All posts by nagaraj11081993

ಗ್ಯಾಸ್‌ ಉಳಿತಾಯ ಮಾಡಲು ಈ ಸಿಂಪಲ್‌ ಸಲಹೆ ಅನುಸರಿಸಿ

ಗ್ಯಾಸ್‌ ಉಳಿತಾಯ ಮಾಡಲು ಈ ಸಿಂಪಲ್‌ ಸಲಹೆ ಅನುಸರಿಸಿ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ ಜಾಗತಿಕ ಅನಿಲ ಸರಬರಾಜಿನಲ್ಲಿ ಅಡಚಣೆ ಉಂಟಾಗಿದ್ದು,  ಭಾರತದಲ್ಲಿ ಕಮರ್ಷಿಯಲ್‌ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆ ತೀವ್ರವಾಗಿ ಕುಸಿದಿದೆ. ಇದರ ಪರಿಣಾಮ ದೇಶದ ಹಲವು ನಗರಗಳಲ್ಲಿ ವಾಣಿಜ್ಯ ಸಿಲಿಂಡರ್‌‌ (Gas cylinder) ಅಲಭ್ಯತೆಯಿಂದಾಗಿ  ಹೊಟೇಲ್‌ ಉದ್ಯಮಗಳಿಗೆ ಪೆಟ್ಟು ಬಿದ್ದಿದೆ. ಅಷ್ಟೇ ಅಲ್ಲದೆ ಜನರು ಸಹ ಕಮರ್ಷಿಯಲ್‌ ಗ್ಯಾಸ್‌ ಸಿಗದೆ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೀವು ಮನೆಯಲ್ಲಿ ಉಪಯೋಗಿಸುತ್ತಿರುವಂತಹ ಗ್ಯಾಸ್‌ ಬೇಗ ಖಾಲಿಯಾಗಬಾರದು, ಹೆಚ್ಚು ಸಮಯದವರೆಗೆ ಬಾಳಿಕೆ ಬರಬೇಕು ಅಂತಾದ್ರೆ, ಅಡುಗೆ ಮಾಡುವ ಸಂದರ್ಭದಲ್ಲಿ ಈ ಕೆಲವೊಂದು ಸಲಹೆಗಳನ್ನು ಪಾಲಿಸಿ. ಈ ಮೂಲಕ ಗ್ಯಾಸ್‌ ವ್ಯರ್ಥವಾಗದಂತೆ ನೋಡಿಕೊಳ್ಳಬಹುದು.

ಗ್ಯಾಸ್‌ ಉಳಿತಾಯ ಮಾಡುವುದು ಹೇಗೆ?

ಮಧ್ಯಮ ಉರಿಯಲ್ಲಿ ಆಹಾರವನ್ನು ಬೇಯಿಸಿ: ಹೆಚ್ಚಿನ ಉರಿಯಲ್ಲಿ ಆಹಾರ ವೇಗವಾಗಿ ಬೇಯುತ್ತದೆ ಎಂದು ಜನರು ಸಾಮಾನ್ಯವಾಗಿ ಭಾವಿಸುತ್ತಾರೆ, ಆದರೆ ಹೆಚ್ಚಿನ ಶಾಖವು ಆಹಾರವನ್ನು ಬೇಗನೆ ಸುಡಬಹುದು ಮತ್ತು ಅನಿಲ ಬಳಕೆಯೂ ಹೆಚ್ಚಾಗಿರುತ್ತದೆ. ಆದ್ದರಿಂದ, ಬೇಳೆ, ತರಕಾರಿಗಳು ಹಾಗೂ ಅನ್ನ ಬೇಯಿಸುವ ಸಂದರ್ಭದಲ್ಲಿ  ಮಧ್ಯಮ ಉರಿಯಲ್ಲಿ ಅವುಗಳನ್ನು ಬೇಯಿಸುವುದು ಉತ್ತಮ. ಇದರಿಂದ ಆಹಾರ ಸರಿಯಾಗಿ ಬೇಯುತ್ತದೆ ಜೊತೆಗೆ ಇದು ಅನಿಲವನ್ನು ಉಳಿಸುತ್ತದೆ.

ಅಡುಗೆ ಮಾಡುವಾಗ ಯಾವಾಗಲೂ ಮುಚ್ಚಳವನ್ನು ಮುಚ್ಚಿ: ಗ್ಯಾಸ್‌ ಬೇಗ ಖಾಲಿಯಾಗಬಾರದೆಂದರೆ ಅಡುಗೆ ಮಾಡುವಾಗ ಪ್ಯಾನ್ ಅನ್ನು ಯಾವಾಗಲೂ ಮುಚ್ಚಿಡಬೇಕು. ಮುಚ್ಚಳ ಮುಚ್ಚದೆ ಆಹಾರವನ್ನು ಬೇಯಿಸಿದಾಗ, ಶಾಖವು ಉಗಿಯೊಂದಿಗೆ ಹೊರಹೋಗುತ್ತದೆ ಮತ್ತು ಇದರಿಂದಾಗಿ ಆಹಾರ ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅದೇ ಮುಚ್ಚಳ ಮುಚ್ಚುವುದರಿಂದ, ಪಾತ್ರೆಯ ಆ ಮುಚ್ಚಳವು ಉಗಿಯನ್ನು ಒಳಗೆ ಇಡುತ್ತದೆ, ಇದು ಆಹಾರವನ್ನು ವೇಗವಾಗಿ ಬೇಯಿಸುತ್ತದೆ ಮತ್ತು ಸುಮಾರು 20-25% ಅನಿಲವನ್ನು ಉಳಿಸುತ್ತದೆ.

ಸರಿಯಾದ ಗಾತ್ರದ ಪಾತ್ರೆ ಬಳಸಿ: ನೀವು ಚಿಕ್ಕ ಗ್ಯಾಸ್ ಬರ್ನರ್‌ನಲ್ಲಿ ಅಡುಗೆ ಮಾಡುತ್ತೀರಿ ಎಂದಾದರೆ  ಅದಕ್ಕೆ ತಕ್ಕಂತೆ ಚಿಕ್ಕ ಪಾತ್ರೆಯನ್ನೇ ಬಳಸಿ. ಸಣ್ಣ ಬರ್ನರ್ ಮೇಲೆ ದೊಡ್ಡ ಪಾತ್ರೆಯನ್ನು ಇಡುವುದರಿಂದ ಹೆಚ್ಚಿನ ಅನಿಲ ಖರ್ಚಾಗುತ್ತದೆ.

ಅಡುಗೆಗೆ ಪ್ರೆಶರ್ ಕುಕ್ಕರ್ ಬಳಸಿ: ಪ್ರೆಶರ್ ಕುಕ್ಕರ್‌ಗಳನ್ನು ಅನಿಲ ಉಳಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗುತ್ತದೆ. ಕುಕ್ಕರ್‌ನಲ್ಲಿ ಆಹಾರ ಬೇಗನೆ ಬೇಯುತ್ತದೆ. ಆದ್ದರಿಂದ ಅನ್ನ, ಬೇಳೆ, ತರಕಾರಿಗಳನ್ನು ಆದಷ್ಟು ಕುಕ್ಕರ್‌ನಲ್ಲಿಯೇ ಬೇಯಿಸಿ.

ಅನಿಲ ಹಚ್ಚುವ ಮೊದಲು ತಯಾರಿ ಮಾಡಿ: ಅನೇಕ ಬಾರಿ, ಜನರು ಗ್ಯಾಸ್ ಸ್ಟೌವ್ ಹಚ್ಚಿ ನಂತರ ತರಕಾರಿಗಳನ್ನು ಕತ್ತರಿಸಲು ಅಥವಾ ಬೇಕಾಗಿರುವ ಮಸಾಲೆಗಳನ್ನು ತಯಾರಿಸಲು ಪ್ರಾರಂಭಿಸುತ್ತಾರೆ, ಇದರಿಂದಾಗಿ ಗ್ಯಾಸ್ ಅನಗತ್ಯವಾಗಿ ಉರಿಯುತ್ತದೆ. ಆದ್ದರಿಂದ ಅಡುಗೆ ಮಾಡಲು ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಿ. ಇದು ಅಡುಗೆಯನ್ನು ವೇಗಗೊಳಿಸುತ್ತದೆ ಮತ್ತು ಅನಿಲವನ್ನು ಉಳಿಸುತ್ತದೆ.

