ಐಪಿಎಲ್ 2026ರ ಸೀಸನ್ನ ರೋಚಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಗುಜರಾತ್ ಟೈಟಾನ್ಸ್ (GT) ಮೂರು ವಿಕೆಟ್ಗಳ ಸೋಲನ್ನು ಅನುಭವಿಸಿತು. ಆದರೆ, ಈ ಸೋಲಿಗಿಂತ ಹೆಚ್ಚಾಗಿ ಚರ್ಚೆಯಾಗುತ್ತಿರುವುದು ನಾಯಕ ಶುಭ್ಮನ್ ಗಿಲ್ ಅವರ ಒಂದು ವಿಚಿತ್ರ ನಿರ್ಧಾರ. ಅದುವೇ ತಂಡದ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ಅವರಿಗೆ ಪೂರ್ಣ ಓವರ್ಗಳನ್ನು ನೀಡದೇ ಇರುವುದು!
ಮುಲ್ಲನ್ಪುರ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 162 ರನ್ಗಳ ಸಾಧಾರಣ ಮೊತ್ತವನ್ನು ಕಲೆಹಾಕಿತು. ಈ ಮೊತ್ತವನ್ನು ರಕ್ಷಿಸುವ ಜವಾಬ್ದಾರಿ ಬೌಲರ್ಗಳ ಮೇಲಿತ್ತು. ಪವರ್ಪ್ಲೇನಲ್ಲಿ ಮೊಹಮ್ಮದ್ ಸಿರಾಜ್ ಅತ್ಯುತ್ತಮ ಲಯದಲ್ಲಿದ್ದಂತೆ ಕಂಡು ಬಂದರು. ಅಲ್ಲದೆ ಈ ವೇಳೆ ಎಸೆದ 2 ಓವರ್ಗಳಲ್ಲಿ ಸಿರಾಜ್ ನೀಡಿದ್ದು ಕೇವಲ 15 ರನ್ಗಳು ಮಾತ್ರ.
ಅಂದರೆ ಪವರ್ಪ್ಲೇನಲ್ಲೇ ಮೊಹಮ್ಮದ್ ಸಿರಾಜ್ ಪಂಜಾಬ್ ಕಿಂಗ್ಸ್ ಬ್ಯಾಟರ್ಗಳ ರನ್ ವೇಗಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಅಚ್ಚರಿಯ ವಿಷಯವೆಂದರೆ ಆ 2 ಓವರ್ಗಳ ನಂತರ ಶುಭ್ಮನ್ ಗಿಲ್, ಸಿರಾಜ್ಗೆ ಮತ್ತೆ ಚೆಂಡನ್ನೇ ನೀಡಲಿಲ್ಲ!
ಇತ್ತ 13ನೇ ಓವರ್ ವೇಳೆ ದಾಳಿಗಿಳಿದ ಪ್ರಸಿದ್ಧ್ ಕೃಷ್ಣ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸುವ ಮೂಲಕ ಪಂಜಾಬ್ ಕಿಂಗ್ಸ್ ತಂಡಕ್ಕೆ ಆಘಾತ ನೀಡಿದ್ದರು. 2 ಓವರ್ಗಳಲ್ಲಿ 3 ವಿಕೆಟ್ ಉರುಳಿಸಿದ ಪ್ರಸಿದ್ಧ್ ಗುಜರಾತ್ ಟೈಟಾನ್ಸ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಈ ಹಂತದಲ್ಲೂ ಶುಭ್ಮನ್ ಗಿಲ್ ಮೊಹಮ್ಮದ್ ಸಿರಾಜ್ ಅವರನ್ನು ದಾಳಿಗೆ ಇಳಿಸಿರಲಿಲ್ಲ ಎಂಬುದೇ ಅಚ್ಚರಿ.
ಶುಭ್ಮನ್ ಗಿಲ್ ಮೊದಲ 2 ಓವರ್ಗಳಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ಮೊಹಮ್ಮದ್ ಸಿರಾಜ್ಗೆ ಮತ್ತೆ ಓವರ್ ನೀಡಲೇ ಇಲ್ಲ.
ಸಿರಾಜ್ ಅವರ ಬಳಿಕ ಪ್ರಸಿದ್ಧ್ ಕೃಷ್ಣಗೂ ಓವರ್ ನೀಡಿರಲಿಲ್ಲ. ಅಂದರೆ ಪ್ರಸಿದ್ಧ್ ದಾಳಿಗೆ ಇಳಿದದ್ದು 13ನೇ ಓವರ್ನಲ್ಲಿ.
ಉತ್ತಮ ಲಯದಲ್ಲಿದ್ದರೂ ಸಿರಾಜ್ ಅವರನ್ನು ಸರಿಯಾಗಿ ಬಳಸಿಕೊಂಡಿಲ್ಲ. ಅತ್ತ ಅನುಭವಿ ಪ್ರಸಿದ್ಧ್ ಕೃಷ್ಣ ಅವರನ್ನು ಸಹ ಮೊದಲೇ ದಾಳಿಗಿಳಿಸಿರಲಿಲ್ಲ.
ಪಂಜಾಬ್ ಕಿಂಗ್ಸ್ ತಂಡವು ಸತತ ವಿಕೆಟ್ ಕಳೆದುಕೊಂಡ ಒತ್ತಡಕ್ಕೊಳಗಾಗಿದ್ದರೂ ಶುಭ್ಮನ್ ಗಿಲ್ ಅನಾನುಭವಿ ಅಶೋಕ್ ಶರ್ಮಾ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಬೌಲರ್ಗಳನ್ನು ದೀರ್ಘಕಾಲ ಬಳಸಿಕೊಂಡರು.
ಒಂದು ಹಂತದಲ್ಲಿ 118 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಪಂಜಾಬ್ ಕಿಂಗ್ಸ್ ಸೋಲಿನ ಸುಳಿಗೆ ಸಿಲುಕಿತ್ತು. ಒಂದು ವೇಳೆ ಈ ಹಂತದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಬಳಸಿಕೊಂಡಿದ್ದರೆ, ಅಥವಾ 7 ವಿಕೆಟ್ ಕಳೆದುಕೊಂಡ ಬಳಿಕ ಸಿರಾಜ್ ಕೈಗೆ ಚೆಂಡು ನೀಡಿದ್ದರೆ ವಿಕೆಟ್ ಪಡೆಯುವ ಅಥವಾ ರನ್ ನಿಯಂತ್ರಿಸುವ ಸಾಧ್ಯತೆ ಹೆಚ್ಚಿತ್ತು.
ಏಕೆಂದರೆ ಪವರ್ಪ್ಲೇನಲ್ಲಿ ಪ್ರಭ್ಸಿಮ್ರಾನ್ ಸಿಂಗ್ ಹಾಗೂ ಕೂಪರ್ ಕೊನೊಲಿ ಅಬ್ಬರಿಸಿದರೂ ಮೊಹಮ್ಮದ್ ಸಿರಾಜ್ 12 ಎಸೆತಗಳಲ್ಲಿ ನೀಡಿದ್ದು ಕೇವಲ 15 ರನ್ಗಳು ಮಾತ್ರವಾಗಿತ್ತು. ಹೀಗಾಗಿ ನಿರ್ಣಾಯಕ ಹಂತದಲ್ಲಿ ಸಿರಾಜ್ ಅವರ ಅನುಭವವನ್ನು ಬಳಸಿಕೊಂಡು ಪಂಜಾಬ್ ಕಿಂಗ್ಸ್ ಮೇಲೆ ಒತ್ತಡ ಹೇರುವ ಅವಕಾಶ ಶುಭ್ಮನ್ ಗಿಲ್ ಮುಂದಿತ್ತು.
ಇದಾಗ್ಯೂ ಶುಭ್ಮನ್ ಗಿಲ್ ಅವರ ರಕ್ಷಣಾತ್ಮಕ ನಾಯಕತ್ವದಿಂದಾಗಿ ಪಂಜಾಬ್ನ ಯುವ ಆಟಗಾರ ಕೂಪರ್ ಕೊನೊಲಿ (72)* ಅಬ್ಬರಿಸಲು ಅವಕಾಶ ಸಿಕ್ಕಿತು. ಅಂತಿಮವಾಗಿ ಪಂಜಾಬ್ 19.1 ಓವರ್ಗಳಲ್ಲಿ ಗುರಿ ತಲುಪುವ ಮೂಲಕ 3 ವಿಕೆಟ್ಗಳ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸೋಲಿನ ಬೆನ್ನಲ್ಲೇ ಶುಭ್ಮನ್ ಗಿಲ್ ಅವರ ನಾಯಕತ್ವದ ಬಗ್ಗೆ ಪ್ರಶ್ನೆಗಳೆದ್ದಿವೆ. ಅದರಲ್ಲೂ ಗಿಲ್ ನಾಯಕನಾಗಿ ಒತ್ತಡದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂಬ ಟೀಕೆ ಕೇಳಿಬರುತ್ತಿದೆ. ಈ ಟೀಕೆಗಳ ನಡುವೆ ಮುಂದಿನ ಪಂದ್ಯಗಳಲ್ಲಿ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರಂತಹ ಹಿರಿಯ ಬೌಲರ್ಗಳನ್ನು ಗಿಲ್ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ನವದೆಹಲಿ, ಏಪ್ರಿಲ್ 01: ಕಮರ್ಷಿಯಲ್ ಸಿಲಿಂಡರ್ ಅಭಾವದ ನಡುವೆ ಬಳಕೆದಾರರಿಗೆ ಮತ್ತೊಂದು ಶಾಕ್ ಎದುರಾಗಿದೆ. ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಸಂಘರ್ಷದ ಹಿನ್ನೆಲೆ ಜಾಗತಿಕ ತೈಲ ಬೆಲೆ ಏರಿಕೆಯಾಗಿರುವ ಕಾರಣ, ಇಂದಿನಿಂದ (ಏಪ್ರಿಲ್ 1) ವಾಣಿಜ್ಯ ಬಳಕೆಯ LPG ಸಿಲಿಂಡರ್ಗಳ ಬೆಲೆಯಲ್ಲಿ 195.50 ರೂ. ಹೆಚ್ಚಳವಾಗಿದೆ. ಇದಕ್ಕೂ ಮೊದಲು ಮಾರ್ಚ್ 1ರಂದು 19 ಕೆ.ಜಿ. ಸಿಲಿಂಡರ್ ಬೆಲೆ 114.5 ರೂ. ಏರಿಕೆಯಾಗಿತ್ತು.
