All posts by nagaraj11081993

14 ಎಸೆತಗಳಲ್ಲಿ ಅರ್ಧಶತಕ; 19 ಎಸೆತಗಳಲ್ಲಿ 63 ರನ್ ಚಚ್ಚಿದ ವೈಭವ್ ಸೂರ್ಯವಂಶಿ – Kannada News | Vaibhav Suryavanshi’s Blazing 14 Ball Fifty: U19 Star Shines in DY Patil T20

ಕೆಲವು ದಿನಗಳ ಹಿಂದೆ ನಡೆದಿದ್ದ ಅಂಡರ್ 19 ವಿಶ್ವಕಪ್​ ಫೈನಲ್​ನಲ್ಲಿ ಸಿಡಿಲಬ್ಬರದ ಶತಕ ಬಾರಿಸಿ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವೈಭವ್ ಸೂರ್ಯವಂಶಿ ಇದೀಗ ದೇಶಿ ಟೂರ್ನಿಯಲ್ಲಿ ಮತ್ತೊಮ್ಮೆ ರನ್​ಗಳ ಮಳೆ ಹರಿಸಿದ್ದಾರೆ. ಕೇವಲ 14 ವರ್ಷಕ್ಕೆ ವಿಶ್ವ ಕ್ರಿಕೆಟ್​ನಲ್ಲಿ ತಮ್ಮ ಆಟದ ಮೂಲಕವೇ ಸಂಚಲನ ಮೂಡಿಸಿರುವ ವೈಭವ್ ಮತ್ತೊಂದು ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ.

ಪ್ರಸ್ತುತ ಭಾರತದಲ್ಲಿ ಡಿವೈ ಪಾಟೀಲ್ ಟೂರ್ನಮೆಂಟ್‌ ನಡೆಯುತ್ತಿದ್ದು, ಈ ಟೂರ್ನಮೆಂಟ್​ನಲ್ಲಿ ಮೊದಲ ಬಾರಿಗೆ ಆಡುತ್ತಿರುವ ವೈಭವ್ ಸೂರ್ಯವಂಶಿ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ನವಿ ಮುಂಬೈನಲ್ಲಿ ನಡೆಯುತ್ತಿರುವ ಟಿ20 ಟೂರ್ನಮೆಂಟ್‌ನಲ್ಲಿ, ಡಿವೈ ಪಾಟೀಲ್ ಬ್ಲೂ ತಂಡದ ಪರ ಆಡುತ್ತಿರುವ ವೈಭವ್ ಸೂರ್ಯವಂಶಿ, ತಮ್ಮ ಮೊದಲ ಪಂದ್ಯದಲ್ಲೇ ಎದುರಾಳಿ ತಂಡದ ಬೌಲರ್‌ಗಳನ್ನು ಹೈರಾಣಾಗಿಸಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತೀಯ ನೌಕಾಪಡೆ ತಂಡ 4 ವಿಕೆಟ್‌ಗಳ ನಷ್ಟಕ್ಕೆ 219 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಗುರಿ ಬೆನ್ನಟ್ಟಿದ ಡಿವೈ ಪಾಟೀಲ್ ಬ್ಲೂ ತಂಡದ ಪರ ಓಪನಿಂಗ್ ಮಾಡಿದ ವೈಭವ್, ಏಕಾಂಗಿಯಾಗಿ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಕೊಟ್ಟರು.

ಇದರ ಪರಿಣಾಮವಾಗಿ ವೈಭವ್ ಕೇವಲ 14 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ವೈಭವ್ ಬೌಂಡರಿಯೊಂದಿಗೆ ಐವತ್ತರ ಗಡಿ ದಾಟಿದ್ದು, ಸ್ಮರಣೀಯವಾಗಿತ್ತು. ಏಳನೇ ಓವರ್‌ನಲ್ಲಿ ವೈಭವ್ ಔಟಾದರಾದರೂ ಆ ಹೊತ್ತಿಗೆ ತಂಡವನ್ನು 97ರನ್​ಗಳಿಗೆ ಕೊಂಡೊಯ್ದಿದ್ದರು.

ವೈಭವ್ ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 19 ಎಸೆತಗಳನ್ನು ಎದುರಿಸಿ ಬರೋಬ್ಬರಿ 63 ರನ್ ಬಾರಿಸಿದರು. ಆ 19 ಎಸೆತಗಳಲ್ಲಿ 12 ಬೌಂಡರಿಗಳು (7 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳು) ಸೇರಿದ್ದವು. ಅವರ ಸ್ಟ್ರೈಕ್ ರೇಟ್ 331.58 ಆಗಿದ್ದು, ಇದು ಯಶಸ್ವಿ ರನ್ ಚೇಸ್‌ಗೆ ಅಡಿಪಾಯ ಹಾಕಿತು.

ಪಂದ್ಯದ ಬಗ್ಗೆ ಹೇಳುವುದಾದರೆ, ವೈಭವ್ ಅವರ ಇನ್ನಿಂಗ್ಸ್ ನಂತರ, ಅರ್ಜುನ್ ತೆಂಡೂಲ್ಕರ್ ಕೂಡ ತಮ್ಮ ಬ್ಯಾಟಿಂಗ್‌ನಿಂದ ವಿನಾಶಕಾರಿ ಪ್ರದರ್ಶನ ನೀಡಿ ಕೇವಲ 29 ಎಸೆತಗಳಲ್ಲಿ ಅಜೇಯ 55 ರನ್ ಗಳಿಸಿ ತಂಡವನ್ನು ಕೇವಲ 19.1 ಓವರ್‌ಗಳಲ್ಲಿ ಗೆಲುವಿನ ದಡ ಮುಟ್ಟಿಸಿದರು. ಅರ್ಜುನ್ ತಮ್ಮ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು.

Published On – 5:50 pm, Thu, 26 February 26

Source link

ಮಣ್ಣಿನ ಮಡಿಕೆ ನೀರು ಕುಡಿಯೋದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ? – Kannada News | Know the benefits of drinking Earthen Pot Water

