ಹಾಸನ, ಮಾರ್ಚ್ 18:ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್ ಪ್ರಕರಣ ಸಂಬಂಧ ಎಸ್ಐಟಿ ಚಾರ್ಜ್ಶೀಟ್ ಬಗ್ಗೆ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಕೇಸ್ನ ಆರನೇ ಆರೋಪಿಯೂ ಆಗಿರುವ ದೇವರಾಜೇಗೌಡ, ಪ್ರಕರಣದಲ್ಲಿ ಯಾರ್ಯಾರು ಇದ್ದಾರೆ ಎಂಬುದು ಜಗತ್ತಿಗೆ ಗೊತ್ತಿದೆ. ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ ಪ್ರಕರಣ ಇದು. ಪ್ರಮುಖ ಆರೋಪಿ ಸ್ಥಾನದಲ್ಲಿರುವ ಪ್ರೀತಂಗೌಡ, ಡಿ.ಕೆ. ಶಿವಕುಮಾರ್, ಶ್ರೇಯಸ್ ಪಟೇಲ್, ಕ್ವಾಲಿಟಿ ಬಾರ್ ಶರತ್, ಹಲವು ರಾಜಕಾರಣಿಗಳ ಹೆಸರಿಲ್ಲ. ಶಿವಲಿಂಗೇಗೌಡ ಬಹಿರಂಗವಾಗಿ ಹೇಳಿದರೂ ಅವರಿಗೆ ಏಕೆ ನೋಟಿಸ್ ಕೊಡಲಿಲ್ಲ?, ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ. ಪೆನ್ಡ್ರೈವ್ ಹಂಚಿಕೆ ಮಾಡಿದವರ ಹೆಸರೇ ಚಾರ್ಜ್ಶೀಟ್ನಲ್ಲಿ ಇಲ್ಲ. ಹೀಗಾಗಿ ತನಿಖೆ ಮಾಡಿದ ಅಧಿಕಾರಿಗಳನ್ನೇ ತನಿಖೆ ಮಾಡಬೇಕು. ಈ ಬಗ್ಗೆ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ರಾಯಚೂರು, ಮಾರ್ಚ್ 18: ಆಕಸ್ಮಿಕ ಅಗ್ನಿ ಅವಘಡದಿಂದ 300 ಕ್ಕೂ ಹೆಚ್ಚು ಭತ್ತದ ಚೀಲಗಳು ಸುಟ್ಟು ಭಸ್ಮವಾದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಹೊರವಲಯದಲ್ಲಿ ನಡೆದಿದೆ. ಉತ್ತಮ ಬೆಲೆ ಸಿಗಲೆಂದು ಭತ್ತವನ್ನು ಶೇಖರಿಸಿ ಕಾಯುತ್ತಿದ್ದ ರೈತ ಇದೀಗ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿ ಕಂಗಾಲಾಗಿದ್ದಾನೆ. ಮಹಮ್ಮದ್ ಯೂಸಫ್ ಎಂಬ ರೈತನಿಗೆ ಸೇರಿದ ಈ ಭತ್ತವನ್ನು ಜಮೀನಿನಲ್ಲಿರುವ ದನದ ಶೆಡ್ನಲ್ಲಿ ಸಂಗ್ರಹಿಸಲಾಗಿತ್ತು. ಆರ್ಎನ್ಆರ್ ಜಾತಿಯ ಭತ್ತಕ್ಕೆ ಉತ್ತಮ ದರ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಅವರು 300 ಕ್ಕೂ ಹೆಚ್ಚು ಚೀಲಗಳನ್ನು ಸಂಗ್ರಹಿಸಿದ್ದರು. ಆದರೆ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕೇವಲ ಒಂದು ಗಂಟೆಯೊಳಗೆ ಸಂಪೂರ್ಣ ಭತ್ತ ಸುಟ್ಟು ಕರಕಲಾಗಿದೆ.
ಬೆಂಕಿಯ ತೀವ್ರತೆಗೆ ದನದ ಶೆಡ್ ಕೂಡ ಸಂಪೂರ್ಣವಾಗಿ ಭಸ್ಮವಾಗಿದ್ದು, ಒಟ್ಟು ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಭತ್ತ ಹಾಗೂ 6 ಲಕ್ಷ ರೂಪಾಯಿ ಮೌಲ್ಯದ ಶೆಡ್ ನಷ್ಟವಾಗಿದೆ. ಬೆಂಕಿಯಿಂದ ಉಳಿದಿದ್ದ ಅರೆಬರೆ ಭತ್ತವನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಅದನ್ನು ದನಗಳಿಗೆ ಮಾತ್ರ ಬಳಸುವಂತಾಗಿದೆ ಎಂದು ರೈತ ಯೂಸಫ್ ನೋವಿನಿಂದ ತಿಳಿಸಿದ್ದಾರೆ. ಘಟನೆಯಿಂದ ಮಾನಸಿಕವಾಗಿ ಕುಗ್ಗಿರುವ ರೈತ, ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಈ ಅಗ್ನಿ ಅವಘಡದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೆಂಗಳೂರಿನ ಗಾಂಧಿನಗರದಲ್ಲಿರುವ ಹೊಚ್ಚ ಹೊಸ ಮಲ್ಟಿಪ್ಲೆಕ್ಸ್ ‘ಎಎಂಬಿ ಸಿನಿಮಾಸ್’ (AMB Cinemas) ಕಡೆಯಿಂದ ಸಿನಿಮಾ ಪ್ರೇಮಿಗಳಿಗಾಗಿ ಯುಗಾದಿ ಹಬ್ಬದ ವಿಶೇಷ ಆಫರ್ ನೀಡಲಾಗುತ್ತಿದೆ. ಕೆಲವೇ ತಿಂಗಳುಗಳ ಹಿಂದೆ ‘ಕಪಾಲಿ’ ಚಿತ್ರಮಂದಿರವನ್ನು ಅತ್ಯಾಧುನಿಕ ಮಲ್ಟಿಪ್ಲೆಕ್ಸ್ ಆಗಿ ಪರಿವರ್ತಿಸಿದ ಎಎಂಬಿ ಸಿನಿಮಾಸ್ ನೀಡಲಿರುವ ಆಫರ್ಗಳು ಪ್ರೇಕ್ಷಕರಿಗೆ ಸಿನಿಮಾದ ಮೋಜನ್ನು ಹೆಚ್ಚಿಸಲಿದೆ. ಈ ವಿಶೇಷ ಆಫರ್ಗಳು ಬಹುನಿರೀಕ್ಷಿತ ಚಿತ್ರಗಳಾದ ‘ಲವ್ ಮಾಕ್ಟೇಲ್ 3’, ‘ಧುರಂಧರ್ 2’ (Dhurandhar 2) ಮತ್ತು ‘ಉಸ್ತಾದ್ ಭಗತ್ ಸಿಂಗ್’ ಚಿತ್ರಗಳಿಗೆ ಅನ್ವಯವಾಗಲಿವೆ. ಏನಿದು ಆಫರ್? ಮುಂದೆ ಓದಿ..
