ಮೈಸೂರು, (ಮಾರ್ಚ್ 07): ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದ ಪಿಲ್ಲಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಆದಿಶಕ್ತ್ಯಾತ್ಮಕ ದಂಡಿಮಾರಮ್ಮ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಕುಂಭಕಳಶದ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಭಾಗವಹಿಸಿದ್ದು, ಇದೇ ವೇಳೆ ತಂಬಿಟ್ಟು, ಕೊಬ್ಬರಿ ಮಿಠಾಯಿ ಬಗ್ಗೆ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಚಾಮುಂಡೇಶ್ವರಿ, ವರುಣ ಕ್ಷೇತ್ರದ ಜನರಿಗೆ ಕೃತಜ್ಞತೆಯಿಂದ ಇರುವೆ. ವಿಶೇಷವಾಗಿ ಪಿಲ್ಲಹಳ್ಳಿ ಜನ ಯಾವತ್ತೂ ಕೈಬಿಟ್ಟಿಲ್ಲ. ದೇವರು ದೇವಸ್ಥಾನದ ಒಳಗೆ ಇರುತ್ತಾನೆ ಅನ್ನೋದು ನಂಬಿಕೆ ಅಷ್ಟೇ. ಪೂಜೆ ಮಾಡುವುದರಿಂದ ಒಳ್ಳೆಯದು ಆಗುತ್ತೆ ಅನ್ನೋ ನಂಬಿಕೆ ಇದೆ. ನಾನು ಅದಕ್ಕೆ ವಿರೋಧವಾಗಿಲ್ಲ. ನಮ್ಮೂರಲ್ಲೂ ದಂಡಿನ ಮಾರಮ್ಮನ ದೇವಸ್ಥಾನ ಇದೆ. ನಾನು ಚಿಕ್ಕವನಿದ್ದಾಗ ತಂಬಿಟ್ಟು ಆರತಿ ತೆಗೆದುಕೊಂಡು ಹೋಗುತ್ತಿದ್ದೆ. ಆಗ ತಂಬಿಟ್ಟು, ಕೊಬ್ಬರಿ ಮಿಠಾಯಿ ತಿನ್ನುವುದೇ ಮಜಾ ಎಂದು ಅಂದಿನ ನೆನಪುಗಳನ್ನು ನೆನಪಿಸಿಕೊಂಡರು.
ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ಯಶಸ್ಸು, ಜೀವನಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಜೊತೆಗೆ ನಮ್ಮ ಯಶಸ್ಸು ನಮ್ಮ ಕಠಿಣ ಪರಿಶ್ರಮದ ಮೇಲೆ ಮಾತ್ರವಲ್ಲದೆ ನಮ್ಮ ಸಹವಾಸದ ಮೇಲೂ ಅವಲಂಬಿತವಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆಚಾರ್ಯ ಚಾಣಕ್ಯರ ಪ್ರಕಾರ, ಕೆಲವು ಜನರ ಸಹವಾಸವು ನಮ್ಮ ಭವಿಷ್ಯವನ್ನು ಕತ್ತಲೆಯಾಗಿಸಬಹುದು. ಅಂತಹ ಜನರು ಆಜನ್ಮ ಶತ್ರುಗಳಿದ್ದಂತೆ. ಅಂತಹವರು ನಿಮ್ಮ ಅಮೂಲ್ಯ ಸಮಯ ಮತ್ತು ಹಣವನ್ನು ನಿಧಾನವಾಗಿ ನಾಶಮಾಡುತ್ತಾರೆ. ಆದ್ದರಿಂದ, ಅಂತಹ ಜನರ ಬಗ್ಗೆ ಯಾವಾಗಲೂ ಜಾಗರೂಕರಾಗಿರಬೇಕು ಎಚ್ಚರಿಕೆ ನೀಡಿದ್ದಾರೆ. ಹಾಗಿದ್ರೆ ಎಂತಹ ಜನರ ಜೊತೆಯಿದ್ದರೆ ಜೀವನವೇ ನಾಶವಾಗುತ್ತದೆ ಎಂಬುದನ್ಮು ನೋಡೊಣ ಬನ್ನಿ.
ಇಂತಹವರ ಸಹವಾಸ ಒಳ್ಳೆಯದಲ್ಲ:
ಇತರರಲ್ಲಿ ತಪ್ಪುಗಳನ್ನು ಹುಡುಕುವವರು: ಚಾಣಕ್ಯನ ಪ್ರಕಾರ, ಪ್ರತಿಯೊಂದು ಸನ್ನಿವೇಶದಲ್ಲೂ ನಿಮ್ಮಲ್ಲಿ ತಪ್ಪುಗಳನ್ನು ಹುಡುಕುವವರು ಅತ್ಯಂತ ಅಪಾಯಕಾರಿ ವ್ಯಕ್ತಿಗಳು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಅಂತಹ ಜನರು ನಿಮ್ಮ ಸಾಧನೆಗಳಲ್ಲಿಯೂ ತಪ್ಪು ಹುಡುಕುತ್ತಾರೆ. ಇಂತಹ ಮನಸ್ಥಿಯ ಜನರು ನಿಮ್ಮ ಸುತ್ತಮುತ್ತ ಇದ್ದರೆ, ನಿಮ್ಮ ಸಕಾರಾತ್ಮಕ ಶಕ್ತಿಯೇ ನಾಶವಾಗುತ್ತದೆ. ಮತ್ತು ಯಾವಾಗಲೂ ನೀವು ಕಿರಿಕಿರಿಯನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಇಂತಹ ಜನರಿಂದ ನೀವು ದೂರವಿರುವುದೇ ಒಳ್ಳೆಯದು.
ಸುಳ್ಳುಗಾರರು : ಯಾವುದೇ ಸಂಬಂಧ ಅಥವಾ ವ್ಯವಹಾರದ ಅಡಿಪಾಯವೇ ನಂಬಿಕೆ. ಪ್ರತಿಯೊಂದು ವಿಷಯದಲ್ಲೂ ಸುಳ್ಳು ಹೇಳುವ ವ್ಯಕ್ತಿಯ ಮೇಲೆ ನಂಬಿಕೆ ಇಟ್ಟರೆ ಅಥವಾ ಆತನನ್ನು ನಂಬಿ ಹೂಡಿಕೆ ಮಾಡಿದರೆ ಇದರಿಂದ ಯಾವುದೇ ರೀತಿಯ ಲಾಭ ಸಿಗಲಾರದು, ಇತಂಹವರಿಂದ ನೋವು, ನಷ್ಟವೇ ಹೆಚ್ಚು ಎಂದು ಚಾಣಕ್ಯ ಹೇಳುತ್ತಾರೆ. ಇಂತಹವರ ಕಾರಣದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಹಾಗಾಗಿ ಸುಳ್ಳುಗಾರರ ಸಹವಾಸ ಒಳ್ಳೆಯದಲ್ಲ.