ಹಿಂದೆಲ್ಲಾ ಮಣ್ಣಿನ ಮಡಿಕೆಯಲ್ಲೇ ಅಡುಗೆ ತಯಾರಿಸುತ್ತಿದ್ದರು, ನೀರನ್ನು ಶೇಖರಿಸಿಡುತ್ತಿದ್ದರು. ಬೇಸಿಗೆಯಲ್ಲಂತೂ ಈ ಮಡಕೆ ನೀರನ್ನೇ ಕುಡಿದು ಬಿಸಿಲ ಧಗೆಯನ್ನು ಹೋಗಲಾಡಿಸುತ್ತಿದ್ದರು. ಈಗಂತೂ ಫ್ರಿಡ್ಜ್‌ ನೀರನ್ನೇ ಕುಡಿಯುವುದರಿಂದ ಯಾರು ಸಹ ಮಣ್ಣಿನ ಮಡಕೆಗಳನ್ನು ಬಳಕೆ ಮಾಡುವುದೇ ಇಲ್ಲ. ಆದ್ರೆ ಫ್ರಿಡ್ಜ್‌ ನೀರು ದೇಹಕ್ಕೆ ಒಳ್ಳೆಯದಲ್ಲ. ಹಾಗಾಗಿ ಈ ಬೇಸಿಗೆಯಲ್ಲಿ ದೇಹವನ್ನು ತಂಪು ಮಾಡಲು ಮಣ್ಣಿನ ಮಡಕೆ ನೀರನ್ನು (Earthen Pot Water) ಕುಡಿಯುವುದೇ ಬೆಸ್ಟ್.‌ ಈ ಮಣ್ಣಿನ ಮಡಿಕೆಗಳು ನೀರನ್ನು ತಂಪಾಗಿಸುವುದು ಮಾತ್ರವಲ್ಲದೆ ನೀರನ್ನು ನೈಸರ್ಗಿಕವಾಗಿ ಶುದ್ಧೀಕರಿಸಲು ಸಹ ಸಹಕಾರಿಯಾಗಿದ್ದು, ಈ ನೀರನ್ನು ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹಾಗಾಗಿ ಈ ಬೇಸಿಗೆಯಲ್ಲಿ ಫ್ರಿಡ್ಜ್‌ ಕೋಲ್ಡ್‌ ನೀರು ಬದಲು ಮಣ್ಣಿನ ಮಡಿಕೆ ನೀರು ಕುಡಿಯುವ ಮೂಲಕ ಈ ಒಂದಷ್ಟು ಆರೋಗ್ಯ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ.

ಮಣ್ಣಿನ ಮಡಿಕೆ ನೀರು ಕುಡಿಯುವುದರ ಪ್ರಯೋಜನಗಳೇನು?

ಹೊಟ್ಟೆ ಸಂಬಂಧಿ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ: ನಾವು ತಿನ್ನುವ ಹೆಚ್ಚಿನ ಆಹಾರವು ದೇಹದಲ್ಲಿ ಆಮ್ಲೀಯವಾಗುತ್ತದೆ ಮತ್ತು ನಂತರ ವಿಷವನ್ನು ಉತ್ಪಾದಿಸುತ್ತದೆ. ಜೇಡಿಮಣ್ಣು ಕ್ಷಾರೀಯ ಸ್ವಭಾವವನ್ನು ಹೊಂದದ್ದು, ಈ ಮಣ್ಣಿನ ಮಡಕೆಯಲ್ಲಿನ ನೀರಿನ pH ಮಟ್ಟವು ಸ್ಥಿರವಾಗಿರುತ್ತದೆ. ಇದು ಆಮ್ಲೀಯ ಆಹಾರ ಪದಾರ್ಥಗಳೊಂದಿಗೆ ಪ್ರತಿಕ್ರಿಯಿಸುತ್ತದೆ ಮತ್ತು pH ಸಮತೋಲನವನ್ನು ಸೃಷ್ಟಿಸುತ್ತದೆ, ಹೀಗಾಗಿ ಮಣ್ಣಿನ ಮಡಿಕೆಯ ನೀರನ್ನು ಕುಡಿಯುವುದರಿಂದ  ಆಮ್ಲೀಯತೆ, ಮಲಬದ್ಧತೆ, ಮತ್ತು ಗ್ಯಾಸ್ಟ್ರಿಕ್‌ ಸಮಸ್ಯೆಯನ್ನು ದೂರವಿಡಬಹುದು.

ದೇಹದ ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ: ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಕುಡಿಯುವುದು ದೇಹಕ್ಕೆ ಅತ್ಯಂತ ಪ್ರಯೋಜನಕಾರಿ. ಸಂಶೋಧನೆಯ ಪ್ರಕಾರ, ಮಣ್ಣಿನ ಪಾತ್ರೆಗಳಲ್ಲಿ ಸಂಗ್ರಹಿಸಿದ ನೀರು ದೇಹದಿಂದ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ:  ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿದ ನೀರಿನಲ್ಲಿ ಯಾವುದೇ ರಾಸಾಯನಿಕಗಳು ಇರುವುದಿಲ್ಲ. ಆದ್ದರಿಂದ, ಪ್ರತಿದಿನ ಮಣ್ಣಿನ ಮಡಕೆ ಅಥವಾ ಹೂಜಿಯಿಂದ ನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.  ಅಲ್ಲದೆ ಈ ನೀರಿನಲ್ಲಿರುವ ಖನಿಜಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಶಾಖದ ಹೊಡೆತದಿಂದ ರಕ್ಷಣೆ ನೀಡುತ್ತದೆ: ಬೇಸಿಗೆಯ ತಿಂಗಳುಗಳಲ್ಲಿ ವಿಪರೀತ ಬಿಸಿಲಿನ ಧಗೆ ಇರುತ್ತದೆ. ಈ ಶಾಖದ ಹೊಡೆತದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಮಣ್ಣಿನ ಮಡಿಕೆ ನೀರು ಕುಡಿಯಿರಿ. ಈ ಮಣ್ಣಿನ ಮಡಕೆ ನೀರಿನಲ್ಲಿ ಖನಿಜಗಳು ಮತ್ತು ಪೋಷಕಾಂಶಗಳಿದ್ದು,  ಇದು ತ್ವರಿತವಾಗಿ ಪುನರ್ಜಲೀಕರಣಗೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮೊಬೈಲ್‌ ನೋಡುತ್ತಾ ಊಟ ಮಾಡಿದರೆ ಏನಾಗುತ್ತದೆ ಗೊತ್ತಾ?

ನೈಸರ್ಗಿಕ ಶುದ್ಧೀಕರಣಕಾರಕ:  ಈ ಮಣ್ಣಿನ ಮಡಕೆ ಆಹ್ಲಾದಕರವಾದ ಮಣ್ಣಿನ ಪರಿಮಳವನ್ನು ಹೊಂದಿರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಮಣ್ಣಿನ ಮಡಕೆಯ ನೀರು ಗಂಟಲು ಮತ್ತು ಕರುಳಿಗೆ ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಮಡಿಕೆಯನ್ನು ಜೇಡಿಮಣ್ಣಿನಿಂದ ತಯಾರಿಸುವುದರ ಕಾರಣ, ಇದು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ. ಮಣ್ಣಿನ ಪಾತ್ರೆಯಲ್ಲಿರುವ ಜೇಡಿಮಣ್ಣು ನೀರಿನಿಂದ ಕಲ್ಮಶಗಳನ್ನು ತೆಗೆದುಹಾಕುತ್ತದೆ. ಈ ನೀರು ದೇಹದ ವಿಷವನ್ನು ಶುದ್ಧೀಕರಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಫ್ರಿಡ್ಜ್‌ ನೀರು ನೀರು ಗಂಟಲು ನೋವು ಸೇರಿದಂತೆ ಇತರ ಸಮಸ್ಯೆಗಳನ್ನು ಉಂಟುಮಾಡಬಹುದು, ಆದರೆ ಮಣ್ಣಿನ ಮಡಿಕೆ ನೀರು ಕುಡಿಯುವುದರಿಂದ ಈ ಯಾವುದೇ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನೆಕೆಲಸದಾಕೆಯೇ ವಿಲನ್; ಮಾಲೀಕರ ಮನೆಯಲ್ಲಿ ನಕಲಿ ಇಡಿ ದಾಳಿ ನಡೆಸಿ ಲಕ್ಷಗಟ್ಟಲೆ ಹಣ ದೋಚಿದ ಮಹಿಳೆ! – Kannada News | Two Including Housemaid Arrested For Fake ED Raid robs Rs 4 lakh At Employers house In Delhi

