ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಮಾಡಿ, ಅಸಭ್ಯ ಸಂದೇಶ ಕಳಿಸುವವರಿಗೆ ತಕ್ಕ ಪಾಠ ಕಲಿಸಲು ನಟಿ ರಮ್ಯಾ ದಿವ್ಯ ಸ್ಪಂದನಾ (Ramya Divya Spandana) ಅವರು ಕಾನೂನಿನ ಹಾದಿ ಹಿಡಿದಿದ್ದಾರೆ. ಈ ಪ್ರಕರಣದ ವಿಚಾರಣೆ ಆರಂಭ ಆಗಿದ್ದು, ರಮ್ಯಾ ಅವರು ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ‘ಈ ಪ್ರಕರಣದಲ್ಲಿ ಜಡ್ಜ್ ಏನು ತೀರ್ಪು ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ಒಂದು ಮಾದರಿ ನಿರ್ಮಾಣ ಆಗುತ್ತದೆ. ಆಗ ಜನರಿಗೆ ಒಂದು ಭಯ ಬರುತ್ತದೆ. ಅಂಥ ಕಮೆಂಟ್ ಮಾಡುವುದಕ್ಕೂ ಮುಂಚೆ ಯೋಚನೆ ಮಾಡುತ್ತಾರೆ. ಯಾಕೆಂದರೆ, 2 ವರ್ಷದಿಂದ 7 ವರ್ಷಗಳ ಜೈಲು ಶಿಕ್ಷೆ ಆಗಬಹುದು. ಅವರು ಸಾಮಾನ್ಯವಾಗಿ ಟ್ರೋಲ್ ಮಾಡಿಲ್ಲ. ಮಕ್ಕಳನ್ನೂ ಸೇರಿಸಿ ಟ್ರೋಲ್ ಮಾಡಿದ್ದಾರೆ. ಹೆಂಡ್ತಿ, ಮಕ್ಕಳನ್ನು ಪೊಲೀಸರ ಎದುರಲ್ಲೇ ರೇಪ್ ಮಾಡುತ್ತೇವೆ, ಕೊಲೆ ಮಾಡುತ್ತೇವೆ ಅಂತ ಹೇಳಿದ್ದಾರೆ. ಇದನ್ನು ನಾನು ಸುಮ್ಮನೆ ಬಿಟ್ಟರೆ ಸಾಮಾನ್ಯ ಹೆಣ್ಣು ಮಕ್ಕಳ ಪರಿಸ್ಥಿತಿ ಏನಾಗಹುದು’ ಎಂದು ರಮ್ಯಾ (Ramya) ಅವರು ಹೇಳಿದ್ದಾರೆ.
ತುಮಕೂರು, (ಮಾರ್ಚ್ 10): ಎರಡು ವರ್ಷದ ಮಗುವಿನ ಜೊತೆ ತಾಯಿ ಒಂದೇ ಕುಣಿಕೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತುಮಕೂರು (Tumakuru) ಜಿಲ್ಲೆ ಗುಬ್ಬಿ ತಾಲ್ಲೂಕಿನ ಹಾಗಲವಾಡಿಯಲ್ಲಿ ನಡೆದಿದೆ, ಗಂಗಾಮಣಿ(30), ಪ್ರೇಕ್ಷಾ (2) ಮೃತರು. ಗಂಗಾಮಣಿ ತನ್ನೊಟ್ಟಿಗೆ ಏನು ಅರಿಯದ 2 ವರ್ಷದ ಮಗುವಿನ ಕುತ್ತಿಗೆಗೆ ಕುಣಿಕೆ ಹಾಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಗರ್ಭಕೋಶದ ಸಮಸ್ಯೆಯಿಂದ ಮನನೊಂದು ಮಹಿಳೆ ಈ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಇನ್ನೆರಡು ಮಕ್ಕಳು ಸಾವಿನ ಮನೆಯಿಂದ ಪಾರಾಗಿವೆ.
ಎಂಟು ವರ್ಷದ ಹಿಂದೆ ಯತೀಶ್ ಎಂಬಾತನ ಜೊತೆ ಗಂಗಾಮಣಿ ವಿವಾಹವಾಗಿದ್ದು, ದಂಪತಿಗೆ ಮೂರು ಮಕ್ಕಳು. ವೃತ್ತಿಯಲ್ಲಿ ಕ್ಯಾಂಟರ್ ಡ್ರೈವರ್ ಆಗಿರುವ ಯತೀಶ್, ಎಂದಿನಿಂತೆ ಇಂದು(ಮಾರ್ಚ್ 10) ಕೆಲಸಕ್ಕೆ ತೆರಳಿದ್ದಾರೆ. ಇನ್ನು ಇಬ್ಬರು ಮಕ್ಕಳು ವಿನಯ್ (7) ಹಾಗೂ ರಕ್ಷಿತಾ (5) ಶಾಲೆಗೆ ಹೋಗಿದ್ದಾರೆ. ಆಗ ಮನೆಯಲ್ಲಿ ಯಾರು ಇಲ್ಲದ ವೇಳೆ ಗಂಗಾಮಣಿ ತನ್ನ ಎರಡು ವರ್ಷದ ಪ್ರೇಕ್ಷಾ ಜೊತೆ ನೇಣಿಗೆ ಶರಣಾಗಿದ್ದಾಳೆ.
ಇನ್ನು ಮಕ್ಕಳು ಶಾಲೆಯಿಂದ ಮನೆಗೆ ಬಂದಿದ್ದಾರೆ. ಆದ್ರೆ, ಮನೆ ಒಳಗಿನಿಂದ ಲಾಕ್ ಆಗಿದ್ದು, ಇದನ್ನು ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾರೆ. ಬಳಿಕ ಪಕ್ಕದ ಮನೆಯವರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೊರಗಿನ ಧೂಳು, ಮಾಲಿನ್ಯದ ಕಾರಣದಿಂದ ಚರ್ಮಕ್ಕೆ ಹಾನಿ ಉಂಟಾಗುತ್ತದೆ. ಅಲ್ಲದೆ ದಿನನಿತ್ಯದ ಒತ್ತಡದ ಪರಿಣಾಮಗಳೂ ಮುಖದ ಮೇಲೆ ಗೋಚರಿಸುತ್ತವೆ. ಆದ್ದರಿಂದ ಚರ್ಮದ ಆರೈಕೆಯ (skin care) ಬಗ್ಗೆ ಗಮನವಹಿಸಬೇಕು. ಅದರಲ್ಲೂ ತ್ವಚೆ ಕಾಂತಿಯುತವಾಗಿರಲು, ಆರೋಗ್ಯಕರವಾಗಿರಲು ಮಲಗುವ ಮುನ್ನ ತ್ವಚೆಯ ಆರೈಕೆಯ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು. ಇದಕ್ಕಾಗಿ ದುಬಾರಿ ಸ್ಕಿನ್ಕೇರ್ಗಳ ಮೊರೆ ಹೋಗುವ ಅವಶ್ಯಕತೆಯಿಲ್ಲ. ಮಲಗುವ ಮುನ್ನ ಮುಖಕ್ಕೆ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿದರೆ ಸಾಕು. ತೆಂಗಿನ ಎಣ್ಣೆಯಲ್ಲಿರುವ ಉತ್ಕರ್ಷಣ ನಿರೋಧಕಗಳು, ಕೊಬ್ಬಿನಾಮ್ಲಗಳು ಮತ್ತು ಆರ್ಧ್ರಕ ಗುಣಲಕ್ಷಣಗಳು ಚರ್ಮವನ್ನು ಆಳವಾಗಿ ಪೋಷಿಸಲು ಸಹಾಯ ಮಾಡುತ್ತದೆ. ಇದರಿಂದ ತ್ವಚೆಯ ಹೊಳಪು ಹೆಚ್ಚುವುದು ಮಾತ್ರವಲ್ಲ ಈ ಪ್ರಯೋಜನಗಳೂ ಲಭಿಸುತ್ತವೆ.