ಇದನ್ನೂ ಓದಿ: ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಖಾಲಿಯಾಗಿದೆ ಎಂಬುದನ್ನು ತಿಳಿಯಲು ಟ್ರಿಕ್ಸ್‌ ಪಾಲಿಸಿ

ಅಡುಗೆಗೂ ಮುನ್ನ ಕಾಳುಗಳನ್ನು ಬಿಸಿ ನೀರಿನಲ್ಲಿ ನೆನೆಸಿಡಿ: ನೀವು ಬೇಳೆ,  ಅಥವಾ ಯಾವುದೇ ದ್ವಿದಳ ಧಾನ್ಯ ಕಾಳುಗಳನ್ನು ಬೇಯಿಸುತ್ತಿದ್ದೀರಿ ಎಂದಾದ್ರೆ ಅಡುಗೆ ಮಾಡುವ ಮೊದಲು ಅವುಗಳನ್ನು ಕನಿಷ್ಠ ಅರ್ಧ ಗಂಟೆಗಳ ಕಾಲ  ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಇದು ಧಾನ್ಯಗಳನ್ನು ಮೃದುಗೊಳಿಸುತ್ತದೆ ಮತ್ತು ಕುಕ್ಕರ್‌ನಲ್ಲಿ ವೇಗವಾಗಿ ಬೇಯಿಸಲು ಸಹಾಯ ಮಾಡುತ್ತದೆ. ಈ ಸರಳ ಅಭ್ಯಾಸವು  ಗ್ಯಾಸ್‌ ಉಳಿಸಲು ಸಹ ಸಹಕಾರಿ.

ಬರ್ನರ್  ಸ್ವಚ್ಛಗೊಳಿಸಿ: ಬರ್ನರ್ ಜ್ವಾಲೆಯು ಹಳದಿ ಅಥವಾ ಕಿತ್ತಳೆ ಬಣ್ಣದಲ್ಲಿ ಕಾಣಿಸಿಕೊಂಡರೆ, ಬರ್ನರ್ ರಂಧ್ರಗಳು ಮುಚ್ಚಿಹೋಗಿವೆ ಮತ್ತು ಅನಿಲ ಸರಿಯಾಗಿ ಉರಿಯದೆ ಅನಿಲ ವ್ಯರ್ಥವಾಗುತ್ತಿದೆ ಎಂದರ್ಥ. ಹಾಗಾಗಿ ನೀಲಿ ಜ್ವಾಲೆಗಾಗಿ, ಬರ್ನರ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BCCI Awards: ಗಿಲ್​ ವರ್ಷದ ಕ್ರಿಕೆಟಿಗ; ದ್ರಾವಿಡ್, ಮಿಥಾಲಿಗೆ ಜೀವಮಾನ ಸಾಧನೆ ಪ್ರಶಸ್ತಿ

2023 ರಲ್ಲಿ ಟಿ20 ವಿಶ್ವಕಪ್ (T20 World Cup) ಗೆದ್ದಿದ್ದ ಟೀಂ ಇಂಡಿಯಾ ಬಿಸಿಸಿಐನಿಂದ (BCCI) 125 ಕೋಟಿ ರೂ. ಬಹುಮಾನ ಪಡೆಯುವುದರ ಜೊತೆಗೆ ಮುಂಬೈನಲ್ಲಿ ವಿಕ್ಟರಿ ಪೆರೇಡ್‌ ಮಾಡಿತ್ತು. ಈ ಬಾರಿಯೂ ಚಾಂಪಿಯನ್ ಆದ ಭಾರತ ತಂಡಕ್ಕೆ ಬಿಸಿಸಿಐನಿಂದ 131 ಕೋಟಿ ರೂ. ಬಹುಮಾನ ಸಿಕ್ಕಿದೆ.ಆದರೆ ವಿಕ್ಟರಿ ಪೆರೇಡ್‌ ಮಾಡಲು ಅವಕಾಶ ಸಿಕ್ಕಿಲ್ಲ. ಹಾಗೆಯೇ ಆಟಗಾರರನ್ನು ಬಿಸಿಸಿಐನಿಂದ ಸನ್ಮಾನಿಸಲಾಗಿಲ್ಲ. ಇದೀಗ ಅದಕ್ಕೆ ವೇದಿಕೆ ಸಜ್ಜಾಗಿದ್ದು, ಬಿಸಿಸಿಐ ತನ್ನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಾಂಪಿಯನ್ ತಂಡವನ್ನು ಗೌರವಿಸಲಿದೆ. ಹಾಗೆಯೇ ಈ ಪ್ರಶಸ್ತಿ ಸಮಾರಂಭದಲ್ಲಿ ವರ್ಷದ ಕ್ರಿಕೆಟಿಗ, ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ಈ ಇತರ ಪ್ರಶಸ್ತಿಗಳಿಗೆ ಭಾಜನರಾಗಿರುವ ಆಟಗಾರರನ್ನು ಗೌರವಿಸಲಾಗುತ್ತದೆ.

ಗಿಲ್ ವರ್ಷದ ಅತ್ಯುತ್ತಮ ಕ್ರಿಕೆಟಿಗ

ಅದರಂತೆ ಈ ಬಾರಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾರತ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ಶುಭಮನ್ ಗಿಲ್ ಭಾಜನರಾಗಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಟೆಸ್ಟ್ ಕ್ರಿಕೆಟ್‌ನಲ್ಲಿ ಕಳೆದ ವರ್ಷ ಸ್ಮರಣೀಯ ಪ್ರದರ್ಶನ ನೀಡಿದ ಗಿಲ್​ಗೆ ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿಯನ್ನು ನೀಡಲಾಗುವುದು. ನಾಯಕನಾದ ನಂತರ ಗಿಲ್, ಇಂಗ್ಲೆಂಡ್ ಪ್ರವಾಸದಲ್ಲಿ ತಮ್ಮ ಚೊಚ್ಚಲ ಸರಣಿಯಲ್ಲಿ ನಾಲ್ಕು ಶತಕಗಳು ಸೇರಿದಂತೆ ದಾಖಲೆಯ 754 ರನ್ ಕಲೆಹಾಕಿದ್ದರು. ಹಾಗೆಯೇ ಏಕದಿನ ತಂಡದ ನಾಯಕನಾಗಿ ಕಳೆದ ವರ್ಷ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು. ಆದಾಗ್ಯೂ ಕಳೆದ ವರ್ಷ ಟಿ20 ಸ್ವರೂಪದಲ್ಲಿ ಗಿಲ್ ಪ್ರದರ್ಶನ ವಿಶೇಷವಾಗಿರಲಿಲ್ಲ. ಆದರೆ ಉಳಿದೆರಡು ಸ್ವರೂಪಗಳಲ್ಲಿ ಮಿಂಚಿದ್ದ ಗಿಲ್, ಕಳೆದ ಅವರು ಮೂರು ಸ್ವರೂಪಗಳಲ್ಲಿ 42 ಇನ್ನಿಂಗ್ಸ್‌ಗಳಲ್ಲಿ 49 ಸರಾಸರಿಯಲ್ಲಿ ಒಟ್ಟು 1764 ರನ್ ಬಾರಿಸಿದ್ದರು. ಇದರಲ್ಲಿ ಏಳು ಶತಕಗಳು ಮತ್ತು ಮೂರು ಅರ್ಧಶತಕಗಳು ಸೇರಿದ್ದವು.

ದ್ರಾವಿಡ್ ಹಾಗೂ ಮಿಥಾಲಿ ರಾಜ್​ಗೆ ಜೀವಮಾನ ಸಾಧನೆ ಪ್ರಶಸ್ತಿ

ಭಾರತದ ಮಾಜಿ ಮುಖ್ಯ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್ ಕರ್ನಲ್ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ವಿಶ್ವ ಕ್ರಿಕೆಟ್​ನ ಅಗ್ರಗಣ್ಯ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ರಾಹುಲ್ ದ್ರಾವಿಡ್, ತರಬೇತುದಾರರಾಗಿಯೂ ಭಾರತ ಕ್ರಿಕೆಟ್​ಗೆ ಸ್ಮರಣೀಯ ಕೊಡುಗೆಗಳನ್ನು ನೀಡಿದ್ದಾರೆ. ದ್ರಾವಿಡ್ ತಮ್ಮ ತರಬೇತಿಯಡಿಯಲ್ಲಿ, ಭಾರತ 19 ವರ್ಷದೊಳಗಿನವರ ತಂಡವನ್ನು 2018 ರ ವಿಶ್ವಕಪ್​ನಲ್ಲಿ ಚಾಂಪಿಯನ್ ಮಾಡಿದರು. ಆ ನಂತರ 2021 ರಲ್ಲಿ ರವಿಶಾಸ್ತ್ರಿ ಬದಲಿಗೆ ಭಾರತದ ಹಿರಿಯ ತಂಡದ ಕೋಚ್ ಆಗಿ ನೇಮಕಗೊಂಡಿದ್ದ ದ್ರಾವಿಡ್, ತಮ್ಮ ಕೋಚಿಂಗ್​ನಲ್ಲಿ ತಂಡವನ್ನು 2023 ರ ಏಕದಿನ ವಿಶ್ವಕಪ್ ಫೈನಲ್​ಗೇರಿಸಿದ್ದರು. ಬಳಿಕ 2024 ರಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು.