ಎಎಂಬಿ ಸಿನಿಮಾಸ್ನಲ್ಲಿ ಬೆಳಗಿನ ಪ್ರದರ್ಶನಗಳಿಗೆ ಆಫರ್ ನೀಡಲಾಗುತ್ತಿದೆ. ಬೆಳಿಗ್ಗೆ 11 ಗಂಟೆಯೊಳಗಿನ ಪ್ರದರ್ಶನಗಳಿಗೆ ಟಿಕೆಟ್ ಕಾಯ್ದಿರಿಸುವ ಪ್ರೇಕ್ಷಕರಿಗೆ ಉಚಿತ ಪಾಪ್ಕಾರ್ನ್ ಮತ್ತು ಉಡುಗೊರೆಗಳನ್ನು ನೀಡಲಾಗುವುದು. ಈ ಕೊಡುಗೆಯು ಮಾರ್ಚ್ 19ರಿಂದ ಮಾರ್ಚ್ 26ರವರೆಗೆ ಮಾತ್ರ ಲಭ್ಯವಿರುತ್ತದೆ. ‘ಬುಕ್ ಮೈ ಶೋ’ ಮೂಲಕ ಟಿಕೆಟ್ ಕಾಯ್ದಿರಿಸುವ ಗ್ರಾಹಕರು ‘AMB100’ ಕೋಡ್ ಬಳಸುವ ಮೂಲಕ 100 ರೂಪಾಯಿ ರಿಯಾಯಿತಿ ಪಡೆಯಬಹುದು.
ಕರ್ನಾಟಕದಲ್ಲಿ ಮೊಟ್ಟಮೊದಲ ‘ಡಾಲ್ಬಿ ಸಿನಿಮಾ’ ತಂತ್ರಜ್ಞಾನವನ್ನು ಪರಿಚಯಿಸಿದ ಮಲ್ಟಿಪ್ಲೆಕ್ಸ್ ಎಂಬ ಖ್ಯಾತಿ ‘ಎಎಂಬಿ ಸಿನಿಮಾಸ್’ಗಿದೆ. ಇದು ಅತ್ಯಂತ ಸ್ಪಷ್ಟವಾದ ದೃಶ್ಯ ವೈಭವ, ಅದ್ಭುತ ಕಾಂಟ್ರಾಸ್ಟ್ ಮತ್ತು ತಲ್ಲೀನಗೊಳಿಸುವ ಸೌಂಡ್ ವ್ಯವಸ್ಥೆಯನ್ನು ಹೊಂದಿದೆ. ಪ್ರೇಕ್ಷಕರ ಸಿನಿಮಾ ವೀಕ್ಷಣೆಯ ಅನುಭವವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ.
ಎಎಂಬಿ ಸಿನಿಮಾಸ್ ಅತ್ಯಾಧುನಿಕ ಪ್ರೊಜೆಕ್ಷನ್ ತಂತ್ರಜ್ಞಾನ, ಸುಧಾರಿತ ಸೌಂಡ್ ವ್ಯವಸ್ಥೆ ಮತ್ತು ಐಷಾರಾಮಿ ಆಸನಗಳನ್ನು ಹೊಂದಿದೆ. 7 ಸ್ಟಾರ್ ಅನುಭವ ನೀಡುವ ಐಷಾರಾಮಿ ಸೌಲಭ್ಯವಿದ್ದರೂ ಇಲ್ಲಿನ ಟಿಕೆಟ್ ದರಗಳು ಸಾಮಾನ್ಯ ಜನರಿಗೆ ಕೈಗೆಟುಕುವಂತಿದೆ ಎಂಬುದು ವಿಶೇಷ. ಅವುಗಳ ಜೊತೆಗೆ ಸಿನಿಪ್ರಿಯರಿಗೆ ‘ಎಎಂಬಿ ಸಿನಿಮಾಸ್’ ಕಡೆಯಿಂದ ಯುಗಾದಿ ಆಫರ್ ಸಿಗುತ್ತಿರುವುದು ವಿಶೇಷ.