ಸೋಮಾರಿ ವ್ಯಕ್ತಿ:ಸೋಮಾರಿತನವನ್ನು ಮನುಷ್ಯನ ದೊಡ್ಡ ಶತ್ರು ಎಂದು ಪರಿಗಣಿಸಲಾಗಿದೆ. ಚಾಣಕ್ಯರ ಪ್ರಕಾರ, ಕಠಿಣ ಪರಿಶ್ರಮದಿಂದ ನುಣುಚಿಕೊಳ್ಳುವ ವ್ಯಕ್ತಿಯು ಇತರರನ್ನು ಸಹ ಸೋಮಾರಿಯನ್ನಾಗಿ ಮಾಡುತ್ತಾನೆ. ಇಂತಹ ಸೋಮಾರಿಗಳೊಂದಿಗಿದ್ದರೆ ನಿಮ್ಮ ಶಕ್ತಿ, ಸಮಯ ಎರಡೂ ವ್ಯರ್ಥವಾಗುತ್ತದೆ.
ಜಗಳಗಂಟಿ ವ್ಯಕ್ತಿ: ಕೆಲವು ಜನರು ಕ್ಷುಲ್ಲಕ ವಿಷಯಗಳಿಗೆ ಗಲಾಟೆ ಮಾಡುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಚಾಣಕ್ಯ ನೀತಿಯ ಪ್ರಕಾರ, ಅಂತಹ ಜನರೊಂದಿಗಿನ ಸಹವಾಸ ತುಂಬಾನೇ ಡೇಂಜರ್. ಇವರು ಸುಮ್ಮಸುಮ್ಮನೆ ಜಗಳವಾಡುವ ಮೂಲಕ ನಿಮ್ಮ ನೆಮ್ಮದಿಯನ್ನೇ ಹಾಳುಮಾಡಿಬಿಡುತ್ತಾರೆ.
ಸ್ವಾರ್ಥಿಗಳು: ಸ್ವಾರ್ಥ ಮನೋಭಾವವನ್ನು ಹೊಂದಿರುವ ಜನರೊಂದಿಗಿನ ಸಹವಾಸ ಕೂಡ ಒಳ್ಳೆಯದಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಈ ಸ್ವಾರ್ಥಿಗಳು ತಮ್ಮ ಕಾರ್ಯಕ್ಕಾಗಿ ನಿಮ್ಮನ್ನು ಬಳಸಿಕೊಳ್ಳುತ್ತಾರೆ, ಆದರೆ ಇವರು ನಿಮ್ಮ ಸಹಾಯಕ್ಕೆ ಖಂಡಿತ ಬರಲಾರರು. ಹಾಗಾಗಿ ಈ ಸ್ವಾರ್ಥ ಮನೋಭಾವನದ ಜನರಿಂದ ದೂರವಿದ್ದಷ್ಟು ನೀವು ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತೀರಿ.
ಕೆವಿಎನ್ (KVN) ನಿರ್ಮಾಣ ಸಂಸ್ಥೆ ಇಕ್ಕಟ್ಟಿಗೆ ಸಿಲುಕಿದೆ. ಕೆವಿಎನ್ ನಿರ್ಮಾಣ ಮಾಡಿರುವ ಎರಡು ದೊಡ್ಡ ಸಿನಿಮಾಗಳು ಒಂದರ ಹಿಂದೊಂದರಂತೆ ಬಿಡುಗಡೆ ಮುಂದೂಡಲಾಗಿದೆ. ಕೆವಿಎನ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ಸ್ ಒಟ್ಟಿಗೆ ನಿರ್ಮಾಣ ಮಾಡಿರುವ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಿಂದ ಜೂನ್ 4ಕ್ಕೆ ಮುಂದೂಡಲ್ಪಟ್ಟಿದೆ. ಅದಕ್ಕೆ ಮುಂಚೆಯೇ ಕೆವಿಎನ್ ಅವರೇ ನಿರ್ಮಿಸಿರುವ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ರಾಜಕೀಯ ಕಾರಣಗಳಿಂದಾಗಿ ಬಿಡುಗಡೆ ಆಗದೆ ಡಬ್ಬದಲ್ಲೇ ಕುಳಿತಿದೆ. ಆದರೆ ಇದೀಗ ಮಾರ್ಚ್ 9ಕ್ಕೆ ‘ಜನ ನಾಯಗನ್’ ಸಿನಿಮಾದ ಭವಿಷ್ಯ ನಿರ್ಧಾರ ಆಗಲಿದೆ.
ಜನವರಿ 23ಕ್ಕೆ ಬಿಡುಗಡೆ ಆಗಬೇಕಿದ್ದ ‘ಜನ ನಾಯಗನ್’ ಸಿನಿಮಾಕ್ಕೆ ಸೆನ್ಸಾರ್ ಸಮಸ್ಯೆ ಎದುರಾಗಿತ್ತು. ಸಿನಿಮಾವನ್ನು ಸೆನ್ಸಾರ್ ನವರು ರಿವಿಷನ್ ಕಮಿಟಿಗೆ ಕಳಿಸಲು ಮುಂದಾಗಿದ್ದರು. ಅದರ ವಿರುದ್ಧ ಕೆವಿಎನ್ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ಅಲ್ಲಿಯೂ ಸಹ ನ್ಯಾಯ ವಿಳಂಬ ಆದ ಕಾರಣಕ್ಕೆ ಸಿನಿಮಾವನ್ನು ಸೆನ್ಸಾರ್ನ ರಿವಿಷನ್ ಕಮಿಟಿಗೆ ಕಳಿಸಲು ಕೆವಿಎನ್ ಒಪ್ಪಿಕೊಂಡಿತ್ತು. ಅದರಂತೆ ಮಾರ್ಚ್ 09ರಂದು ರಿವಿಷನ್ ಕಮಿಟಿಯವರು ‘ಜನ ನಾಯಗನ್’ ಸಿನಿಮಾವನ್ನು ವೀಕ್ಷಿಸಲಿದ್ದು, ಸೆನ್ಸಾರ್ ಪ್ರಮಾಣ ಪತ್ರ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಮಾರ್ಚ್ 09ರಂದು ಎರಡು ಗಂಟೆಗೆ ಸೆನ್ಸಾರ್ ನಲ್ಲಿ ‘ಜನ ನಾಯಗನ್’ ಸಿನಿಮಾ ಪ್ರದರ್ಶನ ಆಗಲಿದ್ದು, ಸಿನಿಮಾ ನೋಡಿದ ಸೆನ್ಸಾರ್ ಸದಸ್ಯರು ಸಿನಿಮಾದ ಯಾವ ದೃಶ್ಯಗಳಿಗೆ ಕತ್ತರಿ ಹಾಕಿಸಲಿದ್ದಾರೆ. ಸಿನಿಮಾಕ್ಕೆ ಯಾವ ಪ್ರಮಾಣ ಪತ್ರ ನೀಡಲಿದ್ದಾರೆ ಎಂಬುದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಒಂದೊಮ್ಮೆ ಸೆನ್ಸಾರ್ ಪ್ರಮಾಣ ಪತ್ರ ದೊರೆತಲ್ಲಿ ಒಂದೆರಡು ವಾರಗಳಲ್ಲಿಯೇ ‘ಜನ ನಾಯಗನ್’ ಸಿನಿಮಾವನ್ನು ಬಿಡುಗಡೆ ಮಾಡಲಿದೆ ಕೆವಿಎನ್. ಆದರೆ ಸೆನ್ಸಾರ್ನವರು ಮಾರ್ಚ್ 09ರಂದು ಇನ್ನೇನು ಕಿರಿಕ್ ಮಾಡುತ್ತಾರೋ ಎಂಬ ಭಯವೂ ಕೆವಿಎನ್ ಗೆ ಇದೆ.