ಮುಖಕ್ಕೆ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಲಭಿಸುವ ಪ್ರಯೋಜನಗಳು:
ಆಳವಾದ ಮಾಯಿಶ್ಚರೈಸರ್ : ತೆಂಗಿನ ಎಣ್ಣೆ ಅತ್ಯುತ್ತಮವಾದ ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು, ಮಲಗುವ ಮುನ್ನ ಇದನ್ನು ಮುಖಕ್ಕೆ ಹಚ್ಚುವುದರಿಂದ ರಾತ್ರಿಯಿಡೀ ನಿಮ್ಮ ಚರ್ಮವು ತೇವಾಂಶದಿಂದ ಕೂಡಿರುತ್ತದೆ ಮತ್ತು ಇದು ಶುಷ್ಕತೆಯನ್ನು ತಡೆಯಲು ಸಹಾಯ ಮಾಡುತ್ತದೆ.
ನೈಸರ್ಗಿಕ ಹೊಳಪು: ತೆಂಗಿನ ಎಣ್ಣೆ ತ್ವಚೆಯ ಸತ್ತ ಚರ್ಮವನ್ನು ಹೊರಹಾಕುತ್ತದೆ, ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ ಮತ್ತು ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ ತ್ವಚೆ ಕಾಂತಿಯುತವಾಗಿರಲು ಪ್ರತಿದಿನ ರಾತ್ರಿ ಮಲಗುವ ಮುನ್ನ ತೆಂಗಿನ ಎಣ್ಣೆಯನ್ನು ಮುಖಕ್ಕೆ ಹಚ್ಚಿ.
ಮೊಡವೆಗಳನ್ನು ಹೋಗಲಾಡಿಸುತ್ತದೆ: ತೆಂಗಿನ ಎಣ್ಣೆಯು ಲಾರಿಕ್ ಆಮ್ಲದಂತಹ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿದ್ದು, ಇದು ಮೊಡವೆ ಉಂಟುಮಾಡುವ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ಮತ್ತು ಚರ್ಮವನ್ನು ತೇವಗೊಳಿಸಲು ಸಹಾಯ ಮಾಡುತ್ತದೆ. ಇದು ಸುಕ್ಕುಗಳು ಮತ್ತು ಶುಷ್ಕತೆಯನ್ನು ಸಹ ಕಡಿಮೆ ಮಾಡುತ್ತದೆ.
ಕಪ್ಪು ವರ್ತುಲಗಳನ್ನು ನಿವಾರಿಸುತ್ತದೆ: ತೆಂಗಿನ ಎಣ್ಣೆ ಕಣ್ಣುಗಳ ಕೆಳಗಿನ ಕಪ್ಪು ವರ್ತುಲಗಳನ್ನು ತೆಗೆದುಹಾಕಲು ಅತ್ಯುತ್ತಮ ಪರಿಹಾರವಾಗಿದೆ. ರಾತ್ರಿ ಮಲಗುವ ಮುನ್ನ ತೆಂಗಿನ ಎಣ್ಣೆಯಿಂದ ಕಣ್ಣುಗಳ ಸುತ್ತಲೂ ನಿಧಾನವಾಗಿ ಮಸಾಜ್ ಮಾಡುವುದರಿಂದ ಆಯಾಸ ನಿವಾರಣೆಯಾಗುತ್ತದೆ ಮತ್ತು ಕಪ್ಪು ವರ್ತುಲಗಳು ಕಡಿಮೆಯಾಗುತ್ತವೆ. ಇದಲ್ಲದೆ, ಇದು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ತರುತ್ತದೆ.
ಕಪ್ಪು ಕಲೆಗಳಿಗಳನ್ನು ನಿವಾರಿಸುತ್ತದೆ: ಮಲಗುವ ಮುನ್ನ ಮುಖವನ್ನು ಚೆನ್ನಾಗಿ ತೊಳೆಯಿರಿ. ನಿಮ್ಮ ಅಂಗೈಗಳಿಗೆ ಎಣ್ಣೆ ಹಚ್ಚಿ ಕಲೆಗಳ ಮೇಲೆ ಉಜ್ಜಿಕೊಳ್ಳಿ. ನಿಮ್ಮ ಮುಖವನ್ನು ಮಸಾಜ್ ಮಾಡಿ ರಾತ್ರಿಯಿಡೀ ಬಿಡಿ. ಇದು ಕಪ್ಪು ಕಲೆಗಳನ್ನು ತೆಗೆದುಹಾಕಲು ಮತ್ತು ನಿಮ್ಮ ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ.
ತೆಂಗಿನ ಎಣ್ಣೆಯನ್ನು ಬಳಸುವ ಸರಿಯಾದ ವಿಧಾನ:
ಮೊದಲು, ನಿಮ್ಮ ಮುಖವನ್ನು ಸೌಮ್ಯವಾದ ಫೇಸ್ ವಾಶ್ ನಿಂದ ತೊಳೆಯಿರಿ. ನಂತರ ನಿಮ್ಮ ಅಂಗೈಯಲ್ಲಿ 4-5 ಹನಿ ಶುದ್ಧ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ಮುಖವನ್ನು ವೃತ್ತಾಕಾರದ ಚಲನೆಯಲ್ಲಿ 5-10 ನಿಮಿಷಗಳ ಕಾಲ ಮಸಾಜ್ ಮಾಡಿ. ರಾತ್ರಿಯಿಡೀ ಎಣ್ಣೆಯನ್ನು ಹಾಗೆಯೇ ಬಿಡಿ ಮತ್ತು ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ. ಹೀಗೆ ಪ್ರತಿದಿನ ರಾತ್ರಿ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ, ಚರ್ಮದಲ್ಲಿ ರಕ್ತ ಪರಿಚಲನೆ ಸುಧಾರಿಸಲು ಪ್ರಾರಂಭಿಸುವುದರಿಂದ ಚರ್ಮ ಕಾಂತಿಯುತವಾಗಿ, ಆರೋಗ್ಯಕರವಾಗಿ ಕಾಣಿಸುತ್ತದೆ.