ನವದೆಹಲಿ, ಫೆಬ್ರವರಿ 26: ಮಹಿಳೆಯೊಬ್ಬಳು ತನಗೆ ಕೆಲಸ ನೀಡಿದ್ದ ಮನೆಯ ಒಡೆಯನ ಮನೆಗೇ ಕನ್ನ ಹಾಕಲು ಪ್ಲಾನ್ ಮಾಡಿದ್ದಳು. ಅದಕ್ಕಾಗಿ ಆಕೆ ಹೆಣೆದ ಪ್ಲಾನ್ ಅಂತಿಂಥದ್ದಲ್ಲ. ಮನೆಕೆಲಸ ಮಾಡುತ್ತಿದ್ದ ಆಕೆಗೆ ಆ ಮನೆಯ ಎಲ್ಲ ವಿಚಾರವೂ ಗೊತ್ತಿತ್ತು. ಆ ಮನೆಯಲ್ಲಿ ಸಾಕಷ್ಟು ಹಣ, ಒಡವೆಯಿದೆ ಎಂಬುದು ಕೂಡ ತಿಳಿದಿತ್ತು. ಹೀಗಾಗಿ, ಅದನ್ನೆಲ್ಲ ದೋಚಲು ಆಕೆ ಪ್ಲಾನ್ ಮಾಡಿದ್ದಳು. ಆದರೆ, ಕದ್ದುಕೊಂಡು ಹೋದರೆ ತಾನು ಖಂಡಿತ ಸಿಕ್ಕಿಹಾಕಿಕೊಳ್ಳುತ್ತೇನೆ ಎಂಬುದು ಆಕೆಗೆ ತಿಳಿದಿತ್ತು. ಹೀಗಾಗಿ, ತನ್ನ ಗೆಳೆಯರ ಜೊತೆ ಸೇರಿ ಇಡಿ ದಾಳಿಯ (ED Raid) ನಾಟಕವಾಡಿ ಹಣ ದೋಚಲು ಪ್ಲಾನ್ ಮಾಡಿದ್ದಳು.

ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿರುವ ಅವರ ಉದ್ಯೋಗದಾತರ ನಿವಾಸದ ಮೇಲೆ ನಕಲಿ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಆರೋಪದ ಮೇಲೆ ಮನೆಕೆಲಸದವಳನ್ನು ಬಂಧಿಸಲಾಗಿದೆ. ಪೊಲೀಸ್ ಸಮವಸ್ತ್ರದಲ್ಲಿದ್ದ ಮೂವರು ವ್ಯಕ್ತಿಗಳು ಫೆಬ್ರವರಿ 11ರಂದು ಇಡಿ ಅಧಿಕಾರಿಗಳೆಂದು ಹೇಳಿಕೊಂಡು ನಿವೃತ್ತ ವಾಸ್ತುಶಿಲ್ಪಿಯಾದ 86 ​​ವರ್ಷದ ಆರ್‌ಸಿ ಸಭರ್ವಾಲ್ ಅವರ ನಿವಾಸಕ್ಕೆ ಬಲವಂತವಾಗಿ ಪ್ರವೇಶಿಸಿದ್ದರು. ಅವರು ಸಭರ್ವಾಲ್ ಅವರ ಕುಟುಂಬವನ್ನು ಹೆದರಿಸಿ ಶೋಧ ಕಾರ್ಯಾಚರಣೆಯ ಸಮಯದಲ್ಲಿ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡರು. ಅಷ್ಟರಲ್ಲೇ ಸಭರ್ವಾಲ್ ಅವರ ಮೊಮ್ಮಗ ಅವರ ಬಳಿ ಇಡಿ ದಾಳಿಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಕೇಳಿದ್ದರಿಂದ ಅವರು ಮನೆಯಲ್ಲಿದ್ದ ಮೂರ್ನಾಲ್ಕು ಲಕ್ಷ ಹಣ, ಚಿನ್ನವನ್ನು ತೆಗೆದುಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಸಿಎಂ ಕುರ್ಚಿ ಕದನದ ನಡುವೆ ಬೆಂಗಳೂರಿನಲ್ಲಿ ಸಚಿವರ ಆಪ್ತರ ಮೇಲೆ ಇಡಿ ದಾಳಿ

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ದರೋಡೆ ನಡೆದ ವಸತಿ ಪ್ರದೇಶದ ಖಾಸಗಿ ಕ್ಯಾಮೆರಾಗಳು, ಸಿಸಿಟಿವಿ ಕ್ಯಾಮೆರಾಗಳು ಮತ್ತು ಹೈ-ಸ್ಪೀಡ್ ಟ್ರಾಫಿಕ್ ಕ್ಯಾಮೆರಾಗಳು ಸೇರಿದಂತೆ 350ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅವರು ಪರಿಶೀಲಿಸಿದರು. ಅಲ್ಲಿಗೆ ಬಂದಿದ್ದ ಕಾರು ಎಲ್ಲೆಲ್ಲ ಓಡಾಡಿದೆ ಎಂದು ಪೊಲೀಸರು ಸಿಸಿಟಿವಿ ದೃಶ್ಯವನ್ನು ಆಧರಿಸಿ ತನಿಖೆ ನಡೆಸಿದಾಗ ಪೂಜಾ ರಜಪೂತ್ ಎಂಬ ಮಹಿಳೆಯ ಬಳಿ ಆ ಕಾರು ನಿಂತಿದ್ದು ಗೊತ್ತಾಯಿತು. ಆಕೆ ದರೋಡೆ ನಡೆದ ಮನೆಯ ಕೆಲಸದಾಕೆ ರೇಖಾ ದೇವಿಯ ಅತ್ತಿಗೆ ಎಂದು ತಿಳಿದುಬಂದಿದೆ. ಇದರಿಂದ ಪೊಲೀಸರು ರೇಖಾ ದೇವಿಯ ಮೇಲೆ ಕಣ್ಣಿಟ್ಟರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಕಲಿ ಕಾಲ್ ಸೆಂಟರ್ ಮೇಲೆ ಪೊಲೀಸರ ದಾಳಿ: ಷೇರು ಮಾರುಕಟ್ಟೆ ಹೆಸರಲ್ಲಿ ವಂಚಿಸುತ್ತಿದ್ದ ಇಬ್ಬರ ಬಂಧನ!