‘ಜನ ನಾಯಗನ್’ ಸಿನಿಮಾವು ತೆಲುಗಿನ ‘ಭಗವಂತ್ ಕೇಸರಿ’ ಸಿನಿಮಾದ ರೀಮೇಕ್ ಆಗಿದೆ. ಆದರೆ ದಳಪತಿ ವಿಜಯ್ ಅವರು ತಮ್ಮ ರಾಜಕೀಯ ಪಕ್ಷದ ಅಜೆಂಡವನ್ನು ಸಹ ಈ ಸಿನಿಮಾನಲ್ಲಿ ಸೇರಿಸಿದ್ದಾರೆ. ವಿಪಕ್ಷಗಳನ್ನು ಟೀಕೆ ಮಾಡುವ ಸಂಭಾಷಣೆಗಳು, ತಮ್ಮ ಪಕ್ಷವನ್ನು ಕೊಂಡಾಡುವ ಸಂಭಾಷಣೆ, ದೃಶ್ಯಗಳು ‘ಜನ ನಾಯಗನ್’ ಸಿನಿಮಾದಲ್ಲಿರುವ ಕಾರಣ ಸಿನಿಮಾ ಬಿಡುಗಡೆ ಆಗದಂತೆ ಇತರೆ ರಾಜಕೀಯ ಪಕ್ಷಗಳು ಪ್ರಭಾವ ಬೀರಿವೆ ಎನ್ನಲಾಗುತ್ತಿದೆ.
‘ಜನ ನಾಯಗನ್’ ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಪೂಜಾ ಹೆಗ್ಡೆ ನಾಯಕಿ. ಮಲಯಾಳಂ ನಟಿ ಮಮಿತಾ ಬಿಜು ಸಹ ಸಿನಿಮಾನಲ್ಲಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ.
2026 ರ ಟಿ20 ವಿಶ್ವಕಪ್ನ ಫೈನಲ್ (T20 World Cup Final 2026) ಪಂದ್ಯಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆಯುಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ಮುಖಾಮುಖಿಯಾಗುತ್ತಿವೆ. ಆದಾಗ್ಯೂ ಈ ಪಂದ್ಯ ನಡೆಯುವುದಕ್ಕೂ ಮುನ್ನವೇ ವಿಶ್ವ ಕ್ರಿಕೆಟ್ನ ದಿಗ್ಗಜರು ಹಾಗೂ ಮಾಜಿ ಆಟಗಾರರು ಯಾರು ಚಾಂಪಿಯನ್ ಆಗಲಿದ್ದಾರೆ ಎಂಬುದನ್ನು ತಮ್ಮದೇ ವಿವರಣೆಯ ಮೂಲಕ ಹೇಳಲಾರಂಭಿಸಿದ್ದಾರೆ. ಅವರುಗಳಲ್ಲಿ ಹೆಚ್ಚಿನವರು ಭಾರತವೇ ಗೆಲುವಿನ ಫೇವರೇಟ್ ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಂತಹವರಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ (AB de Villiers) ಕೂಡ ಸೇರಿದ್ದು, ಈ ಐತಿಹಾಸಿಕ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡ ಭಾರತ ಎಂದಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ.
ಗೆಲ್ಲುವ ಸಾಧ್ಯತೆ ಕೇವಲ 10 ಪ್ರತಿಶತ
ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಎಬಿ ಡಿವಿಲಿಯರ್ಸ್, ‘ಪ್ರಸ್ತುತ ಫಾರ್ಮ್ ಮತ್ತು ತವರಿನ ಪರಿಸ್ಥಿತಿಯನ್ನು ಗಮನಿಸಿದರೆ, ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಆಗಲು ಸುವರ್ಣಾವಕಾಶವನ್ನು ಹೊಂದಿದೆ. ನ್ಯೂಜಿಲೆಂಡ್ ಬಗ್ಗೆ ಹೇಳುವುದಾದರೆ, ಭಾರತದಂತಹ ಬಲಿಷ್ಠ ತಂಡದ ವಿರುದ್ಧ ಗೆಲ್ಲುವ ಸಾಧ್ಯತೆಗಳು ತುಂಬಾ ಕಡಿಮೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನ್ಯೂಜಿಲೆಂಡ್ ಗೆಲ್ಲುವ ಸಾಧ್ಯತೆ ಕೇವಲ 10 ರಿಂದ 20 ಪ್ರತಿಶತದಷ್ಟು ಮಾತ್ರ. ಭಾರತವನ್ನು ಸೋಲಿಸಲು ಅವರು ತಮ್ಮ ಜೀವನದ ಅತ್ಯುತ್ತಮ ಕ್ರಿಕೆಟ್ ಆಡಬೇಕಾಗುತ್ತದೆ’ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಬುಮ್ರಾ ಅತಿದೊಡ್ಡ ಅಸ್ತ್ರ
ಮುಂದುವರೆದು ಮಾತನಾಡಿರುವ ಎಬಿ ಡಿವಿಲಿಯರ್ಸ್, ‘ಜಸ್ಪ್ರೀತ್ ಬುಮ್ರಾ ಭಾರತೀಯ ತಂಡದ ಅತಿದೊಡ್ಡ ಅಸ್ತ್ರ ಎಂದಿದ್ದಾರೆ. ಬುಮ್ರಾ ಅವರ ಬೌಲಿಂಗ್ ಮತ್ತು ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯವನ್ನು ಶ್ಲಾಘಿಸಿರುವ ಎಬಿಡಿ, ‘ಪಂದ್ಯದ ಪ್ರತಿ ಕ್ಷಣವನ್ನೂ ಬುಮ್ರಾ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ನಿರ್ದಿಷ್ಟ ಸನ್ನಿವೇಶದಲ್ಲಿ ತಂಡಕ್ಕೆ ಏನು ಬೇಕು ಎಂದು ಅವರಿಗೆ ತಿಳಿದಿದೆ ಮತ್ತು ಅವರು ತಮ್ಮ ಕೌಶಲ್ಯಗಳನ್ನು ಸಂಪೂರ್ಣ ನಿಖರತೆಯಿಂದ ಬಳಸುತ್ತಾರೆ. ಬುಮ್ರಾ ಅವರ ಆತ್ಮವಿಶ್ವಾಸ ಮತ್ತು ಯಾರ್ಕರ್ಗಳನ್ನು ಎಸೆಯುವ ಅವರ ಸಾಮರ್ಥ್ಯ ಭಾರತಕ್ಕೆ ಪ್ಲಸ್ ಆಗಿದೆ’ ಎಂದಿದ್ದಾರೆ.
‘ನನಗೆ ಟೀಂ ಇಂಡಿಯಾವೇ ಗೆಲುವಿನ ಫೇವರೇಟ್. ನನ್ನ ಮನಸ್ಸು ಮತ್ತು ಹೃದಯ, ಎಲ್ಲವೂ ಭಾರತದ ಗೆಲುವಿನತ್ತ ಮುಖ ಮಾಡಿದೆ ಎಂದಿರುವ ಡಿವಿಲಿಯರ್ಸ್, ನ್ಯೂಜಿಲೆಂಡ್ ತಂಡವನ್ನು ಸಹ ಬುದ್ಧಿವಂತ ತಂಡ ಎಂದು ಬಣ್ಣಿಸಿದ್ದಾರೆ. ನ್ಯೂಜಿಲೆಂಡ್ ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ಯೋಜನೆಗಳನ್ನು ಅಳವಡಿಸಿಕೊಳ್ಳುವಲ್ಲಿ ನಿಪುಣವಾಗಿದೆ. ಆದರೆ ಅಂತಿಮ ಪಂದ್ಯದಲ್ಲಿ, ಭಾರತದ ಬಲ ಎಷ್ಟು ದೊಡ್ಡದೆಂದರೆ ನ್ಯೂಜಿಲೆಂಡ್ ಗೆಲ್ಲಲು ಪವಾಡ ಮಾಡಲೇಬೇಕು’ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹುಬ್ಬಳ್ಳಿ, (ಮಾರ್ಚ್ 07): ಪೊಲೀಸರ ವಿಚಾರಣೆಗೆ ಹೆದರಿ ರೈತನೋರ್ವ (Farmer) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ (Hubballi) ತಾಲೂಕಿನ ಉಮಚಗಿ ಗ್ರಾಮದಲ್ಲಿ ನಡೆದಿದೆ. ನಿಂಗಪ್ಪ ಅಂಗಡಿ(48) ಮೃತ ರೈತ. ಹೊಲದ ದಾರಿ ವಿಚಾರವಾಗಿ ಉಮಚಗಿ ಗ್ರಾಮದಲ್ಲಿ ಗಲಾಟೆಯಾಗಿದ್ದು, ಈ ಸಂಬಂಧ ನಿಂಗಪ್ಪನ ಮೇಲೆ ಹಲ್ಲೆ ಮಾಡಿದ್ದಲ್ಲೇ ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿದೆ. ಬಳಿಕ ಪೊಲೀಸರು ಕರೆ ಮಾಡಿ ಸ್ಪೆಷನ್ಗೆ ಬರುವಂತೆ ಹೇಳಿದ್ದಾರೆ. ಇದರಿಂದ ಹೆದರಿದ ರೈತ ಜಮೀನಿನಲ್ಲಿ ಮರವೊಂದಕ್ಕೆ ನೇಣುಬಿಗಿದುಕೊಂಡು ಪ್ರಾಣಬಿಟ್ಟಿದ್ದಾನೆ.
ಜಮೀನು ಹಾದಿ ಸಂಬಂಧ ಉಮಚಗಿ ಗ್ರಾಮದಲ್ಲಿ ಜಗಳವಾಗಿದ್ದು, ಈ ಸಂಬಂಧ ಗ್ರಾಮ ಪಂಚಾಯಿತಿ ಸದಸ್ಯರು, ನಿಂಗಪ್ಪನನ್ನು ಕರೆಸಿ ಹಲ್ಲೆ ಮಾಡಿದ್ದಾರೆ. ಸಾಲದಕ್ಕೆ ಪಂಚಾಯಿತಿ ಸದಸ್ಯರು, ನಿಂಗಪ್ಪ ವಿರುದ್ಧ ಹುಬ್ಬಳ್ಳಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಈ ಪ್ರಕರಣ ಸಂಬಂಧ ಪೊಲೀಸರು ಸಹ ಎರಡ್ಮೂರು ದಿನಗಳಿಂದ ನಿಂಗಪ್ಪನಿಗೆ ಕರೆ ಮಾಡಿ ಠಾಣೆಗೆ ವಿಚಾರಣೆ ಬರುವಂತೆ ಸೂಚಿಸಿದ್ದಾರೆ. ಇಂದು (ಮಾರ್ಚ್ 07) ಸಹ ಪೊಲಿಸರು, ನಿಮ್ಮ ಮೇಲೆ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಸ್ಟೆಷನ್ಗೆ ಬನ್ನಿ ಎಂದು ನಿಂಗಪ್ಪನಿಗೆ ಕರೆ ಒತ್ತಾಯ ಮಾಡಿದ್ದಾರೆ.
ಮೊದಲೇ ಗ್ರಾಮ ಪಂಚಾಯಿತಿ ಪಂಚಾಯಿತಿ ಸದಸ್ಯರ ಹಲ್ಲೆಯಿಂದ ಮನನೊಂದಿದ್ದ ನಿಂಗಪ್ಪನಿಗೆ ಪೊಲೀಸರು ಸಹ ಮೇಲಿಂದ ಮೇಲೆ ಕರೆ ಮಾಡಿ ಠಾಣೆಗೆ ಬರುವಂತೆ ಒತ್ತಾಯಿಸಿದ್ದರಿಂದ ಭಯಗೊಂಡಿದ್ದು, ಕೊನೆಗೆ ದಿಕ್ಕುತೋಚದಂತಾಗಿ ಜಮೀನಿಗೆ ತೆರಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಿಂಗಪ್ಪನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಅಟ್ರಾಸಿಟಿ ಕೇಸ್ ದಾಖಲಿಸಿ ಇದೀಗ ಆತನನ್ನು ಬಲಿ ಪಡೆದುಕೊಂಡಿದ್ದಾರೆ. ಇದೀಗ ನಿಂಗಪ್ಪನ ಸಾವಿಗೆ ಹೊಣೆ ಯಾರು? ಈ ರೀತಿಯ ಪ್ರಕರಣದಲ್ಲಿ ಪೊಲೀಸರು ಸಹ ತಮ್ಮ ವಿವೇಚನೆಯಿಂದ ಸರಿ ತಪ್ಪು ನೋಡಬೇಕಿದೆ.
ಹೆಣ್ಣು (Women’s) ಮನೆಯ ಲಕ್ಷ್ಮಿ, ಸಮಾಜದ ಕಣ್ಣು. ಮನೆಯ ಕಣ್ಣು. ಹೌದು ಆಕೆ ತಾಯಿ, ಸಹೋದರಿ, ಹೆಂಡತಿ, ಗೆಳತಿಯಾಗಿ ಶಕ್ತಿ ಬೆಂಬಲ ಮತ್ತು ಸ್ಪೂರ್ತಿ ನೀಡುವುದರ ಜೊತೆಗೆ ಸಮಾಜದ ಅಭಿವೃದ್ಧಿಗೂ ಸಹ ಪುರುಷರಷ್ಟೇ ಸಮಾನ ಕೊಡುಗೆ ನೀಡುತ್ತಿದ್ದಾರೆ. ಇವರ ಈ ಸಾಧನೆಗಳನ್ನು ಗುರುತಿಸಿ ಗೌರವಿಸಲು, ಲಿಂಗ ಸಮಾನತೆ, ಮಹಿಳಾ ಸಬಲೀಕರಣವನ್ನು ಪ್ರೋತ್ಸಾಹಿಸಲು ಹಾಗೂ ಮಹಿಳೆಯರ ಕಠಿಣ ಪರಿಶ್ರಮ, ಪ್ರೀತಿ ಮತ್ತು ಕೊಡುಗೆಗಳನ್ನು ಗೌರವಿಸಲು ಪ್ರತಿವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆ ಆರಂಭವಾದದ್ದು ಹೇಗೆ, ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳೀಯೋಣ ಬನ್ನಿ.
ಅಂತಾರಾಷ್ಟ್ರೀಯ ಮಹಿಳಾ ದಿನದ ಇತಿಹಾಸವೇನು?
ಹಲವು ವರ್ಷಗಳ ಹಿಂದೆ ಅಂದರೆ 1908 ರಲ್ಲಿ, ಸುಮಾರು 15,000 ಮಹಿಳೆಯರು ನ್ಯೂಯಾರ್ಕ್ನಲ್ಲಿ ಕಡಿಮೆ ಕೆಲಸದ ಸಮಯ, ಉತ್ತಮ ವೇತನ ಮತ್ತು ಮತದಾನದ ಹಕ್ಕಿಗಾಗಿ ಪ್ರತಿಭಟಿಸಿದರು. ಈ ಪ್ರತಿಭಟನೆಯನ್ನು ಅಂತಾರಾಷ್ಟ್ರೀಯ ಮಹಿಳಾ ದಿನದ ಅಡಿಪಾಯವೆಂದು ಪರಿಗಣಿಸಲಾಗಿದೆ. ಇದಾದ ಸುಮಾರು 2 ವರ್ಷಗಳ ನಂತರ, ಅಂದರೆ 1910 ರಲ್ಲಿ, ಕ್ಲಾರಾ ಜೆಟ್ಕಿನ್ ಕೋಪನ್ ಹ್ಯಾಗನ್ನಲ್ಲಿ ನಡೆದ ಸಮ್ಮೇಳನದಲ್ಲಿ ‘ಅಂತರರಾಷ್ಟ್ರೀಯ ಮಹಿಳಾ ದಿನ’ವನ್ನು ಆಚರಿಸಲು ಪ್ರಸ್ತಾಪಿಸಲಾಯಿತು. 1911 ರಲ್ಲಿ, ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ನಲ್ಲಿ ಮೊದಲ ಬಾರಿಗೆ ಮಹಿಳಾ ದಿನವನ್ನು ಆಚರಿಸಲಾಯಿತು. ಇದಾದ ನಂತರ ವಿಶ್ವಸಂಸ್ಥೆಯು 1975ರಲ್ಲಿ ಮಹಿಳಾ ದಿನವನ್ನು ಆಚರಿಸಲು ಪ್ರಾರಂಭಿಸಿತು. ಎರಡು ವರ್ಷಗಳ ಬಳಿಕ 1977ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ಮಾರ್ಚ್ 8 ಅನ್ನು ಮಹಿಳಾ ಹಕ್ಕುಗಳು ಮತ್ತು ವಿಶ್ವ ಶಾಂತಿಗಾಗಿ ವಿಶ್ವ ಸಂಸ್ಥೆಯ ದಿನವೆಂದು ಘೋಷಿಸಲು ಸದಸ್ಯ ರಾಷ್ಟ್ರಗಳನ್ನು ಆಹ್ವಾನಿಸಿತು. ಹೀಗೆ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಅಂದಿನಿಂದ ಮಹಿಳಾ ದಿನವನ್ನು ಮಾರ್ಚ್ 8 ರಂದು ಆಚರಿಸುತ್ತಾ ಬರಲಾಗುತ್ತಿದೆ.
ಮಾರ್ಚ್ 8 ರಂದೇ ಏಕೆ ಮಹಿಳಾ ದಿನವನ್ನು ಆಚರಿಸುವುದು?
ವಾಸ್ತವವಾಗಿ, ಮಾರ್ಚ್ 8, 1917 ರಂದು, ರಷ್ಯಾದ ಮಹಿಳೆಯರು ಬ್ರೆಡ್ ಮತ್ತು ಶಾಂತಿಗಾಗಿ ಒತ್ತಾಯಿಸಿ ಐತಿಹಾಸಿಕ ಮುಷ್ಕರವನ್ನು ಆಯೋಜಿಸಿದ್ದರು. ಆಹಾರ ಮತ್ತು ಶಾಂತಿಗಾಗಿ ಒತ್ತಾಯಿಸಿ ಮುಷ್ಕರ ನಡೆಸಿದರು. ಚಳುವಳಿ ಎಷ್ಟು ವ್ಯಾಪಕವಾಯಿತು ಎಂದರೆ ಚಕ್ರವರ್ತಿಯನ್ನು ಪಟ್ಟದಿಂದ ತ್ಯಜಿಸಲು ಒತ್ತಾಯಿಸಲಾಯಿತು ಮತ್ತು ಮಧ್ಯಂತರ ಸರ್ಕಾರವು ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿತು. ಈ ಘಟನೆ ಮಾರ್ಚ್ 8 ರಂದು ನಡೆದ ಕಾರಣ, 1977 ರಲ್ಲಿ, ವಿಶ್ವಸಂಸ್ಥೆಯು ಮಹಿಳಾ ದಿನವನ್ನು ಆಚರಿಸಲು ಮಾರ್ಚ್ 8 ನ್ನೇ ಆಯ್ಕೆ ಮಾಡಿತು.
ಇಂದು ಮಹಿಳೆಯರು ರಾಜಕೀಯ, ವಿಜ್ಞಾನ, ಕ್ರೀಡೆ, ಕಲೆ ಮತ್ತು ವ್ಯವಹಾರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಈ ದಿನವು ಅವರ ಹೋರಾಟ ಮತ್ತು ಯಶಸ್ಸಿನ ಕಥೆಗಳನ್ನು ಗೌರವಿಸಲು ಇರುವ ಒಂದು ಅವಕಾಶವಾಗಿದೆ.
ಮಹಾಬಲಿಪುರಂ ಮಾ.7: ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ನಟ ವಿಜಯ್, ತಮ್ಮ ‘ತಮಿಳಗ ವೆಟ್ರಿ ಕಳಗಂ’ ( TVK ) ಪಕ್ಷದ ವತಿಯಿಂದ ಇಂದು (ಮಾ.7) ಚುನಾವಣೆ ಭರವಸೆಯನ್ನು ನೀಡಿದ್ದಾರೆ. ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣಕ್ಕಾಗಿ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಪ್ರಕಟಿಸಿದ್ದಾರೆ. “ವಿಜಯದ ಪಯಣ” (Vetri Payanam) ಎಂಬ ಹೆಸರಿನಡಿ ಮಹಿಳೆಯರಿಗೆ ಹಲವು ಕೊಡುಗೆಗಳನ್ನು ಅವರು ಘೋಷಿಸಿದ್ದಾರೆ. ರಾಜ್ಯದ ಎಲ್ಲಾ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಸಂಪೂರ್ಣ ಉಚಿತ ಪ್ರಯಾಣದ ಸೌಲಭ್ಯ.
ಮಹಿಳಾ ಸುರಕ್ಷತೆಗಾಗಿ ವಿಶೇಷ ಪಡೆ ರಚನೆ. ಈ ಪಡೆಯ ಮಹಿಳಾ ಅಧಿಕಾರಿಗಳು ಬಾಡಿ ಕ್ಯಾಮೆರಾಗಳೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತಾ ಕಾರ್ಯ ನಿರ್ವಹಿಸಲಿದ್ದಾರೆ. ಖಾಸಗಿ ಶೇರ್ ಆಟೋಗಳೂ ಸೇರಿದಂತೆ ಎಲ್ಲಾ ಸಾರ್ವಜನಿಕ ವಾಹನಗಳಲ್ಲಿ ಪ್ಯಾನಿಕ್ ಬಟನ್ ಅಳವಡಿಕೆ. ತುರ್ತು ಸಂದರ್ಭದಲ್ಲಿ 5 ನಿಮಿಷಗಳಲ್ಲಿ ಸಹಾಯ ಲಭ್ಯವಾಗುವಂತೆ ಕ್ರಮ.
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:
Mahabalipuram, Tamil Nadu: Actor and TVK president Vijay announces party’s poll promises
He says, “Vetri Payanam (Victory Journey) Scheme- Women will be allowed to travel free of cost on all government buses. To ensure women’s safety, a Rani Velu Nachiyar Force will be created.… https://t.co/aWCmGLKxRV
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳ ಸ್ಥಾಪನೆ. ಸಿಸಿಟಿವಿ ಮತ್ತು ಸರಿಯಾದ ಬೀದಿ ದೀಪಗಳ ಮೂಲಕ ಕತ್ತಲೆ ಪ್ರದೇಶಗಳನ್ನು ಇಲ್ಲದಂತೆ ಮಾಡುವುದು. ರೇಷನ್ ಅಂಗಡಿಗಳು, ಶಾಲೆ ಮತ್ತು ಕಾಲೇಜುಗಳ ಮೂಲಕ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆ. ಮಹಿಳಾ ಸ್ವಸಹಾಯ ಸಂಘಗಳಿಗೆ 5 ಲಕ್ಷದವರೆಗೆ ಬಡ್ಡಿರಹಿತ ಹಣಕಾಸು ನೆರವು.ನೋಂದಾಯಿತ ಸಣ್ಣ ಉದ್ದಿಮೆಗಳಾಗಿ ಬದಲಾಗುವ ಸಂಘಗಳಿಗೆ ವಾರ್ಷಿಕ ₹5 ಲಕ್ಷದವರೆಗೆ 100% ಅನುದಾನ.
ತಮಿಳುನಾಡಿನಲ್ಲಿ ಜನಿಸುವ ಪ್ರತಿಯೊಂದು ಮಗುವಿಗೆ ಸರ್ಕಾರದ ವತಿಯಿಂದ ಚಿನ್ನದ ಉಂಗುರ ಉಡುಗೊರೆ. ಮಗುವಿಗೆ ಬೇಕಾದ ಬಟ್ಟೆ, ಸಾಬೂನು, ಆಟಿಕೆಗಳು, ಸೊಳ್ಳೆ ಪರದೆ ಮತ್ತು ನ್ಯಾಪ್ಕಿನ್ ಒಳಗೊಂಡ ಸಂಪೂರ್ಣ ಕಿಟ್ ವಿತರಣೆ.
ದಾಖಲೆಯ ಮೂರನೇ ಬಾರಿಗೆ ಟಿ20 ವಿಶ್ವಕಪ್ (T20 World Cup Final 2026) ಗೆದ್ದು ಅತಿ ಹೆಚ್ಚು ಬಾರಿ ಚಾಂಪಿಯನ್ ಆದ ತಂಡವೆಂಬ ದಾಖಲೆ ಬರೆಯಲು ಟೀಂ ಇಂಡಿಯಾಗೆ (Team India) ಇನ್ನೊಂದು ಗೆಲುವು ಬೇಕಾಗಿದೆ. 2026 ರ ಟಿ20 ವಿಶ್ವಕಪ್ನಲ್ಲಿ ಫೈನಲ್ಗೇರಿರುವ ಟೀಂ ಇಂಡಿಯಾ, ನ್ಯೂಜಿಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ಸಜ್ಜಾಗಿದೆ ನಿಂತಿದೆ. ಉಭಯ ತಂಡಗಳ ನಡುವಿನ ಈ ಫೈನಲ್ ಕಾಳಗ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ (Narendra Modi Stadium) ನಡೆಯಲಿದೆ. ಟೀಂ ಇಂಡಿಯಾಕ್ಕೆ ತವರಿನ ಲಾಭ ಸಿಗುವ ಸಾಧ್ಯತೆಗಳು ಹೆಚ್ಚಿದ್ದರೂ ಅಭಿಮಾನಿಗಳಿಗೆ 2023 ರ ಆ ಫೈನಲ್ ಸೋಲು ಆತಂಕವನ್ನುಂಟು ಮಾಡಿದೆ. ಆದಾಗ್ಯೂ ಮೋದಿ ಮೈದಾನದಲ್ಲಿ ಭಾರತದ ದಾಖಲೆ ಉತ್ತಮವಾಗಿದ್ದು, ಟ್ರೋಫಿ ಗೆಲ್ಲುವ ಫೇವರೇಟ್ ಎನಿಸಿಕೊಂಡಿದೆ.
ಮೋದಿ ಮೈದಾನದಲ್ಲಿ ಭಾರತದ ದಾಖಲೆ ಹೇಗಿದೆ?
ಮೋದಿ ಮೈದಾನದಲ್ಲಿ ಭಾರತದ ಒಟ್ಟಾರೆ ಟಿ20 ದಾಖಲೆಯನ್ನು ನೋಡುವುದಾದರೆ.. ಈ ಮೈದಾನದಲ್ಲಿ ಭಾರತ ತಂಡವು ಇದುವರೆಗೆ ಒಟ್ಟು 10 ಟಿ20 ಪಂದ್ಯಗಳನ್ನು ಆಡಿದೆ. ಅವುಗಳಲ್ಲಿ ಏಳು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಮೂರು ಪಂದ್ಯಗಳಲ್ಲಿ ಸೋತಿದೆ. ಹಾಗೆಯೇ 2021 ರಿಂದ ಈ ಕ್ರೀಡಾಂಗಣದಲ್ಲಿ ಭಾರತ ತಂಡ ಕೇವಲ ಮೂರು ಪಂದ್ಯಗಳಲ್ಲಿ ಸೋತಿದೆ. ಇದರ ಜೊತೆಗೆ ಈ ಟಿ20 ವಿಶ್ವಕಪ್ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೆ ಆರು ಪಂದ್ಯಗಳು ನಡೆದಿವೆ.
ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಬೆನ್ನಟ್ಟಿದ ತಂಡಗಳು ಎರಡರಲ್ಲಿ ಗೆದ್ದಿವೆ. ಉಳಿದಂತೆ ಒಂದು ಪಂದ್ಯ ಟೈ ಆಗಿತ್ತು. ಇನ್ನು ಈ ಮೈದಾನದಲ್ಲಿ ನ್ಯೂಜಿಲೆಂಡ್ ತಂಡದ ದಾಖಲೆಯನ್ನು ನೋಡುವುದಾದರೆ.. ಎರಡು ಪಂದ್ಯಗಳನ್ನು ಆಡಿರುವ ಕಿವೀಸ್ ಎರಡರಲ್ಲೂ ಸೋಲು ಕಂಡಿದೆ. ಹೀಗಾಗಿ ಮೋದಿ ಮೈದಾನದಲ್ಲಿ ಮೇಲುಗೈ ಸಾಧಿಸಿರುವ ಟೀಂ ಇಂಡಿಯಾಗೆ ಅಂಕಿ ಅಂಶಗಳು ಪೂರಕವಾಗಿವೆ.
ಈ ವಿಶ್ವಕಪ್ನಲ್ಲಿ ಭಾರತದ ದಾಖಲೆ
ಈ ವಿಶ್ವಕಪ್ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಎರಡು ಪಂದ್ಯಗಳನ್ನು ಆಡಿದೆ. ಇದರಲ್ಲಿ ಒಂದು ಪಂದ್ಯವನ್ನು ಗೆದ್ದಿದ್ದು, ಒಂದು ಪಂದ್ಯದಲ್ಲಿ ಸೋತಿದೆ. ಸೂಪರ್ 8 ಸುತ್ತಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇದೇ ಮೈದಾನದಲ್ಲಿ ಪಂದ್ಯವನ್ನಾಡಿದ್ದ ಭಾರತ, ಹೀನಾಯ ಸೋಲು ಕಂಡಿತ್ತು. ಇದು ಟೀಂ ಇಂಡಿಯಾ ಅಭಿಮಾನಿಗಳನ್ನು ಆತಂಕಕ್ಕೆ ದೂಡಿದೆ. ಆದ್ದರಿಂದ ಕಳೆದ ಸೋಲಿನ ಕಹಿಯನ್ನು ಮರೆತು ಟೀಂ ಇಂಡಿಯಾ ಈ ಪಂದ್ಯಕ್ಕೀಳಿಯಬೇಕಾಗಿದೆ.
ಇನ್ನು ಟಿ20 ವಿಶ್ವಕಪ್ ಇತಿಹಾಸದಲ್ಲಿ ಉಭಯ ತಂಡಗಳ ನಡುವಿನ ಮುಖಾಮುಖಿ ದಾಖಲೆಗಳ ಬಗ್ಗೆ ಹೇಳುವುದಾದರೆ.. ಈ ಎರಡು ತಂಡಗಳು ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೂರು ಬಾರಿ ಮುಖಾಮುಖಿಯಾಗಿವೆ. ದುರಾದೃಷ್ಟಕರ ಸಂಗತಿಯೆಂದರೆ ಈ ಮೂರು ಪಂದ್ಯಗಳಲ್ಲೂ ಭಾರತ ಸೋತಿದೆ. ಈ ಒಂದು ಅಂಕಿಅಂಶ ನ್ಯೂಜಿಲೆಂಡ್ ಪರವಾಗಿದ್ದರೂ, ಟೀಂ ಇಂಡಿಯಾ ಸೋಲಿನ ಸರಣಿಯನ್ನು ಮುರಿದು ಇತಿಹಾಸ ನಿರ್ಮಿಸುವ ತವಕದಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಡಾರ್ಲಿಂಗ್ ಕೃಷ್ಣ (Darling Krishna) ನಟಿಸಿ, ನಿರ್ದೇಶನ ಮಾಡಿರುವ ‘ಲವ್ ಮಾಕ್ಟೆಲ್ 3’ ಸಿನಿಮಾದ ಟ್ರೈಲರ್ ಇಂದು (ಮಾರ್ಚ್ 07) ಬಿಡುಗಡೆ ಆಗಿದೆ. 2020 ರಲ್ಲಿ ಬಿಡುಗಡೆ ಆದ ‘ಲವ್ ಮಾಕ್ಟೆಲ್’ ಸಿನಿಮಾದ ಕತೆಯನ್ನು ಎಳೆಯುತ್ತಾ, ಹಿಂಜುತ್ತಾ ಇದೀಗ ‘ಲವ್ ಮಾಕ್ಟೆಲ್ 3’ ವರೆಗೂ ಬಂದಿದ್ದು, ಟ್ರೇಲರ್ನಲ್ಲೇ ಡಾರ್ಲಿಂಗ್ ಕೃಷ್ಣ ಅವರು ಹೇಳಿರುವಂತೆ ಇದು ‘ಲವ್ ಮಾಕ್ಟೆಲ್ 3’ ಸಿನಿಮಾದ ಅಂತಿಮ ಕತೆ ಆಗಿರಲಿದೆ. ‘ಲವ್ ಮಾಕ್ಟೆಲ್ 3’ ಸಿನಿಮಾ ಮೂಲಕ ‘ಲವ್ ಮಾಕ್ಟೆಲ್’ ಸರಣಿಗೆ ಸಮಾಪ್ತಿ ಹಾಡುತ್ತಿದ್ದಾರೆ ಡಾರ್ಲಿಂಗ್ ಕೃಷ್ಣ.
ಇದೀಗ ಬಿಡುಗಡೆ ಆಗಿರುವ ಟ್ರೈಲರ್ನಲ್ಲಿ ‘ಲವ್ ಮಾಕ್ಟೆಲ್’ ಸರಣಿಯ ಮೊದಲೆರಡು ಸಿನಿಮಾಗಳ ಹಲವು ದೃಶ್ಯಗಳಿಗೆ ಮೊದಲು ತೋರಿಸಲಾಗಿದ್ದು, ಪ್ರೇಕ್ಷಕರಿಗೆ ಕತೆಯನ್ನು ರೀಕಾಲ್ ಮಾಡಲಾಗಿದೆ. ಚಿತ್ರಮಂದಿರಕ್ಕೆ ಹೋಗುವ ಮುಂಚೆಯೇ ಪ್ರೇಕ್ಷಕರನ್ನು ಟ್ರೈಲರ್ ಮೂಲಕ ಸಜ್ಜುಗೊಳಿಸಿದ್ದಾರೆ ಡಾರ್ಲಿಂಗ್ ಕೃಷ್ಣ. ‘ಲವ್ ಮಾಕ್ಟೆಲ್ 2’ ಸಿನಿಮಾನಲ್ಲಿ ಸಣ್ಣ ಮಗುವೊಂದನ್ನು ನಾಯಕ ದತ್ತು ಪಡೆವ ಮೂಲಕ ಸಿನಿಮಾ ಅಂತ್ಯವಾಗಿತ್ತು.
