಂಗಳೂರು, ಮಾರ್ಚ್ 20: ಬೆಂಗಳೂರು (Bangalore) ಉತ್ತರ ತಾಲೂಕಿನ ಶೆಟ್ಟಿಹಳ್ಳಿಯಲ್ಲಿರುವ ಪ್ರತಿಷ್ಠಿತ ಪ್ರಿನ್ಸ್ ಟೌನ್ ಅಪಾರ್ಟ್‌ಮೆಂಟ್‌ನಲ್ಲಿ ಕೋಟಿ ಕೋಟಿ ಹಣ ವಂಚನೆ ಆರೋಪ ಕೇಳಿಬಂದಿದೆ. ಸುಮಾರು 700 ಫ್ಲಾಟ್‌ಗಳಿರುವ ಈ ಅಪಾರ್ಟ್‌ಮೆಂಟ್‌ನಲ್ಲಿ ಅಸೋಸಿಯೇಷನ್ ಸದಸ್ಯರು ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಈ ಬಗ್ಗೆ ಅಪಾರ್ಟ್‌ಮೆಂಟ್ ನಿವಾಸಿ ಹಾಗೂ ವಕೀಲೆ ನಿಶಾ ಎಂಬವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಕುಲಕರ್ಣಿ, ಕಾರ್ಯದರ್ಶಿ ಅಲೆಕ್ಸ್, ಖಜಾಂಚಿ ಪ್ರವೀಣ್ ನಾಯ್ಕರ್ ಸೇರಿದಂತೆ ಒಟ್ಟು 18 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮಾಹಿತಿಯ ಪ್ರಕಾರ, ಪ್ರತಿ ಫ್ಲಾಟ್‌ನಿಂದ ವರ್ಷಕ್ಕೆ ಸುಮಾರು 60 ಸಾವಿರ ರೂಪಾಯಿ ಸಂಗ್ರಹಿಸಲಾಗುತ್ತಿದ್ದು, 700 ಫ್ಲಾಟ್‌ಗಳಿಂದ ಒಟ್ಟಾರೆ ಸುಮಾರು 3.6 ಕೋಟಿ ರೂಪಾಯಿ ವಸೂಲಿ ಮಾಡಲಾಗುತ್ತದೆ. ಆದರೆ, ಈ ಹಣವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಬಳಸದೇ, ಲೆಕ್ಕಪತ್ರಗಳಲ್ಲಿ ಅಕ್ರಮ ಎಸಗಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಕಳೆದ ಎರಡು ವರ್ಷಗಳಲ್ಲಿ ಸುಮಾರು 1.73 ಕೋಟಿ ರೂಪಾಯಿ ವಂಚನೆ ನಡೆದಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಖರ್ಚುಗಳನ್ನು ತಪ್ಪಾಗಿ ತೋರಿಸಲಾಗಿದೆ. ಉದಾಹರಣೆಗೆ; ವಾಟರ್‌ಮ್ಯಾನ್‌ಗೆ ಅನಗತ್ಯವಾಗಿ 2 ಲಕ್ಷ ರೂಪಾಯಿ ನೀಡಲಾಗಿದೆ ಎಂದು ದಾಖಲಿಸಿರುವುದು ಗಮನಕ್ಕೆ ಬಂದಿದೆ. ಜೊತೆಗೆ, ಆಡಿಟ್ ಖರ್ಚನ್ನು ಒಂದು ವರ್ಷ 35 ಲಕ್ಷ ರೂಪಾಯಿ, ಮತ್ತೊಂದು ವರ್ಷ 24 ಲಕ್ಷ ರೂಪಾಯಿ ಎಂದು ತೋರಿಸಿರುವುದೂ ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದಲ್ಲದೆ, ಅಸೋಸಿಯೇಷನ್ ಹಣವನ್ನು ಆರೋಪಿಗಳು ತಮ್ಮ ಕುಟುಂಬದ ಸದಸ್ಯರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಹೆಂಡತಿ, ಮನೆ ಕೆಲಸದವರ ಬ್ಯಾಂಕ್ ಖಾತೆಗಳಿಗೂ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ಪ್ರಕರಣ ದಾಖಲಿಸಿಕೊಂಡಿರುವ ಬಾಗಲಗುಂಟೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ನೋಟಿಸ್ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ.

ಒಟ್ಟಾರೆ, ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಣ ವಂಚನೆ ಆರೋಪ ಕೇಳಿಬಂದಿರುವುದು ನಿವಾಸಿಗಳಲ್ಲಿ ಆತಂಕ ಮತ್ತು ಅಸಮಾಧಾನ ಉಂಟುಮಾಡಿದೆ.

ವರದಿ: ಮಂಜುನಾಥ್, ಟಿವಿ9 ನೆಲಮಂಗಲ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸುಮ್ನೆ ಇರೋಕಾಗ್ದೆ ಭಾರತ-ಇರಾನ್ ನಡುವೆ ಬೆಂಕಿ ಹಚ್ಚಲು ಕುತಂತ್ರ ನಡೆಸಿದ ಪಾಕ್

ನವದೆಹಲಿ, ಮಾರ್ಚ್​ 20: ಯುದ್ಧಭೂಮಿಯಲ್ಲಿ ಗೆಲ್ಲಲಾಗದೆ ಒಪ್ಪಂದವನ್ನು ಮಾಡಿಕೊಂಡ ರಾಷ್ಟ್ರಗಳಿಗೆ ರಕ್ಷಣೆಯನ್ನೂ ನೀಡಲಾಗದೆ ಅತಂತ್ರವಾಗಿರುವ ಪಾಕಿಸ್ತಾನ(Pakistan)ವು ಇರಾನ್ ಹಾಗೂ ಭಾರತದ ನಡುವೆ ವೈಷಮ್ಯವನ್ನು ಹುಟ್ಟುಹಾಕಲು ಕುತಂತ್ರ ನಡೆಸುತ್ತಿರುವುದು ಬಹಿರಂಗವಾಗಿದೆ. ಇತ್ತೀಚೆಗೆ ಅಮೆರಿಕದ ಸೇನೆಯು ಇರಾನ್​ನ ಯುದ್ಧನೌಕೆ ಐರಿಸ್ ಡೇನಾವನ್ನು ಹೊಡೆದುಹಾಕಿತ್ತು, ಇದು ಭಾರತದಲ್ಲಿ ಸಮರಭ್ಯಾಸ ನಡೆಸಿಕೊಂಡು ಇರಾನ್​​ನತ್ತ ಹೊರಟಿದ್ದ ಯುದ್ಧನೌಕೆಯಾಗಿತ್ತು. ಶ್ರೀಲಂಕಾದ ಬಳಿಯ ಹಿಂದೂ ಮಹಾಸಾಗರದಲ್ಲಿ ಈ ಅವಘಡ ಸಂಭವಿಸಿತ್ತು.

ಇರಾನ್​ ಇಸ್ರೇಲ್ ಅಮೆರಿಕ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿಯೂ ಯುದ್ಧದ ಸನ್ನಿವೇಶ ನಿರ್ಮಾಣವಾಗಿದೆ. ಒಂದೆಡೆ ಅಫ್ಘಾನಿಸ್ತಾನ ಇನ್ನೊಂದೆಡೆ ಬಲೂಚಿಸ್ತಾನ ವಿಮೋಚನಾ ತಂಡ ಪಾಕಿಸ್ತಾನದ ವಿರುದ್ಧ ಮುಗಿಬಿದ್ದಿದೆ. ಇನ್ನೊಂದೆಡೆ ವಾಯುನೆಲೆಯನ್ನು ಅಮೆರಿಕಕ್ಕೆ ನೀಡಿದರೆ ಹುಷಾರ್ ಎಂದು ಪಾಕ್​​ಗೆ ಇರಾನ್ ಎಚ್ಚರಿಕೆ ನೀಡಿದೆ.

ಇತ್ತೀಚೆಗೆ ಆಗಿರುವ ಒಪ್ಪಂದದ ಪ್ರಕಾರ, ಸೌದಿ ಅರೇಬಿಯಾ ಯುದ್ಧ ಸನ್ನಿವೇಶದಲ್ಲಿ ಸಿಲುಕಿದಾಗ ಪಾಕ್ ನೆರವು ನೀಡಬೇಕು ಆದರೆ ಅದು ಸಾಧ್ಯವಾಗುತ್ತಿಲ್ಲ. ಒಂದೆಡೆ ರಕ್ಷಣೆಗೆ ಇರಾನ್ ಯುದ್ಧನೌಕೆಗೆ ಭಾರತ ಸರ್ಕಾರವು ರಕ್ಷಣೆ ನೀಡಬೇಕಿತ್ತು ಎನ್ನುವ ದೇಶದಲ್ಲಿನ ಕಾಂಗ್ರೆಸ್ ಆರೋಪದ ನಡುವೆ ಪಾಕಿಸ್ತಾನವು ಈ ಸನ್ನಿವೇಶವನ್ನು ಬಳಸಿಕೊಂಡು ಭಾರತವನ್ನು ಯುದ್ಧದೊಳಗೆ ಸೇರಿಸುವ ಹುನ್ನಾರ ಮಾಡಿತ್ತು. ಹಾಗೆಯೇ ಇರಾನ್ ಹಾಗೂ ಭಾರತದ ನಡುವೆ ವೈಷಮ್ಯವನ್ನು ಹುಟ್ಟುಹಾಕುವ ಕುತಂತ್ರವನ್ನು ನಡೆಸಿತ್ತು.