ಬಳಿಕ, ಪೊಲೀಸರ ತಂಡವು ಪೂಜಾ ಅವರ ಮನೆಯ ಮೇಲೆ ದಾಳಿ ಮಾಡಿದಾಗ ಅಲ್ಲಿ ಇಡಿ ದಾಳಿಯಲ್ಲಿ ಬಳಸಲಾದ ಪೊಲೀಸ್ ಯೂನಿಫಾರಂ ಸಿಕ್ಕಿತು. ಆ ಮನೆಯಿಂದ ಕದ್ದ ಐಷಾರಾಮಿ ಕೈಗಡಿಯಾರಗಳು ಮತ್ತು ಆಭರಣಗಳು ಸಹ ಅಲ್ಲೇ ಸಿಕ್ಕಿತು. ಈ ಹಿನ್ನೆಲೆಯಲ್ಲಿ ರೇಖಾ (40) ಮತ್ತು 45 ವರ್ಷದ ಪೂಜಾ ಅವರನ್ನು ಬಂಧಿಸಲಾಗಿದ್ದು, ಪೊಲೀಸರು ಇತರ ಆರೋಪಿಗಳಾದ ಐಟಿಬಿಪಿ ಕಾನ್‌ಸ್ಟೆಬಲ್ ಪ್ರಕಾಶ್, ನಿವೃತ್ತ ಸೇನಾ ಸಿಬ್ಬಂದಿ ಉಪದೇಶ್ ಸಿಂಗ್ ಥಾಪಾ ಮತ್ತು ಮನೀಶ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಕಷ್ಟದಿಂದ ದರ್ಶನ್ ಪಾರಾಗುತ್ತಾರಾ? ಭವಿಷ್ಯದ ಬಗ್ಗೆ ಮಾತಾಡಿದ ಕೋಡಿಮಠದ ಸ್ವಾಮೀಜಿ – Kannada News | Kodi Mutt Swamiji talks about Kannada actor Darshan court case

ನಟ ದರ್ಶನ್ (Darshan) ಅವರು ಪರಪ್ಪನ ಅಗ್ರಹಾರ ಜೈಲು ಸೇರಿ ಹಲವು ದಿನಗಳು ಕಳೆದಿವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪ್ರಮುಖ ಆರೋಪಿ ಆಗಿದ್ದಾರೆ. ಅವರ ಭವಿಷ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಕೋಡಿಮಠದ ಶ್ರೀಗಳು (Kodi Mutt Swamiji) ಪ್ರತಿಕ್ರಿಯೆ ನೀಡಿದ್ದಾರೆ. ‘ಸಿಂಹಪುರಿಯ ಸಿಂಹ’ ಸಿನಿಮಾ ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ದರ್ಶನ್ ಬಗ್ಗೆ ಸ್ವಾಮೀಜಿ ಮಾತನಾಡಿದರು. ‘ಈ ವಿಷಯ ಕೋರ್ಟ್​​ನಲ್ಲಿ ಇದೆ. ಆ ಬಗ್ಗೆ ನಾವು ಮಾತನಾಡಬಾರದು. ಮಾತಾಡಿದರೆ ನಾವು ನ್ಯಾಯಾಲಯಕ್ಕೆ ವಿರುದ್ಧ ಹೋದಂತೆ ಆಗುತ್ತದೆ. ನ್ಯಾಯಾಲಯದಲ್ಲಿ ಆಗುವ ತೀರ್ಮಾನವನ್ನು ನಾವು ಒಪ್ಪಿಕೊಳ್ಳಲೇಬೇಕು. ಅವರಿಗೆ ದೇವರು ಒಳ್ಳೆಯದು ಮಾಡಲಿ. ನ್ಯಾಯಾಲಯದಲ್ಲಿ ಇರುವ ವಿಷಯಕ್ಕೆ ನಾವು ಬಾಯಿ ಹಾಕುವುದು ಅಷ್ಟು ಒಳ್ಳೆಯದಲ್ಲ’ ಎಂದು ಕೋಡಿಶ್ರೀ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಲಾಭದ ಆಸೆ ತೋರಿಸಿ ಕೋಟ್ಯಾಂತರ ರೂ. ಪಂಗನಾಮ: 74 ವರ್ಷದ ವ್ಯಕ್ತಿ ಕಳೆದುಕೊಂಡ ಹಣದ ಮೊತ್ತ ಕೇಳಿದ್ರೆ ಶಾಕ್​​ ಆಗ್ತೀರ! – Kannada News | 74 Year Old Mangaluru Man Duped of 1.77 Crore in Online Investment Scam

ಮಂಗಳೂರು, ಫೆಬ್ರವರಿ 26: ಆನ್​​ಲೈನ್​​ ಹೂಡಿಕೆ ಹೆಸರಲ್ಲಿ ವಂಚಕರು ಮಕ್ಮಲ್​​ ಟೋಪಿ ಹಾಕುವ ಸಾಲು ಸಾಲು ಪ್ರಕರಣಗಳು ವರದಿಯಾಗುತ್ತಿದ್ದರೂ ಜನರು ಮಾತ್ರ ಈ ಬಗ್ಗೆ ಎಚ್ಚೆತ್ತುಕೊಳ್ಳುತ್ತಿಲ್ಲ. ಈ ಬಗ್ಗೆ ಪೊಲೀಸರು, ಗೃಹ ಇಲಾಖೆ ಅದೆಷ್ಟೇ ಜಾಗೃತಿ ನಡೆಸಿದರೂ ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುವರ ಸಂಖ್ಯೆ ಕಡಿಮೆಯಾಗಿಲ್ಲ. ಇದಕ್ಕೆ ಉದಾಹರಣೆ ಎನ್ನುವಂತೆ ಆನ್‌ಲೈನ್ ಅಮೆರಿಕನ್ ಕಮಾಡಿಟೀಸ್ ಹೂಡಿಕೆಯಲ್ಲಿ ಹೆಚ್ಚಿನ ಲಾಭ ದೊರೆಯುವ ಆಸೆಗೆ ಬಿದ್ದ 74 ವರ್ಷದ ಮಂಗಳೂರಿನ ವ್ಯಕ್ತಿಯೋರ್ವರು ಬರೋಬ್ಬರಿ 1.77 ಕೋಟಿ ಹಣವನ್ನು ಕಳೆದುಕೊಂಡಿದ್ದಾರೆ.