BCCI Awards: ಕನ್ನಡಿಗ ರಾಹುಲ್ ದ್ರಾವಿಡ್​ಗೆ ಜೀವಮಾನ ಸಾಧನೆ ಪ್ರಶಸ್ತಿ

ಇತರ ಪ್ರಶಸ್ತಿಗಳ ಪಟ್ಟಿ

ದ್ರಾವಿಡ್ ಜೊತೆಗೆ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಕೂಡ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ. ಇದರ ಜೊತೆಗೆ ದೇಶೀಯ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಲ್-ರೌಂಡರ್‌ಗಾಗಿ ನೀಡುವ ಲಾಲಾ ಅಮರನಾಥ್ ಪ್ರಶಸ್ತಿಗೆ ಮುಂಬೈನ ಆಯುಷ್ ಮ್ಹಾತ್ರೆ ಭಾಜನರಾಗಿದ್ದಾರೆ. ಹಾಗೆಯೇ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ಅನ್ನು ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಂಘವೆಂದು ಗೌರವಿಸಲಾಗುವುದು.

ಈ ಸಮಾರಂಭಕ್ಕೆ 2026 ರ ಟಿ20 ವಿಶ್ವಕಪ್ ವಿಜೇತರ ಜೊತೆಗೆ, 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ತಂಡವನ್ನು ಸಹ ಆಹ್ವಾನಿಸಲಾಗುವುದು. ಹಿರಿಯ ಮಹಿಳಾ ತಂಡ ಮತ್ತು 2025 ರಲ್ಲಿ ಐಸಿಸಿ ಟ್ರೋಫಿಗಳನ್ನು ಗೆದ್ದ ಭಾರತದ ಅಂಡರ್ -19 ಬಾಲಕರ ಮತ್ತು ಬಾಲಕಿಯರ ತಂಡಗಳನ್ನು ಸಹ ಆಹ್ವಾನಿಸಲಾಗುವುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪುರಾತತ್ವ ತಜ್ಞರು

ಗದಗ, (ಮಾರ್ಚ್ 12): ಐತಿಹಾಸಿಕ ದೇವಾಲಯಗಳ ಸರ್ಗ, ಶಿಲ್ಪಕಲೆಗಳ ಬೀಡು, ಕಲ್ಯಾಣ ಚಾಲುಕ್ಯರ ನಾಡು ಗದಗ (Gadag) ಜಿಲ್ಲೆಯ ಲಕ್ಕುಂಡಿಯಲ್ಲಿ ನಿಧಿ (Lakkundi Gold Treasure) ಸಿಕ್ಕ ಬಳಿಕ ಲಕ್ಕುಂಡಿ ರಾಷ್ಟ್ರಮಟ್ಟದಲ್ಲಿ ಭಾರಿ ಸದ್ದು ಮಾಡಿದೆ. ಇಲ್ಲಿ ಸಿಕ್ಕ ನಿಧಿಗೆ ಕಲ್ಯಾಣ ಚಾಲುಕ್ಯರು, ವಿಜಯನಗರ ಅರಸರ ಕಾಲದ ಇತಿಹಾಸ ಇದೆ. ಈ ಆಭರಣಗಳು ಅದ್ಭುತವಾದ ಕಸೂರಿ ನೋಡಿದ್ರೆ ಮೈ ರೋಮಾಂಚನವಾಗುತ್ತೆ. ಅಪರೂಪದ ನೀಲಮಣಿ ಲಕ್ಕುಂಡಿ ಗತವೈಭವ ಸಾರುತ್ತಿದೆ. ಆ್ಯಂಟಿಕ್ ಆಭರಣಗಳ ಅಂದಾಜು ಮೌಲ್ಯ 8 ಕೋಟಿಯಾಗಿದೆ. ಹೀಗಾಗಿ ನಿಧಿ ಸಿಕ್ಕ ಪ್ರಜ್ವಲ್ ಕುಟುಂಬ ಈಗ 8 ಕೋಟಿ ರೂಪಾಯಿಯಲ್ಲಿ ಪಾಲು ಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದೆ. ಇನ್ನು ಈ ಬಗ್ಗೆ ಪುರಾತತ್ವ ತಜ್ಞರು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಆಹಾರ ತಲುಪಿಸಲು ಹೋದ ಡೆಲಿವರಿ ಬಾಯ್‌ಗೆ ಊಟ ಕೊಟ್ಟು ಹಸಿವು ನೀಗಿಸಿದ ಗ್ರಾಹಕರು

ದೆಹಲಿ, ಮಾರ್ಚ್ 12: ದುಡಿಮೆ ಅನಿವಾರ್ಯ, ಉದ್ಯೋಗ ಯಾವುದಾದರೆ ದುಡಿದು ತಿನ್ನುವುದು ಮುಖ್ಯ ಎನ್ನುತ್ತಾ ಕೆಲಸ ಮಾಡುತ್ತಾರೆ. ಫುಡ್ ಡೆಲಿವರಿ ಬಾಯ್ (delivery boy) ಆಗಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲವೇ ಕೆಲವು ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಆರ್ಡರ್ ಮಾಡಿದ ಫುಡ್ ಬರುವುದರ ಹಿಂದೆ ಆಹಾರ ವಿತರಕರ ಶ್ರಮವಿರುತ್ತದೆ. ಸ್ವಲ್ಪ ಲೇಟ್ ಆದರೂ ರೇಗಾಡುತ್ತೇವೆ, ಆದರೆ ಕಷ್ಟವನ್ನು ಅರಿತುಕೊಳ್ಳುವ ಪ್ರಯತ್ನ ಯಾರು ಮಾಡಲ್ಲ. ಇದೀಗ ಫುಡ್ ಡೆಲಿವರಿ ಮಾಡಲು ಹೋದ ಡೆಲಿವರಿ ಬಾಯ್ ಗ್ರಾಹಕರ ಒಳ್ಳೆತನಕ್ಕೆ ಕರಗಿ ಹೋಗಿದ್ದಾನೆ. ದೆಹಲಿಯಲ್ಲಿ ಆರ್ಡರ್ ತಲುಪಿಸಲು ಹೋದ ಡೆಲಿವರಿ ಬಾಯ್‌ಗೆ ಅಲ್ಲಿನ ಗ್ರಾಹಕರು ಊಟಕ್ಕೆ ಕರೆದಿದ್ದು, ಈ ವ್ಯಕ್ತಿ ಗ್ರಾಹಕರ ಒಳ್ಳೆತನ ಕಂಡು ಕಣ್ಣೀರು ಹಾಕಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ.

ಆದಿತ್ಯ (Aditya) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಆಹಾರ ತಲುಪಿಸಲು ಹೋದ ಡೆಲಿವರಿ ಬಾಯ್‌ಗೆ ಗ್ರಾಹಕರು ಊಟಕ್ಕೆ ಮಾಡಲು ಕರೆದಿದ್ದಾರೆ. ತಟ್ಟೆಯಲ್ಲಿ ಬಡಿಸಿದ ಊಟವನ್ನು ನೋಡಿ ಆಹಾರ ವಿತರಕ ಭಾವುಕನಾಗಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಕಣ್ಣೀರು ಒರೆಸುತ್ತಾ ಕೆಲಸದ ನಡುವೆ ನನಗೆ ಹಸಿವಾಗಿದೆ ಎಂದು ತಿಳಿದೇ ಇರಲಿಲ್ಲ. ಸರ್ ನಾನು ಮನೆಯಿಂದ ಹೊರಟಾಗ ಒಂದು ಕಪ್ ಚಹಾ ಕುಡಿದಿದ್ದೆ ಅಷ್ಟೇ. ನನಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ. ಅವರಿಗಾಗಿ ದುಡಿಯಲೇಬೇಕು ಎಂದು ತನ್ನ ಕುಟುಂಬದ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕುವ ದೃಶ್ಯವನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ: ನೀವು ಲಿಫ್ಟ್ ಬಳಸಬಾರದು: ಭಾರವಾದ ಪಾರ್ಸೆಲ್ ಹೊತ್ತು 6ನೇ ಮಹಡಿಗೆ ಮೆಟ್ಟಿಲ ಮೂಲಕ ಸಾಗಿದ ಡೆಲಿವರಿ ಬಾಯ್

