ಬೆಂಗಳೂರು, ಮೇ 15: ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಂದು (ಮೇ 15) ತಮ್ಮ 64ನೇ ವಸಂತಕ್ಕೆ ಕಾಲಿಟ್ಟಿದ್ದು, ಬೆಂಗಳೂರಿನ ಸದಾಶಿವನಗರದ ಅವರ ನಿವಾಸದ ಬಳಿ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ಮುಂಜಾನೆಯಿಂದಲೇ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಡಿಕೆ ಶಿವಕುಮಾರ್ ಅವರು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಇದೇ ವೇಳೆ ವಿವಿಧ ಮಠಗಳ ಶ್ರೀಗಳು ಹಾಗೂ ಪುರೋಹಿತರು ಡಿಸಿಎಂ ನಿವಾಸಕ್ಕೆ ಭೇಟಿ ನೀಡಿ, ಮನ್ಯುಸೂಕ್ತ ಮಂತ್ರಗಳ ಪಠಣದೊಂದಿಗೆ ಅವರಿಗೆ ಆಯುಷ್ಯ, ಆರೋಗ್ಯ ಮತ್ತು ಅಧಿಕಾರ ಪ್ರಾಪ್ತಿಯಾಗಲೆಂದು ಹರಸಿದರು. ಅಭಿಮಾನಿಗಳ ಶುಭಾಶಯ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರು ಸಂಭ್ರಮಾಚರಣೆಯ ನಂತರ ತಮಿಳುನಾಡಿಗೆ ಪ್ರಯಾಣ ಬೆಳೆಸಲಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮೇ.15 : ಆನ್ಲೈನ್ ರಮ್ಮಿ ಗೇಮಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ಬೆಂಗಳೂರು ಮೂಲದ ‘ಗೇಮ್ಸ್ಕ್ರಾಫ್ಟ್ ಟೆಕ್ನಾಲಜೀಸ್’ (Gameskraft Technologies) ಕಂಪನಿಯ ಕರಾಳ ಮುಖ ಅನಾವರಣಗೊಂಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಇಡಿ ನಡೆಸಿದ ಸರಣಿ ದಾಳಿಗಳಲ್ಲಿ ಭಾರಿ ಪ್ರಮಾಣದ ಆಸ್ತಿ ಪಾಸ್ತಿಗಳನ್ನು ಜಪ್ತಿ ಮಾಡಲಾಗಿದ್ದು, ಕಂಪನಿಯ ಮೂವರು ನಿರ್ದೇಶಕರನ್ನು ಬಂಧಿಸಲಾಗಿದೆ.
ಮೇ 7 ರಿಂದ 13 ರವರೆಗೆ ಬೆಂಗಳೂರು ಮತ್ತು ದೆಹಲಿ ಎನ್ಸಿಆರ್ನಲ್ಲಿ ನಡೆದ ದಾಳಿಯಲ್ಲಿ ಸುಮಾರು 526.49 ಕೋಟಿ ರೂಪಾಯಿ ಮೌಲ್ಯದ ಬ್ಯಾಂಕ್ ಬ್ಯಾಲೆನ್ಸ್, ಮ್ಯೂಚುವಲ್ ಫಂಡ್ ಮತ್ತು ಸ್ಥಿರ ಠೇವಣಿಗಳನ್ನು ಫ್ರೀಜ್ ಮಾಡಲಾಗಿದೆ. ಜೊತೆಗೆ 3.50 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು 11 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಕಂಪನಿಯ ನಿರ್ದೇಶಕರಾದ ಪೃಥ್ವಿ ರಾಜ್ ಸಿಂಗ್, ವಿಕಾಸ್ ತನೇಜಾ ಮತ್ತು ದೀಪಕ್ ಸಿಂಗ್ ಅಹ್ಲಾವತ್ ಅವರನ್ನು ಇಡಿ ಬಂಧಿಸಿದೆ.RummyCulture, RummyPrime, Playship ಮತ್ತು RummyTime ನಂತಹ ಜನಪ್ರಿಯ ಅಪ್ಲಿಕೇಶನ್ಗಳ ಮೂಲಕ ಈ ಕಂಪನಿ ವ್ಯವಹಾರ ನಡೆಸುತ್ತಿತ್ತು. ಕಂಪನಿಯು ತನ್ನ ವೇದಿಕೆಯಲ್ಲಿ ಯಾವುದೇ ಬಾಟ್ಗಳಿಲ್ಲ, ಇದು ಪಾರದರ್ಶಕವಾಗಿದೆ ಎಂದು ಭರವಸೆ ನೀಡಿತ್ತು. ಆದರೆ, ಇಡಿ ತನಿಖೆಯ ಪ್ರಕಾರ, ಬಳಕೆದಾರರಿಗೆ ತಿಳಿಯದಂತೆ ಅವರ ವಿರುದ್ಧ ಕಂಪನಿಯೇ ಬಾಟ್ಗಳನ್ನು (ಕಂಪ್ಯೂಟರ್ ಪ್ರೋಗ್ರಾಂ) ಬಳಸುತ್ತಿತ್ತು. ಇದರಿಂದಾಗಿ ಸಾವಿರಾರು ಆಟಗಾರರು ಹಣ ಕಳೆದುಕೊಂಡು ಮಾನಸಿಕ ಯಾತನೆ ಅನುಭವಿಸಿದ್ದಾರೆ.
ಆನ್ಲೈನ್ ಗೇಮಿಂಗ್ ನಿಷೇಧವಿರುವ ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಂತಹ ರಾಜ್ಯಗಳ ಬಳಕೆದಾರರಿಗೂ ಆಡಲು ಅವಕಾಶ ನೀಡಲು ಕಂಪನಿಯು ಅವರ ಜಿಯೋ ಲೊಕೇಶನ್ ಅನ್ನು ಟ್ಯಾಂಪರ್ (ತಿದ್ದುಪಡಿ) ಮಾಡಿತ್ತು. ಆಟಗಾರರಿಂದ ಕಮಿಷನ್ ರೂಪದಲ್ಲಿ ಪಡೆದ ಕೋಟ್ಯಂತರ ರೂಪಾಯಿ ಲಾಭವನ್ನು ವಿದೇಶಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಹಣ ವರ್ಗಾವಣೆ ಮಾಡಲಾಗಿತ್ತು ಎಂದು ತನಿಖೆ ಬಹಿರಂಗಪಡಿಸಿದೆ.
