All posts by nagaraj11081993

ರಶ್ಮಿಕಾ-ವಿಜಯ್ ಫ್ಯಾನ್ಸ್​​ಗೆ ಕೊಟ್ಟ ಸ್ವೀಟ್ ಬಾಕ್ಸ್ ಅಲ್ಲಿ ಏನೆಲ್ಲ ಇದೆ?

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಮದುವೆ ಆದರು. ಅವರ ವಿವಾಹ ವಿಷಯ ಸಾಕಷ್ಟು ಚರ್ಚೆ ಹುಟ್ಟುಹಾಕಿತು. ವಿವಾಹ ಆದ ಬಳಿಕ ರಶ್ಮಿಕಾ ಹಾಗೂ ವಿಜಯ್ ಒಟ್ಟಾಗಿ ತಿರುಪತಿ ತೆರಳಿದ್ದರು. ಈ ವೇಳೆ ಅಭಿಮಾನಿಗಳಿಗೆ ಸಿಹಿ ವಿತರಣೆ ಮಾಡಿದ್ದರು. ಸ್ವೀಟ್ ಬಾಕ್ಸ್ ಸಿಕ್ಕ ಫ್ಯಾನ್ಸ್ ಇದನ್ನು ಶೇರ್ ಮಾಡಿಕೊಂಡಿದ್ದಾರೆ.  ರಸಗುಲ್ಲಾ, ಲಾಡು ಸೇರಿ ಮೂರು ವಿಧದ ಸ್ವೀಟ್ ಇವೆ. ಈ ವಿಡಿಯೋ ನೋಡಿದ ಅನೇಕರು, ‘ಸ್ವೀಟ್​​ಗಿಂತ ಬಾಕ್ಸ್​​ಗೆ ಹೆಚ್ಚು ಖರ್ಚಾಗಿದೆ’ ಎಂದು ಅಣಕಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೈಗಾ ಅಣು ವಿದ್ಯುತ್ ಯೋಜನೆಗೆ ಮೇಕ್​​ ಇನ್​ ಇಂಡಿಯಾ ಬಲ: 5 ಮತ್ತು 6ನೇ ಘಟಕಗಳಿಗೆ ಸ್ವದೇಶಿ ತಂತ್ರಜ್ಞಾನದ ರಿಯಾಕ್ಟರ್‌ಗಳ ಬಳಕೆ – Kannada News | Kaiga Nuclear Project Expansion: Indigenous Tech Boosts Karnataka’s Energy Security

ಬೆಂಗಳೂರು, ಮಾರ್ಚ್​​ 2: ರಕ್ಷಣಾ ಸೇರಿದಂತೆ ಹಲವು ಕ್ಷೇತ್ರಗಳನ್ನು ಒಳಗೊಂಡಿದ್ದ ಮೇಕ್​​ ಇನ್​ ಇಂಡಿಯಾ ಯೋಜನೆ ಈಗ ಅಣುಶಕ್ತಿ ಕ್ಷೇತ್ರಕ್ಕೂ ಕಾಲಿಟ್ಟಿದೆ. ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾಮಗಾರಿಗೆ ಅಧಿಕೃತ ಚಾಲನೆ ನೀಡಲಾಗಿದ್ದು, ಈ ಘಟಕಗಳಲ್ಲಿ ಸ್ಥಾಪನೆಯಾಗುವ ರಿಯಾಕ್ಟರ್‌ಗಳು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿತವಾಗಿವೆ ಎನ್ನುವುದು ವಿಶೇಷ.

ಈ ಬಗ್ಗೆ ಮಾಹಿತಿ ನೀಡಿರುವ ಕೈಗಾ ಘಟಕದ ಸೈಟ್ ನಿರ್ದೇಶಕ ಬಿ. ವಿನೋದ್ ಕುಮಾರ್ , 700 ಮೆಗಾವಾಟ್ ಸಾಮರ್ಥ್ಯದ ಪ್ರೆಷರೈಸ್ಡ್ ಹೆವಿ ವಾಟರ್ ರಿಯಾಕ್ಟರ್‌ಗಳನ್ನು ಮೇಕ್​​ ಇನ್​ ಇಂಡಿಯಾ ಯೋಜನೆಯಡಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ. ಕೇಂದ್ರ ಸರ್ಕಾರವು ಫ್ಲೀಟ್ ಮೋಡ್‌ನಲ್ಲಿ 10 ಅಣು ವಿದ್ಯುತ್ ಯೋಜನೆಗಳಿಗೆ ಅನುಮೋದನೆ ನೀಡಿದ್ದು, 700 ಮೆಗಾವಾಟ್ ರಿಯಾಕ್ಟರ್‌ಗಳನ್ನು ಗುಜರಾತ್, ರಾಜಸ್ಥಾನ ಹಾಗೂ ಕರ್ನಾಟಕ ರಾಜ್ಯಗಳಿಗೆಂದು ಅಭಿವೃದ್ಧಿಪಡಿಸಲಾಗಿದೆ. ಆ ಮೂಲಕ ಮೊದಲ ಬಾರಿಗೆ ಸ್ವದೇಶೀ ರಿಯಾಕ್ಟರ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಹಳೆಯ ಒಪ್ಪಂದದ ಪ್ರಕಾರ ರಾಜ್ಯಕ್ಕೆ ಉತ್ಪಾದಿತ ವಿದ್ಯುತ್‌ನ ಶೇ.20ರಷ್ಟು ಪಾಲು ಸಿಗುತ್ತಿತ್ತು. ಆದರೆ ಹೊಸ ಯೋಜನೆಯಡಿ ರಾಜ್ಯಕ್ಕೆ ಶೇ.50ರಷ್ಟು ಪಾಲು ದೊರೆಯಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  ಶಿರಸಿ ಮಾರಿಕಾಂಬಾ ಜಾತ್ರೆಗೆ ಹೋಗುವ ಭಕ್ತರಿಗೆ ಡಬಲ್ ಗುಡ್​​​ ನ್ಯೂಸ್​​ ನೀಡಿದ ರೈಲ್ವೆ ಇಲಾಖೆ

ಪ್ರಸ್ತುತ ಕೈಗಾ ಅಣು ವಿದ್ಯುತ್ ಕೇಂದ್ರದ ಸ್ಥಾಪಿತ ಸಾಮರ್ಥ್ಯ 880 ಮೆಗಾವಾಟ್ ಆಗಿದ್ದು, 5 ಮತ್ತು 6ನೇ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ ಬಳಿಕ ಇದು 2,280 ಮೆಗಾವಾಟ್‌ಗೆ ಹೆಚ್ಚಲಿದೆ. ಕರ್ನಾಟಕದಲ್ಲಿ ಇನ್ನೂ 7,000 ಮೆಗಾವಾಟ್ ಸಾಮರ್ಥ್ಯ ಹೆಚ್ಚಿಸಲು ಸಿದ್ಧತೆ ನಡೆದಿದ್ದು, ಎಲ್ಲವೂ ಯೋಜನೆಯಂತೆ ನಡೆದರೆ ಕರ್ನಾಟಕಕ್ಕೆ ಮತ್ತೊಂದು ಮಹತ್ವದ ಅಣು ವಿದ್ಯುತ್ ಯೋಜನೆ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.

ನೂತನ ಘಟಕಗಳ ಕಾಮಗಾರಿಗೆ ಅಣುಶಕ್ತಿ ಆಯೋಗದ ಅಧ್ಯಕ್ಷ ಅಜಿತ್​​ ಕುಮಅರ್​ ಮೊಹಾಂತಿ ಹಾಗೂ ಅಣುಶಕ್ತಿ ಇಲಾಖೆಯ ಕಾರ್ಯದರ್ಶಿ ಚಾಲನೆ ನೀಡಿದ್ದು, ಈ ಸಂದರ್ಭದಲ್ಲಿ Nuclear Power Corporation of India Limited (NPCIL) ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಭುವನ್ ಚಂದ್ರ ಪಾಠಕ್ ಉಪಸ್ಥಿತರಿದ್ದರು. ಈ ಘಟಕಗಳು ಮುಂದಿನ 5 ವರ್ಷಗಳಲ್ಲಿ ಪೂರ್ಣ ಪ್ರಮಾಣದ ಕಾರ್ಯನಿರ್ವಹಣೆಯ ಗುರಿ ಹೊಂದಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:40 am, Mon, 2 March 26

Source link

ಪತ್ನಿಗೆ ವಿಮೆ ಹಣ ಸಿಗಲಿ ಎಂದು ಸತ್ತಂತೆ ನಾಟಕವಾಡಿದ ಪತಿ, ಅಗಲುವಿಕೆಯ ನೋವು ತಾಳಲಾರದೆ ಮಕ್ಕಳ ಕೊಂದು ಆತ್ಮಹತ್ಯೆಗೆ ಶರಣಾದ ಪತ್ನಿ – Kannada News | Insurance Fraud Triggers China Family Tragedy: Husband Fakes Death, Wife Kills Kids and Self

ಬೀಜಿಂಗ್, ಮಾರ್ಚ್​ 02: ಎಂಥಾ ವಿಪರ್ಯಾಸ ನೋಡಿ, ಹೆಂಡತಿ ಮಕ್ಕಳು ಸುಖವಾಗಿರಬೇಕು ಎಂದು ಪತಿ ಸತ್ತಂತೆ ನಾಟವಾಡಿದರೆ, ಅದೇ ನಿಜವೆಂದು ನಂಬಿ ಮನನೊಂದು ಪತ್ನಿ ಹಾಗೂ ಮಕ್ಕಳು ನಿಜವಾಗಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಚೀನಾದಲ್ಲಿ ನಡೆದಿದೆ. ಆಗ್ನೇಯ ಚೀನಾದ ಹುನಾನ್ ಪ್ರಾಂತ್ಯದ ಗ್ರಾಮೀಣ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತುಂಬಾ ಸಾಲ ಮಾಡಿಕೊಂಡಿದ್ದ, ಅದರಿಂದ ತಪ್ಪಿಸಿಕೊಳ್ಳಲು ಸತ್ತಂತೆ ನಾಟಕವಾಡಿದ್ದ.