ಜಾತ್ರೆ ಅಂದರೆ ಅದೊಂದು ರೀತಿಯ ಸಂಭ್ರಮ ಸಡಗರ. ತಮ್ಮ ಊರಿನ ದೇವರಿಗೆ ವರ್ಷಕ್ಕೊಮ್ಮೆ ರಥೋತ್ಸವ, ಕರಗ, ಪಲ್ಲಕ್ಕಿ ನಡೆಸುವ ಮೂಲಕ ಗ್ರಾಮದ ಜನ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಆದರೆ ಇಲ್ಲೊಂದು ಕಡೆ ಮಂಗಳಮುಖಿಯರ ವಿಶೇಷ ಜಾತ್ರೆ ನಡೆಯುತ್ತದೆ. ತಮ್ಮ ಆರಾಧ್ಯ ದೇವಿಗೆ ವರ್ಷಕ್ಕೊಂದು ಬಾರಿ ಮಂಗಳಮುಖಿಯರು ಹರಕೆ ತೀರಿಸುತ್ತಾರೆ.
ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ರಥೋತ್ಸವ ಮತ್ತು ಬೇಗಿಹಳ್ಳಿಯ ಬೇಗಳಮ್ಮ ಜಾತ್ರೆಯನ್ನ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಪ್ರತಿ ವರ್ಷ ಇದೇ ಸಮಯದಲ್ಲಿ ರಥೋತ್ಸವ ನಡೆಯುತ್ತದೆ.
ಬೆಳಿಗ್ಗೆ ರಥದಲ್ಲಿ ಚಂಪಕಧಾಮ ಸ್ವಾಮಿಯನ್ನು ಕುಳ್ಳಿರಿಸಿ ಬನ್ನೇರುಘಟ್ಟದ ರಥ ಬೀದಿಯಲ್ಲಿ ಎಳೆಯುತ್ತಾರೆ. ಈ ಸಮಯದಲ್ಲಿ ಸಾವಿರಾರು ಜನ ರಥ ಎಳೆದು ಪುನೀತರಾದರು. ಈ ಜಾತ್ರೆಯ ವಿಶೇಷವೆಂದರೆ ಕರ್ನಾಟಕ, ತಮಿಳುನಾಡು ಆಂಧ್ರ ಸೇರಿದಂತೆ ಹಲವು ಕಡೆಗಳಿಂದ ಅಪಾರ ಸಂಖ್ಯೆಯ ಮಂಗಳಮುಖಿಯರು ಒಟ್ಟಾಗಿ ಸೇರಿ ಬೇಗಳಮ್ಮಗೆ ಪೂಜೆಸಲ್ಲಿಸಿದರು.
ಚಂಪಕಧಾಮ ಸ್ವಾಮಿ ದೇವಾಲಯ ಚೋಳರ ಕಾಲದಲ್ಲಿ ನಿರ್ಮಿಸಲಾಗಿದ್ದು, ಚಂಪಕ ಸ್ವಾಮಿ ಹಾಗೂ ಬೇಗಳಮ್ಮ ಅಣ್ಣ-ತಂಗಿ. ಹರಕೆ ಹೊತ್ತವರು ಮೊದಲಿಗೆ ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿಯ ದರ್ಶನ ಪಡೆದು ಹೂವನ್ನು ಕಟ್ಟಿಸಿಕೊಳ್ಳುತ್ತಾರೆ. ಹಳದಿ ಸೀರೆ, ಜಡೆ ತುಂಬಾ ಮಲ್ಲಿಗೆ ಮುಡಿದು ತಮಟೆ ವಾದ್ಯಗಳ ನಡುವೆ ಬರಿಗಾಲಿನಲ್ಲಿ ಬಿಸಿಲಿನ ನಡುವೆ ಹೆಜ್ಜೆ ಹಾಕುತ್ತ ಮಂಗಳಮುಖಿಯರು ಬನ್ನೇರುಘಟ್ಟದಿಂದ ಸುಮಾರು 4 ಕಿಮೀ ದೂರ ಬೇಗಳಮ್ಮನ ದೇವಾಲಯಕ್ಕೆ ನಡೆದುಕೊಂಡು ಸಾಗುತ್ತ ಹರಕೆ ತಿರಿಸುತ್ತಾರೆ.
ಬೇಗಳಮ್ಮಗೆ ಪೂಜೆ ಸಲ್ಲಿಸಿ ವಿಶೇಷವಾಗಿ ಎಲೆ ಅಡಿಕೆ, ಕಡ್ಡಿಪುಡಿಯನ್ನು ಹಾಗೂ ಕೋಳಿಯನ್ನು ಬೇಗಳಮ್ಮಗೆ ನೈವೇದ್ಯವಾಗಿ ನೀಡುತ್ತಾರೆ. ಒಟ್ಟಾರೆ ಚಂಪಕಧಾಮ ಸ್ವಾಮಿಯ ಗ್ರಾಮೀಣ ಸೊಬಗಿನ ಜಾತ್ರೆ ವೈಭವ ಒಂದೆಡೆಯಾದರೆ, ಮತ್ತೊಂದೆಡೆ ಮಂಗಳಮುಖಿಯರು ಆರಾಧ್ಯ ದೇವಿಗೆ ಪೂಜೆ, ಹರಕೆ ಸಲ್ಲಿಸಿ ಖುಷಿಪಟ್ಟರು.
ಬೆಂಗಳೂರು, (ಮಾರ್ಚ್ 10): ಪ್ರಯಾಣಿಕರಿಗೆ ಬಿಎಂಟಿಸಿ (BMTC) ಸಿಹಿಸುದ್ದಿ ಹೊತ್ತು ತಂದಿದೆ. ಇನ್ಮುಂದೆ ಟಿಕೆಟ್ ತೆಗೆದುಕೊಳ್ಳುವ ಟೆನ್ಷನ್ ಇರಲ್ಲ. ಆ ಕಾರ್ಡ್, ಈ ಕಾರ್ಡ್ ಅಂತ ಬ್ಯಾಗ್ ತಡಕುವ ಪ್ರಮೇಯವೇ ಬೇಡ, ಜಸ್ಟ್ ‘ನಮ್ಮ ಮೆಟ್ರೋ’ ಕಾರ್ಡ್ (Namma Metro Card) ತೋರಿಸಿ ಪ್ರಯಾಣ ಮಾಡಬಹುದು. ಹೌದು.. ಮುಂದಿನ ದಿನಗಳಲ್ಲಿ ನೀವು ಡೆಬಿಟ್ ಕಾರ್ಡ್ (Debit Card) ಮತ್ತು ಕ್ರೆಡಿಟ್ ಕಾರ್ಡ್ಗಳು (Credit Card) ಮಾತ್ರವಲ್ಲ, ಮೊಟ್ರೋ ಕಾರ್ಡ್ ಸಹ ಕಂಡಕ್ಟರ್ಗೆ (ನಿರ್ವಾಹಕ) ತೋರಿಸಿ ಬಿಎಂಟಿಸಿ (BMTC) ಬಸ್ನಲ್ಲಿ ಹೋಗಬಹುದು. ಹೌದು..ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗದು ರಹಿತ ಟಿಕೆಟ್ ವ್ಯವಸ್ಥೆಗೆ ಮಹತ್ವದ ಹೆಜ್ಜೆ ಇಟ್ಟಿದ್ದು, ಸುಮಾರು 10 ಸಾವಿರ ಅತ್ಯಾಧುನಿಕ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳನ್ನು (ETM Electronic Ticketing Machine) ಅಳವಡಿಸಲು ಮುಂದಾಗಿದೆ.
ಈ ಹೊಸ ಇಟಿಎಂ ಮೆಷಿನ್ ನಲ್ಲಿ ಎನ್ಸಿಎಂಸಿ ಕಾರ್ಡ್ ಬಳಕೆ ಮಾಡಿ ಅಂದರೆ ಬಿಎಂಟಿಸಿ ಮತ್ತು ನಮ್ಮ ಮೆಟ್ರೋ ರೈಲಿನಲ್ಲೂ ಸಂಚಾರ ಮಾಡಲು ಅವಕಾಶ ನೀಡಲಾಗಿದೆ. ಬರೋಬ್ಬರಿ 40 ಕೋಟಿ ರುಪಾಯಿ ವೆಚ್ಚದಲ್ಲಿ ಮುಂಬೈ ಮೂಲದ ಚಲೋ ಅನ್ನೋ ಕಂಪನಿಗೆ ಟೆಂಡರ್ ನೀಡಲಾಗಿದೆ. ಐದು ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ 11 ಸಾವಿರ ಇಟಿಎಂ ಮಷಿನ್ ಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಈಗಾಗಲೇ ಚಲೋ ಕಂಪನಿಗೆ 11 ಸಾವಿರ ಮಷಿನ್ ಗಳನ್ನು ಸಪ್ಲೈ ಮಾಡಲು ಟೆಂಡರ್ ನೀಡಲಾಗಿದೆ. ಇದಕ್ಕೆ ಪ್ರಯಾಣಿಕರು ಕಂಡಕ್ಟರ್ ಕಳ್ಳಾಟಕ್ಕೆ ಬ್ರೇಕ್ ಬೀಳಲಿದೆ.
ಇನ್ನು ಈ ತಿಂಗಳಲ್ಲಿ ಎಲ್ಲಾ ಬಿಎಂಟಿಸಿ ಬಸ್ಸುಗಳಲ್ಲೂ ಹೊಸ ಮೆಷಿನ್ ಗಳು ಬರುವ ಸಾಧ್ಯತೆಯಿದೆ. ಈ ಮಷಿನ್ ಗಳಲ್ಲಿ ಎಟಿಎಂ ಕಾರ್ಡ್, ಕ್ರೆಡಿಟ್ ಕಾರ್ಡ್, ಫೋನ್ ಪೇ,ಗೂಗಲ್ ಪೇ ಸೇರಿದಂತೆ ಪೇಟಿಯಂ ಯೂಸ್ ಮಾಡಿ ಪ್ರಯಾಣಿಕರು ಹಣ ಪಾವತಿ ಮಾಡಿ ಸಂಚಾರ ಮಾಡಬಹುದು. ಈ ಮಷಿನ್ ನಲ್ಲಿ ಡೈನಾಮಿಕ್ ಕ್ಯೂ ಆರ್ ಕೋಡ್ ಗಳನ್ನು ಅಳವಡಿಸಿದ್ದು, ಇದರಿಂದ ಕಂಡಕ್ಟರ್, ಪ್ರಯಾಣಿಕರಿಗೆ ಮತ್ತು ಬಿಎಂಟಿಸಿ ನಿಗಮಕ್ಕೆ ವಂಚನೆ ಮಾಡಲು ಸಾಧ್ಯವಿಲ್ಲ. ಎಲ್ಲಿಂದ ಎಲ್ಲಿಗೆ?ಎಷ್ಟು ಟಿಕೆಟ್ ದರ ಎನ್ನುವ ಸಂಪೂರ್ಣ ಮಾಹಿತಿ ಅಪ್ಲೋಡ್ ಮಾಡಲಾಗಿದೆ.
ಇಟಿಎಂ ಯಂತ್ರಗಳಲ್ಲಿ ಹೊಸ ತಂತ್ರಜ್ಞಾನ
ಬಿಎಂಟಿಸಿಯಲ್ಲಿ ಕೂಡ ಈಗಾಗಲೇ ಸ್ಟಾಟಿಕ್ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಾವತಿಸಿ ಪ್ರಯಾಣಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಈ ವ್ಯವಸ್ಥೆಯಲ್ಲಿ ಯಾವುದೇ ಕೆಡಿಟ್ ಅಥವಾ ಡೆಬಿಟ್ ಕಾರ್ಡ್ಗಳನ್ನು ಬಳಸಿ ಟಿಕೆಟ್ ನೀಡುವ ವ್ಯವಸ್ಥೆ ಇರಲಿಲ್ಲ. ಆದ್ರೆ, ಇದೀಗ ಇದೇ ಮೊದಲ ಬಾರಿಗೆ ಬಿಎಂಟಿಸಿ ಆ್ಯಂಡ್ರಾಯ್ಡ್ ಸೌಲಭ್ಯದ ವಿದ್ಯುನ್ಮಾನ ಟಿಕೆಟ್ ಯಂತ್ರ (ಇಟಿಎಂ)ಗಳನ್ನು ನೀಡಲಾಗುತ್ತಿದೆ. ಇಟಿಎಂ ಯಂತ್ರಗಳು ಹೊಸ ತಂತ್ರಜ್ಞಾನವನ್ನು ಹೊಂದಿದ್ದು, ನಗದು ರಹಿತ ಪಾವತಿಗೆ ಅನುಕೂಲವಾಗುತ್ತವೆ. ಇದರಿಂದ ಪ್ರಯಾಣಿಕರು ಡಿಜಿಟಲ್ ಪಾವತಿಗಳನ್ನು (UPI, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮುಂತಾದವು) ಬಳಸುವ ಸಾಧ್ಯತೆ ಇದೆ. ಇದರೊಂದಿಗೆ ಟಿಕೆಟ್ ನೀಡುವ ಪ್ರಕ್ರಿಯೆ ಪಾಸ್ಟ್ ಆಗುತ್ತದೆ.
ಈ ಇಟಿಎಂ ಯಂತ್ರಗಳಲ್ಲಿ ಗೂಗಲ್ ಪೇ, ಫೋನ್ ಪೇ, ಭೀಮ್ ಯುಪಿಐ ಆಧಾರಿತ ಡೈನಮಿಕ್ ಕ್ಯೂಆರ್ ಕೋಡ್ಗಳ ಜೊತೆಗೆ, ಮೆಟ್ರೋ ಕಾರ್ಡ್, ಡೆಬಿಟ್, ಕ್ರೆಡಿಟ್, ವೀಸಾ ಕಾರ್ಡ್ಗಳು ಮತ್ತು ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC) ಬಳಸಿ ಪಾವತಿ ಮಾಡುವ ಅವಕಾಶವನ್ನು ನೀಡಲಾಗಿದೆ. ಈ ಯಂತ್ರದ ವಿಶೇಷ ವೆಂದರೆ ಟಿಕೆಟ್ ವೇಗವಾಗಿ ಮುದ್ರಣವಾಗುತ್ತದೆ. ಟಚ್ ಸ್ಟೀನ್ ಮತ್ತು ವೇಗದ ಪ್ರಕ್ರಿಯೆ ವ್ಯವಸ್ಥೆಗಳನ್ನು ಈ ಸ್ಮಾರ್ಟ್ ಇಟಿಎಂ ಹೊಂದಿರಲಿದ್ದು, ಡೈನಮಿಕ್ ಕ್ಯೂ ಆರ್ ಕೋಡ್ ಆಧಾರಿತ ಪಾವತಿ ಸುಲಭವಾಗಿ ಟಿಕೆಟ್ ನೀಡುವುದಕ್ಕೆ ಅನುಕೂಲವಾಗಲಿದೆ.
ಈಗಾಗಲೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸ್ಟಾಟಿಕ್ ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಟಿಕೆಟ್ ಪಾವತಿ ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ವ್ಯವಸ್ಥೆಯಲ್ಲಿ ಪ್ರಯಾಣಿಕರು ತಮ್ಮ ಮೊಬೈಲ್ ಫೋನ್ನಿಂದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಮೊತ್ತ ಪಾವತಿಸಬಹುದು. ಆದರೆ ಇದುವರೆಗೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಟಿಕೆಟ್ ಪಡೆಯುವ ಅವಕಾಶ ಇರಲಿಲ್ಲ. ಆದರೆ ಇದೇ ಮೊದಲ ಬಾರಿ ಬಿಎಂಟಿಸಿ ಆ್ಯಂಡ್ರಾಯ್ಡ್ ಆಧಾರಿತ ವಿದ್ಯುನ್ಮಾನ ಟಿಕೆಟ್ ಯಂತ್ರಗಳನ್ನು (ETM) ಪರಿಚಯಿಸುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಕೋಮಲ್ ಕುಮಾರ್ (Komal Kumar), ಮೇಘನಾ ರಾಜ್, ಅನುಷಾ ರೈ ಅವರು ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಇತ್ತೀಚೆಗೆ ಪೂರ್ಣಗೊಂಡಿದೆ. ಈ ಸಿನಿಮಾಗೆ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ವಿಕಾಸ್ ಶೆಟ್ಟಿ ಅವರು ಬಂಡವಾಳ ಹೂಡಿದ್ದಾರೆ. 2 ಹಂತಗಳಲ್ಲಿ 75 ದಿನಗಳ ಕಾಲ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಚಿತ್ರೀಕರಣ ಮುಗಿಸಿಕೊಂಡಿರುವ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ (Sangeetha Bar and Restaurant) ಚಿತ್ರತಂಡ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ ಆಗಿದೆ.
ಕುಂದಾಪುರ, ಶಿವಮೊಗ್ಗ, ತೀರ್ಥಹಳ್ಳಿ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಚಿತ್ರದ ಬಹುತೇಕ ಶೂಟಿಂಗ್ ನಡೆಸಲಾಗಿದೆ. ಕುಂದಾಪುರದ ಅಂಪಾರಿನ ವಾಲ್ತೂರು ಗ್ರಾಮದಲ್ಲಿ ಏಳು ವಿಭಿನ್ನ ವಿನ್ಯಾಸದ ಬೃಹತ್ ಸೆಟ್ಗಳನ್ನು ನಿರ್ಮಿಸಲಾಗಿತ್ತು. ಅದರಲ್ಲಿ ಬಹುಭಾಗದ ಚಿತ್ರೀಕರಣವನ್ನು ಮಾಡಲಾಗಿದೆ. ಸುಮಾರು ಎರಡು ಎಕರೆ ಜಾಗದಲ್ಲಿ 7 ವೈವಿಧ್ಯಮಯ ಸೆಟ್ಗಳನ್ನು ಹಾಕಲಾಗಿತ್ತು.
ಈ ಸಿನಿಮಾಗೆ ಎರಡು ಟೈಟಲ್ ಇದೆ ಎಂದು ಚಿತ್ರತಂಡ ಹೇಳಿದೆ. ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಎಂಬುದು ಒಂದು ಶೀರ್ಷಿಕೆ. ‘ದೇವರ ತಾಣ’ ಎಂಬುದು ಇನ್ನೊಂದು ಟೈಟಲ್. ಚಿತ್ರದ ಮೊದಲಾರ್ಧ ಬಾರ್ನಲ್ಲಿ ಶುರುವಾಗಿ, ದ್ವಿತೀಯಾರ್ಧ ದೇವರ ತಾಣದಲ್ಲಿ ಶುರುವಾಗುತ್ತದೆ. ಆದರೆ ಸೆನ್ಸಾರ್ ನಿಯಮದ ಪ್ರಕಾರ ಒಂದು ಸಿನಿಮಾಕ್ಕೆ ಒಂದೇ ಟೈಟಲ್ ಇರಬೇಕು. ಹಾಗಾಗಿ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಶೀರ್ಷಿಕೆಯಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಅವರು ಹೇಳಿದ್ದಾರೆ.
ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಕೋಮಲ್ ಕುಮಾರ್ ಅವರು ಡಬಲ್ ರೋಲ್ ಮಾಡಿದ್ದಾರೆ. ಒಂದು ಪಾತ್ರದಲ್ಲಿ ಆಸ್ಥಾನವೊಂದರ ವರ್ಣಚಿತ್ರ ಕಲಾವಿದನಾಗಿ ಕಾಣಿಸಿಕೊಂಡರೆ, ಮತ್ತೊಂದರಲ್ಲಿ ಸಿನಿಮಾ ನಿರ್ದೇಶಕನ ಪಾತ್ರವನ್ನು ಕೋಮಲ್ ಮಾಡಿದ್ದಾರೆ. ಮೇಘನಾ ರಾಜ್ ರಾಣಿಯಾಗಿ ಮತ್ತು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಪ್ರಮೋದ್ ಶೆಟ್ಟಿ, ವಜ್ರಧೀರ್ ಜೈನ್, ಪ್ರಕಾಶ್ ತುಮ್ಮಿನಾಡ್, ಉತ್ಸವ್, ರಾಘು ರಾಮನಕೊಪ್ಪ, ಕಾರ್ತಿಕ್ ರಾವ್, ಸಿರಿಜಾ, ವರ್ಧನ್, ರಾಧಿಕ ರಾವ್ ದಿವ್ಯಶ್ರೀ, ಕರಣ್, ಅಕ್ಷತಾ, ಅರಸು, ಮಹೇಶ್, ಚಿತ್ರಕಲಾ, ನಾಗರಾಜ್ , ಉಮೇಶ್ ಕಿನ್ನಾಳ್, ರಾಧಾಕೃಷ್ಣ, ಮನೀಶ್ ಶೆಟ್ಟಿ, ಮಹಾಬಲೇಶ್ವರ ಭಟ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಸಹ ಒಂದು ಪಾತ್ರದಲ್ಲಿ ಅಭಿನಯಿಸಿದ್ದಾರೆ.