ಯುಗಾದಿ ಹಬ್ಬದ ಪ್ರಯುಕ್ತ ಬಹುನಿರೀಕ್ಷಿತ ಸಿನಿಮಾಗಳಾದ ‘ಧುರಂಧರ್ 2’, ‘ಉಸ್ತಾದ್ ಭಗತ್ ಸಿಂಗ್’, ‘ಲವ್ ಮಾಕ್ಟೇಲ್ 3’ ಬಿಡುಗಡೆ ಆಗುತ್ತಿವೆ. ಎಎಂಬಿ ಸಿನಿಮಾಸ್ನ ಬೆಳಗಿನ ಪ್ರದರ್ಶನಗಳಲ್ಲಿ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳುವ ಪ್ರೇಕ್ಷಕರಿಗೆ ಉಚಿತ ಪಾಪ್ಕಾರ್ನ್ ಆಫರ್ ಸಿಗಲಿದೆ. ಇದರಿಂದ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಉತ್ತೇಜನ ಸಿಕ್ಕಂತೆ ಆಗುತ್ತದೆ.
ಅನುಷ್ಕಾ ಶೆಟ್ಟಿ ಅವರಿಗೆ ಈಗ 44 ವರ್ಷ. ಅವರು ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅವರು ವಿವಾಹದ ಕಾರಣಕ್ಕೆ ಸುದ್ದಿ ಆಗೋದಕ್ಕಿಂತ ಹೆಚ್ಚಾಗಿ, ವಿವಾಹದ ಕಾರಣಕ್ಕೆ ಸುದ್ದಿ ಆಗುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರ ವಿವಾಹ ಆಗುತ್ತದೆ ಎನ್ನುವ ಸುದ್ದಿ ಕೇಳಿ ಬರುತ್ತಲೇ ಇದೆ. ಈಗ ಮತ್ತೊಮ್ಮೆ ಅನುಷ್ಕಾ ವಿವಾಹ ವಿಷಯ ಚರ್ಚೆಗೆ ಕಾರಣ ಆಗಿದೆ.
ಸೆಲೆಬ್ರಿಟಿಗಳ ಜೀವನದ ಬಗ್ಗೆ ಅಭಿಮಾನಿಗಳು ಕಣ್ಣಿಡುತ್ತಾರೆ. ಸಾರ್ವಜನಿಕವಾಗಿ ಯಾರದ್ದಾದರೂ ಜೊತೆಗೆ ಕಾಣಿಸಿಕೊಂಡರೆ ವದಂತಿ ಹೆಚ್ಚುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಅನ್ಫಾಲೋ ಮಾಡಿದ್ದು, ಫಾಲೋ ಮಾಡಿದ್ದು ನೋಡಿ ಅನೇಕ ವಿಷಯಗಳನ್ನು ಕೆಲವರು ಡಿಕೋಡ್ ಮಾಡಿದ್ದು ಇದೆ. ಅನುಷ್ಕಾ ವಿಷಯದಲ್ಲೂ ಹಾಗೆಯೇ ಆಗಿದೆ.
ಅನುಷ್ಕಾ ಶೆಟ್ಟಿ ಅವರು ಪ್ರಭಾಸ್ ಜೊತೆ ಡೇಟ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ವಿಷಯ ನಿಜವಾಗಿಲ್ಲ. ಅವರು ಮಧ್ಯದಲ್ಲೇ ದೂರ ಆದರು ಎನ್ನಲಾಗಿದೆ. ಈಗ ಅನುಷ್ಕಾ ಆಗಲಿ, ಪ್ರಭಾಸ್ ಆಗಲಿ ಮದುವೆ ಆಗಿಲ್ಲ.ಪ್ರಭಾಸ್ ಅವರು ಮದುವೆ ವಿಷಯ ಬಂದಾಗ ಉತ್ತರಿಸೋಕೆ ಹೋಗಲ್ಲ. ಆದರೆ, ಅನುಷ್ಕಾ ವಿಷಯ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ.
ಅನುಷ್ಕಾ ಶೆಟ್ಟಿ ಅವರು ಈ ಬಾರಿ ಉದ್ಯಮಿಯೊಬ್ಬರ ಜೊತೆ ಮದುವೆ ಆಗಲಿದ್ದಾರೆ ಎಂದು ಹೇಲಾಗುತ್ತಿದೆ. ಆದರೆ, ಈ ವಿಷಯವನ್ನು ನಟಿ ಅಧಿಕೃತ ಮಾಡಿಲ್ಲ. ಮನೆಯವರು ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಹರಿದಾಡುತ್ತಿರುವ ವಿಷಯ ನಿಜವೇ ಅಥವಾ ಹತ್ತರಲ್ಲಿ ಹಂದನೆಯ ವದಂತಿಯಾಗಿ ಇಲ್ಲಿಗೆ ಕೊನೆಯಾಗಲಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.
ಅನುಷ್ಕಾ ಶೆಟ್ಟಿ ಅವರು ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಸಿನಿಮಾದಿಂದ ದೊಡ್ಡ ಯಶಸ್ಸು ಕಂಡರು. ಆದರೆ, ಈ ಯಶಸ್ಸನ್ನು ಅವರು ಉತ್ತಮವಾಗಿ ಬಳಸಿಕೊಂಡಿಲ್ಲ. ಅವರು ದೊಡ್ಡ ಮಟ್ಟದಲ್ಲಿ ಗೆಲವು ಸಾಧಿಸೋಕೆ ಸಾಧ್ಯವಾಗಿಲ್ಲ.