ತನ್ನ ಪತಿಯ ಹಠಾತ್ ಸಾವಿನ ಸುದ್ದಿಯಿಂದ ಆ ವ್ಯಕ್ತಿಯ ಪತ್ನಿ ದಂಗಾಗಿದ್ದಳು. ಆಕೆಯ ಪತಿಯ ಕಾರು ನದಿಯಲ್ಲಿ ಪತ್ತೆಯಾಗಿತ್ತು. ಆದರೂ ಶವ ಸಿಕ್ಕಿರಲಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ನಂಬಿದ್ದರು. ಆದರೆ ಸತ್ಯ ಬೇರೆಯದೇ ಆಗಿತ್ತು. ಆ ವ್ಯಕ್ತಿಗೆ 100,000 ಯುವಾನ್ ಅಥವಾ ಸುಮಾರು 1.2 ಮಿಲಿಯನ್ ರೂಪಾಯಿಗಳ ಸಾಲವಿತ್ತು, ಇದನ್ನು ಅವರು ತಮ್ಮ ಮೂರು ವರ್ಷದ ಮಗಳ ವೈದ್ಯಕೀಯ ಬಿಲ್‌ಗಳನ್ನು ಪಾವತಿಸಲು ಆನ್‌ಲೈನ್‌ನಲ್ಲಿ ವಿವಿಧ ಜನರಿಂದ ಸಾಲ ಪಡೆದಿದ್ದರು.

ಆ ವ್ಯಕ್ತಿಯ ಸಾವಿನ ಬಗ್ಗೆ ಅವರ ಪತ್ನಿಗೆ ತಿಳಿದಾಗ, ಅವರು ಚಿಂತಿತರಾಗಿದ್ದರು, ಏಕೆಂದರೆ ಅವರ ಅನಾರೋಗ್ಯ ಪೀಡಿತ ಮಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಸಂಪೂರ್ಣವಾಗಿ ಅವರ ಮೇಲೆ ಬಿದ್ದಿತ್ತು.
ಆತ ಪತ್ನಿಗೆ ತಿಳಿಯದಂತೆ 1 ಮಿಲಿಯನ್ ಯುವಾನ್ ವಿಮಾ ಯೋಜನೆ ಮಾಡಿದ್ದರು, ಆ ಹಣವು ಆಕೆಯ ಕೈ ಸೇರಿತ್ತು, ಅದರಿಂದ ಆಕೆ ಸಾಲ ತೀರಿಸಬಹುದು ಎಂಬುದು ವ್ಯಕ್ತಿಯ ಆಸೆ ಕೂಡ ಆಗಿತ್ತು.

ಮತ್ತಷ್ಟು ಓದಿ: ಕುವೈತ್​​ನಲ್ಲಿರುವ ತಾಯಿಗೆ ‘ಐ ಲವ್ ಯೂ ಸೋ ಮಚ್’ ಎಂದು ಸಂದೇಶ ಕಳುಹಿಸಿ ನೇಣಿನ ಕುಣಿಕೆಗೆ ಕೊರಳೊಡ್ಡಿದ ವಿದ್ಯಾರ್ಥಿನಿ

ಆದರೆ ಪತಿ ಇಲ್ಲ ಎಂಬ ಕೊರಗು ತಪ್ಪು ಹೆಜ್ಜೆಯನ್ನು ಇಡುವಂತೆ ಮಾಡಿತ್ತು, ಆಕೆ ನಾಲ್ಕು ವರ್ಷದ ಮಗ ಹಾಗೂ ಮಗಳನ್ನು ಕೊಂದು ತಾನೂ ಕೂಡ ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎನ್ನುವ ವಿಚಾರ ಬೆಳಕಿಗೆ ಬಂದಿತ್ತು. ಮೊದಲು ಮಗನನ್ನು ಮುಳುಗಿಸಿ ಕೊನೆಗೆ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚೀನಾದ ಸಾಮಾಜಿಕ ಮಾಧ್ಯಮ ತಾಣವಾದ ವಿಚಾಟ್​​ನಲ್ಲಿ ಆತ್ಮಹತ್ಯೆ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.

ನಾನು ಒಬ್ಬಂಟಿಯಾಗಿ ಹೋಗಲು ಬಯಸಿದ್ದೆ, ಆದರೆ ನನ್ನ ಹೆತ್ತವರಿಲ್ಲದಿದ್ದರೆ, ನನ್ನ ಮಗ ಮತ್ತು ಮಗಳು ನನ್ನಂತೆಯೇ ಬಳಲುತ್ತಾರೆ ಮತ್ತು ಕಿರುಕುಳಕ್ಕೊಳಗಾಗುತ್ತಾರೆ ಹಾಗಾಗಿ ಅವರನ್ನು ಕೊಲ್ಲುವುದಾಗಿ ಬರೆದಿದ್ದಾರೆ.

ಈ ಪೋಸ್ಟ್ ಚೀನಾದಲ್ಲಿ ಬೇಗನೆ ವೈರಲ್ ಆಗಿ, ಪ್ರಕರಣವನ್ನು ರಾಷ್ಟ್ರೀಯ ಸಂಚಲನವನ್ನಾಗಿ ಮಾಡಿತು. ಮಹಿಳೆಯ ಪತಿ ಪೊಲೀಸರಿಗೆ ಶರಣಾದರು ಸಾಲದಿಂದ ತಪ್ಪಿಸಿಕೊಳ್ಳಲು ತಾನು ನಾಟಕವಾಡಿದ್ದಾಗಿ ಹೇಳಿದ್ದಾರೆ.ವಿಮಾ ಪಾಲಿಸಿಯು ತನ್ನ ಮಗಳ ವೈದ್ಯಕೀಯ ಚಿಕಿತ್ಸೆಗೆ ಹಣ ನೀಡಲು ಸಹಾಯ ಮಾಡುತ್ತದೆ ಎಂದು ನಂಬಿದ್ದರು. ನಾನು ನನ್ನ ಪ್ಲ್ಯಾನ್ ಅನ್ನು ಆಕೆಗೆ ಹೇಳಿರಲಿಲ್ಲ ಅದೇ ತನ್ನ ದೊಡ್ಡ ತಪ್ಪು ಎಂದು ಕಣ್ಣೀರಿಟ್ಟಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಂದು ಲೇವಡಿ ಮಾಡಿ, ಇಂದು ತಲೆಬಾಗಿ ನಿಂತ ಸೂರ್ಯ..! – Kannada News | SuryaKumar Yadav bowing down to Sanju Sanson after his match winning innings

T20 World Cup 2026: ಟಿ20 ವಿಶ್ವಕಪ್​ನ 52ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಸ್ಮರಣೀಯ ಇನಿಂಗ್ಸ್ ಆಡಿದ್ದಾರೆ. ಈ ಇನಿಂಗ್ಸ್​ನೊಂದಿಗೆ ಸ್ಯಾಮ್ಸನ್ ಭಾರತ ತಂಡಕ್ಕೆ ಭರ್ಜರಿ ಗೆಲುವನ್ನೂ ಸಹ ತಂದು ಕೊಟ್ಟಿದ್ದಾರೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸೆಮಿಫೈನಲ್​ಗೆ ಲಗ್ಗೆಯಿಟ್ಟಿದೆ.

ಇಂಟ್ರೆಸ್ಟಿಂಗ್ ವಿಷಯ ಎಂದರೆ ಈ ಬಾರಿಯ ವಿಶ್ವಕಪ್​ನ ಆರಂಭಿಕ ಪಂದ್ಯಗಳಲ್ಲಿ ಸ್ಯಾಮ್ಸನ್​ಗೆ ಅವಕಾಶ ಸಿಕ್ಕಿರಲಿಲ್ಲ. ಅದರಲ್ಲೂ ನಮೀಬಿಯ ವಿರುದ್ಧದ ಪಂದ್ಯದಿಂದ ಅಭಿಷೇಕ್ ಶರ್ಮಾ ಹೊರಗುಳಿದಿದ್ದ ಕಾರಣ ಸ್ಯಾಮ್ಸನ್ ಅವರನ್ನು ಕಣಕ್ಕಿಳಿಸಲಾಗಿತ್ತು.