ಇರಾನ್ ಯುದ್ಧನೌಕೆಯನ್ನು ಭಾರತದ ಸಮುದ್ರದ ಗಡಿಯೊಳಗೆ ನಾಶಪಡಿಸಿರಲಿಲ್ಲ, ಹಾಗೆಯೇ ಯಾವುದೇ ಅಂತಾರಾಷ್ಟ್ರೀಯ ನಿಯಮದ ಪ್ರಕಾರವು, ಆ ಯುದ್ಧನೌಕೆಗೆ ಭಾರತವು ರಕ್ಷಣೆ ಕೊಡಬೇಕೆಂದಿರಲಿಲ್ಲ, ಆದಾಗ್ಯೂ ರಕ್ಷಣಾ ಕಾರ್ಯಾಚರಣೆಗೆ ಭಾರತ ನೆರವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಮತ್ತಷ್ಟು ಓದಿ: ಕಾಬೂಲ್ ಆಸ್ಪತ್ರೆ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ: 400 ಮಂದಿ ಸಾವು, 250ಕ್ಕೂ ಹೆಚ್ಚು ಜನರಿಗೆ ಗಾಯ!

ಈ ವಿಚಾರವನ್ನು ಭಾರತ ವಿದೇಶಾಂಗ ಸಚಿವಾಲಯವು ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ ಯುದ್ಧದ ಸಂದರ್ಭದಲ್ಲಿ ಕ್ಷಿಪಣಿಗಳಿಗಿಂತ ವೇಗವಾಗಿ ಸುಳ್ಳು ಮಾಹಿತಿಗಳು ಹರಿದಾಡುತ್ತವೆ. ಆಪರೇಷನ್ ಸಿಂಧೂರ್​ನಿಂದ ಹಿಡಿದು ಇತಿಹಾಸದಲ್ಲಿನ ಹಲವು ಸಂದರ್ಭಗಳಲ್ಲಿ ಪಾಕಿಸ್ತಾನದ ದೊಡ್ಡ ಅಸ್ತ್ರವೇ ಸುಳ್ಳು ಸುದ್ದಿಯಾಗಿದೆ.

ಅಮೆರಿಕ, ಇರಾನ್, ಇಸ್ರೇಲ್ ಯುದ್ಧದ ವಿಚಾರದಲ್ಲಿ ಭಾರತವನ್ನು ಎಳೆದು ತರಲು ಪಾಕಿಸ್ತಾನ ಮತ್ತೆ ಈ ಅಸ್ತ್ರ ಬಳಸಿದೆ. ಇವತ್ತಿನವರೆಗೂ ಭಾರತವು ಇಸ್ರೇಲ್ ಹಾಗೂ ಇರಾನ್ ಜತೆಗೆ ಭಿನ್ನ ವೇಧಿಕೆಯಲ್ಲಿ ಉತ್ತಮವಾದ ಸಂಬಂಧವನ್ನು ಹೊಂದಿದೆ. ಇದು ಪಾಕಿಸ್ತಾನ ಸೇರಿ ಹಲವು ದುಷ್ಟ ಶಕ್ತಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇದನ್ನು ಸಹಿಸದ ಪಾಕಿಸ್ತಾನವು ಐರಿಸ್ ಡೇನಾ ಯುದ್ಧ ನೌಕೆಯ ಪತನದ ಹಿಂದೆ ಭಾರತದ ಹಸ್ತಕ್ಷೇಪವಿದೆ ಎನ್ನುವ ಕಥೆಯೊಂದನ್ನು ಕಟ್ಟಿ ವಿಶ್ವಕ್ಕೆ ಸಾರುವ ಪ್ರಯತ್ನ ಮಾಡಿತ್ತು. ಹಾಗೆಯೇ ಈ ಸುಳ್ಳು ಸುದ್ದಿಯ ಮೂಲಕ ಭಾರತದ ಮೇಲೆ ಇರಾನ್ ದಾಳಿ ಮಾಡಬೇಕು ಎನ್ನುವುದು ಪಾಕಿಸ್ತಾನದ ಶಡ್ಯಂತ್ರವಾಗಿತ್ತು ಎನ್ನುವುದು ತಿಳಿದುಬಂದಿದೆ.

TacticalTribun ಖಾತೆಯ ಮೂಲಕ ಮಾರ್ಚ್ 4ರಂದು ಇದಕ್ಕೆ ಪೂರಕವಾಗಿ ಸಂದೇಶವೊಂದನ್ನು ಹಾಕಲಾಗಿತ್ತು. ಐರಿಸ್ ಡೇನಾದ ಚಲನೆ ಹಾಗೂ ನಿಖರವಾದ ಸ್ಥಳದ ಮಾಹಿತಿಯನ್ನು ಭಾರತವು ಅಮೆರಿಕದೊಂದಿಗೆ ಹಂಚಿಕೊಂಡಿದೆ. ಎನ್ನುವುದು ಈ ಖಾತೆಯ ಮೂಲಕ ಮಾಡಿದ ಪೋಸ್ಟ್​ನ ಸಾರಾಂಶವಾಗಿತ್ತು.

ಈ ಪೋಸ್ಟ್​ ಅನ್ನು 500ಕ್ಕೂ ಅಧಿಕ ಜನರು ಶೇರ್ ಮಾಡಿದ್ದರು. ಇದಕ್ಕೆ #IndiaBetraysIran ಹ್ಯಾಶ್​​ಟ್ಯಾಗ್ ಮೂಲಕ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಮಾಡುವ ಪ್ರಯತ್ನವೂ ನಡೆದಿತ್ತು. ಸುಮಾರು 500ಕ್ಕೂ ಅಧಿಕ ರೀಲ್​ಪೋಸ್ಟ್​ ಜತೆಗೆ ರಿಪೋಸ್ಟ್​ ಮಾಡಲಾಗಿತ್ತು. ಇದಕ್ಕೆ ಮಿಲಿಯನ್​ಗಟ್ಟಲೆ ವ್ಯೂಸ್ ಕೂಡಾ ಬಂದಿತ್ತು. ಈ ಟ್ರೆಂಡ್​ನಲ್ಲಿ ಕಾರ್ಯನಿರ್ವಹಿಸಿದ ಶೇ.40ಕ್ಕೂ ಅಧಿಕ ಪೋಸ್ಟ್​ಗಳು ಪಾಕ್ ಮೂಲದ್ದಾಗಿತ್ತು, ಇನ್ನುಳಿದ ಕೆಲವು ಮದ್ಯಪ್ರಾಚ್ಯ , ಆಫ್ರಿಕಾ ಹಾಗೂ ಇತರೆ ರಾಷ್ಟ್ರಗಳ ಮೂಲಕ ನಡೆದಿತ್ತು.

ಅಂದಹಾಗೆ ಇದೇನು ಈ ಕುತಂತ್ರಿಗಳ ಮೊದಲ ಪ್ರಯತ್ನವಾಗಿರಲಿಲ್ಲ, ಕೆಲ ದಿನಗಳ ಹಿಂದೆ, ರಾಜನಾಥ್ ಸಿಂಗ್ ಅವರ ಎಐ ವಿಡಿಯೋ ಹಾಕಿ, ಇರಾನ್ ಮೇಲಿನ ದಾಳಿಗೆ ಭಾರತದ ಸಂಪೂರ್ಣ ಬೆಂಬಲವಿದೆ ಎಂಬುವ ರೀತಿ ಬಿಂಬಿಸಲಾಗಿತ್ತು. ಹಾಗೆಯೇ ಇರಾನ್​ ಸರ್ವೋಚ್ಛ ನಾಯಕರಾಗಿದ್ದ ಅಲಿ ಖಮೇಲಿ ಹತ್ಯೆಗೂ ಭಾರತವು ಪ್ರಧಾನಿ ನರೇಂದ್ರ ಮೋದಿ ಮೂಲಕ ಇಸ್ರೇಲ್ ಹಾಗೂ ಅಮೆರಿಕಕ್ಕೆ ಬೆಂಬಲ ಸೂಚಿಸುತ್ತು ಎನ್ನುವಂತೆ ಹೇಳಲಾಗಿತ್ತು.