ವಿಜಯಪುರ, ಮೇ 15: ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮೊರಟಗಿ ಗ್ರಾಮದಲ್ಲಿ ಭಾರಿ ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ, ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುರುನಾಥ ಬಡಿಗೇರ (35), ಜ್ಯೋತಿ ಬಡಿಗೇರ (28), ಕಾಳಮ್ಮ ಬಡಿಗೇರ (13) ಹಾಗೂ ಕೀರ್ತಿ ಬಡಿಗೇರ (9) ಮೃತಪಟ್ಟ ದುರ್ದೈವಿಗಳು. ಗುರುನಾಥ್ ಅವರು ತಮ್ಮ ಸ್ವಂತ ಮನೆಯನ್ನು ದುರಸ್ತಿ ಮಾಡುತ್ತಿದ್ದ ಕಾರಣ, ಈ ಕುಟುಂಬವು ಹಳೆಯ ಮನೆಯೊಂದರಲ್ಲಿ ಬಾಡಿಗೆಗೆ ಇತ್ತು. ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆಯ ಹಳೆಯ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದಿದ್ದರಿಂದ ಮನೆಯೊಳಗೆ ಮಲಗಿದ್ದ ನಾಲ್ವರು ಅವಶೇಷಗಳ ಅಡಿಯಲ್ಲಿ ಸಿಲುಕಿ ಜೀವಂತ ಸಮಾಧಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಸಿಂದಗಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಅವಶೇಷಗಳ ಅಡಿಯಲ್ಲಿದ್ದ ಶವಗಳನ್ನು ಹೊರತೆಗೆಯುವ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆಯಿಂದ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪಂಜಾಬ್ ಹಾಗೂ ಮುಂಬೈ ನಡುವಿನ ಪಂದ್ಯದಲ್ಲಿ ಮುಂಬೈ ತಂಡ ಗೆದ್ದಿದೆ. ಬೂಮ್ರಾ ನಾಯಕತ್ವದಲ್ಲಿ ಗೆಲುವು ಸಿಕ್ಕಿದೆ. 4 ಓವರ್ಗೆ 52 ರನ್ ಬೇಕಿತ್ತು. ತಿಲಕ್ ವರ್ಮ ಜವಾಬ್ದರಿಯುತ ಆಟ ಆಡಿದರು. 11 ಎಸೆತಗಳಲ್ಲಿ 22 ರನ್ ಬೇಕಿದ್ದಾಗ ಇಡೀ ಮೈದಾನ ‘ಮುಂಬೈ.. ಮುಂಬೈ..’ ಎನ್ನುವ ಘೋಷಣೆಯಿಂದ ಮೊಳಗುತ್ತಿತ್ತು. ತಿಲಕ್ ವರ್ಮಾ 33 ಎಸೆತಗಳಲ್ಲಿ 75 ರನ್ ಬಾರಿಸಿದರು. ಕೊನೆಯ ಓವರ್ನಲ್ಲಿ 3 ಸಿಕ್ಸರ್ಗಳು ಬಂದವು. ಗೆಲುವಿನ ಬಳಿಕ ವರ್ಮ ಅವರು 45 ಎಂದು ತೋರಿಸುವ ಮೂಲಕ ರೋಹಿತ್ ಶರ್ಮಾ ಅವರಿಗೆ ವಿಶೇಷ ಗೌರವ ಸಲ್ಲಿಸಿದರು.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.
ಬಾಲಿವುಡ್ನ ಹಿರಿಯ ನಟಿ ಜಯಾ ಬಚ್ಚನ್ ಅಂದಾಕ್ಷಣ ನೆನಪಾಗುವುದು ಅವರ ಶಿಸ್ತುಬದ್ಧ ನಡವಳಿಕೆ ಮತ್ತು ನೇರ ಮಾತು. ಪಾಪರಾಜಿಗಳ ಮೇಲಿರಲಿ ಅಥವಾ ಅಭಿಮಾನಿಗಳ ಮೇಲಿರಲಿ, ತಪ್ಪು ಕಂಡರೆ ಸಾರ್ವಜನಿಕವಾಗಿಯೇ ಗದರಿಸುವ ಅವರ ಸ್ವಭಾವ ಸದಾ ಚರ್ಚೆಯಲ್ಲಿರುತ್ತದೆ. ಆದರೆ, ಅವರ ಈ ಕಟ್ಟುನಿಟ್ಟಿನ ಧೋರಣೆ ಕೇವಲ ಹೊರಗಿನವರಿಗೆ ಮಾತ್ರ ಸೀಮಿತವಾಗಿಲ್ಲ; ಸ್ವತಃ ಪತಿ ಅಮಿತಾಭ್ ಬಚ್ಚನ್ ಮತ್ತು ಮಗ ಅಭಿಷೇಕ್ ಬಚ್ಚನ್ ಅವರ ವಿಷಯದಲ್ಲೂ ಅವರು ಅಷ್ಟೇ ಕಟ್ಟುನಿಟ್ಟಾಗಿರುತ್ತಾರೆ.
2014ರಲ್ಲಿ ಶಾರುಖ್ ಖಾನ್ ಮತ್ತು ಅಭಿಷೇಕ್ ಬಚ್ಚನ್ ಅಭಿನಯದ ‘ಹ್ಯಾಪಿ ನ್ಯೂ ಇಯರ್’ ಸಿನಿಮಾ ತೆರೆಕಂಡಿತ್ತು. ಚಿತ್ರವು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಗಳಿಕೆ ಮಾಡಿದ್ದರೂ, ಜಯಾ ಬಚ್ಚನ್ ಅವರಿಗೆ ಮಾತ್ರ ಈ ಸಿನಿಮಾ ಕಿಂಚಿತ್ತೂ ಇಷ್ಟವಾಗಲಿಲ್ಲ. ಪ್ರಥಮ ಪ್ರದರ್ಶನದ ನಂತರ ಬಹಿರಂಗವಾಗಿಯೇ ಈ ಚಿತ್ರವನ್ನು ‘ಅಸಂಬದ್ಧ’ ಎಂದು ಕರೆದು ಮಗನಿಗೇ ಶಾಕ್ ನೀಡಿದ್ದರು. ಸಿನಿಮಾ ಕಲೆ ಮತ್ತು ಗುಣಮಟ್ಟದ ವಿಷಯದಲ್ಲಿ ಅವರು ಮಗನನ್ನೂ ಬಿಟ್ಟಿರಲಿಲ್ಲ.
ಜಯಾ ಬಚ್ಚನ್ ಅವರು ಅಮಿತಾಬ್ ಬಚ್ಚನ್ ಅವರ ಜೀವನದ ಅತಿದೊಡ್ಡ ವಿಮರ್ಶಕಿ ಎಂದರೆ ತಪ್ಪಾಗಲಾರದು. ಬಿಗ್ ಬಿ ಅವರೇ ಹೇಳಿಕೊಂಡಿರುವಂತೆ, 1997ರಲ್ಲಿ ತೆರೆಕಂಡ ‘ಮೃತ್ಯುದಾತ’ ಚಿತ್ರದ ಪ್ರಥಮ ಪ್ರದರ್ಶನಕ್ಕೆ ಜಯಾ ಹೋಗಿದ್ದರು. ಆದರೆ ಸಿನಿಮಾ ಎಷ್ಟು ಕಳಪೆಯಾಗಿತ್ತೆಂದರೆ, ಅವರು ಅದನ್ನು ಪೂರ್ತಿ ನೋಡುವ ತಾಳ್ಮೆಯನ್ನೂ ಕಳೆದುಕೊಂಡರು. ಸಿನಿಮಾ ಅರ್ಧಕ್ಕಿರುವಾಗಲೇ ಸಿಟ್ಟಿನಿಂದ ಥಿಯೇಟರ್ನಿಂದ ಹೊರಬಂದಿದ್ದರು.
ವಿಶೇಷವೆಂದರೆ ‘ಮೃತ್ಯುದಾತ’ ಚಿತ್ರವನ್ನು ಅಮಿತಾಬ್ ಬಚ್ಚನ್ ಅವರ ಸ್ವಂತ ಸಂಸ್ಥೆ ‘ABCL’ ನಿರ್ಮಿಸಿತ್ತು. ಮೆಹುಲ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಡಿಂಪಲ್ ಕಪಾಡಿಯಾ, ಕರಿಷ್ಮಾ ಕಪೂರ್ ಅಂತಹ ದೊಡ್ಡ ತಾರಾಗಣವೇ ಇತ್ತು. ಆದರೂ ಜಯಾ ಬಚ್ಚನ್ ಆ ಚಿತ್ರವನ್ನು ‘ಕಸ’ ಎಂದು ಜರಿದಿದ್ದರು. ಅಂತಿಮವಾಗಿ ಅವರ ಮಾತು ನಿಜವಾಯಿತು ಮತ್ತು ಆ ಸಿನಿಮಾ ಆ ವರ್ಷದ ದೊಡ್ಡ ಸೋಲನ್ನು ಅನುಭವಿಸಿತು.
ಮನೆಯಲ್ಲಿರುವ ನಟರು ಎಷ್ಟೇ ದೊಡ್ಡ ಸೂಪರ್ಸ್ಟಾರ್ಗಳಾಗಿದ್ದರೂ, ನಟನೆಯ ಗುಣಮಟ್ಟ ಮತ್ತು ಚಿತ್ರದ ಕಥೆಯ ವಿಷಯದಲ್ಲಿ ಜಯಾ ಬಚ್ಚನ್ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಪ್ರೀತಿಗಿಂತ ಕಲೆಗೆ ಅವರು ನೀಡುವ ಆದ್ಯತೆ ಈ ಘಟನೆಗಳಿಂದ ಸ್ಪಷ್ಟವಾಗುತ್ತದೆ.
ಬಾಲಿವುಡ್ ಅಷ್ಟೇ ಅಲ್ಲದೆ, ಈಗ ದಕ್ಷಿಣ ಭಾರತದ ಸಿನಿಮಾಗಳಲ್ಲೂ ಮಿಂಚುತ್ತಿರುವ ನಟಿ ದೀಪಿಕಾ ಪಡುಕೋಣೆ ಸದಾ ಸುದ್ದಿಯಲ್ಲಿರುತ್ತಾರೆ. ಪ್ರಭಾಸ್ ನಟನೆಯ ‘ಕಲ್ಕಿ’ ಚಿತ್ರದ ಯಶಸ್ಸಿನ ಬೆನ್ನಲ್ಲೇ, ಈಗ ಅಟ್ಲೀ ನಿರ್ದೇಶನದ ಹಾಗೂ ಅಲ್ಲು ಅರ್ಜುನ್ ನಟನೆಯ ‘ರಾಕಾ’ ಚಿತ್ರಕ್ಕೂ ಇವರೇ ನಾಯಕಿ . ಸಿನಿಮಾ ಬದುಕು, ವೈಯಕ್ತಿಕ ಜೀವನದ ನಡುವೆ ದೀಪಿಕಾ ಅವರ ಹಳೆಯ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಏನಿದು ಬಾಟಲಿ ಪ್ರಹಸನ?
ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ನಟನೆಯ ಬ್ಲಾಕ್ಬಸ್ಟರ್ ಸಿನಿಮಾ ‘ಚೆನ್ನೈ ಎಕ್ಸ್ಪ್ರೆಸ್’ ಸೆಟ್ನಲ್ಲಿ ನಡೆದ ಕುತೂಹಲಕಾರಿ ಘಟನೆ ಇದಾಗಿದೆ. 2013ರಲ್ಲಿ ಬಿಡುಗಡೆಯಾಗಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ಈ ಚಿತ್ರದ ಚಿತ್ರೀಕರಣದ ವೇಳೆ ಒಂದು ವಿಚಿತ್ರ ಸನ್ನಿವೇಶ ಎದುರಾಗಿತ್ತು.
ಸೆಟ್ನಲ್ಲಿ ದೀಪಿಕಾ ಅವರು ವಿಶ್ರಾಂತಿ ಪಡೆಯುತ್ತಾ ಕೂಲ್ ಡ್ರಿಂಕ್ ಕುಡಿಯುತ್ತಿದ್ದಾಗ, ನಿರ್ದೇಶಕ ರೋಹಿತ್ ಶೆಟ್ಟಿ ಅವರು ಏನೋ ವಿಷಯಕ್ಕೆ ಅವರನ್ನು ಅಡ್ಡಗಟ್ಟಿದ್ದಾರೆ. ಇದರಿಂದ ತಮಾಷೆಯಾಗಿ ಸಿಟ್ಟಾದ ದೀಪಿಕಾ, ತಕ್ಷಣವೇ ತಮ್ಮ ಕೈಯಲ್ಲಿದ್ದ ಬಾಟಲಿಯನ್ನು ತೆಗೆದುಕೊಂಡು ರೋಹಿತ್ ಶೆಟ್ಟಿ ಅವರ ತಲೆಗೆ ಹೊಡೆದಿದ್ದಾರೆ! ಬಾಟಲಿ ಚೂರು ಚೂರಾಗಿ ಒಡೆದು, ರೋಹಿತ್ ಅವರ ತಲೆಯಿಂದ ರಕ್ತ ಸುರಿಯಲಾರಂಭಿಸಿದೆ. ಇದನ್ನು ನೋಡಿದ ಸೆಟ್ನಲ್ಲಿದ್ದವರೆಲ್ಲ ಒಂದು ಕ್ಷಣ ದಿಗ್ರಮಗೊಂಡಿದ್ದಾರೆ.
ವಿಡಿಯೋದ ಹಿಂದಿರುವ ಅಸಲಿ ಸತ್ಯ!
ಆದರೆ ಗಾಬರಿಪಡುವ ಅಗತ್ಯವಿಲ್ಲ, ಇದೆಲ್ಲವೂ ಕೇವಲ ತಮಾಷೆಗಾಗಿ ನಡೆದ ಘಟನೆ. ದೀಪಿಕಾ ಹೊಡೆದಿದ್ದು ನಿಜವಾದ ಗಾಜಿನ ಬಾಟಲಿಯಿಂದಲ್ಲ, ಬದಲಾಗಿ ಸಿನಿಮಾಗಳಲ್ಲಿ ಬಳಸುವ ‘ಸಕ್ಕರೆ ಬಾಟಲಿ’ ಇಂದ. ಸಾಮಾನ್ಯವಾಗಿ ‘ಬಿಗ್ ಬಾಸ್’ ಅಂತಹ ರಿಯಾಲಿಟಿ ಶೋಗಳಲ್ಲಿ ಅಥವಾ ಸಿನಿಮಾದ ಸಾಹಸ ದೃಶ್ಯಗಳಲ್ಲಿ ಗಾಯವಾಗದಂತೆ ಇಂತಹ ಬಾಟಲಿಗಳನ್ನು ಬಳಸಲಾಗುತ್ತದೆ.
ರೋಹಿತ್ ಶೆಟ್ಟಿ ಅವರ ತಲೆಗೆ ರಕ್ತ ಬಂದಂತೆ ಕಂಡಿದ್ದು ಕೂಡ ಮೇಕಪ್ ಟ್ರಿಕ್ ಅಷ್ಟೇ. ಚಿತ್ರೀಕರಣದ ನಡುವೆ ಸುಮ್ಮನೆ ತಮಾಷೆಗಾಗಿ ಈ ‘ಬ್ಲೂಪರ್’ ವಿಡಿಯೋ ಮಾಡಲಾಗಿತ್ತು. ಈಗ ಈ ಹಳೆಯ ವಿಡಿಯೋ ಮತ್ತೆ ಮುನ್ನೆಲೆಗೆ ಬಂದಿದ್ದು, “ದೀಪಿಕಾ ಅವರಿಗೆ ಇಷ್ಟೊಂದು ಕೋಪವೇ?” ಎಂದು ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಜ್ಯೋತಿಷ್ಯ, ಹಸ್ತಸಾಮುದ್ರಿಕ ಶಾಸ್ತ್ರ, ಮುಖ ಲಕ್ಷಣ ಶಾಸ್ತ್ರಗಳಂತೆ, ಉಗುರುಗಳ ಆಕಾರವನ್ನು ಆಧರಿಸಿ ವ್ಯಕ್ತಿತ್ವವನ್ನು ವಿಶ್ಲೇಷಿಸುವ ಪದ್ಧತಿಯೂ ಇದೆ. ಉಗುರುಗಳು ಕೇವಲ ದೇಹದ ಭಾಗವಲ್ಲದೆ, ಆಂತರಿಕ ಗುಣಗಳು, ಮಾನಸಿಕ ಸ್ಥಿತಿ ಮತ್ತು ಭವಿಷ್ಯದ ಒಳನೋಟಗಳನ್ನು ಪ್ರತಿಬಿಂಬಿಸುತ್ತವೆ ಎಂದು ನಂಬಲಾಗಿದೆ. ದೇಹದ ವಾತ, ಪಿತ್ತ, ಕಫ ಗುಣಗಳಂತೆ, ಉಗುರುಗಳ ಆಕಾರವೂ ವಿಭಿನ್ನ ಶಕ್ತಿಗಳನ್ನು ಪ್ರತಿನಿಧಿಸುತ್ತದೆ. ಉಗುರುಗಳ ಆಕಾರವನ್ನು ಆಧರಿಸಿ ವ್ಯಕ್ತಿತ್ವವನ್ನು ತಿಳಿಯುವ ಈ ವಿಧಾನವು ನಾಲ್ಕು ಪ್ರಮುಖ ವಿಧಗಳನ್ನು ಗುರುತಿಸುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಅಗಲವಾದ ಉಗುರುಗಳು:
ಅಗಲವಾದ ಉಗುರುಗಳನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಮೇಷ, ಸಿಂಹ ಮತ್ತು ಧನುಸ್ಸು ರಾಶಿಯವರಲ್ಲಿ ಹೆಚ್ಚು ಕಂಡುಬರುತ್ತಾರೆ. ಇವರು ತಕ್ಷಣವೇ ಪ್ರತಿಕ್ರಿಯಿಸುವ, ಸಾಧನೆ ಮಾಡಲು ಹಂಬಲಿಸುವ ಮತ್ತು ತಮ್ಮ ಗುರಿಗಳ ಬಗ್ಗೆ ದೃಢ ಮನಸ್ಸು ಹೊಂದಿರುವವರಾಗಿರುತ್ತಾರೆ. ಇವರು ಶ್ರಮಜೀವಿಗಳು, ಮುಂಗೋಪಿಗಳು ಮತ್ತು ಹಠಮಾರಿ ಸ್ವಭಾವದವರಾಗಿರಬಹುದು. ಯಾವುದೇ ಕಷ್ಟ ಬಂದರೂ ಅದನ್ನು ಪರಿಷ್ಕರಿಸಲು ಪ್ರಯತ್ನಿಸುತ್ತಾರೆ. ರಾಜಕೀಯ ಯೋಗವು ಇವರಿಗೆ ತುಂಬಾ ಚೆನ್ನಾಗಿರುತ್ತದೆ, ಮತ್ತು ಇವರು ಉತ್ತಮ ನಾಯಕತ್ವ ಗುಣಗಳನ್ನು ಹೊಂದಿರುತ್ತಾರೆ. ಈ ಗುಣಗಳು ಬೇರೆ ರಾಶಿಯವರಲ್ಲೂ ಕಂಡುಬರಬಹುದು, ಇದು ಕೇವಲ ಒಂದು ಸೂಚಕವಾಗಿದೆ.
ವೃತ್ತಾಕಾರದ ಉಗುರುಗಳು:
ವೃತ್ತಾಕಾರದ ಉಗುರುಗಳು ಸಾಮಾನ್ಯವಾಗಿ ಕರ್ಕ, ವೃಶ್ಚಿಕ ಮತ್ತು ಮೀನ ರಾಶಿಯವರಲ್ಲಿ ಇರುತ್ತವೆ. ಇವರು ನಿಧಾನಪ್ರಿಯರು, ತಾಳ್ಮೆಯುಳ್ಳವರು ಮತ್ತು ಸಹನಶೀಲರು. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದೆ, ಪ್ರತಿಯೊಂದು ವಿಷಯವನ್ನು ಆಳವಾಗಿ ಚಿಂತಿಸಿ ಮುಂದುವರೆಯುತ್ತಾರೆ. ಇವರು ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದು, ಧರ್ಮ ಚಿಂತಕರಾಗಿರುತ್ತಾರೆ. ತಂತ್ರ, ಮಂತ್ರ, ಯಂತ್ರಗಳ ಬಗ್ಗೆ ಹೆಚ್ಚು ಒಲವು ಹೊಂದಿರುತ್ತಾರೆ. ರಾಜಕೀಯ ವ್ಯಕ್ತಿಗಳು ಇಂತಹ ಗುಣಗಳನ್ನು ಅಳವಡಿಸಿಕೊಳ್ಳುವುದು ಸಾಮಾನ್ಯ. ಇವರ ಶಾಂತ ಸ್ವಭಾವ ಮತ್ತು ದೃಢತೆ ಇವರ ಶಕ್ತಿ.
ಲಂಬವಾದ ಉಗುರುಗಳನ್ನು ಹೊಂದಿರುವವರು ಸಾಮಾನ್ಯವಾಗಿ ವೃಷಭ, ಕನ್ಯಾ ಮತ್ತು ಮಕರ ರಾಶಿಯವರಲ್ಲಿ ಕಂಡುಬರುತ್ತಾರೆ. ಇವರು ರಸಿಕ ಸ್ವಭಾವದವರು, ಪ್ರೀತಿ ಮತ್ತು ಪ್ರೇಮದ ಬಗ್ಗೆ ಹೆಚ್ಚು ಒಲವು ಹೊಂದಿದವರು. ಬೇಗ ಆಕರ್ಷಣೆಗೆ ಒಳಗಾಗುತ್ತಾರೆ ಮತ್ತು ಇತರರನ್ನು ಆಕರ್ಷಿಸುವ ಗುಣವನ್ನೂ ಹೊಂದಿರುತ್ತಾರೆ. ಸಮಾಜದಲ್ಲಿ ಹೆಸರು, ಕೀರ್ತಿ ಮತ್ತು ಪ್ರತಿಷ್ಠೆಗಾಗಿ ಹೋರಾಡುತ್ತಾರೆ. ಹಿಂದಿನ ಕಾಲದಲ್ಲಿ ಮಹಿಳೆಯರು ಉದ್ದವಾದ ಉಗುರುಗಳನ್ನು ಬೆಳೆಸಿಕೊಳ್ಳುತ್ತಿದ್ದುದು ಇದೇ ಕಾರಣಕ್ಕೆ. ಇವರ ಬಲ ಮೆದುಳು ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಚಲನಚಿತ್ರ ನಟರು, ಸಾಹಿತಿಗಳು, ಪುಸ್ತಕ ಬರೆಯುವವರು ಮತ್ತು ಬರಹಗಾರರಲ್ಲಿ ಈ ಗುಣ ಹೆಚ್ಚು ಕಂಡುಬರುತ್ತದೆ. ಇವರು ಅನೇಕ ಸ್ನೇಹಿತರನ್ನು ಹೊಂದಿರುತ್ತಾರೆ.