ಆದರೆ ಪಾಕಿಸ್ತಾನ್ ಮತ್ತು ನೆದರ್​ಲೆಂಡ್ಸ್ ವಿರುದ್ಧದ ಪಂದ್ಯದ ವೇಳೆ ಅವರನ್ನು ಕೈ ಬಿಡಲಾಯಿತು. ಈ ಎರಡು ಪಂದ್ಯಗಳಲ್ಲಿ ಸೊನ್ನೆ ಸುತ್ತುವ ಮೂಲಕ ಅಭಿಷೇಕ್ ಶರ್ಮಾ ನಿರಾಸೆ ಮೂಡಿಸಿದ್ದರು. ಹೀಗಾಗಿಯೇ ಸೌತ್ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಸಂಜು ಸ್ಯಾಮ್ಸನ್​ಗೆ ಈ ಬಾರಿಯಾದರೂ ಅವಕಾಶ ನೀಡುತ್ತೀರಾ ಎಂದು ಸೂರ್ಯಕುಮಾರ್ ಯಾದವ್​ ಅವರನ್ನು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಯನ್ನು ಲೇವಡಿ ಮಾಡಿದಂತೆ ಅಂದು ಸೂರ್ಯಕುಮಾರ್ ಯಾದವ್ ಉತ್ತರ ನೀಡಿದ್ದರು.

ವರದಿಗಾರರು ಸಂಜು ಸ್ಯಾಮ್ಸನ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಬಗ್ಗೆ ಪ್ರಸ್ತಾಪಿಸಿದಾಗ, ಸೂರ್ಯಕುಮಾರ್ ತಮ್ಮದೇ ಶೈಲಿಯಲ್ಲಿ ನಗುತ್ತಾ ಮರುಪ್ರಶ್ನೆ ಹಾಕಿದ್ದರು. “ಹಾಗಾದರೆ ನಾನು ಸಂಜು ಅವರನ್ನು ಅಭಿಷೇಕ್ ಬದಲಿಗೆ ಆಡಿಸಬೇಕು ಎಂದು ನೀವು ಹೇಳುತ್ತಿದ್ದೀರಾ?” ಎಂದು ಕೇಳಿದರು.

ವರದಿಗಾರರು ಹೌದು ಎಂದಾಗ, ಸೂರ್ಯ ನಗುತ್ತಾ, “ಅಂದರೆ 3ನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಅವರನ್ನು ತೆಗೆದು ಸಂಜು ಅವರನ್ನು ಆಡಿಸಬೇಕೇ?” ಎಂದು ಮರುಪ್ರಶ್ನಿಸಿ ಲೇವಡಿ ಮಾಡಿದ್ದರು. ಇದೀಗ ಅದೇ ಸೂರ್ಯಕುಮಾರ್ ಯಾದವ್ ಸಂಜು ಸ್ಯಾಮ್ಸನ್ ಮುಂದೆ ತಲೆಬಾಗಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ವಿಫಲರಾದರೂ ಒಂದೆಡೆ ನಿಂತು ಜವಾಬ್ದಾರಿಯುತ ಇನಿಂಗ್ಸ್ ಆಡುವ ಮೂಲಕ ಸಂಜು ಸ್ಯಾಮ್ಸನ್ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಟಿ20 ವಿಶ್ವಕಪ್​ನ ಸೆಮಿಫೈನಲ್​ಗೇರಿದೆ.

ಇತ್ತ ಟೀಮ್ ಇಂಡಿಯಾ ಗೆದ್ದ ಬೆನ್ನಲ್ಲೇ ಮೈದಾನಕ್ಕೆ ಆಗಮಿಸಿದ ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್​ಗೆ ತಲೆಬಾಗುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಕೆಲ ದಿನಗಳ ಹಿಂದೆ ಸೂರ್ಯಕುಮಾರ್ ಯಾದವ್ ಆಡಿದ್ದ ಮಾತುಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಂದರೆ ಸೌತ್ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಸಂಜು ಸ್ಯಾಮ್ಸನ್ ಅವರನ್ನು ಯಾಕೆ ಆಡಿಸಬಾರದು ಎಂಬ ಪತ್ರಕರ್ತನ ಪ್ರಶ್ನೆಗೆ ಲೇವಡಿಯೊಂದಿಗೆ ಮರು ಪ್ರಶ್ನಿಸಿದ್ದ ಅದೇ ಸೂರ್ಯಕುಮಾರ್ ಯಾದವ್ ಇದೀಗ ತಲೆಬಾಗಿ ನಿಂತಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

Source link

ಶೂ ಧರಿಸಿ ಕಚೇರಿ ಒಳಗೆ ಬರುವಂತಿಲ್ಲ, ಸದ್ದು ಮಾಡುತ್ತಿದೆ ಅಮೆರಿಕ ಮೂಲದ ಎಐ ಸ್ಟಾರ್ಟ್ಅಪ್ ಕಂಪನಿ – Kannada News | Why This AI Startup Is Making Headlines for Banning Shoes at Work

ಶೂ ಧರಿಸಿ ಕಚೇರಿ ಒಳಗೆ ಬರುವಂತಿಲ್ಲ, ಇದು ಅಮೆರಿಕ ಮೂಲದ ಸ್ಟಾರ್ಟ್​​ಅಪ್ ಕಂಪನಿ(Company) ಕರ್ಸರ್​ನ ನಿಯಮ. ಸಾಮಾನ್ಯವಾಗಿ ವಿದೇಶಗಳಲ್ಲಿ ಸ್ವಚ್ಛತೆಗೆ ಹೆಚ್ಚು ಗಮನಕೊಡುತ್ತಾರೆ. ಆದರೂ ಕಚೇರಿಯೊಳಗೆ ಶೂ ಧರಿಸದೆ ಬರುವ ನಿಯಮವನ್ನು ಯಾಕೆ ಜಾರಿಗೆ ತಂದಿದ್ದಾರೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು ಅದಕ್ಕೆ ಇಲ್ಲಿದೆ ಉತ್ತರ.

ಕಂಪನಿಯ ಸಿಬ್ಬಂದಿ ಹಾಗೂ ಕಚೇರಿಗೆ ಬರುವ ಅತಿಥಿಗಳು ಯಾರೇ ಅಗಿರಲಿ, ಶೂ ಧರಿಸಿ ಒಳಗೆ ಹೋಗುವಂತಿಲ್ಲ, ಕಚೇರಿ ಹೊರಗೆ ಶೂ ತೆಗೆದಿಡಬೇಕು. ಕಚೇರಿಯ ಒಳಗೆ ಸಾಕ್ಸ್ ಅಥವಾ ಒಳಗೆ ಇಟ್ಟಿರುವ ಚಪ್ಪಲಿಗಳನ್ನು ಧರಿಸಿಯೇ ನಡೆಯಬೇಕು. ಈ ನೀತಿಯು ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಗಮನ ಸೆಳೆದ ಕಾರಣ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಸಿಬ್ಬಂದಿಗೆ ಇದು ಆಫೀಸ್ ಅಲ್ಲ ಮನೆಯ ವಾತಾವರಣ ಸೃಷ್ಟಿಸಬೇಕೆಂಬುದು ಉದ್ದೇಶ.

ಕರ್ಸರ್‌ನ ಬೆನ್ ಲ್ಯಾಂಗ್ ಎಂಬ ಉದ್ಯೋಗಿ ಕೂಡ ಚಿತ್ರಗಳನ್ನು ಹಂಚಿಕೊಂಡಿದ್ದು, ತಾನು ಅಲ್ಲಿ ಕೆಲಸ ಮಾಡಿರುವುದಾಗಿ, ಅಲ್ಲಿ ಉದ್ಯೋಗಿಗಳು ಕಚೇರಿ ಆವರಣದೊಳಗೆ ನಿಜವಾಗಿಯೂ ಶೂಗಳನ್ನು ಧರಿಸುತ್ತಿರಲಿಲ್ಲ ಎಂಬುದರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಅಂತಹ ಅಭ್ಯಾಸಗಳು ಉದ್ಯೋಗಿಗಳಿಗೆ ಆರಾಮದಾಯಕ ವಾತಾವರಣವನ್ನು ಒದಗಿಸುವ ಮೂಲಕ ಅವರ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂಬುದು ಕಂಪನಿಯ ವಾದ.
ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದು, ಇದು ನನಗೆ ಎಂದಿಗೂ ವಿಚಿತ್ರವೆಂದು ಅನಿಸುತ್ತಿಲ್ಲ, ಇನ್ನೊಬ್ಬರು ಕಮೆಂಟ್ ಮಾಡಿ, ಪಾದರಕ್ಷೆಗಳನ್ನು ಹೊರಗೆ ಬಿಡುವ ನಿಯಮದ ಬಗ್ಗೆ ಅಭ್ಯಂತರವಿಲ್ಲ. ಆದರೆ ಚಿತ್ರದಲ್ಲಿ ತೋರಿಸಿರುವಂತೆ ಇಡಬಾರದು ಎಂದಿದ್ದಾರೆ.