ಆದರೆ ಈ ಎರಡೂಸುದ್ದಿಗಳ ಬಗ್ಗೆ ಪಿಐಬಿ ಫ್ಯಾಕ್ಟ್​ ಚೆಕ್ ಮೂಲಕ ಸ್ಪಷ್ಟನೆ ನಿಡಿತ್ತು.ಆದರೆ ಐರಿಸ್ ಡೇನಾ ಮೂಲಕ ಮತ್ತೆ ಕುತಂತ್ರ ಮಾಡಲು ಹೋದ ಹಿನ್ನೆಲೆಯಲ್ಲಿ ಈ ಟ್ರೆಂಡ್​ನಲ್ಲಿ ಭಾಗಿಯಾದ ಹಲವು ಖಾತೆಗಳನ್ನು ರದ್ದುಪಡಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IPL 2026: ಟಿಕೆಟ್ ಖರೀದಿ ಬಗ್ಗೆ ಮಾಹಿತಿ ನೀಡಿದ ಆರ್​ಸಿಬಿ; ಸ್ಟೇಡಿಯಂ ಎಂಟ್ರಿ, ಪಾರ್ಕಿಂಗ್ ವಿವರವೂ ಇಲ್ಲಿದೆ

2026 ರ ಐಪಿಎಲ್ (IPL 2026) ಮಾರ್ಚ್​ 28 ರಿಂದ ಆರಂಭವಾಗುತ್ತಿದೆ. ಟೂರ್ನಿಯ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಆರ್​ಸಿಬಿ, ಸನ್‌ರೈಸರ್ಸ್ ಹೈದರಾಬಾದ್ (RCB vs SRH) ತಂಡವನ್ನು ಎದುರಿಸಲಿದೆ. ಇದರ ಜೊತೆಗೆ ಉಭಯ ತಂಡಗಳ ನಡುವಿನ ಈ ಉದ್ಘಾಟನಾ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂದರೆ ಆರ್​ಸಿಬಿ ತನ್ನ ಮೊದಲ ಪಂದ್ಯವನ್ನು ತನ್ನ ತವರು ಮೈದಾನದಲ್ಲಿ ಆಡುತ್ತಿದೆ. ಹೀಗಾಗಿ ಅಭಿಮಾನಿಗಳು ಕೂಡ ತನ್ನ ನೆಚ್ಚಿನ ತಂಡ ಮೊದಲ ಪಂದ್ಯವನ್ನು ತವರಿನಲ್ಲಿ ಆಡುವುದನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಆರ್​ಸಿಬಿ ಫ್ರಾಂಚೈಸಿ ಕೂಡ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.

ಅದೆನೆಂದರೆ ಉದ್ಘಾಟನಾ ಪಂದ್ಯ ಆರಂಭಕ್ಕೆ 8 ದಿನ ಬಾಕಿ ಇರುವಾಗ ಮೊದಲ ಪಂದ್ಯದ ಟಿಕೆಟ್ ಖರೀದಿಯ ಬಗ್ಗೆ ಆರ್​ಸಿಬಿ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಇದರ ಜೊತೆಗೆ ಪಂದ್ಯವನ್ನು ವೀಕ್ಷಿಸಲು ಬರುವ ಅಭಿಮಾನಿಗಳು ತಮ್ಮ ತಮ್ಮ ವಾಹನಗಳನ್ನು ಎಲ್ಲಿ ಪಾರ್ಕ್​ ಮಾಡಬೇಕು? ಯಾವ ಯಾವ ಮಾರ್ಗದಿಂದ ಕ್ರೀಡಾಂಗಣಕ್ಕೆ ಎಂಟ್ರಿಕೊಡಬಹುದು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ. ಅಭಿಮಾನಿಗಳಿಗೆ ಯಾವುದೇ ಗೊಂದಲವುಂಟಾಗಬಾರದು ಮತ್ತು ಕಳೆದ ವರ್ಷ ನಡೆದ ಅಹಿತಕರ ಘಟನೆ ಮತ್ತೆ ಮರುಕಳಿಸದಂತೆ ತಡೆಯಲು ಆರ್​ಸಿಬಿ ಫ್ರಾಂಚೈಸಿ ಈ ಬಾರಿ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದೆ.

ಫ್ಯಾನ್ಸ್​ಗೆ ಮಾಹಿತಿ ನೀಡಿದ ಆರ್​ಸಿಬಿ

ಮೊದಲ ಪಂದ್ಯದ ಟಿಕೆಟ್ ಖರೀದಿ ಬಗ್ಗೆ ಆರ್​ಸಿಬಿ ಅಭಿಮಾನಿಗಳಿಗೆ ವಿವರವಾದ ಸಲಹೆಯನ್ನು ನೀಡಿದೆ. ಆದಾಗ್ಯೂ ಪಂದ್ಯದ ಟಿಕೆಟ್ ಮಾರಾಟ ಇನ್ನೂ ಆರಂಭವಾಗಿಲ್ಲ. ಟಿಕೆಟ್ ಮಾರಾಟ ಆರಂಭವಾಗುವ ದಿನಾಂಕವನ್ನು ಇಷ್ಟರಲ್ಲೇ ಪ್ರಕಟಿಸುವ ಬಗ್ಗೆ ಮಾಹಿತಿ ನೀಡಿರುವ ಆರ್​ಸಿಬಿ, ಪಂದ್ಯದ ಟಿಕೆಟ್‌ಗಳನ್ನು ಫ್ರಾಂಚೈಸಿಯ ಅಧಿಕೃತ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಸುವಂತೆ ಅಭಿಮಾನಿಗಳಿಗೆ ಸೂಚನೆ ನೀಡಿದೆ. ಅಲ್ಲದೆ ಇತರೆ ಮೂಲಗಳಿಂದ ಟಿಕೆಟ್ ಖರೀದಿಸಲು ಪ್ರಯತ್ನಿಸಿ ಮೋಸ ಹೋಗದಂತೆಯೂ ಎಚ್ಚರಿಕೆ ನೀಡಿದೆ. ಟಿಕೆಟ್ ಮಾರಾಟ ಪ್ರಾರಂಭವಾದ ನಂತರ ಟಿಕೆಟ್‌ಗಳನ್ನು ಅಧಿಕೃತ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾತ್ರ ಖರೀದಿಸಬೇಕು ಎಂದು ಆರ್​ಸಿಬಿ ಒತ್ತಿ ಹೇಳಿದೆ.

ಪಾರ್ಕಿಂಗ್, ಎಂಟ್ರಿ ಬಗ್ಗೆಯೂ ಇಲ್ಲಿದೆ ಮಾಹಿತಿ

ಅಭಿಮಾನಿಗಳು ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ, ಪಂದ್ಯದ ಟಿಕೆಟ್ ಖರೀದಿಸಿದವರಿಗೆ ಪಂದ್ಯದ ದಿನಗಳಲ್ಲಿ ಮೆಟ್ರೋ ಪ್ರಯಾಣ ಉಚಿತವಾಗಿರಲಿದೆ. ಹಾಗಯೇ ಅಭಿಮಾನಿಗಳು ಟಿಕೆಟ್‌ಗಳನ್ನು ಖರೀದಿಸುವಾಗಲೇ ಸೀಮಿತ ಪಾರ್ಕಿಂಗ್ ಸ್ಥಳಗಳನ್ನು ಮುಂಗಡವಾಗಿ ಬುಕ್ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ, ಜೊತೆಗೆ ಕ್ರೀಡಾಂಗಣದ ಬಳಿ ಪಿಕ್-ಅಪ್ ಮತ್ತು ಡ್ರಾಪ್‌ಗಾಗಿ ಶಟಲ್ ಸೇವೆಗಳನ್ನು ಸಹ ಪಡೆಯಬಹುದಾಗಿದೆ. ಇದರ ಜೊತೆಗೆ ಟಿಕೆಟ್ ಹೊಂದಿರುವ ಪ್ರೇಕ್ಷಕರು ಕ್ರೀಡಾಂಗಣದೊಳಕ್ಕೆ ಕಬ್ಬನ್ ರಸ್ತೆ ಮತ್ತು ಲಿಂಕ್ ರಸ್ತೆ ಮೂಲಕ ಮಾತ್ರ ಪ್ರವೇಶಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಜನಸಂದಣಿ ನಿರ್ವಹಣೆಗಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಫ್ರಾಂಚೈಸಿ ತಿಳಿಸಿದೆ.

ಟಿಕೆಟ್‌ಗಳನ್ನು ಯಾವಾಗ ಮತ್ತು ಎಲ್ಲಿ ಖರೀದಿಸಬೇಕು?

ಆರ್‌ಸಿಬಿ, ಪೂರ್ವ-ಬುಕಿಂಗ್ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದ್ದರೂ, ಟಿಕೆಟ್ ಮಾರಾಟ ಆರಂಭವಾಗುವ ದಿನಾಂಕಗಳನ್ನು ಇನ್ನೂ ದೃಢೀಕರಿಸಿಲ್ಲ. ಆದಾಗ್ಯೂ ಅಭಿಮಾನಿಗಳು ಫ್ರಾಂಚೈಸ್ ಮತ್ತು ಬಿಸಿಸಿಐನ ಅಧಿಕೃತ ವೆಬ್‌ಸೈಟ್‌ಗಳನ್ನು ಆಗಾಗ್ಗೆ ಪರಿಶೀಲಿಸುವ ಮೂಲಕ ಮಾಹಿತಿ ಪಡೆದುಕೊಳ್ಳಲು ತಿಳಿಸಿದೆ. ಟಿಕೆಟ್ ಮಾರಾಟ ಆರಂಭವಾದ ಬಳಿಕ ತಂಡದ ಅಧಿಕೃತ ವೆಬ್‌ಸೈಟ್, ಬುಕ್‌ಮೈಶೋ, ಜೊಮಾಟೊದ ಡಿಸ್ಟ್ರಿಕ್ಟ್ ಅಪ್ಲಿಕೇಶನ್ ಸೇರಿದಂತೆ ಬಹು ಅಧಿಕೃತ ಪ್ಲಾಟ್‌ಫಾರ್ಮ್‌ಗಳ ಮೂಲಕ ಟಿಕೆಟ್‌ಗಳನ್ನು ಖರೀದಿಸಬಹುದು. ಈ ಪ್ಲಾಟ್‌ಫಾರ್ಮ್‌ಗಳು ಅಭಿಮಾನಿಗಳಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ಬುಕಿಂಗ್ ಆಯ್ಕೆಗಳನ್ನು ನೀಡುತ್ತವೆ.