ಚೌಕಾಕಾರದ ಉಗುರುಗಳು:
ಚೌಕಾಕಾರದ ಉಗುರುಗಳು ಮಿಥುನ, ತುಲಾ ಮತ್ತು ಕುಂಭ ರಾಶಿಯವರಲ್ಲಿ ಸಾಮಾನ್ಯ. ಇವರು ಸೀಕ್ರೆಟ್ ಸ್ವಭಾವದವರು, ಯಾವುದೇ ವಿಷಯವನ್ನು ಸುಲಭವಾಗಿ ಹಂಚಿಕೊಳ್ಳುವುದಿಲ್ಲ. ತಮ್ಮ ವೈಯಕ್ತಿಕ ವಿಚಾರಗಳಲ್ಲಿ ಗುಟ್ಟನ್ನು ಕಾಪಾಡಿಕೊಳ್ಳುತ್ತಾರೆ. ಇವರು ಗಂಭೀರ ವ್ಯಕ್ತಿತ್ವದವರು, ಸೋತರೂ ಗೆದ್ದಿದ್ದೇವೆ ಎಂದು ಹೇಳುವ, ಗೆದ್ದರೂ ಸೋತಿದ್ದೇವೆ ಎಂದು ಹೇಳಿಕೊಳ್ಳುವ ಧೈರ್ಯಶಾಲಿಗಳು. ಇವರು ಸ್ವತಂತ್ರ ಉದ್ಯೋಗವನ್ನು ಬಯಸುತ್ತಾರೆ ಮತ್ತು ಯಾರ ಮೇಲೂ ಅವಲಂಬಿತರಾಗಲು ಇಷ್ಟಪಡುವುದಿಲ್ಲ. ಇವರದೇ ಆದ ಆಲೋಚನೆಗಳು, ಮನೆ ಮತ್ತು ಮನಸ್ಥಿತಿಯನ್ನು ಹೊಂದಿರುತ್ತಾರೆ. ಇವರು ಸಮಾಜದಲ್ಲಿ ಉತ್ತಮ ಜೀವನವನ್ನು ನಡೆಸಲು ಶಕ್ತರು.
ಅಂತಿಮವಾಗಿ, ಉಗುರುಗಳ ಆಕಾರದ ಮೂಲಕ ವ್ಯಕ್ತಿತ್ವವನ್ನು ಅರಿಯುವ ಈ ವಿಧಾನವು ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಒಂದು ಆಸಕ್ತಿದಾಯಕ ಮಾರ್ಗವಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ವಿಜಯಪುರದ ಮೊರಗಟಿ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಹಾಗೂ ಗೋಡೆ ಕುಸಿದಿರುವುದುImage Credit source: tv9
ಬೆಂಗಳೂರು, ಮೇ 15: ಕರ್ನಾಟಕದ (Karnataka) ಹಲವೆಡೆ ಗುರುವಾರ ಮಳೆ ಆರ್ಭಟ ಜೋರಾಗಿತ್ತು. ಗುಡುಗು-ಸಿಡಿಲು ಸಹಿತ ಸುರಿದ ಭಾರಿ ಮಳೆಗೆ ಕರುನಾಡು ತತ್ತರಿಸಿ ಹೋಗಿದೆ. ದಾವಣಗೆರೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಳೆಗೆ ಆರು ಮಂದಿ ಬಲಿಯಾಗಿದ್ದು, ಹಲವೆಡೆ ಮನೆಗಳ ಮೇಲ್ಛಾವಣಿ ಹಾರಿಹೋಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಿರುಗಾಳಿಯ ಆರ್ಭಟಕ್ಕೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ.
ಮುಖ್ಯಾಂಶಗಳು
ದಾವಣಗೆರೆಯಲ್ಲಿ ಸಿಡಿಲು ಬಡಿದು 19 ವರ್ಷದ ಕುರಿಗಾಹಿ ಬಲಿ, ವಿಜಯಪುರದಲ್ಲಿ ಮರ ಬಿದ್ದು ವೃದ್ಧ ಸಾವು.
ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ಮೊರಗಟಿ ಗ್ರಾಮದಲ್ಲಿ ಮನೆ ಮೇಲ್ಚಾವಣಿ ಕುಸಿದು ನಾಲ್ವರು ಸಾವು
ಮಂಗಳೂರಿನಲ್ಲಿ ಹವಾಮಾನ ವೈಪರೀತ್ಯ: ಲ್ಯಾಂಡಿಂಗ್ಗೆ ಪರದಾಡಿದ ಎರಡು ವಿಮಾನಗಳು.
ಭಾರಿ ಮಳೆ ಗಾಳಿಗೆ ಮನೆ ಮೇಲ್ಚಾವಣಿ, ಗೋಡೆ ಕುಸಿದು ನಾಲ್ವರು ಸಾವು
ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ಮೊರಗಟಿ ಗ್ರಾಮದಲ್ಲಿ ಭಾರಿ ಗಾಳಿ ಮಳೆಗೆ ಮನೆಯ ಮೇಲ್ಚಾವಣಿ ಹಾಗೂ ಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಮತಪಟ್ಟಿದ್ದಾರೆ. ಮೋರಟಗಿ ಗ್ರಾಮದ ಗುರುನಾಥ ಬಡಿಗೇರ(35), ಜ್ಯೋತಿ ಬಡಿಗೇರ(28), ಮಕ್ಕಳಾದ ಕಾಳಮ್ಮ ಬಡಿಗೇರ(13), ಕೀರ್ತಿ ಬಡಿಗೇರ(9) ಮೃತ ದುರ್ದೈವಿಗಳಾಗಿದ್ದಾರೆ.
ಜಿಲ್ಲಾವಾರು ಮಳೆ ಹಾನಿಯ ವಿವರ
ದಾವಣಗೆರೆ ಜಿಲ್ಲೆಯ ಜರೇಕಟ್ಟೆ ಗ್ರಾಮದ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ಅಜಿತ್ (19) ಎಂಬ ಯುವಕ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿಯಲ್ಲಿ ಬಿರುಗಾಳಿಗೆ ಬೃಹತ್ ಮರವೊಂದು ಉರುಳಿ ಬಿದ್ದು ವೃದ್ಧರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಭೂರಣಕಿ ಗ್ರಾಮದಲ್ಲಿ ಶಾಲೆಯ ಮೇಲ್ಛಾವಣಿ ಹಾರಿಹೋಗಿದ್ದು, ಅದೃಷ್ಟವಶಾತ್ ರಜೆ ಇದ್ದ ಕಾರಣ ಮಕ್ಕಳಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಅಥಣಿಯ ಸಂಬರಗಿಯಲ್ಲಿ ಬಿರುಗಾಳಿಗೆ ಐದು ಮನೆಗಳ ಮೇಲ್ಛಾವಣಿ ಕುಸಿದು ದವಸ ಧಾನ್ಯಗಳು ನಾಶವಾಗಿವೆ.
ಮಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ರನ್ವೇ ಸ್ಪಷ್ಟವಾಗಿ ಕಾಣಿಸದ ಕಾರಣ ಬೆಂಗಳೂರಿನಿಂದ ಬಂದಿದ್ದ ಏರ್ ಇಂಡಿಯಾದ ಎರಡು ವಿಮಾನಗಳು ಸುಮಾರು ಹೊತ್ತು ಆಗಸದಲ್ಲೇ ಗಿರಕಿ ಹೊಡೆದವು. ಹಾವೇರಿ ಜಿಲ್ಲೆಯ ಇಜಾರಿಲಕಮಾಪುರದಲ್ಲಿ ಅಲೆಮಾರಿಗಳ ಗುಡಿಸಲುಗಳು ಗಾಳಿಗೆ ಹಾರಿಹೋಗಿವೆ. ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಮರ ಬಿದ್ದು ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಉತ್ತರ ಕನ್ನಡದ ಭಟ್ಕಳ ಮತ್ತು ಹೊನ್ನಾವರದಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಕರ್ನಾಟಕ ಹವಾಮಾನ ಮುನ್ಸೂಚನೆ
ಭಾರತೀಯ ಹವಾಮಾನ ಇಲಾಖೆಯ (IMD) ವರದಿಯ ಪ್ರಕಾರ, ರಾಜ್ಯದಲ್ಲಿ ಮೇ 17ರವರೆಗೆ ಮಳೆಯ ಅಬ್ಬರ ಮುಂದುವರಿಯಲಿದೆ. ಬೆಂಗಳೂರು ನಗರ, ಗ್ರಾಮಾಂತರ, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲೂ ಮಳೆಯ ಮುನ್ಸೂಚನೆ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹಾರ್ಮುಜ್ ಸಂಘರ್ಷದ ಎಫೆಕ್ಟ್, ಸಿಎನ್ಜಿ ಕೆಜಿಗೆ 2 ರೂಪಾಯಿ ಹೆಚ್ಚಳ
ಬೆಂಗಳೂರು, ಮೇ 15: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಬೆನ್ನಲ್ಲೇ ಈಗ ಸಾಮಾನ್ಯ ಜನರಿಗೆ ಮತ್ತೊಂದು ಆಘಾತ ಎದುರಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹಾರ್ಮುಜ್ ಜಲಸಂಧಿಯ ದಿಗ್ಬಂಧನದಿಂದಾಗಿ (Hormuz Blockade) ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ದೇಶಾದ್ಯಂತ ಸಿಎನ್ಜಿ (CNG) ದರದಲ್ಲಿ ಪ್ರತಿ ಕೆಜಿಗೆ 2 ರೂಪಾಯಿ ಏರಿಕೆ ಮಾಡಲಾಗಿದೆ.
ಯಾವ ನಗರಗಳಲ್ಲಿ ಎಷ್ಟು ದರ ಏರಿಕೆ?
ಇಂದು (ಮೇ 15) ಪೆಟ್ರೋಲ್ ಮತ್ತು ಡೀಸೆಲ್ ದರ ಲೀಟರ್ಗೆ 3 ರೂ.ನಷ್ಟು ಏರಿಕೆಯಾದ ಬೆನ್ನಲ್ಲೇ ಸಿಎನ್ಜಿ ದರ ಕೂಡ ಏರಿಕೆಯಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಸಿಎನ್ಜಿ ಬೆಲೆ ಪ್ರತಿ ಕೆಜಿಗೆ 77.09 ರೂ.ನಿಂದ 79.09 ರೂ. ಗೆ ಏರಿಕೆಯಾಗಿದೆ. ಇನ್ನು ಮುಂಬೈನಲ್ಲಿ ಮಹಾನಗರ ಗ್ಯಾಸ್ ಲಿಮಿಟೆಡ್ (MGL) ಈಗಾಗಲೇ ದರ ಹೆಚ್ಚಳ ಮಾಡಿದ್ದು, ಅಲ್ಲಿನ ಬೆಲೆ ಈಗ ಪ್ರತಿ ಕೆಜಿಗೆ 84 ರೂ. ತಲುಪಿದೆ.
ಬೆಂಗಳೂರಿನಲ್ಲೂ ಈ ಏರಿಕೆಯ ಪರಿಣಾಮ ಶೀಘ್ರದಲ್ಲೇ ಕಂಡುಬರುವ ಸಾಧ್ಯತೆಯಿದೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಅಸ್ಥಿರತೆ ಮತ್ತು ರೂಪಾಯಿ ಮೌಲ್ಯ ಕುಸಿತವೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದು ಕಂಪನಿಗಳು ತಿಳಿಸಿವೆ.