ಯುದ್ಧದ ಕಾರಣಕ್ಕೆ ಭಾರತಕ್ಕೆ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ, ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳಿಗೆ LPG ಪೂರೈಕೆ ಬಹಳ ವ್ಯತ್ಯಾಸವಾಗಿ ಉದ್ಯಮಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ನಡುವೆ, ಸಿಲಿಂಡರ್ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪಶ್ಚಿಮ ಏಷ್ಯಾದ ಸಂಘರ್ಷದಿಂದ ಜಾಗತಿಕ ತೈಲ ಬೆಲೆ ಸುಮಾರು ಶೇ. 50ರವರೆಗೆ ಏರಿಕೆಯಾಗಿದೆ. ಪ್ರತಿ ತಿಂಗಳ ಮೊದಲ ದಿನದಂದು ಅಂತಾರಾಷ್ಟ್ರೀಯ ಮಾನದಂಡಗಳು ಮತ್ತು ವಿನಿಮಯ ದರ ಆಧರಿಸಿ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು LPG ಮತ್ತು ATF ದರಗಳನ್ನು ಪರಿಷ್ಕರಿಸುತ್ತವೆ. ಅದೇ ರೀತಿ ಇಂದಿನಿಂದ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲೂ ಪರಿಷ್ಕರಣೆಯಾಗಿದೆ.
ಮಾರ್ಚ್ 7ರಂದು 60 ರೂ. ಏರಿಕೆಯಾದ ನಂತರ, ಗೃಹ ಬಳಕೆಯ 14.2 ಕೆ.ಜಿ. ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸದ್ಯ ಹೆಚ್ಚಳವಾಗಿರೋದು ಕಮರ್ಷಿಯಲ್ ಸಿಲಿಂಡರ್ಗಳ ದರ ಮಾತ್ರವಾಗಿದೆ. ಫೆಬ್ರವರಿ 28ರಂದು ಇರಾನ್ನ ಸುಪ್ರೀಂ ಲೀಡರ್ ಅಲಿ ಖಾಮೆನೇಯಿ ಸಾವಿನ ನಂತರ ಪರಿಸ್ಥಿತಿ ಗಂಭೀರಗೊಂಡಿದೆ. ಇದರ ಪರಿಣಾಮವಾಗಿ ಹೋರ್ಮುಜ್ ಸಮುದ್ರ ಮಾರ್ಗದ ಮೂಲಕ ಸಾಗುವ ಜಾಗತಿಕ ತೈಲ ಸಾಗಾಟಕ್ಕೂ ಅಡ್ಡಿಯಾಗಿದೆ. ಈ ಮಾರ್ಗದ ಮೂಲಕ ವಿಶ್ವದ ಸುಮಾರು ಐದನೇ ಭಾಗದ ತೈಲ ಸಾಗಾಟವಾಗುವುದರಿಂದ, ಜಾಗತಿಕ ಇಂಧನ ಮಾರುಕಟ್ಟೆ ಹಾಗೂ ಆರ್ಥಿಕ ಸ್ಥಿತಿಗೆ ದೊಡ್ಡ ಹೊಡೆತ ಬಿದ್ದಿದೆ.
ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ನಮ್ಮ ಕನಸಿನಲ್ಲಿ ನಾವು ಸಾವನ್ನಪ್ಪಿದರೆ ಏನು ಅರ್ಥ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಸ್ವಪ್ನಶಾಸ್ತ್ರದ ಪ್ರಕಾರ, ಮರಣಕ್ಕೆ ಸಂಬಂಧಿಸಿದ ಕನಸುಗಳು ಸಾಮಾನ್ಯವಾಗಿ ಶುಭ ಸೂಚಕವಾಗಿರುತ್ತವೆ. ನಿಮ್ಮ ಸಾವು ಕನಸಿನಲ್ಲಿ ಕಂಡರೆ ಅದು ಕಷ್ಟಗಳಿಂದ ಪಾರಾಗುವ, ಸಂಕಟಗಳು ದೂರವಾಗುವ, ದೋಷಗಳು ನಿವಾರಣೆಯಾಗುವ ಮತ್ತು ಅದೃಷ್ಟ ಕೂಡಿ ಬರುವ ಸೂಚನೆಯಾಗಿದೆ. ಬೇರೆಯವರ ಮರಣವನ್ನು ಕನಸಿನಲ್ಲಿ ಕಂಡರೆ ಅವರಿಗೆ ಆಯುಷ್ಯ ವೃದ್ಧಿಯಾಗುತ್ತದೆ. ಬ್ರಹ್ಮ ವೈವರ್ತ ಪುರಾಣದಲ್ಲಿ ಇದನ್ನು ಸ್ಪಷ್ಟಪಡಿಸಲಾಗಿದೆ. ಇಂತಹ ಕನಸುಗಳು ಶುಭವನ್ನು ತರುವುದರಿಂದ ಯಾವುದೇ ಚಿಂತೆ ಅಥವಾ ನಕಾರಾತ್ಮಕ ಆಲೋಚನೆಗಳಿಗೆ ಒಳಗಾಗಬಾರದು ಎಂದು ಗುರೂಜಿ ಹೇಳಿದ್ದಾರೆ.
ವಾಷಿಂಗ್ಟನ್, ಏಪ್ರಿಲ್ 1: ಇರಾನ್(Iran) ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಗಡುವನ್ನು ನಿಗದಿಪಡಿಸಿದ್ದಾರೆ. ಇರಾನ್ ಯುದ್ಧವು ಎರಡು, ಮೂರು ವಾರಗಳಲ್ಲಿ ಕೊನೆಗೊಳ್ಳಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕ ಶೀಘ್ರದಲ್ಲೇ ಇರಾನ್ನಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಲಿದೆ. ಇರಾನ್ನಲ್ಲಿ ಆಡಳಿತ ಬದಲಾವಣೆಯ ಗುರಿಯನ್ನು ಸಾಧಿಸಲಾಗಿದೆ , ಈ ಸಂಘರ್ಷವನ್ನು ಮುಂದುವರಿಸಲು ಅಮೆರಿಕ ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇರಾನ್ ಯುದ್ಧವನ್ನು ಕೊನೆಗೊಳಿಸಲು ಯಾವುದೇ ಒಪ್ಪಂದದ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಒಪ್ಪಂದ ಅಸಾಧ್ಯ ಎಂದು ಅವರು ಹೇಳಲಿಲ್ಲ, ಒಪ್ಪಂದ ಸಾಧ್ಯವಾಗಬಹುದು ಎಂದು ಟ್ರಂಪ್ ಹೇಳಿದ್ದಾರೆ.
ಮಸೌದ್ ಪೆಜೆಶ್ಕಿಯಾನ್ ಮಾತನಾಡಿ, ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ದ್ವೇಷವನ್ನು ಕೊನೆಗೊಳಿಸಲು ಟೆಹ್ರಾನ್ ಸಿದ್ಧವಾಗಿದೆ, ಆದರೆ ದಾಳಿಗಳು ಮತ್ತೆ ಸಂಭವಿಸುವುದಿಲ್ಲ ಎಂಬ ಭರವಸೆ ನೀಡಬೇಕು ಎಂದು ಹೇಳಿದ್ದಾರೆ.ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರೊಂದಿಗೆ ದೂರವಾಣಿ ಸಂಭಾಷಣೆಯ ಸಮಯದಲ್ಲಿ ಮಾತನಾಡಿದ ಮಸೌದ್ ಪೆಜೆಶ್ಕಿಯಾನ್ ಈ ಹೇಳಿಕೆಗಳನ್ನು ನೀಡಿದ್ದಾರೆ.
ಫೆಬ್ರವರಿ 28 ರಂದು ಇಸ್ರೇಲ್-ಅಮೆರಿಕ ಜಂಟಿ ವೈಮಾನಿಕ ದಾಳಿಯಲ್ಲಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಕೊಲ್ಲಲ್ಪಟ್ಟಾಗ ಇರಾನ್ ಯುದ್ಧ ಪ್ರಾರಂಭವಾಯಿತು. ಅಂದಿನಿಂದ, ಹಲವಾರು ಪ್ರಮುಖ ಇರಾನಿನ ನಾಯಕರು ಮತ್ತು ಅಧಿಕಾರಿಗಳು ಕೊಲ್ಲಲ್ಪಟ್ಟರು ಮತ್ತು ಮೊಜ್ತಬಾ ಖಮೇನಿ ಸುಪ್ರೀಂ ನಾಯಕನ ಸ್ಥಾನವನ್ನು ವಹಿಸಿಕೊಂಡಿದ್ದಾರೆ.
ಯುದ್ಧದ ಪರಿಣಾಮಗಳು ಈಗ ಅಮೆರಿಕವನ್ನು ತಲುಪಿವೆ. ಅಮೆರಿಕದಲ್ಲಿ ಅನಿಲದ ಸರಾಸರಿ ಬೆಲೆ ಪ್ರತಿ ಗ್ಯಾಲನ್ಗೆ 4 ಡಾಲರ್ ಏರಿದೆ, ಇದು 2022 ರ ನಂತರದ ಅತ್ಯಧಿಕವಾಗಿದೆ. ಯುದ್ಧವನ್ನು ಕೊನೆಗೊಳಿಸಿ ಪ್ರಮುಖ ವ್ಯಾಪಾರ ಮಾರ್ಗವನ್ನು ಮತ್ತೆ ತೆರೆಯುವ ಒಪ್ಪಂದವನ್ನು ಶೀಘ್ರದಲ್ಲೇ ತಲುಪದಿದ್ದರೆ ಇರಾನ್ನ ನೀರು ಮತ್ತು ಇಂಧನ ಮೂಲಸೌಕರ್ಯವನ್ನು ನಾಶಪಡಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಮಧ್ಯಪ್ರಾಚ್ಯದಾದ್ಯಂತ 3,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇರಾನ್ನಲ್ಲಿ, ಇಸ್ರೇಲಿ ಮತ್ತು ಅಮೇರಿಕನ್ ದಾಳಿಗಳು 1,900 ಕ್ಕೂ ಹೆಚ್ಚು ಜನರನ್ನು ಕೊಂದಿವೆ .
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 1, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಚತುರ್ದಶಿ ತಿಥಿಯಾಗಿದೆ. ಇಂದು ಡಾ. ಬಸವರಾಜ ಗುರೂಜಿಯವರು ಪ್ರತಿ ರಾಶಿಯವರಿಗೂ ಆರೋಗ್ಯ, ಆರ್ಥಿಕ ಸ್ಥಿತಿ, ಉದ್ಯೋಗ, ವ್ಯಾಪಾರ, ಕುಟುಂಬ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು ವಿವರವಾದ ಸಲಹೆಗಳನ್ನು ನೀಡಿದ್ದಾರೆ. ರವಿ ಮೀನ ರಾಶಿಯಲ್ಲಿ ಮತ್ತು ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸಲಿದ್ದಾನೆ ಎಂಬುದನ್ನು ಅವರು ವಿವರಿಸಿದ್ದಾರೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 4ನೇ ಪಂದ್ಯದ ಮೂಲಕ ಪಂಜಾಬ್ ಕಿಂಗ್ಸ್ ತಂಡದ ಎಡಗೈ ವೇಗಿ ಅರ್ಷದೀಪ್ ಸಿಂಗ್ (Arshdeep singh) ಅತ್ಯಂತ ಹೀನಾಯ ದಾಖಲೆ ಬರೆದಿದ್ದಾರೆ. ಅದು ಸಹ ದೀರ್ಘಾವಧಿ ಬೌಲಿಂಗ್ ಮಾಡುವ ಮೂಲಕ ಎಂಬುದು ವಿಶೇಷ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 19 ಓವರ್ಗಳಲ್ಲಿ 150 ರನ್ ಕಲೆಹಾಕಿದ್ದರು. ಅದರಂತೆ 20ನೇ ಓವರ್ ಎಸೆಯಲು ಬಂದ ಅರ್ಷದೀಪ್ ಸಿಂಗ್ ಮೊದಲ ಎಸೆತವನ್ನು ವೈಡ್ ಮಾಡಿದರು. ಇದಾದ ಬಳಿಕ ಸತತ 2 ಉತ್ತಮ ಎಸೆತಗಳನ್ನು ಎಸೆದರು.
ಆ ಬಳಿಕ ನೋ ಬಾಲ್ ಹಾಗೂ 2 ವೈಡ್ಗಳನ್ನು ಎಸೆದರು. ಇದಾದ ಬಳಿಕ ಮತ್ತೆರಡು ಉತ್ತಮ ಎಸೆತಗಳ ಮೂಲಕ ಗಮನ ಸೆಳೆದರು. ಆ ಬಳಿಕ ಮತ್ತೊಂದು ವೈಡ್ ಎಸೆದಿದ್ದಾರೆ. ಹೀಗೆ ನೋ ಬಾಲ್, ವೈಡ್ಗಳ ಮೂಲಕ ಕೊನೆಯ ಓವರ್ ಪೂರ್ಣಗೊಳಿಸಲು ಅರ್ಷದೀಪ್ ಸಿಂಗ್ ಬರೋಬ್ಬರಿ 11 ಎಸೆತಗಳನ್ನು ತೆಗೆದುಕೊಂಡಿದ್ದಾರೆ.
ಈ 11 ಎಸೆತಗಳೊಂದಿಗೆ ಐಪಿಎಲ್ನಲ್ಲಿ ದೀರ್ಘಾವಧಿಯ ಓವರ್ ಎಸೆದ ಬೌಲರ್ಗಳ ಪಟ್ಟಿಯಲ್ಲಿ ಅರ್ಷದೀಪ್ ಸಿಂಗ್ ಸ್ಥಾನ ಪಡೆದಿದ್ದಾರೆ. ಅದರಲ್ಲೂ ಪಂದ್ಯದ 20ನೇ ಓವರ್ನಲ್ಲಿ 11 ಎಸೆತಗಳನ್ನು ಎಸೆದ 2ನೇ ಬೌಲರ್ ಎಂಬ ಅಪಖ್ಯಾತಿಗೆ ಒಳಗಾಗಿದ್ದಾರೆ. ಇದಕ್ಕೂ ಮುನ್ನ 2025 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸಂದೀಪ್ ಶರ್ಮಾ 20ನೇ ಓವರ್ನಲ್ಲಿ 11 ಎಸೆತಗಳನ್ನು ಎಸೆದಿದ್ದರು.
ಹಾಗೆಯೇ ಮೊಹಮ್ಮದ್ ಸಿರಾಜ್ (2023), ತುಷಾರ್ ದೇಶಪಾಂಡೆ (2023), ಶಾರ್ದೂಲ್ ಠಾಕೂರ್ (2025), ಸಂದೀಪ್ ಶರ್ಮಾ (2025), ಹಾರ್ದಿಕ್ ಪಾಂಡ್ಯ (2025) ನಂತರ ಐಪಿಎಲ್ನಲ್ಲಿ ಒಂದೇ ಓವರ್ನಲ್ಲಿ 11 ಎಸೆತಗಳನ್ನು ಎಸೆದ 6ನೇ ಬೌಲರ್ ಎಂಬ ಅಪಖ್ಯಾತಿಗೂ ಒಳಗಾಗಿದ್ದಾರೆ.
ಆನೇಕಲ್, ಏಪ್ರಿಲ್ 01:ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಚಂದಾಪುರ ಸಮೀಪದ ಸೂರ್ಯನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಶ್ವಾನಗಳ ಕಾಟಕ್ಕೆ ಸ್ಥಳೀಯ ನಿವಾಸಿಗಳು ಹೈರಾಣಾಗಿದ್ದಾರೆ. ಗುಂಪು ಗುಂಪಾಗಿ ರಸ್ತೆಗಳಲ್ಲಿ ಬೀಡುಬಿಟ್ಟಿರುವ ರಕ್ಕಸ ಬೀದಿನಾಯಿಗಳು ಮನೆ ಮುಂದೆ ಆಟವಾಡುವ ಮಕ್ಕಳು, ವಾಕಿಂಗ್ ಮಾಡುವ ಮಹಿಳೆಯರು ಸೇರಿದಂತೆ ಪಾದಚಾರಿಗಳ ಮೇಲೆ ದಾಳಿ ನಡೆಸುತ್ತಿವೆ. ಬೈಕ್ ಸವಾರರನ್ನೂ ಅಡ್ಡಗಟ್ಟಿ ಅಟ್ಯಾಕ್ ಮಾಡುತ್ತಿವೆ. ದಿನನಿತ್ಯ ಇವುಗಳ ದಾಳಿಯಿಂದ ಸಾರ್ವಜನಿಕರು ಆಸ್ಪತ್ರೆಗೆ ಅಲೆದಾಡುವಂತಾಗಿದೆ. ಆದರೆ ಪುರಸಭೆ ಅಧಿಕಾರಿಗಳು ಮಾತ್ರ ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಬೀದಿ ನಾಯಿಗಳ ಉಪಟಳದಿಂದ ಕಂಗೆಟ್ಟಿರುವ ಸ್ಥಳೀಯ ನಿವಾಸಿಗಳು ಪುರಸಭೆ ಅಧಿಕಾರಿಗಳು, ಸೂರ್ಯನಗರ ಪೊಲೀಸ್ ಠಾಣೆ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಈ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ನಿತ್ಯ ಬೆಳಗ್ಗೆ ಮತ್ತು ಸಂಜೆ ಬೀದಿ ನಾಯಿಗಳು ಸಿಕ್ಕಸಿಕ್ಕವರ ಮೇಲೆ ಡೆಡ್ಲಿ ದಾಳಿ ನಡೆಸುತ್ತಿವೆ. ಇವುಗಳನ್ನು ಹಿಡಿದು ಬೇರೆಡೆ ಸ್ಥಳಾಂತರ ಮಾಡುವಂತೆ ದೂರು ನೀಡಿದರೆ ಕೆಲವರು ಪ್ರಾಣಿ ದಯಾ ಸಂಘದ ಹೆಸರಿನಲ್ಲಿ ನಮಗೆ ಧಮ್ಕಿ ಹಾಕುತ್ತಿದ್ದಾರೆ. ಹೀಗಾಗಿ ಬೀದಿ ನಾಯಿಗಳ ಹಾವಳಿಯಿಂದ ನೆಮ್ಮದಿ ಇಲ್ಲದಂತಾಗಿದೆ. ಆದ್ರೆ ಚಂದಾಪುರ ಪುರಸಭೆ ಅಧಿಕಾರಿಗಳು ಮಾತ್ರ ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಲಾಗಿದೆ. ರೇಬೀಸ್ ವ್ಯಾಕ್ಸಿನೇಷನ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬೀದಿನಾಯಿಗಳ ಹಾವಳಿ ನಿಯಂತ್ರಣ ಮಾಡುವುದಾಗಿ ಹೇಳಿಕೊಂಡು ಸಮಯ ಕಳೆಯುತ್ತಿದ್ದಾರೆ ಎಂಬುದು ಇಲ್ಲಿನ ನಿವಾಸಿಗಳ ಆರೋಪ.
ಸೂರ್ಯನಗರ ಕರ್ನಾಟಕ ಗೃಹ ಮಂಡಳಿ ನಿರ್ಮಾಣ ಮಾಡಿರುವ ಪ್ರತಿಷ್ಠಿತ ಬಡಾವಣೆಯಾಗಿದ್ದು, ಇಲ್ಲಿ ಮೂಲ ಸೌಕರ್ಯ ಸೇರಿದಂತೆ ಸುರಕ್ಷತೆ ದೃಷ್ಟಿಯಿಂದ ಜನ ನೆಲೆಸಿದ್ದರು. ಆದ್ರೆ ಕಳೆದ ಹಲವು ದಿನಗಳಿಂದ ಬೀದಿ ನಾಯಿಗಳ ಕಾಟಕ್ಕೆ ನಿವಾಸಿಗಳು ಹೈರಾಣಾಗಿದ್ದು, ಅಧಿಕಾರಿಗಳ ಬೇಜವಾಬ್ದಾರಿಗೆ ಕಂಗಾಲಾಗಿದ್ದಾರೆ. ಬಡಾವಣೆ ಬೀದಿನಾಯಿಗಳ ಅಡ್ಡೆಯಾಗಿ ಮಾರ್ಪಾಡಾಗಿರುವ ಕಾರಣ, ಸಾವು ನೋವು ಸಂಭವಿಸುವ ಮುನ್ನ ಕರ್ನಾಟಕ ಗೃಹ ಮಂಡಳಿ ಮತ್ತು ಚಂದಾಪುರ ಪುರಸಭೆ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕಬೇಕು ಎಂಬ ಒತ್ತಾಯ ಕೇಳಿಬಂದಿದೆ.
ನಿಮ್ಮ ಆತ್ಮವಿಶ್ವಾಸದಿಂದ ಆಗಬೇಕಾದ ಕಾರ್ಯವನ್ನು ಸಾಧಿಸಿಕೊಳ್ಳಬಹುದು. ಹಳೆಯ ಯೋಜನೆಗಳನ್ನು ಇಂದು ಕಾರ್ಯಕ್ಕೆ ತರುವಿರಿ. ವಿದೇಶ ಪ್ರವಾಸವು ನಿಶ್ಚಯವಾಗಲಿದೆ. ನಿಷ್ಠುರವಾಗಿ ವರ್ತಿಸುವುದು ಅವಶ್ಯಕವಾಗಿದೆ. ನಿಮ್ಮವರನ್ನು ಭಿನ್ನಾಭಿಪ್ರಾಯ ಬರದಂತೆ ಇಟ್ಟುಕೊಳ್ಳುವುದೂ ನಿಮ್ಮ ಮುಖ್ಯ. ನೀವು ಕೆಲವು ಪ್ರಮುಖ ವಿಷಯಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಮಾನಸಿಕ ನೋವಿನಿಂದ ಹೊರಬರಲು ನಿಮಗೆ ಕಷ್ಟವಾದೀತು. ದಿನದಲ್ಲಿ ಬದಲಾವಣೆಯನ್ನು ತಂದುಕೊಳ್ಳುವಿರಿ.
