All posts by nagaraj11081993

LSG vs RCB: ಮುಂದಿನ ಸೀಸನ್​ಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದೇವೆ; ರಿಷಭ್ ಪಂತ್ – Kannada News | IPL 2026: Lucknow Super Giants Playoff Hopes Dim; Rishabh Pant’s Admission on Team’s Fate

2026 ರ ಐಪಿಎಲ್‌ನಲ್ಲಿ (IPL 2026) ಇಂದು ಲಕ್ನೋ ಸೂಪರ್‌ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ನಡುವೆ 50ನೇ ಲೀಗ್ ಪಂದ್ಯ ನಡೆಯುತ್ತಿದೆ. ಅಂದರೆ ಲೀಗ್ ಹಂತ ಮುಗಿಯುವತ್ತ ಸಾಗಿದ್ದು, ಯಾವ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯಬಹುದು. ಯಾವ ತಂಡಗಳು ಲೀಗ್ ಸುತ್ತಿನಲ್ಲೇ ತಮ್ಮ ಪಯಣವನ್ನು ಮುಗಿಸಬಹುದು ಎಂಬುದಕ್ಕೆ ಭಾಗಶಃ ಸ್ಪಷ್ಟತೆ ಸಿಕ್ಕಂತ್ತಾಗಿದೆ. ಅದರಲ್ಲೂ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ 3 ಸ್ಥಾನಗಳಲ್ಲಿರುವ ತಂಡಗಳಿಗೆ ಗೇಟ್​ಪಾಸ್ ಈಗಾಗಲೇ ಸಿಕ್ಕಿದೆ ಎನ್ನಬಹುದು. ಅಂತಹ ತಂಡಗಳಲ್ಲಿ ಲಕ್ನೋ ಕೂಡ ಒಂದು.

ಲಕ್ನೋ ಸೂಪರ್‌ಜೈಂಟ್ಸ್ ತಂಡ ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಅಂದರೆ 10 ನೇ ಸ್ಥಾನದಲ್ಲಿದೆ. ಆಡಿರುವ ಒಂಬತ್ತು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆದ್ದಿದ್ದ್ದು, ಉಳಿದ ಏಳು ಪಂದ್ಯಗಳಲ್ಲಿ ಸೋತಿದೆ. ಹೀಗಾಗಿ ಲಕ್ನೋ ತಂಡ ಮುಂದಿನ ಹಂತಕ್ಕೆ ಹೋಗುವುದು ಅನುಮಾನವಾಗಿದೆ. ನಾಯಕ ರಿಷಭ್ ಪಂತ್ ಕೂಡ ಇದನ್ನೇ ಆರ್​ಸಿಬಿ ವಿರುದ್ಧದ ಪಂದ್ಯದ ಟಾಸ್ ಸಮಯದಲ್ಲಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲದೆ ಒಂದು ಹೆಜ್ಜೆ ಮುಂದೆ ಹೋಗಿರುವ ಪಂತ್, ನಾವು ಮುಂದಿನ ಸೀಸನ್​ಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದೇವೆ ಎಂದಿದ್ದಾರೆ.

ರಿಷಭ್ ಪಂತ್ ಹೇಳಿದ್ದೇನು?

ಆರ್‌ಸಿಬಿ ವಿರುದ್ಧದ ಟಾಸ್ ಸಮಯದಲ್ಲಿ ಮಾತನಾಡಿದ ರಿಷಭ್ ಪಂತ್, ‘ನಾವು ಅತ್ಯುತ್ತಮ ಆಟಗಾರರು ಎಂದು ನಮಗೆ ತಿಳಿದಿದೆ, ಆದರೆ ಕೆಲವೊಮ್ಮೆ ವಿಷಯಗಳು ನಾವು ಅಂದುಕೊಂಡಂತೆ ನಡೆಯುವುದಿಲ್ಲ. ಇದೆಲ್ಲ ಕ್ರಿಕೆಟ್‌ನಲ್ಲಿ ಸಾಮಾನ್ಯ. ಹೀಗಾಗಿ ನಮಗೆ ವಿಷಯಗಳ ಬಗ್ಗೆ ಸ್ಪಷ್ಟತೆ ಇರಬೇಕು. ಇನ್ನು ಈ ಪಂದ್ಯದಲ್ಲಿ ನಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲವು ಬದಲಾವಣೆಗಳಾಗಿವೆ. ಇಲ್ಲಿಂದ ನಮ್ಮ ಲೋಪ ದೋಷಗಳನ್ನು ಸರಿಪಡಿಸಿಕೊಂಡು ನಾವು, ಮುಂದಿನ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತೇವೆ ಎಂದಿದ್ದಾರೆ. ಅಂದರೆ ಪಂತ್, ಈ ಆವೃತ್ತಿಯ ಲೀಗ್ ಹಂತ ಮುಗಿಯುವುದಕ್ಕೆ ಇನ್ನು 20 ಪಂದ್ಯಗಳು ಬಾಕಿ ಇರುವ ಮುನ್ನವೇ ತಂಡದ ಪ್ರಯಾಣ ಲೀಗ್ ಹಂತದಲ್ಲೇ ಮುಗಿಯುತ್ತದೆ ಎಂಬುದನ್ನು ಖಚಿತಪಡಿಸಿಕೊಂಡಂತ್ತಾಗಿದೆ.

ಈ ಆವೃತ್ತಿಯಲ್ಲಿ ಲಕ್ನೋ ಪ್ರದರ್ಶನ

ಈ ಆವೃತ್ತಿಯನ್ನು ಸೋಲಿನೊಂದಿಗೆ ಆರಂಭಿಸಿದ ಲಕ್ನೋ ಸೂಪರ್‌ಜೈಂಟ್ಸ್ ತಂಡವು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರು ವಿಕೆಟ್‌ಗಳಿಂದ ಸೋತಿತು. ಆದಾಗ್ಯೂ, ಆ ನಂತರ ನಡೆದ ಹೈದರಾಬಾದ್ ಮತ್ತು ಕೆಕೆಆರ್ ವಿರುದ್ಧದ ಸತತ ಎರಡು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಇದರ ನಂತರ ಲಕ್ನೋ ಸೂಪರ್‌ಜೈಂಟ್ಸ್ ತಂಡವು ಗುಜರಾತ್, ಆರ್‌ಸಿಬಿ, ಪಂಜಾಬ್ ಮತ್ತು ರಾಜಸ್ಥಾನ ವಿರುದ್ಧ ಸತತ ಆರು ಪಂದ್ಯಗಳನ್ನು ಸೋತಿತು. ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಟೈ ಆಯಿತ್ತಾದರೂ ಸೂಪರ್ ಓವರ್‌ನಲ್ಲಿ ಸೋತಿತ್ತು. ಇದಾದ ಬಳಿಕ ಲಕ್ನೋ, ಮುಂಬೈ ಇಂಡಿಯನ್ಸ್ ವಿರುದ್ಧವೂ ಸೋತಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಗಾಳದಲ್ಲಿ ಹಿಂಸಾಚಾರ; ಬಾಂಬ್ ದಾಳಿಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಗಾಯ – Kannada News | Bomb blasts in Howrahs Shibpur slums violence erupts in west Bengal

ಹೌರಾ, ಮೇ 7: ಚುನಾವಣಾ ಫಲಿತಾಂಶದ ನಂತರ ಪಶ್ಚಿಮ ಬಂಗಾಳ (West Bengal) ರಾಜ್ಯದಲ್ಲಿ ರಾಜಕೀಯ ಹಿಂಸಾಚಾರ ಹೆಚ್ಚಾಗಿದೆ. ಇಂದು ಹೌರಾದ ಶಿವಪುರದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಕಾಂತಿಯಲ್ಲಿ ಟಿಎಂಸಿ ನಾಯಕನ ಮನೆ ಮೇಲೂ ದಾಳಿ ನಡೆದಿದೆ. ಎರಡೂ ಪಕ್ಷಗಳು ಪರಸ್ಪರ ಆರೋಪ ಹೊರಿಸಿಕೊಳ್ಳುತ್ತಿವೆ. ಇಲ್ಲಿಯವರೆಗೆ, ಬಂಗಾಳದಲ್ಲಿ ಚುನಾವಣಾ ನಂತರದ ಹಿಂಸಾಚಾರದಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ಇದು ಬಹಳ ಆತಂಕಕಾರಿ ಸಂಗತಿಯಾಗಿದೆ. ಹೀಗಾಗಿ, ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದೆ. ಇಂದು ರಾಜ್ಯಪಾಲರು ಬಂಗಾಳದ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ. ಈ ಅಧಿಕಾರ ಬದಲಾವಣೆಯ ನಡುವೆ ಕಳೆದ ಕೆಲವು ದಿನಗಳಿಂದ ರಾಜ್ಯದ ವಿವಿಧ ಭಾಗಗಳಿಂದ ಹಿಂಸಾಚಾರದ ವರದಿಗಳು ಬರುತ್ತಿವೆ. ಇಂದು ಮಧ್ಯಾಹ್ನ, ಹೌರಾದ ಶಿವಪುರ ಪೊಲೀಸ್ ಠಾಣೆ ಪ್ರದೇಶದ ಚೌರಬಸ್ತಿ ಪ್ರದೇಶದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಉದ್ವಿಗ್ನತೆಯನ್ನು ಉಂಟುಮಾಡಿತು. ಈ ಘಟನೆಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ: BJP ಶಾಸಕಿ ರತ್ನ ದೇವನಾಥ್ ಮನೆ ಬಳಿಯೇ ಬಾಂಬ್​​ ಸ್ಫೋಟ

ಇಂದು ಮಧ್ಯಾಹ್ನ 2.30ರ ಸುಮಾರಿಗೆ ಘಟನೆ ನಡೆದಾಗ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಯನ್ನು ಸುತ್ತುವರೆದು ಪ್ರತಿಭಟನೆ ನಡೆಸಿದರು. ಸ್ಥಳೀಯ ತೃಣಮೂಲ ನಾಯಕ ಶಮೀಮ್ ಅಹ್ಮದ್ ನೇತೃತ್ವದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇಟ್ಟಿಗೆಗಳು, ಕಲ್ಲುಗಳನ್ನು ಎಸೆಯಲಾಯಿತು ಮತ್ತು ಬಾಂಬ್‌ಗಳನ್ನು ಸಹ ಎಸೆಯಲಾಯಿತು.

ಈ ಪರಿಸ್ಥಿತಿಯನ್ನು ನಿಯಂತ್ರಿಸಲು, ಸ್ಥಳದಲ್ಲಿ ಭಾರೀ ಪೊಲೀಸ್ ಪಡೆ ಮತ್ತು ಕೇಂದ್ರ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಈ ಘಟನೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಶಿವಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಿದರು. ಈ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಚುನಾವಣೆಯ ನಂತರ ಪ್ರದೇಶದಲ್ಲಿ ಭಯ ಹುಟ್ಟಿಸಲು ಶಿವಪುರ ಭಯೋತ್ಪಾದಕ ಅರೂಪ್ ರಾಯ್‌ನ ಆಪ್ತ ಸಹಚರ ಶಮೀಮ್ ಅಹ್ಮದ್ ಅಲಿಯಾಸ್ ಬಾರ್ ಈ ದಾಳಿಯನ್ನು ಆಯೋಜಿಸಿದ್ದಾನೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ರೇಸ್​ನಲ್ಲಿರುವ ಸುವೇಂದು ಅಧಿಕಾರಿ ಆಪ್ತ ಸಹಾಯಕನ ಹತ್ಯೆ

ಕಾಂತಿಯಲ್ಲಿ ತೃಣಮೂಲ ಕಾಂಗ್ರೆಸ್ ನಾಯಕನ ಮನೆಯನ್ನು ಗುರಿಯಾಗಿಸಿಕೊಂಡು ಬಾಂಬ್ ಸ್ಫೋಟ ನಡೆದಿದೆ. ಬುಧವಾರ ರಾತ್ರಿ ಕಾಂತಿ ಬ್ಲಾಕ್ ಯುವ ಟಿಎಂಸಿ ಅಧ್ಯಕ್ಷ ಉಸ್ಮಾನ್ ಘನಿ ಅವರ ಮನೆಯನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಲಾಗಿದೆ. ಪುರಂದಪುರ ಹಟ್ಟಾಲ ಪ್ರದೇಶದಲ್ಲಿರುವ ಅವರ ಮನೆಯಲ್ಲಿ ರಾತ್ರಿ ಅವರು ಇದ್ದಾಗ ಬಾಂಬ್ ಸ್ಫೋಟಗೊಂಡಿದೆ. ಈ ಘಟನೆಯು ಆ ಪ್ರದೇಶದಲ್ಲಿ ವ್ಯಾಪಕ ಗಲಭೆಗೆ ಕಾರಣವಾಗಿದೆ. ದೂರು ದಾಖಲಾದ ತಕ್ಷಣ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಘಟನೆಗೆ ಯಾವುದೇ ರಾಜಕೀಯ ಸಂಬಂಧವಿದೆಯೇ ಎಂದು ನಿರ್ಧರಿಸಲು ತನಿಖೆ ನಡೆಯುತ್ತಿದೆ. ರಾಜ್ಯದಲ್ಲಿ ಚುನಾವಣೆಯ ನಂತರದ ರಾಜಕೀಯ ಹಿಂಸಾಚಾರದಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಬುಧವಾರ ರಾತ್ರಿ ಗುಂಡಿಕ್ಕಿ ಕೊಲ್ಲಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 Kannada News Live: ದೀದಿ ಸರ್ಕಾರ ವಜಾ; ಕರ್ನಾಟಕದಲ್ಲಿ ದಾಖಲೆ ಮದ್ಯ ಮಾರಾಟ – Kannada News | TV9 Kannada News Live: Mamata Banerjee Government Dismissed in West Bengal; Karnataka Sees Record Liquor Sales

ಮಮತಾ ಬ್ಯಾನರ್ಜಿ, ಮದ್ಯImage Credit source: tv9 kannada

ಬೆಂಗಳೂರು, ಮೇ 07: ಪಶ್ಚಿಮ ಬಂಗಾಳದ (West Bengal) ರಾಜಕೀಯ ವಿದ್ಯಮಾನಗಳಲ್ಲಿ ಭಾರಿ ಸಂಚಲನ ಮೂಡಿದ್ದು, ರಾಜ್ಯಪಾಲ ಆರ್.ಎನ್. ರವಿ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರ ಮತ್ತು ಸಚಿವ ಸಂಪುಟವನ್ನು ವಜಾಗೊಳಿಸಿದ್ದಾರೆ. ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಹಿನ್ನಡೆ ಅನುಭವಿಸಿದ್ದರೂ, ಮಮತಾ ಬ್ಯಾನರ್ಜಿ ತಾವು ಸೋತಿಲ್ಲ ಮತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಚುನಾವಣೆಯಲ್ಲಿ ಬಿಜೆಪಿ 100ಕ್ಕೂ ಹೆಚ್ಚು ಕ್ಷೇತ್ರಗಳನ್ನು ಕದ್ದಿದ್ದಾರೆಂದು ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಹೀಗಾಗಿ ಅವರು ಅಧಿಕಾರ ಬಿಟ್ಟುಕೊಡಲು ನಿರಾಕರಿಸಿದ್ದರಿಂದ, ರಾಜ್ಯಪಾಲರು ಸಂವಿಧಾನದ ಅಧಿಕಾರ ಬಳಸಿ ಸರ್ಕಾರವನ್ನೇ ವಿಸರ್ಜಿಸಿದ್ದಾರೆ. ಇದರಿಂದಾಗಿ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ.

ಮುಖ್ಯಾಂಶಗಳು

  • ಪಶ್ಚಿಮ ಬಂಗಾಳ ಸರ್ಕಾರ ವಿಸರ್ಜಿಸಿದ ರಾಜ್ಯಪಾಲ: ಮಮತಾ ಬ್ಯಾನರ್ಜಿ ಸರ್ಕಾರ ವಜಾ
  • ಏಕನಾಥ್ ಶಿಂಧೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್: ತಪ್ಪಿದ ಅನಾಹುತ
  • ಎಲ್‌ಪಿಜಿ ದರ ಏರಿಕೆ ಬೆನ್ನಲ್ಲೇ ಮೀಟರ್ ದರ ಹೆಚ್ಚಳಕ್ಕೆ ಮುಂದಾದ ಆಟೋ ಚಾಲಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್: ತಪ್ಪಿದ ಅನಾಹುತ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಹವಾಮಾನ ವೈಪರೀತ್ಯ ಉಂಟಾದ ಹಿನ್ನೆಲೆ ತುರ್ತು ಲ್ಯಾಂಡಿಂಗ್ ಮಾಡಿರುವಂತಹ ಘಟನೆ ನಡೆದಿದೆ. ಏಕನಾಥ್ ಶಿಂಧೆ ಅವರು ಮುಂಬೈನಿಂದ ತಮ್ಮ ತವರು ಜಿಲ್ಲೆಯಾದ ಸತಾರಾಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸುತ್ತಿದ್ದರು. ಈ ವೇಳೆ ಏಕಾಏಕಿ ಭಾರಿ ಗಾಳಿ ಮತ್ತು ಗುಡುಗು ಸಹಿತ ಮಳೆ ಆರಂಭವಾಗಿದೆ. ಇದರಿಂದಾಗಿ ಏಕನಾಥ್ ಶಿಂಧೆ ಅವರ ವಿಮಾನ ಪಯಣಕ್ಕೆ ಅಡ್ಡಿ ಉಂಟಾಗಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಸಂಪುಟವನ್ನು ವಿಸರ್ಜಿಸಿದ ರಾಜ್ಯಪಾಲ; ಮಮತಾ ಬ್ಯಾನರ್ಜಿ ಈಗ ಮಾಜಿ ಸಿಎಂ

ಪೈಲಟ್ ತಕ್ಷಣವೇ ಎಚ್ಚೆತ್ತುಕೊಂಡು ಹೆಲಿಕಾಪ್ಟರ್ ಅನ್ನು ಸುರಕ್ಷಿತವಾಗಿ ವಾಪಸ್ ಮುಂಬೈಗೆ ತಿರುಗಿಸಿ, ಜುಹು ಏರೋಡ್ರೋಮ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ. ಪ್ರತಿಕೂಲ ಹವಾಮಾನದಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ಪೈಲಟ್‌ನ ಸಮಯಪ್ರಜ್ಞೆಯಿಂದ ತಪ್ಪಿದೆ. ಘಟನೆ ಬಳಿಕ ಶಿಂಧೆ ಅವರು ರಸ್ತೆ ಮಾರ್ಗದ ಮೂಲಕ ತಮ್ಮ ಪ್ರಯಾಣ ಬೆಳೆಸಿದರು.

ಬೆಂಗಳೂರು ಆಟೋ ಪ್ರಯಾಣಿಕರಿಗೆ ಶಾಕ್: ಮೀಟರ್​ ದರ ಹೆಚ್ಚಳಕ್ಕೆ ಚಾಲಕ ಸಂಘಟನೆಗಳ ಮನವಿ

ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಮತ್ತೆ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಆಟೋ ಎಲ್‌ಪಿಜಿ ದರ ಸತತ ಏರಿಕೆ ಬೆನ್ನಲ್ಲೇ ಆಟೋ ಚಾಲಕ ಸಂಘಟನೆಗಳು, ಆಟೋ ಮೀಟರ್ ದರ ಏರಿಕೆ ಮಾಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿವೆ. ಸದ್ಯ ಬೆಂಗಳೂರಿನಲ್ಲಿ ಆಟೋ ಕನಿಷ್ಠ ದರ 2 ಕಿ.ಮೀಗೆ 30 ರೂಪಾಯಿ ಇದೆ. ಇದನ್ನು 50 ರೂಪಾಯಿಗೆ ಹೆಚ್ಚಿಸಬೇಕು ಎಂಬುದು ಚಾಲಕರ ಪ್ರಮುಖ ಬೇಡಿಕೆಯಾಗಿದೆ.

ಇದನ್ನೂ ಓದಿ: ಕಬ್ಬನ್ ಪಾರ್ಕ್‌ನಲ್ಲಿ ಮಾವು ಮೇಳಕ್ಕೆ ವಾಕರ್ಸ್ ಅಸೋಸಿಯೇಷನ್ ವಿರೋಧ: ಏಕೆ?

ಇತ್ತೀಚಿನ ದಿನಗಳಲ್ಲಿ ಆಟೋ ಎಲ್‌ಪಿಜಿ ಬೆಲೆಯು ಪ್ರತಿ ಲೀಟರ್‌ಗೆ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದಾಗಿ ದೈನಂದಿನ ಜೀವನ ನಡೆಸುವುದು ಕಷ್ಟವಾಗುತ್ತಿದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಈಗಾಗಲೇ ಆಟೋ ಚಾಲಕರ ಸಂಘಟನೆಗಳು ಸಾರಿಗೆ ಸಚಿವರಿಗೂ ಮನವಿ ಸಲ್ಲಿಸಲು ಸಿದ್ಧತೆ ನಡೆಸಿವೆ.

ಕರ್ನಾಟಕದಲ್ಲಿ ದಾಖಲೆ ಮದ್ಯ ಮಾರಾಟ: 3,688 ಕೋಟಿ ರೂ ಆದಾಯ

ಕರ್ನಾಟಕದ ಅಬಕಾರಿ ಇಲಾಖೆಯ ಇತಿಹಾಸದಲ್ಲಿ ಏಪ್ರಿಲ್ ತಿಂಗಳು ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಕಳೆದ ತಿಂಗಳು ನಡೆದ ಭರ್ಜರಿ ಮದ್ಯ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ ಬರೋಬ್ಬರಿ 3,688 ಕೋಟಿ ರೂ ಆದಾಯ ಹರಿದುಬಂದಿದೆ. ಇದು ಕಳೆದ 13 ವರ್ಷಗಳ ಇತಿಹಾಸದಲ್ಲೇ ಒಂದೇ ತಿಂಗಳಲ್ಲಿ ಸಂಗ್ರಹವಾದ ಗರಿಷ್ಠ ಆದಾಯವಾಗಿದೆ. ಅಬಕಾರಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಇಷ್ಟೊಂದು ಬೃಹತ್ ಪ್ರಮಾಣದ ವಹಿವಾಟು ಒಂದೇ ತಿಂಗಳಲ್ಲಿ ನಡೆದಿರುವುದು ಇದೇ ಮೊದಲು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕರ್ನಾಟಕದಲ್ಲಿ ಮದ್ಯದ ಕಿಕ್: 13 ವರ್ಷದ ದಾಖಲೆ ಉಡೀಸ್‌, ಸರ್ಕಾರಕ್ಕೆ ಬಂದ ಆದಾಯ ಎಷ್ಟು ಗೊತ್ತಾ? – Kannada News | Karnataka Liquor Sales Surge: April Breaks 13 Year Record, Revenue Hits Rs 3,688 Crore

ಬೆಂಗಳೂರು, (ಮೇ 07): ಕರ್ನಾಟಕದಲ್ಲಿ (Karnataka) ಏಪ್ರಿಲ್ ತಿಂಗಳ ಮದ್ಯ ಮಾರಾಟದಲ್ಲಿ (Liquor Sales) ರಾಜ್ಯ ಅಬಕಾರಿ ಇಲಾಖೆ ಹೊಸ ಇತಿಹಾಸ ಬರೆದಿದೆ. ಕಳೆದ ತಿಂಗಳ ವ್ಯಾಪಾರದಿಂದ ಬರೋಬ್ಬರಿ ರಾಜ್ಯ ಸರ್ಕಾರಕ್ಕೆ ಮೂರು ಸಾವಿರ ಕೋಟಿ ಆದಾಯ ಬಂದಿದೆ. ಈ ಮೂಲಕ ಅಬಕಾರಿ ಇಲಾಖೆಯ ಕಳೆದ 13 ವರ್ಷಗಳ ಇತಿಹಾಸದಲ್ಲೇ ತಿಂಗಳೊಂದರಲ್ಲಿ ಇಷ್ಟೊಂದು ಭಾರಿ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿರುವುದು ಇದೇ ಮೊದಲು. ವಿಸ್ಕಿ, ಬ್ರಾಂಡಿ, ರಮ್, ಜಿನ್ ಸೇರಿ ಏಪ್ರಿಲ್‌ನಲ್ಲಿ ದಾಖಲೆಯ 68.17 ಲಕ್ಷ ಬಾಕ್ಸ್ ಮಾರಾಟವಾಗಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 3688 ಸಾವಿರ ಕೋಟಿ ರುಪಾಯಿ ಆದಾಯ ಹರಿದುಬಂದಿದೆ. ತಿಂಗಳೊಂದರಲ್ಲಿ ಇಷ್ಟೊಂದು ಭಾರೀ ಪ್ರಮಾಣದಲ್ಲಿ ಮದ್ಯ ಮಾರಾಟ ಆಗಿರುವುದು ಐತಿಹಾಸಿಕ ದಾಖಲೆಯಾಗಿದೆ.

ಏಪ್ರಿಲ್​ನಲ್ಲಿ ಎಷ್ಟು ಮದ್ಯ ಮಾರಾಟ?

ವಿಸ್ಕಿ, ಬ್ರಾಂಡಿ, ರಮ್‌, ಜಿನ್‌ ಸೇರಿದಂತೆ 68.17 ಲಕ್ಷ ಬಾಕ್ಸ್‌ (ಒಂದು ಬಾಕ್ಸ್‌ಗೆ 8.64 ಲೀಟರ್‌) ದಾಖಲೆಯ ಐಎಂಎಲ್‌ ಮದ್ಯ ಮಾರಾಟವಾಗಿದೆ. ಮತ್ತೊಂದೆಡೆ, 50.39 ಲಕ್ಷ ಬಾಕ್ಸ್‌ (ಒಂದು ಬಾಕ್ಸ್‌ಗೆ 7.80 ಲೀಟರ್‌) ಬಿಯರ್‌ ಮಾರಾಟವಾಗಿದೆ. ಇದರೊಂದಿಗೆ ಒಟ್ಟು 118.56 ಲಕ್ಷ ಬಾಕ್ಸ್‌ ಮದ್ಯ ಮಾರಾಟವಾಗಿದ್ದು 2013ರಿಂದ ಈಚೆಗೆ ಕಳೆದ 13 ವರ್ಷದಲ್ಲಿ ಯಾವ ತಿಂಗಳಿನಲ್ಲೂ ಈ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿಲ್ಲ ಎಂಬುದು ವಿಶೇಷ.

ಇದನ್ನೂ ಓದಿ: ಕರ್ನಾಟಕದಲ್ಲಿ ಮದ್ಯ ಮಾರಾಟ ಭಾರಿ ಕುಸಿತ: 7 ತಿಂಗಳಾದ್ರೂ ಕಿಕ್‌ ಕೊಡದ ಎಣ್ಣೆ, ಕಾರಣವೇನು?

13 ವರ್ಷದ ದಾಖಲೆ ಉಡೀಸ್‌

2013ರಿಂದ ಈಚೆಗೆ ಕಳೆದ 13 ವರ್ಷದಲ್ಲಿ ಯಾವ ತಿಂಗಳಿನಲ್ಲೂ ಈ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿಲ್ಲ. 2025 ಏಪ್ರಿಲ್‌ನಲ್ಲಿ 57.44 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟವಾಗಿದ್ದು, ಕಳೆದ ವರ್ಷದ ದಾಖಲೆಯಾಗಿತ್ತು. ಪ್ರಸಕ್ತ ಸಾಲಿನ ಏಪ್ರಿಲ್‌ ನಲ್ಲಿ 68.17 ಲಕ್ಷ ಬಾಕ್ಸ್ ಮಾರಾಟವಾಗಿದೆ. ಇನ್ನು ಬಿಯರ್ ವಿಷಯಕ್ಕೆ ಬರುವುದಾದರೆ, 2025 ಏಪ್ರಿಲ್ ನಲ್ಲಿ 41.60 ಲಕ್ಷ ಬಾಕ್ಸ್ ಮಾರಾಟವಾಗಿತ್ತು. ಪ್ರಸಕ್ತ ಏಪ್ರಿಲ್ ನಲ್ಲಿ 50.39 ಲಕ್ಷ ಬಾಕ್ಸ್ ಮಾರಾಟವಾಗಿದ್ದು, ಪ್ರಸಕ್ತ ಏಪ್ರಿಲ್‌ನಲ್ಲಿ ಶೇ.21.13 ಬೆಳವಣಿಗೆಯಾಗಿದೆ. ಈ ಮೂಲಕ 13 ವರ್ಷದ ದಾಖಲೆ ಉಡೀಸ್‌ ಮಾಡಿದೆ.

3688 ಕೋಟಿ ರೂ.ಆದಾಯ ಸಂಗ್ರಹ

2023 ಜುಲೈನಲ್ಲಿ 66.22 ಲಕ್ಷ ಬಾಕ್ಸ್‌ ಐಎಂಎಲ್‌ ಮದ್ಯ ಮಾರಾಟವಾಗಿದ್ದೇ ಕಳೆದ 13 ವರ್ಷಗಳಲ್ಲಿನ ದಾಖಲೆಯಾಗಿತ್ತು. ಈ ದಾಖಲೆಯನ್ನು ಏಪ್ರಿಲ್‌ನ ಮದ್ಯ ಮಾರಾಟ ಹಿಂದಿಕ್ಕಿದೆ. 2025 ಏಪ್ರಿಲ್‌ನಲ್ಲಿ ಮದ್ಯ ಮರಾಟದಿಂದ ಒಟ್ಟಾರೆ 2904 ಕೋಟಿ ರೂಪಾಯಿ ರಾಜಸ್ವ ಸಂಗ್ರಹವಾಗಿತ್ತು. ಪ್ರಸಕ್ತ ಏಪ್ರಿಲ್‌ನಲ್ಲಿ 3688 ಕೋಟಿ ರೂಪಾಯಿ ರಾಜಸ್ವ ಸಂಗ್ರಹವಾಗಿವಾಗಿದೆ.

ದಾಖಲೆ ಮಟ್ಟದ ಮದ್ಯ ಮಾರಾಟಕ್ಕೆ ಕಾರಣವೇನು?

ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕೇರಳ ಮತ್ತು ತಮಿಳುನಾಡು ವಿಧಾನ ಸಭೆಗೆ ಏಪ್ರಿಲ್‌ನಲ್ಲಿ ನಡೆದ ಚುವಾವಣೆಯು ರಾಜ್ಯದಲ್ಲಿ ಮದ್ಯ ಮಾರಾಟ ಹೆಚ್ಚಳವಾಗಿರಬಹುದು ಎನ್ನಲಾಗಿದೆ. ಮತದಾನಕ್ಕೂ ಮುನ್ನ ಈ ರಾಜ್ಯಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಆದ್ದರಿಂದ ಕೇರಳ, ತಮಿಳುನಾಡಿಗೆ ಹೊಂದಿಕೊಂಡ ರಾಜ್ಯದ ಗಡಿ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ಅಷ್ಟೇ ಅಲ್ಲದೇ ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನ ಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯೂ ಮದ್ಯ ಮಾರಾಟ ಹೆಚ್ಚಳವಾಗಲು ಕಾರಣವಾಗಿರಬಹುದು ಎನ್ನಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್ – Kannada News | Shridhar Sahukar explains specialities of Kalaghatagi Cradle

ಡಾಲಿ ಧನಂಜಯ್ (Daali Dhananjay) ಅವರು ಇತ್ತೀಚೆಗಷ್ಟೆ ತಂದೆಯಾಗಿದ್ದಾರೆ. ಮಗನಿಗಾಗಿ ವಿಶೇಷ ತೊಟ್ಟಿಲೊಂದನ್ನು ಆರ್ಡರ್ ಮಾಡಿದ್ದಾರೆ. ಕಲಘಟಗಿಯ ವಿಶ್ವಪ್ರಸಿದ್ಧ ತೊಟ್ಟಿಲನ್ನು ಮಗನಿಗಾಗಿ ಖರೀದಿಸುತ್ತಿದ್ದಾರೆ ಡಾಲಿ ಧನಂಜಯ್. ಈ ಕಲಘಟಗಿ ತೊಟ್ಟಿಲಿಗೆ ದಶಕಗಳ ಇತಿಹಾಸವಿದೆ. ಸಾಹುಕಾರ್ ಕುಟುಂಬದವರು ತಯಾರಿಸುವ ಈ ತೊಟ್ಟಿಲುಗಳು ದೇಶ, ವಿದೇಶದಲ್ಲಿ ಮಕ್ಕಳ ಸುಖನಿದ್ರೆಯಲ್ಲಿ ಪಾತ್ರವಹಿಸಿವೆ. ತೊಟ್ಟಿಲು ತಯಾರಕ ಶ್ರೀಧರ್ ಸಾಹುಕಾರ್ ಅವರು ಈ ಕಲಘಟಗಿ ತೊಟ್ಟಿಲುಗಳ ವಿಶೇಷತೆ ಬಗ್ಗೆ ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ತಮಿಳುನಾಡಿನಲ್ಲಿ ಸರ್ಕಾರ ರಚನೆ ಬಿಕ್ಕಟ್ಟು; ಎಡಪಕ್ಷಗಳ ಬೆಂಬಲ ಕೋರಿದ ಟಿವಿಕೆ – Kannada News | TVK chief Vijay reaches out to Left parties and seeks support in government formation

ಚೆನ್ನೈ, ಮೇ 7: ತಮಿಳುನಾಡಿನಲ್ಲಿ ಅತ್ಯಧಿಕ ಸ್ಥಾನಗಳನ್ನು ಪಡೆದಿದ್ದರೂ ಟಿವಿಕೆ ಇನ್ನೂ ಬಹುಮತ ಪಡೆದಿಲ್ಲ. ಹೀಗಾಗಿ, ತಮಿಳುನಾಡಿನಲ್ಲಿ (Tamil Nadu Politics) ಇನ್ನೂ ಸರ್ಕಾರ ರಚನೆಯ ಬಿಕ್ಕಟ್ಟು ಬಗೆಹರಿದಿಲ್ಲ. ಈಗಾಗಲೇ ಕಾಂಗ್ರೆಸ್ ಜೊತೆ ಕೈ ಜೋಡಿಸಿರುವ ಟಿವಿಕೆ ಉಳಿದ 5 ಸ್ಥಾನಗಳಿಗಾಗಿ ಎಡಪಕ್ಷಗಳ ಬೆಂಬಲ ಕೋರಿದೆ. ಟಿವಿಕೆ ನಾಯಕ ಸಿಟಿಆರ್ ನಿರ್ಮಲ್ ಕುಮಾರ್ ಇಂದು ಸಿಪಿಐ ರಾಜ್ಯ ಕಾರ್ಯದರ್ಶಿ ಎಂ ವೀರಪಾಂಡ್ಯನ್ ಮತ್ತು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪಿ ಷಣ್ಮುಗಂ ಅವರನ್ನು ಭೇಟಿ ಮಾಡಿ ಸರ್ಕಾರ ರಚಿಸುವಲ್ಲಿ ಅವರ ಬೆಂಬಲ ಕೋರಿದ್ದಾರೆ. ಟಿವಿಕೆ ಪತ್ರ ಮತ್ತು ಇ-ಮೇಲ್ ಮೂಲಕವೂ ಎಡಪಕ್ಷಗಳ ಬೆಂಬಲ ಕೋರಿದೆ.

“ಟಿವಿಕೆ ಪಕ್ಷವು ವಿದುತಲೈ ಚಿರುತೈಗಲ್ ಕಚ್ಚಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸೇರಿದಂತೆ ಪಕ್ಷಗಳನ್ನು ಇಮೇಲ್‌ಗಳು ಮತ್ತು ನೇರ ಸಂವಹನದ ಮೂಲಕ ಸಂಪರ್ಕಿಸಿದೆ” ಎಂದು ಟಿವಿಕೆ ಜಂಟಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ಆರ್. ನಿರ್ಮಲ್ ಕುಮಾರ್ ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡಲ್ಲಿ ಸರ್ಕಾರ ರಚನೆಗೆ ಟಿವಿಕೆಗೆ ಸಂಖ್ಯಾಬಲದ ಹೋರಾಟ, ಅತ್ತ ಬಿಹಾರ ರಾಜಕಾರಣದಲ್ಲಿ ಹೊಸ ಚದುರಂಗದಾಟ!

“ತಮ್ಮ ನಿರ್ಧಾರಗಳನ್ನು ಪ್ರಕಟಿಸುವ ಮೊದಲು ಪಕ್ಷಗಳು ತಮ್ಮ ಕಾರ್ಯಕಾರಿಣಿ ಮತ್ತು ಸಾಮಾನ್ಯ ಮಂಡಳಿ ಸಭೆಗಳಲ್ಲಿ ಈ ವಿಷಯವನ್ನು ಚರ್ಚಿಸುತ್ತವೆ. ಟಿವಿಕೆ ನಾಯಕರು ಬೆಂಬಲ ಪಡೆಯಲು ಮತ್ತೆ ಅವರನ್ನು ವೈಯಕ್ತಿಕವಾಗಿ ಭೇಟಿಯಾಗುತ್ತಾರೆ. ತಮಿಳುನಾಡಿನಾದ್ಯಂತ ಜನರು ನಮ್ಮ ನಾಯಕ ವಿಜಯ್ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಿದ್ದಾರೆ. ಅದಕ್ಕಾಗಿಯೇ ಅವರು ನಮಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ರಾಜ್ಯಪಾಲರು ಇದನ್ನು ಪರಿಗಣಿಸಿ ಟಿವಿಕೆಯನ್ನು ಸರ್ಕಾರ ರಚಿಸಲು ಆಹ್ವಾನಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ರಾಜ್ಯಪಾಲರು ಕಾನೂನಿನ ಪ್ರಕಾರ ಕಾರ್ಯನಿರ್ವಹಿಸುತ್ತಾರೆ ಎಂದು ನಾವು ನಂಬುತ್ತೇವೆ. ಇಲ್ಲದಿದ್ದರೆ, ಮುಂದುವರಿಯಲು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ” ಎಂದು ನಿರ್ಮಲ್ ಕುಮಾರ್ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

LSG vs RCB: ಏಕೈಕ ಪಂದ್ಯವನ್ನಾಡಿ ಗಾಯಗೊಂಡ 8.6 ಕೋಟಿ ಬೆಲೆಯ ಸ್ಟಾರ್ ಬ್ಯಾಟರ್ – Kannada News | LSG vs RCB IPL 2026: Josh Inglis Injury Blow for Lucknow Super Giants; RCB Wins Toss, Bowls

ಐಪಿಎಲ್ 2026 (IPL 2026) ರ 50 ನೇ ಲೀಗ್ ಪಂದ್ಯವು ಲಕ್ನೋದ ಎಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಟಿದಾರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಲಕ್ನೋ ತಂಡ ತನ್ನ ತವರಿನಲ್ಲಿ ಮೊದಲು ಬ್ಯಾಟಿಂಗ್‌ ಮಾಡಲಿದೆ. ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಆರ್​ಸಿಬಿ ತಂಡದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಆದರೆ ಲಕ್ನೋ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದೆ. ಅದರಲ್ಲಿ ಕಳೆದ ಪಂದ್ಯದಲ್ಲಷ್ಟೇ ಐಪಿಎಲ್ ಅಂಗಳಕ್ಕಿಳಿದಿದ್ದ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಜೋಶ್ ಇಂಗ್ಲಿಸ್ ಕೂಡ ಸೇರಿದ್ದಾರೆ.

ಲಕ್ನೋ ತಂಡಕ್ಕೆ ಆಘಾತ

ಲಕ್ನೋ ವೇಗದ ಬೌಲರ್ ಮೊಹ್ಸಿನ್ ಖಾನ್ ಗಾಯದ ಕಾರಣದಿಂದಾಗಿ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರ ಬದಲಿಗೆ ಮಯಾಂಕ್ ಯಾದವ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುವ ನಿರೀಕ್ಷೆಯಿದೆ. ಮೇಲೆ ಹೇಳಿದಂತೆ ಜೋಶ್ ಇಂಗ್ಲಿಸ್ ಕೂಡ ಗಾಯಗೊಂಡಿದ್ದು, ಅವರ ಸ್ಥಾನದಲ್ಲಿ ಅರ್ಶಿನ್ ಕುಲಕರ್ಣಿ ಆಡುತ್ತಿದ್ದಾರೆ. ಮಣಿಮಾರನ್ ಸಿದ್ಧಾರ್ಥ್ ಬದಲಿಗೆ ಶಹಬಾಜ್ ಅಹ್ಮದ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದಾಗ್ಯೂ ಜೋಶ್ ಇಂಗ್ಲಿಸ್ ಅವರ ಗಾಯವು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

8.6 ಕೋಟಿ ರೂ. ಖರೀದಿ

ಈ ಆವೃತ್ತಿಯಲ್ಲಿ ಜೋಶ್ ಇಂಗ್ಲಿಸ್ ಲಕ್ನೋ ಸೂಪರ್ ಜೈಂಟ್ಸ್ ಪರ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದಾರೆ. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೈದಾನಕ್ಕಿಳಿದಿದ್ದ ಇಂಗ್ಲಿಸ್ ಆ ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಇನ್ನು ಈ ಪಂದ್ಯಕ್ಕೂ ಮೊದಲು ಇಂಗ್ಲಿಸ್ ತಮ್ಮ ಮದುವೆಯ ಕಾರಣ ನೀಡಿ ಐಪಿಎಲ್ ಮೊದಲಾರ್ಧಕ್ಕೆ ಲಭ್ಯವಿರಲಿಲ್ಲ. ಐಪಿಎಲ್ ಹರಾಜಿನ ಮೊದಲು ಇಂಗ್ಲಿಸ್ ತಮ್ಮ ವಿವಾಹದ ಕಾರಣದಿಂದಾಗಿ ತಮ್ಮ ಸೀಮಿತ ಲಭ್ಯತೆಯ ಬಗ್ಗೆ ಫ್ರಾಂಚೈಸಿಗೆ ತಿಳಿಸಿದ್ದರು. ಆದರೆ ಈಗ, ಕೇವಲ ಒಂದು ಪಂದ್ಯವನ್ನು ಆಡಿದ ನಂತರ, ಅವರು ಗಾಯಗೊಂಡಿದ್ದಾರೆ. ಹರಾಜಿನಲ್ಲಿ ಇಂಗ್ಲಿಸ್ ಅವರನ್ನು ಖರೀದಿಸಲು ಲಕ್ನೋ ಮತ್ತು ಹೈದರಾಬಾದ್ ನಡುವೆ ತೀವ್ರ ಪೈಪೋಟಿ ನಡೆಸಿದ್ದವು. ಅಂತಿಮವಾಗಿ ಲಕ್ನೋ 8.6 ಕೋಟಿ ರೂ. ನೀಡಿ ಇಂಗ್ಲಿಸ್ ಅವರನ್ನು ಖರೀದಿಸಿತ್ತು.

ಉಭಯ ತಂಡಗಳ ಪ್ಲೇಯಿಂಗ್ 11

ಲಕ್ನೋ ಸೂಪರ್ ಜೈಂಟ್ಸ್: ಮಿಚೆಲ್ ಮಾರ್ಷ್, ಅರ್ಶಿನ್ ಕುಲಕರ್ಣಿ, ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಮ್, ರಿಷಭ್ ಪಂತ್ (ವಿಕೆಟ್ ಕೀಪರ್/ನಾಯಕ), ಅಕ್ಷತ್ ರಘುವಂಶಿ, ಹಿಮ್ಮತ್ ಸಿಂಗ್, ಶಹಬಾಜ್ ಅಹ್ಮದ್, ದಿಗ್ವೇಶ್ ಸಿಂಗ್ ರಥಿ, ಮೊಹಮ್ಮದ್ ಶಮಿ, ಪ್ರಿನ್ಸ್ ಯಾದವ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಜೇಕಬ್ ಬೆಥೆಲ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ, ರಾಸಿಖ್ ಸಲಾಮ್ ದಾರ್, ಜೋಶ್ ಹೇಜಲ್‌ವುಡ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:57 pm, Thu, 7 May 26

Source link

ಗೂಗಲ್​ಗೆ ಆರಂಭದಲ್ಲೇ ಫಂಡಿಂಗ್ ನೀಡಿದ್ದ ರಾಮ್ ಶ್ರೀರಾಮ್; ಭಾರತದ ಈ ಕಂಪನಿಯತ್ತ ಈಗ ಅವರ ಚಿತ್ತ – Kannada News | Ram Shriram Invests 60M USD in Skyroot Aerospace, Propelling India’s Space Tech

ನವದೆಹಲಿ, ಮೇ 7: ವಿಶ್ವದ ಅತ್ಯಂತ ಗೌರವಾನ್ವಿತ ಹೂಡಿಕೆದಾರರಲ್ಲಿ ಒಬ್ಬರೆನಿಸಿರುವ ಮತ್ತು ಬಿಲಿಯನೇರ್ ಆಗಿರುವ ಭಾರತ ಮೂಲದ ರಾಮ್ ಶ್ರೀರಾಮ್ (Ram Sriram) ಅವರು ಸ್ಕೈರೂಟ್ ಏರೋಸ್ಪೇಸ್ ಎನ್ನುವ ರೈಸಿಂಗ್ ಸ್ಟಾರ್ ಕಂಪನಿಯಲ್ಲಿ ಹೂಡಿಕೆ ಮಾಡತ್ತಿದ್ದಾರೆ. ಗೂಗಲ್ ಇನ್ನೂ ಕೂಡ ಸರ್ಚ್ ಎಂಜಿನ್ ಆಗಿ ಸ್ಥಾಪನೆಯಾಗಲು ಪರದಾಡುತ್ತಿದ್ದ ಆರಂಭಿಕ ದಿನದಲ್ಲೇ ಅದಕ್ಕೆ ಅಮೂಲ್ಯವಾದ ಬಂಡವಾಳ ಒದಗಿಸಿದವರು ರಾಮ್ ಶ್ರೀರಾಮ್. ಅಷ್ಟೇ ಅಲ್ಲ, ಗೂಗಲ್​ನ ಆರಂಭಿಕ ಬ್ಯುಸಿನೆಸ್​ಗಳ ಎಡರು ತೊಡರುಗಳನ್ನು ನಿವಾರಿಸಲು ಸಹಾಯ ಮಾಡಿದ್ದ ರಾಮ್ ಶ್ರೀರಾಮ್ ಅವರು ಈಗ ಭಾರತೀಯ ಕಂಪನಿಯೊಂದನ್ನು ಎತ್ತರಕ್ಕೆ ಬೆಳೆಸಲು ಚಿತ್ತ ನೆಟ್ಟಿರುವಂತಿದೆ.

ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಭಾರತೀಯ ಕಂಪನಿಯಾಗಿದ್ದು, ಹೈದರಾಬಾದ್​ನಲ್ಲಿ ಇದರ ಮುಖ್ಯ ಕಚೇರಿ ಇದೆ. ಇದು ಸೆಟಿಲೈಟ್​ಗಳನ್ನು ಆಗಸಕ್ಕೆ ಕೊಂಡೊಯ್ಯಬಲ್ಲ ರಾಕೆಟ್​ಗಳನ್ನು ತಯಾರಿಸುವ ಕಂಪನಿ. ನುರಿತ ವಿಜ್ಞಾನಿಗಳು ಇರುವ ಸಂಸ್ಥೆಯಾದ ಇದು ಈಗಾಗಲೇ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈಗಾಗಲೇ ಇದರ ಮೌಲ್ಯ 1.1 ಬಿಲಿಯನ್ ಡಾಲರ್ ದಾಟಿ ಹೋಗಿ ಯೂನಿಕಾರ್ನ್ ಕಂಪನಿಗಳ ಸಾಲಿಗೆ ಸೇರಿದೆ. ಬಹಳಷ್ಟು ಹೂಡಿಕೆದಾರರು ಇದಕ್ಕೆ ಬಂಡವಾಳ ಹಾಕುತ್ತಿದ್ದಾರೆ. ರಾಮ್ ಶ್ರೀರಾಮ್ ಅವರು ತಮ್ಮ ವೆಂಚರ್ ಕ್ಯಾಪಿಟಲ್ ಸಂಸ್ಥೆಯಾದ ಶೆರ್ಪಾಲೋ ವೆಂಚರ್ಸ್ (Sherpalo Ventures) ಮೂಲಕ 60 ಮಿಲಿಯನ್ ಡಾಲರ್ ಬಂಡವಾಳ ನೀಡಿದ್ದಾರೆ.

ಇದನ್ನೂ ಓದಿ: ಪರಿಸರಸ್ನೇಹಿ ಯೋಜನೆಗಳಿಗೆ ಆಪಲ್ ಭರ್ಜರಿ ಹೂಡಿಕೆ; ಸ್ವಚ್ಛ ಇಂಧನ, ಪ್ಲಾಸ್ಟಿಕ್ ನಿವಾರಣೆ, ತ್ಯಾಜ್ಯ ನಿರ್ವಹಣೆ ಇತ್ಯಾದಿ ಉಪಕ್ರಮಗಳ ಘೋಷಣೆ

ಈಗಾಗಲೆ ಬಹಳ ಜನರ ಗಮನ ಸೆಳೆದಿರುವ ಸ್ಕೈರೂಟ್ ಏರೋಸ್ಪೇಸ್​ನತ್ತ ರಾಮ್ ಶ್ರೀರಾಮ್ ಚಿತ್ತ ನೆಟ್ಟಿದ್ದು ಈಗೇನಲ್ಲ. ನಾಲ್ಕು ವರ್ಷದ ಹಿಂದೆಯೇ ಈ ಕಂಪನಿಗೆ ಬಹಳ ಅಮೂಲ್ಯ ಬಂಡವಾಳ ಒದಗಿಸಿದ್ದರು. ಸ್ಕೈರೂಟ್ ಸಂಸ್ಥೆ ಬಹಳ ಮುಖ್ಯವಾದ ರಾಕೆಟ್ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ 4.5 ಮಿಲಿಯನ್ ಡಾಲರ್ ಬಂಡವಾಳ ಒದಗಿಸಿದ ಹೂಡಿಕೆ ಸಂಸ್ಥೆಗಳಲ್ಲಿ ಶೆರ್ಪಾಲೋ ವೆಂಚರ್ಸ್ ಕೂಡ ಒಂದು.

ಚೆನ್ನೈನಲ್ಲಿ ಜನಿಸಿದ ರಾಮ್ ಶ್ರೀರಾಮ್ ಬಡತನದಲ್ಲಿ ಬೆಳೆದವರು. ತಾತನ ಆಸ್ತಿ ಮಾರಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಇವತ್ತು ಅವರು ಬಿಲಿಯನೇರ್ ಆಗಿದ್ದಾರೆ. ಸೂಪರ್ ಹಿಟ್ ಕಂಪನಿಗಳಿಗೆ ನೀರೆರೆದು ಪೋಷಿಸಿದ್ದಾರೆ. 1998ರಲ್ಲಿ ಸೆರ್ಗೇ ಬ್ರಿನ್ ಮತ್ತು ಲ್ಯಾರಿ ಪೇಜ್ ಅವರು ಸ್ಟ್ಯಾನ್​ಫೋರ್ಡ್ ಪಿಎಚ್​ಡಿ ಪ್ರಾಜೆಕ್ಟ್ ಆಗಿ ಸರ್ಚ್ ಎಂಜಿನ್ ಅಭಿವೃದ್ಧಿಪಡಿಸುತ್ತಿರುವಾಗ ರಾಮ್ ಶ್ರೀರಾಮ್ ಅವರು ಅಮೇಜಾನ್​ನಲ್ಲಿ ವೈಸ್ ಪ್ರೆಸಿಡೆಂಟ್ ಆಗಿದ್ದರು. ಆ ವಿದ್ಯಾರ್ಥಿಗಳ ವಿನೂತನ ಪರಿಕಲ್ಪನೆಯ ಉತ್ಪನ್ನದ ಬಗ್ಗೆ ಆಸಕ್ತರಾಗಿ ವೈಯಕ್ತಿಕವಾಗಿ ಎರಡೂವರೆ ಲಕ್ಷ ಡಾಲರ್ ಬಂಡವಾಳ ಒದಗಿಸಿದ್ದರು.

ಇದನ್ನೂ ಓದಿ: ಬ್ಯಾಂಕ್ ಸಾಲಗಾರರ ಗಮನಕ್ಕೆ; ಅಡಮಾನ ಆಸ್ತಿ ವಿಚಾರದಲ್ಲಿ ಆರ್​ಬಿಐ ಕರಡು ನಿಯಮಗಳಿವು…

ಅಷ್ಟೇ ಅಲ್ಲ, ಗೂಗಲ್​ನ ಸಂಸ್ಥಾಪನಾ ಮಂಡಳಿ ಸದಸ್ಯರೂ ಆಗಿ, ಅದರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಶೆರ್ಪಾಲೋ ವೆಂಚರ್ಸ್ ಮೂಲಕ ಇನ್ನೂ ಹಲವಾರು ಕಂಪನಿಗಳಿಗೆ ಆರಂಭಿಕ ಬಂಡವಳ ಒದಗಿಸಿದ್ದಾರೆ. ಇನ್​ಮೋಬಿ, ರೇಜರ್​ಪೇ, ಗುಸ್ಟೋ, ಪೇಪರ್​ಲೆಸ್ ಪೋಸ್ಟ್, ಕ್ರಿಕೇ ಎಐ ಇತ್ಯಾದಿ ಕಂಪನಿಗಳಿಗೆ ಬಂಡವಾಳ ನೀಡಿದ್ದಾರೆ. ಕ್ರಿಕೇ ಎಐ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಸ್ಟಾರ್ಟಪ್ ಆಗಿದ್ದು ಜಾಹ್ನವಿ ಮತ್ತು ಕೇಟಲ್ಲಾ ಎಂಬಿಬ್ಬರು ಇವರ ಹೆಣ್ಮಕ್ಕಳೇ ಇದರ ಸಂಸ್ಥಾಪಕರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆವರು ಹೆಚ್ಚಾಗಿ ಬರುವವರಲ್ಲಿ ಚರ್ಮಕ್ಕೆ ಸಂಬಂಧಪಟ್ಟ ಸೋಂಕಿನ ಅಪಾಯ ಹೆಚ್ಚುತ್ತದೆಯೇ? – Kannada News | Hyperhidrosis and Skin Health: What Doctors Want You to Know

ಬೇಸಿಗೆ ಆರಂಭವಾದಾಗಿನಿಂದ ತಾಪಮಾನ ಮತ್ತು ಉಷ್ಣಾಂಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ಪರಿಣಾಮವಾಗಿ ಹೆಚ್ಚಿನವರಲ್ಲಿ ಅತಿಯಾಗಿ ಬೆವರು ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಬೆವರು ದೇಹದ ತಾಪಮಾನ ನಿಯಂತ್ರಣಕ್ಕೆ ಸಹಾಯಕವಾದರೂ, ಅತಿಯಾಗಿ ಬೆವರು (Sweat) ಬಂದಾಗ ಚರ್ಮದ ಸಮಸ್ಯೆಗಳು (Skin Problems) ಹೆಚ್ಚಾಗುವ ಸಾಧ್ಯತೆ ಇರುತ್ತದೆ. ವೈದ್ಯರು ಹೇಳುವ ಪ್ರಕಾರ, ಬೆವರು ಹೆಚ್ಚು ಸಮಯ ಚರ್ಮದ ಮೇಲೆ ಇದ್ದಲ್ಲಿ ತೇವಾಂಶ ಹೆಚ್ಚಾಗಿ ಬ್ಯಾಕ್ಟೀರಿಯಾ ಮತ್ತು ಫಂಗಸ್ ವೇಗವಾಗಿ ಬೆಳೆಯಲು ಅನುಕೂಲವಾಗುತ್ತದೆ. ಇದರಿಂದ ಚರ್ಮದಲ್ಲಿ ಉರಿ, ಕೆರೆತ, ಕೆಂಪು ಚುಕ್ಕೆಗಳು ಮತ್ತು ಫಂಗಲ್ ಇನ್‌ಫೆಕ್ಷನ್‌ಗಳಂತಹ ಸಮಸ್ಯೆಗಳು ಕಾಣಿಸಬಹುದು. ವಿಶೇಷವಾಗಿ ಕುತ್ತಿಗೆ, ಕೈಕುಳಿಗಳು, ಬೆನ್ನು ಮತ್ತು ತೊಡೆ ಭಾಗಗಳಲ್ಲಿ ಹೆಚ್ಚು ಬೆವರು ಬಂದರೆ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಹಾಗಾದರೆ ಈ ರೀತಿ ಸಮಸ್ಯೆಯನ್ನು ತಡೆಯುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ ಧೂಳು ಮತ್ತು ಮಲಿನತೆ ಬೆವರಿನೊಂದಿಗೆ ಸೇರಿ ಚರ್ಮದ ಮೇಲೆ ಉಳಿದರೆ ಸಮಸ್ಯೆ ಮತ್ತಷ್ಟು ಗಂಭೀರವಾಗಬಹುದು. ಹೆಚ್ಚು ಸಮಯ ಒದ್ದೆಯಾದ ಬಟ್ಟೆ ಧರಿಸುವುದು ಅಥವಾ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು ಸೋಂಕಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಸಂವೇದನಾಶೀಲ ಚರ್ಮ ಹೊಂದಿರುವವರಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರುತ್ತದೆ. ಹಾಗಾಗಿ ಈ ಸಮಸ್ಯೆ ತಡೆಯಲು ಕೆಲವು ಸಿಂಪಲ್ ಸಲಹೆಗಳನ್ನು ಅನುಸರಿಸುವುದು ಬಹಳ ಉತ್ತಮ.

ಇದನ್ನೂ ಓದಿ: ಚರ್ಮದ ಮೇಲೆ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಅವು ಮಧುಮೇಹ ಬರುವ ಮುನ್ಸೂಚನೆಯಾಗಿರಬಹುದು

ಚರ್ಮದ ಸೋಂಕು ತಡೆಯಲು ಏನು ಮಾಡಬೇಕು?

  • ತಜ್ಞರ ಸಲಹೆಯಂತೆ, ಬೇಸಿಗೆಯಲ್ಲಿ ದೇಹವನ್ನು ಸದಾ ಸ್ವಚ್ಛ ಮತ್ತು ಒಣಗಿರುವಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ. ಹೆಚ್ಚು ಬೆವರು ಬಂದಾಗ ಮುಖ ಮತ್ತು ದೇಹವನ್ನು ತೊಳೆಯಬೇಕು. ಗಾಳಿ ಸರಿಯಾಗಿ ಹರಿಯಲು ಸಡಿಲ ಮತ್ತು ಕಾಟನ್ ಬಟ್ಟೆ ಧರಿಸುವುದು ಉತ್ತಮ. ಇದರಿಂದ ಬೆವರು ಬೇಗ ಒಣಗಲು ಸಹಾಯವಾಗುತ್ತದೆ.
  • ಸಾಕಷ್ಟು ನೀರು ಕುಡಿಯುವುದು ಹಾಗೂ ಹೆಚ್ಚು ಸಮಯ ಒದ್ದೆಯಾದ ಬಟ್ಟೆಗಳಲ್ಲಿ ಉಳಿಯದಿರುವುದು ಕೂಡ ಮುಖ್ಯ. ಇತರರ ಟವೆಲ್, ಬಟ್ಟೆ ಅಥವಾ ವೈಯಕ್ತಿಕ ವಸ್ತುಗಳನ್ನು ಬಳಸುವುದನ್ನು ತಪ್ಪಿಸಬೇಕು, ಏಕೆಂದರೆ ಇದರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
  • ಚರ್ಮದಲ್ಲಿ ನಿರಂತರ ಉರಿ, ಕೆಂಪು ಚುಕ್ಕೆಗಳು ಅಥವಾ ಕೆರೆತ ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಸರಿಯಾದ ಸ್ವಚ್ಛತೆ ಮತ್ತು ಕಾಳಜಿಯಿಂದ ಬೇಸಿಗೆಯಲ್ಲಿ ಚರ್ಮದ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಈ ಜೀವ ನಿಮಗೆ ಅರ್ಪಣೆ’: ಡಿಕೆ ಶಿವಕುಮಾರ್ ಸ್ನೇಹವನ್ನು ಕೊಂಡಾಡಿದ ಕ್ರೇಜಿಸ್ಟಾರ್ – Kannada News | Ravichandran praised DK Shivakumar and said his life is dedicated for DKS only

ನಟ ರವಿಚಂದ್ರನ್ (Ravichandran) ದಶಕಗಳಿಂದಲೂ ಚಿತ್ರರಂಗದಲ್ಲಿರುವವರು. ಅವರ ತಂದೆ ವೀರಾಸ್ವಾಮಿ ಖ್ಯಾತ ನಿರ್ಮಾಪಕರು ಮತ್ತು ಉದ್ಯಮಿಗಳು ಸಹ ಆಗಿದ್ದವರು. ರವಿಚಂದ್ರನ್ ಅವರಿಗೆ ಚಿತ್ರರಂಗದ ಜೊತೆಗೆ ರಾಜಕೀಯ ರಂಗದ ಹಲವು ಪ್ರಮುಖರ ಆಪ್ತ ಪರಿಚಯವಿದೆ. ಆದರೆ ರವಿಚಂದ್ರನ್ ಅವರು ಎಂದಿಗೂ ರಾಜಕೀಯದ ಅಖಾಡದತ್ತ ಮುಖ ಸಹ ಹಾಕಿದವರಲ್ಲ. ಅವರ ಗೆಳೆತನವನ್ನು ಬಳಸಿಕೊಂಡವರೂ ಅಲ್ಲ. ಆದರೆ ಇದೀಗ ಕಾರ್ಯಕ್ರಮವೊಂದರಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಮನಸಾರೆ ಕೊಂಡಾಡಿರುವ ರವಿಚಂದ್ರನ್, ‘ಈ ಜೀವ ನಿಮಗೆ ಅರ್ಪಣೆ’ ಎಂದು ಭಾವುಕರಾಗಿ ಹೇಳಿದ್ದಾರೆ.

ಕಳೆದ ಕೆಲ ದಿನಗಳಿಂದಲೂ ನಡೆಯುತ್ತಿರುವ ಮದ್ದೂರು ಉತ್ಸವ 2026 ಕಾರ್ಯಕ್ರಮದಲ್ಲಿ ನಿನ್ನೆ (ಮೇ 06) ಭಾಗಿ ಆಗಿದ್ದ ನಟ ರವಿಚಂದ್ರನ್, ಕೆಲ ಹಳೆಯ ವಿಷಯಗಳನ್ನು ನೆನಪು ಮಾಡಿಕೊಂಡರು. ಜೊತೆಗೆ ಅದೇ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿ ಆಗಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬಗ್ಗೆಯೂ ಮಾತನಾಡಿದರು. ‘ಮನುಷ್ಯ ಅಂದ ಮೇಲೆ ಕಟ್ಟ ಗಳಿಗೆಗಳು ಕೆಲವೊಮ್ಮೆ ಬಂದು ಬಿಡುತ್ತವೆ. ಅಂಥಹಾ ಸಮಯ ಬಂದಾಗ, ಯಾರು ನಮ್ಮ ಕೈ ಹಿಡಿಯುತ್ತಾರೆ ಎಂದು ನಾವೂ ಸಹ ಎದುರು ನೋಡುತ್ತಿರುತ್ತೇವೆ. ಆದರೆ ನನಗೆ (ರವಿಚಂದ್ರನ್) ಕೈ ಚಾಚಿ ಅಭ್ಯಾಸವೇ ಇಲ್ಲ. ಆದರೆ ನಾನು ಕೈ ಚಾಚುವ ಮುಂಚೆಯೇ ನನ್ನ ಕೈ ಹಿಡಿದವರು ಡಿಕೆ ಶಿವಕುಮಾರ್ ಅವರು’ ಎಂದಿದ್ದಾರೆ ಕ್ರೇಜಿ ಸ್ಟಾರ್.

‘ನಿಮ್ಮನ್ನು ಈ ಜೀವನದಲ್ಲಿ ಮರೆಯೋದಿಲ್ಲ ಸರ್, ಈ ಜೀವ ನಿಮಗೇ ಅರ್ಪಣೆ ಸರ್’ ಎಂದು ವೇದಿಕೆ ಮುಂದೆ ಆಸೀನರಾಗಿದ್ದ ಡಿಕೆ ಶಿವಕುಮಾರ್ ಅವರನ್ನು ಉದ್ದೇಶಿಸಿ ಹೇಳಿದ ರವಿಚಂದ್ರನ್, ‘ಚಿತ್ರರಂಗಕ್ಕೆ ಬಂದು 40 ವರ್ಷವಾಯ್ತು. ಆದರೆ ನಾನು ಕೈಚಾಚುವ ಮುಂಚೆ, ನನ್ನ ಹೆಗಲ ಮೇಲೆ ಕೈಹಾಕಿ ಡಿಕೆ ಶಿವಕುಮಾರ್ ಅವರು ಕೇಳಿದ್ದು ಒಂದೇ ಮಾತು, ‘ನಾನು ಏನು ಮಾಡಬೇಕು ಏಳಪ್ಪ’ ಎಂದಿದ್ದರು’ ಎಂದು ರವಿಚಂದ್ರನ್ ಹೇಳಿದರು.

ಇದನ್ನೂ ಓದಿ:ಜೂ ಎನ್​​ಟಿಆರ್-ಪ್ರಶಾಂತ್ ನೀಲ್ ಸಿನಿಮಾಕ್ಕೆ ಮತ್ತೊಬ್ಬ ಕನ್ನಡದ ನಟ ಸೇರ್ಪಡೆ

‘ನಾನು ಬಿದ್ದಾಗ ಹೆದರಲಿಲ್ಲ, ಜನ ಕೈಬಿಟ್ಟಿರಲಿಲ್ಲ. ‘ರಾಮಾಚಾರಿ’ಯಲ್ಲಿ ಪಂಚೆ ಹಾಕಿ ಬಂದಾಗಲೂ ಜನ ನನ್ನ ಕೈಬಿಡಲಿಲ್ಲ. ಈಗ ನೀವು ನನ್ನ ಕೈಹಿಡಿದಿದ್ದೀರ ನನಗೆ ಅಷ್ಟೇ ಸಾಕು. ನಾವು ಒಟ್ಟಿಗೆ ಶಾಲೆ ಕಲಿತವರು, 40-50 ವರ್ಷಗಳ ಸ್ನೇಹ ನಮ್ಮದು ಆದರೆ ಎಂದಿಗೂ ಆ ಸ್ನೇಹವನ್ನು ನಾನು ಬಳಸಿಕೊಂಡಿಲ್ಲ. ಆದರೆ ಇತ್ತೀಚೆಗೆ ಅವರು ನನಗೆ ಮಾಡಿದ ಉಪಕಾರವನ್ನು ನನ್ನ ಜೀವನದಲ್ಲಿ ಮರೆಯುವುದಿಲ್ಲ’ ಎಂದರು ರವಿಚಂದ್ರನ್.

‘ಅದೇ ರೀತಿ, ಮದ್ಧೂರು ಶಾಸಕ ಉದಯ್ ಸಹ ನನಗೆ ಸಹಾಯ ಮಾಡಿದ್ದಾರೆ. ಅದೂ ನನಗೆ ಗೊತ್ತಿಲ್ಲದೆ. ಅವರು ನನಗೆ ಸಹಾಯ ಮಾಡಿರುವ ವಿಷಯ ನನಗೆ ಒಂದೆರಡು ವರ್ಷ ಆದ ಮೇಲೆ ಗೊತ್ತಾಯ್ತು. ನನ್ನ ಸ್ನೇಹಿತರ ಮೂಲಕ ಅವರು ನನಗೆ ಸಹಾಯ ಮಾಡಿದ್ದಾರೆ. ನನ್ನ ಜೀವ ಇರುವವರೆಗೆ ಪ್ರೀತಿಗೆ, ಸ್ನೇಹಕ್ಕೆ ಮಾತ್ರವೇ ನಾನು ತಲೆ ಬಾಗೋದು. ಇಲ್ಲಿಗೆ ಬಂದಿದ್ದು ಸಹ ಉದಯ್ ಅವರಿಗಾಗಿ ಹಾಗೂ ಡಿಕೆ ಶಿವಕುಮಾರ್ ಅವರಿಗಾಗಿ. ಡಿಕೆ ಶಿವಕುಮಾರ್ ಎಲ್ಲಿರುತ್ತಾರೋ ಅಲ್ಲಿ ರವಿಚಂದ್ರನ್ ಇರುತ್ತಾರೆ’ ಎಂದರು ರವಿಚಂದ್ರನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link