ಆಟೋ ಚಾಲಕರಿಗೆ ಸಂಕಷ್ಟ
ಸಿಎನ್ಜಿ ದರ ಏರಿಕೆಯು ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ಬದುಕಿಗೆ ದೊಡ್ಡ ಹೊಡೆತ ನೀಡಿದೆ. ಈ ಹಿಂದೆಯೂ ಇಂಧನ ಬೆಲೆ ಏರಿಕೆಯಾದಾಗ ಆಟೋ ಚಾಲಕರು ಬೀದಿಗಿಳಿದು ಪ್ರತಿಭಟಿಸಿದ್ದರು. ದಿನವಿಡೀ ದುಡಿದರೂ ಅನಿಲದ ದರ ಹೆಚ್ಚಳದಿಂದಾಗಿ ಕೈಗೆ ಸಿಗುವ ಲಾಭ ಶೂನ್ಯವಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದರು. ಬಾಡಿಗೆ ದರ ಹೆಚ್ಚಿಸಿದರೆ ಜನ ಆಟೋ ಹತ್ತಲ್ಲ, ಹೆಚ್ಚಿಸದಿದ್ದರೆ ನಮಗೆ ಹೊಟ್ಟೆ ತುಂಬಲ್ಲ ಎಂಬುದು ಅವರ ಸಮಸ್ಯೆ. ಬೆಂಗಳೂರಿನಂತಹ ನಗರಗಳಲ್ಲಿ ಈಗಾಗಲೇ ಸಿಎನ್ಜಿ ಕೊರತೆಯಿಂದಾಗಿ ಚಾಲಕರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಇತ್ತು, ಈಗ ದರ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಐಪಿಎಲ್ನ ಈ ಸೀಸನ್ ಅಲ್ಲಿ ಪಂಜಾಬ್ ಕಿಂಗ್ಸ್ ಸತತ ಐದು ಸೋಲುಗಳನ್ನು ಕಂಡಿದೆ. ಟೂರ್ನಿಯ ಆರಂಭದಲ್ಲಿ ಅಬ್ಬರಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಶ್ರೇಯಸ್ ಅಯ್ಯರ್ ಪಡೆ ನಂತರ ಎಡವಿದೆ. ಸದ್ಯಕ್ಕೆ ಈ ತಂಡ ನಾಲ್ಕನೇ ಸ್ಥಾನದಲ್ಲಿದ್ದರೂ, ಪ್ಲೇ-ಆಫ್ ಹಾದಿ ಮಾತ್ರ ಅಂದುಕೊಂಡಷ್ಟು ಸುಲಭವಾಗಿಲ್ಲ. ಈಗ ಮುಂದಿನ ಎರಡು ಪಂದ್ಯಗಳನ್ನು ಗೆದ್ದರೂ ಅಧಿಕೃತವಾಗಿ ಮುಂದಿನ ಹಂತಕ್ಕೇರುತ್ತಾರೆ ಎಂಬ ಗ್ಯಾರಂಟಿ ಇಲ್ಲ. ಪಂಜಾಬ್ ತಂಡಕ್ಕೆ ಗೆಲುವಷ್ಟೇ ಅಲ್ಲ, ಅದೃಷ್ಟವೂ ಬೇಕಿದೆ.
ಸೀಸನ್ನ ಮೊದಲಾರ್ಧದಲ್ಲಿ ಸತತ ಆರು ಗೆಲುವುಗಳೊಂದಿಗೆ ಬೀಗುತ್ತಿದ್ದ ಪಂಜಾಬ್ ತಂಡಕ್ಕೆ ಎರಡನೇ ಹಂತದಲ್ಲಿ ಅದೃಷ್ಟ ಕೈಕೊಟ್ಟಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿ ಅಂಕ ಹಂಚಿಕೆಯಾಗಿದ್ದು ತಂಡಕ್ಕೆ ಹಿನ್ನಡೆಯಾಯಿತು. ಸದ್ಯ 13 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿರುವ ಪಂಜಾಬ್, ಇನ್ನುಳಿದ ಎರಡು ಪಂದ್ಯಗಳನ್ನು ಗೆಲ್ಲುವುದರ ಜೊತೆಗೆ ಇತರ ತಂಡಗಳ ಫಲಿತಾಂಶದ ಮೇಲೆ ಕಣ್ಣಿಡಬೇಕಾದ ಅನಿವಾರ್ಯತೆ ಇದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ಗೆಲುವುಗಳೊಂದಿಗೆ (16 ಅಂಕ) ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. +1.053 ರನ್ರೇಟ್ ಹೊಂದಿರುವುದು ತಂಡದ ಪ್ಲಸ್ ಪಾಯಿಂಟ್. ಅಷ್ಟೇ ಅಂಕ ಹೊಂದಿರುವ ಗುಜರಾತ್ ಟೈಟಾನ್ಸ್ ಎರಡನೇ ಸ್ಥಾನದಲ್ಲಿದ್ದರೆ, ಸನ್ರೈಸರ್ಸ್ ಹೈದರಾಬಾದ್ 14 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಪಂಜಾಬ್ಗೆ ಬಾಕಿ ಇರೋದು ಇನ್ನು ಎರಡು ಪಂದ್ಯಗಳು ಮಾತ್ರ. ಅದೆರಡೂ ಪಂದ್ಯ ಗೆದ್ದರೆ ತಂಡದ ಅಂಕ 17 ಆಗಲಿದೆ. 5 ಹಾಗೂ ಆರನೇ ಸ್ಥಾನದಲ್ಲಿರುವ ಸಿಎಸ್ಕೆ ಹಾಗೂ ಆರ್ಆರ್ ತಂಡ ತಲಾ 12 ಅಂಕ ಗಳಿಸಿವೆ. ಈ ತಂಡಗಳಿಗೆ ಇರೋದು ತಲಾ ಮೂರು ಪಂದ್ಯಗಳು. ಹೀಗಾಗಿ, ಎರಡೂ ತಂಡಗಳು ಮೂರಕ್ಕೆ ಮೂರು ಪಂದ್ಯ ಗೆದ್ದರೆ 18 ಅಂಕ ಆಗಲಿವೆ.ಆರ್ಸಿಬಿ ಸೇರಿದಂತೆ ಟಾಪ್ ಆರರಲ್ಲಿರುವ ಬಹುತೇಕ ಎಲ್ಲಾ ತಂಡಗಳ ಸೋಲು ಪಂಜಾಬ್ಗೆ ಪ್ಲಸ್ ಆಗಲಿದೆ.
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಬಾರಿ ಮಂಕಾಗಿದೆ. ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮುಂಬೈ ತಂಡ ಎಲಿಮಿನೇಟ್ ಆಗಿರುವುದರಿಂದ ಪಂಜಾಬ್ ವಿರುದ್ಧದ ಪಂದ್ಯ ಗೆದ್ದರೂ ಯಾವುದೇ ಬದಲಾವಣೆ ಇಲ್ಲ. ಆದರೆ, ಪಂಜಾಬ್ ಹಾದಿ ಮತ್ತಷ್ಟು ಕಠಿಣವಾಗಿದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.