ವೆಂಟ್ರೇಡ್ ಎಂಬ ಕಂಪನಿಯಿಂದ ಶೋಯಬ್ ಘೌರಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವ ಕಳೆದ ಡಿಸೆಂಬರ್​​ 24ರಂದು ಸಂತ್ರಸ್ತರಿಗೆ ದೂರವಾಣಿ ಕರೆ ಮಾಡಿದ್ದ. ಅಮೆರಿಕನ್ ಕಮಾಡಿಟೀಸ್ ವ್ಯಾಪಾರದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ಅವರಿಗೆ ಆಸೆ ತೋರಿಸಿದ್ದ ಆತ, ನೀವು ಭಾರತೀಯ ರೂಪಾಯಿಯಲ್ಲಿ ವರ್ಗಾಯಿಸುವ ಹಣವನ್ನು ಅಮೆರಿಕನ್ ಡಾಲರ್‌ಗೆ ಪರಿವರ್ತಿಸಿ ನಿಮ್ಮ ಪರವಾಗಿ ಹೂಡಿಕೆ ಮಾಡುತ್ತೇನೆ ಎಂಬಿತ್ಯಾದಿ ಬಣ್ಣ ಬಣ್ಣದ ಮಾತುಗಳನ್ನಾಡಿ ಅವರನ್ನು ನಂಬಿಸಿದ್ದ. ಈತನ ಮಾತು  ನಿಜವಿರಬಹುದೆಂದು ಸಂತ್ರಸ್ತ ವ್ಯಕ್ತಿಯೂ ನಂಬಿದ್ದರು. ಬಳಿಕ ಆರೋಪಿ ಇಮೇಲ್, ವಾಟ್ಸ್​ಯಾಪ್​​ ಮತ್ತು ಫೋನ್ ಕರೆಗಳ ಮೂಲಕ ದೂರುದಾರರೊಂದಿಗೆ ಸಂಪರ್ಕದಲ್ಲಿದ್ದ ಹಿನ್ನೆಲೆ ಆರಂಭದಲ್ಲಿ ದೂರುದಾರರು ಸ್ವಲ್ಪ ಮೊತ್ತವನ್ನು ಹೂಡಿಕೆ ಮಾಡಿದ್ದರು. ಆರೋಪಿ ನೀಡಿದ್ದ ಭರವಸೆಯಂತೆ ಆ ಹಣಕ್ಕೆ ಸ್ವಲ್ಪ ಮಟ್ಟಿನ ಲಾಭವೂ ದೂರುದಾರರ ಖಾತೆಗೆ ಜಮಾ ಆಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆನ್​ಲೈನ್ ಹೂಡಿಕೆ ಹೆಸರಿನಲ್ಲಿ ಭಾರಿ ವಂಚನೆ, ಬೃಹತ್ ಜಾಲ ಭೇದಿಸಿದ ಕೆಂಗೇರಿ ಪೊಲೀಸರು, 8 ಮಂದಿಯ ಬಂಧನ

ಸ್ವಲ್ಪ ಮೊತ್ತದ ಹಣ ಹೂಡಿಕೆ ಮಾಡಿದ್ದಕ್ಕೇ ಲಾಭ ಸಿಕ್ಕ ಹಿನ್ನೆಲೆ ಆರೋಪಿ ಮೇಲೆ ಮತ್ತಷ್ಟು ವಿಶ್ವಾಸ ಮೂಡಿದ ಪರಿಣಾಮ ದೂರುದಾರರು ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿ ಆರೋಪಿಯು ನೀಡಿದ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್ (RTGS), ಎನ್‌ಇಎಫ್‌ಟಿ (NEFT) ಹಾಗೂ ಐಎಂಪಿಎಸ್ (IMPS) ಮೂಲಕ ದೊಡ್ಡ ಮೊತ್ತಗಳನ್ನು ವರ್ಗಾಯಿಸಿದ್ದಾರೆ. ಪೊಲೀಸರ ಪ್ರಕಾರ, ಜನವರಿ 5ರಿಂದ ಫೆಬ್ರವರಿ 2ರವರೆಗೆ ಒಟ್ಟು ರೂ. 1,77,64,668.22 ಹಣ ಆತ ನೀಡಿದ್ದ ಖಾತೆಗೆ ವರ್ಗಾವಣೆ ಆಗಿದೆ. ಯಾವಾಗ ದೊಡ್ಡ ಹಣ ತನ್ನ ಕೈಸೇರಿತೋ ಆಗ ಆರೋಪಿ ತನ್ನ ನೈಜ ಬಣ್ಣವನ್ನು ದೂರುದಾರರಿಗೆ ತೋರಿಸಿದ್ದು, ಅಂತಿಮವಾಗಿ ವಂಚನೆಗೆ ಒಳಗಾಗಿರೋದನ್ನು ಅರಿತ 74 ವರ್ಷದ ವ್ಯಕ್ತಿ ಮಂಗಳೂರು ನಗರದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪಿಎಂ ಕಿಸಾನ್ ಯೋಜನೆಗೆ 7 ವರ್ಷ; 22ನೇ ಕಂತಿನ ಹಣ ಸದ್ಯದಲ್ಲೇ – Kannada News | Pm kisan samman nidhi yojana completes 7 years beneficiaries waiting for 22nd installment

ನವದೆಹಲಿ, ಫೆಬ್ರುವರಿ 26: ರೈತರಿಗೆ ವರ್ಷಕ್ಕೆ 6,000 ರೂ ನೀಡುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Yojana) ಶುರುವಾಗಿ ಮೊನ್ನೆಗೆ (ಫೆ. 24) ಏಳು ವರ್ಷ ಪೂರ್ಣವಾಗಿದೆ. 2019ರ ಫೆಬ್ರುವರಿ 24ರಂದು ಈ ಯೋಜನೆ ಆರಂಭವಾಯಿತು. ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ರೂ ಹಣವನ್ನು ರೈತರಿಗೆ ನೀಡುವ ಸ್ಕೀಮ್ ಇದು. ಈ ಏಳು ವರ್ಷದಲ್ಲಿ ಇಲ್ಲಿಯವರೆಗೆ 21 ಕಂತುಗಳಲ್ಲಿ ಕೋಟ್ಯಂತರ ರೈತರಿಗೆ ಹಣ ಬಿಡುಗಡೆ ಮಾಡಲಾಗಿದೆ.

21ನೇ ಕಂತಿನ ಹಣವನ್ನು 2025ರ ನವೆಂಬರ್ 19ರಂದು ಬಿಡುಗಡೆ ಮಾಡಲಾಗಿತ್ತು. 22ನೇ ಕಂತಿನ ಹಣಕ್ಕಾಗಿ ರೈತರು ಕಾಯುತ್ತಿದ್ದಾರೆ. ಸರ್ಕಾರ ಯಾವಾಗ ಬೇಕಾದರೂ ಕಂತಿನ ಹಣ ಬಿಡುಗಡೆ ಮಾಡಬಹುದು. ಫೆಬ್ರುವರಿ ಮುಗಿಯಲು 2 ದಿನ ಬಾಕಿ ಇದೆ. ಈ ಎರಡು ದಿನದಲ್ಲಿ ಹಣ ಬರಬಹುದು. ಇಲ್ಲದಿದ್ದರೆ ಮಾರ್ಚ್ ಮೊದಲಾರ್ಧದಲ್ಲಿ ಹಣ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ಅನಿಲ್ ಅಂಬಾನಿಗೆ ಇನ್ನಷ್ಟು ಸಂಕಷ್ಟ; ನಿನ್ನೆ 3,716 ಕೋಟಿ ರೂ ಆಸ್ತಿ ಮುಟ್ಟುಗೋಲು; ಈಗ ಸಿಬಿಐನಿಂದ ಹೊಸ ಕೇಸ್ ದಾಖಲು

ಏನಿದು ಪಿಎಂ ಕಿಸಾನ್ ಯೋಜನೆ?

ಕೃಷಿ ಜಮೀನು ಹೊಂದಿರುವ ರೈತರಿಗೆ ವ್ಯವಸಾಯಕ್ಕೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ರೂ ಹಣದ ನೆರವು ಬಿಡುಗಡೆ ಮಾಡುತ್ತದೆ. ಪ್ರತೀ ಕಂತಿನಲ್ಲಿ 2,000 ರೂ ಹಣ ಕೊಡಲಾಗುತ್ತದೆ.