ನವದೆಹಲಿ, ಮಾರ್ಚ್ 10: ಕುವೈತ್, ಬಹ್ರೇನ್, ಕತಾರ್, ದುಬೈ ಸೇರಿದಂತೆ ಹಲವು ಗಲ್ಫ್ ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ಇರಾನ್ ದಾಳಿ (Iran Attack) ನಡೆಸಿತ್ತು. ಇರಾನ್ ನಡೆಸಿದ ದಾಳಿಯ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಡಿದ್ದಕ್ಕಾಗಿ 5 ಪಾಕಿಸ್ತಾನಿ ಪ್ರಜೆಗಳನ್ನು ಬಹ್ರೇನ್ನಲ್ಲಿ ಬಂಧಿಸಲಾಗಿದೆ. ಇವರ ಜೊತೆ ಓರ್ವ ಬಾಂಗ್ಲಾದೇಶಿ ಪ್ರಜೆಯನ್ನು ಕೂಡ ಬಂಧಿಸಲಾಗಿದೆ. ಅಂತಹ ವಿಡಿಯೋಗಳು ತಪ್ಪು ಮಾಹಿತಿ ಮತ್ತು ಭಯವನ್ನು ಹರಡಬಹುದು ಎಂದು ಬಹ್ರೇನ್ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಇರಾನಿನ ದಾಳಿಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ್ದಕ್ಕಾಗಿ ಬಹ್ರೇನ್ನಲ್ಲಿ 6 ಜನರನ್ನು ಬಂಧಿಸಲಾಗಿದೆ. ಅವರಲ್ಲಿ ಐವರು ಪಾಕಿಸ್ತಾನಿಗಳು ಮತ್ತು ಒಬ್ಬ ಬಾಂಗ್ಲಾದೇಶಿ ಪ್ರಜೆ. ಈ ವ್ಯಕ್ತಿಗಳು ಇರಾನಿನ ದಾಳಿಯ ವಿಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗಳು ಇರಾನಿನ ದಾಳಿಯನ್ನು ಉತ್ಪ್ರೇಕ್ಷೆ ಮಾಡುತ್ತಿವೆ. ಈ ವಿಡಿಯೋಗಳು ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿತ್ತು ಎಂದು ಸಚಿವಾಲಯ ಹೇಳಿದೆ. ಎಲ್ಲಾ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಬಹ್ರೇನ್ ಸರ್ಕಾರವು ಅಲ್ಲಿ ವಾಸಿಸುವ ಜನರು ಮತ್ತು ವಿದೇಶಿಯರಿಗೆ ಸಾಮಾಜಿಕ ಮಾಧ್ಯಮದಲ್ಲಿ ಪರಿಶೀಲಿಸದ ವಿಡಿಯೋಗಳು ಅಥವಾ ಸುದ್ದಿಗಳನ್ನು ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಿದೆ. ಹಾಗೆ ಮಾಡುವುದರಿಂದ ಕಠಿಣ ಕಾನೂನು ಕ್ರಮ ಕೈಗೊಳ್ಳಬಹುದು. ಮನಾಮದಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಯು ಬಹ್ರೇನ್ನಲ್ಲಿ ವಾಸಿಸುವ ಪಾಕಿಸ್ತಾನಿಗಳಿಗೆ ಭದ್ರತೆಗೆ ಸಂಬಂಧಿಸಿದ ಯಾವುದೇ ಘಟನೆಗಳ ಫೋಟೋಗಳು ಅಥವಾ ವೀಡಿಯೊಗಳನ್ನು ಕ್ಲಿಕ್ ಮಾಡಿಕೊಳ್ಳಬಾರದು ಮತ್ತು ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಬಾರದು ಎಂದು ಸೂಚಿಸಿದೆ.
ಇನ್ನು, ಇರಾನ್ ದಾಳಿಗೆ ಸಂಬಂಧಿಸಿದ ವಿಡಿಯೋಗಳ ಮೂಲಕ ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಕತಾರ್ನಲ್ಲಿ 300ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಇದೇ ರೀತಿಯ ಆರೋಪದ ಮೇಲೆ ಕುವೈತ್ನಲ್ಲಿ ಮೂವರನ್ನು ಬಂಧಿಸಲಾಗಿದೆ. ಎರಡೂ ದೇಶಗಳು ಇನ್ನೂ ಆರೋಪಿಗಳ ಗುರುತುಗಳನ್ನು ಬಿಡುಗಡೆ ಮಾಡಿಲ್ಲ. ಸೌದಿ ಅರೇಬಿಯಾ ಮತ್ತು ಯುಎಇ ಕೂಡ ತಮ್ಮ ನಾಗರಿಕರಿಗೆ ಅಂತಹ ವೀಡಿಯೊಗಳನ್ನು ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಿವೆ.
ಬಹ್ರೇನ್ನ ರಾಜಧಾನಿ ಮನಾಮದಲ್ಲಿ ಇರಾನಿನ ವೈಮಾನಿಕ ದಾಳಿಯಲ್ಲಿ 29 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಅದಕ್ಕೂ ಒಂದು ದಿನ ಮೊದಲು 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ 100ಕ್ಕೂ ಹೆಚ್ಚು ಕ್ಷಿಪಣಿ ಮತ್ತು 173 ಡ್ರೋನ್ ದಾಳಿಗಳನ್ನು ತಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ ಸಂಜು ಸ್ಯಾಮ್ಸನ್ ಪ್ರಸ್ತುತ ಎಲ್ಲರ ಮನೆ ಮಾತಾಗಿದ್ದಾರೆ. ತಮ್ಮ ಅದ್ಭುತ ಬ್ಯಾಟಿಂಗ್ನಿಂದ ಟೀಂ ಇಂಡಿಯಾವನ್ನು ವಿಶ್ವ ಚಾಂಪಿಯನ್ ಮಾಡಿದ ಸಂಜುಗೆ ಸರಣಿಯ ಆಟಗಾರ ಪ್ರಶಸ್ತಿಯೂ ಲಭಿಸಿತು. ಇದರ ಜೊತೆಗೆ ಇದೀಗ ಸಂಜು ಸ್ಯಾಮ್ಸನ್ಗೆ ಭಾರತ ಟಿ20 ತಂಡದ ನಾಯಕರಾತ್ವವನ್ನು ನೀಡಬೇಕೆಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹೇಳಿದ್ದಾರೆ.
ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಮೊಹಮ್ಮದ್ ಕೈಫ್, ‘ಸೂರ್ಯಕುಮಾರ್ ಯಾದವ್ ನಾಯಕತ್ವ ತ್ಯಜಿಸಿದರೆ, ತಂಡವನ್ನು ಮುನ್ನಡೆಸಲು ಸಂಜು ಸ್ಯಾಮ್ಸನ್ ಉತ್ತಮ ಆಯ್ಕೆ. ಏಕೆಂದರೆ ಸಂಜು ಬಳಿ ನಾಯಕತ್ವದ ಗುಣಗಳಿವೆ ಎಂದಿದ್ದಾರೆ.
ತಂಡದ ಪ್ರತಿಯೊಬ್ಬ ಆಟಗಾರನ ಮೌಲ್ಯವನ್ನು ಗುರುತಿಸುವ ಮತ್ತು ಫಾರ್ಮ್ನಲ್ಲಿಲ್ಲದ ಆಟಗಾರರನ್ನು ಸಹ ಪ್ರೋತ್ಸಾಹಿಸುವ ನಾಯಕತ್ವವನ್ನು ನಾಯಕ ಹೊಂದಿರಬೇಕು. ವೈಫಲ್ಯವು ಆಟದ ಒಂದು ಭಾಗ ಎಂದು ನಾಯಕ ಅರ್ಥಮಾಡಿಕೊಂಡರೆ ತಂಡಕ್ಕೆ ಲಾಭವಾಗುತ್ತದೆ ಎಂದು ಕೈಫ್ ಹೇಳಿದರು.
ಸೂರ್ಯ ನಾಯಕತ್ವ ತ್ಯಜಿಸಿದರೆ, ಸಂಜು ಉತ್ತಮ ಆಯ್ಕೆ. ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವ ವಹಿಸಿದ ಅನುಭವವನ್ನೂ ಹೊಂದಿದ್ದಾರೆ. ಅವರು ತಂಡವನ್ನು ಫೈನಲ್ಗೆ ಕೊಂಡೊಯ್ದಿದ್ದಾರೆ. ಅವರ ಫಾರ್ಮ್ ಉತ್ತಮವಾಗಿದ್ದರೆ ಮತ್ತು ಅವರು ತಮ್ಮ ಫಿಟ್ನೆಸ್ ಅನ್ನು ಉಳಿಸಿಕೊಂಡರೆ, ಅವರು ಖಂಡಿತವಾಗಿಯೂ ನಾಯಕತ್ವ ವಹಿಸಬಹುದು ಎಂದಿದ್ದಾರೆ.
ಸೂರ್ಯಕುಮಾರ್ ಯಾದವ್ ಅವರಿಗೆ ಪ್ರಸ್ತುತ 35 ವರ್ಷ. 2028 ರ ಟಿ20 ವಿಶ್ವಕಪ್ ವೇಳೆಗೆ ಅವರಿಗೆ 37 ವರ್ಷ ವಯಸ್ಸಾಗಿರುತ್ತದೆ. ಅವರು 37 ನೇ ವಯಸ್ಸಿನಲ್ಲಿ ತಂಡವನ್ನು ಮುನ್ನಡೆಸುವುದು ಸ್ವಲ್ಪ ಅಸಂಭವ. ಆದಾಗ್ಯೂ, ಇದು ಅವರ ವಯಸ್ಸಿಗಿಂತ ಅವರ ಫಾರ್ಮ್ ಮತ್ತು ಫಿಟ್ನೆಸ್ ಅನ್ನು ಅವಲಂಬಿಸಿರುತ್ತದೆ. ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದಲ್ಲಿ, ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದೆಯಾದರೂ ಆಟಗಾರನಾಗಿ ಸೂಯಘ ಅವರ ಪ್ರದರ್ಶನ ಸಾಧಾರಣವಾಗಿತ್ತು.
ಇಡೀ ಟೂರ್ನಮೆಂಟ್ನಲ್ಲಿ ಯುಎಸ್ಎ ವಿರುದ್ಧ ಮಾತ್ರ ಅರ್ಧಶತಕದ ಇನ್ನಿಂಗ್ಸ್ ಆಡಿದ ಸೂರ್ಯ ಉಳಿದಂತೆ ಸೆಮಿಫೈನಲ್ ಮತ್ತು ಫೈನಲ್ನಲ್ಲಿಯೂ ವಿಫಲರಾದರು. ಅದರಲ್ಲೂ ಫೈನಲ್ ಪಂದ್ಯದಲ್ಲಿ ಅವರು ಗೋಲ್ಡನ್ ಡಕ್ಗೆ ಔಟಾದರು. ಒಟ್ಟಾರೆ ಈ ಟಿ20 ವಿಶ್ವಕಪ್ನಲ್ಲಿ ಸೂರ್ಯ 30.25 ಸರಾಸರಿಯಲ್ಲಿ ಕೇವಲ 242 ರನ್ ಗಳಿಸಿದ್ದು, ಅವರ ಫಾರ್ಮ್ ಉತ್ತಮವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇಸ್ಲಮಾಬಾದ್, ಮಾರ್ಚ್ 10: ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಫೆಬ್ರವರಿ 28ರಂದು ಇರಾನ್ನ ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿ (Ayatollah Ali Khamenei) ಮೃತಪಟ್ಟಿದ್ದರು. ಅವರ ಉತ್ತರಾಧಿಕಾರಿಯಾಗಿರುವ ಇರಾನ್ನ ಹೊಸ ಸರ್ವೋಚ್ಚ ನಾಯಕರಾದ ಮೊಜ್ತಬಾ ಖಮೇನಿ ಅವರನ್ನು ಪಾಕಿಸ್ತಾನ ಅಭಿನಂದಿಸಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮೊಜ್ತಬಾ ಖಮೇನಿ ಅವರನ್ನು ಅಭಿನಂದಿಸಿದ್ದು, ಅವರ ತಂದೆಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇರಾನಿನ ಹೊಸ ನಾಯಕ ದೇಶವನ್ನು ಶಾಂತಿ ಮತ್ತು ಸ್ಥಿರತೆಯತ್ತ ಕೊಂಡೊಯ್ಯುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇರಾನ್ ಇಸ್ಲಾಮಿಕ್ ಗಣರಾಜ್ಯದ ಸರ್ವೋಚ್ಚ ನಾಯಕನ ಜವಾಬ್ದಾರಿಗಳನ್ನು ವಹಿಸಿಕೊಂಡ ಅಯತೊಲ್ಲಾ ಮೊಜ್ತಬಾ ಖಮೇನಿ ಅವರನ್ನು ನಾನು ಅಭಿನಂದಿಸುತ್ತೇನೆ. ಅವರ ತಂದೆ ಅಯತೊಲ್ಲಾ ಅಲಿ ಖಮೇನಿ ಮತ್ತು ಇತರ ಕುಟುಂಬ ಸದಸ್ಯರ ಸಾವಿಗೆ ಪಾಕಿಸ್ತಾನದ ಜನರ ಪರವಾಗಿ ನಾನು ಸಂತಾಪ ಮತ್ತು ಪ್ರಾರ್ಥನೆಗಳನ್ನು ತಿಳಿಸುತ್ತೇನೆ. “ಹೊಸ ಸುಪ್ರೀಂ ನಾಯಕ ಮುಂದಿನ ವರ್ಷಗಳಲ್ಲಿ ಇರಾನ್ ಅನ್ನು ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯತ್ತ ಕೊಂಡೊಯ್ಯುತ್ತಾರೆ ಎಂಬ ವಿಶ್ವಾಸ ನನಗಿದೆ” ಎಂದು ಶೆಹಬಾಜ್ ಷರೀಫ್ ಎಕ್ಸ್ನಲ್ಲಿ ಹೇಳಿದ್ದಾರೆ.