ಬೆಂಗಳೂರು, ಮಾ.18: ಬೆಂಗಳೂರಿನಲ್ಲಿ ಮನೆ ಹುಡುಕುವುದು ಅಷ್ಟೊಂದು ಸುಲಭದ ಮಾತಲ್ಲ, ಅದರಲ್ಲೂ ಬ್ಯಾಚುಲರ್ಸ್ ಕಥೆ ಕೇಳುವುದೇ ಬೇಡ. ಈಗ ಇಲ್ಲೊಂದು ಅಂತಹದೇ ಪೋಸ್ಟ್ವೊಂದು ವೈರಲ್ ಆಗಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ಎಂ.ಜಿ. ರಸ್ತೆಯ ಕಚೇರಿಗೆ ಪ್ರತಿದಿನ 52 ಕಿ.ಮೀ ಪ್ರಯಾಣಿಸಿ ಸುಸ್ತಾದ ಯುವಕನೊಬ್ಬ, ಮನೆ ಹುಡುಕಲಾರದೆ ಬೆಸತ್ತು ಕೆಲಸವನ್ನೇ ಬಿಡಲು ನಿರ್ಧರಿಸಿರುವ ಘಟನೆಯ ಬಗ್ಗೆ ಹಂಚಿಕೊಂಡಿದ್ದಾರೆ. ಇದೀಗ ಈ ವೈರಲ್ ಪೋಸ್ಟ್ ಹೊಸ ಚರ್ಚೆಗೆ ಕಾರಣವಾಗಿದೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಿದ್ದ ಈ ವ್ಯಕ್ತಿ ಎಂ.ಜಿ. ರಸ್ತೆ ಹತ್ತಿರ ಕೆಲಸಕ್ಕೆ ಸೇರಿದ್ದರು. ಪ್ರತಿದಿನ 3 ಗಂಟೆಗಳ ಕಾಲ ಬಿಸಿಲಿನಲ್ಲಿ ಸಂಚರಿಸಿ ಸುಸ್ತಾಗುತ್ತಿದ್ದರು. ಇಂದಿರಾನಗರ, ದೊಮ್ಮಲೂರು, ರಿಚ್ಮಂಡ್ ಟೌನ್ನಂತಹ ಪ್ರದೇಶಗಳಲ್ಲಿ 25,000 ರೂ. ಬಜೆಟ್ನಲ್ಲಿ 1BHK ಮನೆಗಾಗಿ ಹುಡುಕಾಟ ನಡೆಸಿದ್ದರು. ಪ್ರೀಮಿಯಂ ಆಪ್ಗಳಿಗೆ 8,000 ರೂ. ಪಾವತಿಸಿದರೂ ಮತ್ತು ಬ್ರೋಕರ್ ಜತೆಗೆ ಅಲೆದಾಟ ಮಾಡಿದರೂ ಸರಿಯಾದ ಮನೆ ಸಿಗಲಿಲ್ಲ. “ಬೆಂಕಿಪೆಟ್ಟಿಗೆಯಂತಹ ಮನೆಗಳಿಗೆ ಅತಿಯಾದ ಬಾಡಿಗೆ ಕೇಳುತ್ತಿದ್ದಾರೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೊಮ್ಮಲೂರಿನಲ್ಲಿ ಒಂದು ಮನೆ ಫಿಕ್ಸ್ ಆಗಿದ್ದರೂ, ಟೋಕನ್ ಹಣ ನೀಡುವ ಸಮಯದಲ್ಲಿ ಬ್ರೋಕರ್ ನಂಬರ್ ಬ್ಲಾಕ್ ಮಾಡಿದ್ದಾನೆ. ನಂತರ ವಿಚಾರಿಸಿದಾಗ ಆ ಮನೆಯನ್ನು ಬೇರೆಯವರಿಗೆ ಹೆಚ್ಚಿನ ಬಾಡಿಗೆಗೆ ನೀಡಲಾಗಿತ್ತು. ಇದರಿಂದ ಬೇಸತ್ತ ಯುವಕ, “ಬೆಂಗಳೂರು ರಿಯಲ್ ಎಸ್ಟೇಟ್ ಒಂದು ಜೋಕ್, ನಾನು ಈ ಮನೆ ಹುಡುಕಾಟದಿಂದ ಬೇಸತ್ತು, ನನ್ನ ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಇಂದಿರಾನಗರ, ದೊಮ್ಲೂರ್, ವಿಕ್ಟೋರಿಯಾ ಲೇಔಟ್, ಫ್ರೇಜರ್ ಟೌನ್ ಮತ್ತು ರಿಚ್ಮಂಡ್ ಟೌನ್ ನಂತಹ ನೆರೆಹೊರೆಯಲ್ಲಿ ಮನೆ ಹುಡುಕಿದರೂ ಮನೆ ಸಿಕ್ಕಿಲ್ಲ. ಬೆಂಗಳೂರಿನ ಬಾಡಿಗೆ ಮಾರುಕಟ್ಟೆಯ ವಾಸ್ತವ ನನಗೆ ಆ ಸಮಯದಲ್ಲಿ ಗೊತ್ತಾಯಿತು. ಕೆಲವು ಟು-ಲೀಟ್ ಬೋರ್ಡ್ಗಳನ್ನು ಕಂಡುಕೊಂಡರು ಮತ್ತು ಅವರು ಶಾರ್ಟ್ಲಿಸ್ಟ್ ಮಾಡಿದ ಪ್ರದೇಶಗಳಲ್ಲಿ ಲಭ್ಯವಿರುವ ಅಪಾರ್ಟ್ಮೆಂಟ್ಗಳನ್ನು ಗುರುತಿಸಲು ಒದ್ದಾಡಿದ್ದೇನೆ. ಅದರ ನಡುವೆ ಈ ದಲ್ಲಾಳಿನ ಮೋಸ ಕೂಡ ನನಗೆ ಚಿತ್ರಹಿಂಸೆ ನೀಡಿದೆ. ಆ ಕಾರಣಕ್ಕೆ ಈ ಮನೆ ಹುಡುಕುವುದು ದೊಡ್ಡ ಸವಾಲಾಗಿದೆ ಎಂದು ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಈ ಪೋಸ್ಟ್ಗೆ ಸೋಶಿಯಲ್ ಮೀಡಿಯಾ ನೆಟ್ಟಿಗರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಬಾಡಿಗೆ ಮಾರುಕಟ್ಟೆಯಲ್ಲಿ ಇದೇ ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ನಾನು ಜನವರಿಯಿಂದ ಮನೆ ಹುಡುಕುತ್ತಿದ್ದೇನೆ. ಒಂದು ಮನೆಯೂ ಸಿಗುತ್ತಿಲ್ಲ. ಚಿಕ್ಕ ಚಿಕ್ಕ ರೂಮ್ಗಳಿರುವ ಮನೆಗಳನ್ನು ತೋರಿಸಿ, ಹೆಚ್ಚು ಪಡೆಯುತ್ತಿದ್ದಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮಲ್ಲೇಶ್ವರಂ, ರಾಜಾಜಿನಗರ ಮತ್ತು ಶೇಷಾದ್ರಿಪುರಂನಂತಹ ಸ್ಥಳಗಳನ್ನು ಪರಿಶೀಲನೆ ಮಾಡಿ ಎಂದು ಒಬ್ಬರು ಸಲಹೆ ನೀಡಿದ್ದಾರೆ.
ದೆಹಲಿ, ಮಾ.18: ರಾಜ್ಯಸಭೆಯ 37 ಸದಸ್ಯರ ನಿವೃತ್ತಿಯ ಹಿನ್ನೆಲೆಯಲ್ಲಿ ಸದನವು ಇಂದು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ನಿವೃತ್ತರಾಗುತ್ತಿರುವ ಸದಸ್ಯರ ಸೇವೆಯನ್ನು ಶ್ಲಾಘಿಸಿದ (Rajya Sabha farewell) ಪ್ರಧಾನಿ ಮೋದಿ, ಸದನಕ್ಕೆ ಅವರು ನೀಡಿದ ಕೊಡುಗೆಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಿರುತ್ತವೆ ಎಂದು ತಿಳಿಸಿದರು. “ಜ್ಞಾನಕ್ಕಿಂತ ಅನುಭವಕ್ಕೆ ಶಕ್ತಿ ಹೆಚ್ಚು. ಶೈಕ್ಷಣಿಕ ಜ್ಞಾನವು ಸೀಮಿತವಾಗಿರಬಹುದು, ಆದರೆ ಸದಸ್ಯರು ಇಲ್ಲಿ ಕಳೆದ ಸಮಯ ಮತ್ತು ಪಡೆದ ಅನುಭವವು ದೇಶದ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ” ಎಂದು ಪ್ರಧಾನಿ ಹೇಳಿದರು.
ರಾಜ್ಯಸಭೆಯು ಹಿರಿಯರ ಸದನವಾಗಿದ್ದು, ಇಲ್ಲಿನ ಚರ್ಚೆಗಳು ಗುಣಮಟ್ಟದಿಂದ ಕೂಡಿರಬೇಕು. ನಿವೃತ್ತ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ಈ ಅನುಭವವನ್ನು ಜನರಿಗೆ ತಲುಪಿಸಬೇಕು ಎಂದು ಅವರು ಆಶಿಸಿದರು. ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ದೇಶದ ಹಿತದೃಷ್ಟಿಯಿಂದ ಸದಸ್ಯರು ಒಟ್ಟಾಗಿ ಕೆಲಸ ಮಾಡಿದ್ದನ್ನು ಪ್ರಧಾನಿ ನೆನೆದರು. ಇನ್ನು ಈ ಸಭೆಯಲ್ಲಿ ನಿವೃತ್ತರಾಗುತ್ತಿರುವ ಸದಸ್ಯರಲ್ಲಿ ವಿವಿಧ ಪಕ್ಷಗಳ ಪ್ರಮುಖ ನಾಯಕರು ಸೇರಿದ್ದಾರೆ.ನಿವೃತ್ತ ಸದಸ್ಯರಿಗೆ ನೆನಪಿನ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಪಕ್ಷಪಾತಗಳನ್ನು ಮೀರಿ ಮೇಲೇರಲು ಇದೊಂದು ಸೂಕ್ತ ಕ್ಷಣ ಎಂದು ಕರೆದ ಅವರು, ಹೊಸ ಸಂಸದರು ಹಿರಿಯ ಸಹೋದ್ಯೋಗಿಗಳಿಂದ ಕಲಿಯಬೇಕೆಂದು ಒತ್ತಾಯಿಸಿದರು. ನಿವೃತ್ತರಾಗುವ ಸದಸ್ಯರು ಸದನದ ಆಚೆಗೆ ವಿವಿಧ ಸಾಮರ್ಥ್ಯಗಳಲ್ಲಿ ಸಮಾಜಕ್ಕೆ ಕೊಡುಗೆ ನೀಡುವುದನ್ನು ಮುಂದುವರಿಸುತ್ತಾರೆ ಎಂದು ಅವರು ಹೇಳಿದರು.
“ರಾಜಕೀಯದಲ್ಲಿ ಪೂರ್ಣವಿರಾಮವಿಲ್ಲ” ಎಂದು ಹೇಳಿ ಸಂಸತ್ತನ್ನು “ಮುಕ್ತ ವಿಶ್ವವಿದ್ಯಾಲಯ” ಎಂದು ಬಣ್ಣಿಸಿದರು. ಪಕ್ಷಪಾತಗಳನ್ನು ಮೀರಿ ಮೇಲೇರಲು ಇದೊಂದು ಸೂಕ್ತ ಕ್ಷಣ ಎಂದು ಕರೆದ ಅವರು, ಹೊಸ ಸಂಸದರು ಹಿರಿಯ ಸಹೋದ್ಯೋಗಿಗಳಿಂದ ಕಲಿಯಬೇಕೆಂದು ಒತ್ತಾಯಿಸಿದರು. ನಿವೃತ್ತರಾಗುವ ಸದಸ್ಯರು ಸದನದ ಆಚೆಗೆ ವಿವಿಧ ಸಾಮರ್ಥ್ಯಗಳಲ್ಲಿ ಸಮಾಜಕ್ಕೆ ಕೊಡುಗೆ ನೀಡುವುದನ್ನು ಮುಂದುವರಿಸುತ್ತಾರೆ ಎಂದು ಅವರು ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೋಲಾರ, ಮಾರ್ಚ್ 18: ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ವಿದ್ಯಾರ್ಥಿನಿ ಕುಸುಮಾ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರೂ, ಆಂಬ್ಯುಲೆನ್ಸ್ನಲ್ಲಿ ಬಂದು ಸ್ಟ್ರೆಚರ್ ಮೇಲೆ ಮಲಗಿಕೊಂಡೇ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಎಲ್ಲರ ಗಮನ ಸೆಳೆದಿದ್ದಾಳೆ. ಈ ಮೂಲಕ ಆಕೆ, ಅಸಾಧಾರಣ ಧೈರ್ಯ ಮತ್ತು ಮನೋಬಲಕ್ಕೆ ಮಾದರಿಯಾಗಿದ್ದಾಳೆ. ಕೆಜಿಎಫ್ ತಾಲೂಕಿನ ಚಿನ್ನನಾಗನಹಳ್ಳಿ ನಿವಾಸಿಯಾದ 16 ವರ್ಷದ ಕುಸುಮಾ, ಸೆಂಟ್ ಮೇರಿಸ್ ಹೈಸ್ಕೂಲ್ ವಿದ್ಯಾರ್ಥಿನಿ. ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಒಂದು ಕಾಲು ಕಳೆದುಕೊಂಡಿದ್ದಾಳೆ. ಸದ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಈಗಾಗಲೇ ಒಂದು ಶಸ್ತ್ರಚಿಕಿತ್ಸೆ ನಡೆದಿದ್ದು, ಇನ್ನೂ ಎರಡು ಶಸ್ತ್ರಚಿಕಿತ್ಸೆಗಳು ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗದಿದ್ದರೂ, ವಿದ್ಯಾಭ್ಯಾಸದ ಮೇಲೆ ಆಸಕ್ತಿ ಕಳೆದುಕೊಳ್ಳದೆ ಕುಸುಮಾ ತನ್ನ ತಾಯಿಯೊಂದಿಗೆ ಆಂಬ್ಯುಲೆನ್ಸ್ ಮೂಲಕ ಕೆಜಿಎಫ್ನ ಸೆಂಟ್ ಜೋಸೆಫ್ ಶಾಲೆಗೆ ಬಂದು ಪರೀಕ್ಷೆಗೆ ಹಾಜರಾಗಿದ್ದಾಳೆ. ಪರೀಕ್ಷಾ ಕೇಂದ್ರದಲ್ಲಿ ಸ್ಟ್ರೆಚರ್ ಬೆಡ್ ಮೇಲೆ ಮಲಗಿಕೊಂಡೇ ಆಕೆ ಪರೀಕ್ಷೆ ಬರೆದಿದ್ದು, ಆಕೆಯ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ವಿದ್ಯಾರ್ಥಿನಿಯ ಪರಿಸ್ಥಿತಿಯನ್ನು ಗಮನಿಸಿ, ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಿ. ನಾರಾಯಣಸ್ವಾಮಿ ಪರೀಕ್ಷೆ ಬರೆಯಲು ವಿಶೇಷ ಅನುಮತಿ ನೀಡಿದ್ದಾರೆ. ಕುಸುಮಾಳ ಹಠ, ಪರಿಶ್ರಮ ಮತ್ತು ಶಿಕ್ಷಣದ ಮೇಲಿನ ಬದ್ಧತೆ ಇದೀಗ ಅನೇಕರಿಗೆ ಸ್ಪೂರ್ತಿಯಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬ್ಯಾಂಕ್ ಆಫ್ ಬರೋಡಾದ ಅಂಗಸಂಸ್ಥೆಯಾದ ‘ಬಿಒಬಿ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್’ (BOB Capital Markets Ltd), ದೇಶಾದ್ಯಂತ ಖಾಲಿ ಇರುವ ಬಿಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 103 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಬ್ಯಾಂಕಿಂಗ್ ಮತ್ತು ಬಂಡವಾಳ ಮಾರುಕಟ್ಟೆ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಈ ನೇಮಕಾತಿಯಡಿ ಉತ್ತರ ವಲಯಕ್ಕೆ 37, ಪಶ್ಚಿಮ ವಲಯಕ್ಕೆ 44 ಹಾಗೂ ದಕ್ಷಿಣ ಮತ್ತು ಪೂರ್ವ ವಲಯಗಳಿಗೆ ಒಟ್ಟು 22 ಹುದ್ದೆಗಳನ್ನು ಮೀಸಲಿಡಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿ ಶಿಕ್ಷಣವನ್ನು ಪೂರೈಸಿರಬೇಕು. ಶೈಕ್ಷಣಿಕ ಅರ್ಹತೆಯ ಜೊತೆಗೆ ಬಂಡವಾಳ ಮಾರುಕಟ್ಟೆಯಲ್ಲಿ ಕನಿಷ್ಠ 6 ತಿಂಗಳ ಕೆಲಸದ ಅನುಭವವಿರುವುದು ಕಡ್ಡಾಯವಾಗಿದೆ. ಅದರಲ್ಲೂ ವಿಶೇಷವಾಗಿ ಡಿಮ್ಯಾಟ್ ಖಾತೆ ನಿರ್ವಹಣೆ, ಟ್ರೇಡಿಂಗ್ ಅಕೌಂಟ್, ಮತ್ತು ಸೇಲ್ಸ್ ಬ್ರೋಕಿಂಗ್ ವಿಭಾಗದಲ್ಲಿ ಪರಿಣತಿ ಹೊಂದಿರುವವರಿಗೆ ಆಯ್ಕೆಯಲ್ಲಿ ಮೊದಲ ಆದ್ಯತೆ ನೀಡಲಾಗುವುದು. ಅಭ್ಯರ್ಥಿಗಳು ಉತ್ತಮ ಸಂವಹನ ಕೌಶಲ್ಯ, ಮಾರ್ಕೆಟಿಂಗ್ ಜ್ಞಾನ ಮತ್ತು ಗ್ರಾಹಕರೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳುವ ಕೌಶಲ್ಯವನ್ನು ಹೊಂದಿರಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳು ಹೈದರಾಬಾದ್, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಕೇರಳ ಸೇರಿದಂತೆ ದೇಶದ ಪ್ರಮುಖ ರಾಜ್ಯಗಳ ವಿವಿಧ ಶಾಖೆಗಳಲ್ಲಿ ಪೂರ್ಣ ಅವಧಿಯ ಕೆಲಸ ನಿರ್ವಹಿಸಬೇಕಾಗುತ್ತದೆ. ಆಸಕ್ತರು ತಮ್ಮ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ತಮ್ಮ ವಿವರವಾದ ರೆಸ್ಯೂಮೆಯನ್ನು careers@bobcaps.in ಇಮೇಲ್ ವಿಳಾಸಕ್ಕೆ ಕಳುಹಿಸಬೇಕು. ಇಮೇಲ್ ಕಳುಹಿಸುವಾಗ ಸಬ್ಜೆಕ್ಟ್ ಲೈನ್ನಲ್ಲಿ “Application for Business Development Manager (Off-Role)” ಎಂದು ನಮೂದಿಸುವುದು ಕಡ್ಡಾಯವಾಗಿದೆ.
ನವದೆಹಲಿ, ಮಾರ್ಚ್ 18: ದೆಹಲಿಯ ಪಲಮ್ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡವೊಂದರಲ್ಲಿ ಬೆಂಕಿ ತಗುಲಿರುವ ದುರ್ಘಟನೆ (Fire Accident) ಸಂಭವಿಸಿದೆ. ಆರಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಮಾಹಿತಿ ಸದ್ಯಕ್ಕೆ ತಿಳಿದುಬಂದಿದೆ. ಇನ್ನೂ ಹಲವಾರು ಜನರಿಗೆ ಗಾಯಗಳಾಗಿವೆ. ದುರಂತದಲ್ಲಿ ಮೃತಪಟ್ಟಿರುವವರ ಪೈಕಿ ಮೂವರು ಮಕ್ಕಳಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಕಿ ದುರಂತಕ್ಕೆ ಏನು ಕಾರಣ ಎಂದು ಸದ್ಯಕ್ಕೆ ತಿಳಿದುಬಂದಿಲ್ಲ.
ಕಟ್ಟಡಕ್ಕೆ ಬೆಂಕಿ ತಗುಲಿರುವ ಬಗ್ಗೆ ಅಗ್ನಿಶಾಮಕ ವಿಭಾಗಕ್ಕೆ ಬೆಳಗ್ಗೆ 7:30ಕ್ಕೆ ಮಾಹಿತಿ ಹೋಗಿದೆ. ಕೂಡಲೇ 30 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಮತ್ತು ಜನರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಲಾಗಿದೆ. ಪೊಲೀಸ್ ಹಾಗು ಇತರ ತುರ್ತು ಸೇವೆಗಳೂ ಕೂಡ ಸ್ಥಳಕ್ಕೆ ಬಂದು ಕಾರ್ಯಾಚರಣೆಲ್ಲಿ ನೆರವಾಗುತ್ತಿದ್ದಾರೆ.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಆರು ಮಂದಿ ಮೃತಪಟ್ಟಿದ್ದು, ಕೆಲ ಜನರು ಈಗಲೂ ಕಟ್ಟಡದಲ್ಲಿ ಸಿಲುಕಿದ್ದಾರೆ. ಜಿಲ್ಲಾಡಳಿತ, ಅಗ್ನಿಶಾಮಕ ಇಲಾಖೆ, ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಟ್ವೀಟ್ ಮಾಡಿರುವ ಸಿಎಂ ರೇಖಾ ಗುಪ್ತಾ, ಘಟನೆಯನ್ನು ನ್ಯಾಯಾಂಗ ತನಿಖೆ ನಡೆಸುವಂತೆ ಆದೇಶಿಸಿರುವುದಾಗಿ ತಿಳಿಸಿದ್ದಾರೆ.
ರಣವೀರ್ ಸಿಂಗ್, ಅರ್ಜುನ್ ರಾಮ್ಪಾಲ್, ಸಾರಾ ಅರ್ಜುನ್, ಆರ್. ಮಾಧವನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಧುರಂಧರ್ 2’ (Dhurandhar 2) ಸಿನಿಮಾದ ಹೈಪ್ ಹೆಚ್ಚಾಗಿದೆ. ನಿರ್ದೇಶಕ ಆದಿತ್ಯ ಧಾರ್ ಸಾರಥ್ಯದಲ್ಲಿ ಮೂಡಿಬಂದಿರುವ ಈ ಚಿತ್ರದ ಪೇಯ್ಡ್ ಪ್ರಿವ್ಯೂಗಳು ಇಂದು (ಮಾರ್ಚ್ 18) ಆರಂಭ ಆಗುತ್ತಿವೆ. ಅದಕ್ಕೂ ಮುನ್ನ ಸೆನ್ಸಾರ್ ಮಂಡಳಿಯ (CBFC) ವರದಿ ಹೊರಬಿದ್ದಿದ್ದು, ಸಿನಿಮಾದಲ್ಲಿನ ಹಲವು ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಸದಸ್ಯರು ‘ಎ’ ಸರ್ಟಿಫಿಕೇಟ್ ನೀಡಿ, 21 ಬದಲಾವಣೆಗಳನ್ನು ಮಾಡುವಂತೆ ಸೂಚಿಸಲಾಗಿದೆ.
‘ಧುರಂಧರ್ 2’ ಚಿತ್ರದಲ್ಲಿ ಅತಿಯಾದ ಹಿಂಸೆಯ ದೃಶ್ಯಗಳು ಇರುವ ಕಾರಣದಿಂದ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಒಟ್ಟು 21 ಪ್ರಮುಖ ಬದಲಾವಣೆಗಳನ್ನು ಸೂಚಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ 4 ದೃಶ್ಯಗಳು ಅತ್ಯಂತ ಭಯಾನಕವಾಗಿದ್ದವು ಎಂದು ವರದಿಯಾಗಿದೆ. ಕಣ್ಣುಗಳನ್ನು ಜಜ್ಜುವ ದೃಶ್ಯ, ತಕೆ ಕಡಿದು ಕಾಲಿನಿಂದ ಒದೆಯುವ ದೃಶ್ಯ, ಸಿಮೆಂಟ್ ಬ್ಲಾಕ್ನಿಂದ ತಲೆಗೆ ಹೊಡೆಯುವ ದೃಶ್ಯ ಹಾಗೂ ಸುತ್ತಿಗೆಯಿಂದ ತಲೆಗೆ ಬಡಿಯುವ ದೃಶ್ಯಗಳ ಅವಧಿಯನ್ನು ಕಡಿತಗೊಳಿಸಲಾಗಿದೆ.
ಕೇವಲ ಹಿಂಸಾಚಾರ ಮಾತ್ರವಲ್ಲದೆ ಕೆಲವು ಮಾಹಿತಿಗಳಿಗೆ ಸಂಬಂಧಿಸಿದ ಬದಲಾವಣೆಗಳನ್ನೂ ಮಂಡಳಿ ಸೂಚಿಸಿದೆ. ಸಬ್ಟೈಟಲ್ನಲ್ಲಿ ನೀಡಲಾಗಿದ್ದ ನೋಟ್ ಬ್ಯಾನ್ ದಿನಾಂಕಗಳನ್ನು ಸರಿಪಡಿಸಲಾಗಿದೆ. ‘ಲಾಹೋರ್’ ಎಂಬ ಹೆಸರನ್ನು ತೆಗೆದು ‘ದೆಹಲಿ’ ಎಂದು ಬದಲಾಯಿಸಲಾಗಿದೆ. ಅಲ್ಲದೆ, ಪ್ರಧಾನ ಮಂತ್ರಿಯವರ ಉಲ್ಲೇಖ ಮತ್ತು ಸುದ್ದಿ ತುಣುಕುಗಳನ್ನು ಬಳಸಲು ಚಿತ್ರತಂಡ ಅಧಿಕೃತ ಅನುಮತಿ ಪತ್ರವನ್ನು ಸಲ್ಲಿಸಿದೆ.
ವಿದೇಶಕ್ಕಿಂತ ಭಾರತದಲ್ಲಿ ಈ ಸಿನಿಮಾದ ಅವಧಿ ಕಡಿಮೆ ಆಗಿದೆ. ಸೆನ್ಸಾರ್ ಕಟ್ಗಳ ನಂತರ ಭಾರತದಲ್ಲಿ ಈ ಚಿತ್ರದ ಒಟ್ಟು ಅವಧಿ 3 ಗಂಟೆ 49 ನಿಮಿಷ 36 ಸೆಕೆಂಡ್ ಆಗಿದೆ. ವಿದೇಶಗಳಲ್ಲಿ ಬಿಡುಗಡೆಯಾಗುತ್ತಿರುವ ಅವೃತ್ತಿಯು 3 ಗಂಟೆ 55 ನಿಮಿಷಗಳಷ್ಟಿದ್ದು, ಭಾರತೀಯ ಆವೃತ್ತಿಯು ಸುಮಾರು 6 ನಿಮಿಷಗಳಷ್ಟು ಚಿಕ್ಕದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸೆನ್ಸಾರ್ ಮಂಡಳಿಯ ಈ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಎ ರೇಟಿಂಗ್ (ವಯಸ್ಕರಿಗೆ ಮಾತ್ರ) ಎಂದು ಸರ್ಟಿಫಿಕೇಟ್ ನೀಡಿದ ಮೇಲೆ ದೃಶ್ಯಗಳನ್ನು ಕತ್ತರಿಸುವ ಅವಶ್ಯಕತೆಯಾದರೂ ಏನಿತ್ತು?’ ಎಂದು ಸಿನಿಪ್ರಿಯರು ಪ್ರಶ್ನಿಸುತ್ತಿದ್ದಾರೆ. ‘ಸೆನ್ಸಾರ್ ಮಂಡಳಿ ಇರುವುದು ಸಿನಿಮಾ ಎಡಿಟ್ ಮಾಡಲಿಕ್ಕಲ್ಲ, ರೇಟಿಂಗ್ ನೀಡಲು ಮಾತ್ರ’ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.