ವಿಜಯಪುರ, ಮಾರ್ಚ್ 06: ಐದು ವರ್ಷದ ಅಪ್ರಾಪ್ತ ವಯಸ್ಸಿನ ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕ ತಂದೆಗೆ(Father) ವಿಜಯಪುರದ ವಿಶೇಷ ನ್ಯಾಯಾಲಯ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿ ಆದೇಶಿಸಿದೆ. ತಂದೆಯೇ ಐದು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದು, ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ತೀರ್ಪು ನೀಡಿದೆ.
ನಡೆದಿದ್ದೇನು?
ಹೆಂಡತಿ ಮೇಲಿನ ವೈಮನಸ್ಸಿನಿಂದಾಗಿ ತನ್ನ ಐದು ವರ್ಷದ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ತಂದೆಗೆ ವಿಜಯಪುರದ ವಿಶೇಷ ನ್ಯಾಯಾಲಯ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿ ಆದೇಶಿಸಿದೆ. ಮೂಲತಃ ಚಡಚಣ ತಾಲೂಕಿನ ಇಂಚಗೇರಿ ಗ್ರಾಮದ ನಿವಾಸಿ ಆರೋಪಿ ಸೋಮನಿಂಗ ಕಳಸದವರ ಶಿಕ್ಷೆಗೆ ಗುರಿಯಾಗಿದ್ದಾನೆ.
ಸೋಮನಿಂಗ ತನ್ನದೇ ಅಪ್ರಾಪ್ತ ಐದು ವರ್ಷದ ಮಗಳಿಗೆ ಕಳೆದ ಗಣೇಶ ಚತುರ್ಥಿ ವೇಳೆ ಗಣೇಶನ ಮೂರ್ತಿಗಳನ್ನು ತೋರಿಸುತ್ತೇನೆ ಎಂದು ಕರೆದುಕೊಂಡು ವಿಜಯಪುರ ನಗರದ ಆಲಕುಂಟೆ ನಗರದಲ್ಲಿನ ನಿರ್ಜನ ಪ್ರದೇಶದಕ್ಕೆ ಕರೆದುಕೊಂಡು ಹೋಗಿ 2025 ಆಗಸ್ಟ್ 30ರಂದು ಸಾಯಂಕಾಲ ಅತ್ಯಾಚಾರ ಎಸಗಿದ್ದ. ಈ ಕುರಿತು ಅಪ್ರಾಪ್ತೆಯ ತಾಯಿ ವಿಜಯಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ 65(2) ಬಿ ಎನ್ ಎಸ್ – 2023 ಹಾಗೂ 5(ಎಂ) 6 ಪೋಕ್ಸೋ ಕಾಯ್ದೆ 2012ರಂತೆ ದೂರು ದಾಖಲಿಸಿದ್ದರು.
ವಿಚಾರಣೆಯಲ್ಲಿ ಸಾಕ್ಷಿಗಳನ್ನು ಪರಿಶೀಲಿಸಿದ ವಿಜಯಪುರದ ವಿಶೇಷ ಪೋಕ್ಸೋ ನ್ಯಾಯಾಧೀಶೆ ಕು. ಸಿಂದು ಪೋತದಾರ ಅವರು ಆರೋಪಿ ಸೋಮನಿಂಗ ಕಳಸದಗೆ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಮಹಿಳಾ ಠಾಣೆ ಪೊಲೀಸ್ ಠಾಣೆಯ ಅಧಿಕಾರಿಗಳಾದ ಜಯವಂತ ದುಲಾರಿ, ಆರ್ ಎ ದಿನ್ನಿ, ಪಿ ವೈ ಅಂಬಿಗೇರ, ಸಿಬ್ಬಂದಿಗಳಾದ ವಿಜಯ ಕೋಟ್ಯಾಳ, ಆರ್ ಜಿ ದೇವೂರ, ಎಸ್ ಎಂ ಕೋಳುರಗಿ, ಎಸ್ ಕೆ ಬಡಚಿ, ಕುಮಾರ ದೇಸಾಯಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಶೇಷ ಅಭಿಯೋಜಕ ವಿ ಜಿ ಹಗರಗೊಂಡ ಸರ್ಕಾರದ ಪರವಾಗಿ ವಾದ ಮಂಡಿಸಿದರು.
ನವದೆಹಲಿ, ಮಾರ್ಚ್ 6: ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಸುಖೋಯ್ (Su-30MKI) ಫೈಟರ್ ಜೆಟ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಆ ಯುದ್ಧವಿಮಾನಕ್ಕಾಗಿ ಐಎಎಫ್ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಆ ಯುದ್ಧವಿಮಾನ ತರಬೇತಿ ಕಾರ್ಯಾಚರಣೆಯ ಸಮಯದಲ್ಲಿ ಅಪಘಾತಕ್ಕೀಡಾಗಿರುವುದು ದೃಢಪಟ್ಟಿದೆ. ಇಬ್ಬರು ಭಾರತೀಯ ವಾಯುಪಡೆಯ (IAF) ಪೈಲಟ್ಗಳಾದ ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಸಾವನ್ನಪ್ಪಿದ್ದಾರೆ.
ಸುಖೋಯ್ ಯುದ್ಧವಿಮಾನದ ಅಪಘಾತದಲ್ಲಿ ಮಾರಣಾಂತಿಕವಾಗಿ ಗಾಯಗೊಂಡಿದ್ದ ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಮೃತಪಟ್ಟಿರುವ ಬಗ್ಗೆ IAF ದೃಢಪಡಿಸಿದೆ. ಈ ದುಃಖದ ಸಮಯದಲ್ಲಿ IAFನ ಎಲ್ಲಾ ಸಿಬ್ಬಂದಿ ಮೃತರ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತಾರೆ ಎಂದು ಭಾರತೀಯ ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಸುಖೋಯ್-30MKI ವಿಮಾನವು ಗುರುವಾರ ಸಂಜೆ ಜೋರ್ಹತ್ ವಾಯುನೆಲೆಯಿಂದ ಹೊರಟು ರಡಾರ್ ಸಂಪರ್ಕವನ್ನು ಕಳೆದುಕೊಂಡಿತು. ರಷ್ಯಾ ಮೂಲದ ಫೈಟರ್ ಜೆಟ್ನೊಂದಿಗಿನ ಸಂಪರ್ಕವು ಸಂಜೆ 7.42ರ ಸುಮಾರಿಗೆ ಕಡಿದುಹೋಗಿತ್ತು. ಐಎಎಫ್ ಶೋಧ ಕಾರ್ಯಾಚರಣೆ ವೇಳೆ ಜೋರ್ಹತ್ನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ವಿಮಾನ ಅಪಘಾತಕ್ಕೀಡಾಗಿತ್ತು.
Purvesh Duragkar
ಆಪರೇಷನ್ ಸಿಂಧೂರ್ನಲ್ಲಿ ಭಾಗಿಯಾಗಿದ್ದ ಪೈಲಟ್:
ಅಸ್ಸಾಂನ ಕರ್ಬಿ ಆಂಗ್ಲಾಂಗ್ನಲ್ಲಿ ಭಾರತೀಯ ವಾಯುಪಡೆಯ ಸುಖೋಯ್ ಯುದ್ಧ ವಿಮಾನ ಅಪಘಾತಕ್ಕೀಡಾದ ನಂತರ ಸಾವನ್ನಪ್ಪಿದ ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಗ್ಕರ್ ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯ ಪ್ರತೀಕಾರಕ್ಕಾಗಿ ಭಾರತ ಪ್ರಾರಂಭಿಸಿದ್ದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಭಾಗವಾಗಿದ್ದರು.
2025ರ ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಮೇ 7ರಂದು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತ್ತು. ಭದ್ರತಾ ಪಡೆಗಳು ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಬಹು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದವು. ನಂತರ ಪಾಕಿಸ್ತಾನವು ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ನಡೆಸಿತು. ಅದನ್ನು ಭಾರತ ತಡೆಹಿಡಿಯಿತು. ಅದಕ್ಕೆ ಪ್ರತೀಕಾರವಾಗಿ, ಭಾರತ ಪಾಕಿಸ್ತಾನದಲ್ಲಿನ ವಾಯುನೆಲೆಗಳ ಮೇಲೆ ದಾಳಿ ಮಾಡಿತು. ಮೇ 10ರಂದು ಕದನ ವಿರಾಮ ಘೋಷಿಸಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, (ಮಾರ್ಚ್ 06): ಕ್ಷುಲ್ಲಕ ವಿಚಾರಕ್ಕೆ ನಡೆದ ಮಾತಿನ ಚಕಮಕಿ, ನೋಡ-ನೋಡ್ತಿದ್ದಂತೆ ಬಡಿದಾಡುವ ಹಂತಕ್ಕೆ ಹೋಗಿದೆ. ವ್ಯಾಯಾಮ ಮಾಡ್ತಿದ್ದ ಏಳೆಂಟು ಜನ ಹಿರಿಯ ನಾಗರೀಕರು(senior citizen) ಏಕಾಏಕಿ ನಾಯಿಯನ್ನು ವಾಕಿಂಗ್ ಮಾಡಿಸುತ್ತಿದ್ದ ವ್ಯಕ್ತಿ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಕೆಳಕ್ಕೆ ಉರುಳಿ ಬಿದ್ದರೂ ಸಹ ಬಿಡದೆ ಕಾಲಿನಿಂದ ಒದ್ದು ದೌರ್ಜನ್ಯ ನಡೆಸಿದ್ದಾರೆ. ಈ ಘಟನೆ ಬೆಂಗಳೂರಿನ (Bengaluru) ವರ್ತೂರಿನ ಬ್ರಿಗೇಡ್ ಈಥೋಪಿಯ ಈಸ್ಟ್ ಆಂಟೊಪಿಯ ಅಪಾರ್ಟ್ಮೆಂಟ್ ನಲ್ಲಿ ನಡೆದಿದ್ದು, ಗಲಾಟೆ ವೇಳೆ ಹಲ್ಲೆಗೊಳಗಾಗಿ ನೊಂದ ತರಣ್ ಎನ್ನುವರು ವರ್ತೂರು ಠಾಣೆಗೆ ದೂರು ನೀಡಿದ್ದಾರೆ.
ಹಿರಿಯರು ಗಲಾಟೆ ಮಾಡಿಕೊಂಡಿದ್ಯಾಕೆ?
ವರ್ತೂರಿನ ಬ್ರಿಗೇಡ್ ಈಥೋಪಿಯ ಈಸ್ಟ್ ಆಂಟೊಪಿಯ ಅಪಾರ್ಟ್ಮೆಂಟ್ ಇಲ್ಲಿ ನೂರಾರು ಕುಟುಂಬಗಳು ವಾಸಮಾಡಿತ್ತಿದ್ದಾರೆ. ಮೊನ್ನೆ ತರುಣ್ ಆರೋರ ಎನ್ನುವವರು ತಮ್ಮ ಸಾಕು ನಾಯಿಯನ್ನು ವಾಕಿಂಗ್ ಮಾಡಿಸಲು ಹೊರಗಡೆ ಕರೆದುಕೊಂಡು ಬಂದಿದ್ದಾರೆ. ಇದೇ ಅಪಾರ್ಟ್ಮೆಂಟ್ ಜಾಗದಲ್ಲಿ ವಾಕಿಂಗ್, ಯೋಗ, ಮಾಡಲು ಜಾಗವನ್ನು ನಿಗದಿ ಮಾಡಿದ್ದಾರಂತೆ. ಇಲ್ಲಿಗೆ ನಾಯಿಯನ್ನು ಕರೆದುಕೊಂಡು ಬಂದು ಮೂತ್ರ ವಿಸರ್ಜನೆ ಮಾಡಿಸುತ್ತಿದ್ದರಂತೆ. ಆದ್ರೆ, ತರುಣ್ ಬೇರೆ ಸ್ಥಳಕ್ಕೆ ಶ್ವಾನವನ್ನು ಕರೆದುಕೊಂಡು ಬಂದಿದ್ದಕ್ಕೆ ಕೆಲವರು ಗರಂ ಆಗಿದ್ದಾರೆ. ಅಲ್ಲದೇ ಇಲ್ಲಿಗೆ ಯಾಕೆ ನಾಯಿಯನ್ನು ಕರೆದುಕೊಂಡು ಬಂದ್ರಿ ಎಂದು ಕಿರಿಕ್ ಮಾಡಿ ಜಗಳಕ್ಕಿಳಿದಿದ್ದಾರೆ. ಬಳಿಕ ಮಾತಿಗೆ ಮಾತು ಬೆಳೆದು ಏಳೆಂಟು ಜನ ಸೀನಿಯರ್ ಸಿಟಿಜನ್ಸ್ ಸೇರಿಕೊಂಡು ಶ್ವಾನ ಮಾಲೀಕ ತರುಣ್ ಹಲ್ಲೆ ಮಾಡಿದ್ದಾರೆ. ಹೊಡೆದು, ಕಾಲಿನಿಂದ ಒದ್ದು ಕೆಳಗೆ ಬೀಳಿಸಿದ್ದಾರೆ. ಬಳಿಕ ಅವರಲ್ಲಿದ್ದ ಮಹಿಳೆ ಗಲಾಟೆಯನ್ನು ಬಿಡಿಸಿ ಕಳುಹಿಸಿದ್ದಾರೆ.
ಗಲಾಟೆ ವೇಳೆ ಹಲ್ಲೆಗೊಳಗಾಗಿ ನೊಂದ ತರಣ್ ವರ್ತೂರು ಠಾಣೆಗೆ ದೂರು ನೀಡಿದ್ದಾರೆ. ಸಾಲದಕ್ಕೆ ಹಲ್ಲೆಗೊಳಗಾದ ತರುಣ್ ಅರೋರ್ ಇನ್ ಪ್ಯಾಂಟ್ರಿ ರಸ್ತೆಯ ನಗರ ಪೋಲೀಸ್ ಆಯುಕ್ತರ ಕಚೇರಿಗೆ ತೆರಳಿ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಹಲ್ಲೆ ಮಾಡಿದ ತಪ್ಪಿತಸ್ಥರ ವಿರುದ್ದ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇದಾದ ಬಳಿ ಇತ್ತ ಮಹಿಳೆಯೊಬ್ಬರು ಇದಕ್ಕೆ ಪ್ರತಿದೂರು ನೀಡಿದ್ದಾರೆ. ನಮ್ಮ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.ನಮ್ಮ ಮಕ್ಕಳು ವಿದೇಶದಲ್ಲಿದ್ದಾರೆ ನಾವಿಬ್ಬರೇ ಇದ್ದೇವೆ. ನನ್ನ ಕಡೆ ದೊಡ್ಡ ಗುಂಪಿದೆ. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ ಎಂದು ಪ್ರತಿದೂರು ನೀಡಿದ್ದಾರೆ. ಸದ್ಯ ಘಟನೆ ಬಗ್ಗೆ ಎರಡು ಕಡೆಯವರಿಂದ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು,ಪ್ರತಿದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಒಟ್ಟಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಶುರುವಾದ ಜಗಳ ಹಿರಿಯ ನಾಗರೀಕರ ಗಲಾಟೆ ಬಡಿದಾಟಕ್ಕೆ ಕಾರಣವಾಗಿದ್ದು,ಇದೀಗ ಠಾಣೆ ಮೇಟ್ಟಿಲೇರುವಂತೆ ಮಾಡಿದ್ದು ವಿಪರ್ಯಾಸವೇ ಸರಿ.
ಮಾರ್ಚ್ 8 ರಂದು 2026 ರ ಟಿ20 ವಿಶ್ವಕಪ್ನ ಫೈನಲ್ (T20 World Cup 2026 Final) ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆತಿಥೇಯ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ಮುಖಾಮುಖಿಯಾಗುತ್ತಿವೆ. ಭಾರತ ತಂಡ ಫೈನಲ್ಗೇರಿರುವುದರಿಂದ ಕ್ರೀಡಾಂಗಣ ಅಭಿಮಾನಿಗಳಿಂದ ತುಂಬಿತುಳುಕುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಬರುವ ಅಭಿಮಾನಿಗಳಿಗೆ ಯಾವುದೇ ತೊಂದರೆಯಾಗದಂತೆ ಮತ್ತು ಪಂದ್ಯ ಆರಂಭಕ್ಕೂ ಮುನ್ನ ಅವರಿಗೆ ವಿವಿದ ಕಾರ್ಯಕ್ರಮಗಳ ಮೂಲಕ ರಂಜಿಸುವ ಸಲುವಾಗಿ ಐಸಿಸಿ ಹಾಗೂ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ನಾನಾ ತಯಾರಿಗಳನ್ನು ಮಾಡಿಕೊಂಡಿದೆ. ಅದರಂತೆ ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಪ್ರಸಿದ್ಧ ಗಾಯಕ ಅರಿಜಿತ್ ಸಿಂಗ್, ಜನಪ್ರಿಯ ಗುಜರಾತಿ ಗಾಯಕ ಫಲ್ಗುಣಿ ಪಾಠಕ್ ಮತ್ತು ಅಂತರರಾಷ್ಟ್ರೀಯ ಪಾಪ್ ತಾರೆ ರಿಕಿ ಮಾರ್ಟಿನ್ ಪ್ರದರ್ಶನ ನೀಡಲಿದ್ದಾರೆ ಎಂದು ವರದಿಯಾಗಿದೆ.
ಫೈನಲ್ಗೆ ಮೋದಿ ಮೈದಾನ ರೆಡಿ
ಟಿ20 ಕ್ರಿಕೆಟ್ ವಿಶ್ವಕಪ್ನ ಫೈನಲ್ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು, ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡುತ್ತಿದೆ. ಅಹಮದಾಬಾದ್ನಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಮಾನವನ್ನು ಗಮನದಲ್ಲಿಟ್ಟುಕೊಂಡು, ಪ್ರೇಕ್ಷಕರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಕ್ರೀಡಾಂಗಣದ ಪೋಡಿಯಂ ಪ್ರದೇಶದಲ್ಲಿ 30 ಹೆಚ್ಚುವರಿ ನೀರಿನ ಕೌಂಟರ್ಗಳನ್ನು ಸ್ಥಾಪಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ನೀರು ಮತ್ತು ಇತರ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಇದನ್ನು ಯೋಜಿಸಲಾಗಿದೆ.
ವೈದ್ಯಕೀಯ ಸೌಲಭ್ಯಗಳಿಗೂ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಕ್ರೀಡಾಂಗಣದ ಪೋಡಿಯಂ ಪ್ರದೇಶದಲ್ಲಿ 6 ವೈದ್ಯಕೀಯ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಇರಲಿದ್ದಾರೆ. ಇದಲ್ಲದೆ, ತುರ್ತು ಪರಿಸ್ಥಿತಿಗಳನ್ನು ಪೂರೈಸಲು 2 ತಾತ್ಕಾಲಿಕ ಆಸ್ಪತ್ರೆಗಳನ್ನು ಸಿದ್ಧಪಡಿಸಲಾಗಿದೆ. ಕ್ರೀಡಾಂಗಣದ ಪೋಡಿಯಂ ಪ್ರದೇಶದಲ್ಲಿ ಐಸಿಯು ಸೌಲಭ್ಯಗಳನ್ನು ಹೊಂದಿರುವ 2 ಆಂಬ್ಯುಲೆನ್ಸ್ಗಳನ್ನು ಸಿದ್ಧವಾಗಿಡಲಾಗುವುದು. ಹಾಗೆಯೇ ಇಡೀ ಕ್ರೀಡಾಂಗಣದಲ್ಲಿ ಒಟ್ಟು 6 ಐಸಿಯು ಆಂಬ್ಯುಲೆನ್ಸ್ಗಳನ್ನು ನಿಯೋಜಿಸಲಾಗುವುದು. ಈ ಎಲ್ಲಾ ವ್ಯವಸ್ಥೆಗಳ ಮುಖ್ಯ ಉದ್ದೇಶ 1.25 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರ ಸುರಕ್ಷತೆ ಮತ್ತು ಆರೋಗ್ಯವನ್ನು ಖಚಿತಪಡಿಸಿಕೊಳ್ಳುವುದು. ಭದ್ರತೆ, ವೈದ್ಯಕೀಯ ವ್ಯವಸ್ಥೆಗಳು ಮತ್ತು ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಲಾಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 2026 ರ ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ (T20 World Cup Semi-Final) ಪಂದ್ಯ ಕ್ರಿಕೆಟ್ ಇತಿಹಾಸದಲ್ಲಿ ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಎರಡೂ ತಂಡಗಳು ಒಟ್ಟಾರೆಯಾಗಿ ಬರೋಬ್ಬರಿ 499 ರನ್ ಕಲೆಹಾಕಿದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 253 ರನ್ ಗಳಿಸಿತು. ಈ ಮೂಲಕ ಟೀಂ ಇಂಡಿಯಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ನಾಕೌಟ್ ಸುತ್ತಿನಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ ದಾಖಲೆಯನ್ನು ಬರೆಯಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಕೂಡ ಗೆಲುವಿಗಾಗಿ ಹೋರಾಟ ನಡೆಸಿತ್ತಾದರೂ 246 ರನ್ಗಳಿಸಲಷ್ಟೇ ಶಕ್ತವಾಗಿ 7 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಪಂದ್ಯ ರನ್ಗಳ ವಿಚಾರದಲ್ಲಿ ದಾಖಲೆ ಬರೆಯುವುದರ ಜೊತೆಗೆ ವೀಕ್ಷಣೆಯ ವಿಚಾರದಲ್ಲೂ ವಿಶ್ವದಾಖಲೆ ನಿರ್ಮಿಸಿದೆ.
65.2 ಮಿಲಿಯನ್ ವೀಕ್ಷಕರು
ಮಾರ್ಚ್ 5 ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಪಂದ್ಯ ಅತಿ ಹೆಚ್ಚು ವೀಕ್ಷಣೆ ಕಂಡ ಪಂದ್ಯವೆಂಬ ವಿಶ್ವದಾಖಲೆ ಬರೆದಿದೆ. ಈ ವಿಚಾರವನ್ನು ಸ್ವತಃ ಐಸಿಸಿ ಅಧ್ಯಕ್ಷ ಜಯ್ ಶಾ ಅವರೇ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ‘ಐಸಿಸಿ ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ ಡಿಜಿಟಲ್ ವೀಕ್ಷಕರ ಸಂಖ್ಯೆಯಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಿನ ಪಂದ್ಯವನ್ನು ಜಿಯೋ ಹಾಟ್ಸ್ಟಾರ್ನಲ್ಲಿ 65.2 ಮಿಲಿಯನ್ ವೀಕ್ಷಕರು ವೀಕ್ಷಿಸಿದ್ದಾರೆ. ಇದು ವಿಶ್ವದ ಯಾವುದೇ ಲೈವ್ ಕಾರ್ಯಕ್ರಮಕ್ಕೆ ಹೋಲಿಸಿದರೆ ಅತ್ಯಧಿಕವಾಗಿದೆ. ಫೈನಲ್ ಪಂದ್ಯವನ್ನು ಇನ್ನೂ ಆಡಬೇಕಾಗಿದೆ. ಆದರೆ ಇದು (ಟಿ20 ವಿಶ್ವಕಪ್ 2026) ಈಗಾಗಲೇ 2024 ರಲ್ಲಿ ಯುನೈಟೆಡ್ ಸ್ಟೇಟ್ಸ್ನಲ್ಲಿ ನಡೆದ ಪಂದ್ಯಾವಳಿಯಲ್ಲಿ ನಿರ್ಮಿಸಿದ್ದ ವೀಕ್ಷಕರ ದಾಖಲೆಯನ್ನು ಮುರಿದಿದೆ’ ಎಂದು ಬರೆದುಕೊಂಡಿದ್ದಾರೆ.
Second semi-final of the @ICC#T20WorldCup 2026 has shattered the world record for digital viewership. The match between @BCCI and @EnglandCricket registered a peak digital concurrency of 65.2 million viewers @JioHotstar which is the highest for any live event across the world.…
ವೀಕ್ಷಣೆಯ ವಿಚಾರದಲ್ಲಿ ಮಾತ್ರವಲ್ಲದೆ ಈ ಪಂದ್ಯ ಇನ್ನು ಹಲವು ಐತಿಹಾಸಿಕ ದಾಖಲೆಗಳಿಗೆ ಸಾಕ್ಷಿಯಾಯಿತು.
ಮೇಲೆ ಹೇಳಿದಂತೆ ಈ ಪಂದ್ಯದಲ್ಲಿ ಒಟ್ಟಾರೆಯಾಗಿ 499ರನ್ಗಳನ್ನು ಕಲೆಹಾಕಲಾಯಿತು. ಇದು ಒಂದು ಟಿ20 ವಿಶ್ವಕಪ್ ಪಂದ್ಯದಲ್ಲಿ ಗಳಿಸಿದ ಅತಿ ಹೆಚ್ಚು ರನ್ಗಳ ದಾಖಲೆಯಾಗಿದೆ. ಹಾಗೆಯೇ ಅಂತರರಾಷ್ಟ್ರೀಯ ಟಿ20ಯಲ್ಲಿ ದಾಖಲಾದ ಎರಡನೇ ಅತಿ ಹೆಚ್ಚು ಮೊತ್ತವಾಗಿದೆ. ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ 519 ರನ್ ದಾಖಲಾಗಿದ್ದು ಇದುವರೆಗಿನ ದಾಖಲೆಯಾಗಿದೆ.
ಸಿಕ್ಸರ್ಗಳ ವಿಚಾರದಲ್ಲೂ ಈ ಪಂದ್ಯ ದಾಖಲೆ ಬರೆಯಿತು. ಟೀಂ ಇಂಡಿಯಾ 19 ಸಿಕ್ಸರ್ಗಳನ್ನು ಬಾರಿಸಿದರೆ, ಇಂಗ್ಲೆಂಡ್ ತಂಡ 15 ಸಿಕ್ಸರ್ಗಳನ್ನು ಕಲೆಹಾಕಿತು. ಒಟ್ಟಾರೆಯಾಗಿ 34 ಸಿಕ್ಸರ್ಗಳೊಂದಿಗೆ ಒಂದೇ ಟಿ20 ವಿಶ್ವಕಪ್ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ದಾಖಲೆಯನ್ನು ನಿರ್ಮಿಸಿತು.
ಕೇವಲ ಸಿಕ್ಸರ್ಗಳಲ್ಲ, ಈ ಪಂದ್ಯವು ವಿಶ್ವಕಪ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ದಾಖಲಿಸಿದ ದಾಖಲೆಯನ್ನು ಸಹ ನಿರ್ಮಿಸಿತು. ಭಾರತ ಮತ್ತು ಇಂಗ್ಲೆಂಡ್ನ ಬ್ಯಾಟ್ಸ್ಮನ್ಗಳು ಒಟ್ಟು 73 ಬೌಂಡರಿಗಳನ್ನು ಬಾರಿಸಿದರು. ಈ ಹಿಂದೆ 2016 ರ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ 61 ಬೌಂಡರಿಗಳು ದಾಖಲಾಗಿದ್ದವು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೀದರ್, ಮಾರ್ಚ್ 06: ಕಬ್ಬು (Sugarcane)ಬೆಳೆದು ಖುಷಿಯಿಂದ ಸಕ್ಕರೆ ಕಾರ್ಖಾನೆಗೆ ರೈತರು (Farmers) ಕಬ್ಬು ಹಾಕುತ್ತಿದ್ದಾರೆ. ಆದರೆ ಸಕ್ಕರೆ ಕಾರ್ಖಾನೆಯಿಂದ ಬರಬೇಕಾದ ಹಣ ಮಾತ್ರ ರೈತರ ಕೈ ಸೇರುತ್ತಿಲ್ಲ. ವರ್ಷವಿಡೀ ಕಷ್ಟಪಟ್ಟು ಬೆಳೆದ ಕಬ್ಬನ್ನ ಕಾರ್ಖಾನೆಗೆ ಹಾಕಿದರೆ ಕಾರ್ಖಾನೆ ಮಾಲೀಕರು ಮಾತ್ರ ರೈತರಿಗೆ ಹಣ ಕೊಡದೆ ಸತಾಯಿಸುತ್ತಿದ್ದಾರೆ. ಕಬ್ಬು ಹಾಕಿದ ರೈತರಿಗೆ ಹಣ ಜಮೆ ಮಾಡಿ ಎಂದು ಜಿಲ್ಲಾಧಿಕಾರಿಗಳು ನೋಟಿಸ್ ಕೊಟ್ಟರು ಸಕ್ಕರೆ ಕಾರ್ಖಾನೆಯವರು ಮಾತ್ರ ಹಣ ಹಾಕುತ್ತಿಲ್ಲ. ಹೀಗಾಗಿ ಅನ್ನದಾತರು ಹಣಕ್ಕಾಗಿ ಪರದಾಡುವಂತಾಗಿದೆ.
ರೈತರ ಹಣ ನೀಡದೇ ಕಾರ್ಖಾನೆಗಳ ಮೀನಾಮೇಷ
ಬೀದರ್ ಜಿಲ್ಲೆಯಲ್ಲಿ ಐದು ಸಕ್ಕರೆ ಕಾರ್ಖಾನೆಗಳಿದ್ದು, ಈವರೆಗೆ ಐದು ಸಕ್ಕರೆ ಕಾರ್ಖಾನೆಗಳಿಂದ 15 ಲಕ್ಷ 44 ಸಾವಿರ ರೂ ಮ್ಯಾಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. 594 ಕೋಟಿ 63 ಲಕ್ಷ ರೂ ರೈತರ ಬ್ಯಾಂಕ್ ಖಾತೆಗೆ ಸಕ್ಕರೆ ಕಾರ್ಖಾನೆಯವರು ಹಾಕಬೇಕಾಗಿದೆ. ಆದರೆ 375 ಕೋಟಿ 72 ರೂ ಮಾತ್ರ ರೈತರ ಖಾತೆಗೆ ಜಮೆ ಆಗಿದೆ. ಉಳಿದ 252 ಕೋಟಿ 90 ಲಕ್ಷ ರೂ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಹಾಕದೆ ಸಕ್ಕರೆ ಕಾರ್ಖಾನೆಯವರು ಮೀನಾಮೇಷ ಎಣಿಸುತ್ತಿದ್ದಾರೆ.
ಸಾಲ-ಸೋಲಾ ಮಾಡಿ ಬೆಳೆದ ಕಬ್ಬನ್ನ ಮಾರಾಟ ಮಾಡಿದರೇ ಅದರ ಹಣವನ್ನ ಮಾತ್ರ ರೈತರಿಗೆ ಕೊಡುತ್ತಿಲ್ಲ. ಇತ್ತ ರೈತರು ಮತ್ತೆ ಸಾಲದ ಮೊರೆ ಹೋಗುವ ಮೂಲಕ ಹೊಟ್ಟೆತುಂಬಿಸಿಕೊಳ್ಳುತ್ತಿದ್ದಾರೆ. ವರ್ಷವಿಡೀ ಕಬ್ಬನ್ನ ಬೆಳೆದಿದ್ದೇವೆ. ಗೊಬ್ಬರ, ಬೀಜ ಹೀಗೆ ಹತ್ತಾರು ಕಡೆಗಳಲ್ಲಿ ಸಾಲ ಮಾಡಿಕೊಂಡಿದ್ದೇವೆ. ಕಬ್ಬು ಮಾರಾಟ ಮಾಡಿದ ಹಣದಲ್ಲಿ ಸಾಲ ತೀರಿಸಬೇಕು ಎಂದುಕೊಂಡು ಸಾಲ ಮಾಡಿದ್ದೇವೆ, ಆದರೆ ಸಕ್ಕರೆ ಕಾರ್ಖಾನೆಯವರು ಮಾತ್ರ ರೈತರಿಗೆ ಕೊಡಬೇಕಾದ ಹಣ ಕೊಡುತ್ತಿಲ್ಲ. ಹೀಗಾಗಿ ರೈತರು ಕಾರ್ಖಾನೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಮಲ್ಲಿಕಾರ್ಜುನ್ ಅಳಲುತೋಡಿಕೊಂಡಿದ್ದಾರೆ.
ಇನ್ನು ಯಾವುದೆ ಸಕ್ಕರೆ ಕಾರ್ಖಾನೆಗೆ ರೈತರು ಕಬ್ಬು ಹಾಕಿದರೆ ಎರಡು ವಾರದಲ್ಲಿ ರೈತರಿಗೆ ಕೊಡಬೇಕಾದ ಹಣವನ್ನ ಪಾವತಿ ಮಾಡಬೇಕು ಎಂಬ ನಿಯಮವಿದೆ, ಆದರೆ ಕಾರ್ಖಾನೆಗೆ ಹಣ ಹಾಕಿ ತಿಂಗಳು ಕಳೆದರೂ ರೈತರಿಗೆ ಕೊಡಬೇಕಾದ ಹಣ ಕೊಡುತ್ತಿಲ್ಲ. ಹೀಗಾಗಿ ರೈತರು ಸಾಲ ತಂದು ಕಡಲೆ, ಕುಸುಬಿ, ಜೋಳವನ್ನ ನಾಟಿ ಮಾಡಿದ್ದಾರೆ. ರಸಗೊಬ್ಬರ ಕೊಳ್ಳಲು ಹಣವಿಲ್ಲ, ಹೀಗಾಗಿ ಬೇಗ ರೈತರಿಗೆ ಕೊಡಬೇಕಾದ ಹಣವನ್ನ ಎರಡು ದಿನದಲ್ಲಿ ಕೊಡದೆ ಹೋದರೆ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.
ರೈತರ ಬೆನ್ನಿಗೆ ನಿಂತ ಜಿಲ್ಲಾಧಿಕಾರಿ
ರೈತರ ಬೆನ್ನಿಗೆ ಬೀದರ್ ಜಿಲ್ಲಾಧಿಕಾರಿ ನಿಂತುಕೊಂಡಿದ್ದು, ಎರಡು ವಾರದೊಳಗಾಗಿ ರೈತರಿಗೆ ಬಾಕಿ ಹಣ ಕೊಡದಿದ್ದರೇ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಯ ಈ ನಡೆಯಿಂದ ರೈತರು ಖುಷಿ ಪಟ್ಟಿದ್ದಾರೆ. ಇದರ ಜೊತೆಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೂಡ ರೈತರಿಗೆ ಹಣ ಪಾವತಿಸುವಂತೆ ಒತ್ತಡ ಹೇರಿದ್ದಾರೆ.
ಇಷ್ಟೆಲ್ಲಾ ಆದರೂ ಇನ್ನು ರೈತರಿಗೆ ಹಣ ಮಾತ್ರ ಸಂದಾಯ ಮಾಡಲು ಕಾರ್ಖಾನೆಯ ಮಾಲೀಕರು ತಯಾರಿಲ್ಲ. ಇದು ಸಹಜವಾಗಿಯೇ ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಶೀಘ್ರದಲ್ಲಿ ರೈತರ ಹಣ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕಾಳಜಿವಹಿಸಿ ನಮಗೆ ಸೇರಬೇಕಾದ ಹಣವನ್ನ ಕೊಡಿಸಿ ಎಂದು ಮನವಿ ಮಾಡುತ್ತಿದ್ದಾರೆ.
ಆಹಾರ ಇಲಾಖೆಯ ಅಧಿಕಾರಿ ಪ್ರವೀಣ್ ಬರಗಲ್ ಹೇಳಿದ್ದಿಷ್ಟು
ಈ ಬಗ್ಗೆ ಆಹಾರ ಇಲಾಖೆಯ ಅಧಿಕಾರಿ ಪ್ರವೀಣ್ ಬರಗಲ್ ಪ್ರತಿಕ್ರಿಯಿಸಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳು ಎಲ್ಲಾ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯವರ ಜೊತೆಗೆ ಸಭೆ ಮಾಡಿದ್ದು, ರೈತರಿಗೆ ಆದಷ್ಟು ಬೇಗ ಹಣ ಹಾಕಿ ಎಂದು ಸೂಚನೆ ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಸಾವಿರಾರು ರೈತರು ಕಬ್ಬು ಬೆಳೆದು ಸಕ್ಕರೆ ಕಾರ್ಖಾನೆಯವರಿಗೆ ಕೊಟ್ಟು ಹಣ ಪಡೆಯಲಾಗದೆ ಕೈಕೈ ಹಿಚಿಕಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಕಬ್ಬು ಬಿತ್ತನೆಯ ಸಮಯದಲ್ಲಿ ಕಬ್ಬು ಹಾಕಲು ಸಾವಿರಾರು ರೂ ಸಾಲ ಮಾಡಿದ ಹಣವನ್ನ ಕೂಡ ರೈತರು ಸಾಲಗಾರರಿಗೆ ಕೊಡಲು ಸಾಧ್ಯವಾಗುತ್ತಿಲ್ಲ. ಇತ್ತ ಕಬ್ಬು ತೆಗೆದುಕೊಂಡು ಹೋದ ಕಾರ್ಖಾನೆಯವರು ರೈತರಿಗೆ ಕೊಡಬೇಕಾದ ಹಣ ಕೊಡುತ್ತಿಲ್ಲ. ಇದು ಸಹಜವಾಗಿಯೇ ರೈತರನ್ನ ಸಂಕಷ್ಟಕ್ಕೆ ತಳ್ಳಿದಂತಾಗಿದೆ.
ನವದೆಹಲಿ, (ಮಾರ್ಚ್ 06): ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮಂಡಿಸಿದ 17ನೇ ಬಜೆಟ್ 4.48 ಲಕ್ಷ ಕೋಟಿ ರೂಪಾಯಿ ಬೃಹತ್ ಗಾತ್ರದ ಹೆಗ್ಗಳಿಕೆಗಷ್ಟೇ ಸೀಮಿತ. ಅಂತೆಯೇ ರಾಜ್ಯದ ಸಾಲ ಹೆಚ್ಚಳ ಮತ್ತು ವಿತ್ತೀಯ ಕೊರತೆಯಲ್ಲಿ ಸಹ ದಾಖಲೆ ನಿರ್ಮಿಸಿದ್ದಲ್ಲದೆ, “ವೋಟ್ ಬ್ಯಾಂಕ್” ಪ್ರೇರಿತ ಎಂಬಂತಿದೆ. ಕರ್ನಾಟಕ ಸರ್ಕಾರದ 2026-27ನೇ ಸಾಲಿನ ಈ ಬಜೆಟ್ ನಲ್ಲಿ (Karnataka Budget) ರಾಜ್ಯವನ್ನು ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯುವ ಬದಲು ಆರ್ಥಿಕ ಸಂಕಷ್ಟವನ್ನು ತೆರೆದಿಟ್ಟಿದೆ. ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ಕೆಲವೇ ಕೆಲವು ಸಮಾಜಗಳಿಗೆ ಬಜೆಟ್ ಮೀಸಲಿಟ್ಟಂತೆ ಕಾಣುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ (Union Minister Pralhad Joshi) ಕಿಡಿಕಾರಿದ್ದಾರೆ.
ಲೆಕ್ಕರಾಮಯ್ಯ ಅಲ್ಲ ಸಾಲರಾಮಯ್ಯ
ಪ್ರಸ್ತುತ 4.48 ಲಕ್ಷ ಕೋಟಿ ದೊಡ್ಡ ಗಾತ್ರದ ಬಜೆಟ್ ಆಗಿದ್ದರೂ ಇದೊಂದು ಸ್ಪಷ್ಟ ಅರ್ಥ ನೀತಿ ಬಿಂಬಿಸದ, ‘ಅರ್ಥ’ವಿಲ್ಲದ ಈ ಆಯವ್ಯಯ ಥೇಟ್ ರಾಜಕೀಯ ಭಾಷಣದಂತಿದೆಯೇ ಹೊರತು ಯಾವುದೇ ಅರ್ಥಶಾಸ್ತ್ರದ ಮಾರ್ಗದರ್ಶಿಗೆ ಒಳಪಟ್ಟಂತೆ ಕಾಣುತ್ತಿಲ್ಲ. ಪ್ರಸಕ್ತ ಬಜೆಟ್ ನಲ್ಲಿ 97,449 ಕೋಟಿ ವಿತ್ತೀಯ ಕೊರತೆ ಮತ್ತು 29,957 ಕೋಟಿ ರಾಜಸ್ವ ಸಂಗ್ರಹ ಕೊರತೆ ತೋರಿಸಿರುವ ಸಿಎಂ ಸಿದ್ದರಾಮಯ್ಯ ಅವರು ಲೆಕ್ಕರಾಮಯ್ಯ ಅಲ್ಲ, ಸಂಪದ್ಭರಿತವಾಗಿದ್ದ ಕರುನಾಡಿನ ಪಾಲಿಗೆ 1.32 ಲಕ್ಷ ಕೋಟಿ ಸಾಲದ ಹೊರೆ ಹೊರಿಸಿದ “ಸಾಲರಾಮಯ್ಯ” ಆಗಿದ್ದಾರೆಂದು ಲೇವಡಿ ಮಾಡಿದ್ದಾರೆ.
ಜನಕ್ಕೆ 125 ದಿನಗಳ ಉದ್ಯೋಗ ಖಾತ್ರಿ ನೀಡುವುದರೊಂದಿಗೆ ನಗರ ಮತ್ತು ಗ್ರಾಮೀಣ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿರುವ ‘ಜಿ ರಾಮ್ ಜಿ ‘ ಯೋಜನೆಗೆ ರಾಜ್ಯ ಸರ್ಕಾರ ತನ್ನ ಬಜೆಟ್ ಅಲ್ಲಿ ನಯಾ ಪೈಸೆ ಅನುದಾನ ಒದಗಿಸಿಲ್ಲ. ಇದು ಇವರ ಅಭಿವೃದ್ಧಿ ವಿರೋಧಿ ನೀತಿಯನ್ನು ತೋರ್ಪಡಿಸುತ್ತದೆ ಎಂದು ಜೋಶಿ ಆಕ್ಷೇಪಿಸಿದ್ದಾರೆ.
ರಾಜ್ಯದ ಆರ್ಥಿಕಾಭಿವೃದ್ಧಿ ಮತ್ತು ಮೂಲಸೌಲಭ್ಯ ಅಭಿವೃದ್ಧಿಗೆ ಯಾವುದೇ ರಚನಾತ್ಮಕ ಪ್ರಸ್ತಾವನೆಗಳಿಲ್ಲದ ಇದು ರಾಜ್ಯದ ಪಾಲಿಗೆ “ಗ್ಯಾರೆಂಟಿ ಸಾಲ ಶೂಲ”ದ ಬಜೆಟ್ ಆಗಿದೆ. ‘ವೋಟ್ ಬ್ಯಾಂಕ್’ ಮತ್ತು ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮ ಗಾಂಧಿ ನಾಮಕರಣ ಘೋಷಿಸಿದ ‘ಕಾಂಗ್ರೆಸ್ ಹೈ ಕಮಾಂಡ್ ಓಲೈಕೆ’ಯ ಆಯವ್ಯಯ ಎಂದು ಟೀಕಿಸಿದ್ದಾರೆ.
ಕಳೆದ ವರ್ಷಕ್ಕಿಂತ 40 ಸಾವಿರ ಕೋಟಿ ಬಜೆಟ್ ಗಾತ್ರ ಹೆಚ್ಚಿಸಿದ ಸಿಎಂ, ರಾಜ್ಯ ಜಿಡಿಪಿಯ 2.95ಕ್ಕೆ ಮಿತಿಗೊಳಿಸಿದ್ದರೂ ಒಟ್ಟು ಸಾಲದ ಗಾತ್ರವನ್ನು 8.24 ಲಕ್ಷ ಕೋಟಿಗೆ ಕೊಂಡೊಯ್ದಿದ್ದಾರೆ. ರಾಜ್ಯದ ಆರ್ಥಿಕ ಇತಿಹಾಸದಲ್ಲೇ ಇದು ದಾಖಲೆ. ಇದೇ ಸಿದ್ದರಾಮಯ್ಯ ಸರ್ಕಾರದ ಸಾಧನೆಯಾಗಿದೆ. ಆದರೆ, ತಮ್ಮ ವಿತ್ತೀಯ ಅಶಿಸ್ತಿನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಅಭ್ಯಾಸಬಲ ಎನ್ನುವಂತೆ ಮತ್ತೆ ಕೇಂದ್ರ ಸರ್ಕಾರದತ್ತ ಬೆರಳು ತೋರಿದ್ದಾರೆ ಎಂದು ಜೋಶಿ ಆರೋಪಿಸಿದ್ದಾರೆ.
ಬಜೆಟ್ ಅನ್ನು ಸಮಗ್ರವಾಗಿ ಅವಲೋಕಿಸಿದರೆ ಸಿಎಂ ಅವರ ಸರ್ವ ಸಮಾನತೆ ಸ್ಲೋಗನ್ ಗೆ ತಕ್ಕಂತೆ ಯಾವುದೇ ಅಂತಃಸತ್ವ ಇಲ್ಲವೆಂದೇ ಹೇಳಬೇಕು. ಎಂದಿನಂತೆ ಅಲ್ಪಸಂಖ್ಯಾತರಿಗೆ ವಿಶೇಷ ಕೊಡುಗೆ ಮುಂದುವರೆದಿದೆ ಅಷ್ಟೇ. ಅಲ್ಪಸಂಖ್ಯಾತ ಕಾಲೋನಿಗಳಿಗೆ ಬರೋಬ್ಬರಿ ₹1635 ಕೋಟಿ ಅನುದಾನ ನೀಡಿದ್ದಲ್ಲದೆ, ಅಲ್ಪಸಂಖ್ಯಾತ ನಿಗಮ ಮಂಡಳಿಗಳಲ್ಲಿ ಸಾಲ ಪಡೆದವರ ಸಂಪೂರ್ಣ ಬಡ್ಡಿ ಮನ್ನಾ ಮಾಡಿದೆ. 5000 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಗೆ ₹ 50000 ಘೋಷಿಸಿದೆ. ಹುಬ್ಬಳ್ಳಿ, ಕಲಬುರ್ಗಿಯಲ್ಲಿ ಹಜ್ ಭವನ ನಿರ್ಮಾಣ ಘೋಷಿಸಿದೆ. ಆದರೆ ಬಹುತೇಕ ಸಮಾಜಗಳನ್ನು ಕಡೆಗಣಿಸಿದೆ ಎಂದಿದ್ದಾರೆ.
ದಾವಣಗೆರೆ “ವೋಟ್ ಬ್ಯಾಂಕ್ “ಗೆ ಕೊಡುಗೆ: ಪ್ರಸಕ್ತ ಬಜೆಟ್ ಅಲ್ಲಿ ವಿಶೇಷವಾಗಿ ಮುಸ್ಲಿಂ ಮತದಾರರೇ ಹೆಚ್ಚಿರುವ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪ ಚುನಾವಣೆ ದೃಷ್ಟಿಯಿಂದ 100 ಕೋಟಿ ಅನುದಾನ ಘೋಷಿಸಲಾಗಿದೆ ಎಂದು ಆರೋಪಿಸಿರುವ ಪ್ರಹ್ಲಾದ ಜೋಶಿ ಉಳಿದ ಕ್ಷೇತ್ರಗಳಿಗೆ ಏಕಿಲ್ಲ? ಇದು ಅಲ್ಪಸಂಖ್ಯಾತ ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ಬಜೆಟ್ ಅಲ್ಲದೇ ಮತ್ತೇನು? ಎಂದು ಪ್ರಶ್ನಿಸಿದ್ದಾರೆ.
ಗ್ಯಾರೆಂಟಿ ಕೈ ಬಿಡುವ ಸೂಚನೆಯೇ? ಪ್ರಸಕ್ತ ಬಜೆಟ್ ಅಲ್ಲಿ ತಾವೇ ಘೋಷಿಸಿದ್ದ ಗ್ಯಾರೆಂಟಿ ಯೋಜನೆ “ಯುವ ನಿಧಿ”ಗೆ ಈ ಬಾರಿ ಅನುದಾನವನ್ನೇ ಮೀಸಲಿಟ್ಟಿಲ್ಲ. ಇದು ಕ್ರಮೇಣ ಒಂದೊಂದೇ ಗ್ಯಾರೆಂಟಿಗಳನ್ನು ಕೈ ಬಿಡುವ ಮುನ್ಸೂಚನೆ ನೀಡಿದಂತಿದೆ. ಯುವ ಸಮುದಾಯವನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಕಾರಣ “ಪ್ರಜ್ಞಾವಂತ ಯುವ ಸಮುದಾಯ ತಮ್ಮ ವೋಟ್ ಬ್ಯಾಂಕ್ ಅಲ್ಲ” ಎಂಬ ಸ್ಪಷ್ಟ ಭಾವನೆ ಮೂಡಿದಂತಿದೆ ಈ ಕಾಂಗ್ರೆಸ್ ಸರ್ಕಾರಕ್ಕೆ ಎಂದು ಪ್ರಹ್ಲಾದ ಜೋಶಿ ವಿಶ್ಲೇಷಿಸಿದ್ದಾರೆ.
ರಾಜ್ಯ ಸರ್ಕಾರದ ಈ ಬಜೆಟ್ ಅಲ್ಲಿ ಶಿಕ್ಷಣ ಕ್ಷೇತ್ರ ಮತ್ತು ಅವೈಜ್ಞಾನಿಕ ಗ್ಯಾರೆಂಟಿಗಳನ್ನು ಬಿಟ್ಟರೆ ಬೇರೆ ಯಾವುದೇ ವಲಯಕ್ಕೆ ಅಂಥಾ ದೊಡ್ಡ ಕೊಡುಗೆ ಏನಿಲ್ಲ. ಅದರಲ್ಲೂ ಪ್ರಮುಖವಾಗಿ ಆರೋಗ್ಯ ಕ್ಷೇತ್ರ ಮತ್ತು ಕೃಷಿ ವಲಯವನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಸಮಾಜ ಕಲ್ಯಾಣ, ಮೂಲಸೌಕರ್ಯ ಹಾಗೂ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಹೇಳಿದ್ದಾರೆ.
ಸಿಎಂ ದೂರದೃಷ್ಟಿಯ ಈ ಬಜೆಟ್ ಅಲ್ಲಿ ಒಟ್ಟಾರೆ ಇಂದಿರಾ ಕ್ಯಾಂಟೀನ್, ಬೆಂಗಳೂರು, ಮೈಸೂರು, ದಾವಣಗೆರೆ, ಮತ್ತು ಕಲ್ಬರ್ಗಿ ಅಷ್ಟೇ ಗೋಚರಿಸಿದಂತಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ಬೇರೆ ಬೇರೆ ಪ್ರಾಂತ್ಯಗಳು, ಜಿಲ್ಲೆಗಳು ಹಿಂದುಳಿದಿವೆ. ಅಭಿವೃದ್ಧಿ ಶೂನ್ಯವಾಗಿದೆ ಎಂದಿದ್ದಾರೆ.
ದಿಕ್ಕು ದೆಸೆ ಇಲ್ಲದ ಮುಂಗಡ ಪತ್ರ: ರಾಜ್ಯದ ನೀರಾವರಿ ಯೋಜನೆಗಳಿಗೆ ಯಾವುದೇ ಹಣಕಾಸಿನ ಪ್ರಸ್ತಾಪವಿಲ್ಲ. ಕೇಂದ್ರದ ಅನುಮತಿ ನೆಪ ಹೇಳಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನವಷ್ಟೇ ಇವರ ಕಸರತ್ತಾಗಿದೆ. ಯಾವುದೇ ದಿಕ್ಕು ದೆಸೆ ಇಲ್ಲದ ಈ ಒಂದು ದಾಖಲೆಯ ಮುಂಗಡ ಪತ್ರದಿಂದ ಜನಕಲ್ಯಾಣವೂ ಇಲ್ಲ ಆರ್ಥಿಕ ಪ್ರಗತಿಯೂ ಇಲ್ಲ. ಒಟ್ಟಾರೆ ಇದೊಂದು ಕೇವಲ ಸಾಲದ ಹೊರೆ ಮತ್ತು ವೋಟ್ ಬ್ಯಾಂಕ್ ಪ್ರೇರಿತ ಬಜೆಟ್ ಎಂದು ಹೇಳಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ (Nayanthara) ಮತ್ತು ಅವರ ಪತಿ ವಿಘ್ನೇಶ್ ಶಿವನ್ ಅವರು ತಮಿಳುನಾಡಿನ ಅತ್ಯಂತ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಚೆನ್ನೈನ ಪೋಯಸ್ ಗಾರ್ಡನ್ನಲ್ಲಿ ಬೃಹತ್ ಐಷಾರಾಮಿ ಡ್ಯುಪ್ಲೆಕ್ಸ್ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ. ಇದರ ಒಟ್ಟು ಮೌಲ್ಯ ಬರೋಬ್ಬರಿ 31.5 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ. ಪ್ರಾಪರ್ಟಿ ಅನಾಲಿಟಿಕ್ಸ್ ಪ್ಲಾಟ್ಫಾರ್ಮ್ ಜ್ಯಾಪ್ಕೀ (Zapkey) ಮೂಲಕ ಲಭ್ಯವಾಗಿರುವ ದಾಖಲೆಗಳ ಪ್ರಕಾರ, ಈ ಮನೆಯು ಚೆನ್ನೈನ ತೇನಾಂಪೇಟೆ ವ್ಯಾಪ್ತಿಯ ‘ಲೆಗಸಿ’ ಎಂಬ ಪ್ರೀಮಿಯಂ ವಸತಿ ಸಂಕೀರ್ಣದಲ್ಲಿದೆ.
ಅಪಾರ್ಟ್ಮೆಂಟ್ ಕಟ್ಟಡದ 4 ಮತ್ತು 5ನೇ ಮಹಡಿಯಲ್ಲಿ ಈ ಡ್ಯುಪ್ಲೆಕ್ಸ್ ಮನೆಯಿದ್ದು, ಸುಮಾರು 14,369 ಚದರ ಅಡಿ ವಿಸ್ತೀರ್ಣ ಹೊಂದಿದೆ. ವಿಶೇಷವೆಂದರೆ, ಈ ಆಸ್ತಿಯಲ್ಲಿ ನಯನತಾರಾ ಅವರು ಶೇಕಡ 90ರಷ್ಟು ಪಾಲನ್ನು ಹೊಂದಿದ್ದರೆ, ವಿಘ್ನೇಶ್ ಶಿವನ್ ಶೇಕಡ 10ರಷ್ಟು ಪಾಲು ಹೊಂದಿದ್ದಾರೆ. ಈ ಮನೆಗೆ ಎಂಟು ಪಾರ್ಕಿಂಗ್ ಜಾಗಗಳು ಮೀಸಲಾಗಿವೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಇದರ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ.
ಈ ಹೊಸ ಖರೀದಿಯೊಂದಿಗೆ ನಯನತಾರಾ ಅವರ ಆಸ್ತಿ ಪಟ್ಟಿಗೆ ಮತ್ತೊಂದು ಗರಿ ಸೇರ್ಪಡೆಯಾದಂತಾಗಿದೆ. ಅವರು ಈಗಾಗಲೇ ಹೈದರಾಬಾದ್ನ ಬಂಜಾರಾ ಹಿಲ್ಸ್ನಲ್ಲಿ ತಲಾ 15 ಕೋಟಿ ರೂ. ಮೌಲ್ಯದ ಎರಡು ಮನೆಗಳನ್ನು ಹೊಂದಿದ್ದಾರೆ. ಇದಲ್ಲದೇ ಕೇರಳದಲ್ಲಿರುವ ಅವರ ಪೂರ್ವಜರ ಮನೆ ರಾಜ್ಯದ ಅತ್ಯಂತ ಐಷಾರಾಮಿ ಮನೆಗಳಲ್ಲಿ ಒಂದು ಎನ್ನಲಾಗುತ್ತದೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಚಿರಂಜೀವಿ ಮತ್ತು ವೆಂಕಟೇಶ್ ಅಭಿನಯದ ‘ಮನ ಶಂಕರ ವರಪ್ರಸಾದ್ ಗಾರು’ ಚಿತ್ರದಲ್ಲಿ ನಯನತಾರಾ ಕಾಣಿಸಿಕೊಂಡಿದ್ದರು. ಸದ್ಯ ಅವರ ಕೈಯಲ್ಲಿ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರವಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ, ಯಶ್ ನಾಯಕನಾಗಿ ನಟಿಸುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಯನತಾರಾ ಪ್ರಮುಖ ಪಾತ್ರ ಮಾಡಿದ್ದಾರೆ.
ಹಲವು ವರ್ಷಗಳಿಂದ ನಯನತಾರಾ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇಂದಿಗೂ ಅವರ ಬೇಡಿಕೆ ಕಡಿಮೆ ಆಗಿಲ್ಲ. ದಕ್ಷಿಣ ಭಾರತ ಮಾತ್ರವಲ್ಲದೇ ಬಾಲಿವುಡ್ನಲ್ಲೂ ಅವರು ಹೆಸರು ಮಾಡಿದ್ದಾರೆ. ಜೂನ್ 4ರಂದು ‘ಟಾಕ್ಸಿಕ್’ ಬಿಡುಗಡೆ ಆಗಲಿದೆ. ಆ ಬಳಿಕ ಅವರ ಬೇಡಿಕೆ ಇನ್ನಷ್ಟು ಹೆಚ್ಚಾಗಲಿದೆ.
ಜೈಪುರ, ಮಾರ್ಚ್ 6: ಹಳ್ಳಿಗಳಲ್ಲಿ ರಸ್ತೆಯ ಮೇಲೆ ಹಸುಗಳು ಮಲಗಿರುವುದು ಸಾಮಾನ್ಯ ದೃಶ್ಯ. ವೈರಲ್ (Viral Video) ಆಗಿರುವ ದೃಶ್ಯವೊಂದರಲ್ಲಿ ರಸ್ತೆಯ ಮೇಲೆ ಮಲಗಿದ್ದ ಹಸುವಿಗೆ ಡಿಕ್ಕಿ ಹೊಡೆದ ಕಾರು ಚಾಲಕನೊಬ್ಬ ಆ ಹಸುವನ್ನು ಕಾರಿನಲ್ಲಿ ತಳ್ಳಿಕೊಂಡು ಹೋಗಿದ್ದಾನೆ. ಈ ಘಟನೆ ರಾಜಸ್ಥಾನದ ಬುಂಡಿ ಪ್ರದೇಶದಲ್ಲಿ ನಡೆದಿದೆ. ಈ ವೀಡಿಯೊವನ್ನು ನೋಡಿದ ಜನರು ಕಾರು ಚಾಲಕನ ದುರಹಂಕಾರವನ್ನು ಟೀಕಿಸಿದ್ದಾರೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ವರ್ಲ್ಡ್ ರೆಕಾರ್ಡ್ ನಿರ್ಮಿಸಿರುವುದು ಟೀಮ್ ಇಂಡಿಯಾ (Team India). ಅದು ಸಹ ಸನ್ರೈಸರ್ಸ್ ಹೈದರಾಬಾದ್ (SRH) ತಂಡದ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ ಬರೋಬ್ಬರಿ 253 ರನ್ ಕಲೆಹಾಕಿದ್ದರು. ಈ 253 ರನ್ಗಳೊಂದಿಗೆ ಟೀಮ್ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ.
ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ 250+ ಸ್ಕೋರ್ಗಳಿಸಿದ ದಾಖಲೆ ಇದೀಗ ಟೀಮ್ ಇಂಡಿಯಾ ಪಾಲಾಗಿದೆ. ಇದಕ್ಕೂ ಮುನ್ನ ಈ ಭರ್ಜರಿ ವಿಶ್ವ ದಾಖಲೆ ಸನ್ರೈಸರ್ಸ್ ಹೈದರಾಬಾದ್ ತಂಡದ ಹೆಸರಿನಲ್ಲಿತ್ತು.
ಸನ್ರೈಸರ್ಸ್ ಹೈದರಾಬಾದ್ ತಂಡವು ಟಿ20 ಕ್ರಿಕೆಟ್ನಲ್ಲಿ ಒಟ್ಟು 5 ಬಾರಿ 250+ ಸ್ಕೋರ್ಗಳಿಸಿ ಈ ದಾಖಲೆ ನಿರ್ಮಿಸಿದ್ದರು. 287/3 (vs RCB, 2024), 286/6 (vs RR, 2025), 278/3 (vs KKR, 2025), 277/3 (vs MI, 2024), 266/7 (vs DC, 2024). ಇದೀಗ ಈ ದಾಖಲೆಯನ್ನು ಟೀಮ್ ಇಂಡಿಯಾ ಮುರಿದಿದೆ.
ಭಾರತ ತಂಡವು ಟಿ20 ಕ್ರಿಕೆಟ್ನಲ್ಲಿ ಒಟ್ಟು 6 ಬಾರಿ 250+ ಸ್ಕೋರ್ಗಳಿಸಿದ್ದಾರೆ. 297/6 (vs BAN, 2024), 283/1 (vs SA, 2024), 271/5 (vs NZ, 2026), 260/5 (vs SL, 2017), 256/4 (vs ZIM, 2026), 253/7 (vs ENG, 2026) ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ 250+ ಸ್ಕೋರ್ಗಳಿಸಿದ ತಂಡವೆಂಬ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿದೆ.