All posts by nagaraj11081993

ಹಿಂದುತ್ವಕ್ಕೆ ನಿಷ್ಠನಾಗಿದ್ದೇನೆ ಎಂಬುದನ್ನು ಸಾಬೀತು ಮಾಡಿದ್ರೆ ಮಾತ್ರ ನಟಿ ಸಾರಾಗೆ ಕೇದರನಾಥಕ್ಕೆ ಎಂಟ್ರಿ

ಹಿಂದುತ್ವಕ್ಕೆ ನಿಷ್ಠನಾಗಿದ್ದೇನೆ ಎಂಬುದನ್ನು ಸಾಬೀತು ಮಾಡಿದ್ರೆ ಮಾತ್ರ ನಟಿ ಸಾರಾಗೆ ಕೇದರನಾಥಕ್ಕೆ ಎಂಟ್ರಿ

ಚಾರ್ ಧಾಮ್ ಯಾತ್ರೆ 2026 ಇನ್ನೇನು ಆರಂಭ ಆಗಲಿದೆ. ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan) ಅವರು ಪ್ರತಿ ವರ್ಷವೂ ಅಲ್ಲಿಗೆ ತೆರಳುತ್ತಾರೆ. ಈ ಬಾರಿಯೂ ಅವರು ದೇವಸ್ಥಾನಕ್ಕೆ ಹೋಗುವ ಆಲೋಚನೆಯಲ್ಲಿ ಇದ್ದರು ಎನ್ನಲಾಗಿದೆ. ಅದಕ್ಕೂ ಮೊದಲೇ ದೇವಸ್ಥಾನದಲ್ಲಿ ಹೊಸ ನಿಯಮ ಜಾರಿಗೆ ತರಲಾಗಿದೆ. ವಿಶೇಷವಾಗಿ ಹಿಂದೂಯೇತರ ಪ್ರವೇಶಕ್ಕೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ ಮಾಡಲಾಗಿದೆ.

ಬದರಿನಾಥ ಮತ್ತು ಕೇದಾರನಾಥಕ್ಕೆ ಬರುವ ಸನಾತನಿಗಳಲ್ಲದವರು ದೇವಾಲಯವನ್ನು ಪ್ರವೇಶಿಸಲು ಅಫಿಡವಿಟ್ ನೀಡಬೇಕಾಗುತ್ತದೆ ಎಂದು ಕೇದಾರನಾಥ ದೇವಾಲಯ ಸಮಿತಿಯ ಅಧ್ಯಕ್ಷ ಹೇಮಂತ್ ದ್ವಿವೇದಿ ಹೇಳಿದ್ದಾರೆ. ಈ ಅಫಿಡವಿಟ್‌ನಲ್ಲಿ, ‘ನಾನು ಸನಾತನಿ’ ಎಂದು ಹೇಳುವುದು ಅಗತ್ಯವಾಗಿರುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ದೇವಾಲಯ ಸಮಿತಿಯೇ ಮಾಡುತ್ತದೆ ಎಂದು ಹೇಳಿದ್ದಾರೆ.

ಈ ವೇಳೆ ಸಾರಾ ಅಲಿ ಖಾನ್ ಅವರನ್ನು ಉದಾಹರಣೆಯಾಗಿ ಉಲ್ಲೇಖಿಸಲಾಗಿದೆ. ‘ದರ್ಶನಕ್ಕಾಗಿ ದೇವಸ್ಥಾನಕ್ಕೆ ಭೇಟಿ ನೀಡಲು ಅವರು ಬಯಸಿದರೆ ಅಫಿಡವಿಟ್ ಸಲ್ಲಿಕೆ ಮಾಡಬೇಕು. ಆಗ ನಾವು ಅವರನ್ನು ದೇವಸ್ಥಾನಕ್ಕೆ ಬಿಟ್ಟುಕೊಳ್ಳುತ್ತೇವೆ’ ಎಂದು ಮಾಹಿತಿ ನೀಡಲಾಗಿದೆ. 2026ರ ಚಾರ್‌ಧಾಮ್ ಯಾತ್ರೆ ಏಪ್ರಿಲ್ 19 ರಿಂದ ಪ್ರಾರಂಭವಾಗಲಿದ್ದು, ಈ ವರ್ಷ ಯಾತ್ರೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಯಾತ್ರೆಯ ಸುರಕ್ಷತೆ ಮತ್ತು ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ದೇವಾಲಯದ ಆವರಣದಲ್ಲಿ ಮೊಬೈಲ್ ಫೋನ್‌ಗಳನ್ನು ಕೊಂಡೊಯ್ಯುವುದರ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಭಕ್ತರಿಗೆ ವಿಶೇಷ ರೂಮ್ ವ್ಯವಸ್ಥೆ ಮಾಡಲಾಗುವುದು. ಅಲ್ಲಿ ಮೊಬೈಲ್ ಫೋನ್‌ಗಳನ್ನು ಇಡಬೇಕಾಗುತ್ತದೆ. ಗಮನಾರ್ಹವಾಗಿ, ಈ ನಿಯಮವು ವಿಐಪಿಗಳಿಗೂ ಅನ್ವಯಿಸುತ್ತದೆ.

ಇದನ್ನೂ ಓದಿ: ‘ಮೆಟ್ರೊ’ ಪ್ರಚಾರ ಹೇಗಿತ್ತು? ಸಾರಾ ಅಲಿ ಖಾನ್​ ವಿಡಿಯೋ ನೋಡಿ

ಸಾರಾ ಅಲಿ ಖಾನ್ ಅವರು ಮೊದಲ ಬಾರಿಗೆ ಕೇದಾರನಾಥ್​ಗೆ ಭೇಟಿ ನೀಡಿದ್ದು 2017ರಲ್ಲಿ. ‘ಕೇದರಾನಾಥ್’ ಸಿನಿಮಾ ಶೂಟ್​​ಗಾಗಿ ಅವರು ಅಲ್ಲಿ ತೆರಳಿದ್ದರು. ಅದಾದ ಬಳಿಕ ಅವರು ಪ್ರತಿವರ್ಷವೂ ಇಲ್ಲಿಗೆ ಭೇಟಿ ಕೊಡುತ್ತಿದ್ದರು. ಈಗ ಅವರು ಹಿಂದುತ್ವ ಸಾಬೀತು ಮಾಡಿ ಇಲ್ಲಿಗೆ ಬೇಟಿ ಕೊಡಬೇಕಾದ ಪರಿಸ್ಥಿತಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಕೆಲಸ ಮಾಡ್ತಿದ್ದ ಅಂಗಡಿಗೇ ಕನ್ನ: ಕದ್ದ ಆಭರಣ ಮಾರಿ ಮಹಾಕಾಳೇಶ್ವರನಿಗೆ ಪೂಜೆ ಸಲ್ಲಿಸಿದ್ದವರು ಲಾಕ್!