ಈ ವಿಡಿಯೋ ಎಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ವಿಡಿಯೋ ಏಕೆ ಮಾಡಬೇಕು, ಬೇರೆಯವರ ಬಡತನ ಬಳಸಿಕೊಂಡು ವೀಕ್ಷಣೆಗಳನ್ನು ಪಡೆದುಕೊಳ್ಳುತ್ತೀರಿ. ನಾಚಿಕೆ ಗೇಡಿನ ವಿಷಯ ಎಂದು ಖಾರವಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇನ್ನೊಬ್ಬರ ಹಸಿವು ನೀಗಿಸುವ ಕೆಲಸ ಒಳ್ಳೆಯದೇ, ಆದರೆ ವಿಡಿಯೋ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ದೃಶ್ಯ ನೋಡಿ ಕಣ್ಣಲ್ಲಿ ನೀರು ಬಂತು ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಮನೆಯಲ್ಲೇ ಅಡುಗೆ ಮಾಡಿಕೊಳ್ಳಿ, ತಿನ್ನಿ, ಕೆಲಸ ಮಾಡಿ: ಎಲ್​ಪಿಜಿ ಸಮಸ್ಯೆಗೆ ಎಚ್​ಸಿಎಲ್​ನಿಂದ ವರ್ಕ್ ಫ್ರಂ ಹೋಮ್ ಪರಿಹಾರ

ನವದೆಹಲಿ, ಮಾರ್ಚ್ 12: ಅಡುಗೆ ಅನಿಲದ ಕೊರತೆ ಭಾರತಾದ್ಯಂತ ಕಾಡುತ್ತಿದೆ. ಅದರಲ್ಲೂ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್​ಗಳು (LPG cylinder) ದುಬಾರಿಯಾಗಿರುವುದು ಮಾತ್ರವಲ್ಲ, ಅವು ಸಿಗುವುದೇ ದುಸ್ತರವಾಗಿದೆ. ಬೆಂಗಳೂರಿನ ಅನೇಕ ಹೋಟೆಲ್​ಗಳು ಈ ಬಿಕ್ಕಟ್ಟು ಬಗೆಹರಿಯುವವರೆಗೂ ಬಾಗಿಲು ಬಂದ್ ಮಾಡಲು ನಿರ್ಧರಿಸಿವೆ. ಕಾರ್ಪೊರೇಟ್ ಸಂಸ್ಥೆಗಳೂ ಕೂಡ ಈ ಬಿಸಿ ತಾಕಿಸಿಕೊಂಡಿವೆ. ಉದ್ಯೋಗಿಗಳಿಗೆ ದಿನವೂ ಅಡುಗೆ ಮಾಡಿಕೊಡಬೇಕಾದ ಕಾರ್ಪೊರೇಟ್ ಕಂಪನಿಗಳ ಕೆಫೆಟೇರಿಯಾಗಳಿಗೆ ಕಮರ್ಷಿಯಲ್ ಗ್ಯಾಸ್ ಸಿಗುವುದು ಕಷ್ಟವಾಗಿದೆ. ಹೀಗಾಗಿ, ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅವಕಾಶ ಕಲ್ಪಿಸಲು ಯೋಜಿಸಿವೆ. ವರದಿಗಳ ಪ್ರಕಾರ ಎಚ್​ಸಿಎಲ್​ಟೆಕ್ (HCLTech) ಕಂಪನಿಯು ಎರಡು ದಿನದ ಮಟ್ಟಿಗೆ ವರ್ಕ್ ಫ್ರಂ ಹೋಮ್ ಕೊಟ್ಟಿವೆ.

ಇಂದು ಮತ್ತು ನಾಳೆ, ಮಾರ್ಚ್ 12 ಮತ್ತು 13ರಂದು ಎಚ್​ಸಿಎಲ್​ಟೆಕ್​ನ ಚೆನ್ನೈ ಕಚೇರಿಯಲ್ಲಿರುವ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ತಿಳಿಸಲಾಗಿದೆ ಎಂದು ಮಿಂಟ್ ಪತ್ರಿಕೆಯ ವರದಿ ಮಾಡಿದೆ.

ಇದನ್ನೂ ಓದಿ: ಎಲ್​ಪಿಜಿ ಕೊರತೆ: ರಿಲಯನ್ಸ್‌ನಿಂದ ಜಾಮ್‌ನಗರದಲ್ಲಿ ಅನಿಲ ಉತ್ಪಾದನೆ ಹೆಚ್ಚಳದ ಬಗ್ಗೆ ಘೋಷಣೆ

ಎಚ್​ಸಿಎಲ್​ಟೆಕ್​ನಂತಹ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅವಕಾಶ ಕೊಟ್ಟರೆ, ಇತರ ಹಲವು ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಸೇಫ್ಟಿ ಪ್ರೋಟೋಕಾಲ್​ಗಳನ್ನು ಅಳವಡಿಸಿವೆ. ಇಂಟರ್ನಲ್ ವಾರ್ ರೂಮ್​ಗಳನ್ನು ಸ್ಥಾಪಿಸಿ ಪರಿಸ್ಥಿತಿಯನ್ನು ಲೈವ್ ಆಗಿ ನಿಭಾಯಿಸುವ ಪ್ರಯತ್ನ ಮಾಡುತ್ತಿವೆ.

ಇನ್​ಫೋಸಿಸ್ ಸಂಸ್ಥೆ ಬೆಂಗಳೂರಿನಲ್ಲಿರುವ ತಮ್ಮ ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಎಲ್​ಪಿಜಿ ಕೊರತೆಯಿಂದ ಕೆಫೆಟೇರಿಯಾದಲ್ಲಿ ಆಹಾರದ ಕೊರತೆ ಇರುವ ವಿಚಾರವನ್ನು ಮನದಟ್ಟು ಮಾಡಿದೆ. ಲೈವ್ ಫೂಡ್ ಕೌಂಟರ್​ಗಳನ್ನು ನಿಲ್ಲಿಸಲಾಗಿದೆ. ಮನೆಯಿಂದಲೇ ಅಡುಗೆ ಮಾಡಿಕೊಂಡು ಪಾರ್ಸಲ್ ತರಬೇಕೆಂದು ಕಂಪನಿ ತಿಳಿಸಿದೆ. ಚೆನ್ನೈನಲ್ಲಿರುವ ಇನ್ಫೋಸಿಸ್ ಕಚೇರಿಯ ಉದ್ಯೋಗಿಗಳಿಗೂ ಇದೇ ಸಲಹೆ ನೀಡಲಾಗಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಯುದ್ಧ ನಿಲ್ಲಿಸಲು ಇರಾನ್​ನ 3 ಷರತ್ತುಗಳು; ಭಾರತದ ಆರ್ಥಿಕತೆ ಮೇಲೇನು ಪರಿಣಾಮ? ಇಲ್ಲಿದೆ ಸಾಧ್ಯಾಸಾಧ್ಯತೆ

ಅಡುಗೆ ಅನಿಲದ ಪೂರೈಕೆಯಲ್ಲಿ ಸದ್ಯ ಯಾವ ಸಮಸ್ಯೆಯೂ ಇಲ್ಲ ಎಂದು ಸರ್ಕಾರ ಹೇಳಿದರೂ ದೇಶದ ಹೆಚ್ಚಿನ ಕಡೆ ಎಲ್​ಪಿಜಿ ಸಿಲಿಂಡರ್ ಸರಬರಾಜಿಗೆ ಧಕ್ಕೆಯಾಗಿದೆ. ಕಮರ್ಷಿಯಲ್ ಗ್ಯಾಸ್ ಮತ್ತು ಗೃಹಬಳಕೆ ಎಲ್​ಪಿಜಿ ಎರಡೂ ಕೂಡ ಅಡುಗೆ ಅನಿಲಗಳೇ ಆಗಿವೆ. ಗೃಹಬಳಕೆ ಗ್ಯಾಸ್ ಕೂಡ ಸಿಗುವುದು ದುಸ್ತರವೆನಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಯುವತಿಯರನ್ನು ಮನೆಯೊಳಗೆ ಕಳಿಸಿ , ಅತ್ಯಾಚಾರ ನಾಟಕವಾಡಿಸಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿ ಮದುವೆ ದಿನವೇ ಅರೆಸ್ಟ್

ಭೋಪಾಲ್, ಮಾರ್ಚ್​ 12: ಯುವತಿಯರನ್ನು ಯಾರ್ಯಾರದ್ದೋ ಮನೆಗೆ ಕಳುಹಿಸಿ, ಅತ್ಯಾಚಾರದ ನಾಟಕವಾಡಿಸಿ, ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಜನರನ್ನು ಬೆದರಿಸಿ ಅವರಿಂದ ಸುಲಿಗೆ ಮಾಡುವ ಗ್ಯಾಂಗ್ ಕಟ್ಟಿದ್ದ ಆಕಾಶ್ ನೀಲಕಂಠ್ ಎಂಬಾತನನ್ನು ಆತನ ಮದುವೆ(Marriage) ದಿನವೇ ಬಂಧಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್​​ನಲ್ಲಿ ನಡೆದಿದೆ. ಈ ದಂಧೆಯ ಹಿಂದಿನ ಮಾಸ್ಟರ್ ಮೈಂಡ್ ಆಕಾಶ್ ಅಲಿಯಾಸ್ ಭೂರಾ ಹಡ್ಡಿ ಅಲಿಯಾಸ್ ಆಕಾಶ್ ನೀಲಕಂಠ, ಈತ ಇಲ್ಲೀಗಲ್ ಗ್ಯಾಂಗ್ ಎಂಬ ಗ್ಯಾಂಗ್ ಅನ್ನು ಕಟ್ಟಿಕೊಂಡಿದ್ದ, ಆತನ ಮದುವೆ ಮೆರವಣಿಗೆಗೆ ಸಿದ್ಧತೆಗಳು ನಡೆಯುತ್ತಿರುವಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಈ ಗ್ಯಾಂಗ್‌ನಲ್ಲಿ ಸುಮಾರು 15 ಯುವಕರು ಮತ್ತು ಒಬ್ಬ ಯುವತಿಯಿದ್ದರು ಎಂದು ವರದಿಯಾಗಿದೆ. ಅವರು ಮೊದಲು ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ನಂತರ ಅವರನ್ನು ಬಲೆಗೆ ಬೀಳಿಸಲು ಸಂಚು ರೂಪಿಸುತ್ತಿದ್ದರು. ನಂತರ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಮಾನಸಿಕ ಒತ್ತಡವನ್ನು ಸೃಷ್ಟಿಸುತ್ತಿದ್ದರು ಮತ್ತು ನಂತರ ಅವರ ಬಳಿ ದೊಡ್ಡ ಮೊತ್ತದ ಹಣಬೇಡಿಕೆ ಇಡುತ್ತಿದ್ದರು.

ಈ ಗ್ಯಾಂಗ್‌ ಇತ್ತೀಚೆಗೆ ಕೊಹೆಫಿಜಾ ಪೊಲೀಸ್ ಠಾಣೆ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಯೊಬ್ಬರನ್ನು ಗುರಿಯಾಗಿಸಿಕೊಂಡಿತ್ತು, ಈ ಗ್ಯಾಂಗ್, ಯೋಜನೆಯ ಭಾಗವಾಗಿ, ರಾತ್ರಿಯಲ್ಲಿ ಯುವತಿಯನ್ನು ಅವರ ಮನೆಗೆ ಕಳುಹಿಸಿದೆ ಎಂದು ಆರೋಪಿಸಲಾಗಿದೆ. ಮನೆ ಮಾಲೀಕ ಬಾಗಿಲು ತೆರೆದ ತಕ್ಷಣ, ಯುವತಿ ಮನೆಗೆ ಪ್ರವೇಶಿಸಿ ಕೂಗಾಡಲು ಪ್ರಾರಂಭಿಸಿದಳು. ಸ್ವಲ್ಪ ಸಮಯದ ನಂತರ, 10 ರಿಂದ 15 ಯುವಕರು ಬಂದಿದ್ದರು. ಅವರು ಆತ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ಆರೋಪಿಸಿದ್ದರು ಮತ್ತು ಅವರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದ್ದರು.

ಮತ್ತಷ್ಟು ಓದಿ: ಈಕೆಗೆ ಅನುಕಂಪ ತೋರಿಸಿದ್ದೇ ತಪ್ಪಾಯಿತು: ಮದುವೆ ಹಾಲ್​​ನಲ್ಲಿ 120 ಗ್ರಾಂ ಚಿನ್ನಾಭರಣ ಕದ್ದ ಬುರ್ಖಾಧಾರಿ ಕಳ್ಳಿ

ನಂತರ ಆರೋಪಿಗಳು ಆತನನ್ನು ಬಲವಂತವಾಗಿ ವಾಹನದಲ್ಲಿ ಕೂರಿಸಿ, ಒಂದು ಕೋಣೆಗೆ ಕರೆದೊಯ್ದು ಸುಮಾರು ಐದು ಗಂಟೆಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಈ ಸಮಯದಲ್ಲಿ, ಅವರನ್ನು ಪದೇ ಪದೇ ಥಳಿಸಲಾಗಿತು ಮಾನಸಿಕವಾಗಿ ಬೆದರಿಸಿ ಎಂಟು ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟರು.
ಭಯ ಮತ್ತು ಒತ್ತಡದಲ್ಲಿ, ಆ ವ್ಯಕ್ತಿ ತನ್ನ ಸಹೋದರನಿಗೆ ಕರೆ ಮಾಡಿದ್ದರು. ನಂತರ, ಮೊದಲ ಕಂತಾಗಿ 50,000 ರೂಪಾಯಿಗಳನ್ನು ಆರೋಪಿಯ ಖಾತೆಗೆ ವರ್ಗಾಯಿಸಲಾಯಿತು.

ಉಳಿದ 750,000 ರೂಪಾಯಿಗಳನ್ನು ನಂತರ ಪಾವತಿಸಲಾಗುವುದು ಎಂದು ಒಪ್ಪಂದವಾಯಿತು. ಹಣವನ್ನು ಪಡೆದ ನಂತರ, ಆರೋಪಿ ಆ ವ್ಯಕ್ತಿಯನ್ನು ಬಿಡುಗಡೆ ಮಾಡಿದ್ದರು. ಬಿಡುಗಡೆಯಾದ ನಂತರ, ಆ ವ್ಯಕ್ತಿ ನೇರವಾಗಿ ಕೊಹೆಫಿಜಾ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು.
ಪೊಲೀಸ್ ತನಿಖೆಯಲ್ಲಿ ಪ್ರಮುಖ ಆರೋಪಿ ಆಕಾಶ್ ಅಲಿಯಾಸ್ ಭೂರಾ ಹಡ್ಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮದುವೆಯ ವೆಚ್ಚಕ್ಕೆ ಹಣದ ಅಗತ್ಯವಿತ್ತು ಎಂದು ತಿಳಿದುಬಂದಿದೆ.

ಆದ್ದರಿಂದ, ಅವನು ಮತ್ತು ಅವನ ಸಹಚರರು ಈ ಸಂಚು ರೂಪಿಸಿದ್ದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಪೊಲೀಸರು ತನಿಖೆ ಆರಂಭಿಸಿ ಬುಧವಾರ ಆರೋಪಿಯನ್ನು ಬಂಧಿಸಲು ಬಲೆ ಬೀಸಿದ್ದರು. ಆತನ ವಿವಾಹ ಮೆರವಣಿಗೆಗೆ ಸಿದ್ಧತೆಗಳು ನಡೆಯುತ್ತಿರುವಾಗ, ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ವಿವಾಹ ಸಮಾರಂಭದಲ್ಲೇ ಆತನನ್ನು ಬಂಧಿಸಿದ್ದಾರೆ.ಆತನ ಇಬ್ಬರು ಸಹಚರರಾದ ಆಕಾಶ್ ಉಪಾಧ್ಯಾಯ ಮತ್ತು ರಾಮ್ ಠಾಕೂರ್ ಅವರನ್ನು ಸಹ ಬಂಧಿಸಲಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

NEET-UG opportunities: ವೈದ್ಯಕೀಯ ಆಕಾಂಕ್ಷಿಗಳಿಗೆ ಗುಡ್​ ನ್ಯೂಸ್​​; 11,000ಕ್ಕೂ ಹೆಚ್ಚು MBBS ಸೀಟುಗಳ ಭರ್ಜರಿ ಹೆಚ್ಚಳ!