‘ಲವ್ ಮಾಕ್ಟೆಲ್ 3’ ಸಿನಿಮಾನಲ್ಲಿ ಆ ಪುಟ್ಟ ಹುಡುಗಿಯದ್ದೇ ಕತೆ ಇದೆ. ಬಿಡುಗಡೆ ಆಗಿರುವ ಟ್ರೈಲರ್ನಲ್ಲಿ ಹೊಸ ಸಿನಿಮಾದ ಗುಟ್ಟುಗಳನ್ನು ಹೆಚ್ಚಾಗಿ ಬಿಟ್ಟುಕೊಡಲಾಗಿಲ್ಲ, ಆದರೆ ಆ ಪುಟ್ಟ ಬಾಲಕಿಯನ್ನು ಹೆಚ್ಚು ಫೋಕಸ್ ಮಾಡಲಾಗಿದೆ. ಆದರೆ ಬಂದು ಹೋಗುವ ನಾಯಕಿಯರು, ಲವ್ ಸ್ಟೋರಿ ಇನ್ನಿತರೆಗಳ ಬಗ್ಗೆ ಹೆಚ್ಚು ಸುಳಿವು ಬಿಟ್ಟುಕೊಡಲಾಗಿಲ್ಲ. ಆದರೆ ಇದು ಸಹ ನವಿರಾದ, ಭಾವಕ ಕತೆಯನ್ನು ಹೊಂದಿರುವುದಂತೂ ಖಾತ್ರಿ.
‘ಲವ್ ಮಾಕ್ಟೆಲ್ 3’ ಸಿನಿಮಾವನ್ನು ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿದ್ದು, ಡಾರ್ಲಿಂಗ್ ಕೃಷ್ಣ ಮತ್ತು ಅವರ ಪತ್ನಿ ಮಿಲನಾ ನಾಗರಾಜ್ ಅವರು ಒಟ್ಟಿಗೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಕ್ಯಾಮೆರಾ ಕೆಲಸ, ಎಡಿಟರ್ ಮಾಡಿರುವುದು ಶ್ರೀ ಕ್ರೇಜಿ ಮೈಂಡ್. ಸಿನಿಮಾನಲ್ಲಿ ಡಾರ್ಲಿಂಗ್ ಕೃಷ್ಣ, ಸಮೃತ್ಥ, ಮಿಲನಾ ನಾಗರಾಜ್, ದಿಲೀಪ್ ರಾಜ್, ಶ್ವೇತ ಪ್ರಸಾದ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ನಕುಲ್ ಅಭಯಂಕರ್. ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆ ಆಗುತ್ತಿದೆ. ‘ಟಾಕ್ಸಿಕ್’ ಮುಂದೂಡಲ್ಪಟ್ಟಿದ್ದರಿಂದ ದೊರೆತ ಅವಕಾಶವನ್ನು ಬಾಚಿಕೊಂಡಿದ್ದಾರೆ ಡಾರ್ಲಿಂಗ್ ಕೃಷ್ಣ.
ವಾಷಿಂಗ್ಟನ್ ಮಾ.7: ಇಸ್ರೇಲ್ ಮತ್ತು ಅಮೆರಿಕದ ದಾಳಿಯಿಂದ ಜರ್ಜರಿತವಾಗಿರುವ ಇರಾನ್ ಅನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ಮಧ್ಯಪ್ರಾಚ್ಯದ ಸೋಲೊಪ್ಪಿದ ರಾಷ್ಟ್ರ” (Loser of the Middle East) ಎಂದು ಲೇವಡಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಇಂದು (ಮಾರ್ಚ್ 7) ಇರಾನ್ ಮೇಲೆ “ಅತ್ಯಂತ ಭೀಕರ ದಾಳಿ” ನಡೆಯಲಿದೆ ಎಂದು ಅವರು ಎಚ್ಚರಿಸಿದ್ದಾರೆ.
“ನರಕದಂತೆ ಹೊಡೆತ ತಿಂದಿರುವ ಇರಾನ್, ಈಗ ನೆರೆರಾಷ್ಟ್ರಗಳ ಕ್ಷಮೆಯಾಚಿಸಿ ಶರಣಾಗಿದೆ. ಅಮೆರಿಕ ಮತ್ತು ಇಸ್ರೇಲ್ನ ನಿರಂತರ ದಾಳಿಯಿಂದಾಗಿ ಮಾತ್ರ ಇರಾನ್ ಈ ಭರವಸೆ ನೀಡಿದೆ,” ಎಂದು ಟ್ರಂಪ್ ಬರೆದಿದ್ದಾರೆ. ಇರಾನ್ ಇನ್ನು ಮುಂದೆ ಮಧ್ಯಪ್ರಾಚ್ಯದ ದಬಾಯಿಸುವ ರಾಷ್ಟ್ರವಾಗಿ ಉಳಿದಿಲ್ಲ, ಅದು ಸಂಪೂರ್ಣವಾಗಿ ಕುಸಿಯುವವರೆಗೂ ‘ಲೂಸರ್’ ಆಗಿಯೇ ಇರಲಿದೆ ಎಂದು ಟ್ರಂಪ್ ಕಿಚಾಯಿಸಿದ್ದಾರೆ.
ಶುಕ್ರವಾರವಷ್ಟೇ ಇರಾನ್ ಮುಂದೆ ಕಠಿಣ ಷರತ್ತು ವಿಧಿಸಿದ್ದ ಟ್ರಂಪ್, “ಬೇಷರತ್ ಶರಣಾಗತಿ” ಮಾತ್ರ ಯುದ್ಧ ಅಂತ್ಯಕ್ಕೆ ಇರುವ ಏಕೈಕ ದಾರಿ ಎಂದಿದ್ದಾರೆ.ಇರಾನ್ ಶರಣಾಗಿ ಹೊಸ ನಾಯಕತ್ವವನ್ನು ಒಪ್ಪಿಕೊಂಡರೆ, ಆ ದೇಶದ ಆರ್ಥಿಕತೆಯನ್ನು ಮತ್ತೆ ಕಟ್ಟಲು ಅಮೆರಿಕ ಸಹಾಯ ಮಾಡಲಿದೆ ಎಂಬ ಆಮಿಷವನ್ನೂ ಒಡ್ಡಿದ್ದಾರೆ.ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ನೆರೆರಾಷ್ಟ್ರಗಳ ಕ್ಷಮೆ ಕೇಳಿದ್ದರೂ, “ಶರಣಾಗತಿಯ ಕನಸನ್ನು ಶತ್ರುಗಳು ತಮ್ಮ ಸಮಾಧಿಗೆ ತೆಗೆದುಕೊಂಡು ಹೋಗಲಿ” ಎಂದು ಹೇಳುವ ಮೂಲಕ ಶರಣಾಗತಿಯನ್ನು ನಿರಾಕರಿಸಿದ್ದಾರೆ.
ಶನಿವಾರ ಬೆಳಿಗ್ಗೆ ದುಬೈನಲ್ಲಿ ಭಾರಿ ಸ್ಫೋಟದ ಶಬ್ದಗಳು ಕೇಳಿಬಂದಿದ್ದು, ಯುಎಇ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ. ವಿಶ್ವದ ಅತ್ಯಂತ ಜನನಿಬಿಡ ದುಬೈ ವಿಮಾನ ನಿಲ್ದಾಣದ ಪ್ರಯಾಣಿಕರನ್ನು ಸುರಕ್ಷಿತ ಸುರಂಗಗಳಿಗೆ ಸ್ಥಳಾಂತರಿಸಲಾಗಿದೆ.