ವೃಷಭ ರಾಶಿ:
ಯಾವುದೋ ಕಾರಣಕ್ಕೆ ಮಾಡಿದ ಪ್ರಯಾಣ ಇನ್ನಾವುದೋ ವಿಚಾರಕ್ಕೆ ಅನುಕೂಲವಾಗಿರುವುದು. ಉತ್ತಮ ಫಲಿತಾಂಶಗಳನ್ನು ಪರೀಕ್ಷೆಯಲ್ಲಿ ಪಡೆಯುತ್ತೀರಿ. ವ್ಯವಹಾರದಲ್ಲಿ ಒಂದು ಹೆಜ್ಜೆ ಮುಂದಿಡು ಧೈರ್ಯ ಮಾಡುವಿರಿ. ಆರ್ಥಿಕ ಸ್ಥಿತಿಯನ್ನು ಯಾರ ಜೊತೆಗೂ ಹಂಚಿಕೊಳ್ಳಲಾರಿರಿ. ಕಛೇರಿಯಲ್ಲಿ ನಿಮ್ಮ ಶ್ರಮವು ಲೆಕ್ಕಕ್ಕೆ ಬಾರದೇ ಹೋದೀತು. ಶ್ರಮಕ್ಕೆ ಫಲವನ್ನು ನಿರೀಕ್ಷಿಸುತ್ತ ಸಮಯವನ್ನು ವ್ಯರ್ಥ ಮಾಡುವಿರಿ. ಮಾತಿನಲ್ಲಿ ಮಾರ್ದವವು ಇಲ್ಲವಾಗುವುದು. ಅತಿಯಾದ ಭಾರದ ವಸ್ತುಗಳನ್ನು ಒಯ್ಯುವಿರಿ.
ಮಿಥುನ ರಾಶಿ:
ಆರ್ಥಿಕವಾಗಿ ಆದ ಬೆಳವಣಿಗೆ ತೃಪ್ತಿ ನೀಡುವುದು. ಪ್ರಯೋಜನವಾಗದ ವಿವಾದಗಳಿಂದ ಸುಮ್ಮನಿರುವಿರಿ. ಅಧ್ಯಾತ್ಮಿಕಕ್ಕೆ ಹೆಚ್ಚು ಒತ್ತುಕೊಡುವಿರಿ. ಭೂ ಮಾರಾಟದಿಂದ ಲಾಭಪ್ರದ. ನಿಮ್ಮ ಕೆಲವು ವಿರೋಧಿಗಳು ನಿಮಗೆ ತೊಂದರೆ ಕೊಡಲು ಪ್ರಯತ್ನಿಸಬಹುದು. ನಿಮ್ಮ ಜಾಣ್ಮೆಯಿಂದ ನೀವು ಸುಲಭವಾಗಿ ಏನನ್ನಾದರೂ ಸಾಧಿಸುವಿರಿ. ಅತಿಯಾದ ಒತ್ತಡದಿಂದ ಹೊರಬರಲು ಸಹೋದ್ಯೋಗಿಗಳ ಸಹಾಯವನ್ನು ಪಡೆಯುವಿರಿ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಓದು ಹೆಚ್ಚು ಸಿದ್ಧಿಸುವುದು.
ಕರ್ಕಾಟಕ ರಾಶಿ:
ಹಿರಿಯರ ಮಾತನ್ನು ಪಾಲಿಸುವುದು ಅವಶ್ಯಕ. ಒಳ್ಳೆಯ ಕಾರ್ಯಗಳಿಗೆ ಪ್ರಯತ್ನ ಮುಂದುವರಿಯಲಿ. ವಿವಾಹದ ಮಾತುಕತೆಗೆ ಸಂಬಂಧಿಕರ ಮತ್ತು ಸ್ನೇಹಿತರ ಬೆಂಬಲವಿರಲಿದೆ. ನೀವು ಅವಕಾಶಗಳತ್ತ ಗಮನ ಹರಿಸಬೇಕು. ಮಕ್ಕಳ ವಿಚಾರದಲ್ಲಿ ನಿಮಗೆ ಸಮಾಧಾನವು ಸಿಗದೇ ಇರಬಹುದು. ಕೆಟ್ಟವರ ಸಹವಾಸ ಸಿಗುವ ಸಾಧ್ಯತೆ ಇದೆ. ಬೇಡವೆಂದರೂ ಕೆಟ್ಟವರ ಸಹವಾಸವೇ ಸಿಗುವುದು. ನಂಬಿಕೆಯನ್ನು ಕಳೆದುಕೊಳ್ಳಬಹುದು. ನಿಮಗೆ ಸಂಬಂಧಿಸದ ವಿಚಾರದಲದಲಿ ಹೆಚ್ಚು ಮಾತನಾಡುವಿರಿ.
ಸಿಂಹ ರಾಶಿ:
ವಿದ್ಯಾರ್ಥಿಗಳು ತಮ್ಮ ವಿಶೇಷ ವಿಚಾರದ ಅಧ್ಯಯನದತ್ತ ಗಮನ ಹರಿಸುವಿರಿ. ಬೇಡವೆಂದರೂ ಸಹಾಯವನ್ನು ಕೇಳಿ ನಿಮ್ಮ ಬಳಿಬರಬಹುದು. ನೀವು ಇಂದು ನಿಮ್ಮ ಶಕ್ತಿಯನ್ನು ಒಳ್ಳೆಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಸರ್ಕಾರಿ ಕೆಲಸದಲ್ಲಿ ಬಡ್ತಿಯಿಂದಾಗಿ ಸ್ಥಳದಿಂದ ಸ್ಥಳಕ್ಕೆ ಹೋಗಬೇಕಾಗಬಹುದು. ಖರ್ಚಿನ ಮೇಲೆ ನಿಯಂತ್ರಣ ಸಾಧಿಸಬೇಕೆಂದಿದ್ದರೂ ಮತ್ತೆಲ್ಲೋ ಹರಿದು ಹೋಗುವುದು. ಅನವಶ್ಯಕ ಮಾತುಗಳನ್ನು ನಿಲ್ಲಿಸಿ. ವೈವಾಹಿಕ ಜೀವನದ ಸುಖವು ಸಪ್ಪೆ ಎನಿಸಬಹುದು. ಭೂಮಿಯ ವ್ಯವಹಾರಕ್ಕೆ ತಿಳಿವಳಿಕೆಯ ಕೊರತೆಯಿಂದ ಯಾರ ಜೊತೆಗಾದರೂ ಸೇರಿ.
ಕನ್ಯಾ ರಾಶಿ:
ಕಾನೂನು ಸಮಸ್ಯೆಗಳು ಬಗೆಹರಿಯಲಿವೆ. ಎಚ್ಚರಿಕೆಯಿಂದ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಕುಟುಂಬದ ವಾತಾವರಣದಿಂದ ನೀವು ಉತ್ತೇಜನಗೊಳ್ಳುವಿರಿ. ಇತರರಿಗೆ ಸಹಾಯ ಮಾಡುವ ಮನಸ್ಥಿತಿ ಹೆಚ್ಚಾಗುತ್ತದೆ. ಸಾರ್ವಜನಿಕ ಕ್ಷೇತ್ರದಲ್ಲಿ ಇಂದು ಹೆಚ್ಚು ಕಾಣಿಸಿಕೊಳ್ಳುವಿರಿ. ವ್ಯಾಪರದಲ್ಲಿ ಗ್ರಾಹಕರ ಜೊತೆ ಕಲಹವಾಗುವ ಸಾಧ್ಯತೆ ಇದೆ. ಅತಿಯಾದ ಪ್ರೀತಿಯಿಂದ ನಿಮಗೇ ತೊಂದರೆಯಾಗುವುದು. ಹಣದ ಸಂಪಾದನೆಗೆ ವಿವಿಧ ಮಾರ್ಗಗಳು ಇದ್ದರೂ ಅದಾವುದೂ ನಿಮಗೆ ಸರಿ ಕಾಣಿಸದು.
ತುಲಾ ರಾಶಿ:
ಇನ್ನೊಬ್ಬರಿಗೆ ಮಾಡುವ ತೊಂದರೆ ನಿಮಗೆ ಬರಲಿದೆ. ಹೊಸ ಕೆಲಸಕ್ಕೆ ಯಾರಿಗೂ ಗೊತ್ತಾಗದಂತೆ ಸೇರುವಿರಿ. ವ್ಯಾಪಾರ ಪಾಲುದಾರರ ಜೊತೆ ವಿವಾದ ಬರುವುದು. ಕಲಾವಿದರು ಉತ್ತಮ ಅವಕಾಶಗಳನ್ನು ಪಡೆಯಬಹುದು. ಮಕ್ಕಳ ಕಡೆಯಿಂದ ನಿರಾಶಾದಾಯಕ ಸಲಹೆಗಳನ್ನು ಕೇಳುವಿರಿ. ಸಂಬಂಧವಿಲ್ಲದ ವಿಚಾರದಲ್ಲಿ ನೀವು ಹಣವನ್ನು ಕಳೆದುಕೊಳ್ಳುವಿರಿ. ದುರಭ್ಯಾಸವು ಅತಿಯಾಗಿ ಮನೆಯಲ್ಲಿ, ಬಂಧುಗಳಿಂದ ನಿಮಗೆ ನಿಂದನೆಯಾಗಲಿದೆ.
ವೃಶ್ಚಿಕ ರಾಶಿ:
ನಿಮ್ಮ ಆದಾಯವನ್ನು ಹೆಚ್ಚಿಸುವ ಪ್ರಯತ್ನಗಳಲ್ಲಿ ನೀವು ತೊಡಗಿಸಿಕೊಳ್ಳುತ್ತೀರಿ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸುವಿರಿ. ಮಕ್ಕಳ ಮಾತಿಗೆ ಒಪ್ಪಿದರೂ ಕಷ್ಟ ಬಿಟ್ಟರೂ ಕಷ್ಟ. ವಾಹನದ ಕಾರಣಕ್ಕೆ ಮನೆಯಲ್ಲಿ ಕಲಹವಾಗಲಿದೆ. ಹಳೆಯ ಹೂಡಿಕೆಯಿಂದ ನಿಮಗೆ ಲಾಭಾಂಶವು ಸಿಗುವುದು. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಓದಿ ಜೀರ್ಣಿಸಿಕೊಳ್ಳಲು ಆಗದು. ಲೆಕ್ಕಪತ್ರದ ವಿಚಾರದಲ್ಲಿ ಪಾರದರ್ಶಕತೆ ಇರಲಿ. ಯಾರನ್ನೋ ಸಂಶಯಿಸುತ್ತ ಮನಸ್ಸನ್ನು ಹಾಳು ಮಾಡಿಕೊಳ್ಳುವಿರಿ.