ಇರಾನ್ನ ಪಾದ್ರಿಗಳ ತಂಡ ಮೊಜ್ತಬಾ ಖಮೇನಿ ಅವರನ್ನು ಮುಂದಿನ ಇರಾನಿನ ಸರ್ವೋಚ್ಚ ನಾಯಕರನ್ನಾಗಿ ಆಯ್ಕೆ ಮಾಡಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಆಯ್ಕೆಯನ್ನು ನೇರವಾಗಿ ವಿರೋಧಿಸಿದ್ದರು. ಹಲವಾರು ದೇಶಗಳು ಮೊಜ್ತಬಾ ಅವರ ಉತ್ತರಾಧಿಕಾರವನ್ನು ಸ್ವಾಗತಿಸಿದ್ದವು. ರಷ್ಯಾ, ಒಮನ್ ಬೆನ್ನಲ್ಲೇ ಇದೀಗ ಪಾಕಿಸ್ತಾನವೂ ಈ ಆಯ್ಕೆಯನ್ನು ಸ್ವಾಗತಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಾಲಿವುಡ್ನ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ‘ಧುರಂಧರ್: ದಿ ರಿವೇಂಜ್’ (Dhurandhar 2) ಬಿಡುಗಡೆಗೆ ಕೆಲವೇ ದಿನಗಳ ಬಾಕಿ ಇರುವಾಗ ದೇಶಾದ್ಯಂತ ಟಿಕೆಟ್ ಬುಕಿಂಗ್ನಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಮಾರ್ಚ್ 18ರಂದು ಆಯ್ದ ಚಿತ್ರಮಂದಿರಗಳಲ್ಲಿ ಪೇಯ್ಡ್ ಪ್ರಿವ್ಯೂ (Dhurandhar 2 Paid Previews) ಆರಂಭವಾಗಲಿದ್ದು, ಟಿಕೆಟ್ ಬೆಲೆಗಳು ಗಗನಕ್ಕೇರಿದೆ. ಹಾಗಿದ್ದರೂ ಕೂಡ ಪ್ರೇಕ್ಷಕರು ಮುಗಿಬಿದ್ದು ಬುಕ್ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಈ ಸಿನಿಮಾದ ಟಿಕೆಟ್ಗಳು ಬರೋಬ್ಬರಿ 3100 ರೂಪಾಯಿಗೆ ಮಾರಾಟ ಆಗಿವೆ. ರಣವೀರ್ ಸಿಂಗ್ ನಟನೆಯ ಈ ಚಿತ್ರದ ಮೇಲೆ ಜನರಿಗೆ ಈ ಪರಿ ಕ್ರೇಜ್ ಇದೆ.
ಮುಂಬೈನ ಬೊರಿವಲಿಯ ಐನಾಕ್ಸ್ ಮೆಗಾಪ್ಲೆಕ್ಸ್ನಲ್ಲಿ ರಿಕ್ಲೈನರ್ ಸೀಟುಗಳ ಬೆಲೆ ಬರೋಬ್ಬರಿ 3100 ರೂಪಾಯಿ ತಲುಪಿದೆ. ದೆಹಲಿಯ ಪಿವಿಆರ್ ಸೆಲೆಕ್ಟ್ ಸಿಟಿ ವಾಕ್ನಲ್ಲಿ 2400 ರೂಪಾಯಿವರೆಗೆ ದರವಿದೆ. ಇನ್ನು, ಮೆಟ್ರೋ ನಗರಗಳಲ್ಲಿ ಸಾಮಾನ್ಯ ಸೀಟುಗಳ ಬೆಲೆಯೇ 600ರಿಂದ 900 ರೂಪಾಯಿ ಆಸುಪಾಸಿನಲ್ಲಿದೆ. ಐಮ್ಯಾಕ್ಸ್ ಶೋಗಳಿಗೆ 1000 ರೂಪಾಯಿಗೂ ಅಧಿಕ ದರವಿದ್ದರೂ ಬಹುತೇಕ ಶೋಗಳು ಈಗಾಗಲೇ ಹೌಸ್ಫುಲ್ ಆಗಿವೆ.
ಕೇವಲ ಹಿಂದಿ ಮಾತ್ರವಲ್ಲದೆ, ದಕ್ಷಿಣ ಭಾರತದ ಭಾಷೆಗಳಲ್ಲೂ ಈ ಚಿತ್ರಕ್ಕೆ ಭಾರಿ ಬೇಡಿಕೆ ಇದೆ. ಕನ್ನಡ ಮತ್ತು ತೆಲುಗಿನಲ್ಲಿ ಕೂಡ ‘ಧುರಂಧರ್ 2’ ಸಿನಿಮಾದ ಟಿಕೆಟ್ಗಳು 400 ರೂಪಾಯಿ ಆಸುಪಾಸಿನಲ್ಲಿ ಮಾರಾಟ ಆಗುತ್ತಿವೆ. ಬೆಂಗಳೂರು, ಹೈದರಾಬಾದ್ ಮುಂತಾದ ಕಡೆಗಳಲ್ಲಿ ಈ ಚಿತ್ರದ ಹಿಂದಿ ವರ್ಷನ್ ಟಿಕೆಟ್ಗಳು ಸಾವಿರ ರೂಪಾಯಿಗೂ ಅಧಿಕ ಬೆಲೆಗೆ ಮಾರಾಟ ಆಗಿವೆ. ತಮಿಳುನಾಡಿನಲ್ಲಿ ಬೆಲೆ ಮಿತಿ ಇರುವ ಕಾರಣ 166 ರೂಪಾಯಿ ನಿಗದಿ ಆಗಿದೆ.
ಅಡ್ವಾನ್ಸ್ ಬುಕಿಂಗ್ ಆರಂಭವಾದ ಕೆಲವೇ ದಿನಗಳಲ್ಲಿ ‘ಧುರಂಧರ್ 2’ ಸಿನಿಮಾದ ಸುಮಾರು 3 ಲಕ್ಷ ಟಿಕೆಟ್ಗಳನ್ನು ಮಾರಾಟ ಆಗಿವೆ. ಈ ಮೂಲಕ ಬಿಡುಗಡೆಗೂ ಮುನ್ನವೇ ಭಾರತದಲ್ಲಿ 15 ಕೋಟಿಗೂ ಅಧಿಕ ಮೊತ್ತವನ್ನು ಬಾಚಿಕೊಂಡಿದೆ. ಇದು ಬಾಲಿವುಡ್ ಚಿತ್ರವೊಂದರ ಪ್ರೀಮಿಯರ್ ಶೋಗೆ ಸಿಕ್ಕಿರುವ ಅತಿ ದೊಡ್ಡ ಮೊತ್ತದ ಕಲೆಕ್ಷನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಪಾಕಿಸ್ತಾನದಲ್ಲಿರುವ ಭಾರತೀಯ ಗೂಢಚಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಆರ್ ಮಾಧವನ್, ಅರ್ಜುನ್ ರಾಮ್ಪಾಲ್, ಸಂಜಯ್ ದತ್, ಸಾರಾ ಅರ್ಜುನ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರದ ಮೊದಲ ಭಾಗ ವಿಶ್ವದಾದ್ಯಂತ ಸಾವಿರಾರು ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿತ್ತು. ಈಗ ಎರಡನೇ ಭಾಗವೂ ಅದೇ ಹಾದಿಯಲ್ಲಿ ಸಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.