IPL: ಐಪಿಎಲ್ ಇತಿಹಾಸದಲ್ಲಿ ಪರ್ಪಲ್ ಕ್ಯಾಪ್ ಗೆಲ್ಲದ ಐವರು ಲೆಜೆಂಡರಿ ಬೌಲರ್​ಗಳಿವರು

ಟಿಕೆಟ್‌ಗಳನ್ನು ಆನ್‌ಲೈನ್, ಆಫ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ?

ಆನ್‌ಲೈನ್ ಬುಕಿಂಗ್‌ಗಳಿಗಾಗಿ, ಅಭಿಮಾನಿಗಳು ಬುಕ್‌ಮೈಶೋ, ಅಥವಾ ಆರ್‌ಸಿಬಿಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ತಾವು ವೀಕ್ಷಿಸಬೇಕೆಂದಿರುವ ಪಂದ್ಯವನ್ನು ಆಯ್ಕೆ ಮಾಡಬೇಕು. ಆ ನಂತರ ಆಸನ ವಿಭಾಗಗಳನ್ನು ಆಯ್ಕೆ ಮಾಡಿ ಯುಪಿಐ, ಕಾರ್ಡ್‌ಗಳು ಅಥವಾ ನೆಟ್ ಬ್ಯಾಂಕಿಂಗ್‌ನಂತಹ ಡಿಜಿಟಲ್ ಆಯ್ಕೆಗಳನ್ನು ಬಳಸಿಕೊಂಡು ಹಣವನ್ನು ಪಾವತಿ ಮಾಡಬೇಕು. ನಂತರ ಟಿಕೆಟ್‌ಗಳು ಇಮೇಲ್ ಅಥವಾ SMS ಮೂಲಕ ಪ್ರೇಕ್ಷಕನಿಗೆ ಲಭ್ಯವಾಗುತ್ತವೆ.

ಇನ್ನು ಆಫ್​ಲೈನ್​ನಲ್ಲಿ ಟಿಕೆಟ್ ಖರೀದಿಸಲು ಬಯುಸವವರು ಅಧಿಕೃತ ಕ್ರೀಡಾಂಗಣದ ಕೌಂಟರ್‌ಗಳಲ್ಲಿ ಖರೀದಿಸಬಹುದಾಗಿದೆ. ಅಲ್ಲಿ ಅಭಿಮಾನಿಗಳು ಆಸನಗಳನ್ನು ಆಯ್ಕೆ ಮಾಡಿ, ನಗದು ಅಥವಾ ಕಾರ್ಡ್ ಮೂಲಕ ಹಣ ಪಾವತಿಸಿ ತಕ್ಷಣವೇ ಟಿಕೆಟ್‌ಗಳನ್ನು ಪಡೆಯಬಹುದು. ಆದಾಗ್ಯೂ ಆಫ್​ಲೈನ್ ಟಿಕೆಟ್ ಖರೀದಿ ಮಾಡುವವರು ಕಡ್ಡಾಯವಾಗಿ ತಮ್ಮ ಫೋಟೋ ಐಡಿಯನ್ನು ಹೊಂದಿರಬೇಕಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್​​: ಚಾರ್ಜ್​​ಶೀಟ್​​ ವಿರುದ್ಧ ಜೆಡಿಎಸ್ ಶಾಸಕನ​​ ಆಕ್ರೋಶ

ಹಾಸನ, ಮಾರ್ಚ್​​ 20: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದ ಚಾರ್ಜ್​ಶೀಟ್​ನಲ್ಲಿ ಜೆಡಿಎಸ್ ಕಾರ್ಯಕರ್ತರ ಹೆಸರುಗಳನ್ನು ಸೇರ್ಪಡೆಗೊಳಿಸಿರುವುದಕ್ಕೆ ಹಾಸನದ ಜೆಡಿಎಸ್ ಶಾಸಕ ಸ್ವರೂಪ್ ಪ್ರಕಾಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕ್ರಮವು ಪ್ರಕರಣದ ತನಿಖೆಯ ದಿಕ್ಕನ್ನು ತಪ್ಪಿಸುವ ಯತ್ನ ಎಂದು ಅವರು ಆರೋಪಿಸಿದ್ದಾರೆ. ಪ್ರಕರಣದಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳ ಹೆಸರುಗಳನ್ನು ಕೈಬಿಟ್ಟು, ಯಾವುದೇ ಸಂಬಂಧವಿಲ್ಲದ 10-12 ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಸಿಲುಕಿಸಲಾಗಿದೆ. ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚುವ ಬದಲು, ಜೆಡಿಎಸ್ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿರುವುದನ್ನು ಖಂಡಿಸುತ್ತೇವೆ. ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಸರ್ಕಾರ ಹೊರತರಬೇಕು. ಈ ಸಂಬಂಧ ತಮ್ಮ ಪಕ್ಷದ ಕಾರ್ಯಕರ್ತರು ಧೃತಿಗೆಡಬಾರದು ಎಂದು ಮನವಿ ಮಾಡಿರುವ ಅವರು, ಕಾನೂನು ಹೋರಾಟಕ್ಕೆ ಸಿದ್ಧವಾಗಿರೋದಾಗಿ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮದುವೆಯಾಗಿದ್ದರೂ ಮತ್ತೊಬ್ಬ ವಿವಾಹಿತೆ ಮೇಲೆ ಲವ್​: ಮಹಿಳೆ ಇರಿದು ಕೊಂದವ ಜೈಲು ಪಾಲು

ಬೆಂಗಳೂರು, ಮಾರ್ಚ್​​ 20: ಗಂಗೊಂಡನಹಳ್ಳಿಯಲ್ಲಿ ಇಬ್ಬರು ಮಕ್ಕಳ ತಾಯಿ ಹಿಂದೆ ಬಿದ್ದ ಯುವಕನೋರ್ವ ಆಕೆಯನ್ನು ಡ್ಯಾಗರ್​ನಿಂದ ಇರಿದು ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಆರೋಪಿ ಹಫೀಜ್​​ನ ಚಂದ್ರಾಲೇಔಟ್​ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸಂಜೆ ಫೀರ್ದೋಸ್ ಬಾನು ಎಂಬಾಕೆಯನ್ನು ಈತ ಹತ್ಯೆಗೈದಿದ್ದು, ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಹಫೀಜ್ನ ಅರೆಸ್ಟ್​​ ಮಾಡಲಾಗಿದೆ.  ಮಹಿಳೆ ಆರೋಪಿಯನ್ನು ದೂರ ಮಾಡಿದ್ದೇ ಕೊಲೆಗೆ ಕಾರಣವಾಗಿದ್ದು, ಫೀರ್ದೋಸ್ ಬಾನುಗೆ ಆರೋಪಿ ಹಫೀಜ್ ಜತೆ ಸಂಪರ್ಕ ಇತ್ತು ಎಂಬುದು ತನಿಖೆ ವೇಳೆ ಬಯಲಾಗಿದೆ.

ಮೃತ ಫೀರ್ದೋಸ್ ಬಾನು ಮತ್ತು ಆರೋಪಿ ಹಫೀಜ್ ಇಬ್ಬರು ಚೆನ್ನಾಗಿಯೇ ಇದ್ದರು. ಈ ವಿಚಾರ ಮಹಿಳೆ ಕುಟುಂಬಕ್ಕೂ ಗೊತ್ತಿತ್ತು. ಈ ನಡುವೆ ಫೀರ್ದೋಸ್​ಗೆ ಕುಟುಂಬದವರು ಬುದ್ಧಿವಾದ ಹೇಳಿದ್ದರು. ಆ ಬಳಿಕ ಫೆ.28ರಂದು ಮಹಿಳೆ ಜತೆ ಹಫೀಜ್ ಗಲಾಟೆ ಮಾಡಿದ್ದ. ಈ ಸಂಬಂಧ ಚಂದ್ರಾಲೇಔಟ್ ಪೊಲೀಸರಿಗೆ ಫೀರ್ದೋಸ್ ಬಾನು ಕುಟುಂಬ ದೂರು ನೀಡಿತ್ತು. ಪ್ರಕರಣ ಸಂಬಂಧ ಆರೋಪಿ ಹಫೀಜ್​ನನ್ನು ಠಾಣೆಗೆ ಕರೆದು ಬುದ್ಧಿವಾದ ಹೇಳಲಾಗಿತ್ತು. ಜೊತೆಗೆ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿಕೊಂಡು ರಾಜಿ ಮಾಡಿಕೊಂಡಿದ್ದರು. ಕೇಸ್ ಬೇಡ ಮುಚ್ಚಳಿಕೆ ಬರೆಸಿಕೊಡಿ ಎರಡೂ ಕಡೆಯವರು ಎಂದಿದ್ದರು. ಆದರೆ ನಿನ್ನೆ ಸಂಜೆ ಮನೆಗೆ ತೆರಳುವ ದಾರಿಯಲ್ಲಿ ಫೀರ್ದೋಸ್​​ನ ಹಫೀಜ್​​ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಪ್ರಕರಣ ಸಂಬಂಧ ಆರೋಪಿ ಬಂಧಿಸಿರುವ ಚಂದ್ರಾಲೇಔಟ್ ಠಾಣೆಯ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಇರಿದು ಭೀಕರವಾಗಿ ಕೊಲೆ; ಭಾವಿ ಪತಿ ಅನುಮಾನಕ್ಕೆ ಅಪ್ರಾಪ್ತೆ ಬಲಿ

ಇನ್ನು ಪ್ರಕರಣ ಮಾಹಿತಿ ನೀಡಿರುವ ಪಶ್ಚಿಮ ವಲಯ ಡಿಸಿಪಿ ಯತೀಶ್, ಆರೋಪಿ ಹಫೀಜ್​ ಮತ್ತು ಕೊಲೆಯಾಗಿರುವ ಫಿರ್ದೋಸ್ ಬಾನು ಇಬ್ಬರಿಗೂ ಪ್ರತ್ಯೇಕ ಮದುವೆಯಾಗಿ ಮಕ್ಕಳಿದ್ದಾರೆ. ಆರೋಪಿ ಯಾವುದೇ ‌ಕೆಲಸಕ್ಕೆ ಹೋಗುತ್ತಿರಲಿಲ್ಲ. ಮಹಿಳೆ ನಿನ್ನೆ ಕೆಲಸಕ್ಕೆ ಹೋಗಿ ಬರುವಾಗ ಹಿಂಬಾಲಿಸಿಕೊಂಡು ಬಂದಿದ್ದ ಆತ, ಸುಮಾರು ಆರೇಳು ಬಾರಿ ಚಾಕುವಿನಿಂದ ಇರಿದ್ದಿದ್ದಾನೆ. ತಕ್ಷಣವೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆ್ಯಂಬ್ಯುಲೆನ್ಸ್ ಕಾರು ನಡುವೆ ಡಿಕ್ಕಿ; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ!

ಶಿವಮೊಗ್ಗ, ಮಾ.20: ನಗರದ ಜನನಿಬಿಡ ಪ್ರದೇಶವಾದ ಅಕ್ಕಮಹಾದೇವಿ ವೃತ್ತದಲ್ಲಿ ಕಾರು ಮತ್ತು ಆ್ಯಂಬ್ಯುಲೆನ್ಸ್ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಮೂರ್ನಾಲ್ಕು ಬಾರಿ ಪಲ್ಟಿ ಹೊಡೆದಿದ್ದು, ಸೃವದೈವವಶಾತ್ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ವೇಗವಾಗಿ ಬಂದ ಬ್ರೀಜಾ ಕಾರು ಮತ್ತು ಆ್ಯಂಬ್ಯುಲೆನ್ಸ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಮೂರ್ನಾಲ್ಕು ಬಾರಿ ಪಲ್ಟಿ ಹೊಡೆದಿದೆ. ಈ ಮೈನವಿರೇಳಿಸುವ ದೃಶ್ಯಗಳು ಹತ್ತಿರದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆ್ಯಂಬ್ಯುಲೆನ್ಸ್ ಚಾಲಕನ ಕಾಲಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.ಘಟನಾ ಸ್ಥಳಕ್ಕೆ ಶಿವಮೊಗ್ಗ ಪೂರ್ವ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಯುವ ನಟನಿಂದ ಸ್ಪೂರ್ತಿ, ಉಚಿತ ಶಿಕ್ಷಣ ಘೋಷಿಸಿದ ಮೆಗಾಸ್ಟಾರ್ ಚಿರಂಜೀವಿ

ಮೆಗಾಸ್ಟಾರ್ ಚಿರಂಜೀವಿ (Megastar Chiranjeevi), ಭಾರತದ ಸೂಪರ್ ಸ್ಟಾರ್ ನಟರಲ್ಲಿ ಒಬ್ಬರು. ಒಂದು ಸಮಯದಲ್ಲಿ ಅಮಿತಾಬ್ ಬಚ್ಚನ್​​ಗಿಂತಲೂ ದೊಡ್ಡ ಸ್ಟಾರ್ ಆಗಿದ್ದ ಚಿರಂಜೀವಿ, ಭಾರತದಲ್ಲಿ ಒಂದು ಕೋಟಿ ಸಂಭಾವನೆ ಪಡೆದಿದ್ದ ಮೊದಲ ನಟ. ಈಗಲೂ ಸಿನಿಮಾಗಳಲ್ಲಿ ಸಕ್ರಿಯವಾಗಿರುವ ಚಿರಂಜೀವಿ, ಸಿನಿಮಾ ನಟರುಗಳು ಹೇಗೆ ಅಭಿಮಾನಿ ಸಂಘಗಳ ಬಳಸಿ ಎಷ್ಟು ಸಕ್ರಿಯವಾಗಿ ಸಮಾಜ ಸೇವೆ ಮಾಡಬಹುದು ಎಂದು ತೋರಿಸಿಕೊಟ್ಟ ಕೆಲವೇ ಸ್ಟಾರ್ ನಟರುಗಳಲ್ಲಿ ಒಬ್ಬರು. ಮೆಗಾಸ್ಟಾರ್ ಅವರು ಪ್ರಾರಂಭಿಸಿದ ಬ್ಲಡ್ ಬ್ಯಾಂಕ್​​ಗಳು ಸಾವಿರಾರು ಜೀವಗಳನ್ನು ಉಳಿಸಿವೆ. ಈಗಲೂ ಸಹ ಚಿರಂಜೀವಿ ಹಲವು ಸಮಾಜ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ಅವರು ಬಹಳ ಮಹತ್ವವಾದ ಒಂದು ಸಾಮಾಜಿಕ ಕಾರ್ಯಕ್ಕೆ ಕೈ ಹಾಕಿದ್ದು, ಅದಕ್ಕೆ ಸ್ಪೂರ್ತಿ ತಮಿಳಿನ ಯುವ ಸ್ಟಾರ್ ನಟ ಎಂದು ಖುದ್ದು ಅವರೇ ಹೇಳಿಕೊಂಡಿದ್ದಾರೆ.

ಯುಗಾದಿ ಹಬ್ಬದ ಶುಭ ಸಂದರ್ಭದಲ್ಲಿ ಚಿರಂಜೀವಿ ಅವರು ಸಮಾಜಸೇವೆಯ ಕ್ಷೇತ್ರದಲ್ಲಿ ಹೊಸ ಅಧ್ಯಾಯವೊಂದನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ. ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಚಿರಂಜೀವಿ ಚಾರಿಟಬಲ್ ಟ್ರಸ್ಟ್ ಮೂಲಕ ರಕ್ತದಾನ ಮತ್ತು ನೇತ್ರದಾನ ಶಿಬಿರಗಳನ್ನು ನಡೆಸುತ್ತಾ ಲಕ್ಷಾಂತರ ಜೀವಗಳನ್ನು ಉಳಿಸಿರುವ ಚಿರಂಜೀವಿ, ಈಗ ಶಿಕ್ಷಣ ಕ್ಷೇತ್ರದತ್ತ ಹೆಜ್ಜೆ ಇಟ್ಟಿದ್ದಾರೆ. ತಮಿಳು ನಟ ಸೂರ್ಯ ನಡೆಸುತ್ತಿರುವ ‘ಅಗರಂ ಫೌಂಡೇಶನ್’ ಇಂದು ಸ್ಪೂರ್ತಿ ಪಡೆದು ಈ ಹೊಸ ಹೆಜ್ಜೆ ಇಟ್ಟಿರುವುದಾಗಿ ಚಿರಂಜೀವಿ ಹೇಳಿದ್ದಾರೆ. ಹಿರಿಯ ನಟರಾದರೂ ಕಿರಿಯ ನಟನಿಂದ ಸ್ಪೂರ್ತಿ ಪಡೆದಿರುವುದಾಗಿ ಯಾವುದೇ ಅಹಂ ಇಲ್ಲದೆ ಹೇಳಿಕೊಂಡಿದ್ದಾರೆ ಚಿರಂಜೀವಿ.

ಆಸಕ್ತಿಕರ ವಿಷಯವೆಂದರೆ ಈ ಹಿಂದೆ ನಟ ಸೂರ್ಯ ಅವರು ತಮ್ಮ ‘ಅಗರಂ ಫೌಂಡೇಶನ್’ನ ಸಮಾರಂಭದಲ್ಲಿ, ಮೆಗಾಸ್ಟಾರ್ ಚಿರಂಜೀವಿ ಅವರ ರಕ್ತದಾನ ಶಿಬಿರಗಳಿಂದ ಸ್ಫೂರ್ತಿ ಪಡೆದು ತಮ್ಮ ಫೌಂಡೇಶನ್ ಪ್ರಾರಂಭಿಸಿದ್ದಾಗಿ ಹೇಳಿಕೊಂಡಿದ್ದರು. ಈಗ ಅದೇ ಚಿರಂಜೀವಿ ಅವರು ಸೂರ್ಯ ಅವರ ಶಿಕ್ಷಣ ಸೇವೆಯನ್ನು ಕಂಡು, ಅದರಿಂದಲೇ ಸ್ಫೂರ್ತಿ ಪಡೆದು ತೆಲುಗು ರಾಜ್ಯಗಳು ಸೇರಿದಂತೆ ಅಗತ್ಯವಿರುವ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ:ಚಿರಂಜೀವಿ ಮೇಲೆ ನಡೆದಿತ್ತು ವಿಶಪ್ರಾಷನ ಪ್ರಯತ್ನ; ನಟ ಬಚಾವ್ ಆಗಿದ್ದೇ ಪವಾಡ

ಈ ಯೋಜನೆಯು ಕೇವಲ ಆಂಧ್ರಪ್ರದೇಶ ಅಥವಾ ತೆಲಂಗಾಣಕ್ಕೆ ಸೀಮಿತವಾಗಿರದೆ, ದೇಶದ ಯಾವುದೇ ಭಾಗದಲ್ಲಿ ಶಿಕ್ಷಣದ ಅಗತ್ಯವಿರುವ ಬಡ ವಿದ್ಯಾರ್ಥಿಗಳಿಗೆ ನೆರವಾಗಲಿದೆಯಂತೆ. ಬಡತನದ ಕಾರಣದಿಂದ ಶಿಕ್ಷಣದಿಂದ ವಂಚಿತರಾಗುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಉಚಿತವಾಗಿ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಈ ಯೋಜನೆಯ ರೂಪುರೇಷೆ ಮತ್ತು ಅನುಷ್ಠಾನದ ಬಗ್ಗೆ ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸುವುದಾಗಿ ಚಿರಂಜೀವಿ ತಿಳಿಸಿದ್ದಾರೆ.

‘ಒಬ್ಬ ವ್ಯಕ್ತಿ ಸುಶಿಕ್ಷಿತನಾದರೆ ಆ ಇಡೀ ಕುಟುಂಬವೇ ಅಭಿವೃದ್ಧಿ ಹೊಂದುತ್ತದೆ. ರಕ್ತದಾನವು ಜೀವ ಉಳಿಸಿದರೆ, ಶಿಕ್ಷಣವು ಒಂದು ತಲೆಮಾರಿನ ಭವಿಷ್ಯವನ್ನೇ ಬದಲಿಸುತ್ತದೆ ಎಂಬುದು ನನ್ನ ನಂಬಿಕೆ’ ಎಂದು ಚಿರಂಜೀವಿ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ. ರಕ್ತದಾನ ಮತ್ತು ನೇತ್ರದಾನದ ಮೂಲಕ ಜನಸಾಮಾನ್ಯರ ಆಪದ್ಬಾಂಧವರಾಗಿರುವ ಚಿರಂಜೀವಿ ಅವರ ಈ ನಿರ್ಧಾರಕ್ಕೆ ಅಭಿಮಾನಿಗಳಿಂದ ಮತ್ತು ಸಮಾಜದ ಗಣ್ಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕೂಡ ತಮ್ಮ ಅಣ್ಣನ ಈ ಉದಾತ್ತ ನಿರ್ಧಾರವನ್ನು ಶ್ಲಾಘಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ನಿನಗೆ ಸರಿಯಾಗಿ ಏಟು ಬೀಳುತ್ತೆ’; ಪಂಕಜ್ ತ್ರಿಪಾಠಿಗೆ ನಾನಾ ಪಾಟೇಕರ್ ಬೆದರಿಕೆವೊಡ್ಡಿದ್ದೇಕೆ?

ಬಾಲಿವುಡ್‌ನಲ್ಲಿ ನಾನಾ ಪಾಟೇಕರ್ ತಮ್ಮ ಅದ್ಭುತ ನಟನೆಗೆ ಮಾತ್ರವಲ್ಲದೆ ತಮ್ಮ ನೇರ ಮಾತು ಹಾಗೂ ಸ್ವಭಾವಕ್ಕೂ ಹೆಸರುವಾಸಿಯಾಗಿದ್ದಾರೆ. ನಾನಾ ತನ್ನ ಮನಸ್ಸಿಗೆ ಬಂದದ್ದನ್ನು ಹೇಳಲು ಎಂದಿಗೂ ಹಿಂಜರಿಯುವುದಿಲ್ಲ. ಅವರು ಈ ಮೊದಲು ಪಂಕಜ್ ತ್ರಿಪಾಠಿಗೆ ಹೊಡೆಯೋದಾಗಿ ಬೆದರಿಕೆ ಹಾಕಿದ್ದರು. ಅದಕ್ಕೆ ಕಾರಣವೂ ಇತ್ತು.

ನಾನಾ ಪಾಟೇಕರ್ ಅವರ ಸ್ವಭಾವ ಅವರ ಹೃದಯದಷ್ಟೇ ಕಠಿಣ. ಆದರೆ, ಅವರಲ್ಲಿ ಒಳ್ಳೆಯ ಮನಸ್ಸು ಕೂಡ ಇದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮತ್ತು ಹೊಸ ಕಲಾವಿದರನ್ನು ಪ್ರೋತ್ಸಾಹಿಸುವುದು ಅವರ ಸ್ವಭಾವ. 2018ರಲ್ಲಿ, ನಾನಾ ಪಾಟೇಕರ್ ರಜನಿಕಾಂತ್ ಅವರ ‘ಕಾಲಾ’ದಲ್ಲಿ ಖಳನಾಯಕ ‘ಹರಿದೇವ್ ಅಭ್ಯಂಕರ್’ ಪಾತ್ರವನ್ನು ನಿರ್ವಹಿಸಿದರು. ಚಿತ್ರದ ಸೆಟ್‌ ಅಲ್ಲಿ ಪಂಕಜ್ ತ್ರಿಪಾಠಿ ಕೂಡ ಇದ್ದರು.

ಪಂಕಜ್ ಅವರನ್ನು ನೋಡಿ ನಾನಾ ಸಂಪೂರ್ಣವಾಗಿ ಮೂಕವಿಸ್ಮಿತರಾಗಿದ್ದರು. ಪಂಕಜ್ ತ್ರಿಪಾಠಿ ‘ಕಾಲಾ’ದಲ್ಲಿ ಪೊಲೀಸ್ ಅಧಿಕಾರಿಯಾಗಿ ಒಂದು ಸಣ್ಣ ಪಾತ್ರವನ್ನು ಮಾತ್ರ ನಿರ್ವಹಿಸಿದ್ದರು. ಅಂತಹ ಪಾತ್ರವನ್ನು ಯಾವುದೇ ಸಾಮಾನ್ಯ ಕಲಾವಿದನಿಗೆ ಸುಲಭವಾಗಿ ನೀಡಬಹುದಿತ್ತು. ಆದರೆ ಇಂತಹ ಪ್ರತಿಭಾನ್ವಿತ ನಟನನ್ನು ಇಷ್ಟು ಸಣ್ಣ ಪಾತ್ರದಲ್ಲಿ ನೋಡಿ, ನಾನಾ ಕೋಪಗೊಂಡರು.

‘ಪಂಕಜ್, ನೀವು ಇಲ್ಲಿ ಏನು ಮಾಡುತ್ತಿದ್ದೀರಿ?’ ಎಂದು ನಾನಾ ಕೇಳಿದರು. ಪಂಕಜ್ ತುಂಬಾ ಸರಳವಾಗಿ ಮತ್ತು ವಿನಮ್ರವಾಗಿ “ಸರ್, ನನಗೆ ಒಂದು ಸಣ್ಣ ಪಾತ್ರವಿದೆ. ನಾನು ನಿಮ್ಮ ಮತ್ತು ರಜನಿಕಾಂತ್ ಸರ್ ಜೊತೆ ಕೆಲಸ ಮಾಡಲು ಬಂದಿದ್ದೇನೆ’ ಎಂದರು. ಇದನ್ನು ಕೇಳಿದ ನಾನಾ ಅವರಿಗೆ ಕೋಪ ಬಂತು. ‘ನೀವು ಇಷ್ಟು ದೊಡ್ಡ ನಟ, ನೀವು ಯಾಕೆ ಇಷ್ಟು ಸಣ್ಣ ಪಾತ್ರಗಳನ್ನು ಮಾಡುತ್ತಿದ್ದೀರಿ? ನಮ್ಮೊಂದಿಗೆ ಕೆಲಸ ಮಾಡುವುದರಿಂದ ನೀವು ದೊಡ್ಡವರಾಗುವುದಿಲ್ಲ. ನೀವು ಈಗಾಗಲೇ ನಿಮ್ಮ ನಟನೆ ಮತ್ತು ಕಲೆಯಿಂದ ಸಾಕಷ್ಟು ಬೆಳೆದಿದ್ದೀರಿ. ನೀವು ಮತ್ತೆ ಇಂತಹ ಸಣ್ಣ ಪಾತ್ರಗಳನ್ನು ಒಪ್ಪಿಕೊಂಡರೆ, ನಾನು ನಿಮ್ಮನ್ನು ಹಿಡಿದು ಕೊಲ್ಲುತ್ತೇನೆ’ ಎಂದು ಹೇಳಿದ್ದರಂತೆ.

ಇದನ್ನೂ ಓದಿ: ‘ನನ್ನ ಜೀವನ, ನನ್ನದೇ ಆದ ರೀತಿಯಲ್ಲಿ ಬದುಕಲು ಬಿಡಿ’; ನಟನೆಯಿಂದ ನಿವೃತ್ತಿ ಘೋಷಿಸಿದ ನಾನಾ ಪಾಟೇಕರ್

‘ಇಲ್ಲ ಸರ್. ನಾನು ನಿಮ್ಮಂತಹ ದಿಗ್ಗಜರೊಂದಿಗೆ ಕೆಲಸ ಮಾಡಲು ಬಯಸಿದ್ದೆ’ ಎಂದು ಹೇಳಿದರು. ಆದರೆ ನಾನಾಗೆ ಮನವರಿಕೆಯಾಗಲಿಲ್ಲ. ಅವರ ಪ್ರಕಾರ, ಒಬ್ಬ ಕಲಾವಿದ ತನ್ನ ಪ್ರತಿಭೆಯನ್ನು ಗೌರವಿಸಬೇಕು. ದೊಡ್ಡ ನಟರೊಂದಿಗೆ ಕೆಲಸ ಮಾಡಬಲ್ಲನೆಂಬ ಕಾರಣಕ್ಕಾಗಿ ತನ್ನ ಮೌಲ್ಯವನ್ನು ಕುಗ್ಗಿಸುವ ಪಾತ್ರಗಳನ್ನು ಒಪ್ಪಿಕೊಳ್ಳುವುದು ಕಲೆಗೆ ಮಾಡುವ ಅವಮಾನ ಎಂದು ಅವರು ನಂಬುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ: ನಿಮ್ಮ ಜೇಬಿಗೂ ಬೀಳುತ್ತಾ ಕತ್ತರಿ? ಪರಿಣಾಮಗಳೇನು ಎಂಬ ಮಾಹಿತಿ ಇಲ್ಲಿದೆ

ನವದೆಹಲಿ, ಮಾರ್ಚ್ 20: ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿರುವ ಯುದ್ಧ ಮತ್ತು ಅದರ ಆರ್ಥಿಕ ಪರಿಣಾಮಗಳಿಂದಾಗಿ ಭಾರತೀಯ ರೂಪಾಯಿ ಮೌಲ್ಯ (Rupee value) ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡಿದೆ. ಸದ್ಯದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 93 ರ ಗಡಿ ದಾಟಿದೆ. ಕಚ್ಚಾತೈಲ ಬೆಲೆ ಗಗನಕ್ಕೇರಿಕೆ ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಕಚ್ಚಾತೈಲ ಬೆಲೆ ಈಗಾಗಲೇ ಪ್ರತಿ ಬ್ಯಾರೆಲ್‌ಗೆ 110 ಡಾಲರ್ ದಾಟಿದ್ದು, ಯುದ್ಧ ಹೀಗೆಯೇ ಮುಂದುವರಿದರೆ 180-200 ಡಾಲರ್ ತಲುಪುವ ಸಾಧ್ಯತೆ ಇದೆ ಎಂದು ಸೌದಿ ಅರೇಬಿಯಾ ಮತ್ತು ಇರಾನ್‌ನಂತಹ ದೇಶಗಳು ಎಚ್ಚರಿಕೆ ನೀಡಿವೆ.

ಮತ್ತೊಂದೆಡೆ, ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡು 93ರ ಗಡಿ ದಾಟಿರುವುದು ದೇಶದ ಆರ್ಥಿಕತೆಯಲ್ಲಿ ಸಂಚಲನ ಮೂಡಿಸಿದೆ. ರೂಪಾಯಿ ಮೌಲ್ಯ ಕುಸಿದಾಗ ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆ ಏರಿಕೆಯಾಗುವುದು ಸಹಜ.

ಯಾವೆಲ್ಲಾ ವಸ್ತುಗಳು ದುಬಾರಿಯಾಗಬಹುದು?

  • ಭಾರತವು ಶೇ 80 ಕ್ಕಿಂತ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ರೂಪಾಯಿ ಮೌಲ್ಯ ಕುಸಿದಾಗ, ತೈಲ ಕಂಪನಿಗಳು ಹೆಚ್ಚು ಹಣ ಪಾವತಿಸಬೇಕಾಗುತ್ತದೆ, ಇದರಿಂದ ಪೆಟ್ರೋಲ್ ದರ ಏರಿಕೆಯಾಬಹುದು.
  • ಪಾಮ್ ಆಯಿಲ್ ಸೇರಿದಂತೆ ಅನೇಕ ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಅಡುಗೆ ಎಣ್ಣೆ ಬೆಲೆ ಏರಿಕೆಯಾಗಲಿದೆ.
  • ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟಿವಿ ಮತ್ತು ರೆಫ್ರಿಜರೇಟರ್‌ಗಳ ಬಿಡಿಭಾಗಗಳು ವಿದೇಶದಿಂದ ಬರುವುದರಿಂದ ಇವುಗಳ ಬೆಲೆ ಶೇ 5-10 ರಷ್ಟು ಹೆಚ್ಚಾಗಬಹುದು.
  • ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನವನ್ನು ಡಾಲರ್‌ನಲ್ಲಿ ವ್ಯವಹಾರ ಮಾಡುವುದರಿಂದ ರೂಪಾಯಿ ಕುಸಿತವಾದಾಗ ಭಾರತದಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತದೆ.
  • ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಫೀಸ್ ಮತ್ತು ಪ್ರವಾಸದ ಖರ್ಚು ಡಾಲರ್ ಲೆಕ್ಕದಲ್ಲಿರುವುದರಿಂದ ಪೋಷಕರಿಗೆ ಹೆಚ್ಚಿನ ಹೊರೆಯಾಗಲಿದೆ.

ರೂಪಾಯಿ ಮೌಲ್ಯ ಕುಸಿತದ ಸಕಾರಾತ್ಮಕ, ನಕಾರಾತ್ಮಕ ಪರಿಣಾಮಗಳೇನು?

ರೂಪಾಯಿ ಮೌಲ್ಯ ಕುಸಿತದಿಂದ ಸಾರಿಗೆ ವೆಚ್ಚ (ಡೀಸೆಲ್ ಬೆಲೆ) ಏರುವುದರಿಂದ ತರಕಾರಿ, ಬೇಳೆಕಾಳು ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿ ಸಾಮಾನ್ಯ ಜನರ ಬಜೆಟ್ ಏರುಪೇರಾಗುತ್ತದೆ. ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಉತ್ಪಾದನಾ ವಲಯದ ಕಂಪನಿಗಳ ಲಾಭ ಕಡಿಮೆಯಾಗುತ್ತದೆ. ವಿದೇಶಿ ಬ್ಯಾಂಕ್‌ಗಳಿಂದ ಸಾಲ ಪಡೆದ ಕಂಪನಿಗಳಿಗೆ ಬಡ್ಡಿ ಪಾವತಿಸುವುದು ದುಬಾರಿಯಾಗುತ್ತದೆ.

ಇದನ್ನೂ ಓದಿ: ರೂಪಾಯಿಗೆ ಬಿಗ್ ಶಾಕ್, ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು 93ರ ಗಡಿ ದಾಟಿದ ಭಾರತೀಯ ಕರೆನ್ಸಿ ಮೌಲ್ಯ!

ಮತ್ತೊಂದೆಡೆ, ವಿದೇಶಕ್ಕೆ ರಫ್ತು ಮಾಡಿ ಡಾಲರ್‌ ರೂಪದಲ್ಲಿ ಹಣ ಪಡೆಯುವುದರಿಂದ ಐಟಿ ಕಂಪನಿಗಳು, ಫಾರ್ಮಾ (ಔಷಧ) ಮತ್ತು ಜವಳಿ ಉದ್ಯಮದವರಿಗೆ ಹೆಚ್ಚಿನ ಲಾಭ ಸಿಗಬಹುದು. ವಿದೇಶದಲ್ಲಿ ಕೆಲಸ ಮಾಡುವ ಭಾರತೀಯರು ತವರಿಗೆ ಹಣ ಕಳುಹಿಸಿದಾಗ, ಹೆಚ್ಚಿನ ರೂಪಾಯಿಗಳು ಕೈಸೇರಲಿವೆ. ವಿದೇಶಿ ಪ್ರವಾಸ ದುಬಾರಿಯಾದಾಗ ಜನರು ದೇಶದೊಳಗಿನ ಪ್ರವಾಸಿ ತಾಣಗಳಿಗೆ ಆದ್ಯತೆ ನೀಡಿದರೆ, ಇದರಿಂದ ಸ್ಥಳೀಯ ಪ್ರವಾಸೋದ್ಯಮ ಚೇತರಿಸಿಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಸರ್ಸೆ ಸೆರಗು’ ಹಾಡಿಗೆ ಅಶ್ಲೀಲ ನೃತ್ಯ, ನೋರಾ ಫತೇಹಿ ವಿರುದ್ಧ ಫತ್ವಾ

ಪ್ರೇಮ್ (Prem) ನಿರ್ದೇಶಿಸಿ, ಧ್ರುವ ಸರ್ಜಾ ನಟಿಸಿರುವ ‘ಕೆಡಿ: ದಿ ಡೆವಿಲ್’ ಸಿನಿಮಾದ ‘ಸರ್ಸೆ ಸೆರಗು’ ಹಾಡು ಭಾರಿ ವಿವಾದ ಹುಟ್ಟುಹಾಕಿದೆ. ಹಾಡಿನ ಹಿಂದಿ ಆವೃತ್ತಿಯಾದ ‘ಸರ್ಕೆ ಚುನರಿ’ ಹಾಡಿನ ವಿರುದ್ಧ ತೀವ್ರ ಟೀಕೆ ಮತ್ತು ವಿರೋಧ ವ್ಯಕ್ತವಾಗಿದ್ದು, ಈಗಾಗಲೇ ಸಿಬಿಎಫ್​​ಸಿ, ಸೈಬರ್ ಪೊಲೀಸರಿಗೆ ದೂರು ದಾಖಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗ ಸಹ ಹಾಡಿನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ನಿರ್ದೇಶಕ ಮತ್ತು ಗೀತರಚನೆಕಾರ ಪ್ರೇಮ್ ಸೇರಿದಂತೆ ನೋರಾ ಫತೇಹಿ, ಸಂಜಯ್ ದತ್ ಇನ್ನೂ ಹಲವರಿಗೆ ನೊಡೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಲೋಕಸಭೆ ಅಧಿವೇಶನದಲ್ಲಿಯೂ ಸಹ ಹಾಡಿನ ಕುರಿತು ಚರ್ಚೆ ಆಗಿದೆ. ಇದೀಗ ಉತ್ತರ ಪ್ರದೇಶದ ಮುಸ್ಲಿಂ ಧಾರ್ಮಿಕ ಸಂಸ್ಥೆಯ ಮೌಲ್ವಿ ನೋರಾ ಫತೇಹಿ ವಿರುದ್ಧ ಫತ್ವಾ ಹೊರಡಿಸಿದ್ದಾರೆ.

ಉತ್ತರ ಪ್ರದೇಶದ ಅಲಿಗಢದಲ್ಲಿರುವ ಮುಸ್ಲಿಂ ಪರ್ಸನಲ್ ದಾರುಲ್ ಇಫ್ತಾ ಎಂಬ ಧಾರ್ಮಿಕ ಸಂಸ್ಥೆಯು ಬಾಲಿವುಡ್ ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ ವಿರುದ್ಧ ಫತ್ವಾ ಹೊರಡಿಸಿದೆ. ಕನ್ನಡ ಚಿತ್ರ ‘ಕೆಡಿ: ದಿ ಡೆವಿಲ್’ ಚಿತ್ರದ ‘ಸರ್ಕೆ ಚುನರ್ ತೇರಿ’ ಹಾಡಿನಲ್ಲಿನ ಅವರ ಅಶ್ಲೀಲ ನೃತ್ಯ ಪ್ರದರ್ಶನಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆಯಂತೆ. ಹಾಡಿನಲ್ಲಿರುವ ನೃತ್ಯದ ಭಂಗಿಗಳು ಮತ್ತು ಸಾಹಿತ್ಯವು ‘ಅಶ್ಲೀಲ’ವಾಗಿದ್ದು, ಇಸ್ಲಾಮಿಕ್ ಬೋಧನೆಗಳು ಮತ್ತು ನೈತಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಧಾರ್ಮಿಕ ಸಂಸ್ಥೆ ಹೇಳಿದೆ. ಇದು ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎಂದು ಮೌಲಾನಾ ಚೌಧರಿ ಇಫ್ರಾಹೀಮ್ ಹುಸೇನ್ ತಿಳಿಸಿದ್ದಾರೆ.

ಹಾಡು ‘ಪ್ರಚೋದನಾತ್ಮಕ ಮತ್ತು ಅಶ್ಲೀಲ’ ದೃಶ್ಯಗಳ ಬಗ್ಗೆ ಸಮಸ್ಯೆ ಇದೆ ಎಂದು ಮುಖ್ಯ ಮುಫ್ತಿ ಮೌಲಾನಾ ಇಬ್ರಾಹಿಂ ಹುಸೇನ್ ಅವರು ಫತ್ವಾ ಹೊರಡಿಸಿದ್ದಾರೆ. ಅಂತಹ ವಿಷಯವು ಹರಾಮ್ ಮತ್ತು ಗುನಾಹ್-ಎ-ಕಬೀರಾ (ಗಂಭೀರ ಪಾಪ) ಎಂದಿದ್ದು ಅಂತಹ ವಿಷಯಗಳಲ್ಲಿ ಭಾಗವಹಿಸುವುದು ಅಥವಾ ಪ್ರಚಾರ ಮಾಡುವುದು ಧಾರ್ಮಿಕ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಫತ್ವಾ ಎನ್ನುವುದು ಇಸ್ಲಾಂನಲ್ಲಿ ಮುಫ್ತಿ ಎಂದು ಕರೆಯಲ್ಪಡುವ ಧಾರ್ಮಿಕ ಕಾನೂನು ತಜ್ಞರು ನಿರ್ದಿಷ್ಟ ವಿಷಯದ ಕುರಿತು ನೀಡುವ ಅಭಿಪ್ರಾಯವಾಗಿದೆ. ಇದಕ್ಕೆ ಕಾನೂನಿನ ಮಾನ್ಯತೆ ಇರುವುದಿಲ್ಲ.

ಇದನ್ನೂ ಓದಿ:ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ

ಈ ಹಾಡಿನ ವಿರುದ್ಧ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಈ ಹಾಡನ್ನು ಬ್ಯಾನ್ (ನಿಷೇಧ) ಮಾಡಲಾಗಿದೆ ಎಂದು ಲೋಕಸಭೆ ಅಧಿವೇಶನದಲ್ಲಿ ತಿಳಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಸಾಂಸ್ಕೃತಿಕ ಮೌಲ್ಯಗಳಿಗೆ ಬದ್ಧವಾಗಿರಬೇಕು ಎಂದು ಅವರು ಹೇಳಿದ್ದಾರೆ. ಹಾಡಿನಲ್ಲಿ ಮಹಿಳೆಯರನ್ನು ಅಶ್ಲೀಲವಾಗಿ ಬಿಂಬಿಸಲಾಗಿದೆ ಎಂಬ ದೂರಿನ ಮೇರೆಗೆ ರಾಷ್ಟ್ರೀಯ ಮಹಿಳಾ ಆಯೋಗವು (NCW) ನೋರಾ ಫತೇಹಿ, ಸಂಜಯ್ ದತ್ ಮತ್ತು ಗೀತರಚನೆಕಾರ ರಕೀಬ್ ಆಲಂ ಅವರಿಗೆ ಸಮನ್ಸ್ ನೀಡಿದೆ.

ಈ ವಿವಾದದ ಕುರಿತು ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ನೋರಾ ಫತೇಹಿ, ‘ನಾನು ಈ ಹಾಡನ್ನು ಮೂರು ವರ್ಷಗಳ ಹಿಂದೆ ಕನ್ನಡದಲ್ಲಿ ಚಿತ್ರೀಕರಿಸಿದ್ದೆ. ಆ ಸಮಯದಲ್ಲಿ ಚಿತ್ರತಂಡ ನೀಡಿದ ವಿವರಣೆಯನ್ನು ನಂಬಿದ್ದೆ. ನನಗೆ ಕನ್ನಡ ಭಾಷೆ ತಿಳಿಯದ ಕಾರಣ ಅದರ ಅರ್ಥ ಗೊತ್ತಿರಲಿಲ್ಲ. ಹಿಂದಿ ಆವೃತ್ತಿಯ ಸಾಹಿತ್ಯ ಮತ್ತು ಡಬ್ಬಿಂಗ್ ನನ್ನ ಗಮನಕ್ಕೆ ಬಾರದೆ ನಡೆದಿದೆ’ ಎಂದು ಹೇಳುವ ಮೂಲಕ ವಿವಾದದಿಂದ ದೂರ ಉಳಿಯಲು ಪ್ರಯತ್ನಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link