ಸ್ವಂತ ಕೃಷಿ ಭೂಮಿ ಹೊಂದಿರಬೇಕು. ಆದಾಯ ತೆರಿಗೆ ಪಾವತಿಸುವಷ್ಟು ಹಣವಂತನಾಗಿರುವಂತಿಲ್ಲ. ಸರ್ಕಾರಿ ನೌಕರರು, ವೃತ್ತಿಪರರು, ಶಾಸಕರು ಇತ್ಯಾದಿ ಹುದ್ದೆ ಹೊಂದಿರುವವರು ಕೃಷಿ ಭೂಮಿ ಇದ್ದಾಗ್ಯೂ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಲು ಅರ್ಹರಿರುವುದಿಲ್ಲ.

ಒಂದು ಕುಟುಂಬದಲ್ಲಿ ಒಬ್ಬ ಮಾತ್ರ ಫಲಾನುಭವಿಯಾಗಬಹುದು. 2019ರ ನಂತರ ಕೃಷಿ ಭೂಮಿ ಖರೀದಿಸಿದವರಿಗೂ ಯೋಜನೆಗೆ ನೊಂದಾಯಿಸಲು ಆಗುವುದಿಲ್ಲ. ಆದರೆ ಭೂಮಾಲೀಕರು ಸಾವನ್ನಪ್ಪಿ ಅವರಿಂದ ವಾರಸುದಾರರಿಗೆ ಜಮೀನು ವರ್ಗಾವಣೆ ಆಗಿದ್ದರೆ ಅಂಥವರು ಫಲಾನುಭವಿಗಳಾಗಬಹುದು.

ಇದನ್ನೂ ಓದಿ: ಕಂಟೆಂಟ್ ಕ್ರಿಯೇಟರ್ಸ್​ಗೆ ಸರಿಯಾಗಿ ಆದಾಯ ಹಂಚಿಕೆ ಮಾಡಿ: ಡಿಜಿಟಲ್ ಪ್ಲಾಟ್​ಫಾರ್ಮ್​ಗಳಿಗೆ ಸಚಿವ ವೈಷ್ಣವ್ ಸೂಚನೆ

ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇದೆಯಾ?

  • ಪಿಎಂ ಕಿಸಾನ್ ಯೋಜನೆಯ ವೆಬ್​ಸೈಟ್​ಗೆ ಹೋಗಿ: pmkisan.gov.in/
  • ಮುಖ್ಯಪುಟದಲ್ಲಿ ತುಸು ಕೆಳಗೆ ಸ್ಕ್ರೋಲ್ ಮಾಡಿ ಫಾರ್ಮರ್ಸ್ ಕಾರ್ನರ್​ನಲ್ಲಿರುವ ಬೆನಿಫಿಶಿಯರಿ ಲಿಸ್ಟ್ ಕ್ಲಿಕ್ ಮಾಡಿ
  • ಇಲ್ಲಿ ನಿಮ್ಮ ರಾಜ್ಯ, ಜಿಲ್ಲ, ತಾಲೂಕು, ಊರನ್ನು ಆಯ್ಕೆ ಮಾಡಿಕೊಳ್ಳಿ.
  • ಆ ಊರಿನಲ್ಲಿರುವ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Ranji Final 2025-26: 5 ವಿಕೆಟ್​ಗಳ ಗೊಂಚಲು ಪಡೆದ ಪ್ರಸಿದ್ಧ್ ಕೃಷ್ಣ – Kannada News | Ranji Final 2025 26: JK Scores 584, Prasidh Krishna’s Fifer Steals Hubballi Show!

ಹುಬ್ಬಳ್ಳಿಯಲ್ಲಿ ನಡೆದ 2025-26 ರ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಜೆಕೆ ತಂಡವು ಮೊದಲ ಇನ್ನಿಂಗ್ಸ್​ನಲ್ಲಿ 584 ರನ್​ಗಳ ಬೃಹತ್ ಮೊತ್ತ ಕಲೆಹಾಕಿದೆ. ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ ಆಡುತ್ತಿರುವ ಜಮ್ಮು ಮತ್ತು ಕಾಶ್ಮೀರ ತಂಡವು, ಅನುಭವಿ ಬೌಲಿಂಗ್ ವಿಭಾಗವನ್ನು ಹೊಂದಿರುವ ಕರ್ನಾಟಕ ತಂಡವನ್ನು ಸಮರ್ಥವಾಗಿ ಎದುರಿಸಿತು. ತಂಡದ ಪರ ಶುಭಂ ಪುಂಡಿರ್ ಶತಕ ಬಾರಿಸಿದರೆ, ನಾಯಕ ಪರಾಸ್ ಡೋಗ್ರಾ ಸೇರಿದಂತೆ 4 ಬ್ಯಾಟ್ಸ್‌ಮನ್‌ಗಳು ಅರ್ಧಶತಕಗಳ ಬಾರಿಸಿದರು. ಇತ್ತ ಕರ್ನಾಟಕ ಪರ ಗಮನಾರ್ಹ ಪ್ರದರ್ಶನ ನೀಡಿದ ಅನುಭವಿ ವೇಗಿ ಪ್ರಸಿದ್ಧ್ ಕೃಷ್ಣ 5 ವಿಕೆಟ್‌ಗಳ ಗೊಂಚಲು ಪಡೆದರು.

527 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡುನ ಮೂರನೇ ದಿನದಾಟವನ್ನು ಆರಂಭಿಸಿದ ಜಮ್ಮು ಮತ್ತು ಕಾಶ್ಮೀರ 600 ರನ್‌ಗಳ ಗಡಿಯನ್ನು ಸುಲಭವಾಗಿ ಮೀರುತ್ತದೆ ಎಂದು ತೋರುತ್ತಿತ್ತು. ಆದಾಗ್ಯೂ, ಮೂರನೇ ದಿನದಂದು ಏಳು ಓವರ್‌ಗಳಲ್ಲಿ ಎರಡು ವಿಕೆಟ್‌ಗಳು ಬಿದ್ದವು, ಈ ಎರಡೂ ವಿಕೆಟ್‌ಗಳನ್ನು ಪ್ರಸಿದ್ಧ್ ಕೃಷ್ಣ ಉರುಳಿಸಿದರು. ಮಾತ್ರವಲ್ಲದೆ ಆಕಿಬ್ ನಬಿ ಅವರನ್ನು ಔಟ್ ಮಾಡುವ ಮೂಲಕ ಪ್ರಸಿದ್ಧ್ ತಮ್ಮ 5 ವಿಕೆಟ್ ಗೊಂಚಲನ್ನು ಪೂರ್ಣಗೊಳಿಸಿ ಈ ಫೈನಲ್ ಪಂದ್ಯವನ್ನು ಸ್ಮರಣೀಯವಾಗಿಸಿದರು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪ್ರಸಿದ್ಧ್ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಪಡೆದಿರುವುದು ಇದು ನಾಲ್ಕನೇ ಬಾರಿ. 34.1 ಓವರ್‌ಗಳ ಸ್ಪೆಲ್‌ನಲ್ಲಿ, ಪ್ರಸಿದ್ಧ್ 98 ರನ್‌ಗಳನ್ನು ನೀಡಿ 5 ವಿಕೆಟ್‌ಗಳನ್ನು ಪಡೆದರು. ಈ ಇನ್ನಿಂಗ್ಸ್‌ನಲ್ಲಿ ತಂಡದ ಪರ ಅತಿ ಹೆಚ್ಚು ಓವರ್‌ಗಳನ್ನು ಬೌಲ್ ಮಾಡಿದ ಎರಡನೇ ಬೌಲರ್ ಕೂಡ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Lunar Eclipse 2026: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಯವರು ಅತ್ಯಂತ ಜಾಗರೂಕರಾಗಿರಿ! – Kannada News | Lunar Eclipse 2026: Astrological Predictions for Virgo by Dr. Basavaraj Guruji

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು 2026ರ ಕೇತುಗ್ರಸ್ತ ಚಂದ್ರಗ್ರಹಣದ ಕನ್ಯಾ ರಾಶಿಯವರ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ. ಕನ್ಯಾ ರಾಶ್ಯಾಧಿಪತಿ ಬುಧ ಗ್ರಹಣವನ್ನು ವೀಕ್ಷಿಸುತ್ತಿದ್ದಾನೆ. ಉತ್ತರ, ಹಸ್ತಾ, ಚಿತ್ತಾ ನಕ್ಷತ್ರದವರಿಗೆ ಇದು ಅನ್ವಯಿಸುತ್ತದೆ. ಗ್ರಹಣವು 12ನೇ ಮನೆ, ದುಃಸ್ಥಾನದಲ್ಲಿ ಸಂಭವಿಸುವುದರಿಂದ ಕನ್ಯಾ ರಾಶಿಯವರು ಬಹಳಷ್ಟು ಜಾಗ್ರತೆಯಿಂದ ಇರಬೇಕು. ಅಧಿಕ ಖರ್ಚು, ಕಣ್ಣಿನ ಸಮಸ್ಯೆ, ರಕ್ತದೊತ್ತಡದ ಸಮಸ್ಯೆ, ನಿದ್ರಾಹೀನತೆ, ಆತಂಕ, ಮತ್ತು ಆತುರದ ನಿರ್ಧಾರಗಳಿಂದ ದೂರವಿರುವುದು ಉತ್ತಮ.

ಆದರೆ, ಹಣಕಾಸಿನ ವಿಚಾರದಲ್ಲಿ ಒಳ್ಳೆಯದಾಗಲಿದೆ. ಸಿಕ್ಕಿಬಿದ್ದ ಹಣ ವಾಪಸ್ ಬರುತ್ತದೆ ಮತ್ತು ವಿದೇಶದಿಂದ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಸಾಲದ ಆತಂಕವೂ ನಿವಾರಣೆಯಾಗಲಿದೆ. ಹೊಸ ಸಂಸ್ಥೆಗಳನ್ನು ಸ್ಥಾಪಿಸಲು ತಯಾರಿ ಮಾಡಿಕೊಳ್ಳುವುದು ಒಳ್ಳೆಯದು. ಸರ್ಕಾರಿ ನೌಕರರು, ಕ್ರೀಡಾಪಟುಗಳು ಮತ್ತು ರೈತಾಪಿ ವರ್ಗದವರಿಗೆ ಶುಭ ಫಲಗಳಿವೆ. ವ್ಯಾಪಾರಸ್ಥರಿಗೆ ವ್ಯಾಪಾರ ವಿಸ್ತರಣೆಯ ಸಾಧ್ಯತೆಯಿದೆ. ಗ್ರಹಣ ಕಾಲದಲ್ಲಿ ನರಸಿಂಹ ದೇವರನ್ನು ಆರಾಧಿಸುವುದು ಮತ್ತು ಗ್ರಹಣದ ನಂತರ ಪಾರ್ವತಿ ದರ್ಶನ ಮಾಡಿ ಕುಂಕುಮಾರ್ಚನೆ ಮಾಡಿಸುವುದು ಶುಭಕರ. ವಿಶೇಷವಾಗಿ ವೃದ್ಧರು, ಅನಾರೋಗ್ಯ ಪೀಡಿತರು, ಮತ್ತು ಗರ್ಭಿಣಿಯರು ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದಿ ಕೇರಳ ಸ್ಟೋರಿ 2’ ಬಿಡುಗಡೆಗೆ ತಡೆ: ಹೈಕೋರ್ಟ್ ನೀಡಿದ ಕಾರಣವೇನು? – Kannada News | This is the reason why High Court stayed the release of The Kerala Story 2

ಲವ್ ಜಿಹಾದ್ ಕುರಿತ ಕಥೆ ಹೊಂದಿರುವ ‘ದಿ ಕೇರಳ ಸ್ಟೋರಿ 2’ (The Kerala Story 2) ಸಿನಿಮಾ ಈ ವಾರ ಬಿಡುಗಡೆ ಆಗುತ್ತಿಲ್ಲ. ಫೆಬ್ರವರಿ 27ರಂದು ರಿಲೀಸ್ ಮಾಡಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಈ ಸಿನಿಮಾದ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಇದರಿಂದಾಗಿ ಚಿತ್ರತಂಡಕ್ಕೆ ಆಘಾತ ಆಗಿದೆ. ಚಿತ್ರದ ಟೀಸರ್ ಬಿಡುಗಡೆ ಆದ ಬಳಿಕ ಅನೇಕರಿಂದ ವಿರೋಧ ವ್ಯಕ್ತವಾಗಿತ್ತು. ಕೆಲವರು ಚಿತ್ರದ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದ್ದರು. ವಿಚಾರಣೆ ನಡೆಸಿರುವ ಕೇರಳ ಹೈಕೋರ್ಟ್ (Kerala High Court) ಈ ಸಿನಿಮಾದ ಬಿಡುಗಡೆಗೆ ತಡೆ ನೀಡಿದೆ. ಈ ತೀರ್ಪಿಗೆ ಕಾರಣ ಇಲ್ಲಿದೆ.

ಜಸ್ಟೀಸ್ ಬೇಚು ಕುರಿಯನ್ ಥಾಮಸ್ ಅವರು ಈ ತೀರ್ಪು ನೀಡಿದ್ದಾರೆ. ಸೆನ್ಸಾರ್ ಮಂಡಳಿಯು ನಿಯಮಗಳನ್ನು ಕಡೆಗಣಿಸಿದಂತಿದೆ. ಆದ್ದರಿಂದ ಪ್ರಮಾಣಪತ್ರ ನೀಡಿರುವ ನಿರ್ಧಾರವನ್ನು ಪರಿಪರಿಶೀಲಿಸಬೇಕು ಎಂದು ಅವರು ಹೇಳಿದ್ದಾರೆ. ಸಿನಿಮಾದ ಟೀಸರ್​ನಲ್ಲಿ ಇರುವ ಅಂಶಗಳ ಬಗ್ಗೆ ಕೇರಳ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

‘ಸಿನಿಮಾದ ಭಾಗವಾಗಿರುವ ಈ ಟೀಸರ್​​ನಲ್ಲಿ ಜನರ ನಂಬಿಕೆಯನ್ನು ತಿರುಚುವಂತಹ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಅಂಶಗಳು ಇವೆ’ ಎಂಬ ಕಾರಣವನ್ನು ನೀಡಿ ಕೇರಳ ಹೈಕೋರ್ಟ್ ‘ದಿ ಕೇರಳ ಸ್ಟೋರಿ 2’ ಸಿನಿಮಾದ ಬಿಡುಗಡೆಗೆ ತಡೆ ನೀಡಿದೆ. ಈ ಸಿನಿಮಾದಲ್ಲಿ ಕೇರಳವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.