ವೈದ್ಯಕೀಯ ಶಿಕ್ಷಣದ ಕನಸು ಕಾಣುತ್ತಿರುವ ದೇಶದ ಸಾವಿರಾರು ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಈ ಬಾರಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG) ಬರೆಯುವ ಪದವಿಪೂರ್ವ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಪ್ರವೇಶ ಪಡೆಯಲು ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ. ರಾಷ್ಟ್ರೀಯ ವೈದ್ಯಕೀಯ ಮಂಡಳಿಯು (NMC) ತನ್ನ ವೆಬ್‌ಸೈಟ್‌ನಲ್ಲಿ ನೀಡಿರುವ ಅಧಿಕೃತ ಮಾಹಿತಿಯಂತೆ, 2026ರ ಶೈಕ್ಷಣಿಕ ವರ್ಷದಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಸರಿಸುಮಾರು 11,000ಕ್ಕೂ ಹೆಚ್ಚು ಹೊಸ ಸೀಟುಗಳು ಸೇರ್ಪಡೆಯಾಗಿವೆ. ಈ ಮಹತ್ವದ ನಿರ್ಧಾರವನ್ನು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಅವರು ಸಂಸತ್ತಿನಲ್ಲಿ ಪ್ರಕಟಿಸಿದ್ದು, ಇದು ವೈದ್ಯಕೀಯ ಆಕಾಂಕ್ಷಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.

ದೇಶದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ವರ್ಷ 44 ಹೊಸ ವೈದ್ಯಕೀಯ ಕಾಲೇಜುಗಳಿಗೆ ಮಾನ್ಯತೆ ನೀಡಲಾಗಿದೆ. ಇದರಿಂದಾಗಿ ದೇಶದಲ್ಲಿರುವ ಒಟ್ಟು ವೈದ್ಯಕೀಯ ಕಾಲೇಜುಗಳ ಸಂಖ್ಯೆ 780 ರಿಂದ 824 ಕ್ಕೆ ಏರಿಕೆಯಾಗಿದೆ. ಹೊಸ ಕಾಲೇಜುಗಳ ಸ್ಥಾಪನೆಯಿಂದಾಗಿ 2026-27ರ ಶೈಕ್ಷಣಿಕ ಸಾಲಿನಲ್ಲಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ಈ ಹಿಂದೆ ದೇಶದಲ್ಲಿ 1,18,190ರಷ್ಟಿದ್ದ ಒಟ್ಟು ಎಂಬಿಬಿಎಸ್ ಸೀಟುಗಳ ಸಂಖ್ಯೆ ಈಗ 1,29,603 ಕ್ಕೆ ಏರಿಕೆಯಾಗಿದ್ದು, ಸೀಟುಗಳ ಕೊರತೆಯಿಂದಾಗಿ ವಿದೇಶಕ್ಕೆ ಹೋಗುತ್ತಿದ್ದ ಅಥವಾ ಪ್ರವೇಶದಿಂದ ವಂಚಿತರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಈಗ ಭಾರತದಲ್ಲೇ ಓದಲು ಉತ್ತಮ ಅವಕಾಶ ದೊರೆತಂತಾಗಿದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ: 10th ಪಾಸಾಗಿದ್ರೆ ಸಾಕು!

ಕೇವಲ ಎಂಬಿಬಿಎಸ್ ಮಾತ್ರವಲ್ಲದೆ, ಸ್ನಾತಕೋತ್ತರ (Post Graduate) ವೈದ್ಯಕೀಯ ಶಿಕ್ಷಣದ ಸೀಟುಗಳಲ್ಲೂ ಕೂಡ ದೊಡ್ಡ ಮಟ್ಟದ ಏರಿಕೆ ಕಂಡುಬಂದಿದೆ. ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಅವರ ಮಾಹಿತಿಯಂತೆ, ನೀಟ್ ಪಿಜಿ ವಿಭಾಗದಲ್ಲಿ 8,967 ಸೀಟುಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಇದರಲ್ಲಿ ಏಮ್ಸ್ (AIIMS) ನಂತಹ ಪ್ರತಿಷ್ಠಿತ ಸಂಸ್ಥೆಗಳ ಸೀಟುಗಳೂ ಒಳಗೊಂಡಿರುವುದು ವಿಶೇಷ. ವೈದ್ಯಕೀಯ ಸೀಟುಗಳ ಈ ಬೃಹತ್ ಹೆಚ್ಚಳವು ದೇಶದ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸುವುದಲ್ಲದೆ, ಭವಿಷ್ಯದಲ್ಲಿ ಹೆಚ್ಚಿನ ಸಂಖ್ಯೆಯ ನುರಿತ ವೈದ್ಯರು ಲಭ್ಯವಾಗುವಂತೆ ಮಾಡಲಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಡಿಕೇರಿ ಡಬಲ್ ಮರ್ಡರ್​​​​ ಕೇಸಿಗೆ ಬಿಗ್ ಟ್ವಿಸ್ಟ್:ಹೆಂಡ್ತಿ ಇದ್ರೂ ತಂಗಿ ಸಂಗ ಬೆಳೆಸಿದ್ದ ಅಣ್ಣ

ಕೊಡಗು, (ಮಾರ್ಚ್ 12): ಮಡಿಕೇರಿ (Madikeri) ತಾಲೂಕಿನ ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ (Kodagu Double Murder case) ಬಿಗ್ ಟ್ವಿಸ್ಟ್ ಸಿಕ್ಕಿದೆ. ಯಶೋಧಾ(45) ಹಾಗೂ ಕುಂಞರಾಮ(47) ಕೊಲೆಯಾದ ಜೋಡಿ. ಈ ಡಬಲ್ ಮರ್ಡರ್​​​ ಕುಂದಚೇರಿ ಗ್ರಾಮವನ್ನೇ ಬೆಚ್ಚಿ ಬೀಳಿಸಿದ್ದು, ಇದೀಗ ಪೊಲೀಸರ ಪ್ರಾಥನಿಕ ತನಿಖೆಯಲ್ಲಿ ಈ ಜೋಡಿ ಕೊಲೆ ರಹಸ್ಯ ಬಯಲಿಗೆ ಬಂದಿದೆ.  ಹೌದು.. ಸ್ವಂತ ಅಕ್ಕ ತಂಗಿಯರ ಮಕ್ಕಳ ಮಧ್ಯೆಯೇ ಅಕ್ರಮ ಸಂಬಂಧ ಬೆಳೆದಿದೆ. ಯಶೋಧಾ ಮತ್ತು ಕುಂಞರಾಮ ಇವರಿಬ್ಬರು ಸಂಬಂಧದಲ್ಲಿ ಅಣ್ಣ ತಂಗಿ. ಆದ್ರೆ, ಈ ಇವರಿಬ್ಬರು ಪವಿತ್ರ ಸಂಬಂಧವನ್ನೇ ಮೀರಿ ಅಕ್ರಮ ಸಂಬಂಧ ಹೊಂದಿದ್ದು, ಬಳಿಕ ಇಬ್ಬರು ಲಿವಿಂಗ್ ಟುಗೆದರ್​​​​ನಲ್ಲಿದ್ದರು. ಇನ್ನು ಹಂತಕ ಚಂದ್ರು ಸಹ ಯಶೋಧಾ ಮತ್ತು ಕುಂಞರಾಮಗೆ ಸಹೋದರನಾಗಬೇಕು. ಆದ್ರೆ,  ಯಶೋಧಾ ಮತ್ತು ಕುಂಞರಾಮ ಅಕ್ರಮ ಸಂಬಂಧ ಹೊಂದಿದ್ದರಿಂದ ಆಕ್ರೋಶಗೊಂಡು  ಇಬ್ಬರನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.

ಅಣ್ಣ-ತಂಗಿ ನಡುವೆ ಅಕ್ರಮ ಸಂಬಂಧ

ನಿನ್ನೆ (ಮಾರ್ಚ್ 11) ಇವರ ಊರಲ್ಲಿ ನಾಮಕರಣ ಸಮಾರಂಭವೊಂದು ನಡೆದಿದೆ. ಅಲ್ಲಿಗೆ ತೆರಳಿದ್ದ ಈ ಮಂದಿ ಗುಂಡು ತುಂಡು ಪಾರ್ಟಿ ಮಾಡಿ ತಮ್ಮ ತಮ್ಮ ಮನೆಗೆ ಮರಳಿದ್ದಾರೆ. ಆದ್ರೆ ರಾತ್ರಿ ಚಂದು ಎಂಬಾತನಿಗೆ ಅದೇನಾಯ್ತೋ ಗೊತ್ತಿಲ್ಲ. ಮಚ್ಚು ಹಿಡಿದು ನೇರವಾಗಿ ತನ್ನ ಮಲಸಹೋದರಿ ಮನೆಗೆ ತೆರಳಿ ಯಶೋಧಳ ಮತ್ತು ಆಕೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕುಂಞರಾಮನನ್ನ ಕೊಚ್ಚಿ ಕೊಲೆ ಮಾಡಿದ್ದಾನೆ. ಮಚ್ಚಿನೇಟಿಗೆ ಇಬ್ಬರೂ ಮಲಗಿದ್ದಲ್ಲೇ ಉಸಿರು ಚೆಲ್ಲಿದ್ದಾರೆ. ಇನ್ನು ಎರೆಡು ದೇಹಗಳು ಉರುಳಲು ಕಾರಣ ಮಾತ್ರ ಬಹಳ ವಿಚಿತ್ರವಾಗಿದೆ. ಕೊಲೆಯಾದ ಯಶೋಧ, ಕುಂಞರಾಮ ಮತ್ತು ಕೊಲೆ ಆರೋಪಿ ಚಂದು ಸಂಬಂಧದಲ್ಲಿ ಸಹೋದರಿ ಸಹೋದರರು ಆಗಬೇಕು. ಹೇಗಂದ್ರೆ ಕೊಲೆಯಾದ ಯಶೋಧಳ ತಾಯಿ, ಕುಂಞಇರಾಮನ ತಾಯಿ ನಾರಾಯಣೀ ಮತ್ತು ಕೊಲೆ ಆರೋಪಿ ಚಂದುವಿನ ತಾಯಿ ಸ್ವಂತ ಅಕ್ಕತಂಗಿಯರು. ಆದ್ರೆ, ಇಲ್ಲಿ ಸ್ವಂತ ಅಕ್ಕ ತಂಗಿಯರ ಮಕ್ಕಳ ಮಧ್ಯೆಯೇ ಅಕ್ರಮ ಸಂಬಂಧ ಬೆಳೆದಿದೆ.

ಇದನ್ನೂ ಓದಿ: ಮದ್ಯದ ನಶೆಯಲ್ಲಿದ್ದವ ಹರಿಸಿದ್ದು ರಕ್ತದಕೋಡಿ: ಡಬಲ್​​ ಮರ್ಡರ್​​ಗೆ ಬೆಚ್ಚಿಬಿದ್ದ ಭಾಗಮಂಡಲ

ಮಲಗಿದ್ದ ಅಣ್ಣ-ತಂಗಿ ಮೇಲೇಳಲೇ ಇಲ್ಲ

ಕೊಲೆಯಾದ ಕುಂಞಇರಾಮ ಎರಡು ವರ್ಷಗಳ ಹಿಂದೆ ಪತ್ನಿ ಕಲ್ಯಾಣಿಯನ್ನ ತ್ಯಜಿಸಿ ತನ್ನ ಸಹೋದರಿ ಯಶೋಧಳ ಜೊತೆ ಸಂಬಂಧ ಬೆಳೆಸಿದ್ದ. ಎರಡು ವರ್ಷಗಳಿಂದ ಇವರಿಬ್ಬರು ಒಟ್ಟಿಗೆ ನೆಲೆಸಿದ್ದರು. ಇದು ಸಹೋದರ ಸಂಬಂಧಿ ಚಂದುವಿಗೆ ಇಷ್ಟವಿರಲಿಲ್ಲ. ಅಲ್ಲದೇ ಚಂದುವಿಗೆ ಯಶೋಧಳ ಮೇಲೆ ಮನಸ್ಸಿತ್ತು ಎನ್ನಲಾಗಿದೆ. ಇದನ್ನ ಅಲ್ಲಿನವರ ಜೊತೆ ಈ ಹಿಂದೆಯೂ ಬಹಳಷ್ಟು ಬಾರಿ ಹೇಳಿದ್ದನಂತೆ. ಆದ್ರೆ ಮಾರ್​ಚ್ 11ರಂದು ಕುಡಿದ ಮತ್ತಿನಲ್ಲಿ ಯಶೋಧಳ ಮನೆಗೆ ತೆರಳಿ ನೋಡಿದಾಗ ಯಶೋಧ -ಕುಂಞರಾಮ ಒಟ್ಟಿಗೆ ಇರುವುದು ಕಂಡು ಮತ್ತಷ್ಟು ಆಕ್ರೋಶಗೊಡಿದ್ದು, ಏನು ನೋಡದೇ ಇಬ್ಬರ ಮೇಲೆ ಮನಸೋಇಚ್ಛೆ ಮಚ್ಚಿನಿಂದ ದಾಳಿ ಮಾಡಿದ್ದಾನೆ. ಪರಿಣಾಮ ಮಲಗಿದ್ದ ಯಶೋಧ ಹಾಗೂ ಕುಂಞರಾಮ ಮೇಲೇಳಲೇ ಇಲ್ಲ.

ಈ ಪ್ರಕರಣ ಕೇವಲ ಒಂದು ಅಪರಾಧವಾಗಿ ಮಾತ್ರವಲ್ಲದೆ, ಅಡಿಯ ಜನಾಂಗದ ನಿಕೃಷ್ಟ ಪರಿಸ್ಥಿತಿಯನ್ನ ಬಯಲಿಗೆಳೆದಿದೆ. ಸುಶಿಕ್ಷಿತರಾಗದೇ ಇರುವುದು, ಕಾನೂನಿನ ಕೊರತೆ, ಇವರನ್ನ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಇವೆಲ್ಲವೂ ಕೂಡ ಇದೀಗ ಚರ್ಚೆಗೆ ಗ್ರಾಸ ವಾಗಿದೆ. ಸದ್ಯ ಕೊಲೆ ಆರೋಪಿ ಚಂದುವನ್ನ ಬಂಧಿಸಿರೋ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಸ್ಕರ್ ಅವಾರ್ಡ್​​​ಗೆ ಇರಾನ್ ಡ್ರೋನ್ ದಾಳಿ ಭೀತಿ; ಎಚ್ಚರಿಸಿದ ಪೊಲೀಸರು

ಆಸ್ಕರ್ ಅವಾರ್ಡ್ (Oscar Awards) ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಅಮೆರಿಕದ ಲಾಸ್ ಎಂಜಲೀಸ್​​​ನಲ್ಲಿರುವ ಹಾಲಿವುಡ್ ಸ್ಟುಡಿಯೋದ ಡಾಲ್ಬಿ ಥಿಯೇಟರ್​​​ನಲ್ಲಿ ನಡೆಯಲಿದೆ. ಈಗ ಈ ಶೋಗೆ ಇರಾನ್ ದಾಳಿಯ ಭಯ ಕಾಡುತ್ತಿದೆ. ಅಮೆರಿಕ, ಇಸ್ರೇಲ್ vs ಇರಾನ್ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ದಾಳಿ-ಪ್ರತಿದಾಳಿಗಳು ನಡೆಯುತ್ತಲೇ ಇವೆ. ಅಮೆರಿಕದ ಕ್ಯಾಲಿಫೋರ್ನಿಯಾ ಮೇಲೆ ದಾಳಿ ನಡೆಯುವ ಆತಂಕವೂ ಇದೆ.

ಸದ್ಯ ಹಾಲಿವುಡ್ ಸ್ಟುಡಿಯೋದಲ್ಲಿ ಆಸ್ಕರ್​ ಅವಾರ್ಡ್​​ಗೆ ಸಿದ್ಧತೆಗಳು ನಡೆಯುತ್ತಿವೆ. ಸಿನಿಮಾ ಜಗತ್ತಿನ ದೊಡ್ಡ ಹಬ್ಬದ ಆಚರಣೆಗೆ ಎಲ್ಲರೂ ರೆಡಿ ಆಗುತ್ತಿದ್ದಾರೆ. ಈ ಮಧ್ಯೆ ಎಫ್​​​ಬಿಐ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಆಸ್ಕರ್ ನಡೆಯುವ ಜಾಗದಲ್ಲಿ ಭದ್ರತೆ ಹೆಚ್ಚುಸುವಂತೆ ಸೂಚಿಸಿದ್ದಾರೆ. ಡ್ರೋನ್ ದಾಳಿ ನಡೆಯುವ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ತೀವ್ರ ಕಾಡ್ಗಿಚ್ಚು; ಆಸ್ಕರ್ ಅವಾರ್ಡ್ ಕಾರ್ಯಕ್ರಮ ರದ್ದು?

ಎಬಿಸಿ ನ್ಯೂಸ್ ವರದಿ ಮಾಡಿದ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಇರಾನ್ ಹಾಗೂ ಇಸ್ರೇಲ್ ಮಧ್ಯೆ ಯುದ್ಧ ಭೀತಿ ಮೂಡಿದೆ. ಇರಾನ್ ಮೇಲೆ ಅಮೆರಿಕ ನಡೆಸಿರುವ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಪಶ್ಚಿಮ ಕರಾವಳಿಯತ್ತ ಇರಾನ್ ಡ್ರೋನ್‌ ದಾಳಿ ಮಾಡಬಹುದು ಎನ್ನಲಾಗಿದೆ. ಆಸ್ಕರ್ ಅವಾರ್ಡ್​​​ ಕಾರ್ಯಕ್ರಮದಲ್ಲಿ ಸಾಕಷ್ಟು ದೊಡ್ಡ ಸೆಲೆಬ್ರಿಟಿಗಳು ಭಾಗಿ ಆಗುತ್ತಾರೆ. ಈ ಸಂದರ್ಭದಲ್ಲಿ ದಾಳಿ ನಡೆದರೆ ಅಮೆರಿಕಕ್ಕೆ ಭಾರೀ ನಷ್ಟ ಉಂಟಾಗಲಿದೆ.
ಫೆಬ್ರವರಿ ತಿಂಗಳಲ್ಲಿ ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿತು. ಈ ಮೂಲಕ ಅವರ ಸುಪ್ರೀಂ ನಾಯಕ, ಅಯತೊಲ್ಲಾ ಅಲಿ ಖಮೇನಿ ಹತ್ಯೆ ಮಾಡಿದರು. ಇದು ಇರಾನ್​​ನ ಕೆರಳಿಸಿದೆ.

ಅಕಾಡೆಮಿ ಅವಾರ್ಡ್ಸ್ ಕಾರ್ಯಮ್ರಮದ ದಿನಾಂಕ

98ನೇ ಸಾಲಿನ ಆಸ್ಕರ್ ಅವಾರ್ಡ್ಸ್ 2026ರ ಮಾರ್ಚ್ 15ರಂದು (ಭಾರತೀಯ ಕಾಲಮಾನ: ಮಾರ್ಚ್ 16, ಮುಂಜಾನೆ 4.30) ನಡೆಯಲಿದೆ. ಕಾಮಿಡಿಯನ್ ಒ ಬ್ರೇನ್ ಅವರು ಈ ಶೋನ ನಡೆಸಿಕೊಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಾಲು ಉತ್ಪಾದಕರಿಗೆ ಯುಗಾದಿ ಗಿಫ್ಟ್​​: ಲೀಟರ್ ಹಾಲಿಗೆ ಪ್ರೋತ್ಸಾಹ ಧನ ಘೋಷಿಸಿದ ಬಮೂಲ್

ಬೆಂಗಳೂರು, ಮಾರ್ಚ್​​ 12: ಬೆಂಗಳೂರು ಸಹಕಾರ ಹಾಲು ಒಕ್ಕೂಟ (BAMUL) ಲೀಟರ್ ಹಾಲಿಗೆ 1 ರೂ. ಪ್ರೋತ್ಸಾಹ ಧನ ಘೋಷಿಸಿದೆ. ಆ ಮೂಲಕ ಹಾಲು ಉತ್ಪಾದಕರಿಗೆ ಯುಗಾದಿ ಉಡುಗೊರೆ ನೀಡಿದೆ. ಸರ್ಕಾರದಿಂದಲೂ 5 ರೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಬಮೂಲ್​ನಿಂದ ಯಾವುದೇ ತಾರತಮ್ಯ ಇಲ್ಲದೆ ಎಲ್ಲರಿಗೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಏಪ್ರಿಲ್ 1ರಿಂದ ಮಾರ್ಚ್ 31ವರೆಗೆ ಹಾಲು ಹಾಕಿರುವವರಿಗೆ ಇದು ಲಭ್ಯವಾಗಲಿದೆ.

ಬಮೂಲ್​ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಬಮೂಲ್​ ಅಧ್ಯಕ್ಷ ಡಿ.ಕೆ.ಸುರೇಶ್​​ ಪ್ರತಿಕ್ರಿಯಿಸಿದ್ದು, ಯಾವುದೇ ತಾರತಮ್ಯ ಇಲ್ಲದೆ ಬಮೂಲ್​ನಿಂದ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ರಾಜ್ಯ ಸರ್ಕಾರವೂ 5 ರೂಪಾಯಿ ಪ್ರೋತ್ಸಾಹ ಧನ ಕೊಡುತ್ತಿದೆ. ರೈತರಿಂದ 59,39,78,492 ಲೀಟರ್​ ಹಾಲು ಖರೀದಿಸಿದ್ದೇವೆ. ಈ ಬಾರಿ 500 ಕೋಟಿ ಹೆಚ್ಚುವರಿ ಟರ್ನ್ ಓವರ್ ಮಾಡುವ ಗುರಿ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಮೂಲ್​ ನೂತನ ಅಧ್ಯಕ್ಷರಾಗಿ ಡಿಕೆ ಸುರೇಶ್​ ಆಯ್ಕೆ

ಕಾರ್ಮಿಕರಿಗೆ ಸುಮಾರು 6 ಕೋಟಿ ರೂಪಾಯಿ ಡಿಎ ಕೊಡಬೇಕು. ನಾವೂ ಸುಮಾರು 60 ಕೋಟಿ ರೂ ಲಾಭ ಗಳಿಸುವ ಮಟ್ಟಿಗೆ ಬಂದಿದ್ದೇವೆ. ಹೀಗಾಗಿ ಸಿಬ್ಬಂದಿಗೆ ಬಾಕಿ ಇದ್ದ ಹಣ ಕೊಡಲು ತೀರ್ಮಾನಿಸಲಾಯಿತು. ಗುತ್ತಿಗೆದಾರರಿಗೆ 5 ಸಾವಿರ ಬೋನಸ್ ಕೊಡುತ್ತೇವೆ. ಗುಣಮಟ್ಟದ ಹಾಲು ಕೊಡುವ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಡಿ.ಕೆ.ಸುರೇಶ್​ ಹೇಳಿದ್ದಾರೆ.

ಮಾರುಕಟ್ಟೆ ಸೋರಿಕೆ ತಡೆದಿದ್ದೇವೆ. ತುಪ್ಪದ ಬೆಲೆ ಜಾಸ್ತಿ ಮಾಡಿದ್ದೇವೆ. ಚೀಸ್ ಜಾಸ್ತಿ ಮಾರಾಟವಾಗುತ್ತಿದೆ. ಗುಣಮಟ್ಟ ಇದೆ. ಡೆಲ್ಲಿ ಮದರ್ ಡೈರಿಗೆ 2 ಲಕ್ಷ ಕೊಡುತ್ತಿದ್ದೇವೆ. ದುಂದು ವೆಚ್ಚ ಕಡಿಮೆ ಮಾಡಿದ್ದೇವೆ. ಸಿಬ್ಬಂದಿ ಮತ್ತು ಮಾರುಕಟ್ಟೆ ಸುಧಾರಣೆ ಮಾಡಲಾಗಿದ್ದು, ಈ ಎಲ್ಲಾ ಕೆಲವು ಕಾರಣಗಳಿಂದ ಲಾಭ ಹೆಚ್ಚಾಗಿದೆ ಎಂದಿದ್ದಾರೆ.

ಸರ್ಕಾರಕ್ಕೆ ಮನವಿ

ಇನ್ನು ಕ್ಷೀರ ಭಾಗ್ಯಕ್ಕೆ 75 ಸಾವಿರ ಲೀಟರ್ ಪೌಡರ್ ಆಗಿ ಕನ್ವರ್ಟ್ ಮಾಡಿ ಕೊಡುತ್ತಿದ್ದೇವೆ. ರಾಗಿ ಮಾಲ್ಟ್ ಜೊತೆ ಹಾಲು ಮಿಕ್ಸ್ ಮಾಡಿ ಕೂಡ ನಾವೂ ಕೊಡಲು ಸಿದ್ಧ. ಈ ಕುರಿತು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಬಮೂಲ್​ ಅಧ್ಯಕ್ಷ ಡಿ.ಕೆ.ಸುರೇಶ್ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link