ಧನು ರಾಶಿ:
ಮಕ್ಕಳ ಶಿಕ್ಷಣದ ವಿಷಯಗಳು ಅನುಕೂಲಕರವಾಗಿರುತ್ತದೆ. ಉಸಿರಾಟದ ಸಮಸ್ಯೆ ಗುಣಮುಖವಾಗುತ್ತದೆ. ಸಮುದಾಯದಲ್ಲಿ ಮನ್ನಣೆ ದೊರೆಯುತ್ತದೆ. ಪ್ರಯಾಣದಿಂದ ಲಾಭವಾಗುತ್ತದೆ. ಕುಟುಂಬದ ಹಿರಿಯರಿಂದ ಬೆಂಬಲ ಸಿಗುತ್ತದೆ. ವಿವಾಹಕ್ಕಾಗಿ ಮಾಡುವ ಶುಭ ಪ್ರಯತ್ನಗಳು ಫಲ ನೀಡುತ್ತವೆ. ನಿಮ್ಮ ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ಕಳೆದುಕೊಂಡಿದ್ದನ್ನು ಮತ್ತೆ ಪಡೆಯುವ ಆಸೆ ಇರಲಿದೆ. ಮನೆಯ ಔಷಧಿಯಿಂದ ಅದನ್ನು ಸರಿ ಮಾಡಿಕೊಳ್ಳಿ.
ಮಕರ ರಾಶಿ:
ಹೊಸ ವಸ್ತುಗಳನ್ನು ಖರೀದಿಸಲಾಗುತ್ತದೆ. ಪ್ರೀತಿಪಾತ್ರರ ಪ್ರೋತ್ಸಾಹದಿಂದ ಕೆಲಸಗಳು ನೆರವೇರುತ್ತವೆ. ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಹೊಸ ಯೋಜನೆಯನ್ನು ಪಡೆಯಲು ಅವಕಾಶಗಳು ಬರಲಿವೆ. ವೃತ್ತಿ ಕ್ಷೇತ್ರದಲ್ಲಿ ನೀವು ಉತ್ತಮ ಸ್ಥಾನವನ್ನು ಪಡೆಯಬಹುದು. ಆಪ್ತರಿಂದ ನಿಮಗೆ ಇಷ್ಟವಾದ ವಸ್ತುವು ಪ್ರಾಪ್ತವಾಗುವುದು. ಆಕಸ್ಮಿಕವಾಗಿ ಅನಾರೋಗ್ಯವು ಕಾಣಿಸಿಕೊಳ್ಳಬಹುದು. ಸಾಲಪಡೆದವರು ನಿಮ್ಮನ್ನು ಪೀಡಿಸಬಹುದು. ಪಾಲುದಾರಿಕೆಯಲ್ಲಿ ಇಂದು ಸಣ್ಣ ವಿಚಾರಕಗಕೇ ಕಲಹವಾಗುವುದು. ಇಂದು ಅಗತ್ಯವಿರುವಷ್ಟು ಮಾತ್ರವೇ ಮಾತನಾಡಿ.
ಕುಂಭ ರಾಶಿ:
ಮಕ್ಕಳ ವಿಷಯದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಮನೆಯನ್ನು ನವೀಕರಿಸಲು ಸಹ ನೀವು ಹೆಚ್ಚು ಗಮನಹರಿಸುತ್ತೀರಿ. ಕುಟುಂಬದ ಯಾವುದೇ ಸದಸ್ಯರಿಗೆ ನೀಡಿದ ಭರವಸೆಯನ್ನು ನೀವು ಪೂರೈಸಬೇಕಾಗುತ್ತದೆ. ಇಲ್ಲದಿದ್ದರೆ ಅವರು ನಿಮ್ಮ ಜೊತೆ ಅಸಮಾಧಾನಕ್ಕೆ ಕಾರಣ. ಆಕಸ್ಮಿಕ ಧನಲಾಭದಿಂದ ಸಂತಸ. ನಿಮ್ಮ ಪ್ರೀತಿಗೆ ಬೆಲೆ ಸಿಗದೇಹೋದರೂ ಖುಷಿಯಿಂದಲೇ ಇರುವಿರಿ. ಸಂಗಾತಿಯು ನಿಮಗೆ ಒಂದೇ ವಿಚಾರಗಳನ್ನು ಮತ್ತೆ ಮತ್ತೆ ಹೇಳಿ ಬೇಸರ ತರಿಸುವರು. ಮೈ ಚಳಿಯನ್ನು ಬಿಟ್ಟು ಧೈರ್ಯದಿಂದ ಮುನ್ನಡೆಯಿರಿ.
ಮೀನ ರಾಶಿ:
ನೀವು ಇಂದಿನ ಗುರಿಯನ್ನು ಸುಲಭವಾಗಿ ಸಾಧಿಸುವಿರಿ. ನಿಮ್ಮ ವ್ಯಾಪಾರ ಚಟುವಟಿಕೆಯು ಎಂದಿಗಿಂತ ಚುರುಕಾಗಿರುವುದು. ಕಾನೂನಿನ ತಿಳಿವಳಿಕೆ ಇರದೇ ವ್ಯವಹಾರದಲ್ಲಿ ನಿಮ್ಮ ಗತಿಗೆ ಮೆಚ್ಚುಗೆ ಇರಲಿದೆ. ಸರಕು ವಹಿವಾಟಿನ ವಿಷಯಗಳಲ್ಲಿ ನೀವು ಅನಾದರ ತೋರಿಸುವುದು ಬೇಡ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಚಿಂತೆ ಇರಲಿದೆ. ಆರೋಗ್ಯವು ಉತ್ತಮವಾಗಿಸಿಕೊಂಡು ಮೊದಲಿನ ಸ್ಥಿತಿಗೆ ಮರಳುವಿರಿ. ಹಾಗೆಯೇ ಉಳಿಸಿಕೊಳ್ಳಲು ಪ್ರಯತ್ನಿಸಿ. ಆಸ್ತಿಯನ್ನು ಮಾರಾಟಮಾಡುವ ಆಲೋಚನೆ ಇರಲಿದೆ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಗಂಡ, ಕರಣ : ಕೌಲವ, ಸೂರ್ಯೋದಯ – 06 – 21 am, ಸೂರ್ಯಾಸ್ತ – 06 – 35 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:28 – 14:00, ಯಮಗಂಡ ಕಾಲ 07:53 – 09:25, ಗುಳಿಕ ಕಾಲ 10:57 – 12:28
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 4ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಮುಲ್ಲನ್ಪುರ್ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕನಾಗಿ ಕಣಕ್ಕಿಳಿದ ಸಾಯಿ ಸುದರ್ಶನ್ ಕೇವಲ 13 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ ಜೊತೆಗೂಡಿದ ಶುಭ್ಮನ್ ಗಿಲ್ ಹಾಗೂ ಜೋಸ್ ಬಟ್ಲರ್ ಉತ್ತಮ ಜೊತೆಯಾಟದೊಂದಿಗೆ ತಂಡಕ್ಕೆ ಆಸರೆಯಾಗಿ ನಿಂತರು.
ಗುಜರಾತ್ ಟೈಟಾನ್ಸ್ ತಂಡದ ಮೊತ್ತ 83 ರನ್ ಆಗಿದ್ದ ವೇಳೆ ಶುಭ್ಮನ್ ಗಿಲ್ (39) ವಿಕೆಟ್ ಪಡೆಯುವಲ್ಲಿ ಯುಜ್ವೇಂದ್ರ ಚಹಲ್ ಯಶಸ್ವಿಯಾದರು. ಇದರ ಬೆನ್ನಲ್ಲೇ ಗ್ಲೆನ್ ಫಿಲಿಪ್ಸ್ (25) ಹಾಗೂ ಜೋಸ್ ಬಟ್ಲರ್ (38) ವಿಕೆಟ್ ಒಪ್ಪಿಸಿದರು.
ಇದಾದ ಬಳಿಕ ಬಂದ ವಾಷಿಂಗ್ಟನ್ ಸುಂದರ್ (18), ಶಾರುಖ್ ಖಾನ್ (4), ರಾಹುಲ್ ತೆವಾಟಿಯಾ (11) ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 162 ರನ್ಗಳಿಸಲಷ್ಟೇ ಶಕ್ತರಾದರು.
163 ರನ್ಗಳ ಗುರಿ:
20 ಓವರ್ಗಳಲ್ಲಿ 163 ರನ್ಗಳ ಗುರಿ ಪಡೆದ ಪಂಜಾಬ್ ಕಿಂಗ್ಸ್ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಪ್ರಿಯಾಂಶ್ ಆರ್ಯ ಕೇವಲ 7 ರನ್ಗಳಿಸಿ ಕಗಿಸೊ ರಬಾಡಗೆ ವಿಕೆಟ್ ಒಪ್ಪಿಸಿದರು. ಆದರೆ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವಲ್ಲಿ ಪ್ರಭ್ಸಿಮ್ರಾನ್ ಸಿಂಗ್ ಹಾಗೂ ಕೂಪರ್ ಕೊನೊಲಿ ಯಶಸ್ವಿಯಾದರು.
ಮೊದಲ ವಿಕೆಟ್ ಪತನದ ಬಳಿಕ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿಯು ಪವರ್ಪ್ಲೇನಲ್ಲಿ ತಂಡದ ಮೊತ್ತವನ್ನು 55 ಕ್ಕೆ ತಂದು ನಿಲ್ಲಿಸಿದರು. ಇದಾದ ಬಳಿಕ ಭರ್ಜರಿ ಹೊಡೆತಕ್ಕೆ ಮುಂದಾಗಿ ಪ್ರಭ್ಸಿಮ್ರಾನ್ ಸಿಂಗ್ (37) ಕ್ಯಾಚ್ ನೀಡಿ ನಿರ್ಗಮಿಸಿದರು.
ಆ ಬಳಿಕ ಬಂದ ಶ್ರೇಯಸ್ ಅಯ್ಯರ್ ಬಿರುಸಿನ ಆರಂಭ ಪಡೆದರೂ 18 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದರು. ಇದರ ಬೆನ್ನಲ್ಲೇ ನೆಹಾಲ್ ವಧೇರಾ (3) ಹಾಗೂ ಶಶಾಂಕ್ ಸಿಂಗ್ (4) ಹಾಗೂ ಮಾರ್ಕಸ್ ಸ್ಟೊಯಿನಿಸ್ (0) ವಿಕೆಟ್ ಪಡೆಯುವಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಯಶಸ್ವಿಯಾದರು.
ಸೂಪರ್ ಕೊನೊಲಿ:
ಇದಾಗ್ಯೂ ಮತ್ತೊಂದೆಡೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಕೂಪರ್ ಕೊನೊಲಿ 34 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಪೂರೈಸಿದರು. ಅಷ್ಟೇ ಅಲ್ಲದೆ ಕೊನೆ ತನಕ ಏಕಾಂಗಿ ಹೋರಾಟ ಮುಂದುವರೆಸಿದ ಕೊನೊಲಿ 44 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 72 ರನ್ ಬಾರಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡವನ್ನು 19.1 ಓವರ್ಗಳಲ್ಲಿ ಗುರಿ ತಲುಪಿ 3 ವಿಕೆಟ್ಗಳ ರೋಚಕ ಜಯ ತಂದುಕೊಟ್ಟಿದ್ದಾರೆ.
ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಸಾಯಿ ಸುದರ್ಶನ್, ಶುಭ್ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡ, ಅಶೋಕ್ ಶರ್ಮಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ (ಇಂಪ್ಯಾಕ್ಟ್ ಸಬ್).
ಬೆಂಗಳೂರು, (ಮಾರ್ಚ್ 31): ಕರ್ನಾಟಕದ ಆರ್ಥಿಕ (karnataka economy) ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಆಗ್ರಹಿಸಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಸಹ ಅಂಕಿ-ಸಂಖ್ಯೆ ಸಮೇತ ಮಾಧ್ಯಮ ಪ್ರಕಟಣೆ ಮೂಲಕ ತಿರುಗೇಟು ನೀಡಿದ್ದಾರೆ. ವಿಜಯೇಂದ್ರ ಒತ್ತಾಯಿಸಿರುವುದು ಆರ್ಥಿಕ ಕ್ಷೇತ್ರದ ಬಗೆಗಿನ ಅವರ ಅಜ್ಞಾನ. ಆಡಳಿತದ ಅನುಭವದ ಕೊರತೆ ಮತ್ತು ರಾಜಕೀಯ ಹತಾಶೆಯನ್ನು ತೋರಿಸುತ್ತೆ. ಕಳೆದ ತಿಂಗಳಷ್ಟೇ ಈ ಆರ್ಥಿಕ ವರ್ಷದ ಆಯವ್ಯಯಪತ್ರವನ್ನು ಮಂಡಿಸಿದ್ದೇನೆ. ಅದು ಅಂಕಿ-ಅಂಶಗಳ ಕಾಗದದ ಕಂತೆ ಅಲ್ಲ. ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಒಪ್ಪಿಸಿರುವ ಪ್ರಾಮಾಣಿಕ ಲೆಕ್ಕಪತ್ರ. ಆ ಬಜೆಟ್ನ್ನು ವಿಧಾನಮಂಡಲ ಒಪ್ಪಿ ಅಂಗೀಕರಿಸಿದ್ದು, ಇದೇ ನಮ್ಮ ಶ್ವೇತಪತ್ರ. ಈ ಬಗ್ಗೆ ಇನ್ನೂ ನಿಮಗೆ ಅನುಮಾನಗಳಿದ್ದರೆ ವಿವರಣೆ ಕೊಡಲು ಸಿದ್ಧನಿದ್ದೇನೆ. ಉಪಚುನಾವಣೆ ಅಖಾಡದಲ್ಲಿಯೇ ನಿಮ್ಮ ಜೊತೆ ಬಹಿರಂಗ ಚರ್ಚೆಗೂ ಸಿದ್ಧ ಎಂದಿದ್ದಾರೆ. ಅಲ್ಲದೇ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಮೊದಲು ಸ್ವಲ್ಪ ಹೋಮ್ ವರ್ಕ್ ಮಾಡಿಕೊಂಡು ಬನ್ನಿ ಎಂದು ಟಾಂಗ್ ಕೊಟ್ಟಿದ್ದಾರೆ.
ವಿವರಣೆ ಕೊಡಲು ನಾನು ಸಿದ್ಧ
ವಿಜಯೇಂದ್ರ ಶ್ವೇತ ಪತ್ರದ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿಎಂ, ಕಳೆದ ತಿಂಗಳಷ್ಟೇ ಈ ಆರ್ಥಿಕ ವರ್ಷದ ಆಯವ್ಯಯಪತ್ರವನ್ನು ನಾನು ಮಂಡಿಸಿದ್ದು, ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಒಪ್ಪಿಸಿರುವ ಪ್ರಾಮಾಣಿಕ ಲೆಕ್ಕಪತ್ರ. ಆ ಆಯವ್ಯಯವನ್ನು ವಿಧಾನಮಂಡಲದ ಉಭಯ ಸದನಗಳು ಒಪ್ಪಿಕೊಂಡು ಅಂಗೀಕರಿಸಿವೆ. ಇದರ ಬಗ್ಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಕೂಲಂಕಷವಾಗಿ ಚರ್ಚೆ ನಡೆದಿದೆ. ವಿಜಯೇಂದ್ರ ಪಕ್ಷದವರೂ ಸೇರಿ 21 ಜನ ವಿರೋಧ ಪಕ್ಷದ ಸದಸ್ಯರೂ ಮಾತನಾಡಿ ಎತ್ತಿದ್ದ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದ್ದೇನೆ. ಇದರ ಬಗ್ಗೆ ಇನ್ನೂ ನಿಮಗೆ ಅನುಮಾನಗಳಿದ್ದರೆ ವಿವರಣೆ ಕೊಡಲು ನಾನು ಸಿದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ದಯವಿಟ್ಟು ಕೇವಲ ರಾಜಕೀಯ ಮಾತನಾಡಬೇಕೆಂಬ ಬಾಯಿ ಚಪಲಕ್ಕಾಗಿ ಆಯವ್ಯಯ ಪತ್ರದ ಪಾವಿತ್ರ್ಯವನ್ನು ಹಾಳು ಮಾಡಲು ಹೋಗಬೇಡಿ. ರಾಜ್ಯ ದಿವಾಳಿ ಸ್ಥಿತಿಯಲ್ಲಿದೆ ಎಂಬ ಆರೋಪದ ಹಿಂದೆ ನಮ್ಮ ಸರ್ಕಾರವನ್ನು ರಾಜಕೀಯವಾಗಿ ಎದುರಿಸಲಾಗದ ಬಿಜೆಪಿ ನಾಯಕರ ಅಸಹಾಯಕತೆ, ಹತಾಶೆ ಮತ್ತು ಅಸೂಯೆ ಇದೆ. ಯಾವ ಇಲಾಖೆಯೂ ನೌಕರರಿಗೆ ಸಂಬಳ ನೀಡಲಾಗದ ದಿವಾಳಿ ಸ್ಥಿತಿಯಲ್ಲಿಲ್ಲ. ನಮ್ಮ ಸರ್ಕಾರ ಆರ್ಥಿಕವಾಗಿ ಮಾತ್ರವಲ್ಲ ರಾಜಕೀಯವಾಗಿಯೂ ಸುಭದ್ರವಾಗಿದೆ. ರಾಜ್ಯದ ಜನತೆ ನೆಮ್ಮದಿಯಿಂದ ಇದ್ದಾರೆ. ವಿಜಯೇಂದ್ರ ಅವರೇ, ಕರ್ನಾಟಕದ ಆರ್ಥಿಕ ಸ್ಥಿತಿ ನಿಮ್ಮ ಪಕ್ಷದ ಆಡಳಿತ ಇರುವ ಕೇಂದ್ರ ಸರ್ಕಾರಕ್ಕಿಂತಲೂ ಉತ್ತಮ ಸ್ಥಿತಿಯಲ್ಲಿದೆ. ನಮ್ಮ ಈ ವರ್ಷದ ನಮ್ಮ ಬಜೆಟ್ ಗಾತ್ರ ರೂ.4,48,004 ಕೋಟಿಗಳಾಗಿದ್ದು, ಇದು ಕಳೆದ ವರ್ಷದ ಬಜೆಟ್ ಗಾತ್ರಕ್ಕಿಂತ 38,455 ಕೋಟಿ ರೂ. ಗಳಷ್ಟು ಹೆಚ್ಚಿನದ್ದಾಗಿದೆ.
ನಮ್ಮ ಬಜೆಟ್ ಗಾತ್ರದಲ್ಲಿ ಶೇ.9.4ರಷ್ಟು ಬೆಳವಣಿಗೆಯಾಗಿದ್ದರೆ, ಕೇಂದ್ರ ಸರ್ಕಾರದ ಬಜೆಟ್ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.5.6ರಷ್ಟು ಮಾತ್ರ ಬೆಳವಣಿಗೆ ಸಾಧಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶದ ಜಿಡಿಪಿ ಬೆಳವಣಿಗೆಗಿಂತ ಹೆಚ್ಚು
ಕಳೆದ ವರ್ಷ 50.66 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದ ಕೇಂದ್ರ ಸರ್ಕಾರ ಈ ವರ್ಷ 53.47 ಲಕ್ಷ ಕೋಟಿ ರೂ.ಗಾತ್ರದ ಬಜೆಟ್ ಮಂಡಿಸಿದ್ದಾರೆ. ನಮ್ಮ ಬಜೆಟ್ ಗಾತ್ರ ಆರ್ಥಿಕ ಪ್ರಗತಿಯನ್ನು ಸೂಚಿಸುತ್ತಿದೆ. ಆರ್ಥಿಕ ಹಿಂಜರಿತ ಇದ್ದಿದ್ದರೆ ಈ ಪ್ರಗತಿ ಸಾಧ್ಯವಾಗುತ್ತಿತ್ತೇ? 2025-26 ರಲ್ಲಿ ದೇಶದ ಜಿಡಿಪಿಯ ಬೆಳವಣಿಗೆ ಶೇ.7.4 ರಷ್ಟಿದ್ದರೆ, ರಾಜ್ಯದ ಜಿ.ಎಸ್.ಡಿ.ಪಿಯು ಶೇ.8.1 ರಷ್ಟು ಬೆಳವಣಿಗೆ ದಾಖಲಿಸಿದೆ. ಕರ್ನಾಟಕದ ಜಿಎಸ್ಡಿಪಿ ದೇಶದ ಜಿಡಿಪಿ ಬೆಳವಣಿಗೆಗಿಂತ ಹೆಚ್ಚಿರುವುದು ನಮ್ಮ ಸರ್ಕಾರದ ಆರ್ಥಿಕ ಸುಭದ್ರತೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಕೇಂದ್ರದ ವಿತ್ತೀಯ ಕೊರತೆ ಶೇ.4.3 ರಷ್ಟಿದೆ
ಈ ವರ್ಷ ನಮ್ಮ ಜಿ.ಎಸ್.ಡಿ.ಪಿ 33,05,500 ಕೋಟಿಯಷ್ಟಿದೆ. ನಾನು ಮಂಡಿಸಿರುವ ಹದಿನೇಳು ಬಜೆಟ್ ಗಳಲ್ಲಿಯೂ ವಿತ್ತೀಯ ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದೇನೆ. ಆರ್ಥಿಕ ಹೊಣೆಗಾರಿಕೆ ಅಧಿನಿಯಮಕ್ಕೆ ಅನುಗುಣವಾಗಿ ನಮ್ಮ ಒಟ್ಟು ಹೊಣೆಗಾರಿಕೆಗಳು ಜಿ.ಎಸ್.ಡಿ.ಪಿ.ಯ ಶೇಕಡಾ 25 ರೊಳಗೆ ಇರಬೇಕು. ನಮ್ಮದು ಶೇ.24.94 ರಷ್ಟಿದೆ. ಕೇಂದ್ರ ಸರ್ಕಾರದ ಹೊಣೆಗಾರಿಕೆಗಳು ಜಿ.ಡಿ.ಪಿ.ಯ ಶೇಕಡಾ 40ರೊಳಗೆ ಇರಬೇಕಾಗುತ್ತದೆ. ಅದು ಶೇ.55.6 ರಷ್ಟಿದೆ. ದಿವಾಳಿಯಾಗಿರುವುದು ಯಾವ ಸರ್ಕಾರ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, 16ನೇ ಹಣಕಾಸು ಆಯೋಗದ ಮಾರ್ಗಸೂಚಿಯ ಅನುಸಾರ ವಿತ್ತೀಯ ಕೊರತೆ ರಾಜ್ಯಗಳಲ್ಲಿ ಜಿಎಸ್ಡಿಪಿಯ ಶೇ.3 ರೊಳಗೆ ಹಾಗೂ ಕೇಂದ್ರ ಸರ್ಕಾರ ಜಿಡಿಪಿಯ ಶೇ.4.2 ರೊಳಗೆ ಇರಬೇಕು. ನಮ್ಮ ವಿತ್ತೀಯ ಕೊರತೆಯು ಜಿಎಸ್ಡಿಪಿಯ ಶೇ.3 ರ ಒಳಗೆ ಇದೆ. ಆದರೆ ಕೇಂದ್ರದ ವಿತ್ತೀಯ ಕೊರತೆ ಜಿ.ಡಿ.ಪಿ.ಯ ಶೇ.4.3 ರಷ್ಟಿದೆ. ವಿಜಯೇಂದ್ರ ಅವರೇ ದಯವಿಟ್ಟು ಒಮ್ಮೆ ನಿಮ್ಮ ಪಕ್ಷದ ಆಡಳಿತ ಇರುವ ರಾಜ್ಯಗಳ ಆರ್ಥಿಕತೆಯ ಮೇಲೆ ಕಣ್ಣಾಡಿಸಿಕೊಂಡು ಬನ್ನಿ ಎಂದು ಸಲಹೆ ನೀಡಿದ್ದಾರೆ.
ಅನುದಾನದಲ್ಲಿ ನಿರಂತರ ಮಲತಾಯಿ ಧೋರಣೆ
ಮಹಾರಾಷ್ಟ್ರದ ಸಾಲ ಬಾಕಿ ರೂ.11.02 ಲಕ್ಷ ಕೋಟಿಯಷ್ಟಿದ್ದರೆ, ಬಿಹಾರದ ವಿತ್ತೀಯ ಕೊರತೆ ಜಿಎಸ್ ಡಿಪಿ ಶೇ.11.8ರಷ್ಟಿದೆ. ರಾಜಸ್ತಾನ ಮತ್ತು ಮಧ್ಯಪ್ರದೇಶದ ವಿತ್ತೀಯ ಕೊರತೆ ಜಿಎಸ್ಡಿಪಿಯ ಶೇಕಡಾ 3.7ರಷ್ಟಿದೆ.
ಬಿಜೆಪಿ ಆಳ್ವಿಕೆಯ ಕೇಂದ್ರ ಸರ್ಕಾರ ಇರಲಿ, ರಾಜ್ಯ ಸರ್ಕಾರಗಳಿರಲಿ ಆರ್ಥಿಕ ದಿವಾಳಿತನವೇ ಬಿಜೆಪಿ ಆಡಳಿತದ ಮುಖ್ಯ ಗುರುತಾಗಿದೆ. ನಮ್ಮನ್ನು ರಾಜಕೀಯವಾಗಿ ಹಣಿಯಬೇಕೆಂಬ ದುರುದ್ದೇಶದಿಂದ ಕೇಂದ್ರ ಸರ್ಕಾರ ಸತತವಾಗಿ ಕರ್ನಾಟಕಕ್ಕೆ ಹೊಡೆತದ ಮೇಲೆ ಹೊಡೆತ ಕೊಡುತ್ತಿದೆ. ತೆರಿಗೆ ಹಂಚಿಕೆ, ಜಿಎಸ್ ಟಿ ಪರಿಹಾರ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ಅನುದಾನದಲ್ಲಿ ನಿರಂತರವಾಗಿ ಮಲತಾಯಿ ಧೋರಣೆ ಅನುಸರಿಸುತ್ತಾ ಬಂದಿದೆ. ಹದಿನಾಲ್ಕನೇ ಹಣಕಾಸು ಆಯೋಗ ತೆರಿಗೆ ಹಂಚಿಕೆಯ ಪಾಲನ್ನು ಶೇಕಡಾ 4.72ಕ್ಕೆ ನಿಗದಿಗೊಳಿಸಿತ್ತು, ಹದಿನೈದನೇ ಹಣಕಾಸು ಆಯೋಗ 3.64ಕ್ಕೆ ಇಳಿಸಿತ್ತು.
ನಮ್ಮ ತೀವ್ರ ಪ್ರತಿಭಟನೆಯ ನಂತರ ಹದಿನಾರನೇ ಹಣಕಾಸು ಆಯೋಗ ಈಗ ತೆರಿಗೆ ಹಂಚಿಕೆಯ ಪಾಲನ್ನು ಶೇಕಡಾ 4.13ಕ್ಕೆ ನಿಗದಿಗೊಳಿಸಿದೆ. ಅತ್ಯಂತ ಹೆಚ್ಚು ತೆರಿಗೆ ಸಂಗ್ರಹಿಸುವ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ದುರುದ್ದೇಶದಿಂದ ಈ ಅನ್ಯಾಯ ಎಸಗಿದರೂ ರಾಜ್ಯದ ಬಿಜೆಪಿ ನಾಯಕರಾಗಲಿ, ಆ ಪಕ್ಷದ ಸಂಸದರಾಗಲಿ ಬಾಯಿ ಬಿಚ್ಚದೆ ಕರ್ನಾಟಕ ರಾಜ್ಯದ ಜನತೆಗೆ ದ್ರೋಹ ಎಸಗುತ್ತಿದ್ದಾರೆ. ಜಿ.ಎಸ್.ಟಿ. ಜಾರಿಯಿಂದ ರಾಜ್ಯಕ್ಕೆ ಆದ ರಾಜಸ್ವ ನಷ್ಟವನ್ನು ಸಂಪೂರ್ಣವಾಗಿ ಸರಿದೂಗಿಸಲು ಕೇಂದ್ರ ಸರ್ಕಾರ ವಿಫಲವಾಗಿರುವುದು ಮತ್ತು ಕೇಂದ್ರ ಸರ್ಕಾರ ವಿಧಿಸುವ ಸೆಸ್ಗಳು ಮತ್ತು ಸರ್ಚಾರ್ಜ್ಗಳನ್ನು ರಾಜ್ಯಗಳಿಗೆ ಹಂಚಿಕೆಯಾಗುವ ತೆರಿಗೆ ಪಾಲಿನಲ್ಲಿ ಪರಿಗಣಿಸದಿರುವುದರಿಂದ ಹಾಗೂ 15ನೇ ಹಣಕಾಸಿನಲ್ಲಿ ರಾಜ್ಯದ ತೆರಿಗೆ ಪಾಲು ಕಡಿಮೆಯಾದ ಕಾರಣ ರಾಜ್ಯವು ವಿತ್ತೀಯ ಸವಾಲುಗಳನ್ನು ಎದುರಿಸಬೇಕಾಗಿ ಬಂದಿದೆ.
ಕೇಂದ್ರ ಜಿಎಸ್ಟಿ ಪರಿಹಾರ ನೀಡುವುದು ನಿಲ್ಲಿಸಿದೆ
ಕೇಂದ್ರ ಸರ್ಕಾರವು 2023-24ರಿಂದ ಜಿ.ಎಸ್.ಟಿ. ಪರಿಹಾರ ಸ್ಥಗಿತಗೊಳಿಸಿದ್ದರಿಂದ, ಕೇಂದ್ರ ಸರ್ಕಾರ ಅಂದಾಜಿಸಿದ್ದ ಜಿ.ಎಸ್.ಟಿ. ಸಂಗ್ರಹಣೆಗೆ ಹೋಲಿಸಿದರೆ, ರಾಜ್ಯದ ಜಿ.ಎಸ್.ಟಿ ಸಂಗ್ರಹಣೆಯು 2023-24ರಲ್ಲಿ 30,871 ಕೋಟಿ ರೂ.ಗಳು ಮತ್ತು 2024-25ರಲ್ಲಿ 40,368 ಕೋಟಿ ರೂ.ಗಳು ಕೊರತೆಯಾಗಿರುತ್ತದೆ. 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲು ಕಡಿಮೆಯಾದ ಕಾರಣ 2023-24ರಿಂದ 2025-26ರವರೆಗೆ 39,500 ಕೋಟಿ ರೂ.ಗಳು ನಷ್ಟವಾಗಿರುತ್ತದೆ. ಇದರ ಪರಿಣಾಮವಾಗಿ, 2023-24ರಿಂದ ರಾಜಸ್ವ ಕೊರತೆಯನ್ನು ಎದುರಿಸುವಂತಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ (2019-2022) ಕೇಂದ್ರ ಸರ್ಕಾರ ಜಿ.ಎಸ್.ಟಿ ಪರಿಹಾರ ನೀಡಿತ್ತು. ಈ ಅವಧಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ಒಟ್ಟು ಪರಿಹಾರ 57,351 ಕೋಟಿ ರೂ.ಗಳು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, 2023ರಿಂದ ಕೇಂದ್ರ ಸರ್ಕಾರ ಜಿ.ಎಸ್.ಟಿ ಪರಿಹಾರ ನೀಡುವುದನ್ನು ನಿಲ್ಲಿಸಿರುತ್ತದೆ. ಆದಕಾರಣ ರಾಜ್ಯದ ರಾಜಸ್ವ ಸಂಗ್ರಹಣೆ ಕಡಿಮೆಯಾಗಿ ರಾಜಸ್ವ ಕೊರತೆಯನ್ನು ಎದುರಿಸಬೇಕಾಯಿತು.
2017ರಲ್ಲಿ ಜಿಎಸ್ಟಿ ಜಾರಿಯಾದಾಗಿನಿಂದ, 15ನೇ ಹಣಕಾಸು ಆಯೋಗ ಮಾಡಿದ ಅನ್ಯಾಯದಿಂದ, 15ನೇ ಹಣಕಾಸು ಆಯೋಗ ಮಾಡಿದ ಶಿಫಾರಸ್ಸುಗಳನ್ನು ಜಾರಿ ಮಾಡದೆ ಕೇಂದ್ರವು ಮಾಡಿದ ದ್ರೋಹದಿಂದ, ಜಿಎಸ್ಟಿ ಪರಿಹಾರ ನೀಡದ ಕಾರಣ ಸುಮಾರು 2,00,000 ಕೋಟಿ ರೂ.ಗಳಿಗೂ ಹೆಚ್ಚಿನ ನಷ್ಟ ರಾಜ್ಯಕ್ಕೆ ಉಂಟಾಗಿದೆ. ಕೇಂದ್ರ ಸರ್ಕಾರ ಅನುಸರಿಸುತ್ತಾ ಬಂದಿರುವ ಒಕ್ಕೂಟ ವಿರೋಧಿ ಧೋರಣೆಯ ಹೊರತಾಗಿಯೂ ರಾಜ್ಯದ ಆರ್ಥಿಕತೆ ಎಲ್ಲಿಯೂ ಹಳಿ ತಪ್ಪದಂತೆ ಎಚ್ಚರಿಕೆ ಮತ್ತು ಬದ್ಧತೆಯಿಂದ ಮುನ್ನಡೆಸುತ್ತಾ ಬಂದಿದ್ದೇವೆ.
ಮ್ಮ ರಾಜಸ್ವ ಕೊರತೆಗೆ ಪ್ರಮುಖ ಕಾರಣ ಇದು
ಕಳೆದ ವರ್ಷ ಕೇಂದ್ರ ಸರ್ಕಾರ ಇದ್ದಕ್ಕಿದ್ದಂತೆ ಮಾಡಿದ ಜಿಎಸ್ಟಿ ದರಗಳ ಪರಿಷ್ಕರಣೆಯಿಂದಾಗಿ ರಾಜ್ಯದ ಆರ್ಥಿಕತೆಯ ಮೇಲೆ ಹೊಡೆತ ಬಿತ್ತು. ಈ ಪರಿಷ್ಕರಣೆಗೆ ಮುನ್ನ, ರಾಜ್ಯದ ಸರಾಸರಿ ಮಾಸಿಕ ಜಿ.ಎಸ್.ಟಿ ಸಂಗ್ರಹಣೆಯು ಶೇ.10ರಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು. ಆದರೆ ದರ ಪರಿಷ್ಕರಣೆಯ ನಂತರ, ಜಿ.ಎಸ್.ಟಿ ಸಂಗ್ರಹಣೆಯ ಮಾಸಿಕ ಬೆಳವಣಿಗೆಯು ಶೇ.4ರಷ್ಟು ಕಡಿಮೆಯಾಗಿದೆ. 2025-26ನೇ ಸಾಲಿನಲ್ಲಿ ಸುಮಾರು ₹10,000 ಕೋಟಿ ಕೊರತೆಯಾದರೆ, 26-27ರಲ್ಲಿ 15,000 ಕೋಟಿ ರೂ.ಗಳಷ್ಟು ಕೊರತೆಯಾಗಬಹುದು ಎಂದು ಅಂದಾಜಿಸಲಾಗಿದೆ. ಇದು ನಮ್ಮ ರಾಜಸ್ವ ಕೊರತೆಗೆ ಪ್ರಮುಖ ಕಾರಣ.
ಕೇಂದ್ರ ಸರ್ಕಾರ ನಡೆಸಿದ ಜಿಎಸ್ಟಿ ದರ ಪರಿಷ್ಕರಣೆಯಿಂದ ಸಾಮಾನ್ಯ ಜನರಿಗೆ ಯಾವ ಲಾಭವೂ ಆಗಿಲ್ಲ. ಕಾರು, ಬೈಕುಗಳ ಖರೀದಿ ಮಾಡಿದವರಿಗೆ ಸ್ವಲ್ಪ ಲಾಭವಾಗಿರಬಹುದು. ಇದರ ಬಹುತೇಕ ಲಾಭವನ್ನು ಬಹುರಾಷ್ಟ್ರೀಯ ಕಂಪನಿಗಳು, ಕಾರ್ಪೊರೇಟ್ ಕುಳಗಳು ಹೊತ್ತುಕೊಂಡು ಹೋಗುತ್ತಿವೆ. ಇಷ್ಟರ ನಡುವೆಯೂ ಕಳೆದ ವರ್ಷದ ಆಯವ್ಯಯಕ್ಕಿಂತ ಸುಮಾರು 22,573 ಕೋಟಿ ರೂ. ಹೆಚ್ಚಿನ ರೆವಿನ್ಯೂ ಸಂಗ್ರಹವಾಗಬಹುದೆಂದು ಅಂದಾಜಿಸಿದ್ದೇವೆ. ನಾನು ಎಂದೂ ಸಾಲ ಮಾಡಬಾರದು ಎಂದು ಹೇಳಿಲ್ಲ, ಹೇಳುವುದೂ ಇಲ್ಲ. ಎಲ್ಲ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲೂ ಸಾಲ ದೊಡ್ಡ ಪ್ರಮಾಣದಲ್ಲೇ ಇದೆ. ಆದರೆ ಮಾಡುವ ಸಾಲದ ಹಣವನ್ನು ಮೂಲಸೌಕರ್ಯ ಮತ್ತು ಆರ್ಥಿಕ ಚಟುವಟಿಕೆಗಳಿಗಾಗಿ ಹೂಡಿಕೆ ಮಾಡಿದಾಗ ಅದರಿಂದ ಬರುವ ಪ್ರತ್ಯಕ್ಷ ಮತ್ತು ಪರೋಕ್ಷ ಗಳಿಕೆ ಆರ್ಥಿಕತೆಯನ್ನು ಇನ್ನಷ್ಟು ಸದೃಡಗೊಳಿಸುತ್ತದೆ.
ಕೇಂದ್ರ ಸರ್ಕಾರ ಸಾಲದ ಮೇಲೆ ಅವಲಂಬಿತವಾಗಿದೆ
ಕೇಂದ್ರ ಸರ್ಕಾರವೂ ತನ್ನ ವೆಚ್ಚ ನಿರ್ವಹಣೆಗೆ ಸಾಲದ ಮೇಲೆ ಅವಲಂಬಿತವಾಗಿದೆ. ಕೇಂದ್ರ ಸರ್ಕಾರ ಮಾಡಿದ ಸಾಲ 2014 ರ ಮಾರ್ಚ್ ಗೆ ಹೋಲಿಸಿದರೆ 2027 ರ ಮಾರ್ಚ್ ವೇಳೆಗೆ 165.52 ಲಕ್ಷ ಕೋಟಿ ರೂಗಳಷ್ಟು ಹೆಚ್ಚಾಗಿದೆ. ರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗ ಇದ್ದ 53.11 ಲಕ್ಷ ಕೋಟಿ ರೂ. ಸಾಲ ಈಗ 218.63 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಮೋದಿಯವರು ದೇಶವನ್ನು ಸಾಲದ ಕೂಪಕ್ಕೆ ದೂಡಿದ್ದಾರೆ. ಈ ವರ್ಷ 16,96,000 ಕೋಟಿ ಸಾಲ ಮಾಡಿದ್ದಾರೆ. ನಿಯಮಗಳ ಪ್ರಕಾರ ಸಾಲದ ಮೊತ್ತ 40 ರಷ್ಟಿರಬೇಕಿದ್ದು, ಕೇಂದ್ರದ ಈ ಪ್ರಮಾಣ 56 ರಷ್ಟು ಹೆಚ್ಚಿದೆ ಎಂದು ಅಂಕಿ ಸಂಖ್ಯೆ ಬಿಚ್ಚಿಟ್ಟಿದ್ದಾರೆ.
ಬಿಜೆಪಿ ಅವಧಿಯ ಸಾಲ ಲೆಕ್ಕ ಹೇಳಿದ ಸಿಎಂ
ವಿಜಯೇಂದ್ರ ಅವರೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮಾಡಿದ್ದ ಸಾಲವನ್ನೊಮ್ಮೆ ಹಿಂದಿರುಗಿ ಹೋಗಿ ನೋಡಿ. ಕೊರೋನ ಸಮಯದಲ್ಲಿ ವಿರೋಧ ಪಕ್ಷದಲ್ಲಿದ್ದ ನಾವು ಪ್ರತಿ ಕುಟುಂಬಕ್ಕೆ 10,000 ರೂ. ಕೊಡಿ ಜನರ ಕೈಯಲ್ಲಿ ಹಣವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಅವರ ಕಷ್ಟ ಸ್ವಲ್ಪವಾದರೂ ಕಡಿಮೆಯಾಗಲಿ ಎಂದು ಹೇಳಿದರೆ ಆಗ ಅಧಿಕಾರದಲ್ಲಿದ್ದ ಬಿಜೆಪಿಯವರು ಕೇಳಲಿಲ್ಲ. ಆದರೂ ಸಾಲ ಮಾಡಿ ಮಾಡಿದ್ದೇನು? ಒಂದು ರಸ್ತೆ ಸರಿ ಮಾಡಲಿಲ್ಲ. ತಮ್ಮ 4 ವರ್ಷಗಳ 2019-23 ರ ಅವಧಿಯಲ್ಲಿ ಹಿಂದುಳಿದ ವರ್ಗದವರಿಗೆ ಕೇವಲ 5 ಹಾಸ್ಟೆಲ್ಗಳನ್ನು ಕೊಟ್ಟಿದ್ದೀರಿ. 2,832 ಹೊಸ ಬಸ್ಸುಗಳನ್ನು ಕೊಂಡುಕೊಳ್ಳಲಾಯಿತು. ನಾಲ್ಕು ವರ್ಷಗಳಲ್ಲಿ 5.75 ಲಕ್ಷ ಮನೆಗಳನ್ನು ನಿರ್ಮಿಸಿದರು. ಹೊಸ ಆಸ್ಪತ್ರೆಗಳಿರಲಿಲ್ಲ. ವೈದ್ಯರ ನೇಮಕಾತಿ ಇರಲಿಲ್ಲ. ಹೀಗಿದ್ದರೂ ಬಿಜೆಪಿ ಸರ್ಕಾರ 2023ರಲ್ಲಿ 5,53,363 ಕೋಟಿ ರೂಗಳಷ್ಟು ಬಾಕಿ ಸಾಲವನ್ನು ಉಳಿಸಿಹೋಗಿತ್ತು.ಬಿಜೆಪಿ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಅರ್ಥಿಕತೆಯನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದರೆ ಯಾರು ಆರ್ಥಿಕತೆಯನ್ನು ದಿವಾಳಿ ಸ್ಥಿತಿಗೆ ತಳ್ಳಿದವರು ಎನ್ನುವುದು ಸ್ಪಷ್ಟವಾಗುತ್ತದೆ. ವಿಜಯೇಂದ್ರ ಅವರೇ ಇನ್ನೊಮ್ಮೆ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಮೊದಲು ಸ್ವಲ್ಪ ಹೋಮ್ ವರ್ಕ್ ಮಾಡಿಕೊಂಡು ಬನ್ನಿ, ಮಾತನಾಡೋಣ ಎಂದು ತಿರುಗೇಟು ನೀಡಿದ್ದಾರೆ.