2023ರಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಅದರ ಸೀಕ್ವೆಲ್ ಆಗಿ ‘ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್’ ಸಿನಿಮಾ ಸಿದ್ಧವಾಗಿದೆ. ಟೀಸರ್ ಬಿಡುಗಡೆ ಆದ ಬಳಿಕ ವಿವಾದ ಸೃಷ್ಟಿ ಆಯಿತು. ಚಿತ್ರಕ್ಕೆ ಪ್ರಮಾಣಪತ್ರ ನೀಡಿದ ಸೆನ್ಸಾರ್ ಮಂಡಳಿಯ ಕ್ರಮವನ್ನು ಪ್ರಶ್ನಿಸಲಾಗಿದೆ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ 2’ ಸಿನಿಮಾ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ ಸಿಎಂ ಪಿಣರಾಯಿ ವಿಜಯನ್

ಕಾಮಾಕ್ಯ ನಾರಾಯಣ್ ಸಿಂಗ್ ಅವರು ‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ವಿಪುಲ್ ಅಮೃತ್​ಲಾಲ್ ಶಾ ಅವರು ನಿರ್ಮಾಣ ಮಾಡಿದ್ದಾರೆ. ಉಲ್ಕಾ ಗುಪ್ತಾ, ಅದಿತಿ ಭಾಟಿಯಾ, ಐಶ್ವರ್ಯಾ ಊಜಾ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಲವ್ ಜಿಹಾದ್ ಕುರಿತಾದ ಕಥೆ ಈ ಸಿನಿಮಾದಲ್ಲಿ ಇದೆ ಎಂಬುದು ಟೀಸರ್ ಮೂಲಕ ಗೊತ್ತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಕಲಿ ಪ್ರಶ್ನೆಪತ್ರಿಕೆ ಹಾವಳಿ: ವಿದ್ಯಾರ್ಥಿಗಳೇ ನಂಬಿ ಮೋಸ ಹೋಗದಿರಿ ಎಂದ KSEAB – Kannada News | KSEAB Alerts Students Against Fake 2nd PUC Question Papers

ಬೆಂಗಳೂರು, ಫೆಬ್ರವರಿ 26: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಕೌಂಟ್​​ಡೌನ್​​ ನಡುವೆ ಕೆಲವು ದುಷ್ಕರ್ಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪ್ರಶ್ನೆಪತ್ರಿಕೆಗಳನ್ನು ಹಂಚುತ್ತಿರುವ ಆರೋಪ ಕೇಳಿಬಂದಿದೆ. ಈ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ, ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಪ್ರಶ್ನೆಪತ್ರಿಕೆ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸಂಬಂಧಪಟ್ಟವರನ್ನು ಪತ್ತೆಹಚ್ಚಲು ಸೈಬರ್ ಪೊಲೀಸರಿಗೆ ದೂರು ನೀಡೋದಾಗಿಯೂ ತಿಳಿಸಿದ್ದಾರೆ.

ಕರ್ನಾಟಕ ಬೋರ್ಡ್ SSLC ಪರೀಕ್ಷೆಗಳು ಮಾರ್ಚ್ 18ರಿಂದ ಆರಂಭವಾಗಲಿದ್ದರೆ, ಪಿಯುಸಿ ಪರೀಕ್ಷೆಗೆ ಬೆರಳೆಣಿಕೆ ದಿನಗಳಷ್ಟೇ ಬಾಕಿಯಿದ್ದು ಫೆಬ್ರವರಿ 28ರಿಂದ ಪ್ರಾರಂಭವಾಗಲಿವೆ. ಈ ಹಿನ್ನೆಲೆ ನಕಲಿ ಪ್ರಶ್ನೆ ಪತ್ರಿಕೆಗಳ ಹರಿದಾಟ ಆರೋಪ ಕೇಳಿಬಂದ ಕಾರಣ SSLC ಮತ್ತು PU ಪರೀಕ್ಷೆಗಳ ವೇಳೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಪೂರ್ವಭಾವಿ ಪರೀಕ್ಷೆಗಳ ವೇಳೆಯೂ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆದಿರುವುದರಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಖ್ಯ ಪರೀಕ್ಷೆಗಳ ಸಮಯದಲ್ಲಿ ಸಾಮಾಜಿಕ ಜಾಲತಾಣಗಳ ಮೇಲಿನ ನಿಗಾವನ್ನು ಮತ್ತಷ್ಟು ಕಠಿಣಗೊಳಿಸಲು ನಿರ್ಧರಿಸಿದೆ.

ಇದನ್ನೂ ಓದಿ: ದ್ವಿತೀಯ ಪಿಯು ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಆತಂಕ; ಪ್ರಶ್ನೆ ಪತ್ರಿಕೆ ಬೇಕಾದರೆ ಮೆಸೇಜ್ ಮಾಡಿ ಎಂಬ ಪೋಸ್ಟ್ ವೈರಲ್!

ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಸಂಬಂಧ ಅದಾಗಲೇ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪೊಲೀಸ್ ಅಧೀಕ್ಷಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದಾರೆ. ನಕಲಿ ಪ್ರಶ್ನೆ ಪತ್ರಿಕೆ ಅಥವಾ ಪ್ರಶ್ನೆ ಪತ್ರಿಕೆ ಸೋರಿಕೆ ಆಗದಂತೆ ತಡೆಯಲು ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗೆ 5,174 ಪಿಯು ಕಾಲೇಜುಗಳಿಂದ ಒಟ್ಟು 7,10,363 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 2,92,645 ಮಂದಿ ವಿಜ್ಞಾನ ವಿಭಾಗದವರು, 2,11,174 ಮಂದಿ ವಾಣಿಜ್ಯ ಹಾಗೂ 1,42,982 ಮಂದಿ ಕಲಾ ವಿಭಾಗದ ವಿದ್ಯಾರ್ಥಿಗಳಿದ್ದಾರೆ. ರಾಜ್ಯದಾದ್ಯಂತ 1,217 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಹಾಗೆಯೇ SSLC ಪರೀಕ್ಷೆಗಳು 2,871 ಕೇಂದ್ರಗಳಲ್ಲಿ ನಡೆಯಲಿದ್ದು, 15,941 ಶಾಲೆಗಳಿಂದ ದಾಖಲೆ ಪ್ರಮಾಣದ 9,02,889 ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆ ಬರೆಯಲಿದ್ದಾರೆ ಎಂದು ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:27 pm, Thu, 26 February 26

Source link