ಬೆಂಗಳೂರು, ಮಾರ್ಚ್ 18: ಆನ್‌ಲೈನ್ ಜೂಜಿನ (Online Gambling) ವ್ಯಸನಕ್ಕೆ ಒಳಗಾಗಿ, ತಾವೇ ಕೆಲಸ ಮಾಡುತ್ತಿದ್ದ ಆಭರಣ ಪಾಲಿಷ್ ಅಂಗಡಿಯಲ್ಲಿ ವ್ಯಕ್ತಿಗಳಿಬ್ಬರು ಕಳ್ಳತನ ನಡೆಸಿದ ಘಟನೆ ಬೆಂಗಳೂರಿನಲ್ಲಿ (Bangalore) ನಡೆದಿದೆ. ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ನರೇಂದ್ರ ಮತ್ತು ಕುಲ್ದೀಪ್ ಎಂದು ಗುರುತಿಸಲಾಗಿದೆ. ನರೇಂದ್ರ ಕಳೆದ ಒಂದು ತಿಂಗಳಿನಿಂದ ಧನಲಕ್ಷ್ಮೀ ರೋಡಿಯಂ ಎಂಬ ಆಭರಣ ಪಾಲಿಷ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಂಗಡಿಗೆ ಬಂದ ಬೆಳ್ಳಿ ಆಭರಣಗಳನ್ನು ಪಾಲಿಷ್ ಮಾಡುವ ಜವಾಬ್ದಾರಿ ಅವನಿಗೆ ನೀಡಲಾಗಿತ್ತು.

ಆನ್‌ಲೈನ್ ಜೂಜಿನ ಹುಚ್ಚಿಗೆ ಬಿದ್ದಿದ್ದ ನರೇಂದ್ರ, ಇದರಿಂದಾಗಿ ಭಾರೀ ನಷ್ಟ ಅನುಭವಿಸಿದ್ದ. ಒಂದು ಬಾರಿ ದೊಡ್ಡ ಮೊತ್ತ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ ಎಂಬ ಆಸೆಯಿಂದ, ತಾನೇ ಕೆಲಸ ಮಾಡುತ್ತಿದ್ದ ಅಂಗಡಿಗೆ ಕನ್ನ ಹಾಕಲು ಯೋಜನೆ ರೂಪಿಸಿದ್ದಾನೆ. ಅಂಗಡಿಯ ಕೀ ಅವನ ಬಳಿ ಇದ್ದುದರಿಂದ ಸುಲಭವಾಗಿ ಬಾಗಿಲು ತೆಗೆದುಕೊಂಡು, ಸುಮಾರು 10.12 ಕೆಜಿ ತೂಕದ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ್ದಾನೆ. ಈ ಆಭರಣಗಳ ಮೌಲ್ಯ ಸುಮಾರು 35 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಕದ್ದ ಆಭರಣ ಮಾರಾಟ ಮಾಡಿ ಮಹಾಕಾಳೇಶ್ವರನಿಗೆ ಪೂಜೆ!

ಕಳ್ಳತನದ ಬಳಿಕ ನರೇಂದ್ರ ರೈಲಿನಲ್ಲಿ ರಾಜಸ್ಥಾನಕ್ಕೆ ಪರಾರಿಯಾಗಿದ್ದಾನೆ. ಅಲ್ಲಿ ತನ್ನ ಸ್ನೇಹಿತ ಕುಲ್ದೀಪ್ ಜೊತೆ ಸೇರಿ ಸುಮಾರು 3 ಕೆಜಿ ಬೆಳ್ಳಿ ಆಭರಣಗಳನ್ನು ಮಾರಾಟ ಮಾಡಿದ್ದಾನೆ. ಮಾರಾಟದಿಂದ ಬಂದ ಹಣದಲ್ಲಿ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನ ಹಾಗೂ ಪ್ರಯಾಗ್ ರಾಜ್‌ಗೆ ತೆರಳಿ ಪೂಜೆ ಸಲ್ಲಿಸಿದ್ದಾನೆ. ಬಳಿಕ ಉಳಿದ ಆಭರಣಗಳನ್ನು ಮಾರಾಟ ಮಾಡುವ ಯತ್ನದಲ್ಲಿದ್ದಾಗಲೇ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಭರ್ಜರಿ ಕಾರ್ಯಾಚರಣೆ: 2.34 ಕೋಟಿ ರೂ. ಹಣ ಸೀಜ್

ಹಲಸೂರು ಗೇಟ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರನ್ನೂ ಬಂಧಿಸಲಾಗಿದ್ದು, 35 ಲಕ್ಷ ರೂ. ಮೌಲ್ಯದ 10.12 ಕೆಜಿ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಇನ್ನೋರ್ವ ಆರೋಪಿಗಾಗಿ ಹುಡುಕಾಟ ಮುಂದುವರಿದಿದೆ. ಪ್ರಕರಣ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಐಪಿಎಲ್​ನಲ್ಲಿ ಅಂಪೈರ್​ಗೆ ಸಿಗುವ ವೇತನ ಎಷ್ಟು ಗೊತ್ತಾ?

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಟಗಾರರಿಗೆ ಕೋಟಿ ಕೋಟಿ ರೂ. ಸಂಭಾವನೆ ಸಿಗುವುದು ಗೊತ್ತೇ ಇದೆ. ಆದರೆ ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಅಂಪೈರ್​ಗಳಿಗೂ ಲಕ್ಷ ಲಕ್ಷ ರೂ. ವೇತನ ಸಿಗುತ್ತಿರುವ ವಿಚಾರ ಅನೇಕರಿಗೆ ಗೊತ್ತಿಲ್ಲ. ಅಂದರೆ ಐಪಿಎಲ್ ಕೇವಲ ಆಟಗಾರರಿಗೆ ಮಾತ್ರವಲ್ಲದೆ, ಪಂದ್ಯದ ನಿರ್ಣಾಯಕರಿಗೂ ಕೂಡ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿದೆ. ಹಾಗಿದ್ರೆ ಐಪಿಎಲ್​ನಲ್ಲಿ ಅಂಪೈರ್​ಗಳು ಪಡೆಯುವ ವೇತನ ಎಷ್ಟು ಎಂದು ನೋಡೋಣ..

ಐಪಿಎಲ್ 2026ರ ಅಂಪೈರ್ ವೇತನ:

ಅಂಪೈರ್‌ಗಳ ಅನುಭವ ಮತ್ತು ಅವರ ಜವಾಬ್ದಾರಿಗೆ ಅನುಗುಣವಾಗಿ ಪ್ರತಿ ಪಂದ್ಯಕ್ಕೆ ಸಂಭಾವನೆಯನ್ನು ನೀಡಲಾಗುತ್ತದೆ.

  • ಐಸಿಸಿಯಿಂದ ಮಾನ್ಯತೆ ಹೊಂದಿರುವ ಎಲೈಟ್ ಪ್ಯಾನಲ್ ಅಂಪೈರ್‌ಗಳಿಗೆ ಪ್ರತಿ ಪಂದ್ಯಕ್ಕೆ ₹3.7 ಲಕ್ಷ ರೂ. ಸಿಗುತ್ತದೆ.
  • ಫೀಲ್ಡ್​ ಅಂಪೈರ್‌ಗಳು ಪ್ರತಿ ಮ್ಯಾಚ್​ಗೆ  ₹3 ಲಕ್ಷ ರೂ ಪಡೆಯುತ್ತಾರೆ.
  •   ಟಿವಿ / ಮೂರನೇ ಅಂಪೈರ್ ಪ್ರತಿ ಮ್ಯಾಚ್​  ₹2 ಲಕ್ಷ ರೂ. ಪಡೆಯುತ್ತಾರೆ.
  • ನಾಲ್ಕನೇ ಅಂಪೈರ್ ಹಾಗೂ ಆಫ್​ ಫೀಲ್ಡ್​ ಅಂಪೈರ್​ಗಳಿಗೆ ಪ್ರತಿ ಮ್ಯಾಚ್​ಗೆ ₹2 ಲಕ್ಷ ರೂ. ನೀಡಲಾಗುತ್ತದೆ.
  • ದೇಶೀಯ ಅಂಪೈರ್​ಗಳಿಗೆ ಪ್ರತಿ ಮ್ಯಾಚ್​ಗೆ ₹60,000 ನೀಡಲಾಗುತ್ತದೆ.

ಪ್ರಮುಖ ಸೌಲಭ್ಯಗಳು ಮತ್ತು ಭತ್ಯೆಗಳು

ಕೇವಲ ಪಂದ್ಯದ ಶುಲ್ಕವಲ್ಲದೆ, ಬಿಸಿಸಿಐ ಅಂಪೈರ್‌ಗಳಿಗೆ ಇತರೆ ಸೌಲಭ್ಯಗಳನ್ನು ಸಹ ಒದಗಿಸುತ್ತದೆ.

  • ಸೀಸನಲ್ ರಿಟೈನರ್ ಫೀ: ಅನುಭವಿ ಅಂಪೈರ್‌ಗಳು ಪಂದ್ಯಗಳ ಸಂಖ್ಯೆಯನ್ನು ಲೆಕ್ಕಿಸದೆ ಸುಮಾರು ₹7.33 ಲಕ್ಷ ನಿಶ್ಚಿತ ಮೊತ್ತವನ್ನು ಪಡೆಯುತ್ತಾರೆ.
  • ದೈನಂದಿನ ಭತ್ಯೆ: ಪಂದ್ಯದ ದಿನಗಳಲ್ಲಿ ಸುಮಾರು ₹12,500 ದೈನಂದಿನ ಭತ್ಯೆ ನೀಡಲಾಗುತ್ತದೆ.
  • ಪ್ರಯಾಣ ಮತ್ತು ವಾಸ್ತವ್ಯ: ಐಪಿಎಲ್ ಸಮಯದಲ್ಲಿ ಅಂಪೈರ್‌ಗಳಿಗೆ ಉಚಿತ ವಿಮಾನ ಪ್ರಯಾಣ ಮತ್ತು ಪಂಚತಾರಾ ಹೋಟೆಲ್‌ಗಳಲ್ಲಿ ವಾಸ್ತವ್ಯದ ವ್ಯವಸ್ಥೆ ಇರುತ್ತದೆ.
  • ಪ್ರಾಯೋಜಕತ್ವದ ಆದಾಯ: ಅಂಪೈರ್‌ಗಳು ಧರಿಸುವ ಶರ್ಟ್‌ಗಳ ಮೇಲಿರುವ ಲೋಗೋ ಪ್ರಾಯೋಜಕತ್ವದಿಂದಲೂ ಸೀಸನ್‌ಗೆ ಸುಮಾರು ₹10 ಲಕ್ಷದವರೆಗೆ ಹೆಚ್ಚುವರಿ ಆದಾಯ ಗಳಿಸುತ್ತಾರೆ.

ಅಂತರಾಷ್ಟ್ರೀಯ ಪಂದ್ಯಗಳಿಗೆ ಹೋಲಿಕೆ:

ಐಪಿಎಲ್‌ನಲ್ಲಿ ಸಿಗುವ ಸಂಭಾವನೆಯು ಅಂತರಾಷ್ಟ್ರೀಯ ಟಿ20 (T20I) ಪಂದ್ಯಗಳಿಗಿಂತ ಸುಮಾರು 2.5 ಪಟ್ಟು ಹೆಚ್ಚು ಎಂಬುದು ವಿಶೇಷ. ಅಂತರಾಷ್ಟ್ರೀಯ ಟಿ20 ಪಂದ್ಯಕ್ಕೆ ಒಬ್ಬ ಅಂಪೈರ್ ಸುಮಾರು ₹1.13 ಲಕ್ಷದಿಂದ ₹1.25 ಲಕ್ಷ ಗಳಿಸಿದರೆ, ಐಪಿಎಲ್‌ನಲ್ಲಿ ಇದು ₹3 ಲಕ್ಷಕ್ಕಿಂತ ಹೆಚ್ಚಿದೆ.

ಇದನ್ನೂ ಓದಿ: Vaibhav Suryavanshi: ಕ್ರಿಸ್​ ಗೇಲ್​ನ ಆ ಒಂದು ದಾಖಲೆಯನ್ನು ಮುರಿಯಲೇಬೇಕು..!

ಅಂದರೆ ಐಪಿಎಲ್ ಸೀಸನ್​ವೊಂದರಲ್ಲಿ ಕಾರ್ಯ ನಿರ್ವಹಿಸುವ ಪ್ರಮುಖ ಅಂಪೈರ್​ಗಳು ಸರಾಸರಿ ₹30 ಲಕ್ಷದಿಂದ ₹60 ಲಕ್ಷದವರೆಗೆ ಸಂಪಾದಿಸುತ್ತಾರೆ. ಈ ಆದಾಯವು ಅವರು ಎಷ್ಟು ಪಂದ್ಯಗಳಲ್ಲಿ ಕಾರ್ಯನಿರ್ವಹಿಸುತ್ತಾರೆ ಮತ್ತು ಅವರ ಅನುಭವದ ಮೇಲೆ ನಿರ್ಧಾರವಾಗುತ್ತದೆ. ಹೀಗಾಗಿ ಅಂಪೈರ್​ಗಳ ಪಾಲಿಗೆ ಐಪಿಎಲ್ ವಿಶ್ವದ ಅತ್ಯಂತ ಶ್ರೀಮಂತ ಲೀಗ್.

 

 

Source link

‘ಧುರಂಧರ್ 2’ ಮೊದಲ ವಿಮರ್ಶೆ: ಹಾಲಿವುಡ್ ನಿರ್ದೇಶಕರು ನೋಡಬೇಕು ಎಂದ ಆರ್​ಜಿವಿ

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್ 2’ (Dhurandhar 2) ಚಿತ್ರವನ್ನು ನೋಡಿ ದಂಗಾಗಿದ್ದಾರೆ. ಈ ಚಿತ್ರದ ದೃಶ್ಯ ವೈಭವ ಮತ್ತು ಪ್ರಭಾವಕ್ಕೆ ಮನಸೋತಿರುವ ಅವರು, ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಒಂದು ಹೊಸ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಚಿತ್ರದ ಪ್ರಿವ್ಯೂ ನೋಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು, ‘ಧುರಂಧರ್ 2 ಚಿತ್ರದ ಪ್ರಭಾವವು ಶೋಲೆ ಚಿತ್ರಕ್ಕಿಂತ 100 ಪಟ್ಟು ಹೆಚ್ಚಿದೆ. ಈ ಸಿನಿಮಾ ಮುಂದೆ ಮೊಘಲ್-ಎ-ಆಜಮ್ ರೀತಿಯ ಶ್ರೇಷ್ಠ ಚಿತ್ರಗಳು ಕೂಡ ಟಿವಿ ಸೀರಿಯಲ್‌ಗಳಂತೆ ಕಾಣುತ್ತವೆ. ಇದು ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಲಿದೆ’ ಎಂದು ಹೊಗಳಿದ್ದಾರೆ.

ಇಷ್ಟಕ್ಕೇ ನಿಲ್ಲದ ರಾಮ್ ಗೋಪಾಲ್ ವರ್ಮಾ ಅವರು, ಹಾಲಿವುಡ್‌ನ ದಿಗ್ಗಜ ನಿರ್ದೇಶಕರಾದ ಸ್ಟೀವನ್ ಸ್ಪೀಲ್ಬರ್ಗ್ ಮತ್ತು ಕ್ರಿಸ್ಟೋಫರ್ ನೋಲನ್ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ‘ಸ್ಪೀಲ್ಬರ್ಗ್ ಮತ್ತು ನೋಲನ್ ಅವರು ಮಾಡುತ್ತಿರುವ ಕೆಲಸವನ್ನೆಲ್ಲಾ ಬಿಟ್ಟು, ಮೊದಲ ದಿನವೇ ಧುರಂಧರ್ 2 ಚಿತ್ರವನ್ನು ನೋಡಬೇಕು. ನಿರ್ದೇಶಕ ಎಂಬ ಪದದ ಅರ್ಥವೇ ಇನ್ನು ಮುಂದೆ ಆದಿತ್ಯ ಧಾರ್ ಹೆಸರಿನಿಂದ ಶುರುವಾಗುತ್ತದೆ’ ಎಂದು ಆರ್​ಜಿವಿ ಬರೆದುಕೊಂಡಿದ್ದಾರೆ.

ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಮೊದಲ ಭಾಗವು ಜಾಗತಿಕವಾಗಿ 1,300 ಕೋಟಿ ರೂ. ಗಳಿಸುವ ಮೂಲಕ ದಾಖಲೆ ಬರೆದಿತ್ತು. ಈಗ ಅದರ ಮುಂದುವರಿದ ಭಾಗ ‘ಧುರಂಧರ್: ದಿ ರಿವೆಂಜ್’ ಮಾರ್ಚ್ 18ರ ಸಂಜೆ 5.30ರಿಂದ ಪೇಯ್ಡ್ ಪ್ರಿವ್ಯೂಗಳನ್ನು ಆರಂಭಿಸಿದೆ. ಈಗಾಗಲೇ 4 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ.

ಈ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಅರ್ಜುನ್ ರಾಮ್​ಪಾಲ್, ಆರ್. ಮಾಧವನ್, ಸಂಜಯ್ ದತ್ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಮಾರ್ಚ್ 19ರಿಂದ ಹಿಂದಿ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಭರ್ಜರಿಯಾಗಿ ತೆರೆಕಾಣಲಿದೆ. ಚಿತ್ರದ ಕುರಿತಾದ ಈ ಮಟ್ಟದ ಕ್ರೇಜ್ ಭಾರತೀಯ ಚಿತ್ರರಂಗದಲ್ಲಿ ಈ ಹಿಂದೆ ಎಂದೂ ಕಂಡಿರಲಿಲ್ಲ ಎಂದು ಫ್ಯಾನ್ಸ್ ಹೇಳಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ಸಿನಿಮಾದ ಭೀಕರ ದೃಶ್ಯಗಳಿಗೆ ಸೆನ್ಸಾರ್ ಕತ್ತರಿ: ತಗ್ಗಿತು ಚಿತ್ರದ ಅವಧಿ

ಆರಂಭದಿಂದಲೂ ‘ಧುರಂಧರ್’ ಚಿತ್ರತಂಡವನ್ನು ರಾಮ್ ಗೋಪಾಲ್ ವರ್ಮಾ ಅವರು ಹೊಗಳುತ್ತಲೇ ಬಂದಿದ್ದಾರೆ. ಈ ಮೊದಲು ನಿರ್ದೇಶಕ ಆದಿತ್ಯ ಧಾರ್ ಅವರು ‘ಧುರಂಧರ್’ ಕಥೆಯನ್ನು ‘ಸತ್ಯ’ ಸಿನಿಮಾದಿಂದ ಕಾಪಿ ಮಾಡಿದ್ದಾರೆ ಎಂಬ ಆರೋಪ ಬಂದಿತ್ತು. ಆದರೆ ಆ ರೀತಿ ಹೋಲಿಕೆಗಳು ಸಹಜ ಎಂದು ರಾಮ್ ಗೋಪಾಲ್ ವರ್ಮಾ ಅವರು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮದುವೆ ಮನೆಗಳೇ ಈತನ ಟಾರ್ಗೆಟ್: ಕುಖ್ಯಾತ ಕಳ್ಳ ಪಲ್ಸರ್ ಬಾಬು ಅರೆಸ್ಟ್; 42 ಲಕ್ಷ ರೂ.ಗೂ ಅಧಿಕ ಮೌಲ್ಯದ ಸ್ವತ್ತು ವಶ!

ಬೆಂಗಳೂರು, ಮಾರ್ಚ್​ 18: ಮದುವೆ ಸಮಾರಂಭಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಚನ್ನಪಟ್ಟಣ ಮೂಲದ ಕುಖ್ಯಾತ ಕಳ್ಳ ‘ಪಲ್ಸರ್ ಬಾಬು’ ಅಲಿಯಾಸ್ ಬಾಬುನನ್ನು (Pulsar Babu) ಬೆಂಗಳೂರಿನ (Bangalore) ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆದ ಮದುವೆಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಈತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈತನ ವಿರುದ್ಧ ಈಗಾಗಲೇ 19 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ. ಅಂದಹಾಗೆ, ಈತ ಈ ಹಿಂದೆ ಕೂಡ ಇಂಥದ್ದೇ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಬಿಡುಗಡೆಯಾಗಿದ್ದ.

ಪಲ್ಸರ್ ಬಾಬುಗೆ ವರದಾನವಾಗಿದ್ದ ಕೊರೊನಾ

ಬಂಧಿತ ಆರೋಪಿ ಪಲ್ಸರ್ ಬಾಬು ವಿವಿಧ ಪೊಲೀಸ್ ಠಾಣೆಗಳ 19ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ. ಈ ಹಿಂದೆ ಈತ ಜೈಲು ಸೇರಿದ್ದ. ಕೊರೊನಾ ಸಮಯದಲ್ಲಿ ಸಣ್ಣಪುಟ್ಟ ಅಪರಾಧಗಳಡಿ ಜೈಲಲ್ಲಿದ್ದ ಸುಮಾರು 2,000 ಕೈದಿಗಳನ್ನು ಬಿಡುಗಡೆ ಮಾಡಿದಾಗ ಪಲ್ಸರ್ ಬಾಬುಗೂ ಹೊರಬರುವ ಅವಕಾಶ ಸಿಕ್ಕಿತ್ತು. ಆದರೆ, ಜೈಲಿನಿಂದ ಹೊರಬಂದ ಮೇಲೆ ಸುಧಾರಿಸುವ ಬದಲು ತನ್ನ ಹಳೆ ಚಾಳಿಯನ್ನೇ ಮುಂದುವರಿಸಿದ್ದ.

ಮಕ್ಕಳೇ ಈತನ ಟಾರ್ಗೆಟ್

ಐಷಾರಾಮಿ ಜೀವನ ಮತ್ತು ಮೋಜು-ಮಸ್ತಿಗೆ ದಾಸನಾಗಿದ್ದ ಈತ, ಮದುವೆ ಮನೆಗಳಲ್ಲಿ ಓಡಾಡುವ ಸಣ್ಣ ಮಕ್ಕಳನ್ನು ಟಾರ್ಗೆಟ್ ಮಾಡುತ್ತಿದ್ದ. ಮಕ್ಕಳ ಬಳಿ ಇರುವ ಚಿನ್ನಾಭರಣ ಹಾಗೂ ಮೊಬೈಲ್‌ಗಳನ್ನು ನಯವಾಗಿಯೇ ಎಗರಿಸಿ ಪರಾರಿಯಾಗುತ್ತಿದ್ದ. ಅಷ್ಟೇ ಅಲ್ಲದೆ, ಮದುವೆ ಮನೆಯಲ್ಲಿರುವ ಬೆಲೆಬಾಳುವ ಕ್ಯಾಮರಾ, ಲ್ಯಾಪ್‌ಟಾಪ್ ಹಾಗೂ ಪಾರ್ಕಿಂಗ್‌ನಲ್ಲಿರುವ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ.

ಕದ್ದ ಚಿನ್ನದಲ್ಲಿ ಶೋಕಿ!

ಆರೋಪಿ ಕದ್ದ ಚಿನ್ನವನ್ನು ಮಾರಾಟ ಮಾಡುವ ಬದಲು, ಅದನ್ನು ಕರಗಿಸಿ ತನಗೆ ಬೇಕಾದ ವಿನ್ಯಾಸದ ತಿರುಪತಿ ಲಾಕೆಟ್ ಮತ್ತು ಉಂಗುರಗಳನ್ನು ಮಾಡಿಸಿಕೊಂಡು ಶೋಕಿ ಮಾಡುತ್ತಿದ್ದ. ಅಲ್ಲದೆ, ಕದ್ದ ಹಣದಲ್ಲಿ ಕಾರುಗಳನ್ನು ಖರೀದಿ ಮಾಡಿ ಮೋಜು-ಮಸ್ತಿ ಮಾಡುತ್ತಿದ್ದ.

42 ಲಕ್ಷ ರೂ. ಮೌಲ್ಯದ ವಸ್ತುಗಳ ಜಪ್ತಿ

ಬಂಧಿತನಿಂದ ಪೊಲೀಸರು ಒಟ್ಟು 42.38 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 2 ಕಾರುಗಳು ಹಾಗೂ 4 ಬೈಕ್‌ಗಳು, 132 ಗ್ರಾಂ ಚಿನ್ನಾಭರಣ, 7 ಮೊಬೈಲ್ ಫೋನ್‌ಗಳು, 1 ಹೈ ಎಂಡ್ ಕ್ಯಾಮರಾ ಮತ್ತು 2 ಲೆನ್ಸ್‌ಗಳು, 2 ಲ್ಯಾಪ್‌ಟಾಪ್‌ಗಳು ಹಾಗೂ 1.20 ಲಕ್ಷ ರೂ. ನಗದು ಸೇರಿವೆ.

ಇದನ್ನೂ ಓದಿ: ಕೆಲಸ ಮಾಡ್ತಿದ್ದ ಅಂಗಡಿಗೇ ಕನ್ನ: ಕದ್ದ ಆಭರಣ ಮಾರಿ ಮಹಾಕಾಳೇಶ್ವರನಿಗೆ ಪೂಜೆ ಸಲ್ಲಿಸಿದ್ದವರು ಲಾಕ್!

ಆರೋಪಿ ಬಂಧನದಿಂದ ಸದಾಶಿವನಗರ, ವರ್ತೂರು, ಜಾಲಹಳ್ಳಿ, ಹೆಣ್ಣೂರು ಹಾಗೂ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಒಟ್ಟು 8 ಪ್ರಕರಣಗಳು ಬೆಳಕಿಗೆ ಬಂದಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಜ್ವಲ್ ರೇವಣ್ಣ ಪ್ರಕರಣ: ಪ್ರೀತಂ ಗೌಡ, ಶ್ರೇಯಸ್ ಪಟೇಲ್ ಆಪ್ತರಿಗೆ ಬಿಗ್ ರಿಲೀಫ್

ಹಾಸನ, ಮಾರ್ಚ್​​ 18: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದೆ. ಈ ಪ್ರಕರಣದಲ್ಲಿ ಮಾಜಿ ಶಾಸಕ ಪ್ರೀತಂ ಗೌಡ ಮತ್ತು ಸಂಸದ ಶ್ರೇಯಸ್ ಪಟೇಲ್ ಅವರ ಆಪ್ತರಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದೆ. ಪ್ರೀತಂ ಗೌಡ ಆಪ್ತರಾದ ಶರತ್ ಮತ್ತು ಕಿರಣ್, ಹಾಗೆಯೇ ಶ್ರೇಯಸ್ ಪಟೇಲ್ ಆಪ್ತರಾಗಿರುವ ಪುಟ್ಟರಾಜು ಅವರಿಗೆ ಆರೋಪಗಳಿಂದ ಮುಕ್ತಿ ದೊರೆತಿದೆ. ವಿಶೇಷ ತನಿಖಾ ತಂಡ (SIT) ಈ ಮೂವರ ಹೆಸರುಗಳನ್ನು ತಮ್ಮ ದೋಷಾರೋಪ ಪಟ್ಟಿಯಿಂದ ಕೈಬಿಟ್ಟಿದೆ. ಪ್ರಾಥಮಿಕ ಆರೋಪಗಳ ಪ್ರಕಾರ, ಶರತ್, ಕಿರಣ್ ಮತ್ತು ಪುಟ್ಟರಾಜು ಅವರು ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ಪೆನ್ ಡ್ರೈವ್ ವೀಡಿಯೋಗಳ ಹಂಚಿಕೆಯಲ್ಲಿ ಮತ್ತು ಅವುಗಳನ್ನು ದೊಡ್ಡ ಮಟ್ಟದಲ್ಲಿ ವೈರಲ್ ಮಾಡುವಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿತ್ತು. ಆದರೆ, ಎಸ್ಐಟಿ ನಡೆಸಿದ ತನಿಖೆಯಲ್ಲಿ ಇವರು   ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂಬುದು ದೃಢಪಟ್ಟಿದೆ.  ಹಾಸನದ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಕೆಯಾದ 13,712 ಪುಟಗಳ ಚಾರ್ಜ್ ಶೀಟ್‌ನಲ್ಲಿ ಈ ಮೂವರ ಹೆಸರುಗಳನ್ನು ಸೇರಿಸಲಾಗಿಲ್ಲ. ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಇವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನೀವಾಗೇ ಅಮೆರಿಕ ಬಿಟ್ಟು ಹೋಗಿ; ಫ್ಲೈಟ್ ಟಿಕೆಟ್ ಕೊಡ್ತೀವಿ, ಎರಡೂವರೆ ಲಕ್ಷ ರೂ ಹಣ ಕೊಡ್ತೀವಿ: ವಲಸಿಗ ಭಾರತೀಯರಿಗೆ ಅಮೆರಿಕ ಆಫರ್

ವಾಷಿಂಗ್ಟನ್, ಮಾರ್ಚ್ 18: ಅಕ್ರಮವಾಗಿ ವಾಸಿಸುತ್ತಿರುವ ವಲಸಿಗರನ್ನು ಹೊರಗೆ ಕಳುಹಿಸಲು ಅಮೆರಿಕದ ಸರ್ಕಾರ ಹೊಸ ಪ್ಲಾನ್ ಹಾಕಿದೆ. ವಲಸಿಗರು ತಾವಾಗಿಯೇ ಹೊರ ಹೋಗಲು ಬಯಸಿದರೆ ಒಂದಷ್ಟು ಹಣಕಾಸು ನೆರವು ಕೊಡುವುದಾಗಿ ಸರಕಾರ ಹೇಳಿದೆ. ಈ ವಲಸಿಗರು ಹೊರಹೋಗುವುದಾದರೆ ಅವರಿಗೆ 2,600 ಡಾಲರ್​ಗಳ ಎಕ್ಸಿಟ್ ಬೋನಸ್ ಕೊಡಲಾಗುವುದು. ಅಂದರೆ, ಸುಮಾರು ಎರಡೂವರೆ ಲಕ್ಷ ರೂ ಪ್ರೋತ್ಸಾಹ ಧನ ಕೊಡಲಾಗುವುದು. ಜೊತೆಗೆ, ದಂಡಪಾವತಿ ಇತ್ಯಾದಿಯಿಂದ ವಿನಾಯಿತಿ ಸಿಗುತ್ತದೆ. ಫ್ಲೈಟ್ ಟಿಕೆಟ್ ಅನ್ನೂ ಸರ್ಕಾರವೇ ಒದಗಿಸುತ್ತದೆ.

ಅಮೆರಿಕದ ಗೃಹ ಭದ್ರತಾ ಇಲಾಖೆ ಇಂಥದ್ದೊಂದು ಆಫರ್ ಅನ್ನು ಅಕ್ರಮ ವಲಸಿಗರಿಗೆ ನೀಡಿದೆ. ಎಲ್ಲಾ ದೇಶದಿಂದ ಬಂದು ಅಕ್ರಮವಾಗಿ ನೆಲಸಿರುವ ವಲಸಿಗರಿಗೆ ಇದು ಅನ್ವಯ ಆಗುತ್ತದೆ. ತಮ್ಮ ದೇಶಕ್ಕೆ ವಾಪಸ್ ಹೋಗುವಂತೆ ಕೊಟ್ಟಿರುವ ಗಡುವು ಮೀರಿ ನೆಲಸಿರುವವರನ್ನು ಬಂಧಿಸಿ, ದಂಡ ವಿಧಿಸಿ, ಬಲವಂತವಾಗಿ ಗಡೀಪಾರು ಮಾಡುವ ಕಾನೂನು ಅಮೆರಿಕದಲ್ಲಿ ತರಲಾಗಿದೆ. ಆದರೆ, ಆ ಪರಿಸ್ಥಿತಿಯಲ್ಲಿ ಸಿಲುಕಲು ಬಯಸದೆ ಗೌರವಯುತವಾಗಿ ಹೊರಹೋಗಲು ಅವಕಾಶ ಬಯಸುತ್ತಿರುವವರಿಗೆ ಗೃಹ ಇಲಾಖೆ ಆಫರ್ ಕೊಟ್ಟಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಕಟ್ಟಡಕ್ಕೆ ಬೆಂಕಿ; ಮೂರು ಮಕ್ಕಳು ಸೇರಿ ಆರು ಮಂದಿ ಬಲಿ

ಅಮೆರಿಕದಿಂದ ತಾವಾಗೇ ಹೊರಹೋಗಲು ಬಯಸುವ ಅಕ್ರಮ ವಲಸಿಗರಿಗೆ 2,600 ಡಾಲರ್​ಗಳ ಎಕ್ಸಿಟ್ ಬೋನಸ್ ಕೊಡಲಾಗುತ್ತದೆ. ಉಚಿತವಾಗಿ ಪ್ರಯಾಣ ವ್ಯವಸ್ಥೆಯನ್ನು ಸರ್ಕಾರವೇ ಮಾಡುತ್ತದೆ. ಕೆಲ ದಂಡಗಳಿಂದಲೂ ವಿನಾಯಿತಿ ಕೊಡುತ್ತದೆ.

ಅಮೆರಿಕದ ಗೃಹ ಇಲಾಖೆಯ ಟ್ವೀಟ್

‘ನೀವು ನಿಮ್ಮ ದೇಶಕ್ಕೆ ಬೇಕಾದರೆ ಹೋಗಬಹುದು. ಅಥವಾ ನಿಮಗೆ ಕಾನೂನುಬದ್ಧ ವಾಸಕ್ಕೆ ಅವಕಾಶ ಇರುವ ದೇಶಕ್ಕೆ ಬೇಕಾದರೂ ಹೋಗಬಹುದು. ನೀವಾಗಿಯೇ ಹೋದರೆ ಭತ್ಯೆ ಕೊಡಲಾಗುತ್ತದೆ’ ಎಂದು ಅಮೆರಿಕದ ಗೃಹ ಇಲಾಖೆ ಹೇಳಿದೆ.

ಇದನ್ನೂ ಓದಿ: ಫ್ಲೈಟ್​ನಲ್ಲಿ ಶುಲ್ಕರಹಿತ ಸೀಟುಗಳು ಕನಿಷ್ಠ ಶೇ. 60 ಇರಬೇಕು; ಸರ್ಕಾರದಿಂದ ಹೊಸ ನಿಯಮಗಳು

ಇಲಾಖೆ ತನ್ನ ಎಕ್ಸ್ ಅಕೌಂಟ್​ನಿಂದ ಮಾಡಿದ ಒಂದು ಟ್ವೀಟ್​ನಲ್ಲಿ ತಾಜ್​ಮಹಲ್ ಫೋಟೋ ಕೂಡ ಇದೆ. ಅದು ಅಕ್ರಮವಾಗಿ ನೆಲಸಿರುವ ಭಾರತೀಯರನ್ನು ಉದ್ದೇಶಿಸಿ ಮಾಡಿರುವಂಥದ್ದು. ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿರುವ ವಲಸಿಗರಲ್ಲಿ ಭಾರತೀಯ ಸಮುದಾಯ 3ನೇ ಸ್ಥಾನ ಪಡೆಯುತ್ತದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

“ಟಿಕೆಟ್ ಬೇಕಿದ್ದರೆ ಡೈರೆಕ್ಟ್ ಡಿಎಂ ಮಾಡಿ”: ಐಪಿಎಲ್ ಟಿಕೆಟ್ ವಂಚನೆ ನಡೆಯುತ್ತಿದೆ ಎಚ್ಚರ

ಬೆಂಗಳೂರು, ಮಾ.18: ಐಪಿಎಲ್ ಪಂದ್ಯಾವಳಿ ಆರಂಭವಾಗುತ್ತಿರುವಂತೆಯೇ, ಟಿಕೆಟ್ ಖರೀದಿಯ ವಿಚಾರದಲ್ಲಿ ವಂಚನೆಗಳು ಹೆಚ್ಚಾಗುತ್ತಿವೆ. ಐಪಿಎಲ್ ಪಂದ್ಯಗಳ ಟಿಕೆಟ್‌ಗಳನ್ನು ಖರೀದಿಸಲು ಉತ್ಸುಕರಾಗಿರುವ ಅಭಿಮಾನಿಗಳು ಹೆಚ್ಚು ಜಾಗರೂಕರಾಗಿರಬೇಕು ಎಂದು ಬೆಂಗಳೂರು ಸೈಬರ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಐಪಿಎಲ್ ಟಿಕೆಟ್‌ಗಳನ್ನು ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ. ಈ ವಂಚಕರು, “ಟಿಕೆಟ್ ಬೇಕಿದ್ದರೆ ಡೈರೆಕ್ಟ್ ಮೆಸೇಜ್ (ಡಿಎಂ) ಮಾಡಿ” ಎಂದು ಪೋಸ್ಟ್‌ಗಳನ್ನು ಹಾಕಿ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ. ಇಂತಹ ನಕಲಿ ಖಾತೆಗಳ ಸಂದೇಶಗಳಿಗೆ ಮರುಳಾಗಿ, ಅವರು ಸೂಚಿಸಿದಂತೆ ಹಣ ಪಾವತಿಸಿ ಟಿಕೆಟ್ ಖರೀದಿಸಲು ಮುಂದಾದರೆ, ನೀವು ನಿಮ್ಮ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಟಿಕೆಟ್‌ಗಳನ್ನು ಪೋಸ್ಟ್ ಮಾಡುವುದಾಗಿ ಅಥವಾ ಆನ್‌ಲೈನ್‌ನಲ್ಲಿ ಕಳುಹಿಸುವುದಾಗಿ ಹೇಳಿ ಹಣ ಪಡೆದು ನಂತರ ಯಾವುದೇ ಟಿಕೆಟ್ ನೀಡದೆ ವಂಚಿಸುವುದು ಇವರ ಸಾಮಾನ್ಯ ವಿಧಾನವಾಗಿದೆ. ಆದ್ದರಿಂದ, ಟಿಕೆಟ್‌ಗಳಿಗಾಗಿ ಹಣ ಕಳೆದುಕೊಳ್ಳುವುದನ್ನು ತಪ್ಪಿಸಲು, ಅಧಿಕೃತ ಮತ್ತು ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಟಿಕೆಟ್ ಖರೀದಿಸುವುದು ಅತಿ ಮುಖ್ಯ. ಸಾಮಾಜಿಕ ಜಾಲತಾಣಗಳಲ್ಲಿನ ನಕಲಿ ಪೋಸ್ಟ್‌ಗಳನ್ನು ನಂಬಿ ಮೋಸ ಹೋಗಬಾರದು ಎಂದು ಸೈಬರ್ ಪೊಲೀಸ್ ಇಲಾಖೆ ಸೂಚಿಸಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಪೇಡ್​ ಪ್ರೀಮಿಯರ್ ಶೋ ಕ್ಯಾನ್ಸಲ್; ಕೊನೆ ಕ್ಷಣದಲ್ಲಿ ತೊಂದರೆ

‘ಧುರಂಧರ್ 2’ ಸಿನಿಮಾಗೆ (Dhurandhar 2 ) ಕೊನೆಯ ಕ್ಷಣದಲ್ಲಿ ತೊಂದರೆ ಎದುರಾಗಿದೆ. ಸಿನಿಮಾದ ಕೆಲವು ದೃಶ್ಯಗಳಿಗೆ ಕತ್ತರಿ ಹಾಗೂ ಬದಲಾವಣೆ ಮಾಡಲು ಸೆನ್ಸಾರ್ ಮಂಡಳಿ ಸೂಚಿಸಿದೆ. ಇದರಿಂದ ಕನ್ನಡ, ತೆಲುಗು ಸೇರಿದಂತೆ ಮೊದಲಾದ ಭಾಷೆಗಳಲ್ಲಿ ಸಿನಿಮಾ ಇಂದು ಪ್​ರೀಮೀಯರ್ ಆಗೋದು ಅನುಮಾನ ಎಂದು ಹೇಳಲಾಗುತ್ತಿದೆ. ಇದರಿಂದ ಕನ್ನಡ, ತೆಲುಗು ವರ್ಷನ್ ಬುಕ್ ಮಾಡಿದವರಿಗೆ ಬೇಸರ ಆಗಿದೆ. ಈಗಾಗಲೇ ಬೆಂಗಳೂರಲ್ಲಿ ಕನ್ನಡ ವರ್ಷನ್ ಪ್ರೀಮಿಯರ್​​ ಶೋಗಳನ್ನು ಕ್ಯಾನ್ಸಲ್ ಮಾಡಲಾಗಿದೆ.

ಮಾರ್ಚ್ 17ರಂದು ‘ಧುರಂಧರ್ 2’ ಚಿತ್ರಕ್ಕೆ ಪ್ರಮಾಣ ಪತ್ರ ಸಿಕ್ಕಿದೆ. 21 ಬದಲಾವಣೆಗಳನ್ನು ಮಾಡಲು ಸೂಚಿಸಲಾಗಿದೆ. ಅತ್ಯಂತ ಹಿಂಸಾತ್ಮಕ ವಿಷಯಗಳನ್ನು ತೆಗೆಯಲು ಸೂಚಿಸಲಾಗಿದೆ. ಸದ್ಯ ಹಿಂದಿ ವರ್ಷನ್ ಬಗ್ಗೆ ತಂಡದವರು ಹೆಚ್ಚು ಗಮನ ಹರಿಸುತ್ತಿದ್ದಾರೆ. ಅದರ ಎಡಿಟ್ ಮಾಡಿ ಯುಎಫ್​​ಓಗೆ ಅಪ್​​ಲೋಡ್ ಮಾಡುವ ಭರದಲ್ಲಿ ತಂಡದವರಿದ್ದಾರೆ. ಹೀಗಾಗಿ, ಇನ್ನು, ಕನ್ನಡ ಹಾಗೂ ತೆಲುಗು ವರ್ಷನ್ ಇಂದು ಪ್ರದರ್ಶನ ಕಾಣೋದು ಅನುಮಾನ ಎನ್ನಲಾಗುತ್ತಿದೆ. ಸದ್ಯ ವೈಜಿಆರ್​ ಮಾಲ್​ ಅಲ್ಲಿ ಕನ್ನಡದ ಒಂದು ಶೋ ಇದೆ. ಅದು ಕೂಡ ಶೀಘ್ರವೇ ಕ್ಯಾನ್ಸಲ್ ಆಗಬಹುದು.

ಧುರಂಧರ್ 2

ಸದ್ಯ ಮೊದಲಾರ್ಧದ ಡಿಜಿಟಲ್ ಕಾಪಿ ಮಾತ್ರ ನೀಡಲಾಗಿದೆಯಂತೆ. ಎರಡನೇ ಭಾಗದ ಎಡಿಟಿಂಗ್ ನಡೆಯುತ್ತಿದೆ. ಹೀಗಾಗಿ, ಹಿಂದಿ ವರ್ಷನ್ ಪ್ರೀಮಿಯರ್​​ಗೂ ತೊಂದರೆ ಆಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ‘ಧುರಂಧರ್ 2’ ಸಿನಿಮಾದ ಭೀಕರ ದೃಶ್ಯಗಳಿಗೆ ಸೆನ್ಸಾರ್ ಕತ್ತರಿ: ತಗ್ಗಿತು ಚಿತ್ರದ ಅವಧಿ

ಬೆಂಗಳೂರಲ್ಲಿ ಕನ್ನಡ ವರ್ಷನ್​​ ಪ್ರೀಮಿಯರ್​​ಗಳನ್ನು ಇಂದು ಆಯೋಜಿಸಲಾಗಿತ್ತು. ಪಿವಿಆರ್, ಗೋಪಾಲನ್ ಅಲ್ಲಿ ಶೋ ನೀಡಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಇದನ್ನು ಕ್ಯಾನ್ಸಲ್ ಮಾಡಿರೋದು ಚರ್ಚೆ ಹುಟ್ಟುಹಾಕಿದೆ. ಹೀಗಾಗಿ, ಇಂದು ಶೋ ಕನ್ನಡ, ತೆಲುಗು ವರ್ಷನ್​ಗಳಲ್ಲಿ ಪ್ರದರ್ಶನ ಕಾಣೋದು ಅನುಮಾನವೇ.

‘ಧುರಂಧರ್ 2’ ಸಿನಿಮಾದ ರನ್​ ಟೈಮ್ ಈ ಮೊದಲು 3 ಗಂಟೆ 55 ನಿಮಿಷ ಇತ್ತು. ಹೊಸ ವರ್ಷನ್ ಮೂರು ಗಂಟೆ 49 ನಿಮಿಷ ಇದೆ. ರಣವೀರ್ ಸಿಂಗ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಆದಿತ್ಯ ಧಾರ್ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸೆನ್ಸಾರ್ ಪ್ರಮಾಣಪತ್ರದ ತೊಂದರೆಯನ್ನು ಅನೇಕ ಸಿನಿಮಾಗಳು ಎದುರಿಸಿವೆ. ‘ಧುರಂಧರ್ 2’ ಕೂಡ ಇದೆ ಸಮಸ್ಯೆಗೆ ಒಳಗಾಗಿರೋದು ಅನೇಕರಿಗೆ ಅಚ್ಚರಿ ತಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೆಡಿಕಲ್ ಸ್ಟೋರ್ ಪರವಾನಗಿ ನವೀಕರಣಕ್ಕಾಗಿ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಕೋಲಾರ ಡ್ರಗ್​​ ಕಂಟ್ರೋಲರ್

ಕೋಲಾರ, ಮಾರ್ಚ್​​ 18: ಮೆಡಿಕಲ್ ಸ್ಟೋರ್ ಪರವಾನಗಿ ನವೀಕರಣಕ್ಕಾಗಿ 38,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೋಲಾರ ಜಿಲ್ಲಾ ಡ್ರಗ್​​ ಕಂಟ್ರೋಲರ್​​ ಸೇರಿ ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕರ್ನಾಟಕ ದಲಿತ ಸಿಂಹ ಸೇನೆ ಮುಖಂಡ ಹೂಹಳ್ಳಿ ಪ್ರಕಾಶ್, ಕೃಷ್ಣಯ್ಯ ದೂರಿನ ಅನ್ವಯ ಲೋಕಾಯುಕ್ತ ಉಪ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪ್ರಕರಣ ಸಂಬಂಧ ಜಿಲ್ಲಾ ಔಷಧ ನಿಯಂತ್ರಕರಾದ ಶ್ಯಾಮಲಾ, ವಾಹನ ಚಾಲಕ ಮಹಂತೇಶ್ ಮತ್ತು ನಿವೃತ್ತ ಡಿ ಗ್ರೂಪ್ ಶ್ರೀನಿವಾಸನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಮಾಲೂರು ತಾಲೂಕಿನ ಟೇಕಲ್ ಬಳಿ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಲೋಕಾಯುಕ್ತ ದಾಳಿ ನಡೆಸಿದ್ದು, ಈ ವೇಳೆ ಅಧಿಕಾರಿಗಳನ್ನು ಕಂಡು ಎಡಿಸಿ ಶ್ಯಾಮಲಾ ಹಾಗೂ ಮತ್ತಿಬ್ಬರು ಎಸ್ಕೇಪ್​​ ಆಗಿದ್ದರು. ಇವರ ಕಾರನ್ನು ಬೆನ್ನಟ್ಟಿದ್ದ ಲೋಕಾಯುಕ್ತ ಪೊಲೀಸರು ಮೂವರನ್ನೂ ಅಂತಿಮವಾಗಿ ಬಂಧಿಸಿದ್ದಾರೆ. ಆದರೆ ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆಂದು ಪಡೆದಿದ್ದ 35 ಸಾವಿರ ರೂಪಾಯಿ ಲಂಚದ ಹಣವನ್ನು ಮಾರ್ಗ ಮಧ್ಯದಲ್ಲಿಯೇ ಇವರು ಬಿಸಾಡಿದ್ದಾರೆ. ವಿಚಾರಣೆ ವೇಳೆ ವಿಷಯ ಬೆಳಕಿಗೆ ಬಂದಿದ್ದು, ಹಣಕ್ಕಾಗಿ ತಡರಾತ್ರಿವರೆಗೂ ಲೋಕಾಯುಕ್ತ ಅಧಿಕಾರಿಗಳು ಹುಡುಕಾಡಿರುವ ಪ್ರಸಂಗವೂ ನಡೆದಿದೆ. ಆದರೆ ಎಸೆದ ದುಡ್ಡು ಸಿಗದ ಕಾರಣ, ಹಣ ಸ್ವೀಕರಿಸುವ ವಿಡಿಯೋ ಅಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಲಂಚ ಪಡೆಯುವಾಗ ಲೋಕಾಯುಕ್ತ ಟ್ರ್ಯಾಪ್; ಸಿಕ್ಕಿಬೀಳುತ್ತಿದ್ದಂತೆ ಕೈ ಕೊಯ್ದುಕೊಂಡು ಮಹಿಳಾ ಪಿಡಿಒ ಹೈಡ್ರಾಮಾ!

ಈ ಬಗ್ಗೆ ಪ್ರತಿಕ್ರಿಯಿಸಿರುವ ಲೋಕಾಯುಕ್ತ ಡಿವೈಎಸ್ಪಿ ವೆಂಕಟೇಶ್, ಮೆಡಿಕಲ್ ಸ್ಟೋರ್ ಪರವಾನಗಿ ನವೀಕರಣಕ್ಕಾಗಿ 38,000 ಲಂಚಕ್ಕೆ ಜಿಲ್ಲಾ ಡ್ರಗ್​​ ಕಂಟ್ರೋಲರ್ ಬೇಡಿಕೆ ಇಟ್ಟಿದ್ದ ಹಿನ್ನೆಲೆ ದಾಳಿ ನಡೆಸಲಾಗಿದೆ. ಆದರೆ ಲಂಚವಾಗಿ ಸ್ವೀಕರಿಸಿದ್ದ ಹಣವನ್ನು ಅಧಿಕಾರಿ ಮಾರ್ಗ ಮಧ್ಯೆಯೇ ಬಿಸಾಡಿದ್ದಾರೆ. ಆ ದುಡ್ಡಿಗಾಗಿ ಹುಡುಕಾಟ ನಡೆಸಿದ್ದೇವೆ. ಹೀಗಿದ್ದರೂ ಲಂಚ ಕೇಳಿರುವ ಆಡಿಯೋ ಮತ್ತು ಹಣ ಸ್ವೀಕರಿಸುವ ವಿಡಿಯೋ ಸಾಕ್ಷ್ಯ ನಮ್ಮ ಬಳಿ ಇದ್ದು, ಅವುಗಳ ಆಧಾರದಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link