ಮತ್ತಷ್ಟು ಓದಿ: ಅಮ್ಮನಿಗೆ ಭಯ, ಆದ್ರೆ ಅದು ನನ್ನ ಕನಸು: ಕೊನೆಗೂ ತಾಯಿಯನ್ನು ಆಕಾಶದಲ್ಲಿ ಹಾರಾಡಿಸಿದ ಮಗ

ಶೂ ಧರಿಸದಿರುವ ನೀತಿಯು ಉದ್ಯೋಗಿಗಳು, ಸಿಬ್ಬಂದಿ ಸದಸ್ಯರು ಮತ್ತು ಅತಿಥಿಗಳಿಗೆ ಮಾತ್ರ ಅನುಕೂಲಕರವಾಗಿಲ್ಲ, ಆದರೆ ಇದು ಸಾಕಷ್ಟು ಪ್ರಾಯೋಗಿಕವೂ ಆಗಿದೆ. AI ಸ್ಟಾರ್ಟ್ಅಪ್‌ನ ಸಂಸ್ಥಾಪಕ ಕೋವಲ್ ಸ್ಯಾನ್ ಫ್ರಾನ್ಸಿಸ್ಕೋ ಸ್ಟ್ಯಾಂಡರ್ಡ್‌ಗೆ ನೀಡಿದ ಸಂದರ್ಶನದಲ್ಲಿ, ಹವಾಮಾನ ಬದಲಾಗುತ್ತಿರುತ್ತದೆ. ಹಾಗೆಯೇ ಕೊಳಕನ್ನು ಮೆಟ್ಟಿಕೊಂಡು ಬರುತ್ತಾರೆ, ಹಾಗಾಗಿ ಕಚೇರಿಯ ಒಳಗಿನ ಸ್ವಚ್ಛತೆಯೂ ಕೂಡ ಪ್ರಮುಖವಾದದ್ದು ಎಂದಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ 

Source link

ಅಡುಗೆಯವನ ಕೆಲಸವೇ ಹೋಯ್ತು! ಬೆಂಗಳೂರು ಟೆಕ್ಕಿಗೆ ಎಐ ರೂಮ್​ಮೇಟ್ ನೆರವಾಗಿದ್ಹೇಗೆ ಗೊತ್ತೇ! – Kannada News | Bengaluru Techie’s AI Roommate Catches Cook Stealing Fruits, Sparks Debate on AI Surveillance at Home

ಟೆಕ್ಕಿಗೆ ಎಐ ರೂಮ್​ಮೇಟ್ ನೆರವಾಗಿದ್ಹೇಗೆ?Image Credit source: X/@the2ndfloorguy

ಬೆಂಗಳೂರು, ಮಾರ್ಚ್​ 2: ಅಡುಗೆಯಾತ ಫ್ರಿಡ್ಜ್‌ನಿಂದ ಹಣ್ಣುಗಳನ್ನು ಕದಿಯುತ್ತಿರುವುದನ್ನು ಎಐ ರೂಮ್​ಮೇಟ್ (AI Roommate) ಪತ್ತೆಹಚ್ಚಿ ತಿಳಿಸಿದ್ದು, ಟೆಕ್ಕಿಯೊಬ್ಬರು ಆತನನ್ನು ಕೆಲಸದಿಂದಲೇ ತೆಗೆದುಹಾಕಿದ ಅಪರೂಪದ ಘಟನೆ ಬೆಂಗಳೂರಿನಲ್ಲಿ (Bangalore) ನಡೆದಿದೆ ಎಂದು ವರದಿಯಾಗಿದೆ. ನಗರದ ಟೆಕ್ಕಿ ಪಂಕಜ್ (ಸಾಮಾಜಿಕ ಜಾಲತಾಣ ಪೋಸ್ಟ್​ನಲ್ಲಿರುವಂತೆ) ಮನೆಯ ಅಡುಗೆಮನೆಯ ಚಟುವಟಿಕೆಗಳನ್ನು ಗಮನಿಸಲು ‘AI ರೂಮ್​ಮೇಟ್’ ಎನ್ನುವ ವ್ಯವಸ್ಥೆಯನ್ನು ಬಳಸುತ್ತಿದ್ದರು. ಅಡುಗೆಯಾತ ಫ್ರಿಡ್ಜ್‌ನಿಂದ ಸೇಬು, ಬಾಳೆಹಣ್ಣು ಮತ್ತು ಬೆರಿಹಣ್ಣುಗಳನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ಅನುಮಾನ ಅವರಲ್ಲಿ ಮೂಡಿತ್ತು. ಕನಿಷ್ಠ ಮೂರು ವಿಭಿನ್ನ ಸಂದರ್ಭಗಳಲ್ಲಿ ಹಣ್ಣುಗಳನ್ನು ಕದಿಯುತ್ತಿರುವುದನ್ನು AI ರೂಮ್​ಮೇಟ್ ಪತ್ತೆ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಪಂಕಜ್, ‘ಅಡುಗೆಯಾತ ಫ್ರಿಡ್ಜ್‌ನಿಂದ ಹಣ್ಣುಗಳನ್ನು ಕದಿಯುತ್ತಿದ್ದ. ಹೀಗಾಗಿ ಅಡುಗೆ ಮನೆಯಲ್ಲಿ AI ರೂಮ್‌ಮೇಟ್ ನಿಯೋಜಿಸಿದ್ದೆ. ಅದು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದೆ. ಈ ವಾರ ಎರಡು ಬಾರಿ ಹಿಡಿದಿದ್ದೇನೆ. ಹೀಗಾಗಿ ಕೆಲಸದಿಂದ ತೆಗೆದುಹಾಕಿದೆ ಎಂದು ಬರೆದಿದ್ದಾರೆ.

ಪಂಕಜ್ ಎಕ್ಸ್ ಪೋಸ್ಟ್

AI ರೂಮ್‌ಮೇಟ್ ಎಂದರೇನು?

ಪಂಕಜ್ ಉಲ್ಲೇಖಿಸಿರುವ AI ರೂಮ್‌ಮೇಟ್ ಎಂದರೆ AI ಚಾಟ್‌ಬಾಟ್ ಹೊಂದಿರುವ ಕಣ್ಗಾವಲು ಕ್ಯಾಮರಾ ವ್ಯವಸ್ಥೆ. ಅಡುಗೆಯಾತ ಕೆಲಸದಲ್ಲಿರುವ ಸಮಯದಲ್ಲಿ ಈ ವ್ಯವಸ್ಥೆ ಅಡುಗೆಮನೆಯ ಚಟುವಟಿಕೆಗಳನ್ನು ಗಮನಿಸುತ್ತದೆ. ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಮಾಲೀಕರಿಗೆ ಎಚ್ಚರಿಕೆ ಸಂದೇಶ ಕಳುಹಿಸುತ್ತದೆ.

AI ಚಾಟ್‌ಬಾಟ್‌ನೊಂದಿಗೆ ಪಂಕಜ್ ನಡೆಸಿದ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳ ಪ್ರಕಾರ, ಅಡುಗೆಯಾತ ಯಾವ ಸಮಯಕ್ಕೆ ಮನೆಗೆ ಬಂದ, ಎಷ್ಟು ಬಾರಿ ಫ್ರಿಡ್ಜ್ ತೆರೆದ, ಏನು ತೆಗೆದುಕೊಂಡ ಎಂಬುದರ ಜೊತೆಗೆ ಅಡುಗೆ ಮಾಡುವ ಮೊದಲು ಎಷ್ಟು ಬಾರಿ ಕೈ ತೊಳೆದ, ಅಡುಗೆಮನೆಯನ್ನು ಎಷ್ಟು ಸ್ವಚ್ಛಗೊಳಿಸಿದ ಎಂಬುದನ್ನೂ ಟ್ರ್ಯಾಕ್ ಮಾಡಲಾಗಿದೆ.

AI ರೂಮ್‌ಮೇಟ್ ಹೇಳಿದ್ದೇನು?

ಒಂದು ಸಂದರ್ಭದಲ್ಲಂತೂ AI ರೂಮ್‌ಮೇಟ್, ಆತ ಸಂಜೆ 7:12ಕ್ಕೆ ಬಂದ. ಮೊದಲಿಗೆ ಫ್ರಿಡ್ಜ್ ತೆರೆದು ಎರಡು ಸೇಬುಗಳನ್ನು ತೆಗೆದು ತನ್ನ ಚೀಲದಲ್ಲಿ ಇಟ್ಟ. ಬಳಿಕ ಅಡುಗೆ ಪ್ರಾರಂಭಿಸಿದ ಎಂದು ಸಂದೇಶ ಕಳುಹಿಸಿರುವುದನ್ನು ಪಂಕಜ್ ಹಂಚಿಕೊಂಡಿದ್ದಾರೆ.

ಇನ್ನೊಂದು ಬಾರಿ, ಈ ವಾರ ಅಡುಗೆ ಮಾಡುವ ಮೊದಲು ನಾಲ್ಕು ಬಾರಿ ಫ್ರಿಡ್ಜ್ ತೆರೆಯಲಾಗಿದೆ. ಮೂರು ಸೇಬುಗಳು ಕಾಣೆಯಾಗಿವೆ. ಮಂಗಳವಾರದ ಬಾಳೆಹಣ್ಣು ಇಲ್ಲ. ಗುರುವಾರ ಬ್ಲೂಬೆರ್ರಿ ತಿನ್ನುತ್ತಿರುವುದು ಕಂಡುಬಂದಿದೆ ಎಂದು ಉಲ್ಲೇಖಿಸಲಾಗಿದೆ.

ಖಾಸಗಿತನ ಕಾಪಾಡುತ್ತಾ AI ರೂಮ್‌ಮೇಟ್?

AI ರೂಮ್‌ಮೇಟ್ ಸಿಸಿಟಿವಿ ಕ್ಯಾಮರಾ ಮೂಲಕ ಕೊಠಡಿಯನ್ನು ನಿರಂತರವಾಗಿ ಗಮನಿಸುತ್ತದೆ. ಬಳಕೆದಾರರ ಗೌಪ್ಯತೆಯನ್ನು ಕೂಡ ರಕ್ಷಿಸುತ್ತದೆ. ಅಂದರೆ, ಮೊದಲು ಮುಖಗಳನ್ನು ರೆಕಾರ್ಡ್ ಮಾಡಿಕೊಂಡು ನಂತರ ಬ್ಲರ್ ಮಾಡುತ್ತದೆ. ಬಳಿಕ ಮಸುಕಾದ ವೀಡಿಯೊವನ್ನು ವಿಶ್ಲೇಷಣೆಗಾಗಿ ವಿಷನ್ AI ಮಾದರಿಗೆ ಕಳುಹಿಸುತ್ತದೆ. ಆ ವಿಶ್ಲೇಷಣೆಯ ಆಧಾರದ ಮೇಲೆ ಟೆಕ್ಷ್ಟ್ ರೂಪದಲ್ಲಿ ಸಂದೇಶ ಕಳುಹಿಸುತ್ತದೆ.

ಇದನ್ನೂ ಓದಿ: ಮೈಸೂರಿನ ಬೀದಿಯಲ್ಲಿ ಬಿರಿಯಾನಿ ಸವಿದು ಸ್ಥಳೀಯರ ಆತಿಥ್ಯಕ್ಕೆ ಮನಸೋತ ವಿದೇಶಿಗ

ಸದ್ಯ ಬೆಂಗಳೂರು ಟೆಕ್ಕಿಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ತಂತ್ರಜ್ಞಾನ ಬಳಕೆ ಮೂಲಕ ಕಳ್ಳತನ ಪತ್ತೆಹಚ್ಚಿದುದನ್ನು ಸಮರ್ಥಿಸುತ್ತಿದ್ದರೆ, ಇನ್ನು ಕೆಲವರು ಮನೆ ಕೆಲಸಗಾರರ ಮೇಲಿನ ಇಂತಹ AI ಕಣ್ಗಾವಲು ಗೌಪ್ಯತೆ ಮತ್ತು ನೈತಿಕತೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಾರೂ ಸಹ 2 ಫೋರ್​ಗಳ ಬಗ್ಗೆ ಮಾತನಾಡ್ತಿಲ್ಲ: ಬುಮ್ರಾ ಬೇಸರ..! – Kannada News | Jasprit Bumrah acknowledged Shivam Dube’s valuable contribution

T20 World Cup 2026: ಟಿ20 ವಿಶ್ವಕಪ್​ನ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ದಾಖಲಿಸಿ ಟೀಮ್ ಇಂಡಿಯಾ ಸೆಮಿಫೈನಲ್​ಗೇರಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 195 ರನ್​ಗಳು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಸಂಜು ಸ್ಯಾಮ್ಸನ್ ಅಜೇಯ 97 ರನ್ ಸಿಡಿಸಿದ್ದರು. ಈ ಮೂಲಕ ಟೀಮ್ ಇಂಡಿಯಾ 19.2 ಓವರ್​ಗಳಲ್ಲಿ 199 ರನ್​ ಬಾರಿಸಿ 5 ವಿಕೆಟ್​ಗಳ ಜಯ ಸಾಧಿಸಿದೆ.

ಈ ಗೆಲುವಿನ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಅವರನ್ನು ಹಾಡಿ ಹೊಗಳಲಾಗುತ್ತಿದೆ. ಇದಾಗ್ಯೂ ಅಂತಿಮ ಹಂತದಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಬೌಂಡರಿಗಳನ್ನು ಬಾರಿಸಿ ಗೆಲುವಿಗೆ ತನ್ನದೇಯಾದ ಕೊಡುಗೆ ನೀಡಿದ ಶಿವಂ ದುಬೆ ಅವರನ್ನು ಯಾರು ಸಹ ಪ್ರಶಂಸಿಸುತ್ತಿಲ್ಲ ಎಂದು ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಬುಮ್ರಾ, ಶಿವಂ ದುಬೆ ಬಾರಿಸಿದ ಆ ಎರಡು ಬೌಂಡರಿಗಳು ಕ್ರಿಕೆಟ್‌ನ ಅಂಕಿ-ಅಂಶಗಳ ಪುಸ್ತಕದಲ್ಲಿ ಅಥವಾ ದಾಖಲೆಗಳಲ್ಲಿ ಅಷ್ಟಾಗಿ ಎದ್ದು ಕಾಣದಿರಬಹುದು. ಆದರೆ ನಿಜವಾದ ಕ್ರಿಕೆಟ್ ಜ್ಞಾನ ಇರುವವರಿಗೆ ಗೊತ್ತು, ಆ ಎರಡು ಬೌಂಡರಿಗಳು ಅಂತಿಮ ಓವರ್‌ಗೂ ಮುನ್ನ ನಮ್ಮ ಮೇಲಿದ್ದ ಒತ್ತಡವನ್ನು ಸಂಪೂರ್ಣವಾಗಿ ಕಡಿಮೆ ಮಾಡಿದವು.

19ನೇ ಓವರ್​ನಲ್ಲಿ ಶಿವಂ ದುಬೆ ಬಾರಿಸಿದ 2 ಫೋರ್​ ಫೋರ್​ಗಳಿಂದಾಗಿ ಕೊನೆಯ ಓವರ್​ನಲ್ಲಿ ಗೆಲುವಿನ ರನ್ ರೇಟ್ ಕಡಿಮೆಯಾಯಿತು. ಇದರಿಂದ ಅಂತಿಮ ಓವರ್​ನಲ್ಲಿ ಭಾರತದ ಬ್ಯಾಟರ್‌ಗಳಿಗೆ ನಿರಾಳವಾಗಿ ಆಡಲು ಸಹಾಯ ಮಾಡಿತು. ಇದಾಗ್ಯೂ ಯಾರು ಸಹ ಶಿವಂ ದುಬೆ ಅವರ ಈ ಕೊಡುಗೆಯನ್ನು ಸ್ಮರಿಸುತ್ತಿಲ್ಲ ಎಂದು ಜಸ್​ಪ್ರೀತ್ ಬುಮ್ರಾ ಬೇಸರ ಹೊರಹಾಕಿದ್ದಾರೆ.

ಇದೀಗ ಜಸ್​ಪ್ರೀತ್ ಬುಮ್ರಾ ಅವರ ಹೇಳಿಕೆಯು ಭಾರೀ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಒತ್ತಡದ ಸನ್ನಿವೇಶದಲ್ಲಿ ಆಗಷ್ಟೇ ಕ್ರೀಸ್​ಗೆ ಆಗಮಿಸಿ 2 ಫೋರ್​ಗಳನ್ನು ಬಾರಿಸಿದ ದುಬೆ ಅವರ ಕೊಡುಗೆಯನ್ನು ಬುಮ್ರಾ ಎತ್ತಿ ತೋರಿಸಿದ್ದಾರೆ. ಈ ಮೂಲಕ  ಸಣ್ಣದಾದರೂ ಪರಿಣಾಮಕಾರಿ ಆಟವನ್ನು ಗುರುತಿಸಿ, ಅಂಕಿ-ಅಂಶಗಳಿಗಿಂತ ತಂಡದ ಗೆಲುವಿಗೆ ಬೇಕಾದ ‘ಸಮಯೋಚಿತ ಆಟ’ ಮುಖ್ಯ ಎಂಬುದನ್ನು ಬುಮ್ರಾ ಸಾರಿ ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದ ಪ್ರತಿಯೊಬ್ಬ ಆಟಗಾರನಿಗೂ 50 ಲಕ್ಷ ರೂ. ದಂಡ..!

ಈ ಮೂಲಕ ಜಸ್​ಪ್ರೀತ್ ಬುಮ್ರಾ ಕ್ರಿಕೆಟ್ ಕೇವಲ ರನ್ ಮತ್ತು ವಿಕೆಟ್‌ಗಳ ಆಟವಲ್ಲ, ಅದು ಸಮಯೋಚಿತವಾಗಿ ಒತ್ತಡವನ್ನು ನಿಭಾಯಿಸುವ ಕಲೆ ಎಂಬುದನ್ನು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ.

Source link

ರಾಜ್​​ಪಾಲ್ ಯಾದವ್ ಅದೃಷ್ಟ ಬದಲಿಸಲಿದೆ ಯೂಟ್ಯೂಬ್? – Kannada News | Rajpal Yadav’s YouTube Comeback: Jail Release, Viral Videos and Debt Solutions

9 ಕೋಟಿ ರೂಪಾಯಿ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ಸುಮಾರು 13 ದಿನಗಳನ್ನು ಕಳೆದ ನಂತರ ಪ್ರಸಿದ್ಧ ನಟ ರಾಜ್‌ಪಾಲ್ ಯಾದವ್ (Rajpal Yadav) ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಹೊರಬಂದ ನಂತರ, ರಾಜ್‌ಪಾಲ್ ತಮ್ಮ ಚೆಕ್ ಬೌನ್ಸ್ ಪ್ರಕರಣದ ಬಗ್ಗೆ ಹಲವು ವಿಷಯಗಳನ್ನು ಬಹಿರಂಗಪಡಿಸುತ್ತಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಆರಂಭಿಸಿ ಅವರು ವಿಡಿಯೋ ಪೋಸ್ಟ್ ಮಾಡುತ್ತಿದ್ದಾರೆ.ಯೂಟ್ಯೂಬ್ ಅವರ ಅದೃಷ್ಟ ಬದಲಿಸೋ ಸೂಚನೆ ಸಿಕ್ಕಿದೆ.

ರಾಜ್‌ಪಾಲ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡುತ್ತಿದ್ದಾರೆ. ಅದರಲ್ಲಿ ಅವರು ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಈ ವೀಡಿಯೊಗಳು ಯೂಟ್ಯೂಬ್‌ನಲ್ಲಿ ಭಾರಿ ವೀಕ್ಷಣೆಗಳನ್ನು ಪಡೆಯುತ್ತಿವೆ. ರಾಜ್‌ಪಾಲ್ ಕೇವಲ ಎರಡು ವೀಡಿಯೊಗಳನ್ನು ಮಾತ್ರ ಪೋಸ್ಟ್ ಮಾಡಿದ್ದರೂ, ಈಗ ಅವರ ಚಾನೆಲ್‌ನ ಚಂದಾದಾರರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ.

‘ಮೊದಲ ಒಪ್ಪಂದವನ್ನು 2012ರಲ್ಲಿ ಮಾಡಿಕೊಳ್ಳಲಾಗಿತ್ತು. 5 ಕೋಟಿ ರೂಪಾಯಿ ಸಾಲಕ್ಕೆ ಪ್ರತಿಯಾಗಿ 8 ಕೋಟಿ ರೂಪಾಯಿಗಳನ್ನು ಕೇಳಲಾಯಿತು. ಚಿತ್ರ ಬಿಡುಗಡೆಯಾದ ನಂತರ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದೆ. ಸಿನಿಮಾ ಬಿಡುಗಡೆ ವಿಳಂಬವಾಯಿತು. ನಂತರ 11 ಕೋಟಿ ರೂಪಾಯಿ ಕೇಳಿದರು’ ಎಂದು ರಾಜ್​ಪಾಲ್ ಹೇಳಿದ್ದಾರೆ. ಈ ರೀತಿಯ ವಿಷಯಗಳನ್ನು ಅವರು ಯೂಟ್ಯೂಬ್​​ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಜೈಲಿನಲ್ಲಿ ಧೂಮಪಾನಕ್ಕೆ ಪ್ರತ್ಯೇಕ ಜಾಗ ಬೇಕು: ರಾಜ್​ಪಾಲ್ ಯಾದವ್ ಬೇಡಿಕೆ

ಜೈಲಿನಿಂದ ಬಿಡುಗಡೆಯಾದ ನಂತರ ಫೆಬ್ರವರಿ 28 ರಂದು ರಾಜ್‌ಪಾಲ್ ಯಾದವ್ ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು. ಅಂದಿನಿಂದ, ಅವರು ಕೇವಲ ಎರಡು ವೀಡಿಯೊಗಳನ್ನು ಮಾತ್ರ ಪೋಸ್ಟ್ ಮಾಡಿದ್ದಾರೆ. ಆದಾಗ್ಯೂ, ಅವರ ಚಾನೆಲ್ 17.2 ಸಾವಿರ ಚಂದಾದಾರರನ್ನು ತಲುಪಿದೆ. ಅಲ್ಲದೆ, ವಿಡಿಯೋಗಳು ಲಕ್ಷಾಂತರ ವೀಕ್ಷಣೆ ಕಂಡಿದೆ. ಹೀಗಾಗಿ, ಯೂಟ್ಯೂಬ್​ ಮೂಲಕ ಹಣ ಮಾಡಲು ಇಳಿದರೆ ಅವರು ಸಾಲದಿಂದ ಮುಕ್ತರಾಗಬಹುದು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಡಬ್ರಾ-ಗ್ವಾಲಿಯರ್ ಹೆದ್ದಾರಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದು 1.5 ಕಿ.ಮೀ ಎಳೆದೊಯ್ದ ಟ್ರಕ್ – Kannada News | Harrowing Highway Footage Shows Truck Dragging Car for 1.5 km on Gwalior Road

ಗ್ವಾಲಿಯರ್, ಮಾರ್ಚ್​ 02: ಡಬ್ರಾ-ಗ್ವಾಲಿಯರ್ ಹೆದ್ದಾರಿಯಲ್ಲಿ ಟ್ರಕ್ ಒಂದು ಕಾರಿಗೆ ಡಿಕ್ಕಿ ಹೊಡೆದು 1.5 ಕಿ.ಮೀವರೆಗೆ ಎಳೆದೊಯ್ದಿರುವ ಘಟನೆ ಭಾನುವಾರ ನಡೆದಿದೆ. ಅದೃಷ್ಟವಶಾತ್, ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದು, ಘಟನೆಯಲ್ಲಿ ಯಾವುದೇ ಇತರ ಸಾವುನೋವುಗಳು ಸಂಭವಿಸಿಲ್ಲ. ಈ ಘಟನೆ ತೇಕನ್ಪುರ ಮಿತಿಯ ಹೊರಗಿನ ಬಜೇರಾ ಗ್ರಾಮದ ಬಳಿ ನಡೆದಿದೆ. ಈ ಇಡೀ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಡಿಕ್ಕಿಯ ನಂತರ, ಕಾರು ಟ್ರಕ್‌ನ ಮುಂಭಾಗದಲ್ಲಿ ಸಿಲುಕಿಕೊಂಡಿತು. ನಿಲ್ಲಿಸುವ ಬದಲು, ಟ್ರಕ್ ಚಾಲಕ ಇನ್ನೂ ವೇಗವಾಗಿ ಟ್ರಕ್ ಚಲಾಯಿಸಿಕೊಂಡು ಹೋಗಿದ್ದ. ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಕಾರಿನಲ್ಲಿ ವಿಶೇಷ ಸಶಸ್ತ್ರ ಪಡೆ ಅಧಿಕಾರಿಯೂ ಕೂಡ ಇದ್ದರು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗ್ರಹಣ ಸಮಯದಲ್ಲಿ ದೇವರ ದರ್ಶನದಲ್ಲಿ ಬದಲಾವಣೆ: ಧರ್ಮಸ್ಥಳ, ಮಲೆ ಮಹದೇಶ್ವರ ಬೆಟ್ಟ, ಮಂತ್ರಾಲಯಕ್ಕೆ ಹೋಗುವ ಭಕ್ತರ ಗಮನಕ್ಕೆ – Kannada News | March 3 Lunar Eclipse: Temple Timings and Darshan Updates in Karnataka

ಬೆಂಗಳೂರು, ಮಾ.2: ಮಾರ್ಚ್ 3ರಂದು ಚಂದ್ರ ಗ್ರಹಣದ ( Lunar Eclipse) ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಾಲಯಗಳ ಪೂಜಾ ಸಮಯದಲ್ಲಿ ಬದಲಾವಣೆ ಆಗಲಿದೆ. 2026ರ ಮೊದಲು ಗ್ರಹಣ ಆಗಿರುವ ಕಾರಣ ಕೆಲವೊಂದು ದೇವಾಲಯಗಳಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಈ ಗ್ರಹಣದ ನಂತರ ಹಲವು ರಾಶಿಗಳಲ್ಲಿ ಬಹುದೊಡ್ಡ ಬದಲಾವಣೆಗಳು ಆಗಲಿದೆ ಎಂದು ದೇವಾಲಯದ ಅರ್ಚಕರು ಹೇಳಿದ್ದಾರೆ. ಇದೀಗ ಯಾವೆಲ್ಲ ದೇವಾಲಯದಲ್ಲಿ ಗ್ರಹಣ ಸಮಯದಲ್ಲಿ ಪ್ರಮುಖ ಬದಲಾವಣೆಗಳು ಆಗಲಿದೆ ಎಂಬುದನ್ನು ಇಲ್ಲಿ ಹೇಳಲಾಗಿದೆ.

ಬೇಲೂರು ಚನ್ನಕೇಶವಸ್ವಾಮಿ ದೇವಾಲಯದ ಗರ್ಭಗುಡಿ ನಾಳೆ ಬಂದ್:

ಹಾಸನ ಜಿಲ್ಲೆಯ ಐತಿಹಾಸಿಕ ಹಾಗೂ ವಿಶ್ವವಿಖ್ಯಾತ ಬೇಲೂರು ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಗರ್ಭಗುಡಿಯ ಬಾಗಿಲನ್ನು ನಾಳೆ (ಮಾರ್ಚ್ 3) ಗ್ರಹಣದ ಪ್ರಯುಕ್ತ ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತಿದೆ. ಗ್ರಹಣ ಕಾಲದ ಶುದ್ಧೀಕರಣ ಮತ್ತು ಸಂಪ್ರೋಕ್ಷಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್​​ ಹೇಳಿದ್ದಾರೆ. ಮಾರ್ಚ್ 3ರ ಬೆಳಿಗ್ಗೆ 9 ಗಂಟೆಯೊಳಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಗರ್ಭಗುಡಿಯ ಬಾಗಿಲನ್ನು ಹಾಕಲಾಗುವುದು. ಗ್ರಹಣ ಮುಗಿದ ನಂತರ ಅಂದರೆ ರಾತ್ರಿ 7 ಗಂಟೆಯ ಬಳಿಕ ದೇವಾಲಯದಲ್ಲಿ ಆಲಯ ಅರ್ಚನೆ, ಅಭಿಷೇಕ ಮತ್ತು ಸಂಪ್ರೋಕ್ಷಣೆ ಕಾರ್ಯಗಳು ನಡೆಯಲಿವೆ. ನಂತರ ಮಹಾನೈವೇದ್ಯ ನೆರವೇರಿಸಲಾಗುವುದು. ನಾಳೆ ಕೇವಲ ಗರ್ಭಗುಡಿ ಮಾತ್ರ ಬಂದ್ ಆಗಿರಲಿದ್ದು, ಪ್ರವಾಸಿಗರು ದೇವಾಲಯದ ಹೊರಭಾಗದ ಶಿಲ್ಪಕಲೆಗಳನ್ನು ವೀಕ್ಷಿಸಲು ಅವಕಾಶವಿರುತ್ತದೆ. ಮಾರ್ಚ್ 4ರ ಬುಧವಾರದಂದು ಎಂದಿನಂತೆ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗುವುದು.

ಬೆಂಗಳೂರಿನ ಪ್ರಮುಖ ದೇಗುಲಗಳು ನಾಳೆ ಬಂದ್!

ಈ ಬಾರಿಯ ಹೋಳಿ ಹಬ್ಬದಂದೇ ಚಂದ್ರಗ್ರಹಣ ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜಧಾನಿ ಬೆಂಗಳೂರಿನ ಬಹುತೇಕ ದೇವಾಲಯಗಳ ಬಾಗಿಲನ್ನು ನಾಳೆ (ಮಾರ್ಚ್ 3) ಮುಚ್ಚಲಾಗುತ್ತಿದೆ. ಪ್ರಮುಖವಾಗಿ ಐತಿಹಾಸಿಕ ಹಲಸೂರು ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯದ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ನಾಳೆ ಬೆಳಿಗ್ಗೆ ಮಹಾಮಂಗಳಾರತಿಯ ನಂತರ, ಸರಿಯಾಗಿ 11 ಗಂಟೆಗೆ ದೇವಾಲಯದ ಬಾಗಿಲನ್ನು ಮುಚ್ಚಲಾಗುವುದು. ಗ್ರಹಣ ಮೋಕ್ಷದ ನಂತರ ಸಂಜೆ 7 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಿದೆ. ಸೋಮೇಶ್ವರ ದೇವಾಲಯವು ವಿಸ್ತಾರವಾಗಿರುವುದರಿಂದ ಪುಣ್ಯಾಹವಾಚನ ಮತ್ತು ಸ್ವಚ್ಛತೆ ಕಾರ್ಯಗಳಿಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಸ್ವಚ್ಛತೆಯ ನಂತರ ರಾತ್ರಿ 9 ಗಂಟೆಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮತ್ತೆ ದೇಗುಲವನ್ನು ಕ್ಲೋಸ್ ಮಾಡಲಾಗುತ್ತದೆ. ಮೋಕ್ಷದ ನಂತರ (ನಾಳೆ ರಾತ್ರಿ) ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಮಾರ್ಚ್ 4ರ ಬುಧವಾರದಂದು ಎಂದಿನಂತೆ ಬೆಳಿಗ್ಗೆಯಿಂದಲೇ ಭಕ್ತರು ದೇವರ ದರ್ಶನ ಪಡೆಯಬಹುದಾಗಿದೆ. ರಾಜಧಾನಿಯ ಗವಿ ಗಂಗಾಧರೇಶ್ವರ, ಬನಶಂಕರಿ ಅಮ್ಮನವರ ದೇವಾಲಯ ಸೇರಿದಂತೆ ಇತರ ದೊಡ್ಡ ದೇಗುಲಗಳಲ್ಲೂ ಇದೇ ರೀತಿಯ ಸಮಯದ ಬದಲಾವಣೆ ಇರಲಿದೆ.

ಧರ್ಮಸ್ಥಳ: ನಾಳೆ ಚಂದ್ರಗ್ರಹಣ ಹಿನ್ನೆಲೆ ದೇವರ ದರ್ಶನ ಸಮಯದಲ್ಲಿ ಬದಲಾವಣೆ

ನಾಳೆ (ಮಾರ್ಚ್ 3) ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಮತ್ತು ಅನ್ನಪ್ರಸಾದದ ಸಮಯದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಈ ಕುರಿತು ದೇವಸ್ಥಾನದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ನಾಳೆ ಮಧ್ಯಾಹ್ನ 1:30 ಗಂಟೆಗೆ ದೇವಸ್ಥಾನದ ಬಾಗಿಲನ್ನು ಹಾಕಲಾಗುವುದು. ಬೆಳಗಿನ ಪೂಜೆಗಳೆಲ್ಲವೂ 1:30ರ ಒಳಗಾಗಿ ಮುಕ್ತಾಯಗೊಳ್ಳಲಿವೆ. ಮಧ್ಯಾಹ್ನ ದೇವಸ್ಥಾನ ಬಂದ್ ಆದ ನಂತರವೂ, ಅತಿಥಿ ಅಭ್ಯಾಗತರಿಗಾಗಿ ಮಧ್ಯಾಹ್ನ 2:00 ಗಂಟೆಯವರೆಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ. ಗ್ರಹಣ ಮುಕ್ತಾಯದ ನಂತರ, ಅಂದರೆ ಸಂಜೆ 7:00 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಗರ್ಭಗುಡಿಯ ಶುದ್ಧೀಕರಣ ಮತ್ತು ಅಭಿಷೇಕದ ನಂತರ, ರಾತ್ರಿ 7:30ರ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಮುಕ್ತ ಅವಕಾಶವಿರುತ್ತದೆ. ದೇವರ ದರ್ಶನ ಆರಂಭವಾದ ಬಳಿಕ ಎಂದಿನಂತೆ ರಾತ್ರಿಯ ಅನ್ನಪ್ರಸಾದ ವಿತರಣೆಯೂ ಪ್ರಾರಂಭವಾಗಲಿದೆ.

ಇದನ್ನೂ ಓದಿ: ರಾಜಕೀಯದ 2ನೇ ಇನ್ನಿಂಗ್ಸ್ ಆರಂಭಿಸುವ ಮುನ್ನ ಶಿರಸಿ ಮಾರಿಕಾಂಬಾ ದೇವಿಯ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ

ಚಂದ್ರಗ್ರಹಣವಿದ್ದರೂ ರಾಯರ ದರ್ಶನಕ್ಕೆ ಇಲ್ಲ ನಿರ್ಬಂಧ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೂಜಾ ವಿಧಿವಿಧಾನಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಆದರೆ, ಗ್ರಹಣದ ಸಮಯದಲ್ಲಿ ರಾಯರ ದರ್ಶನ ಪಡೆಯಲು ಭಕ್ತರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಮಠದ ಮೂಲಗಳು ತಿಳಿಸಿವೆ.ಮಾರ್ಚ್ 3ರ ಸೂರ್ಯೋದಯದಿಂದ ಗ್ರಹಣ ಮುಕ್ತಾಯದವರೆಗೆ ಭಕ್ತರು ಎಂದಿನಂತೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ದರ್ಶನ ಪಡೆಯಬಹುದಾಗಿದೆ. ಮಠದ ನಿಗದಿತ ಸಮಯದಂತೆ ದರ್ಶನಕ್ಕೆ ವ್ಯವಸ್ಥೆ ಇರಲಿದೆ. ಗ್ರಹಣದ ಅವಧಿಯಲ್ಲಿ ಶ್ರೀ ಮಠದಲ್ಲಿ ಯಾವುದೇ ವಿಶೇಷ ಪೂಜೆಗಳು, ಹರಕೆ ಸೇವೆಗಳು ಅಥವಾ ಪರ್ವಕಾಲದ ವಿಶೇಷ ಕಾರ್ಯಕ್ರಮಗಳು ಇರುವುದಿಲ್ಲ.ಹಣದ ಪ್ರಯುಕ್ತ ರಾಯರ ಮೂಲ ಬೃಂದಾವನಕ್ಕೆ ಯಾವುದೇ ವಿಶೇಷ ಅಲಂಕಾರಗಳನ್ನು ಮಾಡಲಾಗುವುದಿಲ್ಲ. ಕೇವಲ ಜಲಾಭಿಷೇಕ ಮಾತ್ರ ನೆರವೇರಿಸಲಾಗುತ್ತದೆ. ಗ್ರಹಣದ ಹಿನ್ನೆಲೆಯಲ್ಲಿ ಶ್ರೀ ಮಠದಲ್ಲಿ ಅಂದು ಪ್ರಸಾದದ (ಊಟದ) ವ್ಯವಸ್ಥೆ ಇರುವುದಿಲ್ಲ. ಕೇವಲ ತೀರ್ಥ ಪ್ರಸಾದಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಗವಿ ಗಂಗಾಧರೇಶ್ವರ ಅರ್ಚಕರ ವಿಶೇಷ ಸೂಚನೆ!

ಹದಿನೈದು ದಿನಗಳ ಹಿಂದಷ್ಟೇ ಸಂಭವಿಸಿದ ಸೂರ್ಯಗ್ರಹಣದ ಬೆನ್ನಲ್ಲೇ ಈಗ ಹೋಳಿ ಮಾಸದ ಪೌರ್ಣಮಿಯಂದು ವಿಶೇಷ ಚಂದ್ರಗ್ರಹಣ ಸಂಭವಿಸುತ್ತಿದೆ. ಈ ಕುರಿತು ಗವಿ ಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಅವರು ಭಕ್ತರಿಗೆ ಪ್ರಮುಖ ಎಚ್ಚರಿಕೆ ಮತ್ತು ಮಾರ್ಗದರ್ಶನ ನೀಡಿದ್ದಾರೆ. ಹೋಳಿ ಮಾಸದ ಪೌರ್ಣಮಿಯಂದು ಬರುವ ಈ ಚಂದ್ರಗ್ರಹಣ ಅತ್ಯಂತ ವಿಶೇಷವಾಗಿದ್ದು, ನಭೋಮಂಡಲದಲ್ಲಿ ಮಹತ್ವದ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ಈ ಬಾರಿ ಗ್ರಹಣವು ಸಿಂಹ ರಾಶಿಯಲ್ಲಿ ಸಂಭವಿಸುತ್ತಿದೆ. ಗ್ರಹಣವು ಅಲ್ಪ ಭಾಗ ಕಂಡರೂ ಸಹ ಅದರ ದೋಷ ಮತ್ತು ತೊಂದರೆಗಳು ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಬಾಧಿಸಲಿವೆ ಎಂದು ಅರ್ಚಕರು ತಿಳಿಸಿದ್ದಾರೆ.ಗ್ರಹಣದಿಂದ ದೋಷವಿಲ್ಲ ಎಂದು ನಿರ್ಲಕ್ಷಿಸುವಂತಿಲ್ಲ. ಪ್ರಕೃತಿ ಮತ್ತು ಮನುಷ್ಯರ ಮೇಲೆ ಇದು ಸೂಕ್ಷ್ಮ ಪರಿಣಾಮ ಬೀರಲಿದೆ.ಗ್ರಹಣ ಮುಕ್ತಾಯದ ನಂತರ, ಅಂದರೆ ಬುಧವಾರದಂದು ಪ್ರತಿಯೊಬ್ಬರೂ ಕಡ್ಡಾಯವಾಗಿ ಶಿವನ ದರ್ಶನ ಪಡೆಯಬೇಕು. ಶಿವನಿಗೆ ಪ್ರಿಯವಾದ ಅಕ್ಕಿ, ಬೇಳೆ ಮತ್ತು ಎಣ್ಣೆಯನ್ನು ದಾನವಾಗಿ ನೀಡುವುದರಿಂದ ಗ್ರಹಣ ದೋಷದಿಂದ ಮುಕ್ತಿ ಪಡೆಯಬಹುದು ಎಂದು ಹೇಳಿದ್ದಾರೆ. ಗ್ರಹಣದ ದಿನ ಗವಿ ಗಂಗಾಧರೇಶ್ವರನಿಗೆ ವಿಶೇಷ ಜಲದ ಅಭಿಷೇಕ ಇರಲಿದೆ. ಮಂಗಳವಾರ 9 ಗಂಟೆ ಬಳಿಕ ದೇವಸ್ಥಾನ ಬಂದ್ ಮಾಡಲಾಗುತ್ತದೆ. ಬುಧವಾರ ಹೋಮ ಹವನ ಇರಲಿದೆ.

ಬಂಡೆ ಮಹಾಂಕಾಳಿ ದೇವಾಲಯದ ಬಾಗಿಲು ಮುಚ್ಚಲ್ಲ;

ಬೆಂಗಳೂರಿನ ಐತಿಹಾಸಿಕ ಬಂಡೆ ಮಹಾಂಕಾಳಿ ದೇವಾಲಯದ ಬಾಗಿಲನ್ನು ಮುಚ್ಚದಿರಲು ನಿರ್ಧರಿಸಲಾಗಿದೆ. ಅನಾದಿಕಾಲದಿಂದಲೂ ಪಾಲಿಸಿಕೊಂಡು ಬಂದಿರುವ ಸಂಪ್ರದಾಯದಂತೆ, ಗ್ರಹಣದ ವೇಳೆಯೂ ತಾಯಿ ಮಹಾಂಕಾಳಿಯ ದರ್ಶನಕ್ಕೆ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಮಂಗಳವಾರ ಹುಣ್ಣಿಮೆ ಮತ್ತು ಚಂದ್ರಗ್ರಹಣವಿರುವುದರಿಂದ ಬೆಳಿಗ್ಗೆ 6:00 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಿದ್ದು, ರಾತ್ರಿ 9:00 ಗಂಟೆಯವರೆಗೆ ಸತತವಾಗಿ ದರ್ಶನಕ್ಕೆ ಅವಕಾಶವಿರುತ್ತದೆ. ಪೌರ್ಣಮಿಯ ಅಂಗವಾಗಿ ಬೆಳಿಗ್ಗೆ ದೇವಾಲಯದಲ್ಲಿ ವಿಶೇಷ ಸತ್ಯನಾರಾಯಣ ಪೂಜೆ ನೆರವೇರಲಿದೆ. ಮಧ್ಯಾಹ್ನ 3:00 ರಿಂದ ಸಂಜೆ 6:00 ಗಂಟೆಯವರೆಗೆ ಚಂದ್ರಗ್ರಹಣದ ದೋಷ ನಿವಾರಣೆಗಾಗಿ ಚಂದ್ರಶಾಂತಿ ಮತ್ತು ಕೇತು ಶಾಂತಿ ಹೋಮಗಳು ನಡೆಯಲಿವೆ.ಹೋಮದ ನಂತರ ಕಳಶಾಭಿಷೇಕ ಮಾಡಲಾಗುವುದು. ಚಂದ್ರ ಮತ್ತು ಕೇತು ಶಾಂತಿ ಕಳಸದ ತೀರ್ಥವನ್ನು ಬಂಡೆ ಮಹಾಂಕಾಳಿಗೆ ಅಭಿಷೇಕ ಮಾಡಲಾಗುತ್ತದೆ. ಈ ಅಭಿಷೇಕದಿಂದ ಗ್ರಹಣದ ಅವಧಿಯಲ್ಲಿ ಭೂಮಿಗೆ ಮತ್ತು ಭಕ್ತರಿಗೆ ಎದುರಾಗುವ ಸಕಲ ಅವಘಡಗಳನ್ನು ತಾಯಿ ಪರಿಹರಿಸುತ್ತಾಳೆ ಎಂಬುದು ಭಕ್ತರ ಗಾಢ ನಂಬಿಕೆ.

ಚಾಮರಾಜನಗರ ಜಿಲ್ಲೆಯ ಪ್ರಮುಖ ದೇಗುಲಗಳ ಪೂಜೆಯಲ್ಲಿ ಬದಲಾವಣೆ:

ನಾಳೆ (ಮಾರ್ಚ್ 3) ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಪೂಜಾ ವಿಧಿವಿಧಾನಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಜಿಲ್ಲೆಯ ಮೂರು ಪ್ರಮುಖ ಬೆಟ್ಟಗಳ ದೇಗುಲಗಳಲ್ಲಿ ಒಂದೊಂದು ರೀತಿಯ ಸಂಪ್ರದಾಯ ಅನುಸರಿಸಲಾಗುತ್ತಿದೆ. “ಮಾದಪ್ಪನಿಗೆ ಯಾವುದೇ ಗ್ರಹಣ ತಾಕಲ್ಲ” ಎಂಬ ಬಲವಾದ ನಂಬಿಕೆಯಿದೆ. ಹೀಗಾಗಿ ಗ್ರಹಣದ ಅವಧಿಯಲ್ಲೂ ಮಲೆ ಮಹದೇಶ್ವರ ದೇವಾಲಯದ ಬಾಗಿಲು ಬಂದ್ ಆಗುವುದಿಲ್ಲ. ಭಕ್ತರು ಎಂದಿನಂತೆ ಮಾದಪ್ಪನ ದರ್ಶನ ಪಡೆಯಬಹುದು. ಗ್ರಹಣ ಕಾಲದಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ. ಬಿಳಿಗಿರಿ ರಂಗನಾಥನ ಸನ್ನಿಧಿಯಲ್ಲಿ ಗ್ರಹಣದ ಸೂತಕ ಹಿನ್ನೆಲೆ ನಾಳೆ ಬೆಳಿಗ್ಗೆ 11 ಗಂಟೆಗೆ ದೇವಾಲಯದ ಬಾಗಿಲನ್ನು ಮುಚ್ಚಲಾಗುವುದು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:34 am, Mon, 